Monday, February 24, 2025
Home Blog Page 374

ಶ್ರೀ ತಾರಾನಾಥ ವರ್ಕಾಡಿ – ಬಹುಮುಖ ಪ್ರತಿಭೆಯ ಸಾಧಕ

ಶ್ರೀ ತಾರಾನಾಥ ವರ್ಕಾಡಿ ಅವರು ಯಕ್ಷಗಾನ ರಂಗದ ಹಿರಿಯ ಕಲಾವಿದರಲ್ಲೊಬ್ಬರು. ತೆಂಕುತಿಟ್ಟಿನ ಶ್ರೇಷ್ಠ ಪುಂಡು ವೇಷಧಾರಿಗಳು.  ನಾಟ್ಯ ಮತ್ತು ಮಾತುಗಾರಿಕೆಗಳೆಂಬ ಎರಡು ವಿಭಾಗಗಳಲ್ಲೂ ಪರಿಣತಿಯನ್ನೂ ಪಕ್ವತೆಯನ್ನೂ ಹೊಂದಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದ ಕಲಾವಿದರಿವರು. ಇವರದು ಬಹುಮುಖ ಪ್ರತಿಭೆ. ವೇಷಗಳನ್ನು ನಿರ್ವಹಿಸುವುದರ ಜೊತೆಗೆ ತಾಳಮದ್ದಳೆಗಳಲ್ಲಿ ಅರ್ಥಧಾರಿಯಾಗಿಯೂ ಕಾಣಿಸಿಕೊಳ್ಳುತ್ತಾರೆ. ಅತ್ಯುತ್ತಮ ಬರಹಗಾರರೂ ಹೌದು. ಪತ್ರಿಕೋದ್ಯಮಿಯಾಗಿಯೂ ನಮಗೆಲ್ಲಾ ಪರಿಚಿತರು. ಯಕ್ಷಗಾನ ಶಿಕ್ಷಕರಾಗಿಯೂ ಗುರುತಿಸುವಂತಹ ಸಾಧನೆ ಮಾಡಿದ್ದಾರೆ. ಪ್ರಸಂಗ ರಚನಾಕಾರರಾಗಿಯೂ ಯಶಸ್ವಿಯಾಗಿದ್ದಾರೆ. ಸಂಪಾದಕರಾಗಿ ಅನೇಕ ವರ್ಷಗಳಿಂದ ‘ಬಲ್ಲಿರೇನಯ್ಯ’ ಮಾಸಪತ್ರಿಕೆಯನ್ನೂ ನಡೆಸುತ್ತಿದ್ದಾರೆ. ಶ್ರೀ ತಾರಾನಾಥ ಅವರ ಹುಟ್ಟೂರು ವರ್ಕಾಡಿ. ಇದು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಹೊಸಂಗಡಿಗೆ ಸಮೀಪದ ಊರು. ಪಂಡಿತ್ ವಿ. ಎ. ಬಲ್ಯಾಯ ಮತ್ತು ಕಮಲಾಕ್ಷಿ ದಂಪತಿಗಳಿಗೆ ಮಗನಾಗಿ ೧೯೬೩ ಜೂನ್ ಒಂದರಂದು ಜನನ. ತಾರಾನಾಥರ ತೀರ್ಥರೂಪರು ಸಮಾಜಸೇವಕರಾಗಿ ಪ್ರಸಿದ್ದರು. ಮಗನು ಆಯುರ್ವೇದ ವೈದ್ಯನಾಗಬೇಕೆಂದು ಬಯಸಿದವರು. ಎಳವೆಯಲ್ಲಿಯೇ ಅವರನ್ನು ಕಳೆದುಕೊಂಡರೂ ತಾಯಿ ಕಮಲಾಕ್ಷಿ ಅಮ್ಮನವರು ಸ್ವಾಭಿಮಾನಕ್ಕೆ, ಮನೆತನದ ಗೌರವಕ್ಕೆ ಕೊರತೆಯಾಗದಂತೆ ಬಡತನದಲ್ಲೇ ಮಕ್ಕಳನ್ನು ಬೆಳೆಸಿದ್ದರು. ಆಗ ಹೆಚ್ಚಿನ ವಿದ್ಯಾರ್ಜನೆಗೂ ಅವಕಾಶವಿರಲಿಲ್ಲ. ಆದರೂ ತಾರಾನಾಥರು ಎಳವೆಯಲ್ಲಿಯೇ ಕಲಾಸಕ್ತರಾಗಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ ಶ್ರೀ ಕೆ. ಗೋವಿಂದ ಭಟ್ ಮತ್ತು ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತಿದ್ದರು. ತಾನು ಕಲಿತ ಸದ್ರಿ ಸಂಸ್ಥೆಯಲ್ಲಿಯೇ ಶಿಕ್ಷಕನಾಗಿ ಕಲಿಕಾಸಕ್ತರಿಗೆ ತರಬೇತಿ ನೀಡಲು ಅವಕಾಶ ದೊರೆತ ತಾರಾನಾಥರು ನಿಜಕ್ಕೂ ಭಾಗ್ಯವಂತರು. ಇವರಿಂದ ಹೆಜ್ಜೆಗಾರಿಕೆ ಕಲಿತ ಅನೇಕರು ಇಂದು ವಿವಿಧ ಮೇಳಗಳಲ್ಲಿ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಲಲಿತಕಲಾ ಕೇಂದ್ರದಲ್ಲಿ ತರಬೇತಿಯನ್ನು ಮುಗಿಸಿದ ಬಳಿಕ ಸುಂಕದಕಟ್ಟೆ, ಕದ್ರಿ, ನಂದಾವರ, ಅರುವ, ಬಪ್ಪನಾಡು ಮೇಳಗಳಲ್ಲಿ ತಿರುಗಾಟವನ್ನು ನಡೆಸಿದ್ದರು. ಬಳಿಕ ಅನೇಕ ವರ್ಷಗಳ ಕಾಲ ಶ್ರೀ ಧರ್ಮಸ್ಥಳ ಮೇಳದಲ್ಲಿ ಕಲಾಸೇವೆಯನ್ನು ಮಾಡಿ ಕೆಲವು ವರ್ಷಗಳ ಹಿಂದೆ ತಿರುಗಾಟದಿಂದ ಸ್ವಯಂ ನಿವೃತ್ತಿಯನ್ನು ಹೊಂದಿದ್ದರು. ಮೇಳದ ತಿರುಗಾಟವನ್ನು ನಿಲ್ಲಿಸಿದರೂ ಕಲಾಸೇವೆಯನ್ನು ಮುಂದುವರಿಸಿ ಕಲಾಭಿಮಾನಿಗಳನ್ನು ರಂಜಿಸಿತ್ತಿದ್ದಾರೆ. ನಾನು ಶಾಲಾ ವಿದ್ಯಾರ್ಥಿಯಾಗಿರುವಾಗಲೇ ಶ್ರೀ ತಾರಾನಾಥರ ವೇಷಗಳನ್ನು ನೋಡುತ್ತಿದ್ದೆ. ಅವರ ಹಿತ ಮಿತವಾದ ನಾಟ್ಯ ಮಾತುಗಾರಿಕೆಯು ಸಂತೋಷವನ್ನು ಕೊಡುತ್ತಿತ್ತು. ಮಾತುಗಾರಿಕೆಗೆ ಸಂಬಂಧಿಸಿದ ಸಾತ್ವಿಕ ಪಾತ್ರಗಳನ್ನು ನಿರ್ವಹಿಸುವ ಕಲೆಯು ಇವರಿಗೆ ಒಲಿದಿತ್ತು. ವಿಷ್ಣು,ಬ್ರಹ್ಮ, ಶ್ರೀರಾಮ,ಶ್ರೀಕೃಷ್ಣ, ಈಶ್ವರ ಮೊದಲಾದ ಪಾತ್ರಗಳಲ್ಲಿ ಅಭಿನಯಿಸಿದಾಗ ಪ್ರೇಕ್ಷಕರು ಇವರನ್ನು ಗುರುತಿಸಿ ಮೆಚ್ಚಿಕೊಂಡಿದ್ದರು. ಆರಂಭದ ತಿರುಗಾಟಗಳಲ್ಲಿ ತುಳು ಪ್ರಸಂಗಗಳಲ್ಲಿ ಅಭಿನಯಿಸಿದ್ದರು. ಬಳಿಕ ಸತತ ಅಧ್ಯಯನಶೀಲರಾಗಿ ಪುರಾಣ ಪ್ರಸಂಗಗಳ ನಡೆಯನ್ನು ಅಭ್ಯಸಿಸಿ ತಿಳಿದುಕೊಂಡಿದ್ದರು. 

ಶ್ರೀ ತಾರಾನಾಥರು ಕಲಾವಿದನಾಗಿ ಮೇಳದ ತಿರುಗಾಟವನ್ನು ಮಾಡುತ್ತಿರುವಾಗ ಸಾಹಿತ್ಯ ಕ್ಷೇತ್ರದತ್ತ ಒಲವನ್ನು ತೋರಿದ್ದರು. ಲೇಖಕರಾಗಿಯೂ ಕಾಣಿಸಿಕೊಂಡರು. ಪ್ರತಿಯೊಂದು ನದಿಗಳ ಬಗೆಗೆ ಇವರು ಬರೆದ ಲೇಖನಗಳನ್ನೂ ಉದಯವಾಣಿ ಪತ್ರಿಕೆಯ ಸಾಪ್ತಾಹಿಕ ಸಂಪದದಲ್ಲಿ ಸಂಪಾದಕ ಶ್ರೀ ಪೃಥ್ವಿರಾಜ್ ಕವತ್ತಾರ್ ಅವರು ಪ್ರಕಟಿಸಿದ್ದರು. ತಾರಾನಾಥರು ಬರೆದ ಕಲಾಸಂಬಂಧೀ ಲೇಖನಗಳು ದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದು ನಮಗೆ ಅವುಗಳನ್ನು ಓದಲು ಅವಕಾಶವಾಗುತ್ತಿತ್ತು. ಲೇಖನಗಳನ್ನು ಬರೆಯುತ್ತಾ ಪ್ರಸಂಗ ರಚನಾ ಮತ್ತು ಕೃತಿ ರಚನಾ ಕಾಯಕದಲ್ಲೂ ತೊಡಗಿಸಿಕೊಂಡಿದ್ದರು. ಪ್ರಸಂಗ ರಚನಾ ರೀತಿಯನ್ನು ಡಾ. ಶಿಮಂತೂರು ನಾರಾಯಣ ಶೆಟ್ಟಿಯವರಿಂದಲೂ ಅರ್ಥಗಾರಿಕೆಯನ್ನು ಶ್ರೀ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರಿಂದಲೂ ಅಭ್ಯಸಿಸಿದ್ದು ಅನುಕೂಲವೇ ಆಗಿತ್ತು. ಪತ್ರಿಕೆಗಳಲ್ಲಿ ವಿಮರ್ಶಾ ಲೇಖನಗಳು, ಕಥೆ, ಕವನಗಳನ್ನೂ ಬರೆದರು. ಪ್ರಬಂಧ ರಚನೆ, ಜ್ಯೋತಿಷ್ಯ, ಆಯುರ್ವೇದ, ವಾಸ್ತುಶಾಸ್ತ್ರ ಮೊದಲಾದ ವಿಚಾರಗಳು ಶ್ರೀ ತಾರಾನಾಥರ ಹವ್ಯಾಸಗಳು. ಯಕ್ಷಗಾನ ಛಂದಸ್ಸು ವಿದ್ವಾಂಸ  ಡಾ. ಶಿಮಂತೂರು ನಾರಾಯಣ ಶೆಟ್ಟಿಯವರ ಬದುಕು, ಬರಹದ ಬಗ್ಗೆ ತಾರಾನಾಥರು ಬರೆದ ಅಭಿನವ ನಾಗವರ್ಮ, ಪುರಾಣ ಲೋಕದ ಬಾಲರು, ಕಬ್ಬಿನ ಕೋಲು, ಒಂದೊಂದು ನದಿಗೂ ಒಂದೊಂದು ಕತೆ ಎಂಬ ಕೃತಿಗಳು ಪ್ರಕಟವಾಗಿವೆ. ಇವರು ರಚಿಸಿದ ಕನ್ನಡ ಪೌರಾಣಿಕ ಪ್ರಸಂಗಗಳು ಆಸ್ತೀಕ ಪರ್ವ, ಗೋಕರ್ಣ, ಶ್ರೀ ದೇವಶಿಲ್ಪಿ ವಿಶ್ವಕರ್ಮ (ಪ್ರಕಟಿತ), ಶಿಲ್ಪ ಕೌಶಲ (ಅರ್ಥ ಸಹಿತ ಪ್ರಕಟಿತ), ಶ್ರೀರಾಮ ಕಾರುಣ್ಯ, ಮಹಾಋಷಿ ಅಗಸ್ತ್ಯ, ಅಷ್ಟಲಕ್ಷ್ಮೀ, ಸಾರ್ವಭೌಮ ಸ್ವರೋಚಿ ಮೊದಲಾದುವುಗಳು. 

ಕನ್ನಡ ಕಾಲ್ಪನಿಕ ಪ್ರಸಂಗಗಳು – ಪುಷ್ಯ ಪೂರ್ಣಿಮಾ (ಪ್ರಕಟಿತ), ಶ್ವೇತ ಪಂಚಕ, ಶ್ವೇತಾಕ್ಷ ಮಾಲಾ ಮತ್ತು ರಚಿಸಿದ ತುಳು ಪೌರಾಣಿಕ ಪ್ರಸಂಗಗಳು ದೇವೆರೆಗ್ ಅರ್ಪಣೆ (ಪ್ರಕಟಿತ), ಗೋಕರ್ಣೆ. ತುಳು ಕಾಲ್ಪನಿಕ ಪ್ರಸಂಗಗಳು – ಪರಕೆದ ಪಿಂಗಾರ, ಪೂಜೆದ ತುಳಸಿ, ಮಸಣದ ತುಳಸಿ, ಕುಂಕುಮದ ಪರಕೆ. ತುಳು ಪಾಡ್ದನ ಆಧಾರಿತ ಪ್ರಸಂಗಗಳು – ಬ್ರಹ್ಮ ಬೈದ್ಯೆರ್, ಬ್ರಹ್ಮ ಮೊಗೇರೆರ್, ಜಾಗೆದ ಪಂಜುರ್ಲಿ, ರುದ್ರ ಗುಳಿಗೆ, ಅಗೋಳಿ ಮಂಜಣ್ಣೆ, ಮೈಮದ ಮೈಸಂದಾಯೆ, ಮಣ್ಣುದ ಮೋಕೆ. ಅಲ್ಲದೆ ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ ಮತ್ತು ಶ್ರೀ ಅಯ್ಯ ಜಗದ್ಗುರು ಮಹಾತ್ಮೆ ಎಂಬ ಕ್ಷೇತ್ರ ಪುರಾಣ ಪ್ರಸಂಗಗಳನ್ನೂ ಬರೆದಿರುತ್ತಾರೆ. ಅನೇಕ ಪ್ರಸಂಗಗಳ ಆಡಿಯೋ ಮತ್ತು ವೀಡಿಯೋ ಸಿಡಿಗಳ ನಿರ್ಮಾಣವನ್ನೂ ಮಾಡಿರುತ್ತಾರೆ. ರುರು (ಪೌರಾಣಿಕ ನಾಟಕ), ಮೊಗ್ಗಿನ ಜೇನು (ಕವನ ಸಂಕಲನ), ಎಂಬ ಪುಸ್ತಕಗಳನ್ನೂ ಬರೆದ ಶ್ರೀ ತಾರಾನಾಥರು ಕನ್ನಡ ಸಾಹಿತ್ಯ ಲೋಕಕ್ಕೆ ಗುರುತಿಸುವಂತಹಾ ಕೊಡುಗೆಯನ್ನು ಸಲ್ಲಿಸಿದ್ದಾರೆ. ಪ್ರಸ್ತುತ ಪತ್ನಿ ಡಾ| ಪ್ರೇಮಲತಾ ಮತ್ತು ಪುತ್ರಿ ಕು| ಆಜ್ಞಾ ಸೋಹಮ್ ಜತೆ ಬೆಳ್ಮಣ್ಣು ಶ್ರೀ ದುರ್ಗಾ ನಿವಾಸದಲ್ಲಿ ವಾಸ. ಪತ್ನಿ ಶ್ರೀಮತಿ ಪ್ರೇಮಲತಾ ವೃತ್ತಿಯಲ್ಲಿ ವೈದ್ಯೆ. ಪತಿಯ ಸಾಧನೆಗೆ ಸಹಕಾರಿಯಾಗಿ ಉತ್ಸಾಹವನ್ನು ತುಂಬುತ್ತಾರೆ. ಪುತ್ರಿ  ಕು| ಆಜ್ಞಾ ಸೋಹಮ್ ಪ್ರತಿಭಾವಂತೆ ವಿದ್ಯಾರ್ಥಿನಿ. ಕಲಾವಿದೆಯೂ ಲೇಖಕಿಯೂ ಆಗಿ ಬೆಳೆಯುತ್ತಿದ್ದಾರೆ. ಛಲದ ಬದುಕನ್ನು ನಡೆಸಿ ಸಾಧಕರಾಗಿ ಕಾಣಿಸಿಕೊಂಡ ಶ್ರೀ ತಾರಾನಾಥ ವರ್ಕಾಡಿ ಅವರಿಗೆ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ವಾಲ್ಮೀಕಿರಾಮಾಯಣಕೋಶ – ಅನುವಾದ: ಮೂಡಂಬೈಲು ಸಿ. ಗೋಪಾಲಕೃಷ್ಣ ಶಾಸ್ತ್ರಿ (ಹಿಂದಿ ಮೂಲ: ಪಂಡಿತ ರಾಮಕುಮಾರ ರಾಯ್)

ವಾಲ್ಮೀಕಿರಾಮಾಯಣಕೋಶ ಎಂಬ ಈ ಕೃತಿಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದವರು ಖ್ಯಾತ ತಾಳಮದ್ದಳೆ ಅರ್ಥಧಾರಿಗಳೂ, ವಿದ್ವಾಂಸರೂ, ನಮಗೆಲ್ಲಾ ಹಿರಿಯರೂ ಆದ  ಮೂಡಂಬೈಲು ಶ್ರೀ ಗೋಪಾಲಕೃಷ್ಣ ಶಾಸ್ತ್ರಿಗಳು. ಈ ಪುಸ್ತಕದ ಮೂಲಪ್ರತಿಯು ಹಿಂದಿ ಭಾಷೆಯಲ್ಲಿದ್ದು ಅದನ್ನು ಬರೆದವರು ಶ್ರೀ  ಪಂಡಿತ ರಾಮಕುಮಾರ ರಾಯ್ ಅವರು. ಕನ್ನಡ ಸಾಹಿತ್ಯ ಲೋಕಕ್ಕೆ ಇದು ಒಂದು ಅತ್ಯುತ್ತಮ ಕೊಡುಗೆ. ಒಳ್ಳೆಯ ಮಾಹಿತಿಗಳನ್ನು ನೀಡುವ ಪುಸ್ತಕ. ವಾಲ್ಮೀಕಿ ರಾಮಾಯಣದಲ್ಲಿ ಬರುವ ಪಾತ್ರಗಳ ಪರಿಚಯವನ್ನು ನೀಡಲಾಗಿದ್ದು, ಅತ್ಯಂತ ಸವಿವರವಾಗಿದೆ. ಸುಮಾರು ಸಾವಿರಕ್ಕೆ ಹತ್ತಿರದ ಪಾತ್ರಗಳ ಪರಿಚಯವನ್ನು ಕೊಡಲಾಗಿದ್ದು ಇದು 2014ನೇ ಇಸವಿಯಲ್ಲಿ ಮುದ್ರಿತವಾಗಿತ್ತು. ಈ ಕೃತಿಯು ಒಟ್ಟು 448 ಪುಟಗಳನ್ನು ಹೊಂದಿದೆ.  ಇದರ ಪ್ರಕಾಶಕರು ‘ಯಕ್ಷ ಗುರುಕುಲ ಶಿಕ್ಷಣ ಟ್ರಸ್ಟ್ ‘ ಉಡುಪಿ. ಪ್ರಕಾಶಕರ ಮಾತು ಎಂಬ ಶೀರ್ಷಿಕೆಯಡಿಯಲ್ಲಿ ಶ್ರೀ ಹೇರಂಜೆ ಕೃಷ್ಣ ಭಟ್ಟರು ಸರ್ವ ರೀತಿಯ ಸಹಕಾರವನ್ನು ನೀಡಿದ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ (ರಿ) ಸಂಪಾಜೆ ಸಂಸ್ಥೆಗೂ, ಪುಸ್ತಕ ಉತ್ತಮ ರೀತಿಯಲ್ಲಿ ಹೊರಬರಲು ಶ್ರಮಿಸಿದ ಡಾ. ಪಾದೆಕಲ್ಲು ವಿಷ್ಣು ಭಟ್ಟರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಗ್ರಂಥವನ್ನು ಪರಿಶೀಲಿಸಿ ಪ್ರೋತ್ಸಾಹಿಸಿದ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರಿಗೆ, ಮುನ್ನುಡಿ ಬರೆದ ಪ್ರೊ| ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸಿದ್ದಾರೆ. ‘ನಿವೇದನ’ ಎಂಬ ಶೀರ್ಷಿಕೆಯಡಿ ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು ಅನಿಸಿಕೆಗಳನ್ನು ಅಕ್ಷರರೂಪಕ್ಕಿಳಿಸಿದ್ದಾರೆ. ಹಿಂದಿ ಮೂಲ ಪ್ರತಿಯಲ್ಲಿ ಲೇಖಕ  ಪಂಡಿತ ರಾಮಕುಮಾರ ರಾಯ್ ಅವರು ಬರೆದ ಪ್ರಾಕ್ಕಥನ ಎಂಬ ಲೇಖನವನ್ನು ಕನ್ನಡಕ್ಕೆ ಅನುವಾದಿಸಿ ಕೊಡಲಾಗಿದೆ. ಕೊನೆಗೆ ‘ಪರಿಶಿಷ್ಟ’ ಎಂಬ ವಿಭಾಗವಿದ್ದು ಪರಿಶಿಷ್ಟ ಒಂದರಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ಸಿಗುವ ಪಶು ಪಕ್ಷಿಗಳ ಹೆಸರುಗಳನ್ನೂ ನೀಡಲಾಗಿದೆ. ಪರಿಶಿಷ್ಟ ಎರಡರಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ಸಿಗುವ ಮರಗಿಡಗಳ ಹೆಸರುಗಳನ್ನೂ ನೀಡಲಾಗಿದೆ. ಈ ವಿಚಾರಕ್ಕೆ ಖ್ಯಾತ ಸಸ್ಯ ಶಾಸ್ತ್ರಜ್ಞರಾದ ಡಾ. ಕೆ. ಗೋಪಾಲಕೃಷ್ಣ ಭಟ್ ಮತ್ತು ಡಾ. ಶ್ರೀ ವೆಂಕಟ್ರಮಣ ಗೌಡ ಅವರುಗಳು ಕಾರಣರು ಎಂಬುದನ್ನು ಹೇರಂಜೆ ಕೃಷ್ಣ ಭಟ್ಟರು ಪ್ರಕಾಶಕರ ಮಾತು ಲೇಖನದಡಿಯಲ್ಲಿ ತಿಳಿಸಿರುತ್ತಾರೆ. ಪರಿಶಿಷ್ಟ ಮೂರರಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ಸಿಗುವ ಅಸ್ತ್ರ ಶಸ್ತ್ರಗಳ ಹೆಸರುಗಳನ್ನು ನೀಡಲಾಗಿದ್ದು ಇದೊಂದು ಶ್ರೇಷ್ಠ ಪುಸ್ತಕ. 

ಲೇಖನ:ರವಿಶಂಕರ್ ವಳಕ್ಕುಂಜ  

ಯಕ್ಷೋಲ್ಲಾಸ 2020 – ಕಾಂತಾವರ

ಕಾಂತಾವರದ ಯಕ್ಷದೇಗುಲದ ಹದಿನೆಂಟನೆಯ ಯಕ್ಷೋಲ್ಲಾಸದ ಉದ್ಘಾಟನಾ ಸಮಾರಂಭವನ್ನು  ಸಾಣೂರಿನ ವೇ. ಮೂ. ಶ್ರೀರಾಮ ಭಟ್ಟರು ಉದ್ಘಾಟಿಸಿದರು. 

ಜೊತೆಗೆ ಯಕ್ಷಗಾನದ ನಾಟ್ಯಾಭ್ಯಾಸ  ಮಾಡಿ ನೂರಾರು ವೇಷಗಳನ್ನು ಮಾಡುತ್ತಾ  ಬಾಲ ಕಲಾವಿದರಾಗಿ ಬೆಳೆದಿರುವ , ಹತ್ತನೇ ಮತ್ತು ಪಿ ಯು ಸಿಯಲ್ಲಿ ಮೊನ್ನೆ ನಡೆದ ಶೈಕ್ಷಣಿಕ ಪರೀಕ್ಷೆಯಲ್ಲಿ  ಅತ್ಯಧಿಕ ಅಂಕಗಳಿಸಿದ ಒಂಬತ್ತು ವಿದ್ಯಾರ್ಥಿಗಳಿಗೆ ಅತಿಥಿಗಳ ಸಮ್ಮುಖ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಗ್ರಾಮದ ಪಂಚಾಯತ್ ಪಿ ಡಿ ಓ ರಮೇಶ್ ಎಸ್, ಜಿ.ಪಂ ಸದಸ್ಯರಾದ ಶ್ರೀಮತಿ ದಿವ್ಯಶ್ರೀ ಜಿ. ಅಮೀನ್, ತಾ.ಪಂ ಸದಸ್ಯ ಪ್ರವೀಣ್ ಕೋಟ್ಯಾನ್,  ಗೋವಾ ಉದ್ಯಮಿ ಬೇಲಾಡಿ ಅಶೋಕಾನಂದ ಶೆಟ್ಟಿ , ಕಾರ್ಕಳದ ವಿಜಯ ಶೆಟ್ಟಿ, , ಬಾರಡಿ ಪ್ರಕಾಶ್ ಆರ್. ಪೂಜಾರಿ ,  ಪ್ರಾಂಶುಪಾಲ ಬೇಬಿ ಕೆ ಈಶ್ವರಮಂಗಲ ,  ಅಧ್ಯಾಪಕ ಶಿವಸುಭ್ರಮಣ್ಯ ಭಟ್,   ಬೆಳುವಾಯಿ ಕೆನರಾ ಬ್ಯಾಂಕಿನ  ಮುಖ್ಯ ಪ್ರಬಂದಕ ಮನೋಹರ ನಾಯಕ್  , ಪಂ. ಮಾಜಿ ಅದ್ಯಕ್ಷರಾದ ಜಯ ಎಸ್ ಕೋಟ್ಯಾನ್, ರಾಜೇಶ್ ಕೋಟ್ಯಾನ್ ಬೆಳುವಾಯಿಯ ಎಂ ದೇವಾನಂದ ಭಟ್ಟರು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಾದ್ಯಕ್ಷ ಮಹಾವೀರ ಪಾಂಡಿಯವರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು. ನಂತರ ಕಲಾವಿದ ಗಣೇಶ ಶೆಟ್ಟಿಯವರ ಪರಿಕಲ್ಪನೆಯಲ್ಲಿ ಸಂಯೋಜಿಸಿದ ಮಹಾಭಾರತದೊಳಗಣ “ಯುಗಧರ್ಮ” ಯಕ್ಷಗಾನ ಕಾರ್ಕಳ ತಾಲೂಕಿನ ವೃತ್ತಿ ನಿರತ ಕಲಾವಿದರಿಂದ  ಜಾಲತಾಣದ ಮೂಲಕ ನೇರ ಪ್ರಸಾರದಲ್ಲಿ ಆಡಿತೋರಿಸಲಾಯಿತು.

ಕೀರಿಕ್ಕಾಡು ವಿಷ್ಣು ಭಟ್ಟ ಸಂಸ್ಮರಣ ಯಕ್ಷಗಾನ ಪ್ರಸಂಗ ಮಾಲಿಕೆ

ಶೀರ್ಷಿಕೆಯೇ ಸೂಚಿಸುವಂತೆ ಈ ಪುಸ್ತಕವು ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು ರಚಿಸಿದ ಪ್ರಸಂಗಗಳ ಸಂಪುಟ. ಶ್ರೀಯುತರು ಬರೆದ ಪ್ರಸಂಗಗಳಲ್ಲಿ ಐದನ್ನು ಆಯ್ದು ಈ ಹೊತ್ತಗೆಯಲ್ಲಿ ಮುದ್ರಿಸಲಾಗಿದೆ. ಪ್ರಸ್ತುತ ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಕುಂಬ್ಡಾಜೆ ಗ್ರಾಮದ ಕೀರಿಕ್ಕಾಡು ಎಂಬ ಹಳ್ಳಿಯಲ್ಲಿ ಜನನ. ಅಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ವಿದ್ಯಾದಾನ. ಬಳಿಕ ದೇಲಂಪಾಡಿ ಸಮೀಪದ ಗುಡ್ಡಡ್ಕದಲ್ಲಿ ವಾಸ. ಕಲಾವಿದರಾಗಿ,ಲೇಖಕರಾಗಿ, ಪ್ರಸಂಗಕರ್ತರಾಗಿ ಯಕ್ಷಗಾನ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾದುದು. ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದ ಸ್ಥಾಪಕರಾಗಿ ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿ ನಿರಂತರ ಯಕ್ಷಗಾನ ಚಟುವಟಿಕೆಗಳನ್ನು ನಡೆಸಿದ ಮಹಾನುಭಾವರಿವರು. ಶ್ರೀಯುತರ ಬಗೆಗೆ ಹಿಂದೊಂದು ಲೇಖನವನ್ನು ಬರೆದಿದ್ದೆ. ಅವರು ರಚಿಸಿದ ಅನೇಕ ಪ್ರಸಂಗಗಳಲ್ಲಿ ವೇಷಗಳನ್ನು ಮಾಡುವ ಅವಕಾಶಗಳೂ ಸಿಕ್ಕಿತ್ತು. ಅದನ್ನು ಭಾಗ್ಯವೆಂದು ಭಾವಿಸುತ್ತೇನೆ.  

‘ಕೀರಿಕ್ಕಾಡು ವಿಷ್ಣು ಭಟ್ಟ ಸಂಸ್ಮರಣ ಯಕ್ಷಗಾನ ಪ್ರಸಂಗ ಮಾಲಿಕೆ’ ಎಂಬ ಈ ಸಂಪುಟವು ೧೯೯೮ನೇ ಇಸವಿ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಕಟಗೊಂಡಿತ್ತು. ಇದರ ಪ್ರಕಾಶಕರು ಪದವೀಧರ ಯಕ್ಷಗಾನ ಸಮಿತಿ (ರಿ) ಮುಂಬೈ ಎಂಬ ಸಂಸ್ಥೆ. ಅನೇಕ ಯಕ್ಷಗಾನ ಪ್ರಸಂಗಗಳ ಸಂಪುಟಗಳನ್ನು ಪ್ರಕಾಶಿಸಿದ ಹಿರಿಮೆ ಈ ಸಂಸ್ಥೆಗಿದೆ. ಮುಂಬಯಿಯ ಯಕ್ಷಗಾನ ಕಲಾ ಸಂಘಟಕ ಶ್ರೀ ಎಚ್.ಬಿ.ಎಲ್. ರಾವ್ ಅವರು ಇದರ ಸಂಪಾದಕರು. ಮುನ್ನುಡಿಯನ್ನು ಬರೆದವರು ಕಾಸರಗೋಡಿನ ಶ್ರೇಷ್ಠ ಸಾಹಿತಿ ಶ್ರೀ ವೆಂಕಟರಾಜ ಪುಣಿಚಿತ್ತಾಯರು. ತಮ್ಮ ಮುನ್ನುಡಿ ಬರಹದಲ್ಲಿ ಶ್ರೀಯುತರು ಕೀರಿಕ್ಕಾಡು ಮಾಸ್ತರರ ಬಗೆಗೆ, ಅವರ ಪ್ರಸಂಗ ರಚನಾ ಕೌಶಲದ ಬಗೆಗೆ ತಮ್ಮ ಅನಿಸಿಕೆಗಳ ನ್ನು ವ್ಯಕ್ತಪಡಿಸಿದ್ದಾರೆ. ಅರಿಕೆ ಎಂಬ ಶೀರ್ಷಿಕೆಯಡಿ ಕೀರಿಕ್ಕಾಡು ಮಾಸ್ತರರ ಪುತ್ರರಾದ ಡಾ. ರಮಾನಂದ ಬನಾರಿ ಅವರು ತಮ್ಮ ಮನದಾಳದ ಮಾತುಗಳನ್ನು ಅಕ್ಷರ ರೂಪಕ್ಕಿಳಿಸಿದ್ದಾರೆ. ಪುಸ್ತಕದ ಹೊರ ಆವರಣದ ಪುಟದಲ್ಲಿ ಶ್ರೀ  ವೆಂಕಟರಾಜ ಪುಣಿಚಿತ್ತಾಯರ ಮುನ್ನುಡಿ ಬರಹದ ಮುಖ್ಯ ಅಂಶಗಳನ್ನು ನೀಡಲಾಗಿದೆ. ಈ ಸಂಪುಟದಲ್ಲಿ ಜರಾಸಂಧ ಪರಾಭವ, ಭ್ರಮರಕುಂತಳೆ ಕಲ್ಯಾಣ, ಮೃಗಾವತೀ ಪರಿಣಯ, ಸುಲೋಚನಾ ಸ್ವಯಂವರ, ವೀರ ಅಭಿಮನ್ಯು ಎಂಬ ಐದು ಪ್ರಸಂಗಗಳಿವೆ. ಪ್ರತಿಯೊಂದು ಪ್ರಸಂಗದಲ್ಲಿ ಬರುವ ಪಾತ್ರಗಳನ್ನೂ ನಮೂದಿಸಿರುತ್ತಾರೆ. ಈ ಪ್ರಸಂಗ ಸಂಪುಟವು ಕಲಾಕ್ಷೇತ್ರಕ್ಕೊಂದು ಉತ್ತಮ ಕೊಡುಗೆ. 

ಲೇಖನ: ರವಿಶಂಕರ ವಳಕ್ಕುಂಜ 

ಕೊಳ್ತಿಗೆ ಶ್ರೀ ನಾರಾಯಣ ಗೌಡ – ಪುರಾಣ ಮತ್ತು ತುಳು ಪ್ರಸಂಗಗಳ ಅನುಭವಿ 


ಕೊಳ್ತಿಗೆ ಶ್ರೀ ನಾರಾಯಣ ಗೌಡ ಅವರು ತೆಂಕುತಿಟ್ಟಿನ ಹಿರಿಯ ಕಲಾವಿದರು. ಕಳೆದ ಐವತ್ತಾರು ವರ್ಷಗಳಿಂದ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಿರೀಟ ವೇಷ ಮತ್ತು ನಾಟಕೀಯ ವೇಷಗಳಲ್ಲಿ ಇವರ ನಿರ್ವಹಣೆಯನ್ನು ಕಲಾಭಿಮಾನಿಗಳು ಗುರುತಿಸಿ ಗೌರವಿಸಿದ್ದಾರೆ. ಆಳಂಗ, ಸ್ವರಭಾರ, ಪಾತ್ರದ ಸ್ವಭಾವವನ್ನು ಅರಿತು ಅಭಿನಯಿಸುವ ಸಾಮರ್ಥ್ಯ, ಕನ್ನಡ ಮತ್ತು ತುಳು ಭಾಷೆಗಳ ಮೇಲಿರುವ ಹಿಡಿತ, ಅಧ್ಯಯನ, ಇವೆಲ್ಲವೂ ಕೊಳ್ತಿಗೆ ನಾರಾಯಣ ಗೌಡರನ್ನು ಒಬ್ಬ ಉತ್ತಮ ಕಲಾವಿದನನ್ನಾಗಿ ರೂಪಿಸಿತು. ಹಿರಿಯ ಶ್ರೇಷ್ಠ ಕಲಾವಿದರ ಒಡನಾಟವೂ ಇವರಿಗೆ ಸಿಕ್ಕಿತ್ತು. ಇವರು ಪುರಾಣ ಪ್ರಸಂಗಗಳಲ್ಲದೆ, ತುಳು ಸಾಮಾಜಿಕ, ಕಾಲ್ಪನಿಕ ಪ್ರಸಂಗಗಳಲ್ಲಿ ಅಭಿನಯಿಸಿದ ಅನುಭವೀ ಕಲಾವಿದರು. ಪೀಠಿಕೆ ವೇಷಗಳನ್ನೂ ಸೊಗಸಾಗಿ ಮಾಡಬಲ್ಲರು.


ಎದುರು ವೇಷಗಳನ್ನೂ ಮಾಡಬಲ್ಲರು. ಮಾತುಗಾರಿಕೆ ಮತ್ತು ನಾಟ್ಯಗಳೆಂಬ ಉಭಯ ವಿಭಾಗಗಳಲ್ಲೂ ಹಿಡಿತವನ್ನು ಹೊಂದಿದ ಕಲಾವಿದರಿವರು. ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ನಾಯಕ ಮತ್ತು ಪ್ರತಿನಾಯಕನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯಾರನ್ನೂ ಅನುಕರಿಸದೆ, ನೋಡಿ, ಕೇಳಿ ತಿಳಿದು, ಪುರಾಣ ಮತ್ತು ತುಳು ಪ್ರಸಂಗಗಳ ಸವ್ಯಸಾಚಿ ಕೊಳ್ತಿಗೆ ಶ್ರೀ ನಾರಾಯಣ ಗೌಡರು ಪ್ರತಿಭಾ ಸಾಮರ್ಥ್ಯದಿಂದ ತನ್ನದೇ ಶೈಲಿಯಲ್ಲಿ ವೇಷಗಳನ್ನು ಚಿತ್ರಿಸುತ್ತಾರೆ. ಮೊದಲು ಪಾತ್ರದ ಸ್ವಭಾವವನ್ನು ಅರಿತು, ಸಿದ್ಧತೆಯೊಂದಿಗೆ ಅಭಿನಯಿಸುವ ರೂಢಿಯನ್ನು ಎಳವೆಯಿಂದಲೇ ಮಾಡಿಕೊಂಡು ಬಂದವರು. ಆದುದರಿಂದಲೇ ಕೊಳ್ತಿಗೆಯವರು ನಿರ್ವಹಿಸುವ ಪ್ರತಿಯೊಂದು ಪಾತ್ರಗಳೂ ರಂಗದಲ್ಲಿ ಸೋಲದೆ ಗೆಲ್ಲುತ್ತವೆ.

ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ ಶ್ರೀ ನಾರಾಯಣ ಗೌಡರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲೂಕಿನ ಪೆರ್ಲಂಪಾಡಿ ಸಮೀಪದ ಕೊಳ್ತಿಗೆ. 1947ನೇ ಇಸವಿ ಜುಲೈ 18ರಂದು ಜನನ. ತಂದೆ ಕೊಳ್ತಿಗೆ ಶ್ರೀ ತಿಮ್ಮಪ್ಪ ಗೌಡ. ತಾಯಿ ಶ್ರೀಮತಿ ಕಮಲ. ಇವರದು ಕೃಷಿ ಕುಟುಂಬ. ತಿಮ್ಮಪ್ಪ ಗೌಡರು ಕಲಾವಿದರಲ್ಲದಿದ್ದರೂ ಯಕ್ಷಗಾನಾಸಕ್ತರಾಗಿದ್ದರು. ಪ್ರದರ್ಶನಗಳನ್ನು ನೋಡುವ ಹವ್ಯಾಸವಿತ್ತು. ಅಲ್ಲದೆ ಮನೆಯಲ್ಲಿ ನವರಾತ್ರಿಯ ಎಲ್ಲಾ ದಿನಗಳಲ್ಲಿ ಶ್ರೀ ದೇವಿಯನ್ನು ಆರಾಧಿಸಿ, ಕೊನೆಯ ದಿನ ರಾತ್ರೆಯಿಂದ ಬೆಳಗಿನ ತನಕವೂ ತಾಳಮದ್ದಳೆ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು. ಅರ್ಥಧಾರಿಗಳು ಕೇವಲ ಮಾತಿನ ಮೂಲಕವೇ ಪಾತ್ರಗಳನ್ನು ಚಿತ್ರಿಸುವ ರೀತಿಯನ್ನು ನಾರಾಯಣ ಗೌಡರು ಕುತೂಹಲದಿಂದ ನೋಡುತ್ತಿದ್ದರು.


ಸಂಭಾಷಣೆಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಆಗಲೇ ಇವರು ಕಲೆಯತ್ತ ಆಕರ್ಷಿತರಾಗಿದ್ದರು. ಆದರೆ ಮಕ್ಕಳು ಯಕ್ಷಗಾನ ಕಲಾವಿದರಾಗುವುದು ತಿಮ್ಮಪ್ಪ ಗೌಡರಿಗೆ ಇಷ್ಟವಿರಲಿಲ್ಲ. ಆ ವಿಚಾರದಲ್ಲಿ ಆಕ್ಷೇಪಿಸುತ್ತಿದ್ದರು. ಹಾಗೆಂದು ಯಕ್ಷಗಾನವನ್ನು ಅತೀವವಾಗಿ ಪ್ರೀತಿಸುತ್ತಿದ್ದರು. ಮನೆಯವರ ಸಮ್ಮತಿಯಿಲ್ಲದಿದ್ದರೂ, ಕೊಳ್ತಿಗೆ ನಾರಾಯಣ ಗೌಡರು ಬದುಕಿಗಾಗಿ ಯಕ್ಷಗಾನವನ್ನೇ ಆಯ್ಕೆ ಮಾಡಿದ್ದರು. ಸಮಾಜವು, ಅವರನ್ನು ಯಕ್ಷಗಾನ ಕಲಾವಿದ ಎಂದೇ ಗುರುತಿಸಿತು. ಗೌರವಿಸಿತು. ಬಹುಷಃ ಕಲಾಮಾತೆಯ ನಿರ್ಣಯವೇ ಇದಕ್ಕೆ ಕಾರಣವಿರಬೇಕು. ಕೊಳ್ತಿಗೆ ಶ್ರೀ ನಾರಾಯಣ ಗೌಡ ಅವರು ಓದಿದ್ದು 7ನೇ ತರಗತಿಯ ವರೇಗೆ. ನೆಟ್ಟಾರು ಶಾಲೆಯಲ್ಲಿ.

ನೆಟ್ಟಾರು ಪರಿಸರದಲ್ಲಿ ಕೂಡ್ಲು ಮೇಳ ಮತ್ತು ಬಳ್ಳಂಬೆಟ್ಟು ಮೇಳಗಳ ಪ್ರದರ್ಶನಗಳು ನಡೆಯುತ್ತಿತ್ತು. ಅದನ್ನು ಬೆಳಗಿನ ವರೆಗೂ ನೋಡುತ್ತಿದ್ದರು. 6ನೇ ತರಗತಿಯ ವಿದ್ಯಾರ್ಥಿಯಾಗಿರುವಾಗ ಯಕ್ಷಗಾನದಲ್ಲಿ ಮೊದಲ ಬಾರಿಗೆ ವೇಷ ಮಾಡುವ ಅವಕಾಶ ಒದಗಿ ಬಂದಿತ್ತು. ಶಾಲಾ ವಾರ್ಷಿಕೋತ್ಸವದ ಸಂದರ್ಭ. ಅಧ್ಯಾಪಕರಾದ ಗಿಲ್ಕಿಂಜ ಶ್ರೀ ರಾಮಕೃಷ್ಣ ಭಟ್ಟರು ಶಾಲಾ ಮಕ್ಕಳಿಂದಲೇ ಪ್ರದರ್ಶನ ನಡೆಯಬೇಕೆಂದು ನಿರ್ಣಯಿಸಿದ್ದರು. ಅವರು ಕಲಾಸಕ್ತರಾಗಿ ಭಾಗವತಿಕೆಯನ್ನೂ ಮಾಡುತ್ತಿದ್ದರು. ಮಕ್ಕಳ ತಂಡದ ಪ್ರದರ್ಶನಕ್ಕೆ ತರಬೇತಿಯನ್ನು ನೀಡಲು, ಕರ್ನಾಟಕ ಮೇಳದ ತರುಣ ಕಲಾವಿದರಾಗಿದ್ದ ಬೆಳ್ಳಾರೆ ವಿಶ್ವನಾಥ ರೈಗಳನ್ನು ಕರೆಸಿಕೊಂಡಿದ್ದರು. ಬೆಳ್ಳಾರೆಯವರ ನಟನಾ ಸಾಮರ್ಥ್ಯದ ಅರಿವಿದ್ದ ಅಧ್ಯಾಪಕರು ತರಬೇತಿಗೆ ಅವರನ್ನೇ ಆಯ್ಕೆ ಮಾಡಿದ್ದರು.

ಕೇವಲ ಎರಡು ತಿಂಗಳ ತರಬೇತಿ. ‘ಮಾಗಧ ವಧೆ’ ಪ್ರಸಂಗ. ಅಧ್ಯಾಪಕ ಗಿಲ್ಕಿಂಜ ಶ್ರೀ ರಾಮಕೃಷ್ಣ ಭಟ್ಟರು ಮತ್ತು ಶ್ರೀ ಬೆಳ್ಳಾರೆ ವಿಶ್ವನಾಥ ರೈಗಳು ಬಾಲಕನಾದ ಕೊಳ್ತಿಗೆಯವರಿಗೆ ಮಾಗಧನ ಪಾತ್ರವನ್ನು ನೀಡಿದ್ದರು. ಜರಾಸಂಧನಾಗಿ ರಂಗಪ್ರವೇಶ. ಅವರ ನಿರ್ವಹಣೆಗೆ ಪ್ರೇಕ್ಷಕರಿಂದ ಪ್ರಶಂಸೆಯೂ ಸಿಕ್ಕಿತ್ತು. ಈ ಕಾರಣದಿಂದಲೇ ಕಲಾಸಕ್ತಿಯೂ ಕೆರಳಿತು. ‘‘ಯಕ್ಷಗಾನ ನಾಟ್ಯದ ವಿಚಾರದಲ್ಲಿ ಬೆಳ್ಳಾರೆ ವಿಶ್ವನಾಥ ರೈಗಳಿಂದ ಎರಡು ತಿಂಗಳು ಕಲಿತುದೇ ತನ್ನ ಕಲಾ ಬದುಕಿಗೆ ಮೂಲ ಬಂಡವಾಳ’’ ಎಂದು ಕೊಳ್ತಿಗೆಯವರು ಹೇಳುತ್ತಾರೆ. ಶಾಲಾ ಕಲಿಕೆಯತ್ತ ಗಮನವೂ ಕಡಿಮೆಯಾಗಿತ್ತು. ಕಾರಣ ಯಕ್ಷಗಾನ ಎಂಬ ಶ್ರೇಷ್ಠ ಕಲೆಯ ಸೆಳೆತ. ಮನೆಯವರ ಒತ್ತಾಯಕ್ಕೆ 7ನೇ ತರಗತಿ ಮುಗಿಸಿದ್ದರು. ಬೆಳ್ಳಾರೆ ಶಾಲೆಯಲ್ಲಿ 8ನೇ ತರಗತಿಯಲ್ಲಿ ಮೂರು ತಿಂಗಳು ಓದಿ, ಅಧ್ಯಾಪಕರಿಗೆ, ಮನೆಯವರಿಗೆ ಹೇಳದೆಯೇ, ಉಟ್ಟ ಬಟ್ಟೆಯಲ್ಲಿಯೇ ತೆರಳಿದ್ದರು. ನಾಲ್ಕು ತಿಂಗಳ ಕಾಲ ದೂರದ ನೆಂಟರ ಮನೆಯಲ್ಲಿಯೇ ಉಳಿದಿದ್ದರು.

ಈ ಸಂದರ್ಭಗಳಲ್ಲಿ ಬಳ್ಳಂಬೆಟ್ಟು ಮೇಳದ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು. ಮನೆಯವರು ಇವರನ್ನು ಹುಡುಕುತ್ತಿದ್ದರು. ಮೇಳದ ತಿರುಗಾಟವನ್ನು ಮಾಡಿ ಕಲಾವಿದನಾಗಿಯೇ ಬದುಕುವ ದೃಢ ನಿರ್ಣಯವನ್ನು ಕೊಳ್ತಿಗೆಯವರು ಕೈಗೊಂಡಿದ್ದರು. ಕೊಳ್ತಿಗೆ ನಾರಾಯಣ ಗೌಡರ ಮೊದಲ ತಿರುಗಾಟ ಬಳ್ಳಂಬೆಟ್ಟು ಮೇಳದಲ್ಲಿ. 1961ರ ಸುಮಾರಿಗೆ ಇರಬಹುದು. ಮೇಳದ ಸಂಚಾಲಕತ್ವ ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳದ್ದು. ಮೇಳದ ನೇಪಥ್ಯದ ಕೆಲಸದ ಜತೆಗೆ ಸಣ್ಣಪುಟ್ಟ ವೇಷಗಳನ್ನು ಮಾಡುತ್ತಿದ್ದರು. ದಿನಪತ್ರಿಕೆ ಮತ್ತು ಪುಸ್ತಕಗಳನ್ನು ಓದುವ ಹವ್ಯಾಸವೂ ಇತ್ತು. ‘‘ಯಕ್ಷಗಾನ ಕಲಾವಿದನಿಗೆ ಓದು, ಕಲಿಕೆ ಅತ್ಯಗತ್ಯ. ಭಾಷಾಶುದ್ಧಿ ಮತ್ತು ಉತ್ತಮ ವಿಚಾರಗಳ ಸಂಗ್ರಹಕ್ಕೆ ಇದರಿಂದ ಅನುಕೂಲವಾಗುತ್ತದೆ. ಪಾತ್ರಗಳನ್ನು ನಿರ್ವಹಿಸುವಲ್ಲಿ ಉಚ್ಛಾರ ದೋಷವಿರಬಾರದು.’’ ಕೊಳ್ತಿಗೆಯವರ ಈ ಮಾತುಗಳಲ್ಲಿ ಕಲಿಕಾಸಕ್ತರಿಗೆ ಸಂದೇಶವಿದೆ.

ತಮ್ಮ ಕೆಲಸವಾದ ಮೇಲೆ ನಿದ್ದೆ ಮಾಡದೆ ಹಿರಿಯ ಕಲಾವಿದರ ವೇಷಗಳನ್ನು ನೋಡುತ್ತಿದ್ದರು. ಆದಕಾರಣ 2ನೇ ವರ್ಷವೇ ಪೋಷಕ ಪಾತ್ರಗಳನ್ನು ಮಾಡುವಷ್ಟು ಬೆಳೆಯುವ ಹಾಗಾಗಿತ್ತು. ಕಿರೀಟ ವೇಷಗಳತ್ತ ಒಲವು ಮೂಡಿತ್ತು. ಬಳ್ಳಂಬೆಟ್ಟು ಮೇಳದಲ್ಲಿ ಮೂರು ವರ್ಷಗಳ ತಿರುಗಾಟ. ಬಳಿಕ ಶೀನಪ್ಪ ಭಂಡಾರಿಗಳು ಆದಿ ಸುಬ್ರಹ್ಮಣ್ಯ ಮೇಳದ ಸಂಚಾಲಕರಾದಾಗ ಸದ್ರಿ ಮೇಳದಲ್ಲಿ ಹತ್ತು ವರ್ಷಗಳ ತಿರುಗಾಟ. ಈ ಸಮಯಗಳಲ್ಲಿ ಅವಕಾಶಗಳೂ ಸಿಕ್ಕಿತ್ತು. ಕಲಾವಿದನಾಗಿ ಬೆಳೆಯಲು ಕೊಳ್ತಿಗೆಯವರಿಗೆ ಇದರಿಂದ ಅನುಕೂಲವಾಗಿತ್ತು. ‘‘ಆಗ ಕಲಾವಿದರ ಸಂಖ್ಯೆಯೂ ಕಡಿಮೆಯಿತ್ತು. ಪ್ರತಿಯೊಬ್ಬ ಕಲಾವಿದನೂ ಬೆಳಗಿನ ವರೇಗೆ ವೇಷಗಳನ್ನು ಮಾಡಬೇಕಾಗಿತ್ತು. ಪ್ರದರ್ಶನದ ಗೆಲುವಿಗಾಗಿ ಹಿರಿಯ ಕಲಾವಿದರು ಕಿರಿಯರಿಗೆ ಹೇಳಿಕೊಟ್ಟು ವೇಷ ಮಾಡಿಸುತ್ತಿದ್ದರು.

ಶೀನಪ್ಪ ಭಂಡಾರಿಗಳ ನೇತೃತ್ವದ ಆದಿ ಸುಬ್ರಹ್ಮಣ್ಯ ಮೇಳವು ಕಲಾವಿದರನ್ನು ಸಿದ್ದಗೊಳಿಸುವ ಕಾರ್ಖಾನೆಯಾಗಿತ್ತು’’. ಇದು ಕೊಳ್ತಿಗೆಯವರು ಅನುಭವಿಸಿ ಆಡುವ ಮಾತುಗಳು. ಆರಂಭದ ವರ್ಷಗಳಲ್ಲಿ ಕಳಿಯೂರು ಶ್ರೀ ನಾರಾಯಣ ಆಚಾರ್ಯ ಭಾಗವತರಾಗಿದ್ದರು. ನಂತರದ ವರ್ಷಗಳಲ್ಲಿ ಅಗರಿ ಶ್ರೀನಿವಾಸ ಭಾಗವತರ ಒಡನಾಟವೂ ದೊರೆತಿತ್ತು. ಉಜಿರೆ ಸುಂದರ ರೈ, ತೊಕ್ಕೊಟ್ಟು ಲೋಕಯ್ಯ, ಪುತ್ರಕಳ ತಿಮ್ಮಪ್ಪ ರೈ, ಬಂಗ ಭಂಡಾರಿ ಮೊದಲಾದ ಕಲಾವಿದರ ಒಡನಾಟವೂ ಸಿಕ್ಕಿತ್ತು. ಪೀಠಿಕೆ ವೇಷಧಾರಿಯಾಗಿ ಆಗಲೇ ಕೊಳ್ತಿಗೆಯವರು ಗುರುತಿಸಿಕೊಂಡಿದ್ದರು. ಪಾಂಡವಾಶ್ವಮೇಧ ಪ್ರಸಂಗದಲ್ಲಿ ಅರ್ಜುನನ ಪಾತ್ರವನ್ನು ಬೆಳಗಿನ ವರೆಗೂ ಒಬ್ಬನೇ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದರು.


ಅರ್ಜುನ, ದೇವೇಂದ್ರ, ಶತ್ರುಘ್ನ, ಮಕರಾಕ್ಷ ಮೊದಲಾದ ಪಾತ್ರಗಳನ್ನು ಮಾಡಿದರು. ಯಕ್ಷಗಾನಕ್ಕೆ ತುಳು ಪ್ರಸಂಗಗಳು ಪ್ರವೇಶಿಸಿದ ಸಮಯ ಅದು. ಕೋಟಿ-ಚೆನ್ನಯ ಮತ್ತು ಸಿರಿಮಹಾತ್ಮೆ ಎಂಬ ಎರಡು ಪ್ರಸಂಗಗಳು. ಕೋಟಿ-ಚೆನ್ನಯ ಪ್ರಸಂಗದಲ್ಲಿ ಮಂಜು ಪೆರ್ಗಡೆ ಮತ್ತು ಕೇಮರ ಬಲ್ಲಾಳ ಪಾತ್ರಗಳನ್ನೂ, ಸಿರಿಮಹಾತ್ಮೆ ಪ್ರಸಂಗದಲ್ಲಿ ಭೈರವನ ಪಾತ್ರವನ್ನೂ ನಿರ್ವಹಿಸುವ ಅವಕಾಶವಾಗಿತ್ತು. ಮತ್ತೆ 5 ವರ್ಷಗಳ ಕಾಲ ಕೊಳ್ತಿಗೆಯವರು ಕುಂಬಳೆ ಸೇಸಪ್ಪ ಅವರ ನಾಯಕತ್ವದ ಅಮ್ಟಾಡಿ ಮೇಳದಲ್ಲಿ ತಿರುಗಾಟ.

ಕೊಳ್ತಿಗೆಯವರು ಬಳಿಕ ಕಲಾಸೇವೆ ಮಾಡಿದ್ದು ಕೊಲ್ಲೂರು ಮೇಳದಲ್ಲಿ. ಶ್ರೇಷ್ಠ ಕಲಾವಿದರನ್ನು ಹೊಂದಿದ ತಂಡವದು. ಅಗರಿ ಶ್ರೀನಿವಾಸ ರಾಯರು ಭಾಗವತರಾಗಿದ್ದರು. ಮಲ್ಪೆ ಶ್ರೀ ಶಂಕರನಾರಾಯಣ ಸಾಮಗರು, ವೇಷಧಾರಿ ಪೆರುವಡಿ ನಾರಾಯಣ ಭಟ್ಟ, ಕ್ರಿಶ್ಚನ್ ಬಾಬು ಮೊದಲಾದ ಕಲಾವಿದರಿಂದ ಪ್ರದರ್ಶನಗಳು ರಂಜಿಸುತ್ತಿತ್ತು. ಈ ಮೇಳದಲ್ಲಿ ಪೀಠಿಕೆ ಮತ್ತು ಎದುರು ವೇಷಗಳನ್ನು ಮಾಡಿ
ಕೊಳ್ತಿಗೆಯವರು ಕಾಣಿಸಿಕೊಂಡರು. ಅಲ್ಲದೆ ಅನಿವಾರ್ಯಕ್ಕೆ ಅಭಿಮನ್ಯು, ಪರಶುರಾಮ, ಜಮದಗ್ನಿ ಮೊದಲಾದ ಪುಂಡುವೇಷಗಳನ್ನೂ ಮಾಡಿದ್ದಾರೆ. ಆದರೆ ಕಿರೀಟ ವೇಷಗಳತ್ತಲೇ ಇವರ ಆಸಕ್ತಿ. ರಾಣಿ ಚಿತ್ರಾಂಗದೆ ಪ್ರಸಂಗದಲ್ಲಿ ಕ್ರಿಶ್ಚನ್ ಬಾಬು ಅವರ ಬಭ್ರುವಾಹನ ಮತ್ತು ಕೊಳ್ತಿಗೆಯವರ ಅರ್ಜುನ. ಅನೇಕ ಪ್ರಸಂಗಗಳಲ್ಲಿ ಕೊಳ್ತಿಗೆ-ಕ್ರಿಶ್ಚನ್ ಬಾಬು ಜತೆಯನ್ನು ಜನರು ಗುರುತಿಸುವಂತಾಗಿತ್ತು.

ಆಗ ನಾಟಕೀಯ ವೇಷಗಳು ಯಕ್ಷಗಾನ ಕ್ಷೇತ್ರಕ್ಕೆ ಬಂದು ರಂಜಿಸುತ್ತಿದ್ದ ಕಾಲ. ಕೊಳ್ತಿಗೆಯವರೂ ಅಂತಹ ವೇಷಗಳತ್ತ ಆಕರ್ಷಿತರಾಗಿದ್ದರು. ವೇಷ ಕಟ್ಟುವುದರಿಂದ ತೊಡಗಿ, ಪಾತ್ರನಿರ್ವಹಣೆಯ ವರೆಗೆ, ಆ ವಿಚಾರದಲ್ಲಿ ಅನುಭವಗಳನ್ನು ಗಳಿಸಿ ಕಂಸ, ಕಂಹಾಸುರ, ಹಿರಣ್ಯಕಶ್ಯಪ, ಭಸ್ಮಾಸುರ, ರಾವಣ ಮೊದಲಾದ ವೇಷಗಳನ್ನು ಮಾಡಿದರು. ಅತಿಕಾಯ, ತಾಮ್ರಧ್ವಜ, ಇಂದ್ರಜಿತು, ಶಿಶುಪಾಲ ಮೊದಲಾದ ಕಿರೀಟ ವೇಷಗಳನ್ನೂ ಮಾಡಿದರು. ಅಗರಿ ಭಾಗವತರ ಸಮರ್ಥ ನಿರ್ದೇಶನವೂ ಕೊಳ್ತಿಗೆ ಅವರಿಗೆ ಸಿಕ್ಕಿತ್ತು. ಪ್ರತಿ ವೇಷಕ್ಕೂ ಮಲ್ಪೆ ಶಂಕರನಾರಾಯಣ ಸಾಮಗರು ಸಂಭಾಷಣೆಗಳನ್ನು ಹೇಳಿಕೊಡುವುದರ ಜತೆಗೆ, ತಪ್ಪಿದರೆ ತಿದ್ದಿ ಮುನ್ನಡೆಸಿದ್ದರು.

‘‘ದೊಡ್ಡ ಸಾಮಗರು ಕೇಳಿದವರಿಗೆ ಪ್ರೀತಿಯಿಂದ ಹೇಳಿಕೊಡುತ್ತಾರೆ. ಕಲಿಕಾಸಕ್ತ ಕಲಾವಿದರನ್ನು ಪ್ರೀತಿಸುತ್ತಾರೆ. ಸಂತೆಯಲ್ಲಿ ಭಗವದ್ಗೀತೆ ಓದಬಾರದು. ಅಯೋಗ್ಯರಲ್ಲಿ ಸಂಭಾಷಿಸಬಾರದು. ಗಂಧ ಮಾರುವವನ ಜತೆ ಹೊಡೆದಾಡಿದರೂ ಗೊಬ್ಬರ ಮಾರುವವನನ್ನು ಅಪ್ಪಬಾರದು ಎಂಬ ಮಾತುಗಳನ್ನು ಹೇಳುತ್ತಿದ್ದರು ಮತ್ತು ತಮ್ಮ ಬದುಕಿನಲ್ಲೂ ಅದನ್ನು ಅಳವಡಿಸಿಕೊಂಡಿದ್ದರು. ಅವರ ಒಡನಾಟವು ಮರೆಯಲಾಗದ ಅನುಭವ. ಅವರಿಂದಾಗಿ ನಾನು ತಪ್ಪುಗಳನ್ನು ತಿದ್ದಿಕೊಂಡು ಸ್ವಲ್ಪವಾದರೂ ಕಲಿತೆ. ಸಾಗರವು ಜಲನಿಧಿ ಎಂದೇ ಪ್ರಸಿದ್ಧ. ನಾವು ಕೊಂಡುಹೋದ ಪಾತ್ರೆಯ ಅಳತೆಯಷ್ಟೇ ನೀರು ನಮಗೆ ದೊರೆಯುತ್ತದೆ.’’ ಇದು ದೊಡ್ಡ ಸಾಮಗರಿಗೆ ಕೊಳ್ತಿಗೆಯವರು ಅರ್ಪಿಸುವ ನುಡಿನಮನಗಳು.

ಕೊಲ್ಲೂರು ಮೇಳ ತಿರುಗಾಟ ನಿಲ್ಲಿಸಿದ ಬಳಿಕ ಕಲ್ಲಾಡಿ ಶ್ರೀ ವಿಠಲ ಶೆಟ್ಟರ ಕರ್ನಾಟಕ ಮೇಳದಲ್ಲಿ 2 ವರ್ಷಗಳ ತಿರುಗಾಟ. ಬಳಿಕ ಕದ್ರಿ, ಬಪ್ಪನಾಡು, ಪೆರ್ಡೂರು ಮತ್ತು ಉಪ್ಪಳ ಮೇಳಗಳಲ್ಲಿ ಕಲಾಸೇವೆ. ಮತ್ತೆ ಕಲ್ಲಾಡಿ ಶ್ರೀ ದೇವೀಪ್ರಸಾದ ಶೆಟ್ಟರ ಕರ್ನಾಟಕ ಮೇಳದಲ್ಲಿ ತಿರುಗಾಟ. ಈ ಸಂದರ್ಭದಲ್ಲಿ ಮಾನಿಷಾದ ಪ್ರಸಂಗದ ಶತ್ರುಘ್ನನ ಪಾತ್ರ ಕೊಳ್ತಿಗೆಯವರಿಗೆ ಒಳ್ಳೆಯ ಹೆಸರನ್ನು ನೀಡಿತ್ತು. 1982ರಲ್ಲಿ ಪೆರ್ಲಂಪಾಡಿ ಆನಡ್ಕದ ಶ್ರೀ ಪೆರ್ಗಡೆ ಗೌಡ ಮತ್ತು ಅಕ್ಕಯ್ಯ ದಂಪತಿಗಳ ಪುತ್ರಿ ದೇವಕಿ ಅವರ ಜತೆ ವಿವಾಹ.

ಸುಮಾರು ಮೂವತ್ತೇಳು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ವಾಸಿಸುತ್ತಿದ್ದಾರೆ. ಕೊಳ್ತಿಗೆಯವರು ತಾವು ಕಲಾವಿದನಾಗಿ ಬೆಳೆದು ಬಂದ ದಾರಿಯನ್ನು ಆಗಾಗ ನೆನಪಿಸುತ್ತಾರೆ. ಪೆರ್ಲಂಪಾಡಿಯಲ್ಲಿ ನಡೆದ ದಕ್ಷಯಜ್ಞ ಪ್ರಸಂಗ. ಇವರದು ವೀರಭದ್ರನ ಪಾತ್ರ. ನಿನಗದನ್ನು ನಿರ್ವಹಿಸಲು ಸಾಧ್ಯವಾಗದು. ನಿನಗೆ ಅಲ್ಲಿಯವರೆಗೆ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಿ ಕೆಲವರು ಉತ್ಸಾಹ ಭಂಗವೆಸಗಿದ್ದರು. ಇವನನ್ನು ನಮ್ಮವನೆಂದು ಹೇಳಲು ನಾಚಿಕೆಯಾಗುತ್ತದೆ ಎಂದು ಹೇಳಿದವರೂ ಇದ್ದರಂತೆ. ‘‘ಈ ಕೆರಳಿಕೆಯ ಟೀಕೆಗಳು ನನಗೆ ಕಲಿಯುವುದಕ್ಕೆ ಪ್ರೇರಣೆಯನ್ನು ನೀಡಿತು. ಕಲಾಭಿಮಾನಿಗಳು ಗುರುತಿಸಿದ್ದಾರೆ ಎಂಬ ಸಮಾಧಾನವಿದೆ.’’ ಇದು ಕೊಳ್ತಿಗೆಯವರ ಅಂತರಂಗದ ಮಾತುಗಳು.

ಕಲಾಬದುಕಿನಲ್ಲಿ ಹಿರಿಯ ಮತ್ತು ಕಿರಿಯ ಕಲಾವಿದರು ಸೇರಿ ಸುಮಾರು 300ಕ್ಕಿಂತಲೂ ಹೆಚ್ಚು ಕಲಾವಿದರುಗಳು ಕೊಳ್ತಿಗೆಯವರಿಗೆ ಒಡನಾಡಿಗಳಾಗಿ ಒದಗಿದ್ದಾರೆ. ಹಿರಣ್ಯಕಶ್ಯಪ, ರಕ್ತಬೀಜ, ರಾವಣ, ಅತಿಕಾಯ, ಇಂದ್ರಜಿತು, ಕಂಡಾಸುರ, ಕಂಸ, ವಾಲಿ, ಕರ್ಣ, ಅರ್ಜುನ, ಶತ್ರುಘ್ನ, ದಾರಿಕಾಸುರ, ಕಾರ್ತವೀರ್ಯ, ಜಮದಗ್ನಿ, ಕೌರವ, ಭೀಮ, ಭೀಷ್ಮ, ಸಾಲ್ವ, ಶಕುನಿ, ಬಪ್ಪಬ್ಯಾರಿ ಮೊದಲಾದ ಪುರಾಣ ಪ್ರಸಂಗಗಳ ಪಾತ್ರಗಳು, ಬಿರುಮಾಳ್ವ, ಕೊಡ್ಸರಾಳ್ವ, ಬುದ್ಧಿವಂತ, ಕೋಟಿ-ಚೆನ್ನಯ, ಚಂದುಗಿಡಿ, ಬಲಾಂಡಿ, ಭೈರವರಸ, ಬಬ್ಬು ಮೊದಲಾದ ತುಳು ಪ್ರಸಂಗಗಳ ಪಾತ್ರಗಳಲ್ಲಿ ಅಭಿನಯಿಸಿ ಕಾಣಿಸಿಕೊಂಡರು. ಅಲ್ಲದೆ ಕೊಳ್ತಿಗೆಯವರು ಮಂಗಳೂರು ಆಕಾಶವಾಣಿಯ ‘ಎ ಗ್ರೇಡ್’ ಗ್ರೂಪಿನ ಕಲಾವಿದ. ‘ಯಕ್ಷಪಯಣ’ ಎಂಬ ಆತ್ಮಕಥನವನ್ನೂ ಬರೆದಿರುತ್ತಾರೆ.

ತಾಳಮದ್ದಳೆಯಲ್ಲೂ ಭಾಗವಹಿಸುತ್ತಾರೆ. ಧಾರ್ಮಿಕ ಪ್ರವಚನ ಮತ್ತು ಭಾಷಣವನ್ನೂ ಹವ್ಯಾಸವಾಗಿರಿಸಿಕೊಂಡಿದ್ದಾರೆ. ಸುಮಾರು ನೂರರ ಹತ್ತಿರ ಆಡಿಯೋ ಕ್ಯಾಸೆಟ್ ಮತ್ತು ಎಪ್ಪತ್ತರಷ್ಟು ವೀಡಿಯೋ ಕ್ಯಾಸೆಟ್‍ಗಳಲ್ಲಿ ಕಲಾವಿದನಾಗಿ ಭಾಗವಹಿಸಿದ್ದಾರೆ. ಸುಮಾರು ಇಪ್ಪತ್ತನಾಲ್ಕು ಪ್ರಶಸ್ತಿಗಳನ್ನು ಪಡೆದುದಲ್ಲದೆ ಇನ್ನೂರಕ್ಕೂ ಮಿಕ್ಕಿದ ಸನ್ಮಾನಗಳನ್ನೂ ಪಡೆದುಕೊಂಡಿದ್ದಾರೆ.

ಕಲಾಬದುಕಿನುದ್ದಕ್ಕೂ ಪತ್ನಿಮಕ್ಕಳ ಸಹಕಾರವಿತ್ತು. ಕೊಳ್ತಿಗೆ ನಾರಾಯಣ ಗೌಡ ಮತ್ತು ದೇವಕಿ ದಂಪತಿಗಳಿಗೆ ಮೂವರು ಮಕ್ಕಳು. ಹಿರಿಯ ಪುತ್ರ ಜಗದೀಪ್ ಡಿಪ್ಲೊಮಾ ಇಂಜಿನಿಯರ್. ಅರಬ್ ದೇಶದ ರಿಯಾದ್‍ನಲ್ಲಿ ಉದ್ಯೋಗಿ. ವಿವಾಹಿತ. ಪತ್ನಿ ಶ್ರೀಮತಿ ಮಮತಾ ಜಗದೀಪ್ ಇನ್ಫೋಸಿಸ್ ಉದ್ಯೋಗಸ್ಥೆ. ಕಿರಿಯ ಪುತ್ರ ಜಯದೀಪ್ ಮೈಸೂರಿನ CAVA ದಲ್ಲಿ ಕಲಿತು (BFA) ಬೆಂಗಳೂರಿನಲ್ಲಿ ಉದ್ಯೋಗಿ. ಪುತ್ರಿ ದೀಪ್ತಿ ವಿವಾಹಿತೆ. ಇವರ ಪತಿ ಅಜೇಯಪ್ರಭು ಸ್ವಂತ ಉದ್ದಿಮೆಯನ್ನು ನಡೆಸುತ್ತಿದ್ದಾರೆ.

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ದಿನೇಶ ಅಮ್ಮಣ್ಣಾಯರ ಭಾವದಲೆಯಲ್ಲಿ…

ಯಾಕೋ ದಿನೇಶ ಅಮ್ಮಣ್ಣಾಯರು ಮತ್ತೆ ಮತ್ತೆ ನೆನಪಾಗುತ್ತಾರೆ. ಯಕ್ಷಗಾನದ ಸೊಲ್ಲು ಅಡಗಿ ಹೋಗದಿದ್ದರೂ ಚೆಂಡೆ ಮದ್ದಲೆಗಳ ಸದ್ದು ಮೊದಲಿನಂತೆ ಕೇಳಿಸದೇ ಇರುವ ಈ ಕಾಲಘಟ್ಟದಲ್ಲಿಯೂ ಅಮ್ಮಣ್ಣಾಯರು ಮತ್ತೆ ನೆನಪಿನ ಸುಳಿಯಲ್ಲೊಮ್ಮೆ ಬಂದು ಹೋಗತ್ತಾರೆ. ನಾನು ಅವರನ್ನೊಮ್ಮೆ ಮಾತ್ರ ಭೇಟಿ ಮಾಡಿದ್ದೆ. ಪತ್ರಿಕೆಯ ಲೇಖನವೊಂದಕ್ಕೆ ಅವರನ್ನು ಮಾತಾಡಿಸಲು ಹೋಗಿದ್ದೆ. ಆದರೆ ಅವರ ಮನೆಗಲ್ಲ. ಅದು ಪುತ್ತೂರಿನ ಕೆಮ್ಮಾಯಿಯ ವಿಷ್ಣು ಮಂಟಪಕ್ಕೆ. ಅಲ್ಲಿ ಇಲ್ಲಿ ಎಂದು ಭೇಟಿಯಾಗಲು ಅಂತಿಮವಾಗಿ ನಿಗದಿಪಡಿಸಿದ ತಾಣ ಭಗವಂತನ ಸಾನ್ನಿಧ್ಯವೇ ಆಗಿತ್ತು. ಆ ದಿನ ಅವರು ನನಗೆ ಆತ್ಮೀಯರೇನೋ ಎಂದು ಅನಿಸಿತ್ತು. ತುಂಬಾ ಹೊತ್ತು ಮನಬಿಚ್ಚಿ ಮಾತಾಡಿದ್ದರು. ಆದರೆ ಆಮೇಲೆ ನನಗೆ ಅವರಲ್ಲಿ ಮುಖತಃ ಮಾತನಾಡುವ ಸಂದರ್ಭ ಈ ವರೆಗೆ ಒದಗಿ ಬಂದದ್ದಿಲ್ಲ. 

ಆ ನಂತರದ ದಿನಗಳಲ್ಲಿ ನೋಡಿದ್ದು ಕೆಲವು ರಂಗಸ್ಥಳಗಳಲ್ಲಿ ಭಾಗವತನಾಗಿ ಮಾತ್ರ. ಅವರು ಭಾಗವತ. ನಾನು ಒಬ್ಬ ಸಾಮಾನ್ಯ ಪ್ರೇಕ್ಷಕ. ಅವರಿಗೆ ಪ್ರೇಕ್ಷಕರ ಗಡಣಕ್ಕೆ ಬಂದು ಮಾತನಾಡಿಸುವ ಅವಕಾಶಗಳಿಲ್ಲ. ಆದರೆ ನನಗೆ ಚೌಕಿಗೆ ನುಗ್ಗಿ ನಾನು ಇಂತಹವ ಎಂದು ಪರಿಚಯ ಮಾಡಿ ಮಾತನಾಡಿಸುವ ಗುಣವೂ ಸ್ವಲ್ಪ ಕಡಿಮೆಯೇ. ನಿಜವಾಗಿ ಪತ್ರಿಕಾ ರಂಗದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಕಲ್ಲನ್ನಾದರೂ ಮಾತನಾಡಿಸುವ ಗುಣವಿರಬೇಕು ಎಂಬುದು ಸತ್ಯವಾದರೂ ನನಗೆ ಅನಗತ್ಯವಾಗಿ ಮಾತನಾಡಿಸುವ ಹವ್ಯಾಸ ಬೆಳೆದು ಬಂದಿರಲಿಲ್ಲ. ಆದರೆ ಒಮ್ಮೆ ಮಾತನಾಡಿದ ನೆನಪುಗಳು ಸದಾ ಹಸಿರಾಗಿದೆ. 

ಈ ನೆನಪು ನನಗೆ ಮಾತ್ರವಲ್ಲ. ಕೆಲವು ಯಕ್ಷಗಾನ ಪ್ರದರ್ಶನಗಳನ್ನು ಸಂಘಟಿಸುವವರಿಗೂ ಅಮ್ಮಣ್ಣಾಯರ ನೆನಪು ಇರಲೇ ಬೇಕಾಗುತ್ತದೆ. ಕೆಲವು ಪ್ರಸಂಗಗಳಿಗೂ ಅಮ್ಮಣ್ಣಾಯರಿಗೂ ಅವಿನಾಭಾವ ಸಂಬಂಧ. ಭಾವುಕ ಸನ್ನಿವೇಶಗಳಿರುವ, ಕಥಾಪಾತ್ರಗಳಿರುವ ಪ್ರಸಂಗಕ್ಕೂ  ಭಾವಜೀವಿ ಭಾಗವತನಿಗೂ ಸರಿಯಾದ ಜೊತೆಯಾಗುತ್ತದೆ. ಹಾಗೆಂದು ಇತರರಿಗೆ ಆಗುವುದಿಲ್ಲ ಎಂದು ಅರ್ಥವಲ್ಲ. ಅವರು ಉತ್ತಮರು ಎಂದು ಹೇಳಿದರೆ ಇವರು ಕೆಟ್ಟವರು ಎಂದು ಹೇಳಿದ ಹಾಗಾಗುವುದಿಲ್ಲ!

ಆದುದರಿಂದ ಮಾನಿಷಾದವೇ ಇರಲಿ ಅಥವಾ ದ್ರೌಪದಿ ವಸ್ತ್ರಾಪಹಾರವೇ ಇರಲಿ ಆ ದಿನದ ಪ್ರದರ್ಶನಗಳಲ್ಲಿ ಖಂಡಿತವಾಗಿಯೂ ಭಾವಜೀವಿ ಭಾಗವತ ದಿನೇಶ ಅಮ್ಮಣ್ಣಾಯರು ನೆನಪಾದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ. ಮನಿಷಾದ ಪ್ರಸಂಗದ ಲಕ್ಷ್ಮಣ ಸೀತೆಯರ ಸಂವಾದವೇ ಇರಲಿ ಅಥವಾ ದ್ರೌಪದಿ ಕೃಷ್ಣನನ್ನು ಬೇಡುವ ಅಕ್ಷಯಾಂಬರದ ಪಾತ್ರಚಿತ್ರಣದ ಹಾಡುಗಳೇ ಇರಲಿ ಕೆಲವೊಮ್ಮೆ ಅಮ್ಮಣ್ಣಾಯರು ಕರುಣ ರಸದಲ್ಲಿ ಮುಳುಗೇಳುತ್ತಾರೆ. ಈ ಪ್ರಸಂಗಗಳಿಗೆ ಮತ್ತೂ ಒಂದು ಸೇರ್ಪಡೆ ‘ಸತ್ಯ ಹರಿಶ್ಚಂದ್ರ’. ಇಲ್ಲಿ ಭಾಗವತರಿಗೂ ದುಃಖ ಸನ್ನಿವೇಶವನ್ನು ಅನುಭವಿಸಿ ಹಾಡಲು ಮತ್ತು ಪ್ರೇಕ್ಷಕರಿಗೆ ಕರುಣೆಯ ಕಡಲಿನಲ್ಲಿ ಮುಳುಗೇಳುತ್ತಾ ನೋಡಲು ಬೇಕಾದಷ್ಟು ಸಂದರ್ಭಗಳಿವೆ. 

ಅಂತಹಾ ಪದ್ಯಗಳ ಬಗ್ಗೆ ಕೇಳಿದಾಗ ಅಮ್ಮಣ್ಣಾಯರು ಭಾವುಕರಾಗಿ ವಿವರಿಸುತ್ತಾರೆ. ಇದರಲ್ಲಿ ತನ್ನ ಸಾಧನೆಯೇನೂ ಇಲ್ಲ ಅಂತ ಮೇಲಕ್ಕೆ ಕೈ ತೋರಿಸುತ್ತಾರೆ. ತನ್ನನ್ನು ಕಾಣದ ಕೈಯೊಂದು ಪ್ರಚೋದಿಸಿ ರಾಗಗಳನ್ನು ಹಾಡಿಸುತ್ತಾ ಇದೆ ಎಂದು ಹೇಳುವ ಅವರು ತಾನು ಈ ರಂಗದಲ್ಲಿ ಪ್ರದರ್ಶನ ನೀಡಲು ದಾಮೋದರ ಮಂಡೆಚ್ಚರೇ ಕಾರಣ ಎಂದು ವಂಚನೆಯಿಲ್ಲದೆ ಹೇಳುತ್ತಾರೆ.  ನಾನು ಇಂದು ಈ ರಂಗದಲ್ಲಿ ಏನಾದರೂ ಸಾಧನೆಯನ್ನು ಮಾಡಿದ್ದಿದ್ದರೆ ಅದು ದಾಮೋದರ ಮಂಡೆಚ್ಚರ ಪ್ರಸಾದವೇ ಹೊರತು ನನ್ನದೇನಿಲ್ಲ ಎಂದು ಹೇಳುತ್ತಾ ಅಮ್ಮಣ್ಣಾಯರು ಭಾವುಕರಾಗುತ್ತಾರೆ.

ತನ್ನನ್ನು ಅತಿ ಹೆಚ್ಚು ಭಾವ ಪರವಶತೆಗೆ ದೂಡುವ ಸನ್ನಿವೇಶಗಳೆಂದರೆ ಅದು ಭಕ್ತಿ ಮತ್ತು ಕರುಣಾರಸ ಎನ್ನುವ ಅಮ್ಮಣ್ಣಾಯರು ಶೃಂಗಾರವನ್ನೂ ಅಷ್ಟೇ ಸುಲಲಿತವಾಗಿ ಹಾಡಬಲ್ಲ ಸಾಮರ್ಥ್ಯವನ್ನು ಹೊಂದಿದವರು. ಹೊಡಬಡಿಯ ಪ್ರಸಂಗವಾದ ಮೈರಾವಣ ಕಾಳಗವನ್ನೂ ಸಮರ್ಥವಾಗಿ ಆಡಿಸಬಲ್ಲೆ ಎನ್ನುವ ಅಮ್ಮಣ್ಣಾಯರ ಇಷ್ಟದ ಪದ್ಯಗಳು ಭಕ್ತಿ ಮತ್ತು ಕರುಣ ರಸದ ಪದ್ಯಗಳು ಎಂದು ಅವರು ಒಪ್ಪಿಕೊಳ್ಳುತ್ತಾರೆ.  ದಾಮೋದರ ಮಂಡೆಚ್ಚರ ಹೆಸರು ಹೇಳುವಾಗಲೇ ಹನಿದುಂಬುವ ಕಣ್ಣುಗಳನ್ನು ಒರೆಸುವ ಅಮ್ಮಣ್ಣಾಯರು ಬೆಳಿಗ್ಗೆ ಎದ್ದ ಒಡನೆಯೇ ಕೇಳುವುದೇ ಮಂಡೆಚ್ಚರ ಪದ್ಯಗಳನ್ನು.

ಎಷ್ಟೇ ಚೆನ್ನಾಗಿ ರಾಗಗಳನ್ನು ಹಾಡಲು ಗೊತ್ತಿದ್ದರೂ ಭಾವ ಇಲ್ಲದೆ ಅಭಿನಯಕ್ಕೆ ಸ್ಪೂರ್ತಿ ಬರಲಾರದು ಎಂದು ಹೇಳುವ ಅಮ್ಮಣ್ಣಾಯರು ರಾಗದ ಜೊತೆಗೆ ಭಾವಗಳನ್ನು ಸಮ್ಮಿಳಿತಗೊಳಿಸಿ ಹಾಡುವವರು. ಸನ್ನಿವೇಶವನ್ನು ಅನುಭವಿಸಿ ಹಾಡುವುದರಲ್ಲಿ ಸಂಬಿಕೆ ಇಟ್ಟವರು. ಕರುಣಾರಸದಲ್ಲಿ ಎಷ್ಟೇ ಚೆನ್ನಾಗಿ ಹಾಡಿದರೂ ಧ್ವನಿ ಮತ್ತು ಭಾವ ಇಲ್ಲದಿದ್ದರೆ ದುಃಖ ಬರಲಾರದು ಎಂದು ಅವರ ಅಭಿಪ್ರಾಯ.  

ಅಮ್ಮಣ್ಣಾಯರು ಕೃಷಿ ಕಾಯಕದಲ್ಲೇ ತೊಡಗಿಸಿಕೊಂಡು ಮೇಳದ ತಿರುಗಾಟಕ್ಕೆ ಅಲಭ್ಯರಾಗುತ್ತಾರೆಯೋ ಅಥವಾ ಇಲ್ಲವೋ ಎಂಬುದು ಅವರ ನಿರ್ಧಾರಕ್ಕೆ ಬಿಟ್ಟದ್ದು. ಆದರೆ ಆಯ್ಕೆಯ ಪ್ರದರ್ಶನಗಳಿಗೆ ಲಭ್ಯರಿರುತ್ತಾರೆ ಎಂದೇ ಕಲಾಭಿಮಾನಿಗಳು ನಂಬಿದ್ದಾರೆ. ಆ ನಂಬಿಕೆಯನ್ನು ಅವರು ಹುಸಿಗೊಳಿಸದಿರಲಿ ಎಂದು ಹಾರೈಸುತ್ತೇನೆ. ಭಾವ, ರಾಗಗಳ ಮಾತು ಬಂದಾಗ ಕರುಣ, ಭಕ್ತಿಪ್ರಧಾನ ಪ್ರಸಂಗಗಳ ಪ್ರಸ್ತಾಪ ಬಂದಾಗ ಯಾವಾಗಲೂ ಅಮ್ಮಣ್ಣಾಯರ ಹೆಸರು ಉಲ್ಲೇಖವಾಗದೆ ಇರಲಾರದು.  ಮುಂದಿನ ಯಕ್ಷಾಭಿಮಾನಿ ಪೀಳಿಗೆಯು ಆ ಬಗ್ಗೆ  ಕೇಳಿದರೆ ಅದು ಉತ್ತರ ದೊರಕದ ಪ್ರಶ್ನೆಯಾಗದು.

ವಿಶ್ವ ಅರೋಗ್ಯ ಸಂಸ್ಥೆ ವೀಕ್ಷಿಸಿದ ‘ಕೊರೋನಾ ಯಕ್ಷ ಜಾಗೃತಿ’

ಎಲ್ಲರಿಗೂ ತಿಳಿದಿರುವಂತೆ ಮಾರಕ ರೋಗ ಕೊರೋನಾ ವೈರಸ್ ವಿರುದ್ಧ ಹೋರಾಡುವಲ್ಲಿ  ಜಗತ್ತೇ ಒಂದಾಗಿ ಮಹಾ ಅಭಿಯಾನವನ್ನು ಕೈಗೊಂಡಿದೆ. ವಿಶ್ವ ಅರೋಗ್ಯ ಸಂಸ್ಥೆ (WHO) ಈ ಬಗ್ಗೆ ಜನರನ್ನು ಎಚ್ಚರಿಸುವಲ್ಲಿ ಅನೇಕ ಜನಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಮಾತ್ರವಲ್ಲದೆ ಇಂತಹ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದನ್ನು ಆಯೋಜಿಸುವವರಿಗೂ ನಿರಂತರ ಪ್ರೋತ್ಸಾಹಗಳನ್ನು ಕೊಡುತ್ತಿದೆ. ಈ ನಿಟ್ಟಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ಮುಂದಾಳತ್ವದಲ್ಲಿ ನಡೆದ ಕೊರೋನಾ ಯಕ್ಷಗಾನ ಪ್ರದರ್ಶನವು  ವಿಶ್ವ ಅರೋಗ್ಯ ಸಂಸ್ಥೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮಾತ್ರವಲ್ಲದೆ  ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ನಿರ್ಮಿಸಿದ ‘ಕೊರೋನಾ ಯಕ್ಷ ಜಾಗೃತಿ’ (Awareness about Covid-19) ಎಂಬ ಯಕ್ಷಗಾನ ಬೊಂಬೆಯಾಟ ಪ್ರದರ್ಶನ ವಿಶ್ವ ಅರೋಗ್ಯ ಸಂಸ್ಥೆಯ ಗಮನಕ್ಕೆ ಬಂದಿದೆ.

ವಿಶ್ವದಾದ್ಯಂತ ಪ್ರಸರಿಸುತ್ತಿರುವ ಕೊರೋನಾ ರೋಗದ ಪರಿಣಾಮ ಮತ್ತು ಎಚ್ಚರಿಕೆ, ಜಾಗೃತಿಗಳ ಬಗ್ಗೆ ಅಧ್ಯಯನ ನಡೆಸಲು ವಿಶ್ವ ಅರೋಗ್ಯ ಸಂಸ್ಥೆಯ ಮುಖ್ಯಸ್ಥರಾದ ಡಾ. ಟೆಡ್ರಾಸ್ ಅಧಾನೊಮ್ ಘೆಬ್ರೆಯೆಸೆಸ್  ನೇಮಿಸಿದ ತಜ್ಞರ ತಂಡವಾದ GOARN ನ ಮುಖ್ಯಸ್ಥ ಹಾಗೂ ಅಧ್ಯಕ್ಷರಾದ ಸಿಂಗಾಪುರದ ನ್ಯಾಷನಲ್ ಹೆಲ್ತ್ ಸಿಸ್ಟಮ್ ನ (NUHS) ಪ್ರಾಧ್ಯಾಪಕರೂ ಆದ ಪ್ರೊ| ಡೇಲ್ ಫಿಶರ್ ಅವರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಕೊರೋನಾ ಪ್ರಸರಣ ತಡೆಯ ಜಾಗೃತಿ ಕಾರ್ಯಕ್ರಮ ‘ಕೊರೋನಾ ಯಕ್ಷ ಜಾಗೃತಿ’ ಯಕ್ಷಗಾನ ಬೊಂಬೆಯಾಟ ಪ್ರದರ್ಶನವನ್ನು ಮೆಚ್ಚಿಕೊಂಡಿದ್ದಾರೆ.

ವಿಶ್ವದ ಅದರಲ್ಲೂ ಏಷ್ಯಾದ ಕೊರೋನಾ ಪೀಡಿತರ ಹಾಗೂ ಆತಂಕಿತ ಜನರ ಖಿನ್ನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ವಿಚಾರದಲ್ಲಿ ಈ GOARN ತಂಡವು ಮುಂದಾದಾಗ ಸಿಂಗಪುರದ NUHS ನ ಪ್ರೊಫೆಸರ್ ಎಂ. ಪ್ರಕಾಶ ಹಂದೆ, ಸಿಂಗಾಪುರ ಇವರು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದವರು ನಿರ್ಮಿಸಿದ ‘ಕೊರೋನಾ ಯಕ್ಷ ಜಾಗೃತಿ’ ಯಕ್ಷಗಾನ ಬೊಂಬೆಯಾಟವನ್ನು ಪರಿಗಣಿಸಲು ಸೂಚಿಸಿದರು.  

ಈ  ‘ಕೊರೋನಾ ಯಕ್ಷ ಜಾಗೃತಿ’  ಎಂಬ  ಯಕ್ಷಗಾನ ಬೊಂಬೆಯಾಟ ಪ್ರದರ್ಶನ  ಸುಮಾರು 30 ನಿಮಿಷಗಳ ಕಾರ್ಯಕ್ರಮವಾದರೂ ಪ್ರೊ| ಪ್ರಕಾಶ ಹಂದೆಯವರ ಸೂಚನೆಯನ್ನು ಪರಿಗಣಿಸಿದ ವಿಶ್ವ ಅರೋಗ್ಯ ಸಂಸ್ಥೆಯು ಇದನ್ನು ಸುಮಾರು 4 ನಿಮಿಷಕ್ಕೆ ಪರಿಷ್ಕರಿಸಿ ಕಳುಹಿಸಲು ಮನವಿ ಮಾಡಿದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ನಿರ್ಮಿಸಿದ ಈ 4 ನಿಮಿಷದ  ಕಾರ್ಯಕ್ರಮ  ‘ಕೊರೋನಾ ಯಕ್ಷ ಜಾಗೃತಿ’  ಎಂಬ  ಯಕ್ಷಗಾನ ಬೊಂಬೆಯಾಟ ಪ್ರದರ್ಶನವು ವಿಶ್ವ ಅರೋಗ್ಯ ಸಂಸ್ಥೆಯ ಅಧಿವೇಶನದಲ್ಲಿ ವೀಕ್ಷಣೆಗೆ ಒಳಪಟ್ಟು ಮೆಚ್ಚುಗೆಯನ್ನು ಗಳಿಸಿದೆ.

ಈ ಬೆಳವಣಿಗೆಯು ಯಕ್ಷಗಾನ ಮತ್ತು ಬೊಂಬೆಯಾಟ ಕಲಾ ಕ್ಷೇತ್ರಕ್ಕೊಂದು ಹೆಮ್ಮೆಯ ಸುದ್ದಿ ಹಾಗೂ ಕೊರೋನಾ ಜನ ಜಾಗೃತಿಯನ್ನು ಕಲೆಯ ಮೂಲಕ  ಉಂಟುಮಾಡುವಲ್ಲಿ ಶ್ರಮಿಸಿದ  ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ಹಾಗೂ ಈ ಕಾರ್ಯಕ್ರಮದ ಯಶಸ್ಸಿನ ಹಿಂದಿರುವ ಎಲ್ಲಾ ಮಹಾನುಭಾವರೂ ಈ ರೋಗದ ನಿರ್ಮೂಲನಕ್ಕೆ ತಮ್ಮದೇ ಆದ ಕೊಡುಗೆ ಸಲ್ಲಿಸಿದಂತಾಗಿದೆ.  ಕೊರೋನಾ ನಿರ್ಮೂಲನಾ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮದ ಜೊತೆ ಕೈ ಜೋಡಿಸುವಲ್ಲಿ ತಮ್ಮನ್ನೂ ಪರಿಗಣಿಸಿದ್ದಕ್ಕಾಗಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರೊ| ಡೇಲ್ ಫಿಶರ್ ಹಾಗೂ ಪ್ರೊ| ಪ್ರಕಾಶ ಹಂದೆಯವರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದೆ 

 ‘ಕೊರೋನಾ ಯಕ್ಷ ಜಾಗೃತಿ’  ಎಂಬ  ಯಕ್ಷಗಾನ ಬೊಂಬೆಯಾಟ ಪ್ರದರ್ಶನದ ಯು ಟ್ಯೂಬ್ ಲಿಂಕ್ ಕೆಳಗಡೆ ಕೊಡಲಾಗಿದೆ.  

 ‘ಕೊರೋನಾ ಯಕ್ಷ ಜಾಗೃತಿ’  ಎಂಬ  ಯಕ್ಷಗಾನ ಬೊಂಬೆಯಾಟ ಪ್ರದರ್ಶನ

ಶಶಿಕಾಂತ ಶೆಟ್ಟಿ ಕಾರ್ಕಳ – ಪ್ರತಿಭಾವಂತ ಸ್ತ್ರೀಪಾತ್ರಧಾರಿ

ಯಕ್ಷಗಾನ ಕ್ಷೇತ್ರದಲ್ಲಿ ಸ್ತ್ರೀಪಾತ್ರಗಳನ್ನು ನಿರ್ವಹಿಸುವ ಕಲಾವಿದರಿಗೆ ರೂಪವು (ಆಂಗಿಕ ಸೌಂದರ್ಯ) ಪ್ರಾಥಮಿಕ ಅವಶ್ಯಕತೆಗಳಲ್ಲೊಂದು. ಇದು ದೈವದತ್ತವಾಗಿ ದೊರೆಯುವಂತಹ ವಿಚಾರ. ಈ ಬಗೆಗೆ ಕಲಾವಿದನನ್ನು ಆಕ್ಷೇಪಿಸುವಂತಿಲ್ಲ. ಆಕರ್ಷಕ ರೂಪವನ್ನು ಹೊಂದಿರದಿದ್ದರೂ, ತನ್ನ ಪ್ರತಿಭಾ ವ್ಯಾಪಾರದಿಂದಲೇ ಸ್ತ್ರೀಪಾತ್ರಗಳಲ್ಲಿ ಅಭಿನಯಿಸಿ, ಯಕ್ಷನಾಯಿಕೆಯಾಗಿ ಖ್ಯಾತರಾದವರಿದ್ದಾರೆ.

ದೈಹಿಕ ಸೌಂದರ್ಯದ ಜತೆ ಪ್ರತಿಭಾಸೌಂದರ್ಯವೂ ಸೇರಿದರೆ ಕಲಾವಿದನಿಗೆ ಸ್ತ್ರೀಪಾತ್ರಧಾರಿಯಾಗಿ ಮೆರೆಯಲು ಬೇರಿನ್ನೇನು ಬೇಕು? ಯಕ್ಷಗಾನವು ದೃಶ್ಯಮಾಧ್ಯಮವೂ ಹೌದು. ಆದುದರಿಂದ ಸ್ತ್ರೀ ಸಹಜತೆಗೆ ಒಪ್ಪುವ ದೇಹ ಸೌಂದರ್ಯವೂ ಬೇಕೆಂಬುದನ್ನು ಎಲ್ಲಾ ಕಲಾವಿದರೂ ತಿಳಿದಿರುತ್ತಾರೆ. ಆದುದರಿಂದ ನಲುವತ್ತು-ನಲುವತ್ತೈದು ವರ್ಷಗಳು ಕಳೆದಾಗ, ಅಥವಾ ವೃದ್ಧಿಯ ಪರಿಣಾಮದಿಂದ ತನುವಿನೊಳಗಿರುವ ತಾರುಣ್ಯವು ಮರೆಯಾಗುತ್ತಿದೆ ಎಂಬ ಅರಿವಾದಾಗ ಸಹಜವಾಗಿ ಸ್ತ್ರೀಪಾತ್ರಧಾರಿಗಳು ಪುರುಷ ಪಾತ್ರಗಳತ್ತ ಗಮನಹರಿಸುವುದನ್ನು ನಾವು ಕಾಣಬಹುದು.

ಇವರು ಚತುರಮತಿಗಳು. ಗಳಿಸಿದ ಹೆಸರನ್ನು ಉಳಿಸಬೇಕು. ವೃತ್ತಿರಂಗದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲೇಬೇಕು ಎಂಬ ಕಾರಣಕ್ಕಾಗಿಯೇ ಈ ನಿರ್ಣಯವನ್ನು ಕೈಗೊಳ್ಳುತ್ತಾರೆ. ಈ ವಿಚಾರದ ಬಗ್ಗೆ ಗಮನಹರಿಸಿದರೆ ತೆಂಕಿನಲ್ಲಿ ಕುಂಬಳೆ ಶ್ರೀಧರ ರಾಯರು ಮತ್ತು ಬಾಯಾರು ರಮೇಶ ಭಟ್ಟರನ್ನೂ, ಬಡಗಿನಲ್ಲಿ ನೀಲ್ಕೋಡು ಶಂಕರ ಹೆಗಡೆಯವರನ್ನೂ ನಮಗೆ ನೆನಪಾಗದೆ ಇರದು. ಪ್ರಸ್ತುತ ಆಕರ್ಷಕ ರೂಪ ಮತ್ತು ಪ್ರತಿಭೆಯನ್ನು ಹೊಂದಿರುವ ಉದಯೋನ್ಮುಖ ಸ್ತ್ರೀಪಾತ್ರಧಾರಿಗಳಲ್ಲಿ ಕಾರ್ಕಳ ಶಶಿಕಾಂತ ಶೆಟ್ಟರೂ ಒಬ್ಬರು. ಇವರು ಉಭಯತಿಟ್ಟುಗಳಲ್ಲಿ ಪ್ರವೀಣರು. ವರ್ತಮಾನದಲ್ಲಿ ಬಹು ಬೇಡಿಕೆಯ ಸ್ತ್ರೀಪಾತ್ರಧಾರಿಯಾಗಿ ಮಿಂಚುತ್ತಿದ್ದಾರೆ. ಜತೆಗೆ ಪುರುಷವೇಷಗಳನ್ನೂ ಅಷ್ಟೇ ಸಮರ್ಥವಾಗಿ ನಿರ್ವಹಿಸುತ್ತಾರೆ. ತಾಳಮದ್ದಳೆಗಳಲ್ಲೂ ಕಾಣಿಸಿಕೊಳ್ಳುತ್ತಾರೆ.

ಆದುದರಿಂದ ನಿಜಾರ್ಥದಲ್ಲಿ ಇವರೊಬ್ಬ ಯಕ್ಷಗಾನದ ಸವ್ಯಸಾಚಿ. 2003-2004ರಿಂದ ತೊಡಗಿ ಕಳೆದ ಹದಿನೆಂಟು ವರ್ಷಗಳಿಂದ ಸಾಲಿಗ್ರಾಮ ಮೇಳದ ಸ್ತ್ರೀವೇಷಧಾರಿಯಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಶ್ರೀ ಶಶಿಕಾಂತ ಶೆಟ್ಟರ ಹುಟ್ಟೂರು ಕಾರ್ಕಳದ ಸಮೀಪದ ಆನೇಕೆರೆ. ಶ್ರೀ ದರ್ಣಪ್ಪ ಶೆಟ್ಟಿ ಮತ್ತು ಶ್ರೀಮತಿ ಲಲಿತಾ ದಂಪತಿಗಳ ಪುತ್ರನಾಗಿ 1980ನೇ ಇಸವಿ ಜನವರಿ 8ರಂದು ಜನನ. ಪ್ರಸ್ತುತ ವಾಸ ಕುಂದಾಪುರ ತಾಲೂಕಿನ ಸಿದ್ಧಾಪುರದಲ್ಲಿ. ಇವರದು ಕುರುಹಿನ ಶೆಟ್ಟಿ ಸಮಾಜ. ಬಾಲ್ಯದಲ್ಲಿ ಬಡತನವಿದ್ದರೂ ಮನೆಯವರಿಗೆ ಹೃದಯ ಶ್ರೀಮಂತಿಗೆಯಿತ್ತು. ಅಜ್ಜಿ (ತಂದೆಯ ತಾಯಿ) ಯಕ್ಷಗಾನಾಸಕ್ತರಾಗಿದ್ದರು. ಅವರ ಜತೆ ಸಾಗಿ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು. ಹಾಗೆಂದು ಬಾಲ್ಯದಲ್ಲಿ ತಾನು ಯಕ್ಷಗಾನ ಕಲಾವಿದನಾಗಬೇಕೆಂಬ ಕನಸನ್ನು ಶಶಿಕಾಂತ ಶೆಟ್ಟಿ ಅವರು ಕಟ್ಟಿಕೊಂಡಿರಲಿಲ್ಲ.


ಕಾರ್ಕಳದ ಶ್ರೀ ರಾಮಪ್ಪ ಹಿರಿಯ ಪ್ರಾಥಮಿಕ ಶಾಲೆ ಮತ್ತು ಎಸ್.ಎನ್.ವಿ. ಪ್ರೌಢಶಾಲೆಯಲ್ಲಿ 9ನೇ ತರಗತಿಯ ವರೇಗೆ ಓದಿದ್ದರು. ಅನಾರೋಗ್ಯದಿಂದಾಗಿ ಶಾಲಾ ಕಲಿಕೆಯನ್ನು ತೊರೆಯಬೇಕಾಗಿ ಬಂದಿತ್ತು. ಬಡತನವೂ ಮತ್ತೊಂದು ಕಾರಣ. ಯಕ್ಷಗಾನದತ್ತ ಆಕರ್ಷಿತರಾಗುವ ಮೊದಲೇ ಇವರು ನಾಟಕ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ನಿರ್ದೇಶಕ ಮತ್ತು ಕಲಾವಿದರಾದ ಶ್ರೀ ರಮೇಶ್ ದೇವಾಡಿಗ ಅವರು ಇದಕ್ಕೆ ಕಾರಣರು. ಅವರ ಪ್ರೇರಣೆಯಿಂದ ಕಾರ್ಕಳದ ಜ್ಯೋತಿ ಯುವಕ ಮಂಡಲದ ಮಕ್ಕಳ ನಾಟಕ ಪ್ರದರ್ಶನಗಳಲ್ಲಿ ಅಭಿನಯಿಸಲಾರಂಭಿಸಿದರು.

ಭೂಕೈಲಾಸ ನಾಟಕದ ರಾವಣನಾಗಿ ರಂಗಪ್ರವೇಶ. ಬಳಿಕ ಕೋಟಿ-ಚೆನ್ನಯ ನಾಟಕದ ಪೆರ್ಮಣ್ಣ ಬಲ್ಲಾಳನಾಗಿ. ನಂತರ ‘ಆಲಿಬಾಬಾ ಮತ್ತು ನಲುವತ್ತು ಕಳ್ಳರು’ ನಾಟಕದಲ್ಲಿ ಮೊತ್ತಮೊದಲ ಬಾರಿಗೆ ಸ್ತ್ರೀಪಾತ್ರ. ಆಕರ್ಷಕ ರೂಪವನ್ನು ಹೊಂದಿದ್ದ ಶಶಿಕಾಂತ ಶೆಟ್ಟರು ಅತ್ಯುತ್ತಮ ರೀತಿಯಲ್ಲಿ ಎಲ್ಲರೂ ಮೆಚ್ಚುವಂತೆ ಅಭಿನಯಿಸಿದ್ದರು. ಇದು ಇವರ ಕಲಾ ಬದುಕಿನ ಮೊದಲ ತಿರುವು. ಭದ್ರಬುನಾದಿಯೂ ಆಗಿತ್ತು. ಸ್ತ್ರೀಪಾತ್ರಧಾರಿಯಾಗಿ ಮುಂದುವರಿಯಬೇಕೆಂದು ಎಲ್ಲರೂ ಸಲಹೆಗಳನ್ನಿತ್ತು ಉತ್ಸಾಹವನ್ನು ತುಂಬಿದ್ದರು. ಕಲಾಸಕ್ತಿಯು ಬೆಳೆಯುತ್ತಾ ಹೋಯಿತು. ಅನೇಕ ಕಡೆ ಛದ್ಮವೇಷ ಸ್ಪರ್ಧೆಗಳಲ್ಲೂ ಭಾಗವಹಿಸಿ ಬಹುಮಾನಗಳನ್ನು ಪಡೆದರು. ತಾನು ನಿರ್ವಹಿಸುವ ಪಾತ್ರಗಳಿಗೆ ಬೇಕಾದ ವೇಷಭೂಷಣಗಳನ್ನು ಶಶಿಕಾಂತ ಶೆಟ್ಟರೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಆ ಕಲೆಯೂ ಎಳವೆಯಲ್ಲೇ ಕರಗತವಾಗಿತ್ತು.

ಜೀವನೋಪಾಯಕ್ಕಾಗಿ ಟೈಲರಿಂಗ್ ಕಲಿತು ಶ್ರೀ ದಯಾನಂದ ರಾವ್ ಅವರ ಮಾಲಕತ್ವದ ‘ಶಿವಾಜಿ ಟೈಲರ್ಸ್’ನಲ್ಲಿ ಉದ್ಯೋಗ. ಕಲಾಚಟುವಟಿಕೆಗಳಿಗೆ ದಯಾನಂದ ರಾವ್ ಅವರ ಪ್ರೋತ್ಸಾಹವೂ ಇತ್ತು. ಇದೇ ಸಂದರ್ಭದಲ್ಲಿ ಕಲಾವಿದ ಶ್ರೀ ಸತೀಶ ಮಡಿವಾಳರ ಪರಿಚಯವಾಗಿತ್ತು. ಕಾರ್ಕಳ ಮಾರಿಗುಡಿಯಲ್ಲಿ ಶ್ರೀ ಮಹಮ್ಮಾಯಿ ಮುಖ್ಯಪ್ರಾಣ ಯಕ್ಷಗಾನ ಮಂಡಳಿಯ ವತಿಯಿಂದ ನಡೆಯುತ್ತಿದ್ದ ತರಬೇತಿ ಕೇಂದ್ರದಲ್ಲಿ ಸತೀಶ ಮಡಿವಾಳರಿಂದ ತೆಂಕುತಿಟ್ಟಿನ ಹೆಜ್ಜೆಗಾರಿಕೆ ಕಲಿಕೆ. ಅವರ ಮೂಲಕವೇ ಸುರತ್ಕಲ್ಲಿನ ಶ್ರೀ ಸದಾಶಿವ ಮಹಾಗಣಪತಿ ಯಕ್ಷಗಾನ ಮಂಡಳಿಗೆ ಕಲಾವಿದನಾಗಿ ಸೇರ್ಪಡೆ. ಶ್ರೀ ದಿಲೀಪ ಸುವರ್ಣರ ಸಂಚಾಲಕತ್ವ. ಪೂರ್ವರಂಗದಲ್ಲಿ ಬಾಲಗೋಪಾಲ, ಮುಖ್ಯ ಸ್ತ್ರೀವೇಷಗಳಲ್ಲಿ ಅಭಿನಯ. ವರ್ಷಕ್ಕೆ ಈ ತಂಡದ ನಲುವತ್ತಕ್ಕಿಂತ ಹೆಚ್ಚು ಪ್ರದರ್ಶನಗಳು ನಡೆಯುತ್ತಿದ್ದವು.

ಈ ತಂಡದಲ್ಲಿ 3 ವರ್ಷ ವೇಷಗಾರಿಕೆ. ಜತೆಗೆ ಟೈಲರಿಂಗ್ ಕೆಲಸವನ್ನೂ ಮಾಡುತ್ತಿದ್ದರು. ಬಳಿಕ ಬಪ್ಪನಾಡು ಮೇಳದಲ್ಲಿ ಒಂದು ವರ್ಷ ತಿರುಗಾಟ. ಸ್ತ್ರೀವೇಷದ ಜತೆ ಪುರುಷ ಪಾತ್ರಗಳನ್ನೂ ಮಾಡುತ್ತಿದ್ದರು. ಶಶಿಪ್ರಭಾ ಪರಿಣಯದ ಮಾರ್ತಂಡತೇಜನ ಪಾತ್ರವನ್ನೂ ಮಾಡಿದ್ದರು. ಸಸಿಹಿತ್ಲು ಮೇಳ ಆರಂಭವಾದ ಸದ್ರಿ ಮೇಳದಲ್ಲಿ ಒಂದು ವರ್ಷ ತಿರುಗಾಟ. ಶ್ರೀ ರಮೇಶ ಕುಲಶೇಖರ ಅವರ ಜತೆ ವೇಷಗಾರಿಕೆ. ಈ ಸಂದರ್ಭದಲ್ಲಿ ಟೈಲರಿಂಗ್ ಕೆಲಸದಿಂದ ದೂರ ಉಳಿದು ಬದುಕಿಗಾಗಿ ಯಕ್ಷಗಾನವನ್ನೇ ಆಯ್ಕೆ ಮಾಡಿಕೊಂಡಿದ್ದರು.

ವರ್ಷಕ್ಕೆ 60ಕ್ಕಿಂತಲೂ ಹೆಚ್ಚು ಆಟಗಳು ನಡೆಯುತ್ತಿತ್ತು. ಮಳೆಗಾಲದಲ್ಲಿ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಳದ ಚಿಕ್ಕಮೇಳದಲ್ಲಿ ತಿರುಗಾಟ. ‘‘ಇದು ನಟನೆ ಮತ್ತು ಮಾತುಗಾರಿಕೆಯಲ್ಲಿ ಪಕ್ವತೆಯನ್ನು ಸಾಧಿಸಲು ಅನುಕೂಲವಾಗಿತ್ತು’’ ಎಂದು ಹೇಳುವ ಮೂಲಕ ಚಿಕ್ಕಮೇಳಗಳನ್ನು ಆಕ್ಷೇಪಿಸುವವರಿಗೆ ಪರೋಕ್ಷವಾಗಿ ಶಶಿಕಾಂತರು ಉತ್ತರ ನೀಡುತ್ತಾರೆ. ಜತೆಗೆ ಈ ಅವಕಾಶವನ್ನು ಸಮಯ ಕಳೆಯಲು, ಸಂಪಾದನೆಯ ದೃಷ್ಠಿಯಿಂದ ನೋಡದೆ, ಕಲಿಕೆಗಾಗಿಯೇ ಬಳಸಿಕೊಳ್ಳಿರಿ ಎಂಬ ಎಚ್ಚರಿಕೆಯನ್ನೂ ಚಿಕ್ಕಮೇಳದ ಕಲಾವಿದರಿಗೂ ನೀಡುತ್ತಾರೆ.

1999-2000ನೇ ಸಾಲಿನಲ್ಲಿ ಮಂದರ್ತಿಯ ಮೂರನೇ ಮೇಳ ಆರಂಭವಾದಾಗ ಹೆಚ್ಚುವರಿ ಸ್ತ್ರೀವೇಷಧಾರಿಯಾಗಿ ಶಶಿಕಾಂತರು ಸೇರಿಕೊಂಡರು. ಬಡಗಿನ ತಿರುಗಾಟ, ಕುಣಿತದ ಮಾಹಿತಿಯೇ ಆಗ ಇದ್ದಿರಲಿಲ್ಲ. ಕೇವಲ ಆಕರ್ಷಣೆಯಿಂದಲೇ ಬಡಗಿನ ಮೇಳದಲ್ಲಿ ಕಲಾಸೇವೆಯನ್ನು ಮಾಡುವ ಮನ ಮಾಡಿದ್ದರು. ಶಿರಳಗಿ ಭಾಸ್ಕರ ಜೋಷಿ ಮತ್ತು ರಾಮ ನಾೈರಿ ಅವರ ವೇಷಗಳನ್ನು ನೋಡಿ ಆಕರ್ಷಿತರಾದುದೇ ಇದಕ್ಕೆ ಕಾರಣ. ಅವರ ಅಭಿನಯ ಸಾಮರ್ಥ್ಯಕ್ಕೆ  ಮಾರುಹೋಗಿದ್ದರು.

ಮಂದರ್ತಿ ಮೇಳದ ಸಂದರ್ಶನಕ್ಕೆ ಹೋದಾಗ ನಡೆದ ಆಟ. ಸುಧನ್ವ ಮೋಕ್ಷ ಪ್ರಸಂಗದ ಕುವಲೆಯಾಗಿ ಅಭಿನಯಿಸಿದ್ದರು. ಈ ಪಾತ್ರವನ್ನು ನಿರ್ವಹಿಸುವ ರೀತಿ, ಸಂಭಾಷಣೆಗಳನ್ನು ಕಲಾವಿದ ಶ್ರೀ ಸಂತೋಷ ಕುಮಾರ ಹಿಲಿಯಾಣ ಅವರು ಹೇಳಿಯೂ ಕೊಟ್ಟಿದ್ದರು. ಪ್ರದರ್ಶನ ಮುಗಿದ ಬಳಿಕ ಪ್ರೇಕ್ಷಕರು ಕುವಲೆ ಪಾತ್ರವನ್ನು ಮಾಡಿದವನಿಂದಲೇ ಪ್ರಭಾವತಿ ಪಾತ್ರವನ್ನು ಮಾಡಿಸಬಹುದು ಎಂದಿದ್ದರಂತೆ. ಕೆಲ ವರ್ಷಗಳ ನಂತರ ಶಿವಮೊಗ್ಗದಲ್ಲಿ ನಡೆದ 24 ಗಂಟೆಯ ನಿರಂತರ ಯಕ್ಷಗಾನ ಪ್ರದರ್ಶನ ‘ಕಾಳಗೋತ್ಸವ’ದಲ್ಲಿ ಮತ್ತೆ ಕುವಲೆ ಪಾತ್ರವನ್ನು ಮಾಡಿದ್ದರು. ಅಂದು ಬಳ್ಕೂರು ಕೃಷ್ಣ ಯಾಜಿ ಅವರು ಸುಧನ್ವನಾಗಿ ಅಭಿನಯಿಸಿದ್ದರು. ಚಿಟ್ಟಾಣಿಯವರ ಅರ್ಜುನ. ಅದನ್ನು ನೋಡಿ ಮೆಚ್ಚಿದ ಕೆರೆಮನೆ ಶ್ರೀ ಶಂಭು ಹೆಗಡೆಯವರು ಮತ್ತೆ ಕಂಡಾಗಲೆಲ್ಲಾ ಶಶಿಕಾಂತರನ್ನು ಕುವಲೆ ಎಂದೇ ಕರೆಯುತ್ತಿದ್ದರಂತೆ.

ಹೊಸ್ತೋಟ ಮಂಜುನಾಥ ಭಾಗವತರೂ, ನೆಬ್ಬೂರು ನಾರಾಯಣ ಭಾಗವತರೂ ಹಾಗೆಯೇ ಕರೆಯುತ್ತಿದ್ದರಂತೆ. ಮಂದಾರ್ತಿ ಮೇಳದಲ್ಲಿ ಸ್ತ್ರೀಪಾತ್ರಧಾರಿಯಾಗಿದ್ದ ಬೇಳಿಂಜೆ ಶ್ರೀ ಸುಂದರ ನಾಯ್ಕರು ಪ್ರೋತ್ಸಾಹವನ್ನು ನೀಡಿದ್ದರು. ಯಕ್ಷಗಾನ ಕುಟುಂಬದ ಹಿನ್ನೆಲೆಯುಳ್ಳ ಬೇಳಿಂಜೆ ಅವರದು ಅತ್ಯುತ್ತಮ ಹೆಜ್ಜೆಗಾರಿಕೆಯೆಂದೂ, ಅವರ ಮಾರ್ಗದರ್ಶನ ಸಿಕ್ಕಿದ್ದು ಅನುಕೂಲವಾಗಿತ್ತೆಂದೂ ಶಶಿಕಾಂತರ ಅಭಿಪ್ರಾಯ. ಹೆಚ್ಚುವರಿ ಸ್ತ್ರೀವೇಷಧಾರಿಯಾದರೂ ಸ್ವಯಂಪ್ರತಿಭೆ ಮತ್ತು ಕಲಾಮಾತೆಯ ಅನುಗ್ರಹದಿಂದ ಒಳ್ಳೊಳ್ಳೆಯ ಪಾತ್ರಗಳು ಸಿಕ್ಕಿದ್ದವು. ಸದಾ ಅಧ್ಯಯನಶೀಲರಾದ ಇವರು ಸಿಕ್ಕ ಅವಕಾಶಗಳನ್ನು ಸರಿಯಾಗಿಯೇ ಉಪಯೋಗಿಸಿಕೊಂಡಿದ್ದರು. ಕಲಿಕಾಸಕ್ತಿ, ಸದಾ ಓದು, ಹಿರಿಯ ಕಲಾವಿದರ ನಿರ್ವಹಣೆಯನ್ನು ನೋಡುತ್ತಾ ಬೆಳೆದರು.

ಅನಿವಾರ್ಯ ಸಂದರ್ಭದಲ್ಲಿ ಮಂದರ್ತಿಯ ಮತ್ತೊಂದು ಮೇಳಕ್ಕೂ ಆಡಳಿತದ ಅಪ್ಪಣೆಯಂತೆ ಹೋಗಬೇಕಾಗಿತ್ತು. ಆಗ ಖ್ಯಾತ ಸ್ತ್ರೀಪಾತ್ರಧಾರಿ, ಗರತಿವೇಷಗಳ ಸರದಾರ ಎಂದು ಪ್ರಸಿದ್ಧರಾದ ಶ್ರೀ ಎಂ. ಎ. ನಾಯ್ಕರ ಮಾರ್ಗದರ್ಶನವೂ ಸಿಕ್ಕಿತ್ತು. 3ನೇ ಮೇಳದಲ್ಲಿ 1 ವರ್ಷ ತಿರುಗಾಟ. ಮುಂದಿನ ವರ್ಷ, 2000-2001ರಲ್ಲಿ ಮಂದಾರ್ತಿ 4ನೇ ಮೇಳ ಆರಂಭವಾಗಿತ್ತು. ಶಶಿಕಾಂತ ಶೆಟ್ಟರಿಗೆ 2ನೇ ಸ್ತ್ರೀವೇಷಧಾರಿಯಾಗಿ ಭಡ್ತಿಯೂ ದೊರಕಿತ್ತು. 4ನೇ ಮೇಳದಲ್ಲಿ 3 ವರ್ಷ ತಿರುಗಾಟ. ಮಂದಾರ್ತಿ ಮಹಾತಾಯಿಯ ಅನುಗ್ರಹದಿಂದ ಸದರಿ ಮೇಳದಲ್ಲಿ ಒಟ್ಟು 4 ವರ್ಷಗಳ ತಿರುಗಾಟ.

ಸತತ ಪರಿಶ್ರಮದಿಂದ ಕ್ಷಿಪ್ರಾತಿಕ್ಷಿಪ್ರ ಬೆಳೆದು ಕಾಣಿಸಿಕೊಂಡ ಕಲಾವಿದರಿವರು. ಕೇಕಯ ನಂದಿನಿ ಪ್ರಸಂಗದ ಕಲಹ ಮತ್ತು ಕೈಕೇಯಿ ಪಾತ್ರಗಳು ಹೆಸರು ತಂದುಕೊಟ್ಟಿತ್ತು. ಬಡಗಿನ ಹೆಜ್ಜೆಗಾರಿಕೆ ಕಲಿಯದೆ ಮೇಳಕ್ಕೆ ಹೋಗಿದ್ದರೂ ಇಂತಹ ಪಾತ್ರಗಳನ್ನು ಮಾಡುವಷ್ಟು ಕ್ಷಿಪ್ರ ಬೆಳವಣಿಗೆ ಇವರದು. ಕಲಾವಿದರಾದ ಇಟಗಿ ಮಹಾಬಲೇಶ್ವರ ಭಟ್ಟರು ಸನ್ಮಿತ್ರರಾಗಿ, ಒಡನಾಡಿಯಾಗಿ ಸಹಕರಿಸಿದ್ದರು. ಇಬ್ಬರೂ ಭಾಗವತರಿಂದ ಪ್ರಸಂಗ ಪುಸ್ತಕಗಳನ್ನು ಕೇಳಿ ಮಧ್ಯಾಹ್ನದ ವರೇಗೆ ಅಧ್ಯಯನ ಮಾಡುತ್ತಿದ್ದರು. ನಂತರವೇ ನಿದ್ರಾಂಗನೆಯ ವಶವಾಗುತ್ತಿದ್ದರು.

ಮಂದಾರ್ತಿ ಮೇಳದಲ್ಲಿ ಭಾಗವತರಾಗಿದ್ದ ಹೆರಂಜಾಲು ಶ್ರೀ ಗೋಪಾಲ ಗಾಣಿಗರು ಶಶಿಕಾಂತರ ಪ್ರತಿಭೆಯನ್ನು ಗುರುತಿಸಿದ್ದರು. ಅವರು ಸಾಲಿಗ್ರಾಮ ಮೇಳಕ್ಕೆ ಸೇರಿದ ಮೇಲೆ ಅವರ ಮೂಲಕವೇ ಶಶಿಕಾಂತರು ಸದ್ರಿ ಮೇಳಕ್ಕೆ ಸೇರಿದ್ದರು. ಆಗ ಎರಡೇ ಟೆಂಟ್ ಮೇಳ ಇದ್ದುದು. ಪೆರ್ಡೂರು ಮತ್ತು ಸಾಲಿಗ್ರಾಮ. ಹೊಸ ಸ್ತ್ರೀಪಾತ್ರಧಾರಿಗಳನೇಕರು ಮೇಳಕ್ಕೆ ಸೇರಿದ ಪರ್ವಕಾಲ ಅದು. ಹೆರಂಜಾಲು ಭಾಗವತರ ಸೂಚನೆಯಂತೆ 2003-2004ರಲ್ಲಿ ಸಾಲಿಗ್ರಾಮಕ್ಕೆ ಮೇಳಕ್ಕೆ ಸೇರಿದ ಶಶಿಕಾಂತ ಶೆಟ್ಟರು ಕಳೆದ ಹದಿನೆಂಟು ವರ್ಷಗಳಿಂದ ಶ್ರೀ ಕಿಶನ್ ಕುಮಾರ್ ಹೆಗಡೆ ಅವರ ಸಂಚಾಲಕತ್ವದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಅವರ ಜತೆ ತಿರುಗಾಟ. ಡಾ. ವೈ. ಚಂದ್ರಶೇಖರ ಶೆಟ್ಟಿ ವಿರಚಿತ ಪ್ರಸಂಗ ‘‘ಈಶ್ವರಿ ಪರಮೇಶ್ವರಿ’’ ಪ್ರಸಂಗದ ಈಶ್ವರಿ ಎಂಬ ಅತ್ತೆಯ ಪಾತ್ರ ಖ್ಯಾತಿಯನ್ನು ತಂದುಕೊಟ್ಟಿತ್ತು. ಪರಮೇಶ್ವರಿಯಾಗಿ ಯಲಗುಪ್ಪರ ಅಭಿನಯ. ಯಲಗುಪ್ಪ- ಕಾರ್ಕಳ ಜೋಡಿಯು ಖ್ಯಾತವಾಗಿ ಅವರಿಗೆ ತಾರಾಮೌಲ್ಯವನ್ನು ತಂದುಕೊಟ್ಟಿತ್ತು. ಗರತಿ, ಗಯ್ಯಾಳಿ ಪಾತ್ರದಲ್ಲಿ ಇಬ್ಬರೂ ರಂಜಿಸಿದ್ದರು.

ಈ ಜೋಡಿಯು ಅದೇ ಖ್ಯಾತಿ, ಬೇಡಿಕೆಯನ್ನು ಈಗಲೂ ಉಳಿಸಿಕೊಂಡಿದೆ. ಮೂರೇ ವರ್ಷಗಳಲ್ಲಿ ಸಾಲಿಗ್ರಾಮ ಮೇಳದ ಮುಖ್ಯ ಸ್ತ್ರೀಪಾತ್ರಧಾರಿಯಾಗಿ ಭಡ್ತಿ. ಮಳೆಗಾಲದ ಪ್ರದರ್ಶನಗಳಲ್ಲೂ ಬಡಗುತಿಟ್ಟಿನ ಹಿರಿಯ ಕಲಾವಿದರ ಜತೆ ಅಭಿನಯ. ಕೀಚಕವಧೆ ಪ್ರಸಂಗದಲ್ಲಿ ಚಿಟ್ಟಾಣಿಯವರ ಕೀಚಕನಿಗೆ ಸೈರಂಧ್ರಿಯಾಗಿ ಅಭಿನಯಿಸಿದ್ದರು. ಅಂದು ಜಲವಳ್ಳಿ ವೆಂಕಟೇಶ ರಾಯರು ವಲಲ ಪಾತ್ರವನ್ನು ಮಾಡಿದ್ದರು. ಗೋಡೆ ನಾರಾಯಣ ಹೆಗಡೆಯವರ ಬ್ರಹ್ಮನಿಗೆ ಶಾರದೆಯಾಗಿ ಅಭಿನಯಿಸುವ ಅವಕಾಶವೂ ಸಿಕ್ಕಿತ್ತು. ಅಲ್ಲದೆ ಅನೇಕ ವರ್ಷಗಳಿಂದ ಬಡಗು ತೆಂಕಿನ ಹೆಚ್ಚಿನ ಕಲಾವಿದರ ಜತೆ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಶಿಕಾಂತರು ಪ್ರತಿಯೊಂದು ಪಾತ್ರವನ್ನೂ ತನ್ನ ಕಲ್ಪನೆಯಿಂದ ಕೆತ್ತಿ ಚಿತ್ರಿಸಲು ಪ್ರಯತ್ನಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

ಸಾಲಿಗ್ರಾಮ ಮೇಳದಲ್ಲಿ ಹೆರಂಜಾಲು, ರಾಘವೇಂದ್ರ ಮಯ್ಯ, ಶಬರಾಯರು, ಹಿಲ್ಲೂರು, ಕರ್ಕಿ ಪರಮೇಶ್ವರ ಭಂಡಾರಿ, ಕೋಟ ಶಿವಾನಂದ, ಬಳ್ಕೂರು, ಯಲಗುಪ್ಪ, ಕಣ್ಣಿಮನೆ, ಹುಡುಗೋಡು, ಮಂಕಿ ಈಶ್ವರ ನಾಯ್ಕ ಮೊದಲಾದ ಹಿರಿಯ ಕಲಾವಿದರ ಒಡನಾಟ ಸಿಕ್ಕಿತ್ತು. ಶಶಿಕಾಂತ ಶೆಟ್ಟರು ದ್ವಿಪಾತ್ರದಲ್ಲಿ ಅಭಿನಯಿಸಿದ ಪ್ರಸಂಗ ಪ್ರತಿಜ್ಞಾಪಲ್ಲವಿ. ರಾಜಕುಮಾರಿ ಮತ್ತು ಬೇಡರ ಹುಡುಗಿಯ ಪಾತ್ರಗಳಲ್ಲಿ ಸ್ವಭಾವಕ್ಕನುಗುಣವಾಗಿ ಅಭಿನಯಿಸಿ ಪ್ರಸಂಗದ ಗೆಲುವಿಗೆ ಕಾರಣರಾಗಿದ್ದರು. ಶಶಿಪ್ರಭೆ, ದ್ರೌಪದಿ ಮೊದಲಾದ ಕಸೆ ಸ್ತ್ರೀವೇಷಗಳಲ್ಲೂ ಹೆಸರನ್ನು ಗಳಿಸಿದರು.

ಎಲ್ಲಾ ಸ್ತ್ರೀಪಾತ್ರಗಳ ವೇಷಭೂಷಣಗಳ ಮತ್ತು ಕುಣಿತಗಳ ಬಗೆಗೆ ಪಾತಾಳ ವೆಂಕಟ್ರಮಣ ಭಟ್ಟರಿಂದಲೂ, ಸ್ವಭಾವ ಮತ್ತು ಮಾತುಗಾರಿಕೆಯ ಬಗೆಗೆ ಕೋಳ್ಯೂರು ರಾಮಚಂದ್ರ ರಾಯರಿಂದಲೂ ಮಾರ್ಗದರ್ಶನವನ್ನು ಪಡೆದುಕೊಂಡ ಕಲಾವಿದರಿವರು. ನಾಟಕ ರಂಗದ ಜೀವನ್‍ರಾಂ ಸುಳ್ಯ, ಕೃಷ್ಣಮೂರ್ತಿ ಕವತ್ತಾರು, ಪ್ರಶಾಂತ್ ಉದ್ಯಾವರ ಇವರುಗಳಿಂದ ಯಕ್ಷಗಾನದಲ್ಲಿ ನಾಟಕೀಯತೆಯ ಸಾಧ್ಯತೆಯನ್ನು ಹೇಗೆ ಬಳಸಿಕೊಳ್ಳಬಹುದೆಂಬ ಮಾಹಿತಿಯನ್ನು ಪಡೆದಿದ್ದರು.

ಭಾವನಾತ್ಮಕ ಪಾತ್ರಗಳಾದ ಅಂಬೆ, ದಾಕ್ಷಾಯಿಣಿ, ಚಂದ್ರಮತಿ ಮೊದಲಾದ ಪಾತ್ರಗಳನ್ನು ನಿರ್ವಹಿಸುವಲ್ಲಿ ಶಶಿಕಾಂತರಿಗೆ ಎಲ್ಲಿಲ್ಲದ ಉತ್ಸಾಹ. ಬಹುತೇಕ ಭೀಷ್ಮನ ಪಾತ್ರವನ್ನು ಮಾಡುವ ಎಲ್ಲಾ ಕಲಾವಿದರ ಜತೆ ಅಂಬೆಯಾಗಿ ಅಭಿನಯಿಸಿದ್ದಾರೆ. ಹಲವಾರು ಹಿರಿಯ ಕಲಾವಿದರು, ವಿದ್ವಾಂಸರು ನೀಡಿದ ಉತ್ತಮ ವಿಚಾರಗಳನ್ನು ಅಂಬೆಯ ಪಾತ್ರನಿರ್ವಹಣೆಗೆ ಬಳಸಿಕೊಂಡಿದ್ದಾರೆ. ಒಂದು ಹಾರವಾಗಬೇಕಾದರೆ ಹಲವು ಮುತ್ತುಗಳನ್ನು ಪೋಣಿಸಬೇಕಾಗುತ್ತದೆ. ಹಾಗೆಯೇ ಎಲ್ಲರೂ ನೀಡಿದ ಒಳ್ಳೆಯ ವಾಕ್ಯಗಳೆಂಬ ಮುತ್ತುಗಳನ್ನು
ಪೋಣಿಸಿ ಶಶಿಕಾಂತರು ಅಂಬೆ ಎಂಬ ಪಾತ್ರರೂಪದ ಹಾರವನ್ನು ನಿರ್ಮಿಸಿ ನಿರ್ವಹಿಸುತ್ತಾರೆ. ಕೊರ್ಗಿ ಶ್ರೀ ವೆಂಕಟೇಶ ಉಪಾಧ್ಯಾಯರಂತವರೂ ಪೂರ್ತಿ ಆಟವನ್ನು ನೋಡಿ ಮೆಚ್ಚಿ ಆಶೀರ್ವದಿಸಿದ್ದಾರೆ.

ಅಂಬೆ ಅಗ್ನಿಪ್ರವೇಶ ಮಾಡುವ ಸಂದರ್ಭದ ಇವರ ಅಭಿನಯವು ಮೆಚ್ಚುಗೆಗೆ ಪಾತ್ರವಾಗಿತ್ತು. ಈ ವಿಚಾರದ ಬಗ್ಗೆ ಜನರು ಈಗಲೂ ವಿಮರ್ಶೆ ಮಾಡುತ್ತಾರೆ. ಪ್ರಶಂಸೆಯಾಗಲೀ ಟೀಕೆಯಾಗಲೀ, ಕಲಾವಿದನ ಅಭಿನಯವು ಜೀವಂತವಾಗಿರುವುದಕ್ಕೆ ಸಾಕ್ಷಿಯೇ ಆಗಿದೆ. ನಾಟಕೀಯ ಶೈಲಿಯನ್ನು ಸಂದರ್ಭಾನುಸಾರವಾಗಿ ಬಳಸಿಕೊಂಡರೆ ಪ್ರಭಾವಶಾಲಿಯಾಗಿ ಪಾತ್ರಗಳನ್ನು ಪರಂಪರೆಗೆ ಧಕ್ಕೆ ಬಾರದಂತೆ ನಿರ್ವಹಿಸಬಹುದು. ಸತತ ಅಭ್ಯಾಸಿಯಾಗಿ ಕಲಾವಿದರು ತಮ್ಮ ಗರಿಷ್ಠ ಪ್ರಯತ್ನವನ್ನು ಮಾಡಲೇಬೇಕು. ನಾವು ಚಿತ್ರಿಸುವ ಪಾತ್ರವು ಜೀವಂತವಾಗಿದ್ದರೆ ಮಾತ್ರ ಕಲಾವಿದರೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತಾರೆ. ಕಲಾವಿದರೇ ಕಾಣಿಸಲು ಹೊರಟರೆ ಪಾತ್ರವು ಸಾಯುತ್ತದೆ. ಪ್ರದರ್ಶನವೂ ಸೋಲುತ್ತದೆ. ಪಾತ್ರದ ಜೀವನಾಡಿಯನ್ನು ತಿಳಿದು ಅಭಿನಯಿಸಬೇಕು. ಎಲ್ಲಿ, ಯಾವ ಸಂದರ್ಭದಲ್ಲಿ ಹೇಗೆ ಕೆಲಸ ಮಾಡಬೇಕು, ಯಾವ ಪದ್ಯಕ್ಕೆ ಕೆಲಸ ಮಾಡಬೇಕುಎಂಬ ಪ್ರಜ್ಞೆಯೂ ಬೇಕಾಗುತ್ತದೆ ಎಂಬ ವಿಚಾರಗಳನ್ನು ಶಶಿಕಾಂತರು ಹೇಳುತ್ತಾರೆ.

ಪ್ರಸ್ತುತ ಬಹು ಬೇಡಿಕೆ ಸ್ತ್ರೀಪಾತ್ರಧಾರಿಯಾದ ಇವರನ್ನು ಅನೇಕ ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. ಬೆಂಗಳೂರಿನ ಕೆಂಪೇಗೌಡ ಪ್ರಶಸ್ತಿ (ವೃತ್ತಿ ಕಲಾವಿದರಿಗೆ ಮೊತ್ತ ಸಿಕ್ಕಿದ ಮೊತ್ತಮೊದಲ ಪ್ರಶಸ್ತಿ), ಡಾ| ಶಾಂತಾರಾಮ್ ಪುರಸ್ಕಾರ, ಶ್ರೀರಾಮ ವಿಠಲ ಪ್ರಶಸ್ತಿ, ಶ್ರೀ ಕುಂದೇಶ್ವರ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಸುಧನ್ವ ಮೋಕ್ಷ ಪ್ರಸಂಗದಲ್ಲಿ ಪ್ರಭಾವತಿಯಾಗಿಯೂ, ಸುಧನ್ವನಾಗಿಯೂ, ಕರ್ಣಪರ್ವ ಶಲ್ಯನಾಗಿಯೂ ಪಾತ್ರಗಳನ್ನು ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ತೆಂಕುಬಡಗಿನ ಕೂಡಾಟ. ಗೋವಿಂದ ಭಟ್ಟರ ಇಂದ್ರಜಿತುವಿಗೆ ಲಕ್ಷ್ಮಣನಾಗಿ ಇವರು ಅಭಿನಯಿಸಿದ್ದನ್ನು ನೋಡಿದ ನೆನಪು ನನಗೆ. ಶ್ರೀ ಶಶಿಕಾಂತ್ ಶೆಟ್ಟಿ ಅವರು ಕಳೆದ ಕೆಲವು ವರ್ಷಗಳಿಂದ ತಾಳಮದ್ದಳೆಯಲ್ಲಿ ಅರ್ಥಧಾರಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. 

ಟೈಲರಿಂಗ್ ಕಲಿತುದು ಇವರ ವ್ಯವಹಾರಕ್ಕೂ ಅನುಕೂಲವಾಗಿತ್ತು. ಯಕ್ಷಗಾನ ಉಡುಗೆಗಳನ್ನು ಸಿದ್ಧಗೊಳಿಸಿ ಕೆಲವು ಮೇಳಗಳಿಗೆ ಒದಗಿಸಿಕೊಟ್ಟಿದ್ದಾರೆ. ಶ್ರೀಮತಿ ದೇವಿಕಾ ಅವರು ಪತಿಯ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. 2008ರಲ್ಲಿ ದೇವಿಕಾ ಅವರ ಜತೆ ವಿವಾಹ. ಶ್ರೀ ಶಶಿಕಾಂತ ಶೆಟ್ಟಿ ದೇವಿಕಾ ದಂಪತಿಗಳಿಗೆ ಇಬ್ಬರು ಮಕ್ಕಳು. ಹಿರಿಯ ಪುತ್ರ ಮಾ| ಶಿವರಂಜನ್ 6ನೇ ತರಗತಿ ವಿದ್ಯಾರ್ಥಿ. ನಾಟ್ಯ ಕಲಿತು ವೇಷ ಮಾಡುತ್ತಾನೆ. ಕಿರಿಯ ಪುತ್ರ ಮಾ| ಪ್ರಿಯದರ್ಶನ್ ಒಂದನೇ ತರಗತಿಯಲ್ಲಿ ಓದುತ್ತಿದ್ದಾನೆ. ಶ್ರೀ ಶಶಿಕಾಂತ ಶೆಟ್ಟರು ದುಬಾೈ, ಮಸ್ಕತ್, ಕುವೈಟ್‍ಗಳಲ್ಲಿ ನಡೆದ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ಇವರಿಂದ ಬಹಳಷ್ಟು ಕಲಾಸೇವೆಯು ನಡೆಯಲಿ. ಪ್ರತಿಭಾವಂತ ಸ್ತ್ರೀಪಾತ್ರಧಾರಿಯಾದ ಕಾರ್ಕಳ ಶ್ರೀ ಶಶಿಕಾಂತ ಶೆಟ್ಟರಿಗೆ ಕಲಾಭಿಮಾನಿಗಳೆಲ್ಲರ ಪರವಾಗಿ ಶುಭಾಶಯಗಳು.

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಶಂಕರ ಭಾಗವತ ಯಲ್ಲಾಪುರ – ಬಡಗುತಿಟ್ಟಿನ ಅನುಭವೀ ನಾದೋಪಾಸಕ

ಶ್ರೀ ಶಂಕರ ಭಾಗವತ ಯಲ್ಲಾಪುರ ಅವರು ಬಡಗುತಿಟ್ಟಿನ ಹಿರಿಯ ಮದ್ದಳೆಗಾರರು. ಯಕ್ಷಗಾನದ ಅನುಭವೀ ನಾದೋಪಾಸಕರು. ಸುಮಾರು ನಲುವತ್ತೆಂಟು ವರ್ಷಗಳಿಂದ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಶಿರಸಿಯಲ್ಲಿ
ನಾದಶಂಕರ ಕಲಾಶಾಲೆಯನ್ನು ನಡೆಸುತ್ತಾ ಯಕ್ಷಗಾನ ಮದ್ದಳೆಗಾರಿಕೆ ಮತ್ತು ತಬಲಾವಾದನದ ತರಬೇತಿಯನ್ನು ಕಲಿಕಾಸಕ್ತರಿಗೆ ಮಾಡುತ್ತಿದ್ದಾರೆ. ಕಲಾಬದುಕಿನುದ್ದಕ್ಕೂ ನೆಬ್ಬೂರು, ಉಪ್ಪೂರರು, ಕಡತೋಕಾ ಮಂಜುನಾಥ
ಭಾಗವತ, ಕಡತೋಕಾ ಕೃಷ್ಣ ಭಾಗವತ, ನರಸಿಂಹದಾಸ ಭಾಗವತ, ಕಡತೋಕಾ ಲಕ್ಷ್ಮೀನಾರಾಯಣ ಭಾಗವತ, ಕಾಳಿಂಗ ನಾವಡ, ಧಾರೇಶ್ವರ, ಕೊಳಗಿ ಕೇಶವ ಹೆಗಡೆ, ವಿದ್ವಾನ್ ಗಣಪತಿ ಭಟ್ಟರು ಮೊದಲಾದವರ ಭಾಗವತಿಕೆಗೆ ಮದ್ದಳೆ ನುಡಿಸಿದ ಅನುಭವಿಗಳು. ತೆಂಕುತಿಟ್ಟು ಯಕ್ಷಗಾನದ ಗಾಯಕರಾದ ಶ್ರೀ ದಿನೇಶ್ ಅಮ್ಮಣ್ಣಾಯ ಮತ್ತು ಶ್ರೀ ರವಿಚಂದ್ರ ಕನ್ನಡಿಕಟ್ಟೆ ಅವರ ಹಾಡುಗಾರಿಕೆಗೂ ಸಾಥಿಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಬಡಗುತಿಟ್ಟಿನ ಅನೇಕ ಯುವ ಭಾಗವತರುಗಳ ಜತೆಗೂ ಪ್ರದರ್ಶನಗಳಲ್ಲಿ ಮದ್ದಳೆಗಾರರಾಗಿ ಸಹಕರಿಸುತ್ತಿದ್ದಾರೆ. ಬಡಗುತಿಟ್ಟಿನ ಹಿರಿಯ ಮದ್ದಳೆಗಾರರಾದ ತಿಮ್ಮಪ್ಪ ನಾೈಕ, ಗುಡಿಗಾರರು, ಕಿನ್ನೀರು ನಾರಾಯಣ ಹೆಗಡೆ, ಕಟ್ಟೆ ಶ್ರೀನಿವಾಸ ಆಚಾರ್ಯ, ಕೋಟ ಮಹಾಬಲ ಕಾರಂತ ಮೊದಲಾದವರೊಂದಿಗೆ ಸಹಕಲಾವಿದನಾಗಿ ಪಳಗಿದವರು. ಅಲ್ಲದೆ ಅನೇಕ ಯುವ ಕಲಾವಿದರೊಂದಿಗೆ, ಹಿರಿಯನಾಗಿ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ.

ತೆಂಕುತಿಟ್ಟಿನ ಮದ್ದಳೆಗಾರರಾದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ದೇಲಂತಮಜಲು, ಕೃಷ್ಣಪ್ರಕಾಶ ಉಳಿತ್ತಾಯ ಮೊದಲಾದವರೊಂದಿಗೂ ನುಡಿಸಾಣಿಕೆಯಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಯಲ್ಲಾಪುರ ಶಂಕರ ಭಾಗವತರ ಅನೇಕ ಶಿಷ್ಯಂದಿರು ಇಂದು ಉದಯೋನ್ಮುಖ ಮದ್ದಳೆಗಾರರಾಗಿ ಬಡಗುತಿಟ್ಟು ಯಕ್ಷಗಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀ ಶಂಕರ ಭಾಗವತರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿಸ್ತುಮುಡಿ ಗ್ರಾಮ. ಶ್ರೀ ರಾಮಚಂದ್ರ ಭಾಗವತ ಮತ್ತು ಶ್ರೀಮತಿ ಕಮಲಾ ಆರ್. ಭಾಗವತ ದಂಪತಿಗಳ ಪುತ್ರನಾಗಿ 1955ನೇ ಇಸವಿ ಒಕ್ಟೋಬರ್ ಒಂದನೇ ತಾರೀಕಿನಂದು ಜನನ. ಆನಗೋಡ ಶಾಲೆಯಲ್ಲಿ ಏಳನೇ ತರಗತಿ ವರೆಗೆ ವಿದ್ಯಾರ್ಜನೆ. ಇವರು ಜನಿಸಿದ್ದು ಯಕ್ಷಗಾನ ಹಿನ್ನೆಲೆಯುಳ್ಳ ಕುಟುಂಬದಲ್ಲಿ. ತಂದೆಯವರು ಮದ್ದಳೆವಾದಕರಾಗಿದ್ದರು. ಚಿಕ್ಕಪ್ಪ ನಾರಾಯಣ
ಭಾಗವತರೂ ಮದ್ದಳೆಗಾರರಾಗಿದ್ದರು. ಸುಮಾರು ನಲುವತ್ತೈದು ಸದಸ್ಯರಿದ್ದ ಕೂಡುಕುಟುಂಬ ಇವರದು. ಶಂಕರ ಭಾಗವತರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ತಾನೊಬ್ಬ ಮದ್ದಳೆಗಾರನಾಗಬೇಕೆಂಬ ಆಸೆಯೂ
ಹುಟ್ಟಿಕೊಂಡಿತ್ತು. ಬಾಲಕನಾಗಿದ್ದಾಗಲೇ ವಾದನ ಕಲೆಯತ್ತ ಆಕರ್ಷಿತರಾಗಿದ್ದರು. ಸರಿಯಾಗಿ ಕಲಿಯುವ ಮೊದಲೇ ಸೊಗಸಾಗಿ ಮದ್ದಳೆ ಬಾರಿಸುತ್ತಿದ್ದರು. ಮದ್ದಳೆ ನುಡಿಸುವ ಕಲೆಯು ಇವರಿಗೆ ರಕ್ತಗತವಾಗಿಯೇ ಒಲಿದಿತ್ತು. ಪ್ರದರ್ಶನಗಳನ್ನು ನೋಡುತ್ತಿದ್ದು, ಉಪ್ಪೂರ ಭಾಗವತರ ಹಾಡಿಗೆ ಸಾಥಿಯಾಗಿದ್ದ ತಿಮ್ಮಪ್ಪ ನಾೈಕರ ವಾದನ ಕುಶಲತೆಗೆ ಮನಸೋತಿದ್ದರು. ಶಂಕರ ಭಾಗವತರು ತನ್ನ ಮನೆಯಲ್ಲಿಯೇ ಕುಳಿತು ಮದ್ದಳೆ ನುಡಿಸುವುದನ್ನು ಅವರ ಕುಟುಂಬದ ಸದಸ್ಯನೇ ಆಗಿದ್ದ ಕಬ್ಬಿನಗದ್ದೆ ಮಹಾಬಲ ಭಾಗವತರು ಗಮನಿಸಿದ್ದರು. ಅವರೂ ಮದ್ದಳೆಗಾರರಾಗಿದ್ದರು. ಮನೆಯಲ್ಲಿಯೇ ಶಂಕರ ಭಾಗವತರಿಗೆ ಮಹಾಬಲ ಭಾಗವತರು ನುಡಿಸಾಣಿಕೆಯ ತರಬೇತಿಯನ್ನೂ ನೀಡಿದ್ದರು.

ಒಮ್ಮೆ ಗೋಕರ್ಣ ಕ್ಷೇತ್ರವನ್ನು ಸಂದರ್ಶಿಸಲು ಶಂಕರ ಭಾಗವತರು ತೆರಳಿದ್ದರು. ಕಟ್ಟೆಯಲ್ಲಿ ಇಬ್ಬರು ಮಾತನಾಡುತ್ತಾ ಕುಳಿತಿರುವುದನ್ನು ನೋಡಿದ್ದರು. ಶಂಕರ ಭಾಗವತರಿಗೆ ಅವರನ್ನು ಎಲ್ಲೋ ನೋಡಿದ ನೆನಪು. ಹತ್ತಿರ ಹೋಗಿ ಮಾತನಾಡಿದಾಗ ಅವರಾರೆಂದು ತಿಳಿದು ಸಂತೋಷವಾಗಿತ್ತು. ಆ ಕಟ್ಟೆಯಲ್ಲಿ ಕುಳಿತಿದ್ದವರು ಬೇರಾರೂ ಅಲ್ಲ. ಖ್ಯಾತ ಮದ್ದಳೆಗಾರ ತಿಮ್ಮಪ್ಪ ನಾೈಕರು ಮತ್ತು ಪ್ರಸಿದ್ಧ ಕಲಾವಿದರಾದ ಏಕ್ಟರ್ ಗಜಾನನ ಜೋಷಿಯವರು. ಮದ್ದಳೆ ಕಲಿಸಬೇಕು ಎಂದು ಕೇಳಿಕೊಂಡಾಗ ತಿಮ್ಮಪ್ಪ ನಾೈಕರು, ಹಂಗಾರಕಟ್ಟೆಯ ತರಬೇತಿ ಕೇಂದ್ರಕ್ಕೆ ಬರುವಂತೆ ಸೂಚಿಸಿದ್ದರು. ಹಂಗಾರಕಟ್ಟೆ ತರಬೇತಿ ಕೇಂದ್ರದ ಸಂದರ್ಶನದಲ್ಲಿ ಶಂಕರ ಭಾಗವತರು ಉತ್ತೀರ್ಣರಾಗಿದ್ದರು. ಬೆಳ್ಳಂಜೆ ತಿಮ್ಮಪ್ಪ ನಾೈಕರ ಶಿಷ್ಯನಾಗಿ ಮದ್ದಳೆ ಕಲಿತರು. ಕವ್ವಾಳೆ ಗಣಪತಿ ಭಾಗವತರು ಕಲಿಕಾ ಕೇಂದ್ರದಲ್ಲಿ ಇವರ
ಸಹಪಾಠಿಯಾಗಿದ್ದರು. ಕವ್ವಾಳೆ ಅವರು ಬಡಗುತಿಟ್ಟಿನ ವಾದನಕ್ರಮದಲ್ಲಿ ನುರಿತು ಹೆಸರನ್ನು ಗಳಿಸಿದವರು. ಶಂಕರ ಭಾಗವತರ ಮೊದಲ ತಿರುಗಾಟ ಕೆರೆಮನೆ ಶಿವರಾಮ ಹೆಗಡೆ ಅವರ ಕೆರೆಮನೆ ಮೇಳದಲ್ಲಿ. ನೆಬ್ಬೂರು, ಕೆಪ್ಪೆಕೆರೆ ಸುಬ್ರಾಯ ಭಾಗವತ, ಕೊಗ್ಗ ಆಚಾರಿ ಕೊಲ್ಲೂರು, ಕೆರೆಮನೆಯ ಶಿವರಾಮ ಹೆಗಡೆ, ಶಂಭು ಹೆಗಡೆ, ಮಹಾಬಲ ಹೆಗಡೆ, ಮೂರೂರು ದೇವರು ಹೆಗಡೆ, ಕೊಕ್ಕಡ ಈಶ್ವರ ಭಟ್ ಮೊದಲಾದ ಶ್ರೇಷ್ಠ ಕಲಾವಿದರ ಒಡನಾಟವು ದೊರಕಿತ್ತು. ಮೊದಲ ತಿರುಗಾಟದ ನಂತರ ಮಳೆಗಾಲದಲ್ಲಿ ಮತ್ತೆ ತರಬೇತಿಗಾಗಿ ಹಂಗಾರಕಟ್ಟೆ ಕೇಂದ್ರಕ್ಕೆ ತೆರಳಿದ್ದರು. ಮುಂದಿನ ವರ್ಷ ಅಮೃತೇಶ್ವರೀ ಮೇಳದಲ್ಲಿ ತಿರುಗಾಟ. ನಾರ್ಣಪ್ಪ ಉಪ್ಪೂರ ಮತ್ತು ಕೆಪ್ಪೆಕೆರೆ ಅವರುಗಳ ಭಾಗವತಿಕೆ. ದುರ್ಗಪ್ಪ ಗುಡಿಗಾರರ ಜತೆ ತಿರುಗಾಟ. ಏಕ್ಟರ್ ಜೋಷಿ, ಮಲ್ಪೆ ಶ್ರೀ ವಾಸುದೇವ ಸಾಮಗರು, ಎಂ. ಎ. ನಾಯ್ಕ, ಕೋಟ ವೈಕುಂಠ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಸುರುಗಿಕಟ್ಟೆ ಹಿರಿಯ, ಸಾಲ್ಕೋಡು ಗಣಪತಿ ಹೆಗಡೆ (ಹಾಸ್ಯಗಾರರು), ನಗರ ಜಗನ್ನಾಥ ಶೆಟ್ಟಿ ಮೊದಲಾದವರ ಒಡನಾಟ. ಅಮೃತೇಶ್ವರೀ ಮೇಳದಲ್ಲಿ 2 ವರ್ಷಗಳ ತಿರುಗಾಟ.

ಮಳೆಗಾಲದಲ್ಲಿ ತರಬೇತಿಗಾಗಿ ಮತ್ತೆ ಹಂಗಾರಕಟ್ಟೆ ಕಲಿಕಾಕೇಂದ್ರಕ್ಕೆ. ಅದೇ ಸಂದರ್ಭದಲ್ಲಿ ಕಾಳಿಂಗ ನಾವಡರ ಗೆಳೆತನವಾಗಿತ್ತು. ಆಗ ನಾವಡರು ಅಮೃತೇಶ್ವರೀ ಮೇಳದಲ್ಲಿ ಸಂಗೀತ ಭಾಗವತರಾಗಿದ್ದರು. ಮುಂದೆ ಕಾಳಿಂಗ ನಾವಡರ ಜತೆ ಸಾಲಿಗ್ರಾಮ ಮೇಳ ಸೇರಿದ್ದರು. ಹದಿನೈದು ವರ್ಷಗಳ ಕಾಲ ಕಾಳಿಂಗ ನಾವಡರಿಗೆ ಜತೆಯಾಗಿ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ. ಕಿಶನ್ ಹೆಗ್ಡೆಯವರ ನೇತೃತ್ವದ ಸಾಲಿಗ್ರಾಮ ಮೇಳದಲ್ಲಿ ಶ್ರೀ ನಾರಾಯಣ ಶಬರಾಯರ ಜತೆಗೂ 4 ವರ್ಷ ತಿರುಗಾಟ ನಡೆಸಿದ್ದರು. ಶಿರಸಿಯ ಪಂಚಲಿಂಗೇಶ್ವರ ಮತ್ತು ಮಾರಿಕಾಂಬಾ ಮೇಳಗಳಲ್ಲಿ ಕೆಪ್ಪೆಕೆರೆ ಸುಬ್ರಾಯ ಭಾಗವತರು ಮತ್ತು ಕೆ. ಪಿ. ಹೆಗಡೆಯವರ ಜತೆ 5 ವರ್ಷಗಳ ಕಲಾಸೇವೆ. ಶಂಕರ ಭಾಗವತರಿಗೆ ಖ್ಯಾತ ಕಲಾವಿದ ಪಿ. ವಿ. ಹಾಸ್ಯಗಾರರ ಒಡನಾಟವೂ ದೊರಕಿತ್ತು. ಪೆರ್ಡೂರು ಮೇಳದಲ್ಲಿ ಶ್ರೀ ಸುಬ್ರಹ್ಮಣ್ಯ ಧಾರೇಶ್ವರರ ಜತೆ ಒಂದು ವರ್ಷ ತಿರುಗಾಟ. ಬಳಿಕ ಶಂಕರ ಭಾಗವತರು ಮೇಳದ ತಿರುಗಾಟದಿಂದ ದೂರ ಉಳಿದಿದ್ದರು. ಸಾಲಿಗ್ರಾಮ ಮೇಳದ ತಿರುಗಾಟದ ವೇಳೆಯಲ್ಲಿ ಶ್ರೀ ಜಿ. ಆರ್. ಹೆಗಡೆ, ಮತ್ತಿಗಾರ ದೊಡ್ಮನೆ ಅವರಿಂದ ತಬಲಾ ಕಲಿತಿದ್ದರು. ತಬಲಾ ಕಲಿಕೆಯು ಯಕ್ಷಗಾನ ಮದ್ದಳೆವಾದನಕ್ಕೆ ಅನುಕೂಲವಾಗಿತ್ತೆಂಬುದು ಶಂಕರ ಭಾಗವತರು ಅನುಭವಿಸಿದ ಸತ್ಯ. ‘‘ಮದ್ದಳೆಗಾರರಿಗೆ ಪ್ರಸಂಗಜ್ಞಾನವು ಬೇಕು. ಕಥೆಯ ನಡೆಯು ತಿಳಿದಿರಬೇಕು. ಮಾತನಾಡುವುದೂ ಒಂದು ಕಲೆ. ಎಲ್ಲಿ ಪ್ರತಿಕ್ರಯಿಸಬೇಕು ಎಂದು ಗೊತ್ತಿಲ್ಲದಿದ್ದರೆ ಅವನು ಮಾತುಗಾರನಾಗಲು ಅಸಾಧ್ಯ. ಮೃದಂಗವಾದಕನಿಗೂ ಭಾಗವತನ ಹಾಡಿಗೆ, ವೇಷಧಾರಿಗಳ ಕ್ರಿಯೆ ಮತ್ತು ಸಂಭಾಷಣೆಗಳಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದು ತಿಳಿದಿರಬೇಕು. ಅರ್ಥಜ್ಞಾನವನ್ನೂ ಹೊಂದಿರಬೇಕು. ಪ್ರದರ್ಶನವು ವಿಜೃಂಭಿಸುವಲ್ಲಿ ಹೊಂದಾಣಿಕೆಯ ಗುಣವೂ ಅತ್ಯಗತ್ಯ. ಹೀಗಿದ್ದರೆ ಮಾತ್ರ ಆತ ಯಶಸ್ವೀ ಪ್ರದರ್ಶನಕ್ಕೆ ತಾನೂ ಕೊಡುಗೆಯನ್ನು ನೀಡಿದಂತಾಗುತ್ತದೆ.’’ ಮದ್ದಳೆಗಾರರು ಹೇಗಿರಬೇಕೆಂಬ ಪ್ರಶ್ನೆಗೆ ಶಂಕರ ಭಾಗವತರ ಉತ್ತರವಿದು.

ಹಂಗಾರಕಟ್ಟೆ ಕಲಿಕಾ ಕೇಂದ್ರದ ನಾಟ್ಯಗುರುವಾಗಿದ್ದ ವೀರಭದ್ರ ನಾಯಕರೂ ಶಂಕರ ಭಾಗವತರನ್ನು ಪ್ರೋತ್ಸಾಹಿಸಿದ್ದರು. ಕೆರೆಮನೆ ಮೇಳದಲ್ಲಿ ಖ್ಯಾತ ಮದ್ದಳೆಗಾರ ಕಿನ್ನೀರ ನಾರಾಯಣ ಹೆಗಡೆಯವರ
ಮತ್ತು ಸಾಲಿಗ್ರಾಮ ಮೇಳದಲ್ಲಿ ಕಟ್ಟೆ ಶ್ರೀನಿವಾಸ ಆಚಾರ್ಯರ ಒಡನಾಟವು ಕಲಿಕೆಗೆ ಅನುಕೂಲವಾಗಿತ್ತು. ಕಿನ್ನೀರ ನಾರಾಯಣ ಹೆಗಡೆಯವರ ಮನೆಗೆ ಹೋಗಿಯೂ ಮದ್ದಳೆಗಾರಿಕೆಯನ್ನು ಅಭ್ಯಸಿಸಿದ್ದರು. ಶಂಕರ ಭಾಗವತರು ಕರ್ನಾಟಕದ ಎಲ್ಲಾ ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಕಾಳಿಂಗ ನಾವಡರ ಜತೆ ಭಾಗವಹಿಸಿದವರು. ಧಾರವಾಡ ಆಕಾಶವಾಣಿ ಕೇಂದ್ರವು ಇವರ ಮೃದಂಗ ವಾದನಕ್ಕೆ ಪ್ರಶಸ್ತಿಯನ್ನೂ ನೀಡಿತ್ತು. ಕಲಾಬದುಕಿನುದ್ದಕ್ಕೂ ಸಹಕಲಾವಿದರ, ಸಂಘಟಕರ, ಕಲಾಭಿಮಾನಿಗಳ ಸಹಕಾರವು ಸಿಕ್ಕಿತ್ತು ಎನ್ನುವ ಶಂಕರ ಭಾಗವತರಿಗೆ ಯಕ್ಷಗಾನ ಅಕಾಡಮಿ ಪ್ರಶಸ್ತಿಯೂ ಬಂದಿತ್ತು. ಇನ್ನೂರಕ್ಕೂ ಹೆಚ್ಚಿನ ಸನ್ಮಾನಗಳೂ ನಡೆದಿವೆ. ವಿದೇಶ ಪ್ರಯಾಣದ ಭಾಗ್ಯವೂ ಒದಗಿಬಂದಿತ್ತು. ದುಬಾೈ, ಕುವೈಟ್, ಕೆನಡಾ, ಸಿಂಗಾಪೂರ್‍ಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಮದ್ದಳೆವಾದನದ ಕೈಚಳಕವನ್ನು ಪ್ರದರ್ಶಿಸಿದ್ದಾರೆ. ದಂಟಕಲ್ ಶ್ರೀ ಗಣಪತಿ ಹೆಗಡೆ ಮತ್ತು ಸರ್ವೇಶ್ವರೀ ಹೆಗಡೆ ದಂಪತಿಗಳ ಪುತ್ರಿ ವಿನೋದಾ ಭಾಗವತ ಶಂಕರ ಭಾಗವತರ ಬಾಳಸಂಗಾತಿ. ಶಂಕರ ಭಾಗವತ ವಿನೋದಾ ಭಾಗವತ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ದರ್ಶನ್ ಭಾಗವತ ಬೆಂಗಳೂರಿನಲ್ಲಿ ಉದ್ಯೋಗಿ. ಸೊಸೆ ಶ್ರೀಮತೀ ಶಿಲ್ಪ ದರ್ಶನ್. ಮೊಮ್ಮಗಳು ಕು| ಪೂರ್ವಿ. ಪುತ್ರಿ ಕು ಪೂಜಾ ಎಸ್. ಭಾಗವತ ಪದವೀಧರೆ. ಶಿರಸಿಯ ಟಿ.ಆರ್.ಸಿ. ಸೊಸೈಟಿಯಲ್ಲಿ ಉದ್ಯೋಗಸ್ಥೆ. ಶಂಕರ ಭಾಗವತರು ಯಕ್ಷಗಾನದ ಗಳಿಕೆಯಿಂದಲೇ ಮಕ್ಕಳಿಬ್ಬರಿಗೂ ವಿದ್ಯೆ ಕೊಡಿಸಿದ್ದರು. ಶ್ರೀಯುತರಿಗೆ ಕಲಾಮಾತೆಯ ಅನುಗ್ರಹವು ಸದಾ ಇರಲೆಂಬ ಹಾರೈಕೆಗಳು. ು

ಲೇಖಕ: ರವಿಶಂಕರ್ ವಳಕ್ಕುಂಜ

ಸಾಹಿತಿ, ಸಂಶೋಧಕ ಸಿರಿಬಾಗಿಲು ವೆಂಕಪ್ಪಯ್ಯ 

ಕನ್ನಡ ಸಾರಸ್ವತ ಲೋಕಕ್ಕೆ ಪ್ರಸ್ತುತ ಕೇರಳ ರಾಜ್ಯಕ್ಕೆ ಸೇರಿದ ಕಾಸರಗೋಡು ಪ್ರದೇಶದ ಕವಿಗಳ ಕೊಡುಗೆ ಅಪಾರವಾದುದು. ಅವರುಗಳಲ್ಲಿ ಸಿರಿಬಾಗಿಲು ವೆಂಕಪ್ಪಯ್ಯನವರೂ ಒಬ್ಬರು. ಶ್ರೀಯುತರ ಜೀವಿತಾವಧಿ 1930 – 1979. ವಿದ್ಯಾರ್ಜನೆಯ ಬಳಿಕ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಇವರು ಯಕ್ಷಗಾನ, ನಾಟಕ, ಸಂಗೀತ ಮೊದಲಾದ ಕಲೆಗಳಲ್ಲಿ ಆಸಕ್ತಿ ಹೊಂದಿದವರಾಗಿದ್ದರು. ಭಾಷಾವಾರು ಪ್ರಾಂತ್ಯ ರಚನೆಯಾದಾಗ ಕಾಸರಗೋಡು ಮತ್ತೆ ಕರ್ನಾಟಕ ರಾಜ್ಯಕ್ಕೆ ಸೇರಬೇಕೆಂದು ನಡೆದ ಹೋರಾಟಗಳಲ್ಲಿ ಸಿರಿಬಾಗಿಲು ವೆಂಕಪ್ಪಯ್ಯನವರು ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಧಾರ್ಮಿಕ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿದ ಇವರು ಲೇಖಕರಾಗಿ, ಪ್ರಸಂಗಕರ್ತರಾಗಿಯೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಗಳನ್ನು ನೀಡಿದ್ದರು. ಇವರು ಬರೆದ ಕೆಲವು ಕೃತಿಗಳು ಕೇರಳ ಸರಕಾರದ ಶಿಕ್ಷಣ ಇಲಾಖೆಯ ಉಪಪಠ್ಯವಾಗಿ ಆಯ್ಕೆಯಾಗಿತ್ತು. ವೆಂಕಪ್ಪಯ್ಯನವರು ಬರೆದ ಹೆಚ್ಚಿನ ಲೇಖನಗಳೂ ಕನ್ನಡದ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಸಿರಿಬಾಗಿಲು ವೆಂಕಪ್ಪಯ್ಯನವರ ಪುತ್ರರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ಶ್ರೀ ಧರ್ಮಸ್ಥಳ ಮೇಳದ ಭಾಗವತರು. ತೀರ್ಥರೂಪರ ಹೆಸರಿನಲ್ಲಿ ಪ್ರಸ್ತುತ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ನಡೆಸುತ್ತಿರುವುದು ಸಂತೋಷದ ವಿಚಾರ. ಈ ಸಂಸ್ಥೆಯು ನಿರಂತರ ಕಲಾಸಂಬಂಧೀ ಚಟುವಟಿಕೆಗಳನ್ನು ನಡೆಸುತ್ತಿದೆ. ‘ಸಾಹಿತಿ ಸಂಶೋಧಕ ಸಿರಿಬಾಗಿಲು ವೆಂಕಪ್ಪಯ್ಯ’ ಎಂಬ ಈ ಕೃತಿಯು ಪ್ರಕಟಗೊಂಡದ್ದು 2018ರಲ್ಲಿ. ಹೆಸರೇ ಸೂಚಿಸುವಂತೆ ವಿದ್ವಾಂಸರಾದ  ಸಿರಿಬಾಗಿಲು ಶ್ರೀ ವೆಂಕಪ್ಪಯ್ಯನವರ ಕುರಿತಾದ ಪುಸ್ತಕ ಇದು. ಈ ಕೃತಿಯ ಪ್ರಕಾಶಕರು ಕನ್ನಡ ಸಂಘ ಕಾಂತಾವರ (ರಿ) ಕಾರ್ಕಳ ಸಂಸ್ಥೆ. ಲೇಖಕರು ಶ್ರೀ ರಾಧಾಕೃಷ್ಣ ಕೆ. ಉಳಿಯತ್ತಡ್ಕ. ಗೌರವ ಸಂಪಾದಕರು ಡಾ. ನಾ. ಮೊಗಸಾಲೆ. ಸಂಪಾದಕರು ಡಾ. ಬಿ. ಜನಾರ್ದನ ಭಟ್. ಮೊದಲಿಗೆ ಕನ್ನಡ ಸಂಘ ಕಾಂತಾವರ ಎಂಬ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ  ಡಾ. ನಾ. ಮೊಗಸಾಲೆಯವರ ಮಾತುಗಳು ಲೇಖನ ರೂಪದಲ್ಲಿದೆ. ಮುಂದೆ ಭಾಗ ಒಂದರಲ್ಲಿ ‘ಜೀವನ ಸಾಧನೆ’ ಎಂಬ ಶೀರ್ಷಿಕೆಯಡಿಯಲ್ಲಿ ಸಿರಿಬಾಗಿಲು ವೆಂಕಪ್ಪಯ್ಯನವರ ಬದುಕು ಸಾಧನೆಗಳ ಪರಿಚಯವನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ. ಭಾಗ ಎರಡರಲ್ಲಿ ನುಡಿನಮನ ಎಂಬ ಶೀರ್ಷಿಕೆಯಡಿ ಡಾ. ಪಿ. ವೆಂಕಟರಾಜ ಪುಣಿಚಿತ್ತಾಯ, ಡಾ. ಎಂ. ಪ್ರಭಾಕರ ಜೋಶಿ, ಎಂ. ವಿ. ಭಟ್ ಮಧುರಂಗಾನ, ಅಳಕ್ಕೆ ಮಹಾಲಿಂಗ ಭಟ್ಟ , ಕೆ.ವಿ. ರಮೇಶ ಕಾಸರಗೋಡು, ಪುತ್ತಿಗೆ ರಘುರಾಮ ಹೊಳ್ಳ, ಜಯರಾಮ ಕಾರಂತ ದೇಶಮಂಗಲ, ಶಂಕರನಾರಾಯಣ ಮಯ್ಯ ಸಿರಿಬಾಗಿಲು, ರಾಮಕೃಷ್ಣ ಮಯ್ಯ ಸಿರಿಬಾಗಿಲು ಇವರುಗಳ ಲೇಖನಗಳಿವೆ. ಭಾಗ ಮೂರರಲ್ಲಿ ಆಯ್ದ ಲೇಖನಗಳು ಎಂಬ ಶೀರ್ಷಿಕೆಯಡಿ ಹದಿನೇಳು ವಿಮರ್ಶಾ ಲೇಖನಗಳಿವೆ. ಭಾಗ ನಾಲ್ಕರಲ್ಲಿ ಜಯರಾಮ ದೇವಸ್ಯ ನೀರ್ಚಾಲು, ಶಿವರಾಮ ಕಾಸರಗೋಡು ಇವರ ಲೇಖನಗಳಿವೆ. ಬಳಿಕ ಸುಮಾರು ಹದಿನೆಂಟು ಕಪ್ಪು ಬಿಳುಪಿನ ಚಿತ್ರಗಳಿದ್ದು ಇದು ಕನ್ನಡ ಸಂಘ ಕಾಂತಾವರವು ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ. ಸಂಘದ ‘ನಾಡಿಗೆ ನಮಸ್ಕಾರ’ ಎಂಬ ಗ್ರಂಥಮಾಲೆಯ ಇನ್ನೂರ ಐವತ್ತೆರಡನೆಯ ಹೊತ್ತಗೆ ಇದು.