Monday, May 11, 2026
Home Blog Page 162

ಕಥಾ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಕುಸುಮ ಪ್ರಥಮ ಮತ್ತು ಸುಶ್ಮಿತಾ ದ್ವಿತೀಯ

ಪುತ್ತೂರು, ಅ 10:ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ವತಿಯಿಂದ ಅಂಬಿಕಾ ಶಿಕ್ಷಣ ಸಂಸ್ಥೆಗಳ ಅವರಣದಲ್ಲಿ ಇತ್ತೀಚೆಗೆ ನಡೆದ 21ನೇ ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಪದವಿ ಪೂರ್ವ ವಿಭಾಗದ ಕಥಾ ಸ್ಪರ್ಧೆಯಲ್ಲಿ

ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ಕುಸುಮ ಸಿ. ಎನ್(ಕುಶಾಲನಗರದ ಹೆಬ್ಬಾಲೆಯ ಮಂಜು ನಾಯಕ್ ಮತ್ತು ಪವಿತ್ರ ದಂಪತಿ ಪುತ್ರಿ) ಪ್ರಥಮ ಸ್ಥಾನವನ್ನೂ

ಹಾಗೂ ಸುಶ್ಮಿತಾ ಬಿ.ಆರ್ (ಶಿವಮೊಗ್ಗದ ಹೊಸನಗರದ ರಾಘವೇಂದ್ರ ಬಿ ಪಿ ಮತ್ತು ಶ್ಯಾಮಲ ಭಟ್‌ ದಂಪತಿ ಪುತ್ರಿ) ದ್ವಿತೀಯ ಸ್ಥಾನ ಗಳಿಸಿರುತ್ತಾರೆ.


ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ವಿದ್ಯಾಪೋಷಕ್ ವಿನಮ್ರ ಸಹಾಯ ಕಾರ್ಯಕ್ರಮ ಉದ್ಘಾಟನೆ – ಒಟ್ಟು 1135 ವಿದ್ಯಾರ್ಥಿಗಳಿಗೆ 89,85,500/- ರೂಪಾಯಿ ವಿದ್ಯಾರ್ಥಿವೇತನ ವಿತರಣೆ

ಉಡುಪಿ : ಬಂಡೆಯನ್ನು ಶಿಖರದ ಎತ್ತರಕ್ಕೆ ಕೊಂಡೊಯ್ಯಲು ಸಾಕಷ್ಟು ಪ್ರಯತ್ನಪಡಬೇಕು. ಆದರೆ ಅಲ್ಲಿಂದ ಉರುಳಿಸಿದರೆ ಯಾವುದೇ ಪ್ರಯತ್ನವಿಲ್ಲದೆ ಕೆಳಗೆ ಬೀಳುತ್ತದೆ. ನಮ್ಮ ವ್ಯಕ್ತಿತ್ವವೂ ಹಾಗೆ, ಒಳ್ಳೆಯ ವ್ಯಕ್ತಿ ಎನಿಸಿಕೊಳ್ಳಲು ನಿರಂತರ ಸಾಧನೆ ಬೇಕು. ವ್ಯಕ್ತಿತ್ವ ಪತನಗೊಳ್ಳಲು ಒಂದೇ ಒಂದು ತಪ್ಪು ಸಾಕಾಗುತ್ತದೆ.

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಚ್ಚಾರಿತ್ರ‍್ಯವನ್ನು ರೂಢಿಸಿಕೊಳ್ಳಬೇಕು ಎಂದು ಅಕ್ಟೋಬರ್ 09ರಂದು ಕುಂದಾಪುರದ ಸಹನಾ ಕನ್ವೆನ್ಷನ್ ಸೆಂಟರ್ ನಲ್ಲಿ ಜರಗಿದ 18ನೇ ವರ್ಷದ ವಿನಮ್ರ ಸಹಾಯಧನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಶ್ರೀ ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ನುಡಿದರು.

ಅಧ್ಯಕ್ಷರಾಗಿ ಮಾಹೆಯ ಸಹ ಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್, ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್, ಶ್ರೀ ಕುಂದೇಶ್ವರ ದೇವಳದ ಆಡಳಿತ ಮೊಕ್ತೇಸರರಾದ ಶ್ರೀ ಕೃಷ್ಣಾನಂದ ಛಾತ್ರ ಇವರ ಗೌರವ ಉಪಸ್ಥಿತಿಯಲ್ಲಿ, ಶ್ರೀ ಕೃಷ್ಣಪ್ರಸಾದ ಅಡ್ಯಂತಾಯ, ಶ್ರೀ ಸಜಿತ್ ಹೆಗ್ಡೆ, ಶ್ರೀ ಜೆ.ಪಿ. ಶೆಟ್ಟಿ, ಶ್ರೀ ವಿ.ಜಿ. ಶೆಟ್ಟಿ, ಶ್ರೀ ಯು. ಶ್ರೀಧರ್, ಕುಮಾರಿ ಹಸ್ತಾ ಶೆಟ್ಟಿ, ಶ್ರೀಮತಿ ವಿಲಾಸಿನಿ ಬಾಬುರಾಯ ಶೆಣೈ, ಶ್ರೀ ಪ್ರವೀಣ್ ಗುಡಿ ಅಭ್ಯಾಗತರಾಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಹನಾ ಕನ್ವೆನ್ಷನ್ ಸೆಂಟರ್‌ನ ಮಾಲಕರಾದ ಶ್ರೀ ಸುರೇಂದ್ರ ಶೆಟ್ಟಿಯವರಿಗೆ ಸ್ವಾಮೀಜಿಯವರು ಅಭಿನಂದನ ಪತ್ರ ನೀಡಿ ಅನುಗ್ರಹಿಸಿದರು.


ಚೆನ್ನೈನ ಅಣ್ಣಾಮಲೈಯವರು ಕೊಡಮಾಡಿದ ರೂ. 25000/- ನೆರವನ್ನು ಬೈಂದೂರು ಸರಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕಗಳಿಸಿದ ನಾಲ್ಕು ವಿದ್ಯಾರ್ಥಿನಿಯರಿಗೆ ವಿತರಿಸಲಾಯಿತು. ಯು. ಉಪೇಂದ್ರ ಅವರ ನೆನಪಿನಲ್ಲಿ ಉತ್ತಮ ಕಡತ ನಿರ್ವಹಣೆಗೆ ನೀಡುವ ಹಾಗೂ ಅಕ್ಷತಾ ದೇವಾಡಿಗ ಇವಳ ಸ್ಮರಣಾರ್ಥ ನೀಡುವ ಉತ್ತಮ ಪತ್ರ ಬರೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.

ಇದೇ ಸಂದರ್ಭದಲ್ಲಿ ಉದ್ಯೋಗ ದೊರೆತ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಶುಭಹಾರೈಸಿದರು. ಉಪಾಧ್ಯಕ್ಷ ಎಸ್. ವಿ. ಭಟ್ ಸ್ವಾಗತಿಸಿ, ಸಕ್ರಿಯ ಕಾರ್ಯಕರ್ತ ನಟರಾಜ್ ಉಪಾಧ್ಯ ವಂದಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ನಿರೂಪಿಸಿದರು.


ಅಪರಾಹ್ನ ಉಡುಪಿ ಶಾಸಕ ಶ್ರೀ ಕೆ. ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಸಹಾಯಧನ ವಿತರಣಾ ಕಾರ್ಯಕ್ರಮ ಜರಗಿತು. ಶ್ರೀ ಆನಂದ ಸಿ. ಕುಂದರ್, ಶ್ರೀ ಕೆರಾಡಿ ಚಂದ್ರಶೇಖರ್ ಶೆಟ್ಟಿ, ಶ್ರೀ ಹರೀಶ್ ರಾಯಸ್, ಶ್ರೀ ರವಿರಾಜ್ ಬೆಳ್ಮ, ಶ್ರೀ ಎಚ್. ನಾಗರಾಜ ಶೆಟ್ಟಿ, ಶ್ರೀ ಯು. ವಿಶ್ವನಾಥ ಶೆಣೈ, ಶ್ರೀ ಪುರುಷೋತ್ತಮ ಪಟೇಲ್, ಶ್ರೀ ಎಚ್. ಶಶಿಧರ ಶೆಟ್ಟಿ, ಶ್ರೀ ಎ. ಎಸ್. ಎನ್. ಹೆಬ್ಬಾರ್, ಶ್ರೀ ಯಶ್ಪಾಲ್ ಸುವರ್ಣ, ಶ್ರೀ ಶಶಿಧರ್ ಶೆಟ್ಟಿ, ಶ್ರೀ ಸುಧಾಕರ ಶೆಟ್ಟಿ, ಶ್ರೀ ಬಿಲ್ಲಾಡಿ ಸೀತಾರಾಮ್ ಶೆಟ್ಟಿ, ಶ್ರೀ ಸುಜಯ್ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಇಪ್ಪತ್ತು ವಿದ್ಯಾರ್ಥಿಗಳಿಗೆ ಚೆಕ್ ಹಸ್ತಾಂತರಿಸಲಾಯಿತು. ಒಟ್ಟು 1135 ವಿದ್ಯಾರ್ಥಿಗಳಿಗೆ 89,85,500/- ರೂಪಾಯಿ ವಿದ್ಯಾರ್ಥಿವೇತನ ವಿತರಿಸಲಾಯಿತು. ಇಬ್ಬರು ವಿದ್ಯಾರ್ಥಿಗಳಿಗೆ ಬೆಂಗಳೂರಿನ ಶ್ರೀಮತಿ ಗೀತಾ ಎಲ್. ಎನ್. ಶೆಟ್ಟಿಯವರ ಪ್ರಾಯೋಜಕತ್ವದ ಲ್ಯಾಪ್‌ಟಾಪನ್ನು ವಿತರಿಸಲಾಯಿತು.

ಸಭಾಂಗಣದ ಪ್ರಬಂಧಕರಾದ ಶ್ರೀ ಅರುಣ್ ಕುಮಾರ್ ಅವರನ್ನು ಅಭಿನಂದಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ಜತೆ ಕಾರ್ಯದರ್ಶಿ ಎಚ್. ಎನ್. ಶೃಂಗೇಶ್ವರ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ನಿರೂಪಿಸಿದರು. ಕಾರ್ಯಕ್ರಮವನ್ನು ಶ್ರೀ ಬನ್ನಾಡಿ ಸಂತೋಷ್ ಕುಮಾರ್ ಶೆಟ್ಟಿ ಸಂಯೋಜಿಸಿದರು.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ಪದ್ಯಾಣ ಜಯರಾಮ ಭಟ್ ಮತ್ತು ಪುತ್ತು ನಾಯ್ಕ ಬಸಕೋಡಿ ಅವರಿಗೆ ಸರ್ಪಂಗಳ ಪ್ರಶಸ್ತಿ ಪ್ರದಾನ – ಅಕ್ಟೋಬರ್ 15, 2022ರಂದು ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್‌ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ

ಹನ್ನೊಂದನೆಯ ವರ್ಷದ  ಸರ್ಪಂಗಳ  ಯಕ್ಷೋತ್ಸವ ಮತ್ತು  ಸರ್ಪಂಗಳ  ಪ್ರಶಸ್ತಿ ಪ್ರದಾನ ಸಮಾರಂಭವು ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಅಕ್ಟೋಬರ್ 15, 2022 ರಂದು ರಾತ್ರಿ 9.00 ಗಂಟೆಗೆ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಜರಗಲಿದೆ.

ಸಂಜೆ 6.00 ರಿಂದ 11.00ರವರೆಗೆ ‘ಹನುಮೋದ್ಭವ ಮಾರಣಾಧ್ವರ’ ಯಕ್ಷಗಾನ ಪ್ರಸ್ತುತಗೊಳ್ಳಲಿದೆ.

2022ನೆಯ ಸಾಲಿನ‘ಸರ್ಪಂಗಳ ಸುಬ್ರಹ್ಮಣ್ಯ ಭಟ್‌ ಸ್ಮಾರಕ ಯಕ್ಷಗಾನ ಸಾಧಕ ಪ್ರಶಸ್ತಿ’ಯನ್ನು ಪಿ.ಟಿ. ಜಯರಾಮ ಭಟ್ ಅವರಿಗೆ ನೀಡಲಾಗುತ್ತಿದೆ. ಪ್ರಸಿದ್ಧ ಪದ್ಯಾಣ ಮನೆತನದ ಜಯರಾಮ ಭಟ್ಟರು ಸುಮಾರು ಮೂರು ದಶಕಗಳ ಕಾಲ ವಿವಿಧ ಮೇಳಗಳಲ್ಲಿ ಭಾಗವತರಾಗಿ, ಮದ್ದಲೆವಾದಕರಾಗಿ ತಿರುಗಾಟ ನಡೆಸಿದ ಅನುಭವ ಉಳ್ಳವರು.

ಈ ವರ್ಷದ‘ಸರ್ಪಂಗಳ ಕಲಾಸೇವಾ ಪುರಸ್ಕಾರ’ವನ್ನು ಕಟೀಲು ಮೇಳದಲ್ಲಿ ಸುಮಾರು ಐದು ದಶಕಗಳ ಕಾಲ ನೇಪಥ್ಯ ಕಲಾವಿದರಾಗಿ ಸೇವೆ ಸಲ್ಲಿಸಿದ ಪುತ್ತು ನಾಯ್ಕ ಬಸಕೋಡಿ ಇವರಿಗೆ ನೀಡಲಾಗುತ್ತಿದೆ.

ಅಂದು ಜರಗಲಿರುವ ಸಮಾರಂಭದಲ್ಲಿ ಪರ್ಯಾಯ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ‘ಸರ್ಪಂಗಳ  ಯಕ್ಷೋತ್ಸವ’ದ ಆಯೋಜಕರಾದ ಡಾ.ಶೈಲಜಾ ಎಸ್. ಮತ್ತು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ವಿದ್ಯಾಭಾರತಿ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಸಮಗ್ರ ತಂಡ ಪ್ರಶಸ್ತಿಯೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶಾರದಾ ವಿದ್ಯಾಲಯ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಅಕ್ಟೋಬರ್ 7 ಮತ್ತು 8 ರಂದು ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿ, 240 ಅಂಕಗಳೊಂದಿಗೆ ಸಮಗ್ರ ತಂಡ ಪ್ರಶಸ್ತಿಯೊಂದಿಗೆ ಅಕ್ಟೋಬರ್ 11 ರಿಂದ ಬಳ್ಳಾರಿಯ ಬಾಲ ವಿದ್ಯಾಲಯದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. 

ಶಿಶು ವರ್ಗದಲ್ಲಿ ವಂಶಿತಾ (ನೆಕ್ಕರಾಜೆ ವಸಂತ ಕುಮಾರ್, ಸುಜಾತ ದಂಪತಿ ಪುತ್ರಿ) ಉದ್ದ ಜಿಗಿತ (ಪ್ರಥಮ), 200 ಮೀಟರ್ (ದ್ವಿತೀಯ), 100 ಮೀಟರ್ (ತೃತೀಯ), 4×100 ಮೀಟರ್ ರಿಲೇ (ಪ್ರಥಮ), ಆತ್ಮಿ.ಕೆ.ಎಲ್ (ಕಂಬಳದಡ್ಡ ಲಕ್ಷ್ಮಣ ಗೌಡ, ಹೇಮಲತಾ ದಂಪತಿ ಪುತ್ರಿ), 200 ಮೀಟರ್ (ಪ್ರಥಮ ), 100 ಮೀಟರ್ (ದ್ವಿತೀಯ), 4×100 ಮೀಟರ್ ರಿಲೇ (ಪ್ರಥಮ), ಸಾನ್ವಿ ಆನಂದ್ (ನೆರಿಗೇರಿ ಆನಂದ್, ವಾಣಿಶ್ರೀ ದಂಪತಿ ಪುತ್ರಿ) ಎತ್ತರ ಜಿಗಿತ (ಪ್ರಥಮ), ಉದ್ದ ಜಿಗಿತ (ದ್ವಿತೀಯ), 4×100 ಮೀಟರ್ ರಿಲೇ (ಪ್ರಥಮ),

ಅಕ್ಷರಾ.ಪಿ.ಶೆಟ್ಟಿ (ಕೊಡಂಗೆಮಾರ್ ಪ್ರದೀಪ್ ಶೆಟ್ಟಿ, ಮಮತಾ ಶೆಟ್ಟಿ ದಂಪತಿ ಪುತ್ರಿ) ಶಾಟ್ ಪುಟ್ (ಪ್ರಥಮ), ಸ್ನಿಗ್ಧಾ.ಎನ್.ಎಸ್ (ಸಾಲ್ತಾಡಿ ನಾರಾಯಣ.ಕೆ, ಸುಹಾಸಿನಿ ದಂಪತಿ ಪುತ್ರಿ) ಶಾಟ್ ಪುಟ್ (ತೃತೀಯ) , ಪೃಥ್ವಿಕಾ ಆಚಾರ್ಯ (ಪರ್ಲಡ್ಕ ಚಿದಾನಂದ , ವೀಣಾ ದಂಪತಿ ಪುತ್ರಿ) 4×100 ಮೀಟರ್ ರಿಲೇ (ಪ್ರಥಮ), ಬಾಲಕರ ವಿಭಾಗದಲ್ಲಿ ಸಾಕ್ಷಿನ್.ಆರ್.ರೈ (ಎಣ್ಮೂರುಗುತ್ತು ರವೀಂದ್ರನಾಥ್ ರೈ, ಜ್ಯೋತಿಲಕ್ಷ್ಮೀ ದಂಪತಿ ಪುತ್ರ) ಎತ್ತರ ಜಿಗಿತದಲ್ಲಿ ತೃತೀಯ ಬಹುಮಾನ ಗಳಿಸಿದ್ದಾರೆ.

ಬಾಲ ವರ್ಗದ ಬಾಲಕಿಯರ ವಿಭಾಗದಲ್ಲಿ ಶ್ರೀವರ್ಣಾ (ಪಾಲೆತ್ತಡಿ ಧರ್ಣಪ್ಪ ಗೌಡ, ಮಮತಾ.ಪಿ. ದಂಪತಿ ಪುತ್ರಿ) ಎತ್ತರ ಜಿಗಿತ (ಪ್ರಥಮ), ಉದ್ದ ಜಿಗಿತ (ಪ್ರಥಮ), 80 ಮೀಟರ್ ಹರ್ಡಲ್ಸ್ (ಪ್ರಥಮ), 4×100 ಮೀಟರ್ ರಿಲೇ (ಪ್ರಥಮ), ಕೃತಿ,ಕೆ (ಬನ್ನೂರು ಕೊರಗಪ್ಪ ಗೌಡ, ವನಿತಾ.ಎ ದಂಪತಿ ಪುತ್ರಿ) 600 ಮೀಟರ್ (ಪ್ರಥಮ), 400 ಮೀಟರ್ (ದ್ವಿತೀಯ), 4×100 ಮೀಟರ್ ರಿಲೇ (ಪ್ರಥಮ), ಡಿಂಪಲ್ ಶೆಟ್ಟಿ(ಮೆರ್ಲ ನಿವಾಸಿ ಉದಯ ಶೆಟ್ಟಿ ಮತ್ತು ಸುನೀತಾ ಶೆಟ್ಟಿ ದಂಪತಿ ಪುತ್ರಿ) 200 ಮೀಟರ್ (ದ್ವಿತೀಯ), 100 ಮೀಟರ್ (ದ್ವಿತೀಯ), ಉದ್ದ ಜಿಗಿತ (ದ್ವಿತೀಯ), 4×100 ಮೀಟರ್ ರಿಲೇ (ಪ್ರಥಮ),

ಅಮೃತಾ.ಬಿ.ಎ (ಬನ್ನೂರು ಪಟ್ಟೆ ಅಮರನಾಥ್, ಲತಾ ಕುಮಾರಿ ದಂಪತಿ ಪುತ್ರಿ) 600 ಮೀಟರ್ (ದ್ವಿತೀಯ), 400 ಮೀಟರ್ (ತೃತೀಯ), 4×100 ಮೀಟರ್ ರಿಲೇ (ಪ್ರಥಮ), ದಿವಿಜ್ಞಾ (ಕುರಿಯ ಶಿವಪ್ರಸಾದ್, ಪವಿತ್ರಾ ದಂಪತಿ ಪುತ್ರಿ) 200 ಮೀಟರ್ (ತೃತೀಯ), 100 ಮೀಟರ್ (ತೃತೀಯ), ಜೀವಿಕಾ (ಹಲಂಗ ವಿಶ್ವನಾಥ ಗೌಡ, ಯಶೋದಾ ದಂಪತಿ ಪುತ್ರಿ) ಎತ್ತರ ಜಿಗಿತ (ತೃತೀಯ), ಮಾನ್ಯ ಲಕ್ಷ್ಮೀ (ಲಕ್ಷ್ಮೀಬೆಟ್ಟ ಕೃಷ್ಣಪ್ರಸಾದ್, ಮಂಜುಳಾ ದಂಪತಿ ಪುತ್ರಿ) ಚಕ್ರ ಎಸೆತ (ತೃತೀಯ) ಬಹುಮಾನ ಗಳಿಸಿದ್ದಾರೆ.

ಬಾಲಕರ ವಿಭಾಗದಲ್ಲಿ ಕೃಪಾಲ್.ಪಿ.ಕೆ (ಕೆಮ್ಮಾಯಿಯ ಪ್ರಕಾಶ್.ಬಿ, ಸುನೀತಾ ಸಿ.ಎಚ್ ದಂಪತಿ ಪುತ್ರ) 600 ಮೀಟರ್ (ಪ್ರಥಮ), 400 ಮೀಟರ್ (ದ್ವಿತೀಯ), 200 ಮೀಟರ್ (ತೃತೀಯ), 4×100 ಮೀಟರ್ ರಿಲೇ (ದ್ವಿತೀಯ), ಅಭಿಶ್ಯಾಮ (ಪರ್ಲಡ್ಕ ಮುರಳೀಧರ್, ರಾಜೇಶ್ವರಿ ದಂಪತಿ ಪುತ್ರ) ಎತ್ತರ ಜಿಗಿತ (ಪ್ರಥಮ), ಮನ್ವಿತ್ ನೆಕ್ಕರೆ (ನೆಕ್ಕರೆ ಉಮೇಶ್.ಎನ್ , ಕವಿತಾ ದಂಪತಿ ಪುತ್ರ) ಉದ್ದ ಜಿಗಿತ (ತೃತೀಯ), 4×100 ಮೀಟರ್ ರಿಲೇ (ದ್ವಿತೀಯ), ಮನ್ವಿತ್.ಎಂ. ರೈ (ದರ್ಬೆ ಮಂಜುನಾಥ್ ರೈ, ಪ್ರವೀಣಾ ರೈ ದಂಪತಿ ಪುತ್ರ) ಚಕ್ರ ಎಸೆತ (ತೃತೀಯ), 4×100 ಮೀಟರ್ ರಿಲೇ (ದ್ವಿತೀಯ), ಲಕ್ಷ್ಮೀ ನಮನ್ (ಲಕ್ಷ್ಮೀ ಬೆಟ್ಟ ಜನಾರ್ದನ, ವೀಣಾ ಜನಾರ್ದನ್ ದಂಪತಿ ಪುತ್ರ) 4×100 ಮೀಟರ್ ರಿಲೇ (ದ್ವಿತೀಯ) ಬಹುಮಾನ ಗಳಿಸಿರುತ್ತಾರೆ. 

ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ವಂಶಿ.ಬಿ.ಕೆ (ಬಪ್ಪಳಿಗೆ ಕಮಲಾಕ್ಷ, ಜಯಲತಾ ದಂಪತಿ ಪುತ್ರಿ) 100 ಮೀಟರ್ (ಪ್ರಥಮ), 200 ಮೀಟರ್ (ಪ್ರಥಮ), 110 ಮೀಟರ್ ಹರ್ಡಲ್ಸ್ (ಪ್ರಥಮ), 4×100 ಮೀಟರ್ ರಿಲೇ (ಪ್ರಥಮ), 4×400 ಮೀಟರ್ ರಿಲೇ (ಪ್ರಥಮ), ಅನ್ನಿಕಾ.ಎಂ (ಚಾರ್ವಾಕ ಎ.ಎಸ್.ಐ ಕೃಷ್ಣಪ್ಪ.ಎಂ, ಶಿಕ್ಷಕಿ ವಾಣಿಶ್ರೀ ದಂಪತಿ ಪುತ್ರಿ) 3000 ಮೀಟರ್ (ಪ್ರಥಮ), 1500 ಮೀಟರ್ (ಪ್ರಥಮ), 4×400 ಮೀಟರ್ ರಿಲೇ (ಪ್ರಥಮ),

ಬಿ.ಲಿಖಿತಾ ರೈ (ಚಣಿಲ ಬಿ.ಜಗನ್ನಾಥ್ ರೈ, ಗೀತಾ.ಜೆ.ರೈ ದಂಪತಿ ಪುತ್ರಿ) 4×100 ಮೀಟರ್ ರಿಲೇ (ಪ್ರಥಮ), 4×400 ಮೀಟರ್ ರಿಲೇ (ಪ್ರಥಮ), 400 ಮೀಟರ್ (ದ್ವಿತೀಯ), ರಿದ್ಧಿ.ಸಿ.ಶೆಟ್ಟಿ ( ಪುಂಡಿಕಾಯಿ ಚಿದಾನಂದ ಶೆಟ್ಟಿ, ಸತ್ಯವತಿ.ಸಿ.ಶೆಟ್ಟಿ ದಂಪತಿ ಪುತ್ರಿ) 400 ಮೀಟರ್ (ದ್ವಿತೀಯ), 800 ಮೀಟರ್ (ದ್ವಿತೀಯ) 4×100 ಮೀಟರ್ ರಿಲೇ (ಪ್ರಥಮ), ಸಾನ್ವಿ.ಎಸ್.ಪಿ. (ಪಳಂಬೆ ನಿವೃತ್ತ ಯೋಧ ಡಿ.ಸುಂದರ ಪೂಜಾರಿ, ಶಿಕ್ಷಕಿ ಭವಿತಾ.ಕೆ ದಂಪತಿ ಪುತ್ರಿ) 100 ಮೀಟರ್ (ದ್ವಿತೀಯ), 200 ಮೀಟರ್ (ತೃತೀಯ), 4×100 ಮೀಟರ್ ರಿಲೇ (ಪ್ರಥಮ),

ಸಮೃದ್ಧಿ.ಜೆ.ಶೆಟ್ಟಿ (ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಹರಿಣಾಕ್ಷಿ.ಜೆ.ಶೆಟ್ಟಿ ದಂಪತಿ ಪುತ್ರಿ) ಎತ್ತರ ಜಿಗಿತ (ಪ್ರಥಮ), ಉದ್ದ ಜಿಗಿತ (ದ್ವಿತೀಯ), ಶ್ರದ್ಧಾ ಲಕ್ಷ್ಮೀ (ತಾರಿಗುಡ್ಡೆ ರವಿಶಂಕರ್ , ಅನುಪಮಾ ದಂಪತಿ ಪುತ್ರಿ) ಉದ್ದ ಜಿಗಿತ (ಪ್ರಥಮ) , ಧನ್ಯಶ್ರೀ (ಬಲ್ನಾಡು ಪ್ರಸನ್ನ.ಬಿ, ಮನೋರಮಾ.ಪಿ ದಂಪತಿ ಪುತ್ರಿ) ಹ್ಯಾಮರ್ ಎಸೆತ (ದ್ವಿತೀಯ), ಚಕ್ರ ಎಸೆತ (ದ್ವಿತೀಯ), ಪವಿತ್ರಾ (ಮೀನಾವು ಕೇಶವದಾಸ್, ಸುಭಾಷಿಣಿ ದಂಪತಿ ಪುತ್ರಿ) ಈಟಿ ಎಸೆತ (ದ್ವಿತೀಯ), ಹ್ಯಾಮರ್ ಎಸೆತ (ತೃತೀಯ) ಬಹುಮಾನ ಗಳಿಸಿರುತ್ತಾರೆ.

ಬಾಲಕರ ವಿಭಾಗದಲ್ಲಿ ಚರಣ್ ಕುಮಾರ್ (ಅಳಿಕೆ ದೇವಳಗುಳಿ ಕೃಷ್ಣ ಕುಮಾರ್, ಪ್ರೇಮಾ ದಂಪತಿ ಪುತ್ರ) 3000 ಮೀಟರ್ (ಪ್ರಥಮ), 5 ಕಿಲೋಮೀಟರ್ ನಡಿಗೆ (ಪ್ರಥಮ), 4×400 ಮೀಟರ್ ರಿಲೇ (ದ್ವಿತೀಯ), ಸಚಿತ್.ಪಿ.ಕೆ (ಕೆಮ್ಮಾಯಿಯ ಪ್ರಕಾಶ್.ಬಿ, ಸುನೀತಾ ಸಿ.ಎಚ್ ದಂಪತಿ ಪುತ್ರ) 800 ಮೀಟರ್ (ಪ್ರಥಮ), 400 ಮೀಟರ್ (ಪ್ರಥಮ), 4×400 ಮೀಟರ್ ರಿಲೇ (ದ್ವಿತೀಯ), 4×100 ಮೀಟರ್ ರಿಲೇ (ತೃತೀಯ),

ಪ್ರಥಮ್.ಎಂ.ಪಿ (ಪಡ್ನೂರು ಪದ್ಮಪ್ಪ ಪೂಜಾರಿ, ಮಾಲತಿ.ಬಿ. ದಂಪತಿ ಪುತ್ರ) ಹ್ಯಾಮರ್ ಎಸೆತ (ಪ್ರಥಮ), ಚಕ್ರ ಎಸೆತ (ದ್ವಿತೀಯ), ಆಶ್ರಯ್.ಎನ್ ( ಕೆಮ್ಮಿಂಜೆ ಶಶಿಧರ್.ಎನ್, ರಾಜೀವಿ ದಂಪತಿ ಪುತ್ರ) 800 ಮೀಟರ್ (ದ್ವಿತೀಯ), ಸಾತ್ವಿಕ್.ಆರ್ (ರೆಂಜ ಆರ್.ಸಿ. ನಾರಾಯಣ್, ಸುಮಾ ದಂಪತಿ ಪುತ್ರ) ಟ್ರಿಪಲ್ ಜಂಪ್ ( ದ್ವಿತೀಯ), 110 ಮೀಟರ್ ಹರ್ಡಲ್ಸ್ (ತೃತೀಯ), 4×100 ಮೀಟರ್ ರಿಲೇ (ತೃತೀಯ),

ಅಮಿತ್ ಬೋರ್ಕರ್ (ದರ್ಬೆ ಮೋಹನ್ ಚಂದ್ರ ಬೋರ್ಕರ್, ನಳಿನಿ ದಂಪತಿ ಪುತ್ರ) 4×400 ಮೀಟರ್ ರಿಲೇ (ದ್ವಿತೀಯ), 4×100 ಮೀಟರ್ ರಿಲೇ (ತೃತೀಯ), ಧನ್ ರಾಜ್ (ಹಲಂಗ ವಿಶ್ವನಾಥ ಗೌಡ, ಯಶೋದಾ ದಂಪತಿ ಪುತ್ರ) 4×400 ಮೀಟರ್ ರಿಲೇ (ದ್ವಿತೀಯ), ಪ್ರಖ್ಯಾತ್ (ಕೆಮ್ಮಿಂಜೆ ಹರಿಯ ನಾಯಕ್.ಸಿ.ಎಚ್ , ವಾರಿಜ ದಂಪತಿ ಪುತ್ರ) ಎತ್ತರ ಜಿಗಿತ (ತೃತೀಯ), ಹಾರ್ದಿಕ್.ಪಿ.ಕೆ (ಕೋಡಿಂಬಾಡಿ ಪುರುಷೋತ್ತಮ್, ಶಿಕ್ಷಕಿ ಪುಷ್ಪಲತಾ ದಂಪತಿ ಪುತ್ರ) 3000 ಮೀಟರ್ (ತೃತೀಯ) ಬಹುಮಾನ ಗಳಿಸಿರುತ್ತಾರೆ. 

ವೈಯಕ್ತಿಕ ಚಾಂಪಿಯನ್ ಶಿಶುವರ್ಗದ ಬಾಲಕಿಯರ ವಿಭಾಗದಲ್ಲಿ ವಂಶಿತಾ, ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ ಶ್ರೀವರ್ಣಾ, ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ವಂಶಿ.ಬಿ.ಕೆ, ಬಾಲಕರ ವಿಭಾಗದಲ್ಲಿ ಚರಣ್ ಕುಮಾರ್ ಹಾಗೂ ಸಚಿತ್.ಪಿ.ಕೆ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿರುತ್ತಾರೆ. ಶಿಶು ವರ್ಗ, ಬಾಲ ವರ್ಗ ಮತ್ತು ಕಿಶೋರ ವರ್ಗದ ಬಾಲಕಿಯರ ವಿಭಾಗದ ಮೂರೂ ಸಮಗ್ರ ಪ್ರಶಸ್ತಿಗಳನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತನ್ನ ಮುಡಿಗೇರಿಸಿಕೊಂಡಿದೆ. ಮಾತ್ರವಲ್ಲದೇ ಒಟ್ಟಾರೆಯಾಗಿ 240 ಅಂಕಗಳೊಂದಿಗೆ “ಸಮಗ್ರ ತಂಡ ಪ್ರಶಸ್ತಿ”ಯನ್ನೂ ಕೂಡ ಜಯಿಸಿಕೊಂಡು ರಾಜ್ಯಮಟ್ಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ದೈಹಿಕ ಶಿಕ್ಷಣ ವಿಭಾಗ ಮುಖ್ಯಸ್ಥರಾದ ಶ್ರೀ ಭಾಸ್ಕರ ಗೌಡ ಮುಂಗ್ಲಿಮನೆ ಇವರ ಮಾರ್ಗದರ್ಶನದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಆಶಾಲತಾ ಹಾಗೂ ಶ್ರೀಮತಿ ನಮಿತಾ.ಕೆ.ಕೆ, ಶ್ರೀ ದೀಪಕ್, ಶ್ರೀಮತಿ ರಶ್ಮಿ.ಎಚ್.ಕೆ ಮತ್ತು ಶ್ರೀ ಪವನ್ ಕುಮಾರ್ ಸಹಕಾರದೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಗಿರೀಶ್ ಕಣಿಯಾರು ಮತ್ತು ಶ್ರೀಮತಿ ವಾಣಿಶ್ರೀ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ತರಬೇತುಗೊಳಿಸಿರುತ್ತಾರೆ. 

ತಂಡದ ಪ್ರಧಾನ ವ್ಯವಸ್ಥಾಪಕರಾಗಿ ಸಹಶಿಕ್ಷಕ ಶ್ರೀ ವೆಂಕಟೇಶ್ ಪ್ರಸಾದ್ ಮತ್ತು ಸಹಾಯಕ ವ್ಯವಸ್ಥಾಪಕರಾಗಿ ಸಹಶಿಕ್ಷಕಿಯರಾದ ಶ್ರೀಮತಿ ಲತಾ ಕುಮಾರಿ ಹಾಗೂ ಶ್ರೀಮತಿ ಅಶ್ವಿನಿ ರಾವ್ ಭಾಗವಹಿಸಿರುತ್ತಾರೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ಸೀತಾನದಿ ಗಣಪಯ್ಯ ಶೆಟ್ಟಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ

ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನ ಬೈಲೂರು ವತಿಯಿಂದ ಶಿಕ್ಷಕ ,ಪ್ರಸಂಗ ಕರ್ತ, ಅರ್ಥದಾರಿ, ಸಾಹಿತಿ ಮತ್ತು ಅಭಿನವ        ಪಾರ್ತಿಸುಬ್ಬ ಬಿರುದಾಂಕಿತ  ಸೀತಾನದಿ ಗಣಪಯ್ಯ ಶೆಟ್ಟಿ ಅವರ 35ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮವು ಗುರುವಾಯನಕೆರೆ ಬದ್ಯಾರಿನ ಹಂಸಗಿರಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ  ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ  ಡಿ.ಹರ್ಷೇಂದ್ರ ಕುಮಾರ್ ಮಾತನಾಡಿ ಶಿಕ್ಷಕರಾಗಿದ್ದುಕೊಂಡು ಯಕ್ಷಗಾನ ಕ್ಷೇತ್ರಕ್ಕೆ ಗಣನೀಯವಾದ ಕೊಡುಗೆಗಳನ್ನು ನೀಡಿದ ಸೀತಾನದಿಯವರ ಸಂಸ್ಮರಣೆಯನ್ನು 35 ವರ್ಷಗಳಿಂದ ವಿವಿಧಡೆಗಳಲ್ಲಿ ನಡೆಸುತ್ತಾ ಬಂದಿರುವುದು ಅವರಿಗೆ ನಿಜವಾಗಿ ಸಲ್ಲುವ ಗೌರವ.  ಅವರು ರಚಿಸಿದ ಹಲವು ಕನ್ನಡ  ಮತ್ತು ತುಳು ಪ್ರಸಂಗಗಳು ಈಗಲೂ ಜನಪ್ರಿಯವಾಗಿ ರಂಗದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದರು.

ಸೀತಾನದಿ ಸಂಸ್ಮರಣೆಯ 50ನೇ ವಾರ್ಷಿಕ ಪ್ರಶಸ್ತಿಯನ್ನು ಕಲಾವಿದ ಮತ್ತು ಪ್ರಸಂಗಕರ್ತ ದೇವದಾಸ ಈಶ್ವರಮಂಗಲ ಇವರಿಗೆ ಪ್ರಧಾನ ಮಾಡಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ  ಪಿ.  ಕಿಶನ್ ಹೆಗ್ಡೆ ಮಾತನಾಡಿ ಕಿರಿವಯಸ್ಸಿನಲ್ಲಿ 80 ಪ್ರಸಂಗಗಳನ್ನು ಯಕ್ಷಗಾನ ರಂಗಕ್ಕೆ ನೀಡಿದ ಪ್ರಸಂಗಕರ್ತ ದೇವದಾಸ್ ಈಶ್ವರಮಂಗಲ ಇವರಿಂದ ಇನ್ನಷ್ಟು ಮೌಲ್ಯಯುತವಾದ ಕಥಾನಕಗಳು ಮೂಡಿ ಬರಲಿ ಎಂದರು. ಕಳೆದ 35 ವರ್ಷಗಳಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ದುಡಿದ 50 ಮಂದಿ ಗಣ್ಯರನ್ನು ಸನ್ಮಾನಿಸಿರುವುದು ಪ್ರತಿಷ್ಠಾನಕ್ಕೆ ಅಭಿಮಾನದ ಸಂಗತಿಯಾಗಿದೆಯೆಂದರು.

ಪ್ರಶಸ್ತಿ ಸ್ವೀಕರಿಸಿದ ದೇವದಾಸ್ ಈಶ್ವರಮಂಗಲ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಕಥಾನಕಗಳನ್ನು ಆಧರಿಸಿ ಪ್ರಸಂಗಗಳನ್ನು ರಚಿಸಿದ್ದೇನೆ. ಈ ಪ್ರಶಸ್ತಿ ಸ್ವೀಕರಿಸಿದ ಕ್ಷಣಗಳು ನನ್ನ ಜೀವನದಲ್ಲಿ ಒಂದು ಅಪೂರ್ವ ಯೋಗ, ಭಾಗ್ಯವೆಂದು ತಿಳಿಸಿದರು. 

ಮುಖ್ಯ ಅತಿಥಿ ಬರೋಡಾದ ತುಳುಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ ಮಾತನಾಡಿ ಮೌಲಿಕವಾದ ಕಥಾನಕಗಳಿಗೆ ಪ್ರಸಂಗ ಸಾಹಿತ್ಯ ರಚಿಸಿ ಜೀವಂತವಾಗಿರಿಸಿದ ಮತ್ತು ಆ ಪಾತ್ರಗಳಿಗೆ ಜೀವ ತುಂಬಿದ ಕಲಾವಿದರ ನೆನಪು ನಮ್ಮಲ್ಲಿ ಉಳಿದಿರುವುದು ಯಕ್ಷಗಾನದ ಜೀವಂತಿಕೆಯಾಗಿದೆ  ಎಂದರು.

ವೇದಿಕೆಯಲ್ಲಿ ಪೋಲ್ಯ ಉಮೇಶ್ ಶೆಟ್ಟಿ ಮುಂಬೈ ಕಾರ್ಯಕ್ರಮದ ಸಂಯೋಜಕರಾದ ಹಂಸಗಿರಿ ಬಾಲಕೃಷ್ಣ. ಸಿ ನಾಯಕ್, ಸೀತಾನದಿಯವರ ಹಿರಿಯ ಪುತ್ರ ಪಡಂಗಡಿ ಜಯರಾಮ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಿ. ಭುಜಬಲಿ  ಧರ್ಮಸ್ಥಳ, ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿ, ಧರ್ಮಸ್ಥಳ ಮೇಳದ ಮ್ಯಾನೇಜರ್ ಗಿರೀಶ್ ಹೆಗ್ಡೆ ಮತ್ತು ಸೀತಾನದಿ  ಪ್ರತಿಷ್ಠಾನದ ಪದಾಧಿಕಾರಿಗಳು, ಬಂಧುಗಳು, ಕಲಾಭಿಮಾನಿಗಳು ಭಾಗವಹಿಸಿದ್ದರು.

ಸೀತಾನದಿ ಗಣಪಯ್ಯರ ಸಂಸ್ಮರಣೆಯನ್ನು ಭುವನ ಪ್ರಸಾದ ಹೆಗ್ಡೆ ಮತ್ತು ಪ್ರಶಸ್ತಿ ಪುರಸ್ಕೃತರ ಅಭಿನಂದನಾ ನುಡಿಗಳನ್ನು ಮಣಿಪಾಲದ ಎಸ್ .ವಿ ಉದಯಕುಮಾರ್ ಶೆಟ್ಟಿ ನಿರ್ವಹಿಸಿದರು.

ಭಾಸ್ಕರ ಶೆಟ್ಟಿ ಪ್ರಾರ್ಥಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ಎಸ್. ಅಶೋಕ್ ಕುಮಾರ್ ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸೀತಾನದಿ ವಿಟ್ಟಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸೀತಾ ನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನದ ವತಿಯಿಂದ 35ನೇ ವರ್ಷದ ಸಂಸ್ಮರಣೆಯಂಗವಾಗಿ ಪ್ರಸಂಗ ಕರ್ತ ದೇವದಾಸ ಈಶ್ವರಮಂಗಲ ಇವರಿಗೆ ಸೀತಾನದಿ  ಪ್ರಶಸ್ತಿಯನ್ನು ಬದ್ಯಾರು ಹಂಸಗಿರಿಯಲ್ಲಿ  ಜರಗಿದ ಕಾರ್ಯಕ್ರಮದಲ್ಲಿ ಡಿ. ಹರ್ಷೇಂದ್ರ ಕುಮಾರ ಧರ್ಮಸ್ಥಳ ,ಪ್ರತಿಷ್ಠಾನದ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ, ಉದ್ಯಮಿ ಶಶಿಧರ ಶೆಟ್ಟಿ, ಪಡಂಗಡಿ ಜಯರಾಮ ಶೆಟ್ಟಿ ಪ್ರದಾನ ಮಾಡಿದರು. ಪ್ರಶಸ್ತಿಯು ರೂಪಾಯಿ 20,000 ನಗದು ಪುರಸ್ಕಾರವನ್ನು ಕೂಡ ಒಳಗೊಂಡಿದೆ.

ಸಭಾ ಕಾರ್ಯಕ್ರಮದ ಬಳಿಕ ಸಾಲಿಗ್ರಾಮ ಮೇಳದ ಕಲಾವಿದರಿಂದ  ಮಾಗದವಧೆ  ಯಕ್ಷಗಾನ ಪ್ರದರ್ಶನ ಜರಗಿತು.

ವರದಿ :ದಿವಾಕರ ಆಚಾರ್ಯ ಗೇರುಕಟ್ಟೆ, 9449076275

ವರದಿ :ದಿವಾಕರ ಆಚಾರ್ಯ ಗೇರುಕಟ್ಟೆ,9449076275

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ಹರಿಪಾದ ಸೇರಿದ ಅನಂತಪುರ ದೇವಸ್ಥಾನದ ಮೊಸಳೆ ಬಬಿಯಾ – ಇತಿಹಾಸದ ಪುಟ ಸೇರಿದ ದೇವಕಿಂಕರ

0

ಕೇರಳದ ಕಾಸರಗೋಡು ಕುಂಬಳೆ ಸಮೀಪದ ಅನಂತಪುರ ದೇವಸ್ಥಾನದ ಸರೋವರದ ದೇವರ ಮೊಸಳೆ ಎಂಬ ಖ್ಯಾತಿಯ ಬಬಿಯಾ ನಿನ್ನೆ ಇಹಲೋಕವನ್ನು ತೊರೆದು ದೇವರ ಪಾದವನ್ನು ಸೇರಿದೆ.

ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ದೇವಾಲಯದ ಸರೋವರದ ದೇವಾಲಯದ ರಕ್ಷಕ ಬಬಿಯಾ. ಸ್ಥಳೀಯ ದಂತಕಥೆಯ ಪ್ರಕಾರ, ಬಬಿಯಾ ಪ್ರತಿದಿನ ದೇವರ ಮಧ್ಯಾಹ್ನದ ಪೂಜೆಯ ನಂತರ ನೀಡಲಾಗುವ ದೇವಾಲಯದ ಪ್ರಸಾದವನ್ನು ಮಾತ್ರ ತಿನ್ನುತ್ತದೆ.

ಸಸ್ಯಾಹಾರಿ ಪ್ರಸಾದವು ಬೇಯಿಸಿದ ಅನ್ನ ಮತ್ತು ಬೆಲ್ಲವನ್ನು ಒಳಗೊಂಡಿರುತ್ತದೆ ಮತ್ತು ಅರ್ಚಕರು ನಿರ್ಭಯವಾಗಿ ಅವರ ಕೈಗಳಿಂದ ಸ್ನೇಹಪರ ಮೊಸಳೆಗೆ ಆಹಾರವನ್ನು ನೀಡುತ್ತಾರೆ.

ಭಗವಾನ್ ಕೃಷ್ಣ ಮತ್ತು ಅವನ ಭಕ್ತರೊಬ್ಬರಿಗೆ ಸಂಬಂಧಿಸಿದ ಅದ್ಭುತ ಕಥೆಯು ಬಬಿಯಾ ಅವರ ಅಸ್ತಿತ್ವದ ಉದ್ದೇಶದ ಮೇಲೆ ಬೆಳಕು ಚೆಲ್ಲುತ್ತದೆ. ಅದರಂತೆ, ಶ್ರೀ ವಿಲ್ವಮಂಗಲತ್ತು ಸ್ವಾಮಿಗಳು ತಮ್ಮ ಗುರುಗಳಾದ ಶ್ರೀ ವಿಷ್ಣುವಿನ ಕೃಪೆಗೆ ಪಾತ್ರರಾಗಲು ಆಳವಾದ ಧ್ಯಾನದಲ್ಲಿ ನಿರತರಾಗಿದ್ದಾಗ, ಶ್ರೀಕೃಷ್ಣನು ಚಿಕ್ಕ ಹುಡುಗನಾಗಿ ಕಾಣಿಸಿಕೊಂಡು ತನ್ನ ಭಕ್ತನನ್ನು ಪರೀಕ್ಷಿಸಲು ಚೇಷ್ಟೆಗಳನ್ನು ಪ್ರಾರಂಭಿಸಿದನು.

ಚಿಕ್ಕವನ ಚೇಷ್ಟೆಯಿಂದ ನಲುಗಿದ ವಿಲ್ವಮಂಗಳತ್ತು ಸ್ವಾಮಿಗಳು ಅವನನ್ನು ಪಕ್ಕಕ್ಕೆ ತಳ್ಳಿದರು. ಆ ಋಷಿಯು ತನ್ನ ತಪ್ಪನ್ನು ಅರಿತುಕೊಳ್ಳುವ ಹೊತ್ತಿಗೆ, ಬಾಲಕ-ಕೃಷ್ಣನು ಹತ್ತಿರದ ಗುಹೆಯಲ್ಲಿ ಕಣ್ಮರೆಯಾಗಿದ್ದನು. ಕೃಷ್ಣನ ಕಣ್ಮರೆಯಾದ ಬಿರುಕು ದೇವಾಲಯದ ಒಳಗೆ ಎಲ್ಲೋ ಇದೆ. ಮತ್ತು, ಮೊಸಳೆ ಬಬಿಯಾ ನಿಗೂಢ ಪ್ರವೇಶದ್ವಾರವನ್ನು ರಕ್ಷಿಸಲು ನೇಮಕಗೊಂಡ ರಕ್ಷಕ.

ಇನ್ನೊಂದು ದಂತಕಥೆಯ ಪ್ರಕಾರ, ಸುಮಾರು 70 ವರ್ಷಗಳ ಹಿಂದೆ, ಅನಂತಪುರದ ಸರೋವರದ ದೇವಾಲಯದಲ್ಲಿ ಕಾವಲು ಕಾಯುತ್ತಿದ್ದ ಮೊಸಳೆಯನ್ನು ಬ್ರಿಟಿಷ್ ಸೈನಿಕನು ಕೊಂದನು. ಆಶ್ಚರ್ಯಕರವಾಗಿ, ಸೈನಿಕನು ಸ್ವಲ್ಪ ಸಮಯದ ನಂತರ ಹಾವು ಕಡಿತದಿಂದ ಸಾವನ್ನಪ್ಪಿದನು,

ಅವನು ಮಾಡಿದ ಘೋರ ಅಪರಾಧವೇ ಶೇಷಶಯನ ಅನಂತನ ಕೋಪಕ್ಕೆ ಕಾರಣ ಎಂದು ಸ್ಥಳೀಯರು ನಂಬುತ್ತಾರೆ. ಸ್ವಲ್ಪ ಸಮಯದ ನಂತರ, ಹಿಂದಿನ ಕಾವಲುಗಾರನನ್ನು ಬದಲಿಸಲು ಮತ್ತೊಂದು ಮೊಸಳೆ ಸರೋವರದಲ್ಲಿ ಕಾಣಿಸಿಕೊಂಡಿತು, ಮತ್ತು ಪ್ರತಿ ಬಾರಿ ಒಂದು ಮೊಸಳೆ ಸಾಯುವಾಗ, ಅದರ ಸ್ಥಳದಲ್ಲಿ ಮತ್ತೊಂದು ಕಾಣಿಸಿಕೊಳ್ಳುತ್ತದೆ!

ಅನಂತಪುರ ಸರೋವರದಲ್ಲಿರುವ ದೇವಾಲಯದ ದಂತಕಥೆ ಮತ್ತು ಅದರ ಅದ್ಭುತವಾದ ಗಸ್ತು ತಿರುಗುವ ಸರೀಸೃಪ ಪರಿಚಾರಕವೇ ಈ ದೇವಕಿಂಕರ ಮೊಸಳೆ. ಈ ಮೊಸಳೆ ಪ್ರತಿ ಬಾರಿ ಮತ್ತು ಎಲ್ಲರಿಗೂ ಕಾಣಸಿಗುವುದಿಲ್ಲ. ಕಾಣಸಿಕ್ಕವರು ಧನ್ಯರು.

ಕೊನೆಗೂ ಅನಂತನ ಕಿಂಕರ ಬಬಿಯಾ ವೈಕುಂಠ ಯಾತ್ರೆ ಕೈಗೊಂಡಿದೆ. ಇತಿಹಾಸದ ಪುಟಗಳಲ್ಲಿ ಶಾಸ್ವತ ಸ್ಥಾನ ಪಡೆದ ಬಬಿಯಾ ಇನ್ನು ನೆನಪು ಮಾತ್ರ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ಮೂಡಬಿದಿರೆ ಯಕ್ಷೋಪಾಸನಂ ಸಂಸ್ಥೆಯ ದಶಮಾನೋತ್ಸವ : ಸನ್ಮಾನ ಮತ್ತು ತಾಳಮದ್ದಳೆ

ಮೂಡಬಿದ್ರೆಯ ಯಕ್ಷೋಪಾಸನಮ್ ಇದರ ದಶಮಾನೋತ್ಸವ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮೂಡಬಿದ್ರೆ ಸಮಾಜ ಮಂದಿರದಲ್ಲಿ ಜರುಗಿತು

ಮೂಡಬಿದರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಯಕ್ಷಗಾನ ಕಲಾಪ್ರಸಾರದಲ್ಲಿ ಹವ್ಯಾಸಿ ಕಲಾವಿದರು ಫಲಾಪೇಕ್ಷೆ ಇಲ್ಲದೆ ಕಲಾ ಸೇವೆ ಮಾಡುತ್ತಿದ್ದಾರೆ. ಬೇರೆ ಯಾವ ಪ್ರದೇಶದಲ್ಲಿಯೂ ಕಾಣಿಸದ ಈ ಕಲಾ ಪ್ರಕಾರದಲ್ಲಿ ನೂರಾರು ಕಲಾವಿದರು ಪುರಾಣ ಪಾತ್ರಗಳ ಮೂಲಕ ಜ್ಞಾನ ಭಂಡಾರವನ್ನು ಸಮಾಜಕ್ಕೆ ಸಮರ್ಪಿಸುತ್ತಿರುವುದು ಭಗವಂತನಿಗೆ ಅತ್ಯಂತ ಪ್ರಿಯವಾದ ಕಾರ್ಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ಮಾತನಾಡಿ ನಮ್ಮ ಹಿರಿಯರಲ್ಲಿ ವಿದ್ಯೆ ಕಡಿಮೆ ಇದ್ದರೂ ವಿದ್ವತ್ ಅಪಾರವಾಗಿತ್ತು. ಆ ಮೂಲಕ ಪುರಾಣದ ಕಥೆಗಳು ಮನೆಮನೆಗಳಲ್ಲಿ ಕೇಳಿ ಬರುತ್ತಿತ್ತು .ಇಂದು ಯಕ್ಷಗಾನ ಅಪಾರ ಜನಪ್ರಿಯವಾಗುವಲ್ಲಿ ಕಲಾವಿದರ ಮತ್ತು ಸಂಘಟಕರ ಪಾತ್ರ ದೊಡ್ಡದಾಗಿದೆ ಎಂದು ತಿಳಿಸಿ ಮೂಡಬಿದಿರೆಯ ಸಾಂಸ್ಕೃತಿಕ ಲೋಕದಲ್ಲಿ ಯಕ್ಷೋಪಾಸನಂ ಸಂಸ್ಥೆಯು ದೊಡ್ಡ ಸಾಧನೆಯನ್ನು ಮಾಡಲಿ ಎಂದರು.

ದಶಮಾನೋತ್ಸವದ ಪ್ರಯುಕ್ತ ಹಿರಿಯ ಕಲಾವಿದ ದಾಮೋದರ ಸಫಲಿಗ ಇವರನ್ನು ಸನ್ಮಾನಿಸಲಾಯಿತು.

ಯಕ್ಷೋಪಾಸನಂ ಸಂಸ್ಥೆಗೆ ವಿವಿಧ ರೀತಿಯಲ್ಲಿ ಸಹಕಾರ ನೀಡುತ್ತಾ ಬಂದ ಮೂಡಬಿದ್ರೆ ಮಾರಿಗುಡಿಯ ಆಡಳಿತ ಸಮಿತಿ ಅಧ್ಯಕ್ಷ ರಾಜಮೋಹನ್ ಶೆಟ್ಟಿ, ಮಿತ್ತ ಬೈಲು ರಾಮಮಂದಿರದ ಗಿರಿಧರ ನಾಯಕ್, ಗುಣಪಾಲ ಶೆಟ್ಟಿ, ಅರುಣ್ ಕುಮಾರ್, ದಿವಾಣ ದುರ್ಗಾ ಪ್ರಸಾದ್ ಭಟ್ ಕಟೀಲು ಇವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿದ್ದ ಪುರಸಭಾ ಸದಸ್ಯ ಸುರೇಶ್ ಪ್ರಭು, ಕೆ .ಪ್ರೇಮನಾಥ ಮಾರ್ಲ, ಉದ್ಯಮಿ ನೀಲೇಶ್ ಶೆಟ್ಟಿ , ಪುನೀತ್ ಕುಮಾರ್ ಕಟ್ಟೆಮಾರು ಶುಭ ಹಾರೈಸಿದರು.

ಶ್ರೀಮತಿ ಅನುರಾಧ ಪೈ ಪ್ರಾರ್ಥಿಸಿ ಯಕ್ಷೋಪಾಸನಮ್ ಅಧ್ಯಕ್ಷ ಶಾಂತರಾಮ ಕುಡ್ವ ಸ್ವಾಗತಿಸಿದರು. ಸ್ವಾತಿ. ಎಸ್ ಪ್ರಭು ವಂದಿಸಿದರು .ರಾಜಾರಾಮ್ ನಾಗರಕಟ್ಟೆ ಕಾರ್ಯಕ್ರಮ ನಿರೂಪಿಸಿದರು

ಆರಂಭದಲ್ಲಿ ಯಕ್ಷೋಪಾಸನ ಸದಸ್ಯರಿಂದ ಶ್ರೀರಂಗಾ ತುಲಾಭಾರ ಬಳಿಕ ಪ್ರಸಿದ್ಧ ಕಲಾವಿದರಿಂದ ಕರ್ಣಾರ್ಜುನ ತಾಳಮದ್ದಳೆ ಜರಗಿತು.

ದಿವಾಕರ ಆಚಾರ್ಯ ಗೇರುಕಟ್ಟೆ

ವರದಿ: ದಿವಾಕರ ಆಚಾರ್ಯ ಗೇರುಕಟ್ಟೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ನಾರಾವಿಯ ಯುವತಿ ಕೆರೆಗೆ ಬಿದ್ದು ಸಾವು – ಆಕಸ್ಮಿಕವಾಗಿ ಕಾಲು ಜಾರಿ ಆಯ ತಪ್ಪಿ ಬಿದ್ದ 23ರ ಹರೆಯದ ಯುವತಿ

ಅವಿವಾಹಿತ ಯುವತಿಯೊಬ್ಬಳು ತನ್ನ ಮನೆಯ ಸಮೀಪವಿರುವ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನಿಧನಹೊಂದಿದ್ದಾಳೆ.

ಕಾರ್ಕಳ ಸಮೀಪದ ನಾರಾವಿ ಗ್ರಾಮ ಪಂಚಾಯಿತ್ ಸದಸ್ಯ ಹಾಗೂ ಅರಸೀಕಟ್ಟೆ ನಿವಾಸಿ ರಾಜವರ್ಮ ಜೈನ್ ಅವರ ಪುತ್ರಿ ಸುರಕ್ಷಾ ಜೈನ್ (23) ಮೃತ ಯುವತಿ.ಕಳೆದ ವರ್ಷವಷ್ಟೇ ರಕ್ಷಾ ಜೈನ್ ಡಿಗ್ರಿ ಮುಗಿಸಿ ಮನೆಯಲ್ಲಿದ್ದರು.

  ಸುರಕ್ಷಾ ಜೈನ್ ತನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದಳು. ಅಲ್ಲಿಂದ ಹಿಂತಿರುಗುತ್ತಿದ್ದಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದಾಳೆ.ರಕ್ಷಣೆಗೆಂದು ಆಕೆಯ ಸಹೋದರ ತಕ್ಷಣ ಕೆರೆಗೆ ಹಾರಿದರೂ ಆಕೆಯನ್ನು ರಕ್ಷಿಸಲಾಗಲಿಲ್ಲ.

ಮೃತ ಸುರಕ್ಷಾ ಜೈನ್ ಅವರ ತಂದೆ ರಾಜವರ್ಮ ಜೈನ್ ಕೂಡ ಆಘಾತದಿಂದ ಕುಸಿದು ಬಿದ್ದಿದ್ದು, ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ಮಾನಸಿಕ ಸಶಕ್ಷತೆ ಬಹಳ ಮುಖ್ಯ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊಫೆಸರ್ ಎ. ವಿ. ನಾರಾಯಣ

ಮಾನಸಿಕವಾಗಿ ಸಶಕ್ತರಾಗುವ ಮೂಲಕ ಹಿರಿಯರು ತಮ್ಮ ಜ್ಞಾನವನ್ನು ಸ್ವಯಂ ವೃದ್ದಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಬಳಸಿಕೊಳ್ಳಬೇಕೆಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊಫೆಸರ್ ಎ.ವಿ ನಾರಾಯಣ ತಿಳಿಸಿದರು.
ಬಿ.ಸಿ.ರೋಡ್ ಕೈ ಕಂಬದ ಶ್ರಮ್ಯಾ ಪ್ರಾಸ ಇಲ್ಲಿ ಜರಗಿದ ಪ್ರತಿಷ್ಠಾನದ ಕೇಂದ್ರ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಐವತ್ತು ವಯೋಮಾನದ ಬಳಿಕ ವ್ಯಕ್ತಿಯೋರ್ವನು ಪಕ್ವತೆಯ ಮಟ್ಟ ತಲುಪಿರುತ್ತಾನೆ. ಜೀವನದ ಅನುಭವಗಳು ಪರಸ್ಪರ ಭಿನ್ನವಾಗಿದ್ದರೂ ಅವುಗಳ ಹಂಚಿಕೆಗೆ ವೇದಿಕೆ ಕಲ್ಪಿಸಿದ ಹಿರಿಯರ ಸೇವಾ ಪ್ರತಿಷ್ಠಾನವು ಸೂತ್ರ ರೂಪದಲ್ಲಿ ಕೆಲವು ಚಟುವಟಿಕೆಗಳನ್ನು ಈಗಾಗಲೇ ನಡೆಸಿದ್ದು ಮಾದರಿಯಾಗಿದೆಯೆಂದು ಮುಖ್ಯ ಅತಿಥಿ ಪ್ರೊ. ರಾಜಮಣಿ ರಾಮ ಕುಂಜ ತಿಳಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಕೈಯಾರು ನಾರಾಯಣ ಭಟ್ ಎಲ್ಲಾ ತಾಲೂಕು ಘಟಕಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಿ ಮುಂದಿನ ಯೋಜನೆಗಳ ಮಾಹಿತಿ ನೀಡಿದರು.

ಮಂಗಳೂರು ದಕ್ಷಿಣ ಘಟಕದ ಪದಗ್ರಹಣ,ಹಿರಿಯ ಸಮಾವೇಶ ಸಮಾರಂಭದ ಆಮಂತ್ರಣವ ಪತ್ರಿಕೆಯನ್ನು ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.


ಮಂಗಳೂರು ಘಟಕದ ಪದಾಧಿಕಾರಿಗಳಾದ ಭರತ್. ಕೆ, ಬಾಲಕೃಷ್ಣ ಶೆಟ್ಟಿ, ಗಣೇಶ ಆಚಾರ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ವತ್ಸಲಾ ರಾಜ್ನಿ, ಭಾಸ್ಕರ ಬಾರ್ಯ, ಬಾಲಕೃಷ್ಣ .ಜಿ, ರಮಾಶಂಕರ .ಸಿ, ಸೋಮಪ್ಪ ಬಂಗೇರ, ಸುಬ್ರಾಯ ಮಡಿವಾಳ, ಸೀತಾರಾಮ ಭಟ್, ಸಿ.ವಿ ಶಂಕರ್ ,ಅನಂತರಾಮ್ ಹೇರ್ಳೆ , ಚಂದ್ರಶೇಖರ ಆಳ್ವ ಪಡುಮಲೆ ಮೊದಲಾದವರು ಪ್ರತಿಷ್ಠಾನದ ಬಲವರ್ಧನೆಗೆ ಸೂಚನೆಗಳನ್ನು ನೀಡಿದರು.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಸ್ತಾವನೆಗೈದರು.


ಪ್ರತಿಷ್ಠಾನದ ಉಪಾಧ್ಯಕ್ಷ ಲೋಕೇಶ್ ಹೆಗ್ಡೆ ಪುತ್ತೂರು ಸ್ವಾಗತಿಸಿ ದುಗ್ಗಪ್ಪ. ಎನ್ ವಂದಿಸಿದರು. ಜಯರಾಮ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಶ್ರಮ್ಯಾ ಪ್ರಾಸದ ಶ್ರೀಮತಿ ಭಾರತಿ ರಾಮಕುಂಜ, ಮೇಧಾ ಮತ್ತು ಧಾತ್ರಿ ಕಾರ್ಯಕ್ರಮದ ಸಂಯೋಜನೆಗೆ ಸಹಕಾರ ನೀಡಿದರು.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ - 9164828688 ಅಥವಾ ಈ-ಮೈಲ್ ಮಾಡಿ - [email protected]

ನೀರು ತುಂಬಿದ ಹೊಂಡದಲ್ಲಿ 37 ವರ್ಷದ ಮಹಿಳೆ ಮತ್ತು ಅವರ 11 ವರ್ಷದ ಮಗಳು ಮುಳುಗಿ ಸಾವು

ತೃಶ್ಯೂರ್ : ಶನಿವಾರ ಇಲ್ಲಿನ ಮಾಳದ ಪೂಪ್ಪತ್ತಿ ಎಂಬಲ್ಲಿ ಭತ್ತದ ಗದ್ದೆಯಲ್ಲಿ ನೀರಾವರಿಗಾಗಿ ಮಾಡಿದ ನೀರು ತುಂಬಿದ ಹೊಂಡದಲ್ಲಿ 37 ವರ್ಷದ ಮಹಿಳೆ ಮತ್ತು ಅವರ 11 ವರ್ಷದ ಮಗಳು ಮುಳುಗಿ ಸಾವನ್ನಪ್ಪಿದ್ದಾರೆ. 

ಮೃತರನ್ನು ತೃಶ್ಯೂರ್ ಸಮೀಪದ  ಮಾಲಾ ಪಲ್ಲಿಪುರಂ ಸ್ಥಳೀಯರಾದ ಜಿಯೋ ಅವರ ಪತ್ನಿ ಮೇರಿ ಅನು ಮತ್ತು ಅವರ ಮಗಳು ಆಗ್ನಾ ಎಂದು ಗುರುತಿಸಲಾಗಿದೆ. 

ನೀರಿನಲ್ಲಿ ಬಿದ್ದಿದ್ದ ತಮ್ಮ ಪಾದರಕ್ಷೆಗಳನ್ನು ಹೆಕ್ಕುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]