Friday, September 20, 2024
Homeಯಕ್ಷಗಾನತೆಂಕುತಿಟ್ಟಿನ ಯುವ ಮದ್ದಳೆಗಾರ ಚಿದಾನಂದ ಅನಾರೋಗ್ಯದಿಂದ ನಿಧನ 

ತೆಂಕುತಿಟ್ಟಿನ ಯುವ ಮದ್ದಳೆಗಾರ ಚಿದಾನಂದ ಅನಾರೋಗ್ಯದಿಂದ ನಿಧನ 

ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶವತಾರ ಯಕ್ಷಗಾನ ಮಂಡಳಿಯಲ್ಲಿ ಹಿಮ್ಮೇಳ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಯುವ ಮದ್ದಳೆಗಾರ ಚಿದಾನಂದ (31) ಅಕಾಲಿಕವಾಗಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಚಿದಾನಂದ ಅವರು ಕಳೆದ ಕೆಲವು ದಿನಗಳಿಂದ ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ಸಂಜೆ ಕಾಯಿಲೆ ಉಲ್ಬಣಗೊಂಡು ಚಿಕಿತ್ಸೆ ಫಲಕಾರಿಯಾಗದೆ ದೈವಾಧೀನರಾದರು.

ಚಿದಾನಂದರವರು ಜನಿಸಿದ್ದು ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಕುದ್ಕುಳಿಯಲ್ಲಿ. ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ವಾಸವಾಗಿದ್ದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ 15 ವರ್ಷಕ್ಕೂ ಹೆಚ್ಚು ವರ್ಷಗಳ ಕಾಲ ಮದ್ದಳೆಗಾರರಾಗಿ ಸೇವೆ ಸಲ್ಲಿಸಿದ್ದ ಇವರು ಭಾಗವತಿಕೆ, ನಾಟ್ಯವನ್ನೂ ಬಲ್ಲವರು.

ಖ್ಯಾತ ಮದ್ದಳೆಗಾರರಾದ ಕುಮಾರ ಸುಬ್ರಹ್ಮಣ್ಯ ಭಟ್ ವಳಕ್ಕುಂಜ ಇವರ ಗರಡಿಯಲ್ಲಿ ಪಳಗಿದ್ದ ಚಿದಾನಂದ ಅವರು ಭರವಸೆಯ ಉದಯೋನ್ಮುಖ ಕಲಾವಿದರಾಗಿದ್ದರು.

ಅಕಾಲ ಮೃತ್ಯುವಶರಾದ ಚಿದಾನಂದ ಅವರು ಸಹೋದರ, ಸಹೋದರಿ ಮತ್ತು ಅನೇಕ ಯಕ್ಷಗಾನ ಅಭಿಮಾನಿಗಳನ್ನು ಅಗಲಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments