‘ಪಾರ್ತಿಸುಬ್ಬನ ಯಕ್ಷಗಾನಗಳು’ ಈ ಕೃತಿಯು ಯಕ್ಷಗಾನದ ಜನಕ ಪಾರ್ತಿಸುಬ್ಬ ಅವರು ಬರೆದ ಪ್ರಸಂಗಗಳ ಒಂದು ಸಂಪುಟ. ಈ ಪುಸ್ತಕದ ಸಂಪಾದಕರು ಕುಕ್ಕಿಲ ಕೃಷ್ಣ ಭಟ್. ಕುಕ್ಕಿಲ ಕೃಷ್ಣ ಭಟ್ಟರ ಜೀವಿತಾವಧಿ 1911 – 1988. ಇದು ಮೂರನೆಯ ಮುದ್ರಣ. ಪ್ರಕಾಶಕರು ಡಾ. ಕೀಲಾರು ಗೋಪಾಲಕೃಷ್ಣಯ್ಯ (ರಿ ) ಸಂಪಾಜೆ. 1975ರಲ್ಲಿ ಮೊದಲ ಮುದ್ರಣವು ನಡೆದು 2009ರಲ್ಲಿ ಮರು ಮುದ್ರಿತವಾಗಿತ್ತು. ಆಗ ಈ ಪುಸ್ತಕವು ಹೊರಬರಲು ಕರ್ನಾಟಕ ಯಕ್ಷಗಾನ ಅಕಾಡೆಮಿಯು ನೆರವನ್ನು ನೀಡಿತ್ತು. ಶ್ರೀ ಹಾ.ಮಾ. ನಾಯಕ ಅವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದವರು. ವಿಭಾಗ ಸಂಪಾದಕರಾಗಿದ್ದ ಜೀ. ಶಂ. ಪರಮಶಿವಯ್ಯ ಅವರ ಲೇಖನವೂ ಇದೆ. ‘ಪೀಠಿಕೆ’ ಶೀರ್ಷಿಕೆಯಡಿ ಸಂಪಾದಕರಾದ ಕುಕ್ಕಿಲ ಕೃಷ್ಣ ಭಟ್ಟರು ಪಾರ್ತಿಸುಬ್ಬ ಮತ್ತು ಪಾರ್ತಿಸುಬ್ಬನು ರಚಿಸಿದ ಪ್ರಸಂಗಗಳ ಬಗೆಗೆ ವಿವರಣೆಯನ್ನು ನೀಡಿರುತ್ತಾರೆ. ಈ ಕೃತಿಯಲ್ಲಿ ಪುತ್ರಕಾಮೇಷ್ಟಿ-ಸೀತಾಕಲ್ಯಾಣ, ಪಟ್ಟಾಭಿಷೇಕ-ಪಂಚವಟಿ,ಪಂಚವಟಿ-ವಾಲಿಸಂಹಾರ, ಉಂಗುರ ಸಂಧಿ, ಸೇತುಬಂಧನ, ಅಂಗದಸಂಧಾನ, ಕುಂಭಕರ್ಣಾದಿ ಕಾಳಗ, ಕುಶಲವರ ಕಾಳಗ, ಕೃಷ್ಣ ಚರಿತೆ, ಐರಾವತ ಎಂಬ ಪ್ರಸಂಗಗಳಿವೆ. ಕಥಾಸಾರಾಂಶವನ್ನೂ ಪ್ರಸಂಗದಲ್ಲಿ ಬರುವ ಪಾತ್ರಗಳನ್ನೂ ನಮೂದಿಸಿದ್ದು ತುಂಬಾ ಅನುಕೂಲವಾಗಿದೆ. ಸಭಾಲಕ್ಷಣವನ್ನು ಸವಿವರವಾಗಿ ನೀಡಲಾಗಿದೆ. ಬಳಿಕ ಅನುಬಂಧ ವಿಭಾಗದಲ್ಲಿ ಡಾ. ಎಂ. ಪ್ರಭಾಕರ ಜೋಶಿ, ಕುಕ್ಕಿಲ ನಾರಾಯಣ ಭಟ್ಟ ಮತ್ತು ಮುಳಿಯ ತಿಮ್ಮಪ್ಪಯ್ಯನವರ ಲೇಖನಗಳಿವೆ. ಬಳಿಕ ‘ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಎರಡು ಮಾತುಗಳು’ ಎಂಬ ಲೇಖನವಿದೆ. ಅಲ್ಲದೆ ‘ಮರುಮುದ್ರಣದ ಪೂರ್ವರಂಗ’ ಎಂಬ ಶೀರ್ಷಿಕೆಯಡಿ ಶ್ರೀ ಜಿ. ಎನ್. ಅನಂತವರ್ಧನ ಮತ್ತು ಶ್ರೀ ಧನಂಜಯ್ ಇವರುಗಳ ಲೇಖನವಿದೆ. ಈ ಪುಸ್ತಕದ ಹೊರ ಆವರಣದಲ್ಲಿ ಶ್ರೀ ಕುಕ್ಕಿಲ ಕೃಷ್ಣ ಭಟ್ಟರ ಜೀವನ ವಿವರವನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ.
ಸುಣ್ಣಂಬಳ ವಿಶ್ವೇಶ್ವರ ಭಟ್ – ಮಿತಭಾಷಿಯ ಸಹೃದಯತೆ (ಶೇಣಿ, ಸುಣ್ಣಂಬಳ ತಾಳಮದ್ದಳೆ ವೀಡಿಯೋ)
ಪ್ರಾಮಾಣಿಕವಾಗಿ ಹೇಳುವುದಾದರೆ ರಂಗದ ಬಣ್ಣದ ಮಾತುಗಾರಿಕೆಯೇ ಬೇರೆ. ವಾಸ್ತವದ ಬದುಕೇ ಬೇರೆ. ಎರಡೂ ಕೆಲವೊಮ್ಮೆ ವಿರುದ್ಧ ಧ್ರುವಗಳು. ಎರಡರಲ್ಲೂ ವೈರುಧ್ಯವನ್ನು ಕಾಣಬಹುದು. ಬದುಕು ಎನ್ನುವದು ಹಾಗೆಯೇ. ಕೆಲವೊಮ್ಮೆ ನಾವು ನಮ್ಮ ಕರ್ತವ್ಯ ಪಾಲನೆಯಲ್ಲಿಯೋ ಅಥವಾ ಮಾಡುವ ಕೆಲಸದ ಶ್ರದ್ಧೆಯಲ್ಲಿಯೋ ನಮ್ಮತನವನ್ನು ಮರೆಮಾಚಿ ಬೇರೊಂದು ಮುಖವಾಡವನ್ನು ಹಾಕಬೇಕಾಗುತ್ತದೆ. ಅದು ಕೆಲಸದ ಮೇಲಿನ ಶ್ರದ್ಧೆ ಎಂದೇ ಪರಗಣಿಸಲ್ಪಡುತ್ತದೆ. ಮಾರಾಟಗಾರನೊಬ್ಬ ತನ್ನ ಕೌಶಲವನ್ನು ತೋರ್ಪಡಿಸುತ್ತಾ ಮಾರುವ ವಸ್ತುವಿನಲ್ಲಿ ಉತ್ಪ್ರೇಕ್ಷೆಯ ಗುಣಗಳನ್ನು ಎತ್ತಿ ತೋರಿಸುತ್ತಾ ಗ್ರಾಹಕನ ಮನಸ್ಸನ್ನು ವಶೀಕರಿಸಬೇಕಾಗುತ್ತದೆ. ಇದು ಮಾರಾಟದ ಕೌಶಲ ಅಥವಾ Salesmanship ಎಂದೇ ಕರೆಯಲ್ಪಡುತ್ತದೆ ಮತ್ತು ಆತನ ಪ್ರಶಂಸೆ ಮತ್ತು ಉನ್ನತಿಗೂ ಕಾರಣವಾಗುತ್ತದೆ.
ಆದುದರಿಂದ ಎಷ್ಟೋ ಜನರು ಎಷ್ಟೋ ಬಾರಿ ಸಾಮಾಜಿಕ ಬದುಕಿನಲ್ಲಿ ವ್ಯವಹರಿಸುವಾಗ ಇರುವ ಅವರ ಸ್ವಭಾವಕ್ಕೂ ವೈಯುಕ್ತಿಕ ಬದುಕಿನ ನಿಜಸ್ಥಿತಿಗೂ ಗಾವುದಗಳ ಅಂತರವಿರುತ್ತದೆ. ಹೆಚ್ಚಿನ ಕಲಾವಿದರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಭರತನಾಟ್ಯ ಕಲಾವಿದೆಯ ಶೃಂಗಾರ ಮನೆಯಲ್ಲಿ ಮನಮೆಚ್ಚಿದವನ ಜೊತೆ ಕಾಣಸಿಗಬೇಕೆಂಬ ನಿಯಮವೇನೂ ಇಲ್ಲ. ರೌದ್ರ ರಸದಲ್ಲಿ ಪರಿಣತಮತಿಗಳಾದ ಪುರುಷರು ಮನೆಯಲ್ಲಿ ಶಾಂತರಸದಲ್ಲಿ ಇರಬಹುದು. ಕರುಣಾರಸದಲ್ಲಿ ಉತ್ತಮ ಅಭಿನಯ ನೀಡುವವರು ಇತರರ ಮುಂದೆ ಮಂದಹಾಸದಲ್ಲಿ ವರ್ತಿಸುತ್ತಿರಬಹುದು. ಎಷ್ಟೋ ರೌದ್ರರಸದ ಖಳನಾಯಕರು ಮೃದು ಮನಸ್ಸಿನ ಸಂಭಾವಿತರು ಎಂದು ನಮಗೆ ಹಲವು ನಟರ ಉದಾಹರಣೆಗಳಿಂದ ತಿಳಿದುಬರುತ್ತದೆ.
(ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? )
ಇನ್ನು ಸುತ್ತು ಬಳಸಿ ಮಾತು ಬೇಡ. ನಾನೀಗ ಯಕ್ಷಗಾನದ ವಿಷಯದತ್ತಲೇ ಬರಬೇಕು. ಯಕ್ಷಗಾನ ರಂಗದಲ್ಲಿ ವಾಗ್ವೈಭವದಿಂದ ರಂಜಿಸುವ ಎಷ್ಟೋ ನಟರು ನಿಜ ಜೀವನದಲ್ಲಿ ಮೃದು ಹಾಗೂ ಮಿತಭಾಷಿಗಳಾಗಿರುತ್ತಾರೆ ಎಂಬುದು ಆಶ್ಚರ್ಯವಾದರೂ ಸತ್ಯ. ಇದಕ್ಕೆ ಕೆಲವು ಮಂದಿ ಕಲಾವಿದರು ನಮ್ಮ ಎದುರಿಗೆ ಸಾಕ್ಷಿಯಾಗಿ ನಿಲ್ಲುತ್ತಾರೆ. ನಾವೇನೂ ತುಂಬಾ ಹಿಂದಕ್ಕೆ ಹೋಗುವುದು ಬೇಡ. ವರ್ತಮಾನ ಕಾಲದಲ್ಲೇ ಒಂದು ಸುತ್ತು ಹಾಕಿದರೆ ನಮಗೆ ಮೊದಲು ಕಾಣಸಿಕ್ಕುವುದು ಕೆ.ಗೋವಿಂದ ಭಟ್. ರಂಗದಿಂದ ಹೊರಗೆ ಅವರಿಂದ ಅತಿಯಾದ ಮಾತನ್ನು ನಿರೀಕ್ಷಿಸುವುದೇ ಬೇಡ. ಗುರುವಿನಂತೆ ಶಿಷ್ಯ ಎಂಬ ಮಾತು ಈ ವಿಷಯದಲ್ಲಿ ಕೂಡಾ ನಿಜ. ಅವರಷ್ಟಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಅದೇ ಸಾಲಿನಲ್ಲಿ ನಿಲ್ಲುವವರು ಸುಣ್ಣಂಬಳ ವಿಶ್ವೇಶ್ವರ ಭಟ್.
(ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…)
ಹೌದು ನಾನೀಗ ಬರೆಯ ಹೊರಟದ್ದು ಅವರ ಕುರಿತೇ. ಆದರೆ ಅವರ ವೈಯುಕ್ತಿಕ ಸ್ವಭಾವದ ಕುರಿತು ಬರೆಯುವುದು ನನ್ನ ಉದ್ದೇಶವಲ್ಲ. ಆದರೆ ಅವರ ಸ್ವಭಾವದಲ್ಲಿರುವ ಧನಾತ್ಮಕ ಅಂಶಗಳನ್ನು ನಾನು ಕಂಡ ಹಾಗೆ ಹೇಳಿದರೆ ಅದರಲ್ಲಿ ಅವರು ಅನ್ಯಥಾ ಭಾವಿಸಲಾರರು ಎಂದೇ ಭಾವಿಸುತ್ತೇನೆ. ಸುಣ್ಣಂಬಳ ವಿಶ್ವೇಶ್ವರ ಭಟ್ ರಂಗದಲ್ಲಿ ಮಾತುಗಾರ. ಹಾಗೆಂದು ಅವರಿಗೆ ಒಂದು ಪದ್ಯಕ್ಕೆ ಇಷ್ಟೇ ಮಾತನಾಡಲೇ ಬೇಕೆಂಬ ಚಟವೂ ಇಲ್ಲ. ಆದರೆ ತಾಳಮದ್ದಳೆಯ ವೇದಿಕೆಯಲ್ಲಿ ಅವರು ಹರಿಸುವ ವಿದ್ವತ್ಪೂರ್ಣ ಮಾತಿನ ಹರಿವಿನ ಒಂದು ಪಾಲೂ ನಿಜಜೀವನದಲ್ಲಿ ನಮಗೆ ಕಾಣಲು ಸಿಗುವುದು ದುರ್ಲಭ. ಅಗತ್ಯಕ್ಕೆ ಬೇಕಾದಷ್ಟೇ ಮಾತು.
ಮಿತಭಾಷಿಯೇ ಇರಬಹುದೇನೋ ಎಂದು ಯಾರಿಗಾದರೂ ಅನಿಸುವಷ್ಟೇ ಅವರು ಮಾತನಾಡುತ್ತಾರೆ. ಆದರೆ ಇದು ಅವರ ಒಳ್ಳೆಯ ಸ್ವಭಾವ ಎಂದೇ ನಾನು ಭಾವಿಸುತ್ತೇನೆ. ರಂಗದ ಹೊರಗೆ ಮಿತಭಾಷಿಯಾದರೂ ಅವರು ತೂಕದ ಮಾತುಗಳನ್ನೇ ಆಡುತ್ತಾರೆ. ನನಗೆ ಸುಣ್ಣಂಬಳ ವಿಶ್ವೇಶ್ವರ ಭಟ್ ಆತ್ಮೀಯರು ಹೌದಾದರೂ ನಿರರ್ಗಳವಾಗಿ ವಿಷಯಗಳನ್ನು ಹಂಚಿಕೊಳ್ಳುವಷ್ಟೇನಲ್ಲ. ಆದರೂ ಅವರ ವಿಷಯಗಳನ್ನು ನಾನು ಕೇಳಿ ಬಲ್ಲೆ. ವೇಷಧಾರಿಯಾಗಿ ವೃತ್ತಿ ಬದುಕು ಆರಂಭಿಸಿದ ಸುಣ್ಣಂಬಳರು ವೃತ್ತಿ ಬದುಕಿನಲ್ಲಿ ಸ್ವಪ್ರಯತ್ನದಿಂದ ಕಂಡ ಉನ್ನತಿಯ ಕತೆ ಬಹಳ ರೋಚಕ. ತಾನೆಂದೂ ಪ್ರಸಿದ್ಧಿಗೆ ಬೀಗದೆ ಬಾಗುವ ಗುಣವನ್ನು ಹೊಂದಿದ ಅವರು ತನ್ನ ಈ ಗುಣದಿಂದಲೇ ಸರ್ವರ ಮೆಚ್ಚುಗೆಗೂ ಮಾತ್ರವಲ್ಲದೆ ತನ್ನದೇ ಏಳಿಗೆಗೂ ಕಾರಣವಾದರು
.
ಯಕ್ಷಗಾನ ವೇಷಧಾರಿಯಾಗಿಯೂ ತಾಳಮದ್ದಳೆ ಅರ್ಥಧಾರಿಯಾಗಿಯೂ ಎರಡೂ ವಿಭಾಗದಲ್ಲಿ ಈ ರೀತಿಯ ಸಾಧನೆ ಮಾಡಿದ ಕಲಾವಿದರು ಅಪರೂಪ. ನಾಟ್ಯದಲ್ಲಿ, ನಟನೆಯಲ್ಲಿ ಪರಿಪಕ್ವತೆಯನ್ನು ಹೊಂದಿದ ಯಕ್ಷಗಾನ ಕಲಾವಿದನೊಬ್ಬ ತಾಳಮದ್ದಳೆ ಕ್ಷೇತ್ರದಲ್ಲಿಯೂ ಪ್ರಸಿದ್ಧಿಯನ್ನು ಪಡೆದದ್ದು ಮುಂದಕ್ಕೆ ಇತಿಹಾಸವನ್ನು ಸೃಷ್ಟಿಸಿದರೆ ಅಚ್ಚರಿಯಿಲ್ಲ. ಕೆ. ಗೋವಿಂದ ಭಟ್, ವಾಸುದೇವ ಸಾಮಗ ಮೊದಲಾದವರು ಈ ಸಾಲಿನಲ್ಲಿ ಮೊದಲು ಗುರುತಿಸಲ್ಪಡುತ್ತಾರಾದರೂ ಸುಣ್ಣಂಬಳರು ಇನ್ನೂ ಹಲವು ವರ್ಷಗಳ ಕಾಲ ಕಲಾವ್ಯವಸಾಯವನ್ನು ಮಾಡುವ ಅವಕಾಶವನ್ನು ಹೊಂದಿರುವುದು ಅವರಿಗೆ ಒಂದು ಪ್ಲಸ್ ಪಾಯಿಂಟ್.
ವಿಶ್ವೇಶ್ವರ ಭಟ್ ಸಾಧಾರಣವಾಗಿ ಸನ್ಮಾನ ಪ್ರಶಸ್ತಿಗಳನ್ನು ಸ್ವೀಕರಿಸಲು ಹಿಂದೇಟು ಹಾಕುವ ಸ್ವಭಾವದವರು. ಕೆಲವೊಮ್ಮೆ ಆತ್ಮೀಯರ ಒತ್ತಡಕ್ಕೆ, ಒತ್ತಾಯಕ್ಕೆ ಮಣಿದು ಸ್ವೀಕರಿಸಿದ್ದನ್ನು ಬಿಟ್ಟರೆ ಅವರು ಅದರಲ್ಲಿ ಆಸಕ್ತರಲ್ಲ. ಸ್ವ ಪ್ರತಿಷ್ಠೆಗಾಗಿ ಕೆಲವರು ಸನ್ಮಾನ ಮಾಡಿಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ ನಮಗೆ ಇಷ್ಟವಾಗುವುದು ಇದೇ ಕಾರಣಕ್ಕೆ. ತಾನು ವೇಷಧಾರಿಯಾಗಿ ಮತ್ತು ತಾಳಮದ್ದಳೆ ಅರ್ಥಧಾರಿಯಾಗಿ ವೇದಿಕೆಯೇರಬೇಕೆಂಬ ಹಂಬಲ ಬಿಟ್ಟರೆ ಅವರಲ್ಲಿ ಬೇರೇನೂ ಇಲ್ಲ. ವೇದಿಕೆಯಲ್ಲಿ ತನಗೂ ಒಂದು ಕುರ್ಚಿ ಹಾಕುವುದನ್ನು ವಿಶ್ವಣ್ಣ ನಯವಾಗಿ ತಿರಸ್ಕರಿಸುತ್ತಾರೆ.
ಇದನ್ನೂ ಓದಿ: ಆರ್.ಕೆ.ಭಟ್ ಕೊಂಗೋಟ್ ಮತ್ತು ಉಮಾ ಆರ್.ಕೆ.ಭಟ್ ದಂಪತಿಗಳ ನಿಸ್ವಾರ್ಥ ಕಲಾಸೇವೆ (ಕಲೆ ಬೆಳಗಿಸಿದ ಕ್ಯಾಮೆರಾ ಫ್ಲ್ಯಾಷ್ – ಭಾಗ 1)
ನಾನೊಮ್ಮೆ ಅವರ ಬಗ್ಗೆ ಲೇಖನ ಬರೆಯುವ ಉದ್ದೇಶದಿಂದ ಸಂಪರ್ಕಿಸಿದ್ದೆ. ಆಗಲೂ ಅವರು ನಯವಾಗಿ ತಿರಸ್ಕರಿಸಿದ್ದರು. ನನಗಿಂತ ಹೆಚ್ಚಿನ ಸಾಧನೆ ಮಾಡಿದವರು ಈ ರಂಗದಲ್ಲಿದ್ದಾರೆ. ಅವರ ಬಗ್ಗೆ ಮೊದಲು ಬರೆಯುವುದು ಉತ್ತಮ ಎಂದು ನನಗೆ ಸಲಹೆಯನ್ನೂ ಕೊಟ್ಟಿದ್ದರು. ಅವರ ಸಲಹೆ ಸರಿ ಎಂದು ಕಂಡಿತ್ತು. ಆದರೂ ನಾನೀಗ ಅವರ ಒಪ್ಪಿಗೆ ಇಲ್ಲದಿದ್ದರೂ ಲೇಖಕನ ಹಕ್ಕಿನ ನೆಲೆಯಲ್ಲಿ ಅವರ ಬಗ್ಗೆ ಬರೆಯುತ್ತಿದ್ದೇನೆ. ಸುಣ್ಣಂಬಳರು ತಮ್ಮ ಪ್ರಾಮಾಣಿಕತೆಗೂ ಹೆಸರುವಾಸಿ. ಇಲ್ಲದಿದ್ದರೆ 6ರ ಸಂಖ್ಯೆಯಲ್ಲಿರುವ ಕಟೀಲು ಮೇಳಗಳ ಜವಾಬ್ದಾರಿಯುತ ಸ್ಥಾನದಲ್ಲಿ ಇಂದು ದೀರ್ಘ ಸಮಯದಿಂದ ಕಾರ್ಯನಿರ್ವಹಿಸುತ್ತಿರಲು ಸಾಧ್ಯವಾಗುತ್ತಿರಲಿಲ್ಲ. ಯಾವತ್ತೂ ತನ್ನ ಸ್ಥಾನವನ್ನು ಅವರು ದುರುಪಯೋಗ ಮಾಡಿಕೊಂಡದ್ದಿಲ್ಲ ಎಂಬ ಮಾತನ್ನು ತಿಳಿದಿದ್ದೇನೆ. ತನ್ನ ಪ್ರಭಾವವನ್ನು ಉಪಯೋಗಿಸಿ ಅವರು ಯಾವುದೇ ಸ್ವಜನಪಕ್ಷಪಾತದಂತಹಾ ಕಾರ್ಯಗಳಿಗೆ ಮನಮಾಡಿದ್ದಿಲ್ಲ. ಅಧಿಕಾರದ ದುರುಪಯೋಗ ಮಾಡದೆ ತನ್ನ ಹುದ್ದೆಗೆ ಗೌರವ ಘನತೆಯನ್ನು ತಂದುಕೊಟ್ಟಿದ್ದಾರೆ.
ಎಷ್ಟೇ ಪ್ರಾಮಾಣಿಕರಾಗಿದ್ದರೂ ಉನ್ನತ ಸ್ಥಾನದಲ್ಲಿದ್ದವರಿಗೆ ವಿವಾದ ಸುತ್ತಿಕೊಳ್ಳುವುದು ಮತ್ತು ಕಾಲೆಳೆಯುವವರು ಹೆಚ್ಚು. ಆದರೆ ಸುಣ್ಣಂಬಳ ವಿಶ್ವೇಶ್ವರ ಭಟ್ ವಿವಾದಗಳಿಂದ ದೂರ ಇರಲು ಪ್ರಯತ್ನಿಸುವುದೇ ಅವರ ಮೃದು ಮತ್ತು ಮಿತಭಾಷಿತ್ವಕ್ಕೆ ಕಾರಣವಾಗಿರಬಹುದು. ಇಂದು ತಾಳಮದ್ದಳೆ ರಂಗದಲ್ಲಿಯೂ, ವೇಷಧಾರಿಯಾಗಿಯೂ ಅಪ್ರತಿಮ ಸಾಧನೆಯನ್ನು ಮಾಡಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳನ್ನು ಹುಟ್ಟುಹಾಕುವ ಮಂದಿಯ ನಡುವೆ ಅವರದೇ ಅಭಿಮಾನೀ ವರ್ಗ ತನ್ನಿಂತಾನೇ ಹುಟ್ಟಿಕೊಂಡಿದೆ. ಅವರ ಈ ಯಕ್ಷಲೋಕದ ಪಯಣ ಇನ್ನೂ ನಿರಂತರವಾಗಿ ಮುಂದುವರಿಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಈಚೆಗೆ ನಾನು ಹೆಚ್ಚು ಇಷ್ಟಪಡುವ ಶೇಣಿ ಗೋಪಾಲಕೃಷ್ಣ ಭಟ್ಟರ ಭೀಮನ ಪಾತ್ರಧಾರಿಯ ಎದುರು ಹಿಡಿಂಬೆಯಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ ಅರ್ಥ ಹೇಳಿದ ವೀಡಿಯೋ ಒಂದು ಯು ಟ್ಯೂಬ್ ಚಾನೆಲ್ ನಲ್ಲಿ ನೋಡಲು ಸಿಕ್ಕಿತು. ಯಕ್ಷಗಾನದ ದಂತಕತೆಯ ಎದುರು ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥಧಾರಿ. ಬಹಳ ಸೊಗಸಾಗಿದೆ. ಸುಕೇಶ್ ಭಟ್ ಎನ್ನುವವರ ಯು ಟ್ಯೂಬ್ ಚಾನೆಲ್ ಅದು. ಅದರ ಲಿಂಕ್ ಕೆಳಗಡೆ ಇದೆ. ಆಸಕ್ತರು ನೋಡಿ.
ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆಯವರ ಬಗ್ಗೆ ವೀಡಿಯೋ
ಪ್ರಸಿದ್ಧ ಯಕ್ಷಗಾನ ಕಲಾವಿದ ಪ್ರಸ್ತುತ ಶ್ರೀ ಜಯಾನಂದ ಸಂಪಾಜೆಯವರ ಯಕ್ಷಜೀವನದ ಯಶೋಗಾಥೆಯ ಬಗ್ಗೆ ಯಕ್ಷ ಮಂದಾರ ‘ಯು ಟ್ಯೂಬ್’ ಚಾನೆಲ್ ನಲ್ಲಿ ವೀಡಿಯೋ ಮಾಡಲಾಗಿದೆ. ಬರಹರೂಪದಲ್ಲಿಯೂ ದೃಶ್ಯರೂಪದಲ್ಲಿಯೂ ಅವರ ಬಗ್ಗೆ ಸವಿವರವಾದ ವಿವರಗಳನ್ನು ನೀಡಲಾಗಿದೆ. ನೋಡಿ ಆನಂದಿಸಿ
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಶ್ರೀ ಎಂ. ದಾಮೋದರ ಶೆಟ್ಟಿ ಮಜಿಬೈಲ್ ಆಯ್ಕೆ
ಕಾಸರಗೋಡು ಜಿಲ್ಲಾ ಬಂಟರ ಸಂಘದ ಗೌರವ ಕಾರ್ಯದರ್ಶಿಯಾಗಿ,ಬಂಟ್ಸ್ ಮಜಿಬೈಲ್ ನ ಸಲಹೆಗಾರರಾಗಿ ಗೌರವ ಮಾರ್ಗದರ್ಶಕರಾಗಿ,ಮಂಜೇಶ್ವರ ಜಯ-ವಿಜಯ ಜೋಡುಕರೆ ಕಂಬಳದ ಮಾಜಿ ಅಧ್ಯಕ್ಷರಾಗಿ,ಬಲ್ಲಂಗುಡೇಲ್ ಶ್ರೀ ಪಾಡಂಗರೇ ಭಗವತಿ ಕ್ಷೇತ್ರದ ಕಳಿಯಾಟ ಸಂದರ್ಭದಲ್ಲಿ ಸತತ ನಲ್ವತೈದು ವರ್ಷದಿಂದ ಸ್ವಂತ ವೆಚ್ಚದಲ್ಲಿ ಯಕ್ಷಗಾನ ಕಾರ್ಯಕ್ರಮ ಆಯೋಜನೆ ಹಾಗು ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದಿರುವ ನ್ಯಾ. ಎಂ ದಾಮೋದರ ಶೆಟ್ಟಿಯವರನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ಇವರನ್ನು ಹಾಗು ಆಯ್ಕೆ ಮಾಡಿದ ಕರ್ನಾಟಕ ಸರಕಾರದ ಸಚಿವರಾದ ಸಿಟಿ ರವಿ ಯವರನ್ನು ಬಂಟ್ಸ್ ಮಜಿಬೈಲ್ ಸಂಸ್ಥೆ ಅಭಿನಂದನೆ ಸಲ್ಲಿಸಿದೆ. ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಅವರಿಗೆ ಹುಟ್ಟೂರಲ್ಲಿ ವಿಶೇಷವಾಗಿ ಗೌರವ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಎಡನೀರು ಶ್ರೀಗಳವರಿಗೆ ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ನುಡಿನಮನ
ಪರಮಾತ್ಮನಲ್ಲಿ ಐಕ್ಯರಾದ ಎಡನೀರು ಮಠಾಧೀಶರಾದ ಶ್ರೀಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರಿಗೆ ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ನುಡಿನಮನ ಸಮರ್ಪಿಸಿ ಅವರ ದಿವ್ಯಾತ್ಮಕ್ಕೆ ಚಿರ ಶಾಂತಿ ದೊರೆಯುವಂತೆ ಪ್ರಾರ್ಥಿಸಲಾಯಿತು.ಕೋವಿದ್ 19 ರ ಮಾನದಂಡಗಳನ್ನು ಪಾಲಿಸಿಕೊಂಡು ಸಭೆ ಜರಗಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ಟರ ಮನೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಸುಬ್ರಹ್ಮಣ್ಯ ಅಡ್ಕ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು. ಹಿರಿಯ ಯಕ್ಷಗಾನ ಭಾಗವತ ಶ್ರೀ ಹೊಸಮೂಲೆ ಗಣೇಶ ಭಟ್ ಅವರು ಪಾಲ್ಗೊಂಡರು. ಶ್ರೀ ಸ್ವಾಮೀಜಿಯವರ ಪೂರ್ವಾಶ್ರಮದಿಂದಲೇ ಅವರ ಒಡನಾಡಿಯಾಗಿದ್ದು ಶ್ರೀ ಮಠದ ಎಲ್ಲಾ ಕಾರ್ಯಕ್ರಮಗಳಲ್ಲೂ ಮುಂಚೂಣಿಯಲ್ಲಿದ್ದ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ಟರು ಗುರುಗಳ ಒಡನಾಟವನ್ನು ನೆನಪಿಸುತ್ತಾ, ಅವರ ಅಗಲುವಿಕೆ ತುಂಬಲಾರದ ನಷ್ಟ ಎಂದು ನುಡಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಗೋವಿಂದ ಬಳ್ಳಮೂಲೆ, ಉಪಾಧ್ಯಕ್ಷ ರಾಘವೇಂದ್ರ ಭಟ್ ಉಡುಪುಮೂಲೆ, ಸಹಕಾರ್ಯದರ್ಶಿ ಡಾ. ಶಿವಕುಮಾರ್ ಅಡ್ಕ, ಅನುಪಮಾ ರಾಘವೇಂದ್ರ ಉಡುಪುಮೂಲೆ ನುಡಿನಮನಗಳನ್ನು ಅರ್ಪಿಸಿದರು.ಕೋಶಾಧಿಕಾರಿ ಕೃಷ್ಣ ಭಟ್ ಅಡ್ಕ ಸ್ವಾಗತಿಸಿ ಕಾರ್ಯದರ್ಶಿ ಮುರಳಿಕೃಷ್ಣ ಸ್ಕಂದ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಸುಮತಿ ಗೋಪಾಲಕೃಷ್ಣ ಭಟ್ ಅಡ್ಕ, ಪ್ರೇಮಲತಾ ಕೃಷ್ಣ ಭಟ್ ಅಡ್ಕ, ಅನಿರುದ್ಧ ವಾಸಿಷ್ಠ ಶರ್ಮಾ ಉಡುಪುಮೂಲೆ, ಶ್ರೀರಾಮ ಅಡ್ಕ, ಕೃಷ್ಣಕುಮಾರ ಅಡ್ಕ ಉಪಸ್ಥಿತರಿದ್ದರು
- ಯಕ್ಷತೂಣೀರ ಸಂಪ್ರತಿಷ್ಠಾನ