ಸಿರಿಬಾಗಿಲು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ಸಂಸ್ಥೆಯು ಕರ್ನಾಟಕ ಸಂಭ್ರಮ 50ರ ಸವಿನೆನಪು

2026-24ನೇ ಸಾಲಿನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ ಸಹಯೋಗದೊಂದಿಗೆ ಕಲಾಪೋಷಕರ ಸಹಕಾರದೊಂದಿಗೆ ನಿರಂತರ ನಾಲ್ಕು ದಿನಗಳ ಕಾಲ ನಡೆಯಲಿರುವ ಸಾಂಸ್ಕೃತಿಕ ಉತ್ಸವ “ಸಿರಿಬಾಗಿಲು ಯಕ್ಷವೈಭವ”ವನ್ನು ಎಡನೀರು ಸಂಸ್ಥಾನದ ಶೀಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಆಶೀರ್ವದಿಸಿ ಮಾತನಾಡಿದ ಶ್ರೀಗಳು ”ಸಿರಿಬಾಗಿಲು ಪ್ರತಿಷ್ಠಾನವು ಕಾಸರಗೋಡಿನಲ್ಲಿ ಯಕ್ಷಗಾನ , ಕನ್ನಡ ಭಾಷೆ ಹಾಗೂ ಸಂಸ್ಖೃತಿಯ ಉಳಿವಿಗೆ ನೀಡುತ್ತಿರುವ ಕೊಡುಗೆ ಅಪಾರವಾದುದು. ಮೂವತ್ತಕ್ಕೂ ಹೆಚ್ಚು ಹವ್ಯಾಸಿ ತಂಡಗಳಿಗೆ ಯಕ್ಷಗಾನ ಪ್ರದರ್ಶನ ನೀಡಲು ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುತ್ತಿರುವುದು ಅತ್ಯುತ್ತಮ ಕೆಲಸ” ಎಂದು ಶ್ಲಾಘಿಸಿದರು.

ಸಮಾರಂಭದಲ್ಲಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಗಡಿಪ್ರದೇಶ ಆಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ “ ಕನ್ನಡದ ಶುದ್ಧಭಾಷೆಯನ್ನು ಉಳಿಸುವಲ್ಲಿ ಯಕ್ಷಗಾನದ ಪಾತ್ರ ಮಹತ್ತರವಾದದ್ದು, ನಮ್ಮ ಪುರಾಣ ಕತೆಗಳು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಯಕ್ಷಗಾನ ಮಾಡುತ್ತಿದೆ. ಗಡಿನಾಡು ಕಾಸರಗೋಡಿನಲ್ಲಿ ಮಲಯಾಳಿ ಸೆರಗಲ್ಲಿ ಕನ್ನಡ ಉಳಿಸುವ , ಯಕ್ಷಗಾನ ಬೆಳೆಸುವಲ್ಲಿ ಸಿರಿಬಾಗಿಲು ಪ್ರತಿಷ್ಠಾನ ದೊಡ್ಡ ಸಾಧನೆಮಾಡುತ್ತಿದೆ” ಎಂದು ಅಭಿಪ್ರಾಯಪಟ್ಟರು.

ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಕಲಾಪೋಷಕ ಹಾಗೂ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರು ಪ್ರತಿಷ್ಠಾನದ ಗೌರವ ಸದಸ್ಯತ್ತವವನ್ನು ಶ್ರೀಗಳ ಕೈಯಿಂದ ಸ್ವೀಕರಿಸಿ ಮಾತನಾಡುತ್ತಾ ಓರ್ವ ವೃತ್ತಿಕಲಾವಿದನಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಸಾಧನೆ ಸೇವೆ ಉನ್ನತವಾದ್ದದು , ಉತ್ತಮ ಭಾಗವತರಾಗಿ, ಸಂಘಟಕರಾಗಿ, ಕಲಾಪೋಷಕರಾಗಿ ರಾಮಕೃಷ್ಣಮಯ್ಯರ ಕಾರ್ಯಕ್ಕೆ ಸಮಾಜ ತನು ಮನ ಧನಗಳಿಂದ ಪ್ರೋತ್ಸಾಹಿಸಬೇಕಿದೆ” ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಗಡಿಪ್ರದೇಶ ಆಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು. ಕರ್ನಾಟಕ ಗಡಿಪ್ರದೇಶ ಆಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯ ಕಟ್ಟೆ ಭಾಗವಹಿಸಿದ್ದರು.
ಸಿರಿಬಾಗಿಲು ಪ್ರತಿಷ್ಠಾನವು ಮುಂದಿನ ಬೆಳವಣಿಗೆಗಾಗಿ ಸದಸ್ಯತ್ವ ನೋಂದಾವಣಾ ಅಭಿಯಾನವನ್ನು ಆರಂಭಿಸಿದೆ.
ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಸ್ವಾಗತಿಸಿ ಜಗದೀಶಕೂಡ್ಲು ನಿರ್ವಹಿಸಿ ಪ್ರಸನ್ನ ಕಾರಂತ ದೇಶಮಂಗಲ ವಂದಿಸಿದರು.