Friday, September 20, 2024
Homeಯಕ್ಷಗಾನಮಲ್ಪೆ ವಾಸುದೇವ ಸಾಮಗ ನಿಧನಕ್ಕೆ ಯಕ್ಷಗಾನ ಕಲಾರಂಗ ಸಂತಾಪ 

ಮಲ್ಪೆ ವಾಸುದೇವ ಸಾಮಗ ನಿಧನಕ್ಕೆ ಯಕ್ಷಗಾನ ಕಲಾರಂಗ ಸಂತಾಪ 

ಯಕ್ಷಗಾನದ ಹಿರಿಯ ವೇಷಧಾರಿ, ಅರ್ಥಧಾರಿ, ಸಂಘಟಕ ಎಂ.ಆರ್.ವಾಸುದೇವ ಸಾಮಗ ಇಂದು (07-11-2020) ಬೆಳಗಿನ ಜಾವ 3.00 ಘಂಟೆಗೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮೀರಾ ಸಾಮಗ, ಪುತ್ರ ಪ್ರದೀಪ ಸಾಮಗ ಸಹಿತ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಮಲ್ಪೆ ರಾಮದಾಸ ಸಾಮಗ ನಾಗರತ್ನ ದಂಪತಿ ಸುಪುತ್ರರಾಗಿ ಜನಿಸಿದ ಅವರು 19ರ ಹರೆಯದಲ್ಲೆ ಯಕ್ಷಗಾನ ರಂಗ ಪ್ರವೇಶಿಸಿ ಐದು ದಶಕಗಳ ಕಾಲ ಅಮೃತೇಶ್ವರಿ, ಪೆರ್ಡೂರು, ಧರ್ಮಸ್ಥಳ, ಕದ್ರಿ, ಸಾಲಿಗ್ರಾಮ, ಶಿರಸಿ, ಸುರತ್ಕಲ್ ಮೇಳಗಳಲ್ಲಿ ಕಲಾಸೇವೆಗೈದಿದ್ದರು.

ತಾಳಮದ್ದಲೆ, ಅರ್ಥಧಾರಿಯಾಗಿ ಅಪಾರ ಸಿದ್ಧಿ-ಪ್ರಸಿದ್ಧಿ ಪಡೆದಿದ್ದರು.‘ಸಂಯಮಂ’ ಸಂಘಟನೆಯ ಮೂಲಕ ಕರ್ನಾಟಕದಾದ್ಯಂತ ತಾಳಮದ್ದಲೆ ಪರಿಚಯಿಸಿದ್ದರು. ತಾಳಮದ್ದಲೆಗೆ ಅನುಕೂಲವಾಗುವಂತೆ ತಾಳಮದ್ದಲೆಯ 80 ಪ್ರಸಂಗಗಳನ್ನು ಸಂಪಾದಿಸಿದ್ದರು. 30ಕ್ಕೂ ಹೆಚ್ಚು ಪ್ರಸಂಗಗಳಿಗೆ ಅರ್ಥ ಬರೆದು ಅದನ್ನು ಪ್ರಕಟಣೆಗೆ ಸಿದ್ಧಪಡಿಸುತ್ತಿದ್ದರು.


ಎರಡು ವರ್ಷದ ಹಿಂದೆ ಅವರ ಸುಪುತ್ರ ಡಾ.ಪ್ರದೀಪ್ ವಿ.ಸಾಮಗ ಅವರು ಸಪ್ತತಿ ಕಾರ್ಯಕ್ರಮವನ್ನು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ದಿನ ಪೂರ್ತಿ ಕಾರ್ಯಕ್ರಮ ನಡೆಸಿ ಸಾಮಗಾಥೆ ಅಭಿನಂದನಾ ಗ್ರಂಥ ಪ್ರಕಟಿಸಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕಿಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಉಡುಪಿಯ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.

ಅವರು ಪ್ರತೀ ವರ್ಷ ‘ಸಂಯಮಂ’ ತಿರುಗಾಟದ ನಂತರ ಒಬ್ಬ ಕಲಾವಿದನನ್ನು ಸಮ್ಮಾನಿಸುವ, ಸಂಘ ಸಂಸ್ಥೆಗಳಿಗೆ ‘ನಿಧಿ’ ಸಮರ್ಪಿಸುವ ಸತ್ಸಂಪ್ರದಾಯ ನಡೆಸಿಕೊಂಡು ಬಂದಿದ್ದರು. ಅವರ ಅಗಲಿಕೆಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್‍ ಗಾಢ ಸಂತಾಪ ವ್ಯಕ್ತ ಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments