
ನಿನ್ನೆ ದಿನಾಂಕ 22.12.2022ರ ಗುರುವಾರ ರಾತ್ರಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನವೊಂದರಲ್ಲಿ ಕಟೀಲು ಮೇಳದ ಯಕ್ಷಗಾನ ಕಲಾವಿದರೋರ್ವರು ರಂಗಸ್ಥಳದಲ್ಲಿದ್ದಂತೆಯೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.
ಕಟೀಲು ಮೇಳದ ಗುರುವಪ್ಪ ಬಾಯಾರು ಅವರು ಶಿಶುಪಾಲನ ವೇಷದಲ್ಲಿ ರಂಗದಲ್ಲಿ ಪ್ರದರ್ಶನ ನೀಡುತ್ತಿದ್ದರು. ಕಟೀಲಿನ ಸರಸ್ವತಿ ಸದನದಲ್ಲಿ ನಿನ್ನೆ ಕಟೀಲು ನಾಲ್ಕನೇ ಮೇಳದ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು.
ತ್ರಿಜನ್ಮ ಮೋಕ್ಷ ಆಟದ ಪ್ರದರ್ಶನದ ಮುಕ್ತಾಯದ ಸನ್ನಿವೇಶದಲ್ಲಿ ಅಗ್ರಪೂಜೆ ಪ್ರಸಂಗದಲ್ಲಿ ಭೀಮನ ವೇಷಧಾರಿ ಕುಣಿಯುತ್ತಿದ್ದಾಗ ಶಿಶಿಪಾಲನ ಪಾತ್ರ ವಹಿಸಿದ್ದ ಗುರುವಪ್ಪ ಬಾಯಾರು ಅವರು ಕುಸಿದು ರಂಗಸ್ಥಳದಿಂದ ಕೆಳಕ್ಕೆ ಬಿದ್ದಿದ್ದಾರೆ.
ತಕ್ಷಣ ಅವರನ್ನು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆ ಮೊದಲೇ ಅವರು ನಿಧನರಾಗಿದ್ದರು ಎಂದು ತಿಳಿದುಬಂದಿದೆ.