ಉಡುಪಿ : ಬೆಂಗಳೂರಿನ ಖ್ಯಾತ ಉದ್ಯಮಿ ಹಾಗೂ ಸಂಶೋಧಕರಾದ ಶ್ರೀ ಎಚ್. ಎಸ್. ಶೆಟ್ಟಿಯವರು ಉಡುಪಿಯ ನಿಟ್ಟೂರು ಪ್ರೌಢಶಾಲೆಯ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಗಮನಿಸಿ, ತಮ್ಮ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ವತಿಯಿಂದ ಒ0ದು ಕೋಟಿಯ ದೇಣಿಗೆಯನ್ನು ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಶಾಲಾ ಸಭಾಭವನವನ್ನು ಹೆಗ್ಗುಂಜೆ ರಾಜೀವ ಶೆಟ್ಟಿ ಸಭಾಭವನವೆಂದು ಮರು ನಾಮಕರಣ ಮಾಡಿ, ಉದ್ಘಾಟಿಸುವ ಕಾರ್ಯಕ್ರಮ ಇದೇ ಆಗಸ್ಟ್ 01, 2022 ಸೋಮವಾರದಂದು ಅಪರಾಹ್ನ 3.30ಕ್ಕೆ ಜರಗಲಿದೆ.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಜರಗುವ ಕಾರ್ಯಕ್ರಮದಲ್ಲಿ ಉಡುಪಿ ಶಾಸಕರೂ ಹಾಗೂ ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರೂ ಆದ ಶ್ರಿ ಕೆ.ರಘುಪತಿ ಭಟ್ ಅವರು ಶುಭಾಶಂಸನೆಗೈಯಲಿರುವರು.
ಶ್ರೀ ಎಚ್.ಎಸ್. ಶೆಟ್ಟರು ಸಭಾಂಗಣ ಮತ್ತು ವೇದಿಕೆಯನ್ನು ಉದ್ಘಾಟಿಸಲಿರುವರು. ಅಭ್ಯಾಗತರಾಗಿ ಬೆಂಗಳೂರಿನ ವಿಜ್ಞಾನಿ ಡಾ. ರಾಜ ವಿಜಯಕುಮಾರ್ ಹಾಗೂ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಉಪಾಧ್ಯಕ್ಷರಾದ ಶ್ರೀ ಎಚ್. ನಾಗರಾಜ್ ಶೆಟ್ಟಿಯವರು ಪಾಲ್ಗೊಳ್ಳಲಿರುವರು.
ಇದೇ ಸಂದರ್ಭದಲ್ಲಿ ಶಾಲೆಯ ಹಳೆವಿದ್ಯಾರ್ಥಿಗಳು ಕೃತಜ್ಞತಾ ರೂಪದಲ್ಲಿ 10ನೇ ತರಗತಿಯ ವಿದ್ಯಾರ್ಥಿ ದೀಕ್ಷಿತ್ ನಾಯ್ಕ್ ಇವನಿಗೆ ಮನೆಯನ್ನು ನಿರ್ಮಿಸಿಕೊಡಲಿದ್ದಾರೆ.
ಜತೆಗೆ ಶಾಲೆಯ 8ನೇ ತರಗತಿಯ 12 ವಿದ್ಯಾರ್ಥಿಗಳಿಗೆ ಎಲ್.ಪಿ.ಜಿ ಗ್ಯಾಸ್ ಸಂಪರ್ಕವನ್ನು ಹಾಗೂ ಓರ್ವ ವಿದ್ಯಾರ್ಥಿಗೆ ಸೋಲಾರ್ ದೀಪವನ್ನು ನೀಡಲಿದ್ದಾರೆ.
ಸಭೆಯ ಪೂರ್ವದಲ್ಲಿ ಗುರು ಬನ್ನಂಜೆ ಸುವರ್ಣ ನಿರ್ದೇಶನದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ (ರಿ.) ವಿದ್ಯಾರ್ಥಿಗಳಿಂದ ಯಕ್ಷರೂಪಕ ಪ್ರಸ್ತುತಗೊಳ್ಳಲಿದೆ ಎಂದು ನಿಟ್ಟೂರು ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.