ಭಾರತ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಅದಿತಿ ಉರಾಳ
ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಭೇತಿ ಕೇಂದ್ರ ನಡೆಸಿದ 2020-2021 ರ ಸಾಲಿನ ಭಾರತದ ಯುವ ಪ್ರತಿಭಾ ಶೋಧದಲ್ಲಿ ಬೆಂಗಳೂರಿನ ಜಾನಪದ ಹಾಗೂ ಯಕ್ಷಗಾನ ಕಲಾವಿದೆ ಅದಿತಿ ಉರಾಳ ಜಾನಪದ ರಂಗಭೂಮಿ(ಯಕ್ಷಗಾನ) ಯುವ ಪ್ರತಿಭೆ ವಿದ್ಯಾರ್ಥಿ ವೇತನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇವರು ಮೂಲತಃ ಕುಂದಾಪುರದ ಕೋಟ ಗ್ರಾಮದ ಉರಾಳ ಕುಟುಂಬದವರಾಗಿದ್ದು ಪ್ರಸಿದ್ಧ ಯಕ್ಷಗಾನ,ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶಕರು ಆದ ಡಾ.ರಾಧಾಕೃಷ್ಣ ಉರಾಳ ಹಾಗೂ ಶಿಕ್ಷಕಿ ಮಮತ ಉರಾಳರ ಮಗಳು.
ಇವರು ಎಂ ಎ ಪದವಿ ವ್ಯಾಸಂಗ ಮಾಡುತ್ತಿದ್ದು ಜಾನಪದ,ರಂಗಭೂಮಿ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ ಅಲ್ಲದೇ ಡಾ.ರಾಧಾಕೃಷ್ಣ ಉರಾಳರ ಹಾಗೂ ಖ್ಯಾತ ಯಕ್ಷಗಾನ ಕಲಾವಿದ ಭರತ್ ರಾಜ್ ಪರ್ಕಳರ ನಿರ್ದೇಶನದ ಕೃಷ್ಣ ಪಾರಿಜಾತ,ಸುದರ್ಶನ ವಿಜಯ,ವೀರ ಬರ್ಬರೀಕ ಹೀಗೆ ಹಲವಾರು ಯಕ್ಷಗಾನ ಪ್ರಸಂಗಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಜನ ಮೆಚ್ಚುಗೆಯನ್ನೂ ಗಳಿಸಿದ್ದಾರೆ.
ಈ ವಿದ್ಯಾರ್ಥಿ ವೇತನಕ್ಕೆ ಭಾಜನರಾದ ಇವರನ್ನು ಕಲಾಕದಂಬ ಆರ್ಟ್ ಸೆಂಟರ್,ಕರಬ ಪ್ರತಿಷ್ಠಾನ ಹಾಗೂ ಅರ್ಬನ್ ಕಲಾ ಸ್ಟುಡಿಯೋ ಅಭಿನಂದಿಸಿದೆ.
