Friday, September 20, 2024
Homeಯಕ್ಷಗಾನಮೌನ ಜಗತ್ತಿಗೆ ಮತ್ತೆ ಚೆಂಡೆಯ ಪೆಟ್ಟು - ಕಟೀಲು ಮೇಳಗಳ ತಿರುಗಾಟ ಇಂದು ಆರಂಭ 

ಮೌನ ಜಗತ್ತಿಗೆ ಮತ್ತೆ ಚೆಂಡೆಯ ಪೆಟ್ಟು – ಕಟೀಲು ಮೇಳಗಳ ತಿರುಗಾಟ ಇಂದು ಆರಂಭ 

ಅದೇಕೋ ಇಂದು ಈ ಸುದ್ದಿ ಅತಿ ಹೆಚ್ಚಾಗಿ ಅಂತರ್ಜಾಲದ ತಾಣಗಳಲ್ಲಿ ಮತ್ತು ಜನರ ಬಾಯಿಯಲ್ಲಿ ಇದೇ ಮಾತು. “ಇವತ್ತು ಕಟೀಲು ಮೇಳಗಳ ಆಟ ಸುರುವಂತೆ” ಎಂದು ಮಾತಾಡಿಕೊಳ್ಳುವವರು ಅನೇಕರು. ಇಂದಿನ ವರೆಗೆ ಕೇವಲ ನೇರ ಪ್ರಸಾರಗಳ ಮೂಲಕ ಯಕ್ಷಗಾನ ಪ್ರದರ್ಶನಗಳನ್ನು ವೀಕ್ಷಿಸುತ್ತಿದ್ದ ಜನರಿಗೆ ಇನ್ನು ತಮ್ಮ ತಮ್ಮ ಊರುಗಳಲ್ಲಿಯೋ ಅಥವಾ ಪಕ್ಕದ ಊರುಗಳಲ್ಲಿಯೋ ಪ್ರತ್ಯಕ್ಷವಾಗಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಆಟ ನೋಡುವ ಅವಕಾಶ ಇದೀಗ ಒದಗಿ ಬಂದಿದೆ. 

ಕಟೀಲು ಮೇಳಗಳ ಆಟವೆಂದರೆ ಜನರಿಗೆ ಒಂದು ರೀತಿಯ ಹಬ್ಬದ ಸಂಭ್ರಮ. ಅಲ್ಲಿ ಉತ್ಸವದ ವಾತಾವರಣವಿರುತ್ತದೆ. ತಮ್ಮೂರಿನ ಜಾತ್ರೆಯ ಹಾಗೆ. ಸ್ವತಃ ಕಟೀಲು ಶ್ರೀ ದುರ್ಗಾಪರಮೇಶ್ವರಿಯ ಸಾನ್ನಿಧ್ಯವೇ ತಮ್ಮ ಊರಿಗೆ ಆಗಮಿಸುತ್ತಿರುವ ಹಾಗೆ ಪುಳಕವನ್ನು ಅನುಭವಿಸುತ್ತಾರೆ. 

ಸಮಾಜದ ಎಲ್ಲಾ ವರ್ಗದ ಭಕ್ತ, ಬಾಂಧವ ಮಹನೀಯರಿಗೂ, ಕಟೀಲಿನ ಶ್ರೀ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ ಬೆಳೆದು ಬಂದಿದೆ. ಆದುದರಿಂದ ಕಟೀಲು ಮೇಳದ ಆಟ ನಡೆಯುವ ಸ್ಥಳಕ್ಕೆ ಆ ಊರಿನ ಪ್ರತಿಯೊಬ್ಬ ಆಸ್ತಿಕ ಬಂಧುಗಳ ಮನೆಯ ಸದಸ್ಯರೂ ತಪ್ಪದೆ ಭೇಟಿ ನೀಡಿ ಕಟೀಲು ದೇವಿಯ ಪ್ರಸಾದ ಸ್ವೀಕರಿಸಿ ಸ್ವಲ್ಪ ಹೊತ್ತಾದರೂ ಯಕ್ಷಗಾನ ಪ್ರದರ್ಶನ ನೋಡಿ ಆಮೇಲೆ ಮನೆಗೆ ಹಿಂತಿರುಗುತ್ತಾರೆ. 

ಜಾಹೀರಾತು 

ಆದರೆ ಈ ವರ್ಷ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ಯಕ್ಷಗಾನ ಪ್ರದರ್ಶನಗಳ ದಿನಗಳಲ್ಲಿ ಹಬ್ಬದ ಸಂಭ್ರಮದಂತೆ ಮೈ ಮರೆಯುವ ಹಾಗಿಲ್ಲ. ಸ್ವಲ್ಪ ಮಟ್ಟಿಗಾದರೂ ತಮಗೆ ತಾವೇ ಕಡಿವಾಣ ಹಾಕಿಕೊಂಡು ಸರಕಾರದ ನೀತಿ ನಿಯಮಗಳನ್ನು ಪಾಲಿಸಿಕೊಂಡು ಯಕ್ಷಗಾನ ಪ್ರದರ್ಶನಗಳನ್ನು ನೋಡುವುದು ಕ್ಷೇಮ. ಆಟ ನೋಡುವ ಉತ್ಸಾಹದ ಭರದಲ್ಲಿ ಅಪರಿಚಿತರೊಂದಿಗೆ ಮುಕ್ತವಾಗಿ ಬೆರೆಯುವುದು, ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಅಸಡ್ಡೆಯಿಂದ ವರ್ತಿಸುವುದು ಮೊದಲಾದುವುಗಳನ್ನು ಮಾಡುವುದು ಅಷ್ಟೇನೂ ಸಮಂಜಸವಾಗಿ ಕಾಣುವುದಿಲ್ಲ.

ಎಲ್ಲಕ್ಕಿಂತಲೂ ಮುಖ್ಯವಾಗಿ ಚೌಕಿಗೆ ಅಥವಾ ಬಣ್ಣದ ಮನೆಗೆ ಅನಗತ್ಯ ಭೇಟಿ ಕೊಡುವುದನ್ನು ತಪ್ಪಿಸಬೇಕಾದ ಅಗತ್ಯವಿದೆ. ತಮ್ಮ ಇಷ್ಟದ ವೇಷಧಾರಿಯನ್ನು ಮಾತನಾಡಿಸುವ ಬಯಕೆ ತಪ್ಪೇನೂ ಅಲ್ಲ. ಆದರೆ ಅದಕ್ಕೆ ಈ ದಿನಗಳು ಅಷ್ಟು ಸೂಕ್ತವಲ್ಲ. ಬಹುಶಃ ಸಾರ್ವಜನಿಕರಿಗೆ ಚೌಕಿಯ ಪ್ರವೇಶ ಇರಲಾರದು ಎಂದು ಕಾಣುತ್ತದೆ. 

ಏನೇ ಇರಲಿ, ಅಂತೂ ಕಲಾಭಿಮಾನಿಗಳು ಸಂಭ್ರಮದಿಂದ ಕಾಯಿತ್ತಿದ್ದ ದಿನಗಳು ಬಂದಾಗಿದೆ. ಧರ್ಮಸ್ಥಳ ಸಹಿತ ಇತರ ಕೆಲವು ಮೇಳಗಳು ಪ್ರದರ್ಶನಗಳನ್ನು ಈಗಾಗಲೇ ಆರಂಭಿಸಿವೆ. ಕಟೀಲು ಮೇಳಗಳು ತಿರುಗಾಟಕ್ಕೆ ಹೊರತು ನಿಂತಿವೆ. ಬಹಳ ದಿನಗಳಿಂದ ದೂರ ಉಳಿದಿದ್ದ ಆಟದ ಸಂಭ್ರಮದ ವಾತಾವರಣದ ಆಸ್ವಾದನೆಗೆ ಸಮಯ ಒದಗಿ ಬಂದಿದೆ.

ಯಕ್ಷಗಾನದ ಕಲೆಯ ನಿನಾದ ಮತ್ತು ಅಬ್ಬರದ ಸದ್ದುಗಳಿಲ್ಲದೆ ಮೌನವಾಗಿದ್ದ ಜಗತ್ತು ಮತ್ತೆ ಚೆಂಡೆಯ ಸದ್ದಿನಿಂದ ಎಚ್ಛೆತ್ತುಕೊಳ್ಳಲಿದೆ. ಮಣ್ಣಿನ ಮಕ್ಕಳ ಸಂಭ್ರಮದ ನಿಶೆಯ ಓಡಾಟದಿಂದ ಪುಳಕಿತವಾಗುತ್ತಿದ್ದ ಮೈದಾನಗಳು ಮತ್ತು ಗದ್ದೆಗಳಲ್ಲಿ ಮತ್ತೆ ಕಲೆಯ ಕಂಪು ಪಸರಿಸಲಿದೆ. ರಂಗಸ್ಥಳಗಳು ಕಲಾವಿದರ ಹುಮ್ಮಸ್ಸಿನಿಂದ ದೂಳೆಬ್ಬಿಸಲಿದೆ. ಈ ತಿರುಗಾಟವು ಎಚ್ಚರಿಕೆಯ ಜೊತೆ ಉತ್ಸಾಹ, ಸಂಭ್ರಮಗಳಿಂದ ಎಲ್ಲ ಮೇಳಗಳಿಗೂ, ಎಲ್ಲ ಕಲಾವಿದರಿಗೂ, ಎಲ್ಲಾ ಜನರಿಗೂ ಸ್ಮರಣೀಯವಾಗಲಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments