ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿ೦ಗ್ ಎಂಡ್ ಟೆಕ್ನಾಲಜಿಯಲ್ಲಿ ಮೆಗಾ ಕ್ಯಾಂಪಸ್ ನೇಮಕಾತಿ ಅಭಿಯಾನವನ್ನು ಸೆಪ್ಟೆಂಬರ್ 24 ಮತ್ತು 25 ರಂದು ಆಯೋಜಿಸಲಾಗಿದೆ. ಪ್ರತಿಷ್ಟಿತ ಕ್ಯಾಡೆನ್ಸ್ ಸಂಸ್ಥೆಗಾಗಿ ಈ ಅಭಿಯಾನವನ್ನು ಆಯೋಜಿಸಲಾಗಿದ್ದು. ವಿವಿಧ ಇಂಜಿನಿಯರಿ೦ಗ್ ಕಾಲೇಜುಗಳ 600ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೋರ್ ಕಂಪೆನಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶವನ್ನು ಕಲ್ಪಿಸುವುದಕ್ಕಾಗಿ ಆಯೋಜಿಸಲ್ಪಟ್ಟಿರುವ ಈ ಅಭಿಯಾನವು ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ.
2023ರಲ್ಲಿ ಅತ್ಯುತ್ತಮ ಶೈಕ್ಷಣಿಕ ದಾಖಲೆಗಳೊಂದಿಗೆ ಇಂಜಿನಿಯರಿ೦ಗ್ ಕೋರ್ಸನ್ನು ಪೂರ್ಣಗೊಳಿಸುವ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ.
ಕಾಲೇಜಿನ ಸೌಲಭ್ಯಗಳನ್ನು ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿರುವ ಕ್ಯಾಡೆನ್ಸ್ ಸಂಸ್ಥೆಯು ಈ ಮೆಗಾ ಅಭಿಯಾನವನ್ನು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿ೦ಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆಸುವಂತೆ ವಿನಂತಿಸಿಕೊ೦ಡಿತ್ತು. ಹಾಗಾಗಿ ಸುತ್ತಮುತ್ತಲ ಕಾಲೇಜುಗಳನ್ನು ಜತೆಗೆ ಸೇರಿಸಿಕೊಂಡು ಇದನ್ನು ಸಂಘಟಿಸಲಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನಿಟ್ಟೆ, ಸೈಂಟ್ ಜೋಸೆಫ್ ಎಂಜಿನಿಯರಿ೦ಗ್ ಕಾಲೇಜು, ಸಹ್ಯಾದ್ರಿ ಎಂಜಿನಿಯರಿ೦ಗ್ ಕಾಲೇಜು ಮುಂತಾದ 12 ಎಂಜಿನಿಯರಿ೦ಗ್ ಕಾಲೇಜುಗಳ ವಿದ್ಯಾರ್ಥಿಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದು ಸುಮಾರು 600 ವಿದ್ಯಾರ್ಥಿಗಳು ಈಗಾಗಲೇ ತಮ್ಮ ಹೆಸರನ್ನು ನೋಂದಾಯಿಸಿಕೊ೦ಡಿದ್ದಾರೆ. ಇದಕ್ಕೆ ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ.
ಒಂದೇ ಸಲಕ್ಕೆ 600 ಉದ್ಯೋಗಾಕಾಂಕ್ಷಿಗಳಿಗೆ ಪರೀಕ್ಷೆ ಮತ್ತು ಸಂದರ್ಶನವನ್ನು ನಡೆಸುವುದಕ್ಕೆ ಬೇಕಾದ ಸೌಲಭ್ಯಗಳ ಜತೆಗೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಲು ಸಕಲ ಸಿದ್ದತೆಗಳನ್ನು ಮಾಡಲಾಗಿದೆ ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ