ಎರಡು ದಿನಗಳ ಹಿಂದೆಯಷ್ಟೇ ನಾಪತ್ತೆಯಾಗಿದ್ದ ಒಂಬತ್ತು ವರ್ಷದ ಬಾಲಕಿ ಬುಧವಾರ ರಸ್ತೆ ಬದಿಯ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಕೈ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿರುವುದು ಕಂಡುಬಂದಿದೆ. ಈ ಘಟನೆ ಪುದುಚೇರಿಯಲ್ಲಿ ನಡೆದಿದೆ.
ಘಟನೆಯಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಶನಿವಾರ ಬಾಲಕಿ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದಳು, ನಂತರ ಆಕೆಯ ಪೋಷಕರಾದ ನಾರಾಯಣನ್ ಮತ್ತು ಮೈಥಿಲಿ ಆಕೆಯನ್ನು ಹುಡುಕಿದರೂ ಆಕೆ ಸಿಕ್ಕಿರಲಿಲ್ಲ. ಬಳಿಕ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದು, ಬಾಲಕಿಯ ಪತ್ತೆಗೆ ತಂಡಗಳನ್ನು ಪೊಲೀಸರು ರಚಿಸಿದ್ದರು.
ಆದರೆ, ಎರಡು ದಿನಗಳ ಬಳಿಕ ಬಾಲಕಿಯ ಕೊಳೆತ ಶವ ಆಕೆಯ ನಿವಾಸದ ಬಳಿಯ ಚರಂಡಿಯಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿತ್ತು.
ಕಳೆದ ಎರಡು ದಿನಗಳ ಪೊಲೀಸ್ ತನಿಖೆಯಲ್ಲಿ ನಿರ್ಣಾಯಕ ಸಾಕ್ಷ್ಯಗಳು ದೊರೆತಿದ್ದು, ಗುರುವಾರ ಬಾಲಕಿಯ ಮನೆಯ ಸಮೀಪದ ಚರಂಡಿಯಲ್ಲಿ ಶವ ಬೆಡ್ ಶೀಟ್ನಲ್ಲಿ ಸುತ್ತಿ ಪತ್ತೆಯಾಗಿದೆ. ಸಿಸಿಟಿವಿ ಫೂಟೇಜ್ ನಲ್ಲಿ ಏನೂ ಮಾಹಿತಿ ಇಲ್ಲ, ಅದರಲ್ಲಿ ಮಗು ಮಾತ್ರ ರಸ್ತೆಯಲ್ಲಿ ಆಟವಾಡುವುದು ಕಾಣಿಸುತ್ತದೆ.
ಸಂಭವನೀಯ ಲೈಂಗಿಕ ಕಿರುಕುಳದ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ಪೊಲೀಸರು ಶವಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಆದರೆ, ಪ್ರಾಥಮಿಕ ಮಾಹಿತಿ ಪ್ರಕಾರ ಬಾಲಕಿಯನ್ನು ಹತ್ಯೆ ಮಾಡುವ ಮುನ್ನ ಲೈಂಗಿಕ ಕಿರುಕುಳ ನೀಡಲಾಗಿತ್ತು.
ಮೃತದೇಹವನ್ನು ಹೊರತೆಗೆದ ಕೂಡಲೇ ಸ್ಥಳೀಯರು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಒತ್ತಯಾಯಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡಲು ಅರೆಸೇನಾ ಪಡೆಗಳನ್ನು ಸ್ಥಳಕ್ಕೆ ಕರೆಸಲಾಗಿತ್ತು.
ಮೃತ 5 ನೇ ತರಗತಿ ವಿದ್ಯಾರ್ಥಿನಿ ಪ್ರಾಥಮಿಕ ಆರೋಗ್ಯ ಕೇಂದ್ರದ ಚಾಲಕನ ಮಗಳು. ಈ ಪ್ರದೇಶದಲ್ಲಿ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದರು ಮತ್ತು ಹತ್ಯೆಯ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ಮಾಜಿ ಶಾಸಕ ವೈಯಾಪುರಿ ಮಣಿಕಂದನ್ ಮುಖ್ಯಮಂತ್ರಿ ಎನ್.ರಂಗಸಾಮಿ ಅವರಿಗೆ ಮನವಿ ಸಲ್ಲಿಸಿ ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಈ ನಡುವೆ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದ ನಂತರ ಪೊಲೀಸರು ಐದು ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.