Monday, May 11, 2026
Home Blog Page 161

ರಾಜ್ಯ ಮಟ್ಟದ ಕರಾಟೆ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಸನ್ಮಯ ತೃತೀಯ

ಪುತ್ತೂರು,ಅ11: ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 19 ವರ್ಷ ವಯೋಮಿತಿ ಒಳಗಿನ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸನ್ಮಯ ತೃತೀಯ ಸ್ಥಾನ ಗಳಿಸಿದ್ದಾರೆ.

ಈಕೆ ಕನ್ಯಾನದ ಈಶ್ವರ ಪ್ರಸಾದ್ ಮತ್ತು ಮಧುರಾ ದಂಪತಿ ಪುತ್ರಿ.

ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ಪುತ್ತೂರು ತುಳುಕೂಟಕ್ಕೆ ತುಳು ಅಕಾಡೆಮಿ
‘ಸಿರಿ ಚಾವಡಿ ಸಂಘಟನಾ ಪುರಸ್ಕಾರ’

ಪುತ್ತೂರು : ತುಳುನಾಡಿನ ಇತಿಹಾಸದಲ್ಲಿ ಪುತ್ತೂರು ತಾಲೂಕಿನಲ್ಲಿ ತುಳು ಸಂಘಟನಾ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿ ಪ್ರಸಿದ್ಧಿಗಳಿಸಿದ್ದ, 50ನೇ ವರ್ಷದ ಸುವರ್ಣ ಸಂಭ್ರಮದಲ್ಲಿರುವ ಪ್ರತಿಷ್ಠಿತ ‘ಪುತ್ತೂರು ತುಳು ಕೂಟ’ವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ‘ಸಿರಿ ಚಾವಡಿ ಸಂಘಟನಾ ಪುರಸ್ಕಾರ’ ನೀಡಿ ಗೌರವಿಸಿದೆ.


ಉಪ್ಪಿನಂಗಡಿಯಲ್ಲಿ ಜರಗಿದ ಅಕಾಡೆಮಿಯ ‘ತುಳುವ ಐಸಿರಿ-2022’ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೂಟದ ಗೌರವ ಸಲಹೆಗಾರ ಪ್ರೊ.ವಿ.ಬಿ. ಅರ್ತಿಕಜೆ ಅವರು ತುಳುಕೂಟದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಪುತ್ತೂರು ತುಳುಕೂಟದ ಅಧ್ಯಕ್ಷ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು, ನಿಕಟಪೂರ್ವಾಧ್ಯಕ್ಷ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ ರೈ, ಉಪಾಧ್ಯಕ್ಷ, ನ್ಯಾಯವಾದಿ ಎ. ಮಹಾಬಲ ಗೌಡ, ಸದಸ್ಯ ಕಲಾವಿದ ಕೃಷ್ಣಪ್ಪ ಶಿವನಗರ ಮುಂತಾದವರು ಜೊತೆಯಲ್ಲಿದ್ದರು.


ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನಗೈದ ಸಮಾರಂಭದ ಅಧ್ಯಕ್ಷತೆಯನ್ನು ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ವಹಿಸಿದ್ದರು. ಪುತ್ತೂರು ಶಾಸಕ ಸಂಜೀವ ಮಠಂದೂರು ಪ್ರಶಸ್ತಿ ಪ್ರಧಾನ ಮಾಡಿದರು.


ಮುಖ್ಯಅತಿಥಿಗಳಾಗಿ ಮಂಗಳೂರು ವಿ.ವಿ. ಕುಲಪತಿ ಪ್ರೊ.ವಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ಪ್ರೊ.ಎ.ವಿ.ನಾವಡ, ಉದ್ಯಮಿಗಳಾದ ಡಿ.ಚಂದಪ್ಪ ಮೂಲ್ಯ, ಪ್ರಕಾಶ್ ಬಿ. ಪಾಲ್ಗೊಂಡಿದ್ದರು.

ಪುತ್ತೂರು ತುಳು ಕೂಟವನ್ನು ಈ ಹಿಂದೆ ಮಹಾರಾಷ್ಟ್ರದ ತುಳುನಾಡ್ ಸಂಘ ಸಾಂಗ್ಲಿ-ಮೀರಜ್ ಪುರಸ್ಕರಿಸಿತ್ತು. ಅಕಾಡೆಮಿ ಸದಸ್ಯ ಸಂಚಾಲಕರು ಕಡಬ ದಿನೇಶ್ ರೈ ಮುಂತಾದವರು ಉಪಸ್ಥಿತರಿದ್ದರು.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ಶ್ರೀಮಂತರಾಗಲು ಇಬ್ಬರು ಮಹಿಳೆಯರನ್ನು ನರಬಲಿ ಕೊಟ್ಟ ದಂಪತಿ – ವಿದ್ಯಾವಂತರ ನಾಡು ಎಂದು ಹೇಳಿಕೊಳ್ಳುತ್ತಿರುವ ಕೇರಳದ ಪತ್ತನಂತಿಟ್ಟದಲ್ಲಿ ನಡೆದ ಘಟನೆ 

ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ‘ನರಬಲಿ’ಯಲ್ಲಿ ಇಬ್ಬರು ಮಹಿಳೆಯರು ಬಲಿಯಾಗಿದ್ದಾರೆ. ಎರ್ನಾಕುಲಂ ಜಿಲ್ಲೆಯ ಇಬ್ಬರು ಮಹಿಳೆಯರನ್ನು ದಂಪತಿಗಳು ಆರ್ಥಿಕ ಏಳಿಗೆಗಾಗಿ ಶಂಕಿತ ‘ವಾಮಾಚಾರದ ಆಚರಣೆ’ಯ ಭಾಗವಾಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ತನಂತಿಟ್ಟ ಜಿಲ್ಲೆಯ ಎಳಂತೂರ್ ಗ್ರಾಮದಲ್ಲಿ ಕೇರಳದ ಇಬ್ಬರು ಮಹಿಳೆಯರನ್ನು ಅಪಹರಿಸಿ, ಕೊಂದು, ಶಂಕಿತ ‘ವಾಮಾಚಾರದ ಆಚರಣೆ’ಯ ಭಾಗವಾಗಿ ಸಮಾಧಿ ಮಾಡಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಎರ್ನಾಕುಲಂ ಜಿಲ್ಲೆಯ ರೋಸ್ಲಿನ್ ಮತ್ತು ಪದ್ಮಾ ಎಂಬ ಇಬ್ಬರು ಮಹಿಳೆಯರು ಕ್ರಮವಾಗಿ ಜೂನ್ ಮತ್ತು ಸೆಪ್ಟೆಂಬರ್‌ನಲ್ಲಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಅವರ ನಾಪತ್ತೆ ಪ್ರಕರಣಗಳ ತನಿಖೆಯ ಭಾಗವಾಗಿ ಪೊಲೀಸರು ‘ನರಬಲಿ’ಯ ಬಗ್ಗೆ ತಿಳಿದುಕೊಂಡರು. ಧಾರ್ಮಿಕವಾಗಿ ನರಬಲಿ ನಡೆದಿದೆ ಎಂದು ಶಂಕಿಸಲಾಗಿದೆ. ನಾವು ಮಹಿಳೆಯರ ದೇಹವನ್ನು ಹೊರತೆಗೆಯಬೇಕು. ಮಹಿಳೆಯರ ಶಿರಚ್ಛೇದ ಮಾಡಿ ಶವಗಳನ್ನು ಪತ್ತನಂತಿಟ್ಟದ ಎಳಂಥೂರಿನಲ್ಲಿ ಹೂಳಲಾಯಿತು. ಕೆಲವರು ಪೊಲೀಸರ ವಶದಲ್ಲಿದ್ದಾರೆ ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ಸಿ ಎಚ್ ನಾಗರಾಜು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪೊಲೀಸರು ದಂಪತಿಗಳಾದ ಭಗವಲ್ ಸಿಂಗ್ ಮತ್ತು ಲೈಲಾ ಅವರನ್ನು ಎಳಂತೂರಿನಿಂದ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಸಿಂಗ್ ಪಾರಂಪರಿಕ ವೈದ್ಯರೆಂದು ಹೆಸರುವಾಸಿಯಾಗಿದ್ದರು ಮತ್ತು ಅವರ ಮನೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

ದಂಪತಿಯಲ್ಲದೆ ಪೆರುಂಬವೂರು ಮೂಲದ ಶಫಿ ಅಲಿಯಾಸ್ ರಶೀದ್ ಎಂಬಾತನನ್ನೂ ವಶಕ್ಕೆ ಪಡೆಯಲಾಗಿದೆ. ಈತ ಮಹಿಳೆಯರನ್ನು ದಂಪತಿಗಳ ಬಳಿ ಕರೆದುಕೊಂಡು ಹೋಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ದಂಪತಿಗಳ ಆರ್ಥಿಕ ಏಳಿಗೆಯೇ ನರಬಲಿ ಮುಖ್ಯ ಉದ್ದೇಶ ಎಂದು ಪೊಲೀಸ್ ಆಯುಕ್ತ ನಾಗರಾಜು ತಿಳಿಸಿದ್ದಾರೆ.

“ನಮಗೆ ಈಗಾಗಲೇ ದಂಪತಿಗಳು ಮತ್ತು ಏಜೆಂಟರ ತಪ್ಪೊಪ್ಪಿಗೆ ಹೇಳಿಕೆಗಳು ಸಿಕ್ಕಿವೆ. ಮಹಿಳೆಯರನ್ನು ದಂಪತಿಗಳು ಅತ್ಯಂತ ಕ್ರೂರವಾಗಿ ಕೊಂದಿದ್ದಾರೆ. ದಂಪತಿಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ದೇವರನ್ನು ಒಲಿಸಿಕೊಳ್ಳಲು ಮತ್ತು ಬಿಕ್ಕಟ್ಟಿನಿಂದ ಹೊರಬರಲು ಮಹಿಳೆಯರನ್ನು ಬಲಿಕೊಡಲು ನಿರ್ಧರಿಸಿದ್ದಾರೆ ಎಂದು ನಾಗರಾಜು ಹೇಳಿದರು.

ಶವಗಳನ್ನು ದಂಪತಿಯ ಮನೆಯ ಪಕ್ಕದ ಜಮೀನಿನಲ್ಲಿ ಹೂಳಲಾಗಿದೆ ಎಂದು ಅವರು ಹೇಳಿದರು. ಪೊಲೀಸರ ಪ್ರಕಾರ, ಪದ್ಮಾ ಕೊಚ್ಚಿಯಲ್ಲಿ ಲಾಟರಿ ಮಾರಾಟಗಾರರಾಗಿದ್ದರು. ಕಳೆದ ತಿಂಗಳು ಆಕೆಯನ್ನು ಅಪಹರಿಸಲಾಗಿದ್ದು, ಸೆಪ್ಟೆಂಬರ್ ಕೊನೆಯ ವಾರದಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದರು. ಪದ್ಮಾ ಅವರನ್ನು ಏಜೆಂಟ್ ಶಫಿ ಪತ್ತನಂತಿಟ್ಟ ಜಿಲ್ಲೆಗೆ ಕರೆದೊಯ್ದಿರುವುದು ತನಿಖೆಯಿಂದ ತಿಳಿದುಬಂದಿದೆ.  

ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. “ಇದು ಸಾಮಾನ್ಯ ಕಾಣೆಯಾದ ಪ್ರಕರಣವಾಗುವುದಿಲ್ಲ. ಇದು ಹಲವು ಸ್ತರಗಳಿರುವ ಅತ್ಯಂತ ಜಟಿಲ ಪ್ರಕರಣವಾಗಿದೆ’ ಎಂದು ನಾಗರಾಜು ಹೇಳಿದರು.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

“ರಂಗಾಂತರಂಗ’ ಶ್ರೀ ಲಕ್ಷ್ಮೀ ಮಚ್ಚಿನ ಇವರಿಂದ 

‘ರಂಗಾಂತರಂಗ’ ಇದು ಲಕ್ಷ್ಮೀ ಮಚ್ಚಿನ ಅವರು ಬರೆದ ಕೃತಿ. ಶ್ರೀಯುತರು ಬರೆದ ಹದಿನೇಳನೆಯ ಹೊತ್ತಗೆಯಿದು. ಇವರ ಪೂರ್ಣ ಹೆಸರು ಪಟಿಕ್ಕಲ್ಲು ಲಕ್ಷ್ಮೀನರಸಿಂಹ ಶಾಸ್ತ್ರಿ ಎಂದು. ಲಕ್ಷ್ಮೀ ಮಚ್ಚಿನ ಇವರ ಕಾವ್ಯ ನಾಮ. ಇವರು ಹಿರಿಯ ಖ್ಯಾತ ಸಾಹಿತಿ ಶ್ರೀ ಪ. ರಾಮಕೃಷ್ಣ ಶಾಸ್ತ್ರಿಗಳ ಪುತ್ರರು. ಇವರು ಯರ್ಮುಂಜ ಮನೆತನದವರು. ಲಕ್ಷ್ಮೀ ಮಚ್ಚಿನ ಅವರು ಪತ್ರಕರ್ತರಾಗಿ ಲೇಖಕರಾಗಿ ಪ್ರಸಿದ್ಧರು.

‘ರಂಗಾಂತರಂಗ’ ಎಂಬುದು ತೆಂಕುತಿಟ್ಟಿನ ಹಿರಿಯ, ಪ್ರಸಿದ್ಧ ಮದ್ದಳೆಗಾರರಾದ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರ ಕುರಿತಾಗಿ ಬರೆದಿರುವ ಕೃತಿ. ಅವರ ಯಕ್ಷಗಾನ ಕಲಾಬದುಕಿನ ಕುರಿತಾದ ವಿಚಾರಗಳು ಈ ಕೃತಿಯೊಳಗಿವೆ. ಈ ಬಗೆಗೆ ಅತ್ಯಂತ ಸರಳ ಸುಂದರವಾಗಿ ಲಕ್ಷ್ಮೀ ಮಚ್ಚಿನ ಅವರು ವಿಚಾರಗಳನ್ನು ಅಕ್ಷರ ರೂಪದಲ್ಲಿ ನೀಡಿರುತ್ತಾರೆ. ಮೈಸೂರಿನ ‘ಮಡಿಲು ಪ್ರಕಾಶನ’ ಈ ಕೃತಿಯ ಪ್ರಕಾಶಕರು.

ವಿದ್ವಾಂಸ, ವಿಮರ್ಶಕ, ಖ್ಯಾತ ಹಿರಿಯ ತಾಳಮದ್ದಳೆ ಅರ್ಥಧಾರಿ ಡಾ| ಎಂ. ಪ್ರಭಾಕರ ಜೋಶಿ ಅವರು ಈ ಕೃತಿಗೆ ‘ಚೊಕ್ಕ ಕಲಾವಿದನ ಸ್ವಚ್ಛ ಕಥನ’ ಎಂಬ ಶೀರ್ಷಿಕೆಯಡಿ ನಲ್ನುಡಿಗಳನ್ನು ಬರೆದಿರುತ್ತಾರೆ. ಶ್ರೀಮದೆಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಅನುಗ್ರಹ ಸಂದೇಶವನ್ನು ನೀಡಿ ಹರಸಿರುತ್ತಾರೆ.

ಹಿರಿಯ ಸಾಹಿತಿಗಳಾದ ಡಾ| ಎಚ್. ಎಸ್. ವೆಂಕಟೇಶಮೂರ್ತಿ ಬೆನ್ನುಡಿಯನ್ನು ಬರೆದಿರುತ್ತಾರೆ. ಲೇಖಕರಾದ ಲಕ್ಷ್ಮೀ ಮಚ್ಚಿನ ಅವರು ತಮ್ಮ ಅನಿಸಿಕೆಗಳನ್ನು ತಿಳಿಸಿ ಸಹಕರಿಸಿದ ಮಹನೀಯರಿಗೆಲ್ಲಾ ಕೃತಜ್ಞತೆಗಳನ್ನು ಸೂಚಿಸಿರುತ್ತಾರೆ.

ಈ ಕೃತಿಯು ಓದುಗರ ಕೈಸೇರಿದ್ದು 2021ರಲ್ಲಿ. ಇದು ಒಟ್ಟು 212 ಪುಟಗಳಿಂದ ಕೂಡಿದ ಪುಸ್ತಕ. ಇದರ ಬೆಲೆ ರೂಪಾಯಿ ಇನ್ನೂರು ಮಾತ್ರ.

ರಂಗಾಂತರಂಗ ಎಂಬ ಈ ಕೃತಿಯು ಪೀಠಿಕೆ, ಬೆಂಬಿಡದ ಬಡತನ, ಬಾಲ್ಯದ ಆಟ ತುಂಟಾಟ, ರಂಗಪ್ರವೇಶ, ಮಾರ್ಗದರ್ಶನ ಮಾಡಿದವರು, ಮೇಳ ಬದಲು, ಪುತ್ತೂರು ಮೇಳಕ್ಕೆ, ಕುಂಬಳೆ ಮೇಳದ ಅನುಭವ, ಮೇಳದ ತಿರುಗಾಟದ ಅನುಭವ, ತಿರುಗಾಟಕ್ಕೆ ವಿದಾಯ, ಹಿರಿಯರ ಒಡನಾಟ, ಕಲೆಯನ್ನೇ ಆರಾಧಿಸುವ ಎಡನೀರು ಶ್ರೀಗಳು, ಯಕ್ಷಗಾನ ಎಂಬ ಕಾಮಧೇನು, ರಂಗಾನುಭವ, ಉಪಸಂಹಾರ ಎಂಬ ಹತ್ತೊಂಭತ್ತು ಬರಹಗಳಿಂದ ಕೂಡಿದೆ.

ಈ ಶೀರ್ಷಿಕೆಗಳ ಬರಹಗಳಡಿ ಲಕ್ಷ್ಮೀ ಮಚ್ಚಿನ ಅವರು ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರ ಯಕ್ಷಗಾನ ಕಲಾ ಬದುಕನ್ನೂ ವ್ಯಕ್ತಿತ್ವವನ್ನೂ ಸುಂದರವಾಗಿ ಚಿತ್ರಿಸಿದ್ದಾರೆ. ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ಕಲಾವಿದ ಶ್ರೇಷ್ಠರೊಬ್ಬರ ಬಗೆಗೆ ಬರೆದ ಉತ್ತಮವಾದ ಪುಸ್ತಕವಿದು.

ಶ್ರೀ ಲಕ್ಷ್ಮೀ ಮಚ್ಚಿನ ಅವರಿಂದ ಇನ್ನೂ ಇಂತಹ ಕೃತಿಗಳು ರಚಿಸುವಂತಾಗಲಿ. ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರಿಂದ ಇನ್ನಷ್ಟು ಕಲಾಸೇವೆಯು ನಡೆಯುವಂತಾಗಲಿ ಎಂಬ ಹಾರೈಕೆಗಳು. 

ಶ್ರೀ ಲಕ್ಷ್ಮೀಶ ಅಮ್ಮಣ್ಣಾಯ, ಮೊಬೈಲ್: 9449282876

ಶ್ರೀ ಲಕ್ಷ್ಮೀ ಮಚ್ಚಿನ

ರಂಗಾಂತರಂಗ ಪುಸ್ತಕದ ಲೇಖಕರು : ಶ್ರೀ ಲಕ್ಷ್ಮೀ ಮಚ್ಚಿನ, ಮೊಬೈಲ್ 9900474805

ಶ್ರೀ ರವಿಶಂಕರ್ ವಳಕ್ಕುಂಜ

ಪುಸ್ತಕ ಪರಿಚಯ – ಶ್ರೀ ರವಿಶಂಕರ್ ವಳಕ್ಕುಂಜ ಮೊಬೈಲ್: 9164487083

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ರಾಜ್ಯಮಟ್ಟದ ಕೊಡಗು ಕಪ್ ಕರಾಟೆ ಸ್ಪರ್ಧಾ ಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

ರಾಜ್ಯಮಟ್ಟದ ಕೊಡಗು ಕಪ್ ಕರಾಟೆ ಸ್ಪರ್ಧಾ ಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

ದಿನಾಂಕ 09-10 2022ನೇ ರವಿವಾರ ಮಡಿಕೇರಿಯಲ್ಲಿ ನಡೆದ ರಾಜ್ಯಮಟ್ಟದ ಕೊಡಗು ಕಪ್ ಕರಾಟೆ ಸ್ಪರ್ಧಾ ಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ಅಧ್ವಿತ್ ಶರ್ಮ  (ಶ್ರೀ ಸುಧೀರ್.ಬಿ.ಎಸ್ ಮತ್ತು ಲತಾ ದಂಪತಿ ಪುತ್ರ)  ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

5ನೇ ತರಗತಿಯ ಮಹತಿ.ಎಂ (ಶ್ರೀಶಿವರಂಜನ್.ಎಂ ಮತ್ತು ಲಾವಣ್ಯ ಭಟ್  ದಂಪತಿ ಪುತ್ರಿ) ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ತೃತೀಯ ಬಹುಮಾನ ಪಡೆದಿರುತ್ತಾರೆ.

ಇವರು  Institute of Karate and Martial Arts ಶಾಖೆಯ ಶಿಕ್ಷಕರಾದ ಶಿವಪ್ರಸಾದ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ಜಾರ್ಖಂಡ್ ನಲ್ಲಿ ಮತ್ತೊಂದು ರೇಪ್: ಈ ಬಾರಿ ತಾಯಿಯ ಎದುರೇ  ಐದು ಜನರಿಂದ ಮಗಳ ಮೇಲೆ ಅತ್ಯಾಚಾರ – ರೇಪ್ ರಾಜ್ಯವಾಗುವತ್ತ ಜಾರ್ಖಂಡ್? 

ಜಾರ್ಖಂಡ್‌ನಲ್ಲಿ ಅಪ್ರಾಪ್ತ ಸಾಮೂಹಿಕ ಅತ್ಯಾಚಾರದ ಕರಾಳ ಕೃತ್ಯಗಳು ಎಗ್ಗಿಲ್ಲದೇ ಮುಂದುವರಿಯುತ್ತಿದೆ. ಅಪರಾಧಿಗಳಿಗೆ ಯಾರೂ ಹೇಳುವವರು ಕೇಳುವವರು ಇಲ್ಲ ಎಂಬಂತಾಗಿದೆ.

ದುಮ್ಕಾ ಜಿಲ್ಲೆಯ ನಿವಾಸಿಗಳಾದ ಮೈನರ್ ಬಾಲಕಿ ಮತ್ತು ಆಕೆಯ ತಾಯಿ ಭಾನುವಾರ ದಿಯೋಘರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಮಧುಪುರ್ ಪ್ರದೇಶದಲ್ಲಿ ದಾಳಿ ನಡೆಸಲಾಯಿತು ಎಂದು ಎಫ್‌ಐಆರ್ ದಾಖಲಿಸಿದ ಉಪವಿಭಾಗೀಯ ಪೊಲೀಸ್ ಅಧಿಕಾರಿ ಬಿ ರೌತ್ ಹೇಳಿದ್ದಾರೆ.

ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ತಾಯಿಯ ಎದುರೇ ಐವರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಂಗಳವಾರ ವರದಿಯಾಗಿದೆ. ಈ ಸಂಬಂಧ ಇಲ್ಲಿಯವರೆಗೆ ಇಬ್ಬರನ್ನು ಬಂಧಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ದಿಯೋಘರ್ ಪೊಲೀಸರು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದುಮ್ಕಾ ಜಿಲ್ಲೆಯ ನಿವಾಸಿಗಳಾದ ಬಾಲಕಿ ಮತ್ತು ಆಕೆಯ ತಾಯಿ ಭಾನುವಾರ ದಿಯೋಘರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಮಧುಪುರ್ ಪ್ರದೇಶದಲ್ಲಿ ದಾಳಿಗೆ ಒಳಗಾದರು ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಬಿ ರೌತ್ ಅವರು ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್ ಅನ್ನು ಉಲ್ಲೇಖಿಸಿದ್ದಾರೆ.

ಆಕೆಯ ತಾಯಿ ಸೋಮವಾರ ಪೊಲೀಸರಿಗೆ ದೂರು ನೀಡಿದ್ದು, ಇಬ್ಬರನ್ನು ಬಂಧಿಸಲಾಗಿದೆ. ದೂರಿನ ಪ್ರಕಾರ, ಎರಡು ದ್ವಿಚಕ್ರವಾಹನಗಳಲ್ಲಿ ಬಂದ ಐದು ಜನರು ಅವರಿಬ್ಬರನ್ನು ದಾರಿ ತಪ್ಪಿಸಿದರು ಮತ್ತು ನಂತರ ಅವರ ಮಗಳನ್ನು ಬಲವಂತವಾಗಿ ಪಕ್ಕಕ್ಕೆ ಕರೆದೊಯ್ದರು. ತಾಯಿ ತಡೆಯಲು ಮುಂದಾದಾಗ ಆಕೆಯನ್ನು ಥಳಿಸಿ ನಂತರ ಆಕೆಯ ಎದುರೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದಿಯೋಘರ್ ಪೊಲೀಸ್ ಅಧೀಕ್ಷಕ (ಎಸ್‌ಪಿ) ಸುಭಾಷ್ ಚಂದ್ರ ಜಾಟ್, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ವರದಿಗಳನ್ನು ನಿರೀಕ್ಷಿಸಲಾಗಿದೆ. ಪೊಲೀಸರು ಆರೋಪಿಗಳನ್ನು ಗುರುತಿಸಿದ್ದು, ಉಳಿದ ಮೂವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ಪೂವರಿ ಸಂಪಾದಕ ವಿಕುಭ ಹೆಬ್ಬಾರಬೈಲಿಗೆ ತುಳು ಅಕಾಡೆಮಿ
‘ಸಿರಿ ಚಾವಡಿ ಮಾಧ್ಯಮ ಪುರಸ್ಕಾರ’

ಪುತ್ತೂರು : ಸುಮಾರು 30 ವರ್ಷಗಳಿಂದ ವಿವಿಧ ತುಳು-ಕನ್ನಡ ಪತ್ರಿಕೆಗಳಲ್ಲಿ ದುಡಿದಿದ್ದ, ಪತ್ರಕರ್ತ, ಕವಿ, ಸಂಘಟಕರಾಗಿ ಗುರುತಿಸಿಕೊಂಡಿದ್ದ, ತುಳುನಾಡಿನ ಏಕೈಕ ತುಳು ಮಾಸಿಕ ಪತ್ರಿಕೆ ‘ಪೂವರಿ’ ಸಂಪಾದಕ, ಪ್ರಕಾಶಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಇವರು ಪತ್ರಿಕಾ ಕ್ಷೇತ್ರದಲ್ಲಿ ಸಲ್ಲಿಸಿದ ವಿಶೇಷ ಸಾಧನೆಗಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ‘ಸಿರಿ ಚಾವಡಿ ಮಾಧ್ಯಮ ಪುರಸ್ಕಾರ’ ನೀಡಿ ಸನ್ಮಾನಿಸಿದೆ.


ಭಾನುವಾರ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯಭವನದಲ್ಲಿ ನಡೆದ ತುಳು ಅಕಾಡೆಮಿಯ ‘ತುಳು ಐಸಿರಿ-2022’ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಜಯಕುಮಾರ್ ಭಂಡಾರಿಯವರಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.

ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.


ಮಂಗಳೂರು ವಿ.ವಿ.ಕುಲಪುತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ರೈ ಎಸ್ಟೇಟ್ ಕೋಡಿಂಬಾಡಿ ಕೆ.ಎನ್. ಅಶೋಕ್‌ಕುಮಾರ್ ರೈ, ಬಿಎಸ್‌ಎಫ್ ನಿವೃತ್ತ ಡೆಪ್ಯೂಟಿ ಕಮಾಂಡೆಡ್ ಡಿ. ಚಂದಪ್ಪ ಮೂಲ್ಯ, ಉದ್ಯಮಿ ಪ್ರಕಾಶ್ ಬಿ., ತುಳು ಅಕಾಡೆಮಿ ಮಾಜಿ ಸದಸ್ಯ ಕುಂಬ್ರ ದುರ್ಗಾಪ್ರಸಾದ ರೈ ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು.

ಅಕಾಡೆಮಿ ಸದಸ್ಯೆರಾದ ಕಡಬ ದಿನೇಶ್ ರೈ, ನಾಗೇಶ್ ಕುಲಾಲ್, ರವಿ ಪಿ.ಎಂ .ಮಡಿಕೇರಿ ಉಪಸ್ಥಿತರಿದ್ದರು.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ಆಟೋ ಚಾಲಕರ ಪುತ್ರಿ ನಾಪತ್ತೆ ಪ್ರಕರಣ – ವಿಟ್ಲದಲ್ಲಿ ಅಮಾಯಕ ಯುವತಿಯರಿಗೆ ಥಳಿಸಿದ ಯುವಕರ ಗುಂಪು

ಕೊಳ್ನಾಡು ಕಾಡುಮಠ ಎಂಬಲ್ಲಿರುವ ಆಟೋ ಚಾಲಕರ ಪುತ್ರಿಯೊಬ್ಬಳು ಕಾಣೆಯಾದ ವಿಚಾರಕ್ಕೆ ಸಂಬಂಧಿಸಿ ವಿಟ್ಲ ಠಾಣೆಯಲ್ಲಿ ಕೇಸು ದಾಖಲಾಗಿದೆ. ಆಟೋ ಚಾಲಕರ ಪುತ್ರಿ ಮುಸ್ಲಿಂ ಯುವತಿ ಸೋಮವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಳು.

ಆದರೆ  ಕಾಸರಗೋಡಿನ ಸ್ನೇಹಿತೆಯೊಂದಿಗೆ ತೆರಳಿದ್ದ ಯುವತಿ ಮನೆಗೆ ಹಿಂದಿರುಗುತ್ತಿದ್ದಾಗ ಮನೆಯಲ್ಲಿ ಬೈಗುಳ ಮತ್ತು ಆಕ್ಷೇಪಗಳಿಗೆ ಹೆದರಿ ಪುನಃ ವಿಟ್ಲ ಪೇಟೆಗೆ ಬಂದಿದ್ದಳು.

ಯುವತಿಯರಿಬ್ಬರು ಒಟ್ಟಿಗೆ ಹೋದ ವಿಚಾರವನ್ನು ತಿಳಿದ ಸಾಲೆತ್ತೂರು ಮತ್ತು ಕಾಡುಮಠದ ಮುಸ್ಲಿಂ ಯುವಕರ ಗುಂಪು ಒಟ್ಟು ಸೇರಿ ವಿಟ್ಲಕ್ಕೆ ಧಾವಿಸಿತು. ಅಲ್ಲಿ ಪೇಟೆಯಲ್ಲಿ ಈ ಯುವಕರ ಗುಂಪು ಈ  ಇಬ್ಬರು ಯುವತಿಯರಿಗಾಗಿ ಹುಡುಕಾಡತೊಡಗಿತು.

ಆದರೆ ಅಲ್ಲಿ ಇಬ್ಬರು ಬುರ್ಖಾ ಧರಿಸಿದ ಯುವತಿಯರು ಈ ಗುಂಪಿನ ಕಣ್ಣಿಗೆ ಬಿದ್ದರು. ಆದರೆ ಈ ಯುವತಿಯರು ಕುದ್ದುಪದವಿನವರಾಗಿದ್ದರು. ಕಾಣೆಯಾದ ಯುವತಿಯರೆಂದು ಭಾವಿಸಿ ಮುಸ್ಲಿಂ ಯುವಕರ ಗುಂಪು ಅವರ ಮೇಲೆ ಹಲ್ಲೆ ಮಾಡಿತು.

“ನಾವು ಆಟೋ ಚಾಲಕರ ಪುತ್ರಿಯಲ್ಲ, ನಾವು ಕುದ್ದುಪದವಿನವರು” ಎಂದು ಪರಿಪರಿಯಾಗಿ ಆ ಯುವತಿಯರು ಹೇಳಿದರೂ ಕೇಳದ ಗುಂಪು ಅವರ ಮೈಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಿತ್ತು.

ಕೂಡಲೇ ಅಲ್ಲಿಗೆ ಬಂದ ವಿಟ್ಲ ಪೊಲೀಸರು ಮುಸ್ಲಿಂ ಯುವಕರಲ್ಲಿ ಅವರಲ್ಲಿ ಓರ್ವನನ್ನು ವಶಕ್ಕೆ ಪಡೆದು ಕುದ್ದುಪದವಿನ ಯುವತಿಯರನ್ನು ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕುದ್ದುಪದವಿನ ಯುವತಿಯರ ಮನೆಯವರು ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

‘ಹೋಗೋಣ ಜಂಬೂ ಸವಾರಿ’ ಲಲಿತ ಪ್ರಬಂಧಗಳು – ವಿಭಾ ಕೃಷ್ಣಪ್ರಕಾಶ ಉಳಿತ್ತಾಯ 

‘ಹೋಗೋಣ ಜಂಬೂ ಸವಾರಿ’ ಇದು  ವಿಭಾ ಕೃಷ್ಣಪ್ರಕಾಶ ಉಳಿತ್ತಾಯರು ರಚಿಸಿದ ಕೃತಿ. ಇವರು ಉದಯೋನ್ಮುಖ ಲೇಖಕಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿದ್ಯಾರ್ಥಿನಿಯಾಗಿರುವಾಗಲೇ ಬರೆಯುವ ಹವ್ಯಾಸವಿದ್ದು ಈಗ ಅದನ್ನು ಮುಂದುವರಿಸುತ್ತಿದ್ದಾರೆ. ಲೇಖಕಿಯಾಗಿ ಬರೆಯುವ ಕಾಯಕದಲ್ಲಿ ತೊಡಗಿಸಿಕೊಳ್ಳುವಲ್ಲಿ ಪತಿ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರ ಪ್ರೋತ್ಸಾಹವೂ ಇವರಿಗಿದೆ. 

ವಿಭಾ ಕೃಷ್ಣಪ್ರಕಾಶ ಉಳಿತ್ತಾಯರು ಹಣಕಾಸು ಸಂಸ್ಥೆಯ (ಕರ್ನಾಟಕ ಬ್ಯಾಂಕ್) ಉದ್ಯೋಗಸ್ಥೆಯಾಗಿ, ಲೇಖಕಿಯಾಗಿ ಎಲ್ಲರಿಗೂ ಪರಿಚಿತರು. ಈ ಪುಸ್ತಕದಲ್ಲಿ ಇವರು ಬರೆದ ಮೂವತ್ತು ಲೇಖನಗಳಿವೆ. 2015ರಿಂದ ತೊಡಗಿ ಬರೆದ ಲೇಖನಗಳಿವು. ಇವುಗಳಲ್ಲಿ ಅನೇಕ ಲೇಖನಗಳು ಉದಯವಾಣಿ, ತುಷಾರ, ಹೊಸದಿಗಂತ, ವಿಜಯಕರ್ನಾಟಕ, ಅಭ್ಯುದಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಈ ವಿಚಾರವನ್ನು ಲೇಖಕಿ ವಿಭಾ ಕೃಷ್ಣಪ್ರಕಾಶ ಉಳಿತ್ತಾಯರು ‘ಮನದ ಮಾತು’ ಎಂಬ ತಮ್ಮ ಬರಹದಲ್ಲಿ ತಿಳಿಸಿರುತ್ತಾರೆ. ಅಲ್ಲದೆ ಸಹಕರಿಸಿದ ಎಲ್ಲಾ ಮಹನೀಯರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಈ ಕೃತಿಯು 2021ರಲ್ಲಿ ಮುದ್ರಿಸಲ್ಪಟ್ಟು ಓದುಗರ ಕೈಸೇರಿತ್ತು. ಇದು ಸುಮಾರು 122 ಪುಟಗಳ ಹೊತ್ತಗೆ. ಇದರ ಬೆಲೆ ನೂರು ರೂಪಾಯಿಗಳು. ಈ ಕೃತಿಯ ಪ್ರಕಾಶಕರು ಎಬಿಸಿ ಪಬ್ಲಿಕೇಷನ್ ಬೆಂಗಳೂರು.

ಈ ಕೃತಿಗೆ ಮುನ್ನುಡಿಯನ್ನು ಬರೆದವರು ಖ್ಯಾತ ಕವಿ, ಸಾಹಿತಿ ಎಚ್. ಡುಂಡಿರಾಜ್ ಅವರು. “ವಸ್ತು ವೈವಿಧ್ಯ ಮತ್ತು ಸರಳವಾದ, ಲವಲವಿಕೆಯ ಶೈಲಿ ವಿಭಾ ಅವರ ಈ ಕೃತಿಯ ಶಕ್ತಿ ಎನ್ನಬಹುದು. ಪುಸ್ತಕವನ್ನು ಓದಿ ಮುಗಿಸಿದಾಗ ಲೇಖಕಿ ಬಣ್ಣಿಸಿದ ಎಷ್ಟೋ ಅನುಭವಗಳು, ವ್ಯಕ್ತಪಡಿಸಿದ ಅನಿಸಿಕೆಗಳು ನಮ್ಮದೂ ಹೌದು ಅನಿಸುತ್ತದೆ. ಮೊದಲ ಪ್ರಯತ್ನದಲ್ಲೇ ಸಾಕಷ್ಟು ಒಳ್ಳೆಯ ಕೃತಿಯನ್ನು ನೀಡಿದ ಲೇಖಕಿ ಶ್ರೀಮತಿ  ವಿಭಾ ಕೃಷ್ಣಪ್ರಕಾಶ ಉಳಿತ್ತಾಯ  ಅವರನ್ನು ನಾನು ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಇವರು ಇನ್ನಷ್ಟು ಅಚ್ಚುಕಟ್ಟಾದ, ಆಳ ವಿಸ್ತಾರ ಉಳ್ಳ ಲಲಿತ ಪ್ರಬಂಧಗಳನ್ನು ಬರೆಯಲಿ ಎಂದು ಹಾರೈಸುತ್ತೇನೆ”. (ಎಚ್. ಡುಂಡಿರಾಜ್ ಅವರ ಮುನ್ನುಡಿ ಬರಹದಿಂದ)

ಈ ಕೃತಿಗೆ ಬೆನ್ನುಡಿ ಬರೆದವರು ಹಿರಿಯರಾದ ಕವಿ, ಸಾಹಿತಿ ಶ್ರೀ ಸುಬ್ರಾಯ ಚೊಕ್ಕಾಡಿ ಅವರು.

ಲೇಖಕಿ  ವಿಭಾ ಕೃಷ್ಣಪ್ರಕಾಶ ಉಳಿತ್ತಾಯರ ಈ ಕೃತಿಯೊಳಗೆ ‘ರೈನ್ ರೈನ್ ಗೋ ಅವೇ … ಬಾರೋ ಬಾರೋ ಮಳೆರಾಯ, ಜಾತಕ ಅವಾಂತರ, ಆಟಿ/ ಆಷಾಢ ಅಮಾವಾಸ್ಯೆಯ ಒಂದು ನೆನಪು, ಪ್ರಯಾಸವಾಗದ ಪ್ರವಾಸ, ಶ್ವಾನಪುರಾಣ, ಒಂದಾನೊಂದು ಕಾಲದಲ್ಲಿ ಏಸೊಂದು ಮುದವಿತ್ತ, ಒಂದು ರುಬ್ಬುವ ಕಲ್ಲಿನ ಸುತ್ತ, ಅರಿತು ಬಾಳಿದರೆ ಸ್ವರ್ಗಸುಖ, ರುಪಾಯಿಯ ಬೆಲೆ, ಕೃಷ್ಣಾ ನೀ ಬೇಗನೆ ಬಾರೋ, ಹೂವು ಹೊರಳುವುದು ದೇವರ ಕಡೆಗೆ, ಬಸುರಿಯ ಬಯಕೆ, ಶ್ರುತಿ ಸೇರಿದಾಗ, ಪಾಸ್ ಪುಸ್ತಕದ ಒಳಗೆ ಸವಿರುಚಿ, ಬ್ಯಾಲೆನ್ಸ್, ಹೆಲ್ಮೆಟ್ ಅವಾಂತರ, ಬಾರೆ ರಾಜಕುಮಾರಿ ಹೋಗೋಣ ಜಂಬೂಸವಾರಿ, ಫೋನ್ ಇನ್ ಕಾರ್ಯಕ್ರಮ, ನೋಟಾಯಣ, ಅಮ್ಮಾ ನಾನೂ ಓಟು ಹಾಕ್ತೇನೆ, ಟೊಂಯೋ ಟೊಂಯೋ ಎಂದು ಹಾಡುವ ಸೊಳ್ಳೆ, ಲಹರಿ, ದೀಪಾವಳಿಯ ವಿಜಯೋತ್ಸವ, ಕಟೀಲಮ್ಮ ಮನೆಯಲ್ಲಿ, ವಸ್ತ್ರ ಇಸ್ತ್ರಿ ಕಥನ, ದಿಂಬು, ಕೊರೋನಾ.. ಇದು ಸರೀನಾ.. ?, ಸ್ಟೂಡೆಂಟ್ ಅಕೌಂಟ್, ಹ್ಯಾಪಿ ಬರ್ತ್ ಡೇ ಟು ಯು, ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ’ ಎಂಬ ಮೂವತ್ತು ಲೇಖನಗಳಿವೆ. 

ಲೇಖಕಿ ಶ್ರೀಮತಿ ವಿಭಾ ಕೃಷ್ಣಪ್ರಕಾಶ ಉಳಿತ್ತಾಯರು ತೆಂಕುತಿಟ್ಟು ಯಕ್ಷಗಾನದ ಹಿರಿಯ, ಖ್ಯಾತ ಮದ್ದಳೆಗಾರರಾದ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರ ಪುತ್ರಿ. ಇವರಿಂದ ಸಾಹಿತ್ಯ ಸೇವೆಯು ನಿರಂತರವಾಗಿ ನಡೆಯಲಿ. ಬರೆಯುವಲ್ಲಿ ಸರಸ್ವತೀ ಮಾತೆಯ ಅನುಗ್ರಹವು ಸದಾ ಇರಲಿ. ಶ್ರೀ ದೇವರ ಅನುಗ್ರಹವು ಸದಾ ಇರಲಿ. 

ಕೃತಿ ಪರಿಚಯ: ಶ್ರೀ ರವಿಶಂಕರ್ ವಳಕ್ಕುಂಜ

ಕೃತಿ ಪರಿಚಯ: ಶ್ರೀ ರವಿಶಂಕರ್ ವಳಕ್ಕುಂಜ, ಮೊಬೈಲ್: 9164487083

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ಖೋಖೋ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ತಂಡ ರಾಷ್ಟ್ರ ಮಟ್ಟಕ್ಕೆಆಯ್ಕೆ

ಪುತ್ತೂರು, ಅ 10 :ಬೀದರ್‌ನಲ್ಲಿ ನಡೆದ ವಿದ್ಯಾ ಭಾರತಿ ಪ್ರಾಂತ ಹಾಗೂ ಕ್ಷೇತ್ರ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದೆ. ಮುಂದಿನ  ರಾಷ್ಟ್ರ ಮಟ್ಟದ ಪಂದ್ಯ ಮಧ್ಯಪ್ರದೇಶದಲ್ಲಿ ನಡೆಯಲಿದೆ.


ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ನಿತಿನ್‌ಕುಮಾರ್, ವಾಣಿಜ್ಯ ವಿಭಾಗದ ಎಚ್‌ ಅಭಿರಾಮ್, ವಿಜ್ಞಾನ ವಿಭಾಗದ ಮಂಜುನಾಥ್‌ ಎಸ್, ಸಾತ್ವಿಕ್‌ ಆರ್, ನಂದನ್‌ ಗೌಡ, ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವರುಣ್‌ ಕುಮಾರ್, ಜೀವನ್‌ಎಸ್, ದೇಶಿಕ್ ಕೆ, ರಂಜನ್‌ ಕೆ.ಆರ್, ವಿಜ್ಞಾನ ವಿಭಾಗದ ಎಲ್. ಧನುಷ್. ಅಶ್ವಿತ್ ಭಂಡಾರಿ, ಮನ್ವಿತ್ ಬಿ ಗೌಡ, ಯಶವಂತ್‌ ಡಿ.ಎಸ್, ಶ್ರೇಯಸ್ ಪಿ, ಸುಹಾಸ್ ಕೆ ಭಾಗವಹಿಸಿದ್ದರು.


ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ದಿವ್ಯ ಎಂ, ವಾಣಿಜ್ಯ ವಿಭಾಗದ ಜ್ಯೋತಿಕಾ ಪಿ, ಹಿತಶ್ರೀ, ಸುಪ್ರಿತಾ ಕೆ ವಿಜ್ಞಾನ ವಿಭಾಗದ ಪೂರ್ವಿಕ ಎ. ಎಸ್,  ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ದಿಶಾ ವಿ, ಯಶಸ್ವಿನಿ, ನಿಶ್ಮಿತಾ, ಕಲಾ ವಿಭಾಗದ ಶಿವಾನಿ ಪಿ.ಕೆ ಭಾಗವಹಿಸಿದ್ದರು.


ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ.ಜ್ಯೋತಿ ಮತ್ತು ಯತೀಶ್‌ ರವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ತಂಡದ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು  ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದ್ದಾರೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]