ಯಾವುದೇ ಕಲಾಪ್ರಕಾರವಾದರೂ ಅದು ತನ್ನ ಪ್ರಾದೇಶಿಕ ಸಂಸ್ಕೃತಿಯ ಪ್ರತಿಬಿಂಬವಾಗಿರುತ್ತದೆ. ಶ್ರೀಮಂತ ಕಲೆಯಾಗಿರುವ ಯಕ್ಷಗಾನದ ಒಂದು ಭಾಗವಾಗಿರುವ ಹೂವಿನ ಕೋಲು ನವರಾತ್ರಿಯ ಸಂದರ್ಭದಲ್ಲಿ ಹಿಮ್ಮೇಳ ಕಲಾವಿದರೊಂದಿಗೆ ಬಾಲಕಲಾವಿದರು ಅರ್ಥಧಾರಿಗಳಾಗಿ ಪುರಾಣ ಪ್ರಸಂಗಗಳ ಸನ್ನಿವೇಷಗಳನ್ನು ರಸವತ್ತಾಗಿ ಪ್ರದರ್ಶಿಸುವ ಕಲೆ. ಬೇರೆ ಸಂದರ್ಭದಲ್ಲಿಯಾದರೆ ಪ್ರೇಕ್ಷಕರು ಕಲೆ ಇರುವಲ್ಲಿ ತೆರಬೇಕು.
ಆದರೆ ಹೂವಿನ ಕೋಲು, ಚಿಕ್ಕ ಮೇಳದಂತಹ ಕಲೆಗಳು ಪ್ರೇಕ್ಷಕರಿರುವ ಮನೆ ಮನೆಗಳಿಗೆ ತೆರಳಿ ಕಲಾ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಿದ್ದುದು ನಮ್ಮ ಕಲಾ ಸಂಪನ್ನತೆ ಯನ್ನು ತೋರಿಸಿಕೊಡುತ್ತದೆ ಎಂದು ಯಕ್ಷಗಾನ ವಿದ್ವಾಂಸ ಸುಜಯೀಂದ್ರ ಹಂದೆ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದಲ್ಲಿ ಯಕ್ಷದೇಗುಲ (ರಿ.), ಬೆಂಗಳೂರು ಇವರು ದಿನಾಂಕ 24-03-2021 ರಂದು ಸರಕಾರಿ ಪ್ರೌಢಶಾಲೆ ವಡ್ಡರ್ಸೆ, ಉಡುಪಿ ಇಲ್ಲಿ ಆಯೋಜಿಸಿರುವ ಯಕ್ಷಗಾನ ಪ್ರಾತ್ಯಕ್ಷಿಕೆಯ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.



ಹೂವಿನ ಕೋಲು, ಪದಾಭಿನಯ, ಹಸ್ತಾಭಿನಯ ಮುದ್ರೆಗಳ ಪರಿಚಯನ್ನೊಳಗೊಂಡ ಪ್ರಾತ್ಯಕ್ಷಿಕೆಯನ್ನು ವಡ್ಡರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸವಿತಾ ಪ್ರಕಾಶ್ ಆಚಾರ್ಯ ಉದ್ಘಾಟಿಸಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆನಂದ ಶೆಟ್ಟಿ ಶುಭಸಂಶನೆಗೈದರು. ಜೆಸಿ. ಇಂಡಿಯಾದ ವಲಯಾಧಿಕಾರಿ ಸಚ್ಚಿದಾನಂದ ಅಡಿಗ, ಶಿಕ್ಷಕ ಹೆರಿಯ ಕೊಮೆ, ಯಕ್ಷದೇಗುಲದ ಸಂಚಾಲಕ ಸುದರ್ಶನ ಉರಾಳ, ಮಲ್ಯಾಡಿ ಲೈವ್ನ ಪ್ರಶಾಂತ್ ಮಲ್ಯಾಡಿ, ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯಿರಿ ಉಪಸ್ಥಿತರಿದ್ದರು.
ಲಂಬೋದರ ಹೆಗಡೆ ಸ್ವಾಗತಿಸಿ, ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿದರು. ನಂತರ ಯಕ್ಷದೇಗುಲ ಬೆಂಗಳೂರು ಇವರಿಂದ ಹೂವಿನ ಕೋಲು, ಪದಾಭಿನಯ, ಹಸ್ತಾಭಿನಯ ಮುದ್ರೆಗಳ ಪರಿಚಯನ್ನೊಳಗೊಂಡ ಪ್ರಾತ್ಯಕ್ಷಿಕೆ ನಡೆಯಿತು.