Sunday, August 30, 2026
Home Blog Page 162

ಮುಕ್ತ ರಾಷ್ಟ್ರೀಯ ಅತ್ಲೆಟಿಕ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಪವಿತ್ರ.ಜಿ

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಪ್ರಥಮ ವರ್ಷದ ಎಂಬಿಎ ವಿಭಾಗದ ವಿದ್ಯಾರ್ಥಿನಿ ಪವಿತ್ರ.ಜಿ 61ನೇ ಮುಕ್ತ ರಾಷ್ಟ್ರೀಯ ಅತ್ಲೆಟಿಕ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.


ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಕ್ಟೋಬರ್ 15 ರಿಂದ 19 ರವರೆಗೆ ನಡೆಯುವ ಈ  ರಾಷ್ಟ್ರೀಯ  ಕ್ರೀಡಾಕೂಟದಲ್ಲಿ ಟ್ರಿಪಲ್‌ಜಂಪ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಾರೆ.

ಇವರು ಇತ್ತೀಚಿಗೆ ನಡೆದ ರಾಜ್ಯಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು.  


ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಅವರ ಮಾರ್ಗದರ್ಶನದಲ್ಲಿ ಇವರು ಉತ್ತಮ ಸಾಧನೆಯನ್ನು ಮಾಡುತ್ತಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ವಿದ್ಯಾಭಾರತಿ ಕ್ರೀಡಾಕೂಟದಲ್ಲಿ ತೆಂಕಿಲ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ದಕ್ಷಿಣ ಮಧ್ಯ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಕರ್ನಾಟಕ, ಹಾಗೂ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಇವರ ಜಂಟಿ ಆಶ್ರಯದಲ್ಲಿ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 12 ಮತ್ತು 13 ರಂದು ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿ, ಕರ್ನಾಟಕ, ತೆಲಂಗಣ, ಆಂಧ್ರ ಪ್ರದೇಶ ರಾಜ್ಯಗಳನ್ನು ಒಳಗೊಂಡ ದಕ್ಷಿಣ ಮಧ್ಯ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

14ರ ವಯೋಮಾನದ ಬಾಲ ವರ್ಗದ ಬಾಲಕಿಯರ ವಿಭಾಗದಲ್ಲಿ ಶ್ರೀವರ್ಣಾ (ಪಾಲೆತ್ತಡಿ ಧರ್ಣಪ್ಪ ಗೌಡ, ಮಮತಾ.ಪಿ. ದಂಪತಿ ಪುತ್ರಿ) ಎತ್ತರ ಜಿಗಿತ (ಪ್ರಥಮ), ಉದ್ದ ಜಿಗಿತ (ಪ್ರಥಮ), 80 ಮೀಟರ್ ಹರ್ಡಲ್ಸ್ (ಪ್ರಥಮ), 4*100 ಮೀಟರ್ ರಿಲೇ (ಪ್ರಥಮ), ಕೃತಿ,ಕೆ (ಬನ್ನೂರು ಕೊರಗಪ್ಪ ಗೌಡ, ವನಿತಾ.ಎ ದಂಪತಿ ಪುತ್ರಿ) 600 ಮೀಟರ್ (ಪ್ರಥಮ), 400 ಮೀಟರ್ (ದ್ವಿತೀಯ), 4*100 ಮೀಟರ್ ರಿಲೇ (ಪ್ರಥಮ), ಡಿಂಪಲ್ ಶೆಟ್ಟಿ 200 ಮೀಟರ್ (ತೃತೀಯ), 100 ಮೀಟರ್ (ದ್ವಿತೀಯ), ಉದ್ದ ಜಿಗಿತ (ತೃತೀಯ), 4*100 ಮೀಟರ್ ರಿಲೇ (ಪ್ರಥಮ),

ಅಮೃತಾ.ಬಿ.ಎ (ಬನ್ನೂರು ಪಟ್ಟೆ ಅಮರನಾಥ್, ಲತಾ ಕುಮಾರಿ ದಂಪತಿ ಪುತ್ರಿ) 600 ಮೀಟರ್ (ತೃತೀಯ), 4*100 ಮೀಟರ್ ರಿಲೇ (ಪ್ರಥಮ), ಬಹುಮಾನ ಗಳಿಸಿದ್ದಾರೆ. ಬಾಲಕರ ವಿಭಾಗದಲ್ಲಿ ಕೃಪಾಲ್.ಪಿ.ಕೆ (ಕೆಮ್ಮಾಯಿಯ ಪ್ರಕಾಶ್.ಬಿ, ಸುನೀತಾ ಸಿ.ಎಚ್ ದಂಪತಿ ಪುತ್ರ) 600 ಮೀಟರ್ (ದ್ವಿತೀಯ), 400 ಮೀಟರ್ (ತೃತೀಯ) ಅಭಿಶ್ಯಾಮ (ಪರ್ಲಡ್ಕ ಮುರಳೀಧರ್ , ರಾಜೇಶ್ವರಿ ದಂಪತಿ ಪುತ್ರ) ಎತ್ತರ ಜಿಗಿತ (ದ್ವಿತೀಯ) ಬಹುಮಾನ ಗಳಿಸಿರುತ್ತಾರೆ.

17ರ ವಯೋಮಾನದ ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ಅನ್ನಿಕಾ. ಕೆ (ಚಾರ್ವಾಕ ಎ.ಎಸ್.ಐ ಕೃಷ್ಣಪ್ಪ.ಎಂ, ಶಿಕ್ಷಕಿ ವಾಣಿಶ್ರೀ ದಂಪತಿ ಪುತ್ರಿ) 3000 ಮೀಟರ್ (ಪ್ರಥಮ), 1500 ಮೀಟರ್ (ತೃತೀಯ), ಬಿ.ಲಿಖಿತಾ ರೈ (ಚಣಿಲ ಬಿ.ಜಗನ್ನಾಥ್ ರೈ, ಗೀತಾ.ಜೆ.ರೈ ದಂಪತಿ ಪುತ್ರಿ) 4*100 ಮೀಟರ್ ರಿಲೇ (ದ್ವಿತೀಯ), 4*400 ಮೀಟರ್ ರಿಲೇ (ಪ್ರಥಮ), 400 ಮೀಟರ್ (ಪ್ರಥಮ),

ವಂಶಿ.ಬಿ.ಕೆ (ಬಪ್ಪಳಿಗೆ ಕಮಲಾಕ್ಷ, ಜಯಲತಾ ದಂಪತಿ ಪುತ್ರಿ) 200 ಮೀಟರ್ (ತೃತೀಯ), 100 ಮೀಟರ್ ಹರ್ಡಲ್ಸ್ (ದ್ವಿತೀಯ), 4*100 ಮೀಟರ್ ರಿಲೇ (ದ್ವಿತೀಯ), 4*400 ಮೀಟರ್ ರಿಲೇ (ಪ್ರಥಮ), ರಿದ್ಧಿ.ಸಿ.ಶೆಟ್ಟಿ ( ಪುಂಡಿಕಾಯಿ ಚಿದಾನಂದ ಶೆಟ್ಟಿ, ಸತ್ಯವತಿ.ಸಿ.ಶೆಟ್ಟಿ ದಂಪತಿ ಪುತ್ರಿ) 4*100 ಮೀಟರ್ ರಿಲೇ (ದ್ವಿತೀಯ), 4*400 ಮೀಟರ್ ರಿಲೇ (ಪ್ರಥಮ), ಸಾನ್ವಿ.ಎಸ್.ಪಿ. (ಪಳಂಬೆ ಯೋಧ ಡಿ.ಸುಂದರ ಪೂಜಾರಿ, ಶಿಕ್ಷಕಿ ಭವಿತಾ.ಕೆ ದಂಪತಿ ಪುತ್ರಿ) 100 ಮೀಟರ್ (ತೃತೀಯ), 4*100 ಮೀಟರ್ ರಿಲೇ (ದ್ವಿತೀಯ), 4*400 ಮೀಟರ್ ರಿಲೇ (ಪ್ರಥಮ),

ಸಮೃದ್ಧಿ.ಜೆ.ಶೆಟ್ಟಿ (ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಹರಿಣಾಕ್ಷಿ.ಜೆ.ಶೆಟ್ಟಿ ದಂಪತಿ ಪುತ್ರಿ) ಎತ್ತರ ಜಿಗಿತ (ತೃತೀಯ), ಉದ್ದ ಜಿಗಿತ (ದ್ವಿತೀಯ), ಶ್ರದ್ಧಾಲಕ್ಷ್ಮೀ  (ತಾರಿಗುಡ್ಡೆ ರವಿಶಂಕರ್ , ಅನುಪಮಾ ದಂಪತಿ ಪುತ್ರಿ) ಟ್ರಿಪಲ್ ಜಂಪ್ (ತೃತೀಯ), ಬಹುಮಾನ ಗಳಿಸಿರುತ್ತಾರೆ.

ಬಾಲಕರ ವಿಭಾಗದಲ್ಲಿ ಚರಣ್ ಕುಮಾರ್ (ಅಳಿಕೆ ದೇವಳಗುಳಿ ಕೃಷ್ಣ ಕುಮಾರ್, ಪ್ರೇಮಾ ದಂಪತಿ ಪುತ್ರ) 3000 ಮೀಟರ್ (ದ್ವಿತೀಯ), 5 ಕಿಲೋಮೀಟರ್ ನಡಿಗೆ (ಪ್ರಥಮ), ಸಚಿತ್.ಪಿ.ಕೆ (ಕೆಮ್ಮಾಯಿಯ ಪ್ರಕಾಶ್.ಬಿ, ಸುನೀತಾ ಸಿ.ಎಚ್ ದಂಪತಿ ಪುತ್ರ) 400 ಮೀಟರ್ (ತೃತೀಯ) ಪ್ರಥಮ್.ಎಂ.ಪಿ (ಪಡ್ನೂರು ಪದ್ಮಪ್ಪ ಪೂಜಾರಿ, ಮಾಲತಿ.ಬಿ. ದಂಪತಿ ಪುತ್ರ) ಚಕ್ರ ಎಸೆತ (ದ್ವಿತೀಯ) ಬಹುಮಾನ ಗಳಿಸಿರುತ್ತಾರೆ.

ದೈಹಿಕ ಶಿಕ್ಷಣ ವಿಭಾಗ ಮುಖ್ಯಸ್ಥರಾದ ಶ್ರೀ ಭಾಸ್ಕರ ಗೌಡ ಮುಂಗ್ಲಿಮನೆಯವರ ಮಾರ್ಗದರ್ಶನದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಆಶಾಲತಾ, ಶ್ರೀಮತಿ ನಮಿತಾ, ಶ್ರೀ ದೀಪಕ್, ಶ್ರೀಮತಿ ರಶ್ಮಿ, ಶ್ರೀ ಪವನ್ ಕುಮಾರ್ ಇವರ ಸಹಕಾರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಗಿರೀಶ್ ಕಣಿಯಾರು ಮತ್ತು ಶ್ರೀಮತಿ ವಾಣಿಶ್ರೀ ಇವರುಗಳು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ತರಬೇತುಗೊಳಿಸಿರುತ್ತಾರೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಕಾರನ್ನು ಅಡ್ಡಗಟ್ಟಿ ತಲವಾರು ತೋರಿಸಿ ಜೀವಬೆದರಿಕೆ – ಶಾಸಕರ ಚಾಲಕರು ನೀಡಿದ ದೂರಿನಲ್ಲಿ ಏನಿದೆ?

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಕಾರನ್ನು ಅಡ್ಡಗಟ್ಟಿ ತಲವಾರು ತೋರಿಸಿ ಜೀವಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಬಗ್ಗೆ ಶಾಸಕರ ಚಾಲಕ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ನಿನ್ನೆ ರಾತ್ರಿ ಮಂಗಳೂರಿಂದ ಫರಂಗಿಪೇಟೆವರೆಗೆ ಶಾಸಕರ ಕಾರನ್ನು ಹಿಂಬಾಲಿಸಿಕೊಂಡು ಬಂದು ಜೀವ ಬೆದರಿಕೆ ಹಾಕಿದ್ದಾರೆ. ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ ಕೆಲವರಿಂದ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ.  

ವೈಟ್ ಸ್ಕಾರ್ಪಿಯೋ ಕಾರೊಂದು ನಿನ್ನೆ ರಾತ್ರಿ ಮಂಗಳೂರಿನಿಂದ ಫರಂಗಿಪೇಟೆವರೆಗೆ ಶಾಸಕರ ಕಾರನ್ನು ಹಿಂಬಾಲಿಸಿಕೊಂಡು ಬಂದಿದೆ. ನಿನ್ನೆ ರಾತ್ರಿ ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಶಾಸಕ ಹರೀಶ್ ಪೂಂಜಾರವರು ಆಮೇಲೆ ತನ್ನ ಕಾರನ್ನು ಬಿಟ್ಟು ತನ್ನ ಸಂಬಂಧಿಕರ ಕಾರಿನಲ್ಲಿ ಬೆಳ್ತಂಗಡಿಗೆ ಹಿಂತಿರುಗುತ್ತಿದ್ದರು.

ಮಂಗಳೂರಿನಿಂದ ಫರಂಗಿಪೇಟೆ ವರೆಗೆ ಅವರ ಕಾರನ್ನು ಸ್ಕಾರ್ಫಿಯೋ ಕಾರು ಹಿಂಬಾಲಿಸುತ್ತಿತ್ತು. ಫರಂಗಿಪೇಟೆಯಲ್ಲಿ ಶಾಸಕರ ಕಾರನ್ನು ಅಡ್ಡಕಟ್ಟಿದ ಸ್ಕಾರ್ಫಿಯೋ ಕಾರಿನಲ್ಲಿದ್ದವರು ಶಾಸಕರಿಗೆ ಮತ್ತು ಶಾಸಕರಿದ್ದ ಸಂಬಂಧಿಕರ ಕಾರಿನಲ್ಲಿದ್ದವರಿಗೆ ಮತ್ತು ಹಿಂಬಾಲಿಸಿ ಬರುತ್ತಿದ್ದ ಶಾಸಕರ ಕಾರಿನ ಚಾಲಕ ನವೀನ್ ಎಂಬವರಿಗೆ ತಲವಾರು ತೋರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ.

ಕೂಡಲೇ ಶಾಸಕರಿದ್ದ ಕಾರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಸ್ಟೇಷನ್ ನತ್ತ ತಿರುಗಿಸಿಲಾಯಿತು. ಅದನ್ನು ಕಂಡ ಸ್ಕಾರ್ಫಿಯೋ ಕಾರು ಬಿ. ಸಿ. ರೋಡಿನತ್ತ ಪರಾರಿಯಾಯಿತು. 

ಈ ಬಗ್ಗೆ ಶಾಸಕರ ಚಾಲಕ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, (ದೂರಿನ ಪ್ರತಿಯ ಚಿತ್ರ ನೋಡಿ)

ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್‌ ಯಕ್ಷಗಾನ ಬೊಂಬೆಯಾಟ ಟ್ರಸ್ಟ್ (ರಿ.)ಗೆ ಈ ಬಾರಿಯ ಯಕ್ಷಗಾನ ಕಲಾರಂಗದ ‘ಶ್ರೀವಿಶ್ವೇಶತೀರ್ಥ’ ಪ್ರಶಸ್ತಿ

ಉಡುಪಿ :ಆರು ತಲೆಮಾರುಗಳಿಂದ ಯಕ್ಷಗಾನ ಗೊಂಬೆಯಾಟವನ್ನು ನಡೆಸಿಕೊಂಡು ಬಂದಿರುವ ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್‌ ಯಕ್ಷಗಾನ ಬೊಂಬೆಯಾಟ ಟ್ರಸ್ಟ್ ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ಈ ಬಾರಿ ಉಡುಪಿಯ ಯಕ್ಷಗಾನ ಕಲಾರಂಗ ನೀಡುವ ‘ಶ್ರೀವಿಶ್ವೇಶತೀರ್ಥ’ ಪ್ರಶಸ್ತಿಗೆ ಆಯ್ಕೆಯಾಗಿದೆ.


ಕೇವಲ ಈ ಪ್ರದೇಶದಲ್ಲಷ್ಟೇ ಅಲ್ಲದೆ ರಾಷ್ಟ್ರದಾದ್ಯಂತ ಅನ್ಯಾನ್ಯ ದೇಶಗಳಲ್ಲಿ ಈ ಕಲೆಯನ್ನು ಪ್ರದರ್ಶಿಸಿದ ಹೆಗ್ಗಳಿಕೆಗೆ ಸಂಸ್ಥೆ ಭಾಜನವಾಗಿದೆ. ಪರಂಪರೆಯ ಹಾಡುಗಾರಿಕೆ ಮತ್ತು ಅರ್ಥಗಾರಿಕೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದೆ.

ಪ್ರಸಕ್ತ ಭಾಸ್ಕರ ಕೊಗ್ಗ ಕಾಮತರು ಇದರ ನಿರ್ದೇಶಕರಾಗಿದ್ದು, ಉಪ್ಪಿನಕುದ್ರುವಿನಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಹೊಂದಿರುವ ಸುಸಜ್ಜಿತ ರಂಗಮಂದಿರವನ್ನು ನಿರ್ಮಿಸಿ ಅದನ್ನು ಬೇರೆ ಬೇರೆ ಕಲಾಪ್ರಕಾರಗಳಿಗೂ ಉಚಿತವಾಗಿ ನೀಡುತ್ತಾ ವಿವಿಧ ಕಲಾ ಸಂವರ್ಧನೆಗೆ ಅನುವು ಮಾಡಿಕೊಟ್ಟಿದ್ದಾರೆ.


ಪ್ರಶಸ್ತಿಯು 50,000/-  ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್  13, 2022 ಭಾನುವಾರ ಮಂಗಳೂರಿನ ಟೌನ್‌ಹಾಲ್‌ನಲ್ಲಿ ಜರಗಲಿದೆ ಎಂಬದಾಗಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ

ದಿನಾಂಕ 12-10-2022ನೇ ಬುಧವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿ ಶಾಲಾ ಶಿಕ್ಷಕರಿಗೆ “ಪರಿಣಾಮಕಾರಿ ಬೋಧನೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ -2022” ವಿಷಯದ ಕುರಿತು ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವು ನಡೆಯಿತು.

ಕಾರ್ಯಾಗಾರವನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಲೋಕೇಶ್.ಎಸ್.ಆರ್ ಇವರು ಉದ್ಘಾಟಿಸಿ, ಮಾತನಾಡುತ್ತಾ ಶಿಕ್ಷಕರಾದವರು ಹೆಚ್ಚಿನ ಪುಸ್ತಕಗಳನ್ನು ಓದಿ ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ತಿಳಿಸುವುದರೊಂದಿಗೆ ರಾಷ್ಟ್ರ ಕಟ್ಟುವಲ್ಲಿ ಜವಾಬ್ದಾರಿಯುತ ಪಾತ್ರವನ್ನು ವಹಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಆಡಳಿತ ಮಂಡಳಿ ಕೋಶಾಧಿಕಾರಿ ಶ್ರೀ ಕೃಷ್ಣಮೋಹನ್ ಇವರು ಮಾತನಾಡುತ್ತಾ ಪ್ರಜ್ಞಾವಂತ ಸುಸಂಸ್ಕೃತ ಮಕ್ಕಳನ್ನು ದೇಶಕ್ಕೆ ಕೊಡುಗೆಯಾಗಿ ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದರು.

ನಿವೃತ್ತ ಪ್ರಾಧ್ಯಾಪಕರು, ಮಾನವ ಸಂಪದಭಿವೃದ್ಧಿ ಪ್ರಶಿಕ್ಷಣ ಪರಿಣತರೂ, ಅಭಿಯಾನಂ ಸಂಸ್ಥೆಯ ನಿರ್ದೇಶಕರೂ ಆಗಿರುವ ಡಾ.ಶಿಕಾರಿಪುರ ಕೃಷ್ಣಮೂರ್ತಿಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

“ಪರಿಣಾಮಕಾರಿ ಬೋಧನೆ, ತರಗತಿ ನಿರ್ವಹಣೆ, ಸೂಕ್ತ ಕಲಿಕಾ ಚಟುವಟಿಕೆಗಳು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ-2022: ವಿಷಯದ ಕುರಿತು ಶಿಕ್ಷಕರಿಗೆ ಸಂಪೂರ್ಣ ಮಾಹಿತಿಯನ್ನು ಬಹಳ ಪರಿಣಾಮಕಾರಿಯಾಗಿ ನೀಡಿದರು.

ಯೋಗ ಶಿಕ್ಷಕಿ ಶ್ರೀಮತಿ ಶರಾವತಿ ಶಿಕ್ಷಣದಲ್ಲಿ ಯೋಗದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿ ಶ್ರೀಮತಿ ಜ್ಯೋತಿಲಕ್ಷ್ಮೀ ಪ್ರಾರ್ಥಿಸಿ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಸ್ವಾಗತಿಸಿದರು. ಶಿಕ್ಷಕಿ ಕು.ರಮ್ಯ ವಂದಿಸಿ, ಶಿಕ್ಷಕಿಯರಾದ ಶ್ರೀಮತಿ ಸೌಮ್ಯ ಕುಮಾರಿ ಮತ್ತು ಶ್ರೀಮತಿ ಸಹನಾ ಪೈ ಕಾರ್ಯಕ್ರಮ ನಿರೂಪಿಸಿದರು.

8ನೆಯ ವರ್ಷದ ತಲಪಾಡಿ ಯಕ್ಷೋತ್ಸವ, ಅದ್ದೂರಿಯ ಯಕ್ಷಗಾನ ಪ್ರದರ್ಶನ –  ದಿನಾಂಕ 20-11-2022 ಆದಿತ್ಯವಾರ ಮಧ್ಯಾಹ್ನ 12 ರಿಂದ ರಾತ್ರಿ 9 ಗಂಟೆಯ ವರೆಗೆ

ಯಕ್ಷಮಿತ್ರ ಸೇವಾ ಬಳಗ ತಲಪಾಡಿ ಅರ್ಪಿಸುವ ಈ ಬಾರಿಯ ಅಂದರೆ  8 ನೆಯ ವರ್ಷದ ತಲಪಾಡಿ ಯಕ್ಷೋತ್ಸವವು  ದಿನಾಂಕ 20-11-2022 ಆದಿತ್ಯವಾರ ಮಧ್ಯಾಹ್ನ 12 ರಿಂದ ರಾತ್ರಿ 9 ಗಂಟೆಯ ವರೆಗೆ ನಡೆಯಲಿದೆ.

ಈ ಕಾರ್ಯಕ್ರಮವು ಮಂಗಳೂರಿನ  ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ.  ತೆಂಕು-ಬಡಗು ತಿಟ್ಟುಗಳ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಅಪರೂಪದ ಪ್ರಸಂಗಗಳ ಪ್ರದರ್ಶನ ನಡೆಯಲಿದೆ. 

ಮೊದಲನೇ ಪ್ರಸಂಗ ಸಮರಸೌಗಂಧಿಕಾ ಹಾಗೂ ಎರಡನೇ ಪ್ರಸಂಗ ‘ಬಬ್ರುವಾಹನ  ಮತ್ತು ಶೇಷವಿಜಯ’  ಪಾತ್ರವರ್ಗ ಮತ್ತು ಕಲಾವಿದರ ವಿವರಗಳಿಗೆ ಆಹ್ವಾನಪತ್ರಿಕೆಯ ಚಿತ್ರವನ್ನು ನೋಡಿ.

ಈ ಅಪರೂಪದ ಪ್ರದರ್ಶನಗಳಿಗೆ ಯಕ್ಷಾಭಿಮಾನಿಗಳನ್ನು, ಯಕ್ಷಮಿತ್ರ ಸೇವಾ ಬಳಗದ  ಸಂತೋಷ್ ಅಲಂಕಾರಗುಡ್ಡೆ ಹಾಗೂ ಎಲ್ಲಾ ಸದಸ್ಯರು ಆದರದಿಂದ ಆಮಂತ್ರಿಸಿದ್ದಾರೆ. 

ಸಂತೋಷ್ ಅಲಂಕಾರಗುಡ್ಡೆ (8722369514)

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ಎ.ಐ.ಸಿ.ಎಸ್. ಸಾಂಸ್ಕೃತಿಕ ಸ್ಪರ್ಧೆಗಳು 2022 – ವಿದ್ಯೋದಯ ಪಬ್ಲಿಕ್ ಸ್ಕೂಲ್ ಆಯೋಜನೆ

ಉಡುಪಿ: ವಿದ್ಯೋದಯ ಟ್ರಸ್ಟ್ (ರಿ.)ನ ಅಂಗ ಸಂಸ್ಥೆ ಐ.ಸಿ.ಎಸ್.ಇ. ಪಠ್ಯಕ್ರಮ ಅಳವಡಿಸಿಕೊಂಡಿರುವ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನಲ್ಲಿಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಐ.ಸಿ.ಎಸ್.ಇ. ಮತ್ತು ಸಿ.ಬಿ.ಎಸ್.ಇ. ಶಾಲೆಗಳ ಒಕ್ಕೂಟದ ಪ್ರಸ್ತುತ ವರುಷದ ಸಾಂಸ್ಕೃತಿಕ 

ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಅಕ್ಟೋಬರ್ 15, 2022 ರಂದು ನಡೆಯಲಿರುವ ಈ ಸ್ಪರ್ಧೆಗಳಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಒಟ್ಟು 28 ಐ.ಸಿ.ಎಸ್.ಇ. ಮತ್ತು ಸಿ.ಬಿ.ಎಸ್.ಇ. ಶಾಲೆಗಳು ಭಾಗವಹಿಸಲಿವೆ. ಜೂನಿಯರ್ ವಿಭಾಗದಲ್ಲಿ 6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ, ಅಗ್ನಿರಹಿತ ಅಡುಗೆ, ಛದ್ಮವೇಷ, ಪುಷ್ಪಾಲಂಕಾರ ಮತ್ತು ಆವೆಮಣ್ಣಿನ ಪ್ರತಿಕೃತಿ ರಚನಾ ಸ್ಪರ್ಧೆಗಳನ್ನು ಹಾಗೂ ಸೀನಿಯರ್ ವಿಭಾಗದಲ್ಲಿ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಸಮೂಹ ನೃತ್ಯ, ರಂಗೋಲಿ, ವರ್ಣಚಿತ್ರ, ಹಣ್ಣು ಮತ್ತು ತರಕಾರಿಗಳಲ್ಲಿ ಕಲಾಕೃತಿ ರಚನೆ ಮತ್ತು ಭಾವಗೀತೆ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

ಅಂದು ಬೆಳಿಗ್ಗೆ 9.30 ಕ್ಕೆ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿ ಶ್ರೀಮತಿ ಎಲಿಜಾ ವಾಜ಼್, ಎ.ಐ.ಸಿ.ಎಸ್.ನ ಉಡುಪಿ ಮತ್ತು ದ.ಕ. ಜಿಲ್ಲೆಯ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರು, ಕ್ರೈಸ್ಟ್ ಸ್ಕೂಲ್, ಮಣಿಪಾಲ ಇವರು ನೆರವೇರಿಸಲಿದ್ದಾರೆ.

ಅಪರಾಹ್ನ 3.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಶ್ರೀಮತಿ ಗೀತಾ ಶಶಿಧರ್, ಪ್ರಾಂಶುಪಾಲರು, ಆನಂದತೀರ್ಥ ವಿದ್ಯಾಲಯ, ಪಾಜಕ, ಉಡುಪಿ ಇವರು ಭಾಗವಹಿಸುತ್ತಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರು: ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಅನಿತಾ ರಾಜ್, ಸಾಂಸ್ಕೃತಿಕ ಸ್ಪರ್ಧಾ ಸಂಯೋಜಕರಾದ ಶ್ರೀಮತಿ ಶುಭಾ ರಾವ್ ಮತ್ತು ಡಿಸಿಪ್ಲಿನ್ ಇನ್‌ಚಾರ್ಜ್ ಶ್ರೀ ದಾಮೋದರ್

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ವಿವೇಕಾನಂದ ಪದವಿಪೂರ್ವ ಕಾಲೇಜಿಗೆ ಸ್ವಾಮಿ ಮಂಗಳನಾಥಾನಂದಜಿ ಭೇಟಿ

ಪುತ್ತೂರು, ಅ 13: ಬೆಂಗಳೂರಿನ ಶಿವನಹಳ್ಳಿಯ ರಾಮಕೃಷ್ಣ ಮಠದ ಸ್ವಾಮಿ ಮಂಗಳನಾಥಾನಂದಜಿ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರನ್ನುಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸ್ವಾಮೀಜಿಯವರು ಕಾಲೇಜು ಆವರಣವನ್ನು ಸಂದರ್ಶಿಸಿ ಕಾಲೇಜು ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ವಿವೇಕಾನಂದ  ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ ವಿವೇಕಾನಂದ ವಿದ್ಯಾವರ್ಧಕ ಸಂಘದ ಹಿನ್ನಲೆ ಹಾಗೂ ಕಾಲೇಜಿನ ಹಿನ್ನಲೆ, ಸೌಲಭ್ಯಗಳು ಹಾಗೂ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪೂಜ್ಯರು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಾಮೀಜಿಯವರು ನಂತರ ವಿವೇಕಾನಂದ ಪತ್ರಿಕೋದ್ಯಮ ವಿಭಾಗದ ವಿಕಸನ ಮಲ್ಟಿಮೀಡಿಯಾ ಸ್ಟುಡಿಯೋ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಪಾಂಚಜನ್ಯಕ್ಕೆ ಭೇಟಿ  ನೀಡಿದರು. ಈ ಸಂದರ್ಭದಲ್ಲಿ ವಿವಿಧ ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕ – ಪ್ರಾಧ್ಯಾಪಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿದರೆ 82,000 ರೂಪಾಯಿ ದಂಡ ವಿಧಿಸಲು ಸ್ವಿಟ್ಜರ್ಲೆಂಡ್ ಸರ್ಕಾರ ಚಿಂತನೆ

ಬರ್ನ್: ಸ್ವಿಸ್ ಫೆಡರಲ್ ಕೌನ್ಸಿಲ್ ಸಾರ್ವಜನಿಕ ಸ್ಥಳಗಳಲ್ಲಿ ಮುಖಕವಚವನ್ನು ನಿಷೇಧಿಸುವ ಕರಡು ಕಾನೂನಿನ ಪ್ರಸ್ತಾಪವನ್ನು ಪ್ರಕಟಿಸಿದೆ. ಬುರ್ಖಾ, ಮುಸುಕು ಮತ್ತು ನಿಖಾಬ್‌ಗಳನ್ನು ನಿಷೇಧದಲ್ಲಿ ಸೇರಿಸಲಾಗುವುದು, ಆದರೆ ಶಾಸಕಾಂಗವು ಹಸಿರು ನಿಶಾನೆ ತೋರಿದರೆ ಮಾತ್ರ ಕಾನೂನು ಜಾರಿಗೆ ಬರಲಿದೆ.

ಅಂತರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ಕಾನೂನನ್ನು ಉಲ್ಲಂಘಿಸುವವರು 1,000 ಫ್ರಾಂಕ್ (ರೂ. 82,000) ವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ.

ಏತನ್ಮಧ್ಯೆ, ಆರೋಗ್ಯ ಸಮಸ್ಯೆಗಳು, ಭದ್ರತಾ ಸಮಸ್ಯೆಗಳು, ಹವಾಮಾನ ಬದಲಾವಣೆಗಳಿಂದ ಉಂಟಾಗುವ ಸಮಸ್ಯೆಗಳು ಮತ್ತು ಸ್ಥಳೀಯ ಸಂಪ್ರದಾಯಗಳನ್ನು ಅಭ್ಯಾಸ ಮಾಡುವವರಿಗೆ ಮುಖದ ಹೊದಿಕೆಗಳನ್ನು ಅನುಮತಿಸಲಾಗುತ್ತದೆ.

ಈ ನಿಷೇಧವು ರಾಜತಾಂತ್ರಿಕ ಮತ್ತು ಕಾನ್ಸುಲರ್ ಕಚೇರಿಗಳು, ವಿಮಾನಗಳು ಮತ್ತು ಪೂಜಾ ಸ್ಥಳಗಳಿಗೆ ಅನ್ವಯಿಸುವುದಿಲ್ಲ. ಕೋವಿಡ್‌ನಿಂದ ರಕ್ಷಣೆಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಗಳನ್ನು ಮಾತ್ರ ಧರಿಸಲು ಅನುಮತಿಸಲಾಗಿದೆ.

ಸಾರ್ವಜನಿಕವಾಗಿ ಮುಖಕವಚವನ್ನು ನಿಷೇಧಿಸುವ ಪ್ರಸ್ತಾಪವನ್ನು ಮೊದಲು 2021 ರಲ್ಲಿ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಅಂಗೀಕರಿಸಲಾಯಿತು. ಮಾರ್ಚ್ 2021 ರಲ್ಲಿ, ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಸಮೀಕ್ಷೆಯನ್ನು ನಡೆಸಲಾಯಿತು. 51.21 ಪ್ರತಿಶತದಷ್ಟು ಜನರು ನಿಷೇಧದ ಪರವಾಗಿ ಮತ ಚಲಾಯಿಸಿದ್ದಾರೆ.

ಸ್ವಿಟ್ಜರ್ಲೆಂಡ್‌ನ ಜನಸಂಖ್ಯೆಯ ಐದು ಪ್ರತಿಶತದಷ್ಟು ಮುಸ್ಲಿಮರು. ಸ್ ಕ್ಯಾಬಿನೆಟ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸಾರ್ವಜನಿಕ ಸುರಕ್ಷತೆ ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಮುಖದ ಹೊದಿಕೆಯನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಡೆನ್ಮಾರ್ಕ್, ಆಸ್ಟ್ರಿಯಾ, ನೆದರ್ಲ್ಯಾಂಡ್ಸ್ ಮತ್ತು ಬಲ್ಗೇರಿಯಾದಂತಹ ಯುರೋಪ್ ದೇಶಗಳು ಸಾರ್ವಜನಿಕವಾಗಿ ಮುಖದ ಹೊದಿಕೆಯ ಮೇಲೆ ಭಾಗಶಃ ಅಥವಾ ಸಂಪೂರ್ಣ ನಿಷೇಧವನ್ನು ಪರಿಚಯಿಸಿವೆ.

ಐದು ವರ್ಷಗಳಲ್ಲಿ ಪತ್ತನಂತಿಟ್ಟದಿಂದ 12 ಮಹಿಳೆಯರು ನಾಪತ್ತೆ, ನರಬಲಿ ಘಟನೆಗೆ ಸಂಬಂಧ? ನಾಪತ್ತೆ ಪ್ರಕರಣಗಳ ಮರು ತನಿಖೆ

ಪತ್ತನಂತಿಟ್ಟದಲ್ಲಿ ಐದು ವರ್ಷಗಳಲ್ಲಿ ಜಿಲ್ಲೆಯಿಂದ 12 ಮಹಿಳೆಯರು ನಾಪತ್ತೆಯಾಗಿದ್ದಾರೆ. ಮಹಿಳೆಯರ ನಾಪತ್ತೆ ಪ್ರಕರಣಗಳ ಮರು ತನಿಖೆ ನಡೆಯಲಿದೆ.

ಅವರ ನಾಪತ್ತೆ ಪ್ರಕರಣಕ್ಕೂ ನರಬಲಿ ಪ್ರಕರಣಕ್ಕೂ ಸಂಬಂಧವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು.

ನರಬಲಿ ನಡೆದ ಎಳಂತೂರ್ ಸೇರಿದಂತೆ ಅರನ್ಮುಲಾ ಸ್ಟೇಷನ್ ಮಿತಿಯಿಂದ ಮೂವರು ಮಹಿಳೆಯರು ನಾಪತ್ತೆಯಾಗಿದ್ದಾರೆ. ಅದರಲ್ಲಿ ಒಬ್ಬ ಮಹಿಳೆಯ ಶವ ಪತ್ತೆಯಾಗಿದೆ,

ಐದು ವರ್ಷಗಳಲ್ಲಿ ಕೊಚ್ಚಿ ನಗರ ವ್ಯಾಪ್ತಿಯಲ್ಲಿ 13 ನಾಪತ್ತೆ ಪ್ರಕರಣಗಳು ವರದಿಯಾಗಿವೆ. ಪೊಲೀಸರು ಈ ಪ್ರಕರಣಗಳನ್ನು ವಿವರವಾಗಿ ತನಿಖೆ ನಡೆಸಲಿದ್ದಾರೆ.

ಎಳಂತೂರು ನರಬಲಿ ಪ್ರಕರಣದ ಪ್ರಮುಖ ಆರೋಪಿ ಶಫಿ ಆಯುರ್ವೇದ ವೈದ್ಯ ಭಗವಲ್ ಸಿಂಗ್ ಕುಟುಂಬದೊಂದಿಗೆ ಎರಡು ವರ್ಷಗಳಿಂದ ಸಂಪರ್ಕ ಹೊಂದಿದ್ದಾನೆ. ಶಫಿ ಈ ಹಿಂದೆಯೂ ಇದೇ ರೀತಿ ಮಹಿಳೆಯರನ್ನು ಇಲ್ಲಿಗೆ ಕರೆತಂದಿದ್ದನೇ ಎಂಬುದನ್ನು ಪ್ರಮುಖವಾಗಿ ಪರಿಶೀಲಿಸಲಾಗುತ್ತಿದೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]