Friday, September 20, 2024
Homeಯಕ್ಷಗಾನತೀರ್ಥಹಳ್ಳಿ ಗೋಪಾಲ ಆಚಾರ್ಯ - ಯಕ್ಷವೇದಿಕೆಯ ಅಭಿಮನ್ಯು

ತೀರ್ಥಹಳ್ಳಿ ಗೋಪಾಲ ಆಚಾರ್ಯ – ಯಕ್ಷವೇದಿಕೆಯ ಅಭಿಮನ್ಯು

ತೀರ್ಥಹಳ್ಳಿ ಗೋಪಾಲ ಆಚಾರ್ಯರು ಬಡಗುತಿಟ್ಟು ಯಕ್ಷಗಾನ ರಂಗ ಕಂಡ ಪ್ರಖ್ಯಾತ ಪುಂಡುವೇಷಧಾರಿಗಳಲ್ಲಿ ಒಬ್ಬರು. ಒಂದು ಕಾಲದಲ್ಲಿ ಅಂದರೆ ಸುಮಾರು 20 ವರ್ಷಗಳ ಕಾಲದಷ್ಟು ಹಿಂದಕ್ಕೆ ಹೋದರೆ ಆ ಕಾಲದಲ್ಲಿ ಬಡಗು ತಿಟ್ಟಿನಲ್ಲಿ ಅಭಿಮನ್ಯು ಮತ್ತು ಬಬ್ರುವಾಹನ, ಸುಧನ್ವ, ಚಂದ್ರಹಾಸ, ದೇವವ್ರತ ಮೊದಲಾದ ಪುಂಡುವೇಷಗಳಲ್ಲಿ ಯಕ್ಷಗಾನ ವೇದಿಕೆಗಳಲ್ಲಿ ತನ್ನ ಪ್ರದರ್ಶನದಿಂದಲೇ ದೂಳೆಬ್ಬಿಸಿದವರು.

ಈಚೆಗೆ ನಾಲ್ಕೈದು ವರ್ಷಗಳ ಹಿಂದೆ ಅವರಿಗೆ 60 ವರ್ಷಗಳು ತುಂಬಿತ್ತು. ಆಗ ಅವರ 60ರ ಸಂಭ್ರಮವನ್ನೂ ಆಚರಿಸಲಾಗಿತ್ತು. ಅಂತಹಾ 60ರ ವಯಸ್ಸಿನಲ್ಲಿಯೂ ಪುಂಡುವೇಷಗಳನ್ನು ವಯಸ್ಸಿನ ತೊಡಕುಗಳಿಲ್ಲದೆ ಸುಲಲಿತವಾಗಿ ನಿರ್ವಹಿಸುತ್ತಿದ್ದ ಅವರಿಗೆ ಅರುವತ್ತರ ಅಭಿಮನ್ಯು ಎಂಬ ಹೆಸರು ಸಾರ್ಥಕವಾಗಿ ಒಪ್ಪುತ್ತದೆ. ತನ್ನ 60ನೆಯ ವಯಸ್ಸಿನಲ್ಲಿಯೂ 30ರ ಯುವಕನಷ್ಟು ರಂಗದಲ್ಲಿ ಕ್ರಿಯಾಶೀಲರಾಗಿದ್ದ ಬೆರಳೆಣಿಕೆಯ ಕಲಾವಿದರಲ್ಲಿ ಗೋಪಾಲ ಆಚಾರ್ಯರೂ ಒಬ್ಬರು.

60 ವರ್ಷ ಎನ್ನುವುದು  ಕಲಾವಿದರಿಗೆ  ಪ್ರಾಯವೇನಲ್ಲ ಹೆಚ್ಚಿನ ಕಲಾವಿದರು ತಮ್ಮ ಕಲಾಜೀವನದ ಉತ್ತುಂಗದ ಸ್ಥಿತಿಯಲ್ಲಿ ವಿರಾಜಮಾನರಾಗುವುದು ಈ ವಯಸ್ಸಿನಲ್ಲಿಯೇ ಆಗಿರುತ್ತದೆ. ಆದರೆ  ಬೇಡಿಕೆಯಲ್ಲಿರುವಾಗಲೇ ವೃತ್ತಿ ಬದುಕಿಗೆ ವಿದಾಯ ಹೇಳಬೇಕೆಂಬ ಬಯಕೆ ತೀರ್ಥಹಳ್ಳಿ ಗೋಪಾಲ ಆಚಾರ್ಯರದ್ದಾಗಿತ್ತು. ಅದರಂತೆ  ತಮ್ಮ ಕಲಾಬದುಕಿನ ಉಚ್ಛ್ರಾಯ ಸ್ಥಿತಿಯಲ್ಲಿ ಇರುವಾಗಲೇ ಯಕ್ಷಗಾನ ವೃತ್ತಿಗೆ ನಿವೃತ್ತಿ ಘೋಷಿಸಿದರು. 

ತೀರ್ಥಹಳ್ಳಿ ಗೋಪಾಲ ಆಚಾರ್ಯರು  ಹುಟ್ಟಿದ್ದು ಮಲೆನಾಡಿನ ತೀರ್ಥಹಳ್ಳಿಯ ಕುರುವಳ್ಳಿಯಲ್ಲಿ. ವಾಸುದೇವ ಆಚಾರ್ಯ ಮತ್ತು ಸುಲೋಚನಾ ದಂಪತಿಯ ಎರಡನೇ ಮಗನಾಗಿ 1955ರಲ್ಲಿ ಜನಿಸಿದರು. ಹಿರಿಯರ ಮೂಲ ಕುಲಕಸುಬನ್ನು ಬಿಟ್ಟು ಯಕ್ಷಗಾನವನ್ನು ವೃತ್ತಿ ಮತ್ತು ಆಸಕ್ತಿಯ  ಕ್ಷೇತ್ರವನ್ನಾಗಿ ಆರಿಸಿಕೊಂಡರು. ಅವರ ಆಯ್ಕೆ ತಪ್ಪಾಗಲೇ  ಇಲ್ಲ. ಅವರ ಈ ನಿರ್ಧಾರವು ಮುಂದೊಂದು ದಿನ ಯಕ್ಷಗಾನಕ್ಕೊಂದು ಅಮೂಲ್ಯ ರತ್ನವನ್ನು ಸಂಪಾದಿಸಿಕೊಟ್ಟಿತು.

ತೀರ್ಥಹಳ್ಳಿ ಗೋಪಾಲ ಆಚಾರ್ಯ ಎನ್ನುವ  ಯಕ್ಷಗಾನ ಕಲಾವಿದ ಇಂದು ಜನಮಾನಸದಲ್ಲಿ ಅಮೂಲ್ಯ ಸ್ಥಾನವನ್ನು ಪಡೆದಿದ್ದಾರೆ.  ಬಡಗುತಿಟ್ಟು ಯಕ್ಷಗಾನ ರಂಗದ ಈ ಕಲಾವಿದ ಸುಮಾರು ನಾಲ್ಕು ದಶಕಗಳಿಗೂ ಅಧಿಕ ಕಾಲ ರಂಗದ ಅನಭಿಷಿಕ್ತ ದೊರೆಯಾಗಿ ಮೆರೆದರು. ಮಲೆನಾಡಿನ ತೀರ್ಥಹಳ್ಳಿಯಿಂದ ಬಂದು ಯಕ್ಷಗಾನದ ಆಡು ಅಂಗಳವಾದ ಕುಂದಾಪುರ ತಾಲೂಕಿನ  ಸಮೀಪದ ನಾಯಕನಕಟ್ಟೆಯಲ್ಲಿ ನೆಲೆಸಿದರು.  ಓದಿದ್ದು ಮೂರನೆಯ ತರಗತಿಯ ವರೆಗೆ. ಆದರೆ ಯಕ್ಷಗಾನದಿಂದ ಗಳಿಸಿಕೊಂಡ ಜ್ಞಾನ ವಿದ್ವಾಂಸರಿಗಿಂತ ಕಡಿಮೆಯೇನಲ್ಲ.

ಯಕ್ಷಗಾನದ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಕೃಷ್ಣೋಜಿರಾಯರಿಂದ ಪೂರೈಸಿದರು. ಆಮೇಲೆ ಮೇಳದ ತಿರುಗಾಟಗಳಲ್ಲಿ ಮತ್ತು ಪ್ರದರ್ಶನಗಳಲ್ಲಿ ತಾನು ಸ್ವತಃ ಕಂಡು, ಅನುಭವಗಳಿಂದ ಕಲಿತರು. ಆಚಾರ್ಯರ ಈ ತೆರನಾದ ಪ್ರಸಿದ್ಧಿಯು ಅವರಿಗೆ ದಿಢೀರ್ ಉಂಟಾದುದಲ್ಲ. ತನ್ನ 14ನೇ ವಯಸ್ಸಿನಲ್ಲಿ ಮಲೆನಾಡಿನ ರಂಜದಕಟ್ಟೆ ಮೇಳದಲ್ಲಿ ಕೋಡಂಗಿಯಾಗಿ ಗೆಜ್ಜೆಕಟ್ಟಿದ ಆಚಾರ್ಯರು ಬಾಲಗೋಪಾಲ, ಪೀಠೀಕಾ ಸ್ತ್ರೀವೇಷ, ಒಡ್ಡೋಲಗ ಪುಂಡುವೇಷ, ಪುರುಷವೇಷಗಳನ್ನೂ ಮಾಡಿ ಎರಡನೇ ವೇಷದ ಸ್ಥಾನಕ್ಕೇರಿದರು. 

1970ರಲ್ಲಿ ತನ್ನ ತಿರುಗಾಟವನ್ನು ಆರಂಭಿಸಿದ ತೀರ್ಥಹಳ್ಳಿಯವರು ನಾಗರಕೊಡುಗೆ, ಶಿರಸಿಯ ಪಂಚಲಿಂಗೇಶ್ವರ, ಗೋಳಿಗರಡಿ ಮತ್ತು ಸಾಲಿಗ್ರಾಮ ಮೇಳಗಳಲ್ಲಿ ಸೇವೆ ಸಲ್ಲಿಸಿದ ನಂತರ ಪೆರ್ಡೂರು ಮೇಳದಲ್ಲಿ 31 ವರ್ಷಗಳ ಸುದೀರ್ಘಾವಧಿಯ ಕಲಾಸೇವೆ ಸಲ್ಲಿಸಿದ್ದಾರೆ. ಯಕ್ಷರಂಗದ ಸಿಡಿಲಮರಿ, ಅರುವತ್ತರ ಅಭಿಮನ್ಯು ಹೀಗೆ ಬಹು ಬಿರುದಾಂಕಿತ ತೀರ್ಥಹಳ್ಳಿಯವರ ನಿವೃತ್ತಿಯ ನಿರ್ಧಾರದಿಂದ ಸ್ವತಃ ಅವರ ಅಭಿಮಾನಿಗಳೂ ಮತ್ತು ಯಕ್ಷಗಾನ ಕಲಾಭಿಮಾನಿಗಳೂ ಅತೀವ ಬೇಸರಗೊಂಡಿದ್ದರು.

ಅವರಿಂದ ಇನ್ನೂ ಹೆಚ್ಚಿನ ಕಲಾಸೇವೆಯನ್ನು  ನಿರೀಕ್ಷಿಸಿದ್ದರೂ ತೀರ್ಥಹಳ್ಳಿಯವರು ತನ್ನ ನಿವೃತ್ತಿಗೆ ಇದೇ ಸಕಾಲ ಎಂದು ನಿರ್ಧರಿಸಿದಂತಿತ್ತು. ಶ್ರುತಿಬದ್ದ ಮಾತುಗಳು ಮತ್ತು ಪಾತ್ರಕ್ಕೆ ನ್ಯಾಯ ಒದಗಿಸುವಿಕೆ ಮತ್ತು ಪಾತ್ರ ನಿರ್ವಹಣೆಯಲ್ಲಿ ಶಿಸ್ತು ಮತ್ತು ಅಚ್ಚುಕಟ್ಟುತನ ಇವುಗಳು ಗೋಪಾಲ ಆಚಾರ್ಯರ ವಿಶೇಷತೆಗಳು. ರಂಜದಕಟ್ಟೆ ಮೇಳದ ಪ್ರಥಮ ತಿರುಗಾಟದ ನಂತರ ನಾಗರಕೊಡಗೆ ಮೇಳದಲ್ಲಿ ಎರಡು ವರ್ಷ ತಿರುಗಾಟ ಮಾಡಿದ್ದ ಗೋಪಾಲ ಆಚಾರ್ಯರು ಆಮೇಲೆ  ಗೋಳಿಗರಡಿ ಮೇಳದಲ್ಲಿ ತಿರುಗಾಟ  ನಡೆಸಿದ್ದರು.

ಆಮೇಲೆ ಸಾಲಿಗ್ರಾಮ ಮೇಳಕ್ಕೆ ಸೇರಿದರು.  ಸಾಲಿಗ್ರಾಮ ಮೇಳದ ತಿರುಗಾಟವು  ಕಲಾಜೀವನಕ್ಕೆ  ದೊಡ್ಡ ತಿರುವು ಎಂದೇ ಹೇಳಬಹುದು. ಪ್ರಸಿದ್ಧ ಕಲಾವಿದರ ಒಡನಾಟದಿಂದ ಬಹಳಷ್ಟು ಕಲಿಯುವುದಕ್ಕೆ ಅವಕಾಶವಾಯಿತು.  ಗುಂಡ್ಮಿ ಕಾಳಿಂಗ ನಾವಡ,  ಅರಾಟೆ ಮಂಜುನಾಥ, ಮುಖ್ಯಪ್ರಾಣ ಕಿನ್ನಿಗೋಳಿ,  ರಾಮನಾಯರಿ, ಭಾಸ್ಕರ ಜೋಶಿ, ಬಳ್ಕೂರು ಕೃಷ್ಣಯಾಜಿ, ಐರೋಡಿ ಗೋವಿಂದಪ್ಪ, ನೆಲ್ಲೂರು ಮರಿಯಪ್ಪಾಚಾರ್, ಜಲವಳ್ಳಿ ವೆಂಕಟೇಶ ರಾವ್, ಶಿರಿಯಾರ್ ಮಂಜುನಾಯ್ಕ್, ಅರಾಟೆ ಮಂಜುನಾಥ,  ಮೊದಲಾದ ದಿಗ್ಗಜರ ಒಡನಾಟವೂ ದೊರೆಯಿತು.

ಬಹು ಬೇಗನೆ ಪುಂಡುವೇಷದ ಪಟ್ಟ ಅರಸಿಕೊಂಡು ಬಂತು. ಕಾಳಿಂಗ ನಾವಡರ ನಾಗಶ್ರೀ ಪ್ರಸಂಗದ ಶೈಥಿಲ್ಯನಾಗಿ  ಜನಮನ್ನಣೆ ಗಳಿಸಿದರು. ಕಾಲ್ಪನಿಕ ಮತ್ತು ಸಾಮಾಜಿಕ ಪ್ರಸಂಗಗಳಲ್ಲಿ ಅಲ್ಲದೆ ಪೌರಾಣಿಕ ಪ್ರಸಂಗಗಳ ಪಾತ್ರಗಳಾದ ಅಭಿಮನ್ಯು, ಧರ್ಮಂಗದ, ರುಕ್ಮಾಂಗ, ಶುಭಾಂಗ, ಬಬ್ರುವಾಹನ, ಚಿತ್ರಕೇತ, ಕುಶ, ಲವ ಮೊದಲಾದ ಪಾತ್ರಗಳಲ್ಲಿ ಅಭೂತಪೂರ್ವ ಜನಮನ್ನಣೆಯನ್ನು ಗಳಿಸಿದರು. ಸಾಲಿಗ್ರಾಮ ಮೇಳದಲ್ಲಿ ಹತ್ತು ವರ್ಷ ತಿರುಗಾಟ ಮಾಡಿದ್ದರು. ಆಮೇಲೆ  ಶಿರಸಿಯ ಪಂಚಲಿಂಗೇಶ್ವರ ಮೇಳದಲ್ಲಿ ಸೇವೆ ಸಲ್ಲಿಸಿದರು.

1986ರಲ್ಲಿ ಡೇರೆ  ಪುನರಾರಂಭಗೊಂಡ ಪೆರ್ಡೂರು ಮೇಳಕ್ಕೆ  ತೀರ್ಥಹಳ್ಳಿ ಗೋಪಾಲ ಆಚಾರ್ಯರು ಸೇರ್ಪಡೆಗೊಂಡರು. ಆಮೇಲೆ  ನಿರಂತರ 31 ವರ್ಷಗಳ ಕಾಲ ಪೆರ್ಡೂರು ಮೇಳದ ಅವಿಭಾಜ್ಯ ಅಂಗವಾದರು.  ಪೆರ್ಡೂರು ಮೇಳದಲ್ಲಿ ಅವರಿಗೆ ಸುಬ್ರಮಣ್ಯ ಧಾರೇಶ್ವರ, ಸುರೇಶ ಶೆಟ್ಟಿ, ದುರ್ಗಪ್ಪ ಗುಡಿಗಾರ್, ನಗರ ಜಗನ್ನಾಥ ಶೆಟ್ಟಿ, ಗೋಡೆ ನಾರಾಯಣ ಹೆಗಡೆ, ಆರ್ಗೋಡು ಮೋಹನದಾಸ ಶೆಣೈ ಮೊದಲಾದ ಪ್ರಸಿದ್ಧ ಕಲಾವಿದರ ಒಡನಾಟ ಸಿಕ್ಕಿತು. ಅಲ್ಲಿ ಆಚಾರ್ಯರು ಖ್ಯಾತಿಯ ಉತ್ತುಂಗಕ್ಕೇರತೊಡಗಿದರು.

ಅವರಿಗೆ ಅಪಾರ ಪ್ರಸಿದ್ಧಿ ತಂದುಕೊಟ್ಟ ಪಾತ್ರ ಅಭಿಮನ್ಯು. ಆ ಪಾತ್ರ ಎಷ್ಟು ಪ್ರಸಿದ್ಧಿ ತಂದು ಕೊಟ್ಟಿತು ಎಂದರೆ ಅಭಿಮನ್ಯುವಿನ ಹೆಸರು ಗೋಪಾಲ ಆಚಾರ್ಯರ ಹೆಸರಿನೊಂದಿಗೆ ಜೋಡಿಸಲ್ಪಟ್ಟಿತು. ಅದೇ ರೀತಿ ಕೃಷ್ಣನ ಪಾತ್ರವೂ ಇವರನ್ನೇ ಅರಸಿ ಬರುತ್ತಿತ್ತು. ಯಾವುದೇ ಪ್ರಸಂಗದಲ್ಲಿ ಕೃಷ್ಣನ ಪಾತ್ರವು ಇವರಿಗೆ ಮೀಸಲಾಗಿರುತ್ತಿತ್ತು.

ಬಡಗು ಮತ್ತು ಬಡಾ ಬಡಗು ಈ  ಎರಡೂ ಶೈಲಿಗಳ ನೃತ್ಯವನ್ನು ಕರಗತ ಮಾಡಿಕೊಂಡಿದ್ದ ಗೋಪಾಲ ಆಚಾರ್ಯರು ಈ ಎರಡೂ ನೃತ್ಯ ಶೈಲಿಗಳನ್ನು ರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶಿಸುತ್ತಿದ್ದರು. ಇವರ ವೇಷಗಾರಿಕೆಯಲ್ಲಿ ನಗರ ಜಗನ್ನಾಥ ಶೆಟ್ಟಿ ಮತ್ತು ಶಿರಿಯಾರ ಮಂಜು ನಾಯ್ಕರ ಪ್ರಭಾವವಿದೆ ಎಂದು ಹೇಳಲಾಗುತ್ತದೆ.  ಹೀಗೆ 1970ರಿಂದ ತೊಡಗಿ ಒಟ್ಟು 46 ವರ್ಷಗಳ ಕಾಲ ತೀರ್ಥಹಳ್ಳಿ ಗೋಪಾಲ ಆಚಾರ್ಯರು ಬಡಗುತಿಟ್ಟು ಯಕ್ಷಗಾನದಲ್ಲಿ ಬೆಳೆದು ಬಂದು ಪ್ರಸಿದ್ಧಿಯ ಪಥದಲ್ಲಿ ಹೆಜ್ಜೆ ಹಾಕಿದ್ದು ಈಗ ಇತಿಹಾಸ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments