ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಕೆಯನ್ನು ಕಾಣುತ್ತಿದೆ. ಆದರೆ ದಕ್ಷಿಣ ಕನ್ನಡದಲ್ಲಿ ನಿನ್ನೆಗಿಂತ ಇಂದು ಏರಿಕೆಯಾಗಿದೆ. ಕರ್ನಾಟಕ ರಾಜ್ಯದಲ್ಲಿ (18.06.2021) ಕೊರೋನಾ ದೃಢಪಟ್ಟವರ ಅಂಕಿಸಂಖ್ಯೆಗಳ ವಿವರ ಇಲ್ಲಿದೆ.
ನಟಿ ರಶ್ಮಿಕಾ ಮಂದಣ್ಣ ಫೋಟೋ ಒಂದು ಈಗ ಭಾರೀ ಸುದ್ದಿ ಮಾಡುತ್ತಿದೆ. ನೇರಳೆ ಬಣ್ಣದ ಉಡುಗೆಯಲ್ಲಿ ಬಿಂದಾಸ್ ಫೋಸ್ ಕೊಟ್ಟಿರುವ ಈ ಫೋಟೋ ಕಂಡು ಆಕೆಯ ಅಭಿಮಾನಿಗಳು ಹುಚ್ಚಾಗಿದ್ದಾರೆ. ಈ ಫೋಟೋವನ್ನು ರಶ್ಮಿಕಾ ಮಂದಣ್ಣ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋವನ್ನು 36 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. 52 ಸಾವಿರ ಮಂದಿ ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ಆ ಫೋಟೋ ಯಾವುದು ಎಂದು ನೋಡೋಣ ಬನ್ನಿ.
ಇತ್ತೀಚಿಗಿನ ಕೆಲವು ಸಿನಿಮಾಗಳಲ್ಲಿ ಯಕ್ಷಗಾನ ಕಲಾವಿದರನ್ನು ಹಾಗೂ ಯಕ್ಷಗಾನ ಹಿಮ್ಮೇಳ ಕಲಾವಿದರನ್ನು (ಭಾಗವತರನ್ನೂ ಸೇರಿಸಿ) ಬಳಸಿಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಹಿಂದೆ 1960-70, 1970-80ರ ದಶಕದಲ್ಲಿ ಈ ಪದ್ಧತಿ ಇರಲಿಲ್ಲವೆಂದೇ ಹೇಳಬಹುದು. ಇದಕ್ಕೆ ಕಾರಣ ಆ ಕಾಲದ ಸಿನಿಮಾ ನಿರ್ದೇಶಕರು, ಸಂಗೀತ ನಿರ್ದೇಶಕರು ತೆಲುಗು-ತಮಿಳು ಮೂಲದವರಾಗಿದ್ದರು.
ಉದಾಹರಣೆಗೆ ಜಿ. ಕೆ. ವೆಂಕಟೇಶ್, ಉಪೇಂದ್ರಕುಮಾರ್, ಟಿ. ಜಿ. ಲಿಂಗಪ್ಪ ಮೊದಲಾದವರು. ನಿರ್ದೇಶಕರಲ್ಲಿಯೂ ಕೆಲವರು ಈ ಕಾರಣಕ್ಕೇ ಯಕ್ಷಗಾನವನ್ನು ಬಳಸಿರಲಿಲ್ಲವೆಂದೇ ಹೇಳಬಹುದು. ಮಾತ್ರವಲ್ಲದೇ ಆ ಕಾಲದ ಸಿನಿಮಾಗಳೆಲ್ಲವೂ ಅಂದಿನ ಮದ್ರಾಸ್(ಇಂದಿನ ಚೆನ್ನೈ)ನಲ್ಲಿ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದುದು ಇನ್ನೊಂದು ಕಾರಣವೂ ಇರಬಹುದು. ಅವರೆಲ್ಲರಿಗೂ ಕರಾವಳಿಯ ಪರಿಚಯ ಇಲ್ಲದೆಯೋ ಅಥವಾ ಯಕ್ಷಗಾನ ಕಲೆಯ ಬಗ್ಗೆ ಮಾಹಿತಿ ಇಲ್ಲದಿರುವುದೂ ಸಹ ಇದಕ್ಕೆ ಕಾರಣವಿರಬಹುದು.
ಆದರೆ ಇತ್ತೀಚಿನ ದಶಕಗಳಲ್ಲಿ ಸಿನಿಮಾ ಹಾಗೂ ಸಿನಿಮಾ ಸಂಗೀತದಲ್ಲಿ ಯಕ್ಷಗಾನ ಬಳಕೆ ಮಾಡುತ್ತಿರುವುದು ಒಂದು ವಿಶೇಷವಾಗಿ ಕಾಣುತ್ತಿದ್ದೇವೆ. ಸುನೀಲ್ಕುಮಾರ್ ದೇಸಾಯಿ ಅವರ `ಪರ್ವ’ ಸಿನಿಮಾದಲ್ಲಿ ಬಡಗುತಿಟ್ಟಿನ ಇಡಗುಂಜಿ ಮೇಳವನ್ನು ಪೂರ್ಣವಾಗಿ ತೊಡಗಿಸಿಕೊಂಡದ್ದನ್ನು ಕಾಣಬಹುದು. ವಿಷ್ಣುವರ್ಧನ್ ನಾಯಕ ನಟನಾಗಿ, ಪ್ರೇಮಾ ನಾಯಕಿಯಾಗಿ ಅಭಿನಯಿಸಿದ ಈ ಸಿನಿಮಾದಲ್ಲಿ ಬಡಗುತಿಟ್ಟು ಯಕ್ಷಗಾನದ ಮೇರುಕಲಾವಿದ ಕೆರೆಮನೆ ಶಂಭು ಹೆಗಡೆಯವರ ಪ್ರಬುದ್ಧ ಅಭಿನಯ ಸಿನಿಮಾ ಕಲಾವಿದರಿಗಿಂತ ತಾನೇನೂ ಕಡಿಮೆಯಿಲ್ಲ ಎಂಬಂತೆ ನಟಿಸಿದ್ದು ಆ ಸಿನಿಮಾದ ಹೆಗ್ಗಳಿಕೆಯೂ ಆಗಿದೆ.
1962ರಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಚಿತ್ರದಲ್ಲಿ ಶ್ರೀ ಶಂಕರ್ ಸಿಂಗ್ ಅವರು(ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ತಂದೆ) ಯಕ್ಷಗಾನ ಪ್ರಸಂಗವನ್ನು ಸಿನಿಮಾದಲ್ಲಿ ಪ್ರಥಮವಾಗಿ ಬಳಸಿಕೊಂಡರು. ಪ್ರತಿಮಾದೇವಿ ನಾಯಕಿಯಾಗಿ ಅಭಿನಯಿಸಿದ್ದರು. ಇತ್ತೀಚಿಗಿನ ಎ. ಎಂ. ಆರ್. ರಮೇಶ್ ನಿರ್ದೇಶನದ ಮಿಂಚಿನ ಓಟ ಮತ್ತು ಇಂದ್ರಧನುಷ್ (ಸಂಗೀತ: ವಿ. ಮನೋಹರ್), ಗಾಳಿಪಟ (ಸಂಗೀತ: ವಿ. ಹರಿಕೃಷ್ಣ), ರಂಗಿತರಂಗ (ಸಂಗೀತ ಮತ್ತು ನಿರ್ದೇಶನ: ಅನೂಪ್ ಭಂಡಾರಿ), ಬಣ್ಣದ ವೇಷ, ನಮ್ಮೂರ ಮಂದಾರ ಹೂವೇ (ಇಳಯರಾಜ) ಸಿನಿಮಾಗಳಲ್ಲಿ ಸಹನರ್ತಕರಾಗಿ ಯಕ್ಷಗಾನ ವೇಷಗಳನ್ನು ಬಳಸಿಕೊಳ್ಳಲಾಗಿದೆ.
ಹಲವಾರು ತುಳು ಸಿನಿಮಾಗಳಲ್ಲೂ ಯಕ್ಷಗಾನ ಕಲಾವಿದರು ಮತ್ತು ಹಿಮ್ಮೇಳ ಕಲಾವಿದರನ್ನು ಬಳಸಲಾಗಿದೆ. ದಕ್ಷಿಣ ಕನ್ನಡದಲ್ಲಿ ತುಳುವೇ ಪ್ರಧಾನ ಭಾಷೆಯಾಗಿದ್ದು ಯಕ್ಷಗಾನದ ತವರೂರೆನಿಸಿದೆ. ಆನಂದ್ ಪಿ. ರಾಜ್ ಅವರು ನಿರ್ದೇಶಿಸಿದ ಕೋಟಿ ಚೆನ್ನಯ ಎರಡನೇ ಬಾರಿ ತುಳುವಿನಲ್ಲಿ ತಯಾರಾಗಿದ್ದು ಇದರಲ್ಲಿ ಪದ್ಯಾಣ ಗಣಪತಿ ಭಟ್ಟರಿಂದ ಯಕ್ಷಗಾನದ ಹಾಡುಗಳನ್ನು ರಚಿಸಿ ಹಾಡಿಸಿದ್ದೇನೆ. ನಂತರದ ದಿನಗಳಲ್ಲಿ ನಾನು (ವಿ. ಮನೋಹರ್) ಗುರುಕಿರಣ್, ಮಣಿಕಾಂತ್ ಕದ್ರಿ, ಗಿರಿಧರ್ ದಿವಾಣ ಮುಂತಾದವರು ದಕ್ಷಿಣ ಕನ್ನಡದವರೇ ಆಗಿದ್ದು ಯಕ್ಷಗಾನದ ಮೇಲೆ ವಿಶೇಷ ಆಸಕ್ತಿ ಮತ್ತು ಕಾಳಜಿ ಇರುವುದರಿಂದ ಸಿನಿಮಾಗಳಲ್ಲಿ ಯಕ್ಷಗಾನ ಕಲಾವಿದರು ಮತ್ತು ಭಾಗವತರನ್ನು ಬಳಸಿಕೊಂಡಿದ್ದೇವೆ.
ನನ್ನ ಸಿನಿಮಾಗಳಲ್ಲಿ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಡಿತ್ತಾಯ, ಪದ್ಯಾಣ ಗಣಪತಿ ಭಟ್ಟ, ಪಟ್ಲ ಸತೀಶ ಶೆಟ್ಟಿ ಮೊದಲಾದವರ ಹಾಡುಗಾರಿಕೆಯನ್ನು ಬಳಸಿಕೊಂಡಿದ್ದೇನೆ. ಆದರೆ ಯಕ್ಷಗಾನ ಭಾಗವತಿಕೆಗೂ ಸಿನಿಮಾ ರಾಗ ಸಂಯೋಜನೆಗೂ ಯಾವುದೇ ರೀತಿಯಲ್ಲಿ ಹೊಂದಾಣಿಕೆಯಾಗದೇ ಇರುವುದರಿಂದ ಸಿನಿಮಾದ ಸನ್ನಿವೇಶಕ್ಕೆ ತಕ್ಕಂತೆ ಅವರ ಹಿಮ್ಮೇಳದೊಂದಿಗೆ ಗಾಯನವನ್ನು ಅವರ ಮನೋಧರ್ಮಕ್ಕನುಗುಣವಾಗಿ ಹಾಡಿಸಿದ್ದೇನೆ. ಕಾರಣ ಸಿನಿಮಾದಲ್ಲಿ ಬಳಸುವ ರಾಗ-ತಾಳಗಳೂ, ಪಲ್ಲವಿ-ಚರಣಗಳೂ ಯಕ್ಷಗಾನ ಹಾಡುಗಳಂತಿಲ್ಲವೆನ್ನಬಹುದು. ಮಾತ್ರವಲ್ಲದೇ ಯಕ್ಷಗಾನ ಕಲಾವಿದರು ಯಾರೂ ಸಿನಿಮಾ ಕಲಾವಿದರಾಗಲಿಲ್ಲ. ಭಾಗವತರೂ ಯಾವುದೇ ಸಿನಿಮಾ ಹಿನ್ನೆಲೆ ಗಾಯಕರೂ ಆಗಲಿಲ್ಲ. ಪೂರ್ಣ ಪ್ರಮಾಣದಲ್ಲಿ ಯಕ್ಷಗಾನವನ್ನು ಸಿನಿಮಾದಲ್ಲಿ ಬಳಸಲೂ ಬರುವುದಿಲ್ಲ. ಇದೆಲ್ಲವನ್ನು ಅವಲೋಕಿಸಿದರೆ ಕೇವಲ ನಮ್ಮ ಆಸಕ್ತಿಗೋಸ್ಕರ ಯಕ್ಷಗಾನವನ್ನು ಸಿನಿಮಾದಲ್ಲಿ ಬಳಸುತ್ತಿದ್ದೇವೆ ಎನ್ನಬಹುದು.
ಯಕ್ಷಗಾನದ ಭಾಷೆ: ಯಕ್ಷಗಾನಕ್ಕೆ ಭಾಷೆಯ ಪರಿಮಿತಿ ಇಲ್ಲವೆನ್ನಬಹುದು. ಶುದ್ಧ ಕನ್ನಡದಲ್ಲಿ ಸ್ಪಷ್ಟ ಉಚ್ಚಾರ ಹೊಂದಿದ ಯಕ್ಷಗಾನದ ಭಾಗವತಿಕೆಯೂ ಅರ್ಥಗಾರಿಕೆಯೂ ಕೇಳಲು ಅತ್ಯಂತ ಸೊಗಸು ಎನ್ನಬಹುದು. ಪ್ರಾಯೋಗಿಕವಾಗಿ ಇತ್ತೀಚಿಗಿನ ಹಲವಾರು ಭಾಷೆಗಳಲ್ಲಿ ಉದಾಹರಣೆಗೆ ಮಲಯಾಳಂ, ತುಳು, ಕುಂದಾಪುರ ಕನ್ನಡ, ಕೊಂಕಣಿ ಭಾಷೆಗಳಲ್ಲಿ ಯಕ್ಷಗಾನವು ಪ್ರಯೋಗಗೊಂಡಿದೆ. ಆದರೆ ಕನ್ನಡದಷ್ಟು ಪ್ರಭಾವಶಾಲಿಯಾಗಲಿಲ್ಲ ಎನ್ನುವುದು ವಿಶೇಷ.
ತುಳು ಯಕ್ಷಗಾನಗಳು ಪ್ರಸಿದ್ಧವಾಗಲು ಕಾರಣ ದಕ್ಷಿಣ ಕನ್ನಡದಲ್ಲಿ ಮಾತ್ರ ಚಾಲ್ತಿಯಲ್ಲಿರುವ ತುಳು ಭಾಷೆ. ತುಳು ಭಾಷೆಯಲ್ಲಿ ಪೌರಾಣಿಕವನ್ನು ಬಿಂಬಿಸಲು ಕಷ್ಟವೆನ್ನಬಹುದು. ಆದರೆ ತುಳುನಾಡಿನಲ್ಲಿರುವ ದೈವ ದೇವರು ಕಾರಣಿಕ ಪುರುಷರ ಕತೆಯನ್ನು ಧಾರಾಳವಾಗಿ ತುಳುವಿನಲ್ಲಿ ಬಳಸಿದ್ದಾರೆ. ಉದಾಹರಣೆಗೆ ಕೋಟಿ ಚೆನ್ನಯ, ಕಾಂತಬಾರೆ-ಬೂದಬಾರೆ, ದೇವಪೂಂಜ ಪ್ರತಾಪ, ಸತ್ಯದಪ್ಪೆ ಚೆನ್ನಮ್ಮ ಮುಂತಾದ ಪ್ರಸಂಗಗಳು ಜನಮಾನಸದಲ್ಲಿ ಇಂದಿಗೂ ಹಾಸುಹೊಕ್ಕಾಗಿರುವ ಯಕ್ಷಗಾನ ಕಥಾನಕಗಳು. ಹಾಗೆಯೇ ಸಾಮಾಜಿಕ ಕತೆ ಅಥವಾ ಸಿನಿಮಾ ಕತೆಗಳ ಯಕ್ಷಗಾನ ಪ್ರಸಂಗಗಳು ಮನೋರಂಜನೆಗೆ ಮಾತ್ರ ಸೀಮಿತವಾಗಿದೆಯೇ ವಿನಾ ಯಕ್ಷಗಾನಕ್ಕೇನೂ ಶಾಶ್ವತ ಕೊಡುಗೆಗಳಲ್ಲವೆನ್ನಬಹುದು.
ಯಕ್ಷಗಾನ ಒಂದು ಶ್ರೀಮಂತ ಕಲೆ. ಸಂಪೂರ್ಣ ಕಲೆ. ಅದರಲ್ಲಿ ಶಾಸ್ತ್ರೀಯ, ಲಘು ಸಂಗೀತವಿದೆ. ತಾಳವಿದೆ, ನಾಟ್ಯವಿದೆ, ಮಾತುಗಾರಿಕೆ ಇದೆ, ನವರಸ ಅಭಿನಯ ಇದೆ. ಅಮೋಘ ವೇಷಭೂಷಣಗಳಿವೆ. ಅಷ್ಟೇ ಅಲ್ಲ, ಪಾತ್ರಧಾರಿ, ಅರ್ಥಧಾರಿ, ಎಲ್ಲಾ ಪುರಾಣಗಳ ಅಧ್ಯಯನವನ್ನೂ ಮಾಡಿರುವ ಜ್ಞಾನಿ ಆಗಿರಲೇಬೇಕು! ಹಾಗಾಗಿ ಯಕ್ಷಗಾನಕ್ಕೆ ಅದರದ್ದೇ ಆದ ಮಹತ್ವವಿದೆ ಎಂಬುದು ನಾವು ಯಾವತ್ತೂ ಕಾಣಬಹುದಾದ ಸತ್ಯ.
ಅನಿಸಿಕೆ ಮತ್ತು ಅಭಿಪ್ರಾಯ : ಖ್ಯಾತ ಸಿನಿಮಾ ಸಂಗೀತ ನಿರ್ದೇಶಕ ವಿ. ಮನೋಹರ್
ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇವರು ಆಯೋಜಿಸುತ್ತಿರುವ ತಾಳಮದ್ದಳೆ ಸಪ್ತಾಹದ ಕೊನೆಯ ತಾಳಮದ್ದಳೆ ಇಂದು ಶುಕ್ರವಾರ, 18.06.2021ರಂದು ರಾತ್ರಿ 7ರಿಂದ 9.30ರ ವರೆಗೆ ನಡೆಯಲಿದೆ. ನೇರಪ್ರಸಾರ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ನೇರಪ್ರಸಾರದ ಲಿಂಕ್ ಕೆಳಗಡೆ ಇದೆ.
ನಿನ್ನೆ ಗಂಗಾನದಿಯಲ್ಲಿ ತೇಲಿಬಂದ ಪೆಟ್ಟಿಗೆಯಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಸ್ಥಳೀಯ ಮೀನುಗಾರನೋರ್ವ ತೇಲಿಹೋಗುತ್ತಿದ್ದ ಪೆಟ್ಟಿಗೆಯನ್ನು ಹಿಡಿದು ದಡಕ್ಕೆ ತಂದು ನೋಡಿದಾಗ ಅಚ್ಚರಿ ಕಾದಿತ್ತು. ಪೆಟ್ಟಿಗೆಯೊಳಗೆ 21 ದಿನಗಳ ಪ್ರಾಯದ ಹೆಣ್ಣುಮಗುವೊಂದಿತ್ತು. ಮಗುವಿನ ಜೊತೆಗೆ ಆ ಪೆಟ್ಟಿಗೆಯಲ್ಲಿ ಮಗುವಿನ ಜಾತಕ ಮತ್ತು 'ಗಂಗಾ ಮಗಳು' ಎಂಬ ಬರಹದ ಚೀಟಿಯೂ ಪತ್ತೆಯಾಗಿದೆ.
ಗಂಗಾಪುರದ ದಾದ್ರಿ ಘಾಟ್ನ ಉದ್ದಕ್ಕೂ ಗಂಗಾ ನದಿಯಲ್ಲಿ ತೇಲುತ್ತಿರುವ ಮರದ ಪೆಟ್ಟಿಗೆಯಲ್ಲಿದ್ದ ನವಜಾತ ಶಿಶುವನ್ನು ಸ್ಥಳೀಯ ದೋಣಿಗಾರ ಗುಲ್ಲು ಚೌಧರಿ ಪತ್ತೆ ಹಚ್ಚಿದ್ದು, ಬಾಲಕಿಯನ್ನು ಮನೆಗೆ ಕರೆದೊಯ್ದಿದ್ದಾನೆ. ಮಗುವಿನ ಹೊರತಾಗಿ, ಪೆಟ್ಟಿಗೆಯಲ್ಲಿ ದುರ್ಗಾ ದೇವಿಯ ಚಿತ್ರ, ಜಾತಕ ಮತ್ತು ಧೂಪದ್ರವ್ಯದ ತುಂಡುಗಳಿವೆ. ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದ ನಂತರ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ದೋಣಿಗಾರನನ್ನು ಹೊಗಳಿದರು ಮತ್ತು ಮಗುವನ್ನು ಬೆಳೆಸಲು ಸರ್ಕಾರ ವ್ಯವಸ್ಥೆ ಮಾಡುತ್ತದೆ ಎಂದು ಹೇಳಿದರು.
ಸ್ಥಳೀಯ ದೋಣಿಗಾರ ಗುಲ್ಲು ಚೌಧರಿ ಇದು ಗಂಗಾ ನದಿಯಿಂದ ಉಡುಗೊರೆಯಾಗಿರುವುದರಿಂದ ಮಗುವನ್ನು ಬೆಳೆಸಲು ಬಯಸಿದೆ ಎಂದು ಹೇಳುತ್ತಾರೆ. ಶಿಶುವನ್ನು ಹೊತ್ತೊಯ್ಯುವ ಪೆಟ್ಟಿಗೆಯಲ್ಲಿ ದೇವರು ಮತ್ತು ದೇವತೆಗಳ ಚಿತ್ರಗಳಿವೆ ಮತ್ತು ಶಿಶುವಿನ ಜಾತಕವನ್ನು ಸಹ ಒಳಗೊಂಡಿತ್ತು ಎಂದು ದೋಣಿಗಾರ ಹೇಳಿದರು, ಹೆಣ್ಣು ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಶಿಶು ವೈದ್ಯಕೀಯ ಪರೀಕ್ಷೆಯನ್ನು ನಡೆಸಲಿದ್ದು, ಪೋಷಕರನ್ನು ಹುಡುಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೋಣಿಗಾರನನ್ನು ಹೊಗಳಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಗುವನ್ನು ಬೆಳೆಸಲು ತಮ್ಮ ಸರ್ಕಾರ ವ್ಯವಸ್ಥೆ ಮಾಡಲಿದೆ ಎಂದು ಹೇಳಿದರು. ಈ ಘಟನೆಯು ನಮಗೆ ಮಹಾಭಾರತವನ್ನು ನೆನಪಿಸುತ್ತದೆ - ವೀಡಿಯೋ ನೋಡಿ
ಯಕ್ಷಗಾನದ ಹಳೆಯ ತಲೆಮಾರಿನವರಾದ ಅಣ್ಣಿ ಭಾಗವತರು, ಶಿವ ಮದ್ಲೆಗಾರರು ಮೊದಲಾದ ಪ್ರಸಿದ್ಧ ಯಕ್ಷಗಾನ ದಿಗ್ಗಜಗಳು ಜನಿಸಿದ ಪರಂಪರೆಯಲ್ಲಿಯೇ ರೂಪುಗೊಂಡ ಮಧೂರು ನಾರಾಯಣ ಹಾಸ್ಯಗಾರರು ಜನಮನದಲ್ಲಿ ಇಂದಿಗೂ ಒಂದು ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದಾರೆ. ಮಧೂರಿನ ಸುಬ್ಬರಾವ್-ರುಕ್ಮಿಣಿ ದಂಪತಿಗಳಿಗೆ ಸುಮಾರು 1908ನೇ ಇಸವಿಯಲ್ಲಿ ಜನಿಸಿದ ನಾರಾಯಣ ಹಾಸ್ಯಗಾರರು ಯಕ್ಷಗಾನ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಪ್ರಾಥಮಿಕ ವಿದ್ಯಾಭ್ಯಾಸವನ್ನಷ್ಟೆ ಪಡೆದ ಇವರು ತಮ್ಮ ಸ್ವಸಾಮರ್ಥ್ಯದಿಂದ ಯಕ್ಷಗಾನದ ಕಥಾಮೃತಗಳನ್ನು ಮನನ ಮಾಡಿಕೊಂಡಿದ್ದರು.
ಯಕ್ಷಗಾನದ ಬಾಂದಳದಲ್ಲಿ ಮಿನುಗಿದ ಹಾಸ್ಯ ಪ್ರತಿಭೆಗಳು ಹಲವು. ಆದರೆ ಇದರಲ್ಲಿ ಧ್ರುವತಾರೆಯಂತೆ ಮಿನುಗುವ ಸಿದ್ಧಿ ಪಡೆದವರು ಬೆರಳೆಣಿಕೆಯ ಮಂದಿ. ಈ ದಿಶೆಯಲ್ಲಿ ಪರಂಪರೆಯ ಪರಿವೃತ್ತವನ್ನು ಮೀರದೆ ಮಿತಿಯರಿತು ಚತುರ ಮಾತುಗಳಿಂದಲೂ ಬಣ್ಣ, ವಿನ್ಯಾಸ, ನಾಟ್ಯ ಭಾವಾಭಿವ್ಯಕ್ತಿಗಳಿಂದಲೂ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುವ ಕಲೆಯಲ್ಲಿ ನಾರಾಯಣ ಹಾಸ್ಯಗಾರರು ಪರಿಣತರು. ನಗುವುದು ಸ್ವಾಭಾವಿಕವಲ್ಲದ ಈ ಯುಗದಲ್ಲಿ ಅನ್ಯರನ್ನು ನಗಿಸುವ ಕಲೆ ಸಿದ್ಧಿಸುವುದು ವಿರಳ. ನಕ್ಕು ನಗಿಸುವ ಕಲೆಗಿಂತ ತಾನು ನಗದೆ ಇತರರನ್ನು ನಗಿಸುವ ಕಲೆ ಸಂಜೀವಿನಿ ಇದ್ದ ಹಾಗೆ.
ಈಗಿನ ಕೆಲ ಹಾಸ್ಯಗಾರರು ತಮ್ಮ ಕೀಳ್ತರಗತಿಯ ಹಾಸ್ಯದಿಂದ ದ್ವಂದ್ವಾರ್ಥ ಮಾತುಗಳಿಂದ ಜನರನ್ನು ನಗಿಸುವುದನ್ನು ನಾವು ಕಂಡಿದ್ದೇವೆ. ಆದರೆ ಕೇವಲ ಪಾತ್ರಚಿತ್ರಣದಿಂದ ಸ್ವಾಭಾವಿಕವಾಗಿ ನಗೆಗಡಲಲ್ಲಿ ತೇಲಿಸುವ ಕಲೆ ಸಿದ್ಧಿಸಬೇಕಾದರೆ ಅದನ್ನು ಹುಟ್ಟಿನಿಂದಲೇ ರೂಢಿಸಿಕೊಳ್ಳಬೇಕು. ಹಾಸ್ಯಗಾರರು ಯಕ್ಷಗಾನದ ಹಲವು ಸ್ತರಗಳಲ್ಲಿ ದುಡಿದವರು. ಮೇಳದ ಯಜಮಾನನಾಗಿ, ಅನಿವಾರ್ಯ ಸಂದರ್ಭಗಳಲ್ಲಿ ಭಾಗವತರಾಗಿ ಮದ್ದಳೆಗಾರನಾಗಿ, ಪಾತ್ರಧಾರಿಯಾಗಿ, ಹೀಗೆ ವಿಭಿನ್ನ ಕಾರ್ಯವನ್ನು ಕೌಶಲದಿಂದ ನಡೆಸುವ ಕಲೆ ಅವರಿಗೆ ಸಿದ್ಧಿಸಿತ್ತು.
ಚತುರನಾದ ಶಿಲ್ಪಿಯ ಕೈಯಲ್ಲಿ ಸಿಕ್ಕಿದ ಕಲ್ಲು ಸುಂದರ ಮೂರ್ತಿಯಾಗಿ ರೂಪುಗೊಳ್ಳುವಂತೆ ಶ್ರೀಯುತರು ನಿರ್ವಹಿಸಿದಂತಹ ಹತ್ತು ಹಲವು ಪಾತ್ರಗಳು ಜನಮನದಲ್ಲಿ ಇಂದಿಗೂ ರಾರಾಜಿಸುತ್ತವೆ. ಇವರು ನಿರ್ವಹಿಸಿದ ಗಿರಿಜಾ ಕಲ್ಯಾಣದ ಬೈರಾಗಿಯಿರಲಿ, ಉತ್ತರನ ಪೌರುಷದ ಉತ್ತರ ಕುಮಾರನ ಪಾತ್ರವಿರಲಿ, ಅದರಲ್ಲಿ ಅವರದೇ ಆದ ಛಾಪನ್ನು ಒತ್ತಿದ್ದರು ಹಾಗೂ ಜನಮನವನ್ನು ಸೂರೆಗೊಂಡಿದ್ದರು. ಪುಂಡುವೇಷದಿಂದ ಹಿಡಿದು ಬಣ್ಣದ ವೇಷದ ವರೇಗಿನ ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸುವ ಇವರ ಅಭಿನಯಕಲೆ ಎಲ್ಲರನ್ನೂ ಸ್ಥಂಭೀಭೂತರನ್ನಾಗಿ ಮಾಡುತ್ತದೆ.
ಬರಿಯ ಮಾತಿನಿಂದಲ್ಲ ಹಾವಭಾವಗಳಿಂದ, ಬಣ್ಣ ವಿನ್ಯಾಸದಿಂದ ಇವರು ಪಾತ್ರಗಳಿಗೆ ಜೀವವನ್ನು ತುಂಬುತ್ತಿದ್ದರು. ಯಕ್ಷಗಾನದಲ್ಲಿ ಸಾಮಾನ್ಯವಾಗಿ ಹಾಸ್ಯಗಾರರು ಮಾಡುವ ಪಾತ್ರಗಳು ಕೆಲವು. ಆದರೆ ನಾರಾಯಣ ಹಾಸ್ಯಗಾರರು ಮಾಡುತ್ತಿದ್ದ ಪಾತ್ರಗಳು ಹಲವು. ದೇವಿಮಹಾತ್ಮೆಯಲ್ಲಿ ಮಾಡಾಂಗಾಯಿ ಕೃಷ್ಣ ಭಟ್ಟರು ಹಾಗೂ ನಾರಾಯಣ ಹಾಸ್ಯಗಾರರ ಚಂಡ-ಮುಂಡರ ಪಾತ್ರಾಭಿನಯ ಪ್ರಸಿದ್ಧಿಯನ್ನು ಪಡೆದಿತ್ತು. ಅದೇ ರೀತಿ ಶ್ರೀರಾಮ ಪಟ್ಟಾಭಿಷೇಕ ದಲ್ಲಿ ಮಂಥರೆಯಾಗಿ ಅಭಿನಯಿಸುವಾಗ “ನಾಳೆ ರಾಮಚಂದ್ರನಿಗೆ ಅಭಿಷೇಕವಂತೆ’’ ಎಂಬ ಪದ್ಯದ ಕೊನೆಯವರೇಗೂ ಅದನ್ನು ಆಲಿಸಿ ಕೇಳುವ ಭಂಗಿ ಮುಖದ ಅಭಿನಯ, ಕೈಕೆಯಲ್ಲಿಗೆ ಬರುವ, ಬಂದು ಮಾತಾಡುವ ದೃಶ್ಯ ಅನ್ಯಾದೃಶ.
ಗುಹನ ಪಾತ್ರದಲ್ಲಿ ಬಣ್ಣಗಳಿಂದ ಮೈಯೆಲ್ಲಾ ಶ್ರೀರಾಮ, ರಘುರಾಮ, ಜಯರಾಮ, ಸೀತಾರಾಮ ಮುಂತಾದ ರಾಮನ ಹೆಸರನ್ನು ಬರೆದು ರಂಗಸ್ಥಳಕ್ಕೆ ಬರುವ ದೃಶ್ಯ ನೋಡಲು ಬಲು ಸುಂದರವಾಗಿತ್ತಂತೆ. ಶ್ವೇತಕುಮಾರ ಚರಿತ್ರೆಯಲ್ಲಿನ ಪ್ರೇತದ ಪಾತ್ರವನ್ನು ತನ್ನ ಬಣ್ಣಗಾರಿಕೆಯ ವಿನ್ಯಾಸದಿಂದ ಬಲು ಸೊಗಸಾಗಿ ಅಭಿನಯಿಸುತ್ತಿದ್ದರು. ಇವರ ಒಡನಾಡಿಗಳಾಗಿ ಅಳಕೆ ರಾಮಯ್ಯ ರೈ, ಅಳಕೆ ಮಾದಪ್ಪ ಶೆಟ್ಟಿ, ಕೂಡ್ಲು ದೂಮ ಪ್ಪ, ಸುಬ್ಬಯ್ಯ ಶೆಟ್ಟಿ (ವಾಲಿಖ್ಯಾತಿ) ಮಾಡಾಂಗಾಯಿ ಕೃಷ್ಣ ಭಟ್ಟರು, ಶೇಣಿ, ಸಾಮಗರೂ ಇದ್ದರು. ಇವರ ತಮ್ಮ ಮಧೂರು ಗಣಪತಿ ರಾವ್ ಕೂಡಾ ಪ್ರಸಿದ್ಧ ಕಲಾವಿದರಾಗಲು ಪಳಗಿದ್ದು ಅಣ್ಣನ ಗರಡಿಯಲ್ಲೆ. 1973ರಲ್ಲಿ ತಮ್ಮ ಸ್ವಲ್ಪ ಸಮಯದ ಅಸೌಖ್ಯದಿಂದ ಇವರು ತಮ್ಮ ಕಲಾಯಾತ್ರೆಯನ್ನು ಮುಗಿಸಿದರು. ು
ಮಾನವ ಉದ್ಯೋಗ ನಿಮಿತ್ತನಾಗಿದ್ದರೆ ಆತನ ಕರ್ತವ್ಯದಲ್ಲಿ ನಿರತನಾಗಿದ್ದು ಇತರ ಯಾವುದೇ ಕೆಲಸಗಳಿಗೆ ಸಮಯವಿಲ್ಲ ಎನ್ನುವವರೇ ಹೆಚ್ಚು. ಇಂದಿನ ಒತ್ತಡದ ಜೀವನದ ನಡುವೆ ಹವ್ಯಾಸಕ್ಕಾಗಿ ಯಾವುದಾದರೂ ಕಲೆಯನ್ನು ಅಸ್ವಾದಿಸುವುದರಲ್ಲಿ ಅಥವಾ ಕಲಾವಿದನಾಗುವುದರಲ್ಲಿ ತಲ್ಲೀನರಾಗುತ್ತಿರುವವರ ಸಂಖ್ಯೆ ಬಹಳ ವಿರಳ. ಸಂಗೀತ, ಯಕ್ಷಗಾನ, ಹರಿಕಥೆಗಳಂತಹ ಕಲೆಗಳಲ್ಲಿ ತೊಡಗಿಕೊಳ್ಳುವವರು ಹಾಗೂ ಸಹೃದಯ ಕಲಾಸಕ್ತರೂ ಕಡಿಮೆಯಾಗುವುದನ್ನು ಕಾರ್ಯಕ್ರಮಗಳಲ್ಲಿ ಕಾಣುತ್ತಿದ್ದೇವೆ. ಇಂದಿನ ಎಲೆಕ್ಟ್ರಾನಿಕ್ ಯುಗದ ಆಧುನಿಕ ಜಗತ್ತಿನಲ್ಲಿ ಮನಸೆಳೆಯುವ ಅನೇಕ ಇತರೆ ಮಾಧ್ಯಮಗಳಾದ ಟಿ.ವಿ., ಮೊಬೈಲು, ವಾಟ್ಸಾಪ್, ಇಂಟರ್ನೆಟ್ಗಳ ಪರಿಣಾಮ ಇತರ ಹವ್ಯಾಸಗಳಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಕಡಿಮೆಯಾಗಲು ಕಾರಣವಿರಲೂಬಹುದು. ಆದರೆ ಇದಕ್ಕಿಂತ ಭಿನ್ನವಾಗಿ ಇಲ್ಲೊಬ್ಬರು ಒಂದು ವಿಶೇಷ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೇ ಶ್ರೀಯುತ ಶಿಮ್ಲಡ್ಕ ಗೋಪಾಲಕೃಷ್ಣ ಭಟ್ಟರು.
ಮೂಲತಃ ಕೃಷಿಕರಾಗಿದ್ದ ಇವರು ಡಾಬರ್ಮನ್, ಬಾಕ್ಸರ್, ಆಲ್ಸೇಶಿಯನ್ ತಳಿಯ ನಾಯಿಗಳ ಸಾಕುವಿಕೆ ಹಾಗೂ ಅವುಗಳನ್ನು ತರಬೇತುಗೊಳಿಸುವುದರಲ್ಲೂ ತೊಡಗಿಸಿ ಕೊಂಡಿದ್ದವರು. ಅನೇಕ ಪ್ರದರ್ಶನಗಳಲ್ಲಿ ಇವರು ಸಾಕಿದ ನಾಯಿಗಳು ಬಹುಮಾನಗಳನ್ನೂ ಪಡೆದಿವೆ.
ಅಷ್ಟು ಮಾತ್ರವಲ್ಲದೆ ಯಕ್ಷಗಾನ ಕಲಾವಿದರೂ ಆಗಿರುವ ಇವರು ಹಲವು ತಾಳಮದ್ದಲೆ ಕೂಟಗಳಲ್ಲಿ ಅರ್ಥಗಾರಿಕೆಯನ್ನು ಮಾಡಿದ ಅನುಭವವನ್ನೂ ಹೊಂದಿದ್ದಾರೆ. ಇವರ ತಂದೆ ದಿ. ಶಿಮ್ಲಡ್ಕ ಶಂಭಟ್ಟರು ಖ್ಯಾತ ಅರ್ಥಧಾರಿ ಗಳಾಗಿದ್ದು, 50-60ರ ದಶಕದಲ್ಲಿ ರಾಕ್ಷಸ ಹಾಗೂ ಗಂಭೀರ ಪಾತ್ರಗಳ ಮೂಲಕ ಹೆಸರುವಾಸಿಯಾಗಿದ್ದವರು.
ಪ್ರಸ್ತುತ ಶ್ರೀ ಗೋಪಾಲಕೃಷ್ಣ ಭಟ್ಟರು ತಮ್ಮ 77ರ ಇಳಿವಯಸ್ಸಿನಲ್ಲಿ ಒಂದು ಉತ್ತಮ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅದುವೇ ಚೆಂಡೆ ವಾದನದ ಕೋಲುಗಳ ತಯಾರಿಕೆ. ಇದು ಯಕ್ಷಲೋಕಕ್ಕೆ ಇವರ ಕೊಡುಗೆ ಎಂದರೂ ತಪ್ಪಾಗಲಾರದು. ಇದರೊಂದಿಗೆ ಜಾಗಟೆ ಕೋಲುಗಳನ್ನೂ ಇವರು ತಯಾರಿಸುತ್ತಿದ್ದಾರೆ. ಇಷ್ಟೇ ಆದರೆ ಇದರಲ್ಲೇನು ವಿಶೇಷ ಎಂಬ ಭಾವ ಮೂಡಲೂಬಹುದು. ಆದರೆ ಇವರು ಈ ಕೋಲುಗಳನ್ನು ತಯಾರಿಸುತ್ತಿರುವುದು ಯಂತ್ರಗಳ ಸಹಾಯವಿಲ್ಲದೆ ಕೈಯಿಂದಲೇ ಎನ್ನುವುದು ಇವರ ವಿಶೇಷತೆ; ಅಂದರೆ ಕತ್ತಿ, ಚೂರಿ ಹಾಗೂ ಪಾಲಿಷ್ ಪೇಪರ್ಗಳನ್ನು ಬಳಸಿ ಈ ಕೋಲುಗಳನ್ನು ತಯಾರಿಸುತ್ತಿರುವ ಇವರು ತಮ್ಮ ಬಿಡುವಿನ ಸಮಯದಲ್ಲಿ ಅತ್ಯಂತ ತಾಳ್ಮೆ ಹಾಗೂ ಶ್ರದ್ಧೆಯಿಂದ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಕೋಲುಗಳನ್ನು ತಯಾರಿಸಲು ದಾಸವಾಳ, ಪೇರಳೆ, ರೆಂಜೆ, ಅಕೇಶಿಯಾ, ಮಂದಾರ, ಹಲಸು ಮುಂತಾದವುಗಳ ರೆಂಬೆಗಳನ್ನು ಆಯ್ದು ಅದನ್ನು ಬೇಕಾದ ಆಕಾರಕ್ಕೆ ಕತ್ತರಿಸುತ್ತಾರೆ. ನಂತರ ಅದನ್ನು ನಯ ಹಾಗೂ ನುಣುಪಾಗಿಸಲು ಇವರಿಗೆ ಕನಿಷ್ಠ 7-8 ತಾಸುಗಳೇ ಬೇಕಾಗುತ್ತವೆ.
ಅಳಿಯ ಚೆಂಡೆ ತರಗತಿಗೆ ಹೋಗಲು ಪ್ರಾರಂಭಿಸಿದಾಗ ಇಟ್ಟ ಬೇಡಿಕೆಯಂತೆ ಚೆಂಡೆ ವಾದನದ ಕೋಲುಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಕಲಾವಿದರ ಬೇಡಿಕೆಗೆ ಅನುಗುಣವಾಗಿ ಅದರಲ್ಲೂ ಚೆಂಡೆಯನ್ನು ಕಲಿಯುವವರಿಗಾಗಿ 9 ಇಂಚು, 12 ಇಂಚು ಉದ್ದದ ಕೋಲುಗಳನ್ನು ತಯಾರಿಸಿ ಕೊಡುತ್ತಿದ್ದಾರೆ. ಹಿಂದೊಮ್ಮೆ ಖ್ಯಾತ ಯಕ್ಷಗಾನ ಚೆಂಡೆವಾದಕರಲ್ಲೊಬ್ಬರಾದ ದಿ. ಕುದ್ರೆಕೂಡ್ಲು ರಾಮಭಟ್ಟರು ದಾಸವಾಳದ ರೆಂಬೆಯ ಕೋಲುಗಳಿಂದ ತಯಾರಿಸಲಾದ ಕೋಲುಗಳು ಹಗುರವಾಗಿದ್ದು ಚೆಂಡೆ ಬಾರಿಸಲು, ಉರುಳಿಕೆಗಳ ಮೂಲಕ ತಾಳ ಲಯಗಳನ್ನು ಕಂಡುಕೊಳ್ಳಲು ಸೂಕ್ತವಾಗಿವೆ ಎಂದು ಹೇಳಿದ ಮಾತುಗಳನ್ನು ಆಧರಿಸಿ ತಯಾರಿಕೆಯ ಕಾಯಕದಲ್ಲಿ ತೊಡಗಿಸಿಕೊಂಡ ಇವರು ಇಂದು ಸುಮಾರು 40-50 ಜೊತೆ ಕೋಲುಗಳನ್ನು ತಯಾರುಮಾಡಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಈ ಕೋಲುಗಳಿಗೆ 300ರಿಂದ 400 ರೂಪಾಯಿ ಕ್ರಯ ಹೇಳುವ ಇವರಿಗೆ ಈ ಕೋಲುಗಳ ಮೂಲಕ ಸಂಪಾದನೆ ಬಹಳವಿಲ್ಲ. ಈ ಮೌಲ್ಯ ತನ್ನ ಸಂತೋಷಕ್ಕಾಗಿ ಈ ಕಾಯಕದಲ್ಲಿ ತೊಡಗಿಕೊಂಡಿರುವ ಇವರ ತಯಾರಿಕೆಗೆ ಸಲ್ಲುವ ಗೌರವಧನವೇ ಹೊರತು ಶ್ರಮಕ್ಕೆ ತಕ್ಕ ಮೌಲ್ಯವಲ್ಲ.
ಪ್ರಸ್ತುತ ವಿಟ್ಲದ ಬಸವಗುಡಿಯ ಸಮೀಪ ನೆಲೆಸಿರುವ ಶ್ರೀಯುತರದು ಪತ್ನಿ ಶ್ರೀಮತಿ ಸುಶೀಲ, ಮಗಳು ಮೈತ್ರಿ ಭಟ್ಟ, ಅಳಿಯ ಶ್ರೀ ರವಿಶಂಕರ ಕುಳಮರ್ವ ಹಾಗೂ ಮೊಮ್ಮಕ್ಕಳಾದ ಮಹಿಮಾ ಮತ್ತು ಮನಸ್ವಿಯವರೊಂದಿಗೆ ಸಂತೃಪ್ತ ಜೀವನ. ಕಲಾವಿದರ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಅವುಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವ ಇವರು ಲಭ್ಯವಿದ್ದರೆ ನೀಲಗಿರಿ ಮರದ ಕೋಲನ್ನೂ ತಯಾರಿಸಬಹುದು ಎನ್ನುತ್ತಿದ್ದು, ಈಗಲೂ ಕೆಲವೊಮ್ಮೆ ತಾಳಮದ್ದಳೆ ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದಾರೆ. ಕೃಷಿಕರಾಗಿದ್ದಾಗ ಬೆಳ್ತಂಗಡಿ, ಗುರುವಾಯನಕೆರೆ, ನಾಳ ಸುತ್ತಮುತ್ತ ಬಿಡುವಿಲ್ಲದ ಅರ್ಥಧಾರಿಯಾಗಿದ್ದ ಇವರು ಪ್ರಸ್ತುತ ಚೆಂಡೆಕೋಲು ತಯಾರಿಕೆಯ ಮೂಲಕ ಯಕ್ಷಮಾತೆಗೆ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇಂತಹ ಅಪರೂಪದ ಕಾಯಕದಲ್ಲಿ ತೊಡಗಿ ಕೊಂಡಿರುವ ಶ್ರೀಯುತರ ಈ ಸೇವೆ ಯಕ್ಷಮಾತೆಯ ಮಕುಟಮಣಿಯಾಗಲಿ ಎಂದು ಹಾರೈಸೋಣ…. (ಸಂಪರ್ಕಕ್ಕಾಗಿ : 9483286958)
ಮೇಲ್ನೋಟಕ್ಕೆ ಯಕ್ಷಗಾನವು ಎಲ್ಲಾ ಕಲೆಗಳಂತೆ ಒಂದು ಕಲೆ. ಆದರೆ ಯಕ್ಷಗಾನ ಕಲಾವಿದನಿಗೆ ಮತ್ತು ಯಕ್ಷಗಾನವನ್ನು ಅತಿಯಾಗಿ ಪ್ರೀತಿಸುವ ಒಬ್ಬ ಕಲಾಭಿಮಾನಿಗೆ ಅದು ಕೇವಲ ಕಲೆಯಾಗಿರುವುದಿಲ್ಲ. ಬದಲಾಗಿ ತಮ್ಮ ಸರ್ವಸ್ವವೂ ಯಕ್ಷಗಾನವೇ ಆಗಿರುತ್ತದೆ. ಯಕ್ಷಗಾನವಿಲ್ಲದೆ ತಾನಿಲ್ಲ ಎಂಬಷ್ಟು ಮಟ್ಟಕ್ಕೆ ಅದರ ಸೆಳೆತಕ್ಕೆ ಒಳಗಾದವರು ಅನೇಕರಿದ್ದಾರೆ. ಗ್ರಾಮ್ಯ ಭಾಷೆಯಲ್ಲಿ ‘ಆಟದ ಚಟ’ ಎಂದು ಹೇಳುವುದೂ ಇದೆ. ಅನೇಕ ವರ್ಷಗಳ ಕಾಲ ಮೇಳ ತಿರುಗಾಟ ಮಾಡಿ, ಕೊನೆಗೆ ಅನಾರೋಗ್ಯದಿಂದ ಹಾಸಿಗೆ ಹಿಡಿದು, ಇನ್ನು ಮುಂದೆ ವೇಷ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬ ವಿಷಯವನ್ನು ಅರಿತುಕೊಂಡು, ದುಃಖದಿಂದ ಕೊರಗಿ, ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆಯೂ ನಾವು ಕೇಳಿದ್ದೇವೆ. ಆರ್ಥಿಕವಾಗಿ ತಮಗೆ ಹಾಗೂ ತಮ್ಮ ಕುಟುಂಬಕ್ಕಾಗಿ ಹೆಚ್ಚೇನೂ ಸಂಗ್ರಹಿಸದೆ ಇದ್ದರೂ, ಯಕ್ಷಗಾನ ಕಲಾಸೇವೆಯಲ್ಲಿ ಅದೇನೋ ರೀತಿಯ ಆತ್ಮಾನಂದವನ್ನು ಹೊಂದುವವರು ಬಹಳಷ್ಟು ಮಂದಿ ಇದ್ದಾರೆ.
ಇನ್ನು ಉದ್ಯೋಗದಿಂದಾಗಿ ಪರವೂರಿನಲ್ಲಿ ನೆಲೆಸಿರುವ ಯಕ್ಷಗಾನ ಕಲಾವಿದನೋ ಅಥವಾ ಕಲಾಸಕ್ತನೋ, ಆ ಊರಿನಲ್ಲಿಯೂ ಯಕ್ಷಗಾನ ಪ್ರದರ್ಶನಗಳು ಏರ್ಪಟ್ಟರೆ, ಎಂಥಹ ಬಿಡುವಿಲ್ಲದ ಸಂದರ್ಭದಲ್ಲಿಯೂ ಕಲಾಪ್ರದರ್ಶನದಲ್ಲಿ ಭಾಗಿಯಾಗುತ್ತಾನೆ. ಹಾಗೆಂದು ತಾವು ನೆಲೆಸಿರುವ ಯಾವುದೋ ರಾಜ್ಯದ ಅಥವಾ ಯಾವುದೋ ದೇಶದ ಒಂದು ಊರಿನಲ್ಲಿ ಯಕ್ಷಗಾನವನ್ನು ಬಿತ್ತಿ ಬೆಳೆಸುವವರು ಬಹಳ ಕಡಿಮೆ. ಯಾಕೆಂದರೆ ಅದು ಅಷ್ಟು ಸುಲಭದ ಕೆಲಸವಲ್ಲ. ಆ ಊರಿನಲ್ಲಿ ಯಕ್ಷಗಾನದ ಕುರಿತಾದಂತಹ ಸಮಾನಮನಸ್ಕರನ್ನು ಒಟ್ಟುಗೂಡಿಸುವುದಕ್ಕೆ ಬಹಳ ಶ್ರಮವಹಿಸ ಬೇಕಾದ ಅಗತ್ಯವಿದೆ. ಅಂತಹ ಒಂದು ಸಾಧನೆಯನ್ನು ಮಾಡಿದವರಲ್ಲಿ ಒಬ್ಬರು ಶ್ರೀಯುತ ಮದಂಗಲ್ಲು ಆನಂದ ಭಟ್ಟರು.
ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮದಂಗಲ್ಲಿನವರಾದ ಶ್ರೀಯುತರು ಕಳೆದ ಮೂವತ್ತು ವರ್ಷಗಳಿಂದ ಉದ್ಯೋಗನಿಮಿತ್ತ ಮಹಾರಾಷ್ಟ್ರದ ಸಾಂಸ್ಕೃತಿಕ ನಗರಿ ಪುಣೆಯಲ್ಲಿ ನೆಲೆಸಿರುತ್ತಾರೆ. ತಂದೆ ಮದಂಗಲ್ಲು ದಿ| ಕೃಷ್ಣ ಭಟ್, ತಾಯಿ ದಿ| ಸಾವಿತ್ರಮ್ಮ. 1949ರಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೀಯಪದವಿನಲ್ಲಿ ನಂತರ ಪದವಿ ಶಿಕ್ಷಣವನ್ನು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪೂರೈಸಿದರು. ಖ್ಯಾತ ಯಕ್ಷಗಾನ ಕಲಾವಿದ ದಿ| ಕುರಿಯ ವಿಠಲ ಶಾಸ್ತ್ರಿಯವರು ಆನಂದ ಭಟ್ಟರಿಗೆ ಸೋದರಮಾವ. ಹೀಗಾಗಿ ಎಳವೆ ಯಿಂದಲೇ ಯಕ್ಷಗಾನದ ಆಸಕ್ತಿ ಭಟ್ಟರಲ್ಲಿ ಬೆಳೆದಿತ್ತು.
ಪುಂಡುವೇಷ, ರಾಜವೇಷ, ಬಣ್ಣದ ವೇಷ ಮುಂತಾದವುಗಳನ್ನು ಸಮರ್ಥವಾಗಿ ನಿಭಾಯಿಸುವುದರ ಜೊತೆಗೆ ಉತ್ತಮ ಅರ್ಥಧಾರಿ ಯಾಗಿಯೂ ಪ್ರಸಿದ್ಧಿಯನ್ನು ಪಡೆದರು. ಅನೇಕರಿಗೆ ನಾಟ್ಯಾಭ್ಯಾಸವನ್ನು ಹೇಳಿಕೊಟ್ಟು ಉತ್ತಮ ಗುರುವಾಗಿಯೂ ಗುರುತಿಸಿಕೊಂಡವರು. 1980ರಲ್ಲಿ ತನ್ನ ಅಣ್ಣ ಸದಾಶಿವ ಭಟ್ಟರ ಸಲಹೆಯಂತೆ ಉದ್ಯೋಗ ನಿಮಿತ್ತ ಪುಣೆಗೆ ಆಗಮಿಸಿ, ಪುಣೆಯಲ್ಲಿಯೂ ಉದ್ಯೋಗದ ಜೊತೆಗೆ ಯಕ್ಷಗಾನವನ್ನೂ ಪಸರಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡರು. ಹೋಟೆಲು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದ ಅನೇಕ ಯಕ್ಷಗಾನ ಆಸಕ್ತರನ್ನು ಒಟ್ಟು ಸೇರಿಸಿ, ಅವರಿಗೆ ನಾಟ್ಯಾಭ್ಯಾಸವನ್ನು ಹೇಳಿಕೊಟ್ಟು ಪುಣೆಯಲ್ಲಿಯೂ ಉತ್ತಮ ಕಲಾವಿದ ಮತ್ತು ಗುರುವಾಗಿ ಅನೇಕ ಅಭಿಮಾನಿ ಹಾಗೂ ಶಿಷ್ಯವರ್ಗವನ್ನು ಸಂಪಾದಿಸಿದರು.
ಯಕ್ಷಗಾನಕ್ಕೆ ಸಂಬಂಧಪಟ್ಟ ಸಂಘ-ಸಂಸ್ಥೆಗಳೇ ಇಲ್ಲದ ಪುಣೆಯಲ್ಲಿ ಮೊದಲಾಗಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ. ಆ ಬಳಿಕ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಗಳು ಸ್ಥಾಪನೆಗೊಂಡಿರುವುದು ಆನಂದ ಭಟ್ಟರ ಪರಿಶ್ರಮದ ಫಲ ಹಾಗೂ ಅವರ ಮೇಲೆ ಪುಣೆಯ ಯಕ್ಷಾಭಿಮಾನಿಗಳು ಇಟ್ಟಿರುವ ಅಭಿಮಾನದ ದ್ಯೋತಕ. ಕೇವಲ ಊರಿನ ಕಲಾವಿದರನ್ನು ಕರೆಸಿ ಯಕ್ಷಗಾನ ಪ್ರದರ್ಶನ ನಡೆಸುವುದಕ್ಕಿಂತ ಪುಣೆಯಲ್ಲಿಯೇ ಅನೇಕ ಕಲಾವಿದರನ್ನು ತಯಾರುಗೊಳಿಸಬೇಕೆಂಬ ಸದುದ್ದೇಶವನ್ನು ಹೊಂದಿ, ಈ ಕುರಿತಾಗಿ ಬಹಳ ಶ್ರಮವಹಿಸುತ್ತಿದ್ದಾರೆ. ಪುಣೆಯಲ್ಲಿ ಕೇವಲ ತುಳು-ಕನ್ನಡಿಗರಿಗೆ ಮಾತ್ರವಲ್ಲದೆ, ಅನ್ಯ ರಾಜ್ಯದ ಮಕ್ಕಳಿಗೆ ಹಾಗೂ ಮಹಿಳೆಯರಿಗೂ ನಾಟ್ಯಾಭ್ಯಾಸವನ್ನು ಹೇಳಿಕೊಟ್ಟು ಅವರಿಂದಲೂ ಗೌರವವನ್ನು ಪಡೆಯುತ್ತಿದ್ದಾರೆ. ಪುಣೆಯ ಅನೇಕ ಯಕ್ಷಗಾನಾಸಕ್ತ ದಾನಿಗಳ ಸಹಕಾರದಿಂದ ಯಕ್ಷಗಾನಕ್ಕೆ ಬೇಕಾದ ವೇಷಭೂಷಣವನ್ನು ತರಿಸಿ ಸ್ವತಃ ತಮ್ಮ ಮನೆಯ ಒಂದು ಮಹಡಿಯಲ್ಲಿ ಅದನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಿ, ಪುಣೆಯಲ್ಲಿ ಯಕ್ಷಗಾನದ ಆರಾಧಕನೆನಿಸಿಕೊಂಡಿದ್ದಾರೆ.
ಶ್ರೀಯುತರ ಈ ಅನನ್ಯ ಸಾಧನೆಯನ್ನು ಗುರುತಿಸಿ ಈಗಾಗಲೇ ಅನೇಕ ಸಂಘ-ಸಂಸ್ಥೆಗಳು ಇವರಿಗೆ ಗೌರವ ಸನ್ಮಾನಗಳನ್ನು ನೀಡಿವೆ. 70ರ ಇಳಿವಯಸ್ಸಿನಲ್ಲಿಯೂ ಯಕ್ಷಗಾನದ ಬಗ್ಗೆ ಇವರಲ್ಲಿರುವ ಅತೀವವಾದಂತಹ ತುಡಿತವನ್ನು ಕಂಡು, ಪುಣೆಯ ಖ್ಯಾತ ಕವಿ, ಸಾಹಿತಿಗಳಲ್ಲಿ ಓರ್ವರಾದ ಶ್ರೀ ಮಹೇಶ್ ಹೆಗ್ಡೆ ಪೊಳಲಿ ಇವರು ಆನಂದ ಭಟ್ಟರ ಕುರಿತಾಗಿ ‘ಯಕ್ಷಲೋಕದ ಸವ್ಯಸಾಚಿ ಮದಂಗಲ್ಲು ಆನಂದ ಭಟ್’ ಎಂಬ ಪುಸ್ತಕವನ್ನು ಬರೆದು ‘ಸಾಹಿತ್ಯ ಬಳಗ ಮುಂಬಯಿ’ ಇದರ ಪ್ರಧಾನ ಸಂಪಾದಕರಾದ ಎಚ್. ಬಿ. ಎಲ್. ರಾವ್ ಅವರ ಮೂಲಕ ಬಿಡುಗಡೆ ಮಾಡಿರುತ್ತಾರೆ. ಪುಣೆಯ ಯಕ್ಷಾಭಿಮಾನಿಗಳಿಗೆಲ್ಲರಿಗೂ ಇದು ಬಹಳ ಸಂತೋಷ ಹಾಗೂ ಹೆಮ್ಮೆಯ ವಿಚಾರ. ಬನ್ನಿ ಅವರ ಜೀವನಾನುಭವವನ್ನು ಅವರ ಮಾತುಗಳಲ್ಲೇ ಕೇಳೋಣ
ತಾವು ಯಕ್ಷಗಾನದ ಕುರಿತಾಗಿ ಆಸಕ್ತಿ ಹೊಂದುವುದಕ್ಕೆ ಕುರಿಯ ಮನೆತನದಲ್ಲಿ ಹುಟ್ಟಿದ್ದೇ ಕಾರಣವಾಯಿತೇ?
ಹೌದು ಖಂಡಿತ. ನಾವು ಎಳವೆಯಿಂದಲೇ ಯಕ್ಷಗಾನವನ್ನು ನೋಡಿ ಬೆಳೆದವರು. ನಮ್ಮ ಮನೆ, ಕುಟುಂಬ, ಊರು ಎಲ್ಲಾ ಕಡೆಗಳಲ್ಲಿ ಯಕ್ಷಗಾನದ ವಾತಾವರಣವಿತ್ತು. ಹಾಗೆಂದು ಮಾವ, ಕುರಿಯ ವಿಠಲ ಶಾಸ್ತ್ರಿಯವರು ನಮ್ಮನ್ನು ಕುಣಿಯುವುದಕ್ಕೆ ಬಿಡುತ್ತಿರಲಿಲ್ಲ. “ನಾನೊಬ್ಬ ಯಕ್ಷಗಾನದಲ್ಲಿ ಇದ್ದರೆ ಸಾಕು, ಇನ್ನು ನೀವೆಲ್ಲ ಅದರಲ್ಲಿ ನರಕ ಬರುವುದು ಬೇಡ’’ ಎಂದು ಗದರಿಸುತ್ತಿದ್ದರು. ಹಾಗಾಗಿ ನಾವು ಅವರಿಗೆ ತಿಳಿಯದ ಹಾಗೆ, ಅವರು ಬೇರೆಯವರಿಗೆ ಹೇಳಿಕೊಡುವುದನ್ನು ಕದ್ದುಮುಚ್ಚಿ ನೋಡಿ ನಮ್ಮಷ್ಟಕ್ಕೆ ಅಭ್ಯಾಸ ಮಾಡುತ್ತಿದ್ದೆವು. ನಾವು ಮಕ್ಕಳೇ ಎಲ್ಲಾ ಸೇರಿ ಪ್ರದರ್ಶನವೂ ಕೊಡುತ್ತಿದ್ದೆವು. ಹಾಗೆಂದು ನಾನು ಆಗ ಅಷ್ಟು ಚುರುಕು ಇರಲಿಲ್ಲ. ದೊಂದಿ, ಪರದೆ ಹಿಡಿಯುವ ಕೆಲಸ ಮಾಡುತ್ತಿದ್ದೆ. ಸೇರಾಜೆ ಸೀತಾರಾಂ ಭಟ್, ಕುರಿಯ ಗಣಪ, ನಾರಾಯಣ, ಬಾಯಾರು ಪ್ರಕಾಶ್ಚಂದ್ರ ಇವರೆಲ್ಲ ಸೇರಿ ನಮ್ಮದೊಂದು ತಂಡ ಇತ್ತು.
ಆಗಿನ ಕಾಲದ ಯಕ್ಷಗಾನ ಶಿಕ್ಷಣ, ಮೇಳ ತಿರುಗಾಟ ಮತ್ತು ಸ್ಥಿತಿಗತಿ ಹೇಗಿತ್ತು?
ನಾನು ಒಂದೆರಡು ವರ್ಷವಷ್ಟೆ ಬೇರೆ ಬೇರೆ ಮೇಳಗಳಲ್ಲಿ ತಿರುಗಾಟ ಮಾಡಿದ್ದೇನೆ. ಈಗಿನ ಹಾಗೆ ಮೇಳಕ್ಕೆ ಸ್ವಂತ ವಾಹನಗಳು ಇರಲಿಲ್ಲ. ಹತ್ತು-ಹದಿನೈದು ರೂಪಾಯಿ ಸಂಭಾವನೆ ದೊರೆಯುತ್ತಿತ್ತು. ಆಟ ನಡೆಯುವ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬಸ್ಸಿಗೆ ಕಾದು ಅಥವಾ ಸಿಕ್ಕಿದ ವಾಹನಗಳಲ್ಲಿ ಹೋಗುತ್ತಿದ್ದೆವು. ಎಲ್ಲಾ ಕಡೆ ಸರಿಯಾದ ರಂಗಸ್ಥಳ ಅಥವಾ ಚೌಕಿ ಸಿಗುತ್ತಿರಲಿಲ್ಲ. ಹೆಚ್ಚಾಗಿ ಮರದ ನೆರಳಿನಲ್ಲಿ ಹಗಲು ಹೊತ್ತು ನಮ್ಮ ನಿದ್ರೆ. ರಜಾದಿನಗಳಲ್ಲಿ ಶಾಲೆಯ ಜಗಲಿ ಹತ್ತಿರ ಇದ್ದರೆ ಹುಡುಕಿಕೊಂಡು ಹೋಗುತ್ತಿದ್ದೆವು. ಮತ್ತೆ ಆ ಕಾಲದಲ್ಲಿ ಜನರಿಗೇನೂ ಯಕ್ಷಗಾನ ಕಲಾವಿದರ ಬಗ್ಗೆ ಅಷ್ಟೇನೂ ಗೌರವ ಇರಲಿಲ್ಲ. `ಏಸದಾಯೆ’ ಎಂದು ಕರೆಯುತ್ತಿದ್ದರು. ನಾನು ಒಂದು ರಾತ್ರಿಯ ಆಟದಲ್ಲಿ ಕನಿಷ್ಟ ಎರಡರಿಂದ-ಮೂರು ವೇಷ ಮಾಡುತ್ತಿದ್ದೆ. ಅಗರಿ ಭಾಗವತರು ಒಂದಿಷ್ಟೂ ಅಹಂ ಇಲ್ಲದೆ ಬೆಳೆಯುವ ಯುವ ಕಲಾವಿದರಿಗೆ ಚೆನ್ನಾಗಿ ಪ್ರೋತ್ಸಾಹಿಸುತ್ತಿದ್ದರು. ಹೀಗೆ ಆ ಕಾಲದ ತಿರುಗಾಟದಲ್ಲಿ ಅದೇನೋ ಆನಂದವಿತ್ತು.
ಪುಣೆಯಲ್ಲಿ ಯಕ್ಷಗಾನವನ್ನು ಬೆಳೆಸುವುದಕ್ಕೆ ನಿಮ್ಮ ವೃತ್ತಿಯ ಜೊತೆ ಹೇಗೆ ಸಾಧ್ಯವಾಯಿತು ಮತ್ತು ಆರಂಭದ ವಾತಾವರಣ ಹೇಗಿತ್ತು?
ಉದ್ಯೋಗ ನಿಮಿತ್ತ ನಾನು ಪುಣೆಗೆ ಬಂದಾಗ ನನಗಿಲ್ಲಿ ಯಾವುದೇ ಕಲಾವಿದರ ಪರಿಚಯವಿರಲಿಲ್ಲ. ಕನ್ನಡ ಸಂಘ ಪುಣೆಯವರು ಇಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಯಾವಾಗಾದರೂ ಒಮ್ಮೊಮ್ಮೆ ಊರಿನಿಂದ ಬಂದ ಕಲಾವಿದರ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನಾನು ಪ್ರೇಕ್ಷಕನಾಗಿ ಭಾಗವಹಿಸುತ್ತಿದ್ದೆ. ಆ ಸಂದರ್ಭದಲ್ಲಿ ಶ್ರೀಯುತ ಗುಂಡು ಶೆಟ್ಟಿ, ರಾಮಣ್ಣ ರೈ ಪುತ್ತೂರು ಮೊದಲಾದ ಹವ್ಯಾಸಿ ಯಕ್ಷಗಾನ ಕಲಾವಿದರ ಹಾಗೂ ಕಲಾಸಕ್ತರ ಪರಿಚಯವಾಯಿತು. ಪುಣೆಯ ಶ್ಯಾಮ ರಾವ್ ಕಲ್ಮಾಡಿಯವರು ಸಹ ಒಳ್ಳೆಯ ಪ್ರೋತ್ಸಾಹವನ್ನು ನೀಡಿದರು. ಆ ಬಳಿಕ ಪುಣೆಯ ವಿವಿಧ ಹೋಟೆಲುಗಳಲ್ಲಿ ಕೆಲಸ ಮಾಡುತ್ತಿದ್ದ ಊರಿನ ಹವ್ಯಾಸಿ ಕಲಾವಿದರ ಪರಿಚಯವಾಗಿ, ಅವರನ್ನೆಲ್ಲ ಒಟ್ಟು ಸೇರಿಸಿ, ನನ್ನ ನಿರ್ದೇಶನದಲ್ಲಿ ಕೆಲವು ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸಿದ್ದೆವು. ಅವರೆಲ್ಲ ಬಹಳ ಆಸಕ್ತಿಯಿಂದ ರಾತ್ರಿ 11 ಗಂಟೆಯ ನಂತರ ತಮ್ಮ ಕೆಲಸ ಮುಗಿಸಿ ನಾಟ್ಯ ತರಬೇತಿಗಾಗಿ ಒಟ್ಟಾಗುತ್ತಿದ್ದರು. ನಾನು ಕೂಡ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದುಕೊಂಡು ರಾತ್ರಿ ಹೊತ್ತು ಅವರಿಗಾಗಿ ಬಹಳ ದೂರ ಸೈಕಲ್ ತುಳಿಯುತ್ತಾ ತರಬೇತಿ ಕೊಡುವುದಕ್ಕಾಗಿ ಹೋಗುತ್ತಿದ್ದೆ. ಆಗ ನಡೆಯುತ್ತಿದ್ದ ಪ್ರತಿಯೊಂದು ಪ್ರದರ್ಶನಗಳು ಕೂಡ ಅತ್ಯಂತ ಯಶಸ್ವಿಯಾಗಿ ಜನಮೆಚ್ಚುಗೆಗೆ ಪಾತ್ರವಾಗುತ್ತಿತ್ತು. ಹೀಗಾಗಿ ಅನೇಕ ಕನ್ನಡ ಮತ್ತೆ ಮರಾಠಿ ಮಹಿಳೆಯರೂ ಕೂಡ ನಾಟ್ಯಾಭ್ಯಾಸಕ್ಕಾಗಿ ನನ್ನಲ್ಲಿಗೆ ಬರುತ್ತಿದ್ದರು. ಅದರಲ್ಲಿ ಹೆಚ್ಚಿನವರು ಉನ್ನತ ಹುದ್ದೆಯಲ್ಲಿದ್ದವರಾಗಿದ್ದರು. ಕನ್ನಡ ಬರದಿದ್ದರೂ, ಆಂಗ್ಲ ಭಾಷೆಯಲ್ಲಿ ಬರೆದು ಬಾಯಿಪಾಠ ಮಾಡಿ ಸಂಭಾಷಣೆಯನ್ನು ಮಾಡುತ್ತಿದ್ದರು. ಹೀಗಾಗಿ ಎಲ್ಲರಿಂದಲೂ ಉತ್ತಮ ಗೌರವವನ್ನು ಸಂಪಾದಿಸಿದ್ದೇನೆ ಎಂಬ ಹೆಮ್ಮೆ ಇದೆ. ಕನ್ನಡ ಸಂಘ ಪುಣೆ ಹಾಗೂ ಗುರುದೇವ ಬಳಗ, ಅದೇ ರೀತಿ ಪುಣೆಯ ಉದ್ಯಮಿ ಪ್ರವೀಣ್ ಶೆಟ್ಟಿ ಪುತ್ತೂರು ಇವರೂ ಕೂಡ ಯಕ್ಷಗಾನಕ್ಕಾಗಿ ಬಹಳ ಸಹಕಾರವನ್ನು ಕೊಟ್ಟಿದ್ದಾರೆ. ಆ ಬಳಿಕ ಹವ್ಯಾಸಿ ಕಲಾವಿದರಾದ ವಾಸು ಕುಲಾಲ್ ವಿಟ್ಲ, ಸುಖೇಶ್ ಶೆಟ್ಟಿ ಎಣ್ಣೆಹೊಳೆ ಮುಂತಾದವರು ನನ್ನೊಂದಿಗೆ ಸೇರಿ ಯಕ್ಷಗಾನ ಚಟುವಟಿಕೆಗಳಿಗೆ ಉತ್ತಮ ಪ್ರೋತ್ಸಾಹವನ್ನು ಕೊಡುತ್ತಿದ್ದರು, ಈಗಲೂ ಕೊಡುತ್ತಿದ್ದಾರೆ. ಈ ನಡುವೆ ಅನೇಕ ಕಹಿ ಘಟನೆ, ನೋವು ಇತ್ಯಾದಿಗಳನ್ನು ಕೂಡ ಅನುಭವಿಸಿದ್ದೇನೆ.
ಈಗ ಪುಣೆಯಲ್ಲಿ ಯಕ್ಷಗಾನದ ಸ್ಥಿತಿಗತಿ ಹೇಗಿದೆ?
ಇಲ್ಲಿನ ಎಲ್ಲಾ ಕಲಾವಿದರು ಕಲಾಸೇವೆಗಾಗಿ ಬಹಳ ಆಸಕ್ತಿವಹಿಸಿ, ಯಾವುದೇ ಆರ್ಥಿಕ ಅಪೇಕ್ಷೆ ಇಲ್ಲದೆ ಶ್ರಮವಹಿಸುತ್ತಾರೆ. ಹಾಗೆಂದು ಅವರಿಗೆ ಸರಿಯಾದ ಪ್ರೋತ್ಸಾಹ ಜೊತೆಗೆ ಆರ್ಥಿಕ ಬೆಂಬಲವನ್ನು ಕೊಟ್ಟದ್ದೇ ಆದಲ್ಲಿ ಯಕ್ಷಗಾನವು ಪುಣೆಯಲ್ಲಿ ಬೆಳೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಪ್ರತಿ ಕಾರ್ಯಕ್ರಮಕ್ಕೂ ಪದೇ ಪದೇ ಒಬ್ಬ ವ್ಯಕ್ತಿಯ ಬಳಿ ಹೋಗಿ ಧನಸಹಾಯ ಕೇಳುವುದು ಅಷ್ಟು ಸರಿಯಲ್ಲ. ಆ ನಿಟ್ಟಿನಲ್ಲಿ ಇಲ್ಲಿನ ಉದ್ಯಮಿ ಶ್ರೀಯುತ ಜಗನ್ನಾಥ ಶೆಟ್ಟಿಯವರು ಉತ್ತಮ ರೀತಿಯ ಸಹಕಾರವನ್ನು ಕೊಡುತ್ತಿದ್ದಾರೆ. ಸರ್ಕಾರದ ಇಲಾಖೆಗಳನ್ನು ಸಂಪರ್ಕಿಸಿ, ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾದ ಅಗತ್ಯವಿದೆ.
ಯಕ್ಷಗಾನದ ನಿಮ್ಮ ಪ್ರವೃತ್ತಿಗೆ ನಿಮ್ಮ ಮನೆ ಯವರ ಸಹಕಾರ ಹೇಗಿದೆ?
ನನ್ನ ಶ್ರೀಮತಿ ಹೇಮಾ ನನಗೆ ನೆರಳಿನ ಹಾಗೆ ಇದ್ದಾಳೆ. ಯಕ್ಷಗಾನಕ್ಕೆ ಒಳ್ಳೆಯ ಪ್ರೋತ್ಸಾಹ ಹಾಗೂ ಸಹಕಾರವನ್ನು ಕೊಡುತ್ತಿದ್ದಾಳೆ. ಎಲ್ಲಿಯವರೆಗೆ ಅಂದರೆ ನನ್ನ ಮನೆಯಲ್ಲಿರುವ ಯಕ್ಷಗಾನದ ಎಲ್ಲಾ ವೇಷಭೂಷಣಗಳನ್ನು ಪ್ರತಿ ಕಾರ್ಯಕ್ರಮ ಮುಗಿದ ನಂತರ ಚೆನ್ನಾಗಿ ಒಣಗಿಸಿ, ಬೇಕಾದ ಹಾಗೆ ವ್ಯವಸ್ಥೆಗೊಳಿಸುವಲ್ಲೂ ಉತ್ತಮ ಮುತುವರ್ಜಿ ವಹಿಸುತ್ತಿದ್ದಾರೆ. ಬಿ.ಎಸ್ಸಿ. ಪದವೀಧರೆ, ಶ್ರೀಮಂತ ಮತೆನತನದಿಂದ ಬಂದವಳು, ಕವಯತ್ರಿಯೂ ಹೌದು. ನನ್ನೆಲ್ಲಾ ಆಗುಹೋಗುಗಳಿಗೆ ಅವಳೇ ಬೆನ್ನೆಲುಬು.
ಇದು ತನಕದ ಬದುಕು ಹಾಗೂ ಕಲಾಬದುಕು ನಿಮಗೆ ತೃಪ್ತಿ ತಂದಿದೆಯೇ?
ಬದುಕಿನಲ್ಲಿ ನನಗೆ ತುಂಬಾ ತೃಪ್ತಿ ಇದೆ. ಉದ್ಯೋಗಕ್ಕಾಗಿ ಪುಣೆಗೆ ಬಂದ ನಾನು ಆರ್ಥಿಕವಾಗಿ ಹೆಚ್ಚೇನೂ ಅಲ್ಲದಿದ್ದರೂ, ತಕ್ಕಮಟ್ಟಿಗೆ ಸಂಪಾದಿಸಿ, ಯಾರದ್ದೇ ಹಂಗಿಲ್ಲದೆ ತೃಪ್ತಿ ಹಾಗೂ ಸುಖಕರವಾದ ಜೀವನವನ್ನು ಅನುಭವಿಸುತ್ತಿದ್ದೇನೆ. ಪ್ರವೃತ್ತಿಯ ಮೂಲಕ ಅನೇಕ ಮಂದಿಗಳ ಪ್ರೀತಿ, ಸ್ನೇಹ, ಗೌರವವನ್ನು ಸಂಪಾದಿಸಿದ್ದೇನೆ. ಹುಟ್ಟೂರು, ಪುಣೆ ಹೀಗೆ ಎಲ್ಲಾ ಕಡೆಗಳಲ್ಲಿ ನನ್ನನ್ನು ಯಕ್ಷಗಾನ ಕಲಾವಿದನೆಂದೇ ಗುರುತಿಸುವಾಗ ಸಂತೋಷವಾಗುತ್ತದೆ. ನನ್ನ ಮೇಲೆ ಅಭಿಮಾನವಿಟ್ಟೇ ಮುಂಬೈಯ ಎಚ್.ಬಿ.ಎಲ್. ರಾವ್ ಅವರು ಪೊಳಲಿ ಮಹೇಶ್ ಹೆಗಡೆಯವರ ಮೂಲಕ ನನ್ನ ಕುರಿತಾದ ಪುಸ್ತಕವನ್ನು ಬರೆದು ಬಿಡುಗಡೆ ಮಾಡಿದ್ದಾರೆ.
ಯಕ್ಷಗಾನದ ಮುಂದಿನ ಪೀಳಿಗೆಗೆ ನಿಮ್ಮ ಮಾತು…?
ಯಕ್ಷಗಾನ ಉಳಿಯಬೇಕು, ಬೆಳೆಯಬೇಕು, ಪರವೂರಿನಲ್ಲಿಯೂ ಬೆಳೆಯಬೇಕು. ಕಲಾವಿದರೂ ಬೆಳೆಯಬೇಕು. ನಿಮ್ಮಂಥ ಯುವ ಕಲಾವಿದರು ಈ ಕುರಿತಾಗಿ ಶ್ರಮಿಸಬೇಕು. ಯಕ್ಷಗಾನದ ಮೂಲ ಸೊಗಡಿಗೆ ತೊಂದರೆ ಬರದ ರೀತಿಯಲ್ಲಿ ಬೆಳೆಸಬೇಕು. ಕಲಾವಿದರು ಒಬ್ಬರಿಗೊಬ್ಬರು ಅನ್ಯೋನ್ಯತೆಯಿಂದ ಇದ್ದು, ಒಬ್ಬರಿಗೊಬ್ಬರು ಸಹಕರಿಸಬೇಕು. ರಂಗಸ್ಥಳದಲ್ಲಿ ಹಿತಮಿತವಾಗಿ ಪಾತ್ರಾಪಾತ್ರದ ವಿವೇಚನೆಯನ್ನು ಅರಿತು ಶಿಸ್ತಿನಿಂದ ಕೆಲಸ ಮಾಡಬೇಕು.
ತೆಂಕಣ ಮತ್ತು ಬಡಗಣ ಶೈಲಿಯ ಯಕ್ಷಗಾನ ಪ್ರಸಂಗಕರ್ತರು ಚಂದ್ರಹಾಸ ಚರಿತೆಯನ್ನು ಆಧರಿಸಿ ಬರೆದ ಪ್ರಸಂಗ – ಮಹಾಮಂತ್ರಿ ದುಷ್ಟಬುದ್ಧಿ, ವಿಷಯಾ ಕಲ್ಯಾಣವು; ಭಕ್ತ ಚಂದ್ರಹಾಸ ಎಂಬಿತ್ಯಾದಿ ಹೆಸರಿನವು. ಈ ಪ್ರಸಂಗಕ್ಕೆ ಮೂಲ ಆಕರ ಲಕ್ಷ್ಮೀಶ ಕವಿಯು (ಕಾಲ ಸು. ಕ್ರಿ. ಶ. 1550) ಬರೆದ ಕನ್ನಡ ಜೈಮಿನಿಭಾರತ. ಈ ಕೃತಿಯ ಇಪ್ಪತ್ತೆಂಟನೆಯ ಸಂಧಿಯಲ್ಲಿ ಕಥಾ ಸೂಚನೆಯಾಗಿ ‘ನಾರದಂ ದೃಷ್ಟಿಗೋಚರಕ್ಕೈದಿ ವಿಸ್ತರಿಸಿದಂ ಚಂದ್ರಹಾಸ ಕಥಾ ವಿಶೇಷಮಂ ಕರ್ಣ ಪೀಯೂಷಮಂ ಪ್ರೀತಿಯಿಂದೆ’ ಎಂದಿದೆ. ಈ ಕತೆಯು ಮೂವತ್ತೆರಡನೆಯ ಸಂಧಿಯವರೆಗೆ ಒಟ್ಟು 301 ವಾರ್ಧಕ ಷಟ್ಪದಿಗಳಲ್ಲಿ ಹರಡಿಕೊಂಡಿದೆ.
ಕನ್ನಡ ಜೈಮಿನಿಭಾರತವು 1912; 1913, 1931ನೆಯ ಇಸವಿಗಳಲ್ಲಿ ಸಂಪಾದಿತವಾಗಿ ಪ್ರಕಟಗೊಂಡಿರುವುದು ಕಾವ್ಯದ ಜನಪ್ರಿಯತೆಗೆ ಸಾಕ್ಷಿ. ಅನಂತರವೂ ಈ ಕೃತಿ ಸಂಪಾದಿತವಾಗಿ ಪ್ರಕಟಿಸಲ್ಪಟ್ಟಿದೆ. ಮೂಲತಃ ಲಿಪಿಕಾರರ ಸ್ಖಾಲಿತ್ಯದಿಂದಲೊ, ಪ್ರತಿಕಾರರ ಅನವಧಾನದಿಂದಲೊ, ತಾನೇ ನಿಷ್ಕರ್ಷಿಸಿದ ಪಾಠಾಂತರದಿಂದಲೊ ಈ ಕೃತಿಯಲ್ಲಿ ಇನ್ನೂ ಕೆಲವು ಪ್ರಮಾದಗಳು ಉಳಿದುಕೊಂಡಿರುವಂತೆ ಕಾಣುತ್ತದೆ. ಲಕ್ಷ್ಮೀಶನ ಕೃತಿಗೆ ಸಂಸ್ಕೃತ ಜೈಮಿನಿಭಾರತವು ಮೂಲ ಆಕರವಾದ್ದರಿಂದ ಅದನ್ನಿರಿಸಿಕೊಂಡು ಕೃತಿ ಸಂಪಾದನೆಗೊಂಡಿದ್ದರೆ ಕೆಲವೊಂದು ತಪ್ಪುಗಳನ್ನು ಸರಿಪಡಿಸಬಹುದಿತ್ತು; ಸಂಪಾದಕರು ಹಾಗೆ ನೋಡದಿರುವುದಕ್ಕೆ ಸಾಧ್ಯವಿಲ್ಲ. ಒಟ್ಟಿನಲ್ಲಿ ಈ ಕೃತಿಯ ಶುದ್ಧಪ್ರತಿಯು ಇನ್ನು ಸಿದ್ಧವಾಗಬೇಕಾದ ಅಗತ್ಯವಿದೆಯೆಂದು ತೋರುತ್ತದೆ. ಈಗಿರುವ ಕೃತಿಯಲ್ಲಿ-
ಕುಂತೀಕುಮಾರ ಕೇಳಾ ಮಹಾಪಟ್ಟಣದೊ ಳಿಂತರ್ಭಕರೊಳಾಡುತಿಹ ಪಸುಳೆಗೈದು ಬರಿ ಸಂ ತುಂಬಿತಾ ಸಮಯದೊಳ್ಪ್ರಬಲದಿಂ ಪ್ರವರ್ತಿಪ ದುಷ್ಟಬುದ್ಧಿಯೆಂಬ ಕುಂತಳೇಂದ್ರನ ಮಂತ್ರಿ… (28-25) ಎಂಬುದಾಗಿ ಮಂತ್ರಿಯ ಹೆಸರು ‘ದುಷ್ಟಬುದ್ಧಿ’ಯೆಂದೇ ಹೇಳಿದೆ.
ಬೆನಗಲ್ ರಾಮರಾಯರ ‘ಪುರಾಣನಾಮ ಚೂಡಾಮಣಿ’ (ಮೂರನೆಯ ಮುದ್ರಣ, 1968) ಕೃತಿಯ ಪುಟ 319ರಲ್ಲಿ ದುಷ್ಟಬುದ್ಧಿ ಕುಂತಲರಾಜನ ಮಂತ್ರಿಃ ವಿಷಯೆಯ ತಂದೆ ಎಂದೇ ಹೇಳಿದೆ. ಕತೆಯ ದೃಷ್ಟಿಯಿಂದ ಮಂತ್ರಿಯ ಜನನ, ಬಾಲ್ಯ, ನಾಮಕರಣಗಳ ವಿಚಾರ ಅಗತ್ಯವಿಲ್ಲವಾದರೂ; ಯಾವ ತಾಯ್ತಂದೆಯೂ ತಮ್ಮ ಮಗನಿಗೆ ‘ದುಷ್ಟಬುದ್ಧಿ’ಯೆಂದು ಹೆಸರಿಡಲಾರರೆಂದೇ ತೋರುತ್ತದೆ. ‘‘ಕ್ಷಿತಿಯೊಳೆ ರೂಢಾನ್ವರ್ಥಾಂಕಿತಮೆಂದಾ ನಾಮಮರಿಗೆ ಮೂಡೆರನಂ’’ (ಕೇಶಿರಾಜ, ಶ.ದ. 2-26) ಎಂದಿರು ವುದರಿಂದ ‘ದುಷ್ಟಬುದ್ಧಿ’ ಎಂಬುದು ಅಂಕಿತನಾಮವಾಗಿರಲಾರದು; ಚಂದ್ರಹಾಸ ಕತೆಯ ಬೆಳವಣಿಗೆಯನ್ನು ಗಮನಿಸಿದಾಗ; ಮಂತ್ರಿಯ ಕೃತ್ಯಗಳನ್ನು ಓದಿದಾಗ ಅವನಿಗದು ‘‘ಅನ್ವರ್ಥನಾಮ’’.
ಲಕ್ಷ್ಮೀಶನ ಕನ್ನಡ ಜೈಮಿನಿಭಾರತಕ್ಕೆ ಸಂಸ್ಕೃತದ ಜೈಮಿನಿಭಾರತ ಆಕರ ಗ್ರಂಥ. ಜೈಮಿನಿಯು ವ್ಯಾಸಮಹರ್ಷಿಗಳ ನಾಲ್ವರು ಪ್ರಧಾನ ಶಿಷ್ಯರಲ್ಲೊಬ್ಬ. (ಪೈಲ, ವೈಶಂಪಾಯನ, ಸುಮಂತು ಇತರ ಶಿಷ್ಯರು) ಈತನೂ ಒಂದು ಭಾರತವನ್ನು ರಚಿಸಿದ್ದನಂತೆ. ಆದರೆ ನಮಗಿಂದು ಆತನ ‘‘ಅಶ್ವಮೇಧಿಕ ಪರ್ವ’’ವೊಂದು ಮಾತ್ರ ದೊರೆಯುತ್ತದೆ. ಈ ಕೃತಿಯಲ್ಲಿ ಒಟ್ಟು 68 ಅಧ್ಯಾಯಗಳಿದ್ದು; 5194 ಶ್ಲೋಕ ಛಂದಸ್ಸಿನ ರಚನೆಗಳಲ್ಲಿ ಕತೆಯು ಹರಡಿಕೊಂಡಿದೆ. ಈ ಕೃತಿಯ 50ನೆಯ ಅಧ್ಯಾಯದಿಂದ 59ನೆಯ ಅಧ್ಯಾಯದವರೆಗೆ ‘‘ಚಂದ್ರಹಾಸೋಪಾಖ್ಯಾನ’’ವಿದೆ. 50ನೆಯ ಅಧ್ಯಾಯದ ಕೊನೆಗೆ ‘‘ಇತ್ಯಾಶ್ವಮೇಧಿಕೇ ಪರ್ವಾಣಿ ಜೈಮಿನೀಯೇ ಚಂದ್ರಹಾಸೋಪಾಖ್ಯಾನೇ ಪಂಚಾಶತ್ತಮೋ„ಧ್ಯಾಯಃ’’ ಎಂದಿದೆ. ಇದರಲ್ಲಿ- ನಾರದಸ್ತ್ವಬ್ರವೀದಶ್ವೌಗತೌ ಕೌಂತಲಕಂ ಪುರಮ್ | ಯತ್ರ ರಾಜಾ ಚಂದ್ರಹಾಸೋ ವೈಷ್ಣವಃ ಪಾಲಿತಾಂಪುರೀಂ (50-10) ಯಸ್ಮೈ ಕುಂತಲಕೋ ರಾಜಾ ರಾಜ್ಯಂ ದತ್ತ್ವಾ ವನಂ ಯಯೌ | ಧೃಷ್ಟಬುದ್ಧೇಃ ಪ್ರಧಾನಸ್ಯ ಕನ್ಯಾಂ ಯಃ ಪರಿಣೀತವಾನ್ || (50-11) ಕೇರಲಾಧಿಪತೇಃ ಪುತ್ರಃ ಕುಲಿಂದೇನಾನು ಪಾಲಿತಃ ಲಕ್ಷ್ಮೀಪತೇಃ ಪ್ರಸಾದಾಸ್ಸಪ್ರಾಪ್ಯ ಕೌಂತಲಕಾಂ ಪುರೀಂ || (50-12) ಚಂದ್ರಹಾಸೋ ಮಹಾಬಾಹುರ್ಯೋದ್ಧತಾ ದ್ವಙನ ವಿದ್ಯತೇ | ಅಮೀನೃತತಯಸ್ತಸ್ಯ ಕಲಾಂ ನಾರ್ಹತಿ ಷೋಡಶೀಮ್ || (50-13) ಹೀಗೆ ಎಲ್ಲ ಕಡೆಗಳಲ್ಲೂ ‘ಧೃಷ್ಟಬುದ್ಧಿ’ ಎಂದೇ ಉಲ್ಲೇಖವಿದೆ.
ಕಾವ್ಯದುದ್ದಕ್ಕೂ ಓದುತ್ತಾ ಹೋಗುವಾಗ ನಮಗೆಲ್ಲಿಯೂ ‘ದುಷ್ಟಬುದ್ಧಿ’ ಎಂಬ ಪ್ರಯೋಗ ಕಾಣಸಿಕ್ಕುವುದೇ ಇಲ್ಲ. ಆದುದರಿಂದ ‘ಧೃಷ್ಟಬುದ್ಧಿ’ ಎಂಬುದು ಸಾಧುರೂಪವೇ ಹೊರತು ‘ದುಷ್ಟಬುದ್ಧಿ’ಯೆಂಬುದಲ್ಲ. ಧೃತರಾಷ್ಟ್ರ, ಧೃಷ್ಟದ್ಯುಮ್ನ (ದ್ರುಪದ ಪುತ್ರ), ಧೃಷ್ಟಕೇತು (ಶಿಶುಪಾಲನ ಮಗ) ಧೃಷ್ಟಿ (ದಶರಥನ ಮಂತ್ರಿ) ಧೃತರಾಷ್ಟ್ರೀ (ಕಶ್ಯಪತಾಮ್ರೆಯರ ಮಗಳು) ಧೃತದೇವಾ (ವಸುದೇವನ ಪತ್ನಿ) ಮುಂತಾದ ಕಡೆಗಳ ಹೆಸರಿನ ಆದಿಗೆ ಕಾಣಿಸುವ ‘ಧೃ’ವೇ ಚಂದ್ರಹಾಸಚರಿತೆಯಲ್ಲಿ ಬರುವ ‘ಧೃ’ವೇ ಪ್ರಧಾನನ ಹೆಸರಿನ ಆದಿಗೆ ಬರುವುದಾಗಿದ್ದು ಅದು ‘ಧೃಷ್ಟಬುದ್ಧಿ’ ‘ಧೃ’ ಅಥವಾ ‘ಧೃತ’ ಎಂದರೆ ‘ಧರಿಸಿದ’; ‘ಹಿಡಿಯಲ್ಪಟ್ಟ’; ‘ನಿಶ್ಚಲವಾದ’ ಎಂಬರ್ಥ ಬರುತ್ತದೆ. ‘ಧೃಷ್ಟ’ ಎಂದರೆ ‘ಅಶಿಶಯಸಮರ್ಥ’; ಪ್ರೌಢಿಯನ್ನು ಮೆರೆಸುವ ನಾಯಕ ಎಂಬರ್ಥ ಬರುತ್ತದೆ. ಆದುದರಿಂದ ‘ಧೃಷ್ಟಬುದ್ಧಿ’ಯೆಂದರೆ ಅತಿಶಯಬುದ್ಧಿಯುಳ್ಳವನೆಂದೂ; ಚಲವನ್ನು ಸಾಧಿಸುವ ಬುದ್ಧಿಯವನೆಂದೂ ಅರ್ಥ. ಚಂದ್ರಹಾಸಚರಿತೆಯಲ್ಲಿ ಬರುವ ಮಹಾಪ್ರಧಾನನ ಕಾರ್ಯವೈಖರಿಯನ್ನು ಓದಿದರೆ ಅದು ಸ್ಪಷ್ಟವಾಗುತ್ತದೆ. ಪ್ರಾಜ್ಞರಾದವರು; ಅಧ್ಯಾಪಕರು; ಯಕ್ಷಗಾನ ಕಲಾವಿದರು ತಥ್ಯಮಿಥ್ಯ ಗಳನ್ನು ಮನಗಾಣುವರೆಂದು ನಂಬಿದ್ದೇನೆ.