Monday, February 24, 2025
Home Blog Page 371

ಎಸ್. ಪಿ. ಬಾಲಸುಬ್ರಹ್ಮಣ್ಯಂ – ಈ ಹಾಡಿನಂತೆಯೇ ಜೊತೆಯಲ್ಲಿಯೇ ಇದ್ದುಬಿಡಿ ಎಸ್.ಪಿ. ಸರ್… 

ನಿನ್ನೆಯಿಂದ ಟಿ.ವಿ. ವಾರ್ತೆ, ಯು ಟ್ಯೂಬ್ ಚಾನೆಲ್ ಮೊದಲಾದುವುಗಳನ್ನು ನೋಡುವ ಯಾವುದೇ ಸಾಹಸಗಳನ್ನು ಮಾಡದೇ ಕುಳಿತಿದ್ದೇನೆ. ನೋಡಿದರೆ ಮತ್ತೆ ಮತ್ತೆ  ಖ್ಯಾತ ಗಾಯಕ  ಎಸ್. ಪಿ. ಬಾಲಸುಬ್ರಹ್ಮಣ್ಯಂ ನೆನಪಾಗುತ್ತಿದ್ದಾರೆ. ಅರಿಯದೆಯೇ ಕಣ್ಣಂಚಿನಿಂದ ಎರಡು ಬಿಂದುಗಳು ಕೆಳ ಜಾರುತ್ತವೆ. ಮಧುರ ಸ್ವರಗಳ ಜೊತೆಗೆ ಅವರ ಮಾನವೀಯತೆಯ ಹೃದಯವನ್ನು ನೆನೆ ನೆನೆದು ಭಾವಜಲ ತುಂಬಿ ಬರುತ್ತಿದೆ. ನೀವು ಎಂದೂ ನಮ್ಮನ್ನು ಬಿಟ್ಟು ದೂರ ಹೋಗಿಲ್ಲ  ಎಸ್.ಪಿ. ಸರ್…  ನಮ್ಮ ಜೊತೆಯಲ್ಲಿಯೇ ಇರುತ್ತೀರಿ. ಭಾವದಲ್ಲಿಯೂ ಹೃದಯದಲ್ಲಿಯೂ… ಈ ಕೆಳಗಿನ ಹಾಡಿನಂತೆಯೇ…..  

‘ಲಿಂಗಣ್ಣ’ – ಹೊಸಹಿತ್ತಿಲು ಮಹಾಲಿಂಗ ಭಟ್ಟರ ಅನುಭವ ಕಥನ 

ಲಿಂಗಣ್ಣ’ ಎಂಬ ಈ ಹೊತ್ತಗೆಯು ತೆಂಕುತಿಟ್ಟಿನ ಖ್ಯಾತ ಕಲಾವಿದರಾಗಿದ್ದ ಹೊಸಹಿತ್ತಿಲು ಶ್ರೀ ಮಹಾಲಿಂಗ ಭಟ್ಟರ ಅನುಭವ ಕಥನವಾಗಿ ಪ್ರಕಟವಾಗಿದೆ. ಇದು ಓದುಗರ ಕೈ ಸೇರಿದ್ದು 2011ರಲ್ಲಿ. ಈ ಪುಸ್ತಕದ ಪ್ರಕಾಶಕರು ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು, ಉಡುಪಿ. ನಿರೂಪಣೆ ಶ್ರೀ ಜೆಡ್ಡು ಸದಾಶಿವ ಭಟ್ಟರಿಂದ. ಇದು ಒಟ್ಟು ನೂರಾ ತೊಂಬತ್ತೆಂಟು ಪುಟಗಳಿಂದ ಕೂಡಿದ ಪುಸ್ತಕ. ಹೊಸಹಿತ್ತಿಲು ಮಹಾಲಿಂಗ ಭಟ್ಟರ ಬಗೆಗೆ ಮೊದಲೊಂದು ಲೇಖನವನ್ನು ಬರೆಯುವ ಅವಕಾಶವೂ ಸಿಕ್ಕಿತ್ತು. ಅವರ ಕುರಿತಾದ ‘ಲಿಂಗಣ್ಣ’ ಎಂಬ ಈ ಪುಸ್ತಕದ ಕುರಿತಾಗಿ ಬರೆಯುವುದೂ ಭಾಗ್ಯವೆಂದು ಭಾವಿಸುತ್ತೇನೆ.

ಮೊದಲಾಗಿ ‘ಪ್ರಕಾಶಕರ ಮಾತು’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರೊ. ಎಚ್. ಕೃಷ್ಣ ಭಟ್ ಅವರು ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಹಕರಿಸಿದ ಸರ್ವರನ್ನೂ ನೆನಪಿಸಿಕೊಂಡಿರುತ್ತಾರೆ. ಬಳಿಕ ವಿದ್ವಾಂಸರೂ ತಾಳಮದ್ದಳೆ ಅರ್ಥಧಾರಿಗಳೂ ಆಗಿರುವ ಡಾ. ಎಂ. ಪ್ರಭಾಕರ ಜೋಶಿ ಅವರು ಬರೆದ ಅಸಾಧಾರಣ ಕಲಾವಿದನೊಬ್ಬನ ಕಥನಕ್ಕೆ ಅಭಿನಂದನೆ’ ಎಂಬ ಲೇಖನವನ್ನು ನೀಡಲಾಗಿದೆ. ತದನಂತರ ಶ್ರೀ ಜೆಡ್ಡು ಸದಾಶಿವ ಭಟ್ಟರು ‘ನಿರೂಪಕನ ಬಿನ್ನಹ’ ಎಂಬ ಶೀರ್ಷಿಕೆಯಡಿ ಬರೆದ ಲೇಖನವಿದೆ. ಈ ಪುಸ್ತಕವು ಆತ್ಮಕಥನ, ಲಿಂಗಣ್ಣ-ಅಭಿಮಾನಿಗಳ ದೃಷ್ಟಿಯಲ್ಲಿ,ಚಿತ್ರಸಂಪುಟ, ಅನುಬಂಧಗಳು ಎಂಬ ನಾಲ್ಕು ವಿಭಾಗಗಳಿಂದ ಕೂಡಿದೆ. ಆತ್ಮಕಥನ ವಿಭಾಗದಲ್ಲಿ ಹುಟ್ಟು ಮತ್ತು ಬೆಳವಣಿಗೆ, ಕೌಟುಂಬಿಕ ಪರಿಸ್ಥಿತಿ, ಪ್ರೀತಿ ಅಭಿಮಾನಗಳೇ ಅಸ್ತಿ ಸಂಪತ್ತು, ತುಳು ಪ್ರಸಂಗಗಳು  ಮತ್ತು ನೈಜತೆ, ಬಡಗು ತಿಟ್ಟಿನೊಂದಿಗೆ ಸಂಪರ್ಕ, ನಾನು ವೇಷ ಮಾಡಿದ ಪ್ರಸಂಗಗಳು, ತಂದೆ ಹೊಸಹಿತ್ತಿಲು ಗಣಪತಿ ಭಟ್ಟರು,ಭಾಗವತಿಕೆ ಅರ್ಥಗಾರಿಕೆ  ರಂಗಸ್ಥಳದ ಶಿಸ್ತು, ನನ್ನ ಸಮಕಾಲೀನ ಸಮವಯಸ್ಕ ಕಲಾವಿದರು, ಇಂದಿನ ವೇಷಧಾರಿಗಳು, ಕೆಲವು ಪ್ರಸಂಗಗಳ ಒಳನೋಟ, ಕೆಲವು ವೈಚಾರಿಕ ಪ್ರಶ್ನೆಗಳು, ಕೆಲವು ರಸಮಯ ಸನ್ನಿವೇಶಗಳು, ಯಕ್ಷಗಾನದ ಹೆಸರಿನಲ್ಲಿ ಆಭಾಸಗಳು, ಮುಂದಿನ ಪೀಳಿಗೆಯವರಿಗೆ ಕಿವಿಮಾತು ಎಂಬ ವಿಚಾರಗಳಡಿ ಹೊಸಹಿತ್ತಿಲು ಮಹಾಲಿಂಗ ಭಟ್ಟರ ಮಾತುಗಳನ್ನು ಶ್ರೀ ಜೆಡ್ಡು ಸದಾಶಿವ ಭಟ್ಟರು ಅತ್ಯುತ್ತಮವಾಗಿ ನಿರೂಪಿಸಿ ಓದುಗರಿಗೆ ನೀಡಿರುತ್ತಾರೆ. ನಿಜಕ್ಕೂ ಇದೊಂದು ಸಾಹಸ. ‘ಲಿಂಗಣ್ಣ ಅಭಿಮಾನಿಗಳ ದೃಷ್ಟಿಯಲ್ಲಿ’ ಎಂಬ ವಿಭಾಗದಲ್ಲಿ ಜೆಡ್ಡು ನಾರಾಯಣ ಭಟ್ಟ, ಡಾ. ಕೆ.ಎಂ.ರಾಘವ ನಂಬಿಯಾರ್, ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್ಟ, ಕುರಿಯ ವೆಂಕಟ್ರಮಣ ಶಾಸ್ತ್ರಿ, ಪಿ. ಶಂಕರ ಭಟ್ಟ ಪೂಕಳ, ಪ್ರೊ| ಅಮೃತ ಸೋಮೇಶ್ವರ, ವಿದ್ವಾನ್ ಪುಚ್ಛೆಕೆರೆ ಕೃಷ್ಣ ಭಟ್ಟ, ಯೋಗೀಶ್ ರಾವ್ ಚಿಗುರುಪಾದೆ, ಇವರುಗಳು ಬರೆದ ಲೇಖನಗಳಿವೆ. ಚಿತ್ರಸಂಪುಟ ಎಂಬ ಭಾಗದಲ್ಲಿ ಸುಮಾರು ಮೂವತ್ತೈದಕ್ಕೂ ಹೆಚ್ಚು ಲಿಂಗಣ್ಣ ಮತ್ತು ಅವರ ವೇಷಗಳ ಚಿತ್ರಗಳನ್ನು ನೀಡಲಾಗಿದೆ. ಕೊನೆಯ ಅನುಬಂಧಗಳು ಎಂಬ ವಿಭಾಗದಲ್ಲಿ ಹೊಸಹಿತ್ತಿಲು ಶ್ರೀ ಮಹಾಲಿಂಗ ಭಟ್ಟರು ತಿರುಗಾಟ ನಡೆಸಿದ ಮೇಳಗಳು, ಮಾಡಿದ ವೇಷಗಳು, ಪಡೆದ ಪ್ರಶಸ್ತಿ ಸನ್ಮಾನಗಳು, ಲೇಖಕರ ವಿಳಾಸ, ಅಲ್ಲದೆ ಡಾ.ಕೆ.ಎಂ.ರಾಘವ ನಂಬಿಯಾರರು ಬರೆದ ‘ಜೆಡ್ಡು ಅವರ ಜಿದ್ದು’ ಎಂಬ ಬರಹವನ್ನೂ ನೀಡಲಾಗಿದೆ. ‘ಲಿಂಗಣ್ಣ’ ಶ್ರೇಷ್ಠ ಕಲಾವಿದ ಹೊಸಹಿತ್ತಿಲು ಶ್ರೀ ಮಹಾಲಿಂಗ ಭಟ್ಟರ ಅನುಭವ ಕಥನವು ಒಂದು ಅತ್ಯುತ್ತಮ ಪುಸ್ತಕ. 

ಲೇಖಕ: ರವಿಶಂಕರ್ ವಳಕ್ಕುಂಜ

ಯಕ್ಷಗಾನ ವೀಕ್ಷಣೆಗೂ ಶಿಫ್ಟ್ (ಪಾಳಿ)?

ಹೌದು. ಹೀಗೊಂದು ಪ್ರಶ್ನೆ ಇತ್ತೀಚೆಗಿನ ವರ್ಷಗಳಲ್ಲಿ ಕೇಳಿ ಬರುತ್ತಾ ಉಂಟು. ಇದೇನಿದು ಹೀಗೆ? ಎಂದು ಕೆಲವರು ಹುಬ್ಬೇರಿಸಬಹುದು. ಯಕ್ಷಗಾನ ನೋಡುವುದರಲ್ಲಿ ಶಿಫ್ಟ್ ಅಥವಾ ಪಾಳಿ ಎಂದರೆ ಏನರ್ಥ? ಹಾಗಿರಲು ಸಾಧ್ಯವೇ? ಎಂದೆಲ್ಲ ಪ್ರಶ್ನಿಸಬಹುದು. ಆದರಿದು ಸತ್ಯ. ಒಗಟಾಗಿ ಮಾತನಾಡುವ ಬದಲು ವಿವರವಾಗಿ ಬರೆಯಲು ತೊಡಗಬೇಕಾದರೆ ನಾವು ಸ್ವಲ್ಪ ಹಿಂದಕ್ಕೆ ಹೋಗಬೇಕು. ಮೊದಲಿನ ಕಾಲದಲ್ಲಿ ಅಂದರೆ ಕೆಲವಾರು ದಶಕಗಳಷ್ಟು ಹಿಂದಕ್ಕೆ ಹೋದರೆ ಯಕ್ಷಗಾನ ಪ್ರದರ್ಶನ ನೋಡಲು ಹೊರಟ ಪ್ರೇಕ್ಷಕ ಕಲಾಭಿಮಾನಿಗಳು ತಮ್ಮ ಜೊತೆಗೆ ಎಲ್ಲವನ್ನೂ ಅಂದರೆ ಅಗತ್ಯವಿರುವ ಸಾಮಗ್ರಿಗಳನ್ನು ತೆಗೆದುಕೊಂಡೇ ಹೋಗುತ್ತಿದ್ದರು. ಅದರಲ್ಲಿ ಚಾಪೆ, ವಸ್ತ್ರಗಳೂ ಸೇರಿದ್ದುವು. ಆಗೆಲ್ಲಾ ನೆಲದಲ್ಲೇ ಕುಳಿತು ಆಟ ನೋಡಬೇಕು. ಛಳಿಯಾದರೆ ಹೊದ್ದುಕೊಳ್ಳಲು ಕಂಬಳಿಯೂ ಬೇಕು. ಒಮ್ಮೆ ಆಟ ನೋಡಲು ಕುಳಿತವರು ಮನೆಗೆ ಹೊರಡುವುದು ಮಂಗಳ ಪದ ಹಾಡಿದ ಮೇಲೆಯೇ. ಅಷ್ಟೊಂದು ತನ್ಮಯತೆ, ತಲ್ಲೀನತೆಗಳು ಅಂದಿನ ಜನರಲ್ಲಿ ಇತ್ತು. ಅದೂ ಒಂದು ತರಹದ ಭಕ್ತಿಯೇ. ಕಲೆಯ ಮೇಲಿನ ಶ್ರದ್ಧೆ. ನಮ್ಮ ಪುರಾಣ ಪುಣ್ಯ ಪುರುಷರ ಮತ್ತು ದೇವತಾ ಸ್ತ್ರೀಯರ ಮೇಲಿನ ಭಕ್ತಿ. ಆದುದರಿಂದ ಅಂದಿನ ಯಕ್ಷಗಾನದ ಆಟ ಕೂಟಗಳಲ್ಲಿ ಪ್ರೇಕ್ಷಕರು ಅರ್ಧದಿಂದ ಎದ್ದು ನಿರ್ಗಮಿಸಿವುದು ಎಂದರೆ ಅದು ಬಹಳ ಅಪರೂಪದ ಘಟನೆ. ಬರಿಯ ಪ್ರೇಕ್ಷಕರನ್ನು ಹೇಳಿದರೆ ಸಾಕೆ? ಕಲಾವಿದರೂ ಹಾಗೆಯೇ. ಪೂರ್ಣ ಪ್ರದರ್ಶನ ಮುಗಿಯುವ ವರೆಗೆ ಚೌಕಿಯಲ್ಲಿಯೇ ಅಥವಾ ಹತ್ತಿರದ ಸ್ಥಳಗಳಲ್ಲಿಯೋ ಮಲಗಿ ವಿಶ್ರಾಂತಿ ಪಡೆದೋ ಅಥವಾ ತನ್ನದಲ್ಲದ ಪ್ರದರ್ಶನದ ಉಳಿದ ಅವಧಿಯನ್ನು ತನ್ನದೇ ಪ್ರದರ್ಶನವೆಂದು ಭಾವಿಸಿ, ವೀಕ್ಷಿಸಿ ಆಮೇಲೆ ಮಂಗಳ ಪದ ಹಾಡಿದ ನಂತರ ಚೌಕಿಯಿಂದ ನಿರ್ಗಮಿಸುವುದು ವಾಡಿಕೆಯಾಗಿತ್ತು. ಅಂದಿನ ಕಲಾವಿದರಿಗೆ ಹಾಗೂ ಪ್ರೇಕ್ಷಕರಿಗೆ ಮಧ್ಯರಾತ್ರಿಯ ಹೊತ್ತಿನಲ್ಲಿ ಆ ರೀತಿ ನಿರ್ಗಮಿಸುವ ಅನುಕೂಲತೆಗಳು ಇಲ್ಲದಿರುವುದು ಅವರ ಪೂರ್ಣ ಪ್ರಮಾಣದ ಉಪಸ್ಥಿತಿಗೆ ಕಾರಣವಾಗಿದ್ದಿರಬಹುದು. 

(ಫೋಟೋ: ಶ್ರುತಿ ಭಟ್ ಬಂದ್ಯಡ್ಕ, ಬೋಸ್ಟನ್ ,ಅಮೆರಿಕಾ)

ಆದರೆ ಈಗ ಹಾಗಲ್ಲ. ಹೆಚ್ಚಿನ ಕಲಾವಿದರಿಗೆ ಬಹಳಷ್ಟು ಅನುಕೂಲತೆಗಳಿವೆ. ಕಲಾಭಿಮಾನಿಗಳಾದ ಪ್ರೇಕ್ಷಕರಿಗೆ ಕೂಡಾ. ತನ್ನದೇ ವಾಹನ. ಸ್ವಂತ ದ್ವಿಚಕ್ರ, ಚತುಶ್ಚಕ್ರ ವಾಹನಗಳಲ್ಲಿ ಬರುತ್ತಾರೆ. ಹೋಗಲೇ ಬೇಕಾದ ಸಂದರ್ಭ ಬಂದರೆ ಸ್ವಲ್ಪ ಹೊತ್ತು ಆಟ  ನೋಡಿ ಆಮೇಲೆ ತಮ್ಮದೇ ವಾಹನಗಳನ್ನು ಏರಿ ಮನೆಯ ದಾರಿ ಹಿಡಿಯುತ್ತಾರೆ. ಕಲಾವಿದರೂ ಹಾಗೆಯೇ. ಕೆಲವು ಕಲಾವಿದರು ತಮ್ಮ ವೇಷ ಮುಗಿಸಿ ಮನೆಯ ದಾರಿ ಹಿಡಿಯಲೋಸುಗ ತಮ್ಮದೇ ವಾಹನದಲ್ಲಿ ಬಂದಿರುತ್ತಾರೆ. ಮನೆಯಲ್ಲಿ ಆರಾಮವಾಗಿ ಪ್ರಶಾಂತ ವಾತಾವರಣದಲ್ಲಿ ನಿದ್ರಿಸುವ ಆಲೋಚನೆಯೂ ಆರೋಗ್ಯಕ್ಕೆ ಒಳ್ಳೆಯದೇ. ಕೆಲವೊಮ್ಮೆ ಆ ವಿಮರ್ಶೆ ಈ ವಿಮರ್ಶೆ ಎಂದು ಕಲಾವಿದರನ್ನು ಟೀಕೆ ಮಾಡುವುದನ್ನು ಕಾಣುತ್ತೇವೆ. ಕಲಾವಿದನ ಕಲಾ ಜೀವನ ಎಂದರೆ ಅದು ಕತ್ತಿಯ ಅಲುಗಿನ ಮೇಲೆ ನಡೆದ ಹಾಗೆ. ಆತ ಕೆಲವೊಮ್ಮೆ ಒತ್ತಡದಲ್ಲಿಯೇ ಉತ್ತಮ ಪ್ರದರ್ಶನ ನೀಡಲು ಯತ್ನಿಸಬೇಕಾಗುತ್ತದೆ. ಕಲಾವಿದರೂ ಮನುಷ್ಯರೇ. ಅವರಿಗೂ ಕುಟುಂಬ, ಸಂಸಾರಗಳಿರುತ್ತವೆ. ಆದುದರಿಂದ ತಮ್ಮ ಪ್ರದರ್ಶನದ ಅವಧಿ ಮುಗಿದರೂ ಕಲಿಕಾ ದೃಷ್ಟಿಯಿಂದ ಚೌಕಿಯಲ್ಲಿಯೇ ಬೆಳಗಿನ ವರೆಗೆ ಉಳಿಯಬೇಕೆಂಬುದು ಪ್ರಸ್ತುತ ಸನ್ನಿವೇಶದಲ್ಲಿ ಹಾಸ್ಯಾಸ್ಪದ. ಯಾಕೆಂದರೆ ಕಲಿಯುವ ಆಕಾಂಕ್ಷೆಯಿರುವ ಕಿರಿಯ ಕಲಾವಿದರಿಗೆ ಈಗ ಕಲಿಕೆಗೆ ನೂರೆಂಟು ದಾರಿಗಳಿವೆ. ಚೌಕಿಯಲ್ಲಿಯೇ ಬೆಳಗಿನ ವರೆಗೆ ಉಳಿಯಲೇ ಬೇಕಾದ ಅನಿವಾರ್ಯತೆಯಿಲ್ಲ. ಹಾಗೆಂದು ಕಿರಿಯ ಕಲಾವಿದರಿಗೆ ಕೆಲವೊಮ್ಮೆ ಬೆಳಗಿನ ವರೆಗೆ ವೇಷಗಳಿರುವುದರಿಂದ ಅರ್ಧದಲ್ಲೇ ನಿರ್ಗಮಿಸುವ ಅವಕಾಶಗಳಿರುವುದಿಲ್ಲ. ಆದುದರಿಂದ ಈಗಿನ ಕಲಾವಿದರಿಗೆ ವಾಹನದ ಅನುಕೂಲತೆಗಳಿರುವುದರಿಂದ ಅವರ ಪಾಳಿಯನ್ನು ಮುಗಿಸಿ ಅವರು ಮನೆಗೆ ಹೋಗಿ ವಿಶ್ರಾಂತಿ ಪಡೆಯುವಲ್ಲಿ ಯಾವುದೇ ಅನಾನುಕೂಲತೆಗಳು ಉಂಟಾಗುವುದಿಲ್ಲ.  ನಾವು ಕಲಾವಿದರನ್ನು ಮಾತ್ರವೇ ಯಾಕೆ ಹೇಳಬೇಕು. ಕಲೆಯನ್ನು ಬೆಳಗಿಸುವುದರಲ್ಲಿ ಪ್ರೇಕ್ಷಕರ ಪಾಲೂ ಕಲಾಭಿಮಾನಿಗಳಾದ ನಮ್ಮ ಪಾಲೂ ಬೇಕಾದಷ್ಟಿವೆ. ಈಗ ಆಟದ ಪ್ರಾರಂಭದಿಂದ ಬೆಳಗ್ಗಿನ ಮಂಗಳ ಪದ್ಯದ ವರೆಗೆ ಪ್ರದರ್ಶನ ನೋಡುವವರು ಎಷ್ಟು ಮಂದಿ ಇದ್ದಾರೆ ಎಂದರೆ ಉತ್ತರಿಸಲು ಕಷ್ಟದ ಮತ್ತು ಹಿಂದೇಟು ಹಾಕುವ ಪರಿಸ್ಥಿತಿ ಇದೆ. ಯಾಕೆಂದರೆ ಕಲಾವಿದರಂತೆ ಪ್ರೇಕ್ಷಕರಿಗೂ ಕೂಡಾ ವಿಶ್ರಾಂತಿಯ ಅವಶ್ಯಕತೆಯಿದೆ. ಮರುದಿನದ ಕರ್ತವ್ಯಕ್ಕೆ ಹಾಜರಾಗಬೇಕು. ಅಥವಾ ತನ್ನದೇ ಸ್ವಂತ ಕೆಲಸ ಕಾರ್ಯಗಳನ್ನು ಮಾಡಬೇಕು. ಈಗ ಮೊದಲಿನ ಹಾಗೆ ನಿದ್ರೆಗೆಟ್ಟು ಮರುದಿನವಿಡೀ ನಿದ್ರೆಗೆ ವಶವಾಗಲು ಯಾರಿಗೂ ಅನುಕೂಲವಿಲ್ಲ. ಆದುದರಿಂದ ಇಡೀ ರಾತ್ರಿಯ ಆಟ ನೋಡುವ ಬದಲು ಆ ದಿನದ ಪ್ರಸಂಗದ ತನಗೆ ಇಷ್ಟವಾದ ಭಾಗವನ್ನು ವೀಕ್ಷಿಸಿ ಮನೆಗೆ ತೆರಳಬಹುದಲ್ಲ ಎಂಬ ಆಲೋಚನೆ ಅವರಿಗೆ ಬರುತ್ತದೆ. ಈ ಆಲೋಚನೆಗಳು ಹಲವಾರು ಪ್ರೇಕ್ಷಕರಿಗೆ ಬರುತ್ತದೆ. ಪ್ರೇಕ್ಷಕರಲ್ಲಿಯೂ ಕಲಾವಿದರಂತೆ ವಿಭಿನ್ನ ಅಭಿರುಚಿಯುಳ್ಳವರು ಇದ್ದೇ ಇರುತ್ತಾರೆ. ಈಗ ದೇವಿ ಮಹಾತ್ಮೆ ಪ್ರಸಂಗವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಕೆಲವು ಪ್ರೇಕ್ಷಕರಿಗೆ ಬ್ರಹ್ಮ ವಿಷ್ಣು ಸಂವಾದದ ಭಾಗ ಇಷ್ಟ. ಆ ಭಾಗವನ್ನು ಮಾತ್ರ ನೋಡಿ ಅವರು ಹೋಗುತ್ತಾರೆ. ಇನ್ನು ಕೆಲವರಿಗೆ ಮಧು ಕೈಟಭರ ವೇಷವನ್ನು ನೋಡಲೆಂದೇ ಬರುವ ಆಕಾಂಕ್ಷೆ. ಅವರು ಆಮೇಲೆ ನಾಪತ್ತೆ. ಕೆಲವರಿಗೆ ವಿದ್ಯುನ್ಮಾಲಿಯ ಮದುವೆ ಮತ್ತು ಯಕ್ಷನ ಜೊತೆ ಯುದ್ಧ ಇಷ್ಟ. ಅವರುಗಳು ಅಷ್ಟನ್ನು ನೋಡಿ ಹೋಗುತ್ತಾರೆ.

ಇನ್ನು ಹೆಚ್ಚಿನವರಿಗೆ ಮಹಿಷಾಸುರ ಎಂದರೆ ಪ್ರಾಣ. ಮಹಿಷಾಸುರನ ಪ್ರವೇಶದೊಂದಿಗೆ ಸಭೆಯಲ್ಲಿ ಕೆಲವು ಪ್ರೇಕ್ಷಕರ ಪ್ರವೇಶವೂ ಅದೇ ಸಮಯಕ್ಕೆ ಆಗುತ್ತದೆ. ಮಹಿಷಾಸುರ ನೋಡಿದ ನಂತರ ಉಳಿದ ಆಟ ನೋಡುವ ಆಸಕ್ತಿ ಅವರಲ್ಲಿ ಉಳಿದಿರುವುದಿಲ್ಲ. ಇನ್ನು ಕೆಲವರು ದೇವಿಯ ಮೇಲಿನ ಭಕ್ತಿಯಿಂದ ಹೆಚ್ಚಿನ ಹೊತ್ತು ನೋಡುತ್ತಾರೆ. ಕೆಲವರು ಚಂಡ ಮುಂಡರನ್ನು ನೋಡಲೆಂದೇ ಎಲ್ಲೆಲ್ಲಿಂದಲೋ ವಾಹನದಲ್ಲಿ ಅದೇ ಸಮಯಕ್ಕೆ ಬರುತ್ತಾರೆ. ಇನ್ನು ಕೆಲವರು ರಕ್ತಬೀಜನ ಪ್ರಬುದ್ಧ ಪಾತ್ರವನ್ನು ಇಷ್ಟಪಡುವವರು ಮನೆಯಲ್ಲಿ ಒಂದು ನಿದ್ದೆ ಮಗಿಸಿ ಆಟಕ್ಕೆ ಬರುತ್ತಾರೆ. ಹೀಗೆ ಪ್ರೇಕ್ಷಕರ ಉಪಸ್ಥಿತಿಯು ಒಂದು ಯಕ್ಷಗಾನ ಪ್ರದರ್ಶನದಲ್ಲಿ ಬದಲಾಗುತ್ತಲೇ ಇರುತ್ತದೆ. ಇದೇನೂ ಕಾಲ್ಪನಿಕವಾಗಿ ಬರೆದ ಸಂಗತಿಯೇನಲ್ಲ. ಹಲವಾರು ಕಲಾವಿದರಂತೆ ಪ್ರೇಕ್ಷಕರೂ ಕೂಡ ಪ್ರದರ್ಶನ ನಡೆಯುತ್ತಿದ್ದಂತೆ ಅನಿವಾರ್ಯವಾಗಿ ಅರ್ಧದಿಂದ ನಿರ್ಗಮಿಸುತ್ತಾರೆ. ಯಕ್ಷಗಾನ ಕಾಲಮಿತಿಗೆ ಒಳಪಟ್ಟದ್ದು ಕೂಡ ಇದೆ ಕಾರಣದಿಂದಲೇ ಇರಬಹುದೇನೋ ಎಂದು ತರ್ಕಿಸಲಾಗುತ್ತಿದೆ. ಇದು ಕೇವಲ ದೇವಿ ಮಹಾತ್ಮೆ ಪ್ರಸಂಗದಲ್ಲಿ ಮಾತ್ರವಲ್ಲ. ಎಲ್ಲಾ ಪ್ರಸಂಗದ ಪ್ರದರ್ಶನಗಳಲ್ಲಿಯೂ ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಆದರೆ ಈ ಬದಲಾದ ಪರಿಸ್ಥಿತಿ ಮತ್ತು ಜೀವನಕ್ರಮದಲ್ಲಿ ಕಲಾವಿದರಿಗೂ ಪ್ರೇಕ್ಷಕರಿಗೂ ಇದು ಅನಿವಾರ್ಯವಾಗಿದೆ. ಆದುದರಿಂದ ಕೆಲವು  ಪ್ರೇಕ್ಷಕರೂ ಕೂಡ ಒಂದು ಪ್ರದರ್ಶನದಲ್ಲಿ ಪಾಳಿಯ (ಶಿಫ್ಟ್) ಮೇಲೆ ಬದಲಾಗುತ್ತಲೇ ಇರುತ್ತಾರೆ. ಇನ್ನು ಕೆಲವೊಂದು ವಿಚಾರಗಳು ಅಭಿಮಾನದ ಮೇಲೆ ನಡೆಯುಂತಹದು. ತಾನು ಅಭಿಮಾನಿಸುವ ಕಲಾವಿದನ ವೇಷವನ್ನು ಮಾತ್ರ ನೋಡಿ ಆಮೇಲೆ ಮನೆಗೆ ಹೋಗುವ ಪ್ರೇಕ್ಷಕರೂ ಇದ್ದಾರೆ. ಒಬ್ಬ ಪ್ರಸಿದ್ಧಿ ಪಡೆದ ಕಲಾವಿದನಿಗೆ ಅಭಿಮಾನಿಗಳಿರುವುದು ತಪ್ಪೇನೂ ಅಲ್ಲ. ಆದರೆ ಅವರ ವೇಷವನ್ನು ಮಾತ್ರ ನೋಡುತ್ತೇನೆ ಎನ್ನುವುದು ಒಂದು ತಪ್ಪು ನಿರ್ಧಾರದ ಹಾಗೆ ಕಾಣುತ್ತದೆ. ಮಧುರವಾದ ಗಾಯನದಲ್ಲಿ ಒಂದು ಅಪಶ್ರುತಿ ಮೂಡಿದ ಹಾಗೆ. ಕೆಲವೊಂದು ಸಂದರ್ಭದಲ್ಲಿ ಕಲಾವಿದನಿಗೆ ಅಭಿಮಾನಿಗಳು ಕರೆ ಮಾಡಿ ಅವರ ಪಾತ್ರದ  ರಂಗಪ್ರವೇಶದ ಸಮಯವನ್ನೂ ಕೇಳಿಕೊಂಡು ಆಮೇಲೆ ಯಕ್ಷಗಾನ ನೋಡಲು ಬರುತ್ತಾರೆ. ರಂಗದಲ್ಲಿ ಕಲೆಯನ್ನು ಅಭಿನಯಿಸುವ ಕಲಾವಿದನಿಗೆ ಪ್ರೇಕ್ಷಕರ ಗಡಣದಲ್ಲಿ ಬದಲಾವಣೆಯಾಗುತ್ತಿರುವುದು ಗಮನಕ್ಕೆ ಬಾರದ ವಿಚಾರವೇನಲ್ಲ. ಆದುದರಿಂದ ಇಡೀ ರಾತ್ರಿಯ ಯಕ್ಷಗಾನ ಪ್ರದರ್ಶನವೊಂದರಲ್ಲಿ ಪ್ರೇಕ್ಷಕರೂ ಕೂಡ ಪಾಳಿಯಂತೆ (ಶಿಫ್ಟ್) ಬದಲಾಗುತ್ತಿರುವುದು ನಿಜಕ್ಕೂ ಆಶ್ಚರ್ಯಕರವಾದ ವಿಚಾರ!

ಯಕ್ಷ ಕಲಾ ತಪಸ್ವಿ ಕೀರಿಕ್ಕಾಡು ಮಾಸ್ತರ್ – ಲೇಖಕ ಗಣರಾಜ ಕುಂಬ್ಳೆ 

‘ಯಕ್ಷ ಕಲಾ ತಪಸ್ವಿ ಕೀರಿಕ್ಕಾಡು ಮಾಸ್ತರ್’ ಎಂಬುದು ಖ್ಯಾತ ಕಲಾವಿದರೂ ಪ್ರಸಂಗಕರ್ತರೂ ಆದ ದಿ| ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಕುರಿತಾಗಿ ಬರೆದ ಪುಸ್ತಕ. ಈ ಹೊತ್ತಗೆಯ ಲೇಖಕರು ಕಲಾವಿದರೂ ಪ್ರಾಧ್ಯಾಪಕರೂ, ಉತ್ತಮ ಬರಹಗಾರರೂ ಆಗಿರುವ ಶ್ರೀ ಗಣರಾಜ ಕುಂಬ್ಳೆ. ಇದು 2018ನೇ ಇಸವಿಯಲ್ಲಿ ಪ್ರಕಟವಾಗಿ ಓದುಗರ ಕೈ ಸೇರಿತ್ತು.  ‘ಕೀರಿಕ್ಕಾಡು ದಿ| ಮಾಸ್ತರ್ ವಿಷ್ಣು ಭಟ್ಟರು ಮತ್ತು ಯಕ್ಷಗಾನಕ್ಕೆ ಕೀರಿಕ್ಕಾಡು ಮನೆತನದ ಅನುಪಮ ಕೊಡುಗೆಗಳು’ ಎಂಬ ಲೇಖನವನ್ನು ಈ ಹಿಂದೆ ಬರೆಯುವ ಅವಕಾಶವಾಗಿತ್ತು. ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಕುರಿತಾದ ಪುಸ್ತಕದ ಬಗ್ಗೆಯೂ ಬರೆಯುವುದು ಭಾಗ್ಯವೆಂದು ಭಾವಿಸುತ್ತೇನೆ.

‘ಯಕ್ಷಕಲಾ ತಪಸ್ವಿ ಕೀರಿಕ್ಕಾಡು ಮಾಸ್ತರ್’ ಎಂಬ ಕೃತಿಯ ಪ್ರಕಾಶಕರು ಹವ್ಯಕ ಅಧ್ಯಯನ ಕೇಂದ್ರ, ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇವರು. ಈ ಸಂಸ್ಥೆಯ ಅಮೃತ ಮಹೋತ್ಸವ ಗ್ರಂಥ ಮಾಲಿಕೆಯಡಿ ಇದು ಪ್ರಕಟವಾಗಿತ್ತು. ಅರುವತ್ತೊಂಬತ್ತು ಪುಟಗಳುಳ್ಳ ಪುಸ್ತಕವಿದು. ಶ್ರೀ ಅಖಿಲ ಹವ್ಯಕ ಮಹಾಸಭಾ ಸಂಸ್ಥೆಯ ಅಧ್ಯಕ್ಷ ಶ್ರೀ ಡಾ. ಗಿರಿಧರ ಕಜೆ ಅವರು ‘ಅಧ್ಯಕ್ಷರ ನುಡಿ’ ಎಂಬ ಶೀರ್ಷಿಕೆಯಡಿ ತಮ್ಮ ಅನಿಸಿಕೆಗಳನ್ನು ಬರಹರೂಪಕ್ಕಿಳಿಸಿದ್ದಾರೆ. ಶ್ರೀ ಗಣರಾಜ ಕುಂಬ್ಳೆ ಅವರು ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ. ಹವ್ಯಕ ಅಧ್ಯಯನ ಕೇಂದ್ರದ ಸಂಚಾಲಕರೂ ತಮ್ಮ ಅನಿಸಿಕೆಗಳನ್ನು ನೀಡಿರುತ್ತಾರೆ. ಶ್ರೀ ಗಣರಾಜ ಕುಂಬ್ಳೆ ಅವರು ಕೀರಿಕ್ಕಾಡು ಮಾಸ್ತರರ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ತನ್ನ ಪ್ರಬುದ್ಧ ಬರಹಗಾರಿಕೆಯಿಂದ ಈ ಪುಸ್ತಕವನ್ನು ಕಟ್ಟಿ ಕೊಟ್ಟಿರುತ್ತಾರೆ. ಅರ್ಥಪೂರ್ಣ ಬದುಕು, ಮಾಸ್ತರರ ತಾಳಮದ್ದಳೆಯ ರಸನಿಮಿಷಗಳು, ಪ್ರಕೃತಿ ಚಿಕಿತ್ಸೆಯ ಪರಿಣತಿ, ಮಾಸ್ತರರ ಆಶಯ, ಸ್ವರಭಾರ ನೋಡಿ ಪಾತ್ರ ನೀಡಿಕೆ ಉಚಿತ, ಮಾಸ್ತರರ ಮಾಹಿತಿ-ವಿದ್ವಾಂಸರ ಮಾತಿನಲ್ಲಿ, ಕೀರಿಕ್ಕಾಡು ವಿಷ್ಣು ಭಟ್ಟರ ಸಂಸಾರ, ಮಾಸ್ತರರ ಕೆಲವು ಯಕ್ಷಗಾನ ಕೃತಿಗಳ ಪರಿಚಯ, ಮಾಸ್ತರರ ಕಾವ್ಯ, ಮಾಸ್ತರರ ಕಾದಂಬರಿಗಳು ಎಂಬ ವಿಭಾಗಗಳಡಿಯಲ್ಲಿ ಶ್ರೀ ಗಣರಾಜ ಕುಂಬ್ಳೆ ಅವರ ಬರಹಗಳಿವೆ. ಬಳಿಕ  ಡಾ. ರಮಾನಂದ ಬನಾರಿ ಅವರು ಬರೆದ ‘ತಂದೆಯವರ ವ್ಯಕ್ತಿತ್ವ ನಾನು ಕಂಡಂತೆ’ ಎಂಬ ಲೇಖನವನ್ನು ನೀಡಲಾಗಿದೆ. ತ್ರಿಭಾಷಾ ವಿದ್ವಾಂಸರಾಗಿರುವ ಶ್ರೀ ಗಣರಾಜ ಕುಂಬ್ಳೆ ಅವರು ಯಕ್ಷಗಾನ ಕಲಾ ಸಾಹಿತ್ಯ ತಪಸ್ವಿ ಶ್ರೀ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಕುರಿತಾಗಿ ಬರೆದ ಉತ್ತಮ ಪುಸ್ತಕವಿದು. 

ಲೇಖಕ: ರವಿಶಂಕರ್ ವಳಕ್ಕುಂಜ

ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನದಿಂದ “ಐದು ದಿನಗಳ” ಯಕ್ಷಗಾನ

ಕೊಂಡದಕುಳಿಯವರ “ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ”ವು ಹಲವು ಪ್ರೋತ್ಸಾಹಕರ ಸಹಕಾರದಿಂದ “ಐದು ದಿನಗಳ” ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.


ಅರೇಅಂಗಡಿ (ಉ.ಕ) ಗೆಳಯರ ಬಳಗ ಮತ್ತು ಶ್ರೀ ಮಹಾಬಲ ಶೋಧ ಸಂಸ್ಥಾನಂ ಬೆಂಗಳೂರು ಇವರ ಸಹಕಾರದೊಂದಿಗೆ ಸೆಪ್ಟೆಂಬರ್23 ರಿಂದ 27ರ ವರೆಗೆ (ನಿಗದಿತ ದಿನಗಳಂದು ಆನ್ಲೈನ್ ಪ್ರಸಾರವಾಗಲಿದೆ) ಪ್ರದರ್ಶನಗೊಳ್ಳಲಿದೆ. ಪ್ರಸಂಗಗಳು –
1.ಶ್ರೀರಾಮ ಪಟ್ಟಾಭಿಷೇಕ 2.ಸತ್ಯ ಹರಿಶ್ಚಂದ್ರ 3.ನಳದಮಯಂತಿ 4.ಚಂದ್ರಹಾಸ ಚರಿತ್ರೆ 5.ಶ್ರೀರಾಮ ನಿರ್ಯಾಣ 

ಯಕ್ಷಗಾನ ಸಂಘಟಕ ಪದ್ಮನಾಭ ಕಟೀಲ್ ಗೆ ಮಾತೃವಿಯೋಗ 

ಸುಪ್ರಸಿದ್ಧ ಶ್ರದ್ಧಾಕೇಂದ್ರ, ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಿ ಕಟೀಲಿಗೆ ಸಮೀಪವಿರುವ ಮಚ್ಚಾರು ಶ್ರೀದೇವಿ ನಿಲಯದಲ್ಲಿ ನೆಲೆಸಿದ್ದ ಶ್ರೀಮತಿ ಶ್ಯಾಮಲಾ ಪೂಜಾರಿಯವರು ಸೆಪ್ಟೆಂಬರ್ 18ರಂದು ದೈವಾಧೀನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.  ಮೃತ ಶ್ಯಾಮಲಾ ಪೂಜಾರಿಯವರು ತನ್ನ ಪತಿ ಹಾಗೂ ಮೂವರು ಪುತ್ರರನ್ನು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ. ಯಕ್ಷಗಾನ ಸಂಘಟಕ ಹಾಗೂ ದುಬೈಯಲ್ಲಿ ಉದ್ಯಮಿಯಾಗಿರುವ ಪದ್ಮನಾಭ ಕಟೀಲ್ ಅವರು ಶ್ಯಾಮಲಾ ಪೂಜಾರಿಯವರ ಪುತ್ರ. ಈ ಮನೆ ಮೊದಲಿನಿಂದಲೂ ತಮ್ಮ ದೈವಭಕ್ತಿ ಮತ್ತು ಕಲಾಸೇವೆಗಳಿಗೆ ಹೆಸರಾಗಿದ್ದು ಶ್ಯಾಮಲಾ ಪೂಜಾರಿಯವರು ಕಟೀಲು ಶ್ರೀ ದೇವಿಯ ಭಕ್ತರಾಗಿದ್ದುದು ಮಾತ್ರವಲ್ಲದೆ ಪ್ರತಿ ವರ್ಷಗಳಲ್ಲಿಯೂ ಸೇವಾರೂಪವಾಗಿ ಕಟೀಲು ಹಾಗೂ ಧರ್ಮಸ್ಥಳ ಮೇಳಗಳ ಯಕ್ಷಗಾನವನ್ನು ಆಡಿಸುತ್ತಾ ಬರುತ್ತಿದ್ದರು. ಅಲ್ಲದೆ ಯಕ್ಷಗಾನ ಕಲಾವಿದರಿಗೆ ಗೌರವಧನ ಸಹಿತ ಸನ್ಮಾನಕಾರ್ಯಗಳನ್ನು ನಡೆಸುತ್ತ ಬರುತ್ತಿದ್ದರು. ಶ್ಯಾಮಲಾ ಪೂಜಾರಿ ಅವರ ಪುತ್ರ ಪದ್ಮನಾಭ ಕಟೀಲ್ ಅವರು ದುಬೈಯಲ್ಲಿ ಉದ್ಯಮಿಯಾಗಿರುವುದು ಮಾತ್ರವಲ್ಲದೆ ಉತ್ತಮ ಯಕ್ಷಗಾನ ಸಂಘಟಕರೆಂದು ಹೆಸರುವಾಸಿಯಾಗಿದ್ದಾರೆ. ನಿರಂತರ ಯಕ್ಷಗಾನ ಪ್ರದರ್ಶನ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪದ್ಮನಾಭ ಕಟೀಲ್ ಅವರು ಕಲೆಗೆ ಅಪರಿಮಿತ ಪ್ರೋತ್ಸಾಹವನ್ನು ನೀಡುವ ಕಲಾಪ್ರೇಮಿ. 

ಪಾತಾಳ ಯಕ್ಷಮಣಿ – ಅಂಬಾಪ್ರಸಾದ ಪಾತಾಳ

‘ಪಾತಾಳ ಯಕ್ಷಮಣಿ’ ಎಂಬ ಶೀರ್ಷಿಕೆಯನ್ನು ಹೊಂದಿದ ಈ ಪುಸ್ತಕವು ಕಲಾವಿದ ಶ್ರೀ ಅಂಬಾ ಪ್ರಸಾದ್ ಪಾತಾಳ ಇವರ ಅಭಿನಂದನಾ ಗ್ರಂಥ. ಅಂಬಾ ಪ್ರಸಾದರು ತೆಂಕುತಿಟ್ಟು ಯಕ್ಷಗಾನದ ಅನುಭವಿ ಕಲಾವಿದರು. ಶ್ರೇಷ್ಠ ಸ್ತ್ರೀ ಪಾತ್ರಧಾರಿಗಳು. ಮಂಗಳೂರಿನ ಕಲ್ಕೂರ ಪ್ರಕಾಶನದವರು ಪ್ರಕಾಶಕರಾದ ಈ ಪುಸ್ತಕದ ಸಂಪಾದಕರು ಶ್ರೀ ನಿತ್ಯಾನಂದ ಕಾರಂತ ಪೊಳಲಿ ಮತ್ತು ಶ್ರೀ ಜಿ.ಕೆ.ಭಟ್ ಸೇರಾಜೆ. ಅಂಬಾಪ್ರಸಾದರು ಯಕ್ಷಗಾನದ ಹಿರಿಯ ಶ್ರೇಷ್ಠ ಸ್ತ್ರೀ ಪಾತ್ರಧಾರಿಗಳಲ್ಲೊಬ್ಬರಾದ ಪಾತಾಳ ವೆಂಕಟ್ರಮಣ ಭಟ್ಟರ ಪುತ್ರರು. ತಂದೆಯಂತೆ ಇವರೂ ಸ್ತ್ರೀ ಪಾತ್ರಧಾರಿಯಾಗಿ ಕಲಾಮಾತೆಯ ಸೇವೆಯನ್ನು ಮಾಡುತ್ತಿದ್ದಾರೆ. ಕನ್ನಡ ತುಳು ಭಾಷೆಯ ಪ್ರಸಂಗಗಳಲ್ಲಿ ಇವರು ಕಲಾವಿದರಾಗಿ ರಂಜಿಸಿದ್ದಾರೆ. ಎಳವೆಯಲ್ಲಿಯೇ ನಾಟ್ಯಾಭ್ಯಾಸವನ್ನು ಮಾಡಿ ತೆಂಕು ಮತ್ತು ಬಡಗು ಎಂಬ ಉಭಯ ತಿಟ್ಟುಗಳ ಮೇಳಗಳಲ್ಲೂ ತಿರುಗಾಟ ನಡೆಸಿರುತ್ತಾರೆ. ಸ್ತ್ರೀ ಪಾತ್ರಧಾರಿಯಾದರೂ ಅಂಬಾಪ್ರಸಾದರು ಪುರುಷ ವೇಷಗಳನ್ನೂ ಸಮರ್ಥವಾಗಿ ನಿರ್ವಹಿಸಬಲ್ಲರು. ಶ್ರೀಯುತರ ಕುರಿತಾಗಿ ಅಭಿನಂದನಾ ಗ್ರಂಥವು ಪ್ರಕಟವಾದುದು ಕಲಾಭಿಮಾನಿಗಳೆಲ್ಲರಿಗೂ ಸಂತೋಷವನ್ನು ಕೊಡುವ ವಿಚಾರ.

ಪಾತಾಳ ಯಕ್ಷಮಣಿ ಎಂಬ ಈ ಪುಸ್ತಕವು ನೂರಾ ನಲುವತ್ತು ಪುಟಗಳನ್ನೂ ಹೊಂದಿದೆ. ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗಡೆಯವರ ಅನುಗ್ರಹ ಸಂದೇಶಗಳನ್ನೂ ಕಲಾಪೋಷಕ ಸಂಪಾಜೆ ಯಕ್ಷೋತ್ಸವದ ರೂವಾರಿ ಶ್ರೀ ಡಾ. ಟಿ. ಶ್ಯಾಮ ಭಟ್ಟರ ಶುಭ ಸಂದೇಶಗಳನ್ನೂ ನೀಡಲಾಗಿದೆ. ಸಂಪಾದಕ ಮಂಡಳಿಯ ಪರವಾಗಿ ಶ್ರೀ ನಿತ್ಯಾನಂದ ಕಾರಂತ ಪೊಳಲಿ ಅವರು ಸಂಪಾದಕೀಯ ಲೇಖನವನ್ನು ಬರೆದರೆ, ಪ್ರಕಾಶಕರಾದ ಶ್ರೀ ಎಸ್. ಪ್ರದೀಪಕುಮಾರ ಕಲ್ಕೂರ ಅವರು ತಮ್ಮ ಅನಿಸಿಕೆಗಳನ್ನು ಲೇಖನ ರೂಪದಲ್ಲಿ ಪ್ರಕಟಿಸಿದ್ದಾರೆ. ಈ ಪುಸ್ತಕದ ಲೇಖನಗಳು ಮೂರು ವಿಭಾಗಗಳಲ್ಲಿವೆ. ವಿಭಾಗ ಒಂದರಲ್ಲಿ ‘ನನ್ನ ಕಲಾಜೀವನ’ ಎಂಬ ಅಂಬಾ ಪ್ರಸಾದರ ಲೇಖನವೂ ‘ಕಳೆದ ಕಾಲದ ಕಥನ’ ಎಂಬ ಪಾತಾಳ ವೆಂಕಟ್ರಮಣ ಭಟ್ಟರ ಲೇಖನವೂ ಇದೆ. ವಿಭಾಗ ಎರಡರಲ್ಲಿ ಕುಂಬಳೆ ಸುಂದರ ರಾವ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಡಾ. ಎಂ. ಪ್ರಭಾಕರ ಜೋಶಿ, ಕೆ. ಗೋವಿಂದ ಭಟ್, ಡಾ. ಕೊಳ್ಯೂರು ರಾಮಚಂದ್ರ ರಾವ್,ಕಜೆ ಈಶ್ವರ ಭಟ್, ಬರೆ ಕೇಶವ ಭಟ್, ಎಚ್. ಶ್ರೀಧರ ಹಂದೆ, ವಿ. ಬಿ. ಅರ್ತಿಕಜೆ, ಕರ್ನಾಟಕ ಯಕ್ಷಧಾಮ, ಎಚ್. ಜನಾರ್ದನ ಹಂದೆ, ಕುಂಬಳೆ ಶ್ರೀಧರ ರಾವ್, ಬಿ. ಐತಪ್ಪ ನಾಯ್ಕ, ಜಿ.ಕೆ.ಭಟ್ ಸೇರಾಜೆ, ನಿತ್ಯಾನಂದ ಕಾರಂತ ಪೊಳಲಿ, ಎಚ್. ದಾಸಪ್ಪ ರೈ, ತಾರಾನಾಥ ವರ್ಕಾಡಿ, ಶ್ರೀಕೃಷ್ಣ ಭಟ್ ಸುಣ್ಣಂಗುಳಿ, ಸುಬ್ಬಣ್ಣ ಭಟ್, ಕೇಶವ ಹೆಗಡೆ, ವರ್ಕಾಡಿ ರವಿ ಅಲೆವೂರಾಯ, ಶ್ರೀಮತಿ ರಜನಿ ಕುಮಾರ್, ಪ್ರಕಾಶ್ ಇಳಂತಿಲ, ಬೇಗಾರ್ ಶಿವಕುಮಾರ್, ನರಹರಿ ಭಟ್, ಈಶ್ವರ ಪ್ರಸಾದ ಪಿ.ವಿ., ಶ್ರೀಮತಿ ಜಯಂತಿ ಅಂಬಾಪ್ರಸಾದ, ಡಾ. ದಿನಕರ್ ಎಸ್. ಪಚ್ಚನಾಡಿ, ಇವರುಗಳ ಲೇಖನವಿದೆ. ವಿಭಾಗ ಮೂರರಲ್ಲಿ ಪಾತಾಳ ವೆಂಕಟ್ರಮಣ ಭಟ್ಟರು ಬರೆದ ‘ಯಕ್ಷಗಾನ ತಿಟ್ಟುಗಳು ತನ್ನತನದಲ್ಲಿ ಬದುಕಲಿ’ ಎಂಬ ಲೇಖನವನ್ನೂ ಎಚ್. ಜನಾರ್ದನ ಹಂದೆಯವರು ಬರೆದ ‘ಇವಳ್ಯಾವ ಲೋಕದ ಸತಿಯೋ’ ಎಂಬ ಲೇಖನವನ್ನೂ ನೀಡಲಾಗಿದೆ. ಪಾತಾಳ ಶ್ರೀ ಅಂಬಾಪ್ರಸಾದರಿಂದ ಯಕ್ಷಮಾತೆಯ ಸೇವೆಯು ನಿರಂತರವಾಗಿ ನಡೆಯಲಿ. ಶ್ರೀ ದೇವರು ಅವರಿಗೆ ಸಕಲ ಸೌಭಾಗ್ಯಗಳನ್ನೂ ಅನುಗ್ರಹಿಸಲಿ. 

ಲೇಖಕ: ರವಿಶಂಕರ್ ವಳಕ್ಕುಂಜ 

ಕಲಾತರಂಗ… ಕಲಾಂತರಂಗ – ವಿದುಷಿ ಅನುಪಮಾ ರಾಘವೇಂದ್ರ

ಗಡಿನಾಡ ಕಲಾವಿದೆ ವಿದುಷಿ ಅನುಪಮಾ ರಾಘವೇಂದ್ರ ಅವರ ಅಂಕಣ ಬರಹಗಳ ಸಂಕಲನವೇ ಈ  ‘ಕಲಾತರಂಗ… ಕಲಾಂತರಂಗ’ ಎಂಬ ಹೊತ್ತಗೆಯು.  ಭರತನಾಟ್ಯ ಕಲಾವಿದೆ, ಶಿಕ್ಷಕಿಯಾಗಿ ಕಲಾಸೇವೆಯನ್ನು ಮಾಡುತ್ತಿರುವ ಇವರು ಕನ್ನಡ ಸಾಹಿತ್ಯ ಕ್ಷೇತ್ರದತ್ತಲೂ ಒಲವನ್ನು ತೋರಿ ಉತ್ತಮ ಲೇಖಕಿಯಾಗಿಯೂ ಗುರುತಿಸಿಕೊಂಡರು. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಎಡನೀರು ಸಮೀಪದ ಉಡುಪುಮೂಲೆ ಎಂಬಲ್ಲಿ ವಾಸ. ಗೃಹಣಿಯಾಗಿದ್ದುಕೊಂಡು ಮನೆವಾರ್ತೆಯನ್ನೂ, ಕಲಾಸೇವೆಯನ್ನೂ, ಸಾಹಿತ್ಯಸೇವೆಯನ್ನೂ ಜತೆಯಾಗಿ ನಡೆಸುತ್ತಾ ಮುನ್ನಡೆಯುತ್ತಿದ್ದಾರೆ. ವಿದುಷಿ ಅನುಪಮಾ ಅವರ ಈ ಸಾಹಸಕ್ಕೆ ಅವರ ಪತಿ ಶ್ರೀ ರಾಘವೇಂದ್ರ ಅವರ ಬೆಂಬಲ ಪ್ರೋತ್ಸಾಹವಿದೆ. ಅಂಕಣ ಬರಹಗಳನ್ನು ಬರೆಯಲು ಪ್ರೇರೇಪಿಸಿದವರು ಶ್ರೀ ಹರೀಶ್. ಕೆ. ಆದೂರು. ಅವರು ತಮ್ಮ ವಾರ್ತೆ.ಕಾಂ ನಲ್ಲಿ ಕಲಾಸಂಬಂಧೀ ಲೇಖನಗಳನ್ನು ಬರೆಯಲು ಅವಕಾಶ ನೀಡಿದ್ದರು. ಪರಿಣಾಮ ಪ್ರತಿ ಶುಕ್ರವಾರ ಭೂಮಿಕಾ ಅಂಕಣದಲ್ಲಿ ವಿದುಷಿ ಅನುಪಮಾ ರಾಘವೇಂದ್ರರ ಲೇಖನಿಯಿಂದ ಸಿದ್ಧಗೊಂಡ ಬರಹಗಳು ಪ್ರಕಟವಾಗಿತ್ತು. ಇವರ ಅಂಕಣ ಬರಹಗಳು  ‘ಕಲಾತರಂಗ… ಕಲಾಂತರಂಗ’  ಎಂಬ ಪುಸ್ತಕದ ರೂಪದಲ್ಲಿ ಪ್ರಕಟವಾದುದು ಅಭಿನಂದನೀಯವಾದುದು.

ವಿದುಷಿ ಅನುಪಮಾ ರಾಘವೇಂದ್ರ ಅವರ ಈ ಪುಸ್ತಕವು 2017ನೇ ಇಸವಿಯಲ್ಲಿ ಪ್ರಕಟವಾಗಿದ್ದು ಪ್ರಕಾಶಕರು ಭೂಮಿಕಾ ಪ್ರತಿಷ್ಠಾನ, ಉಡುಪುಮೂಲೆ. ಲೇಖಕ, ಕಲಾವಿದ, ಸಂಘಟಕರಾದ ಶ್ರೀ ನಾ. ಕಾರಂತ ಪೆರಾಜೆಯವರು ‘ಕಲೆಗೆ ದನಿಯಾದ ಕೃತಿ’ ಎಂಬ ಶೀರ್ಷಿಕೆಯಡಿ ಮುನ್ನುಡಿ ಲೇಖನವನ್ನು ಬರೆದು ಶುಭ ಹಾರೈಸಿದ್ದಾರೆ. ಲೇಖಕಿ ವಿದುಷಿ ಅನುಪಮಾ ರಾಘವೇಂದ್ರ ಅವರು ‘ಅಂತರಾಳದ ಮಾತು’ ಎಂಬ ಶೀರ್ಷಿಕೆಯಡಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಇದು ಒಟ್ಟು ನೂರಾ ಎಂಬತ್ತನಾಲ್ಕು ಪುಟಗಳುಳ್ಳ ಪುಸ್ತಕ. ವಿದುಷಿ ಅನುಪಮಾ ಅವರ ಮೊದಲ ಕೃತಿ. ಒಟ್ಟು ನಲುವತ್ತೆರಡು ಲೇಖನಗಳಿವೆ. ಕಲೆ ಕಳೆಯೇ?, ನಾನೇರುವೆತ್ತರಕೆ ನೀನೇರು, ಕಲಾವಿದನಲ್ಲೇ ಒಂದು ಕಲೆ,ಆಧ್ಯಾತ್ಮಮೂರ್ತಿ ನಟರಾಜ, ಕಲೆಯಲ್ಲೂ ಆಧ್ಯಾತ್ಮಿಕತೆ ಶೈಲಿ – ಸಂಪ್ರದಾಯ, ಗುರುವಿನ ಗುಲಾಮನಾಗುವ ತನಕ, ಬೆರಕೆ-ಕಲಬೆರಕೆ, ಆಧುನಿಕತೆಯ ಕಬಂಧ ಬಾಹು, ಕಾಲಾಯ ತಸ್ಮೈ ನಮಃ, ಅಥಾತೋ ಬ್ರಹ್ಮ ಜಿಜ್ಞಾಸಾ, ಗೃಹಣೀ ಗೃಹಮುಚ್ಯತೇ, ಎರಡು ದೋಣಿಯಲಿ ಕಾಲಿಟ್ಟಂತೆ, ಒಳಗಣ್ಣಿನಿಂದ ನೋಡು, ಸ್ತ್ರೀ ಪಾತ್ರದಲ್ಲಿ ಪುರುಷ, ಕಲಾವಿದ ಲಕ್ಷಣ, ಅಂಗಸಾಧನೆಯಿಂದ ಕಲಾ ಪರಿಪಕ್ವತೆ, ನವೋ ನವೋನ್ಮೇಷ ಶಾಲಿನೀ ಪ್ರತಿಭಾ, ಕಲೆ ಕಲಾವಿದ ಮನಸ್ಥಿತಿ, ಸೌಂದರ್ಯೋಪಾಸನೆ, ಭೂಭವತಿ-ಭಾವ, ರಸೋ ವೈಸಃ, ನಾಯಿಕಾ ನಾಯಕ ಭಾವ, ನೃತ್ತ-ನೃತ್ಯ-ನಾಟ್ಯ-ನರ್ತನ, ನೃತ್ಯರೂಪಕ-ನೃತ್ಯನಾಟಕ, ಅಭ್ಯಾಸಾನುಗತಾ ವಿದ್ಯಾ, ಆಹಾರ್ಯೋ ಹಾರ ಕೇಯೂರ, ನೂಪುರ ನಿನಾದ, ರಂಗಮಂಟಪ, ಓಸರಿಸಿದ ಜವನಿಕೆ, ಹಿಮ್ಮೇಳ, ಧ್ವನಿವರ್ಧಕ, ದೀಪಾಲಂಕಾರ, ಕಲೆಗಾಗಿ ಅಕ್ಷರ ಕ್ರಾಂತಿ, ಇತಿಹಾಸ ಕಲೆಯ ಸಂಕ್ರಮಣ ಘಟ್ಟ, ಕರ್ನಾಟಕದಲ್ಲಿ ನೃತ್ಯದ ಹೆಜ್ಜೆಗಳು, ಕಲಾಲೋಕದಲ್ಲಿ ದಾಸಸಾಹಿತ್ಯ, ಕಲಾಲೋಕಕ್ಕೆ ವಿದೇಶಿಯರ ಕೊಡುಗೆ, ವಿದೇಶಿ ನೆಲದಲ್ಲಿ ಭಾರತೀಯ ಕಲೆ, ಪರೀಕ್ಷೆ-ನಿರೀಕ್ಷೆ, ವಿಮರ್ಶೆ-ಹೀಗೊಂದು ವಿಮರ್ಶೆ ಎಂಬ ಲೇಖನಗಳನ್ನು ಒಳಗೊಂಡ ಪುಸ್ತಕ ಇದು. ವಿದುಷಿ ಅನುಪಮಾ ರಾಘವೇಂದ್ರರಿಂದ ಕಲಾ ಸೇವೆಯೂ, ಸಾಹಿತ್ಯ ಸೇವೆಯೂ ನಿರಂತರವಾಗಿ ನಡೆಯಲಿ ಎಂಬ ಹಾರೈಕೆ. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಶೇಣಿ ದರ್ಶನ

ಶೇಣಿ ದರ್ಶನ ಎಂಬ ಈ ಹೊತ್ತಗೆಯು 2000ನೇ ಇಸವಿಯಲ್ಲಿ ಪ್ರಕಟವಾಗಿ ಓದುಗರ ಕೈ ಸೇರಿತ್ತು. ಯಕ್ಷಗಾನದ ಭೀಷ್ಮ ಎಂದೇ ಖ್ಯಾತರಾದ ಹರಿದಾಸ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು ನಿರ್ವಹಿಸಿದ ವಿವಿಧ ಪಾತ್ರಗಳ ಅರ್ಥವೈಭವವನ್ನು ಸಂಗ್ರಹಿಸಿ ಈ ಪುಸ್ತಕದಲ್ಲಿ ನೀಡಲಾಗಿದೆ.  ಸ್ವತಃ ಬರೆಯುದಕ್ಕಿಂತಲೂ ಸಂಗ್ರಹಿಸುವ ಕೆಲಸವು ಕಷ್ಟಕರವಾದುದು. ಸಂಗ್ರಹಿಸಬೇಕಾದ ವಿಷಯದ ಕುರಿತಾಗಿ ಆಸಕ್ತಿ, ಛಲ, ಸಹನೆಗಳೆಂಬ ಗುಣಗಳು ಬೇಕೇ ಬೇಕು. ಆದುದರಿಂದ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಅನೇಕ ಪಾತ್ರಗಳ ವಚನ ರಚನಾ ವೈಭವವನ್ನು ಸಂಗ್ರಹಿಸಿ ಶೇಣಿ ದರ್ಶನ ಎಂಬ ಪುಸ್ತಕ ರೂಪದಲ್ಲಿ ಪ್ರಕಟಿಸಲು ಕಾರಣರಾದವರು ಅಭಿನಂದನೀಯರು. ಈ ಪುಸ್ತಕದ ಸಂಪಾದಕರು ಶ್ರೀ ನಾ. ಕಾರಂತ ಪೆರಾಜೆ. ಕಲಾವಿದರಾಗಿ, ಸಂಘಟಕರಾಗಿ, ಪ್ರಬುದ್ಧ ಬರಹಗಾರರಾಗಿ ನಮಗೆಲ್ಲಾ ಪರಿಚಿತರು. ‘ತೆರೆವ ಮುನ್ನ’ ಎಂಬ ಶೀರ್ಷಿಕೆಯ ತನ್ನ ಸಂಪಾದಕೀಯ ಬರಹದಲ್ಲಿ, ಶೇಣಿಯವರ ಬಗೆಗೆ, ಈ ಹೊತ್ತಗೆಯ ಬಗೆಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿ ಪುಸ್ತಕ ಸಿದ್ಧತಾ ಕಾರ್ಯದಲ್ಲಿ ಸಹಕರಿಸಿದ ಎಲ್ಲಾ ಮಹನೀಯರುಗಳನ್ನೂ ಹೆಸರಿಸಿ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ.

ಈ ಪುಸ್ತಕವು ನಾಲ್ಕು ವಿಭಾಗಗಳಿಂದ ಕೂಡಿದೆ. ಅರ್ಥವೈಭವ ಎಂಬ ವಿಭಾಗದಲ್ಲಿ ಶೇಣಿಯವರು ನಿರ್ವಹಿಸಿದ ಮೂವತ್ತೊಂಭತ್ತು ಪಾತ್ರಗಳ ಅರ್ಥಗಾರಿಕೆಯನ್ನು ಸಂಗ್ರಹಿಸಿ ನೀಡಲಾಗಿದೆ. ಶುಂಭ, ವಿಷ್ಣು, ಶಿವ, ಬ್ರಹ್ಮ, ಜಮದಗ್ನಿ, ಬಲಿ, ದೂರ್ವಾಸ, ಯಮ, ಜಲಂಧರ, ಹಿರಣ್ಯಕಶ್ಯಪ, ಶುಕ್ರಾಚಾರ್ಯ, ಹರಿಶ್ಚಂದ್ರ, ವಿಶ್ವರೂಪಾಚಾರ್ಯ, ಶೂರಪದ್ಮ, ವಿಶ್ವಾಮಿತ್ರ, ಚಾರ್ವಾಕ, ದಂಬ, ಶತ್ರುಪ್ರಸೂಧನ, ಶಂತನು, ಕಂಸ, ಮಾಗಧ, ಕೃಷ್ಣ, ಅರ್ಜುನ, ಕೌರವ, ಶಲ್ಯ, ಕರ್ಣ, ಭೀಷ್ಮ, ದ್ರುಪದ, ಹಂಸಧ್ವಜ, ವೀರವರ್ಮ, ಶ್ರೀರಾಮ, ಶತ್ರುಘ್ನ, ದಶರಥ, ವಾಲಿ, ಹನೂಮಂತ, ರಾವಣ, ಅತಿಕಾಯ, ಅಂಗದ, ಮಾಧವ ಭಟ್ಟ ಎಂಬ 39 ಪಾತ್ರಗಳ ಅರ್ಥವೈಭವ. ಬಳಿಕ ‘ಶೇಣಿ ಉವಾಚ’ ಎಂಬ ವಿಭಾಗದಲ್ಲಿ ಶ್ರೀ ಶೇಣಿಯವರು ತನ್ನ ಅರ್ಥಗಾರಿಕೆಯಲ್ಲಿ ಆಡಿದ ಇನ್ನೂರ ಒಂದು ಶ್ರೇಷ್ಠ ನುಡಿಗಳನ್ನು ಸಂಗ್ರಹಿಸಿ ನೀಡಿರುತ್ತಾರೆ. ಬಳಿಕ ಮನದಾಳದಿಂದ ಎಂಬ ವಿಭಾಗದಲ್ಲಿ ಶೇಣಿಯವರ ಮನದಾಳದ ಮಾತುಗಳನ್ನು ಅಕ್ಷರರೂಪಕ್ಕಿಳಿಸಲಾಗಿದೆ. ಚತುರ್ಮುಖ ಎಂಬ ಭಾಗದಲ್ಲಿ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಸಂದರ್ಶನ ರೂಪದ ಲೇಖನವಿದೆ. ಕೊನೆಯಲ್ಲಿ ‘ಆಕರಗಳು’ ಎಂಬ ಶೀರ್ಷಿಕೆಯಡಿ ಶೇಣಿಯವರು ಅರ್ಥ ಹೇಳಿದ ಧ್ವನಿಸುರುಳಿಗಳ ಮತ್ತು ಅವರ ಕುರಿತಾಗಿ ಪ್ರಕಟವಾದ ಪುಸ್ತಕಗಳ ವಿವರಗಳನ್ನೂ ನೀಡಲಾಗಿದೆ. ಈ ಹೊತ್ತಗೆಯನ್ನು ಓದಿ ಶೇಣಿಯವರ ಅರ್ಥಗಾರಿಕೆಯ ಸೊಗಸನ್ನು ತಿಳಿಯಬಹುದು, ಸವಿಯಬಹುದು. ಈ ಪುಸ್ತಕದ ಪ್ರಕಾಶಕರು, ಕರ್ನಾಟಕ ಸಂಘ, ಪುತ್ತೂರು. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಯಕ್ಷಸೇಚನ  – ಡಾ. ಕೆ. ಎಂ. ರಾಘವ ನಂಬಿಯಾರ್

‘ಯಕ್ಷಸೇಚನ’ ಎಂಬುದು ವಿದ್ವಾಂಸರೂ ವಿಮರ್ಶಕರೂ ಪ್ರಸಂಗಕರ್ತರೂ ಆಗಿರುವ ಡಾ. ಕೆ. ಎಂ. ರಾಘವ ನಂಬಿಯಾರರ ಲೇಖನಿಯಿಂದ ಸಿದ್ಧವಾದ ಕೃತಿ. ಈ ಕೃತಿಯು 2010ರಲ್ಲಿ ಪ್ರಕಟವಾಗಿ ಕಲಾಪ್ರೇಮಿಗಳ ಕೈ ಸೇರಿತ್ತು. ಯಕ್ಷಗಾನ ಸಂಬಂಧೀ ಪ್ರಬಂಧ ಸಮಾಹಾರವಾಗಿ ಯಕ್ಷಸೇಚನವು ಲೋಕಾರ್ಪಣೆಗೊಂಡಿತ್ತು. ಪುಸ್ತಕದ ಪ್ರಕಾಶಕರು ಸಾಗರ ಪ್ರಕಾಶನ, ನಾಗರಬಾವಿ, ಬೆಂಗಳೂರು. ಡಾ. ಕೆ. ಎಂ. ರಾಘವ ನಂಬಿಯಾರರು ಬರೆದ ಹದಿಮೂರು ಲೇಖನಗಳು ಈ ಕೃತಿಯೊಳಗಿವೆ. ಅವುಗಳೆಂದರೆ ೧. ಗಾನ ಶಿಲ್ಪದ ರೂಪರೇಖೆ ೨. ಹೊಸ ಪ್ರಸಂಗ ಮತ್ತು ರಚನಕಾರನ ಹೊಣೆ ೩. ಸ್ತ್ರೀ ಶಿರೋಭೂಷಣಕ್ಕೆ ಪ್ರೇರಣೆ ೪. ಅಮೃತ ಯುಗದಲ್ಲಿ ಯಕ್ಷಗಾನ ಕಲಿಕೆ ೫. ಯಕ್ಷಗಾನ – ಹುಚ್ಚು ಹೊಳೆ ೬. ರಂಗಕಲೆ ಎಂಬ ರಾಜಕಾರಣ ೭. ಆಟಕ್ಕೊಂದು ನಿರ್ದೇಶನ ೮. ತುಳು ಯಕ್ಷಗಾನ ೯. ಉಡುಪಿ ಜಿಲ್ಲೆಯಲ್ಲಿ ಯಕ್ಷಗಾನ ೧೦. ಉಡುಪಿ ಜಿಲ್ಲೆಯಲ್ಲಿ ಯಕ್ಷಗಾನ ಪುನರುಜ್ಜೀವನ ೧೧. ಸುವರ್ಣಯುಗದಲ್ಲಿ ಕರಾವಳಿಯ ಯಕ್ಷಗಾನ ೧೨. ಕರ್ನಾಟಕದ ಸಮಗ್ರ ಯಕ್ಷಗಾನ ೧೩. ಶ್ವೇತಕುಮಾರ ಚರಿತ್ರೆ (ಪ್ರಸಂಗ ಅಧ್ಯಯನ).

ಡಾ. ಕೆ. ಎಂ. ರಾಘವ ನಂಬಿಯಾರ್

ಕೃತಿಯ ಲೇಖಕರಾದ ಶ್ರೀ ನಂಬಿಯಾರರು ‘ನಿವೇದನೆ’ ಎಂಬ ತನ್ನ ಬರಹದಲ್ಲಿ ಸೇಚನ ಎಂಬ ಶಬ್ದದ ಅರ್ಥವನ್ನು ತಿಳಿಸಿ ಈ ಕೃತಿಗೆ ಯಕ್ಷಸೇಚನ ಎಂಬ ಶೀರ್ಷಿಕೆಯು ಹೇಗೆ ಹೊಂದಿಕೆಯಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ. ಈ ಕೃತಿಯನ್ನು ಸಂಪೂರ್ಣ ಓದಿದಾಗ ಶ್ರೀ ನಂಬಿಯಾರರು ತಮ್ಮ ಲೇಖನಗಳಲ್ಲಿ ಹಿಮ್ಮೇಳ, ಮುಮ್ಮೇಳ ಕಲಾವಿದರಿಗೆ, ಸಂಘಟಕರಿಗೆ, ಪ್ರಸಂಗಕರ್ತರಿಗೆ, ಕಲಾಭಿಮಾನಿಗಳಿಗೆ ಅತ್ಯುತ್ತಮ ಸಂದೇಶಗಳನ್ನು ನೀಡಿದ್ದಾರೆ ಎಂದು ತಿಳಿಯಬಹುದು. ಪ್ರತಿಯೊಬ್ಬರೂ ತಾವು ಹೇಗಿರಬೇಕು? ಹೇಗಿದ್ದರೆ ಯಕ್ಷಗಾನದ ಮೂಲ ಸೌಂದರ್ಯವು ಉಳಿದು ಬೆಳೆದೀತು ಎಂಬುದನ್ನು ತಿಳಿಸಿದ್ದಾರೆ. ಅವರ ನಿರ್ದೇಶನಗಳನ್ನು ಮತ್ತು ಸೂಚನೆಗಳನ್ನು ಪಾಲಿಸಿದರೆ ಖಂಡಿತಾ ಯಕ್ಷಗಾನ ಕಲೆಗೆ ಅದರಿಂದ ಅನುಕೂಲವಾದೀತು ಎಂಬುದರಲ್ಲಿ ಸಂಶಯವಿಲ್ಲ. ಸೃಜನಶೀಲತೆಯು ಸ್ವೇಚ್ಚಾಚಾರಕ್ಕೆ ಎಡೆಯಾಗಬಾರದು. ವಿಕಾಸವೆಂಬುದು ವಿಕೃತಿಗೆ ಕಾರಣವಾಗಬಾರದು ಎಂಬ ಅತ್ಯುತ್ತಮ ನೀತಿಗಳನ್ನು ಅಧ್ಯಯನಾಸಕ್ತರಿಗೆ ತಿಳಿಸಿರುತ್ತಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದವರು ಶ್ರೀ ಶರತ್ ಕಲ್ಕೋಡ್. ‘ಪೆಟಾರಿಯ ತೆರೆಯೋಣ’ ಎಂಬ ಶೀರ್ಷಿಕೆಯಡಿ ಬರೆದ ಮುನ್ನುಡಿ ಬರಹದಲ್ಲಿ ಶ್ರೀ ಶರತ್ ಕಲ್ಕೋಡ್ ಅವರು ಮಲೆನಾಡಿನಲ್ಲಿ ಯಕ್ಷಗಾನ ನೋಡುತ್ತಾ ಕಳೆದ ಬಾಲ್ಯದ ದಿನಗಳನ್ನು ನೆನಪಿಸಿದ್ದಲ್ಲದೆ, ಶ್ರೀ ನಂಬಿಯಾರರ ಜೊತೆ ಅವರ ಒಡನಾಟ, ಸ್ನೇಹ, ಅವರಿಗಿರುವ ಕಲಾಪ್ರೀತಿ, ಸಾಹಿತ್ಯಾಸಕ್ತಿ, ಸ್ವಭಾವ ಮೊದಲಾದ ವಿಚಾರಗಳ ಬಗೆಗೆ ತಿಳಿಸಿ, ಕೃತಿಗೆ ಶುಭ ಹಾರೈಸಿರುತ್ತಾರೆ. ಪುಸ್ತಕದ ಕೊನೆಯ ಪುಟದಲ್ಲಿ  ಡಾ. ಕೆ. ಎಂ. ರಾಘವ ನಂಬಿಯಾರರು ಬರೆದ ಕೃತಿಗಳ ವಿವರಗಳನ್ನು ನೀಡಲಾಗಿದೆ. ಹೊರ ಆವರಣದಲ್ಲಿ ಶ್ರೀ ಶರತ್ ಕಲ್ಕೋಡ್ ಅವರ ಮುನ್ನುಡಿ ಬರಹದ ವಿಚಾರಗಳನ್ನು ನೀಡಲಾಗಿದೆ. ಈ ಕೃತಿಯನ್ನು ಲೇಖಕರು ತಮ್ಮ ಸಹೋದರ  ಡಾ. ಕೆ. ಎಂ. ಶಂಕರ ನಂಬಿಯಾರ್ ಅವರಿಗೆ ಅರ್ಪಿಸಿದ್ದಾರೆ. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ