ಕಲಾವಿದ, ಪ್ರಸಂಗಕರ್ತ, ಸಮಾಜಸೇವಕ ಹಾಗೂ ಉತ್ತಮ ಕೃಷಿಕ, ವೈದ್ಯ ಶ್ರೀ ಪಟ್ಟಾಜೆ ಗಣೇಶ ಭಟ್ಟರ ಜೀವಿತಾವಧಿ 1943-2020. ಪುತ್ತೂರು ತಾಲೂಕಿನ ಕಾವು ಸಮೀಪದ ಪಟ್ಟಾಜೆ ಎಂಬಲ್ಲಿ ಸರ್ಪಂಗಳ ಶ್ರೀ ನಾರಾಯಣ ಭಟ್ಟ ಮತ್ತು ಶ್ರೀಮತಿ ಗೌರಿ ಅಮ್ಮ ದಂಪತಿಗಳ ಪುತ್ರನಾಗಿ 1943 ಜೂನ್ 12ರಂದು ಜನನ.
ಬಾಲ್ಯದಲ್ಲೇ ಯಕ್ಷಗಾನಾಸಕ್ತರಾಗಿದ್ದರು. ಶಾಲಾ ವಿದ್ಯಾರ್ಥಿಯಾಗಿದ್ದಾಗ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು. ತಾನೂ ಯಕ್ಷಗಾನ ಕಲಾವಿದನಾಗಬೇಕೆಂಬ ಆಸಕ್ತಿ ಹುಟ್ಟಿಕೊಂಡಿತ್ತು. ಯಕ್ಷಗಾನ ಮತ್ತು ವೈದ್ಯಕೀಯವು ಪಟ್ಟಾಜೆ ಗಣೇಶ ಭಟ್ಟರಿಗೆ ಅಜ್ಜನ ಮನೆಯಿಂದ ಬಳುವಳಿಯಾಗಿ ಬಂದಿತ್ತು. ಶಾಲಾ ಕಲಿಕೆಯನ್ನು ನಿಲ್ಲಿಸಿ ಎಳವೆಯಲ್ಲೇ ಸೋದರ ಮಾವ ಕೆರೆಕೋಡಿ ಶ್ರೀ ಗಣಪತಿ ಭಟ್ಟರೊಂದಿಗೆ ಅಜ್ಜನ ಮನೆಗೆ ತೆರಳಿದ್ದರು (ಕಲ್ಮಡ್ಕ ಸಮೀಪದ ಕೆರೆಕೋಡಿ).
- 6th Standard, Social Science – HISTORY – Chapter 1 – INTRODUCTION TO HISTORY AND PRE-HISTORIC SOCIETY
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
ವೈದ್ಯಕೀಯ ಮತ್ತು ಯಕ್ಷಗಾನವನ್ನು ಕಲಿಯಲು ತಾಯಿಯ ಪ್ರೋತ್ಸಾಹ, ಆಶೀರ್ವಾದವೂ ಇತ್ತು. ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಅಜ್ಜನ ಮನೆ ಸೇರಿಕೊಂಡ ಪಟ್ಟಾಜೆ ಶ್ರೀ ಗಣೇಶ ಭಟ್ಟರು ಚಕ್ರಕೋಡಿ ಈಶ್ವರ ಶಾಸ್ತ್ರಿಗಳಿಂದ ಸಂಸ್ಕೃತ ಅಭ್ಯಾಸದ ಜತೆಗೆ ಸೋದರ ಮಾವ ಕೆರೆಕೋಡಿ ಗಣಪತಿ ಭಟ್ಟರಿಂದ ಆಯುರ್ವೇದ ಉದ್ಗ್ರಂಥವಾದ ಚರಕ ಸಂಹಿತೆಯ ಅಭ್ಯಾಸವನ್ನೂ ಮಾಡಿದರು. ಸಂಸ್ಕೃತ ಭಾಷೆಯ ಅಭ್ಯಾಸದಿಂದ ಛಂದಸ್ಸಿನ ಜ್ಞಾನವನ್ನೂ ಗಳಿಸಿಕೊಂಡಿದ್ದರು.
ಕಲ್ಮಡ್ಕ ಪರಿಸರವು ಯಕ್ಷಗಾನ, ಸಂಗೀತ, ಸಾಹಿತ್ಯಗಳ ಒಂದು ಕೇಂದ್ರವೇ ಆಗಿತ್ತು. ಊರಿನ ಜನರೆಲ್ಲಾ ಕಲಾಭಿಮಾನಿಗಳೂ ಕಲಾವಿದರೂ ಆಗಿದ್ದರು. ವಾರಕ್ಕೊಂದು ರಾತ್ರಿಯಿಡೀ ತಾಳಮದ್ದಳೆ ನಡೆಯುತ್ತಿತ್ತು. ಅಲ್ಲದೆ ಯಕ್ಷಗಾನ ಪ್ರದರ್ಶನಗಳೂ ಆಗಾಗ ನಡೆಯುತ್ತಿದ್ದುವು. ಪಟ್ಟಾಜೆ ಶ್ರೀ ಗಣೇಶ ಭಟ್ಟರ ಯಕ್ಷಗಾನಾಸಕ್ತಿಗೆ ನೀರು ಸಾರವೆರೆದು ಪೋಷಿಸಿದವರು ಸೋದರ ಮಾವ ಕೆರೆಕೋಡಿ ಗಣಪತಿ ಭಟ್ಟರು. ಅವರೇ ಮೊದಲ ಗುರು. ಶ್ರೀಯುತರು ಆಯುರ್ವೇದ ವೈದ್ಯರೂ, ಸಾಹಿತಿಗಳೂ, ಯಕ್ಷಗಾನ ಕಲಾವಿದರೂ ಆಗಿದ್ದರು. ಕಲ್ಮಡ್ಕದ ‘ಸಂಗಮ ಕಲಾ ಸಂಘ’ದ ರೂವಾರಿ.

ಸೋದರ ಮಾವನ ನಿರ್ದೇಶನ, ಪ್ರೋತ್ಸಾಹದಿಂದ ಪಟ್ಟಾಜೆ ಗಣೇಶ ಭಟ್ಟರು ತನ್ನ ಹದಿನಾರನೆಯ ವಯಸ್ಸಿನಲ್ಲಿ ತಾಳಮದ್ದಳೆ ಅರ್ಥಧಾರಿಯಾಗಿ ಯಕ್ಷಗಾನ ಬದುಕನ್ನು ಆರಂಭಿಸಿದ್ದರು. ಉಡುವೆಕೋಡಿ ಶ್ರೀ ಸುಬ್ಬಪ್ಪಯ್ಯ, ಕೆ.ವಿ.ಗಣಪಯ್ಯ, ಕಂಜರ್ಪಣೆ ಶಂಭಯ್ಯ, ಭೀಮಗುಳಿ ಪುಟ್ಟಪ್ಪಯ್ಯ, ಮೊದಲಾದವರೊಂದಿಗೆ ಅರ್ಥ ಹೇಳುತ್ತಾ ಬೆಳೆದರು. ಬಳಿಕ ಬಂಧುಗಳೇ ಆದ ಕೀರಿಕ್ಕಾಡು ಮಾಸ್ತರರ ಮಾರ್ಗದರ್ಶನವೂ ದೊರಕಿತ್ತು. ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತು ವೇಷ ಮಾಡಲೂ ಆರಂಭಿಸಿದರು. ಹೀಗೆ ಕೆರೆಕೋಡಿ ಗಣಪತಿ ಭಟ್ಟರ ಗರಡಿಯಲ್ಲಿ ಪಳಗಿ ಶ್ರೀ ಗಣೇಶ ಭಟ್ಟರು ಹವ್ಯಾಸೀ ವೇಷಧಾರಿಯಾಗಿ, ತಾಳಮದ್ದಳೆ ಅರ್ಥಧಾರಿಯಾಗಿ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಮೇಳದ ವೃತ್ತಿ ಕಲಾವಿದರೊಂದಿಗೂ ವೇಷ ಮಾಡಿ ಅನುಭವಗಳನ್ನು ಗಳಿಸಿಕೊಂಡರು.
ಜತೆಗೆ ಮಾವ ಕೆರೆಕೋಡಿ ಗಣಪತಿ ಭಟ್ಟರ ಒಡನಾಟದಲ್ಲಿ ಆಯುರ್ವೇದ ವೈದ್ಯಕೀಯ ವೃತ್ತಿಯಲ್ಲೂ ಅನುಭವಗಳನ್ನು ಗಳಿಸಿಕೊಂಡರು. ಆಯುರ್ವೇದ ವೈದ್ಯನಾಗಿ, ಕಲಾವಿದನಾಗಿ ಗುರುತಿಸಿಕೊಂಡ ಪಟ್ಟಾಜೆ ಗಣೇಶ ಭಟ್ಟರು ಪ್ರಸಂಗ ರಚನಾ ಕಾಯಕದಲ್ಲೂ ತೊಡಗಿಸಿಕೊಂಡರು. ಮೊತ್ತಮೊದಲು ರಚಿಸಿದ ಪ್ರಸಂಗ ‘ಗಂಧರ್ವ ನಂದನೆ’. ಬ್ರಹ್ಮೋತ್ತರ ಖಂಡದ ಶನಿ ಪ್ರದೋಷ ಮಹಾತ್ಮೆ ಎಂಬ ಕಥೆಯನ್ನು ಆಧರಿಸಿ ಬರೆದ ಪ್ರಸಂಗವಿದು. ಬಂದುಗಳಾದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರೂ ಪೆರ್ನಾಜೆ ಸೀತಾರಾಘವ ಪ್ರೌಢಶಾಲಾ ಕನ್ನಡ ಪಂಡಿತರಾದ ಶ್ರೀ ಡಿ.ಮಹಾಲಿಂಗ ಭಟ್ಟರೂ ಮಾರ್ಗದರ್ಶನವನ್ನು ನೀಡಿ ಪ್ರೋತ್ಸಾಹಿಸಿದ್ದರು.
ಇದರಿಂದ ಉತ್ಸಾಹಿತರಾದ ಗಣೇಶ ಭಟ್ಟರು ಪ್ರಸಂಗಗಳನ್ನು ಬರೆಯುವ ಮನ ಮಾಡಿದ್ದರು. ಇವರು ಬರೆದ ಮೊದಲ ಪ್ರಸಂಗ ‘ಗಂಧರ್ವ ನಂದನೆ’ ಯು ದಾಸರಬೈಲು ಚನಿಯ ನಾಯ್ಕರ ಭಾಗವತಿಕೆಯಲ್ಲಿ ಮೊದಲು ಪ್ರದರ್ಶನಗೊಂಡಿತ್ತು. ಕಾವು ಪಂಚಲಿಂಗೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವದ ಸಂದರ್ಭ ಆಡಳಿತ ಮಂಡಳಿಯ ಅಪೇಕ್ಷೆಯಂತೆ ‘ಕಾವು ಕ್ಷೇತ್ರ ಮಹಾತ್ಮೆ’ ಎಂಬ ಪ್ರಸಂಗವನ್ನು ರಚಿಸಿದರು. ಕುಂಟಾರು ಮೇಳದವರು ಈ ಪ್ರಸಂಗವನ್ನು ಪ್ರದರ್ಶಿಸಿದ್ದರು. ಮುಂದಿನ ವರ್ಷ ಇದೇ ಪ್ರಸಂಗವು ಮದ್ಲ ಶ್ರೀ ಸುಬ್ರಾಯ ಬಲ್ಯಾಯರ ಅಪೇಕ್ಷೆಯಂತೆ ಮತ್ತೆ ಪ್ರದರ್ಶನಗೊಂಡಿತ್ತು.
- 6th Standard, Social Science – HISTORY – Chapter 1 – INTRODUCTION TO HISTORY AND PRE-HISTORIC SOCIETY
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
ಪಟ್ಟಾಜೆ ಶ್ರೀ ವೈದ್ಯ ಗಣೇಶ ಭಟ್ಟರು ಬರೆದ ಒಟ್ಟು ಪ್ರಸಂಗಗಳು ಹನ್ನೆರಡು. ಅವುಗಳು ಗಂಧರ್ವ ನಂದನೆ, ಪಾಂಚಜನ್ಯ, ನೈಮಿಷಾರಣ್ಯ, ಜರಾಸಂಧ ಗರ್ವಭಂಗ, ಶತ್ರುದಮನ, ಪಾರ್ವತೀ ಪ್ರತಿಜ್ಞೆ, ಕಾವು ಕ್ಷೇತ್ರ ಮಹಾತ್ಮೆ, ನಾಗಮಣಿ ಮಾಣಿಕ್ಯ, ಹಂಸಡಿಬಿಕೋಪಾಖ್ಯಾನ, ಉದಯ ಚಂದ್ರಿಕೆ, ವರಸಿದ್ಧಿ ಮತ್ತು ಶಲ್ಯಾಗಮನ. ಇವುಗಳಲ್ಲಿ ಗಂಧರ್ವ ನಂದನೆ, ಪಾಂಚಜನ್ಯ, ಶತ್ರುದಮನ ಎಂಬ ಪ್ರಸಂಗಗಳು ಕಟೀಲು ಮೇಳದಲ್ಲಿ ಪ್ರದರ್ಶಿಸಲ್ಪಟ್ಟಿತ್ತು.
ಕಳೆದ ವರ್ಷ ಡಿಸೆಂಬರಿನಲ್ಲಿ (2019) ವೈದ್ಯ ಶ್ರೀ ಪಟ್ಟಾಜೆ ಗಣೇಶ ಭಟ್ಟರು ತಮ್ಮ ಬರೆಕೆರೆಯ ನಾರಾಯಣೀಯಮ್ ಮನೆಯಲ್ಲಿ ಕಟೀಲು ಮೇಳದ ಬಯಲಾಟವನ್ನು ಸೇವಾರೂಪವಾಗಿ ಆಡಿಸಿದ್ದರು. ಅದೇ ದಿನ ಅವರು ಬರೆದ ಹನ್ನೆರಡು ಪ್ರಸಂಗಗಳ ಗುಚ್ಛ ‘ಯಕ್ಷ ದ್ವಾದಶಾಮೃತಮ್’ ಕೃತಿಯೂ ಪ್ರಕಟವಾಗಿತ್ತು. ಇವರು ಯಕ್ಷಗಾನ ಸಂಘಟಕರಾಗಿಯೂ ಕಲಾಸೇವೆಯನ್ನು ಮಾಡಿದವರು. ‘ಕಲಾರಾಧನಾ ಪ್ರತಿಷ್ಠಾನ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಸಾಹಿತ್ಯ ಮತ್ತು ಕಲಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದರು.
- 6th Standard, Social Science – HISTORY – Chapter 1 – INTRODUCTION TO HISTORY AND PRE-HISTORIC SOCIETY
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
ವೈದ್ಯ ಶ್ರೀ ಪಟ್ಟಾಜೆ ಗಣೇಶ ಭಟ್ಟರ ಪತ್ನಿ ಶ್ರೀಮತಿ ಅದಿತಿ. ಇವರಿಗೆ ನಾಲ್ಕು ಮಂದಿ ಮಕ್ಕಳು. ಇಬ್ಬರು ಪುತ್ರಿಯರು. ವಿಜಯಗೌರಿ ಮತ್ತು ಸತ್ಯಭಾಮಾ ವಿವಾಹಿತೆಯರು, ಗೃಹಣಿಯರು. ಹಿರಿಯ ಪುತ್ರ ಶಿವನಾರಾಯಣ ಕೃಷಿಕರು. ಕಿರಿಯ ಪುತ್ರ ವಸಂತಕೃಷ್ಣ ಬೆಂಗಳೂರಿನಲ್ಲಿ ಉದ್ಯೋಗಿ. ಮಕ್ಕಳೆಲ್ಲರೂ ಕಲಾಸಕ್ತರಾಗಿದ್ದಾರೆ. 30. 10. 2020 ರಂದು ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡ ಪ್ರಸಂಗಕರ್ತ, ಕಲಾವಿದ, ಸಂಘಟಕ, ವೈದ್ಯ ಪಟ್ಟಾಜೆ ಶ್ರೀ ಗಣೇಶ ಭಟ್ಟರಿಗೆ ನುಡಿನಮನಗಳು.
ಲೇಖಕ: ರವಿಶಂಕರ್ ವಳಕ್ಕುಂಜ