ಕುಕ್ಕಿಕಟ್ಟೆಯ ನಿವಾಸಿ ಶ್ರೀಕಲಾ ವಾಣಿಜ್ಯ ಸಂಕೀರ್ಣದ ಮಾಲಕರಾದ ಸುರೇಶ್ (50 ವರ್ಷ) 22-06-2021ರಂದು ನಿಧನರಾದರು. ‘ಭ್ರಮರ’ ಕಾಂಟೀನ್ ನಡೆಸುತ್ತಾ ಪಾರಂಪರಿಕ ತಿಂಡಿ-ತಿನಿಸುಗಳನ್ನು ಮಾಡುವಲ್ಲಿ ವಿಶೇಷ ಪ್ರಾವೀಣ್ಯತೆಯನ್ನು ಹೊಂದಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸ್ವಂತ ವೇಷಭೂಷಣ ಸಹಿತ ‘ಶ್ರೀಕಲಾ ಸಂಗಮ ಯಕ್ಷಗಾನ ಮಕ್ಕಳ ಮೇಳ’ವನ್ನು ಸ್ಥಾಪಿಸಿ ಎಳೆಯ ಮಕ್ಕಳಲ್ಲಿ ಯಕ್ಷಗಾನಾಸಕ್ತಿ ಮೂಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಯಕ್ಷಗಾನ ಕಲೆಯನ್ನುಅತೀವ ಪ್ರೀತಿಸುತ್ತಿದ್ದ ಇವರು ಪ್ರತಿವರ್ಷ ವಿಶೇಷ ರೀತಿಯಲ್ಲಿ ಮೇಳದ ಯಕ್ಷಗಾನವನ್ನುಆಯೋಜಿಸುತ್ತಾ, ಅಂದು ಹಲವಾರು ಅಶಕ್ತರಿಗೆ, ಕಲಾವಿದರಿಗೆ, ಸಂಘ ಸಂಸ್ಥೆಗಳಿಗೆ, ಯಕ್ಷಗಾನ ಮಂಡಳಿಗಳಿಗೆಆರ್ಥಿಕ ನೆರವನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ. ಯಕ್ಷಗಾನ ಕಲಾರಂಗ (ರಿ.) ಉಡುಪಿ ಇದರ ಆಜೀವ ಸದಸ್ಯರಾಗಿದ್ದ ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಕುಮಾರವ್ಯಾಸನ ಭಾಮಿನಿಯ ಸೌಂದರ್ಯಕ್ಕೆ ಯಾರಾದರೂ ತಲೆದೂಗಲೇಬೇಕು. ಈ ಕಾವ್ಯ ಸೌಂದರ್ಯಕ್ಕೆ ಮನಸೋತೇ ಪ್ರಸಂಗಕರ್ತೃ ಇದನ್ನು ಹಾಗೆಯೇ ಬಳಸಿಕೊಳ್ಳಲು ನಿರ್ಧರಿಸಿರಬಹುದು ಎಂದು ತೋರುತ್ತದೆ. ಯಕ್ಷಗಾನ ಪ್ರಸಂಗಗಳಲ್ಲಿಯೂ ಕೂಡಾ ನಾವು ಕೆಲವು ಪ್ರಬೇಧಗಳನ್ನು ಗುರುತಿಸಬಹುದು. ಕೃತಿಕಾರನ ಕಾವ್ಯ ಸೃಷ್ಟಿಯ ಮನೋಭಿಲಾಷೆಗೆ ತಕ್ಕಂತೆ ರಚನಕಾರರು ಕೆಲವು ಸಂದರ್ಭಗಳನ್ನು ಮೊಟಕುಗೊಳಿಸಿರುತ್ತಾರೆ ಅಥವಾ ದೀರ್ಘಗೊಳಿಸಿರುತ್ತಾರೆ. ಯಕ್ಷಗಾನ ಪ್ರಸಂಗಗಳಲ್ಲಿ ಒಂದೇ ಪ್ರಸಂಗದ ಬೇರೆ ಬೇರೆ ಪ್ರಸಂಗಕರ್ತರ ಭಿನ್ನ ಪ್ರತಿಗಳನ್ನು ನಾವು ಕಾಣಬಹುದು.
ಕೆಲವೊಮ್ಮೆ ನಿರ್ದಿಷ್ಟ ಕವಿಯ ಒಂದು ಪ್ರತಿಯಲ್ಲಿದ್ದ ಕೆಲವು ಪದ್ಯಗಳು ಇನ್ನೊಂದು ಕವಿಯ ಅದೇ ಪ್ರಸಂಗದ ಪ್ರತಿಯಲ್ಲಿರದೆ ಬೇರೆ ಹೊಸತಾದ ಪದ್ಯಗಳನ್ನು ತನ್ನ ಮನೋಭಿವ್ಯಕ್ತಿಗೆ ತಕ್ಕಂತೆ ಹೊಸೆದಿರುವುದನ್ನು ಗಮನಿಸಬಹುದು. ಇದು ಕವಿ ಸ್ವಾತಂತ್ರ್ಯ. ಒಟ್ಟಾರೆ ಮೂಲ ಕಥೆಗೆ ಭಂಗ ಬರದಿದ್ದರೆ ಅಯಿತು. ಸಾಹಿತ್ಯ ಮತ್ತು ಪದ್ಯಗಳು ಅದು ಕವಿಯ ಸ್ವಾತಂತ್ರ್ಯ. ಹಾಗೆಂದು ಕಥೆಯನ್ನು ತಿರುಚಲು ಹೋಗಬಾರದು. ನಾವು ನಮ್ಮ ಹಿಂದಿನ ತಲೆಮಾರಿನ ಹಲವಾರು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಆಶುಕವಿಗಳಾಗಿದ್ದ ಕೆಲವು ಭಾಗವತರು ರಂಗದಲ್ಲೇ ಪದ್ಯಗಳನ್ನು ಹೊಸೆದು ಹಾಡುತ್ತಿದ್ದರಂತೆ. ಹಿರಿಯ ಅಗರಿ ಭಾಗವತರು ಇದರಲ್ಲಿ ಅಗ್ರಗಣ್ಯರೆಂದು ಕೇಳಿದ್ದೇವೆ. ಕಡತೋಕಾ ಮಂಜುನಾಥ ಭಾಗವತರು ಹಾಗೂ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಕೂಡಾ ಆಶುಕವಿತ್ವವನ್ನು ಮೈಗೂಡಿಸಿಕೊಂಡ ಪ್ರತಿಭಾವಂತರು.
ಮೇಲೆ ಹೇಳಿದಂತೆ ಪ್ರಸಂಗದ ವಿವಿಧ ಪ್ರತಿಗಳ ಪ್ರಸ್ತಾಪ ಯಾಕೆ ಬಂತೆಂದರೆ ಕೆಲವೊಂದು ಕೃತಿಕಾರರು ಕುಮಾರವ್ಯಾಸನನ್ನು ಹೆಚ್ಚಾಗಿ ಹಚ್ಚಿಕೊಂಡಂತೆ ಕಂಡರೂ ಮಿಕ್ಕುಳಿದವರು ಬೇಕಾದಲ್ಲಿ ಅಲ್ಲಲ್ಲಿ ಆತನಿಂದ ಪ್ರಭಾವಿತರಾಗಿರುವುದು ಕಂಡುಬರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ನಾರಣಪ್ಪನ ಭಾಮಿನಿಯ ಸಾಹಿತ್ಯವನ್ನು ಭಾಮಿನಿಯಾಗಿ ಉಪಯೋಗಿಸದೆ ಇತರ ತಾಳಗಳ ಪದ್ಯಗಳಾಗಿ ಪಡಿಮೂಡಿಸಿದ್ದೂ ಆತನ ಪ್ರಭಾವಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಆದರೂ ಭಾಮಿನಿಗೆ ಭಾಮಿನಿಯೇ ಸಾಟಿ. ಕೆಲವು ಭಾಗವತರಂತೂ ಭಾಮಿನಿಯನ್ನು ಹಾಡಲು ಬಹಳಷ್ಟು ಇಷ್ಟಪಡುತ್ತಾರೆ. ತಮ್ಮೆಲ್ಲಾ ಗಾನಪ್ರತಿಭೆಯನ್ನು, ಆಲಾಪನೆಯನ್ನು ಪ್ರದರ್ಶಿಸಲು ಭಾಮಿನಿಯು ಒಂದು ಮಾಧ್ಯಮವೆಂದು ಭಾವಿಸುವವರೂ ಇರಬಹುದು. ಆದರೆ ಆಲಾಪನೆಯ ಗುಂಗಿನಲ್ಲಿ, ಅದರಲ್ಲೇ ತಲ್ಲೀನನಾಗಿರುವ ಹಾಡುಗಾರ ರಂಗದಲ್ಲಿ ಸುಮ್ಮನೆ ನಿಂತಿರುವ ಪಾತ್ರಧಾರಿಯ ಅವಸ್ಥೆಯನ್ನು ಗಣನೆಗೆ ತೆಗೆದುಕೊಂಡಿರುವುದಿಲ್ಲ ಎಂಬ ವಾದವೂ ಇದೆ. ಅದೇನೇ ಇರಲಿ. ಆ ವಿಷಯ ಇಲ್ಲಿ ಅಪ್ರಸ್ತುತ.
ಪ್ರಸಂಗಕರ್ತರ ಕೃತಿಗಳು ಮತ್ತು ಭಿನ್ನ ಸ್ವರೂಪದ ಪ್ರತಿಗಳಿದ್ದರೂ ಎಲ್ಲಾ ಪ್ರಸಂಗಕಾರರಲ್ಲಿಯೂ ಪ್ರಭಾವ ಬೀರಿದ ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿಯ ಆದಿಪರ್ವದ ಪದ್ಯವೊಂದು ಹೀಗಿದೆ. ಸಾಕಲಾರೆನು ಮಗನನಾತನ ನೂಕುವೆನು ನಿಮ್ಮಸುರನೂಟಕೆ ಸಾಕು ತನಗುಳಿದವರೆನಲ್ ದ್ವಿಜನದಕೆ ಬೆರಗಾಗಿ ಸಾಕಲಾರದೆ ಮಗನನುರಿಯಲಿ ನೂಕಿದವರುಂಟೇ ಮಹಾಸತಿ ಯಾಕೆವಾಳತನಕ್ಕೆ ನಮಿಸಿದೆನೆನುತ ಕೈಮುಗಿದ
ಅರಗಿನ ಮನೆಯಿಂದ ಪಾರಾಗಿ ಘೋರ ಕಾನನದಲ್ಲಿ ಹಿಡಿಂಬೆಯ ಪ್ರಕರಣದ ನಂತರ ಪಾಂಡವರು ಕುಂತಿ ಸಮೇತರಾಗಿ ಏಕಚಕ್ರ ಎಂಬ ನಗರದಲ್ಲಿ ಬ್ರಾಹ್ಮಣ ವೇಷಧಾರಿಗಳಾಗಿ ವಿಪ್ರನೊಬ್ಬನ ಮನೆಯಲ್ಲಿ ಆಶ್ರಯ ಪಡೆದು ಭಿಕ್ಷಾಟನೆ ವೃತ್ತಿಯಿಂದ ಜೀವಿಸುತ್ತಿದ್ದರು. ಬಕಾಸುರನ ಉಪಟಳದಿಂದ ವ್ಯಾಕುಲಚಿತ್ತದಿಂದ ಶೋಕಸಾಗರದಲ್ಲಿ ಬೊಬ್ಬಿರಿಯುತ್ತಿದ್ದ ನೆರೆಮನೆಯ ಬ್ರಾಹ್ಮಣ ಕುಟುಂಬದವರನ್ನು ಸಮಾಧಾನಪಡಿಸುತ್ತಾ ಕುಂತಿದೇವಿಯು ಬಕಾಸುರನೆಡೆಗೆ ತನ್ನ ಮಗನನ್ನು ಕಳುಹಿಸುವೆನೆಂದು ಮೇಲಿನ ಮಾತನ್ನು ನುಡಿಯುವ ಸಂದರ್ಭದ ಪದ್ಯವಿದು.
ಇದೇ ಸಂದರ್ಭ ‘ದ್ರೌಪದೀ ಸ್ವಯಂವರ’ ಯಕ್ಷಗಾನ ಪ್ರಸಂಗದಲ್ಲಿ ಹೀಗೆ ಬಂದಿದೆ. ಅದೂ ಭಾಮಿನಿಯಲ್ಲಿದೆ. “ಸಾಕಲಾರೆನು ಮಗನನೊಬ್ಬನ | ಸಾಕು ತನಗುಳಿದವರು ನಾಳೆಗೆ | ನೂಕಿ ಕಳೆದಪೆನವನನೆಂದಾ ಕುಂತಿ ಪೇಳಲ್ಕೆ || ಲೋಕದೊಳಗಿನ್ನೆಂತು ನಿರ್ದಯ | ದಾಕೆರಿಹರೋ ಶಿವ ಶಿವೇಸು ಮ | ಹಾ ಕಠಿನ ಮನವಿವಳದೆನುತಿಂತೆಂದನಾ ವಿಪ್ರ || ಈ ಸಂದರ್ಭದಲ್ಲಿ ಕುಮಾರವ್ಯಾಸ ಭಾರತದ ಪದ್ಯದ ಸಾಹಿತ್ಯದ ಭಾಗಶಃ ‘ದ್ರೌಪದೀ ಸ್ವಯಂವರ’ ಯಕ್ಷಗಾನ ಪ್ರಸಂಗದ ಪದ್ಯದಲ್ಲಿಯೂ ಬಂದಿದೆ. ಆದರೆ ಸ್ವಲ್ಪ ಭಾಗ ಅಷ್ಟೇ.
ಈಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಮೇಲಿನ ಪದ್ಯವು ಸಂಪೂರ್ಣ ಕುಮಾರವ್ಯಾಸನ ಸಾಹಿತ್ಯದ ಪ್ರಭಾವ ಎಂದು ಹೇಳಲಾಗದು. ಸ್ವಲ್ಪ ಹೋಲಿಕೆಯಿದೆ ಅಷ್ಟೇ. ಯಾಕೆಂದರೆ ಎಷ್ಟೋ ಸಂದರ್ಭಗಳಲ್ಲಿ ಇಬ್ಬರು ಒಂದೇ ತೆರನಾದ ಆಲೋಚನಾ ಲಹರಿಗಳಿರುವ ಕವಿಗಳಿರುತ್ತಾರೆ. ಕಾಕತಾಳೀಯವಾಗಿ ಅವರಿಬ್ಬರ ಕೃತಿಗಳೂ, ರಚನೆಗಳೂ ಒಂದನ್ನೊಂದು ಹೋಲುತ್ತಿದ್ದರೆ ಅದು ಮತ್ತೊಬ್ಬರ ಪ್ರಭಾವವೇ ಆಗಿರಬೇಕೆಂದೇನಿಲ್ಲ. ಅವರಿಬ್ಬರ ಕಾವ್ಯ ಶೈಲಿ ಒಂದೇ ತೆರನಾಗಿದೆ ಅಥವಾ ಅಕಾರಣವಾಗಿ ಹೋಲಿಕೆ ಉಂಟಾಗಿದೆ ಎಂದು ತಿಳಿದುಕೊಳ್ಳಬೇಕು. ಈ ಪದ್ಯಗಳನ್ನು ಹೋಲಿಸುವುದಾದರೆ ಒಂದನೇ ಸಾಲು ಬಹುತೇಕ ಒಂದೇ ರೀತಿಯದಾಗಿದೆ. ಕುಮಾರವ್ಯಾಸ ಭಾರತದ ಎರಡನೆಯ ಸಾಲು ಯಕ್ಷಗಾನ ಪ್ರಸಂಗದ ಮೂರನೆಯ ಸಾಲಿನಲ್ಲಿದೆ. ಅಲ್ಲಿನ ಮೂರನೆಯ ಸಾಲು ಇಲ್ಲಿಯ ಎರಡನೆಯ ಸಾಲಿನಲ್ಲಿದೆ. ಬಹುತೇಕ ಅಲ್ಲ ಭಾಗಶಃ ಬಂದಿದೆ.
ಆದಿಪರ್ವದ ಇದೇ ಸಂದರ್ಭದ ಇನ್ನೊಂದು ಭಾಮಿನಿ ಹೀಗಿದೆ.
ನಳನಳಿಪ ಬಹುವಿಧದ ಭಕ್ಷ್ಯಾ ವಳಿಯ ಹೆಡಗೆಗಳೋರಣಿಸಿ ಮಂ ಡಳಿಸಿ ಕೂಡಿದ ಹಾಲು ತುಪ್ಪದ ಹಲವು ಹರವಿಗಳ ಬಳಸಿ ಮುಚ್ಚಿದ ವಿವಿಧ ಶಾಖಾ ವಳಿಯ ಬೋನದ ಬಿಗಿದ ಕುನಿಕಿಲ ಕಳವೆಯಕ್ಕಿಯ ಕೂಳರಾಶಿಯ ಬಂಡಿ ಜೋಡಿಸಿತು.
ಈ ಪದ್ಯದಲ್ಲಿ ಬಕಾಸುರನಿಗಾಗಿ ಬಂಡಿಯಲ್ಲಿ ವಿವಿಧ ಬಗೆಯ ಆಹಾರಗಳನ್ನು ಜೋಡಿಸಿದ ದೃಶ್ಯವನ್ನು ಕುಂತಿಯು ಕಂಡ ಸಂದರ್ಭದ ವರ್ಣನೆಯಿದೆ. ಇಲ್ಲಿ ಬಗೆಬಗೆಯ ಭಕ್ಷ್ಯಗಳೇ ಕಣ್ಣೆದುರು ಕಂಡಂತಾಗಿ ಓದುಗರ ಬಾಯಲ್ಲಿ ನೀರೂರಿಸುವುದರಲ್ಲಿ ಸಫಲನಾಗುತ್ತಾನೆ ಕುಮಾರವ್ಯಾಸ. ಇನ್ನು ಯಕ್ಷಗಾನ ಪ್ರಸಂಗ ‘ದ್ರೌಪದೀ ಸ್ವಯಂವರ’ದ ಪ್ರತಿಯೊಂದರಲ್ಲಿ ಈ ಸಂದರ್ಭದ ವರ್ಣನೆ ಈ ರೀತಿ ಕಾಣಿಸುತ್ತದೆ. ಆದರೆ ಅದು ವಾರ್ಧಕ ಷಟ್ಪದಿಯಲ್ಲಿದೆ. ನಳನಳಿಪ ವಿವಿಧ ಭಕ್ಷ್ಯಾವಳಿಯ ಹೆಡಿಗೆಗಳ | ಬಳಸಿ ತುಂಬಿದ ತುಪ್ಪ ಪಾಲ್ಮೊಸರ ಹರವಿಗಳ | ಕಳವೆಯಕ್ಕಿಯ ಕೂಳ ರಾಶಿಗಳ ಮುಚ್ಚಿರ್ದ ವಿವಿಧ ಶಾಕದ ರಚನೆಯ || ಚೆಲುವೆಸೆವ ಭಂಡಿಯೊಳ್ ಕಂಡು ಸಂತೋಷದಿಂ | ಬಳಿಕಲಾ ಕುಂತಿ ಪವನಾತ್ಮಜನ ಪೊರೆಗೈದಿ | ಸಲೆ ಸಕಲ ಸನ್ನಾಹವಾದುದೈ ಕಂದ ಕೇಳೆನುತ ಬಳಿಕಿಂತೆಂದಳು ||
ವಿಭಿನ್ನ ಷಟ್ಪದಿಗಳಲ್ಲಿ ರಚಿಸಲ್ಪಟ್ಟಿದ್ದರೂ ವರ್ಣನೆ, ಸಾಹಿತ್ಯ, ಕಾವ್ಯ ಸೌಂದರ್ಯದಲ್ಲಿ ಬಹುತೇಕ ಸಾಮ್ಯತೆಯನ್ನು ಮೇಲಿನ ಪದ್ಯಗಳೆರಡರಲ್ಲಿ ನಾವು ಗುರುತಿಸಬಹುದು. ಈ ಯಕ್ಷಗಾನ ಪ್ರಸಂಗದ ಪದ್ಯ ರಚನೆಯ ಸಂದರ್ಭದಲ್ಲಿ, ಇಬ್ಬರು ಕೃತಿ ರಚನೆಕಾರರಲ್ಲಿರುವ ಸಾಮ್ಯತೆ, ಮೊದಲಿನ ಕವಿಯ ಸಾಹಿತ್ಯದ ಪ್ರಭಾವ, ಇವೆರಡೂ ಕೆಲಸ ಮಾಡಿರಬಹುದೆಂದು ತೋರುತ್ತಿದೆ.
ಕುರಿಯ ಪ್ರತಿಷ್ಠಾನದ ಯಕ್ಷಾವತರಣದಲ್ಲಿ ಕುಮಾರಿ ರಂಜಿತಾ ಎಲ್ಲೂರು ಮತ್ತು ಕುಮಾರಿ ವಿಂದ್ಯಾ ಆಚಾರ್ಯ ಉಡುಪಿ ಯಕ್ಷನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದ ವೀಡಿಯೊ ಲಿಂಕ್ ಇಲ್ಲಿದೆ.
ಬೆಂಗಳೂರಿನ ಸರೋಜಿನಿ ದಾಮೋದರನ್ ಫೌಂಡೇಷನ್ ಕರೋನಾದ ಸಂಕಷ್ಟದ ಸಮಯದಲ್ಲಿ, ಯಕ್ಷಗಾನ ವೃತ್ತಿಪರ ಕಲಾವಿದರಿಗಾಗಿ ಒಂದು ಸಾವಿರ ರೂಪಾಯಿ ಮೊತ್ತದ ಆಹಾರ ಕಿಟ್ ಗಳನ್ನು ಮೊದಲ ಕಂತಾಗಿ ಕಳುಹಿಸಿದ್ದು, ಇದರಲ್ಲಿ ಮೊದಲ ಕಂತಿನ ಕಿಟ್ ನ್ನು ಕಾಸರಗೋಡಿನ ಯಕ್ಷಗಾನ ಕಲಾವಿದರಿಗೆ ನೀಡಲಾಗಿದೆ. ಇದರೊಂದಿಗೆ ಕಾಸರಗೋಡು ಕಲಾವಿದರಿಗೆ ಪಣಂಬೂರು ವಾಸುದೇವ ಐತಾಳರ ವತಿಯಿಂದ 5 ಕೆ.ಜಿ. ಸಾವಯವ ಕುಚ್ಚಲಕ್ಕಿ ವಿತರಿಸಲಾಗಿದೆ. ಉಳಿದ ಕಲಾವಿದರಿಗೆ ಮುಂದಿನ ದಿನಗಳಲ್ಲಿ ಕಿಟ್ ನೀಡಲಾಗುವುದು ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ .
ಯಕ್ಷಗಾನ ಕಲಾರಂಗ (ರಿ.) ಉಡುಪಿ ಇವರ ಮುತುವರ್ಜಿಯಲ್ಲಿ ಸಂಗ್ರಹಿಸಿ ಆಹಾರ ಕಿಟ್ ನ್ನು ಗಡಿನಾಡು ಕಾಸರಗೋಡು ವಿಭಾಗಕ್ಕೆ ಪ್ರತಿಷ್ಠತ ಸಂಸ್ಥೆಯಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಶ್ರೀ ಸತೀಶ ಅಡಪರ ಸಂಕಬೈಲು ಮತ್ತು ರಾಧಾಕೃಷ್ಣ ನಾವಡ ಮಧೂರು ಇವರ ನೇತೃತ್ವದಲ್ಲಿ 100 ಕ್ಕೂ ಹೆಚ್ಚು ವೃತ್ತಿ ಕಲಾವಿದರಿಗೆ ವಿತರಿಸಲಾಯಿತು.
ಗಡಿನಾಡು ಕಾಸರಗೋಡಿನ ವೃತ್ತಿ ಕಲಾವಿದರ ಸಂಕಷ್ಟಷ್ಟವನ್ನೂ ಇತ್ತೀಚೆಗೆ ಕರ್ನಾಟಕ ಸರಕಾರದ ಗಮನಕ್ಕೆ ತಂದಿರುತ್ತೇವೆ. ಯಕ್ಷಗಾನ ಕಲಾಂಗ (ರಿ.) ಉಡುಪಿ ಇವರ ಆಹಾರ ಕಿಟ್ ಯೋಜನೆಗೆ ಸಂತೋಷವಾಗಿದೆ. ಹಾಗು ಗಡಿನಾಡಿನ ಎಲ್ಲಾ ಯಕ್ಷಗಾನ ಕಲಾವಿದರ ಧ್ವನಿಯಾಗಿ ಯಕ್ಷಗಾನ ಕಲಾರಂಗಕ್ಕೆ ವಿಶೇಷ ಧನ್ಯವಾದಗಳನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಸಲ್ಲಿಸಿದೆ.
ನಮ್ಮ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಹಾಸುಹೊಕ್ಕಾಗಿರುವ ಯಕ್ಷಗಾನ ಕಲೆಗೆ ಅದರದ್ದೇ ಆದ ಮಹತ್ವವಿದೆ. ಕಾರಣಿಕವಿದೆ. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಮಾನಸದಲ್ಲಿ ನೆಲೆಯೂರಿದ ಒಂದು ವಿಶಿಷ್ಟ ಕಲೆ ಯಕ್ಷಗಾನ. ಶತಮಾನಗಳ ಹಿಂದೆ ಕಾಸರಗೋಡಿನ ಪಾರ್ತಿಸುಬ್ಬನೇ ಯಕ್ಷಗಾನ ಪಿತಾಮಹನೆಂಬ ನಂಬಿಕೆ ನಮ್ಮದು. ತೀರಾ ಅವಿದ್ಯಾವಂತರ ಕಲೆ, ಜನಪದರ ಕಲೆ ಎಂದೆಲ್ಲಾ ಒಂದು ರೀತಿಯಾಗಿ ನೋಡುತ್ತಿದ್ದ ಯಕ್ಷಗಾನಕ್ಕೆ ಕೇರಳದ ಕಥಕ್ಕಳಿಯಿಂದ ಪ್ರೇರಿತರಾದ ಕುಂಬಳೆ ಪಾರ್ತಿಸುಬ್ಬನವರು ಸ್ಪಷ್ಟಚಿತ್ರಣ ಹಾಗೂ ಶುದ್ಧವಾದ ರೂಪವನ್ನು ಕೊಟ್ಟು ಹಲವಾರು ಪ್ರಸಂಗಗಳನ್ನು ರಚಿಸಿ ಯಕ್ಷಗಾನಕ್ಕೊಂದು ಅದ್ಭುತವಾದ ರೂಪುರೇಷೆಯನ್ನು ಕೊಟ್ಟರು.
ಮಲಯಾಳಂನ ‘ಗುರುನೆಲೆ ಇಲ್ಲೆಂಗಿ ಒರುನೆಲೆ ಇಲ್ಲ’ ಕನ್ನಡದ ಕವಿವಾಣಿ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಮಾತುಗಳು ಗುರುವಿನ ಮಹತ್ವವನ್ನು ಸಾರಿ ಹೇಳುತ್ತವೆ. ಇದು ಇತರ ಕಲೆಗಳಾದ ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೂ ಅನ್ವಯವಾಗುತ್ತದೆ. ಇವೆಲ್ಲವೂ ಕೇವಲ ವಿದ್ಯೆಗಳಲ್ಲ; ದೇವತಾರಾಧನಾ ಕಲೆಗಳು; ದೈವೀ ಕಲೆಗಳು. ಇದನ್ನು ಗುರು ಮುಖೇನ ಕಲಿತರೇ ಸಿದ್ಧಿಸಲು ಸಾಧ್ಯ. ಯಕ್ಷಗಾನ, ಭರತನಾಟ್ಯ, ಶಾಸ್ತ್ರೀಯ ಸಂಗೀತ ಕಲಿಯುವವರು ಆರಂಭದಲ್ಲಿ ಆಯಾ ದೇವರಿಗೆ ನಮಿಸಿ ಗುರುಗಳಿಗೆ ವಂದಿಸಿ ಏಕಾಗ್ರಚಿತ್ತದಿಂದ ಕಲಿತು ಕೊನೆಯಲ್ಲಿ ಮತ್ತೆ ವಂದಿಸುತ್ತಾರೆ. ಶ್ರದ್ಧೆ, ನಿಷ್ಠೆ ಇದ್ದರಷ್ಟೆ ಇಂತಹ ಕಲೆಯು ಸಿದ್ಧಿಸಲು ಸಾಧ್ಯ. ಈ ಕಲೆಯನ್ನು ಕಲಿಯಲು ಯಾವುದೇ ವಿದ್ಯಾರ್ಹತೆ ಬೇಕಾಗಿಲ್ಲ. ಜಾತಿ, ವಯೋಮಾನದ ಬಂಧನವೂ ಇಲ್ಲ. ಯಾರು ಯಾವಾಗ ಬೇಕಾದರೂ ಆಸಕ್ತಿ, ಭಕ್ತಿ ಮತ್ತು ನಿಷ್ಠೆಯಿಂದ ಸೂಕ್ತ ಗುರುವಿನ ಮೂಲಕ ಕಲಿತರೆ ಈ ಕಲೆ ಕರಗತವಾಗುವುದರಲ್ಲಿ ಸಂದೇಹವಿಲ್ಲ. ಈ ಕಲೆಯನ್ನು ಕರಗತ ಮಾಡಿಕೊಳ್ಳಲು ಅನೇಕ ವಿಭಾಗಗಳಿದ್ದು ಅವುಗಳ ಬಗ್ಗೆ ತಿಳಿಯೋಣ.
ಹಿಮ್ಮೇಳ: ಮುಖ್ಯವಾಗಿ ಹಿಮ್ಮೇಳದಲ್ಲಿ ಭಾಗವತಿಕೆ, ಚಂಡೆ, ಮದ್ದಳೆ, ಚಕ್ರತಾಳವಿದ್ದು ಇದನ್ನು ಶ್ರುತಿ ಮತ್ತು ತಾಳಗಳಿಗೆ ಅನುಸಾರವಾಗಿ ಅಭ್ಯಸಿಸತಕ್ಕದ್ದು. ಭಾಗವತರು ಇಡೀಯಕ್ಷಗಾನ ಕಾರ್ಯಕ್ರಮದ ಸೂತ್ರಧಾರರು. ಅಂದರೆ ಭಾಗವತರೇ ಅಂದಿನ ಕಥಾನಕದ ಪಾತ್ರಧಾರಿಗಳ ಅಯ್ಕೆ ಮತ್ತು ಪದ್ಯಗಳನ್ನು ಆರಿಸಿ ಹಾಡುವವರು.
ಭಾಗವತರಿಗೆ ಶಾಸ್ತ್ರೀಯ ಸಂಗೀತದ ಜ್ಞಾನವಿದ್ದರೆ ಮತ್ತಷ್ಟು ಅನುಕೂಲ. ಸುಶ್ರಾವ್ಯ ಕಂಠಸಿರಿ, ಶ್ರುತಿಲಯಗಳ ಜ್ಞಾನ, ಪ್ರಸಂಗ, ಕಥೆಗಳ ಜ್ಞಾನ, ಅರ್ಥಧಾರಿಗಳನ್ನು ಸಂಭಾಳಿಸಿಕೊಂಡು ಹೋಗುವ ಚಾಕಚಕ್ಯತೆಯೂ ಅಗತ್ಯವಾಗಿದೆ. ಉತ್ತಮ ಗುರುವಿನಿಂದ ಕಲಿತ ಭಾಗವತರು ಯಕ್ಷಗಾನದ ಪ್ರಧಾನ ಕಲಾವಿದರು. ಇವರ ಜೊತೆಯಲ್ಲಿ ಚಂಡೆ-ಮದ್ದಳೆ ವಾದಕರೂ ಸಹ ಬಹುಮುಖ್ಯ ಕಲಾವಿದರು. ಸಾಮಾನ್ಯವಾಗಿ ಉತ್ತಮ ಗುರುವಿನ ಮೂಲಕ ಕಲಿತ ಚಂಡೆ-ಮದ್ದಳೆ ವಾದಕರು ಎರಡರಲ್ಲಿಯೂ ನಿಷ್ಣಾತರಾಗಿರುತ್ತಾರೆ. ಕೆಲವೊಮ್ಮೆ ಒಂದೇ ಉಪಕರಣದಲ್ಲಿ ಪ್ರಾವೀಣ್ಯತೆಯನ್ನು ಪಡೆಯುತ್ತಾರೆ. ಚಂಡೆ-ಮದ್ದಳೆವಾದಕರಿಗೆ ಚಂಡೆ-ಮದ್ದಳೆಗಳನ್ನು ಸುಸ್ಥಿತಿಯಲ್ಲಿಡುವುದು ಶ್ರುತಿಗೆ ತಕ್ಕಂತೆ ಸಿದ್ಧಗೊಳಿಸುವುದು ಬಹಳ ಕಠಿಣದಾಯಕ. ಹಾಗಾಗಿ ಇದಕ್ಕೆ ಸೂಕ್ತ ಗುರು ಮತ್ತು ಶಿಷ್ಯನ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಕಲಾ ಪಕ್ವತೆಯನ್ನು ಪಡೆಯುವುದು ಅಷ್ಟು ಸುಲಭ ಸಾಧ್ಯವಲ್ಲ.
ಅರ್ಥಗಾರಿಕೆ: ಇದು ಯಕ್ಷಗಾನದ ಇನ್ನೊಂದು ಪ್ರಮುಖ ವಿಭಾಗ. ಇದಕ್ಕೆ ಪ್ರಸಂಗದ ಹಾಡುಗಳ ಅಧ್ಯಯನ, ಪುರಾಣ ಗ್ರಂಥಗಳ ಅವಲೋಕನ, ಓದುವ, ಗ್ರಹಿಸುವ ಮನೋಭಾವನೆ ಅತ್ಯವಶ್ಯವಾಗಿದೆ. ಯಕ್ಷಗಾನವು ಈ ಮೊದಲೇ ಹೇಳಿದಂತೆ ಒಂದುದೈವೀ ಕಲೆ; ಅರಾಧನಾ ಕಲೆ. ಹಾಗಾಗಿ ಆ ಬಗ್ಗೆ ಹೆಚ್ಚಿನ ಭಕ್ತಿ ಶ್ರದ್ಧೆ ನಿಷ್ಠೆ ಇದ್ದರಷ್ಟೇ ಅರ್ಥಗಾರಿಕೆಯನ್ನು ಕರಗತಗೊಳಿಸಬಹುದು. ಅರ್ಥಗಾರಿಕೆಯಲ್ಲಿ ಎದುರಾಳಿ ಕಲಾವಿದರನ್ನು ಸಂಭಾಳಿಸಿಕೊಂಡು ಕಥೆಗೆ ಪೂರಕವಾಗಿ ಮಾತನಾಡುತ್ತಾ ಸಭಿಕರನ್ನು ರಂಜಿಸುತ್ತಾ ಮಾತನಾಡುವ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಅಂಥ ಮಾತುಗಾರಿಕೆ ಚಾಕಚಕ್ಯತೆ ಕೆಲವೇ ಕಲಾವಿದರಿಗಷ್ಟೇ ಸಿದ್ಧಿಸಲು ಸಾಧ್ಯ. ಹಿಂದಿನ ಕಾಲದಲ್ಲಿ ಕೇವಲ ಎರಡು ಮೂರನೇ ಕ್ಲಾಸು ಕಲಿತವರೂ ಕೆಲವೊಮ್ಮೆ ಶಾಲೆಗೆ ಹೋಗದೇ ಇರುವ ಕಲಾವಿದರು ವಾಗ್ಮಿಗಳಾಗಿರುವುದನ್ನು ಕಂಡಿದ್ದೇವೆ. ಇದಕ್ಕೆ ಕಾರಣ ಅವರ ಗುರುಗಳೋ ಸಹವರ್ತಿ ಕಲಾವಿದರೋ ಆಗಿರುತ್ತಾರೆ. ಮಾತ್ರವಲ್ಲದೆ ಸಂಸ್ಕೃತ -ಕನ್ನಡ ಇತರೆ ಭಾಷೆಗಳಲ್ಲಿರುವ ಗ್ರಂಥಗಳ ಓದು ಅಧ್ಯಯನದಿಂದಲೂ ಅರ್ಥಗಾರಿಕೆಯ ಕಲೆ ಸಿದ್ಧಿಸಲು ಸಾಧ್ಯ.
ಹೆಜ್ಜೆಗಾರಿಕೆ/ನೃತ್ಯ: ಇದು ಯಕ್ಷಗಾನದ ಬಯಲಾಟ-ಟೆಂಟ್ ಆಟದ ಕಲಾವಿದರಿಗೆ ಮೀಸಲು. ಕಾರಣ ಹೆಜ್ಜೆಗಾರಿಕೆ-ನೃತ್ಯದಲ್ಲಿ ಸುಂದರವಾದ ಮುಖ ಸೌಂದರ್ಯ, ಅಂಗಸೌಷ್ಠವ ಅವಶ್ಯವಿದೆ. ಸಾಮಾನ್ಯವಾಗಿ ಯಕ್ಷಗಾನದಲ್ಲಿ ಬರುವ ಪಾತ್ರಧಾರಿಗಳಿಗೆ ನೃತ್ಯಾಭ್ಯಾಸದ ಜತೆಗೆ ಬಣ್ಣಗಾರಿಕೆ-ವೇಷಭೂಷಣದ ಬಗ್ಗೆಯೂ ಮಾಹಿತಿ ಬೇಕು. ಹೆಜ್ಜೆಗಾರಿಕೆ ನೃತ್ಯದಲ್ಲಿ ಪುಂಡುವೇಷ, ಸ್ತ್ರೀವೇಷ, ಬಣ್ಣದವೇಷ, ಹಾಸ್ಯವೇಷ ಹೀಗೆ ಒಂದೊಂದು ವೇಷಗಳಿಗೆ ತಕ್ಕಂತೆ ನೃತ್ಯವೂ ಸಹ ಬದಲಾಗಿದೆ. ಕೆಲವೊಮ್ಮೆ ಕಲಾವಿದನ ಆಸಕ್ತಿಗನುಗುಣವಾಗಿ ಪಾತ್ರಗಳ ಆಯ್ಕೆಗನುಗುಣವಾಗಿ ನೃತ್ಯಾಭ್ಯಾಸವನ್ನು ಮಾಡುತ್ತಾರೆ. ಕೆಲವು ಕಲಾವಿದರು ಎಲ್ಲ ವಿಭಾಗಗಳಲ್ಲಿಯೂ ಅಭಿನಯಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಸ್ತ್ರೀವೇಷ ಕಲಾವಿದರಿಗೆ ನೃತ್ಯದಲ್ಲಿ ಅಪರಿಮಿತವಾದ ಸಾಧನೆ ಬೇಕಾಗಿದೆ. ಅವರಿಗೆಗುರುವಿನ ಸೂಕ್ತ ಮಾರ್ಗದರ್ಶನ ಬೇಕೇಬೇಕು. ಬಣ್ಣದ ವೇಷವು ಬಣ್ಣಗಾರಿಕೆ ಮತ್ತು ವೇಷಭೂಷಣಗಳಿಂದಲೇ ರಂಗಸ್ಥಳದಲ್ಲಿ ಕಳೆಗಟ್ಟಬಹುದಾಗಿದೆ. ಅದೇ ರೀತಿ ಹಾಸ್ಯ ಪಾತ್ರದವರೂ ಅವರ ವಿಭಿನ್ನ ಹಾಸ್ಯ ಕುಣಿತದಿಂದ ಹಾವಭಾವದಿಂದ ಅವರ ಪಾತ್ರವನ್ನು ಆಕರ್ಷಣೀಯವಾಗಿಸಬಲ್ಲರು. ಆ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸಬಲ್ಲರು. (ಆಡುಮಾತಿನಲ್ಲಿ ಹೇಳುವುದಾದರೆ ರೈಸುವುದು) ಹೀಗೆ ಹೆಜ್ಜೆಗಾರಿಕೆ ರಂಗಸ್ಥಳದಲ್ಲಿ ಯಕ್ಷಗಾನ ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸುವ ಪ್ರಮುಖಅಂಶವಾಗಿದೆ.
ಯಕ್ಷಗಾನದ ಇನ್ನೊಂದು ವಿಭಾಗ ತಾಳಮದ್ದಳೆ: ತಾಳಮದ್ದಳೆಯು ಸಂಭಾಷಣೆಯಿಂದಲೇ ಪ್ರೇಕ್ಷಕರನ್ನು ಹಿಡಿದಿಡುವ ಕಲೆ ಅರ್ಥಧಾರಿಗಳಿಗೆ ಬೇಕೇ ಬೇಕು. ಹಿರಿಯ ಅರ್ಥಧಾರಿಗಳು ಹೊಸ ಅರ್ಥಧಾರಿಗಳನ್ನು ಕಥೆಗೆ ಪೂರಕವಾಗಿ ವಾದವಿವಾದವನ್ನು ಮುನ್ನಡೆಸುತ್ತಾ ಭಾಗವತರ ಆಶಯಕ್ಕೆ ಸರಿಯಾಗಿ ಕೂಟವನ್ನು ರಂಜನೀಯವಾಗಿ ಮುಕ್ತಾಯಗೊಳಿಸಬೇಕು. ಕೆಲವೊಮ್ಮೆ ಹಿರಿಯ ಕಲಾವಿದರು ಎದುರಾಳಿಯನ್ನು ಮಣಿಸುವುದರಲ್ಲಿ ವಾದವಿವಾದವು ವಿಕೋಪಕ್ಕೆ ತಿರುಗಿ ಹೊಯ್ ಕೈ ಆಗಿರುವುದನ್ನೂ ಕಂಡಿದ್ದೇವೆ. ಇದು ಕಲಾಮಾತೆಗೆ ಎಸಗುವ ಅಪಚಾರವೆಂದೇ ಹೇಳಬಹುದು. ಕಲಾವಿದರು ಒಮ್ಮೆಗೆ ರೈಸಿದರೂ ಮುಂದೆ ಅವರ ಘನತೆ ಗೌರವಗಳು ಕುಸಿಯುವುದಂತೂ ಸತ್ಯ, ಕೆಲವು ದಶಕಗಳ ಹಿಂದಿನ ಕಲಾವಿದರು ಜಾಣ್ಮೆಯ ಮಾತುಗಳಿಂದ ವಿದ್ವತ್ತಿನಿಂದ ಇಡೀ ರಾತ್ರಿ ಬೆಳಗಿನ ಕಾರ್ಯಕ್ರಮವು ಎಲ್ಲಿಯೂ ಕಳಾಹೀನವಾಗದಂತೆ ಎಚ್ಚರಿಕೆಯಿಂದ ನಿಭಾಯಿಸುತ್ತಿದ್ದು ಕಲೆಗೆ ಸೂಕ್ತವಾದ ಮರ್ಯಾದೆಯನ್ನು ಸಲ್ಲಿಸುತ್ತಿದ್ದರು.
ನಮ್ಮ ಹಿಂದಿನ ತಲೆಮಾರಿನಲ್ಲಿ ಯಕ್ಷಗಾನವು ಒಂದು ಉತ್ತಮ ಮನೋರಂಜನಾ ಮಾಧ್ಯಮವಾಗಿತ್ತು. ರಾತ್ರಿ ಬೆಳಗಿನ ತನಕ ನಡೆಯುತ್ತಿದ್ದ ತಾಳಮದ್ದಳೆ-ಯಕ್ಷಗಾನ ಬಯಲಾಟಗಳು ಸಾವಿರಾರು ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದವು. ಇಂದು ವಿವಿಧದೃಶ್ಯ ಮಾಧ್ಯಮಗಳು, ಮೊಬೈಲು ವಾಟ್ಸಾಪ್ಗಳಿಂದ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದನ್ನು ಕಾಣುತ್ತೇವೆ. ಅದರಿಂದಾಗಿ ಕಾಲಮಿತಿ ಪ್ರದರ್ಶನಗಳು ಬಳಕೆಗೆ ಬಂದವು. ತಾಳಮದ್ದಳೆಗಳಂತೂ ಕೆಲವೇ ಘಂಟೆಗಳ ಮಿತಿಗೆ ಒಳಪಟ್ಟವು. ಇದರಿಂದಾಗಿ ಕಲಾವಿದರ ಕಲಾಭಿಜ್ಞತೆಗೆ ಅವಕಾಶಗಳು ಕಡಿಮೆಯಾದವು. ಸೀಮಿತ ಅವಧಿಯಲ್ಲಿ ಅವರ ಪ್ರತಿಭೆ ಅನಾವರಣ ಕುಂಠಿತಗೊಂಡಿತು.ಆ ಸಂದರ್ಭದಲ್ಲಿ ನಾ ಮೇಲು ತಾ ಮೇಲು ಭಾವನೆಗಳು ರೂಪುಗೊಳ್ಳಲು ಆರಂಭವಾದವೆಂದು ತೋರುತ್ತವೆ. ಕಲೆಯ ಬಗೆಗಿನ ಗೌರವ ಮಾನ್ಯತೆಗಳು ಇದರಿಂದಾಗಿ ಕುಸಿತವಾದವು. ಆದರೆ ಇದರ ಬಗ್ಗೆ ಕಿಂಚಿತ್ ಯೋಚಿಸಿದರೆ ಕಲಾಮಾತೆಗೆ ಸಲ್ಲುವ ಗೌರವ ಪೂಜ್ಯತೆ ಕಲಾವಿದರ ಗೌರವ ಘನತೆ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ.
ಯಕ್ಷಗಾನದ ಎಲ್ಲ ವಿಭಾಗಗಳಿಗೂ ಶ್ರದ್ಧೆ ಪ್ರಾಮಾಣಿಕತೆಯಿಂದ ಉತ್ತಮ ಗುರುವಿನಿಂದ ಕಲಿತರೆ ಪ್ರಬುದ್ಧ ಕಲಾವಿದನಾಗುತ್ತಾನೆ ಎನ್ನಬಹುದು. ಇಂದು ಯಕ್ಷಗಾನ ಪಠ್ಯವೂ ಬಂದಿದೆ. ಯಕ್ಷಗಾನ ತರಗತಿಗಳು ಆರಂಭಗೊಂಡಿವೆ. ಯಕ್ಷಗಾನ ಕೇಂದ್ರಗಳು ಪೂರ್ಣಕಾಲಿಕ ತರಗತಿಗಳನ್ನು ನಡೆಸಿದ್ದು ನೋಂದಾಯಿತ ಸಂಸ್ಥೆಗಳಾಗಿವೆ. ಕೆಲವೆಡೆ ಬೇಸಿಗೆ ಶಿಬಿರಗಳೂ ನಡೆಯುತ್ತಿವೆ. ಬಾಲ್ಯದಿಂದಲೇ ಅಭ್ಯಾಸ ಮಾಡಿದರೆ ಪರಿಪೂರ್ಣ ಕಲಾವಿದರಾಗಬಹುದು. ಶಾಲೆ ಕಾಲೇಜುಗಳಲ್ಲಿ ವಾರ್ಷಿಕೋತ್ಷವ ಸಂದರ್ಭಗಳಲ್ಲಿ ಹಿರಿಯ ಕಲಾವಿದರಿಂದ ತರಬೇತಿ ಪಡೆದು ಪ್ರದರ್ಶನಗಳನ್ನು ನೀಡುತ್ತಿರುವುದನ್ನೂ ಕಾಣಬಹುದು. ಆದರೆ ಅದು ಅಲ್ಲಿಗೇ ಸೀಮಿತವಾಗದೆ ಪ್ರತಿಭಾವಂತ ಕಲಾವಿದರು ಮುಂದುವರಿದು ಉತ್ತಮ ಕಲಾವಿದರಾಗಿ ರೂಪುಗೊಳ್ಳಬೇಕಾಗಿದೆ.
ಈ ಹಿಂದೆಯೇ ಹೇಳಿದಂತೆ ಕಲೆಗೆ ಸರಿಯಾದ ಗೌರವ ಮಾನ್ಯತೆಗಳು ದೊರೆತು, ಗುರುಗಳಿಂದ ಕಲಿತ ವಿದ್ಯೆಯನ್ನು ಕೊನೆಯ ತನಕ ಉಳಿಸಿಕೊಂಡು ಮುಂದಿನ ತಲೆಮಾರುಗಳಿಗೆ ಹಸ್ತಾಂತರಿಸಿದರೆ,ಯಕ್ಷಗಾನಕ್ಕೆಅಂತಾರಾಷ್ಟ್ರೀಯ ಮಾನ್ಯತೆ ದೊರಕೀತು. ಇನ್ನಷ್ಟು ಹೊಸ ಕಲಾವಿದರು ರೂಪುಗೊಂಡು ಹಿಮ್ಮೇಳ ಮುಮ್ಮೇಳಗಳು ಪ್ರಭಾವಶಾಲಿಯಾಗಬೇಕಾದರೆ ಪಠ್ಯ ಪಠ್ಯೇತರ ಚಟುವಟಿಕೆಯೊಂದಿಗೆ ಉತ್ತಮ ಗುರು ಮಾರ್ಗದರ್ಶನ ಬೇಕೇ ಬೇಕು. ಸಿರಿಗನ್ನಡಂ ಗೆಲ್ಗೆ ಯಕ್ಷಗಾನಂ ಬಾಳ್ಗೆ
ಭಾಗವತರ ಹಾಡನ್ನು ಅನುಸರಿಸಿ ಮುನ್ನಡೆಯುವುದು ಯಕ್ಷಗಾನದ ಉಳಿದ ಹಿಮ್ಮೇಳ ಮುಮ್ಮೇಳದ ಕಲಾವಿದರಿಗೆ ಕರ್ತವ್ಯ. ಭಾಗವತರು ಯಕ್ಷಗಾನದ ಒಂದನೇ ವೇಷಧಾರಿ. ಹಾಗಾಗಿ ತಂಡದಲ್ಲಿ ಅವರು ಪ್ರಬಲರಾಗಿರಬೇಕು. ಪ್ರದರ್ಶನದ ಗೆಲುವಿಗೂ ಸೋಲಿಗೂ ಹೊಣೆಗಾರರಾಗುತ್ತಾರೆ. ಭಾಗವತ ಎಂಬ ಸ್ಥಾನವು ಶ್ರೇಷ್ಠವಾದುದು. ಗೌರವಯುತವಾದುದು. ಹಾಗಾಗಿಯೇ ಕಲಾವಿದರು ರಂಗಪ್ರವೇಶ ಮಾಡುವಾಗ ಆ ಸ್ಥಾನಕ್ಕೆ ನಮಸ್ಕರಿಸುತ್ತಾರೆ. ಅಲ್ಲಿ ಅರ್ಹತೆಯನ್ನು ಹೊಂದಿಯೇ ಕುಳಿತರೆ ಚಂದ. ಸ್ಥಾನ ಮತ್ತು ಪ್ರದರ್ಶನಗಳ ಸೌಂದರ್ಯವು ಹೆಚ್ಚುವುದು.
ಹಲವು ಪದ್ಯಗಳನ್ನು ಹೇಳಿಯೋ, ನಾಲ್ಕಾರು ಪ್ರಸಂಗ ಆಡಿಸಿಯೋ ಭಾಗವತರು ಎನಿಸಿಕೊಳ್ಳಲಾರರು. ಪ್ರಸಂಗವನ್ನು ಮುನ್ನಡೆಸುವಲ್ಲಿ ನಿರ್ದೇಶನಾ ಸಾಮರ್ಥ್ಯ ಹೊಂದಿರಬೇಕು. ಪುರಾಣಜ್ಞಾನ, ಪ್ರಸಂಗಜ್ಞಾನ, ಪ್ರಸಂಗಗಳ ನಡೆಯ ಅರಿವು, ಅರ್ಥಜ್ಞಾನ, ಕಲಾವಿದನ ಸಾಮರ್ಥ್ಯವನ್ನು ಅರಿತು ನುಡಿಸುವ ಕಲೆಗಾರಿಕೆ ಮೊದಲಾದ ಗುಣಗಳು ಬೇಕು. ‘‘ಸ್ವರಮಾಧುರ್ಯವಿದ್ದರೆ ಸಾಲದು. ರಾಗ-ತಾಳ-ಲಯಜ್ಞಾನ, ನಾಟ್ಯಾನುಭವವನ್ನೂ ಹೊಂದಿರಬೇಕು. ನಟನ ಸಾಮರ್ಥ್ಯದ ಬಗ್ಗೆ ಅರಿವು ಇರಬೇಕು. ಪ್ರಸಂಗ ಪುಸ್ತಕದಲ್ಲಿ ಪದ್ಯಗಳು ತಪ್ಪಾಗಿದ್ದರೂ ಸರಿಮಾಡಿ ಹಾಡಲು ಗೊತ್ತಿರಬೇಕು. ಆತನು ರಂಗದ ನಿರ್ದೇಶಕ. ಕವಿತಾಶಕ್ತಿ ಇರಬೇಕು. ಅವರ ಹಾಡುಗಳು ನಟನಲ್ಲಿ ಭಾವೋತ್ಪತ್ತಿಗೆ ಕಾರಣವಾಗಬೇಕು. ನಿರ್ದೇಶನಾ ಸಾಮರ್ಥ್ಯವನ್ನು ಹೊಂದಿರಬೇಕು. ಈ ಗುಣಗಳನ್ನು ಹೊಂದಿರದವರು ಎಷ್ಟೇ ಸ್ವರವುಳ್ಳವ ರಾದರೂ ಪ್ರಯೋಜನವಿಲ್ಲ’’.
ಭಾಗವತರಲ್ಲಿರ ಬೇಕಾದ ಗುಣಗಳನ್ನು ಹಿರಿಯರು ಹೀಗೆ ಹೇಳಿದರು. ಹೀಗೆ ಹಾಡುಗಾರಿಕೆ ಯನ್ನು ತಪಸ್ಸೇ ಎಂದು ಸ್ವೀಕರಿಸಿ ಸತತ ಸಾಧನೆಯಿಂದ ಭಾಗವತರಾಗಿ, ಶ್ರೇಷ್ಠ ನಿರ್ದೇಶಕರಾಗಿ ಮೆರೆದವರನೇಕರಲ್ಲಿ ದಿ| ಅಗರಿ ಶ್ರೀನಿವಾಸ ಭಾಗವತರು ಪ್ರಮುಖ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಭಾಗವತಿಕೆಗೆ ವೇಷ ಮಾಡುವ ಭಾಗ್ಯ ನನಗೆ ಒದಗಲಿಲ್ಲ. ಇಳಿವಯಸ್ಸಿನಲ್ಲಿ ಭಾಗವತರಾಗಿ ಪ್ರಸಂಗವನ್ನು ಮುನ್ನಡೆಸಿದ್ದನ್ನು ನಾನು ಚಿಕ್ಕ ಹುಡುಗನಾಗಿದ್ದಾಗ ನೋಡಿದ ನೆನಪು ಅಷ್ಟೆ. ಆದರೂ ಇಂದಿನ ಹಿರಿಯ ಕಲಾವಿದರೂ ಕಲಾಭಿಮಾನಿಗಳೂ ಅಗರಿಯವರ ಬಗೆಗೆ ಆಡುವ ಮಾತುಗಳಿಂದ ಅವರೊಂದು ಅಗಾಧ ಪ್ರತಿಭೆಯೆಂದು ತಿಳಿಯಲು ಸಾಧ್ಯ. ವೇಷಧಾರಿಯಾಗಿ, ಭಾಗವತರಾಗಿ, ಪ್ರಸಂಗಕರ್ತರಾಗಿ, ಆಶುಕವಿಯಾಗಿ ಅವರು ಪ್ರಸಿದ್ಧರು. ಹಾಗಾಗಿಯೇ ‘ಯಕ್ಷಬ್ರಹ್ಮ’ ಎಂದು ಖ್ಯಾತರಾದರು.
ಅಗರಿ ಶ್ರೀನಿವಾಸ ಭಾಗವತರು ಸುರತ್ಕಲ್ಲು ಸಮೀಪದ ಹೊಸಬೆಟ್ಟು ಎಂಬಲ್ಲಿ 1906ನೇ ಇಸವಿ ಮೇ 22ರಂದು ಇಡ್ಯ ತಿಮ್ಮಪ್ಪಯ್ಯ ಮತ್ತು ರಾಧಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ಎಳವೆಯಲ್ಲೇ ತೀರ್ಥರೂಪರನ್ನು ಕಳೆದುಕೊಂಡ ಕಾರಣ ಅಜ್ಜನ ಮನೆಯ ಆಸರೆಯಲ್ಲಿ ಬೆಳೆಯಬೇಕಾಯಿತು. ಸುರತ್ಕಲ್ಲು ವಿದ್ಯಾದಾಯಿನೀ ಶಾಲೆಯಲ್ಲಿ ಏಳನೇ ತರಗತಿವರೇಗೆ ಓದು. ಆಗಲೇ ಅವರೊಳಗೆ ಕವಿಯೊಬ್ಬ ವಾಸವಾಗಿದ್ದ. ಸಣ್ಣ ಸಣ್ಣ ಕವನಗಳನ್ನು ರಚಿಸಿ ಹಾಡುತ್ತಿದ್ದರು. ಶಿಕ್ಷಕರಾದ ಶ್ರೀ ಸುಬ್ಬರಾವ್ ಅವರಿಂದ ‘‘ಪುಟ್ಟ ಕಬ್ಬಿಗ’’ ಎಂದು ಆಗಲೇ ಹೊಗಳಿಸಿಕೊಂಡಿದ್ದರು.
ಆಗ 1ನೇ ತರಗತಿಯಿಂದಲೇ ಸಂಸ್ಕೃತ ಕಲಿಯುವ ಪದ್ಧತಿ. ಓದಿದ್ದು 7ನೇ ತರಗತಿಯ ವರೇಗಾದರೂ ಸಂಸ್ಕೃತಜ್ಞಾನವನ್ನು ಗಳಿಸಿಕೊಂಡರು. ನಂತರ ಮಂಗಳೂರಿನಲ್ಲಿ ಸೋದರಮಾವನ ಜತೆಯಾಗಿ ಅಂಗಡಿಯೊಂದನ್ನು ತೆರೆದಿದ್ದರು. ಆಗ ನಾಟಕಾಸಕ್ತಿಯೂ ಬೆಳೆದಿತ್ತು. ಕವಿತಾಶಕ್ತಿಯು ರಕ್ತಗತವಾಗಿ ಬಂದುದರಿಂದ ಹಾಡುಗಾರಿಕೆಗೆ ಇದು ಅನುಕೂಲವೇ ಆಯಿತು. ಮಾವ ರಾಮರಾಯರು ಭಾಗವತರಾಗಿಯೂ, ಮದ್ದಳೆವಾದಕರಾಗಿಯೂ ಯಕ್ಷಗಾನದಲ್ಲಿ ಭಾಗವಹಿಸುತ್ತಿದ್ದರು. ಪಾವಂಜೆ ಲಕ್ಷ್ಮೀನಾರಾಯಣಪ್ಪಯ್ಯನವರು ಆ ಕಾಲದ ಶ್ರೇಷ್ಠ ಹರಿದಾಸರಾಗಿದ್ದರು. ಆಶುಕವಿಗಳೂ ಆಗಿದ್ದರು. ಅವರ ಹರಿಕಥೆಗಳನ್ನು ಕೇಳಲು ಅಗರಿಯವರು ಹೋಗುತ್ತಿದ್ದರು. ನಾರಾಯಣಪ್ಪಯ್ಯನವರ ಕವನ ರಚನಾ ಶಕ್ತಿಗೆ ಅಗರಿಯವರು ಮಾರು ಹೋಗಿದ್ದರು. ಇದು ಹಾಡುಗಾರರಾಗಲು ಅಗರಿಯವರಿಗೆ ಪ್ರೇರಣೆಯೂ ಆಯಿತು.
ಅಗರಿಯವರು ಮೊದಲು ತಿರುಗಾಟ ಮಾಡಿದ್ದು ನಾರಾವಿ ಮೇಳದಲ್ಲಿ. ಮುಂದೆ ಅಗರಿಯವರಿಗೆ ಬೆಳೆಯಲು ಕಲಾಮಾತೆಯು ಅವಕಾಶಗಳನ್ನು ಅನುಗ್ರಹಿಸಿದ್ದಳು. ನಾಟಕ ತಂಡವನ್ನು ರಚಿಸಿ ನಿರ್ದೇಶಕನಾಗಿ ನಟನಾಗಿ ಹಣ ಸಂಪಾದಿಸದಿದ್ದರೂ, ಅನುಭವ ಸಂಪತ್ತನ್ನು ಗಳಿಸಿದರು. ಸಮರ್ಥ ನಿರ್ದೇಶಕನಾಗಲು ಈ ಅನುಭವವು ವೇದಿಕೆಯಾಯಿತು. ಅಗರಿ ಶ್ರೀನಿವಾಸ ಭಾಗವತರು ಖ್ಯಾತ ಭಾಗವತ ಪುತ್ತಿಗೆ ರಾಮಕೃಷ್ಣ ಜೋಯಿಸರಿಂದ ಭಾಗವತಿಕೆ ಮತ್ತು ಕೂಡ್ಲು ಶಾನುಭಾಗರಿಂದ ಸಂಗೀತವನ್ನೂ ಕಲಿತರು. ಪ್ರತಿಭೆಯು ಬೆಳೆಯಲು ಇದೂ ಕಾರಣವಾಗಿತ್ತು. ಅನಿವಾರ್ಯ ಸಂದರ್ಭದಲ್ಲಿ ಕೀಚಕವಧೆ ಪ್ರಸಂಗವನ್ನು ಯಶಸ್ವಿಯಾಗಿ ಆಡಿಸಿ ಅಗರಿ ಶ್ರೀನಿವಾಸ ಭಾಗವತ ಎಂದು ಕರೆಸಿಕೊಂಡರು.
ಅಗರಿಯವರ ಅಣ್ಣ ಶಿವರಾಮ ರಾಯರೂ ಒಳ್ಳೆಯ ಹಾಡುಗಾರರಾಗಿದ್ದರು. ಮಂಗಳೂರಿನಿಂದ ಶ್ರೀ ಗುಣಪಾಲ ಶೆಟ್ಟರ ಆಶ್ರಯದಲ್ಲಿ ಅಗರಿ ಎಂಬಲ್ಲಿ ನೆಲೆಸಿದರು. (ಎಡಪದವು ಸಮೀಪದ ಊರು). ಅಗರಿಯಲ್ಲಿರುವಾಗಲೇ ಮೇಳದ ತಿರುಗಾಟವನ್ನು ಮಾಡಲು ಆರಂಭ. ಹಾಗಾಗಿಯೇ ಅಗರಿ ಎಂಬುದು ಇವರ ಹೆಸರಿನೊಂದಿಗೆ ಬೆಸೆದು ಶಾಶ್ವತವಾಯಿತು. ಅಲ್ಲಿರುವಾಗ ಅಗರಿಯವರು ಶಿಕ್ಷಕನಾಗಿಯೂ ಮಕ್ಕಳಿಗೆ ವಿದ್ಯಾದಾನ ಮಾಡಿದ್ದರು. ಕದ್ರಿ ಮೇಳದಲ್ಲಿರುವಾಗ ಮಂಗಳೂರಿನ ಕೊಡಿಯಾಲಗುತ್ತಿನ ಬಾಕಿಮಾರು ಗದ್ದೆಯಲ್ಲಿ ಇಪ್ಪತ್ತೆರಡು ದಿನಗಳ ಮಹಾಭಾರತ ಪ್ರಸಂಗಗಳ ಬಯಲಾಟ. ತನ್ನ ಕವಿತಾ ಶಕ್ತಿಯಿಂದ ಪದ್ಯಗಳನ್ನು ಸುಂದರವಾಗಿ ರಚಿಸಿ ಹಾಡಿ ಪ್ರದರ್ಶನಗಳನ್ನು ರಂಜಿಸುವಂತೆ ಮಾಡಿದರು. ಮುಂದಕ್ಕೆ ನಡೆದುದೆಲ್ಲಾ ಸಾಧನೆ, ಸಾಹಸವಾಗಿಯೇ ಕೊಂಡಾಡಲ್ಪಟ್ಟಿತು.
ಪ್ರಸಂಗ ರಚನೆಗೂ ಮುಂದಾದರು. ಅವರು ರಚಿಸಿದ ಒಟ್ಟು ಪ್ರಸಂಗಗಳು 26. ಅವುಗಳಲ್ಲಿ ಬ್ರಹ್ಮಕಪಾಲ, ದೇವೀಮಹಾತ್ಮ್ಯೆ, ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ, ವೆಂಕಟೇಶ್ವರ ಮಹಾತ್ಮ್ಯೆ, ತಿರುಪತಿ ಕ್ಷೇತ್ರ ಮಹಾತ್ಮ್ಯೆ, ಭಸ್ಮಾಸುರ ಮೋಹಿನಿ, ಮಹಾದೇವೀ ಲಲಿತೋಪಾಖ್ಯಾನ, ಸುಂದೋಪಸುಂದರ ಕಾಳಗ, ಅಂಧಕಾಸುರ ವಧೆ ಮೊದಲಾದವು ಅತ್ಯಧಿಕವಾಗಿ ಪ್ರದರ್ಶನಗೊಳ್ಳುತ್ತಿವೆ. ಧರ್ಮಸ್ಥಳ ಮೇಳದಲ್ಲಿದ್ದಾಗ ಶ್ರೀ ಮಂಜಯ್ಯ ಹೆಗ್ಡೆಯವರ ಸಲಹೆಯಂತೆ ಭರತೇಶ ವೈಭವ ಎಂಬ ಪ್ರಸಂಗವನ್ನೂ ಬರೆದರು. ಇವರು ಬರೆದ ಇನ್ನು ಕೆಲವು ಪ್ರಸಂಗಗಳ ಹಸ್ತಪ್ರತಿಗಳು ಲಭ್ಯವಾಗದೇ ಹೋಗಿತ್ತು. ತನ್ನಲ್ಲಿರುವ ಅಗಾಧವಾದ ಕವನ ರಚನಾ ಸಾಮರ್ಥ್ಯದಿಂದ ಪ್ರಸಂಗಗಳನ್ನು ರಚಿಸಿದರು.
ಅಗರಿಯವರ ಪ್ರಸಂಗಗಳ ಹಾಡುಗಳಲ್ಲಿರುವ ಸೌಂದರ್ಯವು ಅನುಪಮವಾದುದೆಂದು ವಿದ್ವಾಂಸರೂ ಕಲಾವಿದರೂ ಮೆಚ್ಚಿಕೊಂಡಿದ್ದಾರೆ. ಕದ್ರಿ, ಕೂಡ್ಲು, ಧರ್ಮಸ್ಥಳ, ಸುರತ್ಕಲ್ಲು ಮೊದಲಾದ ಮೇಳಗಳನ್ನು ಭಾಗವತರಾಗಿ ಮುನ್ನಡೆಸಿ, ಪ್ರಸಂಗಕರ್ತರಾಗಿಯೂ ಕಲಾಮಾತೆಯ ಸೇವೆಯನ್ನು ಮಾಡಿದರು. 1960ರಿಂದ ಮಂಗಳೂರಿನ ಬಲ್ಲಾಳರು ನೀಡಿದ ಕುಪ್ಪೆಪದವಿನ ಆರು ಎಕರೆ ಜಾಗದಲ್ಲಿ ವಾಸವಿದ್ದು ಕೃಷಿಕಾರ್ಯಗಳನ್ನೂ ಮಾಡಿದರು. ಕಟೀಲು ಶ್ರೀ ಭ್ರಮರಾಂಬೆಯ ಭಕ್ತರಾಗಿ ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.
ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ ಪ್ರಸಂಗದಲ್ಲಿ, ಬೆಳಗಿನ ಹೊತ್ತು ಬಪ್ಪನೆಂಬೋರ್ವ ಮುಸಲ್ಮಾನ ವ್ಯಾಪಾರಿ ತಪ್ಪದೆ ಕುಲಧರ್ಮವ || ಒಪ್ಪುವ ಮೂಲಿಕಾ ಪುರವರದೊಳು ಮೆರೆದಿರ್ಪವೇಳ್ಯದಿ ಮುದದಿ || ಈ ಹಾಡಿಗೆ ಶೇಣಿಯವರು ಬಪ್ಪಬ್ಯಾರಿಯಾಗಿ ಪ್ರವೇಶ. ಬಪ್ಪಬ್ಯಾರಿ ಮತ್ತು ಭಾಗವತ ಅಗರಿಯವರ ಸಂಭಾಷಣೆಗಳು ಬೆಳಗಿನ ಹೊತ್ತಾದರೂ ಪ್ರೇಕ್ಷಕರನ್ನು ಹಿಡಿದಿಡುತ್ತಿತ್ತು. ಆ ಸನ್ನಿವೇಶದ ವೀಡಿಯೋ ತುಣುಕು ಈಗಲೂ ಇದೆ. ಅಲ್ಲದೆ ವಾಟ್ಸಾಪ್ಗಳಲ್ಲಿ ಹರಿದಾಡುತ್ತಿರುವಾಗ ಎಲ್ಲರೂ ನೋಡಿ ಆನಂದಿಸಿದ್ದಾರೆ. ಆಗ ವಿಟ್ಲ ಜೋಯಿಸರು ಉಸ್ಮಾನ್ ಬ್ಯಾರಿಯಾಗಿ ಅಭಿನಯಿಸಿದ್ದರು.
ಕಟೀಲು ಒಂದನೇ ಮೇಳದಲ್ಲಿ ನಾನು ತಿರುಗಾಟ ಆರಂಭ ಮಾಡಿದಾಗ (1998-99) ಖ್ಯಾತ ಸ್ತ್ರೀಪಾತ್ರಧಾರಿ, ರಾಜ್ಯ ಪ್ರಶಸ್ತಿ ವಿಜೇತ ಡಾ| ಕೋಳ್ಯೂರು ರಾಮಚಂದ್ರ ರಾಯರು ಅಗರಿಯವರ ಬಗೆಗೆ ಹೇಳುತ್ತಿದ್ದ ಗೌರವದ ನುಡಿಗಳು ಈಗಲೂ ನೆನಪಿದೆ. ಅಲ್ಲದೆ ಅಗರಿಯವರು ಕೋಳ್ಯೂರು ಅವರಿಗೆ ಹೀಗೆ ಉಪದೇಶಿಸಿದ್ದರಂತೆ- ‘‘ರಂಗದಲ್ಲಿ ಯಾವಾಗಲೂ ಉದಾಸೀನನಾಗಬೇಡ. ಪಾತ್ರಗೌರವಗಳನ್ನು ಮರೆತು ಮಾತನಾಡಬೇಡ. ಆಡುವ ಮಾತುಗಳನ್ನು ಭಾವಪೂರ್ಣವಾಗಿ ಆಡು. ಅವಿದ್ಯಾವಂತರ ಚಪ್ಪಾಳೆಗೆ ಮರುಳಾಗದೆ ವಿದ್ವಾಂಸನೊಬ್ಬನ ಮೆಚ್ಚುಗೆಗೆ ಪಾತ್ರನಾಗು.’’ ಕಲಿಕಾಸಕ್ತರಲ್ಲಿ ಅದೆಂತಹ ಪ್ರೀತಿ, ಕಾಳಜಿ ಅಗರಿಯವರಿಗೆ!
ಪದವೀಧರ ಯಕ್ಷಗಾನ ಸಮಿತಿ ಮುಂಬೈ, ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಈ ಸಂಸ್ಥೆಗಳು ಅಗರಿಯವರ ಪ್ರಸಂಗಗಳನ್ನು ಸಂಪುಟಗಳಾಗಿ ಪ್ರಕಟಿಸಿವೆ. 1972ರಲ್ಲಿ ಮಂಗಳೂರು ಪುರಭವನದಲ್ಲಿ ಸಾರ್ವಜನಿಕ ಸನ್ಮಾನ, ಕಟೀಲು ಭ್ರಾಮರೀ ಸಂಘದ ಸನ್ಮಾನ, 1988ರಲ್ಲಿ ಬೆಳ್ತಂಗಡಿಯಲ್ಲಿ ಕಲಾಪೋಷಕ ಶ್ರೀ ಕೆ. ವಿ. ಮುಚ್ಚಿನ್ನಾಯರಿಂದ ಸನ್ಮಾನ ಮತ್ತು ‘ಯಕ್ಷಬ್ರಹ್ಮ’ ಅಭಿನಂದನಾ ಗ್ರಂಥ ಸಮರ್ಪಣೆ ಹೀಗೆ ಅನೇಕ ಸಂಘ-ಸಂಸ್ಥೆಗಳು, ಸಂಘಟಕರು ಅಗರಿ ಭಾಗವತರನ್ನು ಗೌರವಿಸಿರುತ್ತಾರೆ. ಹಿರಿಯರೂ, ಅವರ ಸಮಕಾಲೀನ ಕಲಾವಿದರಿಂದಲೂ ಮೆಚ್ಚುಗೆಯನ್ನು ಪಡೆದರು.
‘ಯಕ್ಷಗಾನ ಆಟದಲ್ಲಿ ಭಾಗವತರೇ ಸೂತ್ರಧಾರಿಗಳು ಎಂಬ ವಾಸ್ತವಿಕ ಸತ್ಯವನ್ನು ನಾನು ಸಾಕ್ಷಾತ್ತಾಗಿ ಅನುಭವಿಸಿದ್ದು ಅಗರಿಯವರ ಭಾಗವತಿಕೆಯಲ್ಲಿ’ ಎಂದು ಮಲ್ಪೆ ಶಂಕರನಾರಾಯಣ ಸಾಮಗರೂ, ‘ಧನಕನಕಾದಿಗಳನ್ನು ಸಂಪಾದಿಸುವಷ್ಟು ಸುಲಭವಲ್ಲ ಜನಮನಗಳನ್ನು ಸಂಪಾದಿಸುವುದೆಂಬ ಅನುಭವವುಳ್ಳ ಅಗರಿಯವರ ಶ್ರೀಮಂತಿಕೆಗೆ ತಲೆಬಾಗದಿರದು’ ಎಂದು ಶೇಣಿ ಗೋಪಾಲಕೃಷ್ಣ ಭಟ್ಟರೂ, ‘ಅಗರಿಯವರು ಯಕ್ಷಗಾನದ ಸೀಮಾಪುರುಷರೆಂದು’ ಶಿಮಂತೂರು ನಾರಾಯಣ ಶೆಟ್ಟರೂ, ‘ಅಗರಿ ಅವರಂತೆ ಭಾವವನ್ನು ಪರಿಣಾಮಕಾರಿಯಾಗಿ ತಲುಪಿಸಿದ ಭಾಗವತರು ಇನ್ನೊಬ್ಬರಿಲ್ಲ’ ಎಂದು ಡಾ| ಕೆ. ಎಂ. ನಂಬಿಯಾರರೂ, ‘ಅವರ ದಾರಿಗೆ ಅವರೇ ಮೀಸಲು. ಅದನ್ನು ಯಾರಾದರೂ ಅನುಕರಿಸಲು ಮುಂದಾದರೆ ಅದು ಅವರಿಗೇ ಕೇಡು. ಏಕೆಂದರೆ ಅಗರಿ ಅಗರಿಯೆ! ಅವರಿಗೆ ನಮಸ್ಕರಿಸುವುದೇ ನಮ್ಮ ಭಾಗದ ಕಾಯಕ’ ಎಂದು ದಾಮೋದರ ಮಂಡೆಚ್ಚರೂ, ‘ಅಗರಿಯವರಂತಹ ಕಲಾವಿದರನ್ನು ಪಡೆದು ಯಕ್ಷಗಾನ ಮಾತೆ ಸತ್ಪುತ್ರವತಿಯಾದಳು’ ಎಂದು ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳೂ, ‘ಪ್ರಸಂಗ ಕಳೆಯೇರುವುದು ಭಾಗವತರಿಂದ ಎಂಬ ಮಾತು ಅಗರಿಯವರು ಇದ್ದಲ್ಲಿ ನೂರಕ್ಕೆ ನೂರು ಸತ್ಯ’ ಎಂದು ಅಳಿಕೆ ರಾಮಯ್ಯ ರೈಗಳೂ, ‘ತನ್ನ ಎಲ್ಲಾ ಭೌತಿಕ, ಬೌದ್ಧಿಕ ಸಾಧ್ಯತೆಗಳನ್ನು ಕೇವಲ ಯಕ್ಷಗಾನಕ್ಕೆ ದುಡಿಸಿಕೊಂಡ ಅಗರಿ ಆಚಾರ್ಯರಾಗಬೇಕಿತ್ತು. ಒಬ್ಬ ಅಗರಿಯವರಿಂದ ಶಿಷ್ಯತ್ವೇನ ನೂರಾರು ಗರಿಗಳು ಮೂಡಬೇಕಿತ್ತು’ ಎಂದು ಕೊರ್ಗಿ ವೆಂಕಟೇಶ ಉಪಾಧ್ಯಾಯರೂ ‘ಅಗರಿಯವರೊಂದಿಗೆ ಹಿಮ್ಮೇಳ ನುಡಿಸುತ್ತಿರುವಾಗ ಕೇಳಿಯೇ ಗಿರಿಜಾ ಕಲ್ಯಾಣ, ಬ್ರಹ್ಮಕಪಾಲ, ಶಕುಂತಲಾ ಪರಿಣಯ ಮೊದಲಾದ ಪ್ರಸಂಗಗಳು ನನಗೆ ಬಾಯಿಪಾಠವಾದವು. ಇನ್ನುಳಿದ ಯಾವ ಭಾಗವತರ ಒಡನಾಟದಲ್ಲೂ ಹೀಗಾಗಿಲ್ಲ’ ಎಂದು ನೆಡ್ಲೆ ನರಸಿಂಹ ಭಟ್ಟರೂ ‘ಅಗರಿ ಭಾಗವತರು ನನ್ನನ್ನು ಹಾಸ್ಯಪಾತ್ರಕ್ಕೆ ಬೇಕು ಬೇಕಾದಂತೆ ತಿದ್ದಿ ಪಳಗಿಸಿದರು’ ಎಂದು ರಸಿಕರತ್ನ ವಿಟ್ಲ ಜೋಯಿಸರೂ ‘ಅಗರಿಯವರ ಹಾಡುಗಾರಿಕೆ ಶ್ರಾವಕ ವರ್ಗಕ್ಕೊಂದು ಹಬ್ಬ. ಕೇಳುವಾಗ ಅಸ್ತಿತ್ವವನ್ನೇ ಮರೆತು ಭಾವಪರವಶರಾಗುತ್ತೇವೆ’ ಎಂದು ಕಡತೋಕಾ ಮಂಜುನಾಥ ಭಾಗವತರೂ ಅಗರಿಯವರ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಪ್ರಸಂಗ ರಚನೆಯಲ್ಲಿ ವಿದ್ವಾಂಸರಾದ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ ಸಲಹೆ ಸಹಕಾರಗಳಿದ್ದುದನ್ನು ಅಗರಿ ಶ್ರೀನಿವಾಸ ಭಾಗವತರು ನೆನಪಿಸುತ್ತಿದ್ದರು. ವನಿತೆ ಮತ್ತು ಕವಿತೆಗಳು ಒಲಿದು ಬರಬೇಕು ಎಂಬಂತೆ ಕವಿತಾ ರಚನೆಯಲಿ ತಾನಾಗಿ ಒಲಿದುದರಿಂದ ಅಗರಿಯವರು ಪ್ರಸಂಗಕರ್ತರಾಗಿಯೂ, ಭಾಗವತರಾಗಿಯೂ, ಮೆರೆದರು. ಕುರಿಯ ವಿಠಲ ಶಾಸ್ತ್ರಿಗಳಿಂದ ತೊಡಗಿ ಅಗರಿಯವರು ನಿವೃತ್ತ ರಾಗುವ ವರೇಗೆ ಅನೇಕ ಕಲಾವಿದರು ಅವರ ಗರಡಿಯಲ್ಲಿ ಕಲಾಸೇವೆಯನ್ನು ಮಾಡಿದರು. ಯಕ್ಷಗಾನ ಕ್ಷೇತ್ರದಿಂದ ನಿವೃತ್ತರಾದರೂ ಆತ್ಮೀಯರು ಕರೆದರೆ ಭಜನಾ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರಂತೆ.
ಎಲ್ಲರೊಡನೆ ಬೆರೆಯುತ್ತಿದ್ದ ಅಗರಿಯವರು ಅಲಂಕಾರಪ್ರಿಯರಾಗಿಲ್ಲ. ಸರಳವಾಗಿ ಸಾಮಾನ್ಯರಂತೆ ಬದುಕಿದ್ದರು. ಆರೋಗ್ಯವಂತರಾಗಿ ಬದುಕಿನುದ್ದಕ್ಕೂ ಔಷಧೋಪಚಾರಗಳಿಂದ ಬಹಳ ದೂರ ಉಳಿದಿದ್ದರು. 1997ನೇ ಇಸವಿ, ತನ್ನ 91ನೆಯ ವಯಸ್ಸಿನಲ್ಲಿ ಅಗರಿಯವರು ಅಮರರಾದರು. ದಿ| ಅಗರಿ ಶ್ರೀನಿವಾಸ ಭಾಗವತರಿಗೆ ನಮನಗಳು. ದಿ| ಅಗರಿ ಶ್ರೀನಿವಾಸ ಭಾಗವತರ ಕುಟುಂಬದವರೆಲ್ಲಾ ಯಕ್ಷಗಾನ ನಂಟನ್ನು ಬಿಡದೆ ಉಳಿಸಿಕೊಂಡುದನ್ನೂ ನಾವು ಗಮನಿಸಬಹುದು. ಅವರ ಹಿರಿಪುತ್ರ ಇತ್ತೀಚೆಗೆ ಇಹಲೋಕವನ್ನು ತ್ಯಜಿಸಿದ ಅಗರಿ ರಘುರಾಮ ರಾಯರು ವಿದ್ಯಾವಂತರು. ಸರಕಾರೀ ಉದ್ಯೋಗದ ಜತೆ ಭಾಗವತಿಕೆಯನ್ನೂ ಮಾಡುತ್ತಿದ್ದರು. ಅಗರಿ ಶೈಲಿಯನ್ನು ಮುಂದುವರಿಸಿ ಅದರ ಕೀರ್ತಿಗೆ ಕಾರಣರಾದರು.
ತೀರ್ಥರೂಪರ ನಂತರ ಅನೇಕ ವರ್ಷಗಳ ಕಾಲ ಸುರತ್ಕಲ್ಲು ಮೇಳವನ್ನು ಮುನ್ನಡೆಸಿ ಸಮರ್ಥ ಭಾಗವತರೆಂದು ಖ್ಯಾತರಾದರು. ಬೇಡಿಕೆಯಲ್ಲಿರುವಾಗಲೇ ನಿವೃತ್ತರಾಗಿ ‘ಅಗರಿ ಎಂಟರ್ಪ್ರೈಸಸ್’ ಎಂಬ ಇಲೆಕ್ಟ್ರೋನಿಕ್ಸ್ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಆರಂಭಿಸಿ ಉದ್ಯಮಿಯಾಗಿ ಪ್ರಸಿದ್ಧರಾಗಿದ್ದರು. ಮಂಗಳೂರು, ಸುರತ್ಕಲ್ಲು, ಎಡಪದವು, ಮೂಡುಬಿದಿರೆ ಮೊದಲಾದೆಡೆ ಈ ಸಂಸ್ಥೆಯ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಭಾಗವತರಾದ ಶ್ರೀ ಪದ್ಯಾಣ ಗಣಪತಿ ಭಟ್ಟರು ಅಗರಿ ರಘುರಾಮ ಭಾಗವತರನ್ನು ಗುರುಗಳೆಂದು ಹೇಳಿ ಗೌರವಿಸುತ್ತಾರೆ. ಸುರತ್ಕಲ್ಲು ಮೇಳದಲ್ಲಿ ಒಡನಾಡಿಗಳಾಗಿ ಅನೇಕ ತಿರುಗಾಟ ಮಾಡಿದ್ದರು.
ಅಗರಿ ರಘುರಾಮ ಭಾಗವತರ ತಮ್ಮ ಅಗರಿ ಭಾಸ್ಕರರಾಯರು ಲೇಖಕನಾಗಿ ಪ್ರಸಂಗಕರ್ತರಾಗಿ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಬರೆದ ಪ್ರಸಂಗಗಳಲ್ಲಿ ಹತ್ತು ಪ್ರಸಂಗಗಳು ಇತ್ತೀಚೆಗೆ ‘ಯಕ್ಷಗಾನ ಪ್ರಸಂಗ ದಶಕ’ ಎಂಬ ಸಂಪುಟವಾಗಿ ಪ್ರಕಟಣೆಗೊಂಡಿದೆ. ಅಗರಿ ರಘುರಾಮ ಭಾಗವತರ ಪುತ್ರರಾದ ಅಗರಿ ರಾಘವೇಂದ್ರ ರಾವ್ ಮತ್ತು ಅಗರಿ ವಾದಿರಾಜ ರಾವ್ ಇಬ್ಬರೂ ಯಕ್ಷಗಾನಾಸಕ್ತರು. ‘ಅಗರಿ ಎಂಟರ್ಪ್ರೈಸಸ್’ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಕಲಾಚಟುವಟಿಕೆಗಳನ್ನು ಪ್ರೋತ್ಸಾಹಿಸಿ, ಸಹಕರಿಸಿ, ಭಾಗವಹಿಸುವ ಗುಣವನ್ನು ಹೊಂದಿದವರು. ಅಂಟಿದ ಯಕ್ಷಗಾನದ ನಂಟನ್ನು ನಿರಂತರ ವಾಗಿ ಮುಂದುವರಿಸುತ್ತಿರುವ ಕಲಾಪ್ರಿಯ ಅಗರಿ ಕುಟುಂಬಕ್ಕೆ ಶುಭಾಶಯಗಳು. ಕಲಾಮಾತೆಯ ಅನುಗ್ರಹವು ನಿರಂತರ ವಾಗಿರಲಿ. ು
ಪುರಾಣ ಕಾಲದಲ್ಲಿ ರಾಕ್ಷಸರು ಎಂಬ ವರ್ಗವು ಹೇಗಿದ್ದಿರಬಹುದು? ಅವರ ರೂಪವು ಯಾವ ರೀತಿಯದು? ದೇಹದ ಆಯ ಆಕಾರಗಳು ಹೇಗಿದ್ದಿರಬಹುದು? ಅವರ ವ್ಯವಹಾರಗಳೇನು? ಅವರಲ್ಲಿ ಅಡಗಿದ್ದ ಕ್ರೌರ್ಯದ ತೀವ್ರತೆ ಎಷ್ಟು ಆಳವಾಗಿತ್ತು? ಹೀಗೆಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಗಂಡುಕಲೆ ಎನಿಸಿದ ಯಕ್ಷಗಾನದಲ್ಲಿ ರಾಕ್ಷಸರನ್ನು ಅವರ ಸ್ವಭಾವಕ್ಕನುಗುಣವಾಗಿಯೇ ಹಿರಿಯರು ಅತ್ಯುತ್ತಮವಾಗಿ ಚಿತ್ರಿಸಿರುತ್ತಾರೆ.
ಅವರು ರಾಕ್ಷಸರನ್ನು ತಮ್ಮ ಮನಸ್ಸಿನಲ್ಲಿ ಕಲ್ಪಿಸಿ ಅದಕ್ಕೆ ಆಕಾರವನ್ನು ನೀಡಿರುತ್ತಾರೆ. ಕವಿಯು ತನ್ನ ಕಲ್ಪನೆಗಳಿಗೆ ಆಕಾರವನ್ನು ನೀಡುತ್ತಾನೆ. ಕವಿಹೃದಯ ಉಳ್ಳವರಿಗೆ ಮಾತ್ರ ಇದು ಸಾಧ್ಯ. ಈ ಬಗೆಗೆ ಯೋಚಿಸುವಾಗ ಯಕ್ಷಗಾನದ ಭೀಷ್ಮ ಹರಿದಾಸ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಮಾತುಗಳು ನೆನಪಾಗದೆ ಇರದು. “ದೇವ, ದಾನವ, ಮಾನವಾದಿ ವೇಷ ವಿಧಾನಗಳಲ್ಲಿ ಯಕ್ಷಗಾನಿಗಳು ಅನುಸರಿಸಿ ಬಂದ ರೀತಿ ಅದ್ಭುತ ರಮ್ಯವಾದುದು. ಪ್ರಪಂಚದ ಯಾವ ಕಲಾವಿದನಿಗೂ ಹೊಳೆಯದ ವರ್ಣ ವಿಭಜನೆ, ವೇಷಭೂಷಣಗಳ ಕಲ್ಪನೆ ಇಲ್ಲಿದೆ. ಇದು ವಿಶಿಷ್ಟ ರೂಪದಿಂದ, ಶುಚಿರುಚಿಗಳಿಂದ, ಸ್ವಂತಿಕೆಯಿಂದಲೇ ರಂಜಿಸುತ್ತಿರುವುದು ಅಪರಾಧವೂ ಅಲ್ಲ. ಅಪವಾದವೂ ಅಲ್ಲ. ಇದನ್ನು ರೂಪಿಸಿದ ಅಜ್ಞಾತ ಶಿಲ್ಪಿಗಳಿಗೆ ಋಣಿಗಳಾಗಿರೋಣ” ಶ್ರೀ ಶೇಣಿಯವರ ಮಾತುಗಳು ಅದೆಷ್ಟು ಅರ್ಥಪೂರ್ಣವಾಗಿವೆ.
ಹೀಗೆ ಯಕ್ಷಗಾನದಲ್ಲಿ ಎಲ್ಲಾ ವೇಷಗಳಿಗೂ ಹಿರಿಯರು ಸ್ಪಷ್ಟ ಆಕಾರವನ್ನು ನೀಡಿರುತ್ತಾರೆ. ಕಲಾವಿದರು ಅದನ್ನು ಅನುಸರಿಸಿಯೇ ಸಾಗುತ್ತಾರೆ. ಯಕ್ಷಗಾನದಲ್ಲಿ ಬಣ್ಣದ ವೇಷಧಾರಿಗಳು ರಾತ್ರಿ ರಂಗದಲ್ಲಿ ರಾಕ್ಷಸರಾಗಿ ಅಬ್ಬರಿಸಿದ್ದಾರೆ. ಪಾತ್ರದ ಸ್ವಭಾವವನ್ನು ಅರಿತು ಅದಕ್ಕೆ ಉಚಿತವಾಗಿಯೇ ಅಭಿನಯಿಸಿದ್ದಾರೆ. ಪ್ರಹ್ಲಾದನ ಮೊಮ್ಮಗ ಬಲಿಯ ಪಾತ್ರವನ್ನು ಬಣ್ಣದ ವೇಷದವರೇ ಮಾಡಿದರೂ ಅವನು ಸಾತ್ವಿಕ, ಹರಿಭಕ್ತನೆಂದು ತಿಳಿದು ಅಭಿನಯಿಸುತ್ತಾರೆ. ಆದರೂ ಹೆಚ್ಚಿನ ಎಲ್ಲಾ ಬಣ್ಣದ ವೇಷಗಳೂ ತಾಮಸೀ ಗುಣವನ್ನೇ ಹೊಂದಿದೆ. ಹೀಗೆ ರಾತ್ರಿ ರಂಗಸ್ಥಳದಲ್ಲಿ ರಾಕ್ಷಸರಾಗಿ ಮೆರೆದ ಅನೇಕ ಬಣ್ಣದ ವೇಷಧಾರಿಗಳಲ್ಲಿ ಶ್ರೀ ಚಂದ್ರಗಿರಿ ಅಂಬು ಅವರೂ ಒಬ್ಬರು.
ತೆಂಕುತಿಟ್ಟಿನ ಪ್ರಸಿದ್ಧ ಬಣ್ಣದ ವೇಷಧಾರಿ ಶ್ರೀ ಚಂದ್ರಗಿರಿ ಅಂಬು ಅವರ ಹುಟ್ಟೂರು ಕಾಸರಗೋಡು, ಕಾಂಞಂಗಾಡಿನ ಆಜಾನೂರು ಗ್ರಾಮ. ಶ್ರೀ ಚೋಯಿ ಪಾಟಾಳಿ ಮತ್ತು ಶ್ರೀಮತಿ ಕುಂಞಮ್ಮ ಹೆಂಗ್ಸು ದಂಪತಿಗಳ ಪುತ್ರನಾಗಿ ಜನನ. ಓದಿದ್ದು ಕೇವಲ ಮೂರನೇ ತರಗತಿ ವರೆಗೆ. ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿದ್ದರು. ಮೇಳಕ್ಕೆ ಸೇರಿ ಯಕ್ಷಗಾನ ಪ್ರದರ್ಶನಗಳನ್ನು ನೋಡಿಯೇ ಕಲಿತವರು. ತನ್ನ ಹದಿಮೂರನೆಯ ವರ್ಷದಲ್ಲಿ ಕೊರಕ್ಕೋಡು ಮೇಳಕ್ಕೆ ಸೇರಿದ್ದರು. ಹದಿನಾರನೆಯ ವಯಸ್ಸು ಅಂದರೆ ತಿರುಗಾಟ ಆರಂಭಿಸಿ ಮೂರು ನಾಲ್ಕು ವರ್ಷಗಳಲ್ಲಿಯೇ ಪ್ರೇಕ್ಷಕರು ಗುರುತಿಸುವ ಹಂತಕ್ಕೆ ವೇಷಧಾರಿಯಾಗಿ ಬೆಳೆದಿದ್ದರು.
ಕಲಾ ಬದುಕಿನಲ್ಲಿ ಇವರದು ಕ್ಷಿಪ್ರ ಬೆಳವಣಿಗೆ. ಕೊರಕ್ಕೋಡು ಮೇಳದ ಬಳಿಕ ಕೂಡ್ಲು ಮನೆಯ ಯಜಮಾನರಾದ ಶ್ರೀ ಸದಾಶಿವ ಶ್ಯಾನುಭಾಗರ ಕಾಲದಲ್ಲಿ ಚಂದ್ರಗಿರಿ ಅಂಬು ಅವರು ಕೂಡ್ಲು ಮೇಳಕ್ಕೆ ಕೆಲಸಕ್ಕೆ ಸೇರಿದ್ದರು. ಊರಿಂದೂರಿಗೆ ಮೇಳದ ಪೆಟ್ಟಿಗೆಗಳನ್ನು ಹೊರುವ ಕೆಲಸ ಮಾಡಿದ್ದರು. ಸೂಕ್ಷ್ಮಮತಿಗಳಾದ ಶ್ಯಾನುಭಾಗರು ಅಂಬು ಅವರೊಳಗಿರುವ ಕಲಾವಿದನನ್ನು ಗುರುತಿಸಿದ್ದರು. ವೇಷಧಾರಿಗಳ ಗೈರುಹಾಜರಿಯಲ್ಲಿ ವೇಷ ಮಾಡಲು ಅವಕಾಶವಿತ್ತು ಪ್ರೋತ್ಸಾಹಿಸಿದ್ದರು.
ಮಾಂಬಾಡಿ ನಾರಾಯಣ ಭಾಗವತರ ನಿರ್ದೇಶನ, ಪ್ರೋತ್ಸಾಹ. ಬಣ್ಣದ ಅಯ್ಯಪ್ಪ ಅವರಿಂದ ಕಲಿಕೆ. ಬಳಿಕ ಕಟೀಲು ಮೇಳದಲ್ಲಿ ಹದಿನೆಂಟು ತಿರುಗಾಟ. ಬಳಿಕ ಹಲವು ವರ್ಷಗಳ ಕಾಲ ಕುಂಡಾವು (1), ಮುಲ್ಕಿ (9), ಕೂಡ್ಲು (5) ಮೇಳಗಳಲ್ಲಿ ವ್ಯವಸಾಯ. ಬಳಿಕ ನಿವೃತ್ತಿಯ ವರೆಗೂ ಶ್ರೀ ಧರ್ಮಸ್ಥಳ ಮೇಳದಲ್ಲಿ ಪ್ರಧಾನ ಬಣ್ಣದ ವೇಷಧಾರಿಯಾಗಿ ವ್ಯವಸಾಯ ಮಾಡಿರುತ್ತಾರೆ. ಚಂದ್ರಗಿರಿ ಅಂಬು ಮತ್ತು ಬಣ್ಣದ ಮಾಲಿಂಗ ಅವರುಗಳು ರಾವಣ – ಮೈರಾವಣ ಪಾತ್ರಗಳಲ್ಲಿ ಜತೆಯಾಗಿ ಅಭಿನಯಿಸಿ ಖ್ಯಾತಿಯನ್ನು ಗಳಿಸಿದ್ದರು.
ರಾವಣ, ಮಹಿರಾವಣ, ಕುಂಭಕರ್ಣ, ವೀರಭದ್ರ, ಶೂರಪದ್ಮ, ರುದ್ರಭೀಮ, ಕಿರಾತ, ವೀರಭದ್ರ, ತಾರಕಾಸುರ, ಶುಂಭ, ಪುರುಷಾಮೃಗ ಅಲ್ಲದೆ ಎಲ್ಲಾ ಹೆಣ್ಣು ಬಣ್ಣದ ಪಾತ್ರಗಳಲ್ಲೂ ಚಂದ್ರಗಿರಿ ಅಂಬು ಅವರು ಪ್ರಸಿದ್ಧಿಯನ್ನು ಪಡೆದಿದ್ದರು. ಸರಳ ನಿರಾಡಂಬರದ ಸಜ್ಜನ ವ್ಯಕ್ತಿಯಾಗಿ ಬದುಕಿದವರು. ರಾತ್ರಿ ರಂಗದಲ್ಲಿ ರಾಕ್ಷಸನಾಗಿ ಅಬ್ಬರಿಸಿದರೂ ನಿಜ ಬದುಕಿನಲ್ಲಿ ಸಾತ್ವಿಕರಾಗಿ ವ್ಯವಹರಿಸಿದವರು. ಸುಮಾರು ಅರುವತ್ತೆರಡು ವರ್ಷಗಳ ಕಲಾಸೇವೆಯನ್ನು ಮಾಡಿರುತ್ತಾರೆ.
ಮುಖವರ್ಣಿಕೆಯನ್ನು ಸಿದ್ಧಗೊಳಿಸುವಲ್ಲಿ ಇವರೊಬ್ಬ ಚತುರ ಚಿತ್ರಕಾರನಾಗಿದ್ದರು.1987ರ ಸುಮಾರಿಗೆ ಇವರು ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು. ಚಂದ್ರಗಿರಿ ಅಂಬು ಅವರ ಪತ್ನಿ ಶ್ರೀಮತಿ ಕುಂಞಿಪ್ಪಾಟಿ . ನಿವೃತ್ತಿ ನಂತರ ಆಜಾನೂರು ಕೆಳಕ್ಕುಂಕರ ಮನೆಯಲ್ಲಿ ವಾಸವಾಗಿದ್ದರು. 1999 ನವೆಂಬರ್ 25ಕ್ಕೆ ಶ್ರೀ ಚಂದ್ರಗಿರಿ ಅಂಬು ಅವರು ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡಿದ್ದರು. ಇದಕ್ಕೆ ನಾಲ್ಕು ದಿನ ಮೊದಲು ನವೆಂಬರ್ 21ರಂದು ಉಡುಪಿ ಯಕ್ಷಗಾನ ಕಲಾರಂಗದ ಪದಾಧಿಕಾರಿಗಳು ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರನ್ನು ಮುಂದಿಟ್ಟುಕೊಂಡು ಚಂದ್ರಗಿರಿ ಅಂಬು ಅವರ ನಿವಾಸಕ್ಕೆ ತೆರಳಿ ಪ್ರಸ್ತುತ ಸಾಲಿನ ಡಾ| ಬಿ.ಬಿ.ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ಅವರಿಗೆ ಅರ್ಪಿಸಿದ್ದರು.
ನಾನು ಯಕ್ಷಗಾನ ವಿದ್ಯೆಯನ್ನು ಮಾಂಬಾಡಿ ನಾರಾಯಣ ಭಾಗವತರಿಂದಲೂ, ಹಿರಿಯ ಕಲಾವಿದರ ಒಡನಾಟದಿಂದಲೂ ಕಲಿತೆನೆಂದು ಶ್ರೀ ಚಂದ್ರಗಿರಿ ಅಂಬು ಅವರು ಹೇಳುತ್ತಿದ್ದರು. ಶ್ರೀಯುತರ ಜೀವಿತಾವಧಿ 1912- 1999. ಇವರು 1999ರಲ್ಲಿ ತನ್ನ ಎಂಬತ್ತೇಳನೆಯ ವಯಸ್ಸಿನಲ್ಲಿ ನಿಧನರಾದರೆಂಬ ಮಾಹಿತಿ ಇರುವುದರಿಂದ ಇವರು 1912ರಲ್ಲಿ ಜನಿಸಿದರೆಂದು ನಿರ್ಣಯಿಸಬಹುದು.
ಶ್ರೀ ದೇವಿಮಹಾತ್ಮೆ ಪ್ರಸಂಗದಲ್ಲಿ ಬರುವ `ಮಹಿಷಾಸುರ’ ಪಾತ್ರ ಯಕ್ಷಗಾನ ಪ್ರೇಕ್ಷಕರನ್ನು ಹುಚ್ಚೆಬ್ಬಿಸುವಂಥಹುದು. ತನ್ನ ಪತಿಯಾದ ವಿದ್ಯುನ್ಮಾಲಿ ಯಕ್ಷರಾಜ ಪಿಂಗಳಾಕ್ಷನಿಂದ ಮಡಿದ ವಾರ್ತೆ ಕೇಳಿ ಮಾಲಿನಿಯು ತನ್ನ ಮಗನಾದ ಮಹಿಷಾಸುರನನ್ನು ಕರೆದಾಗ, ಸಭೆಯಿಂದಲೇ ಅಬ್ಬರದಿಂದ ಕೊಡುವ ಪ್ರವೇಶವನ್ನು ನೋಡಲೆಂದೇ ಬರುವ ಪ್ರೇಕ್ಷಕರು ಅಪಾರ. ಭೀಕರವಾದ, ಕೋಣವನ್ನೇ ಹೋಲುವ ಮುಖವರ್ಣಿಕೆ, ತಲೆಯ ಮೇಲೆರಡು ಉದ್ದ ಕೊಂಬು, ಕೈಯಲ್ಲಿ ದೊಂದಿ ಹಿಡಿದು ರಾಳದ ಪುಡಿ ಎರಚಿ, ಭೀಕರ ಬೆಂಕಿಯ ಜ್ವಾಲೆಯೊಂದಿಗೆ ಸಭಾ ಮಧ್ಯದಿಂದಲೇ ರಂಗಸ್ಥಳ ಪ್ರವೇಶಿಸುವ ಅಬ್ಬರ, ಬೈಹುಲ್ಲಿನ ರಾಶಿಗೆ ಬೆಂಕಿ ಕೊಟ್ಟು, ಜ್ವಾಲೆ ನಿರ್ಮಿಸುತ್ತಾ ಮಹಿಷನ ಹಿಂದೆ ‘ಸೂಟೆ’ ಹಿಡಿದ ಹತ್ತೈವತ್ತು ಯುವಕರ ಗುಂಪು – ಇವೆಲ್ಲಾ ವರ್ಣನಾತೀತ. ನೋಡಿದ ಪ್ರೇಕ್ಷಕರಿಗೆ ಮಾತ್ರ ನಿಲುಕುವ ನೋಟವಿದು.
‘ಶ್ರೀ ದೇವಿಮಹಾತ್ಮೆ’ ಪ್ರಸಂಗದ ಎಲ್ಲಾ ಪಾತ್ರಗಳೂ ಮಹತ್ವದ್ದೇ. ಅದರಲ್ಲೂ ಮಹಿಷಾಸುರ ಪಾತ್ರ ಯಕ್ಷಗಾನಪ್ರಿಯರಿಗೆ ರೋಮಾಂಚನ ಹುಟ್ಟಿಸುವಂಥಹದು. ಇದಕ್ಕೆ ಮುಖ್ಯ ಕಾರಣ, ತಲೆಯ ಮೇಲಿರುವ ನೀಳವಾದ ಕೋಡುಗಳು, ಕೋಣದಂತೆಯೇ ಅನುಕರಿಸುವ ಧ್ವನಿ ಹಾಗೂ ವಿಶಿಷ್ಠವಾದ ನಾಟ್ಯಪ್ರಸ್ತುತಿ. 1930ರಲ್ಲಿ ಕಾಸರಗೋಡಿನ ಕೊರಕ್ಕೋಡಿನಲ್ಲಿ ಏಳು ದಿನಗಳ ‘ಶ್ರೀ ದೇವಿಮಹಾತ್ಮೆ’ ಪ್ರಸಂಗ ಪ್ರಪ್ರಥಮವಾಗಿ ಪ್ರದರ್ಶನಗೊಂಡಾಗ ಮಹಿಷಾಸುರ ಪಾತ್ರದ ಮುಖವರ್ಣಿಕೆಯನ್ನು ಹೇಗೆ ಚಿತ್ರಿಸುವುದು ಎಂಬ ಕುತೂಹಲವಿತ್ತು.
ದಿತಿಪುತ್ರಿಯಾದ ಮಾಲಿನಿಯು ಮಹಿಷಿಯ (ಎಮ್ಮೆಯ) ರೂಪ ತಾಳಿ ಬ್ರಹ್ಮದೇವರ ಕುರಿತು ತಪಸ್ಸು ಮಾಡುತ್ತಾಳೆ. ಅವಳ ತಪೋಜ್ವಾಲೆಯಿಂದ ಅಲ್ಲೇ ಆಶ್ರಮದಲ್ಲಿ ತಪೋಮಗ್ನನಾಗಿದ್ದ ‘ಸುಪಾರ್ಶ್ವಕ’ ಎಂಬ ಋಷಿಗೆ ತಪೋಭಂಗವಾದಾಗ, ಮಾಲಿನಿಯು ಮಹಿಷಿ ರೂಪ ತಾಳಿದ ಕಾರಣ ಅವಳಿಗೆ ಹುಟ್ಟುವ ಮಗು ಕೋಣದ ರೂಪವೇ ತಾಳಲಿ ಎಂದು ಶಪಿಸುತ್ತಾನೆ. ಆ ಶಾಪವಾಕ್ಯದ ಫಲವೇ ಮಹಿಷಾಸುರನ ಜನನ. ಪ್ರಪ್ರಥಮ ಶ್ರೀ ದೇವಿಮಹಾತ್ಮೆಯಲ್ಲಿ ಮಹಿಷಾಸುರನ ಪಾತ್ರ ಮಾಡಿದವರು ಅಂದಿನ ಕಾಲದ ಸುಪ್ರಸಿದ್ಧ ಬಣ್ಣದ ವೇಷಧಾರಿಯಾಗಿದ್ದ ಬಣ್ಣದ ಕುಂಞ ಎಂಬವರು. ಕುಂಞರವರು ಬಣ್ಣಗಾರಿಕೆಯಲ್ಲಿ ಅದ್ಭುತವಾದ ಕಲ್ಪನೆ ಹೊಂದಿದ ಕಲಾವಿದರಾಗಿದ್ದರು. ಅವರು ಮುಖವು ಕೋಣದಂತೆಯೇ ಕಾಣಲು ವಿಶಿಷ್ಟ ಮುಖವರ್ಣಿಕೆ ಮಾಡಿದ್ದರಂತೆ. ಎರಡೂ ಕಿವಿಯ ಮೇಲೆ ದಪ್ಪವಾದ ರಟ್ಟಿನಿಂದ ಮಾಡಿದ ಉದ್ದವಾದ ಎರಡು ಕೊಂಬುಗಳನ್ನು ಮಾಡಿ ಅದನ್ನು ಕಪ್ಪುಬಟ್ಟೆಯಿಂದ ಮುಚ್ಚಿ ಕೊಂಬೇ ಹೌದು ಎನ್ನುವಂತೆ ರಚಿಸಿ, ಎರಡು ದೊಡ್ಡದಾದ ಕಿವಿ ಗಳನ್ನೂ ಧರಿಸಿದ್ದರಂತೆ. ಅದನ್ನು ನೋಡಿದವರು ಇಂದು ಯಾರೂ ಇರಲಿಕ್ಕಿಲ್ಲ.
ಅದರ ನಂತರ 1941ರಲ್ಲಿ ಕಿನ್ನಿಗೋಳಿಯಲ್ಲಿ ಕಟೀಲು ಮೇಳದವರಿಂದ ದ್ವಿತೀಯ ಪ್ರಯೋಗವಾಗಿ ಶ್ರೀ ದೇವಿಮಹಾತ್ಮೆ ಪ್ರಸಂಗ ಪ್ರದರ್ಶಿಸಲ್ಪಟ್ಟಿತು. ನಂತರವೂ ಎರಡು ಮೂರು ಭಾರಿ ಈ ಪ್ರಸಂಗ ಪ್ರದರ್ಶನವಾಗಿದೆ. ಆಗ ಹಿಂದಿನ ಸುಪ್ರಸಿದ್ಧ ಬಣ್ಣದ ವೇಷಧಾರಿಗಳಾಗಿದ್ದ ಕೋಲುಳಿ ಸುಬ್ಬ, ಕಾಸರಗೋಡು ಸುಬ್ಬಯ್ಯ ಶೆಟ್ಟಿ, ಬಣ್ಣದ ಅಯ್ಯಪ್ಪರಂಥವರೂ ಮಹಿಷಾಸುರ ಪಾತ್ರ ಮಾಡಿದ್ದರಂತೆ. ಆದರೆ ಸುಮಾರು 1960ರ ನಂತರ ಕಟೀಲು ಮೇಳದವರಿಂದ ಈ ಪ್ರಸಂಗವು ಪ್ರದರ್ಶನ ನೀಡಲಾರಂಭಿಸಿತು. ಈ ಕಾಲಘಟ್ಟದಲ್ಲಿ ಮಹಿಷಾಸುರನ ಪಾತ್ರವು ವಿಜೃಂಭಿಸಲಾರಂಭವಾದುದು ಬಣ್ಣದ ಕುಟ್ಯಪ್ಪುರವರಿಂದ. ಕುಟ್ಯಪ್ಪರು ಮಹಿಷಾಸುರ ಪಾತ್ರಕ್ಕೆ ಹೊಸ ಆಯಾಮ ನೀಡಿದರು. ಬಣ್ಣದ ಕುಂಞರವರ ಮೂಲ ಚಿತ್ರಣದ ಆಧಾರದಲ್ಲೇ ಸ್ವಲ್ಪ ತಮ್ಮ ಕಲ್ಪನೆಯ ಮೂಲಕ ಬದಲಾವಣೆ ತಂದರು. ಆದರೂ ಮಹಿಷಾಸುರ ಪಾತ್ರಕ್ಕೆ ಮೂಲಚಿತ್ರಣ ಕೊಟ್ಟವರು ಬಣ್ಣದ ಕುಂಞರವರೇ ಎಂಬುದು ನಿರ್ವಿವಾದ. ಇಂದಿಗೂ ಕೆಲವೊಂದು ಬದಲಾವಣೆ ಹೊರತು ಪಡಿಸಿದರೆ, ಮಹಿಷಾಸುರ ಪಾತ್ರವು ಬಣ್ಣದ ಕುಂಞರವರ ಮೂಲಚಿತ್ರಣದ ಆಧಾರದಲ್ಲೇ ರಚಿತವಾಗಿದೆ. ಇದನ್ನು ಡಾ. ಶೇಣಿ ಗೋಪಾಲಕೃಷ್ಣ ಭಟ್ ಸಹಿತ ಹಿರಿಯ ಯಕ್ಷಗಾನ ಕಲಾವಿದರೂ ಒಪ್ಪಿರುವ ವಿಷಯ. ಮಹಿಷಾಸುರ ಪಾತ್ರಚಿತ್ರಣದ ಕುರಿತಾಗಿ ಕೆಲವೊಂದು ಮಾಹಿತಿ ಒದಗಿಸಲು ಈ ಲೇಖನ.
ಮುಖವರ್ಣಿಕೆ : ಯಕ್ಷಗಾನದ ಯಾವುದೇ ಪಾತ್ರಗಳು ಗುರುತಿಸಲ್ಪಡುವುದು ಅದರ ಮುಖವರ್ಣಿಕೆಯ ಮೂಲಕ. ಮಹಿಷಾಸುರ ಪಾತ್ರದ ಮುಖವರ್ಣಿಕೆ ವಿಶಿಷ್ಠವಾಗಿದೆ. ಇಂದು ಶ್ರೀ ದೇವಿಮಹಾತ್ಮೆ ಪ್ರಸಂಗದಲ್ಲಿ ಮಹಿಷಾಸುರ ಪಾತ್ರ ಮಾಡುವವರು ಸಾಮಾನ್ಯವಾಗಿ ಒಂದನೇ (ಪ್ರಧಾನ) ಬಣ್ಣದ ವೇಷಧಾರಿ. ಆದರೆ ಯಕ್ಷಗಾನದ ಪರಂಪರೆಯ ಸ್ಥಾನಮಾನದ ಪ್ರಕಾರ ಒಂದನೇ ಬಣ್ಣದ ವೇಷಧಾರಿಯು ಮಾಡಬೇಕಾ ದುದು ‘ಶುಂಭಾಸುರ’ ಪಾತ್ರ. ಆದರೆ ಮಹಿಷಾಸುರ ಪಾತ್ರವು ಪ್ರೇಕ್ಷಕರ ಆಕರ್ಷಣೆಯ ಪಾತ್ರವಾದ ಕಾರಣ, ಬಹುಷಃ ಒಂದನೇ ಬಣ್ಣದ ವೇಷಧಾರಿಗೆ ನೀಡಿರಬಹುದು. ಇಂದು ಮಹಿಷಾಸುರ ಪಾತ್ರ ಬಣ್ಣದ ವೇಷಧಾರಿಗಳಿಗೆ ಪ್ರತಿಷ್ಠೆಯ ವಿಷಯವಾಗಿದೆ. ಈ ಪಾತ್ರಕ್ಕಾಗಿ ಕಲಾವಿದರೊಳಗೆ ಪೈಪೋಟಿಯೂ ನಡೆದಿರುವುದು, ಅದೇ ಕಾರಣದಿಂದ ಮೇಳ ಬಿಟ್ಟದ್ದು, ‘ರೊಟೇಷನ್’ ಆಧಾರದಲ್ಲಿ ಪಾತ್ರ ಹಂಚಿಕೆ ಎಲ್ಲವೂ ಮಹಿಷಾಸುರ ಪಾತ್ರದ ಹಿರಿಮೆಯನ್ನು ಸಾರುತ್ತಿದೆ.
ಮಹಿಷಾಸುರ ಪಾತ್ರದ ಮುಖ ವರ್ಣಿಕೆಯು ‘ಹಸಿಬಣ್ಣ’ದ ಸಾಲಿಗೆ ಸೇರುವ ವಿಶಿಷ್ಟ ಪಾತ್ರ. ಹಸಿಬಣ್ಣ ಎಂದರೆ, ಮೂಲಬಣ್ಣದ (ಯಕ್ಷಗಾನ ಪರಿಭಾಷೆಯಲ್ಲಿ ಛಾಯಾಬಣ್ಣ) ಲೇಪನವಿಲ್ಲದೇ (Foundation) ನೇರವಾಗಿ ಮುಖವರ್ಣಿಕೆ ಬಳಿಯುವ ಪಾತ್ರಗಳು. ಮಹಿಷಾಸುರನ ಮುಖವರ್ಣಿಕೆ ಮಾಡುವಾಗ ಪ್ರಥಮವಾಗಿ ಹಣೆಗೆ ಪಟ್ಟಿ ಕಟ್ಟಿ ಬಿಳಿ ನಾಮ ಹಾಕುತ್ತಾರೆ. (ಸಾಮಾನ್ಯವಾಗಿ ಬಣ್ಣಗಾರಿಕೆ ಮಾಡುವಾಗ ಪ್ರಥಮವಾಗಿ ನಾಮ ಹಾಕಿ, ನಂತರ ಬಣ್ಣ ಬಳಿಯುವುದು ಸಂಪ್ರದಾಯ). ನಂತರ ಹಣೆಯಿಂದ ಆರಂಭಿಸಿ ಕೆಳಮುಖವಾಗಿ ಮೂಗಿನ ಬದಿಯಿಂದ ಬಿಳಿಬಣ್ಣದ ಗೆರೆಯನ್ನು ಮೀಸೆಗಿಂತ ಮೇಲೆ ವರೆಗೆ ತಂದು ಕಿವಿಯ ತನಕ ಎರಡೂ ಬದಿಯಲ್ಲಿ ಬರೆಯುವುದು ಪ್ರಾರಂಭಿಕ ಹಂತ. ಇದು ಸಾಮಾನ್ಯವಾಗಿ ಸರ್ಪದ ಆಕಾರದಲ್ಲಿ ಇರುತ್ತದೆ. ನಂತರ ಈ ಬಿಳಿ ವರ್ಣದ ಎರಡೂ ಬದಿಗಳಲ್ಲಿ ಕಪ್ಪು ಬಣ್ಣದ ಲೈನಿಂಗ್ ಕೊಡಲಾಗುತ್ತದೆ. ನಂತರ ಹಣೆಗೆ ನಾಮ ಇಟ್ಟು ಎರಡೂ ಕಣ್ಣಿನ ಸುತ್ತಲೂ ಕಪ್ಪು ಬಣ್ಣ ಹಚ್ಚುತ್ತಾರೆ.
ಈ ಕಪ್ಪು ಬಣ್ಣ ಹಾಗೂ ಪ್ರಾರಂಭದಲ್ಲಿ ಬಳಿದ ಬಿಳಿಬಣ್ಣದ ನಡುವೆ ಕಣ್ಣಿನ ಮೇಲ್ಮುಖದ ವರೆಗೆ ಛಾಯಾಬಣ್ಣ ಬಳಿಯುತ್ತಾರೆ. ಈಗ ಇದು ನೋಡುವಾಗ ಕೋಣದ ಕಣ್ಣುಗಳ ಹಾಗೇ ಚಿತ್ರಿತವಾಗುತ್ತದೆ. ಮುಖದ ಉಳಿದ ಭಾಗಗಳಲ್ಲಿ ಅಂದರೆ ಹಣೆ, ಮೂಗು, ಮೂಗಿನ ಬದಿಗಳಲ್ಲಿ, ತುಟಿಗೆ ಕಪ್ಪು ಬಣ್ಣ ಲೇಪಿಸುತ್ತಾರೆ. ಗದ್ದಭಾಗಕ್ಕೆ ಮೂಲಬಣ್ಣದ ಗೆರೆಗಳನ್ನು ಎಳೆಯುತ್ತಾರೆ. ಸಾಮಾನ್ಯವಾಗಿ ಮಹಿಷಾಸುರನ ಮುಖವರ್ಣಿಕೆಗೆ ಇತರ ರಾಕ್ಷಸ ಬಣ್ಣದ ವೇಷಗಳಂತೆ ಪಾತ್ರಗಳಂತೆ ಅಕ್ಕಿಹಿಟ್ಟಿನ ‘ಚುಟ್ಟಿ’ ಇಡುವ ಕ್ರಮವಿಲ್ಲ. ಕೆಲವು ವೇಷಧಾರಿಗಳು ಬಿಳಿಬಣ್ಣದಲ್ಲೇ ಚುಟ್ಟಿ ಇಡುತ್ತಾರೆ. (ಆದರೆ ಹಿಂದೆ ಕೆಲವು ಮಹಿಷಾಸುರ ವೇಷಧಾರಿ ಗಳು ಅಕ್ಕಿಹಿಟ್ಟಿನ ಚುಟ್ಟಿ ಇಟ್ಟದ್ದೂ ಇದೆ). ಹಣೆಯ ನಾಮ ಯಾವ ರೀತಿ ಎಂಬುದು ಕಲಾವಿದರ ಕಲ್ಪನೆಗೆ ಬಿಟ್ಟ ವಿಚಾರ. ಇದು ಬಣ್ಣದ ವೇಷಧಾರಿಗಳ ಕಲಾಪ್ರಜ್ಞೆಗೆ ಉತ್ತಮ ಉದಾಹರಣೆಯಾಗಿ ಗುರುತಿಸಿಕೊಳ್ಳುತ್ತದೆ. ಬಣ್ಣದ ಕುಟ್ಯಪ್ಪುರವರು ಹಣೆಯಲ್ಲಿ ಅರ್ಧಚಂದ್ರಾಕಾರದ ನಾಮ ಇಟ್ಟರೆ, ಬಣ್ಣದ ಮಾಲಿಂಗರು ಕಸ್ತೂರಿ ತಿಲಕದೊಂದಿಗೆ ಮೂರು ಅಡ್ಡ ನಾಮ ಇಡುತ್ತಿದ್ದರು. ತ್ರಿಶೂಲ, ಆಟೀನ್, ಉರುಟು ನಾಮ ಇಡುವ ಕ್ರಮವೂ ಇದೆ. ಇಲ್ಲಿಗೆ ಮುಖವರ್ಣಿಕೆಯು ಕೋಣ ನಂತೆಯೇ ಕಾಣುತ್ತದೆ.
ವೇಷಭೂಷಣ : ಯಕ್ಷಗಾನದ ಮಹಿಷಾಸುರ ಪಾತ್ರದಲ್ಲಿ ಮುಖವು ಮಾತ್ರ ಕೋಣನ ರೂಪ. ಮುಖದಿಂದ ಕೆಳಗೆ ಮನುಷ್ಯ ರೂಪ. ಹಾಗಾಗಿ ವೇಷಭೂಷಣವು ಉಳಿದ ಬಣ್ಣದ ರಾಕ್ಷಸ ಪಾತ್ರಗಳಂತೆಯೇ. ಆದರೆ ವಸ್ತ್ರಭೂಷಣ ಕಪ್ಪು ವರ್ಣದ್ದೇ ಆಗಬೇಕು. ಅಂಗಿ, ಚಲ್ಲಣ, ಬಾಲ್ ಮುಂಡು, ಸೋಗೆವಲ್ಲಿ, ಎದೆಪದಕ, ವೀರಕಸೆ (ವೀರಗಾಸೆ), ಭುಜಕೀರ್ತಿ (ಭುಜದಂಬೆ) – ಎಲ್ಲವೂ ಕಪ್ಪು ಬಣ್ಣದವು.
ಕೊಂಬು, ಕಿವಿ ಹಾಗೂ ಕಿರೀಟ : ಈ ಪ್ರಸಾಧನ ಮಹಿಷಾಸುರ ಪಾತ್ರದ ಮುಖ್ಯ ಅಂಶ. ಇದರ ನಂತರ ಮಾತ್ರ ಮಹಿಷಾಸುರನ ಪಾತ್ರ ಪೂರ್ಣಗೊಳ್ಳುವುದು. ಚಿಟ್ಟೆಪಟ್ಟಿ ಕಟ್ಟಿದ ನಂತರ ಕಿವಿಯ ಬಳಿ ಉದ್ದವಾದ ಎರಡು ಕೊಂಬು, ಕೊಂಬಿನ ಹತ್ತಿರ ದೊಡ್ಡ ಕಿವಿ ಕಟ್ಟುತ್ತಾರೆ. ಕಿವಿಯ ಬಳಿ ಓಲೆ ಧರಿಸಿ, ತಲೆಗೆ ಕೇಸರಿಯನ್ನು (ಕೂದಲು) ಕಟ್ಟುತ್ತಾರೆ. ಹಣೆಯಿಂದ ಮೇಲ್ಮುಖವಾಗಿ ‘ಎದೆ ಪದಕ’ ಕಟ್ಟುತ್ತಾರೆ. ಇದೇ ಮಹಿಷಾಸುರನ ಕಿರೀಟ. ಯಕ್ಷಗಾನದಲ್ಲಿ ಇತರ ರಾಕ್ಷಸ ಪಾತ್ರಗಳಿಗಿರುವಂತೆ, ಮಹಿಷಾಸುರ ಪಾತ್ರಕ್ಕೆ ಬೇರೆ ಕಿರೀಟ ಬಳಸುವ ಕ್ರಮವಿಲ್ಲ ಎಂಬುದನ್ನು ಗಮನಿಸಬೇಕಾದ ಅಂಶ.
ಕೊಂಬು ಕಟ್ಟುವ ಕ್ರಮ : ಹಿಂದಿನ ಕಾಲದಲ್ಲಿ ಮಹಿಷಾಸುರನ ಕೊಂಬು ಕಟ್ಟುವುದು ಎಂದರೆ ಪರಿಶ್ರಮದ ಕೆಲಸವಾಗಿತ್ತು. ದಪ್ಪವಾದ ರಟ್ಟು ಅಥವಾ ಶರ್ಟ್ನ ಕಾಲರ್ಗೆ ಬಳಸುತ್ತಿದ್ದ ‘ಬಾಂಟೆಕ್ಸ್’ನಂಥಹ ವಸ್ತು ಉಪಯೋಗಿಸಿ ಒಂದೂವರೆಯಿಂದ ಎರಡು ಅಡಿಗಳಷ್ಟು ಉದ್ದವಾದ ಕೊಂಬು ರಚಿಸುತ್ತಿದ್ದರು. ಈ ಕೊಂಬನ್ನು ಗಟ್ಟಿಯಾಗಿ ಕಟ್ಟಿ, ಚಿಟ್ಟೆಪಟ್ಟಿ ಕಟ್ಟಿದ ನೆತ್ತಿಯ ಮೇಲೆ ಏಳೆಂಟು ಸೀರೆಗಳ ಅಟ್ಟೆಯನ್ನು ಇಟ್ಟು ಅದನ್ನು ಜಟ್ಟಿಯಿಂದ ಕಟ್ಟಿ ಕಪ್ಪು ವಸ್ತ್ರದಿಂದ ಮುಚ್ಚುತ್ತಿದ್ದರು. ಶಿರೋಭಾಗವು ಕೋಣದ ಶಿರದಂತೆ ಎತ್ತರವಾಗಿ ಕಾಣಲು ಈ ವಿಧಾನ. ಈ ಕೊಂಬುಗಳು ಜಾರಿ ಬೀಳದಂತೆ ಚಿಟ್ಟೆಪಟ್ಟಿಯ ಬಳಿ ಕೊಂಬಿಗೆ ತಾಗಿ ಕೋಲಿನ ಸಣ್ಣ ತುಂಡು ಕಟ್ಟುತ್ತಿದ್ದರು. ದಪ್ಪವಾದ ರಟ್ಟಿನಿಂದ ಮಾಡಿದ ಎರಡು ದೊಡ್ಡ ಕಿವಿಗಳನ್ನು ಕಟ್ಟಿ ಕಿವಿಯೋಲೆ ಧರಿಸುತ್ತಿದ್ದರು. ಕೊಂಬಿನ ಬಳಿ ತಲಾ ಎರಡು ಕೇಸರಿ ಹಾಗೂ ಹಿಂದಲೆಯಲ್ಲಿ ಒಂದು ಕೇಸರಿಯಂತೆ ಐದು ಕೇಸರಿ ಕಟ್ಟಿ, ಎದೆಪದಕವನ್ನು ಹಣೆಯಿಂದ ಹಿಂದಕ್ಕೆ ಕಿರೀಟದ ಹಾಗೆ ಕಟ್ಟುತ್ತಿದ್ದರು. ದಪ್ಪವಾದ ಮೀಸೆಯನ್ನು ಕಟ್ಟಿ ಗದ್ದದ ಕೆಳಗೆ ಗಡ್ಡ ಕಟ್ಟುವುದು.
ಇಲ್ಲಿಗೆ ವೇಷವು ಕೋಣದಂತೇ ಕಂಡು ಮಹಿಷಾಸುರ ವೇಷ ಪೂರ್ಣವಾಗುತ್ತದೆ. ಈ ಹಂತ ಮುಟ್ಟುವಾಗ ಮಹಿಷಾಸುರ ಪಾತ್ರಧಾರಿಯ ತಲೆಯ ಮೇಲೆ ಸುಮಾರು 8 ಕಿಲೋದಷ್ಟು ಭಾರ ಬೀಳುತ್ತಿತ್ತು. ಇಷ್ಟೆಲ್ಲಾ ಮಾಡಬೇಕಾದರೆ, ಕಲಾವಿದನ ಪರಿಣತಿಯೊಂದಿಗೆ ಪರಿಣತ ರಂಗ ಸಹಾಯಕರ ಸೇವೆಯೂ ಅಗತ್ಯವಿತ್ತು. ಈ ಕೆಲಸಕ್ಕೆ ಸುಮಾರು ಅರ್ಧ ಘಂಟೆಗಳಾದರೂ ಬೇಕಿತ್ತು. ಈ ರೀತಿಯ ವೇಷಭೂಷಣದಿಂದಾಗಿ ಪಾತ್ರವು ಮಹಿಷ (ಕೋಣ) ನಂತೆಯೇ ಕಾಣಿಸುತ್ತದೆ.
ಆದರೆ ಇಂದಿನ ಮಹಿಷಾಸುರ ಪಾತ್ರಕ್ಕೆ ಇಷ್ಟೆಲ್ಲಾ ಪರಿಶ್ರಮ ಬೇಕಿಲ್ಲ. ಈಗ ಕೊಂಬು ಕಟ್ಟುವ ಕೆಲಸವಿಲ್ಲ. ಈಗ ಮಹಿಷಾಸುರ ಪಾತ್ರಕ್ಕೆ ಬಳಸುವುದು ‘ರೆಡಿಮೇಡ್ ಟೊಪ್ಪಿ’ಯನ್ನು. ಕೇಸರಿ, ಕೊಂಬು, ಕಿವಿ ಹಾಗೂ ಎದೆಪದಕವನ್ನು ಈ ಟೊಪ್ಪಿ ಹೊಂದಿರುತ್ತದೆ. ಇದನ್ನು ತಲೆಗೆ ಕಟ್ಟಿದರೆ ಆಯಿತು. ಈಗ ಏಳೆಂಟು ಸೀರೆಗಳ ಅಟ್ಟೆಯನ್ನು ನೆತ್ತಿಯ ಮೇಲೆ ಕಟ್ಟಲಿಕ್ಕೂ ಇಲ್ಲ. ಈ ಕೆಲಸಕ್ಕೆ ಹೆಚ್ಚೆಂದರೆ ಏಳೆಂಟು ನಿಮಿಷಗಳ ಶ್ರಮ ಸಾಕು. ಈ ಟೊಪ್ಪಿ ಹೆಚ್ಚು ಭಾರವೂ ಇಲ್ಲ. ಹೆಚ್ಚೆಂದರೆ ಒಂದೂವರೆ ಕಿಲೋ ಭಾರವಿದ್ದೀತು. ಏಕೆಂದರೆ ಈಗಿನ ಕೊಂಬುಗಳು ಫಾಮ್, ಫೈಬರ್, ಪೀಲಿ ಅಥವಾ ದಪ್ಪ ಕ್ಯಾನ್ವಾಸ್ ಗಳಿಂದ ಮಾಡಿರುವುದು. ಹಿಂದಿನ ಕಾಲದಲ್ಲಿ ಕೇಸರಿಯು ಸೆಣಬಿನ ಅಥವಾ ಬೇರೆ ನಾರುಗಳಿಂದ ಮಾಡುತ್ತಿದ್ದ ಕಾರಣ, ಒಂದೊಂದು ಕೇಸರಿಯೇ ಅರ್ಧ ಕೆ.ಜಿ.ಯಷ್ಟಿತ್ತು. ಈಗಿನ ಕೇಸರಿ ಹಗುರ ವಸ್ತುವಿನಿಂದ ಮಾಡಿರುವುದು ಹಾಗೂ ಕೇವಲ ಎರಡು ಕೇಸರಿಯನ್ನು ಮಾತ್ರ ಕಟ್ಟುವುದು. ಹಾಗೆಂದು ಮಹಿಷಾಸುರ ಪಾತ್ರ ನಿರ್ವಹಿಸುವುದು ಸುಲಭದ ಕೆಲಸವಲ್ಲ.
ಮಹಿಷಾಸುರ ಪಾತ್ರ ರಂಗಸ್ಥಳ ಪ್ರವೇಶಿಸುವುದು ಸಭೆಯ ಮೂಲಕ. ಸಭೆಯಿಂದಲೇ ದೊಂದಿ ಹಿಡಿದು ರಾಳದ ಪುಡಿ ಎರಚುತ್ತಾ ಅಬ್ಬರದಿಂದ, ಅಟ್ಟಹಾಸದಿಂದ ಬರಲೇ ಸುಮಾರು 10ರಿಂದ 15 ನಿಮಿಷಗಳು ಬೇಕು. ರಂಗಸ್ಥಳವು ಇಪ್ಪತ್ತು ಮೀಟರ್ನಷ್ಟಿರುವಾಗ ಕೈಗಳೆರಡನ್ನೂ ನೆಲಕ್ಕೆ ಊರಿ ನಾಲ್ಕು ಕಾಲಿನಿಂದ ಬರಬೇಕು. ನಂತರ ರಂಗಸ್ಥಳ ಪ್ರವೇಶಿಸಿದ ಕೂಡಲೇ ಏರು ಪದ್ಯಗಳ ವೀರಾವೇಶ ತೋರ್ಪಡಿಸಬೇಕು. ಕೊಂಬುಗಳನ್ನು ಅಲುಗಾಡಿಸುತ್ತಾ ಮಹಿಷಾಸುರನದ್ದೇ ಆದ ವಿಶಿಷ್ಟ ನಾಟ್ಯ ಮಾಡಿ, ಸಂಭಾಷಣೆಯ ನಡುವೆ ಕೋಣದಂತೆ ‘ಗುಟುರು’ ಹಾಕಬೇಕು. ಸುಮಾರು ಒಂದೂವರೆ ಘಂಟೆಗಳ ಕಾಲ ರಂಗಸ್ಥಳದಲ್ಲೇ ಕಳೆಯಬೇಕು.
ಮಹಿಷಾಸುರ ಪಾತ್ರಕ್ಕೆ ಮೂಲ ಚಿತ್ರಣ ಕೊಟ್ಟವರು ಬಣ್ಣದ ಕುಂಞರು. ಹಾಗೆಯೇ ಹಲವಾರು ಸುಪ್ರಸಿದ್ಧ ಕಲಾವಿದರು ಮಹಿಷಾಸುರ ಪಾತ್ರಕ್ಕಾಗಿ ಹೆಸರು ಗಳಿಸಿದ್ದಾರೆ. ಅದರಲ್ಲಿ ಪ್ರಮುಖರು ಕಟೀಲು ಮೇಳದಲ್ಲಿದ್ದ ಬಣ್ಣದ ಕುಟ್ಯಪ್ಪು. ಬಣ್ಣದ ಕುಂಞರ ಮೂಲಚಿತ್ರಣಕ್ಕೆ ತಮ್ಮ ಸ್ವಂತ ಕಲ್ಪನೆಯನ್ನು ಸೇರಿಸಿ ಮಹಿಷಾಸುರ ಪಾತ್ರಕ್ಕೆ ಚಿತ್ರಣ ನೀಡಿದವರು. ಬಣ್ಣದ ಮಾಲಿಂಗ, ಚಂದ್ರಗಿರಿ ಅಂಬು, ಪಕಳಕುಂಞ ಕೃಷ್ಣ ನಾಯ್ಕ, ತ್ರಿವಿಕ್ರಮ ಶೆಣೈ, ಕರವೋಳು ದೇರಣ್ಣ ಶೆಟ್ಟಿ, ಪುಳಿಂಚ ರಾಮಯ್ಯ ಶೆಟ್ಟಿ, ಪುಂಜಾಲುಕಟ್ಟೆ ಧರ್ಣಪ್ಪ ಶೆಟ್ಟಿ, ತನಿಯಪ್ಪ ಗೌಡ, ಮೂಡಬಿದ್ರೆ ಮಾಧವ ಶೆಟ್ಟಿ ಮೊದಲಾದವರ ಮಹಿಷಾಸುರ ಪಾತ್ರವು ಜನರಿಂದ ಮೆಚ್ಚುಗೆ ಗಳಿಸಿದವುಗಳು. ಇತ್ತೀಚಿಗೆ ರಂಗಸ್ಥಳದಲ್ಲೇ ರಂಗೈಕ್ಯರಾದ ಗೇರುಕಟ್ಟೆ ಗಂಗಯ್ಯ ಶೆಟ್ಟರ ಮಹಿಷಾಸುರ ತುಂಬಾ ಪ್ರಸಿದ್ಧ. ಕುಟ್ಯಪ್ಪುರ ಪರಂಪರೆಯಲ್ಲೇ ಮಹಿಷಾಸುರ ಪಾತ್ರ ನಿರ್ವಹಿಸಿದವರು.
ಪ್ರಸ್ತುತ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ಧರ್ಮಸ್ಥಳ ಗೋಪಾಲ್ ಭಟ್, ಹರಿನಾರಾಯಣ ಭಟ್ ಎಡನೀರು, ಶಿವಪ್ರಸಾದ್ ಭಟ್ ಪೆರುವಾಜೆ, ಸತೀಶ್ ನೈನಾಡು, ಉಮೇಶ್ ಕುಪ್ಪೆಪದವು, ನಗ್ರಿ ಮಹಾಬಲ ರೈ, ಬಾಲಕೃಷ್ಣ ಮಿಜಾರು, ಸುರೇಶ ಕುಪ್ಪೆಪದವು, ಲಕ್ಷ್ಮಣ ಕೋಟ್ಯಾನ್, ಶಬರೀಶ ಮಾನ್ಯ, ಸುಬ್ರಾಯ ಪಾಟಾಳಿ, ಹರೀಶ್ ಮಣ್ಣಾಪು, ಶಶಿಕಿರಣ್ ಕಾವು, ಜಗದಾಭಿರಾಮ, ರವಿರಾಜ ಪನೆಯಾಲ, ಮನೀಶ್ ಪಾಟಾಳಿ, ಸಚಿನ್ ಪಾಟಾಳಿ, ರಾಮಕೃಷ್ಣ ನಂದಿಕೂರು ಮುಂತಾದವರು ಮಹಿಷಾಸುರ ಪಾತ್ರದಲ್ಲಿ ಸುಪ್ರಸಿದ್ಧರಾದವರು. ಮಹಿಳಾ ಕಲಾವಿದರೂ ಮಹಿಷಾಸುರ ಪಾತ್ರ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಪ್ರಸಿದ್ಧ ಹವ್ಯಾಸೀ ಮಹಿಳಾ ಕಲಾವಿದರಾದ, 2016ರ ಸಾಲಿನಲ್ಲಿ ಯಕ್ಷಗಾನದ ಸಾಧನೆಗಾಗಿ ‘ಕಿತ್ತೂರ ರಾಣಿ ಚೆನ್ನಮ್ಮ’ ಪ್ರಶಸ್ತಿ ಪುರಸ್ಕೃತರಾದ ಸುರತ್ಕಲ್ ಕಾಟಿಪಳ್ಳದ ಶ್ರೀಮತಿ ಪೂರ್ಣಿಮಾ ಯತೀಶ್ ರೈಯವರು ಸುಮಾರು 200ಕ್ಕೂ ಹೆಚ್ಚು ಭಾರಿ ಮಹಿಷಾಸುರ ಪಾತ್ರ ಮಾಡಿ ಜನಮೆಚ್ಚುಗೆ ಗಳಿಸಿದ್ದಾರೆ. ದಿ. ಗಂಗಯ್ಯ ಶೆಟ್ಟರಿಂದಲೇ ‘ನನ್ನ ನಿರ್ವಹಣೆಯ ಮಟ್ಟದಲ್ಲೇ ಮಾಡಿದ್ದಿಯಲ್ಲ?’ ಎಂಬ ಪ್ರಶಂಸೆ ಗಳಿಸಿದ್ದಾರೆ. ಸಾಯಿಸುಮಾ, ರೇಶ್ಮಾ ಕಾರಂತರೂ ಒಂದೆರಡು ಭಾರಿ ಮಹಿಷಾಸುರ ಪಾತ್ರ ಮಾಡಿದ್ದಾರೆ
ಸುಪ್ರಸಿದ್ಧ ಭಾಗವತರಾದ ‘ರಂಗನಾಯಕ’ ಎನಿಸಿದ ಕುರಿಯ ಗಣಪತಿ ಶಾಸ್ತ್ರಿಯವರೂ, ತಮ್ಮ ಯೌವನದ ಕಾಲದಲ್ಲಿ ಮಹಿಷಾಸುರ ಪಾತ್ರದ ಮೂಲಕ ಮಿಂಚಿದ್ದನ್ನು ಈಗಲೂ ನೆನಪಿಸುವಂಥಹದು. ತಮ್ಮ ಅದ್ಭುತ ನಿರ್ವಹಣೆಯಿಂದ ಕುರಿಯರು ಮಹಿಷಾಸುರ ಪಾತ್ರದಲ್ಲಿ ಪ್ರಸಿದ್ಧರಾಗಿದ್ದರು. ಮಹಿಷಾಸುರ ಪಾತ್ರ ನಿರ್ವಹಣೆಯ ಬಗ್ಗೆ ಪಾತ್ರಧಾರಿಗಳ ಅನಿಸಿಕೆ :
ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ : ಸುಮಾರು 30 ವರ್ಷಗಳಿಂದ ಮಹಿಷಾಸುರ ಪಾತ್ರ ಮಾಡುತ್ತಿರುವ ಸದಾಶಿವ ಶೆಟ್ಟಿಗಾರ್ ಪ್ರಸ್ತುತ ಹನುಮಗಿರಿ ಮೇಳದ ಪ್ರಧಾನ ಬಣ್ಣದ ವೇಷಧಾರಿ. ಬಣ್ಣದ ವೇಷಗಳ ಕುರಿತು ಅಪಾರ ಜ್ಞಾನವುಳ್ಳ ಶೆಟ್ಟಿಗಾರ್ರು ಬಣ್ಣದ ಮಾಲಿಂಗರ ಶಿಷ್ಯ. ಬಣ್ಣದ ಮಾಲಿಂಗರೊಂದಿಗೇ ತಿರುಗಾಟ ಮಾಡಿದವರು. ಅವರ ಅನಿಸಿಕೆಯಂತೆ ‘‘ಹಿಂದಿನ ಮಹಿಷಾಸುರ ಪಾತ್ರ ನಿಧಾನ ಗತಿಯದ್ದಾಗಿತ್ತು. ಈಗಿನದ್ದು ಕ್ಷಿಪ್ರ ಗತಿಯದ್ದು. ಸಭೆಯಲ್ಲಿ ಅಟ್ಟಹಾಸ ತೋರಿದರೆ ಸಾಲದು. ಅದೇ ಕಸುವನ್ನು ರಂಗಸ್ಥಳದಲ್ಲಿಯೂ ತೋರಿಸಿದರೆ ಮಾತ್ರ ಪಾತ್ರಕ್ಕೆ ನ್ಯಾಯ ಒದಗಿಸಿ ದಂತಾಗುತ್ತದೆ. ರಂಗಸ್ಥಳ ಪ್ರವೇಶಿಸಿದ ಕೂಡಲೇ ಏರುಪದಗಳಿರುವ ಕಾರಣ, ಮೊದಲ ಪದ್ಯವನ್ನು ನಿಧಾನಗತಿಯಲ್ಲಿ ಕುಣಿದು, ಮುಂದಿನ ಪದ್ಯಗಳಿಗೆ ಹಂತಹಂತವಾಗಿ ಏರು ಕುಣಿತದೊಂದಿಗೆ ವೀರೋತ್ಕರ್ಷದ ನಿರ್ವಹಣೆ ತೋರಿದರೆ ಉತ್ತಮ’’
ಸತೀಶ್ ನೈನಾಡು : ಕಟೀಲು ನಾಲ್ಕನೇ ಮೇಳದ ಮಹಿಷಾಸುರ ಪಾತ್ರಧಾರಿಯಾದ ನೈನಾಡರು ಕೋಳ್ಯೂರು ರಾಮಚಂದ್ರ ರಾವ್ರವರ ಶಿಷ್ಯ. ಧರ್ಮಸ್ಥಳ ಗೋಪಾಲಭಟ್ಟರ ಶಿಷ್ಯರಾಗಿಯೂ ಬಣ್ಣದ ವೇಷಗಳ ನಡೆಯನ್ನು ಕರಗತ ಮಾಡಿಕೊಂಡವರು. ಮಹಿಷಾಸುರನ ಪಾತ್ರ ಮಾಡಿ 20 ವರ್ಷಗಳ ಅನುಭವ ಇರುವ ಇವರು ಮಹಿಷಾಸುರನ ಕೊಂಬು ರಚನೆಯಲ್ಲೂ ಪರಿಣತಿ ಹೊಂದಿದ್ದಾರೆ. ಅವರ ಅನಿಸಿಕೆ : ”ಮಹಿಷಾಸುರನ ಪ್ರವೇಶವು ಸಭೆಯಿಂದಲೇ ಆರಂಭವಾಗುವುದು ಸರಿಯೇ. ಆದರೂ ಹೆಚ್ಚು ಸಮಯವನ್ನು ಸಭೆಯಲ್ಲೇ ತೊಡಗಿಸುವುದು ಸರಿಯಲ್ಲ. ಮಾಲಿನಿಯು ಸೀರೆ ಬದಲಾಯಿಸಿ ಬರುವಷ್ಟರಲ್ಲಿ ಮಹಿಷಾಸುರ ರಂಗಸ್ಥಳ ತಲುಪಿದರೆ ಉತ್ತಮ. ಸಭೆಯಲ್ಲಿ ಮಾಡಿದ ಪ್ರಸ್ತುತಿಯು ಎಲ್ಲಾ ಪ್ರೇಕ್ಷಕರನ್ನು ತಲುಪುವುದಿಲ್ಲ. ಅದರ ಬದಲು ರಂಗಸ್ಥಳದಲ್ಲೇ ಬೇಕಾದಷ್ಟು ಕಸುಬು ಮಾಡುವ ಅವಕಾಶವಿದೆ. ಸಭೆಯಲ್ಲೇ ಹೆಚ್ಚಿನ ಸಮಯ ಕಳೆದರೆ, ರಂಗಸ್ಥಳದಲ್ಲಿ ಮಾಡುವ ಕೆಲಸದ ಸಮಯವೇ ಕಡಿತವಾಗುತ್ತದೆ. ಏಕೆಂದರೆ ಮಹಿಷವಧೆ ಇಂತಿಷ್ಟೇ ಸಮಯಕ್ಕೆ ಮುಗಿಯಬೇಕು ಎಂಬ ಮಿತಿಯಿದೆ. ನಂತರವೂ ತುಂಬಾ ಪಾತ್ರಗಳು ಬರಲಿಕ್ಕಿವೆಯಲ್ಲಾ?’’
ಉಮೇಶ್ ಕುಪ್ಪೆಪದವು : ಗಂಗಯ್ಯ ಶೆಟ್ಟರ ಶಿಷ್ಯರಾದ ಉಮೇಶ್ ಕುಪ್ಪೆಪದವು ಮಹಿಷಾಸುರ ಪಾತ್ರದಲ್ಲಿ ತಮ್ಮದೇ ಆದ ಛಾಪು ಹೊಂದಿದವರು. ಯುವಜನರ ಮೆಚ್ಚುಗೆಯ ಮಹಿಷಾಸುರ ಪಾತ್ರ ಇವರದ್ದು. ರಂಗಸ್ಥಳದಲ್ಲಿ ಹುಡಿ ಹಾರಿಸುವ ಪ್ರಸ್ತುತಿಯ ಇವರು ಕಟೀಲು ಮೇಳದಲ್ಲಿ ಎಂಟು ವರ್ಷಗಳ ಕಾಲ ಮಹಿಷಾಸುರ ಪಾತ್ರ ಮಾಡಿದ ಅನುಭವಿಗಳು. ಪ್ರಸ್ತುತ ಕಟೀಲು ಮೇಳದಲ್ಲಿದ್ದಾರೆ. ಅವರ ಅನಿಸಿಕೆ :ನನ್ನ ಮಹಿಷಾಸುರ ಪಾತ್ರದ ನಿರ್ವಹಣೆಗೆ ಗುರುಗಳಾದ ಗಂಗಯ್ಯ ಶೆಟ್ಟರೇ ಆದರ್ಶ. ಸಭೆಯಲ್ಲಿ ತೋರುವಷ್ಟೇ ನಿರ್ವಹಣೆಯನ್ನು ರಂಗಸ್ಥಳದಲ್ಲೂ ನೀಡುತ್ತಿದ್ದೇನೆ. ಬೇಸಿಗೆ ಕಾಲದಲ್ಲೂ ಮಹಿಷಾಸುರ ನಿರ್ವಹಣೆ ಮಾಡುವಾಗ ನನಗೆ ಆಯಾಸ, ಸುಸ್ತು ಎಂದು ಇಷ್ಟರ ತನಕ ಅನಿಸಿದ್ದಿಲ್ಲ. ಇದಕ್ಕೆ ಶ್ರೀ ಭ್ರಮರಾಮಂಬಿಕೆಯ ಅನುಗ್ರಹ ಹಾಗೂ ಗುರುಗಳ ಆಶೀರ್ವಾದವೇ ಕಾರಣ’’ವೆಂದು ನನ್ನ ಅನಿಸಿಕೆಯಾಗಿದೆ. ಹವ್ಯಾಸಿ ಮಹಿಳಾ ಕಲಾವಿದೆ ಶ್ರೀಮತಿ ಪೂರ್ಣಿಮಾ ಯತೀಶ್ ರೈ : ಮಹಿಷಾಸುರ ಪಾತ್ರದ ಪ್ರಸ್ತುತಿಯಲ್ಲಿ ಪುರುಷ ಕಲಾವಿದರ ಸಮಾನ ರೀತಿಯ ನಿರ್ವಹಣೆ ತೋರುತ್ತಿರುವ ಶ್ರೀಮತಿ ಪೂರ್ಣಿಮಾರವರು 1995ರಿಂದಲೇ ಸುಮಾರು 200ಕ್ಕಿಂತಲೂ ಹೆಚ್ಚು ಭಾರಿ ಮಹಿಷಾಸುರ ಪಾತ್ರ ನಿರ್ವಹಿಸಿದ ಅನುಭವಿಗಳು. ಇವರು ರಮೇಶ್ ಶೆಟ್ಟಿ ಬಾಯಾರುರವರ ಶಿಷ್ಯೆ. ಅವರ ಅನಿಸಿಕೆ : “ಮಹಿಷಾಸುರ ಸಭೆಯಿಂದ ಪ್ರವೇಶ ಮಾಡುವ ಸನ್ನಿವೇಶ ನನಗೆ ಇಷ್ಟವಾದುದು. ಈ ಸಂದರ್ಭದಲ್ಲಿ ನನಗೆ ಇಷ್ಟರ ತನಕ ಆಯಾಸ ಎಂದು ತೋರಿದ್ದೇ ಇಲ್ಲ. ಆದರೂ ದೊಂದಿಗೆ ರಾಳದ ಹುಡಿ ಎರಚಿದಾಗ ಉಂಟಾಗುವ ಜ್ವಾಲೆಯಿಂದಾಗಿ ಕೆಲಕ್ಷಣ ಉರಿಯ ಅನುಭವವಾಗುತ್ತದೆ. ಆದರೆ ರಂಗಸ್ಥಳ ಪ್ರವೇಶಿಸಿದಾಕ್ಷಣ ಎಲ್ಲವೂ ಸರಿಯಾಗುತ್ತದೆ. ಮಹಿಷಾಸುರನ ಪ್ರಾರಂಭದ ಏರು ಪದ್ಯಗಳಿಗೆ ವಿಭಿನ್ನ ನಾಟ್ಯ ನೀಡುತ್ತಿದ್ದೇನೆ. ಇದಕ್ಕೆಲ್ಲಾ ಶ್ರೀದೇವರ ಕೃಪೆಯೇ ಕಾರಣ ಎಂದು ನನ್ನ ಅನಿಸಿಕೆ’’.
ಹತ್ತಿಪ್ಪತ್ತು ವರ್ಷಗಳ ಹಿಂದಿನ ತನಕ ಮಹಿಷಾಸುರ ಸಭೆಯಿಂದ ಬರುವಾಗ ಎದುರು ಸಾಲಿನಲ್ಲಿ ಕುಳಿತಿರುವ ಯಕ್ಷಗಾನದ ಸೇವಾ ಕರ್ತರು ಗಣ್ಯರ ಮೂಲಕ ಮಹಿಷಾಸುರ ಪಾತ್ರಧಾರಿಗೆ ಮಲ್ಲಿಗೆಯ ಮಾಲೆ ಹಾಕುವ ಸಂಪ್ರದಾಯವಿತ್ತು. ಇತ್ತೀಚೆಗೆ ಆ ಕ್ರಮವಿಲ್ಲ. ಮಹಿಷಾಸುರನ ವಧೆಯಾದಾಗ ಶಿರಚ್ಛೇದವಾಗಿದೆ ಎಂಬ ಸಂಕೇತವಾಗಿ ಮಹಿಷಾಸುರ ಪಾತ್ರಧಾರಿ ರಂಗಸ್ಥಳದಲ್ಲೇ ತನ್ನ ಕೊಂಬು, ಕಿವಿಗಳೊಂದಿಗೆ ಮೀಸೆ ಗಡ್ಡವನ್ನೂ ಕಳಚಿದಾಗ ಶ್ರೀದೇವಿ ಪಾತ್ರಧಾರಿಯು ತನ್ನ ಕೈಯಲ್ಲಿರುವ ತ್ರಿಶೂಲಕ್ಕೆ ಸಿಕ್ಕಿಸಿ ಸಿಂಹಕ್ಕೆ ಎಸೆಯುವ ದೃಶ್ಯವಿತ್ತು. ಈಗ ಟೊಪ್ಪಿಯನ್ನೇ ಕಳಚಿ ಕೊಡುವ ಕ್ರಮವಿದೆ. ಈ ಸನ್ನಿವೇಶಕ್ಕೆ ಕೆಲವಾರು ಕ್ಷಣಗಳು ಬೇಕಾಗುತ್ತದೆ. ಆದ ಕಾರಣ, ಪ್ರೇಕ್ಷಕರ ಗಮನ ಬೇರೆಡೆ ಹರಿಸಲು ಮಹಿಷಾಸುರ ಪಾತ್ರಧಾರಿಯು ಶ್ರೀದೇವಿಗೆ ಹೂವನ್ನು ಎಸೆಯುತ್ತಾರೆ. ಮಹಿಷಾಸುರ ವಧೆಯಿಂದ ದೇವತೆಗಳು ಸಂತುಷ್ಟರಾಗಿ ಪುಷ್ಪವೃಷ್ಟಿ ಮಾಡಿದರು ಎಂಬ ಸಂಕೇತವೂ ದೊರಕಿದಂತಾಗುತ್ತದೆ ಎಂಬುದೇ ಇದರ ಹಿನ್ನೆಲೆ. ು
ಎಂ.ಶಾಂತರಾಮ ಕುಡ್ವ, ಮೂಡಬಿದಿರೆ
ಪೂರಕ ಮಾಹಿತಿ : ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ , ಸತೀಶ್ ನೈನಾಡ್ , ಉಮೇಶ್ ಕುಪ್ಪೆಪದವು .