Saturday, October 5, 2024
Homeಯಕ್ಷಗಾನಛಾಯಾಚಿತ್ರಗಾರಿಕೆಯ ಜತೆ ಕಲಾಸೇವೆ - ಶ್ರೀ ಉದಯ ಕಂಬಾರ್

ಛಾಯಾಚಿತ್ರಗಾರಿಕೆಯ ಜತೆ ಕಲಾಸೇವೆ – ಶ್ರೀ ಉದಯ ಕಂಬಾರ್

 ಬೇರೆ ಬೇರೆ ಕ್ಷೇತ್ರಗಳಲ್ಲಿ ವ್ಯವಸಾಯವನ್ನು ಮಾಡುತ್ತಿದ್ದರೂ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿ, ಅದನ್ನು ಹವ್ಯಾಸವಾಗಿ ಸ್ವೀಕರಿಸಿದ ಅನೇಕ ಕಲಾವಿದರನ್ನು ನಾವಿಂದು ಕಾಣಬಹುದು. ಹವ್ಯಾಸೀ ಕಲಾವಿದರು ತಮಗೂ ಈ ಶ್ರೇಷ್ಠ ಕಲೆಯ ಒಂದು ಅಂಗವಾಗುವ ಭಾಗ್ಯ ಒದಗಿತೆಂದು ಸಂತೋಷಪಡುತ್ತಾರೆ. ಕೃಷಿಯನ್ನೇ ವೃತ್ತಿಯಾಗಿ ಸ್ವೀಕರಿಸಿದವರೂ ಯಕ್ಷಗಾನ ಕಲಾವಿದರಾಗಿದ್ದಾರೆ. ವೈದ್ಯರೂ ಇಂಜಿನಿಯರುಗಳೂ, ಸರಕಾರೀ ಉದ್ಯೋಗಿಗಳೂ ಹಿಮ್ಮೇಳ, ಮುಮ್ಮೇಳ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳೂ ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿದ್ದಾರೆ.

ಈ ನಾಡಿನ ಜನರಿಗೆ ಯಕ್ಷಗಾನವನ್ನು ದೂರವಿರಿಸಿ ಬದುಕಲು ಸಾಧ್ಯವಿಲ್ಲ. ಅಷ್ಟೊಂದು ಕರ್ಷಕ ಶಕ್ತಿಯುಳ್ಳ ಕಲೆ ಇದು. ಇಂದು ವೃತ್ತಿ ಕಲಾವಿದರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹವ್ಯಾಸೀ ಕಲಾವಿದರಿದ್ದಾರೆ. ವೃತ್ತಿ ಕಲಾವಿದರಷ್ಟೇ ಪ್ರಬುದ್ಧರಾದ ಹವ್ಯಾಸೀ ಕಲಾವಿದರೂ ಇದ್ದಾರೆ. ಅಂತಹವರ ಪ್ರದರ್ಶನವನ್ನು ನೋಡುವಾಗ ಇವರು ಮೇಳದಲ್ಲಿ ತಿರುಗಾಟ ಮಾಡಬೇಕಿತ್ತು ಎಂದು ಅನಿಸುವುದು ಸಹಜ. ಬದುಕಿಗೆ ಬೇರೊಂದು ವೃತ್ತಿ ಇದ್ದರೂ ತಾನೂ ಕಲಾಮಾತೆಯ ಸೇವೆಯನ್ನು ಮಾಡಬೇಕೆಂಬ ಸದಭಿಲಾಷೆಯಿಂದಲೇ ಅವರು ತೊಡಗಿಸಿಕೊಳ್ಳುತ್ತಾರೆ.

ಶ್ರೀ ಉದಯ ಕಂಬಾರ್ ಅವರು ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿದವರು. ತೆಂಕುತಿಟ್ಟಿನ ಒಳ್ಳೆಯ ಮದ್ದಳೆಗಾರರು. ಅನಿವಾರ್ಯ ಸಂದರ್ಭದಲ್ಲಿ ಆಪದ್ಬಾಂಧವನಾಗಿ ಮೇಳಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ವೃತ್ತಿಯಲ್ಲಿ ಫೋಟೋಗ್ರಾಫರ್. ನೀರ್ಚಾಲು ಮತ್ತು ಬದಿಯಡ್ಕದ ‘ವರ್ಣಾ ಸ್ಟುಡಿಯೋ’ದ ಮಾಲಕರು. ಉದಯ ಕಂಬಾರ್ ಅವರು ಶ್ರೀ ಸುಬ್ರಹ್ಮಣ್ಯ ಭಟ್ ಮತ್ತು ಶ್ರೀಮತಿ ಸುಮತಿ ದಂಪತಿಗಳ ಮೂವರು ಪುತ್ರರಲ್ಲಿ ಹಿರಿಯರು. ಕಾಸರಗೋಡಿನ ಪಟ್ಟಾಜೆ ಎಂಬಲ್ಲಿ (ಅಜ್ಜನಮನೆ) 1970 ಮೇ 25ರಂದು ಜನನ.

ಸುಬ್ರಹ್ಮಣ್ಯ ಭಟ್ ಅವರ ಮೂಲ ಮನೆ ಬಂಟ್ವಾಳ ತಾಲೂಕಿನ ಜಲ್ಲಿ ಎಂಬಲ್ಲಿ. ಎಳವೆಯಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡ ಕಾರಣ ಕಂಬಾರಿನ ಅಜ್ಜನ ಮನೆಯಲ್ಲಿ ಸೋದರ ಮಾವಂದಿರ ಆಶ್ರಯದಲ್ಲೇ ಬೆಳೆದವರು. ಹಾಗಾಗಿ ಕಂಬಾರು ಸುಬ್ರಹ್ಮಣ್ಯ ಭಟ್ ಎಂದೇ ಕರೆಸಿಕೊಂಡರು. ಅವರ ಸೋದರ ಮಾವ ಶ್ರೀ ಬಾಲಕೃಷ್ಣ ಭಟ್ಟರು ಅಧ್ಯಾಪಕರು ಮತ್ತು ಕಂಬಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರು. ಸೋದರ ಮಾವನಿಗೆ ಪೂಜಾ ಕಾರ್ಯದಲ್ಲಿ ಸಹಾಯಕರಾಗಿ ದುಡಿಯುತ್ತಾ ಸುಬ್ರಹ್ಮಣ್ಯ ಭಟ್ಟರು ಅಲ್ಲೇ ವಾಸವಾಗಿದ್ದರು.

ಉದಯ ಅವರು ಐದನೆಯ ವಯಸ್ಸಿನ ವರೆಗೆ ಕಂಬಾರಿನಲ್ಲೇ ಇದ್ದು ಒಂದನೇ ತರಗತಿಯನ್ನು ಅಂಗಡಿಮೊಗರು ಶಾಲೆಯಲ್ಲಿ ಪೂರೈಸಿದ್ದರು. ನಂತರ ಕಂಬಾರು ಸುಬ್ರಹ್ಮಣ್ಯ ಭಟ್ಟರು ನೀರ್ಚಾಲು ಸಮೀಪದ ಪಟ್ಟಾಜೆಗೆ ವಾಸ್ತವ್ಯವನ್ನು ಬದಲಿಸಿದ್ದರು. ಜೀವನ ನಿರ್ವಹಣೆಗಾಗಿ ಹೋಟೆಲನ್ನು ನಡೆಸುತ್ತಿದ್ದರು. ಕಷ್ಟದ ಜೀವನವಾದರೂ ಮಕ್ಕಳಿಗೆಲ್ಲಾ ವಿದ್ಯೆ ಕೊಡಿಸಿದ್ದರು. ಇವರು ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿ ಕಲಾವಿದರೂ ಆಗಿದ್ದರು. ಧರ್ಮತ್ತಡ್ಕ, ಎಡಕ್ಕಾನ, ಚೇವಾರು ಪರಿಸರದಲ್ಲಿ ನಡೆಯುತ್ತಿದ್ದ ಆಟ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಸಾತ್ವಿಕ ಪಾತ್ರಗಳನ್ನು ಚೆನ್ನಾಗಿ ಮಾಡುತ್ತಿದ್ದರು.

ಮಕ್ಕಳನ್ನೂ ಪ್ರದರ್ಶನಕ್ಕೆ ಕರೆದೊಯ್ಯುತ್ತಿದ್ದರು. ಮಗನಾದ ಉದಯನನ್ನು ಹೆಗಲಲ್ಲಿ ಕುಳ್ಳಿರಿಸಿ ಆಟಕ್ಕೆ ಕರೆದುಕೊಂಡು ಹೋಗುತ್ತಿದ್ದರಂತೆ ಸುಬ್ರಹ್ಮಣ್ಯ ಭಟ್ಟರು. ಹಾಗಾಗಿ ತಾನೂ ಯಕ್ಷಗಾನ ಕಲಾವಿದನಾಗಬೇಕೆಂಬ ಬಯಕೆಯು ಉದಯ ಅವರಿಗೆ ಮೂಡಿತ್ತು. 2ನೇ ತರಗತಿಯ ವರೆಗೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ಓದು. ಪಿಯುಸಿ ಯಿಂದ ಸ್ನಾತಕೋತ್ತರ ಪದವಿಯ ವರೆಗೆ ಕಾಸರಗೋಡು ಸರಕಾರೀ ಕಾಲೇಜಿನಲ್ಲಿ ವಿದ್ಯಾರ್ಜನೆ. (ಕನ್ನಡ ಎಂ.ಎ). 2ನೇ ಕ್ಲಾಸಿನಿಂದ ತೊಡಗಿ ನೀರ್ಚಾಲು ಪರಿಸರದಲ್ಲಿ ನಡೆಯುತ್ತಿದ್ದ ಕರ್ನಾಟಕ, ಸುರತ್ಕಲ್, ಧರ್ಮಸ್ಥಳ ಮೇಳಗಳ ಪ್ರದರ್ಶನಗಳನ್ನು ಬಿಡದೆ ನೋಡುತ್ತಿದ್ದರು.

ಪುಂಡು ವೇಷಧಾರಿಗಳು ಗಿರಕಿ ಹೊಡೆಯುವುದನ್ನು ನೋಡುವುದೆಂದರೆ ಬಲು ಇಷ್ಟವಾಗಿತ್ತು. ಆಟ ನೋಡಿ ಮನೆಗೆ ಬಂದು ಛಾಯಾಪ್ರದರ್ಶನ. ದೀಂಗಿಣ, ಗಿರಾಕಿ ಹೊಡೆಯುವುದು ಮಾಡುತ್ತಿದ್ದರು. ಚೆಂಡೆ ಮದ್ದಳೆ ಬಾರಿಸುವುದನ್ನೂ ಗಮನವಿಟ್ಟು ನೋಡುತ್ತಿದ್ದರು. ಕನ್ನಡ ಸಿನಿಮಾದ ಡಾ. ರಾಜಕುಮಾರ್ ಅವರು ಹಾಡಿದ ‘ಆರಾಧಿಸುವೆ ಮದನಾರಿ, ಆದರಿಸು ನೀ ದಯೆತೋರಿ’ ಹಾಡಿನ ಕೊನೆಗೆ ಬರುವ ಬಾಯಿತಾಳಗಳನ್ನು ಬಾಯಿಪಾಠ ಮಾಡಿ ಪ್ಲಾಸ್ಟಿಕ್ ಕೊಡಪಾನಕ್ಕೆ ಬಾರಿಸುತ್ತಿದ್ದರು. ಯಕ್ಷಗಾನ ಹಾಡುಗಳ ಬಾಯಿತಾಳಗಳನ್ನೂ ಬಾರಿಸುತ್ತಿದ್ದರು. ಆಗಲೇ ಉದಯ ಕಂಬಾರ್ ಅವರೊಳಗೆ ಮದ್ದಳೆಗಾರನೊಬ್ಬ ಅವ್ಯಕ್ತವಾಗಿದ್ದ.

ಅಧ್ಯಾಪಕ, ಕಲಾವಿದರಾದ ಸುಬ್ಬಯ್ಯ ಮಣಿಯಾಣಿ ಅವರ ನೇತೃತ್ವದಲ್ಲಿ ಖ್ಯಾತ ಭಾಗವತರಾದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಆಗ ಮಾನ್ಯದಲ್ಲಿ ಹಿಮ್ಮೇಳ ತರಬೇತಿಯನ್ನು ನೀಡುತ್ತಿದ್ದರು. ಉದಯ ಕಂಬಾರ್ ಅವರು ಶ್ರೇಷ್ಠ ಗುರುಗಳಿಂದಲೇ ಚೆಂಡೆ ಮದ್ದಳೆ ವಾದನವನ್ನು ಅಭ್ಯಸಿಸಿದರು. ತರಬೇತಿ ಮುಗಿಸಿ ಶಾಸ್ತ್ರಿಗಳನ್ನು ಕರೆದುಕೊಂಡು ಪಟ್ಟಾಜೆ ಸಮೀಪದ ಚುಕ್ಕಿನಡ್ಕದ ತಮ್ಮ ಮನೆಗೆ ಬರುತ್ತಿದ್ದರು. ಉದಯ್ ಅವರ ತಮ್ಮ ಶ್ರೀ ಸುರೇಶ ಕಂಬಾರ್ ಅವರು ಉಂಡೆಮನೆ ಶ್ರೀಕೃಷ್ಣ ಭಟ್ಟರಿಂದ ನಾಟ್ಯ ಕಲಿತು ಮನೆಯಲ್ಲಿ ಅಭ್ಯಾಸ ಮಾಡುವಾಗ ಅವರ ಜತೆಯೂ ಕುಣಿದು ನಾಟ್ಯವನ್ನೂ ಕಲಿತುಕೊಂಡಿದ್ದರು.

ಉದಯ ಕಂಬಾರ್ (ಫೋಟೋ: ಮಧುಸೂದನ ಅಲೆವೂರಾಯ)

ಮಾನ್ಯದಲ್ಲಿ ಶ್ರೀ ರಾಘವೇಂದ್ರ ಕಲಾಸಂಘದ ಪ್ರದರ್ಶನದಲ್ಲಿ ಮೊತ್ತ ಮೊದಲು ಮದ್ದಳೆ ಬಾರಿಸುವ ಮೂಲಕ ರಂಗವೇರಿದ್ದರು. ಅಂದು ಅಡೂರು ಸುಬ್ರಾಯ ಅವರು ಚೆಂಡೆ ಬಾರಿಸಿದ್ದರು. ಗುರುಗಳಾದ ಶಾಸ್ತ್ರಿಗಳು ಭಾಗವತರಾಗಿ ಇದ್ದುದು ಅನುಕೂಲವೇ ಆಗಿತ್ತು. ಮತ್ತೆ ಶಾಲಾ ವಿದ್ಯಾರ್ಥಿಯಾಗಿ ನಿರಂತರ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ ಬೆಳೆದರು. ಅಲ್ಲದೆ ಮಾಂಬಾಡಿ ಶ್ರೀ ಸುಬ್ರಹ್ಮಣ್ಯ ಭಟ್ಟರಿಂದಲೂ ಹಿಮ್ಮೇಳ ಅಭ್ಯಾಸ ಮಾಡಿದರು. ಪಿಯುಸಿ ವಿದ್ಯಾರ್ಥಿಯಾಗಿರುವಾಗ ಪುಂಡೂರು ಶ್ರೀ ಕೃಷ್ಣರಾಜ ಪುಣಿಂಚತ್ತಾಯರಿಂದ ಶಾಸ್ತ್ರೀಯ ಸಂಗೀತ ಮೃದಂಗವನ್ನೂ ಅಭ್ಯಸಿಸಿದರು. ನಿರಂತರ ನಾಲ್ಕು ವರ್ಷಗಳ ಕಲಿಕೆ. ಅದು ಯಕ್ಷಗಾನಕ್ಕೆ ಅನುಕೂಲವೇ ಆಗಿತ್ತು.

ಪದವಿ ಪ್ರಥಮ ವರ್ಷದಿಂದ ಹವ್ಯಾಸೀ ಕಲಾವಿದನಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಗುರುಗಳಾದ ತೆಂಕಬೈಲು ಶಾಸ್ತ್ರಿಗಳು, ದಾಸರಬೈಲು ಚನಿಯ ನಾಯ್ಕ ಮೊದಲಾದ ಭಾಗವತರೊಂದಿಗೆ ಕಲಾಸೇವೆ ಮಾಡುವ  ಆಗಲೇ ದೊರೆತಿತ್ತು. ಮೇಳದ ಆಟದಲ್ಲಿಯೂ ವೃತ್ತಿ  ಕಲಾವಿದರು ಕರೆದು ಚೆಂಡೆ ಮದ್ದಳೆ ಬಾರಿಸಲು ಅವಕಾಶ ಕೊಡುತ್ತಿದ್ದರು. ಇದು ಬೆಳವಣಿಗೆಗೆ ಸಹಕಾರಿಯೂ ಆಗಿತ್ತು. ವೃತ್ತಿ ಕಲಾವಿದರಾದ ಕೂಡ್ಲು ನಾರಾಯಣ ಬಲ್ಯಾಯ, ಕೂಡ್ಲು ಆನಂದ, ರಾಧಾಕೃಷ್ಣ ನಾವಡ, ಸುಬ್ರಾಯ ಹೊಳ್ಳ, ಉದಯ ನಾವಡರ ವೇಷಗಳಿಗೆ ಮಳೆಗಾಲದಲ್ಲಿ ಬಾರಿಸುವ ಅವಕಾಶ ಹೆಚ್ಚಾಗಿ ದೊರಕಿತ್ತು. ಮದ್ದಳೆಗಾರ ಶ್ರೀ ಗೋಪಾಲಕೃಷ್ಣ ನಾವಡ ಮಧೂರು ಮತ್ತು ಉದಯ ಕಂಬಾರು ಅವರು ಜತೆಯಾಗಿ ಆಟ ಕೂಟಗಳಲ್ಲಿ ಚೆಡೆ ಮದ್ದಳೆ ನುಡಿಸುತ್ತಿದ್ದರು.

ವಿದ್ಯಾರ್ಥಿಯಾಗಿರುವಾಗ ಕಲ್ಲಕಟ್ಟ ಶಾಲೆಯಲ್ಲಿ ಸುಬ್ರಹ್ಮಣ್ಯೇಶ್ವರ ಕಲಾಸಂಘದ ಪ್ರದರ್ಶನ ವೀರವರ್ಮ ಕಾಳಗದ ಹನುಮಂತನಾಗಿ ರಂಗಪ್ರವೇಶ. ನಂತರ ಅನೇಕ ಬಾರಿ ವೇಷ ಮಾಡಿದ್ದರು. ಅಲ್ಲದೆ ಮಲ್ಲ ಮತ್ತು ಉಪ್ಪಳ ಮೇಳಗಳಲ್ಲಿ ವ್ಯವಸಾಯ ಮಾಡಿದ್ದರು. ಮನೆಯಲ್ಲಿ ಬಡತನವಿತ್ತು. ಯಕ್ಷಗಾನದ ಸಂಪಾದನೆಯಿಂದಲೇ ಉದಯ ಕಂಬಾರು ಅವರು ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದರು! ಯಕ್ಷಗಾನದ ಸಂಪಾದನೆಯಿಂದ ಬದುಕಲು ಸಾಧ್ಯವಿಲ್ಲ ಎನ್ನುವವರಿಗೆ ಉದಯ ಅವರ ಸಾಧನೆಯೇ ಉತ್ತರವಾಗಲಿ. ಪ್ರತಿಭಾವಂತರಿಗೆ, ನಿಷ್ಠಾವಂತರಿಗೆ, ನೈತಿಕವಾಗಿ ಬಲಿಷ್ಠರಾದವರಿಗೆ ಯಾವತ್ತೂ ಅವಕಾಶವಿರುತ್ತದೆ. ಪ್ರತಿಫಲವೂ ಇರುತ್ತದೆ.

ಉದಯ ಕಂಬಾರು ಚಿಪ್ಪಾರು ಶ್ರೀ ಕೃಷ್ಣಯ್ಯ ಬಲ್ಲಾಳರ ಅಭಿಮಾನಿ. ರಘುರಾಮ ಹೊಳ್ಳರು, ದಿನೇಶ ಅಮ್ಮಣ್ಣಾಯರು, ಪದ್ಯಾಣ ಗಣಪತಿ ಭಟ್ಟರು, ರಾಮಕೃಷ್ಣ ಮಯ್ಯರು, ಚಿಪ್ಪಾರು, ದೇಲಂತಮಜಲು, ಅಡೂರು ಗಣೇಶ ರಾಯರೇ ಮೊದಲಾದ ಕಲಾವಿದರು ಮೇಳದ ಪ್ರದರ್ಶನಗಳಲ್ಲೂ ಭಾಗವಹಿಸುವ ಅವಕಾಶವನ್ನಿತ್ತು ಪ್ರೋತ್ಸಾಹಿಸಿದ್ದರು. ಎಂ. ಎ. ಪೂರೈಸಿದ ಮೇಲೆ ಬಿ. ಎಡ್. ಮಾಡಬೇಕೆಂಬ ಆಸೆ ಇದ್ದರೂ ಅವಕಾಶ ಸಿಕ್ಕಿರಲಿಲ್ಲ. (1992ರಲ್ಲಿ). ಮುಂದೇನು ಎಂದು ಯೋಚಿಸುತ್ತಿದ್ದರು. ಆಗ ಬದಿಯಡ್ಕದಲ್ಲಿ ಇವರ ದೊಡ್ಡಮ್ಮನ ಮಗ ಶ್ರೀ ಬಾಲಸುಬ್ರಹ್ಮಣ್ಯ ಬೊಳುಂಬು ಅವರು ಸ್ಟುಡಿಯೋ ನಡೆಸುತ್ತಿದ್ದರು. (ಶಿಲ್ಪಾ ಸ್ಟುಡಿಯೋ). ಛಾಯಾಚಿತ್ರಗಾರಿಕೆಯಲ್ಲಿ ಒಳ್ಳೆಯ ಹೆಸರನ್ನು ಪಡೆದವರು. ನನ್ನ ಜತೆ ಸಹಾಯಕನಾಗಿ ಬಾ ಎಂದಾಗ ಉದಯ ಅವರು ಒಪ್ಪಿದ್ದರು. ಆಸಕ್ತಿ ಇದ್ದು ಹೋದದ್ದಲ್ಲ. ಆದರೆ ಹೋದ ಮೇಲೆ ಆಸಕ್ತಿಯಿಂದ ಕೆಲಸ ಮಾಡಿದ್ದರು. ಇದುವೇ ಅವರ ಬದುಕಿನ ಮಹತ್ತರ ತಿರುವು.

ಉದಯ ಕಂಬಾರ್ (ಫೋಟೋ: ಮಧುಸೂದನ ಅಲೆವೂರಾಯ)

ಬದಿಯಡ್ಕದ ಶಿಲ್ಪಾ ಸ್ಟುಡಿಯೋದಲ್ಲಿ ಅಣ್ಣನ ಜತೆ ದುಡಿಮೆ. ಅಣ್ಣನ ಸಹಕಾರದಿಂದ ಬಹುಬೇಗನೆ ಕಲಿತಿದ್ದರು. ಐದು ವರ್ಷದ ಅನುಭವವನ್ನು ಆರು ತಿಂಗಳಿನಲ್ಲೇ ಗಳಿಸಿದ್ದರು. ಸರಕಾರೀ ಉದ್ಯೋಗದ ಗೋಜಿಗೆ ಹೋಗದೆ ಫೋಟೋಗ್ರಫಿಯನ್ನು ವೃತ್ತಿಯಾಗಿಯೂ ಯಕ್ಷಗಾನವನ್ನು ಹವ್ಯಾಸವಾಗಿಯೂ ಸ್ವೀಕರಿಸಿದರು. ಅಣ್ಣ ಶ್ರೀ ಬಾಲಸುಬ್ರಹ್ಮಣ್ಯ ಭಟ್ಟರ ಸಲಹೆಯಂತೆ ಪೆರ್ಲ ಅನುಪಮಾ ಸ್ಟುಡಿಯೋದ ಶ್ರೀಕೃಷ್ಣ ಅವರ ಜತೆ ಎಂಟು  ತಿಂಗಳ ಕಾಲ ದುಡಿಮೆ. ಅವರ ಸಾಕಾರ ಪ್ರೋತ್ಸಾಹವೂ ಸಿಕ್ಕಿತ್ತು. ಬಳಿಕ ಕಾಸರಗೋಡಿನ ಲಾವಣ್ಯ ಸ್ಟುಡಿಯೋದಲ್ಲಿ ದುಡಿಯುತ್ತಿರುವಾಗ ಕಣ್ಣೂರು ವಿಶ್ವವಿದ್ಯಾನಿಲಯದ ಬಿ.ಎಡ್ ಕೋರ್ಸ್ ಗೆ ಪ್ರವೇಶ ಸಿಕ್ಕಿದರೂ ಹೋಗದೆ ಫೋಟೋಗ್ರಫಿಯಲ್ಲೇ ಮುಂದುವರಿಯುವ ನಿರ್ಣಯವನ್ನು ಮಾಡಿದ್ದರು.

1994ರಲ್ಲಿ ಉದಯ ಕಂಬಾರು ಅವರು ಸ್ಟುಡಿಯೋ ಒಂದರ ಮಾಲಕರಾಗಿದ್ದರು. ನೀರ್ಚಾಲಿನಲ್ಲಿ ವರ್ಣಾ ಸ್ಟುಡಿಯೋ ತೆರೆದು ಫೋಟೋಗ್ರಫಿ ಉದ್ಯಮವನ್ನು ಆರಂಭಿಸಿದ್ದರು. ಸುಮಾರು ಒಂದು ಲಕ್ಷ ರೂಪಾಯಿಗಳ ಬಂಡವಾಳ. ಅಷ್ಟು ಹಣ ಇವರ ಕೈಯಲ್ಲಿ ಇರಲಿಲ್ಲ. ಮಗನ ತಳಮಳವನ್ನು ಗಮನಿಸಿದ  ಸುಮತಿ ಅಮ್ಮ ತನ್ನಲ್ಲಿದ್ದ ಚಿನ್ನದ ಆಭರಣವನ್ನು ನೀಡಿ ಒಳ್ಳೆಯದಾಗಲಿ ಎಂದು ಆಶೀರ್ವದಿಸಿದ್ದರು. ಮತ್ತೊಂದೇ ವರ್ಷದಲ್ಲಿ ಪಡೆದುಕೊಂಡ ಆಭರಣವನ್ನಲ್ಲದೆ ಅಮ್ಮನ ಬೇಕು ಬೇಡಗಳನ್ನೆಲ್ಲಾ ಪೂರೈಸಿ ಕಾಲಿಗೆರಗಿದ್ದರು. 2001ರಲ್ಲಿ ಬದಿಯಡ್ಕದಲ್ಲಿ ವರ್ಣಾ ಸ್ಟುಡಿಯೋದ ಬ್ರಾಂಚ್ ತೆರೆದಿದ್ದರು. ಈಗ ಉದಯ ಕಂಬಾರ್ ಎಂಬ ಮದ್ದಳೆಗಾರ ಎರಡು ಸ್ಟುಡಿಯೋದ ಮಾಲಕರು.

ಕಳೆದ 25 ವರ್ಷಗಳಿಂದ ಛಾಯಾಚಿತ್ರಗ್ರಾಹಕರಾಗಿ, ಸಮಾರಂಭಗಳ ವೀಡಿಯೋಗ್ರಾಫರ್ ಆಗಿ, ಮದ್ದಳೆಗಾರರಾಗಿ ಎಲ್ಲರಿಗೂ ಬೇಕಾದವರಾಗಿ ಪ್ರಸಿದ್ಧರಾಗಿದ್ದಾರೆ. 2010ರಿಂದ ತೊಡಗಿ ಎಡನೀರು ಮಠಾಧೀಶರು ಎಡನೀರು ಮೇಳದ ಪ್ರದರ್ಶನಗಳಲ್ಲಿ ಭಾಗವಹಿಸುವ ಅವಕಾಶ ನೀಡಿ ಹರಸಿದ್ದರು. ಎಡನೀರು ಶ್ರೀಗಳವರ ಭಾಗವತಿಕೆಗೆ ಚೆಂಡೆ ಮದ್ದಳೆ ಬಾರಿಸುವ ಅವಕಾಶವೂ ಸಿಕ್ಕಿತ್ತು. ಭಾಗವತರಾದ ದಿನೇಶ ಅಮ್ಮಣ್ಣಾಯ, ದೇಲಂತಮಜಲು ಮತ್ತು ಮೇಳದ ಸರ್ವ ಕಲಾವಿದರೂ ಪ್ರೋತ್ಸಾಹಿಸಿದ್ದರು. ತಾನು ಸಂಪಾದಿಸುತ್ತಾ ಸಹೋದರರಿಗೂ ಸಹಕರಿಸಿ ಅವರಿಬ್ಬರಿಂದಲೂ ಪ್ರೀತಿಯನ್ನೂ ಗೌರವವನ್ನೂ ಪಡೆದುಕೊಂಡಿದ್ದಾರೆ.

ಹಿರಿಯ ತಮ್ಮ ಶ್ರೀಪತಿ ಕಂಬಾರ್ ಟೆಕ್ಸ್ ಟೈಲ್ಸ್ ವ್ಯವಹಾರ ಮತ್ತು ಟೈಲರಿಂಗ್ ನಡೆಸುತ್ತಿದ್ದಾರೆ. (ಶೃತಿನ್ ಟೆಕ್ಸ್ ಟೈಲ್ಸ್ ನೀರ್ಚಾಲು). ಕಿರಿಯ ತಮ್ಮ ಶ್ರೀ ಸುರೇಶ್ ಕಂಬಾರ್ ಕಲಾಸಕ್ತ. ಯಕ್ಷಗಾನ ಕಲಾವಿದ. ಶಾಸ್ತ್ರೀಯ ಸಂಗೀತ ಕಲಿತಿದ್ದಾರೆ. ಒಳ್ಳೆಯ ಹಾಡುಗಾರ. ಬೆಂಗಳೂರಿನಲ್ಲಿ ಉದ್ಯೋಗಿ. ಸಾಫ್ಟ್ ವೆರ್ ಇಂಜಿನಿಯರ್. 1998ರಲ್ಲಿ ಉದಯ್ ಕಂಬಾರ್ ಅವರು ಮಧುಮತಿ ಅವರನ್ನು ವಿವಾಹವಾದರು. ವಿವಾಹದ ಬಳಿಕ ಮಡದಿಯನ್ನು ಮಾಯಿಪ್ಪಾಡಿಯ ಶಿಕ್ಷಕರ ತರಬೇತಿ ಕೇಂದ್ರಕ್ಕೆ ಕಳಿಸಿ ವಿದ್ಯೆ ಕೊಡಿಸಿದ್ದರು. (ಟಿಟಿಸಿ) ಮಧುಮತಿ ಅವರು ಈಗ ಕಿಳಿಂಗಾರು ಪ್ರಾಥಮಿಕ ಶಾಲೆಯ ಅಧ್ಯಾಪಿಕೆ. ಉದಯ್ ಕಂಬಾರ್ ಮತ್ತು ಮಧುಮತಿ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ಚಿಂತನ್ ಕಂಬಾರು. ಬೆಂಗಳೂರು ಜೈನ್  ಯೂನಿವರ್ಸಿಟಿಯಲ್ಲಿ ಬಿ.ಟೆಕ್ ಓದುತ್ತಿದ್ದು ಪುತ್ರಿ ಚಿನ್ಮಯಿ ಕಂಬಾರ್ ನೀರ್ಚಾಲ್ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿನಿ.

ಎಲ್ಲಾ ಹಿರಿಯ, ಕಿರಿಯ ಕಲಾವಿದರ ಪ್ರೀತಿಗೆ ಪಾತ್ರರಾದ ಕಂಬಾರು ಉದಯಣ್ಣ ಹೆಚ್ಚಿನ ಎಲ್ಲಾ ಭಾಗವತರ ಹಾಡುಗಳಿಗೆ ಮದ್ದಳೆ ಬಾರಿಸುವ ಅವಕಾಶವನ್ನು ಹೊಂದಿದ ಅನುಭವಿಯಾಗಿದ್ದಾರೆ. ಕಳೆದ ವರ್ಷ ಕಟೀಲು 2ನೇ ಮೇಳದಲ್ಲಿ ಪ್ರಸಾದ್ ಬಲಿಪ ಮತ್ತು ಪ್ರಫುಲ್ಲಚಂದ್ರ ನೆಲ್ಯಾಡಿ ಅವರ ಜತೆ ತಿರುಗಾಟವನ್ನೂ ಮಾಡಿರುತ್ತಾರೆ. ಪ್ರಸ್ತುತ ಕೇರಳ ಛಾಯಾಚಿತ್ರಗಾರರ ಸಂಘ, ಕಾಸರಗೋಡು ಜಿಲ್ಲೆಯ ಬದಿಯಡ್ಕ ಯೂನಿಟ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚಿಗೆ ಮಾನ್ಯ ಸಮೀಪ ಹೊಸ ಮನೆಯನ್ನೂ ಹೊಂದಿ ಅಲ್ಲಿ ವಾಸಿಸುತ್ತಿದ್ದಾರೆ.

ಬದುಕಿನುದ್ದಕ್ಕೂ ಹೋರಾಟ, ಬಡತನ. ಅನುಭವ, ಅವಿರತವಾದ ಪರಿಶ್ರಮ, ಜತೆಗೆ ಯಕ್ಷಗಾನವು ಉದಯ ಕಂಬಾರು ಅವರನ್ನು ಸಮಾಜದಲ್ಲಿ ವ್ಯಕ್ತಿಯಾಗಿ ರೂಪಿಸಿತ್ತು. ಕಷ್ಟದ ಬದುಕನ್ನು ನಡೆಸಿದರೂ ದೇಹಕ್ಕೆ ಆಯಾಸವಿದ್ದಾಗಲೂ ಯಕ್ಷಗಾನವನ್ನು ದೂರ ಮಾಡದೆ ಆ ಕಲೆಯ ಒಂದು ಅಂಗವಾಗಿಯೇ ಬೆಳೆದು ಬಂದಿದ್ದಾರೆ. ಶ್ರಮಜೀವಿಯಾಗಿ, ಸಾಧನೆಯನ್ನು ಮಾಡಿದ ದೆಸೆಯಿಂದಲೇ ವೃತ್ತಿಯಲ್ಲೂ, ಹವ್ಯಾಸವಾಗಿ ಸ್ವೀಕರಿಸಿದ ಯಕ್ಷಗಾನದಲ್ಲೂ ಎಲ್ಲರ ಮನ್ನಣೆಗೆ ಪಾತ್ರರಾಗಿದ್ದಾರೆ. ಮದ್ದಳೆಗಾರ ಶ್ರೀ ಉದಯ ಕಂಬಾರು ಅವರಿಂದ ಯಕ್ಷಗಾನ ಕಲಾಮಾತೆಯ ಸೇವೆಯು ನಿರಂತರವಾಗಿರಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ. ಮನದ ಬಯಕೆಗಳನ್ನೆಲ್ಲಾ ಶ್ರೀದೇವರ ಅನುಗ್ರಹದಿಂದ ಹೊಂದುವಂತಾಗಲಿ. 

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments