Friday, September 20, 2024
Homeಯಕ್ಷಗಾನತಾಳಮದ್ದಳೆ ಅರ್ಥಧಾರಿ, ಮಾಂತ್ರಿಕ ಶಿರೋಮಣಿ ಶ್ರೀ ಉಡುಪುಮೂಲೆ ಗೋಪಾಲಕೃಷ್ಣ ಭಟ್ ಇನ್ನಿಲ್ಲ (Udupumoole Gopalakrishna Bhat)

ತಾಳಮದ್ದಳೆ ಅರ್ಥಧಾರಿ, ಮಾಂತ್ರಿಕ ಶಿರೋಮಣಿ ಶ್ರೀ ಉಡುಪುಮೂಲೆ ಗೋಪಾಲಕೃಷ್ಣ ಭಟ್ ಇನ್ನಿಲ್ಲ (Udupumoole Gopalakrishna Bhat)

ಮಾಂತ್ರಿಕ ಶಿರೋಮಣಿ,  ತಾಳಮದ್ದಳೆ ಅರ್ಥಧಾರಿ ಶ್ರೀ ಉಡುಪುಮೂಲೆ ಗೋಪಾಲಕೃಷ್ಣ ಭಟ್ ಅವರು  ನಿಧನರಾಗಿದ್ದಾರೆ. ಅವರು ಇಂದು ಅಪರಾಹ್ನ ನಮ್ಮನ್ನಗಲಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ತಾಳಮದ್ದಳೆ ಕ್ಷೇತ್ರದಲ್ಲಿ ಅವರಿಗೆ ಒಳ್ಳೆಯ ಹೆಸರಿತ್ತು. ದೊಡ್ಡ ದೊಡ್ಡ ಕೂಟಗಳಲ್ಲಿಯೂ ತನ್ನ ವಾಕ್ಚಾತುರ್ಯದ ಸುಧೆಯನ್ನು ಉಣಿಸಿದವರು. ಈ ಕ್ಷೇತ್ರದಲ್ಲಿ ಅವರೊಬ್ಬ ಪ್ರಬುದ್ಧ ಅರ್ಥಧಾರಿ. ವಿದುರ, ಶಲ್ಯ, ಅಕ್ರೂರ, ವಿಭೀಷಣ ಮುಂತಾದ ಪಾತ್ರಗಳ ಒಳನೋಟಗಳನ್ನು ಚಿತ್ರಿಸುವಲ್ಲಿ ಎತ್ತಿದ ಕೈ. ಪ್ರಮುಖ ಕೂಟಗಳಲ್ಲಿ ಪ್ರಧಾನ  ಪಾತ್ರಗಳಲ್ಲಿಯೂ ಎಷ್ಟೋ ಬಾರಿ ಕಾಣಿಸಿಕೊಂಡಿದ್ದರು.   ಹವ್ಯಕ ಮನೆತನದ ಸಂಪ್ರದಾಯಸ್ಥ ಕುಟುಂಬಲ್ಲಿ ಜನಿಸಿದ್ದ ಉಡುಪುಮೂಲೆ ಗೋಪಾಲಕೃಷ್ಣ ಭಟ್ಟರ ವೃತ್ತಿ ಮಂತ್ರವಾದವೇ ಆಗಿದ್ದರೂ ಸಾಹಿತ್ಯ, ಸಂಗೀತ, ನೃತ್ಯ, ಯಕ್ಷಗಾನಗಳು ಅವರ ಸಮಾನಾಸಕ್ತಿಗಳೇ ಆಗಿದ್ದುವು. ಕೊಡೆಂಕಿರಿ ರಾಮ ಭಟ್ಟ ಮತ್ತು ಶ್ರೀಮತಿ ಸರಸ್ವತಿ ಅಮ್ಮ ಇವರ ಮೂವರು ಮಕ್ಕಳಲ್ಲಿ ಹಿರಿಯ ಮಗನಾಗಿ 1944 ನವೆಂಬರ್ 26ರಂದು ಜನಿಸಿದ ಉಡುಪುಮೂಲೆ ಅವರು ತಮ್ಮ ಶಾಲಾ ಶಿಕ್ಷಣವನ್ನು ಎಡನೀರಿನ ಸ್ವಾಮೀಜೀಸ್ ಹೈಸ್ಕೂಲಿನಲ್ಲಿ ಪೂರ್ತಿಗೊಳಿಸಿದರು. ಪದವಿ ಪಡೆದ ನಂತರ ಕೆಲವು ಖಾಸಗಿ ಶಾಲೆಗಳಲ್ಲಿ ತಾತ್ಕಾಲಿಕವಾಗಿ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಕೆಲಸಮಯ ಭರತನಾಟ್ಯ ಮತ್ತು ಶಾಸ್ತ್ರೀಯ ಸಂಗೀತವನ್ನೂಕಲಿತಿದ್ದರೂ ಮತ್ತೆ ಮಂತ್ರವಾದದ ವೃತ್ತಿಯತ್ತ ವಾಲಿದ್ದರು.   ಪರಂಪರೆಯಿಂದ ಬಂದ ಮಂತ್ರವಾದದ ವೃತ್ತಿ ಅವರ ಕೈ ಬಿಡಲಿಲ್ಲ. ಅದರಲ್ಲಿ ಅಪೂರ್ವ ಯಶಸ್ಸನ್ನು ಸಾಧಿಸಿದರು. ಹೆಚ್ಚಿನ ಸಾಧನೆಯನ್ನು ಮಾಡಿ ಪ್ರಸಿದ್ಧಿಯನ್ನು ಪಡೆದರು. ಎಷ್ಟೋ ವಾಸಿಯಾಗದ ಖಾಯಿಲೆಗಳನ್ನು ಗುಣಪಡಿಸಿದ ಕೀರ್ತಿಯು ಅವರಿಗೆ ಸಲ್ಲಬೇಕು. ನೆರೆಯ ರಾಜ್ಯಗಳಿಂದಲೂ ಜನರು ಅವರನ್ನು ಹುಡುಕಿಕೊಂಡು ಬಂದು ಅವರಲ್ಲಿ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿ ಹಿಂತಿರುಗಿದ್ದಾರೆ. ಎಷ್ಟೋ ಮಾನಸಿಕ ಖಾಯಿಲೆಗಳನ್ನೂ ಗುಣಪಡಿಸಿದ್ದಾರೆ. ಅವರ ಪುತ್ರ ಶ್ರೀ ರಾಘವೇಂದ್ರ ಅವರು ತಮ್ಮ ತಂದೆಯ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.  

ಉಡುಪುಮೂಲೆ ಗೋಪಾಲಕೃಷ್ಣ ಭಟ್ ತನ್ನ ವೃತ್ತಿಯೊಂದಿಗೆ ಪ್ರವೃತ್ತಿಗಳನ್ನೂ ಬಿಡಲಿಲ್ಲ. ಯಕ್ಷಗಾನದ ತಾಳಮದ್ದಳೆ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡುದು ಮಾತ್ರವಲ್ಲದೆ ತನ್ನ ನಿವಾಸದಲ್ಲಿಯೇ ಯಕ್ಷಗಾನ ಸಂಘದ ಮೂಲಕ ಅನೇಕ ಆಸಕ್ತರನ್ನು ತರಬೇತಿ ನೀಡಿ ತಾಳಮದ್ದಳೆ ಅರ್ಥಧಾರಿಗಳಾಗಿ ತಯಾರು ಮಾಡಿದ್ದಾರೆ. ಎಡನೀರು ಸ್ವಾಮೀಜಿಗಳಿಗೆ ಪ್ರಿಯ ಶಿಷ್ಯರಾಗಿ ಅವರ ಪ್ರೀತಿಗೆ ಪಾತ್ರರಾಗಿದ್ದ ಉಡುಪುಮೂಲೆಯವರು ಎಡನೀರು ಮಠದ ತಾಳಮದ್ದಳೆಗಳಲ್ಲಿ ಹೆಚ್ಚಾಗಿ ತಪ್ಪದೆ ಭಾಗವಹಿಸುತ್ತಿದ್ದರು. ಸಾಹಿತಿಯಾಗಿ ಅನೇಕ ಲೇಖನಗಳನ್ನು ಬರೆದಿದ್ದ  ಉಡುಪುಮೂಲೆ ಗೋಪಾಲಕೃಷ್ಣ ಭಟ್ ಯಕ್ಷಗಾನ, ನಾಟಕಗಳ ನಿರ್ದೇಶನವನ್ನೂ ಮಾಡುತ್ತಿದ್ದರು. ಹೀಗೆ ಸಮಾಜಮುಖಿಯಾಗಿ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅವರ ಅಗಲಿಕೆಯು ಕನ್ನಡ ನಾಡಿನ ಕಲಾ, ಸಾರಸ್ವತ ಲೋಕಕ್ಕೆ ಮಾತ್ರವಲ್ಲ ಭಾಷೆ, ಜಾತಿಗಳ ಭೇದವಿಲ್ಲದೆ ಅವರ ನೂರಾರು ಅಭಿಮಾನಿಗಳಿಗೂ ಅತೀವ ನೋವು ತಂದಿದೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಮತ್ತು ಎಲ್ಲರಿಗೂ ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನುನೀಡಲಿ ಎಂದು ಕಳಕಳಿಯ ಪ್ರಾರ್ಥನೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments