Friday, September 20, 2024
Homeಯಕ್ಷಗಾನಪೆರ್ಲ ವಾಗ್ವೈಭವ –  ಪೆರ್ಲ ಕೃಷ್ಣ ಭಟ್ಟರ ಅರ್ಥಗಾರಿಕೆಯ ತುಣುಕು – 1

ಪೆರ್ಲ ವಾಗ್ವೈಭವ –  ಪೆರ್ಲ ಕೃಷ್ಣ ಭಟ್ಟರ ಅರ್ಥಗಾರಿಕೆಯ ತುಣುಕು – 1

ದುಷ್ಟ ಸುಯೋಧನ | ನೊಡಗೊಂಡಿಹೆ ನೀ | ಎಷ್ಟಾಡಿದರೇನು | ಥಟ್ಟನೆ ನಿನ್ನನು | ಕದನದಿ ಗೆಲುವೊಡೆ | ತೊಟ್ಟಿಹೆ ಕರಗಳನು |


ಆಚಾರ್ಯರೆ, ನಿಮಗೆ ಕೌರವ ಒಬ್ಬನ ಹಂಗಿರುವುದು. ಆದರೆ ನನಗೆ ಹಾಗಾ? ಇಡೀ ವಿಶ್ವದ ಹಂಗನ್ನೇ ಇಟ್ಟುಕೊಂಡಿದ್ದೇನೆ ನಾನು. ಇಡೀ ವಿಶ್ವದಲ್ಲಿ ಧರ್ಮ ಎನ್ನುವುದು ಶಾಶ್ವತವಾಗಿ ಸ್ಥಿರವಾಗಿ ನಡೆಯಬೇಕು. ಧರ್ಮಕ್ಕೆ ಲೋಪ ಬಂದಾಗ ವಿಶ್ವವೇ ನಾಶವಾಗುತ್ತದೆ. ಅಂತಹಾ ಧರ್ಮ ರಕ್ಷಣೆ ಮಾಡುವ ಹಂಗನ್ನಿಟ್ಟುಕೊಂಡ ನಾನು ಯಾವ ಕಾಲಕ್ಕೆ ಏನು ಮಾಡಬೇಕೋ ಅದನ್ನು ಮಾಡಿಯೇ ತೀರುತ್ತೇನೆ. ಈಗ ನೀವು ಹೇಳಿದ್ದೀರಲ್ಲ ಕೌರವನ ಅನ್ನ ಅಂತ. ಅಲ್ಲಿಯೂ ನೀವು ಸ್ವಲ್ಪ ವಿಮರ್ಶೆ ಮಾಡಬೇಕಾಗಿತ್ತು. ಕುರುಕುಲದ ಹಿರಿಯರು ನೀವು. ಹಿರಿಯರಾದ ನೀವು ಹಸ್ತಿನಾವತಿಯ ಯೋಗಕ್ಷೇಮವನ್ನು ನೋಡಿಕೊಳ್ತೇನೆ ಅಂತ ಮಾತು ಕೊಟ್ಟಿದ್ದೀರಿ, ಅದಕ್ಕಾಗಿ ಬಂದಿದ್ದೇನೆ ಅಂತ ಹೇಳ್ತಾ ಇದ್ದೀರಿ.

ಈ ಹಸ್ತಿನಾವತಿಯ ಸಿಂಹಾಸನ ನಿಮ್ಮ ಜೀವಿತ ಕಾಲದಲ್ಲಿ ಏನೇನು ಅವಸ್ಥೆಯನ್ನು ಅನುಭವಿಸಿತು ಎಂದು ಪ್ರತ್ಯಕ್ಷ ಕಂಡವರಲ್ಲವೇ ನೀವು? ಕೌರವನಂತಹವರು, ಅಭಿಷೇಕ ಆಗದಿದ್ದರೂ ಬೇರೆ ಯಾರೂ ಇಲ್ಲ ಎಂಬ ಸಂದರ್ಭವನ್ನು ನೋಡಿ ಸಿಂಹಾಸನ ತನ್ನದು ಎಂದು ಏರಿದವ. ಅವನಿಗೊಂದು ಸಂಸ್ಕಾರ ಇರಲಿಲ್ಲ. ಹಾಗೆ ಪಾಂಡುವಿನ ಮಕ್ಕಳಾದ ಧರ್ಮರಾಜಾದಿಗಳು ಬಂದರು. ನೀವು ಇದ್ದುಕೊಂಡೇ ಧರ್ಮರಾಜನಿಗೆ ಒಂದು ಯೌವರಾಜ್ಯಾಭಿಷೇಕ ಮಾಡಿದ್ದು ಅಂತ ನಾನು ಕೇಳಿದ್ದೇನೆ. ಅದನ್ನು ಎಲ್ಲಿ ಬಚ್ಚಿಟ್ಟಿದ್ದೀರಿ ಇವತ್ತು? ಧರ್ಮರಾಜನಿಗೆ ನೀಡಿದ ಯುವರಾಜನ ಅಧಿಕಾರ ಈಗ ಎಲ್ಲುಂಟು? ಅಂತಹಾ ಧರ್ಮರಾಜಾದಿಗಳು ದ್ರೌಪದಿ ಸ್ವಯಂವರ ನಂತರ ಪುನಃ ಕಾಣಿಸಿಕೊಂಡಾಗ ಅವರಿಗೆ ರಾಜ್ಯವನ್ನು ಭಾಗಮಾಡಿ ಇಂದ್ರಪ್ರಸ್ಥಕ್ಕೆ ಕಳುಹಿಸಿಕೊಟ್ಟರು. ಹಿರಿಯರಾದ ನೀವೆಲ್ಲಾ ಇದ್ದುಕೊಂಡೇ ‘ರಾಜ್ಯಾಧಿಕಾರದಲ್ಲಿ ನನ್ನ ಕೈವಾಡ ಇಲ್ಲ’ ಎಂದು ನೀವು ಹೇಳುವುದಾದರೆ ಈ ವರೆಗೆ ಇದೆಲ್ಲಾ ಏನು ಮಾಡಿದ್ದು ಮತ್ತೆ?

ಆದ್ದರಿಂದ ತಾರತಮ್ಯ ಜ್ಞಾನವನ್ನು ಚೆನ್ನಾಗಿ ಆಲೋಚನೆ ಮಾಡಿ ಹಸ್ತಿನಾವತಿಗೆ ಯಾವುದು ಉಚಿತ ಮತ್ತು ಯಾವುದು ಅನುಚಿತ ಎಂದು ತಿಳಿದು ಮಾಡಬೇಕಾದ್ದನ್ನು ನೀವು ಮಾಡಬೇಕಾಗಿತ್ತು. ಅದರಲ್ಲಿ ಏನೋ ಒಂದು ಲೋಪ ಬಂದಿದೆ. ಯಾಕೆಂದರೆ ನಿಮಗೆ ಧೃತರಾಷ್ಟ್ರನ ಮೇಲಿನ ದಾಕ್ಷಿಣ್ಯ, ಧೃತರಾಷ್ಟ್ರನಿಗೆ ಮಗನ ಮೇಲಿನ ವಾತ್ಸಲ್ಯ. ಈ ದಾಕ್ಷಿಣ್ಯಗಳು, ಈ ವಾತ್ಸಲ್ಯಗಳು ಎಲ್ಲಾ ಒಟ್ಟು ಸೇರಿ ಏನೋ ಒಂದು ದೊಡ್ಡ ಗೊಂದಲವಾಗಿ ಇವತ್ತು ಪರಿಣಾಮ ಹೀಗಾಗಿದೆ. ಅದಕ್ಕೆ ಮೆಲ್ಲನೆ ಅವಕಾಶವನ್ನು ಮಾಡಿಕೊಟ್ಟವರಲ್ಲಿ ಜ್ಞಾತವಾಗಿಯೂ ಅಜ್ಞಾತವಾಗಿಯೂ ನೀವೊಬ್ಬರು ನಿಶ್ಚಯವೇ. ಇವತ್ತು ಬಂದಿದ್ದೀರಿ ನೀವು. ಕೌರವನ ಸೇನಾಧಿಪತಿಯಾಗಿ ಬಂದಿದ್ದೀರಿ. ನಿಮ್ಮ ಮಾತಿನಂತೆ ನಾನು, ನನ್ನ ಭಕ್ತರೆಲ್ಲಾ ಸಮಾನರು ಎಂದು ತಿಳಿದುಕೊಂಡು ‘ನಮೇ ಭಕ್ತ ಪ್ರಣಶ್ಯತಿ’ ಎಂದು ಹೇಳಿದ್ದೇನಲ್ಲ ನಾನು. ಇವನೂ ಒಬ್ಬ ಭಕ್ತ, ಸರಿ ಜಯಿಸಲಿ ಭೀಷ್ಮ ಎಂದು ಹೇಳಿದರೆ ಪರಿಣಾಮ ಏನಾದೀತು? ಈ ಜಯ ಯಾರಿಗೆ? ನಿಮಗೋ? ವೈಯುಕ್ತಿಕವಾಗಿಯಾ? ಭೀಷ್ಮನಿಗೆ ಈ ಜಯದಿಂದ ಏನು ಕೀರ್ತಿ ಬರಲಿಕ್ಕುಂಟ? ರಾಜ್ಯ ಬರಲಿಕ್ಕುಂಟ, ಸಂಪತ್ತು ಬರಲಿಕ್ಕುಂಟ, ಅಧಿಕಾರ ಬರಲಿಕ್ಕುಂಟ? ಏನಿದ್ದರೂ ಕೌರವನಿಗೆ ಮಾತ್ರ. ಪರಿಣಾಮ ಏನಾಗುತ್ತದೆ?

ಪ್ರಪಂಚದಲ್ಲಿ ಯಾವುದು ದೌಷ್ಟ್ರ್ಯ ಉಂಟೋ, ಯಾವುದು ಅಧರ್ಮ ಉಂಟೋ, ಯಾವುದು ಅನಾಚಾರ ಉಂಟೋ, ಯಾವುದು ಅತ್ಯಂತ ಗರಿಹಿತವಾದ ವಿಚಾರವುಂಟೋ ಅದನ್ನು ಎತ್ತಿಹಿಡಿದಂತಹಾ ಕೌರವನನ್ನು ನಿಮ್ಮ ಜಯದ ಮೂಲಕ ನಾನು ಎತ್ತಿಹಿಡಿದೆ ಅಂತ ಆದರೆ ನನ್ನ ಧರ್ಮದ ಹಂಗು ಎಲ್ಲಿ ಉಳಿಯಿತು? ಆದ್ದರಿಂದ ‘ದುಷ್ಟ ಸುಯೋಧನನೊಡಗೊಂಡಿಹೆ’ ಎಂಬ ಈ ಆವರಣ ಉಂಟು. ಆ ಆವರಣ ಛೇದ ಆಗುವವರೆಗೆ ಏನೂ ಪಾವಿತ್ರ್ಯ ಇಲ್ಲಿ ಬರುವುದಿಲ್ಲ. ಏನು ಮಾಡೋಣ ಹೇಳಿ? ಒಂದು ಸುಂದರವಾದ ಹೂವು ಇಲ್ಲಿ ಅರಳಿದೆ. ಪೂಜೆಗೆ ಯೋಗ್ಯವಾದದ್ದು. ದೇವತಾರ್ಚನೆಗೆ ಆ ಹೂವನ್ನು ತೆಗೆದುಕೊಂಡು ಹೋಗಬೇಕು. ಆದರೆ ಅದು ಅರಳಿದ್ದು ಸ್ಮಶಾನದಲ್ಲಿ. ಹೆಣ ಸುಟ್ಟ ಜಾಗದಲ್ಲಿ ಅರಳಿಕೊಂಡಿದೆ. ದೇವತಾರ್ಚನೆಗೆ ಯೋಗ್ಯವಲ್ಲ. ಅಲ್ಲಿ ಅಮೃತವೇ ಸಿಕ್ಕಿದ್ದು. ಆದರೆ ಪಾತ್ರೆ ಮಾತ್ರ ಹೆಂಡದ ಪಾತ್ರೆಯಾಗಿ ಹೋಗಿದೆ. ಹೆಂಡದ ಪಾತ್ರೆಯಲ್ಲಿ ಬಂದ ಅಮೃತದಂತೆ, ಸ್ಮಶಾನದಲ್ಲಿ ಹುಟ್ಟಿದ ಕುಸುಮದಂತೆ ಇವತ್ತು ಭೀಷ್ಮನಂತಹಾ ಒಬ್ಬ ಭಕ್ತ ಬಂದು ಕೌರವನ ಸೇನಾಧಿಪತಿಯಾಗಿ ‘ನನಗೆ ಜಯವನ್ನು ಕರುಣಿಸು ದೇವರೇ’ ಎಂದು ಹೇಳಿದರೆ ದೇವರಾದವರು ಕರುಣಿಸಿಯಾರೆ?

ಸ್ಪಷ್ಟವಾಗಿ ಹೇಳುತ್ತಾ ಇದ್ದೇನೆ. ಆ ಎಚ್ಚರಕ್ಕೋಸ್ಕರವೇ ನಿಮ್ಮಲ್ಲಿ ಇಷ್ಟು ದೀರ್ಘವಾಗಿ ಮಾತು ಬೆಳೆಸಿದ್ದು ನಾನು. ನೀವು ಏನೇನು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡಿದ್ದೀರೋ ‘ಕರ್ತವ್ಯ ಪಾಲನೆಗಾಗಿ ಬಂದಿದ್ದೇನೆ. ಧರ್ಮವೋ ಅಧರ್ಮವೋ, ಪರಿಣಾಮ ಶುಭವೋ, ಅಶುಭವೋ, ಆ ಕಡೆಗೆ ದೃಷ್ಟಿ ನನ್ನದಿಲ್ಲ. ಕೌರವನ ಸೇನಾಧಿಪತಿಯಾಗಿ ಹೊಡೆದಾಡುವುದು ನನ್ನ ಪರಮ ಪಾವನವಾದ ಕರ್ತವ್ಯ’ ಎಂದು ಹೇಳಿಕೊಂಡು ಬಂದಿದ್ದೀರಲ್ಲ. ಅಲ್ಲೇ ಅಜ್ಞಾನ ಇರುವುದು. ಆದ್ದರಿಂದ ದುಷ್ಟ ಸುಯೋಧನನೊಡಗೊಂಡು, ಅವನ ಸೇನಾಧಿಪತಿಯಾದ ನಿಮ್ಮನ್ನು ಇಂದು ಧರ್ಮಪಕ್ಷಪಾತಿಗಳಾದ ನನ್ನ ಕೈಯ ಆಯುಧಗಳಾದ ಪಾಂಡವರಲ್ಲಿ ಈ ಅರ್ಜುನನಿಂದಾಗಿ ಮುಂದೆ ನಡೆಯುವ ಯುದ್ಧದಲ್ಲಿ ನಿಮ್ಮನ್ನು ಸೋಲಿಸಿ ‘ಅಧರ್ಮ ಸೋಲುತ್ತದೆ, ಜಯ ಗೆಲ್ಲುತ್ತದೆ ಎಂಬುದನ್ನು ಪ್ರಪಂಚಕ್ಕೆ ಮಾಡಿ ತೋರಿಸಬೇಕು ಅಂತ ಪ್ರತಿಜ್ಞೆ ಮಾಡಿದ್ದೇನೆ ನಾನು. ಯುದ್ಧ ಮಾಡುತ್ತೀರಾ ನೀವು?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments