Friday, September 20, 2024
Homeಯಕ್ಷಗಾನಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? 

ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? 

2015ರಲ್ಲಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಸಂಪಾಜೆ ಯಕ್ಷೋತ್ಸವದ ಕಿರೀಟಕ್ಕೆ ರಜತ ಸಂಭ್ರಮದ ಗರಿ. ಆ ಹೆಮ್ಮೆಯ ರಜತ ಮಹೋತ್ಸವದ ಸಂಭ್ರಮದ ಪ್ರಯುಕ್ತ ಅಪೂರ್ವವೂ ಅವರ್ಣನೀಯವೂ ಆದ ಪ್ರದರ್ಶನವೊಂದನ್ನು ಸಂಯೋಜಿಸಿ ಆಯೋಜಿಸಿದ್ದು ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಹೆಗ್ಗಳಿಕೆಯೆಂದೇ ಹೇಳಬಹುದು.

ಅದುವೇ ಅಪೂರ್ವ ಸ್ಪರ್ಧೆಯ ಮೂರಾಟ. ಬಹುಶಃ ಜೋಡಾಟವನ್ನೂ ನೋಡದ ಯಕ್ಷಗಾನದ ಅಭಿಮಾನಿಗಳು ನಮ್ಮ ನಡುವೆ ಇರಬಹುದು. ಆದರೆ ಮೂರು ರಂಗಸ್ಥಳಗಳಲ್ಲಿ ಒಂದೇ ಪ್ರಸಂಗವನ್ನು ಪ್ರದರ್ಶಿಸುವ ಅತೀ ಅಪರೂಪದ ‘ಮೂರಾಟ’ವನ್ನು ಈ ಮೊದಲು ಕಂಡವರು ಯಾರಾದರೂ ಇರಬಹುದೋ ಅಥವಾ ಮೊದಲು ಕಂಡ ಹಿರಿಯರು ಈಗ ನಮ್ಮ ನಡುವೆ ಇದ್ದಾರೆಯೇ ಅಥವಾ ಇಲ್ಲವೋ ಎಂದು ಗೊತ್ತಿಲ್ಲ.

ನೋಡದವರಿಗಂತೂ 07. 11. 2015ರ ಶನಿವಾರ ನಡೆದ ಈ ಪ್ರದರ್ಶನ ಅಂತಹಾ ಅಪೂರ್ವ ಕ್ಷಣಗಳನ್ನು ಕಂಡು ಆನಂದಿಸುವ ಸುಯೋಗ ಒದಗಿ ಬಂದದ್ದಂತೂ ಸುಳ್ಳಲ್ಲ. ಮೂರೂ ರಂಗಸ್ಥಳಗಳನ್ನು ತುಂಬಾ ವ್ಯವಸ್ಥಿತವಾಗಿ ವಿನ್ಯಾಸಗೊಳಿಸಿ ಸಿದ್ಧಪಡಿಸಲಾಗಿತ್ತು. ಸಭೆಯಲ್ಲಿ ಬಂದು ರಂಗವೇರುವ ಪಾತ್ರಗಳಿಗಾಗಿ ರಂಗಸ್ಥಳದ ಎದುರು ಸಭೆಯ ಮಧ್ಯೆ ಮೂರು ಅಗಲವಾದ ದಾರಿಗಳನ್ನು (ಮಾರ್ಗ) ಬಿಡಲಾಗಿತ್ತು. ಸಾಧಾರಣವಾಗಿ ಜೋಡಾಟಗಳಲ್ಲಿ ಯಕ್ಷಗಾನದ ನೈಜ ಆಸ್ವಾಧನೆಗೆ ಭಂಗವಾಗುತ್ತಿದ್ದರೂ ಮೂರಾಟದ ಅಪರೂಪದ ಪ್ರಯೋಗವನ್ನು ಪ್ರೇಕ್ಷಕರು ಬಹಳಷ್ಟು ಆಸ್ವಾದಿಸಿ ಆನಂದಿಸಿದರು. ಅದಕ್ಕೆ ಅಂದು ಸಂಪಾಜೆಯ ವಠಾರದಲ್ಲಿ ಕಿಕ್ಕಿರಿದು ತುಂಬಿ ತುಳುಕುತ್ತಿದ್ದ ಜನಸಂದಣಿಯೇ ಸಾಕ್ಷಿ. 

‘ದೇವಿ ಮಹಾತ್ಮೆ’ ಪ್ರಸಂಗವು ಮೂರಾಟಕ್ಕೆ ಹೇಳಿ ಮಾಡಿಸಿದ ಪ್ರಸಂಗವಾದ್ದರಿಂದಲೋ ಅಥವಾ ಈ ಪ್ರಸಂಗದ ಬಗ್ಗೆ ಹೆಚ್ಚಿನ ಪ್ರೇಕ್ಷಕರು ತಿಳಿದವರಾದ್ದರಿಂದಲೋ ಏನೋ ಸದ್ದುಗಳ ನಡುವೆಯೂ ಪ್ರೇಕ್ಷಕರು ಯಕ್ಷಗಾನವನ್ನು ಆಸ್ವಾದಿಸಿದ ರೀತಿ ಗಮನಾರ್ಹವಾಗಿತ್ತು. ಮೂರು ರಂಗಸ್ಥಳಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಚೌಕಿಗಳ ವ್ಯವಸ್ಥೆ, ರಂಗಸ್ಥಳದ ಹಿಂಭಾಗದಲ್ಲಿ ವೇಷ ಧರಿಸಿದ ನಂತರ ಕಲಾವಿದರಿಗೆ  ಕುಳಿತುಕೊಳ್ಳುವ ವ್ಯವಸ್ಥೆ ಹಾಗೂ ಒಟ್ಟು ವ್ಯವಸ್ಥೆಯಲ್ಲಿ ಪ್ರತಿಷ್ಠಾನದ ಕಾಳಜಿ ಎದ್ದು ಕಾಣುತ್ತಿತ್ತು.

ಸಂಪಾಜೆ ಯಕ್ಷೋತ್ಸವದ ರಜತ ಸಂಭ್ರಮದ ಪ್ರಯುಕ್ತ ನಡೆದ ಮೂರಾಟವು ಹಲವು ಅತ್ಯಪೂರ್ವ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಇಂತಹಾ ಪ್ರದರ್ಶನಗಳನ್ನು ಸಂಘಟಿಸುವುದು ಅತಿ ಕಷ್ಟಕರ. ಅದೂ ಇಂತಹಾ ಅತ್ಯದ್ಭುತ ವ್ಯವಸ್ಥೆ, ಅನುಕೂಲಗಳನ್ನು ಕಲ್ಪಿಸುತ್ತಾ ಕಷ್ಟದ ಕೆಲಸಗಳನ್ನು ಅತಿ ಸುಲಭವಾಗಿ ನಿರ್ವಹಿಸುವುದು ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದಿಂದ ಮಾತ್ರ ಸಾಧ್ಯ. ಮೂರೂ ರಂಗಸ್ಥಳಗಳಲ್ಲಿ ಮಧು ಕೈಟಭರು ಸಭೆಯಿಂದ ಪ್ರವೇಶಿಸಿದ್ದು, ವಿದ್ಯುನ್ಮಾಲಿಯ ಮದುವೆಯ ಸಂದರ್ಭದಲ್ಲಿ ಸಭೆಯಲ್ಲಿ ಸಂಚರಿಸಿದ್ದು, ಮಹಿಸಾಸುರ, ಚಂಡ-ಮುಂಡರು ಸಭೆಯಿಂದ ಆಗಮಿಸಿದ್ದು ಗಮನಾರ್ಹವಾಗಿತ್ತು. ಒಟ್ಟಾರೆ ಯಕ್ಷಗಾನದ ಇತಿಹಾಸದಲ್ಲಿ ದಾಖಲಾಗಬಹುದಾದ ಈ ಮೂರಾಟದ ಪ್ರದರ್ಶನವು ಚರಿತ್ರೆಯನ್ನೇ ಸೃಷ್ಟಿಸುವುದರ ಜೊತೆಗೆ ಪ್ರತಿಯೊಬ್ಬ ಪ್ರೇಕ್ಷಕರೂ ಈ ಎಲ್ಲಾ ಕ್ಷಣಗಳನ್ನು ಅನುಭವಿಸಿ ಆನಂದಿಸಿದರು.

ಹಾಗಾದರೆ ಈ ಮೂರಾಟ ಎಂಬುದು ಸಂಪಾಜೆಯಲ್ಲೇ ಪ್ರಥಮ ಬಾರಿಗೆ ನಡೆದಿತ್ತೇ? ಇದು ಪ್ರಥಮ ಪ್ರಯೋಗವೇ? ಎಂಬ ಪ್ರಶ್ನೆಗಳಿಗೆ ‘ಅಲ್ಲ’ ಎಂಬುದೇ ಉತ್ತರ. ಇದು ಮೂರಾಟದ ಪ್ರಥಮ ಪ್ರಯೋಗವಲ್ಲ. ಈ ಹಿಂದೆಯೂ ಮೂರಾಟದ ಪ್ರಯೋಗ ಆಗಿತ್ತು ಎನ್ನುವುದನ್ನು ನಾವು ಕೇಳಿದ್ದೇವೆ. ಮನೆಯಲ್ಲಿ ಹಿರಿಯರೂ, ವಯೋವೃದ್ಧರೂ ಈ ಬಗ್ಗೆ ಸ್ವಾರಸ್ಯಕರವಾಗಿ ವಿವರಿಸುವುದನ್ನು ಕೇಳಿದ್ದೇವೆ. ನಾವು ಅದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗದಿದ್ದರೂ ಹಲವರಿಗೆ ಹಿಂದೆ ನಡೆದ ಮೂರಾಟದ ಬಗ್ಗೆ ಕೇಳಿ ಗೊತ್ತಿರಬಹುದು.

ಬಹಳ ವರ್ಷಗಳ ಹಿಂದೆ ಕೂಡ್ಲು ಮೇಳ,  ಧರ್ಮಸ್ಥಳ ಮೇಳ ಮತ್ತು ಕುಂಡಾವು ಮೇಳಗಳು ಬೆಳ್ತಂಗಡಿಯಲ್ಲಿ ಇಂತಹಾ ಒಂದು ಜೋಡಾಟವನ್ನು ಪ್ರದರ್ಶಿಸಿದ್ದುವಂತೆ. ಅದು ಮೂರು ಮೇಳಗಳ ನಡುವಿನ ಸ್ಪರ್ಧೆಯ ಆಟವಾದರೂ ಆಗೆಲ್ಲಾ ಇದನ್ನು ಜೋಡಾಟವೆಂದೇ ಕೆರೆಯುತ್ತಿದರು. ಮೂರಾಟ ಎಂಬ ಹೆಸರು ಆಗ ಬಳಕೆಯಲ್ಲಿ ಇದ್ದಿರಲಿಲ್ಲ ಎಂದು ಕಾಣುತ್ತದೆ. ಆಗೆಲ್ಲಾ ಜೋಡಾಟಗಳೆಂದರೆ ಅದೊಂದು ಯುದ್ಧ ಗೆಲ್ಲುವ ಸ್ಪರ್ಧೆಯಂತೆಯೇ ಎಂದು ಕಲಾವಿದರು, ಸಂಘಟಕರು, ಮೇಳಗಳ ಸಂಚಾಲಕರು ಮತ್ತು ಮೇಳಗಳ ಅಭಿಮಾನೀ ಪ್ರೇಕ್ಷಕರು ತಿಳಿದುಕೊಳ್ಳುತ್ತಿದ್ದರಂತೆ.

ಆಗ ಅತಿಕಾಯ, ಇಂದ್ರಜಿತು, ಮೈರಾವಣ ಕಾಳಗ ಎಂಬ ಪ್ರಸಂಗವನ್ನು ಮೂರು ರಂಗಸ್ಥಳಗಳಲ್ಲಿ ಬೆಳ್ತಂಗಡಿಯ ಜೋಡಾಟದಲ್ಲಿ ಪ್ರದರ್ಶಿಸಿದ್ದರಂತೆ. ಅದಕ್ಕಿಂತ ಹಿಂದೆಯೂ ಇಂತಹಾ ಮೂರಾಟಗಳು ಜೋಡಾಟ ಎಂಬ ಹೆಸರಿನಲ್ಲಿ ಪ್ರದರ್ಶನ ಆಗಿರಲೂ ಬಹುದು. ಅದರ ಬಗ್ಗೆ ತಿಳಿದವರು ತಮ್ಮ ಅನಿಸಿಕೆಗಳನ್ನು ಹೇಳಿದರೆ ಸ್ವಾಗತ.

ಆದರೆ ಇನ್ನು ಮುಂದಕ್ಕೆ ಇಂತಹಾ ವೈಭವದ ಮೂರಾಟದ ಪ್ರದರ್ಶನಗಳು ನಡೆಯಬಹುದೇ? ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನವು ಮಾಡಿದ ಸಾಹಸವನ್ನು ಬೇರೆ ಯಾರಾದರೂ ಪುನರಾವರ್ತಿಸಲು ಯತ್ನಿಸಬಹುದೇ? ಎಂಬ ಎಲ್ಲಾ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಷ್ಟೆ. 

ಲೇಖನ: ಮನಮೋಹನ್ ವಿ.ಎಸ್. 

RELATED ARTICLES

5 COMMENTS

LEAVE A REPLY

Please enter your comment!
Please enter your name here

Most Popular

Recent Comments