Sunday, February 23, 2025
Home Blog Page 376

ಕೃಷ್ಣಪ್ರಕಾಶ ಉಳಿತ್ತಾಯರ ‘ಅಗರಿ ಮಾರ್ಗ’ ಕೃತಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ

ಪ್ರಸಿದ್ಧ ಹಿಮ್ಮೇಳ ಕಲಾವಿದ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರ ‘ ಅಗರಿ ಮಾರ್ಗ’ ಕೃತಿಗೆ 2019 ನೇ ಸಾಲಿನ  ಯಕ್ಷಗಾನ ಅಕಾಡೆಮಿ ಪುಸ್ತಕ ಬಹುಮಾನ ಪ್ರಶಸ್ತಿ ಬಂದಿದೆ. ಬ್ಯಾಂಕ್ ಅಧಿಕಾರಿಯಾಗಿ, ಯಕ್ಷಗಾನ ಕಲಾವಿದರಾಗಿ ಮತ್ತು ಸಾಹಿತಿಯಾಗಿ ಮೂರರಲ್ಲೂ ಯಶಸ್ಸನ್ನು ಸಾಧಿಸಿದ ಕೆಲವೇ ಕೆಲವು ಮಹಾನುಭಾವರ ಸಾಲಿಗೆ ಉಳಿತ್ತಾಯರೂ ಸೇರ್ಪಡೆಯಾಗಿದ್ದಾರೆ. ಬ್ಯಾಂಕ್ ಉದ್ಯೋಗಸ್ಥರಾಗಿ ಅವರ ಜವಾಬ್ದಾರಿಯೂ ಬಹಳ ದೊಡ್ಡದೇ. ಕಲಾವಿದನಾಗಿ ಯಶಸ್ಸನ್ನು ಸಾಧಿಸಲೂ ಅದಕ್ಕಾಗಿ ಬಹಳಷ್ಟು ಸಮಯವನ್ನು ಮೀಸಲಿಡಬೇಕಾಗುತ್ತದೆ. ಸಾಹಿತಿಗೆ ಅಧ್ಯಯನದ ಜೊತೆಗೆ  ಕವಿಹೃದಯವೂ ಇರಬೇಕಾಗುತ್ತದೆ. ಈ ಮೂರನ್ನೂ ಅವರು ಹೇಗೆ ನಿಭಾಯಿಸಿಕೊಂಡು ಹೋಗುತ್ತಾರೆ ಎಂದು ಕೆಲವೊಮ್ಮೆ ಆಶ್ಚರ್ಯವಾಗುತ್ತದೆ. ಉಳಿತ್ತಾಯರು ಹೆಚ್ಚಿನ ಭಾಗವತರ ಆಯ್ಕೆಯ ಮದ್ದಳೆಗಾರ ಎಂಬುದು ನನಗೆ ತಿಳಿದಿದೆ. ಯಾಕೆಂದರೆ ಭಾಗವತರ ಹಾಡಿಗೆ ಒದಗುವ ವಾದನದ ಶೈಲಿ ಅವರದ್ದು. ಇದಕ್ಕೆ ಭಾಗವತರ ಹಾಡಿನ ಶೈಲಿಯನ್ನು ಸಂಪೂರ್ಣ ತಿಳಿದಿರುವುದರ ಜೊತೆಗೆ ಆ ಕ್ಷಣದಲ್ಲಿ ಭಾಗವತರು ಅನುಸರಿಸುವ ದಾರಿ ಅಥವಾ ಹೋಗುವ ದಾರಿಯನ್ನು ತಿಳಿದಿರಬೇಕಾಗುತ್ತದೆ. ಆ ವಿಶೇಷ ಗುಣವನ್ನು ಉಳಿತ್ತಾಯರಲ್ಲಿ ಗುರುತಿಸಬಹುದು.

ಭಾಗವತರುಗಳಲ್ಲಿ ಹೆಚ್ಚಿನವರು ಕೃಷ್ಣಪ್ರಕಾಶ ಉಳಿತ್ತಾಯರನ್ನು ಇಷ್ಟಪಡುವುದು ಇದಕ್ಕಾಗಿಯೇ. ಅವರು ತಮ್ಮ ವಾದನದಲ್ಲಿ ಭಾಗವತರನ್ನು ಅನುಸರಿಸಿಕೊಂಡು ಹೋಗುವ ತಮ್ಮ ಅಪೂರ್ವ ಲಯ ಸಿದ್ಧಿಯಿಂದಾಗಿ ಪ್ರೇಕ್ಷಕರಾದ ನಮಗೂ ಇಷ್ಟವಾಗುತ್ತಾರೆ.   

ಒಂದೊಮ್ಮೆ ನನ್ನಲ್ಲಿ ದೂರವಾಣಿಯಲ್ಲಿ ಮಾತನಾಡುವಾಗ ಒಂದು ಲೇಖನವನ್ನು ಬರೆಯಲು ಬಹಳಷ್ಟು ಅಧ್ಯಯನ ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದರು. ಆ ಅನುಭವ ನನಗೂ ಇತ್ತು. ಕೆಲವೊಂದು ವಿಷಯಗಳ ಬಗ್ಗೆ ಬರೆಯಲು ಹೊರಟರೆ ಸಾಕಷ್ಟು ಪೂರ್ವತಯಾರಿ ಬೇಕಾಗುತ್ತದೆ ಎಂಬ ಅವರ ಮಾತಿನ ಸತ್ಯ ನನ್ನ ಅನುಭವಕ್ಕೂ ಬಂದಿತ್ತು. ಅಗರಿ ಭಾಗವತರ ಪ್ರಸಂಗಗಳ ಬಗ್ಗೆ ನಮ್ಮ ಯಕ್ಷದೀಪ ಪತ್ರಿಕೆಯಲ್ಲಿಯೂ ಅವರು ಕೆಲವು ಲೇಖನಗಳನ್ನು ಬರೆದಿದ್ದರು.

ಅಗರಿ ಮಾರ್ಗದ ಬಗ್ಗೆ ಹೇಳುವುದಾದರೆ ಈ ಗ್ರಂಥ ರಚನೆ ಬಹಳ ಕ್ಲಿಷ್ಟಕರವಾಗಿದ್ದಿರಬಹುದೆಂದು ನಾನು ಖಂಡಿತಾ ಊಹಿಸಬಲ್ಲೆ. ಈ ಗ್ರಂಥರಚನೆಯ ಹಿಂದೆ ಅವರ ಅಪಾರ ಶ್ರಮ ಅಡಗಿರಬಹುದೆಂಬುದು ನಿರ್ವಿವಾದ. ಯಾಕೆಂದರೆ ಸಾಧಾರಣವಾಗಿ ಅಗರಿಯವರ ಬಗ್ಗೆ ಬರೆಯುವುದೆಂದರೆ ಅದು ಅತ್ಯಂತ ಸಾಹಸದ ಕಾರ್ಯ. ಅಗರಿಯವರ  ಪ್ರಪಂಚದಲ್ಲಿ ಎಲ್ಲವೂ ಜೊಳ್ಳುಗಳಿಲ್ಲದ ಕಾಳುಗಳೇ ತುಂಬಿವೆ. ನಿಮಗೆ ಸಿಗುವ ಎಲ್ಲಾ ಕಾಳುಗಳಲ್ಲಿ ಯಾವುದನ್ನು  ಆರಿಸಬೇಕು ಯಾವುದನ್ನು ಬಿಡಬೇಕು ಎಂಬ ಉಭಯಸಂಕಟ ಕಾಡದೆ ಬಿಡದು. ಆದುದರಿಂದ ಕೃಷ್ಣಪ್ರಕಾಶ ಉಳಿತ್ತಾಯರು ‘ಅಗರಿ ಮಾರ್ಗ’ಎಂಬ ಕೃತಿಯನ್ನು ಸಿದ್ಧಪಡಿಸುವ ಮೊದಲು ಬಹಳಷ್ಟು ಅಧ್ಯಯನದ ಪೂರ್ವ ತಯಾರಿಯನ್ನು ಮಾಡಿರಬಹುದು. ಉಳಿತ್ತಾಯರ ಅಗರಿ ಮಾರ್ಗವು ಯಕ್ಷಗಾನ ಚರಿತ್ರೆಯಲ್ಲಿ ಒಂದು ಮೈಲಿಗಲ್ಲಾಗಿ ನಿಲ್ಲಲಿದೆ ಎಂಬುದು ಖಂಡಿತ. 

ಯಕ್ಷಗಾನ ಪ್ರದರ್ಶನ – ಕರ್ಮಣ್ಯೇವಾಧಿಕಾರಸ್ತೇ 

ಸದಾ ಕ್ರಿಯಾಶೀಲ ವ್ಯಕ್ತಿತ್ವದ ಶ್ರೀ ರಾಮಕೃಷ್ಣ ಮಯ್ಯ ಸಾರಥ್ಯದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ಇವರು ಯಕ್ಷಕಲಾ ಪೋಷಕರ ಸಹಕಾರದೊಂದಿಗೆ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ದಿನಾಂಕ 10.09.2020 ರ ಗುರುವಾರ ರಾತ್ರಿ ಘಂಟೆ 9ರಿಂದ ದೇವಿದಾಸ ಕವಿಯ ಕೃಷ್ಣಸಂಧಾನ ಪ್ರಸಂಗದ ಒಂದು ಭಾಗವನ್ನು ಸಂಯೋಜಿಸಿದ ‘ ಕರ್ಮಣ್ಯೇವಾಧಿಕಾರಸ್ತೇ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನವನ್ನು ನೀಡಲಿದ್ದಾರೆ. 

ಏನಾದರೂ ಮಾಡುತ್ತಲೇ ಇರಬೇಕೆಂಬ ತುಡಿತವನ್ನು ಹೊಂದಿದ ಖ್ಯಾತ ಭಾಗವತರಾದ ರಾಮಕೃಷ್ಣ ಮಯ್ಯರ ನೇತೃತ್ವದ ಈ ಕಲಾವಿದರು ಈ ಪ್ರದರ್ಶನವನ್ನು ನೀಡಲಿದ್ದಾರೆ. ಈ ಪ್ರದರ್ಶನ sv vision ಯು ಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ.

ಯಕ್ಷ ದ್ವಾದಶಾಮೃತಮ್ ಪ್ರಸಂಗಮಾಲಿಕಾ – ಡಾ. ಪಟ್ಟಾಜೆ ಗಣೇಶ ಭಟ್ 

ಶ್ರೀ ಡಾ. ಪಟ್ಟಾಜೆ ಗಣೇಶ ಭಟ್ಟರು ವೃತ್ತಿಯಿಂದ ವೈದ್ಯರು ಮತ್ತು ಕೃಷಿಕರು. ಎಳವೆಯಿಂದಲೇ ಎಲ್ಲಾ ಮೇಳಗಳ ಪ್ರದರ್ಶನಗಳನ್ನು ನೋಡಿಯೇ ಆಸಕ್ತರಾಗಿದ್ದರು. ಬಳಿಕ ಹವ್ಯಾಸಿ ವೇಷಧಾರಿಯಾಗಿಯೂ ತಾಳಮದ್ದಳೆ ಅರ್ಥಧಾರಿಯಾಗಿಯೂ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಹಾಗೆ ಯಕ್ಷಗಾನ ಕಲೆಯ ಸಂಬಂಧವಿರಿಸಿಕೊಂಡು ಪ್ರಸಂಗ ರಚನಾ ಕಾಯಕದಲ್ಲಿಯೂ ತೊಡಗಿದ್ದರು. ಪ್ರಸಂಗ ಮತ್ತು ಪದ್ಯ ರಚನೆ ಮಾಡುವುದೂ ಒಂದು ಕಲೆ. ಅದು ಎಲ್ಲರಿಗೂ ಸಿದ್ಧಿಸದು.  ಡಾ. ಪಟ್ಟಾಜೆ ಗಣೇಶ ಭಟ್ಟರು ಈ ಕಲೆಯನ್ನು ಕರಗತ ಮಾಡಿಕೊಂಡು ಒಟ್ಟು ಹನ್ನೆರಡು ಪ್ರಸಂಗಗಳನ್ನು ರಚಿಸಿದ್ದರು. ಈ ಹನ್ನೆರಡು ಪ್ರಸಂಗಗಳನ್ನು ಒಳಗೊಂಡ ಸಂಪುಟವೇ ‘ ಯಕ್ಷ ದ್ವಾದಶಾಮೃತಮ್ ಪ್ರಸಂಗಮಾಲಿಕಾ’ ಎಂಬ ಪುಸ್ತಕ. ಇದು ಒಟ್ಟು ಮುನ್ನೂರ ಎಪ್ಪತ್ತೆರಡು ಪುಟಗಳ ಪುಸ್ತಕ. ಪುತ್ತೂರು ತಾಲೂಕಿನ ಕಾವು ಸಮೀಪದ ಬರೆಕೆರೆ ನಾರಾಯಣೀಯಂನ ಕಲಾರಾಧನ ಪ್ರತಿಷ್ಠಾನವು ಈ ಪುಸ್ತಕವನ್ನು ಪ್ರಕಾಶಿಸಿ ಪ್ರಕಟಿಸಿದೆ. ೨೦೧೯ ನೇ ಇಸವಿಯ ಜನವರಿ ತಿಂಗಳಿನಲ್ಲಿ ಈ ಪುಸ್ತಕವು ಓದುಗರ ಕೈ ಸೇರಿತ್ತು. ಡಾ. ಪಟ್ಟಾಜೆ ಗಣೇಶ ಭಟ್ಟರ ಮನೆಯಲ್ಲಿ ಸೇವಾ ರೂಪವಾದ ಕಟೀಲು ಮೇಳದ ಪ್ರದರ್ಶನದ ಸಂದರ್ಭ ಈ ಪ್ರಸಂಗ ಮಾಲಿಕೆಯು ಬಿಡುಗಡೆಗೊಂಡಿತ್ತು. ಮುನ್ನುಡಿಯನ್ನು ಬರೆದವರು ಜನಪ್ರಿಯ ವೈದ್ಯ, ಲೇಖಕ, ತಾಳಮದ್ದಳೆ ಅರ್ಥಧಾರಿಗಳಾದ ಡಾ. ರಮಾನಂದ ಬನಾರಿಯವರು . ಲೇಖಕನ ನೆಲೆಯಲ್ಲಿ ವೈದ್ಯ ಪಟ್ಟಾಜೆ ಗಣೇಶ ಭಟ್ಟರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದು ಈ ಪ್ರಸಂಗ ಮಾಲಿಕಾ ಪುಸ್ತಕವನ್ನು ದಿ। ಕೆರೆಕ್ಕೋಡಿ ಗಣಪತಿ ಭಟ್ಟರಿಗೆ ಗೌರವಪೂರ್ವಕ ಅರ್ಪಿಸಿದ್ದಾರೆ.

ಈ ಪುಸ್ತಕದಲ್ಲಿ ಗಂಧರ್ವ ಕನ್ಯೆ, ಪಾಂಚಜನ್ಯ, ನೈಮಿಷಾರಣ್ಯ, ಜರಾಸಂಧ ಗರ್ವಭಂಗ,ಶತ್ರುದಮನ, ಪಾರ್ವತೀ ಪ್ರತಿಜ್ಞೆ, ಕಾವು ಕ್ಷೇತ್ರ ಮಹಾತ್ಮೆ, ನಾಗಮಣಿ ಮಾಣಿಕ್ಯ, ಹಂಸಡಿಬಿಕೋಪಾಖ್ಯಾನ, ಉದಯ ಚಂದ್ರಿಕೆ, ವರಸಿದ್ಧಿ, ಶಲ್ಯಾಗಮನ ಎಂಬ ಪ್ರಸಂಗಗಳಿವೆ. ಪ್ರದರ್ಶನ ಯೋಗ್ಯವಾದ ಪ್ರಸಂಗಗಳು. ಗಂಧರ್ವಕನ್ಯೆ, ಪಾಂಚಜನ್ಯ ಮತ್ತು ಶತ್ರುದಮನ ಎಂಬ ಪ್ರಸಂಗಗಳು ಶ್ರೀ ಕಟೀಲು ಮೇಳದಲ್ಲಿ ಪ್ರದರ್ಶನಗೊಂಡಿವೆ. ಕಾವು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಶ್ರೀ ಕುಂಟಾರು ಮೇಳದವರು ಪ್ರದರ್ಶಿಸಿದ್ದರು. ಗಂಧರ್ವ ಕನ್ಯೆ ಮತ್ತು ಪಾಂಚಜನ್ಯ ಪ್ರಸಂಗಗಳನ್ನು ಖ್ಯಾತ ಭಾಗವತರಾಗಿದ್ದ ದಾಸರಬೈಲು ಚನಿಯ ನಾಯ್ಕರು ಮೊತ್ತ ಮೊದಲು ಯಶಸ್ವಿಯಾಗಿ ಆಡಿಸಿದ್ದರು. ಈ ಪುಸ್ತಕದಲ್ಲಿರುವ ಎಲ್ಲಾ ಪ್ರಸಂಗಗಳೂ ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿ ಎಂದು ಆಶಿಸುತ್ತೇನೆ. 

ಮಾಗದ ವಧೆ, ಕೌಶಿಕ ಪ್ರತಿಜ್ಞೆ, ಜಾಬಾಲಿ ನಂದಿನಿ – ಮೂರು ತಾಳಮದ್ದಳೆಗಳು 

ರೋಟರಿ ಕ್ಲಬ್ ಮಡಂತ್ಯಾರು ಇವರ ಪ್ರಾಯೋಜಕತ್ವದಲ್ಲಿ ಮತ್ತು ಶ್ರೀ ಮಹಿಷಮರ್ದಿನಿ ಯಕ್ಷಗಾನ ಸಂಘ ಪಾರೆಂಕಿ, ರೊ। ಪ್ರಕಾಶ್ ಕಾರಂತ್ , ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ , ರೋಟರಿ ಕ್ಲಬ್ ಬಂಟ್ವಾಳ ಇವರುಗಳ ಸಹ ಪ್ರಾಯೋಜಕತ್ವದಲ್ಲಿ  ಮೂರು ದಿನದ ಯಕ್ಷ ಸಂವಾದ ತಾಳಮದ್ದಳೆ ಕೂಟ ಜರಗಲಿದೆ. ದಿನಾಂಕ 11.09.2020 ರಂದು ಮಾಗದ ವಧೆ ಎಂಬ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಪಟ್ಲ ಸತೀಶ್ ಶೆಟ್ಟಿ, ಕಾವ್ಯಶ್ರೀ ಅಜೇರು,ಗುರುಪ್ರಸಾದ್ ಬೊಳಿಂಜಡ್ಕ, ಚಂದ್ರಶೇಖರ ಆಚಾರ್ಯ ಹಾಗೂ ಮುಮ್ಮೇಳದಲ್ಲಿ ಉಜಿರೆ ಅಶೋಕ ಭಟ್, ವಾಸುದೇವ ರಂಗಾ ಭಟ್, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಭಾಗವಹಿಸಲಿರುವರು.

 ದಿನಾಂಕ 12.09.2020 ರಂದು ಕೌಶಿಕ ಪ್ರತಿಜ್ಞೆ ಎಂಬ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ಚೈತನ್ಯ ಕೃಷ್ಣ ಪದ್ಯಾಣ,ಚಂದ್ರಶೇಖರ ಆಚಾರ್ಯ ಮತ್ತು ಮುಮ್ಮೇಳದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ಉಜಿರೆ ಅಶೋಕ ಭಟ್ ಭಾಗವಹಿಸಲಿರುವರು.  ದಿನಾಂಕ 13.09.2020 ರಂದು ಜಾಬಾಲಿ ನಂದಿನಿ ಎಂಬ ಪ್ರಸಂಗ ತಾಳಮದ್ದಳೆ ರೂಪದಲ್ಲಿ ನಿಮ್ಮ ಮುಂದಿರಲಿದೆ. ಹಿಮ್ಮೇಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಶ್ರೀನಿವಾಸ ಬಳ್ಳಮಂಜ, ಪದ್ಮನಾಭ ಉಪಾಧ್ಯಾಯ, ಚಂದ್ರಶೇಖರ ಆಚಾರ್ಯ ಮತ್ತು ಮುಮ್ಮೇಳದಲ್ಲಿ ಪೆರ್ಮುದೆ ಜಯಪ್ರಕಾಶ ಶೆಟ್ಟಿ, ದಿನೇಶ ಶೆಟ್ಟಿ ಕಾವಳಕಟ್ಟೆ, ರಾಜೇಶ ಕೃಷ್ಣ ಮಚ್ಚಿನ ಭಾಗವಹಿಸರುವರು. ಸಮಯ ಪ್ರತಿದಿನ ಸಂಜೆ 6 ರಿಂದ ರಾತ್ರಿ 8.30. ಈ ಕಾರ್ಯಕ್ರಮ ಯೂ ಪ್ಲಸ್ ಟಿವಿ ಯಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೆ ಯು ಟ್ಯೂಬ್ ಮತ್ತು ಫೇಸ್ ಬುಕ್ ಗಳಲ್ಲೂ ನೇರಪ್ರಸಾರಗೊಳ್ಳಲಿದೆ. 

ಡಾ. ಟಿ. ಶ್ಯಾಮ್ ಭಟ್ – ಕಲಾ ಜಗತ್ತಿನ ನಿರ್ದೇಶಕ

ಕಲೆಯ ಸೆಳೆತ ಎನ್ನುವುದು ಹಾಗೆಯೇ. ಅದೊಂದು ಭಾವದೊಳಗಿನ ತುಡಿತ. ಪಂಡಿತ, ಪಾಮರ ಅಥವಾ ಬಡವ, ಬಲ್ಲಿದನೆಂಬ ಭೇದಭಾವವನ್ನು ತೋರದೆ ಕಲೆಯು ಶ್ರದ್ಧೆಯನ್ನು ತೋರಿದವನಿಗೆ ಒಲಿಯುತ್ತದೆ. ಎಷ್ಟೇ ಕಲಿತು ವಿದ್ಯಾವಂತನಾಗಿ ಉನ್ನತ ಹುದ್ದೆಯಲ್ಲಿದ್ದವರಲ್ಲಿ ಇಂದ ಹಲವಾರು ಮಂದಿ ತಾನೊಂದು ಕಲೆಯ ಜೊತೆಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಅಂತಹ ಸೆಳೆತ ಸಂಗೀತಾದಿ ಕಲೆಗಳಿವೆ. ಹೆಚ್ಚಿನ ಕಲೆಗಳಿಗೆ ಮೂಲ ಸಂಗೀತವಾದರೂ ಸಂಗೀತವಲ್ಲದ  ಚಿತ್ರಕಲೆ, ಶಿಲ್ಪಕಲೆ ಮುಂತಾದ ಇತರ ಕಲೆಗಳೂ ಇವೆ. ಕಲೆಗಳ ಮೇಲಿನ ವ್ಯಾಮೋಹ ಹೀಗೇಕೆ ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುವುದು ಕಷ್ಟಕರ. ಅದು ಕೇವಲ ಮನರಂಜನೆಯೂ ಹವ್ಯಾಸವೋ ಜನಪ್ರಿಯತೆಯನ್ನು ಪಡೆಯುವ ಹಂಬಲವೋ ಎಂದು ಹೇಳುವ ಹಾಗಿಲ್ಲ. ಕಲೆಯ ತುಡಿತ ಮಿಡಿತಗಳು ಮನುಷ್ಯನ ರಕ್ತದ ಕಣಕಣದಲ್ಲಿಯೂ ಅಡಗಿರಬಹುದೇನೋ ಎಂಬ ಭಾವನೆಗಳು ಮೂಡಿದರೆ ಅಚ್ಚರಿಯೇನಿಲ್ಲ.  

ಕಲೆ ಎಂಬುದು ಮಾನವನಿಗೆ ಅದರಲ್ಲೂ ಭಾರತೀಯರಿಗೆ ಮಾನಸಿಕ ನೆಮ್ಮದಿಯನ್ನು ಕೊಡುತ್ತದೆ. ದಿನನಿತ್ಯದ ಕರ್ತವ್ಯದ ನಿಬಿಡ ಜಂಜಾಟಗಳಿಂದ ಒಂದರೆಕ್ಷಣ ಬದಲಾವಣೆಯ ಶಾಂತಿಯನ್ನು ಕೊಡುತ್ತದೆ. ಆದ ಕಾರಣ ಎಷ್ಟೋ ಉನ್ನತ ಉದ್ಯೋಗಸ್ಥರು ಕಲಾಸೇವೆಯಲ್ಲಿ ನಿರತರಾಗಿದ್ದುದನ್ನು ನಾವು ಕಾಣುತ್ತೇವೆ. ರಾಜಕಾರಣಿಗಳು, ವಿಜ್ಞಾನಿಗಳು, ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು, ಭಾರತೀಯ ಆಡಳಿತ ಸೇವೆಯ(ಇಂಡಿಯನ್ ಸಿವಿಲ್ ಸರ್ವಿಸ್) ಉನ್ನತ ಉದ್ಯೋಗಸ್ಥರು ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಕಲೆಯ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದುದು ಮಾತ್ರವಲ್ಲದೆ ಅಂತಹ ಕಲೆಗಳ ಏಳಿಗೆಗಾಗಿ ನಿರಂತರ ಪ್ರೋತ್ಸಾಹವನ್ನು ಕೊಡುತ್ತಾ ಜೊತೆಗೆ ಅದರ ಬಗ್ಗೆ ನಿರ್ದಿಷ್ಟವಾದ ನಿರ್ದೇಶನವನ್ನೂ ಕೊಡಬಲ್ಲ ಮಹಾನುಭಾವರುಗಳಿರುವುದು ಅಪರೂಪ. ಕೇವಲ ಬೆರಳೆಣಿಕೆಯಲ್ಲಿ ಮಾತ್ರವೇ ಅಂತಹವರು ಕಾಣಸಿಗಬಹುದಷ್ಟೆ. ಅವರೊಲ್ಲಬ್ಬರು ಡಾ. ಟಿ. ಶ್ಯಾಮ ಭಟ್.  

ಜಿಲ್ಲಾಧಿಕಾರಿ, ಸಾರಿಗೆ ಇಲಾಖೆ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು, ಕರ್ನಾಟಕ ಲೋಕಸೇವಾ ಆಯುಕ್ತರೇ ಮೊದಲಾದ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಶ್ಯಾಮ್ ಭಟ್ಟರ ಕಲಾಪ್ರೀತಿ ಅನನ್ಯವಾದದ್ದು. ಎಷ್ಟೋ ಕಲಾವಿದರಿಗೆ ಮತ್ತು ಕಲಾಪ್ರದರ್ಶನಗಳಿಗೆ ಸಹಾಯಹಸ್ತ ನೀಡಿದುದು ಇವರ ಹೆಚ್ಚುಗಾರಿಕೆ. ಹಾಗೆಂದು ಅದನ್ನು ಅವರು ಎಂದೂ ಹೇಳಿಕೊಂಡಿಲ್ಲ. ತನ್ನ ಕರ್ತವ್ಯದ ಒಂದು ಭಾಗವೆಂದೇ ಭಾವಿಸಿದ್ದಾರೆ. ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಮತ್ತು ಸಂಪಾಜೆ ಯಕ್ಷೋತ್ಸವದ ಮುಖಾಂತರ ಅವರು ನಡೆಸಿದ ಕಲಾಸೇವೆ ಕಲಾಭಿಮಾನಿಗಳು, ಪ್ರೇಕ್ಷಕರು ಮತ್ತು ಕಲಾವಿದರು ಅನಾವರತವೂ ನೆನಪಿನಲ್ಲಿಡಬೇಕಾದುದು. ಎಲ್ಲರಿಗೂ ತಿಳಿದ ವಿಚಾರವಾದ್ದರಿಂದ ಅದರ ಬಗ್ಗೆ ಮತ್ತೆ ಮತ್ತೆ ನಾನು ಇಲ್ಲಿ ಉಲ್ಲೇಖಿಸಲು ಹೋಗುವುದಿಲ್ಲ.

 
ಫೋಟೋ: ವರ್ಣ ಸ್ಟುಡಿಯೋ 

ಆದರೆ ಎಲ್ಲರಿಗೂ ತಿಳಿದಿರದ ಅವರನ್ನು ಹತ್ತಿರದಿಂದ ಬಲ್ಲವರು ಮಾತ್ರ ತಿಳಿದಿರುವ ವಿಚಾರವನ್ನು ನಾನಿಲ್ಲಿ ಹೇಳಲೇಬೇಕು. ಡಾ. ಶ್ಯಾಮ ಭಟ್ಟರು ಕೇವಲ ಯಕ್ಷಗಾನದ  ಪ್ರೋತ್ಸಾಹಕ ಅಥವಾ ಯಕ್ಷಗಾನದ ಪ್ರೇಕ್ಷಕ, ಆರಾಧಕ ಎಂದು ತಿಳಿದುಕೊಂಡರೆ ಅದು ನಮ್ಮ ಅಜ್ಞಾನ ಎಂದು ಹೇಳಬಹುದು. ಅವರೊಬ್ಬ ಯಕ್ಷಗಾನದ ಶ್ರೇಷ್ಠ ನಿರ್ದೇಶಕ ಎಂದು ತಿಳಿದರೆ ಹಲವರಿಗೆ ಆಶ್ಚರ್ಯವಾಗಬಹುದು. ಪ್ರದರ್ಶನಗಳಲ್ಲಿ ಕೆಲವೊಮ್ಮೆ ಕಲಾವಿದರಿಂದಲೋ ಅಥವಾ ಇತರರಿಂದಲೋ ತಪ್ಪುಗಳು ಘಟಿಸಿ ಹೋದಾಗ ಅವರೊಳಗಿನ ನಿರ್ದೇಶಕ ಜಾಗೃತನಾಗುತ್ತಾನೆ. ಹೀಗೆಯೇ ಪ್ರದರ್ಶನ ನಡೆಯಬೇಕೆಂದು ಅವರು ನಿರ್ದೇಶಿಸಬಲ್ಲರು. ಆಶ್ಚರ್ಯವೆಂದರೆ ಅವರಿಗೆ ಹೆಚ್ಚಿನ ಎಲ್ಲಾ ಪ್ರಸಂಗಗಳ ನಡೆ ಗೊತ್ತಿದೆ. ಯಾವ ದೃಶ್ಯದ ನಂತರ ಮುಂದಿನ ದೃಶ್ಯ ಎಂದು ಕರಾರುವಾಕ್ಕಾಗಿ ಹೇಳುತ್ತಾರೆ. ಮಾತ್ರವಲ್ಲದೆ ಸಮಯದ ಅಭಾವವಿದ್ದಾಗ ಯಾವ ದೃಶ್ಯವನ್ನು ಬಿಡಬಹುದು ಯಾವುದನ್ನೂ ಪ್ರದರ್ಶಿಸಬೇಕೆಂದು ಭಾಗವತರಿಗೆ ತಿಳಿಹೇಳಬಲ್ಲರು. ಅವರನ್ನು ಹತ್ತಿರದಿಂದ ಬಲ್ಲವರು ಹೇಳುವಂತೆ ಅವರಿಗೆ ಹೆಚ್ಚಿನೆಲ್ಲಾ ಯಕ್ಷಗಾನ ಪ್ರಸಂಗಗಳ ನಡೆ ಗೊತ್ತಿದೆ. ಇತ್ತೀಚಿಗೆ ಪ್ರದರ್ಶನಗಳನ್ನು ಕಾಣದೆ ಮೂಲೆಯಲ್ಲಿ ಬಿದ್ದ ಪ್ರಸಂಗಗಳ ನಡೆ ಹೇಗಿರಬೇಕೆಂದು ಅವರು ನಿರ್ದೇಶನ ಮಾಡಿದ್ದೂ ಇದೆಯಂತೆ. ಅಂತಹಾ ಚಾಲ್ತಿಯಲ್ಲಿಲ್ಲದ ಪ್ರಸಂಗಗಳೂ ಅದರ ಪದ್ಯಗಳೂ ಅವರಿಗೆ ಕಂಠಪಾಠ! ಇಂತಹ ಪ್ರಸಂಗಗಲ್ಲಿ ಇಂತದ್ದೇ ಪದ್ಯಗಳನ್ನು ಹೇಳಬೇಕೆಂದೂ ಇಂತಹುದೇ ಪದ್ಯಗಳನ್ನು ಬಿಡಬೇಕೆಂದೂ ಕರಾರುವಕ್ಕಾಗಿ ಅವರು ನಿರ್ದೇಶಿಸುತ್ತಾರೆ ಎಂದು ಹೇಳುವುದನ್ನೂ ಕೇಳಿದ್ದೇನೆ.

ಕಥೆಯಲ್ಲಿ ಲೋಪವಾದರೆ, ಮಾತಿನಲ್ಲಿ ಆಭಾಸಗಳು ಉಂಟಾದರೆ, ದೃಶ್ಯ ಸಂಯೋಜನೆಯಲ್ಲಿ ತಪ್ಪುಗಳು ಸಂಭವಿಸಿದರೆ ಅವರದನ್ನು ತಿದ್ದಿ ತಿಳಿಹೇಳಬಲ್ಲರು. ಆದುದರಿಂದ ಡಾ. ಶ್ಯಾಮ್ ಭಟ್ಟರು ಕೇವಲ ಒಬ್ಬ ಕಲಾಪೋಷಕ, ಕಲಾಪ್ರೇಮಿಯಲ್ಲ. ಬದಲಾಗಿ ಯಕ್ಷಗಾನದ ಶ್ರೇಷ್ಠ ನಿರ್ದೇಶಕರೂ ಹೌದು. ಆದುದರಿಂದ ಶ್ರೇಷ್ಠ ವಿದ್ವಾಂಸರೂ ಕಲಾ ನಿರ್ದೇಶಕರೂ ಆದ ಅವರಿಂದ ಈ ಕಲಾಜಗತ್ತು ಬಹಳಷ್ಟು ಶ್ರೀಮಂತವಾಗಿದೆ. 

ಲೇಖಕ : ಮನಮೋಹನ್ ವಿ.ಎಸ್ 

ಹೊಸ್ತೋಟ ಮಂಜುನಾಥ ಭಾಗವತರ ವೀರಾಂಜನೇಯ ವೈಭವಕ್ಕೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ 

ಯಕ್ಷಋಷಿ ದಿ| ಹೊಸ್ತೋಟ ಮಂಜುನಾಥ ಭಾಗವತರ ಯಕ್ಷಗಾನ ಪ್ರಸಂಗಗಳ ಗುಚ್ಛ ವೀರಾಂಜನೇಯ ವೈಭವಕ್ಕೆ(ಸಮಗ್ರ ಹನುಮಾಯನ ) 2019ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪುಸ್ತಕ ಬಹುಮಾನ ದೊರಕಿದೆ. ಈ ಪ್ರಸಂಗ ಸಂಪುಟ ಒಟ್ಟು 27 ಪ್ರಸಂಗಗಳನ್ನೊಳಗೊಂಡಿದೆ. ಈ ಪ್ರಸಂಗ ಸಂಪುಟವನ್ನು ಪ್ರಕಾಶನಗೊಳಿಸಿದವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಪ್ರಕಾಶನ. 


ಯಕ್ಷಗಾನ ರಂಗದಲ್ಲಿ ಭೀಷ್ಮ ಪಿತಾಮಹನೆಂದೇ ಗುರುತಿಸಲ್ಪಟ್ಟ ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನ ರಂಗದಲ್ಲಿ ಪರಿವ್ರಾಜಕನೆಂದೇ ಕರೆಯಲ್ಪಟ್ಟವರು. ಕಲಾತಪಸ್ವಿಯಾಗಿದ್ದ ಮಂಜುನಾಥ ಭಾಗವತರು ಯಕ್ಷಗಾನಕ್ಕಾಗಿ ಇಡೀ ಬದುಕನ್ನೇ ಸಮರ್ಪಿಸಿದವರು. ಉತ್ತರ ಕನ್ನಡ ಜಿಲ್ಲೆಯ ಹೊಸತೋಟದಲ್ಲಿ ಜನಿಸಿದವರಾದರೂ ಯಕ್ಷಗಾನದ ಅಭ್ಯುದಯಕ್ಕಾಗಿ ಊರೂರು ಅಲೆದವರು. ಜೀವನದ ಕೊನೆಯ ಕ್ಷಣದ ವರೆಗೂ ಯಕ್ಷಗಾನವೇ ಅವರ ಉಸಿರಾಗಿತ್ತು. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಾ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಸದಾ ಯಕ್ಷಗಾನದ ವಿಷಯವನ್ನೇ ಮಾತನಾಡುತ್ತಿದ್ದರು. ಯಕ್ಷಗಾನವನ್ನೇ ಧ್ಯಾನಿಸುತ್ತಿದ್ದರು.
ಅವರು ಸದಾ ತಪಸ್ವಿ. ಕಾವಿ ಬಟ್ಟೆ ತೊಡದೆ ಸನ್ಯಾಸಿಯಂತೆ ಬದುಕಿದವರು. ಬಾಲ್ಯದ ಕಷ್ಟಕಾಲದಲ್ಲಿ ಹಠಕ್ಕೆ ಬಿದ್ದ ಸನ್ಯಾಸಿಯಂತೆ ಜೀವಿಸಿದರು. ಅನೇಕ ಮಹಾನುಭಾವರ ಆಶ್ರಯದಲ್ಲಿ ಬೆಳೆಯಬೇಕಾಯಿತು. ಆದರೂ ಧೃತಿಗೆಡದೆ ಸಾಧನೆ ಮಾಡಿದ ಅಪೂರ್ವ ಸಾಧಕ. ಯಕ್ಷ ಋಷಿ ಎಂಬ ಬಿರುದು ಇವರಿಗೆ ಸಾರ್ಥಕ ಮಾತ್ರವಲ್ಲದೆ ಅದರಂತೆಯೇ ಬದುಕಿ ಬಾಳಿದವರು.


ತನ್ನ ಇಡೀ ಬದುಕನ್ನೇ ಯಕ್ಷಗಾನಕ್ಕಾಗಿ ಸಮರ್ಪಿಸಿದ ಕಲಾತಪಸ್ವಿ ಹೊಸ್ತೋಟ ಮಂಜುನಾಥ ಭಾಗವತರು (80) ಬಾಲ್ಯದಲ್ಲೇ ಯಕ್ಷಗಾನದಲ್ಲಿ ಅತೀವ ಆಸಕ್ತಿ. ಭಾಗವತಿಕೆ, ನೃತ್ಯ, ಚಂಡೆ, ಮದ್ದಲೆ, ವೇಷಗಾರಿಕೆ, ಅರ್ಥಗಾರಿಕೆಯ ಸಹಿತ ಯಕ್ಷಗಾನದ ಪ್ರತಿಯೊಂದು ವಿಭಾಗಗಳಲ್ಲೂ ಪ್ರಾವೀಣ್ಯತೆಯನ್ನು ಹೊಂದಿದ್ದರು. ಇವರು ಬಾಳೆಹದ್ದ ಕೃಷ್ಣ ಭಾಗವತ ಹಾಗೂ ಕೆರೆಮನೆ ಮಹಾಬಲ ಹೆಗಡೆಯವರ ಶಿಷ್ಯರೂ ಆಗಿದ್ದರು. ವಾಸಿಸಲು ಸ್ವಂತ ಮನೆಯನ್ನೂ ಕಟ್ಟಿಕೊಳ್ಳದೆ ಸನ್ಯಾಸಿಯಂತೆ ಬದುಕಿ ತನ್ನ ಇಡೀ ಬದುಕನ್ನು ಯಕ್ಷಗಾನಕ್ಕಾಗಿಯೇ ಮೀಸಲಾಗಿಟ್ಟರು.
ಅನಿರೀಕ್ಷಿತವಾಗಿ ಯಕ್ಷಗಾನ ಕಲಿಸುವ ಸಂದರ್ಭವೊದಗಿತು. ಆಮೇಲೆ ಭಾಗವತರು ಹಿಂತಿರುಗಿ ನೋಡಲಿಲ್ಲ. ಅಲ್ಲಲ್ಲಿ ಯಕ್ಷಗಾನ ತರಗತಿಗಳಲ್ಲಿ ವಿದ್ಯಾದಾನ ಮಾಡತೊಡಗಿದರು. ಅದರ ಫಲವಾಗಿ ಸುಮಾರು 1500ಕ್ಕೂ ಹೆಚ್ಚು ಶಿಷ್ಯಂದಿರನ್ನು ಸಂಪಾದಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ತರಗತಿಗಳನ್ನು ನಡೆಸಿದ್ದಾರೆ.
ಅವರು ರಚಿಸಿದ 300ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳಲ್ಲಿ ರಾಮ ನಿರ್ಯಾಣ, ಶ್ರೀರಾಮ ಮಹಿಮೆ, ಶ್ರೀಕೃಷ್ಣ ಮಹಿಮೆ, ಮಹಾಭಾರತ, ಹನುಮಾಯಣ, ಗೋಮಹಿಮೆ, ರಾಮಕೃಷ್ಣ ಚರಿತೆ, ಭಾಸವತಿ, ಮೇಘದೂತ, ಉತ್ತರರಾಮ ಚರಿತೆ, ಪ್ರತಿಜ್ಞಾಯೌಗಂಧರಾಯಣ, ಚಂಡ ಮಹಾಸೇನ, ಸುಹಾಸಿನಿ ಪರಿಣಯ ಮೊದ ಲಾದವುಗಳು ಸೇರಿವೆ. ಇವುಗಳಲ್ಲದೆ ಇನ್ನೂ ಹಲವಾರು ಕೃತಿಗಳನ್ನು ರಚಿಸಿದ್ದರು.


ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ, ಜಾನಪದ ಅಕಾಡೆಮಿಯ ವಿಶೇಷ ಪುರಸ್ಕಾರ, ಅಗ್ನಿ ಸೇವಾ ಟ್ರಸ್ಟ್‍ನ ಪರಮದೇವ ಪ್ರಶಸ್ತಿ, ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, ಹಾರಾಡಿ ರಾಮ ಗಾಣಿಗ ಮತ್ತು ವೀರಭದ್ರ ನಾಯಕ ಪ್ರಶಸ್ತಿ, ಸೀತಾನದಿ ಗಣಪಯ್ಯ ಭಾಗವತ ಪುರಸ್ಕಾರ, ಯಕ್ಷಗಾನ ಕಲಾರಂಗ ಉಡುಪಿ ನೀಡುವ ಉಪ್ಪೂರು ನಾರಾಯಣ ಭಾಗವತ ಪ್ರಶಸ್ತಿ, ರಾಮವಿಠ್ಠಲ ಪುರಸ್ಕಾರ, ಆಳ್ವಾಸ್ ನುಡಿಸಿರಿ ಪುರಸ್ಕಾರ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಭಾಗವತರು ಪಡೆದಿದ್ದಾರೆ. ಹೊಸ್ತೋಟ ಮಂಜುನಾಥ ಭಾಗವತರ ಅಭಿನಂದನಾ ಸಮಿತಿ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಪ್ರಕಟಿಸಿದ ‘ಯಕ್ಷ ಋಷಿ’, ಸಾಕೇತ ಟ್ರಸ್ಟ್ ಹೆಗ್ಗೋಡು ಪ್ರಕಟಿಸಿದ ‘ಷಷ್ಠ್ಯಬ್ಧಿ’ ಮತ್ತು ನಾರಾಯಣ ಜೋಶಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಪ್ರಕಟಿಸಿದ ‘ಬಹುಮುಖ’ ಮೊದಲಾದವುಗಳು ಅವರ ಬಗ್ಗೆ ಪ್ರಕಟಗೊಂಡಿರುವ ಅಭಿನಂದನಾ ಗ್ರಂಥಗಳು.


ತನಗಾಗಿ ಬಾಳದೆ ಜನರಿಗಾಗಿ ಬಾಳಿದ, ತನಗಾಗಿ ಸಂಪಾದಿಸದೆ ಎಲ್ಲವನ್ನೂ ಯಕ್ಷಗಾನಕ್ಕೆ ನೀಡಿದ, ತನ್ನ ಸರ್ವಸ್ವವನ್ನೂ ಹೆಚ್ಚೇಕೆ ತನ್ನ ಜೀವವನ್ನೇ ಯಕ್ಷಗಾನಕ್ಕಾಗಿ ಮುಂದಿನ ಪೀಳಿಗೆಗಾಗಿ ಸಮರ್ಪಿಸಿದ, ಗಂಧದ ಕೊರಡಿನಂತೆ ತನ್ನ ಜೀವನವನ್ನು ತೇದ ಹೊಸತೋಟ ಮಂಜುನಾಥ ಭಾಗವತರಂತವರನ್ನು ನಾವು ಮತ್ತೆ ಕಾಣಲಾರೆವು. ಅವರು ಎಲ್ಲವನ್ನೂ ಈ ರಂಗಕ್ಕೆ ಕೊಟ್ಟರು. ತನಗಾಗಿ ಏನನ್ನೂ ಉಳಿಸದೆ ಮರೆಯಾದರು.

ಈ ಕಲಾವಿದರನ್ನು ಗುರುತಿಸಬಲ್ಲಿರಾ? – ಯಕ್ಷಗಾನ ಕಲಾವಿದರ ಹಳೆಯ ಫೋಟೋ

ನಿಮ್ಮಲ್ಲೂ ಇಂತಹ ಹಳೆಯ ಫೋಟೋಗಳಿರಬಹುದು. ಈ ಫೋಟೋ ಯಾರು ಕಳುಹಿಸಿದ್ದೆಂದು ನೆನಪಿಲ್ಲ.

ಛಾಯಾಗ್ರಾಹಕರಿಗೊಂದು ಧನ್ಯವಾದ. ಈ ಫೋಟೋದಲ್ಲಿ ಹನ್ನೊಂದು ಮಹನೀಯರ ಮುಖಗಳು ಗೋಚರಿಸುತ್ತಿವೆ.

ಎಲ್ಲ ಮುಖಗಳನ್ನು ಗುರುತಿಸಿದರೆ ನಿಮಗೊಂದು ದೊಡ್ಡ ಸಲಾಂ. ಸುಮಾರು ಎಂಟು ಫೋಟೋಗಳನ್ನು ಗುರುತಿಸಿದರೆ ನಿಮ್ಮ ಯಕ್ಷಗಾನ ಜ್ಞಾನವನ್ನು ಮೆಚ್ಚಲೇಬೇಕು.

ಅರ್ಧದಷ್ಟು ಕಲಾವಿದರನ್ನು ಗುರುತಿಸಿದರೆ ನೀವು ಪರವಾಗಿಲ್ಲ. ನಿಮಗೆ ಯಕ್ಷಗಾನದ ಬಗ್ಗೆ ತಿಳುವಳಿಕೆ ಇದೆ ಎಂದು ಧಾರಾಳವಾಗಿ ಹೇಳಬಹುದು!

ದಿವಾಣ ಸಂಪದ – ದಿವಾಣ ಭೀಮ ಭಟ್ಟ ಜನ್ಮ ಶತಮಾನ ಸ್ಮೃತಿ ಸಂಚಯ

ಶ್ರೀ ದಿ| ದಿವಾಣ ಭೀಮ ಭಟ್ಟರು ತೆಂಕುತಿಟ್ಟಿನ ಖ್ಯಾತ ಮದ್ದಳೆಗಾರರಾಗಿ ಮೆರೆದವರು. ಹಿರಿಯ ಬಲಿಪ ನಾರಾಯಣ ಭಾಗವತರ ಸಹಕಾರ ಪ್ರೋತ್ಸಾಹದಿಂದ ತಿರುಗಾಟವನ್ನೂ ಆರಂಭಿಸಿದ್ದರು. ಮದ್ದಳೆಗಾರರಾಗಿ ಮಹಾನ್ ಸಾಧನೆಯನ್ನು ಮಾಡಿದವರು. ಮೊದಲ ತಿರುಗಾಟ ಶ್ರೀ ಕದ್ರಿ ಮೇಳದಲ್ಲಿ. ಬಳಿಕ ಐದು ವರ್ಷ ಹಿರಿಯ ಬಲಿಪರ ಜತೆಯಾಗಿ ಕಟೀಲು ಮೇಳದಲ್ಲಿ. ಮತ್ತೆ ಹದಿನೈದು ವರ್ಷಗಳ ಕಾಲ ಕಲಾ ವ್ಯವಸಾಯದಿಂದ ದೂರ ಉಳಿದರೂ ಪುನರಪಿ ಮೂಲ್ಕಿ, ಇರಾ, ಕೂಡ್ಲು ಮೇಳಗಳಲ್ಲಿ ಹಲವು ವರ್ಷ ಕಲಾ ಸೇವೆಯನ್ನು ಮಾಡಿದ್ದರೆಂದು ತಿಳಿದುಬರುತ್ತದೆ.

ಕಟೀಲು ಮೇಳದಲ್ಲಿ ಸೇವಾ ರೂಪದ ಕೊನೆಯ ತಿರುಗಾಟವನ್ನು ಮಾಡಿ ಶ್ರೀಯುತರು ನಿವೃತ್ತರಾಗಿದ್ದರು. ಹಿರಿಯ ಬಲಿಪರು, ಅಗರಿ ಶ್ರೀನಿವಾಸ ಭಾಗವತರಂತಹ ಹಿರಿಯರ ಸಮಕಾಲೀನರಾದರೂ ಬಳಿಕ ತನಗಿಂತ ಕಿರಿಯ ಕಲಾವಿದರ ಜತೆಗೂ ಕಲಾವ್ಯವಸಾಯವನ್ನು ಮಾಡಿದರು. ಶ್ರೀಯುತರ ಅದ್ಭುತ ಪ್ರತಿಭೆಗೆ ಲಯಬ್ರಹ್ಮ ಎಂಬ ಬಿರುದು ಒಲಿದು ಬಂದಿತ್ತು. ಯಕ್ಷಗಾನ ವಾದನಕ್ರಮದಲ್ಲಿ ಅಸಾಮಾನ್ಯ ಸಾಧಕನಾಗಿ ಮೆರೆದ ದಿವಾಣ ಭೀಮ ಭಟ್ಟರ ಜನ್ಮ ಶತಮಾನ ಸ್ಮೃತಿ ಸಂಚಯ ದಿವಾಣ ಸಂಪದ ಪುಸ್ತಕವು 2015ರಲ್ಲಿ ಮುದ್ರಣಗೊಂಡು ಓದುಗರ ಕೈ ಸೇರಿತ್ತು.

ಮಂಗಳೂರು ಶಕ್ತಿನಗರದ ದಿವಾಣ ಭೀಮ ಭಟ್ ಜನ್ಮಶತಮಾನೋತ್ಸವ ಸಮಿತಿಯು  ಈ ಪುಸ್ತಕದ ಪ್ರಕಾಶಕರು. ಶ್ರೀ ಡಾ. ಪ್ರಭಾಕರ ಜೋಶಿ ಮತ್ತು ಶ್ರೀ ಹಿರಣ್ಯ ವೆಂಕಟೇಶ್ವರ ಭಟ್ ಇದರ ಸಂಪಾದಕರು. ಈ ಸಂಸ್ಮರಣ ಗ್ರಂಥದ ಮುದ್ರಣ ಪ್ರಾಯೋಜಕರು ಅನನ್ಯ ಫೀಡ್ಸ್ ಹುಬ್ಬಳ್ಳಿ. ಶ್ರೀ ಮದ್ರಾಮಚಂದ್ರಾಪುರ ಮಠಾಧೀಶರಾದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರುಗಳ ಆಶೀರ್ವಚನಪೂರ್ವಕ ಸಂದೇಶಗಳು ಪುಸ್ತಕದ ಮೊದಲ ಪುಟಗಳಲ್ಲಿ ನಮಗೆ ಓದಬಹುದು. ಸಂಪಾಜೆ ಯಕ್ಷೋತ್ಸವದ ರೂವಾರಿ ಡಾ. ಶ್ರೀ ಟಿ. ಶ್ಯಾಮ ಭಟ್ಟರು ಶುಭಾಶಂಸನೆ ಮಾಡುತ್ತಾ ‘ಚೆಂಡೆ ಮದ್ದಳೆ ವಾದನ ತಪಸ್ವಿ’ ಎಂದು ದಿವಾಣ ಭೀಮ ಭಟ್ಟರನ್ನು ಪ್ರಶಂಸಿಸಿದ್ದಾರೆ.

ಸಂಪಾದಕರುಗಳಾದ ಶ್ರೀ ಡಾ. ಪ್ರಭಾಕರ ಜೋಶಿ ಮತ್ತು ಶ್ರೀ ಹಿರಣ್ಯ ವೆಂಕಟೇಶ್ವರ ಭಟ್ ‘ಶ್ರೀ ಭೀಮಸ್ಮೃತಿ ಯೋಗ ‘ ಎಂಬ ಶೀರ್ಷಿಕೆಯಡಿಯಲ್ಲಿ ಸಂಪಾದಕೀಯ ನುಡಿಗಳನ್ನು ಬರೆದಿರುತ್ತಾರೆ. ದಿವಾಣ ಭೀಮ ಭಟ್ ಜನ್ಮಶತಮಾನೋತ್ಸವದ ಸರಣಿ ಕಾರ್ಯಕ್ರಮಗಳು ನಡೆದು ಸಮಾರೋಪ ಸಮಾರಂಭದಂದು ‘ದಿವಾಣ ಸಂಪದ’ ಎಂಬ ಈ ಗ್ರಂಥ ಲೋಕಾರ್ಪಣೆಗೊಂಡಿತ್ತು. ಭಾಗ ಒಂದರಲ್ಲಿ ಶ್ರೀ ಪು. ಶ್ರೀನಿವಾಸ ಭಟ್ಟ ಮತ್ತು ಡಾ. ಪ್ರಭಾಕರ ಜೋಶಿ ಅವರ ಲೇಖನಗಳಿವೆ. ಭಾಗ ಎರಡರಲ್ಲಿ 41 ಮಂದಿ ಮಹನೀಯರುಗಳು ದಿವಾಣ ಭೀಮ ಭಟ್ಟರ ಬಗೆಗೆ ತಮ್ಮ ಅನಿಸಿಕೆಗಳನ್ನು ಲೇಖನ ರೂಪದಲ್ಲಿ ನೀಡಿರುತ್ತಾರೆ.

ಭಾಗ ಮೂರರಲ್ಲಿ ಕಲಾ ಸಂಬಂಧೀ ಒಂಭತ್ತು ಲೇಖನಗಳಿವೆ. ಬಳಿಕ ವೀರಾಂಜನೇಯ ಸ್ವಾಮಿ ಪ್ರತಿಷ್ಠಾನ, ಯಕ್ಷಕಲಾ ವಿಶ್ವಸ್ತ ಮಂಡಳಿ ಕೋಡಪದವು ಈ ಸಂಸ್ಥೆಯ ಸಂಕ್ಷಿಪ್ತ ಪರಿಚಯವಿದೆ. ಈ ಸಂಸ್ಥೆಯು 2001ರಿಂದ ತೊಡಗಿ 2010 ರ ವರೆಗೆ ದಿವಾಣ ಪ್ರಶಸ್ತಿಯನ್ನು ಕಲಾಸಾಧಕರಿಗೆ ನೀಡುತ್ತಾ ಬಂದಿತ್ತು. ಬಳಿಕ ದಿವಾಣ ಭೀಮ ಭಟ್ಟ ಜನ್ಮಶತಮಾನೋತ್ಸವ ಸರಣಿ ಕಾರ್ಯಕ್ರಮ, ಭೀಮ ಭಟ್ಟ ವಂಶವೃಕ್ಷ ಮತ್ತು ಶತಮಾನೋತ್ಸವ ಸಮಿತಿಯ ಬಗೆಗೆ ವಿವರಗಳನ್ನೂ ನೀಡಲಾಗಿದೆ. ದಿವಾಣ ಭೀಮ ಭಟ್ಟರ ಕುಟುಂಬ ಮತ್ತು ಕಲಾವ್ಯವಸಾಯಕ್ಕೆ ಸಂಬಂದಿಸಿದ ಮೂವತ್ತರಷ್ಟು ಚಿತ್ರಗಳನ್ನೂ ಕೊನೆಯಲ್ಲಿ ನೀಡಲಾಗಿದೆ. ಇದು ಒಟ್ಟು ಇನ್ನೂರು ಪುಟಗಳಿಂದ ಕೂಡಿದೆ. ವಿದ್ವಾಂಸರೂ ಕಲಾವಿದರೂ ಬರೆದಂತಹ ಲೇಖನಗಳನ್ನು ಹೊಂದಿ ಉತ್ತಮ ಮಾಹಿತಿಗಳನ್ನು ಒಳಗೊಂಡ ಪುಸ್ತಕ ಇದು. 

ಕಲಾವಿದ, ಸಂಚಾಲಕ ನಿಡ್ಲೆ ಗೋವಿಂದ ಭಟ್ (Nidle Govinda Bhat)

ಬ್ರೇಕಿಂಗ್ ನ್ಯೂಸ್  – ನಟಿ ಸಂಜನಾ ಬಂಧನ 

ಇಂದು ಮುಂಜಾನೆ ಸ್ಯಾಂಡಲ್ ವುಡ್ ನಟಿ ಸಂಜನಾ ಗಿಲ್ರಾನಿ ಮನೆಗೆ ದಾಳಿ ನಡೆಸಿದ್ದ  ಸಿಸಿಬಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಸತತ ಮೂರು ಘಂಟೆಗಳ ಕಾಲ ಸಂಜನಾ ನಿವಾಸದಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು ನಂತರ ನಟಿಯನ್ನು ಬಂಧಿಸಿ ಸಿಸಿಬಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.    ಇಂದು ಬೆಳಕು ಹರಿಯುವ ಮುನ್ನವೇ ಆರು ಅಧಿಕಾರಿಗಳ ತಂಡ ಮೂರು ಕಾರುಗಳಲ್ಲಿ ಸಂಜನಾ ವಾಸಿಸುತ್ತಿರುವ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಸಂಜನಾ ಆಪ್ತ ಎನ್ನಲಾದ ರಾಹುಲ್ ಎಂಬಾತ ಈಗಾಗಲೇ ಸಿಸಿಬಿ ವಶದಲ್ಲಿದ್ದು ಅವನನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ. ಅವನ ಹೇಳಿಕೆಯ ಆಧಾರದ ಮೇಲೆಯೇ ನಟಿ ಸಂಜನಾ ನಿವಾಸಕ್ಕೆ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.  ಇದ್ದೆಗ ನಟಿ ಸಂಜನಾ ಸಿಸಿಬಿ ಅಧಿಕಾರಿಗಳ ವಶದಲ್ಲಿದ್ದಾರೆ. 

Breaking News – ಎಸ್. ಪಿ. ಬಾಲಸುಬ್ರಹ್ಮಣ್ಯಂ ಚೇತರಿಕೆ. ಶೀಘ್ರವೇ ಡಿಸ್ಚಾರ್ಜ್?

ಕೊರೋನಾ ಪೀಡಿತರಾಗಿ ಗಂಭೀರ ಪರಿಸ್ಥಿತಿಯಲ್ಲಿ ಚೆನ್ನೈಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಗಾಯಕ  ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಅದ್ಭುತ ಸುಧಾರಣೆ ಕಂಡುಬಂದಿದೆ. ಅವರೀಗ ಕೊರೋನಾ ಮುಕ್ತರಾಗಿದ್ದಾರೆ. ಈ ಮಾಹಿತಿಯನ್ನು ಅವರ ಪುತ್ರ ಎಸ್. ಪಿ. ಚರಣ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆ ಕೊರೋನಾ ವರದಿಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದ್ದರೂ ಅವರ ಶ್ವಾಸಕೋಶ ಮತ್ತೆ ಮೊದಲಿನ ಸ್ಥಿತಿಗೆ ಬರುವ ವರೆಗೂ ಅವರು  ತೀವ್ರ ನಿಗಾ ಘಟಕದಲ್ಲಿಯೇ ಚಿಕಿತ್ಸೆ ನೀಡಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅವರೀಗ ಎಲ್ಲರೊಂದಿಗೂ ಮಾತನಾಡಲು ಪ್ರಾರಂಭಿಸಿದ್ದಾರೆ. ಹಾಗೂ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಲೂ ತೊಡಗಿದ್ದಾರೆ. ಅವರು ಆರೋಗ್ಯವಂತರಾಗಲು ಪ್ರಾರ್ಥಿಸಿದ ಎಲ್ಲರಿಗೂ ಕುಟುಂಬ ಧನ್ಯವಾದಗಳನ್ನು ಅರ್ಪಿಸಿದೆ.