Saturday, September 21, 2024
Homeಭರತನಾಟ್ಯಮೌನವೆಂಬ ಅಪಾಯಕಾರಿ ವ್ಯಸನ 

ಮೌನವೆಂಬ ಅಪಾಯಕಾರಿ ವ್ಯಸನ 

ಸಪ್ತ ವ್ಯಸನಗಳಲ್ಲಿ ಒಂದನ್ನಾದರೂ ಪುರುಷನಾದವನು ಹೊಂದಿರಬೇಕೆಂದು ಕೆಲವೊಂದು ವರ್ಗದ ಜನರು ಆಡುವುದನ್ನು ಕೇಳಿದ್ದೇವೆ. ಈ ಮಾತುಗಳು ಪುರುಷರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದಕ್ಕಾಗಿ ಆಡಿದವುಗಳೇ ಆಗಿರಬಹುದೇನೋ. ಸಪ್ತ ವ್ಯಸನಗಳು ಎಂಬ ಪಟ್ಟಿಯಲ್ಲಿಲ್ಲದ ಇತರ ವ್ಯಸನಗಳೂ, ದೌರ್ಬಲ್ಯಗಳೂ ಸೇರಿದಂತೆ ಒಂದನ್ನಾದರೂ ಅಭ್ಯಾಸವಾಗಿ ಇಲ್ಲದವನು ಮನುಷ್ಯನಲ್ಲ ಎಂದೋ ಅಥವಾ ದೌರ್ಬಲ್ಯಗಳಿಲ್ಲದ ವ್ಯಕ್ತಿಗಳಿಲ್ಲ ಎಂದೋ ವಾದಿಸುವವರು ಹಲವಾರು ಜನರಿರಬಹುದು. ವ್ಯಸನಗಳಿಲ್ಲದ ವ್ಯಕ್ತಿಯನ್ನು ಹುಡುಕಿಕೊಡಿ ಎಂದು ಯಾರಾದರೂ ಹೇಳಿದರೆ ಅದು ಸಾವಿಲ್ಲದ ಮನೆಯ ಸಾಸಿವೆಕಾಳಿನಂತೆ ಎಂದು ಭಾವಿಸುವವರೂ ಇರಬಹುದು. ಯಾಕೆಂದರೆ ವ್ಯಸನ ಎಂಬ ಶಬ್ದದ ವ್ಯಾಖ್ಯಾನವನ್ನೇ ತಮಗೆ ತೋಚಿದಂತೆ ಬದಲಿಸಬಹುದು. ಕಾಲ ಬದಲಾಗಿದೆ ಸ್ವಾಮೀ.
ಯುವಜನತೆ ವ್ಯಸನಗಳ ದಾಸರಾಗುತ್ತಿದ್ದಾರೆ ಎಂದು ಆರೋಪಿಸುವ ಮಂದಿ ಮೌನಕ್ಕೆ ಜಾರುತ್ತಿದ್ದಾರೆ. ಮೌನ ವ್ಯಸನಿಗಳಾಗುತ್ತಿದ್ದಾರೆ. ಮೃಗಯಾಕ್ಕೆ ಸಿಲುಕಿ ಪಾಂಡು ಸಾವಿಗೆ ಶರಣಾದ. ದ್ಯೂತಕ್ಕೆ ಸಿಲುಕಿ ಪಾಂಡವರು ಇನ್ನಿಲ್ಲದ ಪಾಡುಪಟ್ಟರು. ನಳ ಮಹಾರಾಜನು ಬಾಹುಕನಾಗಿ ಬಸವಳಿದ. ಸ್ತ್ರೀ ವ್ಯಸನಕ್ಕೆ ಸಿಲುಕದ ಪುರುಷರ ಸಂಖ್ಯೆ ಹೇರಳ. ವ್ಯಸನಿಗಳಿಗೆ ಪುರಾಣಗಳಲ್ಲೇ ಹೇರಳ ನಿದರ್ಶನಗಳಿದ್ದರೂ ವರ್ತಮಾನ ಕಾಲದಲ್ಲಿ ವ್ಯಸನಗಳು ವ್ಯಸನಗಳಾಗಿ ಉಳಿದಿಲ್ಲ. ಬದಲಾಗಿ ಅದೊಂದು ಫ್ಯಾಶನ್ ಆಗಿದೆ. ಕಾಲ ಬದಲಾಗಿದೆ ಸ್ವಾಮೀ.
ದ್ಯೂತವು ಬೆಟ್ಟಿಂಗ್ ಆಗಿ ಮಾರ್ಪಟ್ಟಿದೆ. ಕ್ರಿಕೆಟ್‍ನಿಂದ ಮೊದಲ್ಗೊಂಡು ಕಂಬಳ, ಕೋಳಿಅಂಕಗಳೇ ಮೊದಲಾದುವುಗಳ ವರೆಗೆ ಇದೊಂದು ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಇನ್ನು ರಾಜವ್ಯಸನಗಳ ದಾಸರಾಗಿ ದಾರುಣವಾಗಿ ಕೊಲ್ಲಲ್ಪಟ್ಟ, ಹಿಟ್ಲರ್, ಸದ್ದಾಂ ಹುಸೇನ್‍ರಂತಹಾ ಹಲವರು ಕಣ್ಣಮುಂದೆ ಹಾದುಹೋಗುತ್ತಾರೆ. ವರ್ತಮಾನ ಕಾಲದಲ್ಲಿ ಮೃಗಯಾ ಅಷ್ಟಾಗಿಲ್ಲದಿದ್ದರೂ ಅಲ್ಲಲ್ಲಿ ಅಂತಹಾ ವ್ಯಸನಗಳು ನಿದರ್ಶನಗಳು ಕಂಡುಬರುವುದುಂಟು. ಸಲ್ಮಾನ್ ಖಾನ್ ಎಂಬ ಶೋಕಿ ನಟನ ಉಲ್ಲೇಖ ಇಲ್ಲಿ ಸೂಕ್ತ. ಇನ್ನು ಮದಿರೆ ಮತ್ತು ಸ್ತ್ರೀ ಸಂಗದ ವಿಚಾರಕ್ಕೆ ಬಂದರೆ ಉದಾಹರಣೆ ಕೊಡುವುದೇ ಬೇಡ. ಇದು ಭಯಂಕರ ಪಿಡುಗು. ಬರೆಯಲು ಪುಟಗಳು ಸಾಲದು. ಇಲ್ಲೂ ನಮಗೆ ಮುಂಚೂಣಿಯಲ್ಲಿ ಕಾಣಸಿಗುವುದು ಸಿನಿಮಾ ನಟರ, ರಾಜಕಾರಣಿಗಳ ಹೆಸರುಗಳೇ ಆಗಿವೆ. ಮಾನವ ಜೀವಕೋಟಿಗಳ ಈ ಜಗತ್ತಿನಲ್ಲಿ ಒಳ್ಳೆಯ ವಿಚಾರಗಳಿಗಿಂತ ಕೆಟ್ಟ ವಿಚಾರಗಳು, ಹವ್ಯಾಸಗಳೇ ಮನುಷ್ಯನನ್ನು ಅತಿ ಬೇಗನೆ ಆಕರ್ಷಿಸುತ್ತವೆ ಎಂಬುದು ಸೋಜಿಗದ ವಿಷಯ.
ಜಗತ್ತು ಬದಲಾವಣೆಯಾಗುತ್ತಾ ಹೋಗುತ್ತದೆ, ಕೆಲವೊಂದು ವಿರೂಪಗಳು, ಕೆಲವೊಂದು ಅರೂಪಗಳು. ಅಂದು ಅಪರಾಧಿ ಪ್ರಪಂಚ ಸೀಮಿತವಾಗಿತ್ತು. ಇಂದು ಪಾತಕಲೋಕ ವಿಪರೀತ ವಿಶಾಲವಾಗಿದೆ. ಇದು ಬದಲಾವಣೆ, ಅಂದು ಮರದಿಂದ ಇಳಿಸಿದ ಕಳ್ಳು, ಸಾರಾಯಿ, ಇಂದು ಗಾಜಿನ ಮನೆಗಳಲ್ಲಿ ಬಣ್ಣ ಬಣ್ಣದ ದ್ರವಗಳ ಬಾಟಲಿಗಳು. ಅಂದು ಕದ್ದುಮುಚ್ಚಿ ಕಾಡು, ಪೊದೆಗಳ ನಡುವೆ ಬಯಕೆಯ ಪೂರೈಕೆ, ಇಂದು ಹೈ-ಟೆಕ್ ವೇಶ್ಯಾವಾಟಿಕೆಯಾಗಿ ಪರಿವರ್ತನೆಯಾಗಿದೆ. ಅಂದಿನ ಚುಟ್ಟಾ ಇಂದು ಸಿಗರೇಟ್ ಆಗಿದೆ. ಕಾಲ ಬದಲಾಗಿದೆ ಸ್ವಾಮೀ….
ಇಂದಿನ ವ್ಯಸನಿಗಳ ಲೋಕದಲ್ಲಿ ಸ್ತ್ರೀಯರ ಭಾಗವಹಿಸುವಿಕೆ ಅಚ್ಚರಿ ತರುವಷ್ಟು ಸುಧಾರಣೆಯಾಗಿದೆ! ಅಂದು ವ್ಯಸನಿಗಳನ್ನು ಆಕ್ಷೇಪಿಸುತ್ತಿದ್ದ ಮನೆಯ ಹೆಂಗಸರು ಇಂದು ಆತನ ಬಾಯಿಯ ಸಿಗರೇಟ್‍ಗೆ ತಾವೇ ಬೆಂಕಿ ಹಚ್ಚುತ್ತಾರೆ. ಮಾತ್ರವಲ್ಲ ಆತನಿಗಿಂತ ಮೊದಲು ತಾನೇ ಸಿಗರೇಟ್ ಸೇದುತ್ತಾಳೆ. ಹಲವಾರು ಪಟ್ಟಣಗಳಲ್ಲಿ ಗಂಡ-ಹೆಂಡತಿ ಒಟ್ಟಿಗೇ ಕುಳಿತು ಮದ್ಯಸೇವನೆ ಮಾಡುತ್ತಾರೆ. ಇನ್ನು ಲೇಡೀಸ್ ಬಾರ್, ಪಬ್‍ಗಳ ಕಥೆ ಕೇಳುವುದೇ ಬೇಡ. ಹೌದು ಕಾಲ ಬದಲಾಗಿದೆ ಸ್ವಾಮೀ.
ಹೀಗೆಯೇ ಒಳ್ಳೆಯ ವಿಚಾರಗಳು ಹಾಗೂ ಕೆಟ್ಟ ವಿಷಯಗಳು ಬದಲಾವಣೆಯನ್ನು ಹೊಂದುತ್ತಲೇ ಈ ಪ್ರಪಂಚ ಬೆಳೆದಿದೆ. ಆಡಳಿತದಲ್ಲಿ ಸುಧಾರಣೆಗಳು, ಕಾನೂನಿನಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ.
ಬದಲಾವಣೆಗಳು, ವಿರೋಧಗಳು ಆಗಲೇ ಬೇಕು. ಇವೆರಡರ ಸಂಘರ್ಷಗಳೇ ಜೀವನ. ಆದರೆ ಕೆಟ್ಟ ಬದಲಾವಣೆಗಳ ಜೊತೆ ರಾಜಿಯಾಗುವ ಮೌನ ಮಾತ್ರ ಬೇಡ. ಈಗೀಗ ಎಲ್ಲಾ ಕ್ಷೇತ್ರಗಳಲ್ಲಿ ಏನೇನೋ ಬದಲಾವಣೆಗಳು, ಪ್ರಯೋಗಗಳು ನಡೆಯುತ್ತಲೇ ಇದೆ. ಕೆಟ್ಟದ್ದನ್ನು ಆಸ್ವಾದಿಸುವ, ಪ್ರೋತ್ಸಾಹಿಸುವ, ಚಪ್ಪಾಳೆ ಹೊಡೆಯುವ ಮಂದಿ ಹೆಚ್ಚಿದ್ದಾರೆ. ವಿದ್ವಾಂಸರ ಕಿವಿಮಾತು ಕೇಳಿಸುತ್ತಿಲ್ಲ.
ಹಿರಿಯರೂ, ಮಾರ್ಗದರ್ಶಕರೂ ಆದವರು ಸುಮ್ಮನಿರಲಾರದೆ ಆಕ್ಷೇಪಿಸಿ ಬುದ್ಧಿಮಾತುಗಳನ್ನು ಹೇಳಿದರೂ ಜನಪ್ರಿಯತೆಯ ವ್ಯಸನಿಗಳು ಅದನ್ನು ಕೇಳಿಸಿಕೊಳ್ಳುತ್ತಿಲ್ಲ. ಹೀಗಾದರೆ ಹಿರಿಯರು ನಮಗ್ಯಾಕೆ ಎಂದು ಕೈಚೆಲ್ಲಿ ಮೌನವಾಗಬಹುದು. ಇದು ಅತ್ಯಂತ ಅಪಾಯಕಾರಿ. ಏಕೆಂದರೆ ಮೌನವೂ ಒಂದು ವ್ಯಸನವೇ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments