ಪಾಠ – ೧೩
ಅಂತಿಮ ವಿದಾಯ (ಗದ್ಯ)
I. ಪದಗಳ ಅರ್ಥ ತಿಳಿಯಿರಿ :
ಅಂತ್ಯಕ್ರಿಯೆ – ಉತ್ತರ ಕ್ರಿಯೆ ಅನುವು – ಅವಕಾಶ
ಗೊಣಗಾಟ – ಆಕ್ಷೇಪಿತ ಅಸ್ಪಷ್ಟ ಮಾತು. ತುರ್ತು – ಜರೂರು; ಬೇಗನೇ; ಈ ಕ್ಷಣ.
ದೌಡಾಯಿಸು – ಓಡುವುದು; ಅವಸರ. ಧಾವಂತ – ಆತುರ
ಪಣಕ್ಕಿಡು – ಪ್ರತಿಜ್ಞೆ. ಪಾರಾಗು – ಬಿಡುಗಡೆಯಾಗು
ಪುರುಸೊತ್ತು – ಬಿಡುವು; ವಿರಾಮ. ಬಚಾವು – ಕಾಪಾಡು; ರಕ್ಷಿಸು.
ಮಡು – ಆಳ; ಗುಂಡಿ. ಮೂದಲಿಸು – ಹೀಯಾಳಿಸು
ವಿದಾಯ – ಬೀಳ್ಕೊಡು ಶತಪಥ – ಅತ್ತಿಂದಿತ್ತ ನಡೆದಾಡುವುದು
ಸಾಂತ್ವನ – ಸಮಾಧಾನ; ಸಂತೈಸು. ಹರಿಹಾಯಿ – ಕೋಪಗೊಳ್ಳು; ರೇಗುವುದು.
II. ಪ್ರಶ್ನೆಗಳು :
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ವೈದ್ಯನ ನಡಿಗೆಯಲ್ಲಿ ಧಾವಂತವಿತ್ತು ಏಕೆ?
ಉತ್ತರ:- ರೋಗಿಯೊಬ್ಬನನ್ನು ಉಳಿಸಲು ತನ್ನಿಂದಾಗಿ ತಡವಾಗುತ್ತಿದೆಯಲ್ಲಾ ಎಂಬ ತಳಮಳವಿದ್ದ ಕಾರಣ ಆ ವೈದ್ಯನ ನಡಿಗೆಯಲ್ಲಿ ಧಾವಂತವಿತ್ತು.
೨. ಆಪರೇಷನ್ ಕೊಠಡಿಯ ಬಳಿ ಇದ್ದ ತಂದೆಯ ಮುಖದಲ್ಲಿ ಯಾವ ಆತಂಕವಿತ್ತು?
ಉತ್ತರ:- ಆಪರೇಷನ್ ಕೊಠಡಿಯ ಬಳಿ ಇದ್ದ ತಂದೆಯ ಮುಖದಲ್ಲಿ ಒಳಗೆ ಮಲಗಿರುವ ತನ್ನ ಮಗನಿಗೆ ಏನಾಗಿ ಬಿಡುತ್ತೋ, ಮತ್ತೆ ಆತನನ್ನು ಜೀವಂತವಾಗಿ ನೊಡುತ್ತೇನೋ ಇಲ್ಲವೋ ಎಂಬ ಆತಂಕವಿತ್ತು.
೩. ಸಾವಿನ ಬಗ್ಗೆ ವೈದ್ಯರು ಏನೆಂದು ಹೇಳಿದರು?
ಉತ್ತರ:- ವೈದ್ಯರಾದವರು ಸಾವನ್ನು ಮುಂದೂಡಬಹುದೇ ವಿನಾ ಸಾವಿನಿಂದ ಸಂಪೂರ್ಣವಾಗಿ ಬಚಾವು ಮಾಡುವ ಶಕ್ತಿ ನಮಗೂ ಇಲ್ಲ ಎಂದು ಸಾವಿನ ಬಗ್ಗೆ ವೈದ್ಯರು ಹೇಳಿದರು.
೪. ವ್ಯಕ್ತಿಗೆ ಕಷ್ಟದ ಭಾರ ಅರ್ಥವಾಗುವುದು ಯಾವಾಗ?
ಉತ್ತರ:- ತಾನೇ ಆ ಕಷ್ಟಕ್ಕೆ ಸಿಲುಕಿದಾಗ ವ್ಯಕ್ತಿಗೆ ಕಷ್ಟದ ಭಾರ ಅರ್ಥವಾಗುವುದು.
೫. ವೈದ್ಯರು ಆಪರೇಷನ್ ಮುಗಿಸಿ ಅವಸರದಿಂದ ಮನೆಗೆ ತೆರಳಿದ್ದು ಏಕೆ?
ಉತ್ತರ:- ಆಕ್ಸಿಡೆಂಟ್ ನಲ್ಲಿ ಸತ್ತುಹೋದ ತನ್ನ ಮಗನ ಅಂತ್ಯಕ್ರಿಯೆಯನ್ನು ಮಾಡಲು ವೈದ್ಯರು ಆಪರೇಷನ್ ಮುಗಿಸಿ ಅವಸರದಿಂದ ಮನೆಗೆ ತೆರಳಿದರು.
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು–ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಆಪರೇಷನ್ ಥಿಯೇಟರಿನತ್ತ ದೌಡಾಯಿಸಿದ ವೈದ್ಯನ ಮೇಲೆ ರೋಗಿಯ ತಂದೆ ಏನೆಂದು ಹರಿಹಾಯ್ದನು?
ಉತ್ತರ:- “ಇಲ್ಲಿಗೆ ಬರುವುದಕ್ಕೆ ನಿಮಗೆ ಇಷ್ಟೊತ್ತು ಬೇಕಾಯಿತೆ? ನನ್ನ ಮಗನ ಜೀವ ಅಪಾಯದಲ್ಲಿದೆಯೆಂಬುದು ನಿಮಗೆ ಗೊತ್ತಿಲ್ಲವೇ? ನಿಮಗೆ ಕಿಂಚಿತ್ತಾದರೂ ಜವಾಬ್ದಾರಿ ಎನ್ನುವುದಿಲ್ಲವೇ?” ಎಂದು ಆಪರೇಷನ್ ಥಿಯೇಟರಿನತ್ತ ದೌಡಾಯಿಸಿದ ವೈದ್ಯನ ಮೇಲೆ ರೋಗಿಯ ತಂದೆ ಹರಿಹಾಯ್ದನು.
೨. ವೈದ್ಯರು ಆಕ್ರೋಶದಲ್ಲಿದ್ದ ರೋಗಿಯ ತಂದೆಯನ್ನು ಏನೆಂದು ವಿನಂತಿಸಿಕೊಂಡರು?
ಉತ್ತರ:- “ದಯವಿಟ್ಟು ಕ್ಷಮಿಸಪ್ಪ. ನಾನು ಆಸ್ಪತ್ರೆಯಲ್ಲಿ ಇರಲಿಲ್ಲ. ನನಗೆ ಫೋನ್ ಬರುತ್ತಿದ್ದಂತೆಯೇ ಹೊರಟು ಬಂದಿದ್ದೇನೆ. ದಯಮಾಡಿ ನೀನೀಗ ಸ್ವಲ್ಪ ಶಾಂತನಾಗು. ನನ್ನ ಕೆಲಸ ಮಾಡಲು ಅನುವು ಮಾಡಿಕೊಡು. ಈಗಾಗಲೇ ತಡವಾಗಿ ಹೋಗಿದೆ” ಎಂದು ವೈದ್ಯರು ಆಕ್ರೋಶದಲ್ಲಿದ್ದ ರೋಗಿಯ ತಂದೆಯನ್ನು ವಿನಂತಿಸಿಕೊಂಡರು.
೩. ವೈದ್ಯರು ರೋಗಿಯ ತಂದೆಗೆ ಏನೆಂದು ಭರವಸೆ ನೀಡಿದರು?
ಉತ್ತರ:- “ಒಬ್ಬ ವೈದ್ಯನಾಗಿ ನಾನು ಏನು ಮಾಡಬಲ್ಲೆನೋ ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಿನ್ನ ಮಗನನ್ನು ಉಳಿಸಲು ನನ್ನೆಲ್ಲಾ ಸಾಮರ್ಥ್ಯವನ್ನು ಪಣಕ್ಕಿಡುತ್ತೇನೆ.” ಎಂದು ವೈದ್ಯರು ರೋಗಿಯ ತಂದೆಗೆ ಭರವಸೆ ನೀಡಿದರು.
೪. ಆಪರೇಷನ್ ಮುಗಿಸಿ ಹೊರನಡೆದ ವೈದ್ಯರನ್ನು ರೋಗಿಯ ತಂದೆ ಏನೆಂದು
ಮೂದಲಿಸಿದನು?
ಉತ್ತರ:- “ಇವನೇಕೆ ಇಷ್ಟು ತಾಳ್ಮೆಗೆಟ್ಟವನಂತೆ ವರ್ತಿಸುತ್ತಿದ್ದಾನೆ. ನನ್ನ ಮಗನ ಸ್ಥಿತಿಗತಿ ಬಗ್ಗೆ ಕೊಂಚ ತಿಳಿದುಕೊಳ್ಳೋಣ ಎಂದರೆ ಅದಕ್ಕೂ ಪುರುಸೊತ್ತಿಲ್ಲದಂತೆ ಓಡುತ್ತಿದ್ದಾನಲ್ಲಾ? ಹಣದ ಹಿಂದೆ ಬಿದ್ದವರ ಧಾವಂತವೇ ಇಂತದ್ದು. ಇವರಿಗೆ ರೋಗಿಗಳ ಜೀವಕ್ಕಿಂತ ದುಡ್ಡೇ ದೊಡ್ಡದು. ಛೇ!” ಎಂದು ಆಪರೇಷನ್ ಮುಗಿಸಿ ಹೊರನಡೆದ ವೈದ್ಯರನ್ನು ರೋಗಿಯ ತಂದೆ ಮೂದಲಿಸಿದನು.
೬. ನರ್ಸ್ ರೋಗಿಯ ತಂದೆಗೆ ಏನು ಹೇಳಿದಳು?
ಉತ್ತರ:- “ಅವರ ಮಗ ನಿನ್ನೆಯಷ್ಟೇ ನಡೆದ ಆಕ್ಸಿಡೆಂಟ್ನಲ್ಲಿ ಸತ್ತು ಹೋದ, ಪಾಪ! ನಾವು ಅವರಿಗೆ ಫೋನ್ ಮಾಡಿದಾಗ ತಮ್ಮ ಮಗನ ಅಂತ್ಯಕ್ರಿಯೆಯ ದುಃಖದ ಮಡುವಿನಲ್ಲಿದ್ದರು. ನಿನ್ನ ಮಗನ ಆಪರೇಷನ್ ತುರ್ತನ್ನು ಹೇಳುತ್ತಿದ್ದಂತೆಯೇ ಆ ಕೆಲಸವನ್ನು ಅರ್ಧಕ್ಕೆ ಬಿಟ್ಟು ಬಂದಿದ್ದರು. ನಿನ್ನ ಮಗನ ಜೀವ ಉಳಿಸಿದರು. ಈಗವರು ತಮ್ಮ ಮಗನ ಅಂತಿಮ ವಿದಾಯಕ್ಕೆ ಹೋಗುತ್ತಿದ್ದಾರೆ!!” ಎಂದು ನರ್ಸ್ ರೋಗಿಯ ತಂದೆಗೆ ಹೇಳಿದಳು.
ಇ) ಕೆಳಗಿನ ಪ್ರಶ್ನೆಗಳಿಗೆ ಏಳು–ಎಂಟು ವಾಕ್ಯಗಳಲ್ಲಿ ಉತ್ತರಿಸಿರಿ.
೧. ವೈದ್ಯ ಹಾಗೂ ರೋಗಿಯ ತಂದೆಯ ನಡುವೆ ಯಾವ ಮಾತುಕತೆಗಳು ನಡೆದವು?
ಉತ್ತರ:- ರೋಗಿಯ ತಂದೆಯು “ಇಲ್ಲಿಗೆ ಬರುವುದಕ್ಕೆ ನಿಮಗೆ ಇಷ್ಟೊತ್ತು ಬೇಕಾಯಿತೆ? ನನ್ನ ಮಗನ ಜೀವ ಅಪಾಯದಲ್ಲಿದೆಯೆಂಬುದು ನಿಮಗೆ ಗೊತ್ತಿಲ್ಲವೇ? ನಿಮಗೆ ಕಿಂಚಿತ್ತಾದರೂ ಜವಾಬ್ದಾರಿ ಎನ್ನುವುದಿಲ್ಲವೇ?” ಎಂದು ವೈದ್ಯನ ಮೇಲೆ ಹರಿಹಾಯ್ದನು. ಆಗ ಆ ವೈದ್ಯನು “ದಯವಿಟ್ಟು ಕ್ಷಮಿಸು. ನಾನು ಆಸ್ಪತ್ರೆಯಿಂದ ಹೊರಗಿದ್ದೆ. ನನಗೆ ಫೋನ್ ಬರುತ್ತಿದ್ದಂತೆಯೇ ಹೊರಟು ಬಂದಿದ್ದೇನೆ. ದಯಮಾಡಿ ನೀನೀಗ ಶಾಂತನಾಗು.” ಎಂದು ವಿನಂತಿಸಿದನು. ಅದಕ್ಕೆ ರೋಗಿಯ ತಂದೆಯು “ನಿನ್ನ ಮಗ ಇದೇ ಆಪರೇಷನ್ ಕೊಠಡಿಯಲ್ಲಿ ಈ ಪರಿಸ್ಥಿತಿಯಲ್ಲಿ ಮಲಗಿದ್ದರೆ ನೀನು ಶಾಂತನಾಗಿರುತ್ತಿದ್ದೆಯಾ? ವೈದ್ಯ ಬರುವುದು ತಡವಾಗಿ ನಿನ್ನ ಮಗ ಸತ್ತು ಹೋದರೆ ನೀನೇನು ಮಾಡುತ್ತಿದ್ದೆ?” ಎಂದು ಕೋಪದಿಂದ ಹೇಳಿದನು. ಅದಕ್ಕೆ ವೈದ್ಯನು “ಒಬ್ಬ ವೈದ್ಯನಾಗಿ ನಾನು ಏನು ಮಾಡಬಲ್ಲೆನೋ ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಿನ್ನ ಮಗನನ್ನು ಉಳಿಸಲು ನನ್ನೆಲ್ಲಾ ಸಾಮರ್ಥ್ಯವನ್ನು ಪಣಕ್ಕಿಡುತ್ತೇನೆ. ಆದರೂ ನಮ್ಮನ್ನೆಲ್ಲಾ ಮೀರಿದ ಶಕ್ತಿಯ ಮುಂದೆ ನಮ್ಮ ಆಟವೇನೂ ನಡೆಯದು.” ಎಂದು ಸಮಾಧಾನ ಹೇಳಿದನು. “ನಾವು ಆ ಕಷ್ಟದ ಭಾಗವಾಗದೇ ಇದ್ದಾಗ, ಅದಕ್ಕೆ ಸಾಂತ್ವನ ಹೇಳೋದು ತುಂಬಾ ಸುಲಭ. ನಾವೇ ಆ ಕಷ್ಟಕ್ಕೆ ಸಿಲುಕಿದಾಗ ಅದರ ಭಾರ ಅರ್ಥವಾಗೋದು” ಎಂದು ತಂದೆಯ ಗೊಣಗಿದಾಗ ವೈದ್ಯನು ಆಪರೇಷನ್ ಮಾಡಲು ತೆರಳಿದನು. ಆಪರೇಷನ್ ಮುಗಿಸಿ ಬಂದ ವೈದ್ಯನು ತಂದೆಯೊಡನೆ “ನೋಡಿದ್ಯಾ, ನಾನೇಳಲಿಲ್ಲವೇ. ಆ ಕಾಣದ ಶಕ್ತಿ ನಿನ್ನ ಕೈಬಿಡಲಿಲ್ಲ. ಆಪರೇಷನ್ ಯಶಸ್ವಿಯಾಗಿ ಮುಗಿದಿದೆ. ಈಗ ನಿನ್ನ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ” ಎಂದು ಅವಸರವಾಗಿ ಅಲ್ಲಿಂದ ತೆರಳಿದನು.
೨. ವೈದ್ಯರ ಯಾವ ಗುಣಗಳು ನಿಮಗೆ ಮೆಚ್ಚುಗೆಯಾದವು? ಏಕೆ?
ಉತ್ತರ:- ವೈದ್ಯರ ಮಗ ಹಿಂದಿನ ದಿನವಷ್ಟೇ ನಡೆದ ಆಕ್ಸಿಡೆಂಟ್ನಲ್ಲಿ ಸತ್ತು ಹೋಗಿದ್ದ. ಇನ್ನೊಂದು ರೋಗಿಯ ಆಪರೇಷನ್ ಮಾಡಿ ಜೀವ ಉಳಿಸಲು ಅವರಿಗೆ ಫೋನ್ ಮಾಡಿದಾಗ ಅವರ ಮಗನ ಅಂತ್ಯಕ್ರಿಯೆಯ ದುಃಖದ ಮಡುವಿನಲ್ಲಿದ್ದರು. ಆದರೂ ತನ್ನೆಲ್ಲಾ ದುಃಖವನ್ನು ಮರೆತು ಅವರು ತನ್ನ ಮಗನ ಅಂತ್ಯಕ್ರಿಯೆಯನ್ನು ಅರ್ಧಕ್ಕೆ ಬಿಟ್ಟು ಬಂದಿದ್ದರು. ಆಪರೇಷನ್ ಮಾಡಿ ಇನ್ನೊಂದು ರೋಗಿಯ ಜೀವ ಉಳಿಸಿದರು. ವೈದ್ಯರ ಈ ಗುಣ ಪ್ರತಿಯೊಬ್ಬರಿಗೂ ಆದರ್ಶಪ್ರಾಯ ಹಾಗೂ ಮಾದರಿಯಾಗಿದೆ. ಯಾವಾಗಲೂ ಸಮಾಧಾನದಿಂದಿರುವುದು ವೈದ್ಯರ ಇನ್ನೊಂದು ಗುಣವಾಗಿದೆ. ರೋಗಿಯ ತಂದೆಯು ಅಷ್ಟೊಂದು ಕೋಪದಿಂದ ಬೈಯುತ್ತಿದ್ದರೂ ಹಾಗೂ ಅವರು ತಮ್ಮ ಮಗನ ಸಾವಿನ ದುಃಖ ಹಾಗೂ ಅಂತ್ಯಕ್ರಿಯೆಯ ಸಂದರ್ಭದಲ್ಲಿದ್ದರೂ ಅವರು ಕೋಪಗೊಳ್ಳದೆ ರೋಗಿಯ ತಂದೆಗೆ ಸಮಾಧಾನದಿಂದ ಉತ್ತರಿಸುತ್ತಾರೆ. ಹಾಗೂ ತಡವಾದುದಕ್ಕೆ ಕ್ಷಮೆಯನ್ನು ಕೇಳುತ್ತಾರೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಸಮಾಧಾನದ ವರ್ತನೆಯು ಎಲ್ಲರಿಂದ ಸಾಧ್ಯವಿಲ್ಲ. ವೈದ್ಯರ ಇಂತಹ ಗುಣಗಳು ನಮಗೆ ಮೆಚ್ಚಿಗೆಯಾಗುತ್ತವೆ.
ಈ) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ವಿವರಿಸಿರಿ.
೧. ಇಲ್ಲಿಗೆ ಬರುವುದಕ್ಕೆ ನಿಮಗೆ ಇಷ್ಟೊತ್ತು ಬೇಕಾಯಿತೇ?
ಉತ್ತರ:- ಈ ವಾಕ್ಯವನ್ನು ಗಿರೀಶ್ ತಾಳಿಕಟ್ಟೆ ಅವರು ಬರೆದ ‘ಅಂತಿಮ ವಿದಾಯ’ ಎಂಬ ಗದ್ಯದಿಂದ ಆರಿಸಲಾಗಿದೆ. ಈ ಮಾತನ್ನು ಆಪರೇಷನ್ ಥಿಯೇಟರಿನಲ್ಲಿ ಮಲಗಿದ್ದ ರೋಗಿಯ ತಂದೆಯು ಆಪರೇಷನ್ ಮಾಡಲು ಹೋಗುತ್ತಿದ್ದ ವೈದ್ಯರಲ್ಲಿ ಹೇಳುತ್ತಾನೆ.
೨. ಹಣದ ಹಿಂದೆ ಬಿದ್ದವರ ಧಾವಂತವೇ ಇಂತಹದ್ದು.
ಉತ್ತರ:- ಈ ವಾಕ್ಯವನ್ನು ಗಿರೀಶ್ ತಾಳಿಕಟ್ಟೆ ಅವರು ಬರೆದ ‘ಅಂತಿಮ ವಿದಾಯ’ ಎಂಬ ಗದ್ಯದಿಂದ ಆರಿಸಲಾಗಿದೆ. ಈ ಮಾತನ್ನು ಆಪರೇಷನ್ ಮುಗಿಸಿ ಅವಸರದಿಂದ ದೌಡಾಯಿಸುತ್ತಿದ್ದ ವೈದ್ಯರನ್ನು ಕಂಡು ರೋಗಿಯ ತಂದೆಯು ತನ್ನ ಹಿಂದೆ ನಿಂತಿದ್ದ ನರ್ಸ್ ಬಳಿಯಲ್ಲಿ ಹೇಳುತ್ತಾನೆ.
೩. ಈಗವರು ತಮ್ಮ ಮಗನ ಅಂತಿಮ ವಿದಾಯಕ್ಕೆ ಹೋಗುತ್ತಿದ್ದಾರೆ.
ಉತ್ತರ:- ಈ ವಾಕ್ಯವನ್ನು ಗಿರೀಶ್ ತಾಳಿಕಟ್ಟೆ ಅವರು ಬರೆದ ‘ಅಂತಿಮ ವಿದಾಯ’ ಎಂಬ ಗದ್ಯದಿಂದ ಆರಿಸಲಾಗಿದೆ. ಈ ಮಾತನ್ನು ಆಪರೇಷನ್ ಮುಗಿಸಿ ಅವಸರದಿಂದ ತನ್ನ ಮಗನ ಅಂತ್ಯಕ್ರಿಯೆಯನ್ನು ಮಾಡಲು ದೌಡಾಯಿಸುತ್ತಿದ್ದ ವೈದ್ಯರನ್ನು ಕಂಡು ಅಳುತ್ತಾ ನರ್ಸ್ ರೋಗಿಯ ತಂದೆಯಲ್ಲಿ ಹೇಳುತ್ತಾಳೆ.
III. ಭಾಷಾಭ್ಯಾಸ :
ಅ) ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.
೧. ಧಾವಂತ:- ಕಚೇರಿಗೆ ತಡವಾಯಿತು ಎಂದು ಆತನು ಧಾವಂತದಿಂದ ಹೊರಟನು.
೨. ಸಾಂತ್ವನ:- ಆಟವಾಡುವಾಗ ಎಡವಿ ಬಿದ್ದ ಮಗುವು ಅಳುತ್ತಿರುವುದನ್ನು ಕಂಡು ತಾಯಿ ಸಾಂತ್ವನ ಹೇಳಿದಳು.
೩. ಪಾರಾಗು:- ಕಷ್ಟ ಕಾಲದಲ್ಲಿ ಉಪಾಯದಿಂದ ಯೋಚಿಸಿದರೆ ಯಾವುದೇ ಅಪಾಯದಿಂದ ಪಾರಾಗಬಹುದು.
೪. ಮೂದಲಿಸು:- ಕೆಟ್ಟ ನಡತೆಯ ವ್ಯಕ್ತಿಗಳನ್ನು ಜನರು ಕೆಲವೊಮ್ಮೆ ಮೂದಲಿಸುತ್ತಾರೆ.
೫. ಆಕ್ರೋಶ:- ರಾತ್ರಿ ಕಳ್ಳರು ಮನೆಗೆ ಬಂದರೆ ನಾಯಿಗಳು ಆಕ್ರೋಶಗೊಂಡು ಬೊಗಳುತ್ತವೆ.
೬. ವಿದಾಯ:- ಅಂತಿಮ ವರ್ಷದಲ್ಲಿ ಶಾಲೆಯಿಂದ ಹೊರಹೋಗುವ ವಿದ್ಯಾರ್ಥಿಗಳಿಗೆ ವಿದಾಯಕೂಟ ಏರ್ಪಡಿಸುತ್ತಾರೆ.
ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
೧. ರೋಗಿ X ನಿರೋಗಿ
೨. ದುಃಖ X ಸುಖ, ಸಂತೋಷ
೩. ಶಕ್ತಿ X ನಿಶ್ಶಕ್ತಿ
೪. ಶಾಂತ X ಅಶಾಂತ
೫. ಸಾವು X ಹುಟ್ಟು
೬. ಅಂತಿಮ X ಆರಂಭ, ಪ್ರಥಮ
೭. ಅಸಹನೆ X ಸಹನೆ
೮. ಪ್ರಾಮಾಣಿಕ X ಅಪ್ರಾಮಾಣಿಕ
ಇ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.
೧. ತಾಳ್ಮೆಗೆಟ್ಟ = ತಾಳ್ಮೆ + ಕೆಟ್ಟ
೨. ಪ್ರಾಣಾಪಾಯ = ಪ್ರಾಣ + ಅಪಾಯ
೩. ಮತ್ತೇನಾದರು = ಮತ್ತೆ + ಏನಾದರೂ
೪. ಪಣಕ್ಕಿಡು = ಪಣಕ್ಕೆ + ಇಡು
೫. ಬೇಸರವಾಯಿತು = ಬೇಸರ + ಆಯಿತು
ಈ) ಕೆಳಗೆ ನೀಡಿದ ಅನ್ಯದೇಶೀಯ ಪದಗಳಿಗೆ ಸಮಾನಾಂತರ ಕನ್ನಡ ಪದಗಳನ್ನು ಬರೆಯಿರಿ.
ಮಾದರಿ : ನರ್ಸ್ – ದಾದಿ
೧. ಫೋನ್ – ದೂರವಾಣಿ
೨. ರೂಂ – ಕೊಠಡಿ, ಕೋಣೆ
೩. ಆಪರೇಷನ್ – ಶಸ್ತ್ರಚಿಕಿತ್ಸೆ
೪. ಆಕ್ಸಿಡೆಂಟ್ – ಅಪಘಾತ
೫. ಥಿಯೇಟರ್ – ಚಿತ್ರಮಂದಿರ
೬. ಸಿಸ್ಟರ್ – ದಾದಿ, ನರ್ಸ್, ಸಹೋದರಿ
