“ತೆಂಕುತಿಟ್ಟು ಯಕ್ಷಗಾನಕ್ಕೆ ಬೃಹತ್ ಕೊಡುಗೆ ಗಡಿನಾಡು ಕಾಸರಗೋಡು. ಪಾರ್ತಿಸುಬ್ಬನಿಂದ ಮೊದಲ್ಗೊಂಡು ಹಲವಾರು ಮಹನೀಯರು ಮಹಾನ್ ಕೊಡುಗೆ ನೀಡಿದವರೆ. ಯಾವ ಮೇಳವಾದರು ಹೆಚ್ಚಿನ ಕಲಾವಿದರು ಕಾಸರಗೋಡಿನವರೇ.
ಅಂತಹ ಪುಣ್ಯ ಭೂಮಿಯಲ್ಲಿ ಸಿರಿಬಾಗಿಲು ಪ್ರತಿಷ್ಠಾನ ಸಾಂಸ್ಕೃತಿಕ ಭವನ ರಚಿಸಿ ಕಲೆ- ಸಾಹಿತ್ಯಗಳ ಬೆಳವಣಿಗೆ ಪ್ರಯತ್ನಿಸುವುದು ಉತ್ತಮ ಕಾರ್ಯ, ಶ್ರೀ ಧರ್ಮಸ್ಥಳ ಮೇಳದಲ್ಲಿ ಹಿಂದಿನಿಂದಲೂ ಹೆಚ್ಚಿನ ಕಲಾವಿದರು ಗಡಿನಾಡಿನವರು” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ನಿವೃತ್ತ ಪಾರುಪತ್ಯಗಾರರಾದ, ಕಲಾಭಿಮಾನಿಗಳು- ಪೋಷಕರೂ ಆದ ಶ್ರೀ ಭುಜಬಲಿ ಧರ್ಮಸ್ಥಳ ಹೇಳಿದರು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಸಾರ್ವಜನಿಕ ಲೋಕಾರ್ಪಣೆಯ ವರೇಗೆ ನಡೆಯುವ ಕಲಾ ಸಾಂಸ್ಕೃತಿಕ ಸಾಹಿತ್ಯ ವೈಭವ ಎರಡನೇ ಕಾರ್ಯಕ್ರಮವನ್ನು ಶನಿವಾರ ಉಧ್ಘಾಟಿಸಿದರು. ಪರಮೇಶ್ವರ ಆಚಾರ್ಯ ಕಲಾ ಪ್ರತಿಷ್ಠಾನದಿಂದ ದಿ.ಪರಮೇಶ್ವರ ಆಚಾರ್ಯ ಸಂಸ್ಮರಣೆ ನಡೆಯಿತು.
ಹಿರಿಯ ಕಲಾವಿದರಾಗಿ ಯಕ್ಷಗಾನದ ಸರ್ವಾಂಗದ ಪರಿಣತ ಪರಮೇಶ್ವರ ಆಚಾರ್ಯರು ದೊಡ್ಡ ಕೊಡುಗೆ ನೀಡಿದ ಮಹನೀಯರು. ಎಂದು ಶ್ರೀ ಲಕ್ಮಣ ಪ್ರಭು ಕರಿಂಬಿಲ ನುಡಿದರು. ಆ ಬಳಿಕ ಯಕ್ಷಗಾನ ಹಟ್ಟಿಯಂಗಡಿ ರಾಮ ಭಟ್ಟ ವಿರಚಿತ ಅತಿಕಾಯ ಮೋಕ್ಷ ತಾಳಮದ್ದಳೆ ನಡೆಯಿತು.
ಅತಿಕಾಯನಾಗಿ ರಾಧಾಕೃಷ್ಣ ಕಲ್ಚಾರ್ ವಿಟ್ಲ, ರಾವಣನಾಗಿ ಪಕಳಕುಂಜ ಶ್ಯಾಮ್ ಭಟ್, ರಾವಣ ದೂತನಾಗಿ ಡಾ. ಬೇ. ಸಿ.ಗೋಪಾಲಕೃಷ್ಣ ಭಟ್ಟ , ಲಕ್ಮಣನಾಗಿ ಬಾಲಕೃಷ್ಣ ಆಚಾರ್ಯ ನೀರ್ಚಾಲ್, ವಿಭೀಷಣನಾಗಿ ವಿಷ್ಣು ಪ್ರಕಾಶ್ ಪೆರ್ವ, ರಾಮನಾಗಿ ಲಕ್ಮಣ ಪ್ರಭು ಕರಿಂಬಿಲ ಭಾಗವಹಿಸಿದರು.
ಸುರೇಶ ಆಚಾರ್ಯ ನೀರ್ಚಾಲ್, ವೆಂಕಟರಾಜ ಕುಂಠಿಕಾನ ಮಠ ಭಾಗವತರಾಗಿ, ಗೋಪಾಲಕೃಷ್ಣ ನಾವಡ ಮಧೂರು, ಮುರಳಿ ಮಾಧವ ಮಧೂರು ಹಿಮ್ಮೇಳದಲ್ಲಿ ಸಹಕರಿಸಿದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಸ್ವಾಗತಿಸಿ, ಜಗಧೀಶ ಕೂಡ್ಲು ನಿರೂಪಿಸಿದರು.
