Sunday, August 30, 2026
Home Blog Page 317

ಕರ್ನಾಟಕದಲ್ಲಿ ಕೊರೋನಾ ಕೇಸ್ (26.06.2021) – ಇಂದು 4272 – ಜಿಲ್ಲಾವಾರು ಪಟ್ಟಿ ಇಲ್ಲಿದೆ.

ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಕೆಯನ್ನು ಕಾಣುತ್ತಿದೆ. ಕರ್ನಾಟಕ ರಾಜ್ಯದಲ್ಲಿ (26.06.2021) ಕೊರೋನಾ ದೃಢಪಟ್ಟವರ ಅಂಕಿಸಂಖ್ಯೆಗಳ ವಿವರ ಇಲ್ಲಿದೆ.

ಆಟಕೂಟಗಳೆರಡರಲ್ಲೂ ಸಲ್ಲುವ ವಾಟೆಪಡ್ಪು ವಿಷ್ಣುಶರ್ಮ

ಶ್ರೀ ವಾಟೆಪಡ್ಪು ವಿಷ್ಣುಶರ್ಮರು ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ನಗುಮೊಗದ ಶರ್ಮರು ಉತ್ತಮ ವೇಷಧಾರಿಯೂ ಹೌದು. ತಾಳಮದ್ದಳೆ ಅರ್ಥಧಾರಿಯೂ ಹೌದು. ನಾಟ್ಯ ಮತ್ತು ಮಾತುಗಾರಿಕೆ ಈ ಎರಡೂ ವಿಭಾಗಗಳಲ್ಲಿ ವಿಷ್ಣುಶರ್ಮರು ಪರಿಣತರು. ಸಾತ್ವಿಕ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಇವರು ಸಂಭಾಷಣಾ ಚತುರರಾಗಿ ಕಲಾಭಿಮಾನಿಗಳ ಮನ ಗೆದ್ದವರು. ಪುಂಡುವೇಷಧಾರಿಯಾದ ಶರ್ಮರು ಕಿರೀಟ ವೇಷಗಳನ್ನೂ ಚೆನ್ನಾಗಿ ನಿರ್ವಹಿಸಬಲ್ಲರು. ಅಗತ್ಯ ಬಿದ್ದರೆ ಸ್ತ್ರೀವೇಷಕ್ಕೂ ಸೈ.

ವಿಷ್ಣುಶರ್ಮ ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ವಾಟೆಪಡ್ಪು ಎಂಬಲ್ಲಿ 1967ನೇ ಇಸವಿ ಎಪ್ರಿಲ್ 6ರಂದು ತಲೆಂಗಳ ಸುಬ್ರಾಯ ಭಟ್ ಪರಮೇಶ್ವರೀ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ಮೂರು ಮಂದಿ ಮಕ್ಕಳಲ್ಲಿ ಇವರೇ ಹಿರಿಯವರು. 7ನೇ ತರಗತಿಯ ವರೆಗೆ ಪೆರುವಾಯಿ ಶಾಲೆಯಲ್ಲಿ ಓದಿದ ಇವರು ಹೈಸ್ಕೂಲ್ ವಿದ್ಯಾಭ್ಯಾಸವನ್ನು ಕಾಯರ್‍ಕಟ್ಟೆ ಸರಕಾರಿ ಶಾಲೆಯಲ್ಲಿ ಪೂರೈಸಿದರು. ನಂತರ 2 ವರ್ಷ ಮನೆಯಲ್ಲೇ ಇದ್ದು ತಂದೆಯವರ ಜತೆ ಕೃಷಿಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತಿ ಅತೀವವಾಗಿತ್ತು ಇವರಿಗೆ.

ಶಾಲಾ ವಿದ್ಯಾರ್ಥಿಯಾಗಿರುವಾಗ ಆಟ, ತಾಳಮದ್ದಳೆಗಳಿಗೆ ಹೋಗುವ ಹವ್ಯಾಸ ಇದ್ದದ್ದರಿಂದ ತಾನೂ ಕಲಾವಿದನಾಗಬೇಕೆಂಬ ಆಸೆ ಸಹಜವಾಗಿ ಮೂಡಿತು. 17ನೇ ವಯಸ್ಸಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾಕೇಂದ್ರಕ್ಕೆ ಸೇರಿದ ವಿಷ್ಣುಶರ್ಮರು ಶ್ರೀ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ನಾಟ್ಯ ಕಲಿತರು. ಸುಂಕದಕಟ್ಟೆ ಮೇಳವನ್ನು ಸೇರಿ ಕೋಡಂಗಿ, ಬಾಲಗೋಪಾಲರು (ಪೂರ್ವರಂಗ) ಮೊದಲಾದ ವೇಷಗಳನ್ನು ಮಾಡುತ್ತಾ ಹಂತಹಂತವಾಗಿ ಬೆಳೆದು ಕಲಾವಿದರಾಗಿ ಕಾಣಿಸಿಕೊಂಡರು.

ಆಗ ಸುಂಕದಕಟ್ಟೆ ಮೇಳದಲ್ಲಿ ಪುತ್ತಿಗೆ ತಿಮ್ಮಪ್ಪ ರೈಗಳು, ಪದ್ಯಾಣ ಶಂಕರನಾರಾಯಣ ಭಟ್, ಕಟೀಲು ಶ್ರೀನಿವಾಸ ರಾವ್ (ಕಟೀಲು ಶೀನಯ್ಯಣ್ಣ), ತ್ರಿವಿಕ್ರಮ ಶೆಣೈ, ಮಂಜೇಶ್ವರ ಜನಾರ್ದನ ಜೋಗಿ, ಬೇತ ಕುಂಞ ಕುಲಾಲ್ ಮೊದಲಾದ ಹೆಸರಾಂತ ಕಲಾವಿದರ ಒಡನಾಟ ಇವರಿಗೆ ಸಿಕ್ಕಿತು. ಪ್ರಸ್ತುತ ಕಟೀಲು ಮೇಳದ ಕಲಾವಿದರಾದ ಹಳುವಳ್ಳಿ ಗಣೇಶ ಭಟ್, ಉಮಾಮಹೇಶ್ವರ ಭಟ್ ಸುಂಕದಕಟ್ಟೆ ಮೇಳದಲ್ಲಿ ಇವರಿಗೆ ಸಹಕಲಾವಿದರಾಗಿದ್ದರು.

ಪ್ರಸಂಗ ಮಾಹಿತಿ, ರಂಗನಡೆಗಳನ್ನು ಖ್ಯಾತ ಮದ್ಲೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್ಟರಿಂದ ಅಭ್ಯಸಿಸಿ ಸದ್ರಿ ಮೇಳದಲ್ಲಿ ಸ್ತ್ರೀವೇಷ ಮತ್ತು ಪುರುಷ ವೇಷಗಳನ್ನು ನಿರ್ವಹಿಸಿದರು. ಮನ್ಮಥ, ವಿಷ್ಣು, ಶ್ರೀರಾಮ, ಶ್ವೇತಕುಮಾರ, ಚಂದ್ರಮತಿ, ದಮಯಂತಿ, ದ್ರೌಪದಿ ಅಲ್ಲದೆ ಕಸೆ ಸ್ತ್ರೀವೇಷಗಳನ್ನೂ ನಿರ್ವಹಿಸಿದ ಅನುಭವ ಇವರಿಗಿದೆ. ನಿರಂತರ 6 ವರ್ಷಗಳ ಕಾಲ ಸುಂಕದಕಟ್ಟೆ ಮೇಳದಲ್ಲಿ ಕಲಾಸೇವೆಯನ್ನು ಮಾಡಿದರು. ಯಕ್ಷಗಾನ ಜೀವನ ಸಾಗಿಸಲು ಕಷ್ಟ ಎಂಬ ತೀರ್ಮಾನಕ್ಕೆ ಬಂದು ಮೇಳದ ತಿರುಗಾಟವನ್ನು ನಿಲ್ಲಿಸಿದ ಶರ್ಮರು ನಂತರ 2 ವರ್ಷ ಮೊದಲಿನಂತೆ ಮನೆಯಲ್ಲಿ ಕೃಷಿಕಾರ್ಯದಲ್ಲಿ ನಿರತರಾದರು.


“ಕಟೀಲು ನಾಲ್ಕನೇ ಮೇಳ ಆರಂಭವಾದ ವರ್ಷ- ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ಟರ ಅಪೇಕ್ಷೆಯಂತೆ ಕಟೀಲು ಮೇಳದಲ್ಲಿ ತಿರುಗಾಟ ನಡೆಸುವ ನಿರ್ಣಯಕ್ಕೆ ಬರಬೇಕಾಯಿತು. ನಿನಗೊಳ್ಳೆಯ ಭವಿಷ್ಯವಿದೆ. ಕಳೆದುಕೊಳ್ಳಬೇಡ. ಸಾಧನೆ ಮಾಡು. ಉತ್ತಮ ಕಲಾವಿದನಾಗುವೆ. ಮೇಳಕ್ಕೆ ಸೇರು ಎಂಬ ಅವರ ಮಾತುಗಳು ಈಗಲೂ ನೆನಪಿದೆ. ಅವರ ಮೇಲಿನ ಗೌರವದಿಂದ ಕಟೀಲು ಮೇಳಕ್ಕೆ ಸೇರಿದೆ. ಅಂದು ಜೀವನ ಸಾಗಿಸಲು ಕಷ್ಟ ಎಂದು ನಿರ್ಧರಿಸಿ ಮೇಳ ಬಿಟ್ಟೆ. ಈಗ ಯಕ್ಷಗಾನವೇ ನನ್ನ ಜೀವನಕ್ಕೆ ಆಧಾರವಾಗಿದೆ” ಎಂದು ವಿಷ್ಣುಶರ್ಮರು ಸಂತೋಷದಿಂದ ಹೇಳುತ್ತಾರೆ.

ನಿರಂತರವಾಗಿ 27 ವರ್ಷಗಳಿಂದ ಶರ್ಮರು ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಕುಬಣೂರು, ಪೂಂಜರು, ಮೋಹನ ಶೆಟ್ಟಿಗಾರ್, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ, ಸಂಪಾಜೆ ಶೀನಪ್ಪ ರೈ, ಸಂಜೀವ ಚೌಟ, ಮಂಜೇಶ್ವರ ಜನಾರ್ದನ ಜೋಗಿ, ತೊಡಿಕಾನ ವಿಶ್ವನಾಥ ಗೌಡ, ಕಾವು ಗಿರೀಶ ಮೊದಲಾದವರ ಒಡನಾಟ, ಅನೇಕ ಕಿರಿಯ ಕಲಾವಿದರ ಪ್ರೀತಿಯನ್ನು ಗಳಿಸಿದ್ದೇನೆ ಎನ್ನುವ ಶರ್ಮರು ಹತ್ತು ವರುಷಗಳಿಂದ ತಾಳಮದ್ದಳೆಯಲ್ಲೂ ಬೇಡಿಕೆಯಿರುವ ಕಲಾವಿದ.

ಕಟೀಲು ಮೇಳದಲ್ಲಿ- ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳು, ಕುಬಣೂರು ಶ್ರೀಧರ ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜರು, ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಮಾರ್ಗದರ್ಶನ ಮಾಡಿದವರು. ಅವರುಗಳಿಂದಾಗಿಯೇ ಕಲಾಭಿಮಾನಿಗಳು ನನ್ನನ್ನು ಗುರುತಿಸುವಂತಾಯಿತು. ಇಷ್ಟಾದರೂ ಬೆಳೆದೆ. ಇಷ್ಟು ವ್ಯವಸಾಯ ಮಾಡಿದರೂ ಕಲಿತದ್ದು ಸಾಲದು ಎನಿಸುತ್ತಿದೆ. 32 ವರ್ಷಗಳ ವ್ಯವಸಾಯ ಮಾಡಿದೆ ಎನ್ನುವುದಕ್ಕಿಂತಲೂ ಅಷ್ಟು ಸಮಯ ಕಳೆದು ಹೋಯಿತಲ್ಲಾ, ಇನ್ನಷ್ಟು ಕಲಿಯಬಹುದಿತ್ತು. ಯಕ್ಷಗಾನಕ್ಕೆ ಕಲಿತಷ್ಟು ಕಡಿಮೆಯೇ. ಕಲಿತದ್ದು ಸಾಲದು ಎಂಬ ಭಾವನೆಯೇ ಇದೆ. ಪರಿಶ್ರಮ ಪಟ್ಟರೆ ಇನ್ನಷ್ಟು ಎತ್ತರಕ್ಕೇರಬಹುದಿತ್ತೇನೋ ಎಂದೆನಿಸುತ್ತಿದೆ.

ಕಲಾವಿದನಾಗಿ ತಿರುಗಾಟ ನಡೆಸುವಲ್ಲಿ ತಂದೆ ತಾಯಿಯರ ಆಶೀರ್ವಾದವಿತ್ತು. ಸಹೋದರ ಗೋಪಾಲಕೃಷ್ಣ ಪ್ರಸಾದನ (ಜಿಂದಾಲ್ ಕಂಪೆನಿಯಲ್ಲಿ ಇಂಜಿನಿಯರ್) ಪ್ರೋತ್ಸಾಹ ಇತ್ತು. ಕಟೀಲು ದೇವಳದ ಆನುವಂಶಿಕ ಅರ್ಚಕರಾದ ಆಸ್ರಣ್ಣ ಬಂಧುಗಳ ಆಶೀರ್ವಾದ, ಕಲ್ಲಾಡಿ ಶ್ರೀ ವಿಠಲ ಶೆಟ್ಟರು ಮತ್ತು ಪ್ರಸ್ತುತ 6 ಮೇಳಗಳ ಸಂಚಾಲಕರಾದ ಶ್ರೀ ಕಲ್ಲಾಡಿ ದೇವೀಪ್ರಸಾದ ಶೆಟ್ಟರ ಸಹಕಾರ, ಪ್ರೋತ್ಸಾಹದಿಂದ 27 ವರುಷಗಳ ತಿರುಗಾಟ ನಡೆಸುವಂತಾಯಿತು. ಇದು ವಿಷ್ಣುಶರ್ಮರ ಮನದ ಮಾತು. ಪ್ರಸ್ತುತ ಬೆಳ್ತಂಗಡಿ ತಾಲೂಕು ಕೋಣಂದೂರು ಗ್ರಾಮದ ಪಣಕಜೆ ಎಂಬಲ್ಲಿ ವಾಸಿಸುತ್ತಿರುವ ವಿಷ್ಣುಶರ್ಮರ ಮನದ ಬಯಕೆಗಳನ್ನೆಲ್ಲಾ ಕಲಾಮಾತೆಯು ಅನುಗ್ರಹಿಸಲಿ ಕಲಾಭಿಮಾನಿಗಳಾದ ನಾವೆಲ್ಲರೂ ಹಾರೈಸೋಣ.

ಕುಟುಂಬ : ತಂದೆ- ಟಿ. ಸುಬ್ರಾಯ ಭಟ್; ತಾಯಿ- ದಿ| ಪರಮೇಶ್ವರಿ; ಪತ್ನಿ- ರೇಖಾ; ಪುತ್ರಿ – ಕು| ರಕ್ಷಾಕರೀ ಶರ್ಮ; ತಮ್ಮ- ಗೋಪಾಲಕೃಷ್ಣ ಪ್ರಸಾದ; ತಂಗಿ- ಶೋಭಾರತ್ನ (ವಿವಾಹಿತೆ)

ಲೇಖನ: ರವಿಶಂಕರ್ ವಳಕ್ಕುಂಜ 

ಹಿರಿಯ, ನಿವೃತ್ತ ಬಣ್ಣದ ವೇಷಧಾರಿ ದಾಸನಡ್ಕ ಶ್ರೀ ರಾಮ ಕುಲಾಲ್

                         ಯಕ್ಷಗಾನದಲ್ಲಿ ತೆಂಕುತಿಟ್ಟಿಗೆ ಸಂಬಂಧಿಸಿದಂತೆ ಕೇಶಾವರೀ, ಭೀಮನ ಮುಡಿ ಮೊದಲಾದ ಕಿರೀಟಗಳಲ್ಲಿ ಬಣ್ಣದ ವೇಷಗಳು ಕಾಣಿಸಿಕೊಳ್ಳುತ್ತವೆ. ಹೆಣ್ಣುಬಣ್ಣಕ್ಕೆ ಅದರದ್ದೇ ಆದ ಕಿರೀಟವಿದೆ. ಹಿಂದಿನ ಕಾಲದಲ್ಲಿ ಹಿರಣ್ಯಕಶ್ಯಪ, ಕಂಸ ಮೊದಲಾದ ವೇಷಗಳನ್ನು ಕೇಶಾವರೀ ಕಿರೀಟದಲ್ಲಿ ಬಣ್ಣದ ವೇಷದವರೇ ಮಾಡುತ್ತಿದ್ದರಂತೆ. ಹೀಗೆ ಯಕ್ಷಗಾನ ಕಲೆಯ ಬಣ್ಣದ ವೇಷಗಳಲ್ಲಿ ಕಾಣಿಸಿಕೊಂಡು ಅಭಿನಯಿಸಿದರು ಅನೇಕರು. ದಾಸನಡ್ಕ ಶ್ರೀ ರಾಮ ಕುಲಾಲ್ ಅವರು ತೆಂಕುತಿಟ್ಟಿನ ಹಿರಿಯ ಬಣ್ಣದ ವೇಷಧಾರಿ. ವೃತ್ತಿ ಕಲಾವಿದರಾಗಿ ಕಲಾಸೇವೆಯನ್ನು ಮಾಡಿದವರು. ಒಟ್ಟು 52 ವರ್ಷಗಳ ಕಾಲ ಕಲಾಸೇವೆಯನ್ನು ಮಾಡಿ ಪ್ರಸ್ತುತ ಕಲಾಬದುಕಿನಿಂದ ನಿವೃತ್ತರಾಗಿದ್ದಾರೆ.

ದಾಸನಡ್ಕ ರಾಮ ಕುಲಾಲರು 1942ನೇ ಇಸವಿ ದಶಂಬರ 3ರಂದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ, ಕುಡಾಲು ಮೇರ್ಕಳ ಗ್ರಾಮದ ಪೆರ್ಮುದೆ ಸಮೀಪದ ಬಾಯಾಡಿ ಎಂಬಲ್ಲಿ ಜನಿಸಿದರು. ತಂದೆ ಶ್ರೀ ಕುಂಞ ಮೂಲ್ಯ. ತಾಯಿ ಶ್ರೀಮತಿ ಅಪ್ಪು. ಪ್ರಸ್ತುತ ರಾಮ ಕುಲಾಲರು ಧರ್ಮತ್ತಡ್ಕದ ತೆಂಕಕರೆ ಮನೆಯಲ್ಲಿ ವಾಸವಾಗಿರುತ್ತಾರೆ. ಓದಿದ್ದು 6ನೇ ತರಗತಿವರೇಗೆ. 1ನೇ ತರಗತಿಯಿಂದ 3ರ ವರೇಗೆ ಹೇರೂರು ಶಾಲೆಯಲ್ಲಿ. 4ರಿಂದ 6ನೇ ತರಗತಿ ವರೇಗೆ ಚೇವಾರು ಶಾಲೆಯಲ್ಲಿ. ಶಾಲಾ ಬಾಲಕನಾಗಿದ್ದಾಗಲೇ ಯಕ್ಷಗಾನಾಸಕ್ತಿ. ಆಟಗಳನ್ನು ನೋಡುತ್ತಿದ್ದರು.

ಕೂಡ್ಲು ಮಕ್ಕಳ ಮೇಳದ ಆಟ-ಪ್ರಸಂಗ ಶ್ರೀಕೃಷ್ಣಲೀಲೆ ಕಂಸವಧೆ. ಪೆರ್ಮುದೆ ಪೆರಿಯಡ್ಕದಲ್ಲಿ ನಡೆದ ಈ ಆಟವನ್ನು ನೋಡಿ ತಾನೂ ಕಲಾವಿದನಾಗಬೇಕೆಂಬ ಆಸೆ ಹುಟ್ಟಿಕೊಂಡಿತ್ತು. ಶಾಲೆ ಬಿಟ್ಟ ನಂತರ ಯಕ್ಷಗಾನ ಕಲಾವಿದನಾಗುವ ಆಸೆಯನ್ನು ಹೊತ್ತು ಕಲಾಪ್ರಿಯನಾದ ಕೂಡ್ಲು ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಾನಕ್ಕೆ ತೆರಳಿದರು. ಆ ಕಾಲದ ಪ್ರಸಿದ್ಧ ಎದುರು ವೇಷಧಾರಿಯಾಗಿದ್ದ ಮಧೂರು ತಿಮ್ಮಪ್ಪನವರಿಂದ ನಾಟ್ಯ ಕಲಿತರು. ಕೂಡ್ಲು ದೇವಳದ ಆಡಳಿತದಾರರಾದ ಶ್ರೀ ಈಶ್ವರ ಶ್ಯಾನುಭಾಗರ ಸಲಹೆಯಂತೆ ಕೂಡ್ಲು ಮೇಳದಲ್ಲಿ ಮೊದಲ ತಿರುಗಾಟ. ಪೆರುವಡಿ ನಾರಾಯಣ ಭಟ್ಟರ ಸಂಚಾಲಕತ್ವ. ಕೊಕ್ಕಡ ಸುಬ್ರಾಯ ಆಚಾರ್ಯರು ಭಾಗವತರಾಗಿದ್ದರು.

ಮಾಳಂಗಾಯಿ ಕೃಷ್ಣ ಭಟ್, ಚಂದ್ರಗಿರಿ ಅಂಬು, ಪಕಳಕುಂಜ ಕೃಷ್ಣ ನಾೈಕ, ಏಕ್ಟರ್ ಜೋಷಿ, ಎಂಪೆಕಟ್ಟೆ ರಾಮಯ್ಯ ರೈ, ಕೂಡ್ಲು ನಾರಾಯಣ ಬಲ್ಯಾಯ ಮೊದಲಾದ ಕಲಾವಿದರೊಂದಿಗೆ ತಿರುಗಾಟ ನಡೆಸಿ, ಕಲಿಯುವ ಅವಕಾಶ ಸಿಕ್ಕಿತ್ತು. ಮುಂದಿನ ವರ್ಷ ಶ್ರೀ ಧರ್ಮಸ್ಥಳ ಮೇಳದಲ್ಲಿ 1 ವರ್ಷ (ಕುರಿಯ ವಿಠಲ ಶಾಸ್ತ್ರಿಗಳ ಜತೆ) ನಂತರ ಮೇಳದಲ್ಲಿ ಕೆಲವು ವರ್ಷಗಳ ತಿರುಗಾಟ. ತಿರುಗಾಟ ಪ್ರಥಮ ವರ್ಷ ಕೋಡಂಗಿ, ಬಾಲಗೋಪಾಲರು, ರಾಕ್ಷಸ ಬಲ… ಹೀಗೆ ಬೆಳೆಯುತ್ತಾ ಸಾಗಿದವರು ದಾಸನಡ್ಕ ರಾಮ ಕುಲಾಲ್. ಬಣ್ಣದ ವೇಷ ಮಾಡುವ ಸಾಮರ್ಥ್ಯವನ್ನೂ ಹೊಂದಿದ್ದರು.

ಈ ಸಂದರ್ಭದಲ್ಲಿ ಕೊಲ್ಲೂರು ಮೇಳದವರು ಬಣ್ಣದ ವೇಷಧಾರಿಗಳ ಅನ್ವೇಷಣೆಯಲ್ಲಿದ್ದರು. ರಾಮ ಕುಲಾಲರಿಗೆ ಅವಕಾಶವೂ ಸಿಕ್ಕಿತ್ತು. ಕೊಲ್ಲೂರು ಮೇಳಕ್ಕೆ 2ನೇ ಬಣ್ಣದ ವೇಷಧಾರಿಯಾಗಿ ಸೇರಿದರು. ಅಗರಿ ಶ್ರೀನಿವಾಸ ಭಾಗವತರಿದ್ದ ಮೇಳ. ದೊಡ್ಡ ಸಾಮಗರೂ ಇದ್ದರು. ಅವರೀರ್ವರೂ ರಾಮ ಕುಲಾಲರಿಗೆ ಹೇಳಿಕೊಡುತ್ತಿದ್ದರಂತೆ. ಆಗ ಕೊಳ್ತಿಗೆ ನಾರಾಯಣ ಗೌಡರು ರಾಮ ಕುಲಾಲರ ಸಹಕಲಾವಿದರಾಗಿದ್ದರು. ಬಳಿಕ ನಂದಾವರ ಮೇಳದಲ್ಲಿ ತುಳು ಪ್ರಸಂಗಗಳಲ್ಲಿ ವೇಷ ಮಾಡಿ ಅನುಭವಗಳನ್ನು ಗಳಿಸಿಕೊಂಡರು. ಪದ್ಮತಾಮರೆ ಪ್ರಸಂಗದ ಜಟ್ಟಿ ಮತ್ತು ಬಂಗರಸು ಅಲ್ಲದೆ ಕೋಟಿ, ಬುದ್ಧಿವಂತ, ಚಂದುಗಿಡಿ ಮೊದಲಾದ ವೇಷಗಳನ್ನು ಮಾಡುವ ಅವಕಾಶವೂ ಸಿಕ್ಕಿತ್ತು.


                                        1991-92ರ ಸುಮಾರಿಗೆ ಕಟೀಲು ಮೇಳಕ್ಕೆ ಸೇರಿದೆನೆಂದು ರಾಮ ಕುಲಾಲರು ಹೇಳುತ್ತಾರೆ. ಕುರಿಯ ಗಣಪತಿ ಶಾಸ್ತ್ರಿಗಳು ಕರೆಸಿ ಮೇಳಕ್ಕೆ ಬರುವಂತೆ ಹೇಳಿದರಂತೆ. ದೇವೀಮಹಾತ್ಮ್ಯೆ ಪ್ರಸಂಗದಲ್ಲಿ ಶುಂಭಾಸುರ ಪಾತ್ರವನ್ನು ಮಾಡಲೆಂದೇ ಕರೆಸಿದ್ದರು. ‘‘ಅವರಿಂದಾಗಿಯೇ ನಾನು ಯಕ್ಷಗಾನದಲ್ಲಿ ಕಾಣಿಸಿಕೊಂಡೆ. ಪ್ರತಿಯೊಂದು ವೇಷಕ್ಕೂ ಹೇಳಿಕೊಟ್ಟು ತಯಾರು ಮಾಡುತ್ತಿದ್ದರು. ಜತೆಗೆ ಪದ್ಯಾಣ ಶಂಕರನಾರಾಯಣ ಭಟ್ಟರ ನಿರ್ದೇಶನವೂ ಇತ್ತು. ಗೇರುಕಟ್ಟೆ ಗಂಗಯ್ಯ ಶೆಟ್ಟರ ಸಹಕಾರವೂ ಇತ್ತು. ನಾನು ಕಟೀಲು ಮೇಳಕ್ಕೆ ಸೇರಿದ ವರ್ಷ ನೆಡ್ಲೆ ನರಸಿಂಹ ಭಟ್ರು, ದಿವಾಣ ಭೀಮ ಭಟ್ರೂ ಇದ್ದರು. ಅವರ ಜತೆ ತಿರುಗಾಟ ನಡೆಸುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಭಾಗ್ಯವೆಂದೇ ಭಾವಿಸುತ್ತೇನೆ.

ಮೇಳದ ಯಜಮಾನರಾದ ಕಲ್ಲಾಡಿ ವಿಠಲ ಶೆಟ್ಟರೂ, ಆಸ್ರಣ್ಣರೂ ಆಶೀರ್ವದಿಸಿ ಪ್ರೋತ್ಸಾಹಿಸಿದ್ದರು. ಅಲ್ಲದೆ ಅಡೂರು ಲಕ್ಷ್ಮೀನಾರಾಯಣ ರಾವ್ ಬೆಳ್ಳಾರೆ ಮಂಜುನಾಥ ಭಟ್, ಪುಂಡರೀಕಾಕ್ಷ ಉಪಾಧ್ಯಾಯ, ಕೈರಂಗಳ ಕೃಷ್ಣ ಮೂಲ್ಯ ಮೊದಲಾದವರ ಸಹಕಾರವೂ ಇತ್ತು. ಗೇರುಕಟ್ಟೆ ಗಂಗಯ್ಯ ಶೆಟ್ಟರ ರುದ್ರಭೀಮನಿಗೆ ದುಶ್ಶಾಸನನಾಗಿ ಅಭಿನಯಿಸಿದ್ದು ವಿಶೇಷ ಅನುಭವ. 23ನೇ ವಯಸ್ಸಿನಲ್ಲೇ ಮಹಿಷಾಸುರನ ಪಾತ್ರವನ್ನು ಮಾಡಿದ್ದೆ. ಕುರಿಯ ಗಣಪತಿ ಶಾಸ್ತ್ರಿಗಳು ನನ್ನಿಂದ ಮಾಡಿಸಿದ್ದರು. ಆದರೆ ನನಗೆ ಆ ವೇಷದಲ್ಲಿ ಆಸಕ್ತಿಯಿರಲಿಲ್ಲ. ಶುಂಭಾಸುರನೇ ಮೊದಲಾದ ಕೇಶಾವರೀ ವೇಷಗಳೇ ನನಗೆ ಇಷ್ಟವಾಗಿತ್ತು.’’ ಹೀಗೆ ಹೇಳುತ್ತಾ ಕಟೀಲು ಮೇಳದ ತನ್ನ ತಿರುಗಾಟದ ಅನುಭವಗಳನ್ನು ದಾಸನಡ್ಕ ರಾಮ ಕುಲಾಲರು ನೆನಪಿಸಿದ್ದರು.

ಕಟೀಲು ಮೇಳಕ್ಕೆ ಸೇರುವ ಮೊದಲು ಹಾಸ್ಯರತ್ನ ನಯನ ಕುಮಾರರು ನಡೆಸುತ್ತಿದ್ದ ಚೌಡೇಶ್ವರೀ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಆಗ ನಾಟಕೀಯ ವೇಷಗಳನ್ನೂ ಮಾಡುತ್ತಿದ್ದರು. ಆಗ ರಾಮ ಕುಲಾಲರ ವಯಸ್ಸು 30. ಭಸ್ಮಾಸುರನಾಗಿ ಇವರ ಅಭಿನಯಕ್ಕೆ ಮೆಚ್ಚಿ ಸಭಿಕರು ನೋಟಿನ ಮಾಲೆಯನ್ನು ತೊಡಿಸಿದ ಘಟನೆಯನ್ನು ರಾಮ ಕುಲಾಲರು ನೆನಪಿಸಿದ್ದರು. ತನ್ನ 18ನೆಯ ವಯಸ್ಸಿನಲ್ಲಿ ಕುತ್ಯಾಳ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಗೆಜ್ಜೆಕಟ್ಟಿ ಕಲಾಬದುಕನ್ನು ಆರಂಭಿಸಿದ ದಾಸನಡ್ಕ ರಾಮ ಕುಲಾಲರು  52 ವರ್ಷಗಳ ಕಾಲ ಕಲಾವಿದನಾಗಿ ವ್ಯವಸಾಯ ಮಾಡಿರುತ್ತಾರೆ.

ಅನೇಕ ಸಂಘ-ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ. ಬಣ್ಣದ ಮಹಾಲಿಂಗ ಯಕ್ಷಪ್ರಶಸ್ತಿಯೂ ದೊರೆತಿದೆ. ಶುಂಭ, ಭಂಡಾಸುರ, ಶೂರಪದ್ಮ, ತಾರಕ, ರಾವಣ, ಕುಂಭಕರ್ಣ, ಶೂರ್ಪನಖಿ, ಪೂತನಿ, ಘಟೋತ್ಕಚ, ಮಹಿಷಾಸುರ, ಕಾಲಜಂಘ, ವಜ್ರದುಂಬಿ ಘೋರ ಗರುಡ, ಲವಣಾಸುರ ಮೊದಲಾದ ಪಾತ್ರಗಳಲ್ಲಿ ಮಿಂಚಿದ ಶ್ರೀ ರಾಮ ಕುಲಾಲರು 2011ರಲ್ಲಿ ಕಲಾಬದುಕಿಗೆ ವಿದಾಯ ಹೇಳಿದ್ದರು.  

(ಫೆಬ್ರವರಿ 2020ರಲ್ಲಿ ಬರೆದ ಲೇಖನ) 

ಲೇಖಕ: ರವಿಶಂಕರ ವಳಕ್ಕುಂಜ

ಯಕ್ಷರಂಗದ ಯುವ ಚೆಂಡೆ ಹಾಗೂ ಮದ್ದಳೆ ವಾದಕರು ಶ್ರವಣ್ ಕುಮಾರ್ ಕೊಳಂಬೆ

ನಮ್ಮ ಕರಾವಳಿಯ ಗಂಡು ಕಲೆ ಯಕ್ಷಗಾನ. ಯಕ್ಷಗಾನ ರಂಗದಲ್ಲಿ ಅನೇಕ ಯುವ ಕಲಾವಿದರು ನಮಗೆ ನೋಡಲು ಸಿಗುತ್ತಾರೆ ಅದರಲ್ಲಿ ಒಬ್ಬರು ಯುವ ಚಂಡೆ ಮದ್ದಳೆ ವಾದಕರು ಶ್ರವಣ್ ಕುಮಾರ್ ಕೊಳಂಬೆ. ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನಕ್ಕೆ  ಮನಸೋತು ಯಕ್ಷರಂಗಕ್ಕೆ ಅನೇಕ ಯುವ ಕಲಾವಿದರನ್ನು ಕೊಟ್ಟ ಯಕ್ಷರಂಗದ ಗುರು ಹರಿನಾರಾಯಣ ಬೈಪಾಡಿತ್ತಾಯ ಇವರಿಂದ ಚೆಂಡೆ ಹಾಗೂ ಮದ್ದಳೆ ಅಭ್ಯಾಸ ಮಾಡಿರುತ್ತಾರೆ.


ದಿನಾಂಕ 07.09.1989 ಸೆಪ್ಟೆಂಬರನಲ್ಲಿ ಇವರ ಜನನ. ತಂದೆ ದಿವಂಗತ ಪ್ರಭಾಕರ್ ರಾವ್ ಕೊಳಂಬೆ ಹಾಗೂ ತಾಯಿ ರಾಜೇಶ್ವರಿ ಪಿ. ಇವರ ತಂದೆ ಸ್ವತಃ ತಲಕಳ ದೇವಸ್ಥಾನದ ಹಾಗೂ ಮೇಳದ ಪೂಜೆಯವರು ಆಗಿದ್ದರು. ಅಲ್ಲದೆ ಕೊಳಂಬೆ ಪೋಸ್ಟ್ ನ ಪೋಸ್ಟ್ ಮಾಸ್ಟರ್ ಕೂಡ ಆಗಿದ್ದರು. ಇವರು ಕೂಡ  ಭಾಗವತಿಗೆ , ಚೆಂಡೆ , ಮದ್ದಳೆ ನುಡಿಸುತ್ತಿದ್ದರು ಹಾಗೂ ಯಕ್ಷಗಾನದಲ್ಲಿ ವೇಷ ಕೂಡ ಮಾಡುತ್ತಿದ್ದರು. ಹೀಗೆ ಇವರ ಮನೆಯೇ ಒಂದು ಯಕ್ಷಗಾನದ ಪರಿಸರ.


ಆಟೋಮೊಬೈಲ್ ಡಿಪ್ಲೋಮಾ ಪದವಿಯನ್ನು ಪಡೆದಿರುವ ಇವರು ಮಂಗಳೂರಿನಲ್ಲಿ ಯುನೈಟೆಡ್ ಟೊಯೊಟಾ ಕಂಪೆನಿಯಲ್ಲಿ ಅಸಿಸ್ಟೆಂಟ್ ಮನೇಜರ್ ವೃತ್ತಿಯಲ್ಲಿ ಇದ್ದಾರೆ. ಇದರ ಜೊತೆಗೆ ಪೆನ್ಸಿಲ್ ಡ್ರಾಯಿಂಗ್ ನಲ್ಲಿ ಪರಿಣತರು. ಉತ್ತಮ ಹಾಡುಗಾರರು ಆದ ಇವರು ನಕ್ಷತ್ರ ಲೋಕ ಯೂಟ್ಯೂಬ್ ಚಾನೆಲ್ ನಲ್ಲಿ ನಡೆಯುವ ಕರಾವಳಿ ಗಾನ ಕೋಗಿಲೆ Season 1 ಇದರ ತೀರ್ಪುಗಾರರೂ ಆಗಿದ್ದರೆ. ರಾಜ್ಯದ ಹಲವಾರು ಕಡೆ ಹಲವಾರು ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಮಾಡಿರುವ ಇವರು ಒಂದು ಉತ್ತಮ ನಿರೂಪಕರು ಕೂಡ. ಹೀಗೆ ಇವರು ಒಬ್ಬರು ಬಹುಮುಖ ಪ್ರತಿಭೆ. ಇಷ್ಟೆಲ್ಲಾ ಇದ್ದರೂ ಶ್ರವಣ್ ಕುಮಾರ್ ಕೊಳಂಬೆಯವರಲ್ಲಿ ನಿಮಗೆ ಏನು ತುಂಬಾ ಇಷ್ಟ ಅಂತ ಕೇಳಿದ್ರೆ ಯಕ್ಷಗಾನ ಹಾಗೂ ಚೆಂಡೆ ಮದ್ದಳೆ ವಾದನ ಅಂತ ಹೇಳುತ್ತಾರೆ. 

 
12.12.2018 ರಲ್ಲಿ ವಿದುಷಿ ರೂಪಶ್ರೀ ಇವರನ್ನು ವಿವಾಹ ಆಗಿ ಸುಂದರ ಸಂಸಾರ ನಡೆಸುತ್ತಿದ್ದಾರೆ. ಇವರ ಶ್ರೀಮತಿ  ಶಾಸ್ತ್ರೀಯ ಸಂಗೀತದಲ್ಲಿ ಅನೇಕ ಸಾಧನೆಯನ್ನ ಮಾಡಿದ್ದು ಅನೇಕ ಟಿವಿ ಚಾನೆಲ್ ಗಳಲ್ಲಿ  ಇವರ ಸಂಗೀತ ಕಾರ್ಯಕ್ರಮಗಳು ಪ್ರಸಾರವಾಗಿವೆ , ರಾಜ್ಯದ ಹಲವಾರು ಕಡೆ ಸಂಗೀತ ಕಾರ್ಯಕ್ರಗಳನ್ನು ನೀಡಿದ ಇವರಿಗೆ ಹಲವಾರು ಪ್ರಶಸ್ತಿಗಳು  ದೊರೆತಿರುತ್ತದೆ, ಅಲ್ಲದೆ ಬಜ್ಪೆಯಲ್ಲಿ ಶಾಸ್ತ್ರೀಯ ಸಂಗೀತದ ತರಗತಿಯನ್ನು ಮಾಡುತ್ತ ಸಂಗೀತ ಕಲಿಯುವ ಸಾಕಷ್ಟು ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ಇದ್ದಾರೆ. ಅಲ್ಲದೆ *ರೂಪಾಶ್ರವಣ್* ಕೊಳಂಬೆ ಎಂಬ ಆರ್ಕೆಸ್ಟ್ರಾ ತಂಡವನ್ನು ಕೂಡ ನಡೆಸುತ್ತಾ ಇದಾರೆ.
ಶ್ರೀಯುತ ಶ್ರವಣ್ ಕುಮಾರ್ ಕೊಳಂಬೆ  ಇವರ  ಯಕ್ಷಗಾನ ಹಾಗೂ ಸಂಗೀತ ಕ್ಷತ್ರದಲ್ಲಿ ಇನಷ್ಟು ಸಾಧನೆ ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ.

ಲೇಖಕ: ಶ್ರಾವಣ ಕಾರಂತ್ ಕೆ. ಶಕ್ತಿನಗರ, ಮಂಗಳೂರು.

ದ್ರುಪದ ಪುರೋಹಿತರಾರು?

ಪಾಂಡವರು ವನವಾಸ; ಅಜ್ಞಾತವಾಸಗಳನ್ನು (ವಿರಾಟನಗರಿ) ಪೂರೈಸಿದ ಮೇಲೆ ಸ್ವಲ್ಪ ಕಾಲ ಮತ್ಸ್ಯದೇಶದ ಹೊರವಲಯದ ಉತ್ತರ ದಿಕ್ಕಿನಲ್ಲಿ ಹೊಸತಾಗಿ ನಿರ್ಮಾಣಗೊಂಡ ಉಪಪ್ಲವ್ಯ ನಗರದಲ್ಲಿರುತ್ತಾರೆ. ಅಲ್ಲಿಂದಲೇ ಓರ್ವನನ್ನು ‘ನಾಡಬೇಡಲು’ ಹಸ್ತಿನಾವತಿಗೆ ಕಳುಹಿಸುವುದೆಂದು ಅಲ್ಲಿ ಸೇರಿದವರು ನಿರ್ಣಯಿಸುತ್ತಾರೆ. ಅಲ್ಲಿ ಯಾರನ್ನು ಕಳುಹಿಸಿದ್ದು? ದೇವಿದಾಸನು (ಕಾಲ ಸು. ಕ್ರಿ. ಶ. 1800) ಬರೆದ ‘ಕೃಷ್ಣ ಸಂಧಾನ’ ಪ್ರಸಂಗದಲ್ಲಿ-
ವಾರ್ಧಕ : ಪರಿಣಯದ ನೆವದಿ ಬಂದಸುರಾರಿ ಪಾಂಡವರ
ಪಿರಿದು ಸಂತಯಿಸುತ ವಿವೇಕಿಯೋರ್ವನನಟ್ಟಿ
ಕುರುರಾಯನೊಳ ಕ್ಷಿತಿಯ ಕೇಳಿಸುವುದಾತನನುವಾಗದಿರಲೆಯ್ದ ರಣಕೆ
ಕರೆಸಲಾ ಕ್ಷಣ ತಾನು ಬರುವೆನೆಂದಚ್ಯುತಂ
ತೆರಳಲಿತ್ತಲು ಭೀಮಪಾರ್ಥಮಾದ್ರೇಯರೊಡ
ವೆರಸಿ ದ್ರುಪದ ವಿರಾಟ ಮುಖ್ಯರಿಂ ಯಮಜನೋಲಗವಿತ್ತನುತ್ಸವದೊಳು || 14 ||


ಕ್ಷಿತಿಪ ದ್ರುಪದನ ಪುರೋಹಿತನ ಕರೆದು ಕೃತಾಂತ | ಸುತನೆಂದ ನೀನು ಕುರು | ಪತಿಯ ಬಳಿಗಯ್ದ || 15 || ಅವನಿಯೊಳಗರ್ಧ ರಾ | ಜ್ಯವನು ಕೊಡುವುದೆನುತ್ತ | ಸುವಿವೇಕದಿಂ ಕೇಳಿ | ಜವದಿ ಬಹುದೆಂದು || 16 || ಮಹಿಷನಾಜ್ಞೆಯೊಳಾತ | ವಿರತದಿಂ ಬರಲಿತ್ತ | ಲಹಿತರುಗಳಿರದೆ ಗೋ | ಗ್ರಹಣ ಮುಖದಿಂದ || 17 || ಪೆÇರಗೈದರಿನ್ನು ಸಂ | ಗರ ಮುಖದೊಳಲ್ಲದಡೆ | ಧರೆಯ ನಾ ಕೊಡೆನೆಂದು | ಕುರುರಾಯನಿರಲು || 18 || ಆ ಸಮಯ ದೊಳನೀತ | ಆ ಸಭೆಯ ಪೆÇಗಲು ಕಂ | ಡಾ ಸುಯೋಧನನವನ | ತೋಷಗೊಳಿಸುತಲಿ || 19 || ಬಂದ ಕಾರ್ಯವ ಬೆಸಸಿ | ರೆಂದಡರುಹಿದ ಯಮನ | ಕಂದ ನಿನ್ನೆಡೆಗೆನ್ನ ಸಂಧಿಗಟ್ಟಿದನು || 20 || ಇನ್ನಾದರರ್ಧರಸೆ | ಯನ್ನಿತ್ತು ಕರುಣದಲಿ | ಮನ್ನಿಸುವುದೆಂದೆನಲು | ಅನ್ನೆಗವ ನುಡಿದ || 21 ||


ವಾರ್ಧಕ : ಧರಣಿಯಂ ಪಾರ್ಥಿವರ್ ಸೋತಮೇಲರಿಗಳಂ
ಧುರದೊಳಂ ಜೈಸಿಕೊಂಬುದು ಧರ್ಮಮೆಂದಾತ
ಗರುಹೆನುತಲಾಪ್ತರೊಡನಾಲೋಚಿಸುತ ಹರಿಯ ತನ್ನೊಳಗೆ ಮಾಳ್ಪಮನದಿ | (22ರ ಪೂರ್ವಾರ್ಧ)
ಪ್ರಸಂಗ ಪದ್ಯಗಳ ಆಧಾರದಿಂದ; ಧರ್ಮರಾಯನು ದ್ರುಪದ ಪುರೋಹಿತನನ್ನು ಹಸ್ತಿನಾವತಿಗೆ ಸಂಧಿಗಾಗಿ ಕಳುಹಿಸುತ್ತಾನೆ. ಕೃಷ್ಣನು ‘ವಿವೇಕಿಯೋರ್ವನನಟ್ಟಿ’ ಎಂದಷ್ಟೇ ಹೇಳಿದ್ದಾನೆ. ಹಸ್ತಿನಾವತಿಗೆ ಹೋದಂತಹ ದ್ರುಪದ ಪುರೋಹಿತರಿಗೆ ದುರ್ಯೋಧನನು ‘‘ಅರಿಗಳಂ ಧುರದೊಳಂ ಜೈಸಿಕೊಂಬುದು ಧರ್ಮವೆಂದಾತಗರುಹು’’ ಎಂದು ಹೇಳಿದ್ದಾನೆ. ದ್ರುಪದ ಪುರೋಹಿತನು ಹಿಂದಿರುಗಿ ಬಂದು ಧರ್ಮರಾಯನಲ್ಲಿ ದುರ್ಯೋಧನನ ಮಾತುಗಳನ್ನು ತಿಳಿಸಿದನೇ? ‘ಅರುಹು’ ಎಂಬುದಾಗಿ ವಾಚಕವಿರುವುದರಿಂದ ತಿಳಿಸಿರಬಹುದೆಂದು ಊಹಿಸಬಹುದು; ಆದರೆ ಪ್ರಸಂಗದಲ್ಲಿ ದ್ರುಪದ ಪುರೋಹಿತ ಹಿಂದಿರುಗಿ ಬಂದನೆಂದೂ; ತಿಳಿಸಿದನೆಂಬುದಕ್ಕೆ ಆಧಾರ ಸಾಲದು.


ನಮ್ಮ ಕೆಲವು ಯಕ್ಷಗಾನ ಕಲಾವಿದರು ಪ್ರಸಂಗಕ್ಕೆ ಅರ್ಥೈಸುವಾಗ ದ್ರುಪದ ಪುರೋಹಿತರೆಂದರೆ ‘ಶತಾನಂದ’ರೆಂದು ಹೇಳುತ್ತಲೇ ಬಂದಿದ್ದಾರೆ. ಇದಕ್ಕೆ ಎಲ್ಲಿದೆ ಆಧಾರ?
ದೇರಾಜೆ ಸೀತಾರಾಮಯ್ಯನವರ ‘‘ಶ್ರೀಮನ್ಮಹಾಭಾರತ ಕಥಾಮೃತಂ’’ ಗದ್ಯಕಾವ್ಯದಲ್ಲಿ ‘ದ್ರುಪದ ರಾಜನು ಒಳ್ಳೆಯ ಮುಹೂರ್ತ ನೋಡಿ ತನ್ನ ಪುರೋಹಿತರಾದ ಶತಾನಂದರನ್ನು ಏಕಾಂತವಾಗಿ ಕರೆಸಿಕೊಂಡು ಧೃತರಾಷ್ಟ್ರನಲ್ಲಿಗೆ ಹೋಗಿ ಧರ್ಮಯುಕ್ತವಾದ ಹಿತವಾದಗಳನ್ನು ಹೇಳಿ, ಅವರ ಎಲ್ಲ ಪ್ರಮುಖ ವೀರರನ್ನು ದುರ್ಯೋಧನನ ಮಾರ್ಗದಿಂದ ತಿರುಗಿಸಬೇಕು ಎಂದು ಬರೆದಿದ್ದಾರೆ. (ಪುಟ 441-442) ದೇರಾಜೆಯವರು ಮತ್ತು ಮುಂದೆ ಹೋಗಿ ಶತಾನಂದರಲ್ಲಿ; ಅಲ್ಲಿದ್ದು ಬೇಹುಗಾರಿಕೆ ಮಾಡುವಂತೆ ಸೂಚಿಸಿದ್ದಾರೆ. (ಪ್ರಸಂಗದಲ್ಲಿ ದ್ರುಪದ ಪುರೋಹಿತರು ಹಿಂದಿರುಗಿ ಬಂದ ಸೂಚನೆ ಲಭಿಸದಿರುವುದಕ್ಕೆ ದೇರಾಜೆಯವರ ಸಮಾಧಾನ) ದೇರಾಜೆಯವರು ಬರೆದಿರುವ ಕೆಲವು ಅಂಶಗಳಿಗೆ ವ್ಯಾಸಭಾರತದ ಉದ್ಯೋಗಪರ್ವದ ಆರನೆಯ ಅಧ್ಯಾಯ ಆಧಾರ.


ಶಿಷ್ಯೆ : ಪರಿವೃತೋ ವಿದ್ವಾನ್ ನೀತಿಶಾಸ್ತ್ರಾರ್ಥ ಕೋವಿದಃ
ಪಾಂಡವನಾಂ ಹಿತಾರ್ಥಾಯ ಕೌರವಾನ್ ಪ್ರತಿಜನ್ಮಿವಾನ್ (6-19)
ವ್ಯಾಸಭಾರತದಲ್ಲಿ ಮುಂದುವರಿದು ಇಪ್ಪತ್ತನೆಯ ಅಧ್ಯಾಯದಲ್ಲಿ ‘‘ದ್ರುಪದ ಪುರೋಹಿತಸ್ಯ ಕೌರವ ಸಭಾಯಾಂ ಭಾಷಣಮ್’’ ಎಂಬುದಾಗಿ ಇಪ್ಪತ್ತೊಂದು ಶ್ಲೋಕ ಛಂದಸ್ಸಿನಲ್ಲಿ ಅವನ ಮಾತುಗಳಿವೆ. ಅನಂತರ ಇಪ್ಪತ್ತೊಂದನೆಯ ಅಧ್ಯಾಯದಲ್ಲಿ ದ್ರುಪದ ಪುರೋಹಿತನ ಮಾತುಗಳನ್ನೊಪ್ಪಿದ ಭೀಷ್ಮರ ಮಾತುಗಳಿವೆ. ವ್ಯಾಸರಲ್ಲಿ ‘ದ್ರುಪದ ಪುರೋಹಿತ’ ಎಂಬ ವಾಚಕವಿದೆಯೇ ವಿನಾ ನಾಮನಿರ್ದೇಶವಿಲ್ಲ.
ಮಹಾಭಾರತದ ಕತೆಗೆ ಸಂಬಂಧಿಸಿದ ಯಕ್ಷಗಾನದ ಹೆಚ್ಚಿನ ಪ್ರಸಂಗಗಳಿಗೆ ಕುಮಾರವ್ಯಾಸನ (ಕಾಲ ಸು. 1430) ‘ಕರ್ಣಾಟ ಭಾರತ ಕಥಾಮಂಜರಿ’ಯೇ ಮೂಲ ಆಕರ. ದ್ರುಪದ ಪುರೋಹಿತನ ನಾಮನಿರ್ದೇಶ ಕುಮಾರವ್ಯಾಸನಲ್ಲಿ ಇದೆಯೇ? ಹಸ್ತಿನಾವತಿಗೆ ರಾಯಭಾರಿಯಾಗಿ ಯಾರು ಯಾರನ್ನು ಕಳುಹಿಸಿದರು?


ಬಳಿಕ ಸುಮುಹೂರ್ತದಲಿ ಮತ್ಸ್ಯನ
ಹೊಳಲ ಹೊರವಂಟುತ್ತರ ದಿಶಾ
ವಳಯದಲಿ ರಚಿಸಿದರುಪಪ್ಲವ್ಯಾಖ್ಯಪುರವರವ
ನೆಲನಗಲದಲಿ ಕಟ್ಟಿಕೇರಿಯ
ನಳವಡಿಸಿದರು ನಿಖಿಳ ನೃಪರಿಗೆ
ಬಳಿಯನಟ್ಟಿದನುತ್ತರೋತ್ತರವಾದುದಿವರುದಯ (ವಿ. ಪ. 10-44)
ಅಭಿಮನ್ಯು-ಉತ್ತರೆಯರ ವಿವಾಹ ಕಾರ್ಯ ಇಲ್ಲಿ ನಡೆಯಿತು.
ಮದುವೆಗೋಸುಗ ಬಂದೆವಾವಿ
ನ್ನದರ ಮೇಲಣ ರಾಜಕಾರ್ಯದ
ಹದನವಟ್ಟುವುದರುಹುವುದು ಬಹೆವಾವುಕರೆಸಿದಡೆ (ವಿ. ಪ. 10-12ರ ಪೂರ್ವಾರ್ಧ)


ಕಳುಹುವುದು ಶಿಷ್ಟರನು ಧರಣೀ
ತಳವ ಬೇಡಿಸುವಲ್ಲಿ ಸಾಮವ
ಬಳಸುವುದು ಭೀಷ್ಮಾದಿಗಳ ಕಟ್ಟುವುದು ವಿನಯದಲಿ
ತಿಳಿವುದಾತನ ನೆಲೆಯಲ್ಲಿಂ
ಬಳಿಕ ನಯವಿಲ್ಲೆಂದಡಾಹವ
ದೊಳಗೆ ಕೈದೋರುವುದು ಮತವೆಂದನು ಮುರಧ್ವಂಸಿ (ಉ. ಪ. 1-5)
ಕೂತುಕೊಂಡಿಹುದಿವದ ಮಕ್ಕಳ
ನೋಡಲಾಗದು ಹೆಚ್ಚು ಕುಂದನು
ನಾಡಬೇಡಲು ಬುದ್ಧಿವಂತರನಲ್ಲಿಗಟ್ಟುವುದು
ಕೂಡೆ ಶೋಧಿಸಿ ಸೆಜ್ಜೆಯಲಿ ಮೈ
ಗೂಡಿಯಾರೋಗಣೆಗಳಲಿ ಕೈ
ಮಾಡಿ, ಬೆರಸಿಹುದೆಂದು ದ್ರುಪದ ವಿರಾಟರಿಗೆ ನುಡಿದ (ಉ. ಪ. 1-13)


ಹಸ್ತಿನಾವತಿಗೆ ‘ಕಳುಹುವುದು ಶಿಷ್ಟರನು’ ಅಥವಾ ‘‘ನಾಡಬೇಡಲು ಬುದ್ಧುವಂತರನಲ್ಲಿಗಟ್ಟುವುದು’’ ಎಂದು ಕೃಷ್ಣನ ಮಾತು; ದ್ರುಪದ ಪುರೋಹಿತನನ್ನು ಕಳುಹಿಸಬೇಕೆಂದು ಸ್ಪಷ್ಟವಾಗಿ ಹೇಳಿಲ್ಲ.
ಎಂದು ಕಳುಹಿಸಿಕೊಂಡು ನಾರೀ
ವೃಂದ ಯದುಕುಲಸಹಿತ ದೇವ ಮು
ಕುಂದ ಬಿಜಯಂಗೈದು ಹೊಕ್ಕನು ದ್ವಾರಕಾಪುರವ
ಒಂದು ದಿನದಾ ಲೋಚನೆಯ ನೆಲೆ
ಯಿಂದ ಕರೆದು ಪುರೋಹಿತನ ನಲ
ವಿಂದ ಕಳುಹಿದ ದ್ರುಪದನಾ ಕೌರವನ ಪಟ್ಟಣಕೆ (ಉ. ಪ. 1-14)
ಕುಮಾರವ್ಯಾಸನ ಪ್ರಕಾರ ದ್ರುಪದನೇ ತನ್ನ ಪುರೋಹಿತನನ್ನು ಕೌರವನ ಪಟ್ಟಣಕ್ಕೆ ಕಳುಹಿಸಿದ್ದು; ಯಕ್ಷಗಾನ ಪ್ರಸಂಗದಂತೆ ಧರ್ಮರಾಯನು ದ್ರುಪದ ಪುರೋಹಿತನನ್ನು ಹಸ್ತಿನಾವತಿಗೆ ಹೋಗುವಂತೆ ಹೇಳಿದುದು. ಯಾರೇ ಕಳುಹಿಸಿದರೂ; ಕಳುಹಿಸಿದವನ ಹೆಸರನ್ನು ಸೂಚಿಸಿಲ್ಲ. ಹಸ್ತಿನಾವತಿಗೆ ಬಂದ ಪುರೋಹಿತನು-


ದ್ರುಪದ ರಾಜಪುರೋಹಿತನು ಕುರು
ನೃಪನವಿತ್ತಲು ಬಂದು ಕಂಡನು
ವಿಪುಳಮತಿ ಮಾತಾಡಿದನು ನಿಜ ರಾಜಕಾರಿಯವ
ಕೃಪಣತನದಲಿ ಕೌರವನು ಗುರು
ಕೃಪನ ಭೀಷ್ಮನ ಮತವನೊಲ್ಲದೆ
ಚೌಪಳ ಕರ್ಣನ ಕೂಡೆ ನಿಶ್ಚೈಸಿದನು ಕಾಳಗವ (ಉ. ಪ. 2-31)
ಕುಮಾರವ್ಯಾಸನ ಈ ಮಾತುಗಳಿಂದ ಕೌರವನ ಯುದ್ಧವನ್ನು ನಿಶ್ಚಯಿಸಿ ದ್ರುಪದ ಪುರೋಹಿತನಲ್ಲಿ ಹೇಳಿದನೆಂದು ತಿಳಿಯಬಹುದು. ಪುರೋಹಿತನು ಉಪಪ್ಲವ್ಯಕ್ಕೆ ಹಿಂದಿರುಗಿದನೆಂದು ಊಹಿಸಬಹುದು; ಆಧಾರ ಸಾಲದು.


ದ್ರುಪದ ಪುರೋಹಿತನ ಹೆಸರೇನು? ಗದುಗು ಭಾರತದ ಪ್ರಕಾರ; ಪಾಂಚಾಲೆಯ ವಿವಾಹದ ಅನಂತರ ಪಾಂಡವರು ವಧೂಸಮೇತರಾಗಿ ತಾವು ವಾಸ್ತವ್ಯವಿದ್ದ ಕುಂಭಕಾರನ ಮಂದಿರಕ್ಕೆ ಬಂದು ತಾಯಿ; ಕುಂತಿಯನ್ನು ಕಾಣುತ್ತಾರೆ. ಅಂದು ರಾತ್ರಿ ಅವರು ಪರಸ್ಪರ ವಿವಾಹ-ಯುದ್ಧದ ಕುರಿತು ಮಾತನಾಡುತ್ತಿರುತ್ತಾರೆ. ಇತ್ತ ದ್ರುಪದ ನಂದಿನಿಯ ಸಹೋದರನಾದ ಧೃಷ್ಟದ್ಯುಮ್ನನಿಗೆ ತನ್ನ ಸಹೋದರಿಯನ್ನು ಮದುವೆಯಾದವನು ಕ್ಷತ್ರಿಯನೋ; ವಿಪ್ರನೋ ಎಂಬ ಸಂದೇಹ ಬರುತ್ತದೆ. ಅದನ್ನು ಪರೀಕ್ಷಿಸುವುದಕ್ಕಾಗಿ ಆ ದಿನ ರಾತ್ರಿ ಅವನು ಪುರೋಹಿತನೊಡಗೂಡಿ ಕುಲಾಲ ಭವನದ ಹೊರಭಾಗದಲ್ಲಿದ್ದು ಅವರ ಮಾತುಗಳನ್ನು ಕೇಳುತ್ತಿರುತ್ತಾನೆ-


ಮುನಿವಳೀ ಸತಿಯೆಂದು ನಿದ್ರಾಂ
ಗನೆಯ ನೂಕಿದರವನಿಪರು ಭಾ
ಮಿನಿ ಸಹಿತಲಿರಲಿತ್ತಲೀ ಪಾಂಚಾಲ ಭೂಪತಿಯ
ತನುಜನಿವರ ಪರೀಕ್ಷೆಗೋಸುಗ
ಮುನಿಪ ಕಾಶ್ಯಪಗೂಡಿ ಕೇಳಿದ
ನನಿತು ಮಾತೆಲ್ಲವನು ಮರೆಯಲಿ ನಿಂದು ರಜನಿಯಲಿ (ಆ. ಪ. 16-21)


ಧರಣಿಪತಿ ಕೇಳ್ ವಿಪ್ರರಾದರೆ
ಸರಸ ನವಭೋಜನದ ಕಥೆ ಮೇಣ್
ನಿರತಿಶಯ ವೇದಾಂಗ ವೇದ ತದರ್ಥ ತರ್ಕಗಳು
ಅರಸುಗಳಿಗಾಯುಧದ ಗಜ ರಥ
ತುರಗ ದೇರಾಟದ ಮಹಾಸ್ತ್ರದ
ವಿರಚನೆಗಳಿವು ಜಾತಿ ವಿದ್ಯೆಗಳೆಂದನಾ ಮುನಿಪ (ಆ. ಪ. 16-23)
ಭೂರಿ ಧನವರ್ಧನ ಸದಾ ವ್ಯವ
ಹಾರ ಲಾಭಾಲಾಭ ಚಿಂತೆಗ
ಳೂರು ಜನಿತರಿಗಂತ್ಯವರ್ಣಕೆ ಕೃಷಿಯ ಮಾತುಗಳು
ಆರನಾದರು ಜಾತಿ ಧರ್ಮದ
ಸೇರುವೆಗಳೇ ಹೇಳುವುವು ನ
ಮ್ಮಾರಯಿಕೆನಿವರಿಂದು ಕ್ಷತ್ರಿಯರೆಂದು ಮುನಿ ನುಡಿದ (ಆ. ಪ. 16-24)


ಇವರು ಪಾರ್ಥಿವರೊಳಗೆ ಕೇಳ್ ಪಾಂ
ಡವರು ನಿಸ್ಸಂದೇಹವೆಂದೇ
ನಿವಗೆ ನಾವೆನ್ನಲೆ ವಿವಾಹದಪರ್ವಕಾಲದಲಿ
ಅವರನುಪಚಾರಿಸೇಳು ರಚಿಸು
ತ್ಸವವನಾಯ್ತಿದೆ ಪೂರ್ವಗಿರಿಯಲಿ
ರವಿಯುದಯವೆಂದು ಪುರೋಹಿತ ತಿಳುಹಿದನು ನೃಪನ (ಆ. ಪ. 16-25)
ಈ ಪದ್ಯಗಳಿಗೆ ವಿವರಣೆ ಅಗತ್ಯವಿಲ್ಲ. ಈ ಮೇಲಿನ ವಿಚಾರಗಳಿಂದ ದ್ರುಪದ ಪುರೋಹಿತರು ಕಾಶ್ಯಪರೆಂದು ಸಿದ್ಧವಾಗುವುದೇ ಹೊರತು, ಶತಾನಂದರಲ್ಲವೆಂದಾಗುವುದಿಲ್ಲವೇ? ು

ಲೇಖಕರು :
ಡಾ| ಉಪ್ಪಂಗಳ ಶಂಕರನಾರಾಯಣ ಭಟ್
ಚಿನ್ಮಯ ಮಿಶನ್ ಕಾಲನಿ
ಅಂಚೆ : ವಿದ್ಯಾನಗರ – 671 123, ಕಾಸರಗೋಡು


ಯಕ್ಷಗಾನ ಕಲಾವಿದ, ಹಿಮ್ಮೇಳ ವಾದಕ, ಸಂಘಟಕ ಬಳ್ಳಮೂಲೆ ಈಶ್ವರ ಭಟ್ ಸವಿನೆನಪು 

ಶ್ರೀ ಕಾರ್ತಿಕೇಯ ಕಲಾನಿಲಯ, ಕೋಟೂರು ಇದರ ಪ್ರಾರಂಭ ಕಾಲದಿಂದಲೂ ವೇಷಧಾರಿ ಹಾಗೂ ಹಿಮ್ಮೇಳವಾದಕರಾಗಿದ್ದವರು ಬಳ್ಳಮೂಲೆ ಈಶ್ವರ ಭಟ್ಟರು. ಅಂದಿನ ಪ್ರಸಿದ್ಧ ಕಲಾವಿದ ಹೊಸಹಿತ್ತಿಲು ಮಹಾಲಿಂಗ ಭಟ್ಟರಿಂದ ಯಕ್ಷಗಾನದ ಹೆಜ್ಜೆಯನ್ನೂ, ಪ್ರಸಿದ್ಧ ಹಿಮ್ಮೇಳ ವಾದಕರಾಗಿದ್ದ ಪುಂಡಿಕಾಯಿ ಕೃಷ್ಣ ಭಟ್ಟರಿಂದ ಹಿಮ್ಮೇಳವಾದನವನ್ನೂ ಅಭ್ಯಾಸ ಮಾಡಿ ಹಿರಿಯ ಯಕ್ಷಗಾನ ಕಲಾವಿದ, ನಿವೃತ್ತ ಅಧ್ಯಾಪಕರಾದ (ಚಿಕ್ಕಪ್ಪ) ಅಡ್ಕ ಗೋಪಾಲಕೃಷ್ಣ ಭಟ್ಟರ ನಿರ್ದೇಶನ ಹಾಗೂ ನೇತೃತ್ವದಲ್ಲಿ ಕೆಲವು ವರ್ಷಗಳ ಕಾಲ ವೇಷಧಾರಿಯಾಗಿಯೂ, ಶಾಲಾ ದಿನಗಳಿಂದ ಹಿಡಿದು 40-42 ವರ್ಷಗಳ ಕಾಲ ಹಿಮ್ಮೇಳ ವಾದಕರಾಗಿಯೂ ಮಿಂಚಿದ ಈಶ್ವರ ಭಟ್ಟರು ಕಾಸರಗೋಡಿನಿಂದ ತೊಡಗಿ ತಿರುವನಂತಪುರದ ವರೆಗೂ ಕಲಾನಿಲಯದ ಸದಸ್ಯರಿಂದ ಕನ್ನಡ ಹಾಗೂ ಮಲೆಯಾಳ ಭಾಷೆಗಳಲ್ಲಿ ಯಕ್ಷಗಾನ ಕಾರ್ಯಕ್ರಮಗಳು ನಡೆಯುತ್ತಿದ್ದಂತಹ ಸಂದರ್ಭಗಳಲ್ಲಿ ಎಲ್ಲಾ ಕಾರ್ಯಕ್ರಮಗಳಿಗೂ ಹಿಮ್ಮೇಳವಾದಕರಾಗಿ ಭಾಗವಹಿಸಿದ ಹೆಮ್ಮೆಯ ಕಲಾವಿದರಾಗಿದ್ದರು.

ಐದು ವರ್ಷಗಳ ಹಿಂದೆ ಸಮಾನಮನಸ್ಕ ಗೆಳೆಯರ ಜೊತೆ ಸೇರಿ ‘ಯಕ್ಷತೂಣೀರ ಸಂಪ್ರತಿಷ್ಠಾನ (ರಿ.), ಕೋಟೂರು’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಮುಂದೆ ಇದೇ ಸಂಸ್ಥೆಯ ನೇತೃತ್ವದಲ್ಲಿ ಯಕ್ಷಗಾನ ಕಲಾವಿದರಾಗಿದ್ದ ಪೆರಡಂಜಿ ದಿ. ಗೋಪಾಲಕೃಷ್ಣ ಭಟ್ಟರ ಹಾಗೂ ಕಲಾಪೋಷಕರಾದ ವೇಣುಗೋಪಾಲ ತತ್ವಮಸಿ ಇವರ ಸಹಕಾರದಿಂದ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಪ್ರಾರಂಭಗೊಂಡ ‘ಯಕ್ಷಬಳಗ ಮುಳಿಯಾರು’ ಇದರ ಬಾಲಕಲಾವಿದರಿಗೆ ಪ್ರಾರಂಭದಿಂದಲೂ ಅಡ್ಕ ಕೃಷ್ಣ ಭಟ್ಟರ ಜೊತೆಗೂಡಿ ನಾಟ್ಯತರಬೇತಿ ನೀಡುತ್ತಾ ಬಂದಿದ್ದರು. ಯಕ್ಷತೂಣೀರ ಹಾಗೂ ಯಕ್ಷಬಳಗದ ಎಲ್ಲಾ ಕಾರ್ಯಕ್ರಮಗಳಲ್ಲೂ ನಿರ್ದೇಶನದ ಜೊತೆ ಹಿಮ್ಮೇಳದಲ್ಲಿಯೂ ಕಾಣಿಸಿಕೊಂಡಿದ್ದರು. ಯಕ್ಷತೂಣೀರ ಸಂಪ್ರತಿಷ್ಠಾನದ ದಶಮಾನೋತ್ಸವ ಆಚರಣೆಯು ಇವರ ಕಲಾಜೀವನದ ಬಲುದೊಡ್ಡ ಆಸೆಯಾಗಿತ್ತು; ಆದರೆ ವಿಧಿಯ ಆಟ ಬೇರೆಯೇ ಆಗಿತ್ತು.


ಸುಮಾರು ಹತ್ತು ವರ್ಷಗಳ ಕಾಲ ಕೇರಳದ ಹಲವಾರು ಶಾಲೆಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಯಕ್ಷಗಾನದ ಹೆಜ್ಜೆಗಳನ್ನು ಕಲಿಸಿ, ಅವರನ್ನು ಕೇರಳ ಶಾಲಾ ಯುವಜನೋತ್ಸವದ ಯಕ್ಷಗಾನ ಸ್ಪರ್ಧೆಗಳ ವೇದಿಕೆಗಳಲ್ಲಿ ಭಾಗವಹಿಸುವಂತೆ ಮಾಡಿ ಬಹುಮಾನವನ್ನು ಪಡೆಯುವಂತೆ ಮಾಡಿದ ಸಮರ್ಥ ಯಕ್ಷಗಾನ ನಿರ್ದೇಶಕರೂ, ಕೆಲವು ಸ್ಪರ್ಧೆಗಳಿಗೆ ತೀರ್ಪುಗಾರರೂ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಶ್ರೀ ಕಾರ್ತಿಕೇಯ ಕಲಾನಿಲಯದ ಸದಸ್ಯರನ್ನೊಡಗೂಡಿಕೊಂಡು ಕೇರಳದ ‘ಕಲಾಮಂಡಲಂ’ ಸಹಿತ ಹಲವೆಡೆ ಮಲೆಯಾಳ ಯಕ್ಷಗಾನ ಪ್ರದರ್ಶನಗಳನ್ನೂ ಸಂಘಟಿಸಿದ ಸಂಘಟಕರಾಗಿಯೂ ತಮ್ಮೊಳಗೆ ಅಡಗಿದ್ದ ಪ್ರತಿಭೆಯನ್ನು ತೋರ್ಪಡಿಸಿದ್ದರು.


ಮಂಗಳೂರು, ತ್ರಿಶ್ಶೂರು, ಕಲ್ಲಿಕೋಟೆ, ಕಣ್ಣೂರು ಮುಂತಾದ ಆಕಾಶವಾಣಿ ಕೇಂದ್ರಗಳ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಮಾತ್ರವಲ್ಲದೆ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾದ ದಿ. ಉಪ್ಪಳ ಕೃಷ್ಣ ಮಾಸ್ತರರ ಯಕ್ಷಗಾನ ತಂಡಕ್ಕೆ ಹಿಮ್ಮೇಳವಾದಕರಾಗಿ ತಮ್ಮ ಕಲಾನೈಪುಣ್ಯವನ್ನು ಹೊರಹೊಮ್ಮಿಸಿದ್ದರು. ಅಲ್ಲದೆ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘದ ಕಾರ್ಯಕ್ರಮಗಳಿಗೂ ಹಿಮ್ಮೇಳವಾದನದಲ್ಲಿ ಸಹಕಾರವನ್ನು ನೀಡಿದ್ದರು. ‘ನಿಲಾವರಿಯಾದೆ’ ಎಂಬ ಮಲೆಯಾಳಂ ಸಿನಿಮಾದಲ್ಲೂ ಹಿಮ್ಮೇಳ ವಾದಕರಾಗಿಯೇ ಕಾಣಿಸಿಕೊಂಡಿದ್ದರು. ಸಹೋದರ ಗೋವಿಂದ ಬಳ್ಳಮೂಲೆಯವರ ನೇತೃತ್ವದಲ್ಲಿ ‘ವರ್ಣ ಧ್ವನಿಸುರುಳಿ’ಯ ಮೂಲಕ ಬಿಡುಗಡೆಗೊಂಡ ಕೆಲವು ಹವ್ಯಕ ಹಾಗೂ ಕನ್ನಡ ಭಾಷೆಗಳ ಯಕ್ಷಗಾನ ಕ್ಯಾಸೆಟ್‍ಗಳಲ್ಲಿ ಯಕ್ಷಗಾನದ ‘ಭೀಷ್ಮಾಚಾರ್ಯ’ ದಿ. ಶೇಣಿ ಗೋಪಾಲಕೃಷ್ಣ ಭಟ್ಟರನ್ನೊಳಗೊಂಡ ತಂಡದಲ್ಲಿ ಹಿಮ್ಮೇಳದಲ್ಲಿ ಭಾಗವಹಿಸಿದ್ದರು.


ಯಕ್ಷಗಾನದ ಧ್ರುವತಾರೆಗಳೆಂದೇ ಪರಿಗಣಿಸಲ್ಪಟ್ಟ ಬಣ್ಣದ ವೇಷಧಾರಿಗಳಾದ ದಿ. ಬಣ್ಣದ (ಗಾಂಧಿ) ಮಾಲಿಂಗ, ದಿ. ಚಂದ್ರಗಿರಿ ಅಂಬು ಮುಂತಾದ ಧೀಮಂತ ಕಲಾವಿದರ ನಾಟ್ಯ, ಅಭಿನಯಕ್ಕೆ ಚೆಂಡೆಯ ಸಾಥಿ ನೀಡಿ ಆ ಹಿರಿಯರಿಂದ ‘ಮಾಣಿ ಅಡ್ಡಿಯಿಲ್ಲೆ’ ಎಂದು ಹೊಗಳಿಸಿಕೊಳ್ಳುವುದು ಸಾಮಾನ್ಯವೇ! ರಾಧಾಕೃಷ್ಣ ನಾವಡ ಮಧೂರು, ಸುಬ್ರಾಯ ಹೊಳ್ಳ ಕಾಸರಗೋಡು, ಮಾನ್ಯ ಸಂತೋಷ್ ಕುಮಾರರಂತಹ ಚುರುಕಿನ ವೇಷಧಾರಿಗಳಿಂದಲೂ ‘ಈಶ್ವರ ಭಟ್ರ ಕೈ ಒಳ್ಳೆದುಂಟು’ ಎಂದು ಮೆಚ್ಚುಗೆ ಪಡೆದವರು. ಪ್ರಸಿದ್ಧ ವೇಷಧಾರಿಗಳಾದ ನಿಡ್ಲೆ ಗೋವಿಂದ ಭಟ್, ತಂತ್ರಿ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ, ಉಬರಡ್ಕ ಉಮೇಶ ಶೆಟ್ಟಿ, ಭಾಗಮಂಡಲ ಮಹಾಬಲೇಶ್ವರ ಭಟ್, ಸಬ್ಬಣಕೋಡಿ ರಾಮ ಭಟ್ ಮೊದಲಾದವರ ಹೆಜ್ಜೆಗಳಿಗೆ ಚೆಂಡೆಯನ್ನು ನುಡಿಸಿದ ಅನುಭವ ಈಶ್ವರ ಭಟ್ಟರದ್ದು. ತೆರೆಮರೆಯಲ್ಲಿದ್ದ ಅನೇಕ ವೃತ್ತಿಪರ ಹಾಗೂ ಹವ್ಯಾಸೀ ಕಲಾವಿದರಿಗೆ ತನ್ನ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರಗಳನ್ನು ನೀಡಿ ತಮ್ಮ ಪ್ರತಿಭೆಗಳನ್ನು ತೋರ್ಪಡಿಸುವ ಅವಕಾಶ ಒದಗಿಸಿದ ಕೀರ್ತಿ ಇವರದ್ದು.


ಯಕ್ಷಗಾನ ಕಲಾವಿದ ಹಾಗೂ ನಿವೃತ್ತ ಅಧ್ಯಾಪಕರಾದ ಚಂದ್ರಶೇಖರ ಭಟ್ ಆದೂರು ಇವರ ನೇತೃತ್ವದಲ್ಲಿದ್ದ ಆದೂರು ಶ್ರೀ ಪಂಚಲಿಂಗೇಶ್ವರ ಯಕ್ಷಗಾನ ಕಲಾಸಂಘದ ಹಿಮ್ಮೇಳವಾದಕರಾಗಿ, ಯಕ್ಷಗಾನ ಕಲಾವಿದ ಹಾಗೂ ನಿವೃತ್ತ ಅಧ್ಯಾಪಕರಾದ ಯಂ. ಸುಬ್ರಹ್ಮಣ್ಯ ಭಟ್ (ಮಾವ) ಇವರಿಂದ ರೂಪೀಕರಣಗೊಂಡ ಪುಂಡೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಹಿಮ್ಮೇಳವಾದಕರಾಗಿ, ಪ್ರಶಸ್ತ ಕಲಾವಿದ ದಿ. ಉಪ್ಪಳ ಕೃಷ್ಣ ಮಾಸ್ತರ್ ಅವರ ನಿರ್ದೇಶನದಲ್ಲಿ ಹುಟ್ಟಿಕೊಂಡ ಮಹಿಳಾ ಯಕ್ಷಗಾನ ತಂಡಗಳ ಖಾಯಂ ಹಿಮ್ಮೇಳವಾದಕರಾಗಿಯೂ ಕೇರಳ ಮೊದಲ್ಗೊಂಡು ತಮಿಳುನಾಡು, ಕರ್ನಾಟಕಗಳಲ್ಲೂ ಭಾಗವಹಿಸಿದ ಕೀರ್ತಿ ಇವರದು. ಈಗ ಬೆಂಗಳೂರಿನಲ್ಲಿ ವಾಸವಾಗಿದ್ದು ಅಲ್ಲಿ ಹಲವಾರು ಯಕ್ಷಗಾನ ಕಾರ್ಯಕ್ರಮಗಳಲ್ಲಿ ಮದ್ದಳೆವಾದಕರಾಗಿ ಭಾಗವಹಿಸುತ್ತಿರುವ ಗಿರೀಶ್ ಪರಂಗೋಡು (ಭಾವ) ಇವರ ಶಿಷ್ಯನಾಗಿದ್ದಾರೆ.


ಹಲವು ವರ್ಷಗಳ ಹಿಂದೆಯೇ ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಸ್ವರಮಾಧುರ್ಯಕ್ಕೆ ಚೆಂಡೆಯ ನಾದ ನುಡಿಸುವ ಸುಯೋಗವೂ ಇವರಿಗೆ ಲಭಿಸಿತ್ತು. ಶ್ರೀ ಕುಪ್ಪಂಗಾನ ಗೋಪಾಲಕೃಷ್ಣ ಭಟ್ಟ, ಶ್ರೀ ಸತೀಶ ಪುಣಿಚಿತ್ತಾಯ ಪೆರ್ಲ, ಶ್ರೀ ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ, ಶ್ರೀ ಮನೋಹರ ಬಲ್ಲಾಳ್ ಅಡ್ವಳ, ತಲ್ಪಣಾಜೆ ಸಹೋದರರಾದ ಶ್ರೀ ಶಿವಶಂಕರ ಭಟ್ಟ, ಶ್ರೀ ವೆಂಕಟ್ರಮಣ ಭಟ್ಟರ ಮೆಚ್ಚಿನ ಹಿಮ್ಮೇಳ ಸಾಥಿ-ಈಶ್ವರ ಭಟ್ಟರಾಗಿದ್ದರು. ಹಿಂದಿನ ಪ್ರಸಿದ್ಧ ಭಾಗವತರುಗಳಾಗಿದ್ದ ದಿ. ದಾಸರಬೈಲು ಚನಿಯ ನಾಯ್ಕರಿಂದ ತೊಡಗಿ ವರ್ತಮಾನ ಕಾಲದ ಪ್ರಸಿದ್ಧ ವೃತ್ತಿಪರ ಭಾಗವತರುಗಳಾದ ಶ್ರೀ ಬಲಿಪ ನಾರಾಯಣ ಭಾಗವತರು, ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಶ್ರೀ ಪುತ್ತಿಗೆ ರಘುರಾಮ ಹೊಳ್ಳ, ಶ್ರೀ ಪದ್ಯಾಣ ಗಣಪತಿ ಭಟ್, ಶ್ರೀ ಪುಂಡಿಕಾೈ ಗೋಪಾಲಕೃಷ್ಣ ಭಟ್, ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಮೊದಲಾದವರು ಕೂಡಾ ಈಶ್ವರ ಭಟ್ಟರನ್ನು ಮೆಚ್ಚಿದವರೇ.


ಅದೇ ರೀತಿಯಲ್ಲಿ ‘ಯಕ್ಷಭಾರತಿ ನೀರ್ಚಾಲು’, ಇವರ ತಂಡದೊಂದಿಗೆ ಕಾಸರಗೋಡು ಸುತ್ತಮುತ್ತಲ್ಲದೆ ಕರ್ನಾಟಕದಲ್ಲೂ ಯಕ್ಷಗಾನ ಕೂಟಗಳಿಗೆ ಚೆಂಡೆವಾದಕರಾಗಿ ಭಾಗವಹಿಸಿದ್ದರು. ‘ಬೊಡ್ಡಜ್ಜ ಯಕ್ಷಗಾನ ಸಂಘ, ಮಧೂರು’ ಇತ್ಯಾದಿ ಹತ್ತು ಹಲವು ಯಕ್ಷಗಾನ ಸಂಘ – ಸಂಸ್ಥೆಗಳ ಆಟ-ಕೂಟಗಳಿಗೆ ಹಿಮ್ಮೇಳವಾದಕರಾಗಿ ಸಹಕರಿಸಿರುವ ಶ್ರೀಯುತರು ಎರಡು ವರ್ಷಗಳ ಹಿಂದೆ ಕೊಲ್ಲಂಗಾನ ಶ್ರೀ ನಿಲಯ ಶ್ರೀ ದುರ್ಗಾ ಪರಮೇಶ್ವರಿ ಸನ್ನಿಧಿಯಿಂದ ನೀಡಲಾಗುವ ‘ಪಟ್ಟಾಜೆ ಪ್ರಶಸ್ತಿ’ಗೂ (ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ದಿ. ಪಟ್ಟಾಜೆ ವೆಂಕಟ್ರಮಣ ಭಟ್ಟರ ಸ್ಮರಣಾರ್ಥ) ಪಾತ್ರರಾಗಿದ್ದರು.


ಇವರ ಕಲಾಪರವಾದ ಎಲ್ಲಾ ಚಟುವಟಿಕೆ ಗಳಿಗೂ ಬೆನ್ನೆಲುಬಾಗಿ ನಿಂತು ನಿರಂತರ ಪ್ರೋತ್ಸಾಹವನ್ನು ನೀಡಿದವರು ಇವರ ಧರ್ಮಪತ್ನಿ ಶ್ರೀಮತಿ ರಾಜೇಶ್ವರಿ ಈಶ್ವರ ಭಟ್. ದಿ. ಬಳ್ಳಮೂಲೆ ಕೇಶವ ಭಟ್ ಹಾಗೂ ದಿ. ದೇವಕಿ ಅಮ್ಮ ದಂಪತಿಗಳ ದ್ವಿತೀಯ ಸುಪುತ್ರರಾಗಿ ತಾ. 28-11-1961ರಲ್ಲಿ ಜನಿಸಿದ ಈಶ್ವರ ಭಟ್ಟರು ಒಂದು ವರ್ಷದ ಹಿಂದೆ ಕೋಟೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಮ್ಮನ್ನಗಲಿ ವಿಧಿವಶ ರಾದುದು ನಂಬಲಸದಳ ಹಾಗೂ ಅಸಹನೀಯ. ು

ಲೇಖಕ: ಕೃಷ್ಣ ಭಟ್ ಅಡ್ಕ
ಹಿಮ್ಮೇಳವಾದಕ, ಯಕ್ಷಗಾನ ಕಲಾವಿದ
ನಿವೃತ್ತ ಅಧ್ಯಾಪಕ, ಯಕ್ಷತೂಣೀರ ಸಂಪ್ರತಿಷ್ಠಾನ (ರಿ.), ಕೋಟೂರು

ಕರ್ನಾಟಕದಲ್ಲಿ ಕೊರೋನಾ ಕೇಸ್ ಇಳಿಕೆ (24.06.2021) – ಇಂದು 3979 – ಜಿಲ್ಲಾವಾರು ಪಟ್ಟಿ ಇಲ್ಲಿದೆ.

ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಕೆಯನ್ನು ಕಾಣುತ್ತಿದೆ. ಕರ್ನಾಟಕ ರಾಜ್ಯದಲ್ಲಿ (24.06.2021) ಕೊರೋನಾ ದೃಢಪಟ್ಟವರ ಅಂಕಿಸಂಖ್ಯೆಗಳ ವಿವರ ಇಲ್ಲಿದೆ.

ಯಕ್ಷಗಾನ ಪ್ರಸಂಗಕರ್ತರ ಮೇಲೆ ಕುಮಾರವ್ಯಾಸನ ಪ್ರಭಾವ (ಭಾಗ – 3)

0

ಕುಮಾರವ್ಯಾಸ ಭಾರತ ಮತ್ತು ಯಕ್ಷಗಾನ ಪ್ರಸಂಗ ‘ದ್ರೌಪದೀ ಸ್ವಯಂವರ’ದ  ಇನ್ನೆರಡು ಪದ್ಯಗಳನ್ನು ಗಮನಿಸಿ.
ಕುಮಾರವ್ಯಾಸ ಭಾರತ:
ಕೊಂದು ದನುಜನ ಪೆಣನ ಬಂಡಿಯ
ಹಿಂದೆ ಬಂಧಿಸಿ ಪುರದ ಬಾಹೆಗೆ
ತಂದು ಬಿಟ್ಟನು ತನತನಗೆ ಜನ ಜಾಲ ಜೋಡಿಯಲಿ
ಬಂದು ಕಂಡುದು ಹೆಣನ ಭೂಸುರ
ರಿಂದು ಧನ್ಯರು ವಿಪ್ರಜಾತಿಗೆ
ಸಂದುದಿನ್ನಗ್ಗಳಿಕೆ ಯೆಂದುದು ನೆರೆದ ಪೌರಜನ

ಯಕ್ಷಗಾನ ಪ್ರಸಂಗ ‘ದ್ರೌಪದೀ ಸ್ವಯಂವರ’:
ಮಡುಹಿ ದೈತ್ಯನ ಹೆಣನ ಬಂಡಿಯ |
ಕಡೆಗೆ ಬಂಧಿಸಿ ತಂದು ಬಿಸುಟಿದ |
ನೊಡನೆ ಪುರಬಾಹೆಯಲಿ ಜನತತಿಯ್ಯದೆ ಬೆರಗಾಗಿ ||
ಎಡೆಬಿಡದೆ ನಡೆತಂದು ಕಾಣುತ |
ಪೊಡವಿಯಮರರು  ಧನ್ಯ ನಿನ್ನನು |
ಪಡೆದ ತಾಯಿ ಕೃತಾರ್ಥೆಯೆಂದರು ಭೀಮಸೇನನೊಳು||
ಈ  ಎರಡು  ಪದ್ಯಗಳ ಪೂರ್ವಾರ್ಧಗಳಲ್ಲಿ ಸಾಹಿತ್ಯದ ಆಂಶಿಕ ಹೋಲಿಕೆಯಿರುವುದನ್ನು ಗಮನಿಸಬಹುದು. ಇದು ಮೇಲೆ ಹೇಳಿದಂತೆ ಸಹಜವಾಗಿ ಬಂದಿರುವ ಹೋಲಿಕೆಯಾಗಿರಬಹುದು ಎಂದೆನಿಸುತ್ತದೆ.


ಕುಮಾರವ್ಯಾಸ ಭಾರತದ ಕಾವ್ಯ ಸೌಂದರ್ಯದಲ್ಲಿ ಶೃಂಗಾರ ರಸದ ಮುಖ್ಯ ವರ್ಣನೆಯ ಭಾಗ ಇರುವುದು ಆದಿಪರ್ವದ ದ್ರೌಪದೀ ಸ್ವಯಂವರದ ಸಂದರ್ಭದಲ್ಲಿ. ದ್ರೌಪದಿಯ ಸೌಂದರ್ಯ ಹಾಗೂ ಅವಳು ಶೃಂಗರಿಸಿಕೊಳ್ಳುವ ರೀತಿಯ ಅತಿ ಸುಂದರವಾದ ವರ್ಣನೆ ಈ ಭಾಗದಲ್ಲಿದೆ.
ದ್ರೌಪದೀ ಸ್ವಯಂವರದ ಸಂದರ್ಭದಲ್ಲಿ ರಾಜಾಧಿರಾಜರುಗಳಿಗೆ ಪಣವಾಗಿದ್ದ ಮತ್ಸ್ಯಯಂತ್ರವನ್ನು ಭೇದಿಸುವಲ್ಲಿ ಮಾಗಧ, ಶಿಶುಪಾಲ, ಮಾದ್ರೇಶ, ಕರ್ಣಾದಿಗಳು ಸೋತ ನಂತರ ಬಲರಾಮನು ಧನುವನ್ನು ಮುರಿದು ಮತ್ಸ್ಯಯಂತ್ರವನ್ನು ಭೇದಿಸುವನೆಂದು ಅತ್ಯುತ್ಸಾಹದಿಂದ ಮುಂದೆ ಬರುವ ಸಂದರ್ಭ ಕುಮಾರವ್ಯಾಸ ಭಾರತದಲ್ಲಿ ಹೀಗೆ ವರ್ಣಿಸಲಾಗಿದೆ.
ಕೃತಕ ಧನುವನು ಮುರಿದು ದ್ರುಪದನ |
ಸುತೆಯ ಮುಂದಲೆವಿಡಿದು ತಹೆನು |
ದ್ಭುತನಲಾ ಪಾಂಚಾಲನೆನು ತಿಳಿದನು ವರಾಸನವ ||

ಅದೇ ಸಂದರ್ಭ, ಯಕ್ಷಗಾನ ಪ್ರಸಂಗದ ಪ್ರತಿಯಲ್ಲಿ ಏಕತಾಳದಲ್ಲಿ ಹೀಗೆ ಪ್ರಸ್ತುತಿಪಡಿಸಲಾಗಿದೆ.
ಕೃತಕದ ಚಾಪವ ಮುರಿದು | ನೃಪ | ಸುತೆಯನು ಮುಂದಲೆವಿಡಿದು ಖತಿಯಿಂದೆಳೆತಹೆನೀಗ | ಲೆ | ನ್ನುತ ನೀಲಾಂಬರನಾಗ ||
ಮುಂದೆ ಇದೇ ಸಂದರ್ಭದ ಮುಂದುವರಿದ ಭಾಗದಲ್ಲಿ ಭೂಪಾಲರೆಲ್ಲರು ಧನುವ ಹೆದೆಯೇರಿಸಿ ಮತ್ಸ್ಯಯಂತ್ರವನ್ನು ಭೇದಿಸಲಾಗದೆ ಹಿಮ್ಮೆಟ್ಟುತ್ತಾರೆ. ಆಗ ಭೋಜನ, ದಕ್ಷಿಣಾದಿಗಳಿಗಾಗಿ ಬಂದ ವಿಪ್ರಸಂಕುಲವನ್ನು ಉದ್ದೇಶಿಸಿ ಧೃಷ್ಟದ್ಯುಮ್ನ ಸ್ವಯಂವರದ ಪಣವನ್ನು ಗೆಲ್ಲುವಲ್ಲಿ ಬ್ರಾಹ್ಮಣರೂ ಪ್ರಯತ್ನಿಸಬಹುದು ಎಂದು ಡಂಗುರ ಸಾರಿಸುತ್ತಾನೆ. ಆಗ ಬ್ರಾಹ್ಮಣರ ವೇಷದಲ್ಲಿ ಸಭೆಯಲ್ಲಿದ್ದ ಪಾಂಡವರಲ್ಲಿ ಮಧ್ಯಮನಾದ ಅರ್ಜುನನು ಧರ್ಮಜನ ಸೂಚನೆಯಂತೆ ಮೇಲೇಳುತ್ತಾನೆ. ಆಗ ವಿಪ್ರಸಂಕುಲವು ಆತನನ್ನು ವಿಧವಿಧವಾಗಿ ಕುಚೋದ್ಯದಿಂದ ಮಾತನಾಡಿಸುತ್ತಾರೆ.
ಕುಮಾರವ್ಯಾಸ ಭಾರತದಲ್ಲಿ,

ಏನು ಸಿದ್ಧಿಯುಪಾಧ್ಯರೆದ್ದಿರಿ
ದೇನು ಧನುವಿಂಗಲ್ಲವೇ ತಾ |
ನೇನು ಮನದಂಘವಣೆ ಬಯಸಿದಿರೇ ನಿತಂಬಿನಿಯ ||
ವೈನತೇಯನ ವಿಂಗಡಿಸಿದ ವಷ |
ವೇನು ಸದರವೊ ಹಾವಡಿಗರಿಗಿ |
ದೇನು ನಿಮ್ಮುತ್ಸಾಹವೆಂದುದು ಧೂರ್ತ ವಟುನಿಕರ ||
ಎಂದು ವರ್ಣಿಸಲ್ಪಟ್ಟಿರುವ ಸಂದರ್ಭವು ಯಕ್ಷಗಾನ ಪ್ರಸಂಗದಲ್ಲಿ ಭಾಮಿನಿಯ ಬದಲು ಅಷ್ಟತಾಳದಲ್ಲಿ ಹೇಳಲ್ಪಟ್ಟಿದೆ. ಅದು ಹೀಗೆ:

ಏನು ಸಿದ್ಧಿವುಪಾಧ್ಯರೆದ್ದಿರಿ ಮಝು |
ಹೀನ ಧನುವಿಂಗಲ್ಲದೇ ತಾ |
ನೇನು ಮನದಂಗವಣಿಯೊ |
ಮಾನಿನೀಮಣಿಯನು ಬಯಸಿದಿರೆ ಮ |
ಹಾನುಭಾವರು ತಾವಸಾಧ್ಯವ | ದೇನು ತಮಗೀ ಜಗದೊಳು ||
ಮೇಲಿನ ಎರಡೂ ಪದ್ಯಗಳನ್ನು ಗಮನಿಸಿದಾಗ ಕುಮಾರವ್ಯಾಸ ಹಾಗೂ ಯಕ್ಷಗಾನ ಪ್ರಸಂಗಕರ್ತರ ರಚನೆಗಳು ಅತೀವ ಸಾಮ್ಯತೆಯಿಂದ ಕೂಡಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಕನ್ನಡ ಸಾರಸ್ವತ ಲೋಕಕ್ಕೆ ಮಾತ್ರವಲ್ಲದೆ ಯಕ್ಷಗಾನ ಸಾಹಿತ್ಯಕ್ಕೂ ಕುಮಾರವ್ಯಾಸನ ಕೊಡುಗೆ ಅನನ್ಯವಾದದ್ದು. ಅಂತಹ ಸುಂದರ ಸುಲಲಿತವಾದ ಕೃತಿ ಅನ್ಯಾದೃಶ.
ಮುಂದಿನ ಪದ್ಯ ಕುಮಾರವ್ಯಾಸ ಭಾರತದಲ್ಲಿ
ಮದುವೆ ಬೇಕೇ ಶ್ರೋತ್ರೀಯ ಸ್ತೋ |
ವಂದಲಿ ಕನ್ಯಾರ್ಥಿಗಳು ನಾವೆಂ |
ಬುದು ನಿಜಾನ್ವಯ ವಿದ್ಯೆಯಲಿ ಕೊಡುವುದು ಪರೀಕ್ಷೆಗಳ |
ಮದುವೆಯಹುದಿದು ಸೌಖ್ಯ ಪುಣ್ಯ |
ಪ್ರದವು ಭೂದೇವರಿಗೆ ನೀ ನೆನೆ |
ದುದು ಭಗೀರಥ ಯತ್ನವೆಂಬುದು ಭೂಸುರವ್ರಾತ ||

ಎಂದು ಇದೆ. ಇದೇ ಪದ್ಯ ಯಕ್ಷಗಾನ ಪ್ರಸಂಗದಲ್ಲಿ ಮೊದಲಿನಂತೆಯೇ ಅಷ್ಟತಾಳದಲ್ಲಿ,
ಮದುವೆ ಬೇಕನೆ ಶ್ರೋತ್ರಿಯ ವಿಪ್ರವ |
ರ್ಗದಲಿ ಕನ್ಯಾರ್ಥಿಗಳು ನಾವೆಂ |
ದೊದಗಿರುವ ಕುಲವಿದ್ಯದಿ |
ಹೆದರದೀವುದು ನೀವು ಪರೀಕ್ಷೆಯ | ನಿದು
ಸುಖವು ನಿಮಗಲ್ಲದಿನ್ನಿರಿ |
ತಿದು ಭಗೀರಥ ಯತ್ನವು ||
ಎಂದು ರಚಿಸಲ್ಪಟ್ಟಿದೆ. ಇಲ್ಲಿ ಕೂಡಾ ಹೋಲಿಕೆಗಳನ್ನು ಗಮನಿಸಬಹುದು.
ಈ ಪಣ ಬ್ರಾಹ್ಮಣರಿಗೆ ಉಚಿತವಾದದ್ದಲ್ಲ ಎಂದು ಬ್ರಹ್ಮಸಭೆಯಲ್ಲಿ ತಾವು ತಾವೇ ಮಾತನಾಡುವ ಸನ್ನಿವೇಶಗಳನ್ನು ಕುಮಾರವ್ಯಾಸ ಕುತೂಹಲಕಾರಿಯಾಗಿ ತನ್ನ ಮುಂದಿನ ಪದ್ಯದಲ್ಲಿ ಚಿತ್ರಿಸುತ್ತಾನೆ.


ಕೆಲರು ಹೋಗದಿರೆಂದು ಜರೆದರು |
ಕೆಲರು ತಾನೇ ಬಲ್ಲೆನೆಂದರು |
ಕೆಲರು ನುಡಿದರು ವಿಪ್ರಸಭೆಗಪಹಾಸ್ಯವಹುದೆಂದು ||
ಕೆಲರು ತಪ್ಪೇನೆಂದು ಕಳೆದರು
ಕೆಲರು ಭದ್ರಾಕಾರನೀತಂ
ಗಳಕುವುದು ಧನು ಭಾಗ್ಯಮುಖನೆಂದುದು ಬುಧಸ್ತೋಮ ||
ದ್ರೌಪದೀ ಸ್ವಯಂವರ ಪ್ರಸಂಗ ಪುಸ್ತಕವೊಂದರಲ್ಲಿ ಇದೇ ಪದ್ಯವು ವಾರ್ಧಕ ಷಟ್ಪದಿಯಲ್ಲಿದೆ.
ಕೆಲರೆಂದರೆಲವೊ ಹೋಗದಿರೆನುತ ಮೇಣು ಕೆಲ |
ರೊಲಿದು ತಾನೇ ಬಲ್ಲೆನೆಂದರದರೊಳ್ ಕೆಲರು |
ಸಲೆ ವಿಪ್ರಕುಲಕಾದುದವಮಾನವೆಂದರ್ ಕೆಲರ್ ತಪ್ಪೇನೆಂದರು ||
ಕೆಲರು ಭದ್ರಾಂಗನುರು ಭಾಗ್ಯಮುಖನೀತ ನಿಂ |
ಗಳುಕುವುದು ಧನುವೆಂದು ಪೇಳುತಿಹ ಬ್ರಹ್ಮಸಭೆ |
ಯೊಳು ಮೆಲ್ಲ ಮೆಲ್ಲನೈತರುತಿರ್ದನೇನೆಂಬೆನಾ ಸವ್ಯಸಾಚಿಯಂದು ||
ಮೇಲಿನ ಎರಡೂ ಪದ್ಯಗಳೂ ಷಟ್ಪದಿಗಳಲ್ಲಿವೆ. ಕುಮಾರವ್ಯಾಸನದು ಭಾಮಿನಿಯೆಂದು ಎಲ್ಲರಿಗೂ ತಿಳಿದಿರುವ ವಿಚಾರವಾದರೆ ಯಕ್ಷಗಾನದ ಪದ್ಯ ವಾರ್ಧಕ ಷಟ್ಪದಿಯಲ್ಲಿದೆ. 

(ಮುಂದುವರಿಯುವುದು) 

ಕರ್ನಾಟಕದಲ್ಲಿ ಕೊರೋನಾ ಕೇಸ್ ಇಳಿಕೆ (23.06.2021) – ಇಂದು 4436 – ಜಿಲ್ಲಾವಾರು ಪಟ್ಟಿ ಇಲ್ಲಿದೆ.

ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಕೆಯನ್ನು ಕಾಣುತ್ತಿದೆ. ಕರ್ನಾಟಕ ರಾಜ್ಯದಲ್ಲಿ (23.06.2021) ಕೊರೋನಾ ದೃಢಪಟ್ಟವರ ಅಂಕಿಸಂಖ್ಯೆಗಳ ವಿವರ ಇಲ್ಲಿದೆ.

ಹಾಸ್ಯ ಕಲಾವಿದ – ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು

ರಂಗಭೂಮಿ ಕಲೆಗಳಾದ ನಾಟಕ, ಚಿತ್ರರಂಗ ಮತ್ತು ಯಕ್ಷರಂಗದಲ್ಲಿ ಅಭಿನಯಿಸಿ, ಮಿಂಚುವ ಕಲಾವಿದರು ಪ್ರೇಕ್ಷಕರ ಮನದಾಳದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ದೈನಂದಿನ ಜೀವನದಲ್ಲಿ ನೊಂದು, ಬೆಂದು ಮುದುಡಿದ ಜೀವಕ್ಕೆ ಒಂದಿಷ್ಟು ಸಂತೋಷದ ಸನ್ನಿವೇಶಗಳು ದೊರೆತಾಗ ‘‘ಹಾಲು ಜೇನು ಸವಿದಂತೆ’’, ಅದರಲ್ಲೂ ಹಾಸ್ಯ ಸನ್ನಿವೇಶಗಳನ್ನು ರಂಗದಲ್ಲಿ ಮೂಡಿಸಿ, ಜನರ ಮನಃಶುದ್ಧಿಗೊಳಿಸುವವನೇ ನಿಜವಾದ ಮನೋವೈದ್ಯ!
ಯಕ್ಷರಂಗಕ್ಕೇ ಬರೋಣ. ಇಲ್ಲಿ ಕಲಾವಿದ ನೊಬ್ಬ ತಲೆಗೊಂದು ದೊಡ್ಡ ಮುಂಡಾಸು, ಉದ್ದ ನಾಮ, ದಪ್ಪ ಮೀಸೆ, ಕಿವಿಗೆ ದೊಡ್ಡ ಓಲೆ (ಚಕ್ಕುಲಿ), ಉದ್ದ ಕೋಲು ಮತ್ತು ದೊಡ್ಡ ಹೊಟ್ಟೆ, ವೇಷಧರಿಸಿ, ರಂಗಪ್ರವೇಶಿಸಿ, ಹಾಸ್ಯನಗೆ ಬೀರುತ್ತಾ, ‘‘ಆಲಿಸಬೇಕು ಜೀಯಾ… ಲಾಲಿಸ ಬೇಕು…’’ ಎಂದು ಹಿಮ್ಮೇಳಕ್ಕೆ ಲಯಬದ್ಧವಾಗಿ ನರ್ತಿಸಿ, ಹಾಸ್ಯದ ಮಾತುಗಳನ್ನಾಡಿದಾಗ, ಹಾಸ್ಯ ಕಲಾವಿದ ತಾನೂ ನಗದೆ, ಪ್ರೇಕ್ಷಕರನ್ನು ನಕ್ಕುನಗಿಸಿ ನೀಡಿದ ಹಾಸ್ಯ ಸನ್ನಿವೇಶಗಳು ಹಾಗೂ ನಲ್ವತ್ತು ವರ್ಷಗಳ ಹಿಂದಿನ ಕಲಾಬದುಕಿನ ಒಂದು ಅವಲೋಕನ, ಏಳು-ಬೀಳಿನ ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿ ಕಲಾಸೇವೆ ಗೈದ ಕಲಾವಿದ, ಈಗ ವಿಶ್ರಾಂತ ಜೀವನ ನಡೆಸುತ್ತಿರುವ ‘‘ಕರ್ನಾಟಕ ಸರಕಾರದ 2013ನೇ ಸಾಲಿನ ರಾಜ್ಯ ಪ್ರಶಸ್ತಿ ಮತ್ತು ಕರ್ನಾಟಕ ಸರಕಾರದ ಮಾನ್ಯ ಕಾರ್ಮಿಕ ಸಚಿವರಾಗಿದ್ದ ಕೆ. ಅಮರನಾಥ ಶೆಟ್ಟಿ ಇವರಿಂದ ‘‘ಹಾಸ್ಯರಸಾಬ್ಧಿಭರತಪೂರ್ಣಚಂದ್ರ’’ ಬಿರುದು ಸ್ವೀಕರಿಸಿದ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು ಕಟೀಲು ಮೇಳದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ವೃತ್ತಿಜೀವನ ನಡೆಸಿ ಪ್ರಸ್ತುತ ಕೃಷ್ಣಾಪುರದಲ್ಲಿ ತನ್ನ ಮಗಳು-ಅಳಿಯನ ಜೊತೆ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಈ ಕಲಾವಿದರನ್ನು ಸಂದರ್ಶಿಸಿ, ಅವರತ್ತ ಪ್ರಶ್ನೆಗಳನ್ನೆಸೆದು, ಆಯ್ದವು ಗಳನ್ನು ಓದುಗರ ಮುಂದಿಟ್ಟಿದ್ದೇನೆ.
ಪ್ರಶ್ನೆ : ಮೇಳದ ಯಜಮಾನರು ಮತ್ತು ಭಾಗವತರ ನಂತರದ ಪ್ರಥಮ ಸ್ಥಾನ ಹಾಸ್ಯ ಕಲಾವಿದರಿಗಿದೆ ಎನ್ನುತ್ತಾರೆ, ಇದರ ಮಹತ್ತ್ವವೇನು?


ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು : ಹಾಸ್ಯಗಾರನಿಗೆ ವಿಧಾನ ಸಭಾಧ್ಯಕ್ಷರ ಸ್ಥಾನಮಾನದಷ್ಟು ಪ್ರಾಮುಖ್ಯತೆ ಗೌರವವಿದೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು. ಕೇವಲ ಹಾಸ್ಯ ಪಾತ್ರಕ್ಕೇ ಸೀಮಿತವಾಗಿರದೆ, ಎಲ್ಲಾ ಪಾತ್ರಗಳ ರಂಗನಿರ್ವಹಣೆಗೆ ತಯಾರಿರಬೇಕು. ‘‘ಸಕಲ ಕಲಾ ಪಾಂಡಿತ್ಯ, ಪ್ರೌಢಿಮೆ ಇರಬೇಕು. ಒಂದು ವೇಳೆ ಯಾರಾದರೂ ಕಲಾವಿದರು ಬಾರದೇ ಇದ್ದ ಪಕ್ಷದಲ್ಲಿ ಆತನ ಪಾತ್ರ ಮಾಡುವ ಸಾಮರ್ಥ್ಯ ಹಾಸ್ಯ ಕಲಾವಿದನಿಗಿರಬೇಕು. ಸಹಕಲಾವಿದರು ಎದುರು-ಬದುರು ಕುಳಿತು ಬಣ್ಣಗಾರಿಕೆ ಮಾಡುವುದಾದರೆ, ಹಾಸ್ಯ ಕಲಾವಿದ ದೇವರ (ಚೌಕಿ) ಎದುರಿಗೇ ನೇರವಾಗಿ ಕುಳಿತು ಬಣ್ಣಗಾರಿಕೆ ಮಾಡುತ್ತಾನೆ. ಯಕ್ಷಗಾನದ ಪ್ರಾರಂಭದಿಂದ ಮಂಗಲದವರೇಗೆ ಏಳೆಂಟು ಪಾತ್ರಗಳನ್ನು ನಿರ್ವಹಿಸುವವನೇ ಹಾಸ್ಯಗಾರ!


ಪ್ರಶ್ನೆ: ನಿಮ್ಮ ಹಾಸ್ಯಪಾತ್ರಗಳ ಆಯ್ಕೆಯ ಸಂಕಲ್ಪ?
ನಾ. ಹಾ : ಎಳೆಯ ವಯಸ್ಸಿನಲ್ಲಿ ನಿರ್ವಹಿಸಿದ ಪ್ರಹ್ಲಾದ, ಮಾರ್ಕಾಂಡೇಯಾ, ರೋಹಿತಾಶ್ವ, ಮನ್ಮಥ ಮುಂತಾದ ಪಗಡಿವೇಷಗಳು- ದೇವಿ ಮಹಾತ್ಮೆಯ ಚಂಡ ಹಾಗೂ ಮುಂಡಾಸುರ ಪಾತ್ರಗಳು- ಬ್ರಹ್ಮ, ಬೃಹಸ್ಪತಿ, ಶುಕ್ರಾಚಾರ್ಯರಂತಹ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುವ ಸಂದರ್ಭಗಳು ಇದ್ದರೂ ಹಾಸ್ಯ ಪ್ರಧಾನ ಪಾತ್ರಗಳಾದ- ಬಾಹುಕ, ಪಾಪಣ್ಣ, ಮಕರಂದ, ಬೈರಾಗಿ ಇತ್ಯಾದಿ ಪಾತ್ರಗಳು ಬಹಳ ಮನಮೆಚ್ಚುವ ಜನಪ್ರಿಯತೆಯ ಶಿಖರವನ್ನು ತಲುಪಿದ್ದುದರಿಂದ, ಅಂತಹ ಪಾತ್ರಲೋಲುಪತೆ ಮತ್ತು ಭಾವಪರವಶತೆಯ ಲೋಕಕ್ಕೆ ಕೊಂಡೊಯ್ದ ಪರಿಣಾಮ ಅಂತಹ ಪಾತ್ರನಿಷ್ಠೆ ಆರಂಭವಾಯಿತು.


ಪ್ರಶ್ನೆ : ನಿಮ್ಮ ಯಕ್ಷಕಲಿಕಾ ಗುರುಗಳು ಯಾರು? ಮತ್ತು ಯಾವ ಪಾತ್ರಗಳನ್ನು ನಿರ್ವಹಿಸಿದ್ದೀರಿ?
ನಾ. ಹಾ : ಪ್ರಾಥಮಿಕ- ಪೂಜ್ಯ ತೀರ್ಥರೂಪರು. ಗುರುಗಳಾಗಿ ದಿ| ಕುರಿಯ ವಿಠಲ ಶಾಸ್ತ್ರಿಗಳು. ದಿ| ಬಣ್ಣದ ಕುಟ್ಯಪ್ಪು. ದಿ| ಕುಂಞಬು ಹಾಸ್ಯ ಗಾರರು ಹಾಗೂ ಪೂಜ್ಯ ಜ್ಯೇಷ್ಠ ಸಹೋದರರು. ಅಲ್ಲದೆ ಕಾವು ಶ್ರೀಕಣ್ಣ, ಮಂಕುಡೆ ಸಂಜೀವ ಶೆಟ್ರು, ಗುಡ್ಡಪ್ಪ ಗೌಡರು, ಬಣ್ಣದ ಮಾಲಿಂಗ, ಪಡ್ರೆ ಚಂದು, ಪುತ್ತೂರು ನಾರಾಯಣ ಹೆಗಡೆ, ಉರ್ವ ಅಂಬು, ಬೋಳಾರ ನಾರಾಯಣ ಶೆಟ್ರು, ವೇದಮೂರ್ತಿ ವೆಂಕಟ್ರಮಣ ಭಟ್, ಪುತ್ತೂರು ಕೃಷ್ಣ ಭಟ್, ಕುಂಞರಾಮ ಮಣಿಯಾಣಿ, ದಿ| ಮಲ್ಪೆ ಶಂಕರನಾರಾಯಣ ಸಾಮಗರು, ದಿ| ಮಲ್ಪೆ ರಾಮದಾಸ ಸಾಮಗರು ಮುಂತಾದ ದಿಗ್ಗಜ ಯಕ್ಷತಾರೆಗಳೊಡನೆ ಪ್ರಾಮುಖ್ಯ ಪಾತ್ರ ನಿರ್ವಹಿಸಿರುತ್ತೇನೆ.


‘‘ಜನರ ಮಾನಸಿಕ ವಿಕಲ್ಪಗಳಿಗೆ ಹಾಸ್ಯಗಳು ಔಷಧಿಯಾಗಬಲ್ಲುದು ಮತ್ತು ಸೂಕ್ತ ಚಿಕಿತ್ಸೆ ಯಾಗಬಲ್ಲುದು’’ ಎಂಬ ಅಂಶಗಳೇ ನನ್ನ ಹಾಸ್ಯ ಪಾತ್ರಗಳ ಆಯ್ಕೆಯ ಸೂತ್ರವಾಗಿತ್ತು ಮತ್ತು ಯಕ್ಷಗಾನಪ್ರೇಮಿಗಳಿಗೆ ಹಾಸ್ಯದ ಔತಣ ಬಡಿಸುವುದು ನನ್ನ ಕರ್ತವ್ಯವೆಂದು ತಿಳಿದಿರುವೆ. ಹಲವಾರು ಪ್ರಸಿದ್ಧ ಪೌರಾಣಿಕ ಕಥಾಪ್ರಸಂಗಗಳಲ್ಲಿ ಬರುವ ವಿವಿಧ ಹಾಸ್ಯಪಾತ್ರಗಳಲ್ಲಿ ಪಾತ್ರ ನಿರ್ವಹಣೆ- ವಿಶೇಷವಾಗಿ ಪಾಪಣ್ಣ ವಿಜಯದ ಹಾಸ್ಯಪಾತ್ರ, ಶ್ರೀಕೃಷ್ಣ ವಿಜಯದ- ಮಕರಂದ, ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ- ಮುಸ್ಲಿಂ ಸಹೋದರನ ಪಾತ್ರ, ನಳದಮಯಂತಿ- ಬಾಹುಕ, ದಕ್ಷಾಧ್ವರದ- ಬ್ರಾಹ್ಮಣ, ದೇವಿಮಹಾತ್ಮ್ಯೆ- ದೂತ ಇತರ ಪ್ರಸಂಗಗಳಲ್ಲಿ- ನಾರದ, ಗೋಪಾಲಕರ ಪಾತ್ರ- ಇತ್ಯಾದಿ ನಿರ್ವಹಿಸಿರುತ್ತೇನೆ.


ಪ್ರಶ್ನೆ: ನಿಮ್ಮ ಯಕ್ಷಗಾನ ವ್ಯವಸಾಯದ ವಿವರ?
ನಾ. ಹಾ. : ಯಕ್ಷಗಾನ ಯಾತ್ರೆಯ ಆರು ದಶಕಗಳಲ್ಲಿ- ಸುಮಾರು ನಾಲ್ಕು ದಶಕಗಳಷ್ಟು ಕಾಲ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿ ದಶಾವತಾರ ಮೇಳದಲ್ಲಿ ಅವಿರತ ಸೇವೆ. ಪ್ರಥಮ ರಂಗಪ್ರವೇಶ ಕೂಡ್ಲು ಶ್ರೀ ಗೋಪಾಲಕೃಷ್ಣ ಮೇಳದಲ್ಲಿ. ಮುಂದೆ ಕ್ರಮವಾಗಿ- ಮೂಲ್ಕಿ ಮೇಳ, ಮುಚ್ಚೂರು, ಧರ್ಮಸ್ಥಳ, ಇರಾ ಶ್ರೀ ಸೋಮನಾಥೇಶ್ವರ ಮೇಳ, ಆದಿ ಸುಬ್ರಹ್ಮಣ್ಯ ಮೇಳ, ಸಾಲಿಗ್ರಾಮ ಶ್ರೀ ಗುರುನರಸಿಂಹ ಮೇಳ, ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ಮೇಳ- ಈ ಮೇಳಗಳಲ್ಲಿ ಸಂಕ್ಷಿಪ್ತ ಅವಧಿಯ ಸೇವೆ ಸಲ್ಲಿಸಿರುತ್ತೇನೆ.


ಪ್ರಶ್ನೆ: ನಿಮ್ಮ ಕಲಾಪ್ರೌಢಿಮೆಗೆ ಸಂದ ಪ್ರಶಸ್ತಿ/ ಸನ್ಮಾನಗಳೇನು?
ನಾ. ಹಾ.: 1) ಬೋಳೂರು ದೋಗ್ರ ಪೂಜಾರಿ ಸ್ಮಾರಕ ಪ್ರಶಸ್ತಿ – 1992; 2) ಆಸ್ರಣ್ಣ ಪ್ರಶಸ್ತಿ – 2002; 3) ಯಕ್ಷಗಾನ ಕಲಾರಂಗ ಪ್ರಶಸ್ತಿ – 2009; 4) ಕರ್ನಾಟಕ ಸರ್ಕಾರದ 2013ನೇ ಸಾಲಿನ ರಾಜ್ಯ ಪ್ರಶಸ್ತಿ. ಅಲ್ಲದೆ ಪ್ರಮುಖವಾಗಿ ಸನ್ಮಾನಗಳು- ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ಯಕ್ಷಗಾನ ಬಯಲಾಟ ಸೇವಾ ಸಮಿತಿ, ಕೃಷ್ಣಾಪುರ, ಬೊಳ್ಳಾಜೆ; ಶಕ್ತಿನಗರ ವೀರಾಂಜನೇಯ ಸ್ವಾಮೀ; ಬಿಕರ್ನಕಟ್ಟೆ- ಶ್ರೀ ಬ್ರಾಹ್ಮರೀ ಯಕ್ಷಗಾನ ಮಂಡಳಿ; ಕಟೀಲು ಯಕ್ಷಗಾನ ಕಲಾಮಂಡಳಿ, ಪಣಂಬೂರು; ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ, ಕುರುಡುಪದವು; ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ; ಮಲ್ಲ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ, ಕಾಸರಗೋಡು; ದೆಹಲಿ ಕರ್ನಾಟಕ ಸಂಘ (ರಿ.), ನವದೆಹಲಿ; ಯಕ್ಷಕಲಾರಂಗ (ರಿ.), ಉಡುಪಿ; ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಾಲಯ; ದೇವಾಡಿಗರ ಸಂಘ, ದುಬಾೈ; ಶಿಕ್ಷಕ-ರಕ್ಷಕರ ಬಳಗ, ಬೇಲಾಡಿ; ಕಾಂತಾವರ ಮುಂತಾದ ಹತ್ತು ಹಲವಾರು ಸಂಘ-ಸಂಸ್ಥೆ ಗಳಿಂದ ಪುರಸ್ಕಾರ, ಸನ್ಮಾನಗಳು ದೊರೆತಿವೆ.


ಪ್ರಶ್ನೆ : ನೀವು ಆರು ದಶಕಗಳಷ್ಟು ಕಾಲ ಕಲಾಸೇವೆಗೈದು ವಿಶೇಷ ಪಾಂಡಿತ್ಯ ಮತ್ತು ಅನುಭವಗಳನ್ನು ಪಡೆದಿದ್ದೀರಿ. ಆ ಹಿಂದಿನ ಕಲಾಬದುಕಿಗೂ ಇಂದಿನ ಕಲಾಬದುಕಿಗೂ ನಿಮ್ಮ ಅಭಿಪ್ರಾಯವೇನು?
ನಾ. ಹಾ.: ಅಜಗಜಾಂತರ. ಆ ಕಾಲದ ಕಷ್ಟದ ಬದುಕು ನಮ್ಮ ಮಕ್ಕಳಿಗೂ ಬೇಡ. ನನ್ನ ವಿರೋಧಿಗಳಿಗೂ ಬೇಡವೇ ಬೇಡ. ಆಟ ಆಡುವ ಸ್ಥಳಗಳಲ್ಲಿ ಸರಿಯಾಗಿ ವಿಶ್ರಾಂತಿ ಪಡೆಯಲು ಸ್ಥಳಾವಕಾಶವಿಲ್ಲದಿದ್ದುದರಿಂದ ಸ್ಮಶಾನದಲ್ಲಿ ಮಲಗಿದ್ದೂ ಇದೆ. ಮಲಗಿ ಏನೋ ಭಯವಾಗಿ ಎದ್ದುಬಿದ್ದು ಓಡಿದ್ದೂ ಇದೆ. ಮಧ್ಯಾಹ್ನದ ಊಟದ ವ್ಯವಸ್ಥೆಗಳೂ ಸರಿಯಾಗಿ ಇರುತ್ತಿರಲಿಲ್ಲ. ಆಟ ನಡೆಯುವ ಸ್ಥಳಕ್ಕೆ ಏಳೆಂಟು ಮೈಲುಗಳ ಕಾಲ್ನಡಿಗೆ, ಗುಡ್ಡದಾರಿಗಳು, ನಮ್ಮದು ಆಗಿನ ಸಾಹಸದ ಕಲಾಬದುಕು. ಮೇಳದಲ್ಲಿ ಅಡುಗೆಯವರ ಅವಸ್ಥೆ ಹೇಳಿ ಪ್ರಯೋಜನವಿಲ್ಲ. ಪಾತ್ರೆಪಗಡಿಗಳನ್ನು ಒಂದು ಬಿದಿರಿನ ಗಳೆ(ಕೋಲು)ಗೆ ಕಟ್ಟಿ, ಭುಜದಲ್ಲಿಟ್ಟು ಕೊಂಡು ಕಾಲ್ನಡಿಗೆಯ ಪಯಣ! ಬೇಕೇ ಈ ಬಣ್ಣದ ಬದುಕು ಎಂದೆನಿಸುತ್ತಿತ್ತು. ಆಗ ಆಟಕ್ಕೂ ಸೇವಾದಾರರು ಕಡಿಮೆ. ಈಗಿನ ಕಲಾಬದುಕು ಸ್ವರ್ಗ. ಆದರೂ ಯಾರಿಗೂ ತಾಳ್ಮೆ ಇಲ್ಲ. ಈಗ ಕಲೆ, ಸಂಸ್ಕೃತಿ, ಸಂಸ್ಕಾರ ಎಲ್ಲವೂ ಕಡಿಮೆಯೆ! ಎಲ್ಲಾ ವ್ಯಾಪಾರ ಮಯವಾಗಿದೆ, ಭಕ್ತಿಗೆ ಬೆಲೆ ಇಲ್ಲ, ಹಣಕ್ಕೆ ಮಾತ್ರ ಬೆಲೆ ಎಂಬಂತಾಗಿದೆ.


ಪ್ರಶ್ನೆ: ಈ ಕಾಲದಲ್ಲಿ ‘ಕಾಲಮಿತಿ’ ಯಕ್ಷಗಾನದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಾ. ಹಾ: ಈ ಪ್ರಶ್ನೆ ನನ್ನಲ್ಲಿ ಹಲವರು ಕೇಳಿದ್ದಿದೆ. ದಯವಿಟ್ಟು ನಾನು ಏನೂ ಹೇಳಲಾರೆ. ಇರಲಿ, ನನಗೀಗ 80 ವರ್ಷ, ಸುಧಾರಣೆ ತರಲು ನನ್ನಿಂದ ಸಾಧ್ಯವೆ? ‘‘ಕಾಲಾಯ ತಸ್ಮಯೇ ನಮಃ’’. ಶನಿದೇವರ ಪೂಜೆ, ಸತ್ಯನಾರಾಯಣ ದೇವರ ಪೂಜೆ ಇಂತಹ ಪೂಜೆಗಳಿಗೆ ಒಂದು ಧಾರ್ಮಿಕ ಪೂಜಾ ವಿಧಿವಿಧಾನಗಳಿದ್ದು, ಪ್ರಸಾದ ವಿತರಣೆಯಾಗುತ್ತದೆ. ಯಕ್ಷಗಾನಕ್ಕೂ ಒಂದು ಪರಂಪರೆ ಇದೆ. ಪ್ರಾತಃಕಾಲದಲ್ಲಿ ಕಥಾಪ್ರಸಂಗಕ್ಕೆ ಮಂಗಲ ಹಾಡಿ, ಸೇವಾದಾರರಿಗೆ, ಚೌಕಿ ಪೂಜೆಯ ನಂತರ ಪ್ರಸಾದ ವಿತರಣೆಯಾಗುತ್ತದೆ. ‘ಕಾಲಮಿತಿ’ ಹರಕೆಯ ಸೇವಾಟಕ್ಕೆ ಖಂಡಿತ ಸರಿಯಲ್ಲ. ಯಾರೂ ನಿದ್ದೆಗೆಡಲು ತಯಾರಿಲ್ಲ. ‘‘ಸುಖವನ್ನೇ ಬಯಸುವವ ಯಾವಾಗಲೂ ಕಷ್ಟಪಡಲಿಚ್ಛಿಸಲಾರ. ಆದರೆ, ಕಷ್ಟಪಟ್ಟವ ಕಷ್ಟಸುಖಗಳನ್ನು ಸಮಾನವಾಗಿ ಸ್ವೀಕರಿಸುವನು.’’


ಪ್ರಶ್ನೆ: ನಿಮ್ಮ ಆಗಿನ ಕಾಲದ ಸಂಬಳ / ಗೌರವಧನ ಎಷ್ಟಿತ್ತು?
ನಾ. ಹಾ: ‘ನಾವು ಸಂಬಳ ತಿಂದು ಬದುಕಿದವರಲ್ಲ, ಕೆಲಸಕ್ಕಾಗಿ ಬದುಕಿದವರು’. ಆಗ ಐದು ದಿನಕ್ಕೆ ಮೂರು ರೂಪಾೈ ಸಂಬಳ. ಕೆಲವು ಸಮಯದ ನಂತರ ಮೂರು ದಿನಕ್ಕೆ 300 ರೂಪಾೈ ಸಿಗುತ್ತಿತ್ತು. ಮೇಳ ಬಿಡುವ ಸಮಯಕ್ಕೆ ಆರು ತಿಂಗಳಿಗೆ ರೂಪಾೈ 25,000/- ಪಡೆದಿದ್ದೇನೆ.


ಎಂಬತ್ತರ ಇಳಿವಯಸ್ಸಿನ ಈ ಯಕ್ಷಕಲಾ ಭೀಷ್ಮಾಚಾರ್ಯರು ದಿನಾಂಕ 17-12-2016 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿ, ಕೃಷ್ಣಾಪುರ- ಇದರ 50ನೇ ವರ್ಷದ ಸುವರ್ಣ ಮಹೋತ್ಸವ ಸೇವಾಟದಲ್ಲಿ ‘ಸುಗ್ರೀವ’ನಾಗಿ ಕಲಾಪಾಂಡಿತ್ಯ ಮೆರೆದಿದ್ದಾರೆ. ಕೇವಲ 3,000 ರೂಪಾೈ ಗೌರವಧನ ಸ್ವೀಕರಿಸುತ್ತಾ ಜೀವನ ನಿರ್ವಹಿಸುವ ಈ ಹಿರಿಯ ಕಲಾವಿದರನ್ನು ಸಂಘ-ಸಂಸ್ಥೆಗಳು ಪುರಸ್ಕರಿಸಿದರೆ ಅವರ ಕಲಾಪಾಂಡಿತ್ಯವನ್ನು ಇನ್ನಷ್ಟು ಗೌರವಿಸಿದಂತಾಗುತ್ತದೆ.
ಹುಟ್ಟಿದ ಊರು : ನೆಲ್ಲಿಕಟ್ಟೆ, ಕಾಸರಗೋಡು ತಾಲೂಕು, ಕೇರಳ ರಾಜ್ಯ
ತಂದೆ : ದಿ| ಕೃಷ್ಣ ಚೆಟ್ಟಿಯಾರ್; ತಾಯಿ : ದಿ| ಮಾನು
ಪ್ರಾಥಮಿಕ ವಿದ್ಯಾಭ್ಯಾಸ : ಎರ್ಪೆಕಟ್ಟೆ, ಕಲ್ಲಕಟ್ಟೆ ಶಾಲೆ
ಹೈಸ್ಕೂಲ್ ವಿದ್ಯಾಭ್ಯಾಸ : ನವಜೀವನ ಪ್ರೌಢಶಾಲೆ, ಪೆರಡಾಲ ಮತ್ತು ಎಡನೀರು ಪ್ರೌಢಶಾಲೆ, ಕಾಸರಗೋಡು
ವಿದ್ಯಾಭ್ಯಾಸ : ಎಂಟನೇ ತರಗತಿ.

ಸಂದರ್ಶನ : ರುಕ್ಮಯ್ಯ ಶೆಟ್ಟಿ ಬಿ.

ರುಕ್ಮಯ್ಯ ಶೆಟ್ಟಿ ಬಿ.
‘ದೇವಿಕೃಪಾ’, ಪಡ್ರೆ