Friday, September 20, 2024
Homeಸುದ್ದಿಹಿರಿಯರ ಸೇವಾ ಪ್ರತಿಷ್ಠಾನದ ಕಾರ್ಯಗಳಿಗೆ ಬೆಂಬಲ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ

ಹಿರಿಯರ ಸೇವಾ ಪ್ರತಿಷ್ಠಾನದ ಕಾರ್ಯಗಳಿಗೆ ಬೆಂಬಲ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ

ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಧರ್ಮದ ಪಥದಲ್ಲಿ  ನಡೆಯಲು ಹಿರಿಯರ ಮಾರ್ಗದರ್ಶನ ಅತ್ಯಗತ್ಯ. ಹಿರಿಯರ ಸೇವಾ ಪ್ರತಿಷ್ಠಾನ ಈಗಾಗಲೇ ಕೈಗೊಂಡಿರುವ ಕಾರ್ಯಕ್ರಮಗಳು ಸಾಮಾಜಿಕ ಪರಿವರ್ತನೆಗೆ ಕೊಡುಗೆಯನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಕಾಸರಗೋಡು ಜಿಲ್ಲಾ ಹಿರಿಯರ ಸಮಾವೇಶವನ್ನು ಏರ್ಪಡಿಸಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಪ್ರಯತ್ನಿಸುವುದಾಗಿ ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ತಿಳಿಸಿದರು.

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ(ರಿ) ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯನ್ನು ಎಡನೀರು ಪ್ರೌಢಶಾಲಾ ಸಭಾಂಗಣದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಯಾವುದೇ ಉತ್ತಮ ವಿಚಾರ ಮೂಡುವುದು ಒಬ್ಬನ ಮನಸ್ಸಿನಲ್ಲಿ. ಸಜ್ಜನರ ಸಂಘಟನೆಯ ಕೆಲಸವನ್ನು ಹಿರಿಯರ ಸೇವಾ ಪ್ರತಿಷ್ಠಾನ ಮಾಡುತ್ತಿದ್ದು ಶಂಕರಾಚಾರ್ಯ ರಾಮಾನುಜಚಾರ್ಯ ವಿವೇಕಾನಂದ, ಭಗತ್ ಸಿಂಗ್ ಮೊದಲಾದವರು ಅತ್ಯಂತ ಕಿರಿವಯಸ್ಸಿನಲ್ಲಿ ಅಪೂರ್ವ ಸಾಧನೆ ಮಾಡಿದವರಾಗಿದ್ದು ಅವರ ಕಾರ್ಯಗಳಿಂದ ನಾವು ಪ್ರೇರಣೆಯನ್ನು ಪಡೆಯಬೇಕೆಂದು ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಕೆ. ಬಾಲಕೃಷ್ಣ ಭಟ್ ಸುರತ್ಕಲ್ ತಿಳಿಸಿದರು .

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಗೌರವಾಧ್ಯಕ್ಷ  ಪ್ರೊ.ಎ.ವಿ ನಾರಾಯಣ ಮಾತನಾಡಿ ಹಿರಿಯರ ಸಂಘಟನೆಯು ಭಾರತೀಯ ಸಂಸ್ಕೃತಿ ಮತ್ತು ಕೌಟುಂಬಿಕ ಮೌಲ್ಯಗಳ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು.

ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳಾದ ಬಾಲಕೃಷ್ಣ ಶೆಟ್ಟಿ, ಮಂಗಳೂರು ,ಭರತ್ ಕೆ ಮಂಗಳೂರು, ಶಿವಕುಮಾರ್, ಕೃಷ್ಣಶರ್ಮ ಅನಾರು, ಲೋಕೇಶ್ ಹೆಗ್ಡೆ ಪುತ್ತೂರು, ಚಂದ್ರಶೇಖರ ಆಳ್ವ ಪಡುಮಲೆ ಪ್ರಗತಿಯ ಮಾಹಿತಿಯನ್ನು ನೀಡಿದರು. 

ಯುವ ಜನತೆಗೆ ಮಾರ್ಗದರ್ಶನ ನೀಡುವ  ಸಂಸ್ಕಾರ ಶಿಬಿರಗಳನ್ನು ನಡೆಸಲು ಉದ್ದೇಶಿಸಲಾಗಿದೆಯೆಂದು ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ತಿಳಿಸಿದರು. 

ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ವತ್ಸಲಾ ರಾಜ್ನಿ ಯವರಿಗೆ ಮಂಗಳಾದೇವಿ ಘಟಕದ ಉಪಾಧ್ಯಕ್ಷ ಮತ್ತು ಭಜನಕಾರರಾದ ಭರತ್. ಕೆ ಅವರು ಹಸ್ತಾಕ್ಷರದಿಂದ ಬರೆದ 4000 ಕ್ಕಿಂತಲೂ ಹೆಚ್ಚು ಭಜನೆಗಳ ಸಂಗ್ರಹ ಪುಸ್ತಕವನ್ನು  ಶ್ರಿ ಸ್ವಾಮೀಜಿಯವರ ಮೂಲಕ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಗಮಕ ಕಾರ್ಯಕ್ರಮವನ್ನು ನಡೆಸಿಕೊಟ್ಟ ಪ್ರೊ. ಮಧೂರು ಮೋಹನ ಕಲ್ಲೂರಾಯ, ಡಾ. ವಾರಿಜಾ ನೀರ್ಬೈಲು ಮತ್ತು ಪುತ್ತೂರು ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಆಯ್ಕೆಯಾದ ಲೋಕೇಶ್ ಹೆಗ್ಡೆಯವರನ್ನು ಸ್ವಾಮೀಜಿಯವರು ಗೌರವಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು  ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ  ಪ್ರತಿಷ್ಠಾನದ ಉದ್ದೇಶಗಳನ್ನು ಸಾಧಿಸಲು ಪದಾಧಿಕಾರಿಗಳು ಬದ್ಧತೆಯಿಂದ  ಶ್ರಮಿಸಬೇಕೆಂದು ತಿಳಿಸಿದರು.

ಪ್ರೊ .ವೇದವ್ಯಾಸ ರಾಮಕುಂಜ  ಪ್ರಾರ್ಥಿಸಿದರು. ಪ್ರತಿಷ್ಠಾನದ ಸಹ ಸಂಚಾಲಕ  ಭಾಸ್ಕರ್ ಬಾರ್ಯ ಸ್ವಾಗತಿಸಿ ಕಲಾವಿದ ಗುಂಡ್ಯಡ್ಕ ಈಶ್ವರ ಭಟ್ ವಂದಿಸಿದರು. ವೆಂಕಟ್ ಭಟ್ ಎಡನೀರು ಕಾರ್ಯಕ್ರಮ ಸಂಯೋಜನೆಗೆ ಸಹಕರಿಸಿದರು . ಡಾ. ಬಿ.ಎನ್. ಮಹಾಲಿಂಗ ಭಟ್ ಮತ್ತು ದಿವಾಕರ ಆಚಾರ್ಯ  ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments