Sunday, August 30, 2026
Home Blog Page 320

ನಿವಾತ ಕವಚರು 

0

‘ನಿವಾತ’ ಎಂದರೆ ವಾಯು; ಗಾಳಿ. ವಾಯುವೇ ಕವಚವಾಗಿ ಉಳ್ಳವರು ನಿವಾತ ಕವಚರು; ದಾನವರು. ಇವರು ಪ್ರಹ್ಲಾದನ ತಮ್ಮನಾದ ಸಂಹ್ಲಾದನ ಸುತರು. ಹಿರಣ್ಯನಗರಿಯವರು. ಪಾತಾಳವಾಸಿಗಳು. ಪಾರ್ಥನು ಇಂದ್ರಕೀಲ ಪರ್ವತಾಗ್ರದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿ ಪಾಶುಪತಾಸ್ತ್ರವನ್ನು ಪಡೆದ ಮೇಲೆ ಇಂದ್ರನ ಆಹ್ವಾನದ ಮೇರೆಗೆ ದೇವಲೋಕಕ್ಕೆ ಹೋಗುತ್ತಾನೆ. 

ಅರಸ ಕೇಳೈ ಪಾರ್ಥನಿದ್ದನು 

ವರುಷವೈದರೊಳಿಂದ್ರ ಭವನದ 

ಸಿರಿಯ ಸಮ್ಮೇಳದ ಸಗಾಢದ ಸೌಮನಸ್ಯದಲಿ (ಕು.ವ್ಯಾ ಅ.ಪ 9-1 ಪೂರ್ವಾರ್ಧ)

ಆಗೊಮ್ಮೆ ಇಂದ್ರನು, 

ಅರಿಗಳೆವಗೆ ನಿವಾತಕವಚರು ಸುರಪದವಿಸೋಪದ್ರವದ ನಿ ಷ್ಠುರವಿದೆಂದು ರಹಸ್ಯದಲಿ ನನಗೆಂದನಮರೇಂದ್ರ (12-2 ಪೂರ್ವಾರ್ಧ)ಎಂಬುದಾಗಿ ಹಿಂದಣ ಘಟನೆಯನ್ನು ಪಾರ್ಥ ಧರ್ಮರಾಯನಿಗೆ ಹೇಳಿದನು. 

‘ದಾನವರ ಮರ್ದಿಸಿ ದೇವಲೋಕವನೆವಗೆ ನಿರುಪದ್ರವದಲೆಡೆ ಮಾಡೆಂದನಮರೇಂದ್ರ’ (12-8) ದೇವತೆಗಳೊಂದಿಗೆ ಸೇರಿಕೊಂಡು ಅರ್ಜುನ ನಿವಾತಕವಚರೊಂದಿಗೆ ಯುದ್ಧ ಮಾಡುತ್ತಾನೆ. ಕೊನೆಗೆ, 

ತೊಡಚಿದನು ಬೊಮ್ಮಾಸ್ತ್ರವನು ಹುರಿ 

ಯೊಡೆದುದಸುರರು ಮರೆತವರನಿ 

ಕ್ಕಡಿಯ ಮಾಡಿತು ಬಂದುದಳಿವು ನಿವಾತಕವಚರಿಗೆ (ಅರಣ್ಯ ಪರ್ವ – 12-46)

(ನಿವಾತ ಕವಚರ ಉಪಾಖ್ಯಾನ ಗದುಗು ಭಾರತದ ಅರಣ್ಯ ಪರ್ವದ ಹನ್ನೆರಡನೆಯ ಸಂಧಿಯಲ್ಲಿ ವಿಸ್ತಾರವಾಗಿ ಬಂದಿದೆ. ಪೂರ್ವಭಾವಿಯಾಗಿ ಒಂಭತ್ತನೆಯ ಸಂಧಿಯನ್ನು ಓದಿದರೆ ಒಳ್ಳೆಯದು. ವ್ಯಾಸಭಾರತದ ವನಪರ್ವದ ಸಂಧಿ 168-86, 169-24, 170-39, 171-40, 172-35, ಇಲ್ಲಿ ವಿವರವಾಗಿ ಇವೆ)

ಲೇಖಕರು: ಡಾ। ಉಪ್ಪಂಗಳ ಶಂಕರನಾರಾಯಣ ಭಟ್, ಚಿನ್ಮಯಾ ಮಿಷನ್ ಕಾಲನಿ, ಅಂಚೆ ವಿದ್ಯಾನಗರ, ಕಾಸರಗೋಡು – 671123

ಯಕ್ಷಗಾನ ಪ್ರಸಂಗಕರ್ತರ ಮೇಲೆ ಕುಮಾರವ್ಯಾಸನ ಪ್ರಭಾವ (ಭಾಗ – 1)

0

ಶ್ರೀವನಿತೆಯರಸನೆ ವಿಮಲ ರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನ ನಿಕರ ದಾತಾರ
ರಾವಣಾಸುರ ಮಥನ ಶ್ರವಣ ಸು
ಧಾವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಯಣ

ಕುಮಾರವ್ಯಾಸ ಭಾರತದ ಈ ಪದ್ಯವನ್ನು ಪ್ರಸಂಗದ ಆರಂಭದಲ್ಲಿ ಭಾಗವತರಲ್ಲಿ ಕೆಲವರು ಅಪರೂಪವಾಗಿ ಹಾಡಿರಬಹುದು. ಕವಿ ಕುಮಾರವ್ಯಾಸ ಬರೆದ ಕರ್ಣಾಟ ಭಾರತ ಕಥಾಮಂಜರಿ ಅಥವಾ ಕುಮಾರವ್ಯಾಸ ಭಾರತವು ಈ ಪದ್ಯದಿಂದಲೇ ಆರಂಭವಾಗುತ್ತದೆ. ಕುಮಾರವ್ಯಾಸನ ಭಾಮಿನಿಗಳಿಗೂ ಯಕ್ಷಗಾನ ಪ್ರಸಂಗಗಳ ಭಾಮಿನಿಗಳಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಯಕ್ಷಗಾನ ಕವಿಗಳು ಕುಮಾರವ್ಯಾಸನಿಂದ ಪ್ರೇರಣೆ ಹೊಂದಿದಂತೆ ತೋರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಯಕ್ಷಗಾನ ಪ್ರಸಂಗಗಳಲ್ಲಿ ಕುಮಾರವ್ಯಾಸ ಭಾರತದ ಭಾಮಿನಿ ಪದ್ಯಗಳನ್ನು ಬಹುತೇಕ ಮೂಲ ಸ್ವರೂಪದಲ್ಲಿಯೇ ಬಳಸಿಕೊಂಡಿರುವುದೂ ಉಂಟು.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಕಥೆಯ ದಾರಿ ಒಂದೇ ರೀತಿಯದಾದರೂ ನಿರ್ದಿಷ್ಟ ಕವಿಗಳ ಸಾಹಿತ್ಯವು ಕೃತಿ ರಚನೆಯ ಸಂದರ್ಭದಲ್ಲಿ ಪ್ರಭಾವ ಬೀರುವುದನ್ನು ಅಲ್ಲಗಳೆಯಲಾಗದು. ನವರಸಗಳ ಮತ್ತು ಅವುಗಳ ಅಂಗಗಳಾದ ಭಾವಗಳ ನಿರೂಪಣೆಯಲ್ಲಿ ಕುಮಾರವ್ಯಾಸನು ಅಸಾಧಾರಣ ಶಕ್ತಿಯನ್ನು ಹೊಂದಿದ್ದರೂ ಅವನ ಕಾವ್ಯವು ಅತಿ ಸುಂದರ, ಸರಳ ಹಾಗೂ ಸಾಮಾನ್ಯರಿಗೂ ಅರ್ಥ ಮಾಡಿಕೊಳ್ಳಲು ಕಷ್ಟವಲ್ಲದ ನಿರೂಪಣಾ ಶೈಲಿಯಾದದ್ದರಿಂದ ಅವನ ಕಾವ್ಯವು ಇತರ ಕವಿಗಳ ಸಾಹಿತ್ಯದ ಮೇಲೆ ಪ್ರಭಾವವನ್ನು ಬೀರಿದುವು ಎಂದರೆ ಅತಿಶಯೋಕ್ತಿಯಾಗಲಾರದು. ಇನ್ನು ಯಕ್ಷಗಾನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಯಕ್ಷಗಾನ ಪ್ರಸಂಗ ಸಾಹಿತ್ಯದ  ರಚನೆಯಲ್ಲಿಯೂ ಕೂಡಾ ಕುಮಾರವ್ಯಾಸ ಭಾರತ ಪ್ರಭಾವ ಬೀರಿರುವುದನ್ನು ಕಾಣಬಹುದು.

ಮಹಾಭಾರತ ಕಥೆಯ ಅನೇಕ ಯಕ್ಷಗಾನ ಪ್ರಸಂಗಗಳನ್ನು ಅದರಲ್ಲೂ ವಿಶೇಷವಾಗಿ ಭಾಮಿನೀ ಪದ್ಯಗಳನ್ನು ಅವಲೋಕಿಸಿದಾಗ ನಮಗೆ ಈ ಅಂಶ ಮನದಟ್ಟಾಗುತ್ತದೆ. ಉದಾಹರಣೆಗೆ ಕುಮಾರವ್ಯಾಸ ಭಾರತದ ಕರ್ಣ ಪರ್ವದಲ್ಲಿ ಬರುವ ಪದ್ಯವನ್ನು ಗಮನಿಸಿ.
ಏನು ಸಾರಥಿ ಸರಳು ಪಾಂಡವ
ಸೇನೆಯನು ಗೆಲಲಹುದೆ ಪಾರ್ಥನ
ಮಾನಿನಿಗೆ ವೈಧವ್ಯ ದೀಕ್ಷಾ ವಿಧಿಯ ಕೊಡಲಹುದೆ
ಆನಲಮ್ಮುವರುಂಟೆ ನಿನಗಿದು
ಸಾನುರಾಗವೆ ಹೇಳೆನಲು ರವಿ
ಸೂನುವಿನ ರೌದ್ರಾಸ್ತ್ರವನು ಹೊಗಳಿದನು ಮಾದ್ರೇಶ
ಇದೇ ಸಂದರ್ಭ, ಯಕ್ಷಗಾನದಲ್ಲಿ ಕರ್ಣಾರ್ಜುನ ಪ್ರಸಂಗದಲ್ಲಿ ಕರ್ಣನು ಶಲ್ಯನಿಗೆ ಹೀಗೆ ಹೇಳುತ್ತಾನೆ.
ಏನು ಸಾರಥಿ ಸರಳು ಪಾಂಡವ | ಸೇನೆಯನು  ಗೆಲಲಹುದೆ ಪಾರ್ಥನ | ಮಾನಿನಿಗೆ ವೈಧವ್ಯ ದೀಕ್ಷಾ ವಿಧಿಯ ಕೊಡಬಹುದೆ || ಆನಲಮ್ಮುವರುಂಟೆ ನಿನಗಿದು | ಸಾನುರಾಗವೆ ಪೇಳೆನಲು ರವಿ| ಸೂನುವಿನ ಮೊಗನೋಡಿ ಮಾದ್ರಾಧೀಶ ನಿಂತೆಂದ ||
ಇಲ್ಲಿ ಹೆಚ್ಚು ಕಡಿಮೆ ಒಂದೇ ರೀತಿ ಇದೆ. ಕೆಲವೇ ಶಬ್ದಗಳ ಅಂತರ ಅಷ್ಟೇ.

(ಮುಂದುವರಿಯುವುದು) 

ಕುರಿಯ ಪ್ರತಿಷ್ಠಾನದಿಂದ ಇಂದು ತಾಳಮದ್ದಳೆ – ಶಾಪಾನುಗ್ರಹ 

ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇವರು ಆಯೋಜಿಸುತ್ತಿರುವ ತಾಳಮದ್ದಳೆ ಸಪ್ತಾಹದ ನಾಲ್ಕನೆಯ ತಾಳಮದ್ದಳೆ ಇಂದು ಮಂಗಳವಾರ, 15.06.2021ರಂದು ರಾತ್ರಿ 7ರಿಂದ 9.30ರ ವರೆಗೆ ನಡೆಯಲಿದೆ. ನೇರಪ್ರಸಾರ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ವಿವರ ಕೆಳಗಡೆ ಇದೆ. 

‘ಸವ್ಯಸಾಚಿ’ ಎಂದರೇನು: ಮತ್ತು ಯಾರು?

0

ಸಂಸ್ಕೃತದಲ್ಲಿ ‘ಸವ್ಯ’ (ನಾ) ಎಂದರೆ ಎಡಭಾಗ. ಅಪಸವ್ಯ (ನಾ) ಎಂದರೆ ದಕ್ಷಿಣ, ಬಲಭಾಗ ಎಂದರ್ಥ. ವ್ಯಾಸಭಾರತದ ವಿರಾಟಪರ್ವದ 42,43,44ನೆಯ ಅಧ್ಯಾಯಗಳಲ್ಲಿ ಉತ್ತರ ಗೋಗ್ರಹಣ ವೃತ್ತಾಂತದ ಸಂದರ್ಭ ಇತ್ಯಾದಿ ವಿವರಗಳಿವೆ. ಉತ್ತರಕುಮಾರನು ಬೃಹನ್ನಳೆಯಲ್ಲಿ ಪಾಂಡವರ ಅಸ್ತ್ರ-ಶಸ್ತ್ರ ಕುರಿತಾದ,ಅವರ ಪರಿಚಯದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾನೆ. ಅಂತೆಯೇ ಪಾರ್ಥನ ದಶನಾಮಗಳನ್ನು ಮತ್ತು ಆ ಹೆಸರುಗಳು ಬಂದ ಬಗೆಯನ್ನೂ ಪ್ರಶ್ನಿಸುತ್ತಾನೆ. 

ಉ – ಕಿರೀಟೀ ನಾಮ ಕೇನಾಸಿ ಸವ್ಯಸಾಚೀ ಕಥಮ್ ಭವಾನ್ (44-20) 

ಪಾ – ಉಭೌ ಮೇ ದಕ್ಷಿಣೌ ಪಾಣೀ ಗಾಂಡೀವಸ್ಯ ವಿಕರ್ಷಣೇ । ತೇನ ದೇವ ಮನುಷ್ಯೇಷು  ಸವ್ಯಸಾಚೀತಿ ಮಾ ವಿದುಃ 

“ಎರಡು ಕೈಗಳಲ್ಲಿ ಗಾಂಡೀವ ಧನುಸ್ಸನ್ನು ನಾನು ಕರ್ಷಿಸುವುದರಿಂದ, ದೇವತೆಗಳ ಮತ್ತು ಮನುಷ್ಯರ ಮಧ್ಯೆ ನಾನು ಸವ್ಯಸಾಚೀ ಎಂದು ತಿಳಿದಿದ್ದಾರೆ” 

ಗೀತೆಯಲ್ಲಿ ‘ವಿಶ್ವರೂಪದರ್ಶನ’ವೆಂಬ ಹನ್ನೊಂದನೆಯ ಅಧ್ಯಾಯದಲ್ಲಿ ಕೃಷ್ಣನು, ‘ಮಯೈವತೇ ನಿಹತಾಃ ಪೂರ್ವಮೇವ, ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್ (11-33) ಎಂದಿದೆ.

ಕುಮಾರವ್ಯಾಸನ ;ಕರ್ಣಾಟ ಭಾರತ ಕಥಾ ಮಂಜರಿ’ಯ ವಿರಾಟಪರ್ವದಲ್ಲಿ ಉತ್ತರಕುಮಾರನ ಪ್ರಶ್ನೆ – ನಿಮ್ಮ ದಶ ನಾ । ಮಾಳಿಯನು ಪೇಳ್ದಲ್ಪಮತಿಯನು ತಿಳುಹಬೇಕೆಂದ – (6-45) 

ಎನಲು ನಸುನಗುತರ್ಜುನನು ಫಲು 

ಗುಣ ಧನಂಜಯ ಜಿಷ್ಣು ಸಿತ ವಾ 

ಹನ ವಿಜಯ ಭೀಭತ್ಸು ಪಾರ್ಥ ಕಿರೀಟಿ ಮೊದಲಾದ 

ವಿನುತ ಕೃಷ್ಣನು ಸವ್ಯಸಾಚಿಗ 

ಳೆನಿಪ ಪೆಸರನು ತಿಳುಹಿ ಪುನರಪಿ 

ತನಗೆ ಬಂದಂದವನು ವಿಸ್ತರವಾಗಿ ವಿರಚಿಸಿದ (6-46)

ಪಾರ್ಥನು ಎಡಗೈಯಿಂದ ಬಾಣವನ್ನು ಸೆಳೆದು ಬಿಡುವಾಗ ಬಲಗೈಯಲ್ಲಿ ಧನುಸ್ಸನ್ನೂ, ಬಲಗೈಯಿಂದ ಬಾಣವನ್ನು ಆಕರ್ಣಾಂತ ಸೆಳೆಯುವಾಗ ಎಡಗೈಯಲ್ಲಿ ಧನುಸ್ಸನ್ನು ಹಿಡಿದು ಅವಿಶ್ರಾಂತ ದುಡಿಯಬಲ್ಲ ಅತಿರಥ. (ವ್ಯಾಸರ ಪ್ರಕಾರ ಒಬ್ಬನೇ ವೀರ ಅಸಂಖ್ಯಾತ ಸೈನಿಕರನ್ನು ಎದುರಿಸಿ ಹೋರಾಡಬಲ್ಲವನು) ಪಾರ್ಥ ಎಡಚ; ಬಲಚ. 

ಯಕ್ಷಗಾನ ಕಲಾವಿದರು ಸವ್ಯಸಾಚಿಗಳಲ್ಲ! 

ಲೇಖಕರು: ಡಾ। ಉಪ್ಪಂಗಳ ಶಂಕರನಾರಾಯಣ ಭಟ್, ಚಿನ್ಮಯಾ ಮಿಷನ್ ಕಾಲನಿ, ಅಂಚೆ ವಿದ್ಯಾನಗರ, ಕಾಸರಗೋಡು – 671123

ಪಾಂಡವರ ಸೂತರು ಯಾರ್ಯಾರು?

0

ಪಾಂಡವರ ಸೂತರ ಕುರಿತು ಕುಮಾರವ್ಯಾಸ ಭಾರತದ ಸಭಾಪರ್ವದಲ್ಲಿ ಮಾಹಿತಿ ಸಿಗುತ್ತದೆ. ರಾಜಸೂಯ ಯಾಗದ ಸಂದರ್ಭದಲ್ಲಿ ಅವರು ಮಹತ್ತರ ಪಾತ್ರವನ್ನು ವಹಿಸಿದ್ದಾರೆ. 

ಧರಣಿಪತಿ ಕೇಳ್ ಶೂದ್ರ ಮೊದಲಾ 

ಗಿರೆ ಸಮಸ್ತ ಪ್ರಜೆ ವಿಧಾವಂ 

ತರಿಗೆ ಭೋಜನ ಗಂಧ ಮಾಲ್ಯಾಂಬರ  ವಿಲೇಪನದ 

ಉರು ನಿಯೋಗಿಗಳಿಂದ್ರಸೇನನು 

ವರ ವಿಶೋಕನು ರುಗ್ಮನತಿ ಬಂ 

ಧುರ ಸಮೀರ ಪತಾಕಸೇನನು ಸೂತರೈವರಿಗೆ (ಕು,ವ್ಯಾ. ಸ,ಪ. 7-19)

ಧರ್ಮರಾಯ – ಇಂದ್ರಸೇನ. ಭೀಮಸೇನ- ವಿಶೋಕ. ಪಾರ್ಥ-ರುಗ್ಮ. ನಕುಲ-ಸಮೀರ. ಸಹದೇವ- ಪತಾಕಸೇನ. ಈ ಇಂದ್ರಸೇನನೇ ರಾಜಸೂಯಯಾಗದ ಕುರಿತು ಸಮಾಲೋಚಿಸಲು ಕೃಷ್ಣನನ್ನು ಕರೆದುಕೊಂಡು ಬರಲು ದ್ವಾರಕೆಗೆ ಹೋದವನು. 

ಕಳುಹಿದನು ಸಾರಥಿಯನಾ ರಥ 

ಕೆಲವು ದಿವಸಕೆ ಕೃಷ್ಣಭವನ 

ಸ್ಥಳದ ಹೊರಬಾಹೆಯಲಿ ಚಾಚಿತು ಚಪಳಗಮನದಲಿ (ಸ.ಪ. 2-6, ಪೂರ್ವಾರ್ಧ)


ಎಂದು ವಸುದೇವಾದಿ ಯಾದವ 

ವೃಂದವನು ಬಲಭದ್ರರಾಮನ 

ಹಿಂದಿರಿಸಿ ಬಳಿಕಿಂದ್ರಸೇನನ ಕೂಡೆ ವೊಲವಿನಲಿ 

ಬಂದನಿದ್ರಪ್ರಸ್ಥ ಪಟ್ಟಣ 

ಕಂದು ವೊಸಗೆಯ ಗುಡಿಯ ತೋರಣ 

ದಿಂದ ಕನ್ನಡಿ ಕಳಶದಲಿ ಕೊಂಡಾಡಿದರು ಹರಿಯ (ಸ.ಪ. 2-8)
ಭೀಮಸೇನನು ಬಿಲ್ಲನ್ನು ಹಿಡಿದು (ಸುಪಾರ್ಶ್ವ) ಕಾಳಗ ಮಾಡಿದಾಗ ಸಾರಥಿಯಾದ ವಿಶೋಕನು ಮಹತ್ತರ ಪಾತ್ರವನ್ನು ವಹಿಸಿದ ಮಾಹಿತಿ ಕುಮಾರವ್ಯಾಸ ಭಾರತದಲ್ಲೇ ಬರುತ್ತದೆ. ನೋಡಿ ದ್ರೋಣಪರ್ವ 12-5; 13-32 ಮತ್ತು ಈ ಮಧ್ಯೆ ಅಲ್ಲಲ್ಲಿ ಬರುತ್ತದೆ. ಅಂತೆಯೇ ಕರ್ಣಪರ್ವದ 12-23, 13-8, 18-19ರಲ್ಲೂ ಬಂದಿದೆ. 

ಲೇಖಕರು: ಡಾ। ಉಪ್ಪಂಗಳ ಶಂಕರನಾರಾಯಣ ಭಟ್, ಚಿನ್ಮಯಾ ಮಿಷನ್ ಕಾಲನಿ, ಅಂಚೆ ವಿದ್ಯಾನಗರ, ಕಾಸರಗೋಡು – 671123

ದ್ವಾಪರಯುಗದ ದ್ವಾರಕಾ ನಗರ ಈಗಲೂ ಇದೆಯೇ? ವೀಡಿಯೊ ನೋಡಿ

ಪುರಾಣದ ಪುಣ್ಯ ನಗರ ದ್ವಾರಕಾ ಈಗಲೂ ಇದೆಯೇ? ಇದ್ದಾರೆ ಅದು ಎಲ್ಲಿದೆ ಎಂದು ತಿಳಿಯೋಣ. ವೀಡಿಯೊ ನೋಡಿ.

ಕರ್ನಾಟಕದಲ್ಲಿ ಇಳಿಕೆ ಕಂಡ ಕೊರೋನಾ ಕೇಸ್ – ಇಂದು 8249 – ಜಿಲ್ಲಾವಾರು ಪಟ್ಟಿ ಇಲ್ಲಿದೆ. 

ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಕೆಯನ್ನು ಕಾಣುತ್ತಿದೆ. ಕರ್ನಾಟಕ ರಾಜ್ಯದಲ್ಲಿ (11.06.2021) ಕೊರೋನಾ ದೃಢಪಟ್ಟವರ ಅಂಕಿಸಂಖ್ಯೆಗಳ ವಿವರ ಇಲ್ಲಿದೆ.

ಯಕ್ಷಕಲಾಕುಮುದ ಎಂ. ಕೆ. ರಮೇಶಾಚಾರ್ಯ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಆಲ್ಮನೆ ಗ್ರಾಮದ ಮಂಗಳಗಾರಿನಲ್ಲಿ ಕೃಷ್ಣಾಚಾರ್ ಮತ್ತು ರುಕ್ಮಿಣಿಯಮ್ಮ ದಂಪತಿಗಳ ಪುತ್ರನಾಗಿ 30-10-1949ರಲ್ಲಿ ಜನಿಸಿದ ಎಂ ಕೆ ರಮೇಶಾಚಾರ್ಯ ಯಕ್ಷಕಲಾದ್ರಿಯ ಸಾಧನಾಶಿಖರವನ್ನು ಏರಿ ವಿನಯಧ್ವಜವನ್ನು ಜೊತೆಗೇ ಹೊತ್ತೋಯ್ದು ತನಗಿಂತಲೂ ಎತ್ತರಕ್ಕೆ ಹಾರಿಸಿದ ಸುಜನ.
ಎಂ ಕೆ ಯವರ ಯಕ್ಷಬಾಲ್ಯ:
ತಂದೆ ಕೃಷ್ಣಾಚಾರ್ ಯಕ್ಷಗಾನ ಕಲಾವಿದ ಹಾಗು ಮೇಳವೊಂದರ ವ್ಯವಸ್ಥಾಪಕ. ತಂದೆಯ ಸೋದರ ನಾಗಪ್ಪಾಚಾರ್ ಉತ್ತಮ ಮದ್ದಲೆಗಾರ, ಅಣ್ಣ ನರಸಿಂಹಾಚಾರ್ (ನಾಗಪ್ಪಾಚಾರ್ ಅವರ ಮಗ)ಭಾಗವತರು ಮತ್ತು ಮದ್ದಲೆವಾದಕರು. ಎಳವೆಯಲ್ಲಿಯೇ  ಸಹಜವಾಗಿಯೇ ಇವರಿಗೆ ಯಕ್ಷಗಾನದ ಒಲವು ಮೂಡಿತು. ಮನೆಯ ಹಿರಿಯರಿಂದ ಒಂದಷ್ಟು ಕಲಿತು ಮಹಿಷಿ ಮೇಳದಲ್ಲಿ ಕೋಡಂಗಿ ವೇಷದಿಂದಲೇ ರಂಗಪ್ರವೇಶವಾಯಿತು. ಅಲ್ಲಿಂದ ಹಂತ ಹಂತವಾಗಿ ಬೆಳೆಯುತ್ತಾ ಬಂದರು. ಅನಂತರ ಶೃಂಗೇರಿ ಸಮೀಪದ ಕಿಗ್ಗ ಮೇಳ ಸೇರಿದರು. ಅಲ್ಲಿ ಗುಂಡುಮನೆ ರಾಮಯ್ಯ, ಹಳ್ಳದಾಚೆ ಪುಟ್ಟಶಾಮಯ್ಯ ಮತ್ತು ವೆಂಕಟರಮಣಯ್ಯ, ಕಿಗ್ಗ ಚಂದ್ರಶೇಖರ ಭಟ್ರು ಮೊದಲಾದವರಿಂದ ಸೂಕ್ತ ಮಾರ್ಗದರ್ಶನ ದೊರಕಿತು. ಅತಿ ಶೀಘ್ರಕಾಲದಲ್ಲಿಯೇ ವೇಷದ ಸ್ಥಾನದಲ್ಲಿ ಔನ್ನತ್ಯವನ್ನು ಸಾಧಿಸಿದರು. ಬಳಿಕ ಮಂದರ್ತಿ ಮೇಳ ಸೇರಿದರು. ಅಲ್ಲಿ ಗುರು ವೀರಭದ್ರನಾಯ್ಕರೇ ಗುರುಗಳಾಗಿ ದೊರಕಿದರು. ಪುಂಡು ವೇಷಗಳಾದ ಕುಶ-ಲವ-ಬಬ್ರುವಾಹನ ಮೊದಲಾದ ಪಾತ್ರಗಳನ್ನು ಮಾಡಿ ಹಿರಿಯ ಕಲಾವಿದರಿಂದಲೂ ಪ್ರೇಕ್ಷಕರಿಂದಲೂ ಮೆಚ್ಚುಗೆಗೆ ಪಾತ್ರರಾದರು. ಪೀಠಿಕೆ ಸ್ತ್ರೀವೇಷ, ರತಿ, ಕನಕಾಂಗಿ ಮೊದಲಾದ ಪಾತ್ರಮಾಡುತ್ತಾ ಸ್ತ್ರೀಪಾತ್ರದಲ್ಲಿಯೂ ಪರಿಣತಿಯನ್ನು ಪಡೆದರು. ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಬೇಕೆಂಬ ವೀರಭದ್ರನಾಯ್ಕರ ಮಾತನ್ನು ಈಗಲೂ ಸ್ಮರಿಸುತ್ತಾರೆ ಎಂ ಕೆ ಯವರು.

ಯಕ್ಷಕನ್ನಿಕೆ ರಮೇಶಾಚಾರ್ಯ:
1969ರಲ್ಲಿ ಧರ್ಮಸ್ಥಳ ಮೇಳಕ್ಕೆ ಸೇರಲು ಹೋದರು.  ರತ್ನವರ್ಮ ಹೆಗ್ಗಡೆಯವರಿಗೆ ಇವರ ತೆಂಕಿನ ನಾಟ್ಯ ಇನ್ನಷ್ಟು ಪಳಗಬೇಕೆಂದು ಅನ್ನಿಸಿತು. ಆಗ ಕುರಿಯ ವಿಠಲಶಾಸ್ತ್ರಿಗಳು ಇವನನ್ನು ನಾನು ಸ್ತ್ರೀವೇಷಕ್ಕೆ ಸಿದ್ದಪಡಿಸುತ್ತೇನೆಂದು ಹೇಳಿ ಮೇ 28, 1969ರಲ್ಲಿ ತನ್ನ ಮನೆಗೆ ಕರೆದುಕೊಂಡು ಹೋದರು. ಯಕ್ಷಗಾನ ಗುರುಕುಲವೆನಿಸಿದ ಕುರಿಯದಲ್ಲಿ ಮಳೆಗಾಲದಲ್ಲಿ ಅಭ್ಯಾಸ. ಕುರಿಯ ಶಾಸ್ತ್ರಿಗಳು ಊಟ ಬಟ್ಟೆ ಕೊಟ್ಟು ಮುಂದಿನ ತಿರುಗಾಟಕ್ಕೆ ಧರ್ಮಸ್ಥಳ ಮೇಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ಮಹಾರಥಿ ಕರ್ಣದ ಕುಂತಿ, ಕ್ಷೇತ್ರ ಮಹಾತ್ಮೆಯ ಮಾಲತಿ, ನೇತ್ರಾವತಿ ಮೊದಲಾದ ಪಾತ್ರ ಮಾಡಿದರು. ಅಲ್ಲಿ ಕಡತೋಕ ಚಿಪ್ಪಾರು, ನಿಡ್ಲೆ, ಪುತ್ತೂರು ನಾರಾಯಣ ಹೆಗ್ಡೆ, ಎಂಪೆಕಟ್ಟೆ, ಕಡಬ ಶಾಂತಪ್ಪ, ಪಾತಾಳ ವೆಂಕಟರಮಣ ಭಟ್ರು, ಕುಂಬ್ಳೆ, ಗೋವಿಂದ ಭಟ್ಟರಂತಹ ಕಲಾವಿದರ ಒಡನಾಟ ಇವರನ್ನು ಮತ್ತಷ್ಟು ಪಳಗಿಸಿತು. ಮೂರು ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನೆಡೆಸಿದರು. 


ಅನಂತರ ವರದರಾಜ ಪೈಗಳ ಸುರತ್ಕಲ್ ಮೇಳ ಸೇರಿದರು. ಶೇಣಿ, ದೊಡ್ಡಸಾಮಗ, ತೆಕ್ಕಟ್ಟೆ, ಕೊಕ್ಕಡ ಮೊದಲಾದ ಯಕ್ಷದಿಗ್ಗಜರ ಸಂಗಮದ ಗಜಮೇಳವದು. ಅಲ್ಲಿ ಒಮ್ಮೆ  ಪಾರಿಜಾತದ ಸತ್ಯಭಾಮೆ ಮಾಡಬೇಕಾದ ಕಲಾವಿದ ಬಾರದೆ ಇದ್ದಾಗ ಸಖಿ ಮಾಡುವ ಇವರಲ್ಲಿ ಆ ಪಾತ್ರ ಮಾಡಿಸಿದರು ಅಗರಿಯವರು. ಅದು ಒಳ್ಳೆಯ ಕೀರ್ತಿಯನ್ನು ತಂದುಕೊಟ್ಟಿತು. ಅವರ ನಿಜವಾದ ಪ್ರತಿಭೆಯ ಅನಾವರಣವೂ ಆಯಿತು. ಇವರ ಲಾಲಿತ್ಯಪೂರ್ಣ ನಾಟ್ಯ, ಶ್ರುತಿಬದ್ಧ-ಕಾವ್ಯಾತ್ಮಕ-ಪಾತ್ರೋಚಿತ-ಪ್ರಸಂಗ,ಪುರಾಣಾಧಾರಿತ- ಅಸ್ಖಲಿತವಾದ ವಾಗ್ವೈಖರಿ, ಪಾತ್ರನಿರ್ವಹಣಾ ಕೌಶಲ ಮೊದಲಾದ ಗುಣಗಳಿಂದ ಶೇಣಿಯವರೊಟ್ಟಿಗೆ ಪಾತ್ರಮಾಡುವ ಯೋಗ ಲಭಿಸಿತು. ಅವರ ರಾವಣ-ಹರಿಶ್ಚಂದ್ರ-ವಾಲಿ-ನಳ-ವಿಷ್ಣುವರ್ಧನ-ಉದಯನ ಪಾತ್ರಗಳಿಗೆ ಮಂಡೋದರಿ-ಚಂದ್ರಮತಿ- ತಾರೆ- ದಮಯಂತಿ- ಶಾಂತಲೆ – ವಾಸವದತ್ತೆ ಮೊದಲಾದ ಪಾತ್ರಗಳನ್ನು ಮಾಡಿ ಶೇಣಿಯವರ ಮೆಚ್ಚುಗೆಗೂ ಪಾತ್ರರಾದರು. ತೆಕ್ಕಟ್ಟೆಯವರ ನಂದಿಶೆಟ್ಟಿ ಇವರ ಆಲೋಲಿಕೆ ಬಹಳ ಪ್ರಸಿದ್ಧಿ ಪಡೆದಿತ್ತು. ಶೇಣಿಯವರು ರಜೆಯಲ್ಲಿದ್ದಾಗ ಶನೀಶ್ವರ ಮಹಾತ್ಮೆಯಾದರೆ ಇವರದ್ದೇ ವಿಕ್ರಮಾದಿತ್ಯನ ಪಾತ್ರ. ಆಗ ಸತತ ಸ್ತ್ರೀವೇಷ ಮಾಡುತ್ತಿದ್ದರೂ ವಿಕ್ರಮನ ಪಾತ್ರ ಮಾಡುತ್ತಿದ್ದುದು ಇವರ ಪರಿಪೂರ್ಣತೆಗೊಂದು ಸಾಕ್ಷಿ. ಅಗರಿ,ಪದ್ಯಾಣ, ಅಡೂರು,ಕಡಬ ನಾರಾಯಣಾಚಾರ್ಯರ ಹಿಮ್ಮೇಳ ಮತ್ತು ಸಮರ್ಥ ಮುಮ್ಮೇಳ ಇವರ ಪಾತ್ರಪೋಷಣೆಗೆ ಮತ್ತಷ್ಟು ಸಹಕಾರಿಯಾಯಿತು. ಹೀಗೆ ಮೊದಲು 19ವರ್ಷ ಮತ್ತೆ 5 ವರ್ಷ ಒಟ್ಟು 24ವರ್ಷ ಸುರತ್ಕಲ್ ಮೇಳದ ತಿರುಗಾಟದಲ್ಲಿ ಯಕ್ಷಕನ್ನಿಕೆಯಾಗಿ ಕಲಾಭಿಮಾನಿಗಳ ಹೃದಯ ಸಿಂಹಾಸನ ಏರಿದರು.


ಉಭಯ ತಿಟ್ಟುಗಳ ಪ್ರವೀಣ:
19ವರ್ಷಗಳ ದೀರ್ಘಕಾಲದ ಸುರತ್ಕಲ್ ಮೇಳದ ತಿರುಗಾಟದ ಬಳಿಕ ಬಡಗಿನತ್ತ ಮತ್ತೆ ಮುಖಮಾಡಿದರು ಎಂ ಕೆ ಯವರು. ಮುಂದಿನ ತಿರುಗಾಟಕ್ಕೆ ಸಾಲಿಗ್ರಾಮ ಮೇಳಕ್ಕೆ ಎಂದು ಕಾಳಿಂಗ ನಾವಡರು ಇದ್ದೇ ಮಾತಾಯಿತು. ಆದರೆ ಮೇಳ ತಿರುಗಾಟ ಆರಂಭವಾಗುವಾಗ ನಾವಡರೇ ಇರಲಿಲ್ಲ. ಆ ವರ್ಷ ಜಯಭೇರಿ ಪ್ರದರ್ಶನ ಮೇಳಕ್ಕೇ ಒಂದು ಚಾಲೆಂಜ್ ಆಗಿತ್ತು. ನಾವಡರು ದಿವಂಗತರಾದ ಬಳಿಕ ಅನೇಕರು ಮೇಳದ ಟೆಂಟ್ ಕಡೆಗೆ ತಲೆಹಾಕುವುದನ್ನೇ ಬಿಟ್ಟಿದ್ದರು.  ಶಬರಾಯ,ಯಾಜಿ, ಕೊಂಡದಕುಳಿ ಮೊದಲಾದ ಪ್ರಸಿದ್ಧ ಕಲಾವಿದರಿದ್ದರು. ಮೇಘಮಯೂರಿ, ಶೃಂಗ ಸಾರಂಗ ಎಂಬ ಪ್ರಸಂಗಗಳು ಯಶಸ್ವೀ ಪ್ರದರ್ಶನ ಕಾಣುವಲ್ಲಿ ಸ್ವಾರಸ್ಯಕರವಾದ ಸಂಭಾಷಣೆಯ ಮಾರ್ಗದರ್ಶನ ನೀಡುತ್ತ ಪಾತ್ರಧಾರಿಯಾಗಿಯೂ ಯಶಸ್ವಿಯಾದ ಎಂಕೆಯವರ ಕೊಡುಗೆ ಉಲ್ಲೇಖನೀಯ. ಪ್ರೇಮಪಲ್ಲವಿ ಎಂಬ ಪ್ರಸಂಗ ರಚಿಸಿ ಅದೂ ಉತ್ತಮ ಪ್ರದರ್ಶನ ಕಂಡಿತು. ಮತ್ತೆ ಐದು ವರ್ಷ ಸುರತ್ಕಲ್ ಮೇಳದ ತಿರುಗಾಟ. ಅನಂತರ ಪೆರ್ಡೂರು ಮೇಳದ ತಿರುಗಾಟದಲ್ಲಿ ಸಿದ್ದಕಟ್ಟೆ ಚೆನ್ನಪ್ಪ ಶೆಟ್ರು ಮತ್ತು ಇವರ ಜೋಡಿ ಸಾಮಾಜಿಕ ಪ್ರಸಂಗಗಳಲ್ಲಿಯೂ ಒಂದು ಪೌರಾಣಿಕ ಚೌಕಟ್ಟನ್ನು ಹಾಕಿಕೊಡುತ್ತಿತ್ತು. ಅನಂತರ ನೀಲಾವರ, ಸೀತೂರು, ತಳಕಲ, ಸುಂಕದಕಟ್ಟೆ ಮೊದಲಾದ ಮೇಳಗಳಲ್ಲಿ ತಿರುಗಾಟ. ಅತಿಥಿ ಕಲಾವಿದರಾಗಿ ಬಾಳೆಹೊಳೆ ಮೇಳ, ಹೊನ್ನವಳ್ಳಿ ಮೊದಲಾದ ಅನೇಕ ಸಂಘ ಸಂಸ್ಥೆಗಳಲ್ಲಿ ಪಾತ್ರಧಾರಿಯಾಗಿ, ಮಾರ್ಗದರ್ಶಕರಾಗಿ, ಪ್ರಾಚಾರ್ಯರಾಗಿ ಕಲಾಸೇವೆ ಮಾಡಿದರು.

ಎಂ ಕೆ ಯವರು ಮಾಡದ ಸ್ತ್ರೀವೇಷಗಳಿಲ್ಲ. ಪಾಪಣ್ಣವಿಜಯದ ಗುಣಸುಂದರಿಯ ಪಾತ್ರಕ್ಕೆ ಒಂದು ಅದ್ಭುತ ಮೆರಗು ನೀಡಿದವರು ಇವರು. ಭಿನ್ನ ಸ್ವಭಾವದ ಪಾತ್ರಗಳನ್ನು ಒಂದೇ ರಾತ್ರಿಯಲ್ಲಿ ಮಾಡಿ ಮೊದಲ ಪಾತ್ರ ಮಾಡಿದ್ದು ಇವರೆಯಾ? ಎನ್ನುವಷ್ಟರ ಮಟ್ಟಿಗೆ ಆ ವ್ಯತ್ಯಾಸ ಕಾಣುಸುತ್ತಿದ್ದರು. ಬ್ರಹ್ಮಕಪಾಲದ ಶಾರದೆ ಮಾಡಿ ಬೆಳಗಿನ ಜಾವ ಶಶಿಪ್ರಭೆ, ಯೋಜನಗಂಧಿ ಮಾಡಿ ಮೀನಾಕ್ಷಿ ಹೀಗೆ ಪಾತ್ರ ಭಾವವೈವಿಧ್ಯ ವೇಧ್ಯವಾಗುತ್ತದೆ ಅವರ ವೇಷಗಳಲ್ಲಿ. ಬೇಡರ ಕಣ್ಣಪ್ಪದ ರಾಣಿಯನ್ನು, ಪಂಚವಟಿಯ ಮಾಯಾಶೂರ್ಪಣಕಿಯನ್ನು ಎಷ್ಟು ಚೆನ್ನಾಗಿ ಮಾಡಬಲ್ಲರೋ ಅಷ್ಟೆ ಚೆನ್ನಾಗಿ ಚಂದ್ರಮತಿಯಾಗಿ, ಸುಭದ್ರೆಯಾಗಿ ಕರುಣಾರಸಾಮೃತವನ್ನು ಉಣ್ಣಿಸಬಲ್ಲರು. ಮಂಡೋದರಿ, ತಾರೆ, ಕೈಕಸೆಯಾಗಿ ನೀತಿಯ ತರಂಗಿಣಿಯನ್ನೇ ಹರಿಸಬಲ್ಲರು. ಶೇಣಿ, ತೆಕ್ಕಟ್ಟೆ, ರಾ.ಸಾಮಗ, ವಾ. ಸಾಮಗ, ಎಂ ಎಲ್ ಸಾಮಗ, ಕುಂಬ್ಳೆ, ಗೋವಿಂದಭಟ್ಟ, ಸಿದ್ದಕಟ್ಟೆ ದ್ವಯರು, ಯಾಜಿ, ಕೊಂಡದಕುಳಿ, ಜೋಗಿ, ಪೂಕಳ, ಉರಡ್ಕ, ಆರ್ಗೋಡು, ಜಲವಳ್ಳಿ ಮೊದಲಾದವರೊಂದಿಗೆ ಅವರ ಸಹಪಾತ್ರಗಳು ಅಮೋಘವಾದುದೆಂದು ಅನೇಕ ಕಲಾಭಿಮಾನಿಗಳ ಅಭಿಮತ. ಅವರ ಅನುಭವ ಅನುಪಮ. ಪೌರಾಣಿಕ ಪ್ರಸಂಗದ ಪಾತ್ರಗಳ ಮಾಹಿತಿಗಾಗಿ ಪೋನ್ ಮಾಡಿದವರಿಗೆ ತಾನು ಬ್ಯುಸಿ ಇದ್ದರೂ ಸಂತೋಷದಿಂದಲೇ ಅನುಭವವನ್ನು ದಾರೆ ಎರೆಯುತ್ತಾರೆ. 


ಶೇಣಿಯವರೊಂದಿಗಿನ ನಂಟು:
“ರಮೇಶನ ಸ್ತ್ರೀವೇಷದೊಂದಿಗೆ ವೇಷಮಾಡಿದಾಗ ಸದ್ಗೃಹಿಣಿಯೊಂದಿಗಿರುವ ಅನುಭವ ರಂಗದಲ್ಲಿ ಆಗುತ್ತದೆ” ಎಂದು ಒಂದು ಭಾಷಣದಲ್ಲಿ ಶೇಣಿಯವರೇ ಹೇಳುತ್ತಾರೆ. ಅದನ್ನು ಕೇಳಿ ನನಗೆ ಇನ್ಯಾವ ಪ್ರಶಸ್ತಿಯೂ ಬೇಡ. ಇದೇ ದೊಡ್ಡ ಪ್ರಶಸ್ತಿ ಎಂದು ಭಾವಿಸಿದ ಎಂಕೆ ಈಗಲೂ ಆ ಮಾತನ್ನು ಸ್ಮರಿಸುತ್ತಾರೆ. ಮಂಗಳೂರಿನ ಒಂದು ಆಟದಲ್ಲಿ ಶೇಣಿಯವರೊಂದಿಗೆ ಇವರಿಗೂ ಸನ್ಮಾನ ಮಾಡುತ್ತೇವೆಂದು ಸಂಘಟಕರು ಬಂದು ಕೇಳಿದಾಗ “ಅವರೊಂದಿಗೆ ಕುಳಿತು ಸನ್ಮಾನ ಸ್ವೀಕರಿಸಲು ನಾನು ಅರ್ಹನಲ್ಲ” ಎಂದು ನಿರಾಕರಿಸುತ್ತಾರೆ. ಸಂಘಟಕರು ಈ ವಿಷಯವನ್ನು ಶೇಣಿಯವರಲ್ಲಿ ತಿಳಿಸಿದಾಗ ಇವರನ್ನು ಕರೆದು “ವೇಷಮಾಡಿ ರಂಗದಲ್ಲಿ ನನ್ನ ಜೊತೆ ಕುಳಿತುಕೊಳ್ಳಲು ಆಗುತ್ತದೆ. ಸನ್ಮಾನಕ್ಕೆ ಯಾಕೆ ಆಗುವುದಿಲ್ಲ ” ಎಂದು ಹೇಳಿ ಅವರೊಂದಿಗೆ ಸನ್ಮಾನಕ್ಕೆ ಒಪ್ಪಿಸುತ್ತಾರೆ.  ಸುರತ್ಕಲ್ ಮೇಳದಲ್ಲಿ ಇದ್ದಾಗ ಇವರು ಒಂದುದಿನ ರಜೆ ಹಾಕಿ ಊರಿಗೆ ಹೊರಟರು. ಆದರೆ ಶೇಣಿಯವರು ಇವರು ರಜೆ ಹಾಕುವುದು ಬೇಡ ಎಂದರು. ಇವರು ಹೋಗಲೇ ಬೇಕೆಂದು ಹಠ ಹಿಡಿದರೂ ಶೇಣಿಯವರು ಒಪ್ಪಲಿಲ್ಲ. ಅದಕ್ಕೆ ಕಾರಣ ಅಂದಿನ ಅವರ ವಾಲಿಗೆ ಇವರ ತಾರೆಯೇ ಆಗಬೇಕೆಂಬ ಅಭಿಲಾಷೆಯಿಂದ. ಒಮ್ಮೆ ರಮೇಶಾಚಾರ್ಯರ ಸನ್ಮಾನ ಸಮಾರಂಭದ ಅಧ್ಯಕ್ಷರಾಗಿ ಆಗಮಿಸಿದ ಶೇಣಿಯವರು ತನಗೆ ನೀಡಿದ ಹಣವನ್ನೂ ಸಂಘಟಕರಿಗೆ ಹಿಂದಿರುಗಿಸಿದ್ದರು. ಅದು ರಮೇಶಾಚಾರ್ಯರ ಮೇಲಿನ ಪ್ರೀತಿಯಿಂದ.  ಹೀಗೆ ಶೇಣಿಯವರೊಂದಿಗೆ ಮಾಡಿದ ಪಾತ್ರಗಳನ್ನು ಸದಾ  ಸ್ಮರಿಸುತ್ತಾರೆ ಎಂಕೆ. ಇತ್ತೀಚೆಗಂತು ಶೇಣಿಯವರ ಸಂಸ್ಮರಣಾ ಭಾಷಣಕ್ಕೆ ಇವರಿಗೇ ಬೇಡಿಕೆ.

 ಅರ್ಥಧಾರಿಯಾಗಿ ರಮೇಶಾಚಾರ್ಯ:
ಎಲ್ಲಾ ಪ್ರಸಿದ್ಧ ಅರ್ಥಧಾರಿಗಳೊಂದಿಗೆ ಅರ್ಥಹೇಳಿದ ಇವರು ಸ್ತ್ರೀಪಾತ್ರದ ಅರ್ಥಗಾರಿಕೆಗೆ ಒಂದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟವರಲ್ಲಿ ಪ್ರಮುಖರು. ಇವರ ಅರ್ಥಗಾರಿಕೆಯಲ್ಲಿ ಪಾತ್ರನೆಡೆ, ಸಾಹಿತ್ಯ, ಪಾತ್ರವರಿತು ಖಂಡನೆ-ಮಂಡನೆಯ ವಿವೇಚನೆ, ಕನ್ನಡ ಸಂಸ್ಕೃತ ಕಾವ್ಯಗಳ ಸೊಲ್ಲುಗಳು, ರಸವತ್ತಾದ ನಿರೂಪಣೆ, ಮಡದಿಯ ಪಾತ್ರವಾದರೆ ಪತಿಯ ಪಾತ್ರಧಾರಿಯನ್ನು ಮೀರದ ಔಚಿತ್ಯಪ್ರಜ್ಞೆ  ಮೊದಲಾದ ಅಂಶಗಳು ಉಲ್ಲೇಖನೀಯ. ಹವ್ಯಾಸಿ ಅರ್ಥಧಾರಿಗಳೊಂದಿಗೆ ಅರ್ಥ ಹೇಳುವಾಗಲೂ ಅವರು ಧೈರ್ಯದಿಂದ ಮಾತನಾಡುವಂತೆ ಮಾಡುವ ಇವರ ಚಾಕಚಕ್ಯತೆ ಅದ್ಬುತವಾದುದು. ಕ್ಯಾಸೆಟ್ಗಳಲ್ಲಂತೂ ಇವರ ಪಾತ್ರವಿಲ್ಲದೇ ಇರುತ್ತಿದ್ದುದು ತುಂಬಾ ವಿರಳ.


 ಪ್ರಸಂಗಕರ್ತ ರಮೇಶಾಚಾರ್ಯ:
60-65ಪ್ರಸಂಗಗಳ ಪದ್ಯರಚನೆ. ಬಿಡಿಪದ್ಯಗಳನ್ನು ಬರೆದು ಕೊಟ್ಟದ್ದು ಲೆಕ್ಕವೇ ಇಲ್ಲ ಬಿಡಿ. ಅನೇಕ ಕ್ಷೇತ್ರಮಹಾತ್ಮೆಗಳ ಪದ್ಯಗಳೆಲ್ಲ ಇವರಿಂದಲೇ ರಚಿತವಾದವು. ಇವರ ಪದ್ಯರಚನೆಯ ಶೈಲಿ ಸರಳ ಮತ್ತು ಸುಂದರ. ಕ್ಲಿಷ್ಟವಲ್ಲದ ಅರ್ಥಪೂರ್ಣ ಧ್ವನಿಯುಕ್ತವಾದ ಪದಬಳಕೆ. ನಡುಗನ್ನಡ- ಹೊಸಗನ್ನಡದ ಸೊಗಸಾದ ಸಮ್ಮಿಲನ. *ಸಮಗ್ರ ವಿಶ್ವಾಮಿತ್ರ, ಮಹಾಮಾತೆ ಕುಂತಿ, ಅನಸೂಯೋಪಖ್ಯಾನ, ಶ್ರೀಕೃಷ್ಣತುಲಾಭಾರ, ಶುಭೋದಯ(ವಾಮನಪುರಾಣಾಧಾರಿತ) ಮೊದಲಾದವು ಇವರ ಪೌರಾಣಿಕ ಪ್ರಸಂಗಗಳು.


ಪ್ರಶಸ್ತಿ -ಸನ್ಮಾನಗಳು:
ಬಯಲಾಟ ಅಕಾಡೆಮಿ ಪ್ರಶಸ್ತಿ, ಬಂಗಾರಮಕ್ಕಿ ಜಾನಪದಶ್ರೀ ಪ್ರಶಸ್ತಿ, ಪಾತಾಳ ಪ್ರಶಸ್ತಿ, ಕೋಟ ವೈಕುಂಠ ಪ್ರಶಸ್ತಿ, ಅಜಾತಶತ್ರು ಪ್ರಶಸ್ತಿ, ಕಲ್ಕೂರು ಶೇಣಿ ಕಲೋತ್ಸವ ಪ್ರಶಸ್ತಿ, ಅಗರಿ ಪ್ರಶಸ್ತಿ  ಹೀಗೆ ದೊರೆತ ಪ್ರಶಸ್ತಿಗಳು ಹತ್ತು ಹಲವು. ಇನ್ನು ಸನ್ಮಾನಗಳು ಅಗಣಿತ. ಮನೆಯ ಒಂದು ಗೋಡೆಯ ತುಂಬಾ ಸನ್ಮಾನಪತ್ರಗಳೇ ತುಂಬಿವೆ. ಇವೆಲ್ಲ ಎಂ ಕೆ ಯವರ ಸಾಧನೆಗೆ ಸಾಕ್ಷಿಯಾಗಿವೆ.


ಕುಟುಂಬ:
ಇವರ ಪತ್ನಿ ಶ್ರೀಮತಿ ವಿಶಾಲಾಕ್ಷಿ. ಎಂ ಕೆ ಯವರ ಸಾಧನೆಗೆ ಬೆನ್ನೆಲುಬಾಗಿ ಮನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಪತಿಯ ಪ್ರತಿಭಾ ದೀಪಕ್ಕೆ ತೈಲವಾದ ಸದ್ಗೃಹಿಣಿ. ಆಶಾಲತ ಮತ್ತು ಸರೋಜ ಎಂಬ ಇಬ್ಬರು ಹೆಣ್ಣುಮಕ್ಕಳು ಮದುವೆಯಾಗಿ ಒಳ್ಳೆಯ ಮನೆಸೇರಿ ಸಂತೃಪ್ತಿಯಿಂದ ಜೀವನ ನೆಡೆಸುತ್ತಿದ್ದಾರೆ. ಮಗ ಮನೋಜ್ ಯಕ್ಷಗಾನ ಕಲಾವಿದರಾಗದೇ ಇದ್ದರು ತಂದೆಯ ಸಾಧನೆಯ ಬಗ್ಗೆ ಹೆಮ್ಮೆ ಉಳ್ಳವರು. ಮಗಳಾಗಿ ಮಾವನನ್ನು ನೋಡಿಕೊಳ್ಳುತ್ತಿರುವ ಸೊಸೆ ಸರಿತಾ. ಈಶ್ವರಿ ಮತ್ತು ಪನ್ನಗ ಮೊಮ್ಮಕ್ಕಳು. ತಾಯಿ ರುಕ್ಮಿಣಮ್ಮ ಇತ್ತೀಚೆಗೆ ದಿವಂಗತರಾದರು. ಎಂ ಕೆ ಯವರ ತಮ್ಮ ಸತೀಶ್ ಮಂಗಳಗಾರು ಉತ್ತಮ ಯಕ್ಷಗಾನ ಕಲಾವಿದರಾಗಿದ್ದರು. ಎರಡು ದಶಕಗಳ ಹಿಂದೆಯೇ ವಿಧಿವಶರಾದ ನೋವು ಅಣ್ಣನಲ್ಲಿ ಇನ್ನೂ ಮಾಸಲಿಲ್ಲ.

ಇದೊಂದು ಅವರ ಕಿರು ಪರಿಚಯವಷ್ಟೆ. ಅವರ ಪ್ರತಿಭೆಯ ಪೂರ್ಣಪರಿಚಯಕ್ಕೆ ಪುಸ್ತಕವೇ ಬೇಕು. ಅಂತಹ ಒಂದು ಹೊತ್ತಗೆ ಸರಿ ಹೊತ್ತಿಗೆ ಬರಲಿ ಎಂದು ಆಶಿಸುತ್ತೇನೆ.
                                   

ಲೇಖಕ: ರಜನೀಶ ಹೊಳ್ಳ, ಕೆಂಪಿನಮಕ್ಕಿ.

ಗಡಿನಾಡ ಯಕ್ಷಗಾನ ಕಲಾವಿದರು ಕರ್ನಾಟಕದಿಂದ ಸಹಾಯಧನ ಕೇಳಿದರೆ ತಪ್ಪೇ?

ಇತ್ತೀಚೆಗೆ ಕರ್ನಾಟಕ ಸರಕಾರ ಕೊರೋನಾ ಸಂಕಷ್ಟದ ನಿಮಿತ್ತ ಯಕ್ಷಗಾನ ಕಲಾವಿದರಿಗೆ ಸಹಾಯಧನ ನೀಡುವ ಭರವಸೆ ನೀಡಿ ಆ ಸಲುವಾಗಿ ಕಲಾವಿದರು ಅರ್ಜಿ ಸಲ್ಲಿಸುವಂತೆ ತಿಳಿಸಿತ್ತು. ಅರ್ಜಿ ಸಲ್ಲಿಸುವ ಹಾಗೂ ಅದರ ಮುಂದಿನ ಪ್ರಕ್ರಿಯೆ ಈಗ ಚಾಲ್ತಿಯಲ್ಲಿದೆ. ಈ ನಡುವೆ ಗಡಿನಾಡು ಕಾಸರಗೋಡಿನ ಕಲಾವಿದರು ತಮ್ಮನ್ನೂ ಕರ್ನಾಟಕದ ಈ ಸವಲತ್ತಿನ ವ್ಯಾಪ್ತಿಯೊಳಗೆ ತರಬೇಕೆಂಬ ಮನವಿ ಸಲ್ಲಿಸಿದ್ದಾರೆ. ಯಾಕೆಂದರೆ ಹೆಚ್ಚಿನ ಗಡಿನಾಡಿನ ಯಕ್ಷಗಾನ ಕಲಾವಿದರೂ ಕಲಾಸೇವೆ ಮಾಡುತ್ತಿರುವುದು ಕರ್ನಾಟಕದ ಪ್ರದೇಶಗಳಲ್ಲಿ ಮತ್ತು ಕರ್ನಾಟಕ ರಾಜ್ಯಕ್ಕೆ ಸಂಬಂಧಪಟ್ಟ ಮೇಳಗಳಲ್ಲಿ. ಆದುದರಿಂದ ಅವರ ಈ ಕೇಳಿಕೆ ಸಾಧುವಾದುದೇ ಆಗಿರುತ್ತದೆ. 

1. ಹೆಚ್ಚಿನ ಕಲಾವಿದರು ಕಲಾಸೇವೆ ಮಾಡುತ್ತಿರುವುದು ಕರ್ನಾಟಕದಲ್ಲಿ. 

2. ಬಹುತೇಕ ಕಲಾವಿದರು ದುಡಿಯುತ್ತಿರುವ ಮೇಳಗಳು ಕರ್ನಾಟಕ ರಾಜ್ಯಕ್ಕೆ ಸೇರಿದವುಗಳು. 

3. ಅಂತಹಾ ಮೇಳಗಳ ಮಾಲಕತ್ವವೂ ಕರ್ನಾಟಕ ರಾಜ್ಯದ ಮಹನೀಯರಿಗೆ ಸೇರಿದುದಾಗಿದೆ.  

ಆದುದರಿಂದ ಕಾಸರಗೋಡಿನ ಕಲಾವಿದರು ಈ ಸಹಾಯಧನವನ್ನು ಅಪೇಕ್ಷೆಪಟ್ಟರೆ ಅದು ಅನುಚಿತವಾಗಲಾರದು. ಬದಲಾಗಿ ಈ ಸಂಕಷ್ಟ ಸಮಯದಲ್ಲಿ ಉಚಿತವೂ ಸಾಧುವೂ ಆಗಿರುತ್ತದೆ ಎಂದು ಕಲಾವಿದರ ಹಾಗೂ ಯಕ್ಷಾಭಿಮಾನಿಗಳ ಅಭಿಪ್ರಾಯವಾಗಿದೆ. 

ಕಪ್ಪೆಕೆರೆ ಸುಬ್ರಾಯ ಹೆಗಡೆ(ಕಪ್ಪೆಕೆರೆ ಸುಬ್ರಾಯ ಭಾಗವತ)

ಕಪ್ಪೆಕೆರೆ ಸುಬ್ರಾಯ ಹೆಗಡೆ(ಕಪ್ಪೆಕೆರೆ ಸುಬ್ರಾಯ ಭಾಗವತ) – ಸಂಕ್ಷಿಪ್ತ ಮಾಹಿತಿ

ಹೆಸರು:  ಕಪ್ಪೆಕೆರೆ ಸುಬ್ರಾಯ ಹೆಗಡೆ
ಜನನ:  1947

ಜನನ ಸ್ಥಳ:  ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಡಿನಬಾಳ    

ತಂದೆ ತಾಯಿ:  ತಂದೆ ಶ್ರೀ ಈಶ್ವರ ಹೆಗಡೆ. ತಾಯಿ ಶ್ರೀಮತಿ ಗೋಪಿ ಹೆಗಡೆ 

  ವಿದ್ಯಾಭ್ಯಾಸ: ಹತ್ತನೇ ತರಗತಿ 

ಯಕ್ಷಗಾನ ಗುರುಗಳು: ಕೆರೆಮನೆ ಮಹಾಬಲ ಹೆಗಡೆ, ಗಣಪತಿ ಹೆಗಡೆ. ಕಪ್ಪೆಕೆರೆ ಸುಬ್ರಾಯ ಭಾಗವತರದು  ಮೂಲತಃ ಯಕ್ಷಗಾನ ಕುಟುಂಬ. ಹಿರಿಯ ಸಹೋದರ ಕಪ್ಪೆಕೆರೆ ಮಹಾದೇವ ಹೆಗಡೆಯವರು ಪ್ರಸಿದ್ಧ ವೇಷಧಾರಿ. 

ಪ್ರೇರಣೆ: ಕೆರೆಮನೆ ಶಿವರಾಮ ಹೆಗಡೆ, ಮರವಂತೆ ನರಸಿಂಹ ದಾಸ, ನಾರ್ಣಪ್ಪ ಉಪ್ಪೂರರಿಂದ 

  ರಂಗಮಾಹಿತಿ ಮತ್ತು ಹೆಚ್ಚಿನ ಕಲಿಕೆ : ಕೆರೆಮನೆ ಶಿವರಾಮ ಹೆಗಡೆ, ಮರವಂತೆ ನರಸಿಂಹ ದಾಸ, ನಾರ್ಣಪ್ಪ ಉಪ್ಪೂರರಿಂದ 
ಅನುಭವ:  ಇಡಗುಂಜಿ, ಗುಂಡಬಾಳ, ಸಾಲಿಗ್ರಾಮ ಬಚ್ಚಗಾರು ಮತ್ತು ಅಮೃತೇಶ್ವರಿ ಮೇಳಗಳಲ್ಲಿ  ಸುಮಾರು 45 ವರ್ಷ ಕಲಾಸೇವೆ ಮಾಡಿದ್ದಾರೆ. ಇವರೊಬ್ಬ ಶ್ರೇಷ್ಟ ಬಾಗವತ ಮಾತ್ರವಲ್ಲದೆ ಸಮರ್ಥ  ಗುರುಗಳಾಗಿ ನೂರಾರು ಶಿಷ್ಯರನ್ನು ತಯಾರಿಸಿದ್ದಾರೆ.ಚಂಡೆ ಮದ್ದಳೆ ವಾದನ ವೇಷಗಾರಿಕೆಯಲ್ಲೂ ಪರಿಣತಿ ಪಡೆದು ಯಕ್ಷಗಾನದ ದಶಾವತಾರಿ ಎನಿಸಿಕೊಂಡಿದ್ದಾರೆ.  ವೇಷದಾರಿಯಾಗಿ ಅರ್ಜುನ, ಬಲರಾಮ, ನಾರದ ಮುಂತಾದ ಪಾತ್ರಗಳನ್ನು ನಿರ್ವಹಿಸಿ ಮುಮ್ಮೇಳ ಕಲಾವಿದನಾಗಿ ತನ್ನ ಸಾಮರ್ಥ್ಯವನ್ನು ಪ್ರಕಟಿಸಿದ್ದಾರೆ. 

ಗುರುಗಳಾಗಿ :  ಸಮರ್ಥ  ಗುರುಗಳಾಗಿ ನೂರಾರು ಶಿಷ್ಯರನ್ನು ತಯಾರು ಮಾಡಿದ್ದಾರೆ. 

ವಿಶೇಷತೆ: ಸುಬ್ರಾಯ ಬಾಗವತರ ತಾಳಗತಿಯಲ್ಲಿನ ಪರಿಶುದ್ದತೆ, ಲಯಬದ್ದತೆ.ಪ್ರಸಂಗದ ನೆಡೆ,ನಿರ್ದೇಶನ ಮುಂತಾದವುಗಳಿಂದ ಅವರ ಪ್ರತಿಭೆಯನ್ನು ಅಳೆಯಬಹುದು. ತಾನೊಬ್ಬ ಸಮರ್ಥ ಭಾಗವತ ಮಾತ್ರವಲ್ಲದೆ  ರಂಗನಿರ್ದೇಶಕನೆಂದು ತನ್ನ ಪ್ರದರ್ಶನಗಳಿಂದ ತೋರಿಸಿಕೊಟ್ಟಿದ್ದಾರೆ.  ಅಪಾರ ಪೌರಾಣಿಕ ಜ್ಞಾನವನ್ನು ಹೊಂದಿದ ಭಾಗವತ.

ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಇವರಿಗೆ ಕರ್ನಾಟಕ ಯಕ್ಷಗಾನ ಬಯಲಾಟ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ,ಯಕ್ಷ ದೇಗುಲ ಪ್ರಶಸ್ತಿ, ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಗಳಲ್ಲದೆ ಇನ್ನಿತರ ಹಲವಾರು ಸನ್ಮಾನ ಪ್ರಶಸ್ತಿಗಳು ದೊರೆತಿವೆ.