Friday, August 28, 2026
Home Blog Page 377

ಬಾಲ ಪ್ರತಿಭೆಗಳಿಗೆ ಪ್ರಶಸ್ತಿಯ ಗರಿ – ಸ್ವಸ್ತಿಕ್ ಶರ್ಮ ಮತ್ತು ಸೃಷ್ಟಿ ರೈ

ಕನ್ನಡ ಸಾಹಿತ್ಯ ಪರಿಷತ್ತು ನೀಡುವ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಅಭಿನಂದನಾ ಪುರಸ್ಕಾರಕ್ಕೆ  ಕಾಸರಗೋಡು ಜಿಲ್ಲೆಯಿಂದ ಇಬ್ಬರು ಆಯ್ಕೆಯಾಗಿದ್ದಾರೆ.

ಯಕ್ಷಗಾನದ ಉದಯೋನ್ಮುಖ ಪ್ರತಿಭೆ ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ ಮತ್ತು ಯಕ್ಷಗಾನ, ಭರತನಾಟ್ಯ, ಸಾಹಿತ್ಯಗಳ ಬಹುಮುಖ ಪ್ರತಿಭೆ ಸೃಷ್ಟಿ ರೈ ಕಾಟುಕುಕ್ಕೆ. ಇಬ್ಬರೂ ಗಡಿನಾಡು ಕಾಸರಗೋಡಿನ ಉದಯೋನ್ಮುಖ ಪ್ರತಿಭೆಗಳೇ. 

ಅಭಿನಂದನೆಗಳು ಸ್ವಸ್ತಿಕ್ ಶರ್ಮ ಮತ್ತು ಸೃಷ್ಟಿ ರೈ ಕಾಟುಕುಕ್ಕೆ ಈರ್ವರಿಗೂ. 

ಸದ್ದಿಲ್ಲದ ಕಲಾಸೇವೆ – ಶ್ರೀ ಸತೀಶ ಉಪಾಧ್ಯ, ಅಂಬಲಪಾಡಿ 

ಸೃಷ್ಟಿಕರ್ತನಾದ ಕನಕಗರ್ಭನ ಕಾರ್ಯವೈಖರಿ ಅದೆಷ್ಟು ಕೌತುಕಮಯವಾದುದು! ಸತ್ಯಲೋಕೇಶನಾದ ಅಂಚೆದೇರನ ಸೃಷ್ಟಿಯಲ್ಲಿ ವೈವಿಧ್ಯತೆಯನ್ನು ಗುರುತಿಸಬಹುದು. ರೂಪದಲ್ಲಿ ವಿವಿಧತೆ, ಆಕಾರದಲ್ಲಿ ವೈವಿಧ್ಯತೆ, ಬಣ್ಣದಲ್ಲಿ ವಿವಿಧತೆ, ವ್ಯವಹಾರದಲ್ಲಿ ವೈವಿಧ್ಯತೆ. ಆದುದರಿಂದಲೇ ಬ್ರಹ್ಮನು ಬೇಧಬಿಜ್ಜಗ ಎಂದು ಪ್ರಸಿದ್ಧನಾಗಿದ್ದಾನೆ.

ನಾವು ಮಾನವರು. ಯೋನಿಜರು. ನಮ್ಮಲ್ಲೂ ವೈವಿಧ್ಯಗಳಿವೆ. ಕೋಟಿ ಕೋಟಿ ಸಂಖ್ಯೆಯಲ್ಲಿದ್ದರೂ ಒಬ್ಬರಂತೆ ಮತ್ತೊಬ್ಬರಿಲ್ಲ. ಪ್ರತ್ಯೇಕ ಪ್ರತ್ಯೇಕವಾಗಿಯೇ ಗುರುತಿಸಲ್ಪಡುತ್ತೇವೆ. ಸ್ವಭಾವದಲ್ಲೂ ಅಷ್ಟೇ. ಒಂದೇ ತೆರನಾಗಿ ಎಲ್ಲರೂ ಕಾಣಿಸಿಕೊಳ್ಳಲಾರರು. ಒಬ್ಬೊಬ್ಬರದು ಒಂದೊಂದು ಸ್ವಭಾವ. ಕೆಲವರು ತೆರೆದುಕೊಳ್ಳುವ ಸ್ವಭಾವವನ್ನು ಹೊಂದಿರುವುದಿಲ್ಲ. ತಾನಾಯಿತು, ತನ್ನ ಕೆಲಸವಾಯಿತು ಎಂಬಂತೆ ವ್ಯವಹಾರ. ಇವರದು ಸದಾ ಮುಚ್ಚಿಕೊಳ್ಳುವ ಸ್ವಭಾವ.

ಇನ್ನು ಕೆಲವರಿಗೆ ತಾನೂ ಕಾಣಿಸಿಕೊಳ್ಳಬೇಕು, ತನ್ನ ಜತೆಗೆ ಉಳಿದವರೂ ಕಾಣಿಸಿಕೊಳ್ಳಬೇಕು ಎಂಬ ಒಳ್ಳೆಯ ಮನಸ್ಸು. ತಾನು ಕಷ್ಟವನ್ನನುಭವಿಸುತ್ತಾ ಪರರಿಗೆ ಒಳಿತನ್ನುಂಟುಮಾಡುವವರೂ ಇದ್ದಾರೆ. ಪರರ ಕಷ್ಟಕ್ಕೆ ನೆರವಾಗುವ ಕ್ರಿಯೆಯಲ್ಲಿ ಸಿಗುವ ಆನಂದವು ವರ್ಣನಾತೀತವಾದುದು. ಅಸಾಮಾನ್ಯ ಪ್ರತಿಭೆಯನ್ನು ತೆರೆದುಕೊಳ್ಳದೆ ಸದಾ ಮುದುಡಿಕೊಳ್ಳುವ ಸ್ವಭಾವವನ್ನು ಹೊಂದಿದ ಕಾರಣವೋ ಏನೋ? ಅನೇಕ ಕಲಾವಿದರು ಪ್ರಚಾರದಿಂದ ದೂರ ಉಳಿದರು.

ಆದರೂ ನಿಜ ವಿಚಾರಗಳು ಎಷ್ಟು ಮುಚ್ಚಿಟ್ಟರೂ ಹೊರ ಬಾರದಿರದು. ವಿದ್ವಾಂಸರು ಗುಹೆಯೊಳಡಗಿದರೂ ಹೊರ ಕರೆತಂದು ಗೌರವಿಸಿಯೇ ಗೌರವಿಸುತ್ತಾರೆ. ಯಾಕೆಂದರೆ ನಮ್ಮ ಸಮಾಜದಲ್ಲಿ ಒಳ್ಳೆಯದನ್ನು ಗುರುತಿಸುವ ಕಣ್ಣುಗಳಿವೆ. ಅವರನ್ನು ಗೌರವಿಸುವ ಸುಮನಸರಿದ್ದಾರೆ. ಹೀಗೆ ಸದ್ದಿಲ್ಲದೇ ಕಲಾಸೇವೆಯು ತನಗೆ ಕರ್ತವ್ಯ ಎಂದು ತಿಳಿದು ವ್ಯವಹರಿಸುತ್ತಿರುವ ಕಲಾವಿದರನೇಕರನ್ನು ಯಕ್ಷಗಾನ ಕ್ಷೇತ್ರದಲ್ಲಿ ನಾವು ಕಾಣಬಹುದು. ಅಂತಹ ಕಲಾವಿದರಲ್ಲೊಬ್ಬರು ಶ್ರೀ ಸತೀಶ ಉಪಾಧ್ಯ ಅಂಬಲಪಾಡಿ.

ಶ್ರೀಯುತರು ಹಿಮ್ಮೇಳ, ಮುಮ್ಮೇಳ ಕಲಾವಿದನಾಗಿಯೂ, ಶಿಕ್ಷಕನಾಗಿಯೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಶ್ರೇಷ್ಠ ಕಲಾವಿದ, ಯಕ್ಷಗಾನ ಶಿಕ್ಷಕರಾದ ಶ್ರೀ ಸತೀಶ ಉಪಾಧ್ಯ ಅವರು ಉಡುಪಿ ಸಮೀಪದ ಅಂಬಲಪಾಡಿಯಲ್ಲಿ ಶ್ರೀ ಎ. ರಾಘವೇಂದ್ರ ಉಪಾಧ್ಯಾಯ ಮತ್ತು ಶ್ರೀಮತಿ ಜಯಲಕ್ಷ್ಮಿ ಉಪಾಧ್ಯಾಯ ದಂಪತಿಗಳಿಗೆ ಮಗನಾಗಿ 1972ನೇ ಇಸವಿ ಮೇ 13ರಂದು ಜನಿಸಿದರು. ಅಂಬಲಪಾಡಿ ಶಾಲೆ, SMSP ಹೈಸ್ಕೂಲ್ ಮತ್ತು ಉಡುಪಿ ಬೋರ್ಡ್ ಶಾಲೆಗಳಲ್ಲಿ ವಿದ್ಯಾರ್ಜನೆ. ಪಿಯುಸಿ ವರೆಗೆ.

ಸತೀಶ ಉಪಾಧ್ಯರ ತಂದೆ ಶ್ರೀ ರಾಘವೇಂದ್ರ ಉಪಾಧ್ಯಾಯರು ಅಂಬಲಪಾಡಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಅವರು ಯಕ್ಷಗಾನ ವೇಷಧಾರಿಯೂ ಭರತನಾಟ್ಯ ಗುರುಗಳೂ ಆಗಿದ್ದರು. ಯಕ್ಷಗಾನ ನಾಟ್ಯ ಹಿರಿಯಡಕ ಗೋಪಾಲರಾಯರಿಂದಲೂ ಭರತನಾಟ್ಯವನ್ನು ಉಡುಪಿ ಶ್ರೀ ರಾಧಾಕೃಷ್ಣ ತಂತ್ರಿಗಳಿಂದಲೂ ಅಭ್ಯಸಿಸಿದ್ದರು. ಅಂಬಲಪಾಡಿ ಶಾಲೆಯ ಸ್ಥಾಪಕರು ದಿ| ಶ್ರೀ ಮುಖ್ಯಪ್ರಾಣ ಉಪಾಧ್ಯಾಯರು. ಶ್ರೀಯುತರು ಕವಿಗಳೂ ಆಗಿದ್ದರು. ಅನೇಕ ಕವಿತೆಗಳನ್ನೂ, ಮಕ್ಕಳ ನಾಟಕಗಳನ್ನೂ ಬರೆದಿದ್ದರು. ಮಾತ್ರವಲ್ಲ ಮುದ್ರಣಕ್ಕೊಳಪಟ್ಟಿದ್ದುವು.

ಊರ ಕಲಾಭಿಮಾನಿಗಳ ನೇತೃತ್ವದಲ್ಲಿ ಅಂಬಲಪಾಡಿ ಲಕ್ಷ್ಮೀ ಜನಾರ್ದನ ಯಕ್ಷಗಾನ ಮಂಡಳಿ ಎಂಬ ಸಂಸ್ಥೆಯು ಆರಂಭಗೊಂಡಿತ್ತು. ಈ ಕಲಾಸಂಸ್ಥೆಯ ಸ್ಥಾಪಕ ಪ್ರಮುಖರಲ್ಲಿ ಸತೀಶ ಉಪಾಧ್ಯರ ತಂದೆ ಶ್ರೀ ರಾಘವೇಂದ್ರ ಉಪಾಧ್ಯಾಯರೂ ಒಬ್ಬರು. ವಾರಕ್ಕೊಂದು ತಾಳಮದ್ದಲೆಯೂ ನಡೆಯುತ್ತಿತ್ತು. ಶ್ರೀ ಮಲ್ಪೆ ರಾಮದಾಸ ಸಾಮಗ, ಶ್ರೀ ಕುಂಬಳೆ ಸುಂದರ ರಾವ್, ಮೊದಲಾದ ಅನೇಕ ಹಿರಿಯ ಕಲಾವಿದರೂ ಭಾಗವಹಿಸುತ್ತಿದ್ದರು.

ಶ್ರೀ ಸತೀಶ ಉಪಾಧ್ಯರಿಗೆ ತೀರ್ಥರೂಪರಿಂದಲೇ ಯಕ್ಷಗಾನವು ಬಳುವಳಿಯಾಗಿ ಬಂದಿತ್ತು. ಯಕ್ಷಗಾನಾಸಕ್ತಿಯೂ ಇತ್ತು. 6ನೇ ತರಗತಿಯ ವಿಧ್ಯಾರ್ಥಿಯಾಗಿರುವಾಗಲೇ ಶ್ರೀ ಬಾಬು ಶೆಟ್ಟಿಗಾರರಿಂದ ನಾಟ್ಯ ಕಲಿತರು. ಶ್ರೀ ಕೆಮ್ಮಣ್ಣು ಆನಂದ ಅವರಿಂದ ಹಿಮ್ಮೇಳ ಕಲಿಕೆ.  ಅಂಬಲಪಾಡಿ ಲಕ್ಷ್ಮೀ ಜನಾರ್ದನ ಯಕ್ಷಗಾನ ಮಂಡಳಿಯಲ್ಲಿ ಹಿರಿಯಡಕ ಗೋಪಾಲ ರಾಯರೂ, ಗೋರ್ಪಾಡಿ ವಿಠ್ಠಲ ಪಾಟೀಲ್, ಐರೋಡಿ ರಾಮ ಗಾಣಿಗರು, ಹಳ್ಳಾಡಿ ಸುಬ್ರಾಯ ಮಲ್ಯ ಅವರುಗಳು ಗುರುಗಳಾಗಿ ಕಲಿಕಾಸಕ್ತರಿಗೆ ಯಕ್ಷಗಾನ ವಿದ್ಯೆಯನ್ನು ಧಾರೆಯೆರೆದಿದ್ದರು.

ಈ ಸಂಘದ ಪ್ರದರ್ಶನದಲ್ಲಿ ಸತೀಶ ಉಪಾಧ್ಯ ಅವರು ಬಾಲಗೋಪಾಲನಾಗಿ ರಂಗಪ್ರವೇಶ ಮಾಡಿದ್ದರು. ನಂತರ ಸಕ್ರಿಯನಾಗಿ ವೇಷ ಮಾಡಲು ಆರಂಭಿಸಿದರು. ಬನ್ನಂಜೆ ನಾರಾಯಣ ಅವರ ನಿರ್ದೇಶನದಲ್ಲಿ ರತ್ನಾವತೀ ಕಲ್ಯಾಣ ಪ್ರಸಂಗದ ಚಿತ್ರಧ್ವಜನ ಪಾತ್ರ ಮಾಡಿದ್ದರು. ಬನ್ನಂಜೆ ನಾರಾಯಣ ಅವರಲ್ಲಿ  ಬರಹದಿಂದ ಸಿದ್ಧಪಡಿಸಿದ ಅನೇಕ ಪ್ರಸಂಗ ಪುಸ್ತಕಗಳ ಸಂಗ್ರವಿದೆ ಎಂದು ಸತೀಶ ಉಪಾಧ್ಯ ಅವರು ಹೇಳುತ್ತಾರೆ. ಮಥುರಾ ಮಹೇಂದ್ರ ಪ್ರಸಂಗದ ಡಂಗುರ ದೂತನ ಪಾತ್ರವನ್ನು ಈ ಸಂದರ್ಭದಲ್ಲಿ ಮಾಡಿದ್ದರು. ಬಳಿಕ ಪಿಯುಸಿ ತನಕ ಸಂಘದ ಪ್ರದರ್ಶನಗಳಲ್ಲಿ ಹಾಗೂ ಇತರ ಕಡೆ ವೇಷ ಮಾಡುತ್ತಿದ್ದು, ಪಿಯುಸಿ ಆದ ಮೇಲೆ ಯಕ್ಷಗಾನವನ್ನೇ ವೃತ್ತಿಯನ್ನಾಗಿ ಸ್ವೀಕರಿಸಬೇಕಾಯಿತು. ಇದು ಬದುಕಿನ ಒಂದು ಮಹತ್ತರ ತಿರುವು. ಕಲೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸುತ್ತೇನೆಂಬ ನಿರ್ಣಯವೇನೂ ಇರಲಿಲ್ಲ. 

ಶ್ರೀ ಸತೀಶ ಉಪಾಧ್ಯ ಅವರು ಪಿಯುಸಿ ಶಿಕ್ಷಣದ ಬಳಿಕ ಚಿತ್ರಕಲೆಯಲ್ಲಿ ಡಿಪ್ಲೋಮ ಪಡೆಯಲು ಕಾರವಾರಕ್ಕೆ ತೆರಳಿದ್ದರು. ಒಂದೂವರೆ ವರ್ಷಗಳ ಕಾಲ ತರಬೇತಿ ಮುಗಿದಿತ್ತು. ಅಂತಿಮ ಪರೀಕ್ಷೆಯಿನ್ನೂ ಆಗಿರಲಿಲ್ಲ. ಆಗಲೇ ವಿದೇಶಕ್ಕೆ ಹಾರುವ ಅವಕಾಶವೊಂದು ಒದಗಿ ಬಂದಿತ್ತು. ಶ್ರೀ ಎಂ.ಎಲ್. ಸಾಮಗರ ನೇತೃತ್ವದ ತಂಡ. ಬಡಗು ಪ್ರದರ್ಶನ. ಕಡಿಮೆ ಅವಧಿಯಲ್ಲಿ ಪಾಸ್ ಪೋರ್ಟ್ ಮಾಡಿಸಿ ಪರೀಕ್ಷೆ ಬರೆಯದೆಯೇ ತಂಡದ ಜೊತೆ ವಿಮಾನವೇರಿ ಸಿಂಗಾಪುರಕ್ಕೆ ಹಾರಿದ್ದರು! ಹನ್ನೊಂದು ದಿನ ‘ನೃತ್ಯೋತ್ಸವ’ದಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮರಳಿದ್ದರು.

ವೇಷಧಾರಿಯಾಗಲು ಉತ್ತೇಜನ ನೀಡಿದವರು ಪೂರ್ಣಪ್ರಜ್ಞ  ಸಂಸ್ಕೃತ ಉಪಾನ್ಯಾಸಕರಾದ ಶ್ರೀ ಡಿ.ಜಿ.ಹೆಗಡೆ ಅವರು. ಅವರು ವೇಷಧಾರಿಯೂ ಆಗಿದ್ದರು. ಅವಕಾಶಗಳನ್ನಿತ್ತು ಪ್ರೋತ್ಸಾಹಿಸಿದ್ದರು. ಉಡುಪಿ ಸಮೂಹ ಸಂಸ್ಥೆಯ ಉದ್ಯಾವರ ಶ್ರೀ ಮಾಧವ ಆಚಾರ್ಯರೂ ಪ್ರೋತ್ಸಾಹಿಸಿದ್ದರು. ಕೇಂದ್ರ ಸರಕಾರದ ಸಾಂಸ್ಕೃತಿಕ ಸಂಘಗಳ ಅಡಿಯಲ್ಲಿ ಯಕ್ಷದೇಗುಲ ಬೆಂಗಳೂರು ಸಂಸ್ಥೆಯ ಪ್ರದರ್ಶನಗಳಲ್ಲಿ ಕರ್ನಾಟಕ ಹಳ್ಳಿ ಹಳ್ಳಿಗಳಲ್ಲಿ ವೇಷ ಮಾಡಿದ್ದರು. ಕರ್ನಾಟಕ ಕಲಾದರ್ಶಿನಿ, ಬೆಂಗಳೂರು ಈ ಸಂಸ್ಥೆಯ ಪ್ರದರ್ಶನಗಳಲ್ಲೂ ಕಲಾವಿದರಾಗಿ ಅಭಿನಯಿಸಿದ್ದರು.

ಶ್ರೀಮತಿ ರಶ್ಮಿ ಹೆಗ್ಡೆ ಗೋಪಿ ಇವರ ನೇತೃತ್ವದ ಶಂಕರ ಆರ್ಟ್ಸ್ ಫೌಂಡೇಶನ್, ಬೆಂಗಳೂರು ಸಂಸ್ಥೆಯ ಪ್ರದರ್ಶನಗಳಲ್ಲಿ ಅಮೆರಿಕಾದ ಹನ್ನೊಂದು ನಗರಗಳಲ್ಲಿ, ಯೂರೋಪಿನ ನಾಲ್ಕು ನಗರಗಳಲ್ಲಿ ಭಾಗವಹಿಸಿದ್ದರು. ಊರ ಪರವೂರ ಪ್ರದರ್ಶನಗಳಲ್ಲೂ ವೇಷಗಾರಿಕೆ. ಸ್ತ್ರೀ ವೇಷವನ್ನುಳಿದು ಉಳಿದ ಎಲ್ಲಾ ರೀತಿಯ ವೇಷಗಳನ್ನು ನಿರ್ವಹಿಸಿದ್ದರು. ಹಾಸ್ಯ ಪಾತ್ರಗಳನ್ನೂ ಮಾಡಿದ್ದರು. ರತ್ನಾವತೀ ಕಲ್ಯಾಣ ಪ್ರಸಂಗದ ಚಿತ್ರಧ್ವಜ, ಘೋಷಯಾತ್ರೆ ಪ್ರಸಂಗದ ಚಿತ್ರಸೇನ, ಬಬ್ರುವಾಹನ, ಕಂಸ ದಿಗ್ವಿಜಯ ಪ್ರಸಂಗದ ಕಂಸ, ಭಸ್ಮಾಸುರ ಮೊದಲಾದುವು ಹೆಸರು ಕೊಟ್ಟ ಪಾತ್ರಗಳು. ಶ್ರೀರಾಮ ಪಟ್ಟಾಭಿಷೇಕ  ಮಂಥರೆ ಪಾತ್ರವನ್ನೂ ಮಾಡಿದ್ದರು. ಹೊಸ ಪಾತ್ರಗಳು ಬಂದಾಗ ಹಿರಿಯ ಅನುಭವೀ ಕಲಾವಿದರಿಂದ ಮಾಹಿತಿ ಸಂಗ್ರಹಿಸುತ್ತಿದ್ದರು.

ಕಳೆದ ಎಂಟು ವರ್ಷಗಳಿಂದ ಸತೀಶ ಉಪಾಧ್ಯ ಅವರು ವೇಷ ಮಾಡುವುದನ್ನು ನಿಲ್ಲಿಸಿ ತರಬೇತುದಾರರಾಗಿ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀ ಕೆ. ಮೋಹನ್ ಅವರ ಯಕ್ಷದೇಗುಲ ಬೆಂಗಳೂರು ಈ ತಂಡದಲ್ಲಿ ವೇಷ ಮಾಡುತ್ತಿರುವಾಗ ಅವರು ಮಕ್ಕಳಿಗೆ ತರಬೇತಿ ನೀಡುವುದಕ್ಕಾಗಿ ಸತೀಶ ಉಪಾಧ್ಯರನ್ನು ಶಾಲೆಗಳಿಗೆ ಕಳಿಸುತ್ತಿದ್ದರು. ಯಕ್ಷಗಾನ ಶಿಕ್ಷಕನಾಗಿ ಮುಂದುವರಿಯಲು ಸತೀಶ ಉಪಾಧ್ಯರಿಗೆ ಕೆ. ಮೋಹನ್ ಅವರೇ ಪ್ರೇರಕರು. ನಿನಗೆ ಆ ಸಾಮರ್ಥ್ಯ ಇದೆ ಎಂದು ಹೇಳಿ ಹುರಿದುಂಬಿಸಿದ್ದರು. ಮೊತ್ತ ಮೊದಲು ತರಬೇತಿ ಆರಂಭಿಸಿದ್ದು ಹೊಸ್ತೋಟ ಮಂಜುನಾಥ ಭಾಗವತರ ನಿರ್ದೇಶನದಲ್ಲಿ ಹಾರ್ಸಿಕಟ್ಟಾ ಎಂಬಲ್ಲಿ. ದಿವಾನ ಯಕ್ಷ ಸಮೂಹ ತಂಡದ ಪರವಾಗಿ. ಇವರನ್ನು ಅಲ್ಲಿಗೆ ಕರೆಸಿದವರು ಸತೀಶ ಹೆಗಡೆ ದಂಟಕಲ್. 2004ರಲ್ಲಿ. ಇಲ್ಲಿ ಶಿಬಿರದಡಿಯಲ್ಲಿ ನಿರಂತರ ಹತ್ತು ವರ್ಷ ನಾಟ್ಯ ತರಬೇತಿಯನ್ನು ನೀಡಿದ್ದರು.

ಬಳಿಕ ಶ್ರೀ ಡಿ.ಜಿ.ಭಟ್ಟರ ಮುಂದಾಳತ್ವದಲ್ಲಿ ಕೋಳಿಗಾರದಲ್ಲಿ, ತುಳ್ಗೇರಿ ಗಜಾನನ ಭಟ್ಟರ ನೇತೃತ್ವದಲ್ಲಿ ವಾನಳ್ಳಿಯಲ್ಲಿ, ಶ್ರೀ ಆರ್.ಟಿ.ಹೆಗಡೆ ಕಲಾವನ ಇವರ ನೇತೃತ್ವದಲ್ಲಿ ಮಂಚಿಕೇರಿಯಲ್ಲಿ ತರಬೇತಿ ನೀಡಿದ್ದರು. ಮಂಚಿಕೇರಿಯಲ್ಲಿ ಎಳೆಯರಲ್ಲದೆ ವಯಸ್ಸಾದವರೂ ನಾಟ್ಯ ಕಲಿತಿದ್ದರು. ಸಾಗರ ಕಾಲೇಜಿನಲ್ಲಿ ಆಡಳಿತ ಮಂಡಳಿಯ ಸಹಕಾರದಿಂದ ವಿದ್ಯಾರ್ಥಿಗಳಿಗೆ, ಉಡುಪಿ ಯಕ್ಷಗಾನ ಕಲಾರಂಗದ ಯಕ್ಷ ಶಿಕ್ಷಣ ಟ್ರಸ್ಟ್ ಯೋಜನೆಯಡಿಯಲ್ಲಿ ಹಲವಾರು ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ತರಬೇತಿಯನ್ನು ನೀಡಿದ್ದರು. ಉಡುಪಿಯ ಹಲವಾರು ಸಂಘ ಸಂಸ್ಥೆಗಳಡಿಯೂ ಕಲಿಕಾಸಕ್ತರಿಗೆ ನಾಟ್ಯ ಹೇಳಿ ಕೊಟ್ಟಿರುತ್ತಾರೆ. ಇವರ ಕೈಯಿಂದ ನಾಟ್ಯ ಕಲಿತ ಅನೇಕರು ಉನ್ನತ ಹುದ್ದೆಯಲ್ಲಿದ್ದು ಹವ್ಯಾಸೀ ಕಲಾವಿದರಾಗಿ ಭಾಗವಹಿಸುತ್ತಿದ್ದಾರೆ.

ಪ್ರದರ್ಶನಗಳಲ್ಲಿ ಚೆಂಡೆವಾದಕರಾಗಿಯೂ ಭಾಗವಹಿಸುತ್ತಿದ್ದಾರೆ. ಬಡಗಿನ ಪ್ರದರ್ಶನಗಳಿಗೆ ವೇಷಭೂಷಣಗಳನ್ನು ಒದಗಿಸಿ ಕೊಡುತ್ತಾರೆ. 2013ರಲ್ಲಿ ಪೂರ್ಣಪ್ರಜ್ಞ ಯಕ್ಷ ಕಲಾ ಕೇಂದ್ರವನ್ನು ಸ್ಥಾಪಿಸಿ ಈ ಸಂಸ್ಥೆಯಡಿ ಹಲವಾರು ಕಡೆ ನಾಟ್ಯ ತರಗತಿಗಳನ್ನು ನಡೆಸುತ್ತಿದ್ದಾರೆ. ಭಾರತ ಸರಕಾರದ ಸಾಂಸ್ಕೃತಿಕ ಇಲಾಖೆಯು ಕೊಡಮಾಡುವ ವಿದ್ಯಾರ್ಥಿ ವೇತನಕ್ಕೂ ಇವರು ಆಯ್ಕೆಯಾಗಿದ್ದರು. ಹಿಮ್ಮೇಳ ಕಲಿತುದು ನಾಟ್ಯ ಕಲಿಸಲು ಅನುಕೂಲವಾಗಿತ್ತು. ಎಲ್ಲರಿಗೂ ಹೇಳಿ ಕೊಡುವ ಕಲೆಯು ಸಿದ್ಧಿಸದು. ಮಕ್ಕಳಿಗೆ ಸರಳವಾಗಿ ಹೇಳಿ ಕೊಡುವ ಕಲೆ ಸತೀಶ ಉಪಾಧ್ಯರಿಗೆ ಕರಗತವಾಗಿದೆ ಎಂದು ವೃತ್ತಿ ಕಲಾವಿದರೂ ಹೇಳುತ್ತಾರೆ.

ಇವರು ಮೇಳದ ತಿರುಗಾಟದಲ್ಲಿ ಆಸಕ್ತರಲ್ಲ. ಆದರೂ ಅನಿವಾರ್ಯಕ್ಕೆ ಕರೆದರೆ ಚೆಂಡೆ ಬಾರಿಸಲು ಹೋಗುತ್ತಾರೆ. ತಂದೆ ಶ್ರೀ ರಾಘವೇಂದ್ರ ಉಪಾಧ್ಯಾಯರು ನಿವೃತ್ತರಾದರೂ ಅಂಬಲಪಾಡಿ ಶಾಲೆಯ ಸಂಬಂಧವನ್ನು ಬಿಡದೆ ಇರಿಸಿಕೊಂಡು ನೋಡಿಕೊಳ್ಳುತ್ತಿದ್ದಾರೆ. ಆಡಳಿತ ಮಂಡಳಿಗೆ ಸಹಕಾರಿಯಾಗಿದ್ದಾರೆ. “ಕಲಿಕಾಸಕ್ತರಿಗೆ ವಿದ್ಯಾದಾನ ಮಾಡುವಲ್ಲಿ ಆಸಕ್ತಿಯಿದೆ. ತೃಪ್ತಿಯಿದೆ. ಮಕ್ಕಳು ಕಲಾವಿದರಾಗಿ ಹೆಸರು ತಂದರೆ ನನಗದು ಸಂತೋಷ” ಇದು ಸದ್ದಿಲ್ಲದೇ ಕಲಾಸೇವೆಯನ್ನು ಮಾಡುವ, ಕಲಾವಿದ, ಕಲಾಶಿಕ್ಷಕ ಶ್ರೀ ಸತೀಶ ಉಪಾಧ್ಯ ಅವರ ಮನದ ಮಾತು.

ಶ್ರೀಯುತರು ಸಂಸಾರಿಕವಾಗಿಯೂ ಅತ್ಯಂತ ತೃಪ್ತರು. ಪತ್ನಿ ಶ್ರೀಮತಿ ಲತಾ ಸತೀಶ ಉಪಾಧ್ಯ. ಸತೀಶ ಉಪಾಧ್ಯ, ಲತಾ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಮಾ| ಮಾಣಿಕ್ಯ. 4ನೆಯ ತರಗತಿ ವಿದ್ಯಾರ್ಥಿ. ಕಿರಿಯ ಪುತ್ರ ಮಾ| ಮದನ 3ನೆಯ ತರಗತಿ ವಿದ್ಯಾರ್ಥಿ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ಸತೀಶ ಉಪಾಧ್ಯರು ತರಬೇತಿಯನ್ನು ನೀಡುತ್ತಾ ಬಹಳಷ್ಟು ಕಲಾವಿದರನ್ನು ಸಿದ್ಧಗೊಳಿಸಿ ಕಲಾಮಾತೆಯ ಮಡಿಲಿಗಿಕ್ಕುವ ಸತ್ಕಾರ್ಯವನ್ನು ಮಾಡುವಂತಾಗಲಿ. ಶ್ರೀ ದೇವರು ಅವರಿಗೆ ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ  ಹಾರೈಕೆಗಳು.

ಲೇಖಕ: ರವಿಶಂಕರ್ ವಳಕುಂಜ 

ಶಂಭು ಶರ್ಮ ವಿಟ್ಲ – ತನ್ನದೇ ಶೈಲಿಯ ವಿಶಿಷ್ಟ ಅರ್ಥಧಾರಿ (Shambhu Sharma Vitla)

ವಿಟ್ಲ ಶಂಭು ಶರ್ಮ ಎಂಬ ಹೆಸರೇ ಒಂದು ಕಾಲದಲ್ಲಿ ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದ್ದ ಹೆಸರು. ತಾಳಮದ್ದಳೆ ಪ್ರಿಯ ಪ್ರೇಕ್ಷಕರ ದೈನಂದಿನ ಚರ್ಚೆಗಳಲ್ಲಿ ಆಗಾಗ ಪ್ರಸ್ತಾಪವಾಗುತ್ತಿದ್ದ ವ್ಯಕ್ತಿತ್ವ. ನಾನು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿಯೂ ಮನೆಯಲ್ಲಿ, ಸಮಾರಂಭಗಳಲ್ಲಿ ಶಂಭು ಶರ್ಮ ಎಂಬ ತಾಳಮದ್ದಳೆಯ ಹೊಸ ಪ್ರತಿಭೆಯ ಬಗ್ಗೆ ಮಾತನಾಡುವುದನ್ನು ಕೇಳಿದ್ದೆ. ‘ಒಳ್ಳೆ ಅರ್ಥ ಹೇಳ್ತಾರಂತೆ, ವಾದದಲ್ಲಿ ಎತ್ತಿದ ಕೈ” ಹೀಗೆ ಮಾತನಾಡುವುದು ಕೇಳಿಬರುತ್ತಿತ್ತು.

ಆಮೇಲೆ ಅವರ ಅರ್ಥಗಾರಿಕೆಯನ್ನು ಹಲವಾರು ಬಾರಿ ಕೇಳುವ ಅವಕಾಶವೂ ಬಂತು.  ವರ್ತಮಾನದ ಆಗುಹೋಗುಗಳ ಹೋಲಿಕೆ, ಹಾಸ್ಯಪ್ರವೃತ್ತಿ, ಶೃಂಗಾರ,  ಹುಡುಗಾಟಿಕೆಯ ಮನೋಭಾವ, ಇವುಗಳನ್ನೆಲ್ಲಾ ತನ್ನ ಅರ್ಥಗಾರಿಕೆಯಲ್ಲಿ ಬಳಸುವ ಶಂಭು ಶರ್ಮರ ಅರ್ಥಗಾರಿಕೆಯ ಶೈಲಿ  ಜನಪ್ರಿಯತೆಯನ್ನು ಸಾಧಿಸಿತು.  ತಾಳಮದ್ದಳೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಹೆಸರು. ಮಲ್ಪೆ ಶಂಕರನಾರಾಯಣ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್, ದೇರಾಜೆ ಸೀತಾರಾಮಯ್ಯ ಮತ್ತು  ಪ್ರಸ್ತುತ ಕೂಟಗಳಲ್ಲಿ ಸಕ್ರಿಯರಾಗಿರುವ ಹಲವಾರು ಈಗಿನ ಕಿರಿಯ ಅರ್ಥಧಾರಿಗಳ ಜೊತೆಗೂ ಈಗಲೂ ಬಹುಬೇಡಿಕೆಯ ಅರ್ಥಧಾರಿ.

ಅವರು ಅತಿ ಕಿರಿಯ ವಯಸ್ಸಿನಲ್ಲಿ ಪ್ರೇಕ್ಷಕನಾಗಿ ಹೋಗಿದ್ದ ತಾಳಮದ್ದಳೆ ಕೂಟವೊಂದರಲ್ಲಿ ಅನಿವಾರ್ಯವಾಗಿ ಅರ್ಥಧಾರಿಯಾಗಿ ಭಾಗವಹಿಸಿದಾಗ ಎದುರು ಪಾತ್ರಧಾರಿಯಿಂದ ಆದ ಮಾತಿನ ದಾಳಿಯಲ್ಲಿ ಸೋತು ಕಣ್ಣೀರಿಳಿಸಿದ ಅವರು ಮುಂದೆ ಹಠದಿಂದ ತಾಳಮದ್ದಳೆ ಅರ್ಥಧಾರಿಯಾಗಿ ಸಾಧನೆಯನ್ನು ಮಾಡಿದರು. 

ವಿಟ್ಲ ಶಂಭುಶರ್ಮ ಹುಟ್ಟಿದ್ದು  13-10-1951ರಲ್ಲಿ ಕುಂಬಳೆ ಸೀಮೆಯ ಎಡನಾಡು ಗ್ರಾಮದ ಶೆಡಂಪಾಡಿ ಎಂಬಲ್ಲಿ.  ತಂದೆಯವರು ದಿ| ಕೃಷ್ಣ ಭಟ್ರು, ತಾಯಿ ಹೇಮಾವತಿ ಅಮ್ಮ. ತಂದೆಯವರು ಹೆಡ್‍ಮಾಸ್ಟ್ರು. ಓದಿದ್ದು ಬೇರೆ ಬೇರೆ ಕಾಲೇಜುಗಳಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ  ಓದಿ 35 ವರ್ಷ ಬೇರೆ ಬೇರೆ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ದುಡಿದು ಎಲ್ಲಿಯೂ ಖಾಯಂ ಆಗದೆ ನಿವೃತ್ತಿ ಹೊಂದಿದರು. 


ಮೊದಲೇ ಹೇಳಿದಂತೆ ಆಕಸ್ಮಿಕ ಸನ್ನಿವೇಶವೊಂದರಲ್ಲಿ ಯಕ್ಷಗಾನ ತಾಳಮದ್ದಳೆ ಕೂಟವೊಂದರಲ್ಲಿ ಅರ್ಥ ಹೇಳಿದ ಶಂಭು ಶರ್ಮ ಮುಂದಕ್ಕೆ ಅದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಮೊದಲ ಅನಿರೀಕ್ಷಿತ ಅವಕಾಶದಲ್ಲಿ ಆದ ಮುಖಭಂಗ ಅವರನ್ನು ಮುಂದೆ ಹಠವಾದಿಯನ್ನಾಗಿ ಬೆಳೆಸಿತು. ವಿಟ್ಲಕ್ಕೆ ಬಂದಿದ್ದ ಪ್ರಸಿದ್ಧ ಅರ್ಥಧಾರಿ ದೇರಾಜೆ ಸೀತಾರಾಮಯ್ಯನವರನ್ನು ಭೇಟಿಯಾಗಿ ಅರ್ಥಗಾರಿಕೆ ಕಲಿಸಿಕೊಡುವಂತೆ ಬಿನ್ನವಿಸಿದ್ದರು. ‘‘ಅರ್ಥಗಾರಿಕೆ ಎಂಬುದು ಕಲಿಸಿಕೊಡುವಂಥದ್ದಲ್ಲ. ತಾನಾಗಿ ಕಲಿತು ಸಿದ್ಧಿಸುವಂತದ್ದು’’ ಎಂದು ದೇರಾಜೆಯವರು ಹೇಳಿದರು. ಆದರೂ ಅವರೊಡನೆ ಸಂಭಾಷಣೆಯ ಮತ್ತು ಪಾತ್ರಗಳ ಸೂಕ್ಷ ಮರ್ಮಗಳನ್ನು ಕಲಿತರು.

ಅರ್ಥಧಾರಿಯಾಗಿ ಬೆಳೆಯಲು ಕರ್ಗಲ್ಲು ಸುಬ್ಬಣ್ಣ ಭಟ್ಟರು ಶಂಭು ಶರ್ಮರಿಗೆ ತುಂಬಾ ಪ್ರೋತ್ಸಾಹವನ್ನು ಕೊಟ್ಟರು. ಅದರಂತೆ ವಿಟ್ಲದ ಹಲವಾರು ಕೂಟಗಳಲ್ಲಿ ಹಿರಿಯ ಕಲಾವಿದರಾಗಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಪೆರುವೋಡಿ ನಾರಾಯಣ ಭಟ್ಟರೇ ಮೊದಲಾದವರು ಭಾಗವಹಿಸುತ್ತಿದ್ದುದರಿಂದ ಶಂಭು ಶರ್ಮರಿಗೆ ಅರ್ಥಧಾರಿಯಾಗಿ ಬೆಳೆಯಲು ಅನುಕೂಲವಾಯಿತು. ಆದರೆ ಶಂಭು ಶರ್ಮರಿಗೆ ಉದ್ಯೋಗದ ಕಾರಣದಿಂದ ಅರ್ಥಗಾರಿಕೆಯಲ್ಲಿ ಮತ್ತು ತಾಳಮದ್ದಳೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ಆಗುತ್ತಲೇ ಇರಲಿಲ್ಲ. ಅವರು ಉಪನ್ಯಾಸಕ ವೃತ್ತಿಯನ್ನು ಕೈಗೊಂಡಿದ್ದ ಕೆಲವು ಕಾಲೇಜಿನ ಪರಿಸರಗಳಲ್ಲಿ ಯಕ್ಷಗಾನ, ತಾಳಮದ್ದಳೆಗಳು ನಡೆಯುತ್ತಿರಲಿಲ್ಲ. ಹೀಗೆ ಆಗಾಗ ತನ್ನ ವೃತ್ತಿ ಬದುಕಿನ ನಡುವೆ ಯಕ್ಷಗಾನ ಕ್ಷೇತ್ರದಿಂದ ದೂರ ಉಳಿಯಬೇಕಾಗಿ ಬರುತ್ತಿತ್ತು. 

ತುರ್ತುಪರಿಸ್ಥಿತಿಯ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಕ್ಷಗಾನದಿಂದ ದೂರವಾಗಿದ್ದರು.  ತುರ್ತುಪರಿಸ್ಥಿತಿಯ ನಂತರ ಗಣಪತಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿದ ನಂತರ ಆ ಸಂದರ್ಭದಲ್ಲಿ ಪುನಃ ಯಕ್ಷಗಾನದಲ್ಲಿ ಬೆಳೆಯುವುದಕ್ಕೆ ಅವಕಾಶ ಆಯಿತು. ಬೆಸೆಂಟ್ ಸಂಜೆ ಕಾಲೇಜು, ಬೆಸೆಂಟ್ ಡೇ ಕಾಲೇಜು- ಹೀಗೆ ಹಲವು ಕಾಲೇಜುಗಳಲ್ಲಿ ದುಡಿಯುತ್ತಾ  ರಾತ್ರಿ ಶ್ರೀಧರ ರಾಯರ ನೇತೃತ್ವದ ಯಕ್ಷಗಾನ ಬಯಲಾಟಗಳಲ್ಲಿ ಭಾಗವಹಿಸುತ್ತಿದ್ದರು. ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದರು. 

ಯೌವನದ ಪ್ರಾರಂಭದಲ್ಲಿ ಹೀಗೆ ಅವಿಶ್ರಾಂತಿಯಿಂದ ದುಡಿಯುತ್ತಿದ್ದರೂ ಮತ್ತೆ ಪುನಃ ಮೂರ್ನಾಡಿಗೆ ಉದ್ಯೋಗಕ್ಕಾಗಿ ತೆರಳಿದಾಗ ಯಕ್ಷಗಾನದ ಸಂಪರ್ಕ ಮುರಿಯಿತು. ಎರಡು ವರ್ಷದ ನಂತರ ಮೂರ್ನಾಡಿಂದ ಮಂಗಳೂರಿನ ಫಿಶರೀಸ್ ಕಾಲೇಜಿಗೆ ಬಂದಾಗ ಮತ್ತೆ ಯಕ್ಷಗಾನದ ಅವಕಾಶಗಳು ಕೈತುಂಬಾ ಬಂದು ಜನಪ್ರಿಯನಾಗಲು ಸಹಾಯಕವಾಯಿತು. ಆದರೆ ಯಾಕೋ ಮತ್ತೆ ತಡೆ ಬಂತು. ಮುಂದಿನ ಎಂಟು ವರ್ಷಗಳ ಕಾಲ ಸೋಮವಾರಪೇಟೆಯ ಕಾಲೇಜಿನಲ್ಲಿ ಕೆಲಸ ಮಾಡಬೇಕಾಗಿ ಬಂತು. ಹೀಗೆ ಯಕ್ಷಗಾನದ ಸಂಪರ್ಕ ಆಗಾಗ ಕಡಿಯುತ್ತಾ ಇದ್ದುದು ಶಂಭು ಶರ್ಮರ ಕಲಾ ಬದುಕಿನ ದುರಂತವೆಂದೇ ಹೇಳಬೇಕು. ಸೋಮವಾರಪೇಟೆಯಿಂದ ಬಂದ ನಂತರ ವಿಜಯಾ ಕಾಲೇಜು, ಮುಲ್ಕಿ, ಸುಂಕದಕಟ್ಟೆ ಕಾಲೇಜು ಇಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಥಮ ಹಂತದ ಅರ್ಥಧಾರಿಗಳ ಸಾಲಿಗೆ ಸೇರಿದ್ದರು. 

ವಿಟ್ಲ ಶಂಭು ಶರ್ಮ ಕೇವಲ ತಾಳಮದ್ದಳೆ ಕ್ಷೇತ್ರದಲ್ಲಿ ಅರ್ಥಧಾರಿ ಎಂದು ಹಚ್ಚಿನವರು ಭಾವಿಸಿರಬಹುದು. ಆದರೆ ಅವರು ಯಕ್ಷಗಾನ ವೇಷಧಾರಿಯಾಗಿಯೂ ಕೆಲವು ವರ್ಷಗಳ ತಿರುಗಾಟ ಮಾಡಿದ್ದಾರೆ ಎಂದರೆ ಕೆಲವರಿಗೆ ಆಶ್ಚರ್ಯವಾಗಬಹುದು. ಶ್ರೀಧರ ರಾಯರ ತಂಡದಲ್ಲಿ ಹಾಗೂ ಕರ್ನೂರು ಕೊರಗಪ್ಪ ರೈಗಳ ತಂಡದಲ್ಲಿ ಖಾಯಂ ವೇಷಧಾರಿಯಾಗಿದ್ದರು.  ಮಾತ್ರವಲ್ಲ ಫೆಬ್ರವರಿ 28ಕ್ಕೆ ಕಾಲೇಜಿನ ಪಾಠವನ್ನು ಮುಗಿಸಿದ ಮೇಲೆ, ಬೇರೆ ಬೇರೆ ಮೇಳಗಳಲ್ಲಿ ಅಂದರೆ, ಸುಬ್ರಹ್ಮಣ್ಯ, ಕದ್ರಿಮೇಳ ಮೊದಲಾದುವುಗಳಲ್ಲಿ ಅತಿಥಿ ಕಲಾವಿದನಾಗಿ ಭಾಗವಹಿಸುತ್ತಿದ್ದರು.  ಒಂದು ವರ್ಷ ಉದ್ಯೋಗಕ್ಕೆ ರಜೆ ಹಾಕಿ ಪೂರ್ಣಾವಧಿ ಕಲಾವಿದನಾಗಿ ನಾರಾಯಣ ಕಮ್ತಿಯವರ ಬಪ್ಪನಾಡು ಮೇಳದಲ್ಲಿ ತಿರುಗಾಟ ಮಾಡಿದ್ದರು.

ಆಮೇಲೆ ಅನಿರೀಕ್ಷಿತ ಅಪಘಾತವಾಗಿದ್ದರಿಂದ ಚಿಟ್ಟೆಪಟ್ಟಿ ಕಟ್ಟಲಿಕ್ಕೂ ಕಷ್ಟವಾಗಿ ಯಕ್ಷಗಾನ ತಿರುಗಾಟವನ್ನು ನಿಲ್ಲಿಸಿದ್ದರು. ಆದರೆ ಕೆಲವೊಮ್ಮೆ ಅತಿಥಿ ಕಲಾವಿದನಾಗಿ ಅಪರೂಪಕ್ಕೆ ಒಂದೊಂದು ವೇಷವನ್ನು ಆಗಾಗ ಮಾಡುತ್ತಿದ್ದರು. ಶಂಭು ಶರ್ಮ ತನ್ನ 14ನೆಯ ವಯಸ್ಸಿನಲ್ಲಿ ಸೂರಂಬೈಲಿನಲ್ಲಿ ನಡೆದ ‘ಭೀಷ್ಮಪರ್ವ’ ತಾಳಮದ್ದಳೆ ಕೂಟದಲ್ಲಿ ದೊಡ್ಡ ಸಾಮಗರ (ಮಲ್ಪೆ ಶಂಕರನಾರಾಯಣ ಸಾಮಗ) ಭೀಷ್ಮನ ಪಾತ್ರಕ್ಕೆದುರಾಗಿ ಅಭಿಮನ್ಯುವಾಗಿ ಅರ್ಥ ಹೇಳಿದ್ದರು. ದೊಡ್ಡ ಸಾಮಗರು ಇವರ ಅರ್ಥವನ್ನು ಮೆಚ್ಚಿಕೊಂಡು ಪ್ರಶಂಸಿಸಿದ್ದರು. 

ಯಕ್ಷಗಾನಕ್ಕೆ ಶೈಕ್ಷಣಿಕ ಶಿಸ್ತಿನ ಗ್ರಂಥವನ್ನು ಅವಶ್ಯಕತೆಯ ಬಗ್ಗೆ ಶಂಭು ಶರ್ಮರಲ್ಲಿ ಕೇಳಿದಾಗ “ಅದು ಸಾಧ್ಯ ಇಲ್ಲ ಎಂದೇ ನನ್ನ ಅಭಿಪ್ರಾಯ. ಯಕ್ಷಗಾನ ಎಂದರೆ ಚೌಕಟ್ಟಿನೊಳಗಿರುವ ಸ್ವಾತಂತ್ರ್ಯ. ಇದಕ್ಕೆ ಚೌಕಟ್ಟೂ ಇದೆ, ಸ್ವಾತಂತ್ರ್ಯವೂ ಇದೆ ಎಂದಾಗ ಒಂದು clean syllabus ಸಾಧ್ಯವಿಲ್ಲ. ಒಂದು ರೂಪುರೇಷೆಗಳ outline ಮಾಡಬಹುದೇ ಹೊರತು ಕಡ್ಡಾಯ ಕಾನೂನಿನಲ್ಲಿ ಯಕ್ಷಗಾನವನ್ನು ಒಳಪಡಿಸಲು ಸಾಧ್ಯವೇ ಇಲ್ಲ. ಸ್ವಾತಂತ್ರ್ಯ ಸ್ವಲ್ಪ ಇದ್ದರೂ ಅದು ದುರುಪಯೋಗ ಆಗಬಾರದು ಎಂದು ನಿರ್ದೇಶನಗಳನ್ನು ಕೊಡಬಹುದೇ ಹೊರತು ಕಟ್ಟುನಿಟ್ಟು ಎಂಬುದು ಯಕ್ಷಗಾನದಲ್ಲಿ ಕಷ್ಟ” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಶಂಭು ಶರ್ಮರಿಗೆ ಸಂಕಷ್ಟದ ಕಾಲವೊಂದಿತ್ತು. ಅಪಘಾತವೊಂದರಲ್ಲಿ ದೈಹಿಕವಾಗಿ ಜರ್ಝರಿತರಾಗಿದ್ದ ಸಮಯದಲ್ಲಿ ಫ್ರಾಕ್ಚರ್ ಆಗಿ ಕೈಯೊಂದನ್ನು ರಾಡ್ ಹಾಕಿ ಕೊರಳಿಗೆ ನೇತಾಡಿಸಿದ್ದರು. ಈ ಸ್ಥಿತಿಯಲ್ಲೇ ಶಂಭು ಶರ್ಮರು ಸುಮಾರು 50 ತಾಳಮದ್ದಳೆಗಳಲ್ಲಿ ಭಾಗವಹಿಸಿದ್ದರು. ಎಲ್ಲರಿಂದಲೂ ಇದು ಸಾಧ್ಯವಾಗುವ ಕಾರ್ಯವಲ್ಲ. ಶಂಭು ಶರ್ಮ ಇವರು ಯಕ್ಷರಂಗ ಪ್ರಶಸ್ತಿ, ಪೆರ್ಲ ಕೃಷ್ಣ ಭಟ್ಟ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆಯ ಪುರಸ್ಕಾರ, ವಿಟ್ಲ ಜೋಷಿ ಪ್ರಶಸ್ತಿ, ಮುಂಬಯಿ ಅಜೆಕಾರು ಪ್ರಶಸ್ತಿಯೇ ಮೊದಲಾದ ಹಲವಾರು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿದ್ದಾರೆ. ಈಗ ಪತ್ನಿ ಲಕ್ಷ್ಮೀಶರ್ಮ, ಮಗ ಕೃಷ್ಣರಾಜ, ಸೊಸೆ ವಿದ್ಯಾ, ಮೊಮ್ಮಗ ನಿಶ್ಚಯರೊಂದಿಗೆ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ. 

ಲೇಖನ: ಮನಮೋಹನ್ ವಿ.ಎಸ್. 

ಒಡಲಿನ ಮಡಿಲು ಯಕ್ಷತಾರೆ – ಹೊಸ್ತೋಟ ಮಂಜುನಾಥ ಭಾಗವತ 

‘ಒಡಲಿನ ಮಡಿಲು-ಯಕ್ಷತಾರೆ’ ಇದು ಬಡಗು ತಿಟ್ಟಿನ ಶ್ರೇಷ್ಠ ಕಲಾವಿದ, ಪ್ರಸಂಗಕರ್ತ, ಗುರುವಾಗಿ ಮೆರೆದ ಶ್ರೀ ಹೊಸ್ತೋಟ ಮಂಜುನಾಥ ಭಾಗವತರ ಬದುಕಿನ ಕುರಿತಾಗಿ ತಿಳಿಸುವ ಕೃತಿಯು. ಶ್ರೀಯುತರ ಜೀವಿತಾವಧಿ 1940-2019.

ಈ ಕೃತಿಯ ಪ್ರಕಾಶಕರು ‘ಅನೇಕ’, ನಾರಾಯಣ ಜೋಶಿ ಚಾರಿಟೇಬಲ್ ಟ್ರಸ್ಟ್,ಬೆಂಗಳೂರು ಈ ಸಂಸ್ಥೆಯ ಪ್ರಕಾಶ್ ಎನ್. ಜೋಶಿ ಅವರು. ಪ್ರಧಾನ ಸಂಪಾದಕಿ ಮಮತಾ.ಜಿ ಅವರು. ಶ್ರೀಮತಿ ವಿಜಯಾ ನಳಿನಿ ರಮೇಶ್ ಶಿರಸಿ, ಶ್ರೀ ಜಿ.ಎಲ್.ಹೆಗಡೆ ಕುಮಟಾ, ಶ್ರೀ ಶಂಕರ ಶಾಸ್ತ್ರಿ ಕೋಟೆಗುಡ್ಡ ಇವರನ್ನೊಳಗೊಂಡ ಸಂಪಾದಕ ಮಂಡಳಿಯ ಪರಿಶ್ರಮದಲ್ಲಿ ಈ ಪುಸ್ತಕವು 2015ರಲ್ಲಿ ಪ್ರಕಟವಾಗಿತ್ತು.

ಈ ಕೃತಿಯನ್ನು ಯಕ್ಷಗಾನದ ಮೇರು ಕಲಾವಿದ ಶ್ರೀ ಕೆ.ಶಿವರಾಮ ಹೆಗಡೆಯವರ ದಿವ್ಯ ಸ್ಮರಣೆಗೆ ಸಮರ್ಪಿಸಲಾಗಿದೆ. ಇದು ಒಟ್ಟು ನೂರಾ ಎಪ್ಪತ್ತಾರು ಪುಟಗಳನ್ನು ಹೊಂದಿದೆ. ಶ್ರೀ ಹೊಸ್ತೋಟ ಮಂಜುನಾಥ ಭಾಗವತರು ತಮ್ಮ ಅನಿಸಿಕೆಗಳನ್ನು ‘ಅರಿಕೆ’ ಎಂಬ ಬರಹದಲ್ಲಿ ತಿಳಿಸಿರುತ್ತಾರೆ. ಪ್ರಧಾನ ಸಂಪಾದಕಿ ಮಮತಾ.ಜಿ ಅವರು ‘ಅಕ್ಷರ ಕಿರೀಟ’ ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆದಿರುತ್ತಾರೆ.

ಜಾಹೀರಾತು

ಇದು ಭಾಗವತರ ಸಮಗ್ರ ಜೀವನಾನುಭವವನ್ನು ಕಟ್ಟಿಕೊಡುವ ಕೃತಿಯಲ್ಲ. ಬದಲಿಗೆ ಅವರ ಕೆಲವು ವಿಚಾರ, ಅನುಭವ, ಅನಿಸಿಕೆಗಳನ್ನು ಪರಿಚಯಿಸುವ ಕೃತಿ ಎಂಬ ವಿಚಾರವನ್ನು ತಮ್ಮ ಬರಹದಲ್ಲಿ ಮಮತಾ.ಜಿ ಅವರು ತಿಳಿಸಿರುತ್ತಾರೆ. ಈ ಕೃತಿಯಲ್ಲಿ ಹೊಸ್ತೋಟ ಮಂಜುನಾಥ ಭಾಗವತರು ತಮ್ಮ ಕಲಾಬದುಕಿನ ಬಹಳಷ್ಟು ವಿಚಾರಗಳನ್ನು ತಿಳಿಸಿರುತ್ತಾರೆ.

ಈ ಕೃತಿಯು ಪ್ರಕಟಗೊಳ್ಳಲು ಕಾರಣರಾದ ಪ್ರಕಾಶಕರಿಗೆ, ಸಂಪಾದಕರಿಗೆ, ಸಂಪಾದಕ ಮಂಡಳಿಗೆ ಅಭಿನಂದನೆಗಳು. ಸಾಹಿತ್ಯ ಸೇವೆಯು ನಿರಂತರವಾಗಿ ನಡೆಯುತ್ತಿರಲಿ ಎಂಬ ಆಶಯಗಳು.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ಮಹನೀಯರ ಮಹಾ ನುಡಿ-ಭಾಗ 5 (ಶ್ರೀ ಬಣ್ಣದ ಮಹಾಲಿಂಗ) – Bannada Mahalinga

 ಶ್ರೀ ಬಣ್ಣದ ಮಹಾಲಿಂಗ, ಖ್ಯಾತ ಬಣ್ಣದ ವೇಷಧಾರಿ(ಕೂಡ್ಲು ಶ್ಯಾನುಭಾಗ ಮನೆತನದ ಆಕರ ಗ್ರಂಥ ‘ಕುತ್ಯಾಳ ಸಂಪದ’ ಪುಸ್ತಕದಲ್ಲಿ)

“ನಾನು ಮಂಜಪ್ಪ ಹಾಸ್ಯಗಾರರಿಂದ ನಾಟ್ಯಾದಿಗಳನ್ನು ಅಭ್ಯಾಸ ಮಾಡಿ ಮೊದಲು ಗೆಜ್ಜೆ ಕಟ್ಟಿದ್ದು ಕೊರಕ್ಕೋಡು ಕಾರ್ತ್ಯಾಯಿನಿ ಮೇಳದಲ್ಲಿ. ನಿತ್ಯವೇಷ ಮಾಡಲಾರಂಭಿಸಿದ್ದು ಕೂಡ್ಲು ಮೇಳದಲ್ಲಿ. ಅನಂತರ ಕೇವಲ ಮೂರೇ ವರ್ಷದಲ್ಲಿ ಬಣ್ಣದ ವೇಷಧಾರಿಯಾದೆ.

ಕೂಡ್ಲು ಶ್ಯಾನುಭಾಗ ಮನೆತನದವರು ಸ್ಥಾಪಿಸಿದ ಕೂಡ್ಲು ಮೇಳ ಪ್ರಸಿದ್ಧವಾದ ಮೇಳಗಳಲ್ಲೊಂದಾಗಿದ್ದು ತೆಂಕುತಿಟ್ಟಿನ ಯಕ್ಷಗಾನದ ಅತಿರಥ ಮಹಾರಥರಲ್ಲಿ ಹೆಚ್ಚಿನವರೂ ಕೂಡ್ಲು ಮೇಳದ ಮೂಲಕ ಬೆಳಕಿಗೆ ಬಂದವರು.

ಜಾಹೀರಾತು 

ಕೂಡ್ಲು ಮೇಳದಲ್ಲಿದ್ದಾಗ ನಾನು ಧರಿಸಿದ ಪಾತ್ರಗಳಿಂದ ನನಗೆ ಮನ್ನಣೆ ಲಭಿಸಿರುತ್ತದೆ. ಜನರು ಪ್ರೋತ್ಸಾಹಿಸಿದ್ದಾರೆ. ಗೌರವಿಸಿದ್ದಾರೆ. ನಾನು ಯಕ್ಷಗಾನ ವೇಷಧಾರಿ ಆದದ್ದೇ ಕೂಡ್ಲು ಮೇಳದಿಂದ ಎಂಬುದನ್ನು ಅಭಿಮಾನದಿಂದ ಹೇಳುತ್ತಿದ್ದೇನೆ. ಕೂಡ್ಲು ಮೇಳದಲ್ಲಿ ಭಾಗವತರಾಗಿದ್ದ ಪುತ್ತಿಗೆ ರಾಮಕೃಷ್ಣ ಜೋಯಿಸರ ಪ್ರೇರಣೆಯಿಂದ ಮೂರನೆಯ ಬಣ್ಣಕ್ಕೆ ಆರಂಭಿಸಿದ ನಾನು ಕೆಲವು ಕಾಲದ ನಂತರ ಎರಡನೆಯ ಬಣ್ಣವನ್ನು ನಿರ್ವಹಿಸಿದೆ.

ಆಗ ಕೂಡ್ಲು ಮೇಳದಲ್ಲಿ ಒಂದನೆಯ ಬಣ್ಣದ ವೇಷಧಾರಿಯಾಗಿದ್ದ ಸುಬ್ಬಣ್ಣ ಶೆಟ್ಟಿ ಎಂಬವರಿದ್ದರು. ಅವರು ಚೌಕಿಯಲ್ಲಿ ಬಣ್ಣದ ಬಗೆಗೆ ನನಗೆ ಮಾಹಿತಿಗಳನ್ನು ನೀಡುತ್ತಿದ್ದರು. ಮೇಳವನ್ನು ಸ್ಥಾಪಿಸಿ, ಕಲಾವಿದರನ್ನು ಸೃಷ್ಟಿಸಿ ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡಿದ ಕೂಡ್ಲು ಶ್ಯಾನುಭಾಗ ಮನೆತನದವರ ಸತ್ಕಾರ್ಯ ಚಿರಸ್ಮರಣೀಯವಾದುದು. ಅವರ ಬದುಕಿನ ಮಹತ್ವಗಳೆಲ್ಲ ನಮಗೆಲ್ಲಾ  ದಾರಿದೀಪವಾಗಿದೆ”

ವಾಲಿಮೋಕ್ಷ – ಪಾಲ್ತಾಡಿಯಲ್ಲಿ ಯಕ್ಷಗಾನ ತಾಳಮದ್ದಳೆ

ಪುತ್ತೂರು ತಾಲೂಕು ಉಳ್ಳಾಕುಲು ಫ್ರೆಂಡ್ಸ್ ಕ್ಲಬ್, ಪಾಲ್ತಾಡಿ ಇವರ ಪ್ರಾಯೋಜಕತ್ವದಲ್ಲಿ ‘ವಾಲಿಮೋಕ್ಷ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ಪಾಲ್ತಾಡಿಯಲ್ಲಿ ಈ ತಾಳಮದ್ದಳೆ ನಡೆಯಲಿದೆ ಎಂದು ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಗುರುಕಿರಣ್ ಬೊಳಿಯಾಲ ಮತ್ತು ಕಾರ್ಯದರ್ಶಿಗಳಾದ ಪ್ರದೀಪ್ ಶೆಟ್ಟಿ ಪಾಲ್ತಾಡಿ ತಿಳಿಸಿದ್ದಾರೆ.

ಜಾಹೀರಾತು

ದಿನಾಂಕ 16. 11. 2020 ಸೋಮವಾರ ಅಪರಾಹ್ನ 2 ಘಂಟೆಗೆ ಸರಿಯಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ತಾಳಮದ್ದಳೆ ಆರಂಭವಾಗಲಿದೆ. ಕಾರ್ಯಕ್ರಮದ ವಿವರ ಲಗತ್ತಿಸಲಾಗಿದೆ. 

ಕುಂಬಳೆಯ ರಸ್ತೆಗೆ ಪಾರ್ತಿಸುಬ್ಬನ ಹೆಸರು

‘ಪಾರ್ತಿಸುಬ್ಬ’ ಎಂಬ  ಹೆಸರು ಯಕ್ಷಗಾನದ ತಿಳುವಳಿಕೆಯುಳ್ಳ ಮಂದಿಯ ಹೃದಯದಲ್ಲಿ ಪುಳಕವನ್ನೆಬ್ಬಿಸಬಹುದು. ಯಕ್ಷಗಾನದ ಜನಕ ಎಂದೇ ಕರೆಯಲ್ಪಡುವ ಪಾರ್ತಿಸುಬ್ಬನ ಊರಾದ ಕಾಸರಗೋಡು ಜಿಲ್ಲೆಯ ಕುಂಬಳೆಯು ಪಾರ್ತಿಸುಬ್ಬನ ಹೆಸರಿನಿಂದ ಗುರುತಿಸಲ್ಪಟ್ಟಿದೆ.

ಯಕ್ಷಗಾನ ಕವಿ, ಕಲಾವಿದನೂ ಆದ ಪಾರ್ತಿಸುಬ್ಬನ ಸ್ಮರಣಾರ್ಥ ಕುಂಬಳೆಯ ರಸ್ತೆಯೊಂದಕ್ಕೆ ಅವರ ಹೆಸರನ್ನು ಇಡಲಾಗಿದೆ. ಕುಂಬಳೆಯ ಪೊಲೀಸ್ ಠಾಣೆಯ ಸಮೀಪದ ರಸ್ತೆಯೊಂದಕ್ಕೆ ಪಾರ್ತಿಸುಬ್ಬನ ಹೆಸರನ್ನು ಇಡಲಾಗಿದೆ. ಈ ರಸ್ತೆಯನ್ನು ‘ಯಕ್ಷಕವಿ ಪಾರ್ತಿಸುಬ್ಬ ರಸ್ತೆ’ ಎಂದು ನಾಮಕರಣ ಮಾಡಲಾಗಿದೆ.

ಈ ರಸ್ತೆಯ ನಾಮಫಲಕವನ್ನು ಕುಂಬಳೆಯಲ್ಲಿ ಅನಾವರಣಗೊಳಿಸಲಾಯಿತು. ಕುಂಬಳೆ ಗ್ರಾಮಪಂಚಾಯತ್ ಈ ರಸ್ತೆಗೆ ಯಕ್ಷಕವಿ ಪಾರ್ತಿಸುಬ್ಬ ರಸ್ತೆ ಎಂದು ನಾಮಕರಣ ಮಾಡಲು ಅಧಿಕೃತವಾಗಿ ಒಪ್ಪಿಗೆ ನೀಡಿತ್ತು.

ಈ ರಸ್ತೆಯ ನಾಮಫಲಕದ ಅನಾವರಣವನ್ನು ಕುಂಬಳೆ ಪಂಚಾಯತ್ ಅಧ್ಯಕ್ಷ ಶ್ರೀ ಪುಂಡರೀಕಾಕ್ಷ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಇನ್ನಿತರ ಪಂಚಾಯತ್ ಸದಸ್ಯರು, ಪಟ್ಲ ಸತೀಶ್ ಶೆಟ್ಟಿ, ಜಗನ್ನಾಥ ಶೆಟ್ಟಿ, ರಾಘವೇಂದ್ರ ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದರು. 

ಮೊತ್ತಮೊದಲ ಬಾರಿಗೆ ಮಹಿಷಾಸುರನ ವೇಷ ಮಾಡಿದ್ದು ಯಾರು? ಇಲ್ಲಿದೆ ಕುತೂಹಲಕರ ಮಾಹಿತಿ  (Who  played the role of Mahishasura in Yakshagana for the first time? Here is the interesting information)

ಶ್ರೀ ದೇವಿ ಮಹಾತ್ಮೆ ಪ್ರಸಂಗ ಯಕ್ಷಗಾನ ಪ್ರಸಂಗಗಳಲ್ಲೇ ಅತಿ ಜನಪ್ರಿಯವಾದ ಪ್ರಸಂಗ. ಮಾತ್ರವಲ್ಲದೆ ಇದುವರೆಗೆ ಯಕ್ಷಗಾನದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಪ್ರದರ್ಶಿತವಾದ ಪ್ರಸಂಗ. ಅಸಂಖ್ಯಾತ ಜನರು ಶ್ರೀದೇವಿಯ ಈ ಕಥೆಯ ಯಕ್ಷಗಾನ ಪ್ರದರ್ಶನವನ್ನು ನೋಡಿ, ಕೇಳಿ ಭಕ್ತಿ ಭಾವದಲ್ಲಿ ಮಿಂದು ಪುನೀತರಾಗಿದ್ದಾರೆ.

ಅದರಲ್ಲೂ ಈ ಪ್ರಸಂಗದಲ್ಲೂ ಬರುವ ಕೆಲವು ಪಾತ್ರಗಳನ್ನೂ ನೋಡಲೆಂದೇ ಜನರು ಕಾದು ಕುಳಿತಿರುತ್ತಾರೆ. ಅಂತಹಾ ಪಾತ್ರಗಳಲ್ಲಿ ಮಹಿಷಾಸುರನ ಪಾತ್ರವೂ ಒಂದು. ಕೋಣನ ಪ್ರತಿರೂಪದಿಂದ ಈ ಪಾತ್ರವು ಸಭೆಯಲ್ಲಿ ಬೆಂಕಿಯ ದೊಂದಿಯೊಂದಿಗೆ ಅಬ್ಬರದ ಪ್ರವೇಶದಿಂದ ಬರುವಾಗ ಜನರು ರೋಮಾಂಚನಗೊಳ್ಳುತ್ತಾರೆ.

ಇಂತಹಾ ಅಪೂರ್ವವೂ, ಅವರ್ಣನೀಯವೂ ಆದ ಪಾತ್ರವೊಂದರ ಪ್ರತಿಸೃಷ್ಟಿ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡುವುದು ಸಹಜ. ಮಾತ್ರವಲ್ಲದೆ ಈ ಪಾತ್ರವನ್ನು ಮೊದಲು ಮಾಡಿದವರು ಯಾರು ಎಂಬ ಕುತೂಹಲವೂ ಇರಬಹುದು. ಎಷ್ಟೋ ವರ್ಷಗಳ ಮೊದಲು ಹಿರಣ್ಯಕಶಿಪು, ರಾವಣ, ಮಾಗಧ ಮೊದಲಾದ ಪಾತ್ರಗಳನ್ನೂ ಬಣ್ಣದ ವೇಷದವರೇ ಮಾಡುವ ಕ್ರಮ ಯಕ್ಷಗಾನದಲ್ಲಿ ಇತ್ತು.

ಆದರೆ ಮಹಿಷಾಸುರ ಪಾತ್ರವನ್ನು ಕೊಂಬಿನ ಕಿರೀಟದೊಂದಿಗೆ ಮೊದಲು ಚಿತ್ರಿಸಿದವರು ಯಾರು  ಎಂಬ ಕುತೂಹಲಕಾರಿ ಅಂಶವನ್ನು  ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು ತಮ್ಮ ಆತ್ಮಕಥೆ ‘ಯಕ್ಷಗಾನ ಮತ್ತು ನಾನು‘ ಎಂಬ ಪುಸ್ತಕದಲ್ಲಿ ಹೇಳಿದ್ದಾರೆ.

“ನನಗೆ ಬಯಲಾಟದ ದರ್ಶನ ಮೊದಲಿಗಾದುದು ಇಚ್ಲಂಪಾಡಿ ಮೇಳದ ಮೂಲಕವಾದರೂ ಆಮೇಲೆ ಕೂಡ್ಲು, ಅಡೂರು, ಕೊರಕ್ಕೋಡು, ಹಂಪನಕಟ್ಟೆಯೇ ಮುಂತಾದ ಮೇಳಗಳ ಪ್ರದರ್ಶನಗಳನ್ನೂ ನೋಡುವ ಅವಕಾಶಗಳು ಧಾರಾಳ ದೊರೆತಿದ್ದುವು. ಈ ಆಟಗಳನ್ನು ನೋಡುವುದರೊಂದಿಗೆ ವೇಷಗಾರಿಕೆಯಲ್ಲಿಯೂ,ಪ್ರಯೋಗ ಕ್ರಮದಲ್ಲಿಯೂ ಆಗುತ್ತಿದ್ದ ಕೆಲವು ಬದಲಾವಣೆಗಳನ್ನೂ ಹೊಸತನಗಳನ್ನೂ ಗುರುತಿಸಿಕೊಂಡು ಬಂದಿದ್ದೇನೆ.

ಅದುವರೆಗೆ ರಂಗದಲ್ಲಿ ಪ್ರಯೋಗವಾಗದೆ ಇದ್ದ ‘ದೇವಿ ಮಹಾತ್ಮ್ಯೆ’ (ದೇವಿ ಮಹಾತ್ಮೆ) ಪ್ರಸಂಗವನ್ನು ಕೊರಕ್ಕೋಡು ಮೇಳದವರು ಸ್ಥಳೀಯ ದೇವೀ ಸನ್ನಿಧಿಯಲ್ಲಿ ಪ್ರಪ್ರಥಮವಾಗಿ ಆಡುವವರಿದ್ದಾರೆಂಬ ಸುದ್ದಿ ಹಬ್ಬಿತು. ಮೂರು ದಿನಗಳ ದೇವೀ ಮಹಾತ್ಮೆ ಪ್ರಸಂಗದ ಪ್ರದರ್ಶನದಲ್ಲಿ ಎರಡನೆಯ ದಿನದ ಮಹಿಷಾಸುರ ವಧೆಯ ಪ್ರದರ್ಶನಕ್ಕೆ ನಾನೂ ನೋಟಕನಾಗಿದ್ದೆ. ಬಣ್ಣದ ವೇಷದಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಿಕೊಂಡಿದ್ದ ಉದಯೋನ್ಮುಖ ಕಲಾವಿದ ಪಟ್ಟಾಜೆ ಕುಂಞ ಎಂಬವರು ಮಹಿಷಾಸುರನ ವೇಷಧಾರಿಯಾಗಿದ್ದರು. ಅಂದಿನವರೆಗೆ ರಾವಣ, ಕಂಸ, ಜರಾಸಂಧ ಮುಂತಾದ ಪಾತ್ರ ವ್ಯತ್ಯಾಸಗಳಿದ್ದರೂ ಅವೆಲ್ಲಾ ಖಳ ಪಾತ್ರಗಳೆಂಬ ಕಾರಣಕ್ಕಾಗಿ, ವೇಷ ವ್ಯತ್ಯಾಸವಿಲ್ಲದೆ ಒಂದೇ ಕ್ರಮದ ರಾಕ್ಷಸ ವೇಷದಿಂದ ರಂಗದಲ್ಲಿ ಕಾಣಿಸುತ್ತಿದ್ದುದು ರೂಢಿಯಾಗಿತ್ತು.

ಆದರೆ ಮಹಿಷಾಸುರನ ವೇಷವು ರೂಢಿಯ ರಾಕ್ಷಸ ವೇಷದ ಕಿರೀಟದ ಬದಲಿಗೆ ನೀಳವಾದ ಕೋಡುಗಳನ್ನು ಧರಿಸಿ, ಕಪ್ಪು ಬಟ್ಟೆಯನ್ನು ತಲೆಗೆ ಮುಂಡಾಸಿನಂತೆ ಸುತ್ತಿ ಮುಂದಲೆಗೆ ಎದೆಪದಕವನ್ನು ಕಟ್ಟಿ ಮಾಡಿಕೊಂಡ ಆವಿಷ್ಕಾರದಿಂದ ಕೋಣನ ತಲೆಯನ್ನೇ ಹೊತ್ತು ಬಂದ ಮಾನವ ದೇಹದಂತೆ ತೋರುತ್ತಿತ್ತು. ಮುಖವರ್ಣಿಕೆಯಲ್ಲಿಯೂ ವೇಷಧಾರಣೆಯಲ್ಲಿಯೂ, ಆಟ ನೋಟಗಳಲ್ಲಿಯೂ ವಾಸ್ತವಿಕತೆಯು ಎದ್ದು ಕಾಣುತ್ತಿದ್ದ ಆ ಭೀಕರ ದೃಶ್ಯವು ಕುಂಞನವರ ಪ್ರತಿಭೆಗೆ ಸಾಕ್ಷಿಯಾಗಿತ್ತು. ಆಮೇಲೆ ಎಲ್ಲ ಮೇಳದವರೂ ಇಂದಿನ ವರೆಗೆ ಶತಸಂಖ್ಯೆಯಲ್ಲಿ ದೇವಿ ಮಹಾತ್ಮೆ ಪ್ರಸಂಗವನ್ನು ಆಡಿದ್ದಾರಾದರೂ ಇದರ ಕೊಡುಗೆಯ ಕೀರ್ತಿ ಕೊರಕ್ಕೋಡು ಮೇಳಕ್ಕೂ, ಮಹಿಷಾಸುರನ ವೇಷದ ನೂತನ ಪದ್ಧತಿಯ ಕೊಡುಗೆಯ ಋಣ ಕುಂಞನವರಿಗೂ ಸಲ್ಲಬೇಕು” (ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು – ತಮ್ಮ ಆತ್ಮಕಥೆ’ ಯಕ್ಷಗಾನ ಮತ್ತು ನಾನು ಎಂಬ ಪುಸ್ತಕದಲ್ಲಿ)

ಸುಬ್ರಹ್ಮಣ್ಯ ಧಾರೇಶ್ವರ –  ಮಾತಿನ ಮಂಟಪದಲ್ಲಿ

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ  ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ ಕಾರ್ಯಕ್ರಮದಲ್ಲಿ ಇಂದು ಅಂದರೆ 

ಅಕ್ಟೋಬರ್ 30ರಂದು ಶುಕ್ರವಾರ  ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ಸ್ಯಬ್ರಹ್ಮಣ್ಯ ಧಾರೇಶ್ವರ  ಅವರೊಂದಿಗೆ ಮಾತುಕತೆ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ  ಮಾತುಕತೆಯನ್ನು ನಡೆಸಿಕೊಡಲಿದ್ದಾರೆ.

ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. 2020ನೇ ಅಕ್ಟೋಬರ್ 30  ಶುಕ್ರವಾರ  ಸಂಜೆ ಘಂಟೆ 6.30ರಿಂದ  7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ. 

ಮಾತಿನ ಮಂಟಪ  ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ. ಲಿಂಕ್ ಕೆಳಗಡೆ ಇದೆ. 

ದೇರಾಜೆಯವರ ಮಹತ್ತರ ಕೃತಿ ‘ಕುರುಕ್ಷೇತ್ರಕ್ಕೊಂದು ಆಯೋಗ’ ಪುಸ್ತಕ ಧರ್ಮಸ್ಥಳದಲ್ಲಿ ತೃತೀಯ ಮುದ್ರಣ 

ದೇರಾಜೆ ಸೀತಾರಾಮಯ್ಯನವರ ವಿಶಿಷ್ಟ ಕೃತಿ ‘ಕುರುಕ್ಷೇತ್ರಕ್ಕೊಂದು ಆಯೋಗ’ ಪುಸ್ತಕವು ತನ್ನ ತೃತೀಯ ಮುದ್ರಣದ ಸೌಭಾಗ್ಯವನ್ನು ಕಂಡಿದೆ.

ಖ್ಯಾತ ಸಾಹಿತಿಯೂ, ವಿದ್ವಾಂಸರೂ, ತಾಳಮದ್ದಳೆ ಅರ್ಥಧಾರಿಗಳೂ ಆಗಿದ್ದ ದಿ| ದೇರಾಜೆ ಸೀತಾರಾಮಯ್ಯನವರ ಈ ಕೃತಿಯು ಕನ್ನಡ ಸಾರಸ್ವತ ಲೋಕಕ್ಕೊಂದು ಅಮೂಲ್ಯ ಕೊಡುಗೆಯಾಗಿತ್ತು. ಮಹಾಭಾರತ ಪುರಾಣ ಕಥೆಯ ಪಾತ್ರಗಳ ಒಳಹೊಕ್ಕು ನೋಡಿ ಅದನ್ನು ಅತಿ ವಿಶಿಷ್ಟವಾಗಿ ಅಭಿವ್ಯಕ್ತಿಗೊಳಿಸಿದ ಹಾಗೂ ಪುರಾಣ ಘಟನೆಗಳನ್ನು ವಿಮರ್ಶಾತ್ಮಕವಾಗಿ ಅದರ ಮೇಲೆ ಹೊಸತನದ ಬೆಳಕನ್ನು ಚಿತ್ರಿಸಿದ ದೇರಾಜೆ ಸೀತಾರಾಮಯ್ಯನವರ ಕೃತಿಯೇ ‘ಕುರುಕ್ಷೇತ್ರಕ್ಕೊಂದು ಆಯೋಗ’.

ಮೂರನೇ ಮುದ್ರಣವನ್ನು ಬಿಡುಗಡೆಗೊಳಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಇಂತಹಾ ಗ್ರಂಥಗಳಿಂದ ಧಾರ್ಮಿಕ ಜಾಗೃತಿಯು ಪ್ರಚೋದಿಸಲ್ಪಡುತ್ತದೆ ಎಂದು ಶುಭ ಹಾರೈಸಿದರು.

ಈ ಪುಸ್ತಕವು ಉಜಿರೆಯ ಮಂಜುಶ್ರೀ ಪ್ರಿಂಟರ್ಸ್ ನಲ್ಲಿ ಇದೀಗ ಮುದ್ರಣಗೊಡಿದೆ. ಮುಂಬೈಯ ಉದ್ಯಮಿ ಕೊಳಚೂರುಗುತ್ತು ಜಗನ್ನಾಥ ಎನ್. ಶಟ್ಟಿ ಹಾಗೂ ಅವರ ಪತ್ನಿ, ಮಗ, ಸೊಸೆ ಹಾಗೂ ಶಾಂತಿವನ ಟ್ರಸ್ಟಿನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ, ಡಾ. ಶ್ರೀನಾಥ್ ಎಂ.ಪಿ ಕಾರ್ಯಕ್ರಮದಲ್ಲಿ ಹಾಜರಿದ್ದರು.