ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಎಲ್ಲರೂ ಬಹಳಷ್ಟು ಇಷ್ಟಪಡುವ ಹೆಸರು ಪದ್ಮವಿಭೂಷಣ ಡಾ| ಎಂ. ಬಾಲಮುರಳಿಕೃಷ್ಣ. ಸಾಟಿಯಿಲ್ಲದ ಶಾರೀರ ಮತ್ತು ಕೇಳಿದರೆ ಮತ್ತೆ ಮತ್ತೆ ಅದನ್ನೇ ಕೇಳುತ್ತಾ ದಿನದ ಸಮಯವೆಲ್ಲಾ ಅವರ ಸಂಗೀತ ಕೇಳುತ್ತಾ ಮೈಮರೆಯುತ್ತೇವೆ. ಇದು ಎಲ್ಲಾ ಸಂಗೀತ ಪ್ರೇಮಿಗಳ ಅನುಭವ ಆಗಿರಬಹುದೆಂದುಕೊಳ್ಳುತ್ತೇನೆ.
ಅವರ ಸಂಗೀತ ಕಛೇರಿಯ ಮಾಸ್ಟರ್ ಪೀಸ್ ‘ಎಂದರೋ ಮಹಾನುಭಾವುಲು…’ ಒಂದು ವೀಡಿಯೋ ಇಲ್ಲಿದೆ. ರಚನೆ: ಶ್ರೀ ತ್ಯಾಗರಾಜರ ಪಂಚರತ್ನ ಕೃತಿ. ತಾಳ; ಆದಿ ತಾಳ, ರಾಗ:ಶ್ರೀ ರಾಗಂ
ಉಡುಪಿಯ ಶ್ರೀಕೃಷ್ಣ ಮಠ ಮತ್ತು ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ನಡೆಯುವ, ಯಕ್ಷಗಾನ ಕಲಾರಂಗದ ಸಂಯೋಜನೆಯ, ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಪ್ರತಿಷ್ಠಾನ ಆಯೋಜಿಸುತ್ತಿರುವ ಈ ಬಾರಿಯ ‘ಸರ್ಪಂಗಳ ಯಕ್ಷೋತ್ಸವ’ವು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ದಿನಾಂಕ 27.10.2020ರ ಮಂಗಳವಾರ ಸಂಜೆ ಘಂಟೆ 7ರಿಂದ ರಾತ್ರಿ ಘಂಟೆ 10ರ ವರೆಗೆ ನಡೆಯಲಿದೆ.
ಈ ಸಂದರ್ಭದಲ್ಲಿ 2020 ನೇ ಸಾಲಿನ ಪ್ರತಿಷ್ಠಿತ ಸರ್ಪಂಗಳ ಪ್ರಶಸ್ತಿ ಮತ್ತು ಸರ್ಪಂಗಳ ಪುರಸ್ಕಾರವನ್ನು ನೀಡಲಾಗುವುದು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ
ಈ ಬಾರಿಯ ಪ್ರತಿಷ್ಠಿತ ‘ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸ್ಮಾರಕ ಯಕ್ಷಗಾನ ಸಾಧಕ ಪ್ರಶಸ್ತಿ’ ಪುರಸ್ಕೃತರಾಗುವವರು ಖ್ಯಾತ ಮದ್ದಳೆಗಾರರಾದ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ.
ಬೆಳಾಲು ಸಂಜೀವ ಪೂಜಾರಿ
ಹಾಗೂ ಸರ್ಪಂಗಳ ಪುರಸ್ಕಾರಕ್ಕೆ ಪಾತ್ರರಾಗುವವರು ಧರ್ಮಸ್ಥಳ ಮೇಳದ ನೇಪಥ್ಯ ಕಲಾವಿದರಾದ ಬೆಳಾಲು ಸಂಜೀವ ಪೂಜಾರಿ. ಸರ್ಪಂಗಳ ಯಕ್ಷೋತ್ಸವದ ಸಭಾ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪುರಸ್ಕಾರ ನಡೆಯಲಿದೆ. ಸಭಾ ಕಾರ್ಯಕ್ರಮದ ಅನಂತರ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ‘ಕಾಯಕಲ್ಪ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರಕಾರದ ನಿಯಮಗಳಿಗನುಸಾರವಾಗಿ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ನಿಗದಿತ ಸಂಖ್ಯೆಯ ಪ್ರೇಕ್ಷಕರಿಗೆ ಮಾತ್ರ ಪ್ರವೇಶ. ಆದರೆ ಈ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರ ಯೂಟ್ಯೂಬ್ ಮತ್ತು ಫೇಸ್ ಬುಕ್ ತಾಣದಲ್ಲಿ ಲಭ್ಯ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.
‘ಕುತ್ಯಾಳ ಸಂಪದ ಎಂಬ ಈ ಕೃತಿಯು ಯಕ್ಷಗಾನ ಸಂಗೀತ, ಚಿತ್ರಕಲೆಗಳಿಗೆ ಅನುಪಮವಾದ ಕೊಡುಗೆಗಳನ್ನು ನೀಡಿದ ಕೂಡ್ಲು ಶ್ಯಾನುಭಾಗ ಮನೆತನದ ಆಕರ ಗ್ರಂಥವಾಗಿ ಓದುಗರ ಕೈ ಸೇರಿದೆ. ಇದು ಪ್ರಕಟವಾದುದು 1997ರಲ್ಲಿ. ಪ್ರಕಾಶಕರು, ಶ್ರೀ ಗೋಪಾಲಕೃಷ್ಣ ಪ್ರಕಾಶನ, ಕೂಡ್ಲು, ಕಾಸರಗೋಡು. ಸಂಪಾದಕರು ಶ್ರೀ ರಾಧಾಕೃಷ್ಣ ಕೆ. ಉಳಿಯತ್ತಡ್ಕ. ಇದು ನೂರಾ ಐವತ್ತಮೂರು ಪುಟಗಳಿಂದ ಕೂಡಿದೆ. ಶೃಂಗೇರಿ ಜಗದ್ಗುರುಗಳ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಡಿ. ವೀರೇಂದ್ರ ಹೆಗಡೆಯವರ ಅನುಗ್ರಹ ಸಂದೇಶಗಳನ್ನು ನೀಡಲಾಗಿದೆ. ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಮತ್ತು ಶ್ರೀ ಕೆ. ನಾರಾಯಣ ಶ್ಯಾನುಭಾಗರ ಶುಭ ಸಂದೇಶಗಳನ್ನೂ ನೀಡಿರುತ್ತಾರೆ.
‘ಕುತ್ಯಾಳ ಸಂಪದ’ ಎಂಬ ಈ ಆಕರ ಗ್ರಂಥಕ್ಕೆ ಮುನ್ನುಡಿಯನ್ನು ಬರೆದವರು ಶ್ರೀ ವೆಂಕಟರಾಜ ಪುಣಿಂಚತ್ತಾಯರು. ‘ಪ್ರಕಾಶನದ ಪರವಾಗಿ’ ಎಂಬ ಬರಹವನ್ನು ನೀಡಲಾಗಿದೆ. ಸಂಪಾದಕ ಶ್ರೀ ರಾಧಾಕೃಷ್ಣ ಉಳಿಯತ್ತಡ್ಕ ಅವರು ‘ಎರಡು ಮಾತು’ ಎಂಬ ಬರಹದಲ್ಲಿ ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ. ಈ ಆಕರ ಗ್ರಂಥವು ಮೂರು ವಿಭಾಗಗಳಿಂದ ಕೂಡಿದೆ. ಭಾಗ ಒಂದು-ಸಂಶೋಧನೆ. ಇಲ್ಲಿ ಕೂಡ್ಲು ಶ್ಯಾನುಭಾಗ ಮನೆತನದ ಇತಿಹಾಸವನ್ನು ನೀಡಲಾಗಿದೆ. ಭಾಗ ಎರಡು-ಸಂಪಾದನೆ. ಇಲ್ಲಿ ಮಿಂಚಿ ಮರೆಯಾದ ವೈವಿಧ್ಯಮಯ ಪ್ರತಿಭೆಗಳು, ಅವಿಸ್ಮರಣೀಯ ಘಟನೆಗಳು, ಧರ್ಮ-ಕಲೆ-ಸಂಸ್ಕೃತಿಗಳ ಬಗೆಗೆ ಮಾಹಿತಿಗಳನ್ನು ನೀಡಿದ್ದಾರೆ. ಭಾಗ ಮೂರು-ಸಂಸ್ಮರಣೆ. ಈ ವಿಭಾಗದಲ್ಲಿ ಕಲಾವಿದ ಶ್ರೀ ಗೋಪಾಲಕೃಷ್ಣ ಶ್ಯಾನುಭಾಗರ ಜೀವನ ಸಾಧನೆಗಳ ವಿವರಗಳಿವೆ. ಇಲ್ಲಿ ಒಟ್ಟು ಹನ್ನೊಂದು ಲೇಖನಗಳಿದ್ದು ಬರೆದವರು ಎಂ.ವಿ. ಬಳ್ಳುಳ್ಳಾಯ, ದೇಶಮಂಗಲ ಕೃಷ್ಣ ಕಾರಂತ, ಮಧೂರು ಗಣಪತಿ ರಾವ್, ಕೆ. ಎನ್. ಕೊಳ್ಕೆಬೈಲು, ಎಂ.ವ್ಯಾಸ, ಕೆ.ಸುಕುಮಾರನ್, ಕಲ್ಮಾಡಿ ಸದಾಶಿವ ಆಚಾರ್ಯ, ಎಚ್. ವಿಷ್ಣು ಭಟ್, ಎ. ಮಹಾಲಿಂಗ ಭಟ್, ಕೆ.ಪಿ.ತಿಮ್ಮಪ್ಪ ಶೆಟ್ಟಿ, ಮತ್ತು ವಿಠಲದಾಸ್ ಕೆ. ಅವರುಗಳು.
ವಿಭಾಗ ಎರಡರಲ್ಲಿ ಶ್ರೀ ಕಯ್ಯಾರ ಕಿಂಞಣ್ಣ ರೈ, ಸಿರಿಬಾಗಿಲು ವೆಂಕಪ್ಪಯ್ಯ, ಕೆ. ಗೋಪಾಲಕೃಷ್ಣ ಶ್ಯಾನುಭಾಗ, ಕೊರಕ್ಕೋಡು ಈಶ್ವರ ಭಾಗವತ, ಪಟ್ಟಾಜೆ ವೆಂಕಟ್ರಮಣ ಭಟ್ಟ, ಶಾನ್ ಕಾಸರಗೋಡು, ಮಾಯಾ ಕೇಶವ ಶ್ಯಾನುಭಾಗ್, ಬಿ. ಬಾಲಕೃಷ್ಣ ಅಗ್ಗಿತ್ತಾಯ, ಚಂದ್ರಗಿರಿ ಅಂಬು, ಬಣ್ಣದ ಮಹಾಲಿಂಗ, ಕೂಡ್ಲು ಶಂಭು ಬಲ್ಯಾಯ, ಅಶೋಕ ಭಟ್ ಉಜಿರೆ, ಸುಬ್ರಾಯ ಅನಂತಪುರ, ಭಗವಾನ್ ದಾಸ್ ಕೂಡ್ಲು, ಗಂಗೆ ಬಾಬು ನಾಯ್ಕ್, ಯುಮುನಾ ಮೆರ್ಟ, ಪುರುಷೋತ್ತಮ ಪೈಕ, ವಿಜಯಲಕ್ಷ್ಮೀ ಶ್ಯಾನುಭಾಗ್, ರೇಖಾ ಮಂಜುನಾಥ್, ಕೂಡ್ಲು ಬಾಬು ಭಂಡಾರಿ, ಕಿರಣ ರವೀಂದ್ರನಾಥ್, ಡಿ. ಕೃಷ್ಣ ಕಾರಂತ, ಪೂಕರೆ ಮೋಹನ ನಾಯ್ಕ್, ಉಪ್ಪಳ ಕೃಷ್ಣ ಮಾಸ್ತರ್, ಕಸ್ತೂರಿ ಕೃಷ್ಣ ರಾವ್ ಇವರುಗಳ ಲೇಖನಗಳನ್ನು ನೀಡಲಾಗಿದೆ. ಮೊದಲ ಭಾಗ ಸಂಶೋಧನೆಯಲ್ಲಿ ಕೂಡ್ಲು ಮೇಳ, ಮೇಳದ ಪ್ರದರ್ಶನಗಳು, ಮೇಳದಲ್ಲಿ ತಿರುಗಾಟ, ಕಲಾವಿದರುಗಳು ಮೊದಲಾದ ವಿಚಾರಗಳ ಬಗೆಗೆ ಮಾಹಿತಿಗಳನ್ನೂ ನೀಡಿರುತ್ತಾರೆ.
‘ಹಾಸ್ಯಗಾರನ ಅಂತರಂಗ’ ಎಂಬ ಕೃತಿಯು ಖ್ಯಾತ ಹಾಸ್ಯಗಾರರಾದ ಶ್ರೀ ಪೆರುವಡಿ ನಾರಾಯಣ ಭಟ್ಟರ ಆತ್ಮಕಥನವಾಗಿ ಪ್ರಕಟಗೊಂಡು ಓದುಗರ ಕೈ ಸೇರಿದೆ. 2002ರಲ್ಲಿ ಇದು ಪ್ರಕಟವಾಗಿತ್ತು. ಪೆರುವಡಿ ಹಾಸ್ಯಗಾರರು ಸಂಘಟಕರಾಗಿಯೂ ಕಲಾಸೇವೆಯನ್ನು ಮಾಡಿದವರು. ಅನೇಕ ವರ್ಷಗಳ ಕಾಲ ಮುಲ್ಕಿ ಮೇಳವನ್ನು ನಡೆಸಿದ್ದರು.
ಹಿರಿಯ ಹಾಸ್ಯಗಾರರ ಬಗೆಗೆ ಹೀಗೊಂದು ಆತ್ಮಕಥನವು ಪ್ರಕಟಗೊಂಡದ್ದು ಸಂತೋಷದ ವಿಚಾರವು. ಈ ಕೃತಿಯ ನಿರೂಪಕರು ಶ್ರೀ ನಾ. ಕಾರಂತ ಪೆರಾಜೆ. ಪ್ರಕಾಶಕರು- ಕನ್ನಡ ಪ್ರಪಂಚ ಪ್ರಕಾಶನ, ಪುತ್ತೂರು. ‘ನಿರೂಪಕನ ಅಂತರಂಗ’ ಎಂಬ ಬರಹದಲ್ಲಿ ಶ್ರೀ ನಾ. ಕಾರಂತರು ತಮ್ಮ ಮನದ ಮಾತುಗಳನ್ನು ಅಕ್ಷರರೂಪಕ್ಕಿಳಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿರುತ್ತಾರೆ.
‘ಹಾಸ್ಯಗಾರನ ಅಂತರಂಗ’ ಎಂಬ ಈ ಆತ್ಮಕಥನವು, ಹಿಂದೆ, ಧರ್ಮಸ್ಥಳ ಮೇಳದವನಾದೆ, ಹಾಸನದಲ್ಲಿ ಹಾಸ್ಯದ ನಂಟು ನಂಟಿತು, ಕಿರೀಟ ಪತನ-ಅವಸಾನದ ಆಹ್ವಾನ-ನಂಬಿಕೆ-ನಿರ್ದೇಶನ, ಧರ್ಮಸ್ಥಳ ಮೇಳಕ್ಕೆ ವಿದಾಯ, ಮೂಲ್ಕಿ ಮೇಳದ ದಿಗ್ವಿಜಯ, ಋಣಾನುಬಂಧ, ಜೋಡಾಟ-ಮೇಲಾಟ, ವಿವಿಧ ಮೇಳಗಳಲ್ಲಿ ತಿರುಗಾಟ, ಮುಂದೆ…? ಎಂಬ ಹತ್ತು ವಿಭಾಗಗಳಿಂದ ಕೂಡಿದ್ದು ಶ್ರೀ ನಾ. ಕಾರಂತರು ಸುಂದರವಾಗಿ, ಸರಳವಾಗಿ ಓದುಗರಿಗೆ ಮನಮುಟ್ಟುವಂತೆ ನಿರೂಪಿಸಿದ್ದಾರೆ.
ಬಳಿಕ ರಾಜಹಾಸ್ಯ, ಬಡಗಿನವರಿಗೆ ತೆಂಕಿನ ಹಾಸ್ಯದ ರುಚಿ ಹಿಡಿಸಿದ ಹಾಸ್ಯಗಾರ, ಹಾಸ್ಯ ಸಂಶೋಧಕ, ಪಾಪಣ್ಣ ಭಟ್ಟರು, ಗುರು ಸಮಾನ ಹಿರಿಯ ಒಡನಾಡಿ, ವೈಚಾರಿಕ ಹಾಸ್ಯಗಾರ, ಆತ್ಮೀಯ ಸ್ನೇಹಿತ, ಸಹಜ ಹಾಸ್ಯ ಕೃತಕವಲ್ಲ, ಪ್ರಾಮಾಣಿಕ ಹಾಸ್ಯಗಾರ, ಸರ್ವಾಂಗೀಣ ಕಲಾವಿದ, ಒಡನಾಟದ ನೆನಪು, ಚಿಂತನಶೀಲ ವಿದೂಷಕ, ರಂಗತಂತ್ರಜ್ಞ ಭಾಗವತ, ಮೇಳದ ತಂತ್ರಜ್ಞ ಹಾಸ್ಯಗಾರ ಎಂಬ ಹದಿನಾಲ್ಕು ಲೇಖನಗಳಿವೆ. ಲೇಖನಗಳನ್ನು ಬರೆದವರು ಕ್ರಮವಾಗಿ ಎಚ್. ಸುಬ್ಬಣ್ಣ ಭಟ್, ಎಚ್. ಶ್ರೀಧರ ಹಂದೆ, ಪಾತಾಳ ವೆಂಕಟ್ರಮಣ ಭಟ್, ಎಚ್. ಜನಾರ್ದನ ಹಂದೆ, ಮಧೂರು ಗಣಪತಿ ರಾವ್, ಕೆ. ಗೋವಿಂದ ಭಟ್, ಕೊಳಗಿ ಅನಂತ ಹೆಗಡೆ, ಕಡತೋಕಾ ಮಂಜುನಾಥ ಭಾಗವತ, ಹಿರಿಯಡಕ ಗೋಪಾಲ ರಾವ್, ವರದರಾಯ ಪೈ, ಎಂ.ಕೆ ರಮೇಶಾಚಾರ್ಯ, ಅರುವ ನಾರಾಯಣ ಶೆಟ್ಟಿ, ಮತ್ತು ಶೇಣಿ ಗೋಪಾಲಕೃಷ್ಣ ಭಟ್ಟರು. ಅಲ್ಲದೆ ಹನ್ನೊಂದು ಬಣ್ಣದ ಛಾಯಾಚಿತ್ರಗಳನ್ನೂ ನೀಡಲಾಗಿದೆ.
ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ 58ನೇ ಕಾರ್ಯಕ್ರಮದಲ್ಲಿ ಇಂದು ಅಂದರೆ ಅಕ್ಟೋಬರ್ 25ರಂದು ಆದಿತ್ಯವಾರ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ಸೂರಿಕುಮೇರಿ ಗೋವಿಂದ ಭಟ್ ಅವರೊಂದಿಗೆ ಮಾತುಕತೆ ನಡೆಯಲಿದೆ.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ.
2020ನೇ ಅಕ್ಟೋಬರ್ ೨೫ ಆದಿತ್ಯವಾರ ಸಂಜೆ ಘಂಟೆ 6.30ರಿಂದ 7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ. ಮಾತಿನ ಮಂಟಪ ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ. ಲಿಂಕ್ ಕೆಳಗಡೆ ಇದೆ.
‘ಗೋಡೆ ಚಿತ್ತಾರ’ ಎಂಬ ಕೃತಿಯು ಬಡಗು ತಿಟ್ಟು ಯಕ್ಷಗಾನದ ಖ್ಯಾತ ಹಿರಿಯ ಕಲಾವಿದರಾದ ಶ್ರೀ ಗೋಡೆ ನಾರಾಯಣ ಹೆಗಡೆ ಅವರ ಬದುಕು, ಬಣ್ಣದ ಕಥನವಾಗಿ ಪ್ರಕಟವಾಗಿತ್ತು. ಇದು ಪ್ರಕಟವಾಗಿ ಓದುಗರ ಕೈ ಸೇರಿದ್ದು 2015ರಲ್ಲಿ. ಸಂಪಾದಕರು ಶ್ರೀ ಎಂ.ಕೆ ಭಾಸ್ಕರ ರಾವ್ ಅವರು. ಪ್ರಕಾಶಕರು ಪ್ರಮಾ ಪ್ರಕಾಶನ.
ಇದು ದ್ವಿತೀಯ ಮುದ್ರಣ. 2011ರಲ್ಲಿ ಮೊದಲು ಮುದ್ರಣವಾಗಿ ಪ್ರಕಟವಾಗಿತ್ತು. ಇದು ಪರಿಷ್ಕೃತ ಎರಡನೆಯ ಮುದ್ರಣ. ಶ್ರೀ ಜಿ. ಮೃತ್ಯುಂಜಯ ಅವರು ಮುನ್ನುಡಿ ಲೇಖನವನ್ನು ಬರೆದಿರುತ್ತಾರೆ. ಸಂಪಾದಕ ಶ್ರೀ ಎಂ.ಕೆ ಭಾಸ್ಕರ ರಾವ್ ಅವರು ‘ನಾಲ್ಕು ಮಾತು’ ಎಂಬ ಬರಹದಡಿ ತಮ್ಮ ಅನಿಸಿಕೆಗಳನ್ನು ತಿಳಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಅಲ್ಲದೆ ಕೃತಜ್ಞತೆ ಮತ್ತು ಎರಡನೆಯ ಮುದ್ರಣಕ್ಕೆ ಎರಡು ಮಾತು ಎಂಬ ಬರಹಗಳನ್ನೂ ನೀಡಿರುತ್ತಾರೆ. ಇದು ಒಟ್ಟು ನೂರಾ ಎಪ್ಪತ್ತೆರಡು ಪುಟಗಳಿಂದ ಕೂಡಿದೆ. ಶ್ರೀ ಗೋಡೆ ನಾರಾಯಣ ಹೆಗಡೆಯವರ ಬಗೆಗೆ ಮೊದಲೊಂದು ಲೇಖನವನ್ನು ಬರೆಯಲು ಅವಕಾಶವಾಗಿತ್ತು. ಅವರ ಕುರಿತಾದ ಪುಸ್ತಕ ಪರಿಚಯವನ್ನು ಮಾಡುವರೆ ಅವಕಾಶವಾದುದಕ್ಕೆ ಸಂತೋಷಪಡುತ್ತೇನೆ.
ಜಾಹೀರಾತು
ಈ ಪುಸ್ತಕದಲ್ಲಿ, ಕೌರವ ಕೌರವ, ಬಯಸಿ ಬಂದ ಭಾಗ್ಯವಲ್ಲ, ಬ್ರಹ್ಮ ಬ್ರಹ್ಮ ಬ್ರಹ್ಮ , ಅಕ್ರೂರನಿಗೂ ಅಸ್ತಿತ್ವ, ಮಲೆನಾಡಿನ ಮಾಲೆಯಿಂದ, ಉತ್ತರ ಕಾಣದ ಪ್ರಶ್ನೆ, ಋತುಪರ್ಣನಿಗೆ ಹೊಸ ಆಯಾಮ, ಲಕ್ಷ್ಯ-ಅಲಕ್ಷ್ಯ, ಮೂರು ತಾಸಿನ ಆಟಕ್ಕೆ ಶ್ರೀಕಾರ, ಯಕ್ಷಗಾನ-ನಾಟಕ-ತಾಳಮದ್ದಳೆ, ಬಡ ಎತ್ತಿನ ಮೇಲೆ ಬೆಟ್ಟ, ಕೈಗೆ ಬಂದಿದ್ದರೂ ದಕ್ಕಲಿಲ್ಲ, ಇಡಗುಂಜಿ ಮೇಳಕ್ಕೆ ಕರೆಯು, ಹೀಗೊಂದು ಕಹಿ ಅಧ್ಯಾಯ, ಕೆರೆಮನೆ ದೂತ-ಅಮೃತೇಶ್ವರೀ ಹತ್ತಿರ, ಸನ್ಮಾನ-ಅನುಮಾನ-ಅವಮಾನ, ಆರಂಭದ ನೋವು-ಕೊನೆಯ ಸಂತೃಪ್ತಿ, ಗಣ್ಯರ ದೃಷ್ಟಿ-ಗೋಡೆ ಪಾತ್ರ ಸೃಷ್ಟಿ, ಮರೆಯಲಾಗದ ಪ್ರಸಂಗಗಳು, ಸಂದ ಪ್ರಶಸ್ತಿಗಳು, ಗೋಡೆ ಚಿತ್ತಾರದ ಮೊದಲ ಮುದ್ರಣದ ಅನಾವರಣ, ಗೋಡೆ ಚಿತ್ತಾರ-ಒಂದಿಷ್ಟು ಅನಿಸಿಕೆ, ಚಿತ್ರಸಂಪುಟ ಎಂಬ ವಿಚಾರಗಳಡಿ ಮಾಹಿತಿಗಳನ್ನು ನೀಡಲಾಗಿದೆ.
ಸಾಮಾಜಿಕ ತಾಲತಾಣದಲ್ಲಿ ಈಗೀಗ ಬಹಳಷ್ಟು ಮಾಡುತ್ತಿರುವ ಹೆಸರು ಧನಶ್ರೀ ವರ್ಮಾ ಅವರದು. ಭಾರತದ ಖ್ಯಾತ ಕ್ರಿಕೆಟರ್ ಯಜುವೇಂದ್ರ ಚಾಹಲ್ ಅವರ ಭಾವೀ ಪತ್ನಿ ಧನಶ್ರೀ ತನ್ನ ನೃತ್ಯಗಳಿಗೆ ಹೆಸರುವಾಸಿ. ವೃತ್ತಿಯಲ್ಲಿ ವೈದ್ಯೆಯಾಗಿರುವ ಧನಶ್ರೀ ನೃತ್ಯ ಕಲಾವಿದೆಯೂ ಹೌದು.
ತನ್ನ ಬಹಳಷ್ಟು ನೃತ್ಯಗಳ ವೀಡಿಯೋಗಳನ್ನು ಯೂಟ್ಯೂಬ್ ಇನ್ಸ್ಟಾ ಗ್ರಾಂ ಗಳಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ಈಗ ಐಪಿಎಲ್ ಕ್ರಿಕೆಟ್ ಪಂದ್ಯಗಳು ದುಬೈಯಲ್ಲಿ ನಡೆಯುತ್ತಾ ಇದೆ. ಹಾಗಾಗಿ ಯಜುವೇಂದ್ರ ಚಾಹಲ್ ಐಪಿಎಲ್ ಕ್ರಿಕೆಟ್ ಆಡುತ್ತಾ ಇದ್ದಾರೆ. ಜೊತೆಗೆ ಧನಶ್ರೀ ವರ್ಮಾ ಕೂಡಾ ಇದ್ದಾರೆ.
ಧನಶ್ರೀ ದುಬೈಯ ವಿಶ್ವ ವಿಖ್ಯಾತ ಭುರ್ಜ್ ಖಲೀಫಾ ಕಟ್ಟಡದ ಮೇಲೆ ಮಾಡಿದ ಡಾನ್ಸ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಾ ಇದೆ.
ಯಾವುದೇ ಒಂದು ವಿಷಯದ ಬಗ್ಗೆ ಬರೆಯುವಾಗ ಅಥವಾ ಮಾತನಾಡುವಾಗ ಆ ವಿಚಾರದ ಬಗ್ಗೆ ಗೊತ್ತಿಲ್ಲವೆಂದೋ ಅಥವಾ ಬೇಕಾದಷ್ಟು ಮಾಹಿತಿ ಇಲ್ಲವೆಂದೋ ಆ ವಿಚಾರವನ್ನು ಅಲ್ಲಿಗೆ ಬಿಟ್ಟು ಬಿಡುತ್ತೇವೆ. ಅದರ ಬಗ್ಗೆ ತಿಳಿದಿರುವ ವಿಚಾರಗಳನ್ನು ಮರೆತುಬಿಡುತ್ತೇವೆ. ವ್ಯಕ್ತಿಯೇ ಇರಲಿ ಅಥವಾ ವಸ್ತುವೇ ಇರಲಿ ಪೂರ್ಣವಾಗಿ ಅರಿತಿರುವುದು ಪ್ರತಿಯೊಬ್ಬರಿಗೂ ಸಾಧ್ಯವಿಲ್ಲ. ಆದುದರಿಂದ ಮಾನವನ ದುರ್ಬಲತೆಯ ಒಂದು ಅಂಗವೆಂಬಂತೆ ನಾವು ತಿಳಿದಿರುವ ವಿಚಾರಗಳಿಗಿಂತ ತಿಳಿಯದಿರುವ ಸಂಗತಿಗಳಿಗೇ ಹೆಚ್ಚು ಚಿಂತಿಸುತ್ತೇವೆ. ತಿಳಿಯಲು ಪ್ರಯತ್ನವನ್ನು ಮಾಡದೇ ಇರುವುದೂ ನಮ್ಮ ಅಜ್ಞಾನಕ್ಕೆ ಮೂಲವೇ ಆಗಿರುವುದರಿಂದ ಜ್ಞಾನದ ಹಂಬಲಕ್ಕಾಗಿ ವಿವಿಧ ಮೂಲಗಳನ್ನು ಎಡತಾಕುವುದು ತಪ್ಪು ಎಂದು ಭಾವಿಸಬಾರದು.
ಕಲಾವಿದರಾಗಿ, ಪಾಂಡಿತ್ಯಪೂರ್ಣ ಅರ್ಥಧಾರಿಯಾಗಿ ನನಗೆ ಜಬ್ಬಾರ್ ಸಮೋ ಗೊತ್ತು. ಅವರ ನಿರರ್ಗಳ ಮಾತುಗಾರಿಕೆ, ಅರ್ಥ ಹೇಳಲು ಕುಳಿತರೆ ಪುರಾಣ ಪಾತ್ರಗಳ ಆಳಕ್ಕೆ ಇಳಿದು ತಾನೂ ಪಾತ್ರವೇ ಆಗಿಬಿಡುವ ಅವರ ಜ್ಞಾನದ ಆಳವೂ ಎಷ್ಟಿದೆಯೆಂದು ಗೊತ್ತಿದೆ. ಆದರೆ ತಾಳಮದ್ದಳೆ ರಂಗದಿಂದ ಹೊರಗೆ ಒಬ್ಬ ವ್ಯಕ್ತಿಯಾಗಿ ಜಬ್ಬಾರ್ ಸಮೋ ಬಗ್ಗೆ ಅಷ್ಟಾಗಿ ತಿಳಿಯದಿದ್ದರೂ ತಿಳಿಯುವ ಪ್ರಯತ್ನ ಮಾಡಿದರೆ ಅದರಲ್ಲಿ ಆಶ್ಚರ್ಯಪಡುವ ವಿಚಾರಗಳೇನೂ ಇರಲಾರದು ಎಂದು ಭಾವಿಸುತ್ತೇನೆ. ಆದುದರಿಂದ ಅವರ ಬಗ್ಗೆ ಹುಡುಕಿ ತೆಗೆದ ಹನಿ ಹನಿಗಳನ್ನು ಈಗ ಒಟ್ಟು ಮಾಡುವ ಸಣ್ಣ ಪ್ರಯತ್ನ ಮಾಡುವೆ.
ಸಾಂಸ್ಕೃತಿಕ ರಂಗವು ನಾಟ್ಯವಾಡುವ ನವಿಲಿನಂತೆ ತನ್ನ ಇರವನ್ನು ಪ್ರದರ್ಶಿಸುತ್ತಿದ್ದ ಹಾಗೂ ಕಲಾ ಶ್ರೀಮಂತಿಕೆಯಿಂದ ಕೂಡಿದ ಸಂಪಾಜೆ ಎಂಬ ಊರಿನ ಜೊತೆಗೆ ಅದೆಷ್ಟೋ ಕಲಾವಿದರ, ಕಲಾಭಿಮಾನಿಗಳ ಮತ್ತು ಕಲಾಪೋಷಕರ ಹೆಸರು ಥಳಕು ಹಾಕಿಕೊಂಡಿದೆ. ಸಂಪಾಜೆಯ ಮಣ್ಣಿನ ಕಣ ಕಣದಲ್ಲೂ ಕಲೆಯ ವಾಸನೆಯಿರುವುದರಿಂದ, ಪ್ರತಿಯೊಬ್ಬರ ರಕ್ತದಲ್ಲಿಯೂ ಯಕ್ಷಗಾನವೆಂಬ ಪ್ಲಾಸ್ಮಾ ಇರುವುದರಿಂದ, ಉಸಿರಾಡುವ ಬಿಸಿಯುಸಿರಲ್ಲಿಯೂ ಯಕ್ಷಗಾನದ ಲಯ ವಿನ್ಯಾಸಗಳಿರುವುದರಿಂದ ಜಬ್ಬಾರ್ ಸಮೋ ಎಂಬ ಹುಡುಗ ಈ ರೀತಿ ನೋಡಿದವರು ಮೂಗಿಗೆ ಬೆರಳಿಟ್ಟು ನೋಡುವ ಪರಿಯಲ್ಲಿ ಬೆಳೆದು ನಿಂತದ್ದರಲ್ಲಿ ಈಗೀಗ ಅಚ್ಚರಿಯೇನೂ ಕಾಣಿಸುವುದಿಲ್ಲ.
ಕಲ್ಲುಗುಂಡಿಯ ರಾಮಕೃಷ್ಣ ಭಜನಾ ಮಂದಿರದಲ್ಲಿ ಮೊಳೆತು, ಚಿಗುರಿ, ಬೆಳೆದ ಕಲೆಯ ತರು, ಕುಸುಮಗಳು ಈಗ ಕರುನಾಡಿನ ಎಲ್ಲೆಡೆಯಲ್ಲಿ ರುಚಿಯಾದ ಫಲಗಳನ್ನು ಕೊಡುತ್ತಿವೆ. ಅಂತಹಾ ಪ್ರತಿಭೆಗಳೆಲ್ಲಾ ತಮ್ಮ ಹೆಸರಿನ ಜೊತೆಗೆ ಸಂಪಾಜೆ ಎಂಬ ಆ ಪುಣ್ಯ ಭೂಮಿಯ ನಾಮಧೇಯವನ್ನು ಜೋಡಿಸಿ ಇರಿಸಿಕೊಂಡದ್ದು ಮನಸ್ಸಿನಲ್ಲಿ, ತನುವಿನಲ್ಲಿ ಪುಳಕಗಳ ಅಲೆಯನ್ನೆಬ್ಬಿಸುತ್ತದೆ. ತಾವು ಎಲ್ಲಿಯೇ ಹೋದರೂ, ಜೀವನದ ಪ್ರವಾಹದ ಅಲೆಯಲ್ಲಿ ಜೊತೆ ಜೊತೆಗೆ ಈಜಿ ಯಾವುದೇ ದಡವನ್ನು ಸೇರಿದ್ದರೂ ಹುಟ್ಟಿದ ಭೂಮಿಯ ಜೊತೆ ತನ್ನನ್ನು ಗುರುತಿಸಿಕೊಳ್ಳಲು ಇಷ್ಟಪಡುವ “ಜನನಿ ಜನ್ಮಭೂಮಿಶ್ಚ..” ಎಂಬ ಮನಸುಗಳು ತುಂಬಾ ಇಷ್ಟವಾಗುತ್ತವೆ. ಆದುದರಿಂದ ಜಬ್ಬಾರ್ ಎಂಬ ಸಂಪಾಜೆಯ ಕುಡಿ ಕೂಡಾ ತನ್ನ ಊರನ್ನು ಮರೆಯಲಿಲ್ಲ. ತನಗೆ ಸಾಂಸ್ಕೃತಿಕ ರುಚಿಯನ್ನು ಹತ್ತಿಸಿದ, ಮನಸ್ಸಿನ ನಾಲಗೆಗೆ ಕಲೆಯ ಸವಿಯನ್ನು ಉಣಿಸಿದ ಊರಿಗೆ ಸದಾ ಕೃತಜ್ಞನಾಗಿರುತ್ತಾ ‘ಜಬ್ಬಾರ್ ಸಮೋ ಸಂಪಾಜೆ’ ಎಂದೇ ಪ್ರಸಿದ್ಧನಾದ.
ಹಾಗೆ ನೋಡಿದರೆ ಶ್ರೀ ಜಬ್ಬಾರ್ ಸಮೋ ಅವರ ಕಲಾ ಪ್ರೌಢಿಮೆಗೆ ಸಾಕ್ಷಿಯಾದದ್ದು ಕೂಡಾ ಕಲ್ಲುಗುಂಡಿಯ ರಾಮಕೃಷ್ಣ ಭಜನಾ ಮಂದಿರವೇ. ಅಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಆಟ ಕೂಟಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದ ಜಬ್ಬಾರರು ಮುಂದೊಂದು ದಿನ ಯಾರೂ ನಿರೀಕ್ಷಿಸದೆ ಇದ್ದ ಎತ್ತರಕ್ಕೆ ಬೆಳೆದರು. ಜಬ್ಬಾರ್ ಎಷ್ಟೋ ಎತ್ತರಕ್ಕೆ ಬೆಳೆದರು. ಎಷ್ಟು ಎತ್ತರಕ್ಕೆ ಎಂದರೆ ಅವರ ಅರ್ಥಗಾರಿಕೆಯನ್ನು ಕೇಳಲೆಂದೇ ದೂರದೂರಿಂದ ಕಾರಿನಲ್ಲಿ ಬರುವ ಆಸಕ್ತಿಯುಳ್ಳ ಜನರ ಪ್ರಭಾವಲಯವನ್ನು ನಿರ್ಮಿಸುವಷ್ಟು. ಜಬ್ಬಾರ್ ಸಮೋ ಅವರ ಅರ್ಥಗಾರಿಕೆಯ ಶೈಲಿ ಮತ್ತು ಪಾಂಡಿತ್ಯ ಇಂದು ಜನಜನಿತವಾಗಿದೆ. ಯಾವುದೇ ಪಾತ್ರಗಳನ್ನೂ ಅವರು ನಿರ್ವಹಿಸುವ ರೀತಿ, ಕನ್ನಡ ಭಾಷೆಯ ಮೇಲೆ ಅವರಿಗಿರುವ ಪ್ರಭುತ್ವ, ಶಬ್ದ ಪ್ರಯೋಗಗಳಲ್ಲಿ ತೋರುವ ವೈವಿಧ್ಯತೆ ಇದೆಲ್ಲಾ ಅವರಲ್ಲಿ ಇರುವ ಮತ್ತು ನಾನು ಅರ್ಥ ಮಾಡಿಕೊಂಡ ವಿಶೇಷತೆಗಳು. ಪುರಾಣ ಪಾತ್ರಗಳ ಜೊತೆ ಸರ್ಕಸ್ ಮಾಡುವ, ಪಾತ್ರಸ್ವಭಾವ ಮತ್ತು ಪುರಾಣ ಕಥೆಗಳನ್ನು ಅರೆದು ಕುಡಿದು ಕರಗತ ಮಾಡಿಕೊಂಡ ಶ್ರೀ ಜಬ್ಬಾರ್ ಸಮೋ ಅವರು ಇಂದು ತಾಳಮದ್ದಳೆ ಲೋಕ ಕಂಡ ಓರ್ವ ಸಮರ್ಥ, ಜನಪ್ರಿಯ ಪ್ರಬುದ್ಧ ಅರ್ಥಧಾರಿ. ಅರ್ಥಧಾರಿಯಾಗಿ ಅವರು ಹೇಗೆ ಎಂಬುದನ್ನು ಅವರ ರಂಗದ ನಿರ್ವಹಣೆಯನ್ನು ಆಸ್ವಾದಿಸಿದ ಎಲ್ಲರಿಗೂ ಅರ್ಥವಾಗಿರಬಹುದಾದ ವಿಚಾರ.
ಆದರೆ ರಂಗದ ಹೊರಗೆಯೂ ಜಬ್ಬಾರ್ ಸಮೋ ಅವರನ್ನು ಇಷ್ಟಪಡುವ ಅಸಂಖ್ಯಾತ ಮನಸುಗಳಿವೆ. ಜಬ್ಬಾರ್ ಬಹಳ ಬೇಗ ಆತ್ಮೀಯರಾಗಿಬಿಡುವ ಸ್ವಭಾವದವರು ಎಂದು ನಾನು ಕೇಳಿ ಬಲ್ಲೆ. ಹಾಗೆಂದು ನಾನು ಅವರಲ್ಲಿ ಅಷ್ಟಾಗಿ ಮಾತನಾಡಿದವನೇ ಅಲ್ಲ. ಫೋನ್ ನಲ್ಲಿ ಒಮ್ಮೆ ಮಾತನಾಡಿದ್ದೆ. ನಿಮ್ಮದೊಂದು ಸಂದರ್ಶನ ಮಾಡಬೇಕಿತ್ತು ಎಂದು ಹೇಳಿದ್ದೆ. ಅವರು ನಯವಾಗಿ ತಿರಸ್ಕರಿಸಿದ್ದರು. ಅದಕ್ಕೆ ಅವರದೇ ಆದ ಕಾರಣಗಳು ಇರಬಹುದು. ಜಬ್ಬಾರ್ ಅವರು ಜನಪ್ರಿಯತೆಯನ್ನು ಪಡೆದ ಕಲಾವಿದರಾಗಿದ್ದರೂ ಅಷ್ಟೇ ಸರಳ ಮತ್ತು ವಿನಯವಂತ ವ್ಯಕ್ತಿಯಾಗಿದ್ದರು. ಭಾಗವತರಾದ ಸುಬ್ರಾಯ ಸಂಪಾಜೆ ಅವರು ತನ್ನ ಫೇಸ್ಬುಕ್ ಖಾತೆನಲ್ಲಿ ಜಬ್ಬಾರ್ ಅವರ ಒಂದು ಮಾನವೀಯತೆಗೆ ಉದಾಹರಣೆಯಾಗಿ ನಡೆದ ಘಟನೆಯೊಂದನ್ನು ಬರೆದಿದ್ದರು. ಅದನ್ನು ಓದಿದ ನನಗೆ ಕಣ್ಣು ಹನಿಗೂಡಿದ್ದು ನಿಜ. ಜಬ್ಬಾರ್ ಅವರಲ್ಲಿ ಒಮ್ಮೆ ಫೋನ್ ಮುಖಾಂತರ ಮಾತನಾಡಿದ್ದು ಬಿಟ್ಟರೆ ನನಗೆ ಅವರಲ್ಲಿ ಮಾತನಾಡಿದ್ದು ನೆನಪಿಲ್ಲ.
ಅವರು ನಮ್ಮ ಮನೆಗೆ ಬಂದಿದ್ದಾಗಲೂ ಅವರ ಜೊತೆ ಮಾತನಾಡಿದ ಹಾಗೆ ಅನಿಸುತ್ತಾ ಇಲ್ಲ. ಆದರೆ ಅವರೊಮ್ಮೆ ನಮ್ಮ ಮನೆಗೆ ಬಂದಿದ್ದ ನೆನಪು ಈಗಲೂ ಹಸಿರಾಗಿದೆ. ತಾಳಮದ್ದಲೆಯೊಂದನ್ನು ಮುಗಿಸಿ ತಡರಾತ್ರಿ ಹಿಂತಿರುಗಿ ಹೋಗುವ ದಾರಿಯಾಗಿ ಮಾಡಾವಿನಲ್ಲಿರುವ ನಮ್ಮ ಮನೆಗೆ ಭೇಟಿ ಕೊಟ್ಟಿದ್ದರು. ತಂಡದಲ್ಲಿ ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್, ಜಬ್ಬಾರ್ ಸಮೋ ಮತ್ತಿತರರು ಇದ್ದರು. ಕೊನೆಯ ಕ್ಷಣದಲ್ಲಿ ಅವರು ಬರುವ ಸುದ್ದಿ ತಿಳಿದಿತ್ತು. ಅವರಿಗೆ ರಾತ್ರಿಯ ಊಟ ಆಗಿಲ್ಲ ಎಂದು ಅರಿತ ನಾವು ಅವರು ಹೇಳದಿದ್ದರೂ ಅದರ ತಯಾರಿಯಲ್ಲಿ ತೊಡಗಿದೆವು. ದಿಢೀರ್ ತಯಾರಿ. ಮನೆಯಲ್ಲಿ ಅಮ್ಮ ಬಿಟ್ಟರೆ ನಾವು ಗಂಡು ಮಕ್ಕಳು ಮಾತ್ರ. ಆಗ ನಮಗ್ಯಾರಿಗೂ ಮದುವೆ ಆಗಿರಲಿಲ್ಲ. ಅಮ್ಮನಿಗೂ ಸ್ವಲ್ಪ ವಯಸ್ಸಾಗಿತ್ತು. ಬೆಳ್ತಿಗೆ ಅನ್ನ, ಕುಚ್ಚಿಲಕ್ಕಿ ಗಂಜಿ, ಸಾರು, ಪಲ್ಯ, ಮಜ್ಜಿಗೆ, ಉಪ್ಪಿನಕಾಯಿ ಅಷ್ಟೇ. ಊಟ ಮಾಡುತ್ತಿರುವಾಗ ಎಲ್ಲರಿಗೂ ಹಸಿವೆಯಾಗಿದ್ದ ಹಾಗೆ ಕಂಡಿತ್ತು. ಆದರೆ ‘ನಮಗೆ ತೊದರೆ ಕೊಟ್ಟೆವೋ’ ಎಂಬ ಭಾವ ಅವರ ಮುಖದಲ್ಲಿತ್ತು. ಬಹುಶಃ ಮಾಡಿದ ಅಡುಗೆಯ ಪ್ರಮಾಣದಲ್ಲಿ ಕಡಿಮೆಯಾಗಿರಬಹುದೇನೋ ಎಂಬ ಸಂಶಯ ಜಬ್ಬಾರ್ ಸಮೋ ಅವರಿಗೆ ಆಗಿತ್ತೋ ಏನೋ. ಅವರು ಎರಡೆರಡು ಬಾರಿ ಕೇವಲ ಗಂಜಿಯನ್ನಷ್ಟೇ ಹಾಕಿಸಿಕೊಂಡರು. ನಮಗೆಲ್ಲಾ ಏನೂ ತೊಂದರೆಯಾಗಿಲ್ಲ ಎಂದು ನಾವು ಸ್ಪಷ್ಟಪಡಿಸಿದ ನಂತರವೇ ಅವರೆಲ್ಲಾ ನೆಮ್ಮದಿಯಾಗಿ ಊಟ ಮಾಡಿದ ಹಾಗೆ ಕಂಡಿತು. ಉಜಿರೆ ಅಶೋಕ ಭಟ್ಟರು ಯಾವಾಗಲಾದರೂ ಕಾಣಲು ಸಿಕ್ಕಿದಾಗ ಈ ಘಟನೆಯನ್ನು ನೆನಪಿಸಿಕೊಂಡು ಮುಗುಳು ನಗುತ್ತಾರೆ. ಹೀಗೆ ಅಂದು ಜಬ್ಬಾರ್ ಸಮೋ ಅವರಿಗೆ ಗಂಜಿ ಬಡಿಸಿದ ನೆನಪು ಬಿಟ್ಟರೆ ಮತ್ತೆ ಅವರೊಡನೆ ಮುಕ್ತವಾಗಿ ಮಾತನಾಡುವ ಅವಕಾಶ ಸಿಕ್ಕಿಲ್ಲ. ಆದರೆ ಆ ದಿನ ಜಬ್ಬಾರ್ ಸಮೋ ಅವರ ಸರಳ ವರ್ತನೆ, ಮನೆಯವರಂತೆಯೇ ಅವರು ನಡೆದುಕೊಂಡ ರೀತಿ ಮತ್ತು ಅವರ ಮುಗ್ಧ ಮನಸ್ಸು ಮರೆಯಲಾಗುವುದಿಲ್ಲ.
‘ರಸ ರಾಮಾಯಣ’ ಎಂಬ ಈ ಕೃತಿಯ ಲೇಖಕರು ಶ್ರೀ ಸುಬ್ರಾಯ ಸಂಪಾಜೆ ಅವರು. ಶ್ರೀಯುತರು ಪ್ರಸ್ತುತ ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರು ವಿ.ವಿ.ಯ ಸ್ನಾತಕೋತ್ತರ ಪಧವೀಧರರಾಗಿ ಕೆಲವು ವರ್ಷಗಳ ಕಾಲ ಉಡುಪಿ ಎಂ.ಜಿ.ಎಂ ಕಾಲೇಜು ಮತ್ತು ಕೋಟ ವಿವೇಕ ಕಾಲೇಜಿನಲ್ಲಿ ಉಪಾನ್ಯಾಸಕರಾಗಿಯೂ ಸೇವೆ ಸಲ್ಲಿಸಿದವರು. ಶ್ರೀಯುತರು ಯಕ್ಷಗಾನದ ಶ್ರೇಷ್ಠ ಭಾಗವತರಾಗಿಯೂ ಕಲಾಭಿಮಾನಿಗಳಿಗೆ ಪರಿಚಿತರು.
ಇದು ದ್ವಿತೀಯ ಮುದ್ರಣ (2018 ಆಗಸ್ಟ್). ಮೊದಲ ಮುದ್ರಣ 2018 ಮಾರ್ಚ್ ತಿಂಗಳಿನಲ್ಲಿ. ಮೊದಲ ಮುದ್ರಣದ ಪುಸ್ತಕಗಳೆಲ್ಲಾ ಓದುಗರ ಕೈ ಸೇರಿ ಕೇವಲ ಐದು ತಿಂಗಳಿನಲ್ಲಿ ಮರುಮುದ್ರಣಗೊಂಡಿತ್ತು. ‘ಪುರಾಣಯಾನ’ ಎಂಬುದು ಶ್ರೀ ಸುಬ್ರಾಯ ಸಂಪಾಜೆ ಅವರ ಮೊದಲ ಕೃತಿ. ‘ರಸ ರಾಮಾಯಣ’ ಎಂಬ ಈ ಕೃತಿಯ ಪ್ರಕಾಶಕರು ವಿಟ್ಲದ ಸಧಭಿರುಚಿ ಪ್ರಕಾಶನದ ಶಾಂತಾ ಎಸ್.ಎನ್. ಭಟ್ಟ ಅವರು. ಈ ಕೃತಿಗೆ ಮುನ್ನುಡಿಯನ್ನು ಬರೆದವರು ವಿದ್ವಾಂಸರೂ ಖ್ಯಾತ ತಾಳಮದ್ದಳೆ ಅರ್ಥಧಾರಿಗಳೂ ಆಗಿರುವ ವಿದ್ವಾನ್ ಕೆರೇಕೈ ಉಮಕಾಂತ ಭಟ್ಟ ಅವರು.
ಲೇಖಕ ಶ್ರೀ ಸುಬ್ರಾಯ ಸಂಪಾಜೆ ಅವರು ‘ಅರಿಕೆ’ ಎಂಬ ತಮ್ಮ ಬರಹದಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಸಹಕರಿಸಿದ ಮಹನೀಯರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ. ‘ಪ್ರಕಾಶಕರ ಮಾತು’ ಎಂಬ ಶೀರ್ಷಿಕೆಯ ಬರಹದಲ್ಲಿ ಶಾಂತಾ ಎಸ್. ಎನ್. ಭಟ್ಟ ಅವರು ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ. ಪುಸ್ತಕದ ಹೊರ ಆವರಣದಲ್ಲಿ ಲೇಖಕ, ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರ ಲೇಖನವನ್ನು ನೀಡಲಾಗಿದೆ. ಈ ಕೃತಿಯಲ್ಲಿ ಶ್ರೀ ಸುಬ್ರಾಯ ಸಂಪಾಜೆ ಅವರು ರಾಮಾಯಣದ ಏಳು ಕಾಂಡಗಳಿಗೆ ಸಂಬಂಧಿಸಿ ಸಾವಿರದ ಮುನ್ನೂರ ಎಪ್ಪತ್ತೇಳು ಪ್ರಶ್ನೆಗಳನ್ನು ಉತ್ತರ ಸಹಿತ ನೀಡಿರುತ್ತಾರೆ. ಉತ್ತಮ ಮಾಹಿತಿಗಳನ್ನೊಳಗೊಂಡ ಸಂಗ್ರಹ ಯೋಗ್ಯವಾದ ಕೃತಿಯಿದು. ಶ್ರೀ ಸುಬ್ರಾಯ ಸಂಪಾಜೆ ಅವರಿಗೆ ಅಭಿನಂದನೆಗಳು. ಸಾಹಿತ್ಯ ಸೇವೆ ಮತ್ತು ಕಲಾಸೇವೆಯು ನಿರಂತರವಾಗಿ ನಡೆಯುತ್ತಿರಲಿ ಎಂಬ ಶುಭ ಹಾರೈಕೆಗಳು.