Friday, August 28, 2026
Home Blog Page 388

ಪಿ. ಮುರಲೀಧರ ಆಚಾರ್ಯ ನಿಧನ

ಪಿ. ಮುರಲೀಧರ ಆಚಾರ್ಯ ನಿಧನ
ಸಿಂಡಿಕೇಟ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಮೆನೇಜರ್ ಆಗಿ ನಿವೃತ್ತರಾಗಿದ್ದ ಪುತ್ತೂರು ಮುರಲೀಧರ ಆಚಾರ್ಯ (77 ವರ್ಷ) ನಿನ್ನೆ 08.10.2020ರಂದು ನಿಧನರಾದರು. ಪತ್ನಿ, ಈರ್ವರು ಪುತ್ರರು, ಓರ್ವ ಪುತ್ರಿಯನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಉಡುಪಿಯ ಯಕ್ಷಗಾನ ಕಲಾರಂಗದ ಆಜೀವ ಪೋಷಕ ಸದಸ್ಯರಾಗಿದ್ದರು.ಕಲಾ ಪ್ರೇಮಿಯಾದ ಆಚಾರ್ಯರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷರಾದ ಎಂ.ಗಂಗಾಧರ ರಾವ್ ಹಾಗು ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಅರುವ ಕೊರಗಪ್ಪ ಶೆಟ್ಟಿ (Aruva Koragappa Shetty)

ಅರುವ ಕೊರಗಪ್ಪ ಶೆಟ್ಟಿಯವರ ಜೀವನ ಚರಿತ್ರೆ 

ಹೆಸರು: ಶ್ರೀ ಅರುವ ಕೊರಗಪ್ಪ ಶೆಟ್ಟಿ ತಂದೆ:  ದಿ| ಸುಬ್ಬಯ್ಯ ಶೆಟ್ಟಿ ತಾಯಿ:  ದಿ| ಶಾಂತಮ್ಮ ಶೆಟ್ಟಿ ಪತ್ನಿ:  ಶ್ರೀಮತಿ ಮಹಾಲಕ್ಷ್ಮಿ ಮಕ್ಕಳು: ದೇವಿಪ್ರಸಾದ್ ಮತ್ತು ಅರ್ಚನಾ. 

ಅರುವ ಕೊರಗಪ್ಪ ಶೆಟ್ಟಿಯವರಜನನ: 1940 ರಲ್ಲಿ ವಯಸ್ಸು: 80 ವರ್ಷಗಳು ವೃತ್ತಿ: ಯಕ್ಷಗಾನ ಕಲಾವಿದ ಮತ್ತು ಕೃಷಿ. ಕಲಾವಿದರಾಗಿ ಅನುಭವ : ಕಟೀಲು ಮೇಳದಲ್ಲಿ 3 ವರ್ಷಗಳು, ಕುತ್ಯಾಳ ಮೇಳ- 2ವರ್ಷಗಳು, ಕೂಡ್ಲು ಮೇಳ- 2 ವರ್ಷ, ಕುಂಡಾವು ಮೇಳ- 2 ವರ್ಷ, ಕರ್ನಾಟಕ ಮೇಳ- 31 ವರ್ಷ, ಮಂಗಳಾದೇವಿ ಮೇಳ- 12 ವರ್ಷ ಎಡನೀರು ಮೇಳ- 1 ವರ್ಷ, ಕದ್ರಿ ಮೇಳ- 2ವರ್ಷ, ಬಪ್ಪನಾಡು ಹಾಗೂ ಇತರ- 8 ವರ್ಷಗಳು 

ಒಟ್ಟು ಕಲಾಸೇವೆ: 63 ವರ್ಷಗಳು. ಸನ್ಮಾನ ಪ್ರಶಸ್ತಿಗಳು: ಒಟ್ಟು 400ಕ್ಕಿಂತಲೂ ಅಧಿಕ ಸನ್ಮಾನಗಳನ್ನು ಪಡೆದ ಹೆಗ್ಗಳಿಕೆ ಇವರಿಗಿದೆ. ಕರ್ನಾಟಕ ರಾಜ್ಯ ಪ್ರಶಸ್ತಿ, ಪೇಜಾವರ ಪ್ರಶಸ್ತಿ, ಎಡನೀರು ಪ್ರಶಸ್ತಿ, ಒಡಿಯೂರು ಪ್ರಶಸ್ತಿ, ಮಣಿಲ ಪ್ರಶಸ್ತಿ, ರೋಟರಿ ಪ್ರಶಸ್ತಿ, ಲಯನ್ಸ್ ಪ್ರಶಸ್ತಿ ಮೊದಲಾದುವುಗಳು.  ಬಿರುದು ಬಾವಲಿಗಳು: ರಂಗಸ್ಥಳದ ರಾಜ, ಅಭಿನಯ ಭಾರ್ಗವ, ರಂಗಶಿಲ್ಪಿ ಮೊದಲಾದುವುಗಳು.  ನೆನಪಿಡುವ ಘಟನೆ ನಡೆದದ್ದು: ದೇರಳಕಟ್ಟೆಯಲ್ಲಿ ‘ದ್ರೌಪದೀ ವಸ್ತ್ರಾಪಹಾರ’ ಆಟದ ಸಂದರ್ಭದಲ್ಲಿ ದ್ರೌಪದಿಯ ಸೀರೆಯನ್ನು ಸೆಳೆಯುವ ಸಂದರ್ಭದಲ್ಲಿ ಮುದುಕಿಯೊಬ್ಬಳು ಚೂರಿಯನ್ನು ತೆಗೆದು ರಂಗಸ್ಥಳದತ್ತ ಎಸೆದಳು. ಇದು ಅರುವ ಕೊರಗಪ್ಪ ಶೆಟ್ಟಿಯವರ  ಪಾತ್ರಚಿತ್ರಣದ ನೈಜತೆಯನ್ನು ಪ್ರತಿಬಿಂಬಿಸಿದ ಘಟನೆ.  ವಿಶಿಷ್ಟ ಕಾರ್ಯಕ್ರಮ: ಅರುವ ಕೊರಗಪ್ಪ ಶೆಟ್ಟಿಯವರ ದುಶ್ಶಾಸನ ಪಾತ್ರ ಅವರ ಮಾಸ್ಟರ್ ಪೀಸ್. ಅವರು ದುಶ್ಶಾಸನ ಪಾತ್ರ ಮಾಡುತ್ತಾ 50 ವರ್ಷಗಳನ್ನು ಪೂರೈಸಿದಾಗ ದುಶ್ಶಾಸನ – 50 ಎಂಬ ಕಾರ್ಯಕ್ರಮ ನಡೆಯಿತಂತೆ. 

ಅರುವ ಕೊರಗಪ್ಪ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮತ್ತು ಸಮಾಜಸೇವೆ : ಪ್ರತಿಷ್ಠಾನದಿಂದ ತುಂಬಾ ಜನರು ಪ್ರಯೋಜನ ಪಡೆದಿದ್ದಾರೆ. ವಿವಾಹಯೋಗ್ಯರಾದ ಸುಮಾರು 75 ಹೆಣ್ಣುಮಕ್ಕಳ ವಿವಾಹಕ್ಕೆ ಧನಸಹಾಯ ಮಾಡಿದ್ದಾರೆ. ಸುಮಾರು 75 ಕಲಾವಿದರಿಗೆ ನಿಧಿಸಹಿತ ಸನ್ಮಾನ ಮಾಡಿದ್ದಾರೆ. ಸುಮಾರು ಆರೇಳು ಅಶಕ್ತ ಕಲಾವಿದರಿಗೆ ನಿಧಿ ಸಮರ್ಪಿಸಿದ್ದಾರೆ. ಹಲವಾರು ಮಕ್ಕಳಿಗೆ ವಿದ್ಯಾರ್ಥಿವೇತನವನ್ನೂ ನೀಡುತ್ತಿದ್ದಾರೆ. 

ಉಬರಡ್ಕ ಉಮೇಶ ಶೆಟ್ಟಿಯವರಿಗೆ ಸೀತಾನದಿ ಪ್ರಶಸ್ತಿ (Seethanadi Award to Ubaradka Umesha Shetty)

0

ಪ್ರಸಿದ್ಧ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ, ಶಿಕ್ಷಕ, ಪ್ರಸಂಗಕರ್ತ, ಯಕ್ಷಗಾನದ ದಂತಕತೆ ದಿವಂಗತ ಸೀತಾನದಿ ಗಣಪಯ್ಯ ಶೆಟ್ಟಿಯವರ ಸ್ಮರಣಾರ್ಥ ನೀಡುತ್ತಿರುವ ‘ಸೀತಾನದಿ’ ಪ್ರಶಸ್ತಿಯನ್ನು ಈ ವರ್ಷ ಖ್ಯಾತ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ ಶೆಟ್ಟಿಯವರಿಗೆ ನೀಡಲಾಗಿದೆ.  ಸೀತಾನದಿ ಗಣಪಯ್ಯ ಶೆಟ್ಟಿಯವರ ಸ್ಮರಣಾರ್ಥ ನೀಡುತ್ತಿರುವ 33ನೇ ಪ್ರಶಸ್ತಿ ಇದಾಗಿದೆ. ಮತ್ತು 2020ನೇ ಸಾಲಿನಲ್ಲಿ ಈ ಪ್ರಶಸ್ತಿಯನ್ನು ಪಡೆಯುವ ಭಾಗ್ಯ ಉಬರಡ್ಕ ಉಮೇಶ ಶೆಟ್ಟಿಯವರದಾಗಿದೆ. ಸಂಭಾವಿತ ಕಲಾವಿದ  ಉಬರಡ್ಕ ಉಮೇಶ ಶೆಟ್ಟಿ  ಸದಾ ನಗುಮುಖ, ವಿನಯಶೀಲತೆ, ನಯವಿನಯಗಳ ಅಪರೂಪದ ವ್ಯಕ್ತಿತ್ವಕ್ಕೆ ಒಂದು ನಿದರ್ಶನ. 

ತಂದೆ : ಶ್ರೀ ಕಿಟ್ಟಣ್ಣ ಶೆಟ್ಟಿ
ತಾಯಿ : ಶ್ರೀಮತಿ ಯಮುನಾ
ಜನನ : 16-06-1958 (ಒಟ್ಟು ಏಳು ಮಂದಿ ಸಹೋದರ ಸಹೋದರಿಯರು)
ಪತ್ನಿ : ಶ್ರೀಮತಿ ಉಷಾ ಉಮೇಶ ಶೆಟ್ಟಿ (ಸರಕಾರಿ ಶಾಲೆಯಲ್ಲಿ ಅಧ್ಯಾಪಿಕೆ)
ಮಕ್ಕಳು : ಅವಿನಾಶ್ ಉಬರಡ್ಕ ಮತ್ತು ಆದರ್ಶ್ ಉಬರಡ್ಕ. ಅವಿನಾಶ್ ಎಂ.ಎಸ್.ಸಿ., ಎಂ.ಬಿ.ಎ. ಪದವಿ ಪಡೆದು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಸೊಸೆ ಅಕ್ಷತಾ. ಆದರ್ಶ್ ಉಬರಡ್ಕ ಎಂ.ಕಾಂ. ಪದವೀಧರ.
ಗುರುಗಳಾಗಿ : ಉಮೇಶ ಶೆಟ್ಟಿಯವರು ಯಕ್ಷಗಾನ ಗುರುಗಳಾಗಿ ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಗಳು ಹಾಗೂ ವಿವಿದೆಡೆಗಳಲ್ಲಿ ಯಕ್ಷಗಾನ ತರಗತಿಗಳನ್ನು ನಡೆಸಿ ಅನೇಕ ಮಂದಿ ಶಿಷ್ಯರನ್ನು ತಯಾರಿ ಮಾಡಿದ್ದಾರೆ. 16-06-1958ರಲ್ಲಿ ಜನಿಸಿದ ಉಬರಡ್ಕ ಉಮೇಶರು ಬಾಲ್ಯದಲ್ಲಿಯೇ ಯಕ್ಷಗಾನದತ್ತ ಆಕರ್ಷಿತರಾದರು.

ಮಾವನಾಗಬೇಕಾದ ಅಳಿಕೆ ರಾಮಯ್ಯ ರೈಗಳನ್ನು ಆದರ್ಶವಾಗಿಟ್ಟುಕೊಂಡ ಇವರ ಯಕ್ಷಗಾನಾಸಕ್ತಿಯು ಶಾಲಾ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿತು. ಇವರು ಧರ್ಮಸ್ಥಳ ಯಕ್ಷಗಾನ ಕೇಂದ್ರ ಅಥವಾ ಲಲಿತ ಕಲಾ ಕೇಂದ್ರ ಆರಂಭವಾದ ವರ್ಷದ ಅಂದರೆ ಪ್ರಥಮ ಬ್ಯಾಚ್ ನ ವಿದ್ಯಾರ್ಥಿ. ಅದೇ ವರ್ಷವೇ ಅಂದರೆ 1971ರಲ್ಲಿಯೇ ಧರ್ಮಸ್ಥಳ ಮೇಳದಲ್ಲಿ ಬಾಲಗೋಪಾಲನಾಗಿ ಗೆಜ್ಜೆ ಕಟ್ಟಿ ತಮ್ಮ ಯಕ್ಷಪಯಣವನ್ನು ಆರಂಭಿಸಿದ್ದರು. ಆಮೇಲೆ ನಿರಂತರವಾಗಿ 44 ವರ್ಷಗಳಷ್ಟು ಕಾಲ ಅಂದರೆ 2015ರ ವರೆಗೆ ಧರ್ಮಸ್ಥಳ ಮೇಳವೊಂದರಲ್ಲೇ ಕಲಾವಿದನಾಗಿ ಸೇವೆ ಸಲ್ಲಿಸಿದರು. 2015ರಲ್ಲಿ ಮೇಳದಿಂದ ಸ್ವಯಂ ನಿವೃತ್ತಿ ಬಯಸಿದರು.

ಆಮೇಲೆಯೂ ಹವ್ಯಾಸಿ ಕಲಾವಿದನಾಗಿಯೂ ಯಕ್ಷಗಾನ ಗುರುಗಳಾಗಿಯೂ ತಮ್ಮ ಕಲಾಸೇವೆಯನ್ನು ನಿರಂತರವಾಗಿ ಮುಂದುವರಿಸಿದ್ದಾರೆ. ಬಾಲಗೋಪಾಲ, ಪೀಠಿಕೆ ಸ್ತ್ರೀವೇಷದಿಂದ ತೊಡಗಿ ಸಾಧಾರಣ ಹೆಚ್ಚಿನೆಲ್ಲಾ ವೇಷಗಳನ್ನು ಮಾಡಿದ್ದಾರೆ. ಪುತ್ತೂರು ಶ್ರೀಧರ ಭಂಡಾರಿಯವರ ಅನುಪಸ್ಥಿತಿಯಲ್ಲಿ ಸುಮಾರು 11 ವರ್ಷಗಳಷ್ಟು ಕಾಲ ಪುಂಡುವೇಷಗಳನ್ನು ಮಾಡಿದರು. ಧರ್ಮಸ್ಥಳ ಮೇಳಕ್ಕೆ ಶ್ರೀಧರ ಭಂಡಾರಿಯವರ ಪುನರ್ ಪ್ರವೇಶ ಆದ ಮೇಲೆ  ಉಬರಡ್ಕದವರು ಕಿರೀಟ ವೇಷಗಳಿಗೆ ಭಡ್ತಿ ಹೊಂದಿದರು. ಶ್ರೀಧರ ಭಂಡಾರಿಯವರ ಜೊತೆ ಪುಂಡುವೇಷಗಳನ್ನು ಮಾಡುತ್ತಿದ್ದರು.

ಕಿರೀಟ ವೇಷಗಳಲ್ಲೂ ಕೂಡಾ ದೇವೇಂದ್ರ, ಅರ್ಜುನ, ಅತಿಕಾಯ, ಹಿರಣ್ಯಾಕ್ಷ, ಇಂದ್ರಜಿತು, ಅಣ್ಣಪ್ಪ, ದ್ರೋಣ, ತಾಮ್ರಧ್ವಜ, ತ್ರಿಶಂಕು ಮುಂತಾದ ಹಲವು ಪಾತ್ರಗಳನ್ನು ಮಾಡುತ್ತಿದ್ದರು. ಪುತ್ತೂರು ನಾರಾಯಣ ಹೆಗ್ಡೆಯವರು ಮತ್ತು ಎಂಪೆಕಟ್ಟೆ ರಾಮಯ್ಯ ರೈಗಳು ರಜೆಯಲ್ಲಿದ್ದಾಗಲೂ ಅವರು ನಿರ್ವಹಿಸುತ್ತಿದ್ದ ಪಾತ್ರಗಳೂ ಕೆಲವೊಮ್ಮೆ ಉಮೇಶ ಶೆಟ್ಟಿಯವರ  ಪಾಲಿಗೆ ಬರುತ್ತಿದ್ದುವು. ಹೀಗೆ ಧರ್ಮಸ್ಥಳ ಮೇಳದಲ್ಲಿ ಬೆಳೆಯುತ್ತಾ ಬೆಳೆಯುತ್ತಾ ಮೇಳಕ್ಕೆ ಅನಿವಾರ್ಯ ಕಲಾವಿದರಾದರು. ಪ್ರಖ್ಯಾತ ಎದುರು ವೇಷಧಾರಿಯಾಗಿ ಗುರುತಿಸಿಕೊಂಡರು. ಬೆಳ್ತಂಗಡಿ ತಾಲೂಕು ಉಜಿರೆ ಸಮೀಪ ನಿಡ್ಲೆ ಎಂಬಲ್ಲಿ ಪತ್ನಿ ಉಷಾ ಉಮೇಶ ಶೆಟ್ಟಿ, ಇಬ್ಬರು ಮಕ್ಕಳಾದ ಅವಿನಾಶ್ ಉಬರಡ್ಕ, ಆದರ್ಶ್ ಉಬರಡ್ಕರೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಿರುವ ಉಬರಡ್ಕ ಉಮೇಶ್ ಶೆಟ್ಟಿಯವರಿಗೆ ಯಕ್ಷಗಾನದ ದಂತಕತೆ ದಿವಂಗತ ಸೀತಾನದಿ ಗಣಪಯ್ಯ ಶೆಟ್ಟಿಯವರ ಸ್ಮರಣಾರ್ಥ ನೀಡುತ್ತಿರುವ ‘ಸೀತಾನದಿ’ ಪ್ರಶಸ್ತಿ ಅರ್ಹವಾಗಿಯೇ ಸಂದಿದೆ.  

ಲೇಖನ: ಮನಮೋಹನ್  ವಿ. ಎಸ್.

ಯಕ್ಷಗಾನ ಗುರುಕುಲದ ರೂವಾರಿ – ಕವಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ

ಶೀರ್ಷಿಕೆಯೇ ಸೂಚಿಸುವಂತೆ ಈ ಹೊತ್ತಗೆಯು ದಿ| ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಬಗೆಗೆ ಬರೆಯಲ್ಪಟ್ಟಿತು. ಈ ಪುಸ್ತಕದ ಲೇಖಕರು ಶ್ರೀ ಚಂದ್ರಶೇಖರ ಮಂಡೆಕೋಲು. ಪತ್ರಕರ್ತರಾದ ಶ್ರೀಯುತರು ಸಾಹಿತ್ಯ ಮತ್ತು ಯಕ್ಷಗಾನಾಸಕ್ತರೂ ಹೌದು. ಸಂಗ್ರಹಿಸುವುದು ಒಂದು ಸಾಹಸ ಕಾರ್ಯವೇ ಸರಿ. ಕೀರಿಕ್ಕಾಡು ಮಾಸ್ತರರ ಬಗೆಗೆ ವಿಚಾರಗಳನ್ನು ಸಂಗ್ರಹಿಸಿ ಅದನ್ನು ಅಕ್ಷರ ರೂಪಕ್ಕಿಳಿಸಿ ಈ ಪುಸ್ತಕವನ್ನು ಓದುಗರಿಗೆ ನೀಡಿರುತ್ತಾರೆ. ‘ಯಕ್ಷಗಾನ ಗುರುಕುಲದ ರೂವಾರಿ – ಕವಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ’ ಎಂಬ ಈ ಪುಸ್ತಕದ ಪ್ರಕಾಶಕರು ಕನ್ನಡ ಸಂಘ ಕಾಂತಾವರ. ಇದು 2015ರಲ್ಲಿ ಪ್ರಕಟವಾಗಿತ್ತು. ಸದ್ರಿ ಸಂಘದ ‘ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಾಗಿ ಹೊರಬಂದಿತ್ತು. ಸಂಘದ ಅಧ್ಯಕ್ಷ ಡಾ. ನಾ. ಮೊಗಸಾಲೆ ಅವರೂ. ಸಂಪಾದಕ ಡಾ.ಬಿ. ಜನಾರ್ದನ ಭಟ್ ಅವರೂ ಲೇಖನಗಳ ಮೂಲಕ ಅನಿಸಿಕೆಗಳನ್ನು ವ್ಯಕ್ತಪಡಿಸಿರುತ್ತಾರೆ. ಬಳಿಕ ಮಹಾನ್ ಸಾಧಕರಾದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಬದುಕು, ಸಾಧನೆ, ವ್ಯಕ್ತಿತ್ವಗಳ ಬಗೆಗೆ ವಿವರಗಳನ್ನು ಶ್ರೀ ಚಂದ್ರಶೇಖರ ಮಂಡೆಕೋಲು ಅವರು ತಮ್ಮ ಬರಹದಲ್ಲಿ ಓದುಗರಿಗೆ ತಿಳಿಸಿದ್ದಾರೆ.

ಅತ್ತ ಯುದ್ಧದ ಬಯಲು, ಇತ್ತ ಈ ಮನೆಯ ಜಗುಲಿ, ನಿರ್ಮಲ ಜಲಸಮೀಪದಿ ಮಾಡಿಕೊಂಡರು ಪರ್ಣಶಾಲೆಯ, ಅಮ್ಮ ಹೇಳುತ್ತಿದ್ದ ಕಥೆಗಳು, ಮೊದಲ ರಂಗಸ್ಥಳ ಕೀರಿಕ್ಕಾಡು ಗುಡ್ಡ, ಮನೆತನದ ಶಾಲೆಗೆ ಗುರುವಾಗಿದ್ದು, ಮಾಸ್ತರರ ಸರ್ವೋದಯ ಭಾವ, ಶಾಲೆಯೇ ಬದುಕಿನ ಪ್ರಯೋಗ ರಂಗ, ಶ್ವೇತಕುಮಾರ ಚರಿತೆಯನ್ನು ಬರೆದದ್ದು, ಕೀರಿಕ್ಕಾಡಿನಿಂದ ಬನಾರಿಗೆ ಪಯಣ, ಮಾಡಿಕೊಂಡರು ಪರ್ಣಶಾಲೆಯ, ಗಾಂಧೀಜಿಯ ಸತ್ಯಾಗ್ರಹ, ಶಿಷ್ಯಂದಿರ ಬದುಕಿಗೂ ನೆರವಾದರು, ಆ ನೆಲದಲ್ಲಿ ಕೃಷ್ಣ ಸಿಕ್ಕಿದ್ದ, ನಿಜದ ನಾಡೋಜ, ಯಕ್ಷಗಾನ ನಾಟಕವೆಂಬ ಪರಿಕಲ್ಪನೆ, ಅಧಿಕಾರಿಗಳಲ್ಲೂ ಕಲೆಯ ಬೆಳಗು, ಪೊರೆವ ಮಣ್ಣೂ ಔಷಧಿಯಾದಾಗ, ಅಕ್ಷರಗಳಲ್ಲಿ ಎದೆಯ ದನಿ, ಶರಣನ ದರ್ಪಣ, ಎದೆ ತಟ್ಟುವ ಪದ ನಾದ, ಪ್ರಸಂಗ ಸಾಹಿತ್ಯದಲ್ಲೊಂದು ದಾಖಲೆ!, ಮೇರು ಕಲಾವಿದನೂ ಎದ್ದು ಬಂದು ನಮಿಸಿದನೆಂದರೆ, ಪ್ರತ್ಯೇಕ ಶೈಲಿಯನ್ನೇ ಸೃಜಿಸಿದ ಅರ್ಥಗಾರಿಕೆ, ಕೀರಿಕ್ಕಾಡು ಮೀಮಾಂಸೆ, ದಾರಿ ತೋರುವ ಗೆಳೆಯ, ಯಕ್ಷಲೋಕದ ತಲೆಮಾರುಗಳ ಒಡನಾಟ, ಪ್ರೌಢ ಲಾಲಿತ್ಯದ ಭಾಷೆ, ಕೆಂಬುಡೆ ಹೂ ಚಟ್ನಿ ಕುದನೆಗೊಜ್ಜಿ ಕಾಟು ಕೇನೆ ಸಾಸಮೆ, ಅಜ್ಜನ ಶಾರದಾ ಡೈರಿ,ಇದು ಬರಿಯ ರಂಗಸ್ಥಳವಲ್ಲ, ತಂದೆಯಂತೆ ಮಕ್ಕಳು, ಈ ನಿಷ್ಠೆ ನಿರಂತರವಾಗಿರಲಿ ಎಂಬ ವಿಚಾರಗಳಡಿ ಶ್ರೀ ಚಂದ್ರಶೇಖರ ಮಂಡೆಕೋಲು ಅವರು ಈ ಹೊತ್ತಗೆಗೆ ರೂಪವನ್ನು ನೀಡಿರುತ್ತಾರೆ. ಅಲ್ಲದೆ ‘ಅನುಬಂಧಗಳು’ ಎಂಬ ಶೀರ್ಷಿಕೆಯಡಿಯಲ್ಲಿ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ, ಡಾ. ಅಮೃತ ಸೋಮೇಶ್ವರ, ಮಂದಾರ ಕೇಶವ ಭಟ್ಟ, ಪೆರ್ಲ ಕೃಷ್ಣ ಭಟ್, ರಾಮಚಂದ್ರ ಉಚ್ಚಿಲ, ಕೆದಂಬಾಡಿ ಜತ್ತಪ್ಪ ರೈ, ಶೇಣಿ ಗೋಪಾಲಕೃಷ್ಣ ಭಟ್, ಕೇದಗಡಿ ಗುಡ್ಡಪ್ಪ ಗೌಡ ಅವರ ಅನಿಸಿಕೆಗಳನ್ನು ನೀಡಲಾಗಿದೆ. ಪುಸ್ತಕದ ಕೊನೆಯಲ್ಲಿ ಕನ್ನಡ ಸಂಘ ಕಾಂತಾವರದ ನಾಡಿಗೆ ನಮಸ್ಕಾರ ಗ್ರಂಥಮಾಲೆಯಡಿ ಪ್ರಕಟಗೊಂಡ ಪುಸ್ತಕಗಳ ವಿವರಗಳನ್ನು ನೀಡಲಾಗಿದೆ. ಪುಸ್ತಕದ ಹೊರ ಆವರಣದಲ್ಲಿ ಲೇಖಕ ಶ್ರೀ ಚಂದ್ರಶೇಖರ ಮಂಡೆಕೋಲು ಅವರ ಸಾಹಿತ್ಯಾಸಕ್ತಿಯ ಬಗೆಗೆ ಶ್ರೀ ಬಿ. ಜನಾರ್ದನ ಭಟ್ ಅವರು ಪ್ರಶಂಸಿಸಿ ಶುಭ ಹಾರೈಸಿದ ಬರಹವನ್ನು ನೀಡಲಾಗಿದೆ.

ಲೇಖಕ: ರವಿಶಂಕರ್ ವಳಕ್ಕುಂಜ 

ಪುತ್ತೂರು ನಾರಾಯಣ ಹೆಗ್ಡೆ (Puttur Narayana Hegde)

  

ಪುತ್ತೂರು ನಾರಾಯಣ ಹೆಗ್ಡೆಯವರ ಜೀವನ ಚರಿತ್ರೆ  

ಹೆಸರು: ಪುತ್ತೂರು ನಾರಾಯಣ ಹೆಗ್ಡೆ 
ವೃತ್ತಿ:  ಯಕ್ಷಗಾನ ಕಲಾವಿದತಂದೆ : ಪುತ್ತೂರು ಸುಬ್ರಾಯ ಹೆಗಡೆ.
ತಾಯಿ : ಸೀತಮ್ಮ
ಒಡಹುಟ್ಟಿದವರು : ದಾಸಪ್ಪ ಹೆಗಡೆ (ಅಣ್ಣ) ಶೇಷಮ್ಮ (ಅಕ್ಕ).
ಪತ್ನಿ : ಸಂಜೀವಿನಿ.
ಮಕ್ಕಳು : ಮೂರು ಗಂಡು ಮತ್ತು   ನಾಲ್ಕು ಹೆಣ್ಣು ಮಕ್ಕಳು.
ಹುಟ್ಟಿದ್ದು : ಪುತ್ತೂರಿನ ಬಪ್ಪಳಿಗೆ ಎಂಬಲ್ಲಿ.
ವಿದ್ಯಾಭ್ಯಾಸ : ಮೂರನೇ ತರಗತಿ.
ಅನುಭವ : ಸ್ವಲ್ಪ ಸಮಯ ಅರಣ್ಯ ರಕ್ಷಕನಾಗಿ.
ಕಲಾವಿದನಾಗಿ : ಕೂಡ್ಲು ಮೇಳದಲ್ಲಿ ಸುಮಾರು ಏಳೆಂಟು ವರ್ಷ, ಸುರತ್ಕಲ್ ಮೇಳದಲ್ಲಿ ಒಂದು ವರ್ಷ. ಆಮೇಲೆ ಸುಮಾರು 35 ವರ್ಷಗಳು ಧರ್ಮಸ್ಥಳ ಮೇಳದಲ್ಲಿ. ನಿಧನ: 1992
ಗಂಡು ಮಕ್ಕಳಲ್ಲಿ ಮೊದಲನೆಯವರು ಖ್ಯಾತ ಯಕ್ಷಗಾನ ಕಲಾವಿದ  ದಿ|ಚಂದ್ರಶೇಖರ ಹೆಗ್ಡೆ. ಶ್ರೀ ದೇವರಾಜ ಹೆಗ್ಡೆ, ಕಲಾವಿದರೂ ಹೌದು. ಧರ್ಮಸ್ಥಳ ಎಸ್.ಡಿ.ಎಂ. ಲಾ ಕಾಲೇಜು, ಮಂಗಳೂರು ಇಲ್ಲಿ ಉದ್ಯೋಗಿ. ಶ್ರೀ ಗಿರೀಶ್ ಹೆಗ್ಡೆ, ಕಲಾವಿದರು ಮತ್ತು ಶ್ರೀ ಧರ್ಮಸ್ಥಳ ಮೇಳದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ.  ಪುತ್ತೂರು ನಾರಾಯಣ ಹೆಗ್ಡೆಯವರ ತಾಯಿ ಗರ್ಭಿಣಿಯಾಗಿರುವಾಗಲೇ ತಂದೆ ಸುಬ್ರಾಯ ಹೆಗಡೆಯವರು ತೀರಿ ಹೋಗಿದ್ದರು. ಇವರನ್ನು ಪ್ರಸವಿಸಿದ ನಂತರ ಮೂರೇ ತಿಂಗಳಲ್ಲಿ ತಾಯಿ ಕೂಡಾ ಇಹಲೋಕವನ್ನು ತ್ಯಜಿಸಿದ್ದರು. ಅಕ್ಕ ಶೇಷಮ್ಮನ ಆರೈಕೆಯಲ್ಲೇ ನಾರಾಯಣ  ಬೆಳೆಯಬೇಕಾಯಿತು. ರಾಗಿಕುಮೇರಿ ಶಾಲೆಯಲ್ಲಿ ಮೂರನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಕಲಿಯುವಿಕೆಯನ್ನು ನಿಲ್ಲಿಸಬೇಕಾಗಿ ಬಂತು. ಆಮೇಲೆ ಆಟ ನೋಡುವ ಆಸಕ್ತಿ ಚಪಲಗಳಿತ್ತು. 13ನೇ ವಯಸ್ಸಿನಲ್ಲಿಯೇ ಮನೆಯವರೊಂದಿಗೆ ಮುನಿಸಿಕೊಂಡು ಮಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದರು. ಆಮೇಲೆ ಕೆಲವು ಕಡೆಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಕೆಲಸ ಮಾಡಿದ್ದರು. ಶಿರಾಡಿ, ನಾರಾವಿ ಇತ್ಯಾದಿ ಕಡೆಗಳಲ್ಲಿ ಕೆಲಸ ಮಾಡಿದರು. ಆಟದ ಆಸಕ್ತಿಯಿಂದ ಆಟ-ಕೂಟಗಳನ್ನು ಬಿಡದೆ ನೋಡುತ್ತಿದ್ದರು.ಯಕ್ಷಗಾನದ ಆಸಕ್ತಿಯಿಂದಾಗಿ ಪೆರ್ಣಂಕಿಲ ಮೇಳದಲ್ಲಿ ಪೆಟ್ಟಿಗೆ ಹೊರುವ ಕೆಲಸಕ್ಕೆ ಚಿಕ್ಕಪ್ಪ ದೇವಪ್ಪ ಹೆಗಡೆಯವರು ಸೇರಿಸಿದರು. ಮೇಳದ ತಿರುಗಾಟದ ನಂತರ ಪುನಃ Guard  ಆಗಿ ಕೆಲಸ ಇರುತ್ತಿತ್ತು. ನಂತರ ಮೂಲ್ಕಿ ಮೇಳಕ್ಕೆ ಸೇರಿದರು. ಸಣ್ಣ ತಿಮ್ಮಪ್ಪು ಎಂಬವರ ಮಾರ್ಗದರ್ಶನ ಅವರಿಗಾಗಿತ್ತು.  ಅವರ ವೇಷಗಳಲ್ಲಿ ಸಣ್ಣ ತಿಮ್ಮಪ್ಪು ಅವರ ಛಾಯೆಯಿತ್ತಂತೆ. ಆದರೆ ಕ್ರಮೇಣ  ಪುತ್ತೂರು ನಾರಾಯಣ ಹೆಗ್ಡೆಯವರು ತನ್ನದೇ ಸ್ವಂತ ಶೈಲಿಯನ್ನು ರೂಢಿಸಿಕೊಂಡು ಪ್ರಸಿದ್ಧಿಯನ್ನು ಪಡೆದರು.ಮೂಲ್ಕಿ ಮೇಳದಲ್ಲಿ ಸುಮಾರು ಏಳೆಂಟು ವರ್ಷ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಕೆಲವರು ಸಮಸ್ಯೆಗಳಿಂದ ಮೂಲ್ಕಿ ಮೇಳವನ್ನು ಬಿಡಬೇಕಾಗಿ ಬಂತು. ಆಮೇಲೆ ಕಸ್ತೂರಿ ಪೈಗಳ ಕರೆಯಂತೆ ಸುರತ್ಕಲ್ ಮೇಳವನ್ನು ಸೇರಿದರು. ಆಮೇಲೆ ಪೂಜ್ಯ ಹೆಗಡೆಯವರು ಅವರನ್ನು ಧರ್ಮಸ್ಥಳ ಮೇಳಕ್ಕೆ ಕರೆಸಿಕೊಂಡರು. ಆಮೇಲೆ ಸುಮಾರು 30 ಕ್ಕೂ ಹೆಚ್ಚು ವರ್ಷಗಳಷ್ಟು ಕಾಲ ಧರ್ಮಸ್ಥಳ ಮೇಳದಲ್ಲೇ ಕಲಾ ವ್ಯವಸಾಯ ಮಾಡಿದರು.  ಪುತ್ತೂರು ನಾರಾಯಣ ಹೆಗ್ಡೆಯವರು 1992ರಲ್ಲಿ ನಿಧನ ಹೊಂದಿದರು. 

ಜಾಗರದ ಜೋಷಿ (Jagarada Joshi)

‘ಜಾಗರದ ಜೋಷಿ’ ಎಂಬ ಈ ಕೃತಿಯು ಯಕ್ಷಗಾನ ತಾಳಮದ್ದಳೆಯ ಹಿರಿಯ ಅರ್ಥಧಾರಿ, ವಿದ್ವಾಂಸ, ವಿಮರ್ಶಕರಾದ ಡಾ. ಎಂ. ಪ್ರಭಾಕರ ಜೋಷಿ ಅವರ ಕುರಿತಾದ ಪೂರ್ವ ಪ್ರಕಟಿತ ನುಡಿಮಾಲೆಯಾಗಿ ಓದುಗರ ಕೈ ಸೇರಿತ್ತು. ಈ ಕೃತಿಯು 2017ರಲ್ಲಿ ಪ್ರಕಟವಾಗಿತ್ತು. ಈ ಹೊತ್ತಗೆಯ ಪ್ರಕಾಶಕರು ‘ಆಕೃತಿ ಆಶಯ ಪಬ್ಲಿಕೇಷನ್ಸ್ ಮಂಗಳೂರು. ಸಂಪಾದಕರು ಶ್ರೀ ನಾ. ಕಾರಂತ ಪೆರಾಜೆಯವರು. ಶ್ರೀ ನಾ . ಕಾರಂತ ಅವರು ‘ಸಪ್ತತಿಯ ಉಪಾಯನ’ ಎಂಬ ತಮ್ಮ ಬರಹದಲ್ಲಿ ‘ಜಾಗರದ ಜೋಷಿ’ ಎಂಬ ಕೃತಿಯ ಬಗೆಗೆ ಮತ್ತು ಡಾ. ಎಂ. ಪ್ರಭಾಕರ ಜೋಷಿ ಅವರ ಬಗೆಗೆ ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ. ಈ ಪುಸ್ತಕವು, ಅಕ್ಷರ ಉಪಾಯನ, ಕೃತಿ ನೋಟ,ಮುನ್ನುಡಿಯ ಮುಡಿ, ಜೋಷಿ ಚಿಂತನೆ, ಎಂಬ ನಾಲ್ಕು ವಿಭಾಗಗಳಿಂದ ಕೂಡಿದೆ. ಅಕ್ಷರ ಉಪಾಯನ ಎಂಬ ಮೊದಲ ವಿಭಾಗದಲ್ಲಿ ಯೋಗೀಶ್ ರಾವ್ ಚಿಗುರುಪಾದೆ,  ಗ, ನಾ. ಭಟ್ಟ ಮೈಸೂರು, ಭಾಸ್ಕರ ರೈ ಕುಕ್ಕುವಳ್ಳಿ, ಶ್ರೀಕರ ಭಟ್, ರಾಧಾಕೃಷ್ಣ ಕಲ್ಚಾರ್, ಎಂ.ಎಲ್.ಸಾಮಗ, ನಾ. ಕಾರಂತ, ಸುಬ್ರಹ್ಮಣ್ಯ ಬೈಪಾಡಿತ್ತಾಯ, ರಾಜಕುಮಾರ್ ಪೈವಳಿಕೆ, ಎಂ. ಶಾಂತಾರಾಮ ಕುಡ್ವ, ಕೆನೆಡಾ ಪ್ರತಿನಿಧಿ, ಜಿ.ಎನ್. ಅಶೋಕವರ್ಧನ ಇವುಗಳ ಲೇಖನಗಳಿವೆ. ‘ಕೃತಿನೋಟ’ ಎಂಬ ಭಾಗದಲ್ಲಿ ಪಾದೇಕಲ್ಲು ವಿಷ್ಣು ಭಟ್ಟ, ಕೃಷ್ಣ ಪ್ರಕಾಶ್ ಉಳಿತ್ತಾಯ ಅವರುಗಳು ಬರೆದ ಲೇಖನಗಳನ್ನು ನೀಡಲಾಗಿದೆ. ‘ಮುನ್ನುಡಿಯ ನುಡಿ’ ಎಂಬ ವಿಭಾಗದಡಿಯಲ್ಲಿ ಲಕ್ಷ್ಮೀಶ ತೋಳ್ಪಾಡಿ, ಡಾ. ಕೆ.ಎಂ. ರಾಘವ ನಂಬಿಯಾರ್, ಡಾ.ಬಿ.ಎ. ವಿವೇಕ ರೈ, ಪ್ರೊ| ಎಂ.ಎಲ್.ಸಾಮಗ, ಪ್ರೊ| ಅಮೃತ ಸೋಮೇಶ್ವರ, ಕು.ಶಿ. ಹರಿದಾಸ ಭಟ್, ಡಾ. ಪುರುಷೋತ್ತಮ ಬಿಳಿಮಲೆ, ಪ್ರೊ| ಕೆ. ಚಿನ್ನಪ್ಪ ಗೌಡ, ಪ್ರೊ| ಉದ್ಯಾವರ ಮಾಧವ ಆಚಾರ್ಯ, ಇವರುಗಳು ಬರೆದ ಲೇಖನಗಳಿವೆ.

‘ಜೋಶಿ ಚಿಂತನೆ’ ಎಂಬ ವಿಭಾಗದಡಿ ‘ಸ್ಥಿರೀಕರಣ, ಪರಿಷ್ಕರಣ, ವಿಸ್ತರಣ ಎಂಬ ಬರಹವಿದ್ದು ಇದು 2011ರಲ್ಲಿ ಕರ್ನಾಟಕ ಸಾಂಸ್ಕೃತಿಕ ಕಲಾ ಪರಿಷತ್ತು ಬೆಂಗಳೂರಿನಲ್ಲಿ ಸಂಘಟಿಸಿದ ಐದನೆಯ ಯಕ್ಷಗಾನ ಸಮ್ಮೇಳನದಲ್ಲಿ ಡಾ. ಎಂ, ಪ್ರಭಾಕರ ಜೋಶಿಯವರು ಮಾಡಿದ ಅಧ್ಯಕ್ಷೀಯ ಭಾಷಣದ ವಿಷಯಗಳನ್ನು ಒಳಗೊಂಡಿದೆ. ಬಳಿಕ ‘ಅಭಿಮತ’ ಎಂಬ ವಿಚಾರದಡಿ ಶೇಣಿ ಗೋಪಾಲಕೃಷ್ಣ ಭಟ್, ವಿದ್ವಾನ್ ಕೊರ್ಗಿ ವೆಂಕಟೀಶ್ವರ ಉಪಾಧ್ಯಾಯ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಡಾ. ಬಸವರಾಜ ಮಲಶೆಟ್ಟಿ, ಪ್ರೊ|ಎಂ.ಎಂ. ಕುಲಬರ್ಗಿ, ಎ. ಈಶ್ವರಯ್ಯ, ಶ್ರೀಮತಿ ಸುಶೀಲಾ ಆರ್. ರಾವ್, ವೆಂಕಟರಾಮ ಭಟ್ಟ ಸುಳ್ಯ, ಡಾ. ಯು. ಪಿ. ಉಪಾಧ್ಯಾಯ, ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ, ಚಂದ್ರಶೇಖರ ಮಂಡೆಕೋಲು, ಉಜಿರೆ ಅಶೋಕ ಭಟ್, ಎಂ. ಶಾಂತಾರಾಮ ಕುಡ್ವ, ಮೂರ್ತಿ ದೇರಾಜೆ, ಪ್ರೊ| ಕೆ. ಇ. ರಾಧಾಕೃಷ್ಣ, ಇವರುಗಳು ಶ್ರೀ ಡಾ. ಪ್ರಭಾಕರ ಜೋಷಿಯವರ ಬಗೆಗೆ ಆಡಿದ ನಲ್ನುಡಿಗಳನ್ನು ನೀಡಲಾಗಿದೆ. ಲೇಖನಗಳನ್ನು ಬರೆದ ಮಹನೀಯರುಗಳ ವಾಸ್ತವ್ಯ ವಿಳಾಸಗಳನ್ನೂ ನೀಡಲಾಗಿದ್ದು ಬಳಿಕ ಡಾ. ಪ್ರಭಾಕರ ಜೋಷಿಯವರ ಲೇಖನಿಯಿಂದ ಪ್ರಕಟವಾದ ಕೃತಿಗಳ ವಿವರಗಳನ್ನು ನೀಡಿರುತ್ತಾರೆ. ಈ ಹೊತ್ತಗೆಯು ನೂರಾ ಮೂವತ್ತು ಪುಟಗಳಿಂದ ಕೂಡಿದ್ದು, ಹೊರ ಆವರಣದಲ್ಲಿ ಡಾ.ಬಿ.ಎ. ವಿವೇಕ ರೈಯವರು ಶ್ರೀ ಡಾ. ಪ್ರಭಾಕರ ಜೋಷಿಯವರ ಬಗೆಗೆ ಬರೆದ ಲೇಖನವನ್ನು ನೀಡಲಾಗಿದೆ.

ಲೇಖಕ: ರವಿಶಂಕರ್ ವಳಕ್ಕುಂಜ 

ಸುದೀಪ್

‘ಸುದೀಪ್’ ಸಿನಿಮಾ ಪ್ರಿಯರೆಲ್ಲರೂ ಇಷ್ಟಪಡುವ ನಟ. ಕಿಚ್ಚ ಎಂಬ ಹೆಸರಿನಿಂದ ಖ್ಯಾತರಾಗಿ ಗುರುತಿಸಲ್ಪಟ್ಟ ಸುದೀಪ್ 1973ನೇ ಇಸವಿಯ ಸೆಪ್ಟೆಂಬರ್ 2ರಂದು ಜನಿಸಿದರು. ಪೂರ್ಣ ಹಸರು ಸುದೀಪ್ ಸಂಜೀವ್. ಇವರ ತಂದೆ ಶಿವಮೊಗ್ಗ ಜಿಲ್ಲೆಯ ಸಂಜೀವ್ ಮಂಜಪ್ಪ. ತಾಯಿ ಶ್ರೀಮತಿ ಸರೋಜ ಸಂಜೀವ್. ಅಭಿಮಾನಿಗಳ ಹಾಗೂ ಪ್ರತಿಯೊಬ್ಬರ ಬಾಯಿಯಲ್ಲಿಯೂ ಕಿಚ್ಚ ಸುದೀಪ್ ಎಂದೇ ಜನಜನಿತವಾಗಿದ್ದಾರೆ. ಸುದೀಪ್ ಪತ್ನಿ ಪ್ರಿಯಾ ರಾಧಾಕೃಷ್ಣನ್. 2001ರಲ್ಲಿ ವಿವಾಹವಾದ ಸುದೀಪ್-ಪ್ರಿಯಾ ದಂಪತಿಗೆ ಸಾನ್ವಿ ಎಂಬ ಮಗಳಿದ್ದಾಳೆ. 

ಶಿವಮೊಗ್ಗದಲ್ಲಿ ಜನಿಸಿದ ಸುದೀಪ್ ಬೆಂಗಳೂರಿನ ದಯಾನಂದ್ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. ಕಾಲೇಜು ದಿನಗಳಲ್ಲೇ ಉತ್ತಮ ಕ್ರಿಕೆಟ್ ಆಟಗಾರರಾಗಿದ್ದರು. ಆ ದಿನಗಳಲ್ಲೇ ನಟನಾ ಕೌಶಲ್ಯವನ್ನು ಹೊಂದಿದ್ದರು. ಆಮೇಲೆ ಮುಂಬಯಿ ನಗರದ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್ ನಲ್ಲಿ ತಮ್ಮ ತರಬೇತಿ ಪೂರೈಸಿದರು. ತಮ್ಮ ಮೊದಲ ಪ್ರಯತ್ನದಲ್ಲಿ ಕಿರುತೆರೆಯ ಧಾರಾವಾಹಿ ‘ಪ್ರೇಮದ ಕಾದಂಬರಿ’ ಯಲ್ಲಿ ನಟಿಸಿದ ಸುದೀಪ್ ಆಮೇಲೆ ‘ತಾಯವ್ವ’ ಸಿನಿಮಾದ ಮೂಲಕ ರಜತಪರದೆಗೆ ಲಗ್ಗೆಯಿಟ್ಟರು. ಆಮೇಲೆ 2000 ದಲ್ಲಿ ಸುನಿಲ್ ಕುಮಾರ್ ದೇಸಾಯಿ ಅವರ ‘ಸ್ಪರ್ಶ’ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿ ಯಶಸ್ಸು ಕಂಡರು. 2001 ರಲ್ಲಿ ಅಭಿನಯಿಸಿದ ಹುಚ್ಚ ಎಂಬ ಸಿನಿಮಾ ಸುದೀಪ್ ಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ಆಮೇಲೆ ಹುಚ್ಚ, ಕಿಚ್ಚ, ಪಾರ್ಥ, ಮೈ ಆಟೋಗ್ರಾಫ್ ಮೊದಲಾದ ಹಿಟ್ ಚಿತ್ರಗಳನ್ನು ಒಂದಾದ ಮೇಲೆ ಒಂದರಂತೆ ನೀಡುತ್ತಾ ಬಂದರು. ಅಲ್ಲಿಂದೆ ಈ ವರೆಗೆ ಸಿನಿಮಾ ಕ್ಷೇತ್ರದಲ್ಲಿ ಸುದೀಪ್ ಹಿಂತಿರುಗಿ ನೋಡಿದ್ದೇ ಇಲ್ಲ. 

ಸುದೀಪ್ ಅಭಿನಯಿಸಿದ ಕನ್ನಡ ಚಿತ್ರಗಳು: ತಾಯವ್ವ, ಪ್ರತ್ಯರ್ಥ, ಸ್ಪರ್ಷ, ಹುಚ್ಚ, ಕಿಚ್ಚ, ಪಾರ್ಥ, ಧಮ್ ,ನಂದಿ, ಚಂದು, ರಂಗ – SSLC, ಸ್ವಾತಿಮುತ್ತು, ಮೈ ಆಟೋಗ್ರಾಫ್, ವಾಲಿ, ನಮ್ಮಣ್ಣ,ಗುನ್ನ, ತುಂಟಾಟ, ಕೇರ್ ಆಫ್ ಫುಟ್ ಪಾತ್, ಮಿ.ತೀರ್ಥ, ಜಸ್ಟ್ ಮಾತ್ ಮಾತಲ್ಲಿ, ಮಸ್ತ್ ಮಜಾ ಮಾಡಿ, ಸೈ, ನಲ್ಲ, ತಿರುಪತಿ , ಕಾಶಿ ಫ್ರಮ್ ವಿಲೇಜ್, ಮಹಾರಾಜ, ನಂ ೭೩ ಶಾಂತಿನಿವಾಸ,  ಮಾತಾಡ್ ಮಾತಾಡ್ ಮಲ್ಲಿಗೆ, ಕಿಚ್ಚ ಹುಚ್ಚ, ವೀರ ಪರಂಪರೆ,   ವರದನಾಯಕ, ಮುಕುಂದ ಮುರಾರಿ,  ರಾಜು ಕನ್ನಡ ಮೀಡಿಯಮ್, ಕಿಚ್ಚು,  ಗೂಳಿ, ಕಾಮಣ್ಣನ ಮಕ್ಕಳು, ದಿ  ವಿಲನ್, ಪೈಲ್ವಾನ್, ಕೋಟಿಗೊಬ್ಬ 3, ಈ ಶತಮಾನದ, ವೀರ ಮದಕರಿ, ಮುಸ್ಸಂಜೆ ಮಾತು, ಕೆಂಪೇಗೌಡ, ವಿಷ್ಣುವರ್ಧನ, ಬಚ್ಚನ್, ಮಾಣಿಕ್ಯ, ರನ್ನ, ಕೋಟಿಗೊಬ್ಬ-2, ಹೆಬ್ಬುಲಿ. 

ನಟಿಸಿದ ಪರಭಾಷಾ ಚಿತ್ರಗಳು: ಫೂಂಕ್, ಫೂಂಕ್ ೨, ರಣ್, ರಕ್ತ ಚರಿತ್ರ ೧, ರಕ್ತ ಚರಿತ್ರ ೨, ಮಕ್ಕಿ, ದಬಂಗ್ ೩ (ಎಲ್ಲವೂ ಹಿಂದಿ), ಈಗ(ತೆಲುಗು), ಪುಲಿ (ತಮಿಳು), ಸೈರಾ ನರಸಿಂಹ ರೆಡ್ಡಿ, ಬಾಹುಬಲಿ. 

ಪ್ರಶಸ್ತಿಗಳು: ೨೦೦೧ರಿಂದ ಸತತ ಮೂರು ವರ್ಷಗಳ ಕಾಲ ಕನ್ನಡದ ಅತ್ಯುತ್ತಮ ನಟನಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು. (ಚಿತ್ರಗಳು: ಹುಚ್ಚ, ನಂದಿ, ಸ್ವಾತಿಮುತ್ತು) 2001ರಲ್ಲಿ  ಅತ್ತ್ಯುತ್ತಮ ನಾಯಕ –  ಹುಚ್ಚ –  ದಕ್ಷಿಣ ಫಿಲ್ಮ್ ಫೇರ್ ಪ್ರಶಸ್ತಿ ೨೦೦೨ರಲ್ಲಿ  ಅತ್ತ್ಯುತ್ತಮ ನಾಯಕ –  ನಂದಿ – ದಕ್ಷಿಣ ಫಿಲ್ಮ್ ಫೇರ್ ಪ್ರಶಸ್ತಿ   2003ರಲ್ಲಿ  ಅತ್ತ್ಯುತ್ತಮ ನಾಯಕ –  ಸ್ವಾತಿಮುತ್ತು – ದಕ್ಷಿಣ ಫಿಲ್ಮ್ ಫೇರ್ ಪ್ರಶಸ್ತಿ ಆಮೇಲೆ ಅತ್ತ್ಯುತ್ತಮ ಪೋಷಕ ನಟ – ಈಗ (2003)
2002ರಲ್ಲಿ ಅತ್ಯುತ್ತಮ ನಾಯಕ ಎಂದು ರಾಜ್ಯ ಚಲನಚಿತ್ರ ಪ್ರಶಸ್ತಿ,ಅತ್ತ್ಯುತ್ತಮ ಖಳನಾಯಕ – ಈಗ (2012) ಎಂದು   ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ  (ಸೈಮಾ),
ಅತ್ತ್ಯುತ್ತಮ ಖಳನಾಯಕ – ಈಗ (2012) –  ತೆಲುಗಿನ ಮಾ tv ಚಾನೆಲ್ ನ  ಸಿನಿಮಾ ಪ್ರಶಸ್ತಿ
ಅತ್ತ್ಯುಮ ಖಳನಾಯಕ – (ನಾಣಿ)ಈಗ ಚಿತ್ರದ ತಮಿಳು ಡಬ್ –  ತಮಿಳಿನ ಸ್ಟಾರ್ ವಿಜಯ್ ಚಾನೆಲ್ ನ  ವಿಜಯ್ ಪ್ರಶಸ್ತಿ


 ಅತ್ಯುತ್ತಮ ಖಳನಾಯಕ  ನಾಣಿ (ಈಗ) –   ಎಡಿಸನ್ ಪ್ರಶಸ್ತಿ  
 ಅತ್ತ್ಯುತ್ತಮ ನಾಯಕ – (ವಿಷ್ಣುವರ್ಧನ) (2012) ಮತ್ತು   ಅತ್ತ್ಯುತ್ತಮ ಖಳನಾಯಕ – (ಈಗ)   –  ಟೈಮ್ಸ್ ಫಿಲ್ಮ್ಸ್ ಪ್ರಶಸ್ತಿ,ಅತ್ತ್ಯುತ್ತಮ ನಾಯಕ (ಸೌತ್) – ರನ್ನ (2015)-  IBN ಲೈವ್ ಮೂವಿ ಪ್ರಶಸ್ತಿ, ಎಂಟರ್ಟೈನರ್ ಆಫ್ ದಿ  ಡಿಕೇಡ್ –  ಜೀ ದಕ್ಷಿಣ ಸಂಭ್ರಮ , ವಿಡಿಯೋಕಾನ್ ಸುಪ್ರಭಾತ ಪ್ರಶಸ್ತಿ- ಸ್ಪರ್ಶ,  ಹಲೋ ಗಾಂಧಿನಗರ ಪ್ರಶಸ್ತಿ  – ಸ್ವಾತಿ ಮುತ್ತು ,
 ಎಸಿಯಾನೆಟ್ ಕಾವೇರಿ ಪ್ರಶಸ್ತಿ – ಸ್ಪರ್ಶ,  
 ಟಿವಿ 9 ಸ್ಯಾಂಡಲವುಡ್ ಸ್ಟಾರ್ ಫ್ರಶಸ್ತಿ – ವಿಷ್ಣುವರ್ಧನ,  
 ಜೀ ಕನ್ನಡ ಇನ್ನೋವೇಟಿವ್ ಫಿಲ್ಮ ಪ್ರಶಸ್ತಿ -ವೀರ ಮದಕರಿ , 

ಅತ್ತ್ಯುತ್ತಮ ಖಳನಾಯಕ – ಈಗ (2012)-ತೆಲುಗು ಚಿತ್ರರಂಗದ ಪ್ರತಿಷ್ಠಿತ ನಂದಿ ಪ್ರಶಸ್ತಿ,
ನೆಚ್ಚಿನ ನಾಯಕ – ವೀರ ಮದಕರಿ (2009) –   ಸುವರ್ಣ ಫಿಲ್ಮ್ ಪ್ರಶಸ್ತಿ
ಅತ್ತ್ಯುತ್ತಮ ನಾಯಕ – ವಿಷ್ಣುವರ್ಧನ (2011) –  ಸುವರ್ಣ ಫಿಲ್ಮ್ ಪ್ರಶಸ್ತಿ   
ಅತ್ತ್ಯುತ್ತಮ ಖಳನಾಯಕ – ಈಗ (2012) –   ಟೊರೊಂಟೊ ಅಫ್ಟರ್ ಡಾರ್ಕ್ ಫಿಲ್ಮ್  ಫೆಸ್ಟಿವಲ್,  
ಅತ್ತ್ಯುತ್ತಮ ಸಾಹಸ ದೃಶ್ಯ – ಈಗ (ಸುದೀಪ್ v/s ಈಗ ) –   ಟೊರೊಂಟೊ ಅಫ್ಟರ್ ಡಾರ್ಕ್ ಫಿಲ್ಮ್  ಫೆಸ್ಟಿವಲ್, ಅತ್ತ್ಯುತ್ತಮ ಪೋಷಕ ನಟ – ಈಗ (2012) –  ಮ್ಯಾಡ್ರಿಡ್ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 
2013 ರಿಂದ, ಅವರು ಟೆಲಿವಿಷನ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ ನಿರೂಪಕರಾಗಿದ್ದಾರೆ.   

ಯಕ್ಷಗಾನ ಕಲಾವಿದರಿಗೆ ಕೊರೋನಾ ಪರೀಕ್ಷೆ ಕಡ್ಡಾಯ – ಯಕ್ಷಗಾನ ಪ್ರದರ್ಶನಕ್ಕೆ ಹಸಿರು ನಿಶಾನೆ 

ಯಕ್ಷಗಾನ ಆರಂಭಕ್ಕೆ ಈಗ ದಿನಗಣನೆ ಆರಂಭವಾಗಿದೆ. ಯಕ್ಷಪ್ರಿಯರಿಗೆ ಇದು ಸಂತೋಷದ ಸುದ್ದಿ. ನಿನ್ನೆ ಮಂಗಳೂರು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೀಗೊಂದು ನಿರ್ಧಾರಕ್ಕೆ ಬರಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮುಜರಾಯಿ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ನಡೆದ ನಿರ್ಣಯದ ಪ್ರಕಾರ ನವೆಂಬರ್ ಅಂತ್ಯಕ್ಕೆ ಕೆಲವೊಂದು ನೀತಿ ನಿಯಮಾವಳಿಗಳ ಪ್ರಕಾರ ಯಕ್ಷಗಾನ ಪ್ರದರ್ಶನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಮತಿ ನೀಡೆಯಲಾಗಿದೆ.  ಮಾರ್ಚ್ 2020ರಲ್ಲಿ ಕೊರೋನಾ ಪ್ರಸಾರದ ಭೀತಿಯಲ್ಲಿ ಅನಿವಾರ್ಯವಾಗಿ ಪ್ರದರ್ಶನಗಳನ್ನು ನಿಲ್ಲಿಸಿದ್ದ ಯಕ್ಷಗಾನ ಮೇಳಗಳು ಒಂಭತ್ತು ತಿಂಗಳುಗಳ ನಂತರ ನವೆಂಬರ್ ಅಂತ್ಯಕ್ಕೆ ತಿರುಗಾಟಕ್ಕೆ ಹೊರಡುವುದು ಖಚಿತ ಎಂದು ಭಾವಿಸಲಾಗಿದೆ.

‘ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದರು ತಮ್ಮ ಕೆಲಸವನ್ನು ಕಳೆದುಕೊಂಡು ಜೀವನ ನಡೆಸಲು ಕಷ್ಟಪಡಬಾರದು. ಆದುದರಿಂದ ಎಲ್ಲಾ ರೀತಿಯ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ನವೆಂಬರ್ ಅಂತ್ಯಕ್ಕೆ ಯಕ್ಷಗಾನ ಪ್ರಾರಂಭಿಸಲು ಅನುಮತಿ ನೀಡಲಾಗುವುದು’ ಎಂದು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದರು. ಯಕ್ಷಗಾನ ಕಲಾವಿದರಿಗೆ ಕೊರೋನಾ ಪರೀಕ್ಷೆ ಇನ್ನು ಕಡ್ಡಾಯವಾಗಲಿದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು. ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಧಾರ್ಮಿಕ ದತ್ತಿ ಇಲಾಖೆಯವರು ಕಲಾವಿದರೆಲ್ಲರ ಮಾಹಿತಿ ಪಡೆದು ದಾಖಲಿಸಬೇಕು. ಆರೋಗ್ಯ ಇಲಾಖೆಯವರ ವತಿಯಿಂದ ಸರಕಾರದ ಮಾರ್ಗಸೂಚಿಯಂತೆ ಎಲ್ಲ ಕಲಾವಿದರೂ ಯಕ್ಷಗಾನ ಆರಂಭಕ್ಕೆ ಮುನ್ನ ಕೋವಿದ್ -19 ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಯಕ್ಷಗಾನ ಪ್ರದರ್ಶನಗಳು ಆರಂಭವಾದ ನಂತರವೂ ಪ್ರತಿ ವಾರವೂ ಮೇಳಗಳಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ. 

ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರು ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸುವಂತೆ ಸೂಚಿಸಿದರು. ಬಯಲು ಪ್ರದೇಶಗಳಲ್ಲಿ ಯಕ್ಷಗಾನ ಆರಂಭವಾಗುವ ಮುನ್ನ ಅಥವಾ ಜನ ಸೇರುವ ಮುನ್ನ ಸ್ಯಾನಿಟೈಜ್ ಮಾಡಬೇಕು. 200 ಜನ ಪ್ರೇಕ್ಷಕರಿಗಿಂತ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡುವುದರ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. 

ಸಭೆಯಲ್ಲಿ ಭಾಗವಹಿಸಿದ್ದ ಕಟೀಲು ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡುತ್ತಾ, ಕಟೀಲಿನ ಎಲ್ಲಾ ಆರು ಮೇಳಗಳು ನಿಗದಿತ ಸಮಯಕ್ಕೆ ಪ್ರದರ್ಶನಕ್ಕೆ ಹೊರಡುತ್ತವೆ ಎಂದೂ ಆ ಬಗ್ಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆಯೆಂದೂ ತಿಳಿಸಿದರು. ಉಜಿರೆ ಅಶೋಕ ಭಟ್ಟರು ಮಾತನಾಡುತ್ತಾ ಕೊರೋನಾ ಕಾರಣದಿಂದ ಯಕ್ಷಗಾನ ಕಲಾವಿದರ ಸಂಕಷ್ಟ ಮತ್ತು ಸವಾಲುಗಳನ್ನು ವಿವರಿಸಿದರು.  ಸಭೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ವೆಂಕಟೇಶ್, ಕನ್ನಡ ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ರಾಜೇಶ್, ಕಲಾವಿದರ ಪರವಾಗಿ ಪಟ್ಲ ಸತೀಶ್ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ ಹಾಗೂ ಸೀತಾರಾಮ್ ಕುಮಾರ್ ಉಪಸ್ಥಿತರಿದ್ದರು. 

ಯಕ್ಷ ಶಾಂತಲಾ ಪಾತಾಳ – ಶ್ರೀ ಪಾತಾಳ ವೆಂಕಟ್ರಮಣ ಭಟ್ (Yaksha Shanthala Pathala – Sri Pathala Venkatramana Bhat)

‘ಯಕ್ಷ ಶಾಂತಲಾ ಪಾತಾಳ’ ಇದು ಹಿರಿಯ ಪ್ರಸಿದ್ಧ ಸ್ತ್ರೀ ಪಾತ್ರಧಾರಿ ಶ್ರೀ ಪಾತಾಳ ವೆಂಕಟ್ರಮಣ ಭಟ್ಟರ ಅಭಿನಂದನಾ ಕೃತಿ. ಈ ಕೃತಿಯು 2005ರಲ್ಲಿ ಪ್ರಕಟವಾಗಿ ಓದುಗರ ಕೈ ಸೇರಿತ್ತು. ಇದರ ಪ್ರಕಾಶಕರು ಶ್ರೀ ಪಾತಾಳ ಅಭಿನಂದನ ಕೃತಿ ಪ್ರಕಾಶನ ಸಮಿತಿ, ಪುತ್ತೂರು ಇವರು. ಸಂಪಾದಕರು ಶ್ರೀ ಮುಳಿಯ ಶಂಕರ ಭಟ್ಟರು. ಇದು ಒಟ್ಟು ಇನ್ನೂರ ಇಪ್ಪತ್ತೇಳು ಪುಟಗಳನ್ನು ಹೊಂದಿದ್ದು  ಶ್ರೀ ಪಾತಾಳ ವೆಂಕಟ್ರಮಣ ಭಟ್ಟರು ಧರಿಸಿದ ವೇಷಗಳ ಬಣ್ಣದ ಮತ್ತು ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನು ನೀಡಲಾಗಿದೆ. ಎಡನೀರು ಮಠಾಧೀಶರಾಗಿದ್ದ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ‘ನೆನಪಿನಾಳದಿಂದ’ ಎಂಬ ಶೀರ್ಷಿಕೆಯಡಿ ನೀಡಿದ ಅನುಗ್ರಹ ಸಂದೇಶವನ್ನು ನೀಡಲಾಗಿದೆ. ಸಂಪಾದಕ ಶ್ರೀ ಮುಳಿಯ ಶಂಕರ ಭಟ್ಟರು ‘ಓದುವ ಮುನ್ನ’ ಎಂಬ ಬರಹದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ಸಹಕರಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದ್ದಾರೆ. ಶ್ರೀ ಮುಳಿಯ ಶಂಕರ ಭಟ್ ಮತ್ತು ಶ್ರೀ ನ. ಕಾರಂತ ಪೆರಾಜೆಯವರು ಬರೆದ ‘ಬದುಕಿನ ಬಣ್ಣ ಮತ್ತು ಬಣ್ಣದ ಬದುಕು’ ಎಂಬ ಲೇಖನವಿದ್ದು ಅದರಲ್ಲಿ ಪಾತಾಳ ವೆಂಕಟ್ರಮಣ ಭಟ್ಟರ ಬದುಕು, ಬಣ್ಣದ ಬದುಕು ಮತ್ತು ಸಂದರ್ಶನದ ವಿವರಗಳನ್ನು ನೀಡಲಾಗಿದೆ. ಬಳಿಕ ಪಾತಾಳದ ನೆನಹುಗಳು, ಸ್ವಾಭೀಮಾನಿ ಕಲಾವಿದ, ಅವಿಸ್ಮರಣೀಯ ಸನ್ನಿವೇಶಗಳು, ಪಾತಾಳದ ಆಳ, ಶಿಲ್ಪಗಳ ಸ್ಪೂರ್ತಿಯಿಂದ ಪಾತ್ರಗಳನ್ನು ತುಂಬಿದ ಪ್ರತಿಭಾವಂತ, ನಂಬರ್ 1 ಸ್ತ್ರೀ ಪಾತ್ರಧಾರಿ, ಸ್ತ್ರೀಪಾತ್ರಗಳೊಳಪ್ರತಿಮ ರತ್ನ, ಜೀವ ತಳೆದು ಬಂದ ಶಿಲಾಬಾಲಿಕೆ, ಸಜ್ಜನ ಒಡನಾಡಿ, ರೂಪಶ್ರೀ ನಾಗಾಂಗನೆ, ನಿಯತ್ತಿನ ಕಲಾವಿದ, ಕಲಾತಪಸ್ವಿ, ಅನನ್ಯ ಕೊಡುಗೆ – ಕೇಶಾಲಂಕಾರ, ಪಡುವಲಪಾಯ ಯಕ್ಷಗಾನ ಸ್ತ್ರೀವೇಷದಲ್ಲಿ ಸುಧಾರಣೆ ಮತ್ತು ಸೌಂದರ್ಯ, ಯಕ್ಷಗಾನ ಪೂರ್ವರಂಗ, ಯಕ್ಷಗಾನ ಅಂದು ಇಂದು, ಯಕ್ಷಗಾನ ಮುಖವರ್ಣಿಕಾ ಪರಂಪರೆ, ಪುರಾಣ ಪ್ರಜ್ಞಾವರ್ಧನ ಯಕ್ಷಗಾನ, ನಮ್ಮ ಯಕ್ಷಗಾನ ಬಯಲಾಟ ಎತ್ತ ಸಾಗುತ್ತಿದೆ, ಯಕ್ಷಗಾನದಲ್ಲಿ ಪರಂಪರೆಯ ಪ್ರಜ್ಞೆ, ಯಕ್ಷಗಾನ ರಂಗಭೂಮಿ ಮತ್ತು ಕೊರಿಯೋಗ್ರಫಿ, ಒಂದು ಅಪೂರ್ವ ಯಕ್ಷಗಾನ ಪ್ರಸಂಗ, ಆಟದೊಳಗಣ ಆಟ, ಪ್ರಸಂಗಗಳಲ್ಲಿ ಸ್ತ್ರೀಪಾತ್ರಗಳು, ಯಕ್ಷಗಾನಕ್ಕೆ ಶಕ್ತಿ ತುಂಬಿಸಿ, ಒಂದು ಮುನ್ನುಡಿ, ಪಾತಾಳದ ನಾಗಕನ್ಯೆ, ದಕ್ಷಿಣ ಕನ್ನಡದಲ್ಲಿ ಯಕ್ಷಗಾನ, ಯಕ್ಷಗಾನ ಅರ್ಥಗಾರಿಕೆಯಲ್ಲಿ ಸ್ವಗತ, ಯಕ್ಷಗಾನದಲ್ಲಿ ಸ್ತ್ರೀ ವೇಷ ಎಂಬ ಬರಹಗಳಿವೆ.

ಲೇಖನಗಳನ್ನು ಬರೆದವರು ಕ್ರಮವಾಗಿ ರಾಜಗೋಪಾಲ ಕನ್ಯಾನ, ಕೆ, ಗೋವಿಂದ ಭಟ್, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಹಾಸ್ಯಗಾರ ಪೆರುವಡಿ ನಾರಾಯಣ ಭಟ್ಟ, ಕುಂಬಳೆ ಸುಂದರ ರಾವ್, ಕಡತೋಕಾ ಮಂಜುನಾಥ ಭಾಗವತರು, ಡಾ. ಗೋವಿಂದ ಭಟ್ ಅಂಬೆಮೂಲೆ, ಎಚ್. ಶ್ರೀಧರ ಹಂದೆ, ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್, ಕೊಳ್ಯೂರು ರಾಮಚಂದ್ರ ರಾವ್, ಕಜೆ ಈಶ್ವರ ಭಟ್, ಪ್ರೊ| ಎಂ.ಎಲ್.ಸಾಮಗ, ಪುಚ್ಚೆಕೆರೆ ಕೃಷ್ಣ ಭಟ್, ಶತಾವಧಾನಿ ಡಾ. ಆರ್.ಗಣೇಶ್, ಬಲಿಪ ನಾರಾಯಣ ಭಾಗವತ, ಅಮೃತ ಸೋಮೇಶ್ವರ, ಮಹಾಬಲ ಕಲ್ಮಡ್ಕ, ಪ್ರೊ| ಟಿ. ಕೇಶವ ಭಟ್ಟ, ತುದಿಯಡ್ಕ ವಿಷ್ಣ್ವಯ್ಯ, ವೆಂಕಟರಾಜ ಪುಣಿಂಚತ್ತಾಯ, ಕೆರೆಮನೆ ಶಂಭು ಹೆಗಡೆ, ಡಾ| ಕಮಲಾಕ್ಷ ಕೆ., ಮೂರ್ತಿ ನಾಯ್ಕಾಪು, ವಿ.ಬಿ.ಅರ್ತಿಕಜೆ, ಕೃಷ್ಣ ಭಟ್ ಪೆರ್ಲ, ತೇಜಸ್ವಿನಿ ಕೀರಿಕ್ಕಾಡು, ಸಂಜೀವ ಶೆಟ್ಟಿ ಅಳಿಕೆ, ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಗಣರಾಜ ಕುಂಬಳೆ. ಈ ಕೃತಿಯ ಕೊನೆಯಲ್ಲಿ ಶ್ರೀ ಪಾತಾಳರಿಗೆ ಸಂದ ಮಾನ-ಸನ್ಮಾನ, ಪಾತಾಳ ವಂಶವಾಹಿನಿ, ಲೇಖಕರ ವಿಳಾಸ, ಶ್ರೀ ಪಾತಾಳ ಅಭಿನಂದನ-ಕೃತಿ ಪ್ರಕಾಶನ ಸಮಿತಿ ಈ ವಿಚಾರಗಳ ಬಗೆಗೆ ಮಾಹಿತಿಗಳನ್ನು ನೀಡಲಾಗಿದೆ.

ಲೇಖಕ: ರವಿಶಂಕರ್ ವಳಕ್ಕುಂಜ 

ಯಕ್ಷರಂಗ ಕಂಡ ವಿಸ್ಮಯ – ಎಂಪೆಕಟ್ಟೆ ರಾಮಯ್ಯ ರೈ (Empekatte Ramayya Rai)

ಯಾವುದೇ ಕಲಾಪ್ರಾಕಾರಗಳೇ ಇರಲಿ ಅಥವಾ ಒಂದು ಒಲಿಂಪಿಕ್ಸ್, ವಿಶ್ವಕಪ್ ಗಳಂತಹಾ ಆಟಗಳೇ ಇರಲಿ, ಅಥವಾ ಸಂಶೋಧನೆ, ಯುದ್ಧಗಳೇ ಇರಲಿ ಎಲ್ಲರೂ ಒಂದು ತಂಡವಾಗಿ (Team Work) ಕೆಲಸ ಮಾಡಿದಾಗ ಮಾತ್ರ ಅಲ್ಲಿ ಯಶಸ್ಸು ಬೇಗನೆ ಸಿಗಲು ಸಾಧ್ಯ.

ತನ್ನ ಸಾಮರ್ಥ್ಯವನ್ನು ಪ್ರಕಟಪಡಿಸುವುದರ ಜೊತೆಗೆ ಇನ್ನೊಬ್ಬರನ್ನು ಯಶಸ್ಸಿನತ್ತ ಪ್ರೇರೇಪಿಸುವ ಒಳ್ಳೆಯತನವೇ ಮುಖ್ಯವಾಗಿ ಗುರುತಿಸಲ್ಪಡುವ ವಿಚಾರ. ತಾನು ಸೋತು ಒಟ್ಟು ಸನ್ನಿವೇಶವನ್ನು ಗೆಲ್ಲಿಸುವ ಕೆಲವು ವ್ಯಕ್ತಿತ್ವಗಳನ್ನಾದರೂ ನಾವು ಗಮನಿಸಬಹುದು. ಅಂತಹವರಲ್ಲಿ ಯಕ್ಷಗಾನದ ವಿಶಿಷ್ಟ ಶೈಲಿಯ ಕಲಾವಿದ ಎಂಪೆಕಟ್ಟೆ ರಾಮಯ್ಯ ರೈಗಳು ಒಬ್ಬರು.  ಎಂಪೆಕಟ್ಟೆ ರಾಮಯ್ಯ ರೈಗಳು ನಮಗೆ ಇಷ್ಟವಾಗುವುದು ಇದೇ ಕಾರಣಕ್ಕೆ.

ಇಂದಿನ ಕಲಾವಿದರು ಎಂಪೆಕಟ್ಟೆಯವರ ಈ ಆದರ್ಶಗಳನ್ನು ಗೌರವಿಸಬೇಕಾದ ಹಾಗೂ ಅನುಸರಿಸಬೇಕಾದ ಅವಶ್ಯಕತೆ ತುಂಬಾ ಇದೆ. ಎಂಪೆಕಟ್ಟೆ ರಾಮಯ್ಯ ರೈಗಳು ಇಂದು ನಮ್ಮೊಡನಿಲ್ಲದಿದ್ದರೂ ಕಲಾವಿದನಾಗಿ ಅವರು ಏರಿದ ಎತ್ತರ ಮತ್ತು ರಂಗದಲ್ಲಿ ಅವರ ಪ್ರದರ್ಶನ ಎಂದಿಗೂ ಮೌಲ್ಯಯುತವಾಗಿರುತ್ತದೆ ಹಾಗೂ ಗೌರವಿಸಲ್ಪಡುತ್ತದೆ.

ಯಕ್ಷಗಾನದ ಇತಿಹಾಸ, ಆಗುಹೋಗುಗಳ ಬಗ್ಗೆ ಮಾತಾಡುವಾಗ, ನಡುವೆ ಇವರ ಹೆಸರೊಂದು ಉಲ್ಲೇಖಿಸದಿದ್ದರೆ ಆ ಮಾತುಕತೆಗಳು ಅರ್ಥ ಕಳೆದುಕೊಳ್ಳುತ್ತವೆ. ಶೇಣಿ, ಸಾಮಗರಾದಿಯಾಗಿ ಹಲವಾರು ಕಲಾಕೋವಿದರ ಪಾಂಡಿತ್ಯಪೂರ್ಣ ಮಾತುಗಾರಿಕೆ ಹಾಗೂ ಧಿಗಿಣಗಳಿಂದೊಡಗೂಡಿದ ಮತ್ತು ಅಪೂರ್ವ ನೃತ್ಯಕೌಶಲದ ಕಲಾವಿದರ ಪಾಂಡಿತ್ಯ ಪ್ರದರ್ಶನ.  ಇವರೆಲ್ಲರ ನಡುವೆ ಎಂಪೆಕಟ್ಟೆಯವರದು ಪ್ರತ್ಯೇಕವಾಗಿ ನಿಲ್ಲುವ ಪ್ರದರ್ಶನ . 

ಕಲಾಜಗತ್ತಿನಲ್ಲಿ  ಮುಂದಿನ ಪೀಳಿಗೆಯವರು ನೆನಪಿನಲ್ಲಿಡುವಂತೆ ಯಕ್ಷಗಾನ ಲೋಕದಲ್ಲಿ ತನ್ನತನದ ಬೀಜವನ್ನು ಬಿತ್ತಿದರು.   ದೇವೇಂದ್ರ’’ನ ಪಾತ್ರದಲ್ಲಿ ಎಂಪೆಕಟ್ಟೆಯವರಷ್ಟು ಪ್ರಭಾವಶಾಲಿಯಾಗಿ ನಿರ್ವಹಿಸುವವರು ಮತ್ತೊಬ್ಬರಿಲ್ಲ. ಸಮುದ್ರಮಥನದ ದೇವೇಂದ್ರ ಎಂಪೆಕಟ್ಟೆ ರಾಮಯ್ಯ ರೈಗಳಿಗೆ ಹೆಸರು ತಂದುಕೊಟ್ಟ ಪಾತ್ರ. ಅದು ಅವರ ಮಾಸ್ಟರ್ ಪೀಸ್. ಅದರಂತೆಯೇ ತ್ರಿಪುರ ಮಥನದ ದೇವೇಂದ್ರ ಕೂಡಾ. ಒಡ್ಡೋಲಗದ ದೇವೇಂದ್ರನ ಪಾತ್ರವನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸುವುದರಲ್ಲಿ ಎಂಪೆಕಟ್ಟೆಯವರದು ಎತ್ತಿದ ಕೈ.

ಎಂಪೆಕಟ್ಟೆಯವರು ಒಮ್ಮೆ ಮಾಡಿದ ಪಾತ್ರವನ್ನು ನೋಡಿದ ಪ್ರೇಕ್ಷಕರಿಗೆ ಅದೇ ಪಾತ್ರವನ್ನು ಬೇರೆ ಕಲಾವಿದರು ಮಾಡಿದಾಗ ಅಷ್ಟು ಪರಿಣಾಮಕಾರಿ ಎಂದೆನಿಸುತ್ತಿರಲಿಲ್ಲ. ಆದುದರಿಂದ ಆ ಕಾಲದಲ್ಲಿ ಅವರ ಅನುಪಸ್ಥಿತಿಯಲ್ಲಿ ಅವರು ನಿರ್ವಹಿಸಿದ ಪಾತ್ರವನ್ನು ಮಾಡುವುದು ಬೇರೆಯವರಿಗೆ ದೊಡ್ಡ ಸವಾಲೇ ಆಗಿತ್ತು. 

ಎಂಪೆಕಟ್ಟೆಯವರ ಮಾತುಗಾರಿಕೆ ಕೆಲವರಿಗೆ ಪಾತ್ರದ ಮತ್ತು ಸಂದರ್ಭದ ಔಚಿತ್ಯವನ್ನು ಮೀರಿದಂತೆ ಎಂದು ಅನಿಸಿದರೂ ಕೆಲವೊಮ್ಮೆ ಮಾತಿನ ಮಲ್ಲರ ನಡುವಿನ ಬಿಗು ಸನ್ನಿವೇಶದಲ್ಲಿ ಅವರ ವಿತಂಡ ವಾದವು ಪರಿಸ್ಥಿತಿಯನ್ನು ತಿಳಿಗೊಳಿಸಲು ಸಹಾಯಕವಾಗುತ್ತಿತ್ತು. ಶೇಣಿ, ಸಾಮಗ, ಸುಂದರ ರಾಯರೇ ಮೊದಲಾದವರು ರೈಗಳ ಮಾತಿಗೆ ನಕ್ಕು ಸುಮ್ಮನಾಗುತ್ತಾರೆ. ಎಂಪೆಕಟ್ಟೆ ಏರು ಪದ್ಯದ ಕುಣಿತದ ಶೈಲಿ ಬಹಳ ಆಕರ್ಷಕ. ಅಂತಹ ಆಕರ್ಷಕ ಶೈಲಿ ಈಗಿನ ಯಕ್ಷಗಾನದಲ್ಲಿ ಮಾಯವಾಗಿರುವುದು ಕಂಡುಬರುತ್ತದೆ.

ಆ ಶೈಲಿಯನ್ನು ಎಂಪೆಕಟ್ಟೆಯವರೇ ಹುಟ್ಟು ಹಾಕಿದರು ಎಂಬುದು ಈ ಮಾತಿನ ಅರ್ಥವಲ್ಲ. ವೀರ ರಸದ ಪದ್ಯಗಳಿಗೆ ಮೂರು ಕುತ್ತುಗಳನ್ನು ಹಾರಿ ಮತ್ತೆ ಒಂದು ಸುತ್ತು ಬರಲು ತೊಡಗುವ ಮುನ್ನ ಒಮ್ಮೆ ಕೆಳಗೆ ನೋಡಿ ಮುಖವನ್ನು ಮೇಲೆತ್ತುವ ಆ ಶೈಲಿ ಅಪೂರ್ವವೂ ಅನನ್ಯವೂ ಆಗಿತ್ತು. ಈಗಿನ ಕಲಾವಿದರು ಯಾಕೆ ಇಂತಹಾ ಶೈಲಿಗಳನ್ನು ತಮ್ಮ ನಾಟ್ಯದಲ್ಲಿ ಅಳವಡಿಸಿಕೊಳ್ಳುವುದಿಲ್ಲ ಎಂದು ಆಶ್ಚರ್ಯವಾಗುತ್ತದೆ. ದಡ ಬಡ ಹಾರಿ ದೇಹವನ್ನು ದಂಡಿಸಿಕೊಳ್ಳುವ ಬದಲು ನಿರಾಯಾಸವಾಗಿ ಆಕರ್ಷಕ ಶೈಲಿಯಿಂದ ನೃತ್ಯವನ್ನು ಪ್ರಸ್ತುತಪಡಿಸುವ ಕಲೆ ಅವರಿಗೆ ಕರಗತವಾಗಿತ್ತು.

ವೈಯುಕ್ತಿಕ ವಿಚಾರಗಳನ್ನು ಎಂದೂ ರಂಗದಲ್ಲಿ ಪ್ರತಿಫಲಿಸದೆ ತಾನು ಸೋತು ಸಹಪಾತ್ರಧಾರಿಗಳನ್ನು ಗೆಲ್ಲಿಸಿದ ಮಹಾನುಭಾವ ಅವರು. ಖಳ ಪಾತ್ರಗಳಲ್ಲಿ ಮಾತ್ರವಲ್ಲದೆ ಅರ್ಜುನ, ಅತಿಕಾಯನಂತಹಾ ಸಾತ್ವಿಕ ಪಾತ್ರಗಳಲ್ಲೂ ಮಿಂಚಿದ ಎಂಪೆಕಟ್ಟೆ ರಾಮಯ್ಯ ರೈಗಳು  ಮಹಾಕಲಿ ಮಗಧೇಂದ್ರದಲ್ಲಿ ಮಾಗಧ, ಸಮುದ್ರಮಥನದ ಮತ್ತು ತ್ರಿಪುರಮಥನದ ದೇವೇಂದ್ರ, ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ವ್ಯಾಪಾರಿ ಶೆಟ್ಟಿ ಮತ್ತು ಕುಟ್ಟಿಮೂಸೆ, ಗದಾಯುದ್ಧದ ಭೀಮ, ದೇವಿ ಮಹಾತ್ಮೆಯಲ್ಲಿ ಮಧು, ಕೈಟಭ, ‘ಶಬರಿಮಲೆ ಅಯ್ಯಪ್ಪ’ದಲ್ಲಿ ವಾವರ, ವಂಶವಾಹಿನಿಯ ಯುಧಾಜಿತು, ಇಂದ್ರಜಿತು, ಅರ್ಜುನ, ಅತಿಕಾಯ, ಹಿರಣ್ಯಾಕ್ಷ, ಮೊದಲಾದುವು ಅವರ ಇಷ್ಟದ ಪಾತ್ರಗಳು.

ಖ್ಯಾತ ಹಾಸ್ಯ ಕಲಾವಿದ ನಯನ ಕುಮಾರ್ ಮತ್ತು ಎಂಪೆಕಟ್ಟೆಯವರದು ರಂಗದಲ್ಲಿ ಅವಿನಾಭಾವ ಸಂಬಂಧ. ಆ ದಿನಗಳಲ್ಲಿ ಈ ಜೋಡಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿತ್ತು. ‘ಪೌಂಡ್ರಕ ವಾಸುದೇವ’ ಪಾತ್ರವಹಿಸಿ ‘ಅಜಯ’ನಾಗಿ ಪಾತ್ರವಹಿಸಿದ ನಯನ ಕುಮಾರರ ಜೊತೆ ಹಾಸ್ಯದ ಹೊನಲನ್ನೇ ಹರಿಸುವ ಸನ್ನಿವೇಶ, ಕೃಷ್ಣನ ಪಾತ್ರವಹಿಸುವ ಕುಂಬಳೆ ಸುಂದರ ರಾವ್ ಜೊತೆಗಿನ ವಾಗ್ವಾದ ಇವೆಲ್ಲಾ ರಮಣೀಯವೂ ಮನರಂಜನೀಯವೂ ಆದ ಸನ್ನಿವೇಶಗಳು.

ಚಂದ್ರಾವಳಿ ವಿಲಾಸ ಚಂದಗೋಪ, ‘ಮಹಾರಥಿ ಕರ್ಣ’ ಪ್ರಸಂಗದ ಕರ್ಣನಿಗೆ ಶಾಪಗೈಯುವ ಪರಶುರಾಮ ಪಾತ್ರಗಳೂ ಇವರಿಗೆ ಹೆಸರು ತಂದು ಕೊಟ್ಟ ಪಾತ್ರಗಳು.  ಏರುಪದ್ಯದಲ್ಲಿ ಎದೆಯ ಮೇಲೆ ಕೈಯಿಟ್ಟು ಸುತ್ತುಬರುವ ವಿಧಾನ, ನಾಟ್ಯಶೈಲಿ, ಕಣ್ಣನ್ನು ತಿರುಗಿಸುವ ರೀತಿ, ಗದೆಯನ್ನೊಮ್ಮೆ ಮೇಲೆತ್ತಿ ತಿರುಗಿಸುವ ಪರಿ, ಕುತ್ತು ಹಾರಿದ ನಂತರ ಒಮ್ಮೆ ಕೆಳಮುಖವಾಗಿ ನೋಡಿ ಮುಖ ಮೇಲೆತ್ತುವ ಶೈಲಿ ಇವುಗಳೆಲ್ಲಾ ಎಂಪೆಕಟ್ಟೆಯವರ ಮಾಸ್ಟರ್ ಪೀಸ್ ಗಳು.

ಖಳ ಪಾತ್ರಗಳಷ್ಟೇ ಅಲ್ಲದೆ ಪ್ರಣಯ ದೃಶ್ಯಗಳಲ್ಲೂ ಎಂಪೆಕಟ್ಟೆಯವರು ಉತ್ಕೃಷ್ಟವಾದ ಅಭಿನಯವನ್ನು ನೀಡುತ್ತಿದ್ದವರು. ಆ ದಿನಗಳಲ್ಲಿ ಉತ್ತಮ ಜೋಡಿಯೆಂದೇ ಗುರುತಿಸಲ್ಪಿಟ್ಟಿದ್ದ ಎಂಪೆಕಟ್ಟೆ-ನಯನಕುಮಾರ್ ಜೋಡಿ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿತ್ತು. ಆದರೆ ಈಗ ಇಬ್ಬರೂ ಇಲ್ಲ. ಜನರು ಇಬ್ಬರ ಮೇಲೆ ಇನ್ನಷ್ಟು ನಿರೀಕ್ಷೆಗಳನ್ನು ಇರಿಸಿದ್ದರೂ ಎಲ್ಲರ ನಂಬಿಕೆಗಳನ್ನೂ ಹುಸಿಗೊಳಿಸಿ ಇಬ್ಬರೂ ಮರೆಯಾದದ್ದು ವಿಪರ್ಯಾಸವೆಂದೇ ಹೇಳಬೇಕು. 


ಲೇಖನ : ಮನಮೋಹನ್ ವಿ. ಎಸ್.