Friday, September 20, 2024
Homeಪುಸ್ತಕ ಮಳಿಗೆಪುಚ್ಚೆಕೆರೆ ಕೃಷ್ಣ ಭಟ್ಟ (ಜೀವನ-ಸಾಧನೆ)

ಪುಚ್ಚೆಕೆರೆ ಕೃಷ್ಣ ಭಟ್ಟ (ಜೀವನ-ಸಾಧನೆ)

‘ಪುಚ್ಚೆಕೆರೆ ಕೃಷ್ಣ ಭಟ್ಟ.  ಜೀವನ-ಸಾಧನೆ’ ಎಂಬ ಈ ಕೃತಿಯು ಲೋಕಾರ್ಪಣೆಗೊಂಡು ಓದುಗರ ಕೈ ಸೇರಿದ್ದು 2017ರಲ್ಲಿ. ಈ ಹೊತ್ತಗೆಯ ಪ್ರಕಾಶಕರು ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ (ರಿ) ಉಜಿರೆ ಎಂಬ ಸಂಸ್ಥೆಯು. ಸಂಪಾದಕರು ಖ್ಯಾತ ತಾಳಮದ್ದಳೆ ಅರ್ಥಧಾರಿ, ವೇಷಧಾರಿ, ಯಕ್ಷಗಾನ ಸಂಘಟಕ, ಶ್ರೀ ಉಜಿರೆ ಎನ್. ಅಶೋಕ ಭಟ್ಟರು. ಕಟೀಲು ಶಾಲೆಯ ಮುಖ್ಯೋಪಾಧ್ಯಾಯರಾಗಿ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳ ಸಂಘಟಕರಾಗಿ ಯಕ್ಷಗಾನ ಕಲಾಪ್ರಿಯರಾಗಿ ಶ್ರೀಯುತರು ಸರ್ವರಿಗೂ ಪ್ರಿಯರಾಗಿದ್ದವರು. ಸರಳ, ಸಜ್ಜನ, ಸಹೃದಯೀ ವ್ಯಕ್ತಿತ್ವವನ್ನು ಹೊಂದಿ ಅಜಾತಶತ್ರು ಎನಿಸಿಕೊಂಡಿದ್ದರು. ಶ್ರೀಯುತರ ಕುರಿತಾಗಿ ಹಿಂದೊಂದು ಲೇಖನವನ್ನು ಬರೆಯುವ ಅವಕಾಶವಾಗಿತ್ತು. ಅವರ ಕುರಿತಾದ ಈ ಪುಸ್ತಕದ ಬಗ್ಗೆ ಬರೆಯಲೂ ಸಂತೋಷಪಡುತ್ತೇನೆ.  ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ (ರಿ) ಉಜಿರೆ ಎಂಬ ಸಂಸ್ಥೆಯ ಸಂಚಾಲಕರೂ, ಈ ಪುಸ್ತಕದ ಸಂಪಾದಕರೂ ಆದ ಶ್ರೀ ಉಜಿರೆ ಎನ್. ಅಶೋಕ ಭಟ್ಟರು ‘ಅರಿಕೆ-ನೆನವರಿಕೆ’ ಎಂಬ ಬರಹದಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಸಹಕರಿಸಿದ ಎಲ್ಲರನ್ನೂ ನೆನಪಿಸಿರುತ್ತಾರೆ. ಬಳಿಕ ಇಪ್ಪತ್ತಾರು ಮಂದಿ ಮಹನೀಯರುಗಳ ಲೇಖನಗಳನ್ನು ನೀಡಲಾಗಿದೆ. ಲೇಖನಗಳನ್ನು ಬರೆದವರು ಡಾ. ಎಂ. ಪ್ರಭಾಕರ ಜೋಶಿ, ಕೆ. ಲಕ್ಷ್ಮೀನಾರಾಯಣ ಅಸ್ರಣ್ಣ, ದೂಮಣ್ಣ ರೈ ಪಿ. ಮಂಚಿ, ಉಜಿರೆ ಅಶೋಕ ಭಟ್, ಗಣಪತಿ ಭಟ್ ಬೆತ್ತಸರವು, ವೈ. ಗೋಪಾಲ ಶೆಟ್ಟಿ ಕಟೀಲು, ಕುರಿಯ ಗಣಪತಿ ಶಾಸ್ತ್ರಿ, ಕೆ. ಗೋವಿಂದ ಭಟ್ಟ, ಭುವನಾಭಿರಾಮ ಉಡುಪ, ನಾ. ಕಾರಂತ ಪೆರಾಜೆ, ಸೇರಾಜೆ ಸೀತಾರಾಮ ಭಟ್ಟ, ವಾಸುದೇವ ಶೆಣೈ ಕಟೀಲು, ಸುಣ್ಣಂಬಳ ವಿಶ್ವೇಶ್ವರ ಭಟ್, ವಾಟೆಪಡ್ಪು ವಿಷ್ಣು ಶರ್ಮ, ರೆಂಜಾಳ ರಾಮಕೃಷ್ಣ ರಾವ್, ಬೆಳ್ಳಾರೆ ಮಂಜುನಾಥ ಭಟ್, ಪು. ಗುರುಪ್ರಸಾದ್ ಭಟ್ ಕಟೀಲು, ಎನ್. ಸವಿತಾ ಕೃಷ್ಣ ಭಟ್ ಕೋಕಳ, ಶ್ರೀಮತಿ ಅನಿತಾ ನರೇಶ್ ಮಂಚಿ, ಪಿ.ಕೆ. ವೆಂಕಟ್ರಮಣ ಭಟ್, ಶ್ರೀಕೃಷ್ಣ ಭಟ್ ಮಾದಕಟ್ಟೆ, ವಿದುಷಿ ಶ್ರೀಮತಿ ಪಾರ್ವತಿ ಭಟ್, ಶ್ರೀಮತಿ ವಸಂತಲಕ್ಷ್ಮಿ, ಶ್ರೀಮತಿ ಅನುರಾಧ, ವಿ. ಮಹೇಶ್ ಕುಮಾರ್ ಕನ್ಯಾನ, ದೀಪ್ತಿ ಪಟಿಕ್ಕಲ್ಲು ಇವರುಗಳು. ವಿದ್ವಾಂಸರಾದ ಪುಚ್ಚೆಕೆರೆ ಕೃಷ್ಣ ಭಟ್ಟರ ಬಗ್ಗೆ ಬರೆದ ಲೇಖನಗಳನ್ನು ನೀಡಲಾಗಿದೆ. ಬಳಿಕ ಪುಚ್ಚೆಕೆರೆ ಕೃಷ್ಣ ಭಟ್ಟರ ಬಗ್ಗೆ ಈ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ನಾಲ್ಕು ಬರಹಗಳನ್ನು ನೀಡಲಾಗಿದೆ. ಬರೆದವರು ಡಾ. ರಾಧಾಕೃಷ್ಣ ಭಟ್ ಪೆರ್ಲ, ಎಲ್. ಎನ್. ಭಟ್ ಮಳಿ, ಪದ್ಮನಾಭ ಕಟೀಲು, ದುಬೈ, ಡಾ. ಎಂ. ಪ್ರಭಾಕರ ಜೋಶಿ. ಬಳಿಕ  ಪುಚ್ಚೆಕೆರೆ ಶ್ರೀ ಕೃಷ್ಣ ಭಟ್ಟರು ಪಡೆದ ಪ್ರಶಸ್ತಿ, ಸನ್ಮಾನ, ಪುರಸ್ಕಾರ, ಗೌರವಾರ್ಪಣೆ, ಅಭಿನಂದನೆಗಳ ವಿವರಗಳನ್ನೂ ನೀಡಿರುತ್ತಾರೆ. ಈ ಪುಸ್ತಕದಲ್ಲಿ ಸುಮಾರು ಹದಿನೈದು ಛಾಯಾಚಿತ್ರಗಳನ್ನು ನೀಡಲಾಗಿದ್ದು ಹೊರ ಆವರಣದಲ್ಲಿ ವಿದ್ವಾನ್ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರು  ಪುಚ್ಚೆಕೆರೆ ಕೃಷ್ಣ ಭಟ್ಟರ ಬಗೆಗೆ ಆಡಿದ ನಲ್ನುಡಿಗಳನ್ನು ನೀಡಲಾಗಿದೆ. ಪುಚ್ಚೆಕೆರೆ ಕೃಷ್ಣ ಭಟ್ಟ ಶ್ರೇಷ್ಠ ವ್ಯಕ್ತಿತ್ವ, ಉತ್ತಮ ಪುಸ್ತಕ. ಇದು ಅವರಿಗೆ ಅರ್ಪಿಸಿದ ಗೌರವವೇ ಹೌದು. 

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments