ಉಜಿರೆ: ಬೆಳ್ತಂಗಡಿ ಕನ್ಯಾಡಿಯ ಯಕ್ಷಭಾರತಿ ಸಂಸ್ಥೆಯವರು ನಡೆಸಿಕೊಂಡು ಬರುತ್ತಿರುವ ವಾರ್ಷಿಕ ಕಾರ್ಯಕ್ರಮದಲ್ಲಿ ಯಕ್ಷಭಾರತಿ ಪ್ರಶಸ್ತಿ 2022 ನ್ನು ಕಳೆದ ಭಾನುವಾರ ಉಜಿರೆಯ ಜನಾರ್ದನ ದೇವಸ್ಥಾನದ ರಾಮಕೃಷ್ಣ ಸಭಾಂಗಣದಲ್ಲಿ ಆಡಳಿತ ಮೊಕ್ತೇಸರ ಯು.ಶರತ್ ಕೃಷ್ಣ ಪಡ್ವೆಣ್ಣಾಯರ ಅಧ್ಯಕ್ಷತೆಯಲ್ಲಿ ಕಾರ್ಕಳದ ಯಕ್ಷಗಾನ ನಾಟ್ಯ ಗುರು, ಸಂಘಟಕ ಕಾಂತಾವರ ಮಹಾವೀರ ಪಾಂಡಿಯವರಿಗೆ ನಗದು ಪುರಸ್ಕಾರದೊಂದಿಗೆ ನೀಡಲಾಯಿತು.
ಯಕ್ಷಗಾನ ಕಲಾವಿದರಾಗಿ ನಾಟ್ಯ ಗುರುಗಳಾಗಿ ಮತ್ತು ಕಲಾ ಸಂಘಟಕರಾಗಿ ,ಯಕ್ಷ ದೇಗುಲ ಕಾಂತಾವರದ ಸಂಸ್ಥಾಪಕರಾಗಿ ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಯಕ್ಷಗಾನದ ವಿವಿಧ ಆಯಾಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಮಹಾವೀರ ಪಾಂಡಿ ಅವರ ಹಲವು ಶಿಷ್ಯಂದಿರು ಹವ್ಯಾಸಿ ಮತ್ತು ವೃತ್ತಿಪರ ಕಲಾವಿದರಾಗಿ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ಯಕ್ಷಗಾನ ಕಲಾ ಪೋಷಕ ನಿವೃತ್ತ ಐಎಎಸ್ ಅಧಿಕಾರಿ ಡಾ. ಟಿ. ಶ್ಯಾಮ್ ಭಟ್ ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ರಾದ ರಾಘವೇಂದ್ರ ಬೈಪಡಿತ್ತಾಯ, ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಸಂಚಾಲಕ ಮಹೇಶ್ ಕನ್ಯಾಡಿ, ಧರ್ಮಸ್ಥಳದ ಹರಿದಾಸ್ ಗಾಂಬೀರ್, ಕಲಾವಿದ ಶಿತಿಕಂಠ ಭಟ್ ಉಜಿರೆ, ಶ್ರೀಮತಿ ಭವ್ಯ ಹೊಳ್ಳ, ಹಾಗೂ ಕಕ್ಕಿಂಜೆಯ ಮುರಲೀ ಕೃಷ್ಣ ಇರ್ವತ್ತಾಯ ಉಪಸ್ಥಿತರಿದ್ದರು.
ಯಕ್ಷಭಾರತಿ ಉಪಾಧ್ಯಕ್ಷ ಹರಿದಾಸ್ ಗಾಂಭೀರ್ ಅಭಿನಂದನಾ ನುಡಿಗಳನ್ನಾಡಿದರು. ಗುರುರಾಜ ಹೊಳ್ಳ ಬಾಯಾರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು. ಬಳಿಕ ಶ್ರೀ ಮಹಾಲಿಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ ಪುತ್ತೂರು ಇವರಿಂದ ತುಳಸಿ ಜಲಂದರ ಯಕ್ಷಗಾನ ಬಯಲಾಟ ಜರಗಿತು.