ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಕುಕ್ಕಾಜೆ ಬೈಲು ನಿವಾಸಿ ನಿವೃತ್ತ ಅಧ್ಯಾಪಕ ಬಿ. ಚಂದ್ರಶೇಖರ ರಾವ್ (88 ವರ್ಷ) ಮೇ 27, 2021ರಂದು ನಿಧನ ಹೊಂದಿದರು. ಅವರು ಸಿದ್ಧಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ, ಬಳಿಕ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರು ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಯಕ್ಷಗಾನದ ಹಿರಿಯ ಅರ್ಥಧಾರಿಯಾಗಿದ್ದ ಅವರು ಯಕ್ಷಗಾನ ಕಲಾ ವಿಕಾಸ ಸಂಘ ಮಂಚಿ ಇದರ ಸ್ಥಾಪಕರಾಗಿ 30 ವರ್ಷ ತಾಳಮದ್ದಳೆಗಳನ್ನು ನಡೆಸಿಕೊಟ್ಟಿದ್ದಾರೆ. ಮಂಚಿ ಇರಾ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಸುದೀರ್ಘ 25 ವರ್ಷ ದುಡಿದಿದ್ದಾರೆ. ಇರಾ ಕುಂಡಾವು ಶ್ರೀ ಸೋಮನಾಥೇಶ್ವರ ದೇವಾಲಯ ಆಡಳಿತ ಮಂಡಳಿಯ ಸಲಹೆಗಾರರಾಗಿಯೂ ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು.
ಮಂಗಳೂರಿನ ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿಯು ನಾಲ್ಕು ವರ್ಷಗಳ ಹಿಂದೆ ‘ಪೊಳಲಿ ಶಂಕರ ನಾರಾಯಣ ಶಾಸ್ತ್ರಿ ಪ್ರಶಸ್ತಿ’ ನೀಡಿ ಅವರನ್ನು ಗೌರವಿಸಿದೆ. ಉಡುಪಿಯ ಯಕ್ಷಗಾನ ಕಲಾರಂಗವು 2018ನೇ ಸಾಲಿನ ಮಟ್ಟಿ ಮುರಲೀಧರ ರಾವ್ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಸನ್ಮಾನಿಸಿದೆ.
ಸಂತಾಪ: ಚಂದ್ರಶೇಖರ ರಾಯರ ನಿಧನಕ್ಕೆ ಐದು ದಶಕಗಳ ಅವರ ನಿಕಟವರ್ತಿ ಹಾಗೂ ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿಯ ಗೌರವ ಸಲಹೆಗಾರ ಡಾ.ಎಂ.ಪ್ರಭಾಕರ ಜೋಶಿ, ಕಾರ್ಯದರ್ಶಿ ನಿತ್ಯಾನಂದ ಕಾರಂತ ಪೊಳಲಿ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪಕುಮಾರ್ ಕಲ್ಕೂರ, ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಶ್ರೀಕೃಷ್ಣ ಯಕ್ಷ ಸಭಾದ ಸುಧಾಕರ ರಾವ್ ಪೇಜಾವರ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ