‘ರಸಲೋಕ ದ್ರಷ್ಟಾರ’ ಯಕ್ಷಗಾನ ಪ್ರಪಂಚದ ‘ರಸಋಷಿ’ ಎಂದೇ ಖ್ಯಾತರಾದ ಶ್ರೀ ದೇರಾಜೆ ಸೀತಾರಾಮಯ್ಯ ಅವರ ಕುರಿತಾದ ಹೊತ್ತಗೆಯಿದು. ಈ ಪುಸ್ತಕವು ಹಿರಿಯರಾದ ದೇರಾಜೆಯವರ ಬಗೆಗೆ ಸಾಕಷ್ಟು ಮಾಹಿತಿಗಳನ್ನು ಹೊಂದಿ ಅತ್ಯುತ್ತಮವಾಗಿ ಮೂಡಿಬಂದಿದೆ. ಯಕ್ಷಗಾನ ಕಲೆಗೆ, ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಶ್ರೀಯುತರ ಕೊಡುಗೆಗಳು ಅನುಪಮವಾದುದು. ಇವರಿಂದ ರಚಿಸಲ್ಪಟ್ಟ ಶ್ರೀರಾಮಚರಿತಾಮೃತಂ ಮತ್ತು ಶ್ರೀಮನ್ಮಹಾಭಾರತ ಕಥಾಮೃತಂ ಎಂಬ ಎರಡು ಕೃತಿಗಳಂತೂ ಮಹಾನ್ ಕೊಡುಗೆಗಳಾಗಿ ಖ್ಯಾತವಾಗಿವೆ. ಕಲಾವಿದರು, ಅಧ್ಯಯನಶೀಲರು, ಸಾಹಿತ್ಯಾಸಕ್ತರು ಮಾಹಿತಿಗಾಗಿ ಈ ಕೃತಿಗಳನ್ನು ಅವಲಂಬಿಸುವುದು ತಿಳಿದಿರುವ ವಿಚಾರ. ಉಪಯೋಗದ ನೆಲೆಯಿಂದಲೇ ಕೃತಿಯ ಮೌಲ್ಯವನ್ನು ತಿಳಿಯಬಹುದು. ಅಲ್ಲದೆ ಕುರುಕ್ಷೇತ್ರಕ್ಕೊಂದು ಆಯೋಗ, ರಾಮರಾಜ್ಯದ ರೂವಾರಿ, ರಾಮರಾಜ್ಯ ಪೂರ್ವರಂಗ, ಯಕ್ಷಗಾನ ವಿವೇಚನ, ಪ್ರಿಯದರ್ಶನಂ, ಧರ್ಮದಾಸಿ, ವಿಚಾರವಲ್ಲರಿ, ಧರ್ಮದರ್ಶನ, ಶೂರ್ಪನಖಿಯ ಸ್ವರಾಜ್ಯ ಮೊದಲಾದ ಕೃತಿಗಳನ್ನು ಶ್ರೀ ದೇರಾಜೆಯವರು ರಚಿಸಿರುತ್ತಾರೆ. ಶ್ರೀಯುತರ ಬಗೆಗೆ ಈ ಹಿಂದೆ ಲೇಖನವೊಂದನ್ನು ಬರೆದಿದ್ದೆ ಎಂಬ ಸಂತೋಷವಿದೆ. ಅವರ ಕುರಿತಾದ ಈ ಹೊತ್ತಗೆಯನ್ನು ಪರಿಚಯಿಸುವುದು ಭಾಗ್ಯವೆಂದು ಭಾವಿಸುತ್ತೇನೆ.
‘ರಸಲೋಕ ದ್ರಷ್ಟಾರ’ ಎಂಬ ಈ ಪುಸ್ತಕವು 2017ರಲ್ಲಿ ಪ್ರಕಟವಾಗಿತ್ತು. ಇದರ ಪ್ರಧಾನ ಸಂಪಾದಕರು ಶ್ರೀ ಜಿ. ಎಸ್. ಭಟ್ಟ. ಲೇಖಕರು ಶ್ರೀ ಕೆ. ಶ್ರೀಕರ ಭಟ್ ಮುಂಡಾಜೆ. ನೂರಾ ಇಪ್ಪತ್ತನಾಲ್ಕು ಪುಟಗಳಿಂದ ಕೂಡಿದ ಉತ್ತಮವಾದ ಪುಸ್ತಕ. ಪ್ರಕಾಶಕರು ಚೇತನ್ ಬುಕ್ ಹೌಸ್, ಮೈಸೂರು. ಚೇತನ ಸಾಹಿತ್ಯ ಕಲಾಸಾಧಕರು ಮಾಲಿಕೆಯಡಿ ಈ ಹೊತ್ತಗೆಯು ಮುದ್ರಿಸಲ್ಪಟ್ಟಿದೆ. ಈ ಪುಸ್ತಕದಲ್ಲಿ ದೇರಾಜೆಯವರ ವ್ಯಕ್ತಿತ್ವ, ಸಾಧನೆಗಳನ್ನು ತಿಳಿಸುವ ದೇರಾಜೆ ಸೀತಾರಾಮಯ್ಯ ಸೂಕ್ಷ್ಮ ಪರಿಚಯ, ದೇರಾಜೆ ಎನ್ನುವ ವಿದ್ಯಮಾನ, ಶಿವರಾಮ ಕಾರಂತರ ಮೆಚ್ಚಿನ ‘ಯಕ್ಷಗಾನ ರಾಕ್ಷಸ’, ಮಾತು ಕಾವ್ಯವಾಗುವ ಬಗೆ, ಲಕ್ಷ್ಮೀಶ ತೋಳ್ಪಾಡಿ ಕಂಡಂತೆ ದೇರಾಜೆ, ದೇರಾಜೆಯವರ ಪೂರ್ವರಂಗ, ದೇರಾಜೆಯವರನ್ನು ಮೆಚ್ಚಿಕೊಂಡ ಮಹನೀಯರು, ಅಪ್ಪಯ್ಯನೆಂಬ ಬೆರಗು- ದೇರಾಜೆಯವರ ಮಕ್ಕಳು, ದೇರಾಜೆ ಕೃತಿಗಳ ಕುರಿತು, ನಿತ್ಯ ಜೀವನದಲ್ಲೂ ದೇರಾಜೆ ಮಾತಿನ ಸಿಹಿ, ದೇರಾಜೆ ಸಂದರ್ಶನ, ದೇರಾಜೆ ಬಗ್ಗೆ ಮತ್ತಷ್ಟು ಎಂಬ ಲೇಖನಗಳಿವೆ. ಬಳಿಕ ದೇರಾಜೆ ಕೃತಿಗಳ ಸೂಚಿ, ದೇರಾಜೆ ಲೇಖನಗಳ ಸೂಚಿ, ದೇರಾಜೆಯವರ ಕುರಿತು ಕೃತಿಗಳ ಸೂಚಿ, ದೇರಾಜೆ ಜೀವನದ ಪ್ರಮುಖ ಘಟನೆಗಳ ಸೂಚಿ, ದೇರಾಜೆ ಸ್ಮೃತಿಗೌರವ ಪುರಸ್ಕೃತರ ಸೂಚಿ ಎಂಬ ಶೀರ್ಷಿಕೆಯಡಿ ಮಾಹಿತಿಗಳನ್ನು ನೀಡಲಾಗಿದೆ. ಬಳಿಕ ಪ್ರಧಾನ ಸಂಪಾದಕ ಜಿ.ಎಸ್. ಭಟ್ಟರ ಮತ್ತು ಲೇಖಕ ಕೆ. ಶ್ರೀಕರ ಭಟ್ಟರ ವ್ಯಕ್ತಿ ಪರಿಚಯವನ್ನು ನೀಡಲಾಗಿದ್ದು ಹೊತ್ತಗೆಯ ಹೊರ ಆವರಣದಲ್ಲಿ ಪ್ರಧಾನ ಸಂಪಾದಕ ಜಿ.ಎಸ್. ಭಟ್ಟರ ಶುಭ ಹಾರೈಕೆಯ ನುಡಿಗಳನ್ನು ನೀಡಲಾಗಿದೆ. ಹಿರಿಯ ಚೇತನ ದಿ| ದೇರಾಜೆ ಸೀತಾರಾಮಯ್ಯನವರಿಗೆ ಗೌರವಪೂರ್ವಕ ಪ್ರಣಾಮಗಳು. ಈ ಹೊತ್ತಗೆಗೆ ಕಾರಣರಾದ ಎಲ್ಲಾ ಬಂಧುಗಳಿಗೂ ಅಭಿನಂದನೆಗಳು.
ಶ್ರೀ ತಾರಾನಾಥ ವರ್ಕಾಡಿ ಅವರು ತೆಂಕುತಿಟ್ಟಿನ ಹಿರಿಯ ಕಲಾವಿದರು. ಶ್ರೀ ಧರ್ಮಸ್ಥಳ ಮೇಳದಲ್ಲಿ ಪುಂಡುವೇಷಧಾರಿಯಾಗಿ ಅನೇಕ ವರ್ಷಗಳ ಕಾಲ ಕಲಾಸೇವೆಯನ್ನು ಮಾಡಿದ ಇವರು ಕನ್ನಡ ಎಂ. ಎ. ಪದವೀಧರರು. ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ನಾಟ್ಯವನ್ನು ಕಲಿತು ಸುಂಕದಕಟ್ಟೆ, ಕದ್ರಿ, ನಂದಾವರ, ಅರುವ, ಬಪ್ಪನಾಡು ಮೇಳಗಳಲ್ಲಿ ಬಳಿಕ ಶ್ರೀ ಧರ್ಮಸ್ಥಳ ಮೇಳದಲ್ಲಿ ಕಲಾಸೇವೆಯನ್ನು ಮಾಡಿ ತಿರುಗಾಟಕ್ಕೆ ಸ್ವಯಂ ನಿವೃತ್ತಿ ಘೋಷಿಸಿದ್ದರು. ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಅಭ್ಯಸಿಸಿದ ಇವರಿಗೆ ಬಳಿಕ ಅದೇ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುವ ಭಾಗ್ಯವೂ ಒದಗಿ ಬಂದಿತ್ತು. ಶ್ರೀ ತಾರಾನಾಥ ವರ್ಕಾಡಿಯವರ ಅನೇಕ ಶಿಷ್ಯಂದಿರು ಇಂದು ವಿವಿಧ ಮೇಳಗಳಲ್ಲಿ ಕಲಾವಿದರಾಗಿ ವ್ಯವಸಾಯ ಮಾಡುತ್ತಿದ್ದಾರೆ. ಕಲಾವಿದನಾಗಿದ್ದುಕೊಂಡೇ ಸಾಹಿತ್ಯ ಕ್ಷೇತ್ರದತ್ತ ಒಲವನ್ನು ಹರಿಸಿದ್ದರು. ಬರೆಯುವ ಕಲೆಯು ಸಿದ್ಧಿಸಿತ್ತು. ಪ್ರಬುದ್ಧ ಲೇಖಕನಾಗಿಯೂ ಗುರುತಿಸಿಕೊಂಡರು. ಸರಸ್ವತಿ ದೇವಿಯ ಅನುಗ್ರಹದಿಂದ ಪ್ರಸಂಗ ರಚನೆ ಮತ್ತು ಕೃತಿ ರಚನಾ ಕಾಯಕಗಳಲ್ಲೂ ತೊಡಗಿಸಿಕೊಂಡರು. ಡಾ. ಶಿಮಂತೂರು ನಾರಾಯಣ ಶೆಟ್ಟಯವರಿಂದ ಪ್ರಸಂಗ ರಚನಾ ಕ್ರಮವನ್ನೂ ಶ್ರೀ ಕೊರ್ಗಿ ವೆಂಕಟೇಶ ಉಪಾಧ್ಯಾಯರಿಂದ ಅರ್ಥಗಾರಿಕೆಯನ್ನೂ ಶ್ರೀ ತಾರಾನಾಥರು ಅಭ್ಯಸಿಸಿದ್ದರು. ಪ್ರಸ್ತುತ ಅನೇಕ ವರ್ಷಗಳಿಂದ ‘ಬಲ್ಲಿರೇನಯ್ಯ’ ಮಾಸಪತ್ರಿಕೆಯ ಸಂಪಾದಕರಾಗಿಯೂ ಕಲಾಭಿಮಾನಿಗಳಿಗೆ ಇವರು ಪರಿಚಿತರು. ವಿದ್ವಾಂಸರಾದ ಡಾ. ಶಿಮಂತೂರು ನಾರಾಯಣ ಶೆಟ್ಟಿಯವರ ಬದುಕು ಬರಹ ಕುರಿತಾದ ಬರೆದ ಅಭಿನವ ನಾಗವರ್ಮ ಮತ್ತು ಪುರಾಣ ಲೋಕದ ಬಾಲಕರು ಎಂಬ ಪುಸ್ತಕಗಳು ಪ್ರಕಟವಾಗಿ ಓದುಗುರ ಕೈ ಸೇರಿದ ವಿಚಾರ ಎಲ್ಲರಿಗೂ ತಿಳಿದಿದೆ. ಕನ್ನಡ ಪೌರಾಣಿಕ, ಕಾಲ್ಪನಿಕ ಪ್ರಸಂಗಗಳನ್ನೂ ರಚಿಸಿದ್ದಾರೆ.
ಶ್ರೀ ತಾರಾನಾಥ ವರ್ಕಾಡಿ ಅವರು ಬರೆದ ಈ ಕೃತಿಯ ಹೆಸರು ‘ಒಂದೊಂದು ನದಿಗೂ ಒಂದೊಂದು ಕಥೆ’. ಈ ಹೊತ್ತಗೆಯು 2012ನೇ ಇಸವಿಯಲ್ಲಿ ಪ್ರಕಟವಾಗಿತ್ತು. ಪ್ರಕಾಶಕರು ಆಜ್ಞಾಸೋಹಮ್ ಪ್ರಕಾಶನ ಬೆಳ್ಮಣ್ಣು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ವೀರೇಂದ್ರ ಹೆಗಡೆಯವರು ಶುಭ ಹಾರೈಸಿ ಆಶೀರ್ವದಿಸಿರುತ್ತಾರೆ. ಬಳಿಕ ‘ನಾಲ್ಕು ಮಾತುಗಳು’ ಎಂಬ ಶೀರ್ಷಿಕೆಯಡಿ ಶ್ರೀ ಕೆ.ಎಸ್. ನಾರಾಯಣಾಚಾರ್ಯ ಅವರ ಲೇಖನವಿದೆ. ಲೇಖಕ ಶ್ರೀ ತಾರಾನಾಥ ವರ್ಕಾಡಿಯವರು ‘ಮನದೊಳಗಿನ ಮಂದಾಕಿನಿ’ ಶೀರ್ಷಿಕೆಯಡಿ ಸಹಕರಿಸಿದ ಮಹನೀಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿ, ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ. ಸುಮಾರು ಇನ್ನೂರ ಮೂವತ್ತು ಪುಟಗಳಿಗೆ ಚಾಚಿದ ಈ ಕೃತಿಯಲ್ಲಿ ಒಟ್ಟು ನೂರಾ ಹನ್ನೊಂದು ನದಿಗಳ ಉಗಮ ಮತ್ತು ಅವುಗಳ ವಿಶೇಷತೆಗಳನ್ನು ಶ್ರೀ ತಾರಾನಾಥ ವರ್ಕಾಡಿ ಅವರು ವಿವರವಾಗಿ ನೀಡಿರುತ್ತಾರೆ. ಬಳಿಕ ‘ಒಂದು ಹರಕೆ’ ಶೀರ್ಷಿಕೆಯಡಿ ಡಾ| ಬನ್ನಂಜೆ ಗೋವಿಂದಾಚಾರ್ಯ ಅವರ ಲೇಖನವಿದೆ. ಲೇಖಕ ಶ್ರೀ ತಾರಾನಾಥರ ಬದುಕಿನ ವಿವರವನ್ನೂ ಸಂಕ್ಷಿಪ್ತವಾಗಿ ನೀಡಲಾಗಿದೆ.
‘ರಾಘವಾಯಣ’ ಎಂಬ ಕೃತಿಯು ಓದುಗರ ಕೈ ಸೇರಿದ್ದು 2016ನೇ ಇಸವಿಯಲ್ಲಿ. ಇದು ಬಹುಮುಖ ಚಿತ್ರ ಕಲಾವಿದರಾಗಿ, ಕಲಾಕ್ಷೇತ್ರಕ್ಕೆ ಶ್ರೇಷ್ಠ ಕೊಡುಗೆಗಳನ್ನು ನೀಡಿದ ಪಣಂಬೂರು ಶ್ರೀ ರಾಘವ ರಾವ್ ಅವರ ಸಂಸ್ಮರಣಾ ಗ್ರಂಥ. 1923ನೇ ಇಸವಿಯಲ್ಲಿ ಪಣಂಬೂರಿನಲ್ಲಿ ಇವರ ಜನನ. ಇವರ ಮೂಲ ಮನೆ ಆದ್ಯಪಾಡಿ. ತೀರ್ಥರೂಪರು, ಅಜ್ಜ, ಮುತ್ತಜ್ಜಂದಿರು ಯಕ್ಷಗಾನ ಭಾಗವತರುಗಳಾಗಿ ಕಲಾಸೇವೆಯನ್ನು ಮಾಡಿದವರೇ ಆಗಿದ್ದರು. ಚಿಕ್ಕಪ್ಪ ಉತ್ತಮ ಸ್ತ್ರೀ ವೇಷಧಾರಿಯಾಗಿ ಹಿಮ್ಮೇಳದ ಸರ್ವಾಂಗಗಳನ್ನೂ ತಿಳಿದವರಾಗಿದ್ದರು. ರಾಘವ ರಾಯರು ಕಲಿತದ್ದು ಏಳನೆಯ ತರಗತಿಯ ವರೆಗೆ. ಬಳಿಕ ಮೈಸೂರಿಗೆ ತೆರಳಿ ಚಿತ್ರ ರಚನೆಯ ಕೌಶಲವನ್ನು ಸಿದ್ಧಿಸಿಕೊಂಡಿದ್ದರು. ಮುಂಬೈಯಲ್ಲಿ ಕೆಲ ಸಮಯ ಇದ್ದು ಊರಿಗೆ ಮರಳಿದ್ದರು. ಎಲ್ಲೇ ಇದ್ದರೂ ಇವರ ಕಲೆಯ ಕುರಿತಾದ ಕಲಿಕೆಯು ನಿರಂತರವಾಗಿ ಸಾಗಿತ್ತು. ಕಲಾವಿದರೂ ಸಂಘಟಕರೂ ಉತ್ತಮ ರಂಗತಜ್ಞರೂ ಬಹುಮುಖೀ ಚಿತ್ರಕಲಾವಿದರೂ ಆಗಿ ಶ್ರೀ ರಾಘವ ರಾಯರು ಪ್ರಸಿದ್ಧರಾಗಿದ್ದರು. ಮಣ್ಣಿನ ಮೂರ್ತಿಗಳನ್ನು ಸಿದ್ಧಗೊಳಿಸುವ ಕಲೆಯೂ ಎಳವೆಯಲ್ಲಿಯೇ ಕರಗತವಾಗಿದ್ದು ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳಿಗೂ ತಮ್ಮ ಕೊಡುಗೆಯನ್ನು ನೀಡಿದ್ದರು. ಮುಖವರ್ಣಿಕೆ, ವೇಷಭೂಷಣಗಳನ್ನು ತಯಾರಿಸುವ ಕಾಯಕದಲ್ಲೂ ಶ್ರೀಯುತರು ಪಕ್ವರಾಗಿದ್ದರು. ಎರಡು ದಶಕಗಳ ಕಾಲ ‘ಸುವರ್ಣ ಆರ್ಟ್ಸ್ ಮುಲ್ಕಿ’ ಎಂಬ ಪ್ರತಿಷ್ಠಿತ ಸಂಸ್ಥೆಯಲ್ಲಿ ಪ್ರಸಾಧನಕಾರರಾಗಿ ಅನುಭವಗಳನ್ನು ಗಳಿಸಿದ್ದರು. ಊರ ಪರವೂರ ಅನೇಕ ಯಕ್ಷಗಾನ ಸಂಘ ಸಂಸ್ಥೆಗಳಿಗೆ ವೇಷಭೂಷಣಗಳನ್ನು ಸಿದ್ಧಗೊಳಿಸಿ ಕೊಟ್ಟ ಮಹನೀಯರಿವರು. ಈ ಕೃತಿಯಲ್ಲಿ ಮುದ್ರಿಸಲ್ಪಟ್ಟ ಲೇಖನಗಳನ್ನು ಓದಿದರೆ ಶ್ರೀ ರಾಘವರಾಯರ ಪ್ರತಿಭೆ, ಸಾಮರ್ಥ್ಯ ಮತ್ತು ಅವರ ಬದುಕಿನ ವಿಚಾರಗಳನ್ನು ತಿಳಿಯಬಹುದಾಗಿದೆ. ಶ್ರೀಯುತರ ಪುತ್ರರಾದ ಶ್ರೀ ಮಧುಕರ ಭಾಗವತ್ ಅವರೂ ಕಲಾಪ್ರೇಮಿಯೇ ಆಗಿದ್ದಾರೆ. ಇವರು ನಮ್ಮ ದೇಶದ ಹೆಮ್ಮೆಯ ವಾಯು ಸೇನೆಯಲ್ಲಿ ಉದ್ಯೋಗಿಯಾಗಿ ನಿವೃತ್ತರಾದವರು. ಪ್ರಸ್ತುತ ಜ್ಯೋತಿಷಿಯಾಗಿ, ಕಲಾಸಂಘಟಕರಾಗಿ ಯಕ್ಷಗಾನ ಕಲಾಮಾತೆಯ ಸೇವೆಯನ್ನು ಮಾಡುತ್ತಿರುವುದು ಸಂತೋಷವನ್ನು ತರುವ ವಿಚಾರ. ಇವರು ಉತ್ತಮ ಬರಹಗಾರರೂ ಹೌದು.
‘ರಾಘವಾಯಣ’ ಪಣಂಬೂರು ಶ್ರೀ ರಾಘವ ರಾವ್ ಅವರ ಸಂಸ್ಮರಣಾ ಗ್ರಂಥದ ಪ್ರಕಾಶಕರು ಬಹುಮುಖೀ ಚಿತ್ರ ಕಲಾವಿದ ಪಣಂಬೂರು ಶ್ರೀ ರಾಘವ ರಾವ್ ಸಂಸ್ಮರಣಾ ಯೋಜನೆ ಕುಳಾಯಿ ಮಂಗಳೂರು. ಇದರ ಸಂಪಾದಕರು ಶ್ರೀ ಸೇರಾಜೆ ಸೀತಾರಾಮ ಭಟ್ ಮತ್ತು ಶ್ರೀ ಪಿ. ವಿ. ಪರಮೇಶ್. ಇದು ಒಟ್ಟು ನಾನ್ನೂರ ಐವತ್ತು ಪುಟಗಳುಳ್ಳ ಪುಸ್ತಕ. ಶ್ರೀ ರಾಘವ ರಾವ್ ಸಂಸ್ಮರಣಾ ಯೋಜನಾ ಸಮಿತಿಯ ಅಧ್ಯಕ್ಷರಾಗಿ ವಿದ್ವಾಂಸರಾದ ಡಾ. ಪ್ರಭಾಕರ ಜೋಶಿಯವರೂ ಕಾರ್ಯನಿರ್ವಹಿಸಿದ್ದರು. ಈ ಕೃತಿಯ ಆರಂಭದಲ್ಲಿ ಪಣಂಬೂರು ಶ್ರೀ ನಂದನೇಶ್ವರ ದೇವರ ವರ್ಣಚಿತ್ರವನ್ನೂ, ಶ್ರೀಮದೆಡನೀರು ಮಠಾಧೀಶರಾದ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರು ಮತ್ತು ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣರ ಅನುಗ್ರಹ ರೂಪದ ಸಂದೇಶಗಳನ್ನೂ ನೀಡಲಾಗಿದೆ. ಬಳಿಕ ಯೋಜನಾ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ ಮಹನೀಯರುಗಳ ಪರಿಚಯವನ್ನು ವರ್ಣಚಿತ್ರಗಳ ಸಹಿತ ಕೊಡಲಾಗಿದೆ. ಬಳಿಕ ‘ವರ್ಣ ಒಂದು – ನೇಪಥ್ಯದ ಬೆಳಕಿನಲ್ಲಿ’ ‘ವರ್ಣ ಎರಡು – ಅಂತರಾಳದ ನುಡಿಗಳು’ ‘ವರ್ಣ ಮೂರು – ಯಕ್ಷಗಾನ ಮತ್ತಿತರ ವೈಚಾರಿಕ ಲೇಖನಗಳು’ ಎಂಬ ವಿಭಾಗಗಳಲ್ಲಿ ಖ್ಯಾತ ಬರಹಗಾರರ ಲೇಖನಗಳೂ, ರಾಘವರಾಯರು ಪಡೆದ ಸನ್ಮಾನ ಪತ್ರಗಳೂ, ವರ್ಣಚಿತ್ರಗಳೂ, ಕಪ್ಪುಬಿಳುಪಿನ ಛಾಯಾಚಿತ್ರಗಳೂ ಇವೆ. ಬಳಿಕ ‘ಸ್ತಬ್ಧ ಚಿತ್ರಗಳ ಸಾಕ್ಷಿ’ ಎಂಬ ವಿಭಾಗವನ್ನು ಕಾಣಬಹುದು. ‘ವರ್ಣ ಐದು – ತ್ರಿಭಾಷಾ ಪ್ರಸಂಗ ಸಾಹಿತ್ಯ’ ಎಂಬ ವಿಭಾಗದಲ್ಲಿ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಒಂಭತ್ತು ಪ್ರಸಂಗಗಳನ್ನು ಕವಿ ಪರಿಚಯದ ಸಹಿತ ನೀಡಲಾಗಿದೆ. ತನ್ನ ಬಹುಮುಖೀ ಪ್ರತಿಭೆಗಳಿಂದ ಜನಾನುರಾಗಿಯಾಗಿ ಯಕ್ಷಗಾನ ಕಲೆಯ ಮತ್ತು ಪಣಂಬೂರು ಶ್ರೀ ನಂದನೇಶ್ವರ ಯಕ್ಷಗಾನ ಮಂಡಳಿಯ ಸಂಬಂಧವಿರಿಸಿಕೊಂಡೇ ಬದುಕನ್ನು ಸಾಗಿಸಿದ ಪಣಂಬೂರು ಶ್ರೀ ರಾಘವ ರಾಯರೆಂಬ ಹಿರಿಯ ಚೇತನಕ್ಕೆ ಗೌರವ ಪೂರ್ವಕ ಪ್ರಣಾಮಗಳು.
ಪಾತಾಳ ವೆಂಕಟ್ರಮಣ ಭಟ್ ಈ ಹೆಸರೇ ಯಕ್ಷಗಾನದ ಸ್ತ್ರೀ ಪಾತ್ರಧಾರಿಗಳ ಬಗ್ಗೆ ಮಾತನಾಡುವಾಗ ಸಂಚಲನ ಉಂಟುಮಾಡುವ ಹೆಸರು. ಅವರ ವೇಷವನ್ನು ಸ್ವತಃ ನೋಡದಿದ್ದರೂ ಅವರ ಬಗ್ಗೆ ಬಹಳಷ್ಟು ಹೇಳುವುದನ್ನು ಕೇಳಿದ್ದೇನೆ. ಮತ್ತು ಬರೆದದ್ದನ್ನು ಓದಿದ್ದೇನೆ. ಅದಕ್ಕೆ ಅವರ ಅಪೂರ್ವ ಕೆಲವು ಛಾಯಾಚಿತ್ರಗಳೂ ಸಾಕ್ಷಿಯಾಗಿವೆ. ಬಾಲ್ಯದಲ್ಲಿ ಹಿರಿಯರ ಜೊತೆಗೆ ಆಟಗಳಿಗೆ (ಯಕ್ಷಗಾನ ಪ್ರದರ್ಶನ) ಹೋಗುತ್ತಿದ್ದೆವು.
ಸ್ತ್ರೀ ವೇಷದ ರಂಗ ಪ್ರವೇಶದ ಹೊತ್ತಿಗೆಲ್ಲಾ ನಮ್ಮ ಚಿಕ್ಕಪ್ಪರೊಬ್ಬರು “ಸ್ತ್ರೀ ವೇಷವೆಂದರೆ ಪಾತಾಳ ವೆಂಕಟ್ರಮಣ ಭಟ್ಟರದ್ದು. ಅಂತಹ ಸ್ತ್ರೀ ಪಾತ್ರಧಾರಿಗಳು ಈಗಿಲ್ಲ. ಉದ್ದವಾದ ಜಡೆಯನ್ನು ಹಿಂದಕ್ಕೆ ತಳ್ಳಿ ಅವರು ನೃತ್ಯ ಮಾಡುವ ಚಂದವೇ ಬೇರೆ ” ಎಂದು ಎಲ್ಲರೆದುರು ಪ್ರದರ್ಶನ ನೋಡುತ್ತಿರುವಾಗಲೇ ಹೇಳುತ್ತಿದ್ದರು.
ಅವರ ಮಾತಿಗೆ ಅಕ್ಕ ಪಕ್ಕದಲ್ಲಿ ಕುಳಿತು ಆಟ ನೋಡುತ್ತಿದ್ದವರೆಲ್ಲಾ ತಲೆಯಾಡಿಸುತ್ತಾ ಸಹಮತ ವ್ಯಕ್ತಪಡಿಸುತ್ತಿದ್ದರು. ಬೆಳೆದು ದೊಡ್ಡವನಾಗುತ್ತಿರುವಂತೆ ಬಹಳಷ್ಟು ಬಾರಿ ಪಾತಾಳದವರ ಹೆಸರನ್ನು ಹಲವರ ಬಾಯಿಯಿಂದ ಕೇಳಿದ್ದೆ. ಕೇವಲ ಹೆಸರು ಮಾತ್ರ ಕೇಳಿದ್ದೆನಾದ್ದರಿಂದ ಅವರನ್ನು ಮುಖತಃ ಕಂಡು ಮಾತನಾಡಿಸುವ ಅವಕಾಶಗಳಿರಲಿಲ್ಲ.
ಕೆಲವೊಮ್ಮೆ ಅವರು ಯಕ್ಷಗಾನ ಪ್ರದರ್ಶನಗಳಿಗೆ ಬರುತ್ತಿದ್ದುದನ್ನೂ ಬಂದು ಮುಂದಿನ ಸಾಲಿನಲ್ಲೇ ಆಸೀನರಾಗುತ್ತಿದ್ದುದನ್ನೂ ದೂರದಿಂದಲೇ ಗಮನಿಸುತ್ತಿದ್ದೆ. ಆಗೆಲ್ಲ ಹತ್ತಿರ ಹೋಗಿ ಮಾತನಾಡಿಸುವ ಹಾಗಿರಲಿಲ್ಲ. ಧೈರ್ಯವೂ ಇರಲಿಲ್ಲ. ನಮ್ಮದೇನಿದ್ದರೂ ಲಾಸ್ಟ್ ಬೆಂಚ್. ಮುಂದಿನ ಸಾಲುಗಳಲ್ಲಿ ಕುಳಿತುಕೊಳ್ಳುವ ಅರ್ಹತೆ ನಮಗಿಲ್ಲವೆಂದು ನನ್ನ ಮಾತಿನ ಅರ್ಥವಲ್ಲ.
ಆದರೆ ಯಾಕೋ ಒಂದು ಹಿಂಜರಿತ ನಮ್ಮನ್ನು ಮುಂದಕ್ಕೆ ಹೋಗದಂತೆ ತಡೆಯುತ್ತಿತ್ತು ಮತ್ತು ನಮ್ಮಂತಹವರು ಸ್ವಲ್ಪ ಹಿಂದುಗಡೆಯ ಆಸನವನ್ನೇ ಹೆಚ್ಚು ಇಷ್ಟಪಡುತ್ತಿದ್ದೆವು. ಅದಿರಲಿ. ಕೊನೆಗೂ ಪಾತಾಳ ವೆಂಕಟ್ರಮಣ ಭಟ್ಟರ ಮನೆಗೆ ಹೋಗಿ ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತು.
ಅವರ ಸುಪುತ್ರರಾದ ಪಾತಾಳ ಅಂಬಾಪ್ರಸಾದರ ಪರಿಚಯ ಕೆಲವು ವರ್ಷಗಳ ಹಿಂದೆ ಆಯಿತು. ಅವರು ಆತ್ಮೀಯರಾದುದರಿಂದ ಅವರ ಮುಖಾಂತರ ಪಾತಾಳ ವೆಂಕಟ್ರಮಣ ಭಟ್ಟರ ಮನೆಗೆ ಹೋಗುವ ಸಂದರ್ಭ ಬಂತು. ಹಾಗೆ ಹೋದವನಿಗೆ ಅವರ ಯಕ್ಷಗಾನ ಜೀವನದ ಬಗ್ಗೆ ತಿಳಿಯುವ ಅವಕಾಶ ಒದಗಿ ಬಂತು. ಪಾತಾಳರು ಮಾತಿಗೆ ಕುಳಿತರೆ ನಿರರ್ಗಳವಾಗಿ ಮಾತನಾಡುತ್ತಾರೆ. ಅವರ ಯಕ್ಷಗಾನ ಜೀವನದ ಪಯಣ ಸಾಗಿ ಬಂದ ಬಗೆಯನ್ನು ವಿವರಿಸಿದ್ದರು.
ಅದನ್ನು ಈ ಲೇಖನದಲ್ಲಿ ಉಲ್ಲೇಖಿಸುವುದಿಲ್ಲ. ಅವರ ಜೀವನ ಚರಿತ್ರೆಯ ಬಗ್ಗೆ ವಿವರವಾಗಿ ಪಾತಾಳ ವೆಂಕಟ್ರಮಣ ಭಟ್ಟರ ಅಭಿನಂದನಾ ಗ್ರಂಥವಾದ ‘ಯಕ್ಷ ಶಾಂತಲಾ ಪಾತಾಳ’ ಎಂಬ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಓದಿ ನೋಡಿದರೆ ಪಾತಾಳದವರ ಕಲಾ ಜೀವನದ ವರ್ಣರಂಜಿತ ಅಧ್ಯಾಯಗಳನ್ನು ಅರಿಯಬಹುದು.
ಆ ಪುಸ್ತಕದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ. ಅಂದ ಹಾಗೆ ಮತ್ತೆ ವಿಷಯಕ್ಕೆ ಬರೋಣ. ಪಾತಾಳರು ಅಂದು ಕೆಲವು ಪ್ರಮುಖವಾದ ವಿಚಾರಗಳನ್ನು ತಿಳಿಸಿದರು. ಮುಖ್ಯವಾಗಿ ಸ್ತ್ರೀ ವೇಷಗಳ ಲಾಲಿತ್ಯವು ಹೇಗಿರಬೇಕೆಂಬ ವಿಚಾರವೂ ಮಾತಿನ ನಡುವೆ ಬಂತು. ಸ್ತ್ರೀ ವೇಷದ ಲಾಲಿತ್ಯವೂ ಶೃಂಗಾರವೂ ಪಾತ್ರದಿಂದ ಪಾತ್ರಕ್ಕೆ ಹೇಗೆ ಭಿನ್ನವಾಗಿರಬೇಕೆಂದು ವೆಂಕಟ್ರಮಣ ಭಟ್ಟರು ಮಾಡಿ ತೋರಿಸಿದರು.
ಶೃಂಗಾರಗಳಲ್ಲಿಯೂ ಹಲವು ವಿಧಗಳಿರುವುದರಿಂದ ಪ್ರತಿಯೊಂದು ಪಾತ್ರದ ಶೃಂಗಾರವೂ ಬೇರೆಯೇ ಎಂದು ಕಲಾವಿದರು ಅರಿತುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ರಂಗದಲ್ಲಿ ಅಭಾಸಗಳುಂಟಾಗಬಹುದು ಎಂದು ಅವರು ಎಚ್ಚರಿಸುತ್ತಾರೆ. ಪಾತಾಳ ವೆಂಕಟ್ರಮಣ ಭಟ್ಟರು ತನಗೆ 50 ವರ್ಷಗಳು ತುಂಬುವ ಕಾಲಕ್ಕೆ ರಂಗದಿಂದ ಸ್ವಯಂ ನಿವೃತ್ತಿಯನ್ನು ಬಯಸಿ ಪಡೆದವರು.
ಅವರ ಈ ನಡೆ ನನಗೆ ಬಹಳಷ್ಟು ಆಶ್ಚರ್ಯವನ್ನುಂಟುಮಾಡಿತ್ತು. ಅದನ್ನು ಅವರಲ್ಲಿ ಕೇಳಿದ್ದೆ. ಅವರು ಮುಗುಳು ನಗುತ್ತಾ ವಯೋಸಹಜವಾಗಿ ಮುಖದಲ್ಲಿ ಕಾಣುವ ಪ್ರಾಯದ ಕುರುಹುಗಳಿಂದ ಸ್ತ್ರೀ ಪಾತ್ರವನ್ನು ಮಾಡಲು ತೊಡಕಾಗುತ್ತಿತ್ತು. ವಯಸ್ಸಾದ ಮೇಲೆ ಹರೆಯದ ಸ್ತ್ರೀ ಪಾತ್ರ ಮಾಡುವುದು ಅಷ್ಟು ಸಮಂಜಸವಾಗಿ ಕಾಣುವುದಿಲ್ಲ. ಇದರಿಂದ ಪಾತ್ರದ ಸಹಜ ಸೌಂದರ್ಯಕ್ಕೆ ರಂಗದಲ್ಲಿ ಧಕ್ಕೆ ಒದಗಬಹುದಾದ ಸಾಧ್ಯತೆಯಿದೆ. ಆಮೇಲೆ ನಾನು ಪುರುಷಪಾತ್ರಗಳನ್ನು ಮಾಡಲು ಆಸಕ್ತಿ ತೋರಿಸದೆ ಇದ್ದುದರಿಂದ ಸಹಜವಾಗಿ ನಿವೃತ್ತಿಯನ್ನು ಬಯಸಿದೆ ಎಂದು ಅವರು ಹೇಳುತ್ತಾರೆ.
ಪಾತಾಳ ವೆಂಕಟ್ರಮಣ ಭಟ್ಟರು ಸುಮಾರು 30 ವರ್ಷಗಳ ಕಾಲ ಸ್ತ್ರೀ ಸಾಮ್ರಾಜ್ಯದ ಪ್ರಮೀಳೆಯಾಗಿ ರಂಗದಲ್ಲಿ ಮೆರೆದರು. ಯಕ್ಷಗಾನದಲ್ಲಿ ಸ್ತ್ರೀ ವೇಷದ ಹಳೆಯ ವೇಷಭೂಷಣಗಳು, ಪರಿಕರಗಳಿಂದ ಬೇಸತ್ತು ಸ್ತ್ರೀ ವೇಷದ ವಿನ್ಯಾಸ ಮತ್ತು ಆಕರ್ಷಣೆಗಳ ಬಗ್ಗೆ ಸ್ವಯಂ ಸಂಶೋಧನೆ ನಡೆಸಿ ಅದನ್ನು ರಂಗದಲ್ಲಿ ಪ್ರಯೋಗಿಸಬೇಕೆಂಬ ಆಲೋಚನೆಯೊಂದು ಅವರಿಗೆ ಬಂತು. ಅದರಂತೆ ಬೇಲೂರಿನ ಶಿಲಾಬಾಲಿಕೆಗಳ ಅಂಗಾಂಗ ಭಂಗಿಗಳು, ನಿಲ್ಲುವ ಭಂಗಿ, ಶೃಂಗಾರ, ಲಾಲಿತ್ಯಗಳಿಗೆ ಮಾರುಹೋಗಿ ಅದರಂತೆ ತಮ್ಮ ಸ್ತ್ರೀವೇಷದ ವೇಷಭೂಷಣಗಳು ಮತ್ತು ಅಂಗಭಂಗಿಗಳನ್ನು ಬದಲಾಯಿಸಿದರು.
ಇದು ಒಂದು ಹೊಸ ಸಂಶೋಧನೆ. ಯಕ್ಷಗಾನಕ್ಕೆ ಪಾತಾಳ ವೆಂಕಟ್ರಮಣ ಭಟ್ಟರ ಕೊಡುಗೆ. ಹೀಗೆ ಮೋಹಿನಿ, ಮೇನಕೆ, ಊರ್ವಶಿ ಮೊದಲಾದ ಹಲವಾರು ಪಾತ್ರಗಳ ಮರುಸೃಷ್ಟಿ ಮಾಡಿದರು. ಇದರಿಂದ ಯಕ್ಷಗಾನದ ಸ್ತ್ರೀವೇಷಗಳ ವಿಚಾರದಲ್ಲಿ ಹೊಸ ಅವಿಷ್ಕಾರವೇ ಆಯಿತು. ಬೇಲೂರಿನ ಯವನಿಕೆಗಳ ಆಭರಣಗಳ ರೀತಿಯಲ್ಲಿ ಡಾಬು, ತೋಳುಕಟ್ಟು, ಕೊರಳ ಆಭರಣಗಳು, ಶಿರೋಭೂಷಣಗಳನ್ನು ವಿನ್ಯಾಸಗೊಳಿಸಿದ್ದು ಮಾತ್ರವಲ್ಲ ಶಿಲಾಬಾಲಿಕೆಗಳ ಅಂಗಭಂಗಿಗಳು, ಕಣ್ಣಿನ ದೃಷ್ಟಿ, ಬಾಗುವಿಕೆ ಎಲ್ಲವನ್ನೂ ಯಕ್ಷಗಾನದ ಸ್ತ್ರೀಪಾತ್ರಗಳ ಮೂಲಕ ಅಭಿವ್ಯಕ್ತಿಗೊಳಿಸಿದರು.
ಆದರೆ ಇಂತಹಾ ಹೊಸ ಪ್ರಯೋಗಗಳನ್ನು ಮಾಡುವಾಗ ಯಕ್ಷಗಾನದ ಮೂಲ ಆಶಯಕ್ಕೆ ಧಕ್ಕೆಯಾಗಬಾರದು ಎಂದು ಪಾತಾಳರು ಎಚ್ಚರಿಸುತ್ತಾರೆ, ಯಾವುದೇ ಆವಿಷ್ಕಾರಗಳನ್ನು ನಡೆಸುವಾಗ ಸಾಧ್ಯಾಸಾಧ್ಯತೆಗಳ ಬಗ್ಗೆ ಸೂಕ್ತ ತಿಳುವಳಿಕೆಯನ್ನು ಹೊಂದಿ ಪ್ರಯೋಗ ಮಾಡಬೇಕೆಂಬ ಸೂಕ್ಷ್ಮ ವಿಷಯವನ್ನು ಅವರು ತಿಳಿಹೇಳುತ್ತಾರೆ. ಸ್ತ್ರೀ ವೇಷಗಳ ಕುಣಿತದ ವಿಚಾರ ಬಂದಾಗಲೂ ಹೇಗೆ ಕುಣಿಯಬೇಕೆಂದೂ ಅವರು ತೋರಿಸಿಕೊಟ್ಟರು. ಹಾಗೂ ಹೇಗೆ ಕುಣಿಯಬಾರದೆಂದೂ ಅವರು ತೋರಿಸಿದರು.
ಮುಖ್ಯವಾಗಿ ನಾಟ್ಯ ಮಾಡುವಾಗ ಉತ್ಸಾಹದ ಭರದಲ್ಲಿ ಒಂದಂಗುಲಕ್ಕಿಂತ ಹೆಚ್ಚಿನ ಎತ್ತರಕ್ಕೆ ಕಾಲುಗಳನ್ನು ಎತ್ತಿ ನೃತ್ಯ ಮಾಡುವುದು ಸಮಂಜಸವಲ್ಲ. ಸೌಮ್ಯ ರಸದಲ್ಲಿ ಸ್ತ್ರೀಪಾತ್ರವು ಹೇಗೆ ರಂಗದಲ್ಲಿ ನಿಲ್ಲಬೇಕೆಂದೂ ವೀರರಸದ ಯಾವ ಭಂಗಿ ಸ್ತ್ರೀ ಪಾತ್ರಕ್ಕೆ ಒಪ್ಪುತ್ತದೆ ಎಂಬುದನ್ನೂ ಮಾಡಿ ತೋರಿಸಿದರು.
ಇಂತಹಾ ಹಲವಾರು ಸೂಕ್ಷ್ಮ ವಿಷಯಗಳನ್ನು ಪಾತಾಳ ವೆಂಕಟ್ರಮಣ ಭಟ್ಟರು ಹೇಳುತ್ತಾರೆ. ಹಲವಾರು ಸ್ತ್ರೀ ಪಾತ್ರಧಾರೀ ಕಲಾವಿದರು ಅವರಿಂದ ಸಲಹೆ ಸೂಚನೆಗಳನ್ನು ಪಡೆಯಲು ಬಂದಿದ್ದರು ಎಂದೂ ಅವರು ಆ ಸಂಧರ್ಭದಲ್ಲಿ ಹೇಳಿದ್ದರು. ಏನೇ ಆಗಲಿ, ಯಕ್ಷಗಾನದ ಅನೇಕ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಸ್ತ್ರೀ ಪಾತ್ರದ ಸೂಕ್ಷ್ಮತೆಯ ಬಗ್ಗೆಯೂ ಪಾತಾಳ ವೆಂಕಟ್ರಮಣ ಭಟ್ಟರಿಂದ ಮುಂದಿನ ಪೀಳಿಗೆಯು ಕಲಿಯಬೇಕಾದುದು ತುಂಬಾ ಇದೆ.
ಪುತ್ತಿಗೆ ರಘುರಾಮ ಹೊಳ್ಳರ ಹಾಡುಗಳನ್ನು ಕೇಳುವುದೆಂದರೆ ಅದು ಒಂದು ಮಹದಾನಂದದ ವಿಚಾರ. ಮನಸ್ಸಿಗೆ ಮುದ ಕೊಡುವ ಕಂಠ. ಜೊತೆಗೆ ತಾಳ, ಲಯಗಳ ಅಪೂರ್ವ ಸಿದ್ಧಿಯ ಸಮ್ಮಿಲನ. ಅವರ ‘ ಈ ತೆರದೊಳಸುರಾರಿ’ ಎಂಬ ಹಾಡಿನ ದೃಶ್ಯದ ಚಿತ್ರೀಕರಣ ಕೊಂಗೋಟ್ ರಾಧಾಕೃಷ್ಣ ಭಟ್ಟರ ಯು ಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು. ಜೊತೆಗೆ ಚೈತನ್ಯ ಕೃಷ್ಣ ಪದ್ಯಾಣರ ಮದ್ದಳೆಯ ಸಾಥ್.
ಶ್ರೀ ಕೆ.ಪಿ. ರಾಜಗೋಪಾಲ್ ಅವರು ಬಂಟ್ವಾಳ ತಾಲೂಕಿನ ಕನ್ಯಾನ ನಿವಾಸಿಗಳು. ಶ್ರೀಯುತರ ಸಾಹಿತ್ಯಾಸಕ್ತಿ, ಕಲಾಸಕ್ತಿ, ಸಂಗ್ರಹಾಸಕ್ತಿಗಳು ಅಭಿನಂದನೀಯವಾದುದು. ಬೆಂಗಳೂರು ನಗರದಲ್ಲಿ ಉದ್ಯೋಗಿಯಾಗಿದ್ದುಕೊಂಡು ಕಲಾವಿದರಾಗಿ, ಲೇಖಕರಾಗಿ ಯಕ್ಷಗಾನ ಕಲಾ ಸಂಘಟಕರಾಗಿ ಕಲಾಮಾತೆಯ ಮತ್ತು ಸಾಹಿತ್ಯ ಸೇವೆಯನ್ನು ಮಾಡಿದವರು. ಪುಸ್ತಕಗಳ ಮೇಲೆ ಇವರಿಗಿರುವ ಪ್ರೀತಿ, ಗೌರವ, ಅದನ್ನು ಸಂಗ್ರಹಿಸುವ ಆಸಕ್ತಿ, ಅವುಗಳನ್ನು ಕೆಡದಂತೆ ಕಾಪಿಡುವಲ್ಲಿ ಇವರಿಗಿರುವ ಶ್ರದ್ಧೆಗೆ ಯಾರಾದರೂ ಮೆಚ್ಚಲೇ ಬೇಕು. ಪ್ರಬುದ್ಧ ಬರಹಗಾರರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮಿಂದಾದ ಪರಮಾವಧಿ ಕೊಡುಗೆಯನ್ನು ನೀಡುತ್ತಿದ್ದಾರೆ. ಅವರ ಕೆಲವು ಅಪೂರ್ವ ಸಂಗ್ರಹಗಳು ಮುಂದಿನ ತಲೆಮಾರಿಗೆ ಖಂಡಿತಾ ಅನುಕೂಲವಾದೀತು ಎಂಬುದರಲ್ಲಿ ಸಂಶಯವಿಲ್ಲ. ಶ್ರೀಯುತರ ಸಹೋದರರಾದ ಪೆರ್ನಡ್ಕ ಶ್ರೀ ಶ್ಯಾಮ ಭಟ್ಟರೂ ಕಲಾವಿದರಾಗಿ, ಲೇಖಕರಾಗಿ, ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ.
‘ಯಕ್ಷಗಾನದ ಯಕ್ಷರು’ ಎಂಬ ಪುಸ್ತಕವು ಶ್ರೀ ರಾಜಗೋಪಾಲ ಕನ್ಯಾನ ಇವರ ಸಂಪಾದಕತ್ವದಲ್ಲಿ 2007ನೇ ಇಸವಿಯಲ್ಲಿ ಪ್ರಕಟವಾಗಿತ್ತು. ಇದರ ಪ್ರಕಾಶಕರು ಹರೀಶ ಎಂಟರ್ಪ್ರೈಸಸ್, ವಿ.ವಿ. ಪುರಂ, ಬೆಂಗಳೂರು. ಈ ಹೊತ್ತಗೆಯಲ್ಲಿ ಸ್ವರಚಿತ, ಸಂಪಾದಿತ, ಸ್ವಕಥಾ ಸಂಗ್ರಹಿತ ಪ್ರಸಂಗಗಳ ಪರಿಚಯ, ಪತ್ರಿಕಾ ವರದಿಗಳು, ಸ್ವಕಥಾ ಸಂಯೋಜನೆಯ ಪ್ರಸಂಗ ಎಂಬ ಐದು ವಿಭಾಗಗಳಿವೆ. ಸ್ವರಚಿತ ಎಂಬ ವಿಭಾಗದಲ್ಲಿ ವಿದ್ವಾನ್ ಟಿ. ಕೇಶವ ಭಟ್ಟ, ಕೆರೆಮನೆ ಗಜಾನನ ಹೆಗಡೆ, ಪಾತಾಳ ವೆಂಕಟ್ರಮಣ ಭಟ್, ಪುಂಡಿಕಾಯ್ ಕೃಷ್ಣ ಭಟ್, ಅಡೂರು ಶ್ರೀಧರ ರಾವ್,ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ಸಂಘ ಕಾಸರಗೋಡು, ಪ್ರೊ| ಕಾಳೇಗೌಡ ನಾಗವಾರ ಸಂದರ್ಶನ, ಮಾಸ್ಟರ್ ಕೇಶವ ಕನ್ಯಾನ, ಮಾಸ್ಟರ್ ಭೀಮ ಭಾರದ್ವಾಜ್ ಕನ್ಯಾನ, ವಿದ್ವಾನ್ ತಾಳ್ತಜೆ ಕೃಷ್ಣ ಭಟ್, ಇವರುಗಳ ಬಗೆಗೆ ಶ್ರೀ ರಾಜಗೋಪಾಲರು ಬರೆದ ಲೇಖನಗಳಿವೆ. ಸಂಪಾದಿತ ಎಂಬ ವಿಭಾಗದಡಿಯಲ್ಲಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಕುರಿಯ ವಿಠಲ ಶಾಸ್ತ್ರಿ, ಪೊಳ್ಳಕಜೆ ಗೋಪಾಲಕೃಷ್ಣ ಭಟ್, ದೇಲಂತಬೆಟ್ಟು ಕೃಷ್ಣ ಭಟ್, ಇವರುಗಳ ಬಗೆಗೆ ಬರೆದ ಲೇಖನಗಳಿವೆ. ಸ್ವಕಥಾ ಸಂಗ್ರಹಿತ ಪ್ರಸಂಗಗಳ ಪರಿಚಯ ಎಂಬ ವಿಭಾಗದಲ್ಲಿ ಮೂರು ಪ್ರಸಂಗಗಳ ವಿವರಗಳನ್ನೂ ರಚಿಸಿದ ಕವಿಗಳ ಹೆಸರುಗಳನ್ನೂ ನೀಡಿರುತ್ತಾರೆ. ಪತ್ರಿಕಾ ವರದಿಗಳು ಎಂಬ ವಿಭಾಗದಲ್ಲಿ ಒಟ್ಟು ಏಳು ಲೇಖನ ರೂಪದ ವರದಿಗಳಿವೆ. ಕೊನೆಯ ವಿಭಾಗ ಸ್ವಕಥಾ ಸಂಯೋಜನೆಯ ಪ್ರಸಂಗ. ಜಲಜಸಖ ಕಾವ್ಯನಾಮದ ಬೆಳ್ಳಾರೆ ಶ್ರೀ ಸೂರ್ಯನಾರಾಯಣ ಭಟ್ಟರು ರಚಿಸಿದ ಸೂರ್ಯೋದಯ ಎಂಬ ಯಕ್ಷಗಾನ ಪ್ರಸಂಗವನ್ನು ಕಥಾಸಾರಾಂಶ ಮತ್ತು ಪಾತ್ರ ಪರಿಚಯದೊಂದಿಗೆ ನೀಡಿರುತ್ತಾರೆ. ಇದು ಒಟ್ಟು ನೂರಾ ಮೂವತ್ತಾರು ಪುಟಗಳುಳ್ಳ ಪುಸ್ತಕ. ಯಕ್ಷಗಾನ ಕ್ಷೇತ್ರದ ಹಲವು ಸಾಧಕರ ಕುರಿತಾಗಿ ಮಾಹಿತಿಯುಳ್ಳ ಹೊತ್ತಗೆಯಾದುದರಿಂದ ‘ಯಕ್ಷಗಾನದ ಯಕ್ಷರು’ ಎಂಬ ಶೀರ್ಷಿಕೆಯು ಅರ್ಥಪೂರ್ಣವಾಗಿದೆ. ವಿದ್ವಾಂಸರಾದ ಶ್ರೀ ರಾಜಗೋಪಾಲ್ ಕನ್ಯಾನ ಅವರಿಂದ ಇನ್ನಷ್ಟು ಕಲಾ, ಸಾಹಿತ್ಯ ಸೇವೆಗಳು ನಡೆಯಲಿ ಎಂಬ ಶುಭ ಹಾರೈಕೆಗಳು.
‘ಚೌಕಿ’ ಎಂದರೆ ಯಕ್ಷಗಾನದ ಬಣ್ಣದ ಮನೆ. ಗ್ರೀನ್ ರೂಮ್ ಎಂದು ಹೇಳಿದರೆ ಕೆಲವರಿಗೆ ಬೇಗ ಅರ್ಥವಾದೀತು! ಯಕ್ಷಗಾನದ ರಂಗಸ್ಥಳದ ಬಣ್ಣ ಬಣ್ಣದ ವೇಷಗಳ ಪಾತ್ರಧಾರಿಗಳನ್ನು ನೋಡಿ ಪುರಾಣ ಲೋಕದ ಅದ್ಭುತ ಪಾತ್ರಗಳನ್ನು ನೋಡಿ ಭ್ರಮಾಧೀನರಾದವರಿಗೆ ಆ ಪಾತ್ರಧಾರಿಗಳ ನೈಜ ಬದುಕು ರಂಗದ ಹೊರಗೆ ಹೇಗಿರಬಹುದು ಎಂದು ತಿಳಿದಿರಬೇಕೆಂದೇನೂ ಇಲ್ಲ. ಕಲಾವಿದರ ಬದುಕೂ ಆ ಪಾತ್ರಗಳಂತೆ ವರ್ಣಮಯವಾಗಿರಬಹುದೆ ಎಂದು ಯೋಚಿಸುವವರು ರಾಜಶ್ರೀ ಟಿ. ರೈಯವರ ತುಳು ಕಾದಂಬರಿ ‘ಚೌಕಿ’ಯನ್ನೊಮ್ಮೆ ಓದಿ ನೋಡಬೇಕು.
ತುಳು ಭಾಷೆಯಲ್ಲಿ ಯಕ್ಷಗಾನ ಸಂಬಂಧಿತ ಕಾದಂಬರಿಯೊಂದು ಪ್ರಕಟವಾದುದು ಇದೇ ಮೊದಲು ಎಂದು ಕಾಣುತ್ತದೆ. ಕನ್ನಡದಲ್ಲಿ ಯಕ್ಷಗಾನದ ಕೆಲವು ಕಾದಂಬರಿಗಳು ಈ ಹಿಂದೆ ಪ್ರಕಟವಾಗಿವೆ. ಆದರೆ ತುಳು ಭಾಷೆಯಲ್ಲಿ ಇದೇ ಮೊದಲ ಬಾರಿಗೆ ರಾಜಶ್ರೀ ಟಿ. ರೈಯವರು ಯಕ್ಷಗಾನದ ಕಾದಂಬರಿ ರಚಿಸುವ ಸಾಹಸಕ್ಕೆ ಮುಂದಾಗಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಕಾದಂಬರಿಯುದ್ದಕ್ಕೂ ಯಕ್ಷಗಾನದ ಹಿಂದಿನ ಸ್ಥಿತಿಗತಿಗಳ ಬಗ್ಗೆ ಲೇಖಕಿ ಬೆಳಕು ಚೆಲ್ಲುವುದರ ಜೊತೆಗೆ ಕಲಾವಿದರ ನಿಜ ಬದುಕಿನ ಬವಣೆಗಳು, ಕಷ್ಟದ ಜೀವನ ಮೊದಲಾದುವುಗಳ ಬಗ್ಗೆ ಮನೋಜ್ಞವಾಗಿ ಚಿತ್ರಿಸಿದ್ದಾರೆ. ತುಳು ಭಾಷೆಯ ಸೌಂದರ್ಯ, ಸೊಬಗುಗಳು ಈ ಕೃತಿಯಲ್ಲಿ ಎದ್ದು ಕಾಣುವ ಇನ್ನೊಂದು ಅಂಶ. ರಂಗದ ಪ್ರದರ್ಶನ ಹಿಂದೆ ಚೌಕಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಅದರಂತೆಯೇ ಕಲಾವಿದನ ಕಲಾಜೀವನದ ಹಿಂದಿನ ನಿಜಜೀವನದ ಕತೆಗೆ ‘ಚೌಕಿ’ ಎಂಬ ಹೆಸರು ನಿಜವಾಗಿಯೂ ಒಪ್ಪುತ್ತದೆ. ಇವರ ಈ ‘ಚೌಕಿ’ ಕಾದಂಬರಿಗೆ ಈ ಬಾರಿಯ ಪಣಿಯಾಡಿ ಪ್ರಶಸ್ತಿಯ ಪುರಸ್ಕಾರ ದೊರಕಿದೆ. ಬಜಿಲಜ್ಜೆ, ಕೊಂಬು ಮತ್ತು ಪನಿಯಾರ ಇವುಗಳು ರಾಜಶ್ರೀಯವರ ಇತರ ಕೃತಿಗಳು. ಇವರ ಕೊಂಬು ಕೃತಿಗೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
ಭೋಜರಾಜ್ ವಾಮಂಜೂರು ಎಂಬ ಹೆಸರನ್ನು ಕೇಳದ ಕಲಾಭಿಮಾನಿಗಳು ಇರಲಿಕ್ಕಿಲ್ಲ. ಅವರೊಂದು ಕಲಾಸಾಗರದ ಅನರ್ಘ್ಯ ರತ್ನ. ಮಂಗಳೂರು ಸಮೀಪದ ವಾಮಂಜೂರಿನಲ್ಲಿ ಜನಿಸಿದ ಬಾಲಕನೊಬ್ಬ ಆರನೆಯ ತರಗತಿಗೆ ತನ್ನ ವಿದ್ಯಾಭ್ಯಾಸವನ್ನು ಕೊನೆಗೊಳಿಸಿ ಆಮೇಲೆ ಯಕ್ಷಗಾನ ಮತ್ತು ನಾಟಕ ಲೋಕವನ್ನು ಪ್ರವೇಶಿಸಿ ಯಶಸ್ವಿ ನಟನೆನ್ನಿಸಿಕೊಂಡದ್ದು ಈಗ ಇತಿಹಾಸ. ಪ್ರಾರಂಭದಲ್ಲಿ ಅವರು ಯಕ್ಷಗಾನದ ಬಗ್ಗೆ ಆಸಕ್ತಿ ತೋರಿದರೂ ಆಮೇಲೆ ಪೂರ್ಣಕಾಲಿಕ ನಟನಾಗಿ ತುಳು ರಂಗಭೂಮಿಯಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡರು.
ದೇವದಾಸ್ ಕಾಪಿಕಾಡ್ ಅವರ ಚಾಪರ್ಕ ತಂಡದ ಖಾಯಂ ಸದಸ್ಯನಾಗಿ ಕಳೆದ 25 ವರ್ಷಗಳಿಂದಲೂ ಹೆಚ್ಚು ಕಾಲ ಕಾಪಿಕಾಡ್ ಜೊತೆಯಲ್ಲಿಯೇ ಹೆಜ್ಜೆ ಹಾಕುತ್ತಿದ್ದಾರೆ. ನಾಟಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ ನಂತರ ಅವರು ತುಳು ರಜತ ಪರದೆಯತ್ತ ಮುಖ ಮಾಡಿದರು. ತುಳು ಸಿನಿಮಾ ಕ್ಷೇತ್ರ ಅವರನ್ನು ಕೈ ಬೀಸಿ ಕರೆಯಿತು.
ಹಲವಾರು ತುಳು ಸಿನಿಮಾಗಳಲ್ಲಿ ನಟಿಸಿ ಯಶಸ್ವೀ ಸಿನಿಮಾ ನಟನೆನ್ನಿಸಿಕೊಂಡರು. ಆದರೂ ಭೋಜರಾಜ್ ವಾಮಂಜೂರು ತಾನು ಮೊದಲು ಹೆಜ್ಜೆಯೂರಲು ಪ್ರಯತ್ನಿಸಿದ ಯಕ್ಷಗಾನ ಕ್ಷೇತ್ರವನ್ನು ಮರೆಯಲಿಲ್ಲ. ಆಗಾಗ ಯಕ್ಷಗಾನದಲ್ಲಿಯೂ ಅತಿಥಿ ನಟನಾಗಿ ಅದರಲ್ಲೂ ಹಾಸ್ಯ ಪಾತ್ರಗಳನ್ನೂ ಮಾಡುತ್ತಾ ತಮ್ಮ ಬಹುಮುಖ ಕಲಾಪ್ರೌಢಿಮೆಗೆ ಸಾಕ್ಷಿಯಾದರು. ಭೋಜರಾಜ್ ವಾಮಂಜೂರು ಒಬ್ಬ ಉತ್ತಮ ಹಾಡುಗಾರನೂ ಹೌದು. ಅದರಲ್ಲೂ ಡಾ. ರಾಜಕುಮಾರ್ ಅವರು ಹಾಡಿದ ಹಾಡುಗಳನ್ನು ಅವರದೇ ಧ್ವನಿಯಲ್ಲಿ ಇಂಪಾಗಿ ಹಾಡುತ್ತಾರೆ.
ಹೀಗೆ ನಾಟಕದಲ್ಲಿ ಯಶಸ್ವೀ ನಟನಾಗಿಯೂ, ಸಿನಿಮಾ ನಟನಾಗಿಯೂ, ಯಕ್ಷಗಾನ ಕಲಾವಿದನಾಗಿಯೂ ಜೊತೆಗೆ ಗಾಯಕನಾಗಿಯೂ ಗುರುತಿಸಿಕೊಂಡಿರುವ ಭೋಜರಾಜ್ ವಾಮಂಜೂರು ಒಬ್ಬ ಬಹುಮುಖ ಪ್ರತಿಭಾವಂತ ಕಲಾವಿದ. ಅವರು ಯಕ್ಷಗಾನದಲ್ಲಿ ಮಾಡಿದ ವಿಜಯನ ಪಾತ್ರದ ವೀಡಿಯೊ ನೋಡಿ. ಇದು ಕೆ. ಆರ್.ಕೆ ಭಟ್ ಚಿತ್ರಮೂಲ ಅವರ ಯು ಟ್ಯೂಬ್ ಚಾನೆಲ್ ವೀಡಿಯೋ.
‘ಕೋಲ್ಮಿಂಚು’ ಎಂಬ ಈ ಹೊತ್ತಗೆಯು ಬಡಗುತಿಟ್ಟಿನ ಖ್ಯಾತ ಕಲಾವಿದರಾಗಿ ಮೆರೆದ ದಿ। ಕಣ್ಣಿಮನೆ ಗಣಪತಿ ಭಟ್ಟರಿಗೆ ಅವರ ಮಿತ್ರರೂ ಕಲಾಭಿಮಾನಿಗಳೂ ಅರ್ಪಿಸಿದ ಅಕ್ಷರ ರೂಪದ ನುಡಿನಮನಗಳೆಂದು ನನ್ನ ಅನಿಸಿಕೆ. ಕಣ್ಣಿಮನೆಯವರ ಕುಣಿತ ಮತ್ತು ಅಭಿನಯ ಚಾತುರ್ಯಗಳು ಯುವ ಪೀಳಿಗೆಯನ್ನು ಬಹು ಬೇಗನೆ ಯಕ್ಷಗಾನ ಪ್ರದರ್ಶನಗಳತ್ತ ಸೆಳೆಯಲು ಕಾರಣವಾದದ್ದಂತೂ ಸತ್ಯ. ಚಿಟ್ಟಾಣಿಯವರಂತೆ ಇವರೂ ತನ್ನ ಕಲಾಪ್ರೌಢಿಮೆಯ ಮೋಡಿಯನ್ನು ಬೀರಿ ಪ್ರೇಕ್ಷಕರ ಮನಸೂರೆಗೊಂಡಿದ್ದರು. ಈ ಕೃತಿಯ ಶೀರ್ಷಿಕೆಯೇ ಸೂಚಿಸುವಂತೆ ಇವರು ನಿಜವಾಗಿಯೂ ರಂಗಸ್ಥಳದ ಕೋಲ್ಮಿಂಚೇ ಆಗಿದ್ದರು. ಪಾದರಸದಂತಹ ಚುರುಕುತನ, ಅದ್ಭುತವಾದ ಗ್ರಹಣಶಕ್ತಿಗಳೆಂಬ ಗುಣಗಳಿಂದ ಇವರು ಕ್ಷಿಪ್ರಾತಿಕ್ಷಿಪ್ರ ಕಲಾವಿದನಾಗಿ ಬೆಳೆದು ಖ್ಯಾತರಾಗಿದ್ದರು. 1969 ಜುಲೈ 1ರಂದು ಶ್ರೀ ಮಂಜುನಾಥ ಭಟ್ಟ ಮತ್ತು ಶ್ರೀಮತಿ ಸರಸ್ವತಿ ದಂಪತಿಗಳ ಮಗನಾಗಿ ಹೊನ್ನಾವರ ತಾಲೂಕು ಮುಗ್ವಾ ಗ್ರಾಮದ ಕಣ್ಣಿಮನೆ ಎಂಬಲ್ಲಿ ಇವರ ಜನನ. ಓದಿದ್ದು ಹತ್ತನೇ ತರಗತಿ ವರೆಗೆ. ಮನೆಯವರಾರೂ ಕಲಾವಿದರಲ್ಲದಿದ್ದರೂ ಬಾಲ್ಯದಲ್ಲಿ ಪ್ರದರ್ಶನಗಳನ್ನು ನೋಡಿಯೇ ಯಕ್ಷಗಾನಾಸಕ್ತರಾಗಿದ್ದರು. ಕಲಾಕ್ಷೇತ್ರದಲ್ಲಿ ಇವರದು ಕ್ಷಿಪ್ರ ಬೆಳವಣಿಗೆ. ಆಸಕ್ತಿ, ಅಧ್ಯಯನ, ಸಾಧನೆಗಳೇ ಇದಕ್ಕೆ ಕಾರಣ. ತಮ್ಮ ವಿಶಿಷ್ಟವಾದ ಕುಣಿತ ಮತ್ತು ಅಭಿನಯಗಳಿಂದ ‘ಕಣ್ಣಿ ಶೈಲಿ’ಗೆ ಕಾರಣರಾದರು. ಕಿರಿಯ ವಯಸ್ಸಿನ ಅತ್ಯಲ್ಪ ಅವಧಿಯಲ್ಲಿ ಅಪಾರ ಅಭಿಮಾನಿಗಳನ್ನೂ ಜನಪ್ರಿಯತೆಯನ್ನೂ ಗಳಿಸಿದ ಕಲಾವಿದರುಗಳಲ್ಲಿ ಕಣ್ಣಿಮನೆ ಗಣಪತಿ ಭಟ್ಟರೂ ಒಬ್ಬರು. ನಾಟ್ಯ ಮತ್ತು ಅಭಿನಯ ಸಾಮರ್ಥ್ಯಗಳಿಂದ ಕಲಾಭಿಮಾನಿಗಳ ಮನಸೂರೆಗೊಂಡು ಮೆರೆದ ಶ್ರೀಯುತರು 2016 ಫೆಬ್ರವರಿ 18ರಂದು ತನ್ನ ನಲುವತ್ತೇಳನೆಯ ವಯಸ್ಸಿನಲ್ಲಿ ಅಲೌಕಿಕ ಪ್ರಪಂಚವನ್ನು ಸೇರಿಕೊಂಡಿದ್ದರು. ಕಲಾಭಿಮಾನಿಗಳು ಕಣ್ಣಿಮನೆಯವರು ಇನ್ನಿಲ್ಲ ಎಂದು ತಿಳಿದು ಕಣ್ಣೀರು ಸುರಿಸಿದ್ದರು. ನೆರೆಯವರಿಂದ, ಮಿತ್ರರಿಂದ ಗಪ್ಪಣ್ಣ, ಗುಂಡಣ್ಣ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಶ್ರೀ ಕಣ್ಣಿಮನೆಯವರ ಕಾಯವು ಅಳಿದರೂ ಗಳಿಸಿದ ಕೀರ್ತಿಯು ಉಳಿದಿದೆ. ಕಲಾಭಿಮಾನಿಗಳಿಗೆ ಅವರ ನೆನಪು ಯಾವತ್ತೂ ಮಾಸದು.
‘ಕೋಲ್ಮಿಂಚು’ ಎಂಬ ಈ ಪುಸ್ತಕವು ಪ್ರಕಟವಾದದ್ದು 2017ರಲ್ಲಿ. ಪ್ರಕಾಶಕರು ಸುಬ್ರಾಯ ಗಣೇಶ ಹೆಗಡೆ ಮತ್ತಿಗಾರ. ಯಮುನಾ ಪ್ರಕಾಶನ, ಸಂಪಗೋಡ, ಉತ್ತರ ಕನ್ನಡ ಜಿಲ್ಲೆ. ಸಂಪಾದಕರು ಶ್ರೀ ನಾಗರಾಜ ಮತ್ತಿಗಾರ. ‘ಸ್ಮರಣೆಯ ಧಾಖಲಾತಿ’ ಎಂಬ ಶೀರ್ಷಿಕೆಯಡಿ ಇವರ ಲೇಖನವಿದೆ. ‘ಯಕ್ಷಗಾನದ ಏಕಲವ್ಯ’ ಎಂಬ ಶೀರ್ಷಿಕೆಯಡಿ ಹಿರಿಯ ಭಾಗವತರಾದ ಕಪ್ಪೆಕೆರೆ ಸುಬ್ರಾಯ ಹೆಗಡೆಯವರು ಮುನ್ನುಡಿಯನ್ನು ಬರೆದಿದ್ದಾರೆ. ಕಷ್ಟ ಮುಚ್ಚಿಟ್ಟು ನಗು ಹಂಚಿದವರು ಎಂಬ ತಲೆಬರಹದಡಿ ಕಣ್ಣಿಮನೆಯವರ ಪತ್ನಿ ಶ್ರೀಮತಿ ಲಲಿತಾ ಗಣಪತಿ ಭಟ್ ಅವರ ಲೇಖನವಿದೆ. ಪ್ರಕಾಶಕರಾದ ಶ್ರೀ ಸುಬ್ರಾಯ ಗಣೇಶ ಹೆಗಡೆ ಅವರು ತಮ್ಮ ಅನಿಸಿಕೆಗಳನ್ನು ಅಕ್ಷರ ರೂಪಕ್ಕಿಳಿಸಿದ್ದಾರೆ. ಬಳಿಕ ‘ಪುಟ ತೆರೆದಂತೆ’ , ‘ಚೌಕಿಮನೆ’, ‘ರಂಗಸ್ಥಳ’, ‘ಪ್ರೇಕ್ಷಕ’ ಎಂಬ ವಿಭಾಗಗಳಲ್ಲಿ ಮೂವತ್ತೈದು ಮಂದಿ ಮಹನೀಯರುಗಳ ಲೇಖನವಿದ್ದು ಕಣ್ಣಿಮನೆಯವರ ಬಗೆಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಲೇಖನಗಳನ್ನು ಬರೆದವರು ನಾಗರಾಜ ಮತ್ತಿಗಾರ, ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಡಾ. ಶ್ರೀಪಾದ ಶೆಟ್ಟಿ ಹೊನ್ನಾವರ, ಶ್ರೀಪಾದ ಹೆಗಡೆ ಹಡಿನಬಾಳ, ನಾರಾಯಣ ಯಾಜಿ ಸಾಲೇಬೈಲು, ರಮೇಶ ಭಂಡಾರಿ, ವಿ. ಉಮಾಕಾಂತ ಭಟ್ಟ, ಗಣಪತಿ ಹೆಗಡೆ ತೋಟಿಮನೆ, ಗೋಪಾಲ ಗ. ಹೆಗಡೆ, ಮಂಜುನಾಥ ಭಾಗವತ ಹೊಸ್ತೋಟ, ಗೋಡೆ ನಾರಾಯಣ ಹೆಗಡೆ, ಕೃಷ್ಣಯಾಜಿ ಬಳ್ಕೂರು, ಭಾಸ್ಕರ ಜೋಶಿ ಶಿರಳಗಿ, ಸುಬ್ರಹ್ಮಣ್ಯ ಧಾರೇಶ್ವರ, ಕೊಂಡದಕುಳಿ ರಾಮಚಂದ್ರ ಹೆಗಡೆ, ಸುಬ್ರಹ್ಮಣ್ಯ ಯಲಗುಪ್ಪ, ಎಂ. ಎ. ನಾಯ್ಕ ಮಂದರ್ತಿ, ವಿದ್ವಾನ್ ಗಣಪತಿ ಭಟ್ಟ, ಎಂ. ಕೆ. ರಮೇಶ ಆಚಾರ್ಯ, ನೀಲ್ಕೋಡು ಶಂಕರ ಹೆಗಡೆ, ಸುರೇಶ್ ಶೆಟ್ಟಿ, ರಾಘವೇಂದ್ರ ಮಯ್ಯ, ಜಲವಳ್ಳಿ ವಿದ್ಯಾಧರ ರಾವ್, ರಾಜಶೇಖರ ಹೆಬ್ಬಾರ್, ಮನೋಜ್ ಕುಮಾರ ಭಟ್, ಸೂರ್ಯ ಭಟ್ ಸಣ್ಣ ಗದ್ದೆ, ಗಣಪತಿ ಹೆಗಡೆ ಕಪ್ಪೆಕೆರೆ, ಬಿ. ಲಕ್ಷ್ಮೀನಾರಾಯಣ, ವಿ. ಮಂಜುನಾಥ ತೋಳ್ಗರಗದ್ದೆ, ಶಶಿಧರ ಹೆಗಡೆ ನಂದಿಕಲ್, ಕುಮಾರ ಭಟ್ ಸಾಗರ, ಪವನಕುಮಾರ ಉಪಾಧ್ಯ, ಗಜಾನನ ಈಶ್ವರ ಹೆಗಡೆ, ಜಿ. ಯೋಗೀಶ ಸಾಗರ, ಸುಧಾಕಿರಣ್ ಅಧಿಕಶ್ರೇಣಿ ಇವರುಗಳು. ಕೊನೆಯಲ್ಲಿ ‘ಭಾವಪಟ’ ವಿಭಾಗದಲ್ಲಿ ಬಣ್ಣದ ಛಾಯಾಚಿತ್ರಗಳ ಸಂಗ್ರಹವನ್ನೂ ನೀಡಲಾಗಿದೆ. ಲೇಖನಗಳ ಜೊತೆಗೆ ಕಣ್ಣಿಮನೆಯವರ ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನೂ ನೀಡಿರುತ್ತಾರೆ. ಪುಸ್ತಕದ ಹೊರ ಆವರಣದಲ್ಲಿ ಖ್ಯಾತ ಹಿರಿಯ ಕಲಾವಿದರಾದ ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆಯವರು ಕಣ್ಣಿಮನೆಯವರ ಬಗೆಗೆ ಬರೆದ ‘ಮಿಂಚಿನ ಪ್ರವೇಶದ ಸರದಾರ’ ಎಂಬ ಲೇಖನವಿದೆ.
ಯಾವುದೇ ಒಂದು ಕಲೆಯು ಬೆಳೆದು ಬರಬೇಕಾದರೆ ಅದನ್ನು ಉಳಿಸಿ ಬೆಳೆಸುವ ಕೈಗಳು ಸಾವಿರಾರು ಇರಬೇಕಾಗುತ್ತದೆ. ಅದು ಪರೋಕ್ಷವಾಗಿಯೂ ಇರಬಹುದು. ಇನ್ನು ಕೆಲವು ಪ್ರತ್ಯಕ್ಷವಾಗಿಯೂ ಇರಬಹುದು. ಉತ್ಸಾಹ, ಆಸಕ್ತಿ, ಪ್ರೋತ್ಸಾಹ, ಪೋಷಕತ್ವ, ಪ್ರಾಯೋಜಕತ್ವ, ಸಂಘಟನೆ, ಅಧ್ಯಯನ, ಪ್ರಸಾರ, ವೀಕ್ಷಣೆ, ಭಾಗವಹಿಸುವಿಕೆ, ಅನುದಾನ, ಸಂಶೋಧನೆ ಮೊದಲಾದುವುಗಳೆಲ್ಲಾ ಒಂದು ಕಲೆಯ ಬೆಳವಣಿಗೆಯಲ್ಲಿ ಪಾಲು ಪಡೆಯುವ ಪ್ರಮುಖ ಅಂಶಗಳು.
ಅದರಂತೆ ಕಲೆಯ ಪ್ರಸರಣ ಎಂಬುದು ಇಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಯಾವುದೇ ಕಲೆಯ ಪ್ರಸಿದ್ಧಿಯು ಹೆಚ್ಚಾಗಿ ಪ್ರಚಾರ ಮತ್ತು ಪ್ರಸರಣವನ್ನು ಅವಲಂಬಲಿಸಿದೆ. ಪ್ರಚಾರಕ್ಕಾಗಿ ಮತ್ತು ಸುದ್ದಿ ಪ್ರಸಾರಣಕ್ಕಾಗಿ ನಾವು ಪತ್ರಿಕೆಗಳನ್ನು ಅವಲಂಬಿಸಿದರೆ ದೃಶ್ಯ ಮತ್ತು ಧ್ವನಿಮುದ್ರಣದ ಪ್ರಸಾರಕ್ಕಾಗಿ ದೃಶ್ಯಮಾಧ್ಯಮಗಳಾದ ಟಿವಿ ಚಾನೆಲ್ ಗಳು, ಆಕಾಶವಾಣಿಗಳನ್ನು ಅವಲಂಬಿಸುತ್ತೇವೆ.
ಆದರೆ ಇತ್ತೀಚಿಗೆ ಕೆಲವು ವರ್ಷಗಳಿಂದ ಸಾಮಾಜಿಕ ಜಾಲ ತಾಣಗಳು ಈ ದೆಸೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾ ಇದೆ. ಸುದ್ದಿ ಪ್ರಸಾರದ ಜೊತೆಗೆ ಆಡಿಯೋ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿವೆ. ಯಕ್ಷಗಾನವೂ ಸೇರಿದಂತೆ ಹಲವಾರು ಕಲೆಗಳ ಪ್ರದರ್ಶನದ ಸಂಪೂರ್ಣ ಪ್ರದರ್ಶನಗಳು ಯು ಟ್ಯೂಬ್, ಫೇಸ್ಬುಕ್ ಮೊದಲಾದ ಜಾಲತಾಣಗಳಲ್ಲಿ ನೋಡಲು ನಮಗೆ ಸಿಗುತ್ತವೆ.
ದೇಶ ವಿದೇಶಗಳಲ್ಲಿ ನೆಲೆಸಿದ್ದರೂ ಭಾರತೀಯ ನೆಲದಲ್ಲಿ ಪ್ರದರ್ಶನಗೊಳ್ಳುತ್ತಿರುವ ಕಲೆಯ ಕಂಪನ್ನು ಆಸ್ವಾದಿಸಬಹುದು.(ಕೊರೋನಾ ಬಾಧಿತ ಈ ಕಾಲಘಟ್ಟದಲ್ಲಿಯಂತೂ ನೇರ ಪ್ರಸಾರಗಳದ್ದೇ ಕಾರುಬಾರು) ಈ ರೀತಿ ಯಕ್ಷಗಾನದ ಪ್ರದರ್ಶನಗಳು ನಡೆಯುವಲ್ಲಿಗೆ ಹೋಗಿ ದೃಶ್ಯಾವಳಿಗಳಲ್ಲಿ ಸೆರೆ ಹಿಡಿದು ತಮ್ಮ ಯು ಟ್ಯೂಬ್ ಚಾನೆಲ್ ಗಳಲ್ಲಿ ಪ್ರಸಾರ ಮಾಡುತ್ತಾ ಕಲೆಯ ಕಂಪನ್ನು ಪ್ರಸಾರ ಮಾಡಿ ತನ್ಮೂಲಕ ಈ ಕಲೆಯ ಬೆಳೆವಣಿಗೆಗೆ ಕಾರಣರಾದ ಹಲವು ಮಂದಿ ನಮ್ಮೊಡನೆ ಇಂದು ಇದ್ದಾರೆ. ಅವರಲ್ಲಿ ಕೋಂಗೋಟ್ ಶ್ರೀ ರಾಧಾಕೃಷ್ಣ ಭಟ್ ಅವರದು ಒಂದು ಪ್ರಮುಖವಾದ ಹೆಸರು.
ಹೆಚ್ಚಾಗಿ ಯಕ್ಷಗಾನ ನಡೆಯುವ ಸ್ಥಳಗಳಿಗೆ ಹೋಗಿ ದೃಶ್ಯಗಳನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ಅದನ್ನು ಯು ಟ್ಯೂಬ್ ಚಾನೆಲ್ ಗೆ ಅಪ್ಲೋಡ್ ಮಾಡಿ ತನ್ನ ಕಲಾ ಪ್ರಸರಣದ ಕಾಯಕವನ್ನು ನಿಸ್ವಾರ್ಥತೆಯಿಂದ ನಡೆಸುತ್ತಾ ಇದ್ದಾರೆ. ರಾಧಾಕೃಷ್ಣ ಭಟ್ ಅವರಿಗೆ ಯಕ್ಷಗಾನ ಕಲೆಯ ಮೇಲೆ ಇನ್ನಿಲ್ಲದ ಪ್ರೀತಿ ಅವರ ಹಿರಿಯರಲ್ಲಿ ಯಕ್ಷಗಾನ ಆಸಕ್ತಿಯೂ ಇತ್ತು ಎನ್ನುವುದನ್ನು ಅವರು ಹೇಳುತ್ತಿದ್ದರು. ಅಲ್ಲದೆ ಮೂಲ ಮನೆಯಲ್ಲಿ ಹಿಮ್ಮೇಳದ ವಾದನಗಳು ಇದ್ದುವು.
ಆದುದರಿಂದ ತಲೆಮಾರಿನ ಹಿಂದೆ ಅವರ ಕುಟುಂಬದಲ್ಲಿಯೂ ಕಲೆಯ ಆಸಕ್ತಿಯುಳ್ಳವರಿದ್ದರು ಎಂದು ತಿಳಿಯಬಹುದು. ರಾಧಾಕೃಷ್ಣ ಭಟ್ಟರ KRK Bhat Chitramoola ಎಂಬ ಯು ಟ್ಯೂಬ್ ಚಾನೆಲ್ ಇದೆ. ಅದರಲ್ಲಿ ಸುಮಾರು 4,900ಕ್ಕೂ ಮಿಕ್ಕಿ ವೀಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. ಅವರ ಚಾನೆಲನ್ನು Subscribe ಅದವರ ಸಂಖ್ಯೆ ಸುಮಾರು 83,000ಕ್ಕೆ ಸಮೀಪ. ಅತಿ ಹೆಚ್ಚು ಯಕ್ಷಗಾನ ವೀಡಿಯೊಗಳನ್ನೇ ಇದರಲ್ಲಿ ಅಪ್ಲೋಡ್ ಮಾಡಿದ್ದಾರೆ.ಈ ಚಾನೆಲ್ ನ ವೀಡಿಯೋ ಒಂದನ್ನು ಕೆಳಗೆ ಕೊಡಲಾಗಿದೆ.
ಇವರ ಪತ್ನಿ ಶ್ರೀಮತಿ ಉಮಾ ಆರ್. ಕೆ. ಭಟ್ ಕೂಡಾ ಕಲಾಸಕ್ತೆ. ಮತ್ತು ಯಕ್ಷಗಾನ ಕಲೆಯ ವಾತಾವರಣದ ನಡುವೆಯೇ ಬೆಳೆದವರು. ಅವರು ಕೂಡಾ ಹೆಚ್ಚಾಗಿ ಯಕ್ಷಗಾನ ಪ್ರದರ್ಶನಗಳಿಗೆ ಪತಿಯ ಜೊತೆಯಲ್ಲಿಯೇ ಹೋಗುತ್ತಾರೆ. ದಂಪತಿಗಳೀರ್ವರೂ ಜೊತೆಯಾಗಿಯೇ ಯಕ್ಷಗಾನ ಪ್ರದರ್ಶನಗಳನ್ನು ಆಸ್ವಾದಿಸುತ್ತಾರೆ. ಮಾತ್ರವಲ್ಲದೆ ಶ್ರೀಮತಿ ಉಮಾ ಆರ್. ಕೆ. ಭಟ್ ಕೂಡಾ ವಿಡಿಯೋ ಚಿತ್ರೀಕರಣದಲ್ಲಿ ಸಿದ್ಧಹಸ್ತರು ಮತ್ತು ಛಾಯಾಗ್ರಹಣದಲ್ಲಿಯೂ ಪರಿಣತಿಯನ್ನು ಪಡೆದಿದ್ದಾರೆ.
ಇವರ ಹೆಸರಿನಲ್ಲಿಯೂ ಒಂದು ಯು ಟ್ಯೂಬ್ ಚಾನೆಲ್ ಇದೆ. ಈ ಚಾನೆಲ್ Uma RK Bhat Chitramoola ಎಂಬ ಹೆಸರಿನಲ್ಲಿ ಸುಮಾರು 60,000ಕ್ಕೂ ಮಿಕ್ಕಿ Subscribers ನ್ನು ಹೊಂದಿದೆ. ಈ ವರೆಗೆ ಸುಮಾರು 3,830 ಕ್ಕೂ ಹೆಚ್ಚು ವೀಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಈ ಚಾನೆಲ್ ನ ವೀಡಿಯೋ ಒಂದನ್ನು ಕೆಳಗೆ ಕೊಡಲಾಗಿದೆ.
ದಂಪತಿಗಳ ಯಕ್ಷಗಾನಾಸಕ್ತಿಯನ್ನು ಮೆಚ್ಚಲೇ ಬೇಕು. ಈ ಮೂಲಕ ಅವರು ಯಕ್ಷಗಾನ ಕಲೆಯ ಪ್ರಚಾರ ಮತ್ತು ಪ್ರಸಾರವನ್ನು ಒಂದು ಹವ್ಯಾಸವಾಗಿಯೂ ಒಂದು ಸೇವೆಯಾಗಿಯೂ ಮಾಡುತ್ತಿದ್ದಾರೆ. ಈ ಯು ಟ್ಯೂಬ್ ವೀಡಿಯೋಗಳಿಂದ ಸ್ವಲ್ಪ ಮಟ್ಟಿನ ಆದಾಯ ಬರುವುದು ನಿಜವಾದರೂ ಅಷ್ಟೇ ಖರ್ಚುವೆಚ್ಚಗಳಿವೆ ಎಂದು ರಾಧಾಕೃಷ್ಣ ಭಟ್ಟರು ಹೇಳುತ್ತಾರೆ. ಸ್ವಂತ ಖರ್ಚಿನಲ್ಲಿ ಯಕ್ಷಗಾನ ನಡೆಯುವ ಊರುಗಳಿಗೆ ಸ್ವಂತ ವಾಹನದಲ್ಲಿ ತೆರಳಬೇಕು. ಪ್ರಯಾಣದ ಖರ್ಚು ಮತ್ತು ಇತರ ಖರ್ಚುಗಳನ್ನು ಲೆಕ್ಕ ಹಾಕುವಾಗ ಆದಾಯಕ್ಕಿಂತ ಖರ್ಚಿನ ತಕ್ಕಡಿಯೇ ಕೆಳಗೆ ನಿಲ್ಲುತ್ತದೆ ಎಂಬುದು ಅವರ ಅಭಿಪ್ರಾಯ. ಅದೂ ಅಲ್ಲದೆ ಚಾನೆಲ್ ಪ್ರಾರಂಭಿಸಿದ ಒಂದೆರಡು ವರ್ಷಗಳ ವರೆಗೆ ಹೆಚ್ಚು ಕಡಿಮೆ ಶೂನ್ಯ ಆದಾಯವೇ ಇರುತ್ತದೆ.
ಆದರೂ ಅವರು ಕಲಾಸಕ್ತಿಯಿಂದ ಈ ಕಾಯಕವನ್ನು ಮುಂದುವರಿಸುತ್ತಿದ್ದಾರೆ. ಇಂದು ದೇಶ ವಿದೇಶಗಳಲ್ಲಿ ಈ ಎರಡು ಚಾನೆಲ್ ಗಳಿಗೆ ಲಕ್ಷಾಂತರ ವೀಕ್ಷಕರಿದ್ದಾರೆ. ಈ ಸಾಧನೆಯನ್ನು ಮಾಡಬೇಕಾದರೆ ಇದರ ಹಿಂದೆ ದಂಪತಿಗಳ ಅಪಾರ ಪರಿಶ್ರಮ ಮತ್ತು ತಮ್ಮ ಅಮೂಲ್ಯವಾದ ಸಮಯದ ವ್ಯಯ ಅಡಗಿದೆ. ತಮ್ಮ ನಿಸ್ವಾರ್ಥ ಕಾಯಕದ ಪರಿಶ್ರಮಕ್ಕೋಸ್ಕರ ದಂಪತಿಗಳೀರ್ವರನ್ನೂ ಹಲವಾರು ಕಡೆ ಸನ್ಮಾನಿಸಿ ಗೌರವಿಸಲಾಗಿದೆ.