ಕೆ ಎಸ್ ಆರ್ ಟಿ ಸಿ ಐರಾವತ ಬಸ್ ಮತ್ತು ಟೆಂಪೋ ಪರಸ್ಪರ ಢಿಕ್ಕಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಎಂಬಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಈ ಭೀಕರ ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಬಸ್ ಕಾರವಾರದಿಂದ ಮಂಗಳೂರಿನ ಕಡೆಗೆ ಬರುತ್ತಿತ್ತು.
ಟೆಂಪೋ ಕೂಡಾ ಅದೇ ದಿಕ್ಕಿಗೆ ಹೋಗುತ್ತಿದ್ದರೂ ಡಿಕ್ಕಿ ಸಂಭವಿಸಿದೆ. ಟೆಂಪೋ ಹಿಂಬದಿಗೆ ಬಸ್ ಗುದ್ದಿದೆ ಎಂದು ಹೇಳಲಾಗುತ್ತಿದೆ. ಟೆಂಪೋ ಅಚಾನಕ್ ಆಗಿ ಬ್ರೇಕ್ ಹಾಕಿದ್ದರಿಂದ ಈ ಢಿಕ್ಕಿ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಬಸ್ಸಿನಲ್ಲಿ 50 ಜನರು ಪ್ರಯಾಣಿಸುತ್ತಿದ್ದರು. ಬಸ್ ನ ಎದುರಿನ ಸೀಟಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಗಾಯಾಳುಗಳು ಭಟ್ಕಳದ ಸರಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಮುರುಡೇಶ್ವರ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.
