Friday, September 20, 2024
Homeಯಕ್ಷಗಾನ'ಬಲಿಪ ಗಾನ-ಯಾನ' ಎಂಬ ಯಕ್ಷ ಪಯಣ 

‘ಬಲಿಪ ಗಾನ-ಯಾನ’ ಎಂಬ ಯಕ್ಷ ಪಯಣ 

‘ಬಲಿಪ ಗಾನ-ಯಾನ’ ಎಂಬ ಯಕ್ಷ ಪಯಣವು ಒಂದು ವಿಶಿಷ್ಟ ವಿನೂತನ ಕಾರ್ಯಕ್ರಮ. ತೆಂಕುತಿಟ್ಟು ಯಕ್ಷಗಾನ ಹಾಡುಗಾರಿಕೆಯಲ್ಲಿ ಪರಂಪರೆಯ ಬಲಿಪ ಶೈಲಿಯು ಪ್ರಖ್ಯಾತವಾದುದು. ಈ ಶೈಲಿಯು ದಿ| ಹಿರಿಯ ಬಲಿಪ ನಾರಾಯಣ ಭಾಗವತರಿಂದ ತೊಡಗಿ ಕಿರಿಯ ಬಲಿಪ ನಾರಾಯಣ ಭಾಗವತರಿಗೆ ಬಂದಿತ್ತು.

ಕಿರಿಯ ಬಲಿಪರು ಅನೇಕ ವರ್ಷಗಳ ತಮ್ಮ ಕಲಾವ್ಯವಸಾಯದಲ್ಲಿ ಹಾಡುಗಾರಿಕೆಯಿಂದ ಬಲಿಪ ಶೈಲಿಯ ಖ್ಯಾತಿಗೆ ಕಾರಣರಾಗಿದ್ದರು. ಪ್ರಸ್ತುತ ಶ್ರೀಯುತರ ಮಕ್ಕಳಾದ ಬಲಿಪ ಶಿವಶಂಕರ ಭಟ್ ಮತ್ತು ಬಲಿಪ ಪ್ರಸಾದ ಭಟ್, ಅಳಿಯ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಬಲಿಪ ಶೈಲಿಯ ಹಾಡುಗಾರಿಕೆಯಲ್ಲಿ ಮುನ್ನಡೆಯುತ್ತಿದ್ದಾರೆ. ಅಲ್ಲದೆ ಹಲವು ಯುವ ಭಾಗವತರುಗಳು ಈ ಪರಂಪರೆಯ ಶೈಲಿಯನ್ನು ಅನುಸರಿಸಿ ಹಾಡುತ್ತಿದ್ದಾರೆ.

ಪರಂಪರೆಯ ಬಲಿಪ ಶೈಲಿಯ ಹಾಡುಗಳನ್ನು ದಾಖಲೀಕರಣಗೊಳಿಸಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ದಾಟಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವು ಆರಂಭಗೊಂಡಿತ್ತು. ಇದಕ್ಕಾಗಿ ಬಲಿಪ ಗಾನ-ಯಾನ ಎಂಬ ಯೂಟ್ಯೂಬ್ ಚಾನೆಲ್ ಕೂಡಾ ಇದೆ. ಮೊದಲೆಲ್ಲಾ ಯಕ್ಷಗಾನ ಪ್ರದರ್ಶನದಲ್ಲಿ ಪ್ರಸಂಗದ ಹೆಚ್ಚಿನ ಎಲ್ಲಾ ಪದ್ಯಗಳನ್ನೂ ಹಾಡಲಾಗುತ್ತಿತ್ತು. ಪ್ರಸ್ತುತ ಬದಲಾದ ಈ ಸನ್ನಿವೇಶದಲ್ಲಿ ಹಾಡುಗಳ ಸಂಖ್ಯೆಯು ಅನಿವಾರ್ಯವಾಗಿ ಕಡಿಮೆಯಾಗಿದೆ. ಹಾಗಾಗಿ ಪ್ರಸಂಗದ ಕೆಲವು ಒಳ್ಳೊಳ್ಳೆಯ ಪದ್ಯಗಳು ಹಾಡಲ್ಪಡದೆ ಎಲೆ ಮರೆಯ ಕಾಯಿಯಂತೆ ಉಳಿದಿದೆ. ಆ ಪದ್ಯಗಳನ್ನು ಹೊರತೆಗೆದು ಹಾಡಿ, ಕಲಾಭಿಮಾನಿಗಳಿಗೆ ತಲುಪಿಸುವ ಉದ್ದೇಶವೂ ಈ ಕಾರ್ಯಕ್ರಮಕ್ಕಿದೆ.

ಈ ಪ್ರಸ್ತುತಿಯು ತೆಂಕುತಿಟ್ಟಿನ ಯುವ ಮದ್ದಳೆಗಾರರಾದ ಕೊಂಕಣಾಜೆ ಶ್ರೀ ಚಂದ್ರಶೇಖರ ಭಟ್ಟರ ಕಲ್ಪನೆಯ ಕೂಸು. ಈ ಯೋಜನೆಯನ್ನು ಕಾರ್ಯರೂಪಕ್ಕಿಳಿಸಿದ ತಂಡದಲ್ಲಿ ಬಲಿಪ ಪ್ರಸಾದ ಭಟ್, ಹರಿಪ್ರಸಾದ್ ರಾವ್ ರಾಯಿ(ಅಧ್ಯಾಪಕರು ಮತ್ತು ಯಕ್ಷಗಾನ ಸಂಘಟಕರು), ಕೊಂಕಣಾಜೆ ಚಂದ್ರಶೇಖರ ಭಟ್, ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಮತ್ತು ಗಣರಾಜ ಭಟ್ ಅಳಕೆ ಇವರುಗಳು ತೊಡಗಿಸಿಕೊಂಡಿದ್ದಾರೆ. ಈ ಸರಣಿಯ ಮೊದಲ ಮೂರು ಕಾರ್ಯಕ್ರಮಗಳು ಪ್ರಾಯೋಜಕರಿಲ್ಲದೆ ಬಲಿಪ ಭಾಗವತರ ಮನೆ ಸಮೀಪದ ‘ಬಲಿಪ ಭವನ’ದಲ್ಲಿ ಸಂಪನ್ನಗೊಂಡಿತ್ತು.

ಬಳಿಕ ವಿಚಾರ ತಿಳಿದು ಬಲಿಪ ಶೈಲಿ ಹಾಡುಗಾರಿಕೆಯ ಅಭಿಮಾನಿಗಳು ಒಬ್ಬೊಬ್ಬರಾಗಿ ಈ ಕಾರ್ಯಕ್ರಮಕ್ಕೆ ಪ್ರಾಯೋಜಕರಾಗಿ ಒದಗಿ ಬಂದಿದ್ದರು. ಅವರುಗಳು ಶ್ರೀ ರಾಘವೇಂದ್ರ ಬಲ್ಲಾಳ್,ಕೊರಗಟ್ಟೆ, ವಾಮದಪದವು, ಶ್ರೀ ದಯಾನಂದ ಎಳಚಿತ್ತಾಯ ಗುರುವಾಯನಕೆರೆ, ಶ್ರೀ ವಾಸುದೇವ ರಾವ್ ತಡಂಬೈಲು, ಶ್ರೀ ಲಕ್ಷ್ಮೀನಾರಾಯಣ ಭಟ್ ಅಸೈಗೋಳಿ, ಶ್ರೀ ಅನಂತ ಉಪಾಧ್ಯಾಯ ಮತ್ತು ಸಹೋದರರು ವಾಮಂಜೂರು, ಶ್ರೀ ಶಬರೀಶ ಭಟ್ ಅಸೈಗೋಳಿ, ಪ್ರಜಾವಾಣಿ ಫೇಸ್ ಬುಕ್ ಲೈವ್,  ಶ್ರೀ ದಯಾನಂದ ಎಳಚಿತ್ತಾಯ ಗುರುವಾಯನಕೆರೆ, ಶ್ರೀ ದಯಾನಂದ ಶೆಟ್ಟಿ ಕಾರಮೊಗರು ಗುತ್ತು, ಗುರುಪುರ.

ಹೀಗೆ ಒಟ್ಟು ಹನ್ನೆರಡು ಸರಣಿ ಕಾರ್ಯಕ್ರಮಗಳು ಈ ವರೆಗೆ ನಡೆದಿದೆ. ಇದರಲ್ಲಿ 4ನೇ ಕಾರ್ಯಕ್ರಮವನ್ನು ಶ್ರೀ ಯಕ್ಷಧ್ರುವ ಸುಕುಮಾರ ಜೈನ್ ಅವರು ತಮ್ಮ ಚಾನೆಲ್ ನಲ್ಲಿ ಫೇಸ್ ಬುಕ್ ಲೈವ್ ನೀಡಿರುತ್ತಾರೆ. ಈ ಸರಣಿ ಕಾರ್ಯಕ್ರಮಗಳಲ್ಲಿ ಈ ವರೆಗೆ ಪಾರ್ತಿಸುಬ್ಬನ ಕೃತಿಯ ಪದ್ಯಗಳಿಗೆ ಪ್ರಾಶಸ್ತ್ಯ ನೀಡಲಾಗಿದ್ದು, ಪ್ರಾಯೋಜಕರ ಬೇಡಿಕೆಯ ಪದ್ಯಗಳನ್ನೂ ಹಾಡಲಾಗಿದೆ. ಈ ತಂಡದಲ್ಲಿ ಕಲಾವಿದರು ಒಂದೇ ತರದ ಸಮವಸ್ತ್ರಗಳನ್ನು ಧರಿಸಿ, ಪೇಟ ಧರಿಸಿ ಶಿಸ್ತುಬದ್ಧವಾಗಿ ಕಾಣಿಸಿಕೊಳ್ಳುತ್ತಾರೆ. ಹೊಸ ರೀತಿಯ ಆವಿಷ್ಕಾರಗಳಿಲ್ಲದೆ ಪದ್ಯಗಳಿಗೆ ಮಾತ್ರ ಹೆಚ್ಚು ಮಹತ್ವವನ್ನು ನೀಡಿ ಪರಂಪರೆಯ ಶೈಲಿಯಲ್ಲಿ ಈ ಬಲಿಪ ಗಾನ ಯಾನವು ಪ್ರಸ್ತುತಗೊಳ್ಳುತ್ತದೆ.

“ಹಾಡುಗಳ ಆಯ್ಕೆ ಪೂರ್ವ ನಿರ್ಧರಿತವಾಗಿರುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ಹಾಡುಗಳನ್ನು ಕೇಳುಗರಿಗೆ ನೀಡಬೇಕೆಂಬುದು ನಮ್ಮ ಆಶಯ. ಇದನ್ನು ಇನ್ನಷ್ಟು ಸುಂದರವಾಗಿ ಅಚ್ಚುಕಟ್ಟಾಗಿ ನಡೆಸಲು ಪ್ರಾಯೋಜಕರ, ಕಲಾಭಿಮಾನಿಗಳ, ಬಲಿಪ ಶೈಲಿಯ ಅಭಿಮಾನಿಗಳ ಸಹಕಾರ ಬೇಕು” ಇದು ಈ ತಂಡದ ಸದಸ್ಯರೆಲ್ಲರ ಒಮ್ಮತದ ಅಭಿಪ್ರಾಯ.

‘ಬಲಿಪ ಗಾನ-ಯಾನ’ ಈ ಕಾರ್ಯಕ್ರಮದಲ್ಲಿ ಇದುವರೆಗೆ ಕಲಾವಿದರಾಗಿ ಬಲಿಪ ಶಿವಶಂಕರ ಭಟ್, ಬಲಿಪ ಪ್ರಸಾದ ಭಟ್, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ಕೊಂಕಣಾಜೆ ಚಂದ್ರಶೇಖರ ಭಟ್, ಸೋಮಶೇಖರ ಭಟ್ ಕಾಶಿಪಟ್ನ, ಬೆಳ್ಳಾರೆ ಗಣೇಶ ಭಟ್ ಮತ್ತು ಸತ್ಯಜಿತ್ ರಾವ್ ರಾಯಿ ಇವರುಗಳು ಭಾಗವಹಿಸಿರುತ್ತಾರೆ. ‘ಬಲಿಪ ಗಾನ-ಯಾನ’ವು ಯಕ್ಷಪರಂಪರೆಯ ನಿರಂತರ ಪಯಣವಾಗಲಿ ಎಂಬ ಸದಾಶಯಗಳು. 

ಲೇಖಕ: ರವಿಶಂಕರ್ ವಳಕ್ಕುಂಜ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments