Monday, February 24, 2025
Home Blog Page 372

ಯಕ್ಷ ಸಿಂಚನ (ಲೇಖಕರು – ಕೇಶವ ಹೆಗಡೆ, ಮಂಗಳೂರು)

‘ಯಕ್ಷ ಸಿಂಚನ’ ಎಂಬ ಈ ಹೊತ್ತಗೆಯು 2011ನೇ ಇಸವಿಯಲ್ಲಿ ಪ್ರಕಟವಾಗಿ ಓದುಗರ ಕೈ ಸೇರಿತ್ತು. ಈ ಪುಸ್ತಕದ ಲೇಖಕರು ಶ್ರೀ ಕೇಶವ ಹೆಗಡೆ ಮಂಗಳೂರು. ಶ್ರೀಯುತರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಭೈರುಂಬೆ ಬಳಿ. ಮಂಗಳೂರಿನ ತಾಂತ್ರಿಕ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯತ್ತ ಆಕರ್ಷಿತರಾದವರು. ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು. ಆದುದರಿಂದಲೇ ಯಕ್ಷಗಾನ ಕಲೆಯಿಂದ ದೂರವಾಗದೆ ಕಲೆಯ ಸಂಬಂಧವಿರಿಸಿಕೊಂಡೇ ಬದುಕನ್ನು ಸಾಗಿಸುತ್ತಿದ್ದಾರೆ. ಹೌದು. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಯಕ್ಷಗಾನದಿಂದ ದೂರವಾಗಿ ಬದುಕಲು ಸಾಧ್ಯವೇ ಇಲ್ಲ. ಅವರ ಪಾಲಿಗೆ ಯಕ್ಷಗಾನವೂ ಬದುಕಿನ ಒಂದು ಅಂಗವೇ ಆಗಿ ಪರಿಣಮಿಸಿದೆ. ಕಲಾಪ್ರೇಮಿಗಳಾದ ಶ್ರೀ ಕೇಶವ  ಹೆಗಡೆಯವರು ಉದ್ಯೋಗಿಯಾಗಿ ಮಂಗಳೂರಿನಲ್ಲಿಯೇ ನೆಲೆಸಿದ ಮೇಲೆ, ಲೇಖಕರಾಗಿ ಸಾಹಿತ್ಯಾಸಕ್ತಿಯನ್ನೂ ಸಂಘಟಕರಾಗಿ ಕಲಾಸಕ್ತಿಯನ್ನೂ ಬೆಳೆಸಿಕೊಂಡಿದ್ದರು. ಶ್ರೀಯುತರು ಪ್ರಬುದ್ಧ ಬರಹಗಾರರಾಗಿಯೂ ಉತ್ತಮ ಸಂಘಟಕರಾಗಿಯೂ ಗುರುತಿಸಿಕೊಂಡಿರುತ್ತಾರೆ.

ಕೇಶವ ಹೆಗಡೆಯವರು ಬರೆದ ಯಕ್ಷ ಸಿಂಚನ ಎಂಬ ಈ ಪುಸ್ತಕದ ಪ್ರಕಾಶಕರು ‘ಕಲಾಸಂಗಮ ಸಾಂಸ್ಕೃತಿಕ ವೇದಿಕೆ, ಮಂಗಳೂರು’ ಎಂಬ ಸಂಸ್ಥೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆಯವರು ಶುಭ ಹಾರೈಸಿರುತ್ತಾರೆ. ಲೇಖಕ ಕೇಶವ ಹೆಗಡೆಯವರು ತಮ್ಮ ಅನಿಸಿಕೆಗಳನ್ನು ಲೇಖಕರ ನುಡಿ ಎಂಬ ಶೀರ್ಷಿಕೆಯಡಿ ವ್ಯಕ್ತಪಡಿಸಿದ್ದಾರೆ. ವಿದ್ವಾಂಸರೂ ಖ್ಯಾತ ಪ್ರಸಂಗಕರ್ತರೂ ಆದ ಡಾ. ಅಮೃತ ಸೋಮೇಶ್ವರರು ಈ ಹೊತ್ತಗೆಗೆ ಮೆಚ್ಚುನುಡಿಗಳನ್ನು ಬರೆದಿರುತ್ತಾರೆ. ಯಕ್ಷ ಸಿಂಚನ ಎಂಬ ಈ ಪುಸ್ತಕದಲ್ಲಿ ಯಕ್ಷಗಾನ – ಪದ್ಯ, ಹಿನ್ನೋಟ, ಯಕ್ಷಗಾನದಲ್ಲಿ ತಿಟ್ಟುಗಳು, ಪೂರ್ವರಂಗ, ವಾದನಗಳು, ಭಾಗವತರು, ಪೀಠಿಕೆವೇಷ, ಪಾತ್ರನಿರ್ವಹಣೆ, ಕಲಾವಿದನಿಗೆ ಇರಬೇಕಾದ ಗುಣಲಕ್ಷಣಗಳು, ಯಕ್ಷರಂಗದಲ್ಲಿ ಸ್ತ್ರೀ ಪಾತ್ರ, ಯಕ್ಷರಂಗದಲ್ಲಿ ಮಹಿಳೆಯರು, ರಾತ್ರಿ ನಗಿಸಿ ಹಗಲು ಅಳುವ ಕಲಾವಿದ, ತಾಳಮದ್ದಳೆ, ಶತಮಾನದ ಯಕ್ಷ ಪುರುಷರು, ಪ್ರಶಸ್ತಿಗಳು, ವಿನೂತನ ಪ್ರಯೋಗ – ಮೇಘದೂತ, ಪಿ. ಎಚ್. ಡಿ. ಗೌರವ ಪಡೆದವರು, ಪ್ರಸಂಗ ರಚನೆ, ಗೊಂಬೆಯಾಟ ಎಂಬ ಹತ್ತೊಂಬತ್ತು ವಿಚಾರಗಳನ್ನು ಶ್ರೀ ಕೇಶವ ಹೆಗಡೆಯವರು ಲೇಖನಗಳ ಮೂಲಕ ಒದಗಿಸಿದ್ದಾರೆ. ಅಲ್ಲದೆ ಹಿಮ್ಮೇಳದಲ್ಲಿ ಉಪಯೋಗಿಸುವ ವಾದ್ಯಗಳ ಚಿತ್ರಗಳನ್ನೂ ತೆಂಕು ಮತ್ತು ಬಡಗು ತಿಟ್ಟಿನ ಯಕ್ಷಗಾನ ವೇಷಗಳ ಆಭರಣಗಳ ಚಿತ್ರಗಳನ್ನೂ ನೀಡಿರುತ್ತಾರೆ. ಅಲ್ಲದೆ ಉಭಯ ತಿಟ್ಟಿನ ವೇಷಗಳ ಸುಮಾರು ಎಪ್ಪತ್ತೈದಕ್ಕೂ ಮಿಕ್ಕಿ ಬಣ್ಣದ ಚಿತ್ರಗಳನ್ನೂ ನೀಡಲಾಗಿದೆ. ಪುಸ್ತಕದ ಹೊರ ಆವರಣದಲ್ಲಿ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅವರ ಶುಭ ಸಂದೇಶವನ್ನು ಪ್ರಕಟಿಸಲಾಗಿದೆ. ಶ್ರೀ ಕೇಶವ ಹೆಗಡೆ ಅವರಿಗೆ ಶುಭಾಶಯಗಳು. ಅಭಿನಂದನೆಗಳು. ಅವರ ಲೇಖನಿಯಿಂದ ಇನ್ನಷ್ಟು ಲೇಖನಗಳೂ, ಪುಸ್ತಕಗಳೂ ಓದುಗರ ಕೈ ಸೇರುವಂತಾಗಲಿ. ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಹಾರೈಕೆಗಳು. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ಕಟೀಲು ಮೇಳದ ಅರ್ಚಕ ಕಾಂತಾವರ ಅನಂತರಾಮ ಭಟ್ ನಿಧನ 

ಕಟೀಲು ಮೇಳದ ಹಿರಿಯ ಅರ್ಚಕರಾದ ಶ್ರೀ ಅನಂತರಾಮ ಭಟ್ಟರು ಸೆಪ್ಟೆಂಬರ್ 21ರಂದು ನಿಧನ ಹೊಂದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಕಾಂತಾವರದ ಭಟ್ರು ಎಂದೇ ಪ್ರಸಿದ್ಧಿ ಪಡೆದಿದ್ದ ಅವರು ತನ್ನ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ದೇವರ ಹೂವಿನ ಅಲಂಕಾರವನ್ನು ಮಾಡುವಲ್ಲಿ ಅದ್ಭುತ ಕೌಶಲ್ಯವನ್ನು ಹೊಂದಿದ್ದ ಅವರು ಹಲವಾರು ಕಡೆಯಲ್ಲಿ ಸನ್ಮಾನ ಗೌರವಕ್ಕೆ ಪಾತ್ರರಾಗಿದ್ದರು.  

ಕಾಂತಾವರ  ಶ್ರೀ ಅನಂತರಾಮ ಭಟ್ಟರು  ಕಟೀಲು ಮೇಳದ ಹಿರಿಯ ಅರ್ಚಕರು. ಕಳೆದ 55 ವರ್ಷಗಳಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಗೌರವಯುತವಾದ ಸ್ಥಾನದಲ್ಲಿದ್ದುಕೊಂಡು ವ್ಯವಹರಿಸುವುದು ಅಷ್ಟು ಸುಲಭವಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಸಹನೆ, ಪೂಜಾಕ್ರಮಗಳಿಗೆ ಕೊರೆತೆಯಾಗದಂತಿರುವ ಹೊಂದಾಣಿಕೆ, ನಗುಮೊಗ, ಯಾರಿಗೂ  ನೋವಾಗದಂತೆ, ವ್ಯವಹರಿಸುವ ಜಾಣ್ಮೆ, ದೇವರನ್ನು ಅಲಂಕರಿಸುವ ಕುಶಲತೆ ಮೊದಲಾದ ಗುಣಗಳನ್ನು ಅವರು ಹೊಂದಿರಬೇಕು. ಈ ರೀತಿಯಿದ್ದಾಗ ಚೌಕಿಗೆ (ಬಣ್ಣದ ಮನೆ) ಬಂದ ಕಲಾಭಿಮಾನಿಗಳಿಗೆ ನಾವು ಬಂದುದು ದೇವಾಲಯಕ್ಕೆ ಎಂದು ಅನಿಸುವುದು ಸಹಜವೇ ಆಗಿದೆ. ಹೀಗೆ ವಿವಿಧ ಮೇಳಗಳಲ್ಲಿ ಅರ್ಚಕರಾಗಿ ಕಲಾಸೇವೆಯನ್ನು ಮಾಡುವವರು ಅನೇಕರು. ಅನಂತರಾಮ ಭಟ್ಟರೂ ಅವರಲ್ಲೊಬ್ಬರು. ಶ್ರೀ ಅನಂತರಾಮ ಭಟ್ಟರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರದಲ್ಲಿ 1948 ನವೆಂಬರ್ 22 ರಂದು ಕಾಂತಾವರ ಶ್ರೀ ಸುಬ್ಬಣ್ಣ ಭಟ್ ಮತ್ತು ಶ್ರೀಮತಿ ಕಮಲಮ್ಮ ದಂಪತಿಗಳಿಗೆ ಪುತ್ರನಾಗಿ ಜನಿಸಿದರು. ಇವರದು ಕೃಷಿ ಕುಟುಂಬ. ಅಲ್ಲದೆ ಶ್ರೀ ಸುಬ್ಬಣ್ಣ ಭಟ್ಟರು ದೇವಳಗಳ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದೇವರನ್ನು ಹೊರುವ ಸೇವೆಯನ್ನು ಮಾಡುತ್ತಿದ್ದರು. ಕಟೀಲು ಮೇಳದಲ್ಲಿ 1945ರಿಂದ ತೊಡಗಿ 20 ವರ್ಷಗಳ ಕಾಲ ಅರ್ಚಕರಾಗಿ ಸೇವೆಯನ್ನು ಸಲ್ಲಿಸಿದ್ದರು. ಆಗ ಕಟೀಲು 1 ಮೇಳ ಮಾತ್ರ ಇದ್ದುದು. ಕಲ್ಲಾಡಿ ಶ್ರೀ ಕೊರಗ ಶೆಟ್ಟರ ಯಾಜಮಾನ್ಯ. ಇರಾ ಶ್ರೀ ಗೋಪಾಲಕೃಷ್ಣರು ಭಾಗವತರಾಗಿದ್ದರು. ಶ್ರೀ ಅನಂತರಾಮ ಭಟ್ಟರು ಓದಿದ್ದು 7ನೆಯ ತರಗತಿಯ ವರೆಗೆ ಬೇಲಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ನಂತರ ತಂದೆಯವರಿಗೆ ಸಹಾಯಕರಾಗಿ ಮೇಳದ ತಿರುಗಾಟ ನಡೆಸುತ್ತಾ ಪೂಜಾಕ್ರಮಗಳನ್ನೂ ಮೇಳದ ನಿಯಮಗಳನ್ನೂ ತಿಳಿದುಕೊಂಡರು. 1965 ರಲ್ಲಿ ತೀರ್ಥರೂಪರು ವಿಧಿವಶರಾದಾಗ ಅನಂತರಾಮ ಭಟ್ಟರು ಮೇಳದ ತಿರುಗಾಟ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರು. ಮೇಳದ ಪೂಜಾ ಕೈಂಕರ್ಯಕ್ಕೆ ಖಾಯಂ ಆಗಿ ಅರ್ಚಕರು ಇರದ ಸಂದರ್ಭ, ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣರು ಅನಂತರಾಮ ಭಟ್ಟರನ್ನು ಕರೆದು ನಿನ್ನ ಪೂಜೆ ಕಲಾಮಾತೆ ಸ್ವೀಕರಿಸುತ್ತಾಳೆ. ನಿನಗೆ ಒಳ್ಳೆಯದಾಗುತ್ತದೆ ಎಂದು ಹೇಳಿ ಪ್ರಸಾದ ನೀಡಿ ಮೇಳಕ್ಕೆ ಕಳುಹಿಸಿದ್ದರು. ಕಲ್ಲಾಡಿ ಶ್ರೀ ಕೊರಗ ಶೆಟ್ಟಿಯವರ ಯಜಮಾನಿಕೆಯ ಕಟೀಲು ಮೇಳಕ್ಕೆ 1966 ಮಾರ್ಚ್ 8ರಂದು ಅರ್ಚಕರಾಗಿ ಸೇರ್ಪಡೆಗೊಂಡಿದ್ದರು. ಕಲ್ಲಾಡಿ ಶ್ರೀ ಕೊರಗ ಶೆಟ್ಟಿ, ಕಲ್ಲಾಡಿ ಶ್ರೀ ವಿಠಲ ಶೆಟ್ಟಿ ಮತ್ತು ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟಿ (ಪ್ರಸ್ತುತ ಕಟೀಲು ಆರೂ ಮೇಳಗಳ ಸಂಚಾಲಕರು) ಮೂವರು ಯಜಮಾನರುಗಳ ಸಂಚಾಲಕತ್ವದಡಿ ಅನಂತರಾಮ ಭಟ್ಟರು ಸೇವೆಯನ್ನು ಸಲ್ಲಿಸಿದ್ದಾರೆ. ತಿರುಗಾಟದ 50ನೇ ವರ್ಷದ ಸಂದರ್ಭದಲ್ಲಿ ನೂತನ ಗೃಹಪ್ರವೇಶದ ಸುದಿನದಂದು ಕಟೀಲು ಮೇಳದ ಆಟವನ್ನು ಆಡಿಸಿ ಧನ್ಯರಾಗಿದ್ದಾರೆ,(ದೇವಿ ಮಹಾತ್ಮೆ ಪ್ರಸಂಗ) 2008ರಲ್ಲಿ ಮನೆಯಲ್ಲಿ ಷಷ್ಠ್ಯಬ್ದಿ (60ನೇ ವರ್ಷ) ಕಾರ್ಯಕ್ರಮವೂ ನಡೆದಿದೆ. ರಸ್ತೆ, ವಾಹನ ಸೌಕರ್ಯಗಳಿಲ್ಲದ ಹಿಂದಿನ ಕಾಲ. ಬಿಡಾರಕ್ಕೆ ನಡೆದೇ ಸಾಗಬೇಕಾಗಿತ್ತು. ಮೈಲುಗಳ ದೂರಕ್ಕೆ ಪೆಟ್ಟಿಗೆ, ಪೂಜಾ ಪರಿಕರಗಳನ್ನು ಹೊತ್ತುಕೊಂಡೇ ಸಾಗಿಸಬೇಕಾಗಿತ್ತು.

ಹೀಗೆ ನಿರಂತರ 55 ವರ್ಷಗಳ ಕಾಲ ಅರ್ಚಕರಾಗಿ ಕಲಾಸೇವೆಯನ್ನು ಮಾಡುತ್ತಾ ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ ಅನಂತರಾಮ ಭಟ್ಟರು. ತಮ್ಮ ಸಂಕಲ್ಪ ಸಿದ್ಧಿಗಾಗಿ ಇವರಲ್ಲಿ ಪ್ರಾರ್ಥಿಸಿ ಪ್ರಸಾದ ಸ್ವೀಕರಿಸುವ ಕಲಾಭಿಮಾನಿಗಳನ್ನೂ ನಾವು ಕಾಣಬಹುದು. ಅದು ಮನಸಿಗೆ, ಭಕ್ತಿಗೆ, ಗೌರವ, ಪ್ರೀತಿಗೆ ಸಂಬಂಧಿಸಿದ ವಿಚಾರವೇ ಹೌದು. ಅನೇಕ ಸಂಘ ಸಂಸ್ಥೆಗಳವರೂ ಸೇವಾಕರ್ತರೂ ಶ್ರೀ ಅನಂತರಾಮ ಭಟ್ಟರ ಸೇವೆಯನ್ನು ಗುರುತಿಸಿ ಶ್ರೀಯುತರನ್ನು ಸನ್ಮಾನಿಸಿದ್ದಾರೆ. ಸಮಯದ ಪರಿಪಾಲನೆ ಮತ್ತು ಪೂಜಾಕ್ರಮಗಳಲ್ಲಿ ಏನೂ ಕೊರತೆಯಾಗಬಾರದೆಂದು ಹೇಳುತ್ತಿದ್ದ ಶ್ರೀ ಅನಂತರಾಮ ಭಟ್ಟರು ತಮ್ಮ ವೃತ್ತಿಯನ್ನು ಸೇವೆಯೆಂದು ನಿರ್ವಹಿಸಿದವರು.

ಲೇಖಕ:ಶ್ರೀ ರವಿಶಂಕರ್ ವಳಕ್ಕುಂಜ 

ಯಕ್ಷಗಾನ ಹಾಸ್ಯ ಕಲಾವಿದರಾದ ಶ್ರೀ ಪೂರ್ಣೇಶ ಆಚಾರ್ಯ ಅವರೊಂದಿಗೆ ಮಾತುಕತೆ – ಮಾತಿನ ಮಂಟಪದಲ್ಲಿ

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ  ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ  25ನೇ  ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 22ರಂದು  ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದರಾದ ಶ್ರೀ ಪೂರ್ಣೇಶ ಆಚಾರ್ಯ ಅವರೊಂದಿಗೆ ಮಾತುಕತೆ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. 2020ನೇ ಸೆಪ್ಟೆಂಬರ್ 22 ಮಂಗಳವಾರ ಸಂಜೆ ಘಂಟೆ 6.30ರಿಂದ  7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ.  ಮಾತಿನ ಮಂಟಪ  ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ. 

ರಾಧಾಕೃಷ್ಣ ಕಲ್ಚಾರ್ ಅವರ “ಪುರಾಣಕೋಶ ವಿಹಾರಿ – ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ”

ಶೀರ್ಷಿಕೆಯೇ ಸೂಚಿಸುವಂತೆ ಇದು ಹಿರಿಯ ಖ್ಯಾತ ತಾಳಮದ್ದಳೆ ಅರ್ಥಧಾರಿಗಳೂ ವಿದ್ವಾಂಸರೂ ಆಗಿರುವ ಮೂಡಂಬೈಲು ಶ್ರೀ ಗೋಪಾಲಕೃಷ್ಣ ಶಾಸ್ತ್ರಿಗಳ ಕುರಿತಾಗಿ ಬರೆದ ಕೃತಿ. ನಿವೃತ್ತ ಉಪಾನ್ಯಾಸಕರೂ, ಪ್ರಸಿದ್ಧ ತಾಳಮದ್ದಳೆ ಅರ್ಥಧಾರಿಗಳೂ ಲೇಖಕರೂ ಆದ  ಶ್ರೀ ರಾಧಾಕೃಷ್ಣ ಕಲ್ಚಾರ್ ಇದರ ಲೇಖಕರು. ಪುರಾಣಗಳ ವಿಚಾರದಲ್ಲಿ ಅದ್ಭುತವಾದ ಜ್ಞಾನವನ್ನು ಹೊಂದಿದವರು ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು. ಇದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ತಾನು ಸಂಗ್ರಹಿಸಿದ ವಿಚಾರಗಳನ್ನು ಸಾಹಿತ್ಯಾಸಕ್ತ ಓದುಗರಿಗೆ, ಅಧ್ಯಯನಶೀಲರಿಗೆ ಗ್ರಂಥಗಳನ್ನು ರಚಿಸಿ ನೀಡಿರುತ್ತಾರೆ. ಸಲಹೆ ಮಾರ್ಗದರ್ಶನಗಳನ್ನೂ ನೀಡುತ್ತಾರೆ. ಆದುದರಿಂದ ಅವರ ಕುರಿತಾದ ಈ ಹೊತ್ತಗೆಯ ಶೀರ್ಷಿಕೆ  “ಪುರಾಣಕೋಶ ವಿಹಾರಿ – ಅರ್ಥಧಾರಿ” ಅರ್ಥಪೂರ್ಣವಾದುದು. ಕೃತಿಯ ಪ್ರಕಾಶಕರು ಕನ್ನಡ ಸಂಘ ಕಾಂತಾವರ (ರಿ). ಈ ಪುಸ್ತಕವು ಪ್ರಕಟವಾದುದು 2015ರಲ್ಲಿ. ಕನ್ನಡ ಸಂಘ ಕಾಂತಾವರದ ‘ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಾಗಿ ಓದುಗರ ಕೈಸೇರಿದೆ.

ಪ್ರಧಾನ ಸಂಪಾದಕರು ಕನ್ನಡ ಸಂಘದ ಅಧ್ಯಕ್ಷ ಡಾ. ನಾ. ಮೊಗಸಾಲೆ ಅವರು. ಸಂಪಾದಕರು ಶ್ರೀ ಬಿ. ಜನಾರ್ದನ ಭಟ್. ಇದು ಸುಮಾರು ನಲುವತ್ತೈದು ಪುಟಗಳಿಂದ ಕೂಡಿದೆ. ಅಧ್ಯಕ್ಷರ ಮಾತು ಎಂಬ ಶೀರ್ಷಿಕೆಯಡಿ ಡಾ. ನಾ. ಮೊಗಸಾಲೆ ಅವರ ಮಾತುಗಳನ್ನೂ, ಡಾ. ಬಿ. ಜನಾರ್ದನ ಭಟ್ ಅವರ ಸಂಪಾದಕೀಯ ಬರಹವನ್ನೂ ನೀಡಲಾಗಿದೆ. ಬಳಿಕ ಒಟ್ಟು ನಲುವತ್ತಮೂರು ಪುಟಗಳಲ್ಲಿ ಲೇಖಕರಾದ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ಮೂಡಂಬೈಲು ಅವರ ಬಗೆಗೆ ಅತ್ಯುತ್ತಮವಾಗಿ ಬರೆದಿರುತ್ತಾರೆ. ಒಂದು ನುಡಿಚಿತ್ರ, ಕಲಾಜೀವನ- ೧, ಮೊದಲು ಭಾಗವತಿಕೆ, ಅರ್ಥಧಾರಿಯಾಗಿ, ಕಲಾಜೀವನ – ೨, ಜೀವನವೃತ್ತ-ಹಿನ್ನೆಲೆ-ಹುಟ್ಟು, ಶಿಕ್ಷಕನಾಗಿ, ಕೃಷಿಕನಾಗಿ, ಸಂಸಾರಿಯಾಗಿ, ಛಲಗಾರ, ಪ್ರಶಸ್ತಿ- ಸನ್ಮಾನಗಳು, ಕೆಲವು ಸ್ವಾರಸ್ಯ ಪ್ರಸಂಗಗಳು, ಲೋಕಾಭಿರಾಮ, ಅರ್ಥಗಾರಿಕೆಯ ಯೋಗ್ಯತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಶಾಸ್ತ್ರೀಗಳು ನೀಡುವ ಸಲಹೆಗಳು ಎಂಬ ವಿಚಾರಗಳಡಿಯಲ್ಲಿ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ಶ್ರೀ ಶಾಸ್ತ್ರಿಗಳ ಬಗೆಗೆ ಓದುಗರ ಮನ ಮುಟ್ಟುವಂತೆ ವಿವರಿಸಿದ್ದಾರೆ. ಬಳಿಕ ‘ಶಾಸ್ತ್ರಿಯವರ ಸಾಹಿತ್ಯ’ ಎಂಬ ವಿಚಾರದಡಿಯಲ್ಲಿ ಮೂಡಂಬೈಲು ಗೋಪಾಲಕೃಷ್ಣ  ಶಾಸ್ತ್ರಿಗಳು ಬರೆದ ಮಹಾಭಾರತ ಕೋಶ, ವಾಲ್ಮೀಕಿ ರಾಮಾಯಣ ಕೋಶ, ಅರ್ಥಸಹಿತ ಕುಮಾರ ವಿಜಯ, ದಶಾವತಾರ ಉಪಾನ್ಯಾಸಗಳು, ಶೇಣಿ ಗೋಪಾಲಕೃಷ್ಣ ಭಟ್ಟ ಎಂಬ ಕೃತಿಗಳ ಬಗೆಗೆ ಮಾಹಿತಿಯನ್ನು ನೀಡಿರುತ್ತಾರೆ. ಶ್ರೀ ರಾಧಾಕೃಷ್ಣ ಕಲ್ಚಾರರ ಶ್ರೇಷ್ಠ ಬರಹಗಾರಿಕೆಯಲ್ಲಿ  “ಪುರಾಣಕೋಶ ವಿಹಾರಿ – ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ”  ಎಂಬ ಈ ಕೃತಿಯು ಅತ್ಯುತ್ತಮವಾಗಿ ಮೂಡಿಬಂದಿದೆ. ಅಲ್ಲದೆ ಅನುಬಂಧ ಎಂಬ ವಿಚಾರದಡಿ ಡಾ. ಎಂ. ಪ್ರಭಾಕರ ಜೋಶಿಯವರು ಮತ್ತು ಡಾ. ಅಮೃತ ಸೋಮೇಶ್ವರರು ಶಾಸ್ತ್ರಿಗಳ ಕುರಿತು ಆಡಿದ ನಲ್ನುಡಿಗಳನ್ನು ನೀಡಲಾಗಿದೆ. ಪುಸ್ತಕದ ಕೊನೆಯಲ್ಲಿ ಕನ್ನಡ ಸಂಘ ಕಾಂತಾವರ ಸಂಸ್ಥೆಯು ನಾಡಿಗೆ ನಮಸ್ಕಾರ ಗ್ರಂಥ ಮಾಲೆಯಡಿ ಹನ್ನೊಂದು ಕಂತುಗಳಲ್ಲಿ ಪ್ರಕಟಿಸಿದ ನೂರಾ ಇಪ್ಪತ್ತೆರಡು ಪುಸ್ತಕಗಳ ಹೆಸರುಗಳನ್ನು ನೀಡಲಾಗಿದೆ. ಪುಸ್ತಕದ ಹೊರ ಆವರಣದಲ್ಲಿ ಸಂಪಾದಕರಾದ ಶ್ರೀ ಬಿ. ಜನಾರ್ದನ ಭಟ್ಟರು ಲೇಖಕರಾದ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರನ್ನು ಅಭಿನಂದಿಸಿ ಬರೆದ ಲೇಖನವಿದೆ.

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ಆಶುವೈಖರಿ (ಯಕ್ಷಗಾನ ತಾಳಮದ್ದಳೆ ರಂಗದ ಆಲೋಚನೆಗಳು) – ಡಾ. ಕೆ. ಎಂ. ರಾಘವ ನಂಬಿಯಾರ್

‘ಆಶುವೈಖರಿ’ ಎಂಬ ಕೃತಿಯು ವಿದ್ವಾಂಸರಾದ ಡಾ. ಕೆ. ಎಂ. ರಾಘವ ನಂಬಿಯಾರರು ಕನ್ನಡ ಸಾಹಿತ್ಯ ಲೋಕಕ್ಕೆ, ಯಕ್ಷಗಾನ ಕ್ಷೇತ್ರಕ್ಕೆ ನೀಡಿರುವ ಅನೇಕ ಕೊಡುಗೆಗಳಲ್ಲಿ ಒಂದು. ಶ್ರೀಯುತರಿಂದ ರಚಿಸಲ್ಪಟ್ಟ ‘ರಾನಂ ಪ್ರಸಂಗ ಸಂಪುಟ’ದ ಬಗ್ಗೆ ಬರೆಯಲು ಈ ಹಿಂದೆ ಅವಕಾಶವಾಗಿತ್ತು. ಈ ಕೃತಿಯ ಬಗೆಗೆ ಬರೆಯಲೂ ಸಂತೋಷ ಪಡುತ್ತೇನೆ.  ಡಾ. ಕೆ. ಎಂ. ರಾಘವ ನಂಬಿಯಾರರ ರಂಗ ವಿಚಿಕಿತ್ಸೆ ಎಂಬ ಕೃತಿಯ ಬಗ್ಗೆ ಈ ಹಿಂದೆ ಶ್ರೀ ಕೃಷ್ಣ ಪ್ರಕಾಶ ಉಳಿತ್ತಾಯರು ಲೇಖನವೊಂದನ್ನು ಬರೆದಿದ್ದರು. ಯಕ್ಷಗಾನ ಹಿಮ್ಮೇಳ ಮುಮ್ಮೇಳಗಳೆಂಬ ಉಭಯ ವಿಭಾಗಗಳಲ್ಲಿ ಪರಿಣತರಾದ ಶ್ರೀ ನಂಬಿಯಾರರ ‘ಆಶುವೈಖರಿ’ ಎಂಬ ಕೃತಿಯು 2012ನೇ ಇಸವಿಯಲ್ಲಿ ಮುದ್ರಿತವಾಗಿತ್ತು. ಈ ಕೃತಿಯ ಶೀರ್ಷಿಕೆಯ ಬಗೆಗೆ ತಿಳಿಯುವ ಕುತೂಹಲ ಹುಟ್ಟಿಕೊಂಡು ಚೆನ್ನಾಗಿ ಯೋಚಿಸಿದರೆ ಇದು ಯಕ್ಷಗಾನದ ಕುರಿತಾದ, ಅದರಲ್ಲೂ ವಾಚಿಕಕ್ಕೆ ಸಂಬಂಧಿಸಿದ ಪುಸ್ತಕ ಎಂದು ಖಂಡಿತಾ ಅರ್ಥ ಮಾಡಿಕೊಳ್ಳಬಹುದು. ಯಾಕೆಂದರೆ ನಾಟಕ ಚಲನಚಿತ್ರಗಳಂತೆ ಸಿದ್ಧಪಡಿಸಿದ ಸಂಭಾಷಣೆಗಳಿಂದ ಯಕ್ಷಗಾನ ಪ್ರದರ್ಶನಗಳೂ ತಾಳಮದ್ದಲೆಗಳೂ ನಡೆಯುವುದಲ್ಲ. ವ್ಯಕ್ತಿಯು ತಾನು ಪಾತ್ರವಾಗಿ, ಭಾಗವತನು ಹೇಳಿದ ಪದ್ಯಗಳಿಗೆ ರಂಗದಲ್ಲೇ ಸಂಭಾಷಣೆಗಳನ್ನು ಹೇಳುತ್ತಾ ಸಾಗಬೇಕು. ಅದೂ ಪ್ರಸಂಗಕ್ಕೆ, ಪಾತ್ರಕ್ಕೆ ಕೊರತೆಯಾಗದಂತೆ. ಆಶುಭಾಷಣದಂತೆ. ವಾಕ್ ವೈಖರೀ ರೂಪವನ್ನು ಪಡೆದಾಗ ಮಾತ್ರ ಪ್ರೇಕ್ಷಕನೂ ಅನುಭವಿಸುತ್ತಾನೆ. ಪ್ರದರ್ಶನವು ಗೆಲ್ಲುತ್ತದೆ. ನನ್ನ ಮತಿಯ ಮಿತಿಯೊಳಗೆ ಅರ್ಥ ಮಾಡಿಕೊಂಡ ವಿಚಾರ ಇದು. ತಪ್ಪಿರಲೂ ಬಹುದು. ಈ ಕೃತಿಯ ಪ್ರಕಾಶಕರು ಸಾಗರ್ ಪ್ರಕಾಶನ ಬೆಂಗಳೂರು. ಇದು ನೂರಾ ಅರುವತ್ತೆಂಟು ಪುಟಗಳುಳ್ಳ ಪುಸ್ತಕ. ಶ್ರೀ ನಂಬಿಯಾರರು ಈ ಕೃತಿಯನ್ನು ತನ್ನ ಆತ್ಮೀಯರಾಗಿದ್ದ ಶ್ರೀ ಎಂ. ಶ್ರೀಧರ ಪಾಂಡಿ ಅವರಿಗೆ ಅರ್ಪಿಸಿದ್ದಾರೆ. ಯಕ್ಷಗಾನವನ್ನೇ ತನ್ನ ಉಸಿರೆಂದು ತಿಳಿದು ಜೀವಿಸಿದ್ದ ಶ್ರೀಧರ ಪಾಂಡಿಯವರ ಪರಿಚಯ ಲೇಖನವನ್ನು ಬರೆದು ಮೊದಲಾಗಿ ಅವರನ್ನು ನೆನಪಿಸಿಕೊಂಡಿದ್ದಾರೆ. ಯಕ್ಷಗಾನಕ್ಕೆ ಶ್ರೀಧರ ಪಾಂಡಿಯವರ ಕೊಡುಗೆ, ನಂಬಿಯಾರರಿಗೆ ಅವರು ನೀಡಿದ ಸಹಕಾರ, ಒಡನಾಟಗಳ ಬಗೆಗೆ ವಿವರಗಳು ಈ ಲೇಖನದಲ್ಲಿವೆ. ಬಳಿಕ ಲೇಖಕನ ನೆಲೆಯಲ್ಲಿ  ಡಾ. ಕೆ. ಎಂ. ರಾಘವ ನಂಬಿಯಾರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಮುನ್ನುಡಿ ಲೇಖನವನ್ನು ಬರೆದವರು ಶ್ರೀ ಅಂಬಾತನಯ ಮುದ್ರಾಡಿ ಅವರು. ಈ ಕೃತಿಯ ಎಲ್ಲ ಲೇಖನಗಳಲ್ಲೂ ಇರುವ ವಿಶೇಷತೆಗಳನ್ನು ಗುರುತಿಸಿ ತಮ್ಮ ಮುನ್ನುಡಿ ಬರಹದಲ್ಲಿ ನಮೂದಿಸಿರುತ್ತಾರೆ. ಬಳಿಕ ಶ್ರೀ  ಡಾ. ಕೆ. ಎಂ. ರಾಘವ ನಂಬಿಯಾರರು ಬರೆದ ಲೇಖನಗಳಿವೆ.

ಅವುಗಳು, ೧. ಕುವೆಂಪು ಮತ್ತು ಯಕ್ಷಗಾನ ತಾಳಮದ್ದಳೆ ೨. ಹಿಂದಕ್ಕೊಮ್ಮೆ ನೋಡಿದಾಗ೩. ಉಡುಪಿ ಜಿಲ್ಲೆಯ ಅರ್ಥಧಾರಿಗಳ ಬೆಳಸು ೪. ಅರ್ಥಗಾರಿಕೆ: ಒಂದು ಸ್ವರೂಪ ಸಮೀಕ್ಷೆ ೫. ತಾಳಮದ್ದಳೆಯ ಸಾತ್ವಿಕ ಪಾತ್ರಗಳು ೬. ಪ್ರಸಂಗದಲ್ಲಿ ತಾತ್ವಿಕ ಸಂಘರ್ಷ ೭. ನಾ ಮೆಚ್ಚಿದ ತಾಳಮದ್ದಳೆ ಈಗೆಲ್ಲಿ ?೮. ಕಲಾರೂಪವಾಗಿ ಅರ್ಥಗಾರಿಕೆ ೯. ಪದದ ಅರ್ಥ: ಕಗ್ಗಂಟೆಲ್ಲಿದೆ ?೧೦. ತಾಳಮದ್ದಳೆ – ಹೊಸ ಸವಾಲು ೧೧. ಗುರುವಿನ ನೆನಪು ೧೨. ಅರ್ಥಗಾರಿಕೆಯ ಶಿಷ್ಯ ಪರಂಪರೆ ೧೩. ತಾಳಮದ್ದಳೆಯಲ್ಲಿ ಹಿಮ್ಮೇಳ ಎಂಬ ಲೇಖನಗಳು. ಬಳಿಕ ಗೇರುಸೊಪ್ಪೆ ಶಾಂತಪ್ಪಯ್ಯ ವಿರಚಿತ ಕರ್ಣಾರ್ಜುನ ಪ್ರಸಂಗಕ್ಕೆ ಶ್ರೀ ನಂಬಿಯಾರರು ಬರೆದ ಅರ್ಥಗಾರಿಕೆಯನ್ನು ನೀಡಲಾಗಿದೆ. ಹೊತ್ತಗೆಯ ಕೊನೆಯ ಪುಟದಲ್ಲಿ  ಡಾ. ಕೆ. ಎಂ. ರಾಘವ ನಂಬಿಯಾರರು ಬರೆದ ಇತರ ಕೃತಿಗಳ ವಿವರಗಳನ್ನು ನೀಡಲಾಗಿದೆ. 

ಲೇಖಕ: ರವಿಶಂಕರ್ ವಳಕ್ಕುಂಜ 

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್

ಇನ್ನೊಬ್ಬರಿಗೆ ಸಹಾಯ ಮಾಡುವುದರಿಂದ ಯಾರೂ ಬಡವರಾಗುವುದಿಲ್ಲ. ಅದು ಹೃದಯ ಶ್ರೀಮಂತಿಕೆಯನ್ನು ಕೊಡುತ್ತದೆ. ಆರ್ಥಿಕ ದುರ್ಬಲರಾದವರ ಮಟ್ಟಕ್ಕೆ ಇಳಿದು ಅವರನ್ನು ಮೇಲೆತ್ತಿ ಸಬಲರನ್ನಾಗಿಸುವುದು ಹೃದಯಕ್ಕೆ ಒಂದು ಒಳ್ಳೆಯ ವ್ಯಾಯಾಮವಿದ್ದ ಹಾಗೆ. ಮನುಷ್ಯ ಮನೆ ಮನೆಯಲ್ಲೂ ಜನಿಸುತ್ತಾನೆ. ಆದರೆ ಮನುಷ್ಯತ್ವ ಎಂಬುದು ಎಲ್ಲರಲ್ಲಿಯೂ ಇರಬೇಕೆಂದೇನೂ ಇಲ್ಲ. ಆದರೆ ಹೃದಯ ಶ್ರೀಮಂತಿಕೆಯನ್ನು ಹೊಂದಿದ ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ಇದಕ್ಕೆಲ್ಲಾ ಜೀವಂತ ನಿದರ್ಶನರಾಗಿ ದುರ್ಬಲ ಕಲಾವಿದರ ಭವಿಷ್ಯದ ಆಶಾಕಿರಣವಾಗಿ ಗೋಚರಿಸುತ್ತಾರೆ. ಯಕ್ಷಗಾನ ಕಲೆಯನ್ನು ದೇವರಂತೆ ಪೂಜಿಸುವವರು, ಕಲೋಪಾಸಕರು, ಕಲಾಪೋಷಕರು, ದಾನಿಗಳು, ಕಲಾವಿದರೆಂದರೆ ಜೀವಬಿಡುವ ಅಭಿಮಾನಿಗಳು, ಸಹಾಯಹಸ್ತ ನೀಡುವ ಮಹನೀಯರು ನಮ್ಮ ನಡುವೆ ಹಲವಾರು ಮಂದಿ ಇರಬಹುದು. ಆದರೆ ಓರ್ವ ಕಲಾವಿದರಾಗಿ, ಅಶಕ್ತ ಕಲಾವಿದರನ್ನು ಆಧರಿಸುವ ಕೆಲಸ ಮಾಡಿದವರು ಅಪರೂಪ. ಅದೂ ಅಗಾಧ ಸಂಖ್ಯೆಯಲ್ಲಿ ಹಾಗೂ ದೊಡ್ಡ ದೊಡ್ಡ ಮೊತ್ತದಲ್ಲಿ ಹಲವು ಕೊಡುಗೆಗಳನ್ನು ನೀಡುವ ಮೂಲಕ.
ಹೌದು. ನಾವೀಗ ಯಕ್ಷಗಾನದ ಕಲಾ ಪ್ರಪಂಚದ ಏಳುಬೀಳುಗಳನ್ನು ದಾಟಿ ಒಂದು ಸುಸ್ಥಿರ ಕಲಾಪಯಣದ ಕಾಲಘಟ್ಟದಲ್ಲಿ ವಿಹರಿಸುತ್ತಿದ್ದೇವೆ. ಹಿಂದಿನ ಕಲಾವಿದರ ಬದುಕು, ಬವಣೆಗಳು ಈಗಿನ ಕಲಾವಿದರಿಗೆ ಇಲ್ಲ. ಆದರೆ ಈ ಉನ್ನತಿಗೆ ಅಡಿಪಾಯವನ್ನು ಹಾಕಿಕೊಟ್ಟ ಹಿರಿಯ ಕಲಾವಿದರು ಹರಿಸಿದ ಬೆವರಿನ ಬವಣೆ ಇನ್ನೂ ಮಾಸಿಹೋಗಿಲ್ಲ. ಅವರು ಹಾಕಿಕೊಟ್ಟ ಭದ್ರ ಅಡಿಪಾಯದ ಭವನದಲ್ಲಿ ನಾವು ವಾಸ ಮಾಡುತ್ತಿದ್ದೇವೆ. ಅಂತಹಾ ಹಿರಿಯ ಬಡ, ಅಶಕ್ತ ಕಲಾವಿದರು ಮೇಳಗಳಲ್ಲಿ ಈಗಲೂ ದುಡಿಯುತ್ತಿದ್ದಾರೆ. ಅಂತಹಾ ಬಡ, ಅಶಕ್ತ ಕಲಾವಿದರಿಗೆ ಆಸರೆಯಾಗಿ ನಿಂತವರೇ ಪಟ್ಲ ಸತೀಶ್ ಶೆಟ್ಟಿ, ‘ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು’ ಎಂಬ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಹಲವಾರು ಕಲಾವಿದರಿಗೆ ಬದುಕಿನ ಬೆಳಕಿನತ್ತ ನಡೆಯುವ ದಾರಿಯನ್ನು ತೋರಿಸಿ ಕೊಟ್ಟಿದ್ದಾರೆ. ಅಂಧಕಾರದ, ಕಷ್ಟದ ಜೀವನದಲ್ಲಿ ತುಸುವಾದರೂ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದಿನ ಮಾತು. ಆಗ ಪಟ್ಲ ಸತೀಶ್ ಶೆಟ್ಟಿ ಎಂದೊಡನೆ ನನಗೆ ನೆನಪಾಗುತ್ತಿದ್ದುದು ಯಕ್ಷಗಾನದ ಭಾಗವತಿಕೆಯ ವಿಶಿಷ್ಟ ಶೈಲಿಯ ಗಾಯನ, ಸ್ವರ ಏರಿಳಿತಗಳಿಂದ ತನ್ನದೇ ಆದ ಹೇರಳ ಅಭಿಮಾನಿಗಳ ಪ್ರಭಾವಲಯವನ್ನು ಸೃಷ್ಟಿಸಿಕೊಂಡ ಭಾಗವತಿಕೆಯ ಝಲಕ್. ಬರಬರುತ್ತಾ ಯಕ್ಷಪ್ರಿಯರನ್ನು ಹುಚ್ಚೆಬ್ಬಿಸಿದ ‘ಪಟ್ಲ’ ಭಾಗವತಿಕೆಯು ತನ್ನ ಸ್ವರದ ಆಳ, ಅಗಲಗಳನ್ನು ಮತ್ತೂ ವಿಸ್ತಾರಗೊಳಿಸಿತು. ತನ್ನ ಎಳೆಯ ವಯಸ್ಸಿನಲ್ಲೇ ಭಾಗವತಿಕೆಯ ಹಿಡಿತ ಮತ್ತು ಲಯವನ್ನು ಕಂಡುಕೊಂಡ ಪಟ್ಲರು ತನ್ನ ಸ್ವರಮಾಧುರ್ಯದಿಂದ ಬಹುಬೇಗ ಪ್ರಸಿದ್ಧಿಗೆ ಬಂದ ಭಾಗವತರಾಗಿದ್ದಾರೆ. ವರ್ತಮಾನ ಕಾಲ ಘಟ್ಟದಲ್ಲಿ ಯಕ್ಷಗಾನದ ಅತ್ಯಂತ ‘Busy man’ ಎಂದು ಕರೆಯಲ್ಪಡುವ ಸತೀಶ್ ಶೆಟ್ಟಿಯವರು ಜನಪ್ರಿಯರಾಗುತ್ತಿದ್ದಂತೆ ಮನಸ್ಸಿನಲ್ಲಿ ಹತ್ತು ಹಲವು ಆಲೋಚನೆಗಳು ಬಂದುಹೋಗ ತೊಡಗಿದುವು. ಬಹುಬೇಗ ಕೀರ್ತಿಶಿಖರದ ಉತ್ತುಂಗಕ್ಕೆ ಏರುತ್ತಿರುವ ಅವರಿಗೆ ಯಕ್ಷಗಾನ ರಂಗದಲ್ಲಿರುವ ಅಸಮತೋಲನ, ಕಲಾವಿದರ ಬವಣೆಯ ಬದುಕುಗಳ ಬಗ್ಗೆ ಅತೀವ ಕಾಳಜಿಯುಂಟಾಯಿತು. ಆ ದೂರದೃಷ್ಟಿ, ಚಿಂತನೆಯ ಫಲವೇ ‘ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು’ ಎಂಬ ಸಂಸ್ಥೆಯ ಹುಟ್ಟಿಗೆ ಹೇತುವಾಯಿತು. ಈ ಸಂಸ್ಥೆಯ ಕಾರ್ಯ ವೈಖರಿಯನ್ನು ತಿಳಿಯುವ ಮೊದಲು ಪಟ್ಲ ಸತೀಶ್ ಶೆಟ್ಟಿಯವರು ಹೇಗೆ ಸದಾಕಾಲ ಕಾರ್ಯ ಚಟುವಟಿಕೆಯಲ್ಲಿರುವ ವ್ಯಕ್ತಿ ಎಂದು ತಿಳಿದುಕೊಳ್ಳೋಣ.


ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಾರ್ಯ ಬಾಹುಳ್ಯದ ಒತ್ತಡವಿದ್ದಾಗಲೂ ಪ್ರತಿನಿತ್ಯದ ಮೇಳದ ಭಾಗವತಿಕೆಯ ಕರ್ತವ್ಯವನ್ನು ನಿಭಾಯಿಸುತ್ತಾರೆ. ಟ್ರಸ್ಟ್ ಗೆ 35ಕ್ಕೂ ಮಿಕ್ಕಿ ಪ್ರಾದೇಶಿಕ ಘಟಕಗಳಿವೆ. ಅವುಗಳ ಕಾರ್ಯ ನಿರ್ವಹಣೆಯ ಮೇಲುಸ್ತುವಾರಿ ಮತ್ತು ನಿರ್ದೇಶನವನ್ನು ಮಾಡಬೇಕು.
ಪಟ್ಲ ಸತೀಶ್ ಶೆಟ್ಟಿಯವರು ಅತಿ ದೊಡ್ಡ ಸಂಘಟನಾ ಚತುರ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲದಿದ್ದರೆ ಇಷ್ಟು ಬೃಹತ್ ಅದರಲ್ಲೂ 35ಕ್ಕೂ ಮಿಕ್ಕಿ ಪ್ರಾದೇಶಿಕ ಘಟಕಗಳಿರುವ ಸಂಸ್ಥೆಯನ್ನು ಕಟ್ಟಿ ಬೆಳೆಸಿ ನಡೆಸುವುದಕ್ಕೆ ಸಾಧ್ಯವೇ? ಪಟ್ಲರ ಈ ಶ್ರಮದ ಹಿಂದೆ ಹಲವಾರು ಕಾಣದ ಕೈಗಳಿವೆ. ಹಲವಾರು ದಾನಿಗಳಿದ್ದಾರೆ. ಸಮಾಜದ ಪ್ರತಿಷ್ಠಿತ ಮಹಾನುಭಾವರ ಸಹಕಾರಗಳಿವೆ ಎಂದು ಪಟ್ಲರು ವಿನೀತರಾಗಿ ನುಡಿಯುತ್ತಾರೆ. ಎಲ್ಲಕ್ಕೂ ಹೆಚ್ಚು ಸೇವಾ ಮನೋಭಾವದ ಕಾರ್ಯಕರ್ತರ ತಂಡವೇ ಪಟ್ಲರ ಕಾರ್ಯಗಳಿಗೆ ಹೆಗಲುಕೊಟ್ಟು ಸಹಕರಿಸುತ್ತಾರೆ ಎಂಬುದನ್ನು ಪಟ್ಲರು ಕೃತಜ್ಞತೆಯಿಂದ ಹೇಳುತ್ತಾರೆ.
ಈ ಎಲ್ಲ ಕಾರಣಗಳಿಂದಲೂ ರಾತ್ರಿಯ ಮೇಳದ ಆಟಕ್ಕಿಂತಲೂ ಪಟ್ಲ ಸತೀಶ್ ಶೆಟ್ಟಿಯವರಿಗೆ ಹಗಲಿನ ಕಾರ್ಯಕ್ರಮಗಳಿಗೆ ಭಾರೀ ಬೇಡಿಕೆಯಿದೆ. ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ದಾನಿಗಳು, ಅಭಿಮಾನಿಗಳು ಕರೆದ ಕಾರ್ಯಕ್ರಮಗಳಲ್ಲಿ ತಪ್ಪದೆ ಸಂತೋಷದಿಂದಲೇ ಭಾಗವಹಿಸುವ ಇವರಿಗೆ ವಿಶ್ರಾಂತಿ ಬಹಳ ಕಡಿಮೆ. ಗಾನವೈಭವ, ನೃತ್ಯವೈಭವ, ಟ್ರಸ್ಟ್ ನ ವಾರ್ಷಿಕೋತ್ಸವ ಮತ್ತು ಉದ್ಘಾಟನೆಗಳು, ಅಭಿಮಾನೀ ಮತ್ತು ಸ್ನೇಹಿತರ ವಲಯದ ಖಾಸಗಿ ಸಮಾರಂಭಗಳು ಮತ್ತು ಇತರ ಯಕ್ಷಗಾನ ಕಾರ್ಯಕ್ರಮಗಳು, ವಿದೇಶ ಪ್ರವಾಸ ಮತ್ತು ದೂರದೂರುಗಳಿಗೆ ಪ್ರದರ್ಶನ ನಿಮಿತ್ತದ ಪ್ರವಾಸಗಳು ಹೀಗೆ ಹತ್ತು ಹಲವು ಕಾರ್ಯಕ್ರಮಗಳಿಂದ ಸದಾ ಚಟುವಟಿಕೆಯಲ್ಲಿರುವ ಪಟ್ಲ ಸತೀಶ್ ಶೆಟ್ಟಿಯವರು ಒಂದಿಷ್ಟೂ ಒತ್ತಡವಿಲ್ಲದೆ ಎಲ್ಲವನ್ನೂ ನಗುಮುಖದಿಂದಲೇ ನಿಭಾಯಿಸುತ್ತಾರೆ. ಎಲ್ಲಕ್ಕಿಂತಲು ಹೆಚ್ಚಾಗಿ ರಾತ್ರಿಯ ಮೇಳದ ಭಾಗವತಿಕೆ ಮತ್ತು ಪ್ರಯಾಣದ ಅವಧಿಯಲ್ಲಿ ನಿದ್ರೆಗೆ ಅವಕಾಶ ಕಡಿಮೆ. ಹಗಲಿನಲ್ಲಿ ಸ್ವಲ್ಪ ನಿದ್ದೆ, ಕುಟುಂಬದ ಬಗ್ಗೆ ಕಾಳಜಿ, ಟ್ರಸ್ಟ್ ನ ಕೆಲಸಗಳು ಹಾಗೂ ಹಗಲಿನ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸುವಿಕೆ ಇತ್ಯಾದಿಗಳನ್ನು ಪಟ್ಲರು ನಿಭಾಯಿಸಬೇಕು. ಆದ್ದರಿಂದಲೇ ಪಟ್ಲ ಸತೀಶ್ ಶೆಟ್ಟಿಯವರು ಒತ್ತಡಗಳ ನಡುವೆಯೂ ಸದಾ ಕ್ರಿಯಾಶೀಲರಾಗಿ  ಗೋಚರಿಸುತ್ತಾರೆ.

ಪಂಡಿತ ಪರಂಪರೆಯ ಡಾ. ಪಾದೇಕಲ್ಲು ವಿಷ್ಣು ಭಟ್ಟ 

ಸಾಹಿತ್ಯ ಕ್ಷೇತ್ರವೇ ಇರಲಿ, ಭಾಷಾ ತೊಡಕುಗಳೇ ಇರಲಿ, ವೇದ ಸಂಬಂಧಿ ಜಿಜ್ಞಾಸೆಗಳೇ ಇರಲಿ, ತುಳು, ಕನ್ನಡ, ಸಂಸ್ಕೃತ ಭಾಷೆಯ ಶಬ್ದಕೋಶಗಳ ಬಗ್ಗೆ ಬಂದ ಸಂಶಯ, ಜಿಜ್ಞಾಸೆಗಳೇ ಇರಲಿ, ನಮಗೆ ಮೊದಲು ನೆನಪಾಗುವುದು ಅವರೇ. ಇಂತಹಾ ಯಾವುದೇ ಸಮಸ್ಯೆಗಳಿಗೆ, ಪ್ರಶ್ನೆಗಳಿಗೆ ಕ್ಷಣಾರ್ಧದಲ್ಲಿ ಉತ್ತರ ಡಾ. ಪಾದೆಕಲ್ಲು ವಿಷ್ಣು ಭಟ್ಟರ ಬಳಿ ಇದೆ. ಜಿಜ್ಞಾಸುವಿನ ಪ್ರಶ್ನೆಗಳಿಗೆ ಪಂಡಿತನ ಬಳಿ ಉತ್ತರವಿದೆ. ಅಂತಹ ಪಂಡಿತ ಪರಂಪರೆಯ ವಿದ್ವಾಂಸ ಪಾದೇಕಲ್ಲು ವಿಷ್ಣು ಭಟ್ಟರ ಕುರಿತಾಗಿ ಕನ್ನಡ ಸಂಘ ಕಾಂತವರದವರು ಪ್ರಕಟಿಸಿದ ಹಾಗೂ ಡಾ ಎಸ್. ಆರ್. ಅರುಣ ಕುಮಾರ್ ಬರೆದ ಪುಸ್ತಕವೇ ‘ಪಂಡಿತ ಪರಂಪರೆಯ ಡಾ. ಪಾದೇಕಲ್ಲು ವಿಷ್ಣು ಭಟ್ಟ’. 

ಪುಸ್ತಕದಲ್ಲಿ ಪಾದೇಕಲ್ಲು ವಿಷ್ಣು ಭಟ್ಟರ ಬಗ್ಗೆ ಸವಿವರವಾದ ಚಿತ್ರಣ ಇದೆ. ಅವರು ತಮ್ಮ ಕಾಲೇಜು ದಿನಗಳಿಂದಲೂ ಸದಾ ಅಧ್ಯನಯನಶೀಲತೆಯನ್ನು ಮೈಗೂಡಿಸಿಕೊಂಡದ್ದು, ಹೆಚ್ಚಾಗಿ ಬಿಳಿ ಪಂಚೆಯಲ್ಲಿ, ಬಿಳಿಯಂಗಿಯಲ್ಲಿ ಕಾಣಿಸಿಕೊಳ್ಳುವ ವಿಷ್ಣು ಭಟ್ಟರ ಸರಳತನ, ತಮ್ಮ ಮೂಲ ಮನೆ ಪಾದೇಕಲ್ಲಿನಿಂದ ಉಡುಪಿ ಜಿಲ್ಲೆಯ ಆತ್ರಾಡಿಯಲ್ಲಿ ನೆಲೆಸಿದ ಕಥೆ, ಬಾಲ್ಯದಿಂದಲೇ ಕನ್ನಡ, ತುಳು, ಸಂಸ್ಕೃತ ಭಾಷೆಗಳಲ್ಲಿ ಅವರಿಗೆ ಇದ್ದ ಆಸಕ್ತಿ ಮತ್ತು ಪ್ರಭುತ್ವ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಅವರ ಶಿಕ್ಷಣದ ದಿನಗಳು, ಪಿತೃವಾಕ್ಯ ಪರಿಪಾಲಕ ವಿಷ್ಣು ಭಟ್ಟರು, ಬಿಳಿ ಪಂಚೆ ಅಂಗಿಯುಡುಗೆಯಲ್ಲಿ  ಎಂ. ಎ. ಪದವಿ ಪ್ರಮಾಣ ಪಾತ್ರ ಸ್ವೀಕರಿಸಿದ ಕುತೂಹಲಕಾರಿ ಸಂದರ್ಭ, ಸರಕಾರೀ ಕಾಲೇಜಿನ ಉದ್ಯೋಗದ ನಂತರ ಆಡಳಿತಾತ್ಮಕ ಪ್ರಾಂಶುಪಾಲ ಹುದ್ದೆಯ ನಿರ್ವಹಣೆ, ಆಮೇಲೆ ‘ಭಾಗವತದ ಯಕ್ಷಗಾನ ಪ್ರಸಂಗಗಳು’ ಎಂಬ ವಿಷಯದಲ್ಲಿ ಸಂಶೋಧನಾ ಪ್ರಬಂಧವನ್ನು ಬರೆದು ಪಿ ಎಚ್ ಡಿ ಪದವಿಯನ್ನು ಪಡೆದದ್ದು ಮೊದಲಾದ ವಿಷ್ಣು ಭಟ್ಟರ ಹತ್ತು ಹಲವು ಹೋರಾಟದ ಸಾಧನೆಯ ಮುಖಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.  ಪಾದೆಕಲ್ಲು ವಿಷ್ಣು ಭಟ್ಟರು ಯಕ್ಷಗಾನದ  ಬಗ್ಗೆಯೇ ಮಹಾಪ್ರಬಂಧವನ್ನು ಬರೆದು ಡಾಕ್ಟರೇಟ್ ಪದವಿ  ಪಡೆದವರು.

ಹೀಗೆ ಪಾದೇಕಲ್ಲು ಅವರ ಸಾಧನೆಯ ಹಾಗೂ ಸದಾ ಸಂಶೋಧನೆಯ ಕಾಯಕವನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಕಷ್ಟಗಳನ್ನು ಎದುರಿಸಿ ಸಾಧನೆಯನ್ನು ಮಾಡುವವರಿಗೆ ಭಟ್ಟರ ಜೀವನ ಚರಿತೆ ಒಂದು ಉತ್ತಮ ಮಾರ್ಗದಶಿ. ಡಾ. ಪಾದೆಕಲ್ಲು ವಿಷ್ಣು ಭಟ್ಟರು ಬರೆದ ಲೇಖನಗಳು, ಪ್ರಕಟವಾದ ಅವರ ಕೃತಿಗಳು, ಅವರ ಸಂಶೋಧನಾನುಭವ, ಸಂಪಾದಿತ ಕೃತಿಗಳು, ಸಹಸಂಪಾದಿತ ಕೃತಿಗಳು, ಅನುವಾದಿತ ಕೃತಿಗಳು, ಗೌರವ, ಪ್ರಶಸ್ತಿ, ಸನ್ಮಾನಗಳ ಬಗ್ಗೆ ವಿವರವಾದ ಮಾಹಿತಿಗಳು ಈ ಪುಸ್ತಕದಲ್ಲಿವೆ. ಯಕ್ಷಗಾನಕ್ಕೂ ವಿಷ್ಣು ಭಟ್ಟರಿಗೂ ಅವಿನಾಭಾವ ಸಂಬಂಧ. ಆ ಬಗ್ಗೆ ಪುಸ್ತಕದಲ್ಲಿ ಸವಿವರ ಕೊಡಲಾಗಿದ್ದು ಸಾಹಿತ್ಯ ಪ್ರಿಯರೆಲ್ಲರೂ ಓದಲೇ ಬೇಕಾದ ಪುಸ್ತಕ ಹಾಗೂ ಕನ್ನಡ ಸಾರಸ್ವತ ಲೋಕಕ್ಕೆ ಇದೊಂದು ಉತ್ತಮ ಕೊಡುಗೆ. 

ಮಧುಸೂದನ ಅಲೆವೂರಾಯ – ಕಲಾವಿದನ ಕಲಾಪ್ರಸರಣ  (ಕಲೆ ಬೆಳಗಿಸಿದ ಕ್ಯಾಮೆರಾ ಫ್ಲ್ಯಾಶ್ – ಭಾಗ 2)

ಕಳೆದ ಬಾರಿ ಕಲೆ ಬೆಳಗಿಸಿದ ಕ್ಯಾಮೆರಾ ಫ್ಲ್ಯಾಶ್ – ಭಾಗ 1ರಲ್ಲಿ ಕೋಂಗೋಟ್ ದಂಪತಿಗಳ ಬಗ್ಗೆ ಬರೆದಿದ್ದೆ.  ಕಲೆಯನ್ನು ತಮ್ಮ ಕರ್ತೃತ್ವ ಶಕ್ತಿಯಿಂದ ಪ್ರಸಾರಣಗೊಳಿಸುವ ಹಲವಾರು ಮಂದಿಗಳು ನಮ್ಮ ನಡುವೆ ನಿಸ್ವಾರ್ಥತೆಯಿಂದ ಕೆಲಸ ಮಾಡುತ್ತಾ ಇದ್ದಾರೆ. ಅಂತಹಾ ಹಲವು ಮಹನೀಯರು ನಮ್ಮ ನಡುವೆ ಇದ್ದಾರೆ ಎಂದು ಹೇಳಿದ್ದೆ. ಅವರಲ್ಲಿ ಮಧುಸೂದನ ಅಲೆವೂರಾಯರ ಹೆಸರು ಅಗ್ರಪಂಕ್ತಿಯಲ್ಲಿದೆ. ಆದುದರಿಂದ  ಕಲೆ ಬೆಳಗಿಸಿದ ಕ್ಯಾಮೆರಾ  ಫ್ಲ್ಯಾಶ್ – ಭಾಗ 2 ರಲ್ಲಿ ಮಧುಸೂದನ ಅಲೆವೂರಾಯರ ಬಗ್ಗೆ ಹೇಳಲೇ ಬೇಕು.

ಅಲೆವೂರಾಯರ ಹೆಸರನ್ನು ಕೇಳದವರಾರು? ಸಾಧಾರಣವಾಗಿ ಯಕ್ಷಪ್ರೇಮಿಗಳೆಲ್ಲರೂ ಕೇಳಿಯೇ ಇರುತ್ತೀರಿ. ಅವರ ಯಕ್ಷಗಾನದ ನಂಟು ಇಂದು ನಿನ್ನೆಯದಲ್ಲ. ಹಲವಾರು ವರ್ಷಗಳಿಂದಲೂ ಛಾಯಾಗ್ರಾಹಕರಾಗಿದ್ದುಕೊಂಡು ಕಲಾವಿದರೂ ಆಗಿ ಯಕ್ಷ ಕೈಂಕರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಮಂಗಳೂರಿನಂತಹಾ ಸಾಂಸ್ಕೃತಿಕ ಲೋಕ ಅನಾವರಣಗೊಳ್ಳುವ ನಗರವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ತಾನು ಸ್ವತಃ ಹಿಮ್ಮೇಳ ಕಲಾವಿದನಾಗಿ ಕಲಾಪ್ರದರ್ಶನಗಳಲ್ಲಿ ಭಾಗವಹಿಸುತ್ತಿರುವುದರ ಜೊತೆಯಲ್ಲಿಯೇ ಯಕ್ಷಗಾನ ಪ್ರದರ್ಶನಗಳ ಛಾಯಾಗ್ರಹಣವನ್ನೂ, ದಾಖಲೀಕರಣದ ಕಾರ್ಯವನ್ನೂ ಒಂದು ಉತ್ತಮ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ.

ವೃತ್ತಿಯಲ್ಲಿ ಲೆಕ್ಕಪರಿಶೋಧಕರಾದ ಮಧುಸೂದನ ಅಲೆವೂರಾಯರ ಮಡದಿ ಜಯಲಕ್ಷ್ಮಿ ಗೃಹಿಣಿ.  ಮಕ್ಕಳಾದ ಆದಿತ್ಯ ಮತ್ತು ಅಪೂರ್ವ ಇಬ್ಬರೂ ಇಂಜಿನೀರಿಂಗ್ ಓದುತ್ತಿದ್ದಾರೆ.  ಇಬ್ಬರು ಮಕ್ಕಳೂ 10 ವರ್ಷಗಳ ಕಾಲ ವೇಷಧಾರಿಗಳಾಗಿ ಕಲಾಸೇವೆಗೈದಿದ್ದಾರೆ.  ಈಗ ಉನ್ನತ ವ್ಯಾಸಾಂಗ ಮಾಡುತ್ತಿರುವ ಕಾರಣದಿಂದ ಯಕ್ಷಗಾನದಿಂದ ಸ್ವಲ್ಪ ಸಮಯದ ವರೆಗೆ ದೂರ ಉಳಿದಿದ್ದಾರೆ. ಅಲೆವೂರಾಯರ ತಂದೆ ಲಕ್ಷ್ಮೀನಾರಾಯಣ ಅಲೆವೂರಾಯರು ಯಕ್ಷಗಾನ ವೇಷಧಾರಿ. ಕುತೂಹಲಕಾರಿ ಸಂಗತಿಯೆಂದರೆ ಕೈ ಬರಹದ ಮತ್ತು ತಾಳೆಗರಿಯ ಅನೇಕ ಪ್ರಸಂಗಗಳು ಅವರ ಸಂಗ್ರಹದಲ್ಲಿ ಇದ್ದವು. “ಆಗ ನಮಗೆ ಅದರ ಮಹತ್ವ ತಿಳಿಯದ ಕಾರಣ ಅವರ ನಿಧನಾ ನಂತರ ಅವುಗಳೆಲ್ಲಾ ನಾಶವಾದುವು.1994ರಲ್ಲಿ ಅವರು ನಿಧನರಾದರು. ಅವರ ನೆನಪಿನಲ್ಲಿ  ಪ್ರತಿ ವರ್ಷ ಒಬ್ಬರು ಕಲಾವಿದರನ್ನು ಸನ್ಮಾನಿಸುತ್ತೇವೆ ಈ ವರ್ಷ  ಭಾಗವತ ಹರೀಶ್ ಶೆಟ್ಟಿ ಸೂಡರನ್ನು ಸನ್ಮಾನಿಸಿದ್ದೇವೆ.” ಎಂದು ಮಧುಸೂದನ ಅಲೆವೂರಾಯರು ಹೇಳುತ್ತಾರೆ.  ಇವರು ಅಧ್ಯಕ್ಷನಾಗಿರುವ ಸರಯೂ ಬಾಲ ಯಕ್ಷ ವೃಂದವು ಸುಮಾರು 9 ವರ್ಷಗಳಿಂದ ವೃತ್ತಿ ಕಲಾವಿದರನ್ನು ಒಟ್ಟುಗೂಡಿಸಿ ಪ್ರತಿ ವರ್ಷ ಬಯಲಾಟ ಸಪ್ತಾಹವನ್ನುನಡೆಸಿಕೊಂಡು ಬರುತ್ತಿದೆ ಮತ್ತು ಅದರಲ್ಲಿ ನೂರಾರು ಕಲಾವಿದರನ್ನು ಸನ್ಮಾನಿಸಿದ್ದಾರೆ. ಯಕ್ಷಗಾನ ಭರತನಾಟ್ಯ, ಪ್ರಸಾಧನದವರು, ಸಂಘಟಕರು, ಅಂಧ ಕಲಾವಿದರು ಹೀಗೆ  ಒಂದು ಸಪ್ತಾಹದಲ್ಲಿ 10 ರಿಂದ 12 ಕಲಾವಿದರನ್ನು ಸನ್ಮಾನಿಸುತ್ತಾರೆ. ಈ ಸಾಲಿನಲ್ಲಿ ಕೋರೋನಾ ಬಾಧೆಯಿಂದ ಇರುವ ನೀತಿ ನಿಯಮಾವಳಿಗಳಿಂದಾಗಿ ಸಪ್ತಾಹ ಸಾಧ್ಯವಾಗಲಿಲ್ಲ. ಆದರೂ ಅವಕಾಶ ಸಿಕ್ಕಿದಂತೆ ಕಾರ್ಯಕ್ರಮ ಸಂಯೋಜಿಸಿ ಈ ತಿಂಗಳಿನಲ್ಲಿ 5 ಜನ ಹವ್ಯಾಸಿ ಕಲಾವಿದರನ್ನು ಅಲೆವೂರಾಯರ ಸಾರಥ್ಯದ ಸರಯೂ ಯಕ್ಷ ಬಾಲವೃಂದ ಸನ್ಮಾನಿಸಿದೆ.   

ಅವರ ಛಾಯಾಗ್ರಹಣದಲ್ಲಿ ಅರಳಿದ ಹಲವಾರು ಚಿತ್ರಕುಸುಮಗಳು ಇಂದು ಸಾಮಾಜಿಕ ಜಾಲತಾಣದಲ್ಲಿಯೂ ವಿವಿಧ ಪತ್ರಿಕೆಗಳು, ಕೃತಿ, ಪುಸ್ತಕಗಳಲ್ಲಿಯೂ ಬೆಳಕು ಕಂಡಿದೆ. ಅವರು ಚಿತ್ರೀಕರಿಸಿದ ಹಲವಾರು ಯಕ್ಷಗಾನ ದೃಶ್ಯಗಳು ಇಂದು ಸಾಮಾಜಿಕ ಜಾಲತಾಣಗಳಾದ ಯು ಟ್ಯೂಬ್, ಫೇಸುಬುಕ್ ಮೊದಲಾದವುಗಳಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿವೆ. ಇವರ ಯು ಟ್ಯೂಬ್ ಚಾನೆಲ್  ದೇಶ ವಿದೇಶಗಳಲ್ಲಿ ನೆಲೆಸಿದ ಲಕ್ಷಾಂತರ ಮಂದಿ ವೀಕ್ಷಕರನ್ನು ಹೊಂದಿದೆ. ಯು ಟ್ಯೂಬ್ ನಲ್ಲಿ Madhusudana Alewooraya ಎಂಬ ಹೆಸರಿನಲ್ಲಿರುವ ಈ ಚಾನೆಲ್ ಈ ವರೆಗೆ ಸುಮಾರು 27400ಕ್ಕೂ ಹೆಚ್ಚು Subscribers ನ್ನು ಹೊಂದಿದೆ. ಇದರಲ್ಲಿ ಸುಮಾರು 5459 ವೀಡಿಯೋಗಳಿವೆ. ಮಧುಸೂದನ ಅಲೆವೂರಾಯರ ವಿಶಷ್ಟತೆಯೊಂದನ್ನು ಇಲ್ಲಿ ಹೇಳಲೇ ಬೇಕು. ಅವರ ಸಂಗ್ರಹದಲ್ಲಿ ಬಹಳಷ್ಟು ಅಪರೂಪ ಸಂಗ್ರಹಗಳಿವೆ. ಕೆಲವೊಂದು ಯಕ್ಷಗಾನದ Antique ಪ್ರದರ್ಶನಗಳ ದೃಶ್ಯಾವಳಿಗಳು ಅವರ ಸಂಗ್ರಹದಲ್ಲಿ ಇವೆ. ಅದರಲ್ಲಿ ಹೆಚ್ಚಿನದನ್ನು ಅಪ್ಲೋಡ್ ಮಾಡಿದ್ದಾರೆ. ಅಪ್ಲೋಡ್ ಮಾಡದೇ ಇರುವ ಇನ್ನೂ ಕೆಲವು ಅವರ ಸಂಗ್ರಹದಲ್ಲಿ ಇರಬಹುದೆಂದು ನನ್ನ ಊಹೆ.

ಕೆಲವೊಂದು ಈಗ ದೊರಕಲು ದುರ್ಲಭವಿರುವ, ಕಷ್ಟಸಾಧ್ಯವಾದ ವೀಡಿಯೊಗಳು ಮತ್ತು ಕೆಲವೊಂದು ವೈಶಿಷ್ಟ್ಯಪೂರ್ಣವಾದ ವೀಡಿಯೊಗಳು ಅವರ ಚಾನೆಲ್ ನಲ್ಲಿವೆ. ಕಲಾವಿದ ದಂಪತಿಗಳ ವೀಡಿಯೊ, ಅಳಿದುಹೋದ ಕಲಾವಿದರ ಯಕ್ಷಗಾನದ ವೀಡಿಯೊ ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮಧುಸೂದನ ಅಲೆವೂರಾಯರು ತಾನು ಸ್ವತಃ ಕಲಾವಿದರು. ಆಟಕೂಟಗಳಲ್ಲಿ ಪ್ರದರ್ಶನ ನೀಡುವ ಉತ್ತಮ ಮದ್ದಳೆಗಾರರು. ತಾನು ಕಲಾವಿದರಾಗಿದ್ದುದು ಮಾತ್ರವಲ್ಲ ಯಕ್ಷಗಾನ ಪ್ರಸಾರಕರಾಗಿದ್ದುಕೊಂಡೂ ಕಲಾಸೇವೆಗೈಯುವ ಮಧುಸೂದನ ಅಲೆವೂರಾಯರ ಯು ಟ್ಯೂಬ್ ವೀಡಿಯೋ ಲಿಂಕ್ ಒಂದನ್ನು ಕೆಳಗೆ ಕೊಡಲಾಗಿದೆ. ನೋಡಲೇಬೇಕಾದ ವೀಡಿಯೋ ಇದು. 

ರಸಲೋಕ ದ್ರಷ್ಟಾರ ದೇರಾಜೆ ಸೀತಾರಾಮಯ್ಯ 

‘ರಸಲೋಕ ದ್ರಷ್ಟಾರ’ ಯಕ್ಷಗಾನ ಪ್ರಪಂಚದ ‘ರಸಋಷಿ’ ಎಂದೇ ಖ್ಯಾತರಾದ ಶ್ರೀ ದೇರಾಜೆ ಸೀತಾರಾಮಯ್ಯ ಅವರ ಕುರಿತಾದ ಹೊತ್ತಗೆಯಿದು. ಈ ಪುಸ್ತಕವು ಹಿರಿಯರಾದ ದೇರಾಜೆಯವರ ಬಗೆಗೆ ಸಾಕಷ್ಟು ಮಾಹಿತಿಗಳನ್ನು ಹೊಂದಿ ಅತ್ಯುತ್ತಮವಾಗಿ ಮೂಡಿಬಂದಿದೆ. ಯಕ್ಷಗಾನ ಕಲೆಗೆ, ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಶ್ರೀಯುತರ ಕೊಡುಗೆಗಳು ಅನುಪಮವಾದುದು. ಇವರಿಂದ ರಚಿಸಲ್ಪಟ್ಟ ಶ್ರೀರಾಮಚರಿತಾಮೃತಂ ಮತ್ತು ಶ್ರೀಮನ್ಮಹಾಭಾರತ ಕಥಾಮೃತಂ ಎಂಬ ಎರಡು ಕೃತಿಗಳಂತೂ ಮಹಾನ್ ಕೊಡುಗೆಗಳಾಗಿ ಖ್ಯಾತವಾಗಿವೆ. ಕಲಾವಿದರು, ಅಧ್ಯಯನಶೀಲರು, ಸಾಹಿತ್ಯಾಸಕ್ತರು ಮಾಹಿತಿಗಾಗಿ ಈ ಕೃತಿಗಳನ್ನು ಅವಲಂಬಿಸುವುದು ತಿಳಿದಿರುವ ವಿಚಾರ. ಉಪಯೋಗದ ನೆಲೆಯಿಂದಲೇ ಕೃತಿಯ ಮೌಲ್ಯವನ್ನು ತಿಳಿಯಬಹುದು. ಅಲ್ಲದೆ ಕುರುಕ್ಷೇತ್ರಕ್ಕೊಂದು ಆಯೋಗ, ರಾಮರಾಜ್ಯದ ರೂವಾರಿ, ರಾಮರಾಜ್ಯ ಪೂರ್ವರಂಗ, ಯಕ್ಷಗಾನ ವಿವೇಚನ, ಪ್ರಿಯದರ್ಶನಂ, ಧರ್ಮದಾಸಿ, ವಿಚಾರವಲ್ಲರಿ, ಧರ್ಮದರ್ಶನ, ಶೂರ್ಪನಖಿಯ ಸ್ವರಾಜ್ಯ ಮೊದಲಾದ ಕೃತಿಗಳನ್ನು ಶ್ರೀ ದೇರಾಜೆಯವರು ರಚಿಸಿರುತ್ತಾರೆ. ಶ್ರೀಯುತರ ಬಗೆಗೆ ಈ ಹಿಂದೆ ಲೇಖನವೊಂದನ್ನು ಬರೆದಿದ್ದೆ ಎಂಬ ಸಂತೋಷವಿದೆ. ಅವರ ಕುರಿತಾದ ಈ ಹೊತ್ತಗೆಯನ್ನು ಪರಿಚಯಿಸುವುದು ಭಾಗ್ಯವೆಂದು ಭಾವಿಸುತ್ತೇನೆ. 

‘ರಸಲೋಕ ದ್ರಷ್ಟಾರ’ ಎಂಬ ಈ ಪುಸ್ತಕವು 2017ರಲ್ಲಿ ಪ್ರಕಟವಾಗಿತ್ತು. ಇದರ ಪ್ರಧಾನ ಸಂಪಾದಕರು ಶ್ರೀ ಜಿ. ಎಸ್. ಭಟ್ಟ. ಲೇಖಕರು ಶ್ರೀ ಕೆ. ಶ್ರೀಕರ ಭಟ್ ಮುಂಡಾಜೆ. ನೂರಾ ಇಪ್ಪತ್ತನಾಲ್ಕು ಪುಟಗಳಿಂದ ಕೂಡಿದ ಉತ್ತಮವಾದ ಪುಸ್ತಕ. ಪ್ರಕಾಶಕರು ಚೇತನ್ ಬುಕ್ ಹೌಸ್, ಮೈಸೂರು. ಚೇತನ ಸಾಹಿತ್ಯ ಕಲಾಸಾಧಕರು ಮಾಲಿಕೆಯಡಿ ಈ ಹೊತ್ತಗೆಯು ಮುದ್ರಿಸಲ್ಪಟ್ಟಿದೆ. ಈ ಪುಸ್ತಕದಲ್ಲಿ ದೇರಾಜೆಯವರ ವ್ಯಕ್ತಿತ್ವ, ಸಾಧನೆಗಳನ್ನು ತಿಳಿಸುವ ದೇರಾಜೆ ಸೀತಾರಾಮಯ್ಯ ಸೂಕ್ಷ್ಮ ಪರಿಚಯ, ದೇರಾಜೆ ಎನ್ನುವ ವಿದ್ಯಮಾನ, ಶಿವರಾಮ ಕಾರಂತರ ಮೆಚ್ಚಿನ ‘ಯಕ್ಷಗಾನ ರಾಕ್ಷಸ’, ಮಾತು ಕಾವ್ಯವಾಗುವ ಬಗೆ, ಲಕ್ಷ್ಮೀಶ ತೋಳ್ಪಾಡಿ ಕಂಡಂತೆ ದೇರಾಜೆ, ದೇರಾಜೆಯವರ ಪೂರ್ವರಂಗ, ದೇರಾಜೆಯವರನ್ನು ಮೆಚ್ಚಿಕೊಂಡ ಮಹನೀಯರು, ಅಪ್ಪಯ್ಯನೆಂಬ ಬೆರಗು- ದೇರಾಜೆಯವರ ಮಕ್ಕಳು, ದೇರಾಜೆ ಕೃತಿಗಳ ಕುರಿತು, ನಿತ್ಯ ಜೀವನದಲ್ಲೂ ದೇರಾಜೆ ಮಾತಿನ ಸಿಹಿ, ದೇರಾಜೆ ಸಂದರ್ಶನ, ದೇರಾಜೆ ಬಗ್ಗೆ ಮತ್ತಷ್ಟು ಎಂಬ ಲೇಖನಗಳಿವೆ. ಬಳಿಕ ದೇರಾಜೆ ಕೃತಿಗಳ ಸೂಚಿ, ದೇರಾಜೆ ಲೇಖನಗಳ ಸೂಚಿ, ದೇರಾಜೆಯವರ ಕುರಿತು ಕೃತಿಗಳ ಸೂಚಿ, ದೇರಾಜೆ ಜೀವನದ ಪ್ರಮುಖ ಘಟನೆಗಳ ಸೂಚಿ, ದೇರಾಜೆ ಸ್ಮೃತಿಗೌರವ ಪುರಸ್ಕೃತರ ಸೂಚಿ ಎಂಬ ಶೀರ್ಷಿಕೆಯಡಿ ಮಾಹಿತಿಗಳನ್ನು ನೀಡಲಾಗಿದೆ. ಬಳಿಕ ಪ್ರಧಾನ ಸಂಪಾದಕ ಜಿ.ಎಸ್. ಭಟ್ಟರ ಮತ್ತು ಲೇಖಕ ಕೆ. ಶ್ರೀಕರ ಭಟ್ಟರ ವ್ಯಕ್ತಿ ಪರಿಚಯವನ್ನು ನೀಡಲಾಗಿದ್ದು ಹೊತ್ತಗೆಯ ಹೊರ ಆವರಣದಲ್ಲಿ ಪ್ರಧಾನ ಸಂಪಾದಕ ಜಿ.ಎಸ್. ಭಟ್ಟರ ಶುಭ ಹಾರೈಕೆಯ ನುಡಿಗಳನ್ನು ನೀಡಲಾಗಿದೆ. ಹಿರಿಯ ಚೇತನ ದಿ| ದೇರಾಜೆ ಸೀತಾರಾಮಯ್ಯನವರಿಗೆ ಗೌರವಪೂರ್ವಕ ಪ್ರಣಾಮಗಳು. ಈ ಹೊತ್ತಗೆಗೆ ಕಾರಣರಾದ ಎಲ್ಲಾ ಬಂಧುಗಳಿಗೂ ಅಭಿನಂದನೆಗಳು. 

ಒಂದೊಂದು ನದಿಗೂ ಒಂದೊಂದು ಕಥೆ – ತಾರಾನಾಥ ವರ್ಕಾಡಿ

ಶ್ರೀ ತಾರಾನಾಥ ವರ್ಕಾಡಿ ಅವರು ತೆಂಕುತಿಟ್ಟಿನ ಹಿರಿಯ ಕಲಾವಿದರು. ಶ್ರೀ ಧರ್ಮಸ್ಥಳ ಮೇಳದಲ್ಲಿ ಪುಂಡುವೇಷಧಾರಿಯಾಗಿ ಅನೇಕ ವರ್ಷಗಳ ಕಾಲ ಕಲಾಸೇವೆಯನ್ನು ಮಾಡಿದ ಇವರು ಕನ್ನಡ ಎಂ. ಎ. ಪದವೀಧರರು. ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ನಾಟ್ಯವನ್ನು ಕಲಿತು ಸುಂಕದಕಟ್ಟೆ, ಕದ್ರಿ, ನಂದಾವರ, ಅರುವ, ಬಪ್ಪನಾಡು ಮೇಳಗಳಲ್ಲಿ ಬಳಿಕ ಶ್ರೀ ಧರ್ಮಸ್ಥಳ ಮೇಳದಲ್ಲಿ ಕಲಾಸೇವೆಯನ್ನು ಮಾಡಿ ತಿರುಗಾಟಕ್ಕೆ ಸ್ವಯಂ ನಿವೃತ್ತಿ ಘೋಷಿಸಿದ್ದರು. ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಅಭ್ಯಸಿಸಿದ ಇವರಿಗೆ ಬಳಿಕ ಅದೇ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುವ ಭಾಗ್ಯವೂ ಒದಗಿ ಬಂದಿತ್ತು. ಶ್ರೀ ತಾರಾನಾಥ ವರ್ಕಾಡಿಯವರ ಅನೇಕ ಶಿಷ್ಯಂದಿರು ಇಂದು ವಿವಿಧ ಮೇಳಗಳಲ್ಲಿ ಕಲಾವಿದರಾಗಿ ವ್ಯವಸಾಯ ಮಾಡುತ್ತಿದ್ದಾರೆ. ಕಲಾವಿದನಾಗಿದ್ದುಕೊಂಡೇ ಸಾಹಿತ್ಯ ಕ್ಷೇತ್ರದತ್ತ ಒಲವನ್ನು ಹರಿಸಿದ್ದರು. ಬರೆಯುವ ಕಲೆಯು ಸಿದ್ಧಿಸಿತ್ತು. ಪ್ರಬುದ್ಧ ಲೇಖಕನಾಗಿಯೂ ಗುರುತಿಸಿಕೊಂಡರು. ಸರಸ್ವತಿ ದೇವಿಯ ಅನುಗ್ರಹದಿಂದ ಪ್ರಸಂಗ ರಚನೆ ಮತ್ತು ಕೃತಿ ರಚನಾ ಕಾಯಕಗಳಲ್ಲೂ ತೊಡಗಿಸಿಕೊಂಡರು. ಡಾ. ಶಿಮಂತೂರು ನಾರಾಯಣ ಶೆಟ್ಟಯವರಿಂದ ಪ್ರಸಂಗ ರಚನಾ ಕ್ರಮವನ್ನೂ ಶ್ರೀ ಕೊರ್ಗಿ ವೆಂಕಟೇಶ ಉಪಾಧ್ಯಾಯರಿಂದ ಅರ್ಥಗಾರಿಕೆಯನ್ನೂ ಶ್ರೀ ತಾರಾನಾಥರು ಅಭ್ಯಸಿಸಿದ್ದರು. ಪ್ರಸ್ತುತ ಅನೇಕ ವರ್ಷಗಳಿಂದ ‘ಬಲ್ಲಿರೇನಯ್ಯ’ ಮಾಸಪತ್ರಿಕೆಯ ಸಂಪಾದಕರಾಗಿಯೂ ಕಲಾಭಿಮಾನಿಗಳಿಗೆ ಇವರು ಪರಿಚಿತರು. ವಿದ್ವಾಂಸರಾದ ಡಾ. ಶಿಮಂತೂರು ನಾರಾಯಣ ಶೆಟ್ಟಿಯವರ ಬದುಕು ಬರಹ ಕುರಿತಾದ ಬರೆದ ಅಭಿನವ ನಾಗವರ್ಮ ಮತ್ತು ಪುರಾಣ ಲೋಕದ ಬಾಲಕರು ಎಂಬ ಪುಸ್ತಕಗಳು ಪ್ರಕಟವಾಗಿ ಓದುಗುರ ಕೈ ಸೇರಿದ ವಿಚಾರ ಎಲ್ಲರಿಗೂ ತಿಳಿದಿದೆ. ಕನ್ನಡ ಪೌರಾಣಿಕ, ಕಾಲ್ಪನಿಕ ಪ್ರಸಂಗಗಳನ್ನೂ ರಚಿಸಿದ್ದಾರೆ.

ಶ್ರೀ ತಾರಾನಾಥ ವರ್ಕಾಡಿ ಅವರು ಬರೆದ ಈ ಕೃತಿಯ ಹೆಸರು ‘ಒಂದೊಂದು ನದಿಗೂ ಒಂದೊಂದು ಕಥೆ’. ಈ ಹೊತ್ತಗೆಯು 2012ನೇ ಇಸವಿಯಲ್ಲಿ ಪ್ರಕಟವಾಗಿತ್ತು. ಪ್ರಕಾಶಕರು ಆಜ್ಞಾಸೋಹಮ್ ಪ್ರಕಾಶನ ಬೆಳ್ಮಣ್ಣು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ವೀರೇಂದ್ರ ಹೆಗಡೆಯವರು ಶುಭ ಹಾರೈಸಿ ಆಶೀರ್ವದಿಸಿರುತ್ತಾರೆ. ಬಳಿಕ ‘ನಾಲ್ಕು ಮಾತುಗಳು’ ಎಂಬ ಶೀರ್ಷಿಕೆಯಡಿ ಶ್ರೀ ಕೆ.ಎಸ್. ನಾರಾಯಣಾಚಾರ್ಯ ಅವರ ಲೇಖನವಿದೆ. ಲೇಖಕ ಶ್ರೀ ತಾರಾನಾಥ ವರ್ಕಾಡಿಯವರು ‘ಮನದೊಳಗಿನ ಮಂದಾಕಿನಿ’ ಶೀರ್ಷಿಕೆಯಡಿ ಸಹಕರಿಸಿದ ಮಹನೀಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿ, ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ. ಸುಮಾರು ಇನ್ನೂರ ಮೂವತ್ತು ಪುಟಗಳಿಗೆ ಚಾಚಿದ ಈ ಕೃತಿಯಲ್ಲಿ ಒಟ್ಟು ನೂರಾ ಹನ್ನೊಂದು ನದಿಗಳ ಉಗಮ ಮತ್ತು ಅವುಗಳ ವಿಶೇಷತೆಗಳನ್ನು ಶ್ರೀ ತಾರಾನಾಥ ವರ್ಕಾಡಿ ಅವರು ವಿವರವಾಗಿ ನೀಡಿರುತ್ತಾರೆ. ಬಳಿಕ ‘ಒಂದು ಹರಕೆ’ ಶೀರ್ಷಿಕೆಯಡಿ ಡಾ| ಬನ್ನಂಜೆ ಗೋವಿಂದಾಚಾರ್ಯ ಅವರ ಲೇಖನವಿದೆ. ಲೇಖಕ ಶ್ರೀ ತಾರಾನಾಥರ ಬದುಕಿನ ವಿವರವನ್ನೂ ಸಂಕ್ಷಿಪ್ತವಾಗಿ ನೀಡಲಾಗಿದೆ.

ಲೇಖಕ:ರವಿಶಂಕರ್ ವಳಕ್ಕುಂಜ