ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನ ಕೊಯ್ಯುರು ಆಶ್ರಯದಲ್ಲಿ ಶ್ರೀ ಪಂಚದುರ್ಗ ಯಕ್ಷಗಾನ ಕಲಾಸಂಘ ಕೊಯ್ಯುರು ಸಂಘಟಿಸಿದ ಯಕ್ಷಗಾನ ತಾಳಮದ್ದಲೆ ಪಂಚಾಹ 2022 ರ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಕೀರ್ತಿ ಶೇಷ ಯಕ್ಷ ಕವಿ ವಾಮನ ಪುರೋಹಿತರ ಸಂಸ್ಮರಣಾ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಕಲಾಪೋಷಕರಾದ ಶ್ರೀಶ ಮುಚ್ಚಿನ್ನಾಯ ಬೆಳ್ತಂಗಡಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಸಂಸ್ಮರಣೆ ಮತ್ತು ಸನ್ಮಾನ: ಸಂಸ್ಮರಣ ನುಡಿಗಳನ್ನಾಡಿದ ದಿವಾಕರ ಆಚಾರ್ಯ ಗೇರುಕಟ್ಟೆ ಪುರೋಹಿತರಾಗಿ ಮತ್ತು ಯಕ್ಷ ಕವಿಯಾಗಿ ವಾಮನಾಚಾರ್ಯರ ಸಾಧನೆಯನ್ನು ತಿಳಿಸಿ ಅವರ ಪ್ರಕಟಿತ ಕೃತಿಗಳಾದ ವೀರವರ್ಮ ವಿಜಯ ಮತ್ತು ಭಕ್ತಿ ಕುಸುಮಾಂಜಲಿಯು ಅವರ ಕೃತಿ ರಚನಾ ಸಾಮರ್ಥ್ಯಕ್ಕೆ ಕೈಗನ್ನಡಿಯಾಗಿದೆ ಎಂದರು.
ಹೇಮ ವಿಕ್ರಮ, ಮಾಣಿಕ್ಯ ಪ್ರಭಾ ವಿಜಯ ,ಶ್ರೀದೇವಿ ದುರ್ಗಾಂಬಿಕಾ ಮಹಾತ್ಮೆ, ಸೂರ್ಯದತ್ತ ಚರಿತ್ರೆ, ಶ್ರೀ ಕೊಯ್ಯುರು ಕ್ಷೇತ್ರ ಮಹಾತ್ಮೆ ಮೊದಲಾದ ಅಪ್ರಕಟಿತ ಪ್ರಸಂಗಗಳು ಪ್ರಕಾಶನಗೊಂಡರೆ ಕೊಯ್ಯೂರಿನಂತಹ ಗ್ರಾಮೀಣ ಪ್ರದೇಶವು ಯಕ್ಷಗಾನ ಕ್ಷೇತ್ರಕ್ಕೇ ದೊಡ್ಡ ಕೊಡುಗೆ ನೀಡಿದಂತಾಗುವುದೆಂದು ತಿಳಿಸಿದರು.
ವಾಮನ ಪುರೋಹಿತರ ಧರ್ಮಪತ್ನಿ ಶ್ರೀಮತಿ ಕುಸುಮ ಇವರನ್ನು ದೇವಳದ ಆಡಳಿತ ಮೊಕ್ತೇಸರ ಕೆ.ಬಿ .ಹರಿಶ್ಚಂದ್ರ ಬಳ್ಳಾಲ್ , ಪ್ರಧಾನ ಅರ್ಚಕರಾದ ಅಶೋಕ ಕುಮಾರ್ ಭಾಂಗಿನ್ನಾಯ ಮತ್ತು ಯಕ್ಷಗಾನ ಸಂಘದ ಅಧ್ಯಕ್ಷ ಉಮೇಶ್ ಆಚಾರ್ಯ ಕೋಡಿಯೇಲು ಸನ್ಮಾನಿಸಿದರು.


ವಾಮನ ಪುರೋಹಿತರ ಸಹೋದರ ಯಕ್ಷಗಾನ ಕವಿ ಚಂದ್ರಯ್ಯ ಆಚಾರ್ಯ ಪುರೋಹಿತ್ ಇವರನ್ನು ಗೌರವಿಸಲಾಯಿತು. ಪುರುಷೋತ್ತಮ್ ಆಚಾರ್ ಕನ್ನಾಜೆ ಸಂಸ್ಮರಣಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಗಣೇಶ್ ಭಟ್ ಕಾಂತಾಜೆ, ರವೀಂದ್ರನಾಥ ಗೌಡ, ಲೋಕೇಶ್ ಗೌಡ , ಪ್ರಕಾಶ್ ಪುರೋಹಿತ್ ವೇಣೂರು ಶಿವಪ್ರಸಾದ್ ಪುರೋಹಿತ ಸವಣಾಲು ಮತ್ತು ವಾಮನ ಪುರೋಹಿತರ ಬಂಧುಗಳು ಉಪಸ್ಥಿತರಿದ್ದರು. ಶಿಕ್ಷಕ ವಿಜಯಕುಮಾರ್ ಸ್ವಾಗತಿಸಿ ದಿನೇಶ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವೀರ ವೈಷ್ಣವ ತಾಳಮದ್ದಳೆ ಜರಗಿತು. ಭಾಗವತರಾಗಿ ರಮೇಶ್ ಭಟ್ ಪುತ್ತೂರು ಹಿಮ್ಮೇಳದಲ್ಲಿ ಜನಾರ್ಧನ ತೋಳ್ಪಾಡಿತ್ತಾಯ, ಶ್ರೇಯಸ್ ಪಾಳಂದೆ, ವಿಶ್ವನಾಥ ಗೌಡ ಪಾಂಬೇಲ್ ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್ ,ನಾ. ಕಾರಂತ ಪೆರಾಜೆ, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ದಿನೇಶ ಶರ್ಮ ಕೊಯ್ಯುರು ಭಾಗವಹಿಸಿದ್ದರು.
