Sunday, February 23, 2025
Home Blog Page 377

Breaking News – ತೆಲುಗು ನಟ ಜಯಪ್ರಕಾಶ್ ರೆಡ್ಡಿ ಇನ್ನಿಲ್ಲ…. 

ತೆಲುಗು ಸಿನಿಮಾ ರಂಗದ ಜನಪ್ರಿಯ ನಟ ಜಯಪ್ರಕಾಶ ರೆಡ್ಡಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಹೃದಯಾಘಾತಕ್ಕೊಳಗಾದ ಅವರು ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಅವರ ಸಾವಿನ ಸುದ್ದಿ ತೆಲುಗು ಚಿತ್ರರಂಗ ಮತ್ತು ಅಭಿಮಾನಿಗಳಿಗೆ ತೀವ್ರ ಶೋಕವನ್ನುಂಟುಮಾಡಿದೆ. ಬ್ರಹ್ಮ ಪುತ್ರುಡು ಎಂಬ ಸಿನಿಮಾದಿಂದ ವೃತ್ತಿಜೀವನ ಆರಂಭಿಸಿದ ಅವರ  ಈ ವರ್ಷದ ‘ಸರಿಲೇರು ನೀಕೆವ್ವಾರು’ ಕೊನೆಯ ಚಿತ್ರವಾಗಿತ್ತು. 

Breaking News… ನಟಿ ಸಂಜನಾ ಮನೆಗೆ ಸಿಸಿಬಿ ಅಧಿಕಾರಿಗಳ ದಾಳಿ, ಬಂಧನದ ಭೀತಿ?

ಕನ್ನಡ ಚಿತ್ರರಂಗಕ್ಕೆ ಕಾಡುತ್ತಿರುವ ಡ್ರಗ್ಸ್ ಭೂತ ಸದ್ಯಕ್ಕೆ ಬಿಡುವ ಹಾಗೆ ಗೋಚರಿಸುತ್ತಿಲ್ಲ. ನಿರ್ದೇಶಕ ಇಂದ್ರಜಿತ್ ಹಾಕಿದ ಬಾಂಬ್ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿರುವ ಹಾಗೆ ಕಾಣುತ್ತಿದೆ. ಒಂದರ ಹಿಂದೆ ಒಂದರಂತೆ ಪ್ರಕರಣಗಳು ವರದಿಯಾಗುತ್ತಾ ಇವೆ. ನಟಿ ರಾಗಿಣಿ ಪ್ರಕರಣದ ನಂತರ ಮತ್ತೊಂದು ಪ್ರಕರಣ ಬೆಳಕಿಗೆ ಬರುತ್ತಾ ಉಂಟು.

ಇಂದು ಮುಂಜಾನೆಯೇ ಸಿಸಿಬಿ ಅಧಿಕಾರಿಗಳು ಸ್ಯಾಂಡಲ್ ವುಡ್ ನಟಿ ಸಂಜನಾ ಗಿಲ್ರಾನಿ ಮನೆಗೆ ದಾಳಿ ನಡೆಸಿದ್ದಾರೆ. ಇಂದು ಬೆಳಕು ಹರಿಯುವ ಮುನ್ನವೇ ಆರು ಅಧಿಕಾರಿಗಳ ತಂಡ ಮೂರು ಕಾರುಗಳಲ್ಲಿ ಸಂಜನಾ ವಾಸಿಸುತ್ತಿರುವ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಸಂಜನಾ ಆಪ್ತ ಎನ್ನಲಾದ ರಾಹುಲ್ ಎಂಬಾತ ಈಗಾಗಲೇ ಸಿಸಿಬಿ ವಶದಲ್ಲಿದ್ದು ಅವನನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ. ಅವನ ಹೇಳಿಕೆಯ ಆಧಾರದ ಮೇಲೆಯೇ ನಟಿ ಸಂಜನಾ ನಿವಾಸಕ್ಕೆ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ. 

ಸಂಜನಾ ನಿವಾಸದಲ್ಲಿ ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳು ಲಭ್ಯವಾದಲ್ಲಿ ನಟಿ ಸಂಜನಾ ಮೇಲೆ ಇದರ ಪರಿಣಾಮ ಆಗಲಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಾ ಇವೆ. ಏನೇ ಆಗಲಿ ಅಂತೂ ನಟಿ ಸಂಜನಾ ಅವರು ಬಂಧನದ ಭೀತಿಯನ್ನು ಎದುರಿಸುತ್ತಿದ್ದಾರೆಯೇ ಎಂಬುದು ಈಗ ನಟಿಯ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ. 

ಯಕ್ಷಗಾನ ಪ್ರಸಂಗಮಾಲಿಕಾ – ಶ್ರೀಧರ ಡಿ.ಎಸ್. 

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಿಟ್ಟೂರು ಶ್ರೀಧರ ಡಿ.ಎಸ್. ಅವರ ಹುಟ್ಟೂರು. ಧರೆಮನೆ ಎಂಬಲ್ಲಿ ಜನನ. ಯಕ್ಷಗಾನ ಕಲೆಯು ರಕ್ತಗತವಾಗಿಯೇ ಬಂದಿತ್ತು. ತೀರ್ಥರೂಪರಾದ ಶ್ರೀಪಾದಯ್ಯ ಅವರು ಯಕ್ಷಗಾನ ಕಲಾವಿದರೂ ಕೃಷಿಕರೂ ಆಗಿದ್ದರು. ಬಾಲ್ಯದಲ್ಲಿಯೇ ಯಕ್ಷಗಾನದ ಸಂಬಂಧವಿರಿಸಿಕೊಂಡೇ ಬೆಳೆದ ಶ್ರೀಧರ ಡಿ.ಎಸ್. ಅವರು ಓದಿದ್ದು ಹೆಬ್ಬಿಗ ಶಾಲೆಯಲ್ಲಿ ಮತ್ತು ಉಡುಪಿಯಲ್ಲಿ. ಉಡುಪಿಯಲ್ಲಿ ವಿದ್ವಾಂಸರ ಸತ್ ಚಿಂತನೆಗಳನ್ನು ಹೊಂದಿದ ಮಿತ್ರರ ಒಡನಾಟವೂ ದೊರಕಿತ್ತು. ಯಕ್ಷಗಾನ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ವೇಷಗಾರಿಕೆ, ತಾಳಮದ್ದಳೆಗಳಲ್ಲಿ ಭಾಗವಹಿಸುವುದರ ಜತೆಗೆ ಸಾಹಿತ್ಯ ಕ್ಷೇತ್ರದತ್ತ  ಒಲವನ್ನೂ ತೋರಿದ್ದರು. ಪಿಯುಸಿ ಓದುತ್ತಿರುವಾಗಲೇ ವೀರ ಚಿತ್ರಧ್ವಜ ಎಂಬ ಪ್ರಸಂಗವನ್ನೂ ಕೆಳದಿ ಶಿವಪ್ಪ ನಾಯಕ, ಕೆಳದಿ ಚೆನ್ನಮ್ಮ, ಶ್ರೀ ರಂಗ ರಾಯಭಾರ ಎಂಬ ಪ್ರಸಂಗಗಳನ್ನೂ ರಚಿಸಿದ್ದರು. ಕೊರ್ಗಿ ಶ್ರೀ ಸೂರ್ಯನಾರಾಯಣ ಉಪಾಧ್ಯಾಯರ ಸಲಹೆ ಸೂಚನೆಯಂತೆ ಮತ್ತೆ ಪ್ರಸಂಗಾ ರಚನಾ ಕಾರ್ಯಕ್ಕೆ ತೊಡಗಿದ್ದರು. ಪದವಿ ಶಿಕ್ಷಣದ ಬಳಿಕ ಉಡುಪಿ ರಾಘವೇಂದ್ರ ಪುಸ್ತಕ ಭಂಡಾರದಲ್ಲಿ  ಉದ್ಯೋಗ. ಜೊತೆಗೆ ಅಂಚೆ ತೆರಪಿನ ಶಿಕ್ಷಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ಬಳಿಕ ಕೆಮ್ಮಣ್ಣು ಮತ್ತು ಕೋಟ ವಿದ್ಯಾಸಂಸ್ಥೆಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ. ಈ ಸಂದರ್ಭ ಸಾಹಿತ್ಯ ಮತ್ತು ಯಕ್ಷಗಾನ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಬದುಕನ್ನೂ, ಬದುಕಿಗೊಂದು ಸಾಂಸ್ಕೃತಿಕ ವಲಯವನ್ನೂ ಉಡುಪಿಯ ಪರಿಸರವು ನಿರ್ಮಿಸಿತು ಎನ್ನುವುದು ಶ್ರೀಧರ ಡಿ.ಎಸ್. ಅವರ ಅಭಿಪ್ರಾಯ. 1981ರಲ್ಲಿ ಕಿನ್ನಿಗೋಳಿ ಪೊಂಪೈ ಕಾಲೇಜಿಗೆ ಪೂರ್ಣಕಾಲಿಕ ಉಪನ್ಯಾಸಕನಾಗಿ ಸೇರ್ಪಡೆ. ಪರಿಸರದ ಜನರು ಯಕ್ಷಗಾನಾಸಕ್ತರು. ಕೊರ್ಗಿ ವೆಂಕಟೇಶ ಉಪಾಧ್ಯಾಯ,ಛಂದೋಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿ, ಪು. ಶ್ರೀನಿವಾಸ ಭಟ್ಟ, ಮೊದಲಾದವರ ಒಡನಾಟವೂ ಆಗಿತ್ತು. ದರಿಂದ ಅನುಕೂಲವೇ ಆಗಿತ್ತು. ಸಾಹಿತ್ಯ ಸೇವೆಯ ಜೊತೆಗೆ ಕಲಾಸಂಘಟಕರಾಗಿಯೂ ಕಾಣಿಸಿಕೊಂಡರು. ೨೦೧೬ನೇ ಇಸವಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಕಾರ್ಯನಿರ್ವಸಿದ್ದರು. ಯಕ್ಷಗಾನ ಮತ್ತು ಇತರ ಪತ್ರಿಕೆಗಳಿಗೆ ಇವರು 475ಕ್ಕೂ ಮಿಕ್ಕಿ  ಲೇಖನಗಳನ್ನು ಬರೆದಿರುತ್ತಾರೆ. ಯಕ್ಷಗಾನ ಕವಿಗಳ ಬಗ್ಗೆ ಬರೆದ ಲೇಖನಗಳು 25. ಅಂಕಣಗಳಲ್ಲೂ ಇವರು ಬರಹಗಾರರು. ಆಟದಲ್ಲಿ ಅವಾಂತರ,ಹೀಗೂ ಆಗುತ್ತೆ, ತಾಳಮದ್ದಳೆಯಲ್ಲಿ ತಲೆಹರಟೆ ಎಂಬ ಶೀರ್ಷಿಕೆಯಡಿಯಲ್ಲಿ ಲೇಖನಗಳು ಪ್ರಕಟವಾಗಿವೆ. ಜಡಭರತ ಎಂಬ ಪೌರಾಣಿಕ ಕಾದಂಬರಿ, ಗೋವಿಪ್ರ ಎಂಬ ಕಿರುಕಾದಂಬರಿ, ಅಸುರಗುರು ಎಂಬ ಬೃಹತ್ ಕಾದಂಬರಿ ಬದುಕು ಜಟಕಾ ಬಂಡಿ ಎಂಬ ಹಾಸ್ಯ ಲೇಖನಗಳ ಸಂಕಲನ, ತಾಳಮದ್ದಳೆಯ ಕಥಾ ಸರಣಿಗೆ ಪೃಥುಯಜ್ಞ ಮತ್ತು ನೈಮಿಷಾರಣ್ಯ ಎಂಬ ಪ್ರಸಂಗಗಳನ್ನೂ ರಚಿಸಿದ್ದಾರೆ.

ಇವರು ರಚಿಸಿದ ಪ್ರಸಂಗಗಳ ಸಂಪುಟವೇ ‘ಯಕ್ಷಗಾನ ಪ್ರಸಂಗ ಮಾಲಿಕಾ’. ಈ ಕೃತಿಗೆ ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಶ್ರೇಷ್ಠ ಪುಸ್ತಕ ಪ್ರಶಸ್ತಿಯು ಲಭಿಸಿತ್ತು. ಯಕ್ಷಗಾನ ಕೇಂದ್ರ ಉಡುಪಿ ಎಂಬ ಘನ ಸಂಸ್ಥೆಯು ಈ ಪುಸ್ತಕವನ್ನು ಪ್ರಕಟಿಸಿತ್ತು. ಪ್ರಕಾಶಕರಾಗಿ ಶ್ರೀ ಹೆರಂಜೆ ಕೃಷ್ಣ ಭಟ್ಟರು ನಲ್ನುಡಿಗಳನ್ನು ಬರೆದಿದ್ದು ವಿದ್ವಾಂಸರಾದ ಪಾದೆಕಲ್ಲು ವಿಷ್ಣು ಭಟ್ಟರು ಮುನ್ನುಡಿ ಬರಹದಲ್ಲಿ ಶ್ರೀಧರ ಡಿ.ಎಸ್. ಅವರ ಪ್ರಸಂಗ ರಚನೆಯಲ್ಲಿ ಕಂಡುಬರುವ ವಿಶೇಷತೆಯನ್ನೂ, ಅದರಿಂದಾಗುವ ಅನುಕೂಲತೆಗಳನ್ನೂ ತಿಳಿಸಿದ್ದಾರೆ. ಶ್ರೀಧರ ಡಿ.ಎಸ್. ಅವರು ಕೃತಿ ಸಂಪುಟವನ್ನು ಆತ್ಮೀಯರೂ ತನ್ನ ನಾಲ್ಕು ದಶಕಗಳ ಒಡನಾಡಿಯಾಗಿದ್ದ ದಿ। ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರಿಗೆ ಅರ್ಪಿಸಿದ್ದು ಅಭಿನಂದನೀಯ. ಇದು ಕಬಂಧ ಮೋಕ್ಷ, ಸುದ್ಯುಮ್ನ, ಆದಿನಾರಾಯಣ ದರ್ಶನ, ಕುವಲಯಾಶ್ವ, ಗರುಡಂಪ್ರತಾಪ, ಬಾಲಭಾರತ, ಸತ್ವಶೈಥಿಲ್ಯ, ಮಹಾಪ್ರಸ್ಥಾನ, ಪರೀಕ್ಷಿತ – ಆಸ್ತೀಕ ಜನ್ಮ, ಜನಮೇಜಯ, ಶುಕ್ರ ಸಂಜೀವಿನಿ, ಅಗಸ್ತ್ಯ, ಜಡಭರತ ಎಂಬ ಹದಿಮೂರು ಪ್ರಸಂಗಗಳನ್ನು ಒಳಗೊಂಡ ಸಂಪುಟ. ಇವುಗಳಲ್ಲಿ ಮಹಾಪ್ರಸ್ಥಾನ ಎಂಬ ಪ್ರಸಂಗದ ಒಂದು ಭಾಗವು ಮಂಗಳೂರು ವಿಶ್ವವಿದ್ಯಾನಿಲಯದ ಬಿ. ಕಾಂ. ಎರಡನೇ ವರ್ಷದ ಕನ್ನಡ ಪಠ್ಯವಾಗಿತ್ತು ಎಂಬುದು ಉಲ್ಲೇಖನೀಯ. ಮುನ್ನುಡಿಯಲ್ಲಿ ಶ್ರೀ ಪಾದೆಕಲ್ಲು ವಿಷ್ಣು ಭಟ್ಟರು ಶ್ರೀಧರ ಡಿ.ಎಸ್. ಅವರ ಪದ್ಯ ರಚನಾ ಕೌಶಲದ ಬಗ್ಗೆ ತಿಳಿಸುತ್ತಾ ‘ಯಕ್ಷಗಾನ ಛಂದೋಮ್ಬುಧಿಯ ಲೇಖಕ  ಡಾ. ಎನ್ . ನಾರಾಯಣ ಶೆಟ್ಟಿಯವರ ಪ್ರಭಾವ ಕಾಣಿಸುತ್ತಿದೆ ಎಂದಿದ್ದಾರೆ. ಯಕ್ಷಗಾನ ಛಂದಸ್ಸಿನ ಹಿರಿಯ ವಿದ್ವಾಂಸರಾದ ಡಾ. ಎನ್ . ನಾರಾಯಣ ಶೆಟ್ಟಿ, ಶ್ರೀ ಕ. ಪು. ಸೀತಾರಾಮ ಕೆದಿಲಾಯರ ಗ್ರಂಥಗಳ ಜೊತೆಗೆ ಈ ವರೆಗೆ ಪ್ರಕಟವಾದ ನೂರಾರು ಯಕ್ಷಕಾವ್ಯಗಳು ನನಗೆ ಮಾರ್ಗದರ್ಶಿಗಳು ಎಂಬುದನ್ನು ಲೇಖಕರಾದ ಶ್ರೀಧರ ಡಿ.ಎಸ್. ‘ಅರಿಕೆಯೊಂದುಂಟು’ ತಲೆಬರಹದಡಿಯಲ್ಲಿ ಬರೆದು ಗೌರವವನ್ನು ಸೂಚಿಸಿದ್ದಾರೆ. ತನ್ನ ಕಲಾಶಕ್ತಿಗೆ ನೀರುಣಿಸಿ ಪ್ರೋತ್ಸಾಹಿಸಿದ ವಿದ್ವಾಂಸರಿಗೂ ಮಿತ್ರರಿಗೂ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ. ಎಲ್ಲಾ ಪ್ರಸಂಗಗಳ ಕಥಾಮೂಲ ಮತ್ತು ಆಶಯಗಳನ್ನು ನೀಡಿದ್ದು ಅಭಿನಂದನಾರ್ಹ. ಓದುಗರಿಗೆ, ಕಲಾವಿದರಿಗೆ ಇದರಿಂದ ತುಂಬಾ ಅನುಕೂಲವಾದೀತು. ಪ್ರಸಂಗಮಾಲಿಕಾ ಸಂಪುಟದ ಕೊನೆಯಲ್ಲಿ ಅನುಭಂದ ಒಂದು, ಎರಡು, ಮೂರು ಎಂಬ ಶೀರ್ಷಿಕೆಗಳಡಿಯಲ್ಲಿ ಪ್ರೊ| ಎಂ. ರಾಜಗೋಪಾಲಾಚಾರ್ಯ, ಉದ್ಯಾವರ ಶ್ರೀ ಮಾಧವ ಆಚಾರ್ಯ, ಶ್ರೀ ಗುರುರಾಜ ಮಾರ್ಪಳ್ಳಿ ಇವರುಗಳ   ಶ್ರೀಧರ ಡಿ.ಎಸ್. ಇವರ ಬಾಲಭಾರತ, ಶುಕ್ರಸಂಜೀವಿನಿ ಪ್ರಸಂಗಗಳಿಗೆ ಮುನ್ನುಡಿ ರೂಪವಾದ ಹಾರೈಕೆಗಳನ್ನು ಓದುಗರು ಗಮನಿಸಬಹುದಾಗಿದೆ. ಈ ಪ್ರಸಂಗಮಾಲಿಕೆಯು ಒಟ್ಟು ೩೧೨ ಪುಟಗಳಿಂದ ಕೂಡಿದ್ದು ೨೦೧೧ನೇ ಇಸವಿಯಲ್ಲಿ ಪ್ರಕಟವಾಗಿತ್ತು. ಶ್ರೀಧರ ಡಿ.ಎಸ್. ಅವರು ರಚಿಸಿದ ಸಾಮ್ರಾಟ್ ಮರುತ್ತ  ಎಂಬ ಪ್ರಸಂಗದಲ್ಲಿ ವೇಷ ಮಾಡುವ ಅವಕಾಶವೂ ನನಗೆ ಸಿಕ್ಕಿದ್ದು ಒಳ್ಳೆಯ ಅನುಭವ ಮತ್ತು ಭಾಗ್ಯವೆಂದು ಭಾವಿಸುತ್ತೇನೆ. ಈ ಪ್ರಸಂಗಮಾಲಿಕಾ ಪುಸ್ತಕದಲ್ಲಿರುವ ಎಲ್ಲಾ ಪ್ರಸಂಗಗಳೂ ಸದಾ ಪ್ರದಶನಗೊಳ್ಳುತ್ತಾ ಇರಲಿ ಎಂಬ ಸದಾಶಯಗಳು. 

ಸಂಜ್ಞಾರ್ಥ ತತ್ವಕೋಶ – ವಿದ್ವಾನ್ ಡಿ. ವಿ. ಹೊಳ್ಳ, ಕುಂದಾಪುರ 

ವಿದ್ವಾನ್ ಡಿ. ವಿ. ಹೊಳ್ಳ, ಕುಂದಾಪುರ  ಇವರು ರಚಿಸಿದ ಸಂಜ್ಞಾರ್ಥ ತತ್ವಕೋಶವು ಸಾಹಿತ್ಯ ಕ್ಷೇತ್ರಕ್ಕೊಂದು ಅತ್ಯುತ್ತಮ ಕೊಡುಗೆ. ಇದು ಈ ಪುಸ್ತಕದ ಮೂರನೆಯ ಮುದ್ರಣ. ವಿಟ್ಲದ ಸದಭಿರುಚಿ ಪ್ರಕಾಶನವು ಈ ಪುಸ್ತಕದ ಪ್ರಕಾಶಕರು. ಮೊದಲು ಮುದ್ರಿತವಾದದ್ದು 1953ರಲ್ಲಿ. ದ್ವಿತೀಯ ಮುದ್ರಣ 1974 ರಲ್ಲಿ ನಡೆದಿತ್ತು. ಮೊದಲ ಮುದ್ರಣದ ಪುಸ್ತಕಕ್ಕೆ ಘನ ವಿದ್ವಾಂಸರಾಗಿದ್ದ ಮಂಜೇಶ್ವರ ಗೋವಿಂದ ಪೈಗಳು ಮುನ್ನುಡಿ ಬರೆದಿದ್ದರು. 2016 ರಲ್ಲಿ ನಡೆದ ಮೂರನೆಯ ಮುದ್ರಣದ ಪ್ರಕಾಶಕರು ಶ್ರೀಮತಿ ಎಸ್ . ಎನ್ . ಭಟ್ಟ, ಸದಭಿರುಚಿ ಪ್ರಕಾಶನ, ವಿಟ್ಲ ಇವರು. ಈ ಪುಸ್ತಕದ ಅಧಿಕೃತ ಮಾರಾಟಗಾರರು ಸದಭಿರುಚಿಯ ಶ್ರೀ ಶಂಕರ ಕುಳಮರ್ವ. ಇವರ ಸಂಪರ್ಕ ಸಂಖ್ಯೆ 9535623603. ಈ ಮೂರನೆಯ ಮುದ್ರಣಕ್ಕೆ ಶ್ರೀ ಎಂ. ಅನಂತಕೃಷ್ಣ ಹೆಬ್ಬಾರ್ ಅವರು ಮುನ್ನುಡಿಯನ್ನು ಬರೆದಿರುತ್ತಾರೆ. ಸದಭಿರುಚಿ ಪ್ರಕಾಶನದ ವತಿಯಿಂದ ಶ್ರೀ ಶಂಕರ ಕುಳಮರ್ವ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಹಕರಿಸಿದ ಸರ್ವರಿಗೂ ಕೃತಜ್ಞರಾಗಿದ್ದಾರೆ. ಕೃತಿ ಕರ್ತೃ ಪರಿಚಯ ಶೀರ್ಷಿಕೆಯಡಿಯಲ್ಲಿ ಲೇಖಕ ದೇಲಂಪಾಡಿ ವಿಷ್ಣು ಹೊಳ್ಳರ (ಡಿ. ವಿ. ಹೊಳ್ಳ) ಪರಿಚಯವನ್ನು ನೀಡಿದ್ದು, ಅವರು ರಚಿಸಿದ ಯಕ್ಷಗಾನ ಪ್ರಸಂಗಗಳ ಬಗ್ಗೆಯೂ ತಿಳಿಸಿದ್ದು ಶ್ಲ್ಯಾಘನೀಯ. ಕೃತಿ ಕರ್ತೃ ಪರಿಚಯ ಮಾಡಿದವರು ಡಾ। ಉಪ್ಪಂಗಳ ಶಂಕರನಾರಾಯಣ ಭಟ್ಟರು. ‘ನನ್ನ ಚಿಕ್ಕಪ್ಪ’ ಎಂಬ ತಲೆಬರಹದಡಿಯಲ್ಲಿ ಖ್ಯಾತ ಭಾಗವತರಾದ ಶ್ರೀ ಪುತ್ತಿಗೆ ರಘುರಾಮ ಹೊಳ್ಳರು ತಮ್ಮ ಅನಿಸಿಕೆಗಳನ್ನು ಅಕ್ಷರರೂಪಕ್ಕಿಳಿಸಿದ್ದಾರೆ. ಅಲ್ಲದೆ ಮೊದಲ ಮುದ್ರಣಕ್ಕೆ ಮಂಜೇಶ್ವರ ಗೋವಿಂದ ಪೈಗಳು ಬರೆದ ಮುನ್ನುಡಿ ಲೇಖನವನ್ನೂ, ಎರಡನೇ ಮುದ್ರಣದ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾಗಿದ್ದ ಶ್ರೀ ಪಿ. ರಂಗನಾಥ ಶೆಣೈ ಅವರ ಶುಭಹಾರೈಕೆ ಲೇಖನವನ್ನೂ ಕೃತಿ ಕರ್ತರ ಪರಿಚಯ ಎಂಬ ಶೀರ್ಷಿಕೆಯಡಿಯಲ್ಲಿ ಖ್ಯಾತ ಕವಿ ಕಯ್ಯಾರ ಕಿಂಞಣ್ಣ ರೈಗಳು ಬರೆದ ಲೇಖನವನ್ನೂ, ವೈ ಸೀತಾರಾಮ ಭಟ್ಟರ ಲೇಖನವನ್ನೂ ಈ ಪುಸ್ತಕದಲ್ಲಿ ನಮಗೆ ಓದಬಹುದು. ಕಡೆಂಗೋಡ್ಲು ಶಂಕರ ಭಟ್ಟ , ಎಂ. ಆರ್. ಶ್ರೀನಿವಾಸ ಮೂರ್ತಿ ಮತ್ತು ಸಿ.ಕೆ. ನಾಗರಾಜ ರಾಯರ ಶುಭ ಹಾರೈಕೆ ರೂಪದ ಬರಹಗಳೂ ಇವೆ. ಶ್ರೀ ಡಿ. ವಿ. ಹೊಳ್ಳರ ಸಂಜ್ಞಾರ್ಥ ತತ್ವಕೋಶ ಹೊತ್ತಗೆಯು ಒಟ್ಟು 238 ಪುಟಗಳಿಂದ ಕೂಡಿದ್ದು ಬಹು ಉಪಯೋಗೀ ಪುಸ್ತಕ. ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಅತ್ಯುತ್ತಮ ಕೊಡುಗೆ. 

‍ಬಾಹುಕನ ಪಾತ್ರದ ಹಳೆಯ ವೀಡಿಯೋ – ಇದರಲ್ಲಿ ಬಾಹುಕನ‌ ಪಾತ್ರ ಮಾಡಿದ್ದು ಯಾರು ಗೊತ್ತೇ?  

ಚಿಕ್ಕಂದಿನಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೋಡಲು ಕೆಲವು ಮೈಲುಗಳಷ್ಟು ನಡೆದುಕೊಂಡು ಹೋಗುವ ಉತ್ಸಾಹವಿತ್ತು. ಆದರೆ ಈಗ ಆ ಉತ್ಸಾಹ ಕಡಿಮೆ ಆಗುತ್ತಾ ಬಂದಿದೆ.

ಕೆಲವೊಂದು ಪಾತ್ರಗಳು ಮತ್ತು ಕಲಾವಿದರು ನಮ್ಮಲ್ಲಿ ಗಾಢ ಪ್ರಭಾವ ಬೀರಿದ್ದರು. ಅದರಲ್ಲಿ ನಯನ ಕುಮಾರ್ ಅವರ ಬಾಹುಕ ಪಾತ್ರವೂ ಒಂದು. ಸಾಟಿ ಇಲ್ಲದ ಬಾಹುಕನ ಪಾತ್ರವಾಗಿತ್ತದು.

ಕೆ. ಗೋವಿಂದ ಭಟ್ ಮತ್ತು ನಯನ ಕುಮಾರ್ – ಋತುಪರ್ಣ ಮತ್ತು ಬಾಹುಕ 

ಈಗೆಲ್ಲಾ ಎಲ್ಲ ಪಾತ್ರಗಳೂ ಅದರ ದೃಶ್ಯಾವಳಿಗಳೂ ಅಂತರ್ಜಾಲದಲ್ಲಿ ರಾರಾಜಿಸುತ್ತಿವೆ. ಆದರೆ ನಯನ ಕುಮಾರರ ಯಾವುದೇ ಪಾತ್ರಗಳ ವೀಡಿಯೋಗಳು ನಮಗೆಲ್ಲೂ ಕಾಣಸಿಕ್ಕುವುದಿಲ್ಲ. ಅವರ ಬಾಹುಕನ ಪಾತ್ರದ ವೀಡಿಯೊ ಅಂತರ್ಜಾಲದಲ್ಲಿ ಸಿಗುವುದೋ ಎಂದು ಒಂದೆರಡು ವರ್ಷಗಳ ಹಿಂದೆಯೇ ಹುಡುಕಾಡಿದ್ದೆ.

ನಾನು ತಿಳಿದ ಮಟ್ಟಿಗೆ ನಯನಕುಮಾರರ ಬಾಹುಕನ ಪಾತ್ರವನ್ನು ಮೀರಿಸುವ ಮತ್ತೊಬ್ಬ ಪಾತ್ರಧಾರಿ ಇಲ್ಲ ಎಂದೇ ನನ್ನ ಅನಿಸಿಕೆ. ಆದರೆ ನಾನು ಬಹಳ ಹಿಂದಕ್ಕೆ ಹೋಗಲಾರೆ. ಅದು ನನ್ನ ಅರಿವಿನ ವ್ಯಾಪ್ತಿಗೆ ಮೀರಿದ್ದು.

ಈಚೆಗೆ ಒಂದು ವರ್ಷ ಅವರ ಬಾಹುಕ ಪಾತ್ರದ ಸಣ್ಣ ದೃಶ್ಯಾವಳಿಯೊಂದು ಯು ಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಆಗಿತ್ತು. ಅಪ್ರಯತ್ನವಾಗಿ ಅದು ನನ್ನ ಅರಿವಿಗೆ ಬಂದಿತ್ತು. ನಯನ ಕುಮಾರರ ಅಳಿಯ ಶಿವಕೃಷ್ಣ ನೀಡುವಜೆ ಅಪ್ಲೋಡ್ ಮಾಡಿದ ದೃಶ್ಯ ಅದು. ಸುಮಾರು ಮೂರು ನಿಮಿಷಗಳ ವೀಡಿಯೊ ಅದಾದರೂ ಅವರಲ್ಲಿ ಇದರ ಮುಂದುವರಿದ ಭಾಗವೂ ಇರಬಹುದು ಎಂದು ಭಾವಿಸುತ್ತೇನೆ.

ಬಾಹುಕನ ವಕ್ರತೆಯನ್ನು ಮುಖದಲ್ಲಿ ಕೇವಲ ಬಣ್ಣಗಳಿಂದಲೇ ಚಿತ್ರಿಸುವ ಪರಿ ಅನನ್ಯವಾದುದು. ಈಗಿನ ವ್ಯವಸ್ಥೆಯಂತೆ ಮುಖಕ್ಕೆ ಕೃತಕ ಜೋಡಣೆಗಳನ್ನು(Extra Fittings) ಹೆಚ್ಚಾಗಿ ಅಂಟಿಸದೆ ಕೇವಲ ಬಣ್ಣಗಾರಿಕೆಯಿಂದಲೇ ಅದನ್ನು ಪ್ರಕಟಪಡಿಸುವ ಅವರ ಕುಶಲತೆಗೆ ಯಾರಾದರೂ ಮಾರುಹೋಗಲೇಬೇಕು. ಶಿವಕೃಷ್ಣ ನೀಡುವಜೆ ಅವರ ವೀಡಿಯೋ ಲಿಂಕ್ ಕೆಳಗಡೆ ಇದೆ. ನೋಡಿ ಆನಂದಿಸಿ. 

ಬಾಹುಕನಾಗಿ ನಯನಕುಮಾರರ ಪ್ರವೇಶ 

ಎಡನೀರು ಮಠಾಧೀಶರಿಗೆ ಕಲೆಯೇ ಉಸಿರಾಗಿತ್ತು 

ನಿನ್ನೆ ರಾತ್ರಿ  ಭಗವಂತನಲ್ಲಿ ಐಕ್ಯಗೊಂಡ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳ ಸಮಾಜಮುಖಿ ಕಾರ್ಯಗಳನ್ನು ಎಷ್ಟು ಸ್ಮರಿಸಿದರೂ ಅದು ಕಡಿಮೆಯೇ. 

ಕಲೆಗೆ ಅವರ ಪ್ರೋತ್ಸಾಹ. ಶ್ರೀ ಮಠದಲ್ಲಿ ಸದಾಕಾಲವೂ ನಡೆಯುತ್ತಿದ್ದ ಸಂಗೀತ, ನೃತ್ಯ, ಯಕ್ಷಗಾನವೇ ಮೊದಲಾದ ಕಲಾಗೋಷ್ಠಿಗಳು, ಇವುಗಳೆಲ್ಲಾ ಅಭಿಮಾನಿಗಳ ಮನಸ್ಸಿನಲ್ಲಿ ಹಚ್ಚಹಸಿರಾಗಿ ಸದಾಕಾಲವೂ ನೆನಪಿನಲ್ಲುಳಿಯುತ್ತವೆ. 

ಯಕ್ಷಗಾನಕ್ಕೆ ಅವರ ನಿರಂತರ ಪ್ರೋತ್ಸಾಹವಿತ್ತು.   ಸದಾ ಮನಸ್ಸಿನಲ್ಲಿ ಯಕ್ಷಗಾನ ಕಲೆಯ ಏಳಿಗೆಗಾಗಿಯೇ ಯೋಚಿಸುತ್ತಿದ್ದ ಸ್ವಾಮೀಜಿಗಳು ಅದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದರು.

ಶ್ರೀ ದೇವರ ಸನ್ನಿಧಿಯಲ್ಲಿ ಸೇವಾ ಪ್ರಯುಕ್ತ ಅವರ ಒಂದು ಹಾಡುಗಾರಿಕೆಯ ಯು ಟ್ಯೂಬ್ ವೀಡಿಯೋ ಇಲ್ಲಿದೆ. ವೀಡಿಯೋ ಚಿತ್ರೀಕರಿಸಿ ಯು ಟ್ಯೂಬ್ ಗೆ ಅಪ್ಲೋಡ್ ಮಾಡಿದವರು ಉಮಾ ಆರ್.ಕೆ ಭಟ್ ಚಿತ್ರಮೂಲ

ಎಡನೀರು ಮಠಾಧೀಶರಾದ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳು ಭಗವಂತನಲ್ಲಿ ಐಕ್ಯ 

ಶ್ರೀ ಎಡನೀರು ಮಠಾಧೀಶರಾದ ಶ್ರೀ ಮದ್ ಶಂಕರಾಚಾರ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳು ತಮ್ಮ ಅಪಾರ ಶಿಷ್ಯಕೋಟಿ ವೃಂದ ಮತ್ತು ಅಭಿಮಾನೀ ಭಕ್ತರನ್ನು ಆಗಲಿ ಭಗವಂತನ ಸಾನ್ನಿಧ್ಯದಲ್ಲಿ  ಐಕ್ಯಗೊಂಡರು.

ಅವರು ಇಂದು ಮಧ್ಯರಾತ್ರಿಯ ಸುಮಾರು 12. 45 ರ ಹೊತ್ತಿಗೆ ತಾನು ಆರಾಧಿಸುವ ಎಡನೀರಿನ  ಶ್ರೀ ಗೋಪಾಲಕೃಷ್ಣನ ದೇವರ ಸಾನ್ನಿಧ್ಯದಲ್ಲಿಯೇ ಶ್ರೀ ದೇವರ ಪಾದಕಮಲಗಳಲ್ಲಿ ಐಕ್ಯಗೊಂಡರು. 

ಎಡನೀರು ಶ್ರೀ ಮಠದ ಪರಂಪರೆ ಮತ್ತು ಭಕ್ತರ ಜೊತೆಗೆ ಸ್ವಾಮೀಜಿಗಳ ಸಂಬಂಧ ಅನನ್ಯವಾದುದು. ಈಗ ತಮ್ಮ ಅಸಂಖ್ಯ ಭಕ್ತಕೋಟಿಯನ್ನು ಬಿಟ್ಟು ಶ್ರೀಗಳು ತಾವು ಅನಾವರತವೂ ನಂಬಿ ಪೂಜಿಸಿಕೊಂಡು ಬಂದಿರುವ ತಮ್ಮ ಆರಾಧ್ಯ ದೇವರಾದ ಶ್ರೀ ದಕ್ಷಿಣಾಮೂರ್ತಿ ಗೋಪಾಲಕೃಷ್ಣನ ದಿವ್ಯ ಸಾನ್ನಿಧ್ಯವನ್ನು ಸೇರಿ ಅವನಲ್ಲಿ ಲೀನವಾಗಿದ್ದಾರೆ. 

ಅಲ್ಲದೆ ಸ್ವಾಮೀಜಿಗಳು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡವರು. ಅವರು ನಡೆಸುತ್ತಿದ್ದ ಶಿಕ್ಷಣಸಂಸ್ಥೆಗಳು, ಕಲೆಗೆ ಅವರ ಪ್ರೋತ್ಸಾಹ. ಶ್ರೀ ಮಠದಲ್ಲಿ ಸದಾಕಾಲವೂ ನಡೆಯುತ್ತಿದ್ದ ಸಂಗೀತ, ನೃತ್ಯ, ಯಕ್ಷಗಾನವೇ ಮೊದಲಾದ ಕಲಾಗೋಷ್ಠಿಗಳು, ಇವುಗಳೆಲ್ಲಾ ಅಭಿಮಾನಿಗಳ ಮನಸ್ಸಿನಲ್ಲಿ ಹಚ್ಚಹಸಿರಾಗಿ ಸದಾಕಾಲವೂ ನೆನಪಿನಲ್ಲುಳಿಯುತ್ತವೆ.

ಇಳಿವಯಸ್ಸಿನಲ್ಲಿಯೂ ಸ್ವಾಮೀಜಿಗಳ  ಕ್ರಿಯಾಶೀಲತೆ ಅದ್ಭುತ. ಯಕ್ಷಗಾನಕ್ಕೆ ಅವರ ನಿರಂತರ ಪ್ರೋತ್ಸಾಹವಿತ್ತು. ಅದಕ್ಕೆ ಶ್ರೀ ಮಠದ ಆವರಣದಲ್ಲಿ ನಡೆಯುತ್ತಿದ್ದ ನಿರಂತರ ಯಕ್ಷಗಾನ ಪ್ರದರ್ಶನಗಳೇ ನಡೆಯುತ್ತಿದ್ದುವು.

ಯಕ್ಷಗಾನ ಕಲಾವಿದರಿಗೆ ಅವರು ಆಶ್ರಯದಾತರಾಗಿದ್ದರು. ಎಡನೀರು ಮೇಳವನ್ನು ಮಠದ ವತಿಯಿಂದ ಮುನ್ನಡೆಸುತ್ತಾ ಕಲಾವಿದರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದರು. 

ಅದೂ ಅಲ್ಲದೆ ಶ್ರೀಗಳ ಕಾಲದಲ್ಲಿ ಶ್ರೀ ಮಠವು ಶಿಕ್ಷಣ ಸೇವೆಯನ್ನು ನೀಡುವುದರಲ್ಲಿಯೂ ಮುಂಚೂಣಿಯಲ್ಲಿತ್ತು. ಎಡನೀರು ಸ್ವಾಮೀಜೀಸ್ ಹೈಯರ್ ಸೆಕಂಡರಿ ಸ್ಕೂಲ್ ಇದಕ್ಕೆ ಸಾಕ್ಷಿ. ವಿದ್ಯಾರ್ಥಿಗಳು ಪದವಿಪೂರ್ವ ತರಗತಿಯ ವರೆಗೆ ಇಲ್ಲಿ ವಿದ್ಯಾಭ್ಯಾಸ ನಡೆಸಬಹುದಿತ್ತು. 

ತಮ್ಮ ಸಮಾಜಸೇವೆ ಮತ್ತು ಕಲಾಸೇವೆಗಳಿಂದ ಅಸಂಖ್ಯ ಭಕ್ತರು ಮತ್ತು ಅಭಿಮಾನೀ ಶಿಷ್ಯವರ್ಗವನ್ನು ಹೊಂದಿದ್ದ ಶ್ರೀಗಳ ಅಗಲುವಿಕೆ ಎಲ್ಲರನ್ನೂ ಶೋಕಸಾಗರಲ್ಲಿ ಮುಳುಗಿಸಿದೆ. 

ಶೇಣಿ ಭಾರತ – ಶೇಣಿ ಅರ್ಥಗಾರಿಕೆಯ ಸಂಗ್ರಹಗುಚ್ಛ 

ಶೇಣಿ ಶ್ರೀ ಗೋಪಾಲಕೃಷ್ಣ ಭಟ್ಟರು ಯಕ್ಷಗಾನ ಕ್ಷೇತ್ರದಲ್ಲಿ ಮಹಾನ್ ಸಾಧನೆಯನ್ನು ಮಾಡಿ ಕೀರ್ತಿವಂತರಾದವರು. ಅವರ ಸಾಧನೆ, ಅರ್ಥಗಾರಿಕೆಯ ವೈಭವ, ಪಾತ್ರಗಳನ್ನು ಚಿತ್ರಿಸುವ ರೀತಿಗೆ ಯಾರಾದರೂ ತಲೆದೂಗಲೇ ಬೇಕು. ಮಾತಿನಿಂದಲೇ ಪಾತ್ರಗಳನ್ನೂ ದೃಶ್ಯಗಳನ್ನೂ ಕಟ್ಟಿಕೊಡುವ ಅವರ ಮಾತಿನ ರಚನಾ ಸಿದ್ಧಿಯು ಅಚ್ಚರಿ ಹುಟ್ಟಿಸುವಂತಹಾ ವಿಚಾರ. ಶ್ರೀಯುತರು ಇಂದು ನಮ್ಮೊಂದಿಗೆ ಇಲ್ಲವಾದರೂ ಗಳಿಸಿದ ಕೀರ್ತಿಯು ಸದಾ ಉಳಿದು ಬೆಳಗುತ್ತದೆ. ಯಕ್ಷಗಾನದ ಭೀಷ್ಮನೆಂದು ಖ್ಯಾತಿಯನ್ನು ಪಡೆದ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು ಕಲಾವಿದರಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಹರಿದಾಸರಾಗಿ, ಪ್ರಸಂಗಕರ್ತರಾಗಿ ಮತ್ತು ಶ್ರೇಷ್ಠ ಭಾಷಣಕಾರರಾಗಿ ಗುರುತಿಸಿಕೊಂಡವರು. ಇದು ಕೇವಲ ಕೃತಿ ಪರಿಚಯ ಅಷ್ಟೇ.

ಇದು ‘ಶೇಣಿ ಭಾರತ’ ಎಂಬ ಕೃತಿ. ಇದರ ಪ್ರಕಾಶಕರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬೆಂಗಳೂರು ಎಂಬ ಘನ ಸಂಸ್ಥೆ. ಡಾ. ಎಲ್. ಗೋಪಾಲಕೃಷ್ಣ ಹೆಗಡೆಯವರು ಇದರ ಸಂಪಾದಕರು. ಈ ಕೃತಿಯ ಪ್ರಕಟಣೆಗೆ ಅಕಾಡೆಮಿಯ ಅಂದಿನ ಅಧ್ಯಕ್ಷರಾಗಿದ್ದ ಕೆರೆಮನೆ ಶ್ರೀ ಶಂಭು ಹೆಗಡೆಯವರ ಮತ್ತು ಅಕಾಡೆಮಿಯ ರಿಜಿಸ್ಟ್ರಾರ್ ಆಗಿದ್ದ ಶ್ರೀ ಬಿ. ಎನ್. ಪರಡ್ಡಿಯವರ ಸಹಕಾರವೂ ಪ್ರೋತ್ಸಾಹವೂ ಇತ್ತೆಂಬುದು ತಿಳಿದಿರುವ ವಿಚಾರ. ಇದು ೨೦೦೭ ನೇ ಇಸವಿಯಲ್ಲಿ ಪ್ರಕಟಗೊಂಡಿತ್ತು. ೪೪೦ಕ್ಕೂ ಮಿಕ್ಕಿದ ಪುಟಗಳುಳ್ಳ ಹೊತ್ತಗೆ ಇದು. ಅಕಾಡೆಮಿಯ ಅಧ್ಯಕ್ಷರಾಗಿದ್ದ ಕೆರೆಮನೆ  ಶಂಭು ಹೆಗಡೆಯವರು ‘ಅಧ್ಯಕ್ಷರ ಮಾತು ಎಂಬ ಶೀರ್ಷಿಕೆಯಡಿಯಲ್ಲಿ ಲೇಖನವನ್ನು ಬರೆದಿರುತ್ತಾರೆ. ಡಾ. ಗೋಪಾಲಕೃಷ್ಣ ಹೆಗಡೆಯವರು ತಮ್ಮ ಮುನ್ನುಡಿ ಬರಹದಲ್ಲಿ ಶೇಣಿಯವರ ಹುಟ್ಟು, ಬಾಲ್ಯ ಬದುಕು, ಅವರ ಒಡನಾಟ, ಯಕ್ಷಗಾನದ ಬಗೆಗೆ ಅವರಿಗಿರುವ ಕಾಳಜಿ, ಅರ್ಥಗಾರಿಕೆಯ ಕುಶಲತೆಗಳ ಬಗೆಗೆ ತಮ್ಮ ಅನಿಸಿಕೆಗಳನ್ನು ಸೊಗಸಾಗಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದು ಸಮಗ್ರ ಭಾರತ ಎಂದು ಯಾರೂ ತಿಳಿಯಕೂಡದು. ಶೇಣಿ ಭಾರತವೆಂದರೆ ಯಕ್ಷಗಾನ ಕಲಾನಿಧಿ ಶೇಣಿ ಗೋಪಾಕೃಷ್ಣ ಭಟ್ಟರು ಮಹಾಭಾರತ ಪ್ರಸಂಗಗಳಲ್ಲಿ ಅಲ್ಲಲ್ಲಿ ಹೇಳಿದ ಅರ್ಥಗಳನ್ನು ಸಂಗ್ರಹಿಸಿ ನಿರ್ಮಿಸಿದ ಅಶು ಕಾವ್ಯ ಎಂದೂ ಸೂಚಿಸಿದ್ದಾರೆ. ಇದಿರಾಳಿಯ ಮಾತನ್ನು ದಾಖಲಿಸಲು ಸಾಧ್ಯವಾಗಿಲ್ಲ. ದೊಡ್ಡ ಸಾಮಗರು, ರಾಮದಾಸ ಸಾಮಗರು, ಕುಂಬಳೆ ಸುಂದರ ರಾಯರು, ಪ್ರಭಾಕರ ಜೋಶಿ, ವಾಸುದೇವ ಸಾಮಗ,ಬುಚ್ಚನ್ ಶಾಸ್ತ್ರಿಗಳು, ಕಟ್ಟೆ ಪರಮೇಶ್ವರ ಭಟ್ಟರು ಮೊದಲಾದವರ ಅರ್ಥವನ್ನು ಇದರೊಂದಿಗೆ ದಾಖಲಿಸಿದ್ದರೆ ಈ ಪುಸ್ತಕದ ಸ್ವರೂಪವು ಇನ್ನೂ ಬೇರೆಯಾಗುತ್ತಿತ್ತು. ಅದು ಸಾಧ್ಯವಾಗಿಲ್ಲ ಎಂಬ ಕೊರಗೂ ನನಗಿದೆ ಎಂದು ಹೇಳಿರುತ್ತಾರೆ. ಶೇಣಿ ಭಾರತ ಎಂಬ ಕೃತಿಯಲ್ಲಿ ಮಹಾಭಾರತದ ಹದಿನಾರು ಪ್ರಸಂಗಗಳ ನೂರಾ ತೊಂಬತ್ತೆರಡು ಪದ್ಯಗಳ ಅರ್ಥಗಾರಿಕೆಯಿದೆ. ಮೂವತ್ತಮೂರು ಅಧ್ಯಾಯಗಳಲ್ಲಿ ಮಹಾಭಾರತದ ಹದಿನೇಳು ಪಾತ್ರಗಳಲ್ಲಿ ಶೇಣಿಯವರ ಅರ್ಥವೈಭವದ ಮುಖ್ಯ ವಿಚಾರಗಳನ್ನು ಸಂಗ್ರಹಿಸಿ ನೀಡಲಾಗಿದೆ. ಸಂಗ್ರಹಿಸಿ ಮುದ್ರಿಸುವುದು ಒಂದು ಸಾಧನೆಯೇ ಸರಿ. ಇವನ್ನೆಲ್ಲಾ ಅಕ್ಷರ ರೂಪಕ್ಕೆ ತಂದು ಒಂದು ವ್ಯವಸ್ಥೆಯಲ್ಲಿ ಜೋಡಿಸಿದ್ದು ಒಂದು ಸಾಹಸವೇ. ಆ ಕೆಲಸವನ್ನು ಹೊಣೆಗಾರಿಕೆಯನ್ನು ನಿರ್ವಹಿಸಿದ ಡಾ. ಜಿ.ಎಲ್. ಹೆಗಡೆಯವರು ಅಭಿನಂದನಾರ್ಹರು ಎಂದು ಅಕಾಡೆಮಿಯ ಅಧ್ಯಕ್ಸರಾಗಿದ್ದ ಕೆರೆಮನೆ ಶಂಭು ಹೆಗಡೆಯವರು ಹೇಳಿರುತ್ತಾರೆ. ಶ್ರೀ ಶೇಣಿಯವರ ಅರ್ಥಗಾರಿಕೆಯ ರೀತಿ ವೈಭವವು ಹೇಗಿತ್ತು ಎಂಬುದು ಮುಂದಿನ ತಲೆಮಾರಿನವರಿಗೆ ತಿಳಿಯಲು ಇದರಿಂದ ಅನುಕೂಲವೇ ಆಯಿತು. ದಾಖಲೀಕರಣವಾದುದು ಸಂತೋಷದ ವಿಚಾರ. ಇದು ಶೇಣಿಯವರಿಗೆ ಅರ್ಪಿಸಿದ ಗೌರವವೂ ಹೌದು. 

ಲೇಖನ:ರವಿಶಂಕರ ವಳಕ್ಕುಂಜ 

ಕರ್ನಾಟಕ ಯಕ್ಷಗಾನ ಅಕಾಡೆಮಿ 2019 ನೇ ಸಾಲಿನ ಪ್ರಶಸ್ತಿ ಘೋಷಣೆ

ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ 2019 ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನಗಳನ್ನು ಘೋಷಣೆ ಮಾಡಲಾಗಿದೆ. ಅದರಂತೆ ಪಾರ್ತಿಸುಬ್ಬ ಪ್ರಶಸ್ತಿಗೆ ಶ್ರೀ ಅಂಬಾತನಯ ಮುದ್ರಾಡಿ ಆಯ್ಕೆಯಾಗಿದ್ದಾರೆ. 2019 ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಡಾ. ಚಂದ್ರಶೇಖರ ದಾಮ್ಲೆ, ಡಾ. ಆನಂದರಾಮ ಉಪಾಧ್ಯ, ಡಾ. ರಾಮಕೃಷ್ಣ ಗುಂದಿ, ಶ್ರೀ ಕೆ.ಸಿ. ನಾರಾಯಣ, ಡಾ. ಚಂದ್ರು ಕಾಳೇನಹಳ್ಳಿ ಸೇರಿದ್ದಾರೆ. ಯಕ್ಷಸಿರಿ ಪ್ರಶಸ್ತಿಗೆ ಭಾಜನರಾದವರೆಂದರೆ ಶ್ರೀ ನಲ್ಲೂರು ಜನಾರ್ದನ ಆಚಾರ್ ಎನ್. ಜಿ., ಶ್ರೀ ಉಬರಡ್ಕ ಉಮೇಶ ಶೆಟ್ಟಿ, ಶ್ರೀ ಕುರಿಯ ಗಣಪತಿ ಶಾಸ್ತ್ರಿ, ಶ್ರೀ ಆರ್ಗೋಡು ಮೋಹನದಾಸ ಶೆಣೈ, ಶ್ರೀ ಮಹಮ್ಮದ್ ಗೌಸ್, ಶ್ರೀ ಮೂರೂರು ರಾಮಚಂದ್ರ ಹೆಗಡೆ, ಶ್ರೀ ಎಂ. ಎನ್. ಹೆಗಡೆ ಹಳವಳ್ಳಿ, ಶ್ರೀ ಹಾರಾಡಿ ಸರ್ವೋತ್ತಮ ಗಾಣಿಗ, ಶ್ರೀ ಬಿ. ರಾಜಣ್ಣ, ಶ್ರೀ ಎ. ಜಿ. ಅಶ್ವತ್ಥನಾರಾಯಣ ಒಳಗೊಂಡಿದ್ದಾರೆ. ಇನ್ನು 2019 ನೇ ಸಾಲಿನ ಪುಸ್ತಕ ಬಹುಮಾನವನ್ನು ಶ್ರೀ ಹೊಸ್ತೋಟ ಮಂಜುನಾಥ ಭಾಗವತರು, ಶ್ರೀ ಕೃಷ್ಣ ಪ್ರಕಾಶ ಉಳಿತ್ತಾಯ ಮತ್ತು ಡಾ. ಚಿಕ್ಕಣ್ಣ ಯಣ್ಣೆಕಟ್ಟೆಯವರು ಪಡೆದಿದ್ದಾರೆ. ಹೊಸ್ತೋಟ ಮಂಜುನಾಥ ಭಾಗವತರ ಪರವಾಗಿ ಶ್ರೀ ಗುರುದೇವ ಪ್ರಕಾಶನ ಒಡಿಯೂರು ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. 

ಯಕ್ಷಗಾನ ವೇಷಧಾರಿಗಳಾದ ಶ್ರೀ ವಸಂತ ಗೌಡ ಕಾಯರ್ತಡ್ಕ ಅವರೊಂದಿಗೆ ಮಾತುಕತೆ – ಮಾತಿನ ಮಂಟಪದಲ್ಲಿ

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ  ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ  7ನೇ  ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 4ರಂದು  ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ವಸಂತ ಗೌಡ ಕಾಯರ್ತಡ್ಕ ಅವರೊಂದಿಗೆ ಮಾತುಕತೆ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. 2020ನೇ ಸೆಪ್ಟೆಂಬರ್ 04 ಶುಕ್ರವಾರ ಸಂಜೆ ಘಂಟೆ 6.30ರಿಂದ  7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ.  ಮಾತಿನ ಮಂಟಪ  ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ.