ನವವಿವಾಹಿತೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವರದಕ್ಷಿಣೆ ಬೇಡಿಕೆಗೆ ರೋಸಿಹೋಗಿ ನವವಿವಾಹಿತೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗುಮ್ಮನಹಳ್ಳಿಯಲ್ಲಿ ಘಟಿಸಿದೆ.
ರೂಪಾ (29) ಆತ್ಮಹತ್ಯೆ ಮಾಡಿಕೊಂಡ ಯುವತಿ. 2 ವರ್ಷಗಳ ಹಿಂದೆ ಸುರೇಶ್ ಎಂಬ ಯುವಕನನ್ನು ಪ್ರೇಮ ವಿವಾಹವಾಗಿದ್ದಳು. ಸುರೇಶ್ ಸಾಸಲು ಪಂಚಾಯಿತಿಯಲ್ಲಿ ಡಾಟಾ ಎಂಟ್ರಿ ಆಪರೇಟಿಂಗ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ರೂಪಾ ಬರೆದಿಟ್ಟ ಡೆತ್ ನೋಟ್ ನಲ್ಲಿ, ನನ್ನ ಸಾವಿಗೆ ಗಂಡ ಸುರೇಶ್, ಮಾವ ನರಸಿಂಹಮೂರ್ತಿ ಅತ್ತೆ ದೇವಮ್ಮ ಕಾರಣ ಎಂದು ಬರೆಯಲಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವ ಪೊಲೀಸರು ಆರೋಪಿ ಸುರೇಶ್ನನ್ನು ವಶಕ್ಕೆ ಪಡೆದಿದ್ದಾರೆ.
ಮದುವೆ ಸಮಯದಲ್ಲಿ ರೂಪಾ ಕುಟುಂಬದವರು 100 ಗ್ರಾಂ ಚಿನ್ನದ ಒಡವೆ ನೀಡಿದ್ದರು ಎಂದು ತಿಳಿದುಬಂದಿದೆ. ಸುರೇಶ್ ಮನೆಯವರು ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ.
ಆ ಹಣವನ್ನು ಕೊಡಬೇಕು ಎಂದು ಆಕೆಗೆ ಒತ್ತಡ ಹೇರಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ರೂಪಾ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗುತ್ತಿದೆ.