Saturday, October 5, 2024
Homeಯಕ್ಷಗಾನಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನ

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನ

ಸಿರಿಬಾಗಿಲು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಸಂಸ್ಥೆಯ ವತಿಯಿಂದ ಸುಮಾರು ಎರಡು ಕೋಟಿ ವೆಚ್ಚದಲ್ಲಿ ಸಿರಿಬಾಗಿಲಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ.

ಭವನವನ್ನು ಜೂನ್ ತಿಂಗಳಲ್ಲಿ ಅಧಿಕೃತವಾಗಿ ಲೋಕಾರ್ಪಣೆಗೈಯಲು ಸಿದ್ದತೆ ಆರಂಭಿಸಲಾಗಿದೆ. ಲೋಕಾರ್ಪಣೆ ಸಮಾರಂಭದ ಪೂರ್ವಬಾವಿಯಾಗಿ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಇತ್ತೀಚೆಗೆ ವೇದಮೂರ್ತಿ ವಾಸುದೇವ ಅಡಿಗ ಕುಂಬಳೆಯವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರಗಿತು.

ಮಹೇಶ್ವರಿ ಮಹಿಳಾ ಭಜನಾ ಮಂಡಳಿ ಮತ್ತು ಮಹಾದೇವ ಭಜನಾ ಸಂಘ ಸಿರಿಬಾಗಿಲು ತಂಡದಿಂದ, ಭಜನಾ ಕಾರ್ಯಕ್ರಮ,  ನಡೆಯಿತು. ಬಳಿಕ ಜರಗಿದ ಭವನ ಪ್ರವೇಶ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಲುವಾಗಿ ತೆಂಕುತಿಟ್ಟಿನ ಹಿರಿಯ ಹಿಮ್ಮೇಳ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹಾಗೂ ಹಿರಿಯ ಭಾಗವತ ಪುತ್ತಿಗೆ ರಘರಾಮ ಹೊಳ್ಳರ ನೇತೃತ್ವದಲ್ಲಿ ಪೂರ್ವರಂಗ ಕುಣಿತ ಜರಗಿತು.  

ಎಸ್ ಎನ್ ಭಟ್, ಉಪಾಸನಾ, ಕಿಶನ್ ಭಾಗವಹಿಸಿದ್ದರು. ಬಳಿಕ ಕು|ಕೀರ್ತಿ ಮೀಯಪದವು ಅವರಿಂದ ಭರತನಾಟ್ಯ, ಸಾಂದ್ರಾ ಕಾವುಮಠ ಅವರಿಂದ ಶಾಸ್ತ್ರೀಯ ಸಂಗೀತ.  ರಾಜೇಶ್ವರಿ, ರಾಧಾಮಣಿ ಬಳಗದವರಿಂದ ಭಜನೆ, ಕಾರ್ಯಕ್ರಮ ಜರಗಿತು. ರಾಜಾರಾಮ ರಾವ್ ಮೀಯಪದವು ಕಾರ್ಯಕ್ರಮ ನಿರ್ವಹಿಸಿದರು.

ಮೇ ಆರರಂದು ಧರ್ಮಸ್ಥಳ ಮೇಳದವರಿಂದ ಧರ್ಮಸ್ಥಳ  ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರತಿಷ್ಠಾನದ ಸೇವಾರ್ಥ ಜರಗಿತು. ಈ ಸಮಯದಲ್ಲಿ ಆಗಮಿಸಿದ ಶ್ರೀ ಶ್ರೀ ಶ್ರೀ ಸಚ್ಚಿದಾಂದ ಭಾರತಿ ಸ್ವಾಮೀಜಿ ಎಡನೀರು ಮಠ, ಶ್ರೀಶ್ರೀ ಮೋಹನದಾಸ ಸ್ವಾಮೀಜಿ ಮಾಣಿಲ ಶ್ರೀಗಳು ಆಶೀರ್ವದಿಸಿದರು.

ಕಾಸರಗೋಡು ಶಾಸಕ ನೆಲ್ಲಿಕುನ್ನು, ಪಾರ್ತಿಸುಬ್ಬ ಯಕ್ಷಗಾನ ಕಲಾಕೇಂದ್ರದ  ಅಧ್ಯಕ್ಷ ಶಂಕರ ರೈ ಮಾಸ್ತರ್ ಶುಭ ಹಾರೈಸಿದರು. ಹಾಗೂ ಮೇ ಏಳರಂದು ರಾ‍ಧಾಕೃಷ್ಣ ಕಲ್ಚಾರ್ ಹಾಗೂ ಬಳಗದವರಿಂದ ಗಂಗಾವತರಣ ಯಕ್ಷಗಾನ ತಾಳಮದ್ದಳೆ ಜರಗಿತು.ಈ ಸಂದರ್ಭ ಹಿರಿಯರಾದ ರಮೇಶ ಮಂಜೇಶ್ವರ ಶುಭ ಹಾರೈಸಿದರು.ಸತೀಶ ಅಡಪ ಸಂಕಬೈಲು ಕಾರ್ಯಕ್ರಮ ನಿರ್ವಹಿಸಿದರು.

ಸ್ಥಳೀಯ ಹಲವಾರು ಸಂಘ ಸಂಸ್ಥೆಗಳ ಸಹಕಾರ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು. ಊರ ಪರವೂರ ಕಲಾಪ್ರೇಮಿಗಳು ಕಣ್ತುಂಬಿಕೊಂಡರು. ಗಡಿನಾಡು ಕಾಸರಗೋಡಿನಲ್ಲಿ ಮುಂದಿನ ದಿನಗಳಲ್ಲಿ ಇದೊಂದು ಸಾಂಸ್ಕೃತಿಕ ಚಟುವಟಿಕೆಗೆ ಪ್ರಧಾನ ಕೇಂದ್ರವಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments