ಅಕಾಲಿಕವಾಗಿ ನಿಧನ ಹೊಂದಿದ ಕಲಾವಿದ ಶಂಭುಕುಮಾರ್ ಕುಟುಂಬಕ್ಕೆ ನೆರವು
ಇತ್ತೀಚೆಗೆ ಅಕಾಲಿಕವಾಗಿ ನಿಧನ ಹೊಂದಿದ, ಕಟೀಲು ಮೇಳದ ಕಲಾವಿದ ಶಂಭುಕುಮಾರ್ ಕೊಡೆತ್ತೂರು ಅವರ ಪತ್ನಿ ಕವಿತಾ ಅವರಿಗೆ ಯಕ್ಷಗಾನ ಕಲಾರಂಗ [ರಿ.], ಉಡುಪಿ ಇದರ ವತಿಯಿಂದ ರೂ. 1 ಲಕ್ಷದ ಚೆಕ್ನ್ನು ವಿತರಿಸಲಾಯಿತು.
ಚೆಕ್ನ್ನು ಕವಿತಾರಿಗೆ ಹಸ್ತಾಂತರ ಮಾಡಿದ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಅವರು ಮಾತನಾಡಿ, ‘ಯಕ್ಷಗಾನ ಕಲೆ ನಮ್ಮೆಲ್ಲರ ಮನಸ್ಸಿಗೆ ಆನಂದಾನುಭೂತಿಯನ್ನು ನೀಡುತ್ತದೆ. ಆದರೆ, ಯಕ್ಷಗಾನ ಕಲಾವಿದರ ಬದುಕು ಕೆಲವೊಮ್ಮೆ ಅತಂತ್ರವಾಗಿರುತ್ತದೆ.
ಅದರಲ್ಲೂ ಪ್ರಸಿದ್ಧರ ಪಂಕ್ತಿಯಲ್ಲಿಲ್ಲದೆ ಪೋಷಕ ಕಲಾವಿದರಾಗಿ ಪ್ರದರ್ಶನದ ಯಶಸ್ಸಿಗೆ ಕಾರಣರಾಗುವ ಕಲಾವಿದರ ಪ್ರತಿಭೆಪ ರಿಗಣಿತವಾಗುವುದು ಕಡಿಮೆ. ಅಂಥವರ ಬದುಕಿನಲ್ಲಿ ಸಮಸ್ಯೆ ಉಂಟಾದಾಗ ನೆರವಾಗುವುದು ಸಮಾಜದ ಹೊಣೆ. ಯಕ್ಷಗಾನ ಕಲಾರಂಗವು ಸಾಮಾಜಿಕ ಹೊಣೆಯರಿತು ಯಕ್ಷಗಾನ ಕಲಾವಿದರಿಗೆ ಅವರ ಜೀವನದ ವಿವಿಧ ಸಂದರ್ಭಗಳಲ್ಲಿ ನೆರವಾಗುತ್ತ ಬಂದಿದೆ’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು, ‘ಯಕ್ಷಗಾನ ಕಲಾರಂಗವು ಕಲಾವಿದರಿಗಾಗಿ ‘ಯಕ್ಷನಿಧಿ’ಯಂಥ ಯೋಜನೆಯನ್ನು ಹಮ್ಮಿಕೊಂಡಿದೆ. ಕೆಲವು ಸಮಯದ ಹಿಂದೆ ಗುಂಪು ವಿಮೆ, ಅಪಘಾತ ವಿಮೆಗಳಂಥ ಸೌಲಭ್ಯಗಳನ್ನು ಹೊಂದಿದ್ದೆವು. ಆದರೆ, ಅದನ್ನು ನಿಭಾಯಿಸುವುದು ಸವಾಲಾಗಿದೆ.
ಹಾಗಾಗಿ, ಸಹೃದಯ ದಾನಿಗಳಿಂದ ನೆರವನ್ನು ಸಂಗ್ರಹಿಸಿ, ಕಷ್ಟಕಾಲದಲ್ಲಿ ಕಲಾವಿದರಿಗೆ ಅಥವಾ ಕಲಾವಿದರ ಕುಟುಂಬಕ್ಕೆ ನೆರವಾಗುವುದಕ್ಕೆ ಯಕ್ಷಗಾನ ಕಲಾರಂಗ ಮುಂದಾಗಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ನೂರಾರು ದಾನಿಗಳು ನೆರವಾದುದರಿಂದ ಕಲಾವಿದರ ಸಹಾಯಕ್ಕೆ ನಿಲ್ಲಲು ಸಾಧ್ಯವಾಯಿತು’ ಎಂದರು.
ಈ ಸಂದರ್ಭದಲ್ಲಿ ಕವಿತಾ ಅವರ ತೀರ್ಥರೂಪರಾದ ಧರ್ಣಪ್ಪ ಮೂಲ್ಯ, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಪಿ. ಕಿಶನ್ ಹೆಗ್ಡೆ, ಕೋಶಾಧಿಕಾರಿ ಮನೋಹರ್ ಕೆ., ಜತೆ ಕಾರ್ಯದರ್ಶಿ ನಾರಾಯಣ ಎಂ.ಹೆಗಡೆ, ಬಿ.ಭುವನಪ್ರಸಾದ್ ಹೆಗ್ಡೆ, ಪೃಥ್ವಿರಾಜ್ ಕವತ್ತಾರ್, ವಿದ್ಯಾಪ್ರಸಾದ್, ಕಿಶೋರ್ ಸಿ. ಉದ್ಯಾವರ್, ಗಣೇಶ್ ಬಹ್ಮಾವರ ಉಪಸ್ಥಿತರಿದ್ದರು.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ