Friday, September 20, 2024
Homeಯಕ್ಷಗಾನಯಕ್ಷಕಲಾ ಅಕಾಡೆಮಿ (ರಿ.) ಏರ್ಪಡಿಸಿದ ಯಕ್ಷಗಾನ ಉತ್ಸವ ಉದ್ಘಾಟನೆ - ಸಮಕಾಲೀನ ಪ್ರಸಂಗದ ಅವಶ್ಯಕತೆ: ಗೋಪಾಲಕೃಷ್ಣ...

ಯಕ್ಷಕಲಾ ಅಕಾಡೆಮಿ (ರಿ.) ಏರ್ಪಡಿಸಿದ ಯಕ್ಷಗಾನ ಉತ್ಸವ ಉದ್ಘಾಟನೆ – ಸಮಕಾಲೀನ ಪ್ರಸಂಗದ ಅವಶ್ಯಕತೆ: ಗೋಪಾಲಕೃಷ್ಣ ನಾಯರಿ

ಇಂದು ನಮ್ಮ ಸುತ್ತ ಮುತ್ತ ಎದ್ದು ಕಾಣುತ್ತಿರುವ ಸಾಮನ್ಯ ಸಾಮಾಜಿಕ ಪಿಡುಗುಗಳನ್ನು ಪ್ರತಿಬಿಂಬಿಸುವ ಹಾಗೂ ಅದಕ್ಕೆ ಪರಿಹಾರವನ್ನು ಕೂಡ ನೀಡುವಂತಹ ಸಮಕಾಲೀನ ಪ್ರಸಂಗದ ಅವಶ್ಯಕತೆ ಇದೆ ಎಂದು ದೇಸಿ ಪ್ರಸಿದ್ಧಿಯ ರಂಗ ನಿರ್ದೇಶಕರಾದ ಶ್ರೀ ಗೋಪಾಲಕೃಷ್ಣ ನಾಯರಿ ಅಭಿಪ್ರಾಯ ಪಟ್ಟರು.

ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಬೆಂಗಳೂರಿನ ಯಕ್ಷಕಲಾ ಅಕಾಡೆಮಿ (ರಿ.) ಏರ್ಪಡಿಸಿದ ಯಕ್ಷಗಾನ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ನಾಯರಿಯವರು, ಸಂಘಟಕರು ಆಯ್ಕೆ ಮಾಡುವಂತಹ ಪ್ರಸಂಗಗಳು ಕೇವಲ ಮನೋರಂಜನೆಗೆ ಮಾತ್ರ ಸೀಮಿತವಾಗಿರದೆ, ಜನರಲ್ಲಿರುವ ಮೌಢ್ಯತೆಯನ್ನು ಹೋಗಲಾಡಿಸಿ, ಸಾಮಾಜಿಕ ಅರಿವನ್ನು ಮೂಡಿಸುವಂತಹ ಪ್ರಸಂಗಗಳು ಸಾಂಪ್ರದಾಯಿಕ ಚೌಕಟ್ಟಿನ್ಲಲಿ ಹೊರಬರಬೇಕೆಂದು ಆಶಿಸಿದರು.

ಇನ್ನೋರ್ವ ಗಣ್ಯರಾದ ಬೆಂಗಳೂರಿನ ಶೇಖರ್‌ ಹಾಸ್ಪಿಟಲ್‌ನ ಸಂಸ್ಥಾಪಕ ನಿರ್ದೇಶಕರಾದ ಡಾ|| ಪಿ. ವಿ. ಐತಾಳರವರು ಮಾತನಾಡುತ್ತ, ವಿದ್ಯಾರ್ಥಿಗಳಲ್ಲಿ ಕಲಾ ಪ್ರಜ್ಞೆಯನ್ನು ಬೆಳೆಸಬೇಕಾದುದು ಸುಂದರ ಸಮಾಜದ ನಿರ್ಮಾಣದ ದೃಷ್ಟಿಯಿಂದ ಅತೀ ಅವಶ್ಯವಾದ ಕಾರ್ಯವಾಗಿದೆ. ಕಲೆಯನ್ನು ಶಿಕ್ಷಣದೊಂದಿಗೆ ಮೈಗೂಡಿಸಿಕೊಂಡವರಿಗೆ ಸಾಮಾಜಿಕ ಸಂವಹನವು ಸುಲಭವಾಗುತ್ತದೆ ಎಂದರು. ಹಂಗಾರಕಟ್ಟೆ ಯಕ್ಷಗಾನ   ಕಲಾಕೇಂದ್ರದ ಕಾರ್ಯದರ್ಶಿಯವರು ಮಾತನಾಡುತ್ತ ಮೌಲ್ಯಯುತ ಯಕ್ಷಗಾನ ಉಳಿಸಲು ಹಾಗೂ ಬೆಳೆಸಲು ಪ್ರೇಕ್ಷಕರ ಪಾತ್ರವೂ ಕೂಡ ಮಹತ್ವವಾದುದು. ಸಭೆಯಲ್ಲಿ ಸಭ್ಯ ರೀತಿಯ ವರ್ತನೆ, ಹಾಗೂ ಕಲಾವಿದರ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸುವ ಸಮಯದಲ್ಲಿ ಪ್ರೇಕ್ಷಕರ ಸಭ್ಯರೀತಿಯಲ್ಲಿ  ಪ್ರತಿಸ್ಪಂದನೆಯು ಅತೀ ಮಹತ್ವದ ಸಂಗತಿ ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀ ಸುದರ್ಶನ ಉರಾಳರನ್ನು ಯಕ್ಷಕಲಾ ಅಕಾಡೆಮಿ ವತಿಯಿಂದ ಗೌರವಿಸಲಾಯಿತು.

ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯರಾದ ಯಕ್ಷಗಾನ ಗುರುಗಳಾದ ಶ್ರೀ ಕೃಷ್ಣಮೂರ್ತಿ ತುಂಗರವರು ಸ್ವಾಗತಿಸಿದರು. ಸಂಸ್ಥೆಯು ಅಧ್ಯಕ್ಷರಾದ ಶ್ರೀಮತಿ ಅನುಸೂಯ ಕೆ ರವರು ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ರಾಮಚಂದ್ರ ಐತಾಳರು ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಸಂಸ್ಥೆಯ ಕಲಾವಿದರಿಂದ “ಭೀಷ್ಮ ಪ್ರತಿಜ್ಞೆ” ಎನ್ನುವ ಯಕ್ಷಗಾನ ಪ್ರದರ್ಶನ ನಡೆಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments