Sunday, September 29, 2024
Homeಸುದ್ದಿಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ - 'ಸಂಸ್ಕಾರ ನೀಡುವ ಯಕ್ಷಗಾನ ಕಲಾವಿದರು ಅಭಿನಂದನೀಯರು'.ಪೇಜಾವರ ಶ್ರೀ

ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ – ‘ಸಂಸ್ಕಾರ ನೀಡುವ ಯಕ್ಷಗಾನ ಕಲಾವಿದರು ಅಭಿನಂದನೀಯರು’.ಪೇಜಾವರ ಶ್ರೀ

ಉಡುಪಿ : ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭವು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ 18.11.2023 ರಂದು ಅತ್ಯಂತ ಯಶಸ್ವಿಯಾಗಿ ಜರಗಿತು.
ಸಂಸ್ಕಾರ ನೀಡುವ, ಸಂಸ್ಕೃತಿ ಉಳಿಸುವ, ಶ್ರೀಮಂತ ಕಲೆ ಯಕ್ಷಗಾನದ ಕಲಾವಿದರ ತ್ಯಾಗ, ಶ್ರಮ ದೊಡ್ಡದು. ಅವರು ಸದಾ ಅಭಿನಂದನೀಯರು ಎಂದು ಪ್ರಶಸ್ತಿ ಪ್ರದಾನ ಮಾಡಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು. ಅಂತಹ ಕಲಾವಿದರನ್ನು ಗೌರವಿಸುವುದು ಸ್ತುತ್ಯರ್ಹ ಎಂದರು.

ಕಲಾವಿದರಾದ ಚಿದಂಬರಬಾಬು , ಕೋಟ ಗೋವಿಂದ ಉರಾಳ, ಮುಂಡ್ಕೂರು ವಸಂತ ಶೆಟ್ಟಿ, ತೀರ್ಥಹಳ್ಳಿ ಶಿವಶಂಕರ ಭಟ್, ಸಿದ್ದಾಪುರ ಸಂಜೀವ ಕೊಠಾರಿ, ಸೀತೂರು ಅನಂತಪದ್ಮನಾಭ ರಾವ್, ಕವ್ವಾಳೆ ಗಣಪತಿ ರಾಮಚಂದ್ರ ಭಾಗ್ವತ, ಮಂದಾರ್ತಿ ರಘುರಾಮ ಮಡಿವಾಳ, ಕೋಡಿ ವಿಶ್ವನಾಥ ಗಾಣಿಗ, ಸಿದ್ದಾಪುರ ಅಶೋಕ್ ಭಟ್, ಗುಣವಂತೆ ಸುಬ್ರಾಯ ನಾರಾಯಣ ಭಂಡಾರಿ, ಚೋರಾಡಿ ವಿಠಲ ಕುಲಾಲ್, ಎರ್ಮಾಳು ವಾಸುದೇವ ರಾವ್, ಈಚಲಕೊಪ್ಪ ಪ್ರಭಾಕರ ಹೆಗಡೆ, ಮಧೂರು ರಾಧಾಕೃಷ್ಣ ನಾವಡ, ಪಡುಬಿದ್ರೆ ರತ್ನಾಕರ ಆಚಾರ್ಯ, ಗುಂಡಿಮಜಲು ಗೋಪಾಲ ಭಟ್, ಇಡುವಾಣಿ ತ್ರ್ಯಂಬಕ ಹೆಗಡೆ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ಕಾಯರ್ತ್ತಡ್ಕ ವಸಂತ ಗೌಡ, ಶ್ರೀಧರ ಪಂಜಾಜೆ ಈ 21 ಕಲಾವಿದರನ್ನು ತಲಾ ರೂ. 20 ಸಾವಿರ ನಗದು ಸಹಿತ ಫಲಕ ನೀಡಿ ಸಂಮಾನಿಸಲಾಯಿತು.


ಶ್ರೀ ಸ್ವರ್ಣವಲ್ಲೀ ಮಠದ ಕೃಪಾಶ್ರಯದ ಯಕ್ಷಶಾಲ್ಮಲಾ ಸಂಸ್ಥೆಗೆ ಶ್ರೀ ವಿಶ್ವೇಶತೀರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ರೂ. 50 ಸಾವಿರ ಮತ್ತು ಫಲಕವನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಸೋಂದಾ ನಾಗರಾಜ ಜೋಶಿ ಅವರು ಪ್ರಶಸ್ತಿ ಸ್ವೀಕರಿಸಿದರು.

ಯಕ್ಷಗಾನ ಕಲಾರಂಗದ ಹಿರಿಯ ಕಾರ್ಯಕರ್ತರಾದ ಮುದ್ರಾಡಿ ವಿಜಯಕುಮಾರ್ ಇವರಿಗೆ ಬೆಳ್ಳಿಯ ಹರಿವಾಣದಲ್ಲಿ ಫಲವಸ್ತು ನೀಡಿ ‘ಯಕ್ಷ ಚೇತನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.


ಇತ್ತೀಚಿಗೆ ನಿಧನರಾದ ಸಿಗಂಧೂರು ಮೇಳದ
ಭಾಗವತ ರಾಮಚಂದ್ರ ಜಿ. ನಾಯ್ಕ್ ಅವರ ಪತ್ನಿ ಗೀತಾ ಆರ್. ನಾಯ್ಕ್ ಅವರಿಗೆ ರೂ. 50 ಸಾವಿರ ಸಾಂತ್ವನ ನಿಧಿ ನೀಡಲಾಯಿತು.


ಕಟೀಲು ದೇಗುಲದ ಅನುವಂಶಿಕ ಪ್ರಧಾನ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ. ಕಮಲಾದೇವಿಪ್ರಸಾದ ಆಸ್ರಣ್ಣ ಶ್ರೀಹರಿನಾರಾಯಣದಾಸ ಆಸ್ರಣ್ಣ ಹಾಗೂ ಕಲ್ಲಾಡಿ ದೇವೀಪ್ರಸಾದ ಶೆಟ್ಟರನ್ನು ಗೌರವಿಸಲಾಯಿತು. ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಉಪಸ್ಥಿತರಿದ್ದರು.


ಸುವರ್ಣ ಪ್ರತಿಷ್ಠಾನದ ಪ್ರಭಾಕರ ಸುವರ್ಣ, ನಮ್ಮ ಕುಡ್ಲದ ಲೀಲಾಕ್ಷ ಬಿ. ಕರ್ಕೇರ, ಎಂ. ಕೆ. ಭಟ್ ಕಡತೋಕ, ಕೆ. ಸದಾಶಿವ ಭಟ್ ಅಭ್ಯಾಗತರಾಗಿ ಪಾಲ್ಗೊಡಿದ್ದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಪಿ.ಕಿಷನ್ ಹೆಗ್ಡೆ, ವಿ.ಜಿ.ಶೆಟ್ಟಿ ಸ್ವಾಮೀಜಿಯವರಿಗೆ ಫಲ-ಪುಷ್ಪ ಸಮರ್ಪಿಸಿದರು.

ಜೊತೆ ಕಾರ್ಯದರ್ಶಿ ನಾರಾಯಣ ಎಂ ಹೆಗಡೆ ಸ್ಮರಣೀಯರ ಮತ್ತು ಗೌರವಾನ್ವಿತರ ಕುರಿತು ತಿಳಿಸಿದರು. ಸನ್ಮಾನ್ಯರ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.


ಸಭೆಯ ಪೂರ್ವದಲ್ಲಿ ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ವಿದ್ಯಾರ್ಥಿಗಳಿಂದ ‘ಶಶಿಪ್ರಭಾ ಪರಿಣಯ’ ಬಡಗುತಿಟ್ಟು ಯಕ್ಷಗಾನ ಪ್ರದರ್ಶನಗೊಂಡಿತು. ಬಳಿಕ ತೆಂಕು-ಬಡಗು- ಕರ್ನಾಟಕ ಶಾಸ್ತ್ರೀಯ ಸಂಗೀತ ಇವುಗಳ ‘ರಾಗ ಸಂಯೋಗ ‘ ಮತ್ತು ತೆಂಕುತಿಟ್ಟು ಕಲಾವಿದರಿಂದ,’ಶ್ರೀ ಮನೋಹರ ಸ್ವಾಮಿ ಪರಾಕು’ ಯಕ್ಷಗಾನ ರೂಪಕ ಪ್ರಸ್ತುತಗೊಂಡಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments