ಶ್ರೀ ದಿ| ದಿವಾಣ ಭೀಮ ಭಟ್ಟರು ತೆಂಕುತಿಟ್ಟಿನ ಖ್ಯಾತ ಮದ್ದಳೆಗಾರರಾಗಿ ಮೆರೆದವರು. ಹಿರಿಯ ಬಲಿಪ ನಾರಾಯಣ ಭಾಗವತರ ಸಹಕಾರ ಪ್ರೋತ್ಸಾಹದಿಂದ ತಿರುಗಾಟವನ್ನೂ ಆರಂಭಿಸಿದ್ದರು. ಮದ್ದಳೆಗಾರರಾಗಿ ಮಹಾನ್ ಸಾಧನೆಯನ್ನು ಮಾಡಿದವರು. ಮೊದಲ ತಿರುಗಾಟ ಶ್ರೀ ಕದ್ರಿ ಮೇಳದಲ್ಲಿ. ಬಳಿಕ ಐದು ವರ್ಷ ಹಿರಿಯ ಬಲಿಪರ ಜತೆಯಾಗಿ ಕಟೀಲು ಮೇಳದಲ್ಲಿ. ಮತ್ತೆ ಹದಿನೈದು ವರ್ಷಗಳ ಕಾಲ ಕಲಾ ವ್ಯವಸಾಯದಿಂದ ದೂರ ಉಳಿದರೂ ಪುನರಪಿ ಮೂಲ್ಕಿ, ಇರಾ, ಕೂಡ್ಲು ಮೇಳಗಳಲ್ಲಿ ಹಲವು ವರ್ಷ ಕಲಾ ಸೇವೆಯನ್ನು ಮಾಡಿದ್ದರೆಂದು ತಿಳಿದುಬರುತ್ತದೆ.
ಕಟೀಲು ಮೇಳದಲ್ಲಿ ಸೇವಾ ರೂಪದ ಕೊನೆಯ ತಿರುಗಾಟವನ್ನು ಮಾಡಿ ಶ್ರೀಯುತರು ನಿವೃತ್ತರಾಗಿದ್ದರು. ಹಿರಿಯ ಬಲಿಪರು, ಅಗರಿ ಶ್ರೀನಿವಾಸ ಭಾಗವತರಂತಹ ಹಿರಿಯರ ಸಮಕಾಲೀನರಾದರೂ ಬಳಿಕ ತನಗಿಂತ ಕಿರಿಯ ಕಲಾವಿದರ ಜತೆಗೂ ಕಲಾವ್ಯವಸಾಯವನ್ನು ಮಾಡಿದರು. ಶ್ರೀಯುತರ ಅದ್ಭುತ ಪ್ರತಿಭೆಗೆ ಲಯಬ್ರಹ್ಮ ಎಂಬ ಬಿರುದು ಒಲಿದು ಬಂದಿತ್ತು. ಯಕ್ಷಗಾನ ವಾದನಕ್ರಮದಲ್ಲಿ ಅಸಾಮಾನ್ಯ ಸಾಧಕನಾಗಿ ಮೆರೆದ ದಿವಾಣ ಭೀಮ ಭಟ್ಟರ ಜನ್ಮ ಶತಮಾನ ಸ್ಮೃತಿ ಸಂಚಯ ದಿವಾಣ ಸಂಪದ ಪುಸ್ತಕವು 2015ರಲ್ಲಿ ಮುದ್ರಣಗೊಂಡು ಓದುಗರ ಕೈ ಸೇರಿತ್ತು.
ಮಂಗಳೂರು ಶಕ್ತಿನಗರದ ದಿವಾಣ ಭೀಮ ಭಟ್ ಜನ್ಮಶತಮಾನೋತ್ಸವ ಸಮಿತಿಯು ಈ ಪುಸ್ತಕದ ಪ್ರಕಾಶಕರು. ಶ್ರೀ ಡಾ. ಪ್ರಭಾಕರ ಜೋಶಿ ಮತ್ತು ಶ್ರೀ ಹಿರಣ್ಯ ವೆಂಕಟೇಶ್ವರ ಭಟ್ ಇದರ ಸಂಪಾದಕರು. ಈ ಸಂಸ್ಮರಣ ಗ್ರಂಥದ ಮುದ್ರಣ ಪ್ರಾಯೋಜಕರು ಅನನ್ಯ ಫೀಡ್ಸ್ ಹುಬ್ಬಳ್ಳಿ. ಶ್ರೀ ಮದ್ರಾಮಚಂದ್ರಾಪುರ ಮಠಾಧೀಶರಾದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರುಗಳ ಆಶೀರ್ವಚನಪೂರ್ವಕ ಸಂದೇಶಗಳು ಪುಸ್ತಕದ ಮೊದಲ ಪುಟಗಳಲ್ಲಿ ನಮಗೆ ಓದಬಹುದು. ಸಂಪಾಜೆ ಯಕ್ಷೋತ್ಸವದ ರೂವಾರಿ ಡಾ. ಶ್ರೀ ಟಿ. ಶ್ಯಾಮ ಭಟ್ಟರು ಶುಭಾಶಂಸನೆ ಮಾಡುತ್ತಾ ‘ಚೆಂಡೆ ಮದ್ದಳೆ ವಾದನ ತಪಸ್ವಿ’ ಎಂದು ದಿವಾಣ ಭೀಮ ಭಟ್ಟರನ್ನು ಪ್ರಶಂಸಿಸಿದ್ದಾರೆ.
ಸಂಪಾದಕರುಗಳಾದ ಶ್ರೀ ಡಾ. ಪ್ರಭಾಕರ ಜೋಶಿ ಮತ್ತು ಶ್ರೀ ಹಿರಣ್ಯ ವೆಂಕಟೇಶ್ವರ ಭಟ್ ‘ಶ್ರೀ ಭೀಮಸ್ಮೃತಿ ಯೋಗ ‘ ಎಂಬ ಶೀರ್ಷಿಕೆಯಡಿಯಲ್ಲಿ ಸಂಪಾದಕೀಯ ನುಡಿಗಳನ್ನು ಬರೆದಿರುತ್ತಾರೆ. ದಿವಾಣ ಭೀಮ ಭಟ್ ಜನ್ಮಶತಮಾನೋತ್ಸವದ ಸರಣಿ ಕಾರ್ಯಕ್ರಮಗಳು ನಡೆದು ಸಮಾರೋಪ ಸಮಾರಂಭದಂದು ‘ದಿವಾಣ ಸಂಪದ’ ಎಂಬ ಈ ಗ್ರಂಥ ಲೋಕಾರ್ಪಣೆಗೊಂಡಿತ್ತು. ಭಾಗ ಒಂದರಲ್ಲಿ ಶ್ರೀ ಪು. ಶ್ರೀನಿವಾಸ ಭಟ್ಟ ಮತ್ತು ಡಾ. ಪ್ರಭಾಕರ ಜೋಶಿ ಅವರ ಲೇಖನಗಳಿವೆ. ಭಾಗ ಎರಡರಲ್ಲಿ 41 ಮಂದಿ ಮಹನೀಯರುಗಳು ದಿವಾಣ ಭೀಮ ಭಟ್ಟರ ಬಗೆಗೆ ತಮ್ಮ ಅನಿಸಿಕೆಗಳನ್ನು ಲೇಖನ ರೂಪದಲ್ಲಿ ನೀಡಿರುತ್ತಾರೆ.
ಭಾಗ ಮೂರರಲ್ಲಿ ಕಲಾ ಸಂಬಂಧೀ ಒಂಭತ್ತು ಲೇಖನಗಳಿವೆ. ಬಳಿಕ ವೀರಾಂಜನೇಯ ಸ್ವಾಮಿ ಪ್ರತಿಷ್ಠಾನ, ಯಕ್ಷಕಲಾ ವಿಶ್ವಸ್ತ ಮಂಡಳಿ ಕೋಡಪದವು ಈ ಸಂಸ್ಥೆಯ ಸಂಕ್ಷಿಪ್ತ ಪರಿಚಯವಿದೆ. ಈ ಸಂಸ್ಥೆಯು 2001ರಿಂದ ತೊಡಗಿ 2010 ರ ವರೆಗೆ ದಿವಾಣ ಪ್ರಶಸ್ತಿಯನ್ನು ಕಲಾಸಾಧಕರಿಗೆ ನೀಡುತ್ತಾ ಬಂದಿತ್ತು. ಬಳಿಕ ದಿವಾಣ ಭೀಮ ಭಟ್ಟ ಜನ್ಮಶತಮಾನೋತ್ಸವ ಸರಣಿ ಕಾರ್ಯಕ್ರಮ, ಭೀಮ ಭಟ್ಟ ವಂಶವೃಕ್ಷ ಮತ್ತು ಶತಮಾನೋತ್ಸವ ಸಮಿತಿಯ ಬಗೆಗೆ ವಿವರಗಳನ್ನೂ ನೀಡಲಾಗಿದೆ. ದಿವಾಣ ಭೀಮ ಭಟ್ಟರ ಕುಟುಂಬ ಮತ್ತು ಕಲಾವ್ಯವಸಾಯಕ್ಕೆ ಸಂಬಂದಿಸಿದ ಮೂವತ್ತರಷ್ಟು ಚಿತ್ರಗಳನ್ನೂ ಕೊನೆಯಲ್ಲಿ ನೀಡಲಾಗಿದೆ. ಇದು ಒಟ್ಟು ಇನ್ನೂರು ಪುಟಗಳಿಂದ ಕೂಡಿದೆ. ವಿದ್ವಾಂಸರೂ ಕಲಾವಿದರೂ ಬರೆದಂತಹ ಲೇಖನಗಳನ್ನು ಹೊಂದಿ ಉತ್ತಮ ಮಾಹಿತಿಗಳನ್ನು ಒಳಗೊಂಡ ಪುಸ್ತಕ ಇದು.
ಇಂದು ಮುಂಜಾನೆ ಸ್ಯಾಂಡಲ್ ವುಡ್ ನಟಿ ಸಂಜನಾ ಗಿಲ್ರಾನಿ ಮನೆಗೆ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಸತತ ಮೂರು ಘಂಟೆಗಳ ಕಾಲ ಸಂಜನಾ ನಿವಾಸದಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು ನಂತರ ನಟಿಯನ್ನು ಬಂಧಿಸಿ ಸಿಸಿಬಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಇಂದು ಬೆಳಕು ಹರಿಯುವ ಮುನ್ನವೇ ಆರು ಅಧಿಕಾರಿಗಳ ತಂಡ ಮೂರು ಕಾರುಗಳಲ್ಲಿ ಸಂಜನಾ ವಾಸಿಸುತ್ತಿರುವ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಸಂಜನಾ ಆಪ್ತ ಎನ್ನಲಾದ ರಾಹುಲ್ ಎಂಬಾತ ಈಗಾಗಲೇ ಸಿಸಿಬಿ ವಶದಲ್ಲಿದ್ದು ಅವನನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ. ಅವನ ಹೇಳಿಕೆಯ ಆಧಾರದ ಮೇಲೆಯೇ ನಟಿ ಸಂಜನಾ ನಿವಾಸಕ್ಕೆ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದ್ದೆಗ ನಟಿ ಸಂಜನಾ ಸಿಸಿಬಿ ಅಧಿಕಾರಿಗಳ ವಶದಲ್ಲಿದ್ದಾರೆ.
ಕೊರೋನಾ ಪೀಡಿತರಾಗಿ ಗಂಭೀರ ಪರಿಸ್ಥಿತಿಯಲ್ಲಿ ಚೆನ್ನೈಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಅದ್ಭುತ ಸುಧಾರಣೆ ಕಂಡುಬಂದಿದೆ. ಅವರೀಗ ಕೊರೋನಾ ಮುಕ್ತರಾಗಿದ್ದಾರೆ. ಈ ಮಾಹಿತಿಯನ್ನು ಅವರ ಪುತ್ರ ಎಸ್. ಪಿ. ಚರಣ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆ ಕೊರೋನಾ ವರದಿಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದ್ದರೂ ಅವರ ಶ್ವಾಸಕೋಶ ಮತ್ತೆ ಮೊದಲಿನ ಸ್ಥಿತಿಗೆ ಬರುವ ವರೆಗೂ ಅವರು ತೀವ್ರ ನಿಗಾ ಘಟಕದಲ್ಲಿಯೇ ಚಿಕಿತ್ಸೆ ನೀಡಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅವರೀಗ ಎಲ್ಲರೊಂದಿಗೂ ಮಾತನಾಡಲು ಪ್ರಾರಂಭಿಸಿದ್ದಾರೆ. ಹಾಗೂ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಲೂ ತೊಡಗಿದ್ದಾರೆ. ಅವರು ಆರೋಗ್ಯವಂತರಾಗಲು ಪ್ರಾರ್ಥಿಸಿದ ಎಲ್ಲರಿಗೂ ಕುಟುಂಬ ಧನ್ಯವಾದಗಳನ್ನು ಅರ್ಪಿಸಿದೆ.
ತೆಲುಗು ಸಿನಿಮಾ ರಂಗದ ಜನಪ್ರಿಯ ನಟ ಜಯಪ್ರಕಾಶ ರೆಡ್ಡಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಹೃದಯಾಘಾತಕ್ಕೊಳಗಾದ ಅವರು ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಅವರ ಸಾವಿನ ಸುದ್ದಿ ತೆಲುಗು ಚಿತ್ರರಂಗ ಮತ್ತು ಅಭಿಮಾನಿಗಳಿಗೆ ತೀವ್ರ ಶೋಕವನ್ನುಂಟುಮಾಡಿದೆ. ಬ್ರಹ್ಮ ಪುತ್ರುಡು ಎಂಬ ಸಿನಿಮಾದಿಂದ ವೃತ್ತಿಜೀವನ ಆರಂಭಿಸಿದ ಅವರ ಈ ವರ್ಷದ ‘ಸರಿಲೇರು ನೀಕೆವ್ವಾರು’ ಕೊನೆಯ ಚಿತ್ರವಾಗಿತ್ತು.
ಕನ್ನಡ ಚಿತ್ರರಂಗಕ್ಕೆ ಕಾಡುತ್ತಿರುವ ಡ್ರಗ್ಸ್ ಭೂತ ಸದ್ಯಕ್ಕೆ ಬಿಡುವ ಹಾಗೆ ಗೋಚರಿಸುತ್ತಿಲ್ಲ. ನಿರ್ದೇಶಕ ಇಂದ್ರಜಿತ್ ಹಾಕಿದ ಬಾಂಬ್ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿರುವ ಹಾಗೆ ಕಾಣುತ್ತಿದೆ. ಒಂದರ ಹಿಂದೆ ಒಂದರಂತೆ ಪ್ರಕರಣಗಳು ವರದಿಯಾಗುತ್ತಾ ಇವೆ. ನಟಿ ರಾಗಿಣಿ ಪ್ರಕರಣದ ನಂತರ ಮತ್ತೊಂದು ಪ್ರಕರಣ ಬೆಳಕಿಗೆ ಬರುತ್ತಾ ಉಂಟು.
ಇಂದು ಮುಂಜಾನೆಯೇ ಸಿಸಿಬಿ ಅಧಿಕಾರಿಗಳು ಸ್ಯಾಂಡಲ್ ವುಡ್ ನಟಿ ಸಂಜನಾ ಗಿಲ್ರಾನಿ ಮನೆಗೆ ದಾಳಿ ನಡೆಸಿದ್ದಾರೆ. ಇಂದು ಬೆಳಕು ಹರಿಯುವ ಮುನ್ನವೇ ಆರು ಅಧಿಕಾರಿಗಳ ತಂಡ ಮೂರು ಕಾರುಗಳಲ್ಲಿ ಸಂಜನಾ ವಾಸಿಸುತ್ತಿರುವ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಸಂಜನಾ ಆಪ್ತ ಎನ್ನಲಾದ ರಾಹುಲ್ ಎಂಬಾತ ಈಗಾಗಲೇ ಸಿಸಿಬಿ ವಶದಲ್ಲಿದ್ದು ಅವನನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ. ಅವನ ಹೇಳಿಕೆಯ ಆಧಾರದ ಮೇಲೆಯೇ ನಟಿ ಸಂಜನಾ ನಿವಾಸಕ್ಕೆ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಸಂಜನಾ ನಿವಾಸದಲ್ಲಿ ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳು ಲಭ್ಯವಾದಲ್ಲಿ ನಟಿ ಸಂಜನಾ ಮೇಲೆ ಇದರ ಪರಿಣಾಮ ಆಗಲಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಾ ಇವೆ. ಏನೇ ಆಗಲಿ ಅಂತೂ ನಟಿ ಸಂಜನಾ ಅವರು ಬಂಧನದ ಭೀತಿಯನ್ನು ಎದುರಿಸುತ್ತಿದ್ದಾರೆಯೇ ಎಂಬುದು ಈಗ ನಟಿಯ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಿಟ್ಟೂರು ಶ್ರೀಧರ ಡಿ.ಎಸ್. ಅವರ ಹುಟ್ಟೂರು. ಧರೆಮನೆ ಎಂಬಲ್ಲಿ ಜನನ. ಯಕ್ಷಗಾನ ಕಲೆಯು ರಕ್ತಗತವಾಗಿಯೇ ಬಂದಿತ್ತು. ತೀರ್ಥರೂಪರಾದ ಶ್ರೀಪಾದಯ್ಯ ಅವರು ಯಕ್ಷಗಾನ ಕಲಾವಿದರೂ ಕೃಷಿಕರೂ ಆಗಿದ್ದರು. ಬಾಲ್ಯದಲ್ಲಿಯೇ ಯಕ್ಷಗಾನದ ಸಂಬಂಧವಿರಿಸಿಕೊಂಡೇ ಬೆಳೆದ ಶ್ರೀಧರ ಡಿ.ಎಸ್. ಅವರು ಓದಿದ್ದು ಹೆಬ್ಬಿಗ ಶಾಲೆಯಲ್ಲಿ ಮತ್ತು ಉಡುಪಿಯಲ್ಲಿ. ಉಡುಪಿಯಲ್ಲಿ ವಿದ್ವಾಂಸರ ಸತ್ ಚಿಂತನೆಗಳನ್ನು ಹೊಂದಿದ ಮಿತ್ರರ ಒಡನಾಟವೂ ದೊರಕಿತ್ತು. ಯಕ್ಷಗಾನ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ವೇಷಗಾರಿಕೆ, ತಾಳಮದ್ದಳೆಗಳಲ್ಲಿ ಭಾಗವಹಿಸುವುದರ ಜತೆಗೆ ಸಾಹಿತ್ಯ ಕ್ಷೇತ್ರದತ್ತ ಒಲವನ್ನೂ ತೋರಿದ್ದರು. ಪಿಯುಸಿ ಓದುತ್ತಿರುವಾಗಲೇ ವೀರ ಚಿತ್ರಧ್ವಜ ಎಂಬ ಪ್ರಸಂಗವನ್ನೂ ಕೆಳದಿ ಶಿವಪ್ಪ ನಾಯಕ, ಕೆಳದಿ ಚೆನ್ನಮ್ಮ, ಶ್ರೀ ರಂಗ ರಾಯಭಾರ ಎಂಬ ಪ್ರಸಂಗಗಳನ್ನೂ ರಚಿಸಿದ್ದರು. ಕೊರ್ಗಿ ಶ್ರೀ ಸೂರ್ಯನಾರಾಯಣ ಉಪಾಧ್ಯಾಯರ ಸಲಹೆ ಸೂಚನೆಯಂತೆ ಮತ್ತೆ ಪ್ರಸಂಗಾ ರಚನಾ ಕಾರ್ಯಕ್ಕೆ ತೊಡಗಿದ್ದರು. ಪದವಿ ಶಿಕ್ಷಣದ ಬಳಿಕ ಉಡುಪಿ ರಾಘವೇಂದ್ರ ಪುಸ್ತಕ ಭಂಡಾರದಲ್ಲಿ ಉದ್ಯೋಗ. ಜೊತೆಗೆ ಅಂಚೆ ತೆರಪಿನ ಶಿಕ್ಷಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ಬಳಿಕ ಕೆಮ್ಮಣ್ಣು ಮತ್ತು ಕೋಟ ವಿದ್ಯಾಸಂಸ್ಥೆಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ. ಈ ಸಂದರ್ಭ ಸಾಹಿತ್ಯ ಮತ್ತು ಯಕ್ಷಗಾನ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಬದುಕನ್ನೂ, ಬದುಕಿಗೊಂದು ಸಾಂಸ್ಕೃತಿಕ ವಲಯವನ್ನೂ ಉಡುಪಿಯ ಪರಿಸರವು ನಿರ್ಮಿಸಿತು ಎನ್ನುವುದು ಶ್ರೀಧರ ಡಿ.ಎಸ್. ಅವರ ಅಭಿಪ್ರಾಯ. 1981ರಲ್ಲಿ ಕಿನ್ನಿಗೋಳಿ ಪೊಂಪೈ ಕಾಲೇಜಿಗೆ ಪೂರ್ಣಕಾಲಿಕ ಉಪನ್ಯಾಸಕನಾಗಿ ಸೇರ್ಪಡೆ. ಪರಿಸರದ ಜನರು ಯಕ್ಷಗಾನಾಸಕ್ತರು. ಕೊರ್ಗಿ ವೆಂಕಟೇಶ ಉಪಾಧ್ಯಾಯ,ಛಂದೋಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿ, ಪು. ಶ್ರೀನಿವಾಸ ಭಟ್ಟ, ಮೊದಲಾದವರ ಒಡನಾಟವೂ ಆಗಿತ್ತು. ದರಿಂದ ಅನುಕೂಲವೇ ಆಗಿತ್ತು. ಸಾಹಿತ್ಯ ಸೇವೆಯ ಜೊತೆಗೆ ಕಲಾಸಂಘಟಕರಾಗಿಯೂ ಕಾಣಿಸಿಕೊಂಡರು. ೨೦೧೬ನೇ ಇಸವಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಕಾರ್ಯನಿರ್ವಸಿದ್ದರು. ಯಕ್ಷಗಾನ ಮತ್ತು ಇತರ ಪತ್ರಿಕೆಗಳಿಗೆ ಇವರು 475ಕ್ಕೂ ಮಿಕ್ಕಿ ಲೇಖನಗಳನ್ನು ಬರೆದಿರುತ್ತಾರೆ. ಯಕ್ಷಗಾನ ಕವಿಗಳ ಬಗ್ಗೆ ಬರೆದ ಲೇಖನಗಳು 25. ಅಂಕಣಗಳಲ್ಲೂ ಇವರು ಬರಹಗಾರರು. ಆಟದಲ್ಲಿ ಅವಾಂತರ,ಹೀಗೂ ಆಗುತ್ತೆ, ತಾಳಮದ್ದಳೆಯಲ್ಲಿ ತಲೆಹರಟೆ ಎಂಬ ಶೀರ್ಷಿಕೆಯಡಿಯಲ್ಲಿ ಲೇಖನಗಳು ಪ್ರಕಟವಾಗಿವೆ. ಜಡಭರತ ಎಂಬ ಪೌರಾಣಿಕ ಕಾದಂಬರಿ, ಗೋವಿಪ್ರ ಎಂಬ ಕಿರುಕಾದಂಬರಿ, ಅಸುರಗುರು ಎಂಬ ಬೃಹತ್ ಕಾದಂಬರಿ ಬದುಕು ಜಟಕಾ ಬಂಡಿ ಎಂಬ ಹಾಸ್ಯ ಲೇಖನಗಳ ಸಂಕಲನ, ತಾಳಮದ್ದಳೆಯ ಕಥಾ ಸರಣಿಗೆ ಪೃಥುಯಜ್ಞ ಮತ್ತು ನೈಮಿಷಾರಣ್ಯ ಎಂಬ ಪ್ರಸಂಗಗಳನ್ನೂ ರಚಿಸಿದ್ದಾರೆ.
ಇವರು ರಚಿಸಿದ ಪ್ರಸಂಗಗಳ ಸಂಪುಟವೇ ‘ಯಕ್ಷಗಾನ ಪ್ರಸಂಗ ಮಾಲಿಕಾ’. ಈ ಕೃತಿಗೆ ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಶ್ರೇಷ್ಠ ಪುಸ್ತಕ ಪ್ರಶಸ್ತಿಯು ಲಭಿಸಿತ್ತು. ಯಕ್ಷಗಾನ ಕೇಂದ್ರ ಉಡುಪಿ ಎಂಬ ಘನ ಸಂಸ್ಥೆಯು ಈ ಪುಸ್ತಕವನ್ನು ಪ್ರಕಟಿಸಿತ್ತು. ಪ್ರಕಾಶಕರಾಗಿ ಶ್ರೀ ಹೆರಂಜೆ ಕೃಷ್ಣ ಭಟ್ಟರು ನಲ್ನುಡಿಗಳನ್ನು ಬರೆದಿದ್ದು ವಿದ್ವಾಂಸರಾದ ಪಾದೆಕಲ್ಲು ವಿಷ್ಣು ಭಟ್ಟರು ಮುನ್ನುಡಿ ಬರಹದಲ್ಲಿ ಶ್ರೀಧರ ಡಿ.ಎಸ್. ಅವರ ಪ್ರಸಂಗ ರಚನೆಯಲ್ಲಿ ಕಂಡುಬರುವ ವಿಶೇಷತೆಯನ್ನೂ, ಅದರಿಂದಾಗುವ ಅನುಕೂಲತೆಗಳನ್ನೂ ತಿಳಿಸಿದ್ದಾರೆ. ಶ್ರೀಧರ ಡಿ.ಎಸ್. ಅವರು ಕೃತಿ ಸಂಪುಟವನ್ನು ಆತ್ಮೀಯರೂ ತನ್ನ ನಾಲ್ಕು ದಶಕಗಳ ಒಡನಾಡಿಯಾಗಿದ್ದ ದಿ। ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರಿಗೆ ಅರ್ಪಿಸಿದ್ದು ಅಭಿನಂದನೀಯ. ಇದು ಕಬಂಧ ಮೋಕ್ಷ, ಸುದ್ಯುಮ್ನ, ಆದಿನಾರಾಯಣ ದರ್ಶನ, ಕುವಲಯಾಶ್ವ, ಗರುಡಂಪ್ರತಾಪ, ಬಾಲಭಾರತ, ಸತ್ವಶೈಥಿಲ್ಯ, ಮಹಾಪ್ರಸ್ಥಾನ, ಪರೀಕ್ಷಿತ – ಆಸ್ತೀಕ ಜನ್ಮ, ಜನಮೇಜಯ, ಶುಕ್ರ ಸಂಜೀವಿನಿ, ಅಗಸ್ತ್ಯ, ಜಡಭರತ ಎಂಬ ಹದಿಮೂರು ಪ್ರಸಂಗಗಳನ್ನು ಒಳಗೊಂಡ ಸಂಪುಟ. ಇವುಗಳಲ್ಲಿ ಮಹಾಪ್ರಸ್ಥಾನ ಎಂಬ ಪ್ರಸಂಗದ ಒಂದು ಭಾಗವು ಮಂಗಳೂರು ವಿಶ್ವವಿದ್ಯಾನಿಲಯದ ಬಿ. ಕಾಂ. ಎರಡನೇ ವರ್ಷದ ಕನ್ನಡ ಪಠ್ಯವಾಗಿತ್ತು ಎಂಬುದು ಉಲ್ಲೇಖನೀಯ. ಮುನ್ನುಡಿಯಲ್ಲಿ ಶ್ರೀ ಪಾದೆಕಲ್ಲು ವಿಷ್ಣು ಭಟ್ಟರು ಶ್ರೀಧರ ಡಿ.ಎಸ್. ಅವರ ಪದ್ಯ ರಚನಾ ಕೌಶಲದ ಬಗ್ಗೆ ತಿಳಿಸುತ್ತಾ ‘ಯಕ್ಷಗಾನ ಛಂದೋಮ್ಬುಧಿಯ ಲೇಖಕ ಡಾ. ಎನ್ . ನಾರಾಯಣ ಶೆಟ್ಟಿಯವರ ಪ್ರಭಾವ ಕಾಣಿಸುತ್ತಿದೆ ಎಂದಿದ್ದಾರೆ. ಯಕ್ಷಗಾನ ಛಂದಸ್ಸಿನ ಹಿರಿಯ ವಿದ್ವಾಂಸರಾದ ಡಾ. ಎನ್ . ನಾರಾಯಣ ಶೆಟ್ಟಿ, ಶ್ರೀ ಕ. ಪು. ಸೀತಾರಾಮ ಕೆದಿಲಾಯರ ಗ್ರಂಥಗಳ ಜೊತೆಗೆ ಈ ವರೆಗೆ ಪ್ರಕಟವಾದ ನೂರಾರು ಯಕ್ಷಕಾವ್ಯಗಳು ನನಗೆ ಮಾರ್ಗದರ್ಶಿಗಳು ಎಂಬುದನ್ನು ಲೇಖಕರಾದ ಶ್ರೀಧರ ಡಿ.ಎಸ್. ‘ಅರಿಕೆಯೊಂದುಂಟು’ ತಲೆಬರಹದಡಿಯಲ್ಲಿ ಬರೆದು ಗೌರವವನ್ನು ಸೂಚಿಸಿದ್ದಾರೆ. ತನ್ನ ಕಲಾಶಕ್ತಿಗೆ ನೀರುಣಿಸಿ ಪ್ರೋತ್ಸಾಹಿಸಿದ ವಿದ್ವಾಂಸರಿಗೂ ಮಿತ್ರರಿಗೂ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ. ಎಲ್ಲಾ ಪ್ರಸಂಗಗಳ ಕಥಾಮೂಲ ಮತ್ತು ಆಶಯಗಳನ್ನು ನೀಡಿದ್ದು ಅಭಿನಂದನಾರ್ಹ. ಓದುಗರಿಗೆ, ಕಲಾವಿದರಿಗೆ ಇದರಿಂದ ತುಂಬಾ ಅನುಕೂಲವಾದೀತು. ಪ್ರಸಂಗಮಾಲಿಕಾ ಸಂಪುಟದ ಕೊನೆಯಲ್ಲಿ ಅನುಭಂದ ಒಂದು, ಎರಡು, ಮೂರು ಎಂಬ ಶೀರ್ಷಿಕೆಗಳಡಿಯಲ್ಲಿ ಪ್ರೊ| ಎಂ. ರಾಜಗೋಪಾಲಾಚಾರ್ಯ, ಉದ್ಯಾವರ ಶ್ರೀ ಮಾಧವ ಆಚಾರ್ಯ, ಶ್ರೀ ಗುರುರಾಜ ಮಾರ್ಪಳ್ಳಿ ಇವರುಗಳ ಶ್ರೀಧರ ಡಿ.ಎಸ್. ಇವರ ಬಾಲಭಾರತ, ಶುಕ್ರಸಂಜೀವಿನಿ ಪ್ರಸಂಗಗಳಿಗೆ ಮುನ್ನುಡಿ ರೂಪವಾದ ಹಾರೈಕೆಗಳನ್ನು ಓದುಗರು ಗಮನಿಸಬಹುದಾಗಿದೆ. ಈ ಪ್ರಸಂಗಮಾಲಿಕೆಯು ಒಟ್ಟು ೩೧೨ ಪುಟಗಳಿಂದ ಕೂಡಿದ್ದು ೨೦೧೧ನೇ ಇಸವಿಯಲ್ಲಿ ಪ್ರಕಟವಾಗಿತ್ತು. ಶ್ರೀಧರ ಡಿ.ಎಸ್. ಅವರು ರಚಿಸಿದ ಸಾಮ್ರಾಟ್ ಮರುತ್ತ ಎಂಬ ಪ್ರಸಂಗದಲ್ಲಿ ವೇಷ ಮಾಡುವ ಅವಕಾಶವೂ ನನಗೆ ಸಿಕ್ಕಿದ್ದು ಒಳ್ಳೆಯ ಅನುಭವ ಮತ್ತು ಭಾಗ್ಯವೆಂದು ಭಾವಿಸುತ್ತೇನೆ. ಈ ಪ್ರಸಂಗಮಾಲಿಕಾ ಪುಸ್ತಕದಲ್ಲಿರುವ ಎಲ್ಲಾ ಪ್ರಸಂಗಗಳೂ ಸದಾ ಪ್ರದಶನಗೊಳ್ಳುತ್ತಾ ಇರಲಿ ಎಂಬ ಸದಾಶಯಗಳು.
ವಿದ್ವಾನ್ ಡಿ. ವಿ. ಹೊಳ್ಳ, ಕುಂದಾಪುರ ಇವರು ರಚಿಸಿದ ಸಂಜ್ಞಾರ್ಥ ತತ್ವಕೋಶವು ಸಾಹಿತ್ಯ ಕ್ಷೇತ್ರಕ್ಕೊಂದು ಅತ್ಯುತ್ತಮ ಕೊಡುಗೆ. ಇದು ಈ ಪುಸ್ತಕದ ಮೂರನೆಯ ಮುದ್ರಣ. ವಿಟ್ಲದ ಸದಭಿರುಚಿ ಪ್ರಕಾಶನವು ಈ ಪುಸ್ತಕದ ಪ್ರಕಾಶಕರು. ಮೊದಲು ಮುದ್ರಿತವಾದದ್ದು 1953ರಲ್ಲಿ. ದ್ವಿತೀಯ ಮುದ್ರಣ 1974 ರಲ್ಲಿ ನಡೆದಿತ್ತು. ಮೊದಲ ಮುದ್ರಣದ ಪುಸ್ತಕಕ್ಕೆ ಘನ ವಿದ್ವಾಂಸರಾಗಿದ್ದ ಮಂಜೇಶ್ವರ ಗೋವಿಂದ ಪೈಗಳು ಮುನ್ನುಡಿ ಬರೆದಿದ್ದರು. 2016 ರಲ್ಲಿ ನಡೆದ ಮೂರನೆಯ ಮುದ್ರಣದ ಪ್ರಕಾಶಕರು ಶ್ರೀಮತಿ ಎಸ್ . ಎನ್ . ಭಟ್ಟ, ಸದಭಿರುಚಿ ಪ್ರಕಾಶನ, ವಿಟ್ಲ ಇವರು. ಈ ಪುಸ್ತಕದ ಅಧಿಕೃತ ಮಾರಾಟಗಾರರು ಸದಭಿರುಚಿಯ ಶ್ರೀ ಶಂಕರ ಕುಳಮರ್ವ. ಇವರ ಸಂಪರ್ಕ ಸಂಖ್ಯೆ 9535623603. ಈ ಮೂರನೆಯ ಮುದ್ರಣಕ್ಕೆ ಶ್ರೀ ಎಂ. ಅನಂತಕೃಷ್ಣ ಹೆಬ್ಬಾರ್ ಅವರು ಮುನ್ನುಡಿಯನ್ನು ಬರೆದಿರುತ್ತಾರೆ. ಸದಭಿರುಚಿ ಪ್ರಕಾಶನದ ವತಿಯಿಂದ ಶ್ರೀ ಶಂಕರ ಕುಳಮರ್ವ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಹಕರಿಸಿದ ಸರ್ವರಿಗೂ ಕೃತಜ್ಞರಾಗಿದ್ದಾರೆ. ಕೃತಿ ಕರ್ತೃ ಪರಿಚಯ ಶೀರ್ಷಿಕೆಯಡಿಯಲ್ಲಿ ಲೇಖಕ ದೇಲಂಪಾಡಿ ವಿಷ್ಣು ಹೊಳ್ಳರ (ಡಿ. ವಿ. ಹೊಳ್ಳ) ಪರಿಚಯವನ್ನು ನೀಡಿದ್ದು, ಅವರು ರಚಿಸಿದ ಯಕ್ಷಗಾನ ಪ್ರಸಂಗಗಳ ಬಗ್ಗೆಯೂ ತಿಳಿಸಿದ್ದು ಶ್ಲ್ಯಾಘನೀಯ. ಕೃತಿ ಕರ್ತೃ ಪರಿಚಯ ಮಾಡಿದವರು ಡಾ। ಉಪ್ಪಂಗಳ ಶಂಕರನಾರಾಯಣ ಭಟ್ಟರು. ‘ನನ್ನ ಚಿಕ್ಕಪ್ಪ’ ಎಂಬ ತಲೆಬರಹದಡಿಯಲ್ಲಿ ಖ್ಯಾತ ಭಾಗವತರಾದ ಶ್ರೀ ಪುತ್ತಿಗೆ ರಘುರಾಮ ಹೊಳ್ಳರು ತಮ್ಮ ಅನಿಸಿಕೆಗಳನ್ನು ಅಕ್ಷರರೂಪಕ್ಕಿಳಿಸಿದ್ದಾರೆ. ಅಲ್ಲದೆ ಮೊದಲ ಮುದ್ರಣಕ್ಕೆ ಮಂಜೇಶ್ವರ ಗೋವಿಂದ ಪೈಗಳು ಬರೆದ ಮುನ್ನುಡಿ ಲೇಖನವನ್ನೂ, ಎರಡನೇ ಮುದ್ರಣದ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾಗಿದ್ದ ಶ್ರೀ ಪಿ. ರಂಗನಾಥ ಶೆಣೈ ಅವರ ಶುಭಹಾರೈಕೆ ಲೇಖನವನ್ನೂ ಕೃತಿ ಕರ್ತರ ಪರಿಚಯ ಎಂಬ ಶೀರ್ಷಿಕೆಯಡಿಯಲ್ಲಿ ಖ್ಯಾತ ಕವಿ ಕಯ್ಯಾರ ಕಿಂಞಣ್ಣ ರೈಗಳು ಬರೆದ ಲೇಖನವನ್ನೂ, ವೈ ಸೀತಾರಾಮ ಭಟ್ಟರ ಲೇಖನವನ್ನೂ ಈ ಪುಸ್ತಕದಲ್ಲಿ ನಮಗೆ ಓದಬಹುದು. ಕಡೆಂಗೋಡ್ಲು ಶಂಕರ ಭಟ್ಟ , ಎಂ. ಆರ್. ಶ್ರೀನಿವಾಸ ಮೂರ್ತಿ ಮತ್ತು ಸಿ.ಕೆ. ನಾಗರಾಜ ರಾಯರ ಶುಭ ಹಾರೈಕೆ ರೂಪದ ಬರಹಗಳೂ ಇವೆ. ಶ್ರೀ ಡಿ. ವಿ. ಹೊಳ್ಳರ ಸಂಜ್ಞಾರ್ಥ ತತ್ವಕೋಶ ಹೊತ್ತಗೆಯು ಒಟ್ಟು 238 ಪುಟಗಳಿಂದ ಕೂಡಿದ್ದು ಬಹು ಉಪಯೋಗೀ ಪುಸ್ತಕ. ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಅತ್ಯುತ್ತಮ ಕೊಡುಗೆ.
ಚಿಕ್ಕಂದಿನಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೋಡಲು ಕೆಲವು ಮೈಲುಗಳಷ್ಟು ನಡೆದುಕೊಂಡು ಹೋಗುವ ಉತ್ಸಾಹವಿತ್ತು. ಆದರೆ ಈಗ ಆ ಉತ್ಸಾಹ ಕಡಿಮೆ ಆಗುತ್ತಾ ಬಂದಿದೆ.
ಕೆಲವೊಂದು ಪಾತ್ರಗಳು ಮತ್ತು ಕಲಾವಿದರು ನಮ್ಮಲ್ಲಿ ಗಾಢ ಪ್ರಭಾವ ಬೀರಿದ್ದರು. ಅದರಲ್ಲಿ ನಯನ ಕುಮಾರ್ ಅವರ ಬಾಹುಕ ಪಾತ್ರವೂ ಒಂದು. ಸಾಟಿ ಇಲ್ಲದ ಬಾಹುಕನ ಪಾತ್ರವಾಗಿತ್ತದು.
ಕೆ. ಗೋವಿಂದ ಭಟ್ ಮತ್ತು ನಯನ ಕುಮಾರ್ – ಋತುಪರ್ಣ ಮತ್ತು ಬಾಹುಕ
ಈಗೆಲ್ಲಾ ಎಲ್ಲ ಪಾತ್ರಗಳೂ ಅದರ ದೃಶ್ಯಾವಳಿಗಳೂ ಅಂತರ್ಜಾಲದಲ್ಲಿ ರಾರಾಜಿಸುತ್ತಿವೆ. ಆದರೆ ನಯನ ಕುಮಾರರ ಯಾವುದೇ ಪಾತ್ರಗಳ ವೀಡಿಯೋಗಳು ನಮಗೆಲ್ಲೂ ಕಾಣಸಿಕ್ಕುವುದಿಲ್ಲ. ಅವರ ಬಾಹುಕನ ಪಾತ್ರದ ವೀಡಿಯೊ ಅಂತರ್ಜಾಲದಲ್ಲಿ ಸಿಗುವುದೋ ಎಂದು ಒಂದೆರಡು ವರ್ಷಗಳ ಹಿಂದೆಯೇ ಹುಡುಕಾಡಿದ್ದೆ.
ನಾನು ತಿಳಿದ ಮಟ್ಟಿಗೆ ನಯನಕುಮಾರರ ಬಾಹುಕನ ಪಾತ್ರವನ್ನು ಮೀರಿಸುವ ಮತ್ತೊಬ್ಬ ಪಾತ್ರಧಾರಿ ಇಲ್ಲ ಎಂದೇ ನನ್ನ ಅನಿಸಿಕೆ. ಆದರೆ ನಾನು ಬಹಳ ಹಿಂದಕ್ಕೆ ಹೋಗಲಾರೆ. ಅದು ನನ್ನ ಅರಿವಿನ ವ್ಯಾಪ್ತಿಗೆ ಮೀರಿದ್ದು.
ಈಚೆಗೆ ಒಂದು ವರ್ಷ ಅವರ ಬಾಹುಕ ಪಾತ್ರದ ಸಣ್ಣ ದೃಶ್ಯಾವಳಿಯೊಂದು ಯು ಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಆಗಿತ್ತು. ಅಪ್ರಯತ್ನವಾಗಿ ಅದು ನನ್ನ ಅರಿವಿಗೆ ಬಂದಿತ್ತು. ನಯನ ಕುಮಾರರ ಅಳಿಯ ಶಿವಕೃಷ್ಣ ನೀಡುವಜೆ ಅಪ್ಲೋಡ್ ಮಾಡಿದ ದೃಶ್ಯ ಅದು. ಸುಮಾರು ಮೂರು ನಿಮಿಷಗಳ ವೀಡಿಯೊ ಅದಾದರೂ ಅವರಲ್ಲಿ ಇದರ ಮುಂದುವರಿದ ಭಾಗವೂ ಇರಬಹುದು ಎಂದು ಭಾವಿಸುತ್ತೇನೆ.
ಬಾಹುಕನ ವಕ್ರತೆಯನ್ನು ಮುಖದಲ್ಲಿ ಕೇವಲ ಬಣ್ಣಗಳಿಂದಲೇ ಚಿತ್ರಿಸುವ ಪರಿ ಅನನ್ಯವಾದುದು. ಈಗಿನ ವ್ಯವಸ್ಥೆಯಂತೆ ಮುಖಕ್ಕೆ ಕೃತಕ ಜೋಡಣೆಗಳನ್ನು(Extra Fittings) ಹೆಚ್ಚಾಗಿ ಅಂಟಿಸದೆ ಕೇವಲ ಬಣ್ಣಗಾರಿಕೆಯಿಂದಲೇ ಅದನ್ನು ಪ್ರಕಟಪಡಿಸುವ ಅವರ ಕುಶಲತೆಗೆ ಯಾರಾದರೂ ಮಾರುಹೋಗಲೇಬೇಕು. ಶಿವಕೃಷ್ಣ ನೀಡುವಜೆ ಅವರ ವೀಡಿಯೋ ಲಿಂಕ್ ಕೆಳಗಡೆ ಇದೆ. ನೋಡಿ ಆನಂದಿಸಿ.
ನಿನ್ನೆ ರಾತ್ರಿ ಭಗವಂತನಲ್ಲಿ ಐಕ್ಯಗೊಂಡ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳ ಸಮಾಜಮುಖಿ ಕಾರ್ಯಗಳನ್ನು ಎಷ್ಟು ಸ್ಮರಿಸಿದರೂ ಅದು ಕಡಿಮೆಯೇ.
ಕಲೆಗೆ ಅವರ ಪ್ರೋತ್ಸಾಹ. ಶ್ರೀ ಮಠದಲ್ಲಿ ಸದಾಕಾಲವೂ ನಡೆಯುತ್ತಿದ್ದ ಸಂಗೀತ, ನೃತ್ಯ, ಯಕ್ಷಗಾನವೇ ಮೊದಲಾದ ಕಲಾಗೋಷ್ಠಿಗಳು, ಇವುಗಳೆಲ್ಲಾ ಅಭಿಮಾನಿಗಳ ಮನಸ್ಸಿನಲ್ಲಿ ಹಚ್ಚಹಸಿರಾಗಿ ಸದಾಕಾಲವೂ ನೆನಪಿನಲ್ಲುಳಿಯುತ್ತವೆ.
ಯಕ್ಷಗಾನಕ್ಕೆ ಅವರ ನಿರಂತರ ಪ್ರೋತ್ಸಾಹವಿತ್ತು. ಸದಾ ಮನಸ್ಸಿನಲ್ಲಿ ಯಕ್ಷಗಾನ ಕಲೆಯ ಏಳಿಗೆಗಾಗಿಯೇ ಯೋಚಿಸುತ್ತಿದ್ದ ಸ್ವಾಮೀಜಿಗಳು ಅದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದರು.
ಶ್ರೀ ದೇವರ ಸನ್ನಿಧಿಯಲ್ಲಿ ಸೇವಾ ಪ್ರಯುಕ್ತ ಅವರ ಒಂದು ಹಾಡುಗಾರಿಕೆಯ ಯು ಟ್ಯೂಬ್ ವೀಡಿಯೋ ಇಲ್ಲಿದೆ. ವೀಡಿಯೋ ಚಿತ್ರೀಕರಿಸಿ ಯು ಟ್ಯೂಬ್ ಗೆ ಅಪ್ಲೋಡ್ ಮಾಡಿದವರು ಉಮಾ ಆರ್.ಕೆ ಭಟ್ ಚಿತ್ರಮೂಲ