Friday, September 20, 2024
Homeಯಕ್ಷಗಾನಎಡನೀರು ಮಠಾಧೀಶರಾದ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳು ಭಗವಂತನಲ್ಲಿ ಐಕ್ಯ 

ಎಡನೀರು ಮಠಾಧೀಶರಾದ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳು ಭಗವಂತನಲ್ಲಿ ಐಕ್ಯ 

ಶ್ರೀ ಎಡನೀರು ಮಠಾಧೀಶರಾದ ಶ್ರೀ ಮದ್ ಶಂಕರಾಚಾರ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳು ತಮ್ಮ ಅಪಾರ ಶಿಷ್ಯಕೋಟಿ ವೃಂದ ಮತ್ತು ಅಭಿಮಾನೀ ಭಕ್ತರನ್ನು ಆಗಲಿ ಭಗವಂತನ ಸಾನ್ನಿಧ್ಯದಲ್ಲಿ  ಐಕ್ಯಗೊಂಡರು.

ಅವರು ಇಂದು ಮಧ್ಯರಾತ್ರಿಯ ಸುಮಾರು 12. 45 ರ ಹೊತ್ತಿಗೆ ತಾನು ಆರಾಧಿಸುವ ಎಡನೀರಿನ  ಶ್ರೀ ಗೋಪಾಲಕೃಷ್ಣನ ದೇವರ ಸಾನ್ನಿಧ್ಯದಲ್ಲಿಯೇ ಶ್ರೀ ದೇವರ ಪಾದಕಮಲಗಳಲ್ಲಿ ಐಕ್ಯಗೊಂಡರು. 

ಎಡನೀರು ಶ್ರೀ ಮಠದ ಪರಂಪರೆ ಮತ್ತು ಭಕ್ತರ ಜೊತೆಗೆ ಸ್ವಾಮೀಜಿಗಳ ಸಂಬಂಧ ಅನನ್ಯವಾದುದು. ಈಗ ತಮ್ಮ ಅಸಂಖ್ಯ ಭಕ್ತಕೋಟಿಯನ್ನು ಬಿಟ್ಟು ಶ್ರೀಗಳು ತಾವು ಅನಾವರತವೂ ನಂಬಿ ಪೂಜಿಸಿಕೊಂಡು ಬಂದಿರುವ ತಮ್ಮ ಆರಾಧ್ಯ ದೇವರಾದ ಶ್ರೀ ದಕ್ಷಿಣಾಮೂರ್ತಿ ಗೋಪಾಲಕೃಷ್ಣನ ದಿವ್ಯ ಸಾನ್ನಿಧ್ಯವನ್ನು ಸೇರಿ ಅವನಲ್ಲಿ ಲೀನವಾಗಿದ್ದಾರೆ. 

ಅಲ್ಲದೆ ಸ್ವಾಮೀಜಿಗಳು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡವರು. ಅವರು ನಡೆಸುತ್ತಿದ್ದ ಶಿಕ್ಷಣಸಂಸ್ಥೆಗಳು, ಕಲೆಗೆ ಅವರ ಪ್ರೋತ್ಸಾಹ. ಶ್ರೀ ಮಠದಲ್ಲಿ ಸದಾಕಾಲವೂ ನಡೆಯುತ್ತಿದ್ದ ಸಂಗೀತ, ನೃತ್ಯ, ಯಕ್ಷಗಾನವೇ ಮೊದಲಾದ ಕಲಾಗೋಷ್ಠಿಗಳು, ಇವುಗಳೆಲ್ಲಾ ಅಭಿಮಾನಿಗಳ ಮನಸ್ಸಿನಲ್ಲಿ ಹಚ್ಚಹಸಿರಾಗಿ ಸದಾಕಾಲವೂ ನೆನಪಿನಲ್ಲುಳಿಯುತ್ತವೆ.

ಇಳಿವಯಸ್ಸಿನಲ್ಲಿಯೂ ಸ್ವಾಮೀಜಿಗಳ  ಕ್ರಿಯಾಶೀಲತೆ ಅದ್ಭುತ. ಯಕ್ಷಗಾನಕ್ಕೆ ಅವರ ನಿರಂತರ ಪ್ರೋತ್ಸಾಹವಿತ್ತು. ಅದಕ್ಕೆ ಶ್ರೀ ಮಠದ ಆವರಣದಲ್ಲಿ ನಡೆಯುತ್ತಿದ್ದ ನಿರಂತರ ಯಕ್ಷಗಾನ ಪ್ರದರ್ಶನಗಳೇ ನಡೆಯುತ್ತಿದ್ದುವು.

ಯಕ್ಷಗಾನ ಕಲಾವಿದರಿಗೆ ಅವರು ಆಶ್ರಯದಾತರಾಗಿದ್ದರು. ಎಡನೀರು ಮೇಳವನ್ನು ಮಠದ ವತಿಯಿಂದ ಮುನ್ನಡೆಸುತ್ತಾ ಕಲಾವಿದರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದರು. 

ಅದೂ ಅಲ್ಲದೆ ಶ್ರೀಗಳ ಕಾಲದಲ್ಲಿ ಶ್ರೀ ಮಠವು ಶಿಕ್ಷಣ ಸೇವೆಯನ್ನು ನೀಡುವುದರಲ್ಲಿಯೂ ಮುಂಚೂಣಿಯಲ್ಲಿತ್ತು. ಎಡನೀರು ಸ್ವಾಮೀಜೀಸ್ ಹೈಯರ್ ಸೆಕಂಡರಿ ಸ್ಕೂಲ್ ಇದಕ್ಕೆ ಸಾಕ್ಷಿ. ವಿದ್ಯಾರ್ಥಿಗಳು ಪದವಿಪೂರ್ವ ತರಗತಿಯ ವರೆಗೆ ಇಲ್ಲಿ ವಿದ್ಯಾಭ್ಯಾಸ ನಡೆಸಬಹುದಿತ್ತು. 

ತಮ್ಮ ಸಮಾಜಸೇವೆ ಮತ್ತು ಕಲಾಸೇವೆಗಳಿಂದ ಅಸಂಖ್ಯ ಭಕ್ತರು ಮತ್ತು ಅಭಿಮಾನೀ ಶಿಷ್ಯವರ್ಗವನ್ನು ಹೊಂದಿದ್ದ ಶ್ರೀಗಳ ಅಗಲುವಿಕೆ ಎಲ್ಲರನ್ನೂ ಶೋಕಸಾಗರಲ್ಲಿ ಮುಳುಗಿಸಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments