ಪುತ್ತೂರು: ಭಾರತೀಯ ಕಲಾ ಪ್ರಪಂಚ ಅದ್ಭುತವಾದದ್ದು. ಅದನ್ನು ಮತ್ತಷ್ಟು ಬೆಳೆಸುವ, ವಿಸ್ತರಿಸುವ ಕಾರ್ಯ ಆಗಬೇಕು. ತನ್ಮೂಲಕ ಅರಿವಿನ ಪ್ರಸರಣ ಕಾರ್ಯ ನಡೆಯಬೇಕಿದೆ. ಕಲೆ ಕೇವಲ ಪ್ರದರ್ಶನಕ್ಕಷ್ಟೇ ಸೀಮಿತವಾಗದೆ ಆ ಕುರಿತಾದ ಜ್ಞಾನಪ್ರಸಾರಕ್ಕೂ ಮೂಲವಾಗಬೇಕು ಎಂದು ವಿಮರ್ಶಕ, ಕಲಾವಿದ ಪ್ರೊ.ಎಂ.ಪ್ರಭಾಕರ ಜೋಶಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇಯ ಆವರಣದಲ್ಲಿ ನೂತನಾಗಿ ನಿರ್ಮಿಸಲಾಗಿರುವ ಶ್ರೀ ಶಂಕರ ಸಭಾಭವನ ಹಾಗೂ ಶ್ರೀ ಲಲಿತಾಂಬಿಕಾ ವೇದಿಕೆಯನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.
ಅಂಕವಷ್ಟೇ ಬದುಕಿನಲ್ಲಿ ಮುಖ್ಯವಲ್ಲ. ಕಡಿಮೆ ಅಂಕ ಗಳಿಸಿದವರೂ ಬದುಕಿನಲ್ಲಿ ಅಸಾಮಾನ್ಯ ಸಾಧನೆ ಮಾಡಿದ ಹಲವಾರು ಉದಾಹರಣೆಗಳಿವೆ. ವಿದ್ಯಾರ್ಥಿಗಳು ಓದಿದ ಸಂಸ್ಥೆಯನ್ನು ಮರೆಯಬಾರದು. ಓದಿದ ಸಂಸ್ಥೆಯ ಹೆಸರಿನೊಂದಿಗೆ ತಮ್ಮನ್ನು ತಾವು ಪರಿಚಯಿಸಿಕೊಳ್ಳುವಂತಾಗಬೇಕು ಮಾತ್ರವಲ್ಲದೆ ಸಂಸ್ಥೆಯಿ0ದ ಹೊರಹೋಗುವಾಗ ಸಮಾಜಪರ ಚಿಂತನೆಗಳನ್ನು ತಮ್ಮೊಡನೆ ಒಯ್ಯಬೇಕು. ಆಗ ಅಧ್ಯಯನ ಮಾಡಿದ್ದಕ್ಕೆ ಸಾರ್ಥಕತೆ ದೊರಕುವುದಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಶೃಂಗೇರಿ ಜಗದ್ಗುರುಗಳ ಪ್ರೇರಣೆ ಹಾಗೂ ಆಶೀರ್ವಾದಗಳೊಂದಿಗೆ ಅಂಬಿಕಾ ಸಂಸ್ಥೆಗಳು ಬೆಳೆದಿವೆ. ಶ್ರೀ ಲಲಿತಾಂಬಿಕಾ ವೇದಿಕೆ ಅನೇಕ ಕಲೆ, ಸಾಹಿತ್ಯಗಳಿಗೆ ಆಶ್ರಯ ನೀಡುವಂತಾಗಬೇಕು. ಋಣಾತ್ಮಕ ಶಕ್ತಿಗಳು ಕುಂದಿ ಧನಾತ್ಮಕ ಶಕ್ತಿ ವೇದಿಕೆಯಿಂದ ಪ್ರಸಾರವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಭಾಂಗಣದ ನಕಾಶೆ ರೂಪಿಸಿದ ಇಂಜಿನಿಯರ್ ಪ್ರಸನ್ನ ಭಟ್, ಮೇಲ್ಛಾವಣಿ ನಿರ್ಮಿಸಿದ ಪುತ್ತೂರಿನ ರವಿಕಿರಣ್ ಅವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಸುರೇಶ್ ಶೆಟ್ಟಿ, ಡಾ.ಎಂ.ಎಸ್.ಶೆಣೈ, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶೈಲೇಶ್, ಅಂಬಿಕಾ ವಿದ್ಯಾಲಯ ಸಿಬಿಎಸ್ಇಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ನಟ್ಟೋಜ ಕುಟುಂಬಸ್ಥೆ ಗಾಯತ್ರಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಶ್ರೀಕೃಷ್ಣ ನಟ್ಟೋಜ ಶಂಖನಾದಗೈದರು. ವಿದ್ಯಾರ್ಥಿಗಳಾದ ಮನು ಪರಮೇಶ್ವರ್ ಹಾಗೂ ಶಂಕರನಾರಾಯಣ ವೇದಘೋಷಗೈದರು. ಅಂಬಿಕಾ ವಿದ್ಯಾಲಯ ಸಿಬಿಎಸ್ಇಯ ಪ್ರಾಚಾರ್ಯೆ ಮಾಲತಿ ಡಿ ಸ್ವಾಗತಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ ವಂದಿಸಿದರು.
ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸಭಾಂಗಣದ ಎದುರಿನಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
