Monday, July 1, 2024
Homeಸುದ್ದಿಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ: "ಗುರಿ ಸಾಧನೆಗೆ ಶ್ರಮಿಸಿದಾಗ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು"...

ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ: “ಗುರಿ ಸಾಧನೆಗೆ ಶ್ರಮಿಸಿದಾಗ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು” – ಆದರ್ಶ ಚೊಕ್ಕಾಡಿ

ಪುತ್ತೂರು: ಇತಿಹಾಸಕಾರ ಆಗುವುದಕ್ಕಿಂತ ಇತಿಹಾಸವನ್ನು ಸೃಷ್ಟಿ ಮಾಡುವುದು ಮುಖ್ಯ. ಅಂತಹ ಸಾಧನೆಯನ್ನು ಸಾಧ್ಯ ಮಾಡಿಕೊಳ್ಳಬೇಕಿದ್ದರೆ ನಮ್ಮಲ್ಲಿ ನಮಗೆ ನಂಬಿಕೆ, ಮಾಡುವ ಕಾರ್ಯದಲ್ಲಿ ಶ್ರದ್ಧೆ ಅಗತ್ಯ. ಭದ್ರವಾದ ಆತ್ಮವಿಶ್ವಾಸವನ್ನು ಹೊಂದಿದ್ದರೆ ನಾವು ಏನು ಬೇಕಾದರೂ ಸಾಧಿಸಬಹುದು. ವಿದ್ಯಾರ್ಥಿಗಳು ಕೇವಲ ಗುರಿ ತಲುಪುವ ಉದ್ದೇಶ ಹೊಂದದೆ ಉನ್ನತ ಸಾಧನೆ ಮಾಡುವ ಗುರಿ ಇರಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ವಿಟ್ಲ ವಿಠಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಹೇಳಿದರು.


ಅವರು ನಗರದ ಬಪ್ಪಳಿಗೆಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಮಹಾವಿದ್ಯಾಲಯದ 2022-23ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.


ಇಂದಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಕನಸನ್ನು ಮೊಬೈಲ್ ಕಸಿದುಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ನಮ್ಮ ಆಲೋಚನಾ ಸಾಮರ್ಥ್ಯವೂ ಈಗ ಕಡಿಮೆಯಾಗುತ್ತಿದೆ. ಯಾವುದೇ ಕೆಲಸಗಳನ್ನು ಸರಿಯಾದ ಯೋಚನೆ – ಯೋಜನೆಯೊಂದಿಗೆ ಮಾಡುವುದು ಅಗತ್ಯ. ಕೆಲಸದಲ್ಲಿ ನಂಬಿಕೆಯೊ0ದಿಗೆ ಸಮಯಪ್ರಜ್ಞೆ ಅಳವಡಿಸಿಕೊಂಡಾಗ ಅಸಾಧ್ಯವಾದುದನ್ನೂ ಸಾಧಿಸಲು ಸಾಧ್ಯ ಎಂದರು.


ಸಾಧನೆಗಳು ಒಂದೇ ಬಾರಿಗೆ ಅನಾವರಣಗೊಳ್ಳಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಪಡೆಯುವ ನಾಯಕತ್ವ ಗುಣಗಳು ಮುಂದೊ0ದು ದಿನ ಸಮಾಜದಲ್ಲಿ ದೊಡ್ಡ ಮಟ್ಟದ ನಾಯಕರಾಗಿ ಹೊರಹೊಮ್ಮಲು ಸಹಕಾರಿಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿ ದಿಸೆಯಲ್ಲಿ ಲಭಿಸುವ ವಿದ್ಯಾರ್ಥಿ ಸಂಘದ0ತಹಾ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ದೇಶಕ್ಕೆ ಭ್ರಷ್ಟಾಚಾರ ರಹಿತ, ಪ್ರಾಮಾಣಿಕ ಹಾಗೂ ಜನಪರ ಕಾರ್ಯ ನಿರ್ವಹಿಸುವ ಪ್ರಬುದ್ಧ ಯುವ ನಾಯಕರ ಅವಶ್ಯಕತೆಯಿದೆ. ವಿದ್ಯಾವಂತರು ರಾಜಕೀಯ ಪ್ರವೇಶಿಸಿ ಸಮಾಜ ಸರಿಪಡಿಸುವ ಜವಾಬ್ದಾರಿ ವಹಿಸಿಕೊಂಡಾಗ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿ ಸಂಘ ಎನ್ನುವುದು ಭವಿಷ್ಯದಲ್ಲಿ ಉತ್ತಮ ನಾಯಕರಾಗಲು ಇರುವ ಭದ್ರ ತಳಹದಿಯಾಗಿದೆ ಎಂದರು.


ಸಂಸ್ಕೃತದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ್ದು ವಿಶೇಷವಾಗಿತ್ತು. ನೂತನ ನಾಯಕರಿಗೆ ಅತಿಥಿಗಳು ಹಾಗೂ ಕಾರ್ಯಕ್ರಮದ ಅಧ್ಯಕ್ಷರು ಸಂಸ್ಥೆಯ ಧ್ವಜ ಹಸ್ತಾಂತರ ಮಾಡಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಯನಾ, ಕಾರ್ಯದರ್ಶಿ ಭರತ್, ಅಂತಿಮ ವಿಜ್ಞಾನ ವಿಭಾಗದ ವರೇಣ್ಯಾ, ಅಂತಿಮ ಕಲಾ ವಿಭಾಗದ ಮೇಘಾ ಡಿ., ದ್ವಿತೀಯ ಕಲಾ ವಿಭಾಗದ ನವನೀತ್, ದ್ವಿತೀಯ ವಾಣಿಜ್ಯ ವಿಭಾಗದ ಲೇಖಾ, ಪ್ರಥಮ ಕಲಾ ವಿಭಾಗದ ವಿಕ್ರಂ ವಿ., ಪ್ರಥಮ ವಾಣಿಜ್ಯ ವಿಭಾಗದ ಶರಣ್ಯಾ ರೈ ಪ್ರಮಾಣ ವಚನ ಸ್ವೀಕರಿಸಿ, ಗುರುತು ಚೀಟಿಯನ್ನು ಪಡೆದುಕೊಂಡರು.

ಐಕ್ಯೂಎಸಿ ಘಟಕದ ಸಂಯೋಜಕ ಚಂದ್ರಕಾ0ತ ಗೋರೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾಲೇಜಿನ ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಯನ ವಂದಿಸಿದರು. ಕನ್ನಡ ಉಪನ್ಯಾಸಕ ಗಿರೀಶ್ ಭಟ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments