Friday, August 28, 2026
Home Blog Page 370

ವಿದ್ವಾನ್ ವಳಕ್ಕುಂಜ ನರಸಿಂಹ ಭಟ್ಟರ ‘ಕಾಶ್ಮೀರ ಕಾಳಗ’

ಕವಿಹೃದಯ, ಕವಿಮನಸು, ಕವಿಸಮಯ- ಇವುಗಳೆಲ್ಲದರ ಬಗ್ಗೆ ಬಹಳಷ್ಟು ಕೇಳಿದ್ದೇವೆ. ಕೃತಿಯೊಂದನ್ನು ಹೊರತರುವುದು ಒಂಬತ್ತು ತಿಂಗಳು ಹೊತ್ತು ನೋವು ಅನುಭವಿಸಿ ಪ್ರಸವಿಸಿದಷ್ಟು ಪ್ರಯಾಸದ ಕೆಲಸ ಎಂದು ಹೇಳುವವರೂ ಇದ್ದಾರೆ. ಕೃತಿಯೊಂದು ಸುಂದರ ರೂಪ ಪಡೆಯಬೇಕಾದರೆ ‘ಕವಿ ಕಲ್ಪನೆ’ ಕೂಡಾ ಅಂದವಾದ ಉದ್ಯಾನವನದಲ್ಲಿ ವಿಹರಿಸಬೇಕಾಗುತ್ತದೆ.


      ಯಕ್ಷಗಾನ ನಿಂತಿರುವುದೇ ಪೌರಾಣಿಕ ಕಥೆಗಳ ಭದ್ರವಾದ ಅಡಿಪಾಯದ ಮೇಲೆ. ಹಾಗಂದ ಪುರಾಣೇತರ ಪ್ರಸಂಗಗಳು ಇಲ್ಲವೆಂದಲ್ಲ. ಈಗಂತೂ ಕಾಲ್ಪನಿಕ ಕಥೆಗಳದ್ದೇ ಸುಗ್ಗಿ. ಟೆಂಟ್ ಮೇಳಗಳಂತೂ ವರ್ಷಕ್ಕೊಂದು ಹೊಸ ಪ್ರಸಂಗದ ಕಥಾಹಂದರವನ್ನು ಹೆಣೆಯುತ್ತಿದೆ. ಹರಕೆ ಆಟದ ಮೇಳಗಳು ಮಾತ್ರ ತನ್ನ ಪೌರಾಣಿಕ ಪ್ರಸಂಗಗಳ ಇತಿಮಿತಿಯನ್ನು ದಾಟಿಲ್ಲವೆಂದು ಹೇಳಬಹುದು.


                   20ನೇ ಶತಮಾನದ ಉತ್ತರಾರ್ಧದಲ್ಲೇ ಹಲವು ಪೌರಾಣಿಕೇತರ ಪ್ರಸಂಗಗಳು ರಚನೆಯಾದುವು. ಸಿನಿಮಾ ಕತೆಗಳನ್ನಾಧರಿಸಿದ ಪ್ರಸಂಗಗಳು, ಕಾಲ್ಪನಿಕ ಪ್ರಸಂಗಗಳು, ಜನಜಾಗೃತಿಯ ಸಂದೇಶವನ್ನು ಸಾರುವ ಪ್ರಸಂಗಗಳು. ಹೀಗೆ ಹತ್ತು ಹಲವು ಪೌರಾಣಿಕೇತರ ಪ್ರಸಂಗಗಳಿಂದ ಬೇರೆಯೇ ಆಗಿ ನಿಲ್ಲುವ ಪ್ರಸಂಗವೊಂದಿದೆ. ಅದುವೇ ಭಾರತ್-ಪಾಕ್ ಯುದ್ಧವನ್ನಾಧರಿಸಿ ರಚನೆಯಾದ ‘ಕಾಶ್ಮೀರ-ಕಾಳಗ’. ದಿ| ವಿದ್ವಾನ್ ವಳಕ್ಕುಂಜ ನರಸಿಂಹ ಭಟ್ಟರ ಸುಂದರ ಪರಿಕಲ್ಪನೆಯಲ್ಲಿ ಮೂಡಿಬಂದ ಈ ಪ್ರಸಂಗ ಅದ್ಭುತವೆಂದೇ ಹೇಳಬಹುದು.


        ಯುದ್ಧದ ನೈಜ ಚಿತ್ರಣವನ್ನು ಪ್ರತಿಬಿಂಬಿಸುತ್ತಾ ಓದುಗರಲ್ಲಿ ರೋಮಾಂಚನ ಉಂಟುಮಾಡಬಲ್ಲ ಸಾಮಥ್ರ್ಯ ಈ ಕಥಾನಕಕ್ಕಿದೆ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು. ವಳಕ್ಕುಂಜ ನರಸಿಂಹ ಭಟ್ಟರು ಈಗ ನಮ್ಮೊಡನಿಲ್ಲ. ಆದರೆ ಅವರು 1966ರಲ್ಲಿ ಬರೆದ ಈ ‘ಕಾಶ್ಮೀರ-ಕಾಳಗ’ ಎಂಬ ಯಕ್ಷಗಾನ ಪ್ರಸಂಗದ ಮುದ್ರಿತ ಪ್ರತಿಗಳೂ ಈಗ ದೊರೆಯಲಾರದು. ಆದರೆ ಅಂದು ಮುದ್ರಿತ ವಾದ ಪ್ರತಿಗಳು ಕೆಲವರು ಯಕ್ಷಾಭಿಮಾನಿಗಳಲ್ಲಿಯಾದರೂ ಉಳಿದುಕೊಂಡಿರಬಹುದು ಎಂಬ ಆಶಾವಾದವನ್ನು ವ್ಯಕ್ತಪಡಿಸುತ್ತಿದ್ದೇವೆ. ಆದರೆ ಈ ಪ್ರಸಂಗದ ಪ್ರತಿ ಈಗ ಅಂತರ್ಜಾಲದ ‘ಯಕ್ಷವಾಹಿನಿ’  ಪ್ರಸಂಗ ಮಾಹಿತಿ ಜಾಲತಾಣದಲ್ಲಿ ಲಭ್ಯವಿದೆ. 


                         ಶಿಕ್ಷಕ ವೃತ್ತಿ ಮತ್ತು ತಾಳಮದ್ದಳೆ ಅರ್ಥಧಾರಿಯಾಗಿ ಎರಡರಲ್ಲೂ ಸಮನ್ವಯತೆಯನ್ನು ಸಾಧಿಸುವುದರ ಜೊತೆಗೆ ವಿದ್ವಾನ್ ನರಸಿಂಹ ಭಟ್ಟರು ಪುರಾಣ ಪ್ರವಚನಗಳನ್ನು ನಡೆಸುತ್ತಿದ್ದರು. ಹಾಗೂ ಆ ಕಾಲದಲ್ಲಿ ಸ್ವಲ್ಪಮಟ್ಟಿಗೆ ಯಕ್ಷಗಾನ ಭಾಗವತರಾಗಿಯೂ ಗುರುತಿಸಿಕೊಂಡಿದ್ದರು.

ಕಲ್ಲಿಕೋಟೆ ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ. ಎ. ಪದವಿಯನ್ನು ಪಡೆದಿದ್ದ ಶ್ರೀಯುತರು ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ಮತ್ತು ಕಾವೇರಿ ಕಾಲೇಜು, ಭಾಗಮಂಡಲ ಇಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.


       ಯಕ್ಷಗಾನ ಮತ್ತು ಶಿಕ್ಷಕ ವೃತ್ತಿ ಎರಡೂ ರಂಗಕ್ಕೂ ಇವರಿಂದ ಇನ್ನೂ ಹೆಚ್ಚಿನ ಸೇವೆ ಸಲ್ಲಬಹುದಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು. ಶ್ರವಣಶಕ್ತಿ ಕುಂಠಿತಗೊಂಡು ತಾನು ಅತಿಯಾಗಿ ಪ್ರೀತಿಸುತ್ತಿದ್ದ ಯಕ್ಷಗಾನ ಮತ್ತು ಶಿಕ್ಷಕ ವೃತ್ತಿ ಎರಡರಿಂದ ಅಕಾಲದಲ್ಲಿಯೇ ದೂರ ಉಳಿಯಬೇಕಾಗಿ ಬಂದದ್ದು ವಿಪರ್ಯಾಸವೆಂದೇ ಹೇಳಬೇಕು. ಒಂದೆರಡು ವರ್ಷಗಳ ಕಾಲ ಪರ್ಕಿನ್‍ಸನ್ ಎಂಬ ಕಾಯಿಲೆಯಿಂದ ಬಳಲಿ 2008ರಲ್ಲಿ ಅವರು ನಿಧನ ಹೊಂದಿದರು.


      ‘ಕಾಶ್ಮೀರ ಕಾಳಗ’ ಪ್ರಸಂಗ ಮುಖ್ಯವಾಗಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನ ಮಂತ್ರಿಗಳಾಗಿದ್ದ ಸಮಯದಲ್ಲಿ ನಡೆದ ಭಾರತ್-ಪಾಕಿಸ್ತಾನ ಯುದ್ಧದ ಚಿತ್ರಣದ ಕಥಾನಕ. ಒಡ್ಡೋಲಗದ ಪದ್ಯ ಹೀಗಿದೆ. ಝಂಪೆತಾಳದಲ್ಲಿ,
ಉತ್ತರದಿಶಾಭಾಗ ಕೊತ್ತಿ ಮೆರೆಯುವ ಢಿಲ್ಲಿ | ಪತ್ತನದ ಲೋಕಸಭೆಯೊಳಗೆ || ಮತ್ತೆ ಶಾಸ್ತ್ರಿಗಳೊಂದು ದಿನ ಚವನ ಮುಖ್ಯರಿಂ | ದಿತ್ತರೋಲಗನ ಜಯವೆನಲೂ ||
   ಮುಂದಕ್ಕೆ ಯುದ್ಧ ನಿಶ್ಚಯವಾಗಲು, ಪಾಕಿಸ್ತಾನದಲ್ಲಿ ನಡೆಯುವ ವಿದ್ಯಮಾನಗಳ ಚಿತ್ರಣ ಈ ರೀತಿ ಇದೆ. ತ್ರಿವುಡೆ ತಾಳದಲ್ಲಿ,
ಇತ್ತಲಿಂತೀ ತೆರೆದೊಳಿರುತಿರೆ | ಲತ್ತರಾವಲ್ಪಿಂಡಿ ನಗರಿಯೊ | ಳಿತ್ತನೋಲಗ ಭುಟ್ಟೊ ಸಹಿತಲಿ | ಮತ್ತೆಯೂಬ ||
ಈ ಪ್ರಸಂಗದುದ್ದಕ್ಕೂ ನಮಗೆ ಕಾಣಸಿಗುವುದು ಅತ್ಯಪೂರ್ವ ಪದ್ಯರಚನಾ ಕೌಶಲ. ಛಂದಸ್ಸು, ತಾಳಗಳಿಗೆ ಧಕ್ಕೆಯಾಗದಂತೆ ಸುಂದರವಾಗಿ ಪದಗಳನ್ನು ಜೋಡಿಸಲಾಗಿದೆ. ಪಾಕಿಸ್ತಾನೀಯರ ಹೆಸರುಗಳನ್ನು ಕೆಲವು ಅಸ್ತ್ರಗಳಾದ ಬಾಂಬು, ಟ್ಯಾಂಕರ್ ಮುಂತಾದ ಶಬ್ದಗಳನ್ನು ಹೆಣೆದಿರುವ ರೀತಿ ಚಂದವೇ ಚಂದ.
ಇನ್ನು ಕೊನೆಯಲ್ಲಿ ಬರುವ ಮಂಗಳ ಪದ್ಯವಂತೂ ತುಂಬಾ ಚೆನ್ನಾಗಿದೆ.
ರಾಧಾಕೃಷ್ಣಗೆ, ರಾಷ್ಟ್ರಾಧ್ಯಕ್ಷಗೆ | ಮೇದಿನಿಯೊಳು ಶಾಂತಿ ಸ್ಥಾಪಕಗೆ | ಸಾದರದಿಂದ ಪ್ರಧಾನಿ ಶಾಸ್ತ್ರಿಗಳಿಂಗೆ | ಮೋದದಿಂದಲಿ ಯುದ್ಧ ಕಾದಿ ಗೆದ್ದವರಿಂಗೆ || ಮಂಗಳಂ ಜಯ ಮಂಗಳಂ || ಹೀಗೆ ಈ ಪದ್ಯ ಮುಂದುವರಿದು ಪ್ರಸಂಗ ಸಮಾಪ್ತಿಯಾಗುತ್ತದೆ.


                       ಒಟ್ಟಿನಲ್ಲಿ ಆ ಕಾಲದಲ್ಲೇ ಒಳ್ಳೆಯ ಒಂದು ಪುರಾಣೇತರ ಪ್ರಸಂಗ ರಚಿಸುವಲ್ಲಿ ವಿದ್ವಾನ್ ನರಸಿಂಹ ಭಟ್ಟರು ಯಶಸ್ವಿಯಾಗಿದ್ದರು. ಯಕ್ಷಗಾನದಲ್ಲಿ ವಾಚಿಕ ಎಂಬುದು ಮೊದಲೇ ಸಿದ್ಧಪಡಿಸಿದ ಪಾಠಾಕ್ಷರಗಳಲ್ಲದ ಕಾರಣ ಪ್ರದರ್ಶನದ ಸಂದರ್ಭದಲ್ಲಿ ಕಲಾವಿದರು ಹೇಗೆ ಜಾಗರೂಕರಾಗಿರಬೇಕೆಂಬುದನ್ನು ಲೇಖಕರು ತಮ್ಮ ಮುನ್ನುಡಿಯಲ್ಲಿ ಹೀಗೆ ಎಚ್ಚರಿಸಿದ್ದಾರೆ.


‘‘ಜೀವಂತ ವ್ಯಕ್ತಿಗಳ ಪ್ರವೇಶವು ಇಲ್ಲಿ ಮುಖ್ಯವಾಗಿರುವುದರಿಂದ ಅವರ ವ್ಯಕ್ತಿತ್ವಕ್ಕೆ ಭಂಗ ಬಾರದಂತೆ ಕಲಾವಿದರು ಪ್ರದರ್ಶಿಸಬೇಕೆಂದು ವಿನಯಪೂರ್ವಕ ವಿಜ್ಞಾಪಿಸಿಕೊಳ್ಳುತ್ತೇನೆ. ಭಾರತವು ಒಂದೇ ವ್ಯಕ್ತಿಯಾಗಿ, ಶಕ್ತಿಯಾಗಿ ಜಾಗೃತವಾಗುವಂತೆ ಜನರಲ್ಲಿ ಪ್ರಚೋದನೆಯುಂಟಾದರೆ ಈ ಕೃತಿಯ ಉದ್ದೇಶವು ಫಲಿಸುವುದು.’’
ಎಲ್ಲಿಯೂ ವಿವಾದಕ್ಕೆಡೆ ಮಾಡಿಕೊಡಬಾರದೆಂದು ಕಲಾವಿದರಲ್ಲಿ ನಯವಾಗಿ ಮತ್ತು ಅಷ್ಟೇ ಮಾರ್ಮಿಕವಾಗಿ ಬಿನ್ನವಿಸಿದ್ದಾರೆ. ಕೆಲವೊಮ್ಮೆ ಹಾಸ್ಯಾಸ್ಪದ ಸನ್ನಿವೇಶಗಳಲ್ಲಿ ಕಲಾವಿದರು ಸಂಭಾಷಣೆಯಲ್ಲಿ ಜಾಗರೂಕ ರಾಗಿರಬೇಕೆಂಬ ಸೂಚನೆ. ಒಟ್ಟಿನಲ್ಲಿ ಸುಂದರವಾದ ಒಂದು ಪ್ರಸಂಗ. ರಾಜಕೀಯವಾದ ಒಂದು ಘಟನೆಯನ್ನು ಹೆಣೆದು ಕಥಾರಚನೆ ಈಗ ಬಹಳ ಕಷ್ಟ. ಆದರೆ ಅಂದು ಅವರು ವಿವಾದಕ್ಕೆಡೆಯಾಗದಂತೆ ಪ್ರಸಂಗ ರಚಿಸಿದ್ದರು.

ಪೆರ್ನಡ್ಕ ಶ್ಯಾಮ ಭಟ್ – ಯಕ್ಷಗಾನ ಕಲಾವಿದ, ವೇಷಭೂಷಣ ಮತ್ತು ಬಣ್ಣಗಾರಿಕೆಯ ಕುಶಲಿಗ

ಯಕ್ಷಗಾನವೆಂಬುದು ಕರಾವಳಿ ಮತ್ತು ಮಲೆನಾಡಿನ ಎಷ್ಟೋ ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಜನಪ್ರಿಯತೆಯನ್ನು ಹೊಂದಿದ್ದರೂ ಈ ಕಲೆಯಲ್ಲಿ ನೆಲೆ ಕಂಡು ಪ್ರಭುತ್ವವನ್ನು ಸಾಧಿಸಿದ ಹಾಗೂ ಪ್ರಚಾರವನ್ನು ಬಯಸದೆ ತಮ್ಮ ಕೆಲಸವನ್ನು ಮಾಡಿಕೊಂಡು ಹೋಗುವ ಅದೆಷ್ಟೋ ಕಲಾವಿದರೂ ಕಲಾಪೋಷಕರೂ ನಮ್ಮ ನಡುವೆ ಇದ್ದಾರೆ. ಇವರದು ಒಂದು ರೀತಿಯ ಮೌನ ತಪಸ್ಸು. ಪ್ರಚಾರ ಆಡಂಬರಗಳಿಲ್ಲದ ಕಲಾ ಕಾಯಕ. ಅಂತಹವರನ್ನು ಗುರುತಿಸುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ.  

ಬಹುಶಃ ಪೆರ್ನಡ್ಕ ಶ್ರೀ ಶ್ಯಾಮ ಭಟ್ಟರ ಹೆಸರನ್ನು ತುಂಬಾ ಮಂದಿ ಕೇಳಿರಬಹುದು.  ಪೆರ್ನಡ್ಕ ಶ್ಯಾಮ ಭಟ್ ಅವರಿಗೆ ಕಲಾಸಕ್ತಿ ಮೊಳೆತುದು ಸಣ್ಣ ವಯಸ್ಸಿನಲ್ಲಿಯೇ ಆದರೂ ಅವರು ತಮ್ಮ ಮೂವತ್ತೈದರ ಹರೆಯವನ್ನು ದಾಟಿದ ಮೇಲೆಯೇ ಯಕ್ಷಗಾನದ ನಾಟ್ಯ ಕಲಿತವರು.  

ಶ್ರೀ ಭೀಮ ಭಟ್ ಮತ್ತು ಶ್ರೀಮತಿ ವೆಂಕಟೇಶ್ವರಿ ಅವರ ಪ್ರಥಮ ಪುತ್ರನಾಗಿ ಪೆರ್ನಡ್ಕದಲ್ಲಿ 1954 ಆಗಸ್ಟ್ 28ರಂದು ಜನಿಸಿದ ಪೆರ್ನಡ್ಕ ಶ್ಯಾಮ ಭಟ್ಟರು ನೀರ್ಪಾಜೆ, ಕನ್ಯಾನ ಮತ್ತು ಉಜಿರೆಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದರು. ಶ್ಯಾಮ ಭಟ್ಟರ ಅಜ್ಜ (ತಾಯಿಯ ತಂದೆ) ಮಾದಕಟ್ಟೆ ಕೃಷ್ಣ ಭಟ್ಟರು ತೆಂಕುತಿಟ್ಟು ಯಕ್ಷಗಾನದ ಭಾಗವತರಾಗಿದ್ದರು. ಒಟ್ಟು ಆರು ಮಂದಿ ಮಕ್ಕಳಲ್ಲಿ ಮೊದಲನೆಯವರಾದ ಶ್ಯಾಮ ಭಟ್ಟರಿಗೆ ನಾಲ್ಕು ಸಹೋದರಿಯರು. ಆಮೇಲೆ ಕೊನೆಯ ಸಹೋದರರಾದ ಶ್ರೀ ರಾಜಗೋಪಾಲ ಕನ್ಯಾನ ಅವರು ಯಕ್ಷಗಾನ ಕಲಾವಿದರೂ, ಸಾಹಿತಿಯೂ, ಯಕ್ಷಗಾನ ವಿಮರ್ಶಕರೂ, ಲೇಖಕರೂ, ಪ್ರಕಾಶಕರೂ, ಹಲವಾರು ಪುಸ್ತಕಗಳನ್ನು ಹೊರತಂದ ಸಂಪಾದಕರೂ ಆಗಿ ಗುರುತಿಸಲ್ಪಟ್ಟಿದ್ದಾರೆ.

ಪೆರ್ನಡ್ಕ ಶ್ಯಾಮ ಭಟ್ಟರಿಗೆ ಸಣ್ಣ ವಯಸ್ಸಿನಲ್ಲಿಯೇ ಆಟ ನೋಡುವ ಆಸಕ್ತಿಯಿತ್ತು. ಅತಿ ಸಣ್ಣ ವಯಸ್ಸಿನಲ್ಲಿಯೇ ಬಣ್ಣದ ಕುಟ್ಯಪ್ಪು ಅವರ ಬಣ್ಣದ ವೇಷಗಳನ್ನು ನೋಡಿ ಯಕ್ಷಗಾನ ಲೋಕದ ಅದ್ಭುತ ಮತ್ತು ಬೆಡಗನ್ನು ನೋಡಿ ಬೆರಗಾದರು. ಆಟ ನೋಡಿ ಆಸಕ್ತಿಯಿತ್ತೇ ವಿನಃ ಅದರಲ್ಲಿ ಭಾಗವಹಿಸುತ್ತೇನೆಂಬ ಕಲ್ಪನೆ ಅವರಿಗಿರಲಿಲ್ಲ. ಹೀಗೆ ಯಕ್ಷಗಾನದ ಆಸಕ್ತಿ ಬೆಳೆದು ಬಂತು. ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ ಶ್ಯಾಮ ಭಟ್ಟರು ಉದ್ಯೋಗ ನಿಮಿತ್ತ ಬೆಂಗಳೂರು ನಗರವನ್ನು ಸೇರಿದ್ದರು.

ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳ ಕಾಲ ನೆಲೆಸಿದ್ದರು. ಕಂಪೆನಿಯ ಕೆಲಸ ಮತ್ತು ಜೀವನ ನಿರ್ವಹಣೆಗಳ ನಡುವೆ ಯಕ್ಷಗಾನವು ಆ ಕಾಲದಲ್ಲಿ ಅಷ್ಟಾಗಿ ಶ್ಯಾಮ ಭಟ್ಟರ ಮನಸ್ಸಿನಲ್ಲಿ ಆಕ್ರಮಿಸಲಿಲ್ಲ. ಆದರೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಬಡಗು ತಿಟ್ಟಿನ ಆಟಗಳನ್ನು ನೋಡಿ ಅದಕ್ಕೆ ಆಕರ್ಷಿತರಾದರು. ಚಿಟ್ಟಾಣಿ, ಕಾಳಿಂಗ ನಾವಡ ಮತ್ತು ಮಂಟಪ ಪ್ರಭಾಕರ ಉಪಾಧ್ಯಾಯರ ವೇಷಗಳಿಂದ ಆಕರ್ಷಿತರಾಗಿದ್ದರು. ಒಂದು ದಿನ ಬೆಂಗಳೂರಿನಲ್ಲಿ ನಡೆದ ತೆಂಕುತಿಟ್ಟಿನಲ್ಲಿ  ಪ್ರದರ್ಶನವೊಂದರಲ್ಲಿ ಬಣ್ಣದ ಮಹಾಲಿಂಗ ಅವರ ಭೀಮನ ವೇಷವನ್ನೂ ಬಣ್ಣಗಾರಿಕೆಯನ್ನೂ ಕಂಡು ಬೆರಗಾಗಿದ್ದರು.

ಬೆಂಗಳೂರಿನಲ್ಲಿ ಬಡಗು ಮತ್ತು ತೆಂಕು ತಿಟ್ಟುಗಳೆರಡರಲ್ಲೂ ಪರಂಪರೆ ಮತ್ತು ಆಧುನಿಕತೆಯ ಪ್ರದರ್ಶನಗಳಲ್ಲಿ ವ್ಯತ್ಯಾಸಗಳನ್ನು ಗುರುತಿಸಿದ್ದರು. ಕೆಲವು ವರ್ಷಗಳ ನಂತರ ಅಂದರೆ ತಮ್ಮ 35ನೆಯ ವಯಸ್ಸಿನಲ್ಲಿ ಶ್ಯಾಮ ಭಟ್ಟರು ಅನಿವಾರ್ಯವಾಗಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಊರಿನಲ್ಲಿ ಕೃಷಿ ಕಾರ್ಯಗಳನ್ನು ನೋಡಿಕೊಳ್ಳಲು ಬರಬೇಕಾಗಿ ಬಂತು. ಈ ನಂತರವೇ ಇವರ ನೈಜ ಯಕ್ಷಗಾನಾಸಕ್ತಿ ಅರಳತೊಡಗಿತು. ಕಲಾವಿದನಾಗಿ ತಮ್ಮ ಹೊಸ ಪಾತ್ರವನ್ನು ಪ್ರಕಟಪಡಿಸತೊಡಗಿದರು.

ನಾಟ್ಯ ಕಲಿಯಬೇಕೆಂಬ ಆಸಕ್ತಿ ಉತ್ಸಾಹಗಳು ಬಂದುವು. ಊರಿನ ನೀರ್ಪಾಜೆ ಶಾಲೆಯ ವಾರ್ಷಿಕೋತ್ಸವದ ಯಕ್ಷಗಾನ ಪ್ರದರ್ಶನಕ್ಕೋಸ್ಕರ ಪೊಳ್ಳಕಜೆ ಗೋಪಾಲಕೃಷ್ಣ ಭಟ್ ಅವರಿಂದ ಯಕ್ಷಗಾನದ ನಾಟ್ಯದ ಬಾಲಪಾಠ ಆರಂಭವಾಯಿತು. ಶಾಲಾ ವಾರ್ಷಿಕೋತ್ಸವದಲ್ಲಿ ಪ್ರಥಮ ಬಾರಿ ದೇವಿ ಮಹಾತ್ಮೆಯಲ್ಲಿ ಸುಗ್ರೀವನಾಗಿ ರಂಗ ಪ್ರವೇಶ ಮಾಡಿದರು. ಆಮೇಲೆ ಕುಡಾನ ಗೋಪಾಲಕೃಷ್ಣ ಭಟ್ಟರಿಂದ ಬಣ್ಣಗಾರಿಕೆಯನ್ನೂ ಬಾಯಾರು ರಮೇಶ ಶೆಟ್ಟಿಯವರಿಂದ ಹೆಚ್ಚಿನ ನಾಟ್ಯಾಭ್ಯಾಸವನ್ನೂ ಮಾಡಿದರು.

ಆಮೇಲೆ ಪೈವಳಿಕೆ ಗಣೇಶ ಕಲಾ ವೃಂದದ ಶ್ರೀ ದೇವಕಾನ ಕೃಷ್ಣ ಭಟ್ಟರ ತಂಡದಲ್ಲಿ ಹೆಚ್ಚಿನ ಬಣ್ಣಗಾರಿಕೆಯನ್ನು ಕಲಿಯಲು ತಿರುಗಾಟ ನಡೆಸಿದರು. ಅಲ್ಲಿ ಬಣ್ಣಗಾರಿಕೆಯ ಸಂಪೂರ್ಣ ಅನುಭವ ಅವರಿಗಾಯಿತು. ಯಕ್ಷಗಾನ ಪ್ರದರ್ಶನಗಳಿಗೆ ವೇಷಭೂಷಣಗಳನ್ನು ಒದಗಿಸುವ ದೇವಕಾನದವರ ತಂಡದವರಿಗೆ ಕೆಲವೊಮ್ಮೆ ದಿನವೊಂದರಲ್ಲಿ ಒಂದಕ್ಕಿಂತ ಹೆಚ್ಚು ಆಟಗಳಿದ್ದಲ್ಲಿ ಪ್ರಸಾಧನ ತಂಡದ ಮೇಲುಸ್ತುವಾರಿಯನ್ನು ನೋಡಿಕೊಳ್ಳಲು ಹೋಗುತ್ತಿದ್ದರು.

ಹೀಗೆ ದೇವಕಾನ ಕೃಷ್ಣ ಭಟ್ಟರ ವೇಷಭೂಶಣ ಮತ್ತು ಪ್ರಸಾಧನ ತಂಡದಲ್ಲಿ ಪ್ರಸಾಧನ ಕಲಾವಿದರಾಗಿಯೂ ವೇಷಧಾರಿಯಾಗಿಯೂ ಹಲವಾರು ವರ್ಷಗಳ ಕಾಲ ಕಲಾಸೇವೆಯನ್ನು ಮಾಡಿದರು. ಪೆರ್ನಡ್ಕ ಶ್ಯಾಮ ಭಟ್ಟರು ಹೆಚ್ಚಾಗಿ ಸಾತ್ವಿಕ ಪಾತ್ರಗಳನ್ನೂ ನಿರ್ವಹಿಸುತ್ತಿದ್ದರು. ಹಂಸಧ್ವಜ, ಮಯೂರಧ್ವಜ, ಹಾಸ್ಯ, ದೇವೀಮಹಾತ್ಮೆಯ ದೇವಿ ಮೊದಲಾದ ಸ್ತ್ರೀ ಪಾತ್ರಗಳು, ಹಾಗೂ ಅನಿವಾರ್ಯ ಸಂದರ್ಭದಲ್ಲಿ ಯಾವುದೇ ವೇಷಗಳನ್ನು ಮಾಡಬಲ್ಲ ಕಲಾವಿದರು ಶ್ಯಾಮ ಭಟ್ಟರು.

ಹೆಚ್ಚಿನ ಕಿರೀಟ ವೇಷಗಳನ್ನು ನಿರ್ವಹಿಸಿದ ಅನುಭವ ಇರುವ ಇವರು ಎಷ್ಟೋ ಪ್ರದರ್ಶನಗಳಲ್ಲಿ ಕಲಾವಿದರ ಅನುಪಸ್ಥಿತಿಯಲ್ಲಿ ಅನಿವಾರ್ಯವಾಗಿ ಪ್ರಮುಖ ವೇಷಗಳನ್ನು ನಿರ್ವಹಿಸಿದ್ದಾರೆ. ವೇಷಧಾರಣೆಯಲ್ಲಿ ಹಾಗೂ ಬಣ್ಣಗಾರಿಕೆಯಲ್ಲಿರುವ ಹಲವಾರು ಸೂಕ್ಷ್ಮತೆಗಳನ್ನು ತಿಳಿಸುವ ಶ್ಯಾಮ ಭಟ್ಟರು ಆ ಕ್ಷೇತ್ರದಲ್ಲಿ ಕಲಾವಿದರು ಅನುಸರಿಸಬೇಕಾದ ಕ್ರಮಗಳನ್ನು ತಿಳಿ ಹೇಳುತ್ತಾರೆ. ವೇಷವು ಹಗುರವಾಗಬೇಕೆಂದು ಅನುಸರಿಸುವ ಕ್ರಮಗಳಿಂದ ಆಗಬಹುದಾದ ತೊಡಕುಗಳನ್ನೂ ವಿವರಿಸುತ್ತಾರೆ. ಅಲ್ಲದೆ ಕನ್ಯಾನದ ಶ್ರೀ ವೀರಾಂಜನೇಯ ಯಕ್ಷಗಾನ ಕಲಾಸಂಘ, ಶಿರಂಕಲ್ಲು ಇದರ ಸಂಚಾಲಕರಾಗಿ ಸುಮಾರು 10ರಿಂದ 12 ವರ್ಷಗಳ ಕಾಲ ಮುನ್ನಡೆಸಿ, ಮರೆತು ಹೋಗಿದ್ದ ಹಲವಾರು ಪ್ರಸಂಗಗಳನ್ನು ಪ್ರಯೋಗಿಸಿ, ತೆಂಕುತಿಟ್ಟಿನ ಪರಂಪರೆಯ ಆಟಗಳ ಪ್ರದರ್ಶನವನ್ನು ಏರ್ಪಡಿಸಿದ ಕೀರ್ತಿಯು ಇವರಿಗೆ ಸಲ್ಲುತ್ತದೆ.

ನೀರ್ಪಾಜೆ ಮತ್ತು ಕನ್ಯಾನದ ಶಾಲೆಗಳಲ್ಲಿ ನುರಿತ ಕಲಾವಿದರಿಂದ ಯಕ್ಷಗಾನದ ತರಗತಿಗಳನ್ನು ನಡೆಸಿ ಹಲವಾರು ಕಲಾವಿದರನ್ನು ತಯಾರು ಮಾಡಿದ್ದಾರೆ. ಇಲ್ಲಿ ಕಲಿತ ಕೆಲವು ಮಂದಿ ಕಲಾವಿದರು ಇಂದು ಮೇಳಗಳಲ್ಲಿ ತಿರುಗಾಟ ಮಾಡುತ್ತಿದ್ದಾರೆ. 

ಪತ್ನಿ ಶ್ರೀಮತಿ ಪಾರ್ವತಿ ಜೊತೆಯಲ್ಲಿ ಪೆರ್ನಡ್ಕದಲ್ಲಿ ವಾಸಿಸುತ್ತಿರುವ ಪೆರ್ನಡ್ಕ ಶ್ಯಾಮ ಭಟ್ಟರಿಗೆ ಇಬ್ಬರು ಪುತ್ರರು. ಮೊದಲ ಪುತ್ರ ಭೀಮ ಭಾರದ್ವಾಜ್ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕ. ವೇಷಧಾರಿಯಾಗಿ ಮತ್ತು ಹಿಮ್ಮೇಳ ಮತ್ತು ಮುಮ್ಮೇಳದ ಕಲಾವಿದ. ಸೊಸೆ ಗಾಯತ್ರಿ.  ದ್ವಿತೀಯ ಪುತ್ರ ಹೃಷಿಕೇಷ ಯೋಗ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುದು ಮಾತ್ರವಲ್ಲದೆ ಯಕ್ಷಗಾನ ವೇಷಧಾರಿಯಾಗಿಯೂ ಮುನ್ನಡೆಯುತ್ತಿದ್ದಾರೆ. ಶ್ಯಾಮ ಭಟ್ಟರು ಉತ್ತಮ ಲೇಖಕರೂ ಹೌದು. ಅವರು ಬರೆದ ಹಲವಾರು ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಪ್ರಸ್ತುತ ಯಕ್ಷಗಾನ ತಿರುಗಾಟಗಳಿಂದ ದೂರ ಉಳಿದಿರುವ ಪೆರ್ನಡ್ಕ ಶ್ಯಾಮ ಭಟ್ಟರು ಕೃಷಿ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 

ಯಕ್ಷಗಾನ ವೇಷಧಾರಿ, ನೇಪಥ್ಯ ಕಲಾವಿದ ಶ್ರೀ ಪಿ. ರಾಮಣ್ಣ ಗೌಡ ಕಲ್ಮಡ್ಕ 

ಯಕ್ಷಗಾನದ ಯಶಸ್ವೀ ಪ್ರದರ್ಶನಗಳಿಗೆ ಕಲಾವಿದರ ಜತೆ ನೇಪಥ್ಯ ಕಲಾವಿದರೂ ಕಾರಣರಾಗುತ್ತಾರೆ. ಯಕ್ಷಗಾನ ಕಲೆಗೆ ಅವರ ಕೊಡುಗೆಗಳು ಅಪಾರವಾದುದು. ವೇಷಭೂಷಣಗಳ ನಿರ್ವಹಣೆ, ಮೇಕಪ್ ಮಾಡುವುದು, ವೇಷ ಕಟ್ಟಿ ಕಲಾವಿದರನ್ನು ರಂಗ ಪ್ರವೇಶಕ್ಕೆ ಸಿದ್ಧಗೊಳಿಸುವುದು, ಬಣ್ಣದ ಮನೆಯ ನಿರ್ವಹಣೆ, ರಂಗಸ್ಥಳಕ್ಕೆ ಬೇಕಾದ ಪರಿಕರಗಳನ್ನು ಒದಗಿಸಿಕೊಡುವುದು, ವೇಷಭೂಷಣಗಳ ತಯಾರಿಕೆ ಇತ್ಯಾದಿ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ಅವರನ್ನು ಕಲಾಭಿಮಾನಿಗಳು ಗುರುತಿಸಿ ಗೌರವಿಸುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ.

ಯಶಸ್ವೀ ಪ್ರದರ್ಶನಗಳಿಗೆ ರಂಗದಲ್ಲಿ ಕಲಾವಿದರು ಕಾರಣರಾದರೆ ಅದಕ್ಕೆ ತೆರೆಯ ಮರೆಯಲ್ಲಿ ನೇಪಥ್ಯ ಕಲಾವಿದರ ಕೊಡುಗೆಯೂ ಇರುತ್ತದೆ. ಅನೇಕ ನೇಪಥ್ಯ ಕಲಾವಿದರು ರಂಗದಲ್ಲಿ ಕಲಾವಿದರಾಗಿಯೂ ಕಾಣಿಸಿಕೊಂಡು ಯಶಸ್ವಿಯಾಗಿದ್ದಾರೆ. ಅಂತಹಾ ಕಲಾವಿದರಲ್ಲೊಬ್ಬರು  ಶ್ರೀ ಪಿ. ರಾಮಣ್ಣ ಗೌಡ ಕಲ್ಮಡ್ಕ. ಸುಮಾರು ಐವತ್ತು ವರ್ಷಗಳಿಂದ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಪ್ರಸ್ತುತ ಶ್ರೀ ಮಹಾಬಲ ಕಲ್ಮಡ್ಕ ಅವರ ನೇತೃತ್ವದ ‘ರಂಗ ಸುರಭಿ’ ಕಲ್ಮಡ್ಕ ಎಂಬ ತಂಡದಲ್ಲಿ ನೇಪಥ್ಯ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಕಲಾವಿದ, ನೇಪಥ್ಯ ಕಲಾವಿದ  ಶ್ರೀ ಪಿ. ರಾಮಣ್ಣ ಗೌಡ ಅವರು ಶ್ರೀ ಶಿವಣ್ಣ ಗೌಡ ಮತ್ತು ಶ್ರೀಮತಿ ಶಿವಮ್ಮ ದಂಪತಿಗಳ ಪುತ್ರರು. 1951ರಲ್ಲಿ ಸುಳ್ಯ ತಾಲೂಕು ಕಲ್ಮಡ್ಕ ಗ್ರಾಮದ ರಾಮತ್ತಿಕಾರಿ ಮನೆಯಲ್ಲಿ ಜನನ. ಕಲ್ಮಡ್ಕ ಮತ್ತು ಪಂಜ ಶಾಲೆಗಳಲ್ಲಿ 7ನೇ ತರಗತಿ ವರೆಗೆ ಓದಿದ್ದರು. ತಂದೆಯವರ ನಿಧನದ ಕಾರಣದಿಂದ ರಾಮಣ್ಣ ಗೌಡರಿಗೆ ಓದು ಮುಂದುವರಿಸಲು ಅನಾನುಕೂಲವಾಗಿತ್ತು. ಬಾಲ್ಯದಲ್ಲೇ ಯಕ್ಷಗಾನಾಸಕ್ತಿ ಇತ್ತು. ಮೇಳಗಳ ಮತ್ತು ಕಲ್ಮಡ್ಕದ ಸಂಗಮ ಕಲಾ ಸಂಘದ ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು.

ಸಂಗಮ ಕಲಾ ಸಂಘದ ರೂವಾರಿ ಕೆರೆಕೋಡಿ ಪಂಡಿತ ಗಣಪತಿ ಭಟ್ಟರ ಪ್ರೋತ್ಸಾಹದಿಂದ ಯಕ್ಷಗಾನ ಕ್ಷೇತ್ರಕ್ಕೆ ಕಾಲಿರಿಸುವಂತಾಗಿತ್ತು. ಕುಡ್ಪ ಶ್ರೀ ರಾಮಚಂದ್ರ ಹೆಗಡೆ ಅವರಿಂದ ನಾಟ್ಯ ಕಲಿಕೆ. ( ಭಾಗವತರಾದ ಶ್ರೀ ಪದ್ಯಾಣ ಗಣಪತಿ ಭಟ್ಟರ ಗೋಳ್ತಜೆ ಮನೆಯಲ್ಲಿ ನಾಟ್ಯ ಕಲಿಕೆ). ಕೊಲ್ಲೂರು ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ದೇವೇಂದ್ರ ಬಲ ಮತ್ತು ಕಾಳಿಯಾಗಿ ರಂಗ ಪ್ರವೇಶ. ಬಳಿಕ ಸಂಘದ ಪ್ರದರ್ಶನಗಳಲ್ಲಿ ವೇಷ ಮಾಡುತ್ತಿದ್ದರು. ಪಟ್ಟಾಜೆ ವೈದ್ಯ ಗಣೇಶ ಭಟ್ಟರಿಂದ ಮಾತುಗಾರಿಕೆ ಮತ್ತು ಮೇಕಪ್ ಮಾಡುವ ಕ್ರಮವನ್ನೂ ಅಭ್ಯಾಸ ಮಾಡಿದ್ದರು.

ವೇಷಗಾರಿಕೆಯ ಜತೆಗೆ ಕಲ್ಮಡ್ಕ ಸಂಗಮ ಕಲಾ ಸಂಘದ ನೇಪಥ್ಯ ಕಲಾವಿದನಾಗಿಯೂ ತೊಡಗಿಸಿಕೊಂಡವರು ಶ್ರೀ ರಾಮಣ್ಣ ಗೌಡರು. ಪುಂಡು ವೇಷ, ಕಿರೀಟ ವೇಷಗಳನ್ನು ಮಾಡುತ್ತಾ ಹಾಸ್ಯಗಾರನಾಗಿ ಕಾಣಿಸಿಕೊಂಡಿದ್ದರು. ಪ್ರಾರಂಭದಲ್ಲಿ ಚೌಡೇಶ್ವರೀ ಮೇಳದಲ್ಲಿ ಒಂದು ವರ್ಷ ತಿರುಗಾಟ ನಡೆಸಿದ್ದರು. ಆಗ ಸದ್ರಿ ಮೇಳದಲ್ಲಿ ದಾಸರಬೈಲು ಚನಿಯ ನಾಯ್ಕ, ಪದ್ಯಾಣ ಗಣಪತಿ ಭಟ್, ನಯನ ಕುಮಾರ್, ಸಂಪಾಜೆ ಶೀನಪ್ಪ ರೈ ಮೊದಲಾದ ಕಲಾವಿದರಿದ್ದರು. ಬಳಿಕ ಕಲ್ಮಡ್ಕ ಸಂಘದ ಕಲಾವಿದನಾಗಿಯೇ ಕಾಣಿಸಿಕೊಂಡವರು.

ನೇಪಥ್ಯ ಕಲಾವಿದನಾಗಿ ತೆರಳಿದರೂ ಅನಿವಾರ್ಯವಾದರೆ ಪ್ರದರ್ಶನಗಳಲ್ಲಿ ವೇಷವನ್ನೂ ಮಾಡುವ ಶ್ರೀ ರಾಮಣ್ಣ ಗೌಡರು ಕಾರ್ಯಕ್ರಮ ಸಂಘಟಕರಿಗೆ ಆಪದ್ಬಾಂಧವನಾಗಿ ಒದಗುತ್ತಾರೆ. ಕಳೆದ ಎರಡು ವರ್ಷಗಳಿಂದ ವೇಷ ಮಾಡುವುದನ್ನು ನಿಲ್ಲಿಸಿ ನೇಪಥ್ಯ ಕಲಾವಿದನಾಗಿ ಮುಂದುವರಿಯುತ್ತಿದ್ದಾರೆ. ಶ್ರೀ ರಾಮಣ್ಣ ಗೌಡರಿದ್ದರೆ ಬಣ್ಣದ ಮನೆಯ ಸೊಬಗು ಎದ್ದು ಕಾಣುತ್ತದೆ. ಎಲ್ಲರನ್ನೂ ನಗು ನಗುತ್ತಾ ಮಾತನಾಡಿಸುತ್ತಾರೆ. ಚುರುಕಾಗಿ ಮೇಕಪ್ ಮಾಡಿ, ವೇಷ ಕಟ್ಟಿ ಕಲಾವಿದರಿಗೆ ನೆರವಾಗುತ್ತಾರೆ.

ಮೇಳಕ್ಕಿಂತಲೂ ಹವ್ಯಾಸಿ ಸಂಘ ಸಂಸ್ಥೆ ಮತ್ತು ಮಕ್ಕಳ ತಂಡದಲ್ಲಿ ನೇಪಥ್ಯ ಕಲಾವಿದನಾಗಿ ಸೇವೆ ಸಲ್ಲಿಸುವುದು ಕಷ್ಟ. ಇದಕ್ಕೆ ಕಾರಣವೇನೆಂದು ಎಲ್ಲರಿಗೂ ತಿಳಿದಿದೆ. ಸಹನೆ ಮತ್ತು ಪ್ರದರ್ಶನ ಮುಗಿಯುವ ವರೆಗೆ ಎಚ್ಚರದಿಂದ ಇರಬೇಕಾಗುತ್ತದೆ. ಮೈಮರೆಯುವಂತಿಲ್ಲ. ಈ ಎಲ್ಲಾ ಗುಣಗಳನ್ನು ಹೊಂದಿದ ಕಾರಣವೇ ಶ್ರೀ ರಾಮಣ್ಣ ಗೌಡರನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ.

ಇವರು ವೃತ್ತಿಯಲ್ಲಿಯೂ ಸಂಸಾರಿಕವಾಗಿಯೂ ತೃಪ್ತರು. 1994ರಲ್ಲಿ ಲಲಿತಾ ಅವರ ಜತೆ ವಿವಾಹ. ರಾಮಣ್ಣ ಗೌಡ ಮತ್ತು ಲಲಿತಾ ದಂಪತಿಗಳಿಗೆ ಮೂವರು ಮಕ್ಕಳು. ಹಿರಿಯ ಪುತ್ರ ಶ್ರೀ ವಾಸುದೇವ. ಮೆಸ್ಕಾಂ ಉದ್ಯೋಗಿ. ಪುತ್ರಿ ಕು| ವಂದನಾ. ಸುಳ್ಯ ಕೆ.ವಿ.ಜಿ ಆಸ್ಪತ್ರೆಯಲ್ಲಿ ಉದ್ಯೋಗಸ್ಥೆ. ಕಿರಿಯ ಪುತ್ರ ವಸಂತಕುಮಾರ. ಪದವಿ ವಿದ್ಯಾರ್ಥಿ. ಸರಳ, ಸಜ್ಜನ, ಅನುಭವೀ ಕಲಾವಿದ  ಶ್ರೀ ಪಿ. ರಾಮಣ್ಣ ಗೌಡರಿಗೆ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ.

ಲೇಖಕ: ರವಿಶಂಕರ್ ವಳಕ್ಕುಂಜ

 

ಕಾಳಿಂಗ ನಾವಡ ಪ್ರಶಸ್ತಿ – 2020

ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯು ನೀಡುವ  ಕಾಳಿಂಗ ನಾವಡ ಪ್ರಶಸ್ತಿ 2020ರ ಕಾರ್ಯಕ್ರಮವು ಕಾಳಿಂಗ ನಾವಡರ ಮೂಲ ಮನೆಯಾದ ಗುಂಡ್ಮಿಯ ಭಾಗವತರ ಮನೆಯಲ್ಲಿ ಈ ದಿನ ಸಂಜೆ ಯಶಸ್ವಿಯಾಗಿ ನಡೆಯಿತು.

ಯಕ್ಷಗಾನದ ಹಿರಿಯ ಕಲಾವಿದರಾದ ಹಂದಟ್ಟು ಗೋವಿಂದ ಉರಾಳರು ಈ ಒಂದು ಪ್ರಶಸ್ತಿಗೆ ಭಾಜನರಾದರು. ಈ ಒಂದು ಸಮಾರಂಭದಲ್ಲಿ ಹಿರಿಯ ಪುರೋಹಿತರಾದ  ಶ್ರೀ ವೆಂಕಪ್ಪಯ್ಯ ಭಟ್ಟರು, ಕನ್ನಡ ಪ್ರಾಧ್ಯಾಪಕರಾದ ಡಾ.ಶ್ರೀಕಾಂತ್ ಸಿದ್ದಾಪುರ, ಯಕ್ಷಗಾನ ಭಾಗವತರಾದ ಶ್ರೀ ಸುರೇಂದ್ರ ಫಣಿಯೂರ್, ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ  ಕಾರ್ಯದರ್ಶಿಗಳಾದ ಶ್ರೀ ರಾಜಶೇಖರ ಹೆಬ್ಬಾರ್, ಕಾಳಿಂಗ ನಾವಡರ ಸಹೋದರ ಶ್ರೀ ಗಣಪಯ್ಯ ನಾವಡ, ಕಲಾಕದಂಬ ಆರ್ಟ್ ಸೆಂಟರ್ ನ ಅಂಬರೀಷ ಭಟ್ ಹಾಗೂ ಕಲಾಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರಾದ ಡಾ.ರಾಧಾಕೃಷ್ಣ ಉರಾಳ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಸಭಾ ಕಾರ್ಯಕ್ರಮದ ನಂತರ ಲಂಬೋದರ ಹೆಗ್ಡೆ ಹಾಗೂ ಸುಜಯೀಂದ್ರ ಹಂದೆ ತಂಡದವರು ಯಕ್ಷ ಗಾನ ವೈಭವದ ಮೂಲಕ ಪ್ರೇಕ್ಷಕರ ಮನರಂಜಿಸಿದರು. ಈ ಸಂಪೂರ್ಣ ಕಾರ್ಯಕ್ರಮದ ನಿರ್ವಹಣೆಯನ್ನು ಮುರಳೀಧರ ನಾವಡ ಹಾಗೂ ವಿಶ್ವನಾಥ ಉರಾಳರು ಯಶಸ್ವಿಯಾಗಿ ನಿರ್ವಹಿಸಿದರು.

ಅಹುದೇ ಎನ್ನಯ ರಮಣ….

ಸಾಂದರ್ಭಿಕ ಚಿತ್ರ

ಅವನು ಮತ್ತು ಇವನು ಒಳ್ಳೆಯ ವಯೋವೃದ್ಧ ಸ್ನೇಹಿತರು.
ಆಗಾಗ ಭೇಟಿಯಾಗುವುದಿತ್ತು.ಇಬ್ಬರೂ ಚರ್ಚಿಸದ ವಿಷಯಗಳಿಲ್ಲ. ಸಾಮಾನ್ಯ ವಿಷಯಗಳಿಂದ ಹಿಡಿದು ಸಾಹಿತ್ಯ, ಕಲೆ, ರಾಜಕೀಯ, ಕ್ರೀಡೆ ಹೀಗೆ ಎಷ್ಟೆಷ್ಟೋ ವಿಷಯಗಳು ಮಾತಿನ ನಡುವೆ ಬಂದು ಹೋಗುತ್ತಿತ್ತು, ನಿರರ್ಗಳ ಚರ್ಚೆ ಎಂದೂ ದಾರಿ ತಪ್ಪಿರಲಿಲ್ಲ. ಆದರೆ ಇಂದೇಕೋ ಇಬ್ಬರ ನಡುವೆ ಎಂದಿನ ಮಾತುಕತೆ ಇನ್ನೂ ಪ್ರಾರಂಭ ವಾಗಿರಲಿಲ್ಲ. ನಡುವೆ ಮೌನದ ಗೋಡೆ ಮನೆಮಾಡಿತ್ತು. ಎಷ್ಟು ಹೊತ್ತು ಅಂತ ಹೀಗೆ ಕುಳಿತಿರಬಲ್ಲರು… ಮೊದಲು ಅವನೇ ಮಾತಿಗೆ ತೊಡಗಿದ.


“ಏನಿವತ್ತು ಮೋಡ ಕವಿದ ಹಾಗಿದೆಯಲ್ಲಾ…” ಎಂದ ಅವನು ನಗುತ್ತಾ.  ಇವನು ಕೂಡಾ ಹಾರ್ದಿಕವಾಗಿ ನಗುತ್ತಾ “ಇದು ಚದುರುವ ಮೋಡಗಳು” ಎಂದ
“ಮಳೆ ಬಂದರೆ  ಕಷ್ಟ “ ಅವನೆಂದ.
“ಯಾರಿಗೆ ಕಷ್ಟ? ನನಗಂತೂ ಈ ಸೆಖೆಗೆ ಸಾಕಾಗಿದೆ ಮಾರಾಯ, ಒಮ್ಮೆಮಳೆ ಬಂದರೆ ಸಾಕು ಅಂತ
ಅನಿಸಿಬಿಟ್ಟಿದೆ”
“ನಿನಗೆ ಸಾಕಾಗಿದೆ ಎನ್ನುವುದು ನಿಜವಿರಬಹುದು. ಆದರೆ ಇಂದು ಮಳೆ ಬಂದರೆ ಬೇಸರಿಸುವವರು ತುಂಬಾ ಜನರಿರಬಹುದು”
“ಅದು ಯಾಕೆ ಹಾಗೆ?”
“ಇಷ್ಟೆಲ್ಲಾ ಖರ್ಚು ಮಾಡಿ ಯಕ್ಷಗಾನ ಬಯಲಾಟ ಕಾರ್ಯಕ್ರಮ ಇಟ್ಟುಕೊಂಡಿದ್ದಾರಲ್ಲಾ, ಕಲಾಭಿಮಾನಿಗಳಿಗೆ ಭ್ರಮ ನಿರಸನವಾದೀತು.”


“ಅದೂ ಹೌದಲ್ಲಾ.. ನಾನು ಆ ಬಗ್ಗೆ ಯೋಚಿಸಿರಲಿಲ್ಲ.”
“ನೀನು  ಯೋಚಿಸುವುದು ನಿನ್ನ ಸಾಹಿತ್ಯ ಮತ್ತು ನಿನ್ನ ಕಥಾಪಾತ್ರಗಳ ಬಗ್ಗೆ ಮಾತ್ರ ಬಿಡು..” ಅವನು ಛೇಡಿಸಿದ.
“ಹಾಗೇನಿಲ್ಲ ಮಾರಾಯ, ನನಗೂ ಯಕ್ಷಗಾನ ಎಂದರೆ ಇಷ್ಟ ಎಂದು ನಿನಗೆ ತಿಳಿದಿದೆಯಲ್ಲವೇ?” ಇವನೆಂದ
“ಯಕ್ಷಗಾನದ ವಿಷಯ ಬಂದುದು ಒಳ್ಳೆಯದಾಯಿತು ನೋಡು, ಇದಕ್ಕೆ ಸಂಬಂಧಪಟ್ಟದ್ದು. ಯಕ್ಷಗಾನಕ್ಕೆ ಸಂಬಂಧಿಸಿದ್ದು. ನಿನಗೆ ಒಂದು ಕುತೂಹಲಕರ  ಘಟನೆಯನ್ನು ಹೇಳಬೇಕೆಂದಿದ್ದೆ.  ಅದು ಈಗ ನೆನಪಾಯಿತು ನೋಡು”
ಇವನ  ಕುತೂಹಲ  ಹೆಚ್ಚಾಯಿತು.
“ನೀನು ಕೂಡಾ ಹಿಂದೆ ಖ್ಯಾತ ಯಕ್ಷಗಾನ ಕಲಾವಿದನಾಗಿದ್ದವನು ಅಲ್ವಾ… ಅದೇನು ಸತ್ಯ ಕಥೆಯೋ? ಅಲ್ಲ ಕಾಲ್ಪನಿಕವೋ?” ಎಂದ.
“ನಾನೇನು  ಪ್ರಸಂಗಕರ್ತನಲ್ಲ.. ಸತ್ಯವೋ, ಕಾಲ್ಪನಿಕವೋ ಎಂದು ಹೇಳಲಿಕ್ಕೆ ವಿಮರ್ಶಕನೂ ಅಲ್ಲ, ಯಾರೋ ಹೇಳಿದ್ರು, ನಿನಗೆ ಹೇಳೋಣ ಅನ್ನಿಸಿತು. ನೀನು ಎಷ್ಟಾದರೂ ಕತೆಗಾರ ಅಲ್ವಾ? ಸದ್ಯಕ್ಕೆ ಕೇವಲ ಕಥೆ ಅಂತ ತಿಳಿದುಕೋ” ಎಂದ ಅವನು.
ಇವನು “ಆಯ್ತು ಮಾರಾಯ ಮುದದಿಂದ ಹೇಳು” ಎಂದ ಆಸಕ್ತಿಯಿಂದ.
ಅವನು ಹೇಳತೊಡಗಿದ. ಇವನು ಕೇಳತೊಡಗಿದ.


*********************

‘ತಾದಿ ನದ್ದ ನಕ್ಕತ್ತಾಂ ಕತ್ತಾಂ ತ ತರಿಕಿಟ ಕಿಟತಕ’ ಏಕತಾಳದ ನಡೆಯನ್ನು ಕಲಿಸುತ್ತಿದ್ದ ಚರಣ್ ಆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ.
ಕಾಲೇಜಿನ ವಾರ್ಷಿಕೋತ್ಸವಕ್ಕೆ ಇನ್ನೇನೂ ಕೆಲವೇ ದಿನಗಳು ಉಳಿದಿತ್ತು. ಅಷ್ಟರಲ್ಲಿ ಕಾರ್ಯಕ್ರಮಗಳಲ್ಲಿ ಯಕ್ಷಗಾನವನ್ನು ದಿಢೀರ್ ಸೇರ್ಪಡೆಗೊಳಿಸಲಾಗಿತ್ತು. ಆದರೆ ಯಕ್ಷಗಾನದ ನೃತ್ಯಾಭ್ಯಾಸ ಮಾಡಿದ ಒಂದೆರಡು ವಿದ್ಯಾರ್ಥಿಗಳು ಮಾತ್ರ ಅಲ್ಲಿದ್ದರು. ಅದೂ ಪ್ರಾಥಮಿಕ ಪಾಠ ಮಾತ್ರ ಆಗಿತ್ತು ಅವರಿಗೆ. ಮಿಕ್ಕುಳಿದವರಿಗೆ ಅಭ್ಯಾಸ ಮಾಡಿಸಬೇಕಲ್ಲ ಎಂದು ತಲೆ ಕೆರೆದುಕೊಂಡ ಸ್ವತಃ ಹವ್ಯಾಸೀ ಕಲಾವಿದರಾಗಿದ್ದ ಕನ್ನಡ ಉಪಾನ್ಯಾಸಕರು ಅದಕ್ಕೊಂದು ಸೂಕ್ತ ಕಲಾವಿದನ ಹುಡುಕಾಟವನ್ನು ನಡೆಸಿದರು. ಆಗ ಮೇಳದ ತಿರುಗಾಟದ ಸಮಯವಾದ್ದರಿಂದ ಜನ ಹೊಂದಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅದೂ ಅಲ್ಲದೆ  ಮೇಳದ ಕಾರ್ಯಕ್ರಮಗಳು ದೂರ ದೂರದ ಊರುಗಳಿಗೆ ಬದಲಾವಣೆಯಾಗುತ್ತಾ ಇರುವಾಗ ಸಮಯದ ಹೊಂದಾಣಿಕೆಯೂ ಆಗಬೇಕಿತ್ತು. ಹಗಲು ಕಲಾವಿದರಿಗೆ ನಿದ್ರೆಯ ಸಮಯ, ರಾತ್ರಿ ಪ್ರದರ್ಶನದ ಸಮಯ. ಹಾಗಾಗಿ ಮುಸ್ಸಂಜೆಯ ಹೊತ್ತನ್ನು ನಿಗದಿಪಡಿಸಿದರೂ  ಅದರಲ್ಲಿ ಭಾಗವಹಿಸುವ ವಿದ್ಯಾರ್ಥಿನಿಯರನ್ನು ಹೊತ್ತು ಮೀರುವ ಮೊದಲೇ ಮನೆಗೆ ಕಳುಹಿಸಬೇಕಾದ ಅನಿವಾರ್ಯತೆಯೂ ಇತ್ತು.


ಅಂತೂ ಇಂತೂ ಈ ಸಂದಿಗ್ಧತೆಯ ಸಂಕಟದಲ್ಲಿರುವಾಗಲೇ   ಕನ್ನಡ ಉಪಾನ್ಯಾಸಕರಿಗೆ ಚರಣ್ ನೆನಪಿಗೆ ಬಂದುದು. ಈ ಕಾಲೇಜಿನಲ್ಲೇ ಕಲಿತವನಾದ್ದರಿಂದ ಅವನ ಪರಿಚಯ ಅವರಿಗೆ ಧಾರಾಳವಾಗಿತ್ತು. ತರಗತಿಯಲ್ಲಿ ಸ್ವಲ್ಪ ಕೀಟಲೆಯ ಸ್ವಭಾವದ ಹುಡುಗನಾಗಿದ್ದುದರಿಂದ ಎಲ್ಲಾ ಉಪಾನ್ಯಾಸಕರ ಒಂದು ಕಣ್ಣು ಅವನ ಮೇಲೆಯೇ ಇರುತ್ತಿತ್ತು. ಅದೂ ಅಲ್ಲದೆ ಅವನಿದ್ದ ಮೇಳಗಳ ಪ್ರದರ್ಶನಗಳಿಗೆ ಕೆಲವೊಮ್ಮೆ ಈ ಉಪಾನ್ಯಾಸಕರು ಹೋಗುವುದಿತ್ತು. ಆಗೆಲ್ಲಾ ಚರಣ್ ಧಾವಿಸಿ ಬಂದು ತನ್ನ ಗುರುಗಳಿಗೆ ಮುಂದಿನ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡಿಸುವಲ್ಲಿ ನೆರವಾಗುತ್ತಿದ್ದ.
ಆಪತ್ಕಾಲಕ್ಕೆ ಸಿಕ್ಕಿದವನೇ ನಿಜವಾದ ಬಂಧು ಎಂಬಂತೆ ಚರಣ್ ಈ ಹೊತ್ತು ನೆನಪಾದದ್ದು ಒಳ್ಳೆಯದಾಯಿತು ಎಂದುಕೊಂಡರು ಉಪಾನ್ಯಾಸಕರು. ಕೂಡಲೇ ಅವನಿಗೆ ಕರೆ ಮಾಡಿ ತನ್ನ ಅಸಹಾಕತೆಯನ್ನು ತಿಳಿಸಿ ಈ ಕಡಿಮೆ ಸಮಯದಲ್ಲಿ ಆತನಿಂದ ಸಹಾಯವನ್ನು ಅಪೇಕ್ಷಿಸಿದರು. ಚರಣ್ ಸಂತೋಷದಿಂದ ಒಪ್ಪಿಕೊಂಡರೂ ದೂರದೂರಲ್ಲಿ ಪ್ರದರ್ಶನಗಳಿದ್ದರೆ ಬರಲು ಕಷ್ಟವಾಗಬಹುದೆಂದೂ ಅದರ ಬದಲು ಕಾಲೇಜಿಗೆ ದೂರವಿಲ್ಲದ ಸ್ಥಳಗಳಲ್ಲಿನ ಪ್ರದರ್ಶನದ ದಿನ ಅರ್ಧ ದಿನವಿಡೀ ನೃತ್ಯವನ್ನು ಕಲಿಸುವುದಾಗಿ  ಒಪ್ಪಿಕೊಂಡ. ಅದರಂತೆಯೇ ಮೊದಲೇ ದಿನಗಳನ್ನು ನಿಶ್ಚೈಸಿಕೊಂಡು ಚರಣ್ ಕಾಲೇಜಿಗೆ ಬಂದು ಹೋಗುತ್ತಿದ್ದ.


ಅಂದು ಆ ಸಣ್ಣ ಹಂತದ ಯಕ್ಷಗಾನ ತರಗತಿಯ ಮೊದಲ ದಿನ. ಕೆಲವು ಮಂದಿ ಹುಡುಗಿಯರೂ ಇದ್ದರು. ಚರಣ್‍ಗೆ ಸಂಕೋಚವಾಯ್ತು. ‘ಈ ಹುಡುಗಿಯರಿಗೆ ಹೇಗೆ ಕಲಿಸುವುದು’ ಎಂದುಕೊಂಡ ಮನಸ್ಸಿನಲ್ಲೇ.. ಅದೂ ಅಲ್ಲದೆ ಕೆಲವು ಹುಡುಗಿಯರ ತಮಾಶೆ ಮಾಡುವುದು ಮತ್ತು ಹಿಂದಿನಿಂದ ನಗುವ ಸ್ವಭಾವ ಆತನಿಗೆ ಹೊಸತಲ್ಲ. ತನ್ನ ಕಾಲೇಜಿನ ದಿನಗಳಲ್ಲಿಯೂ ಇದೇ ಸಂದರ್ಭಗಳನ್ನು ಎದುರಿಸಿದ್ದಾನಾದುದರಿಂದ ಹೇಗಪ್ಪಾ ಇವರನ್ನು ಸಂಭಾಳಿಸುವುದು ಎಂದುಕೊಂಡ. ‘ಇರಲಿ, ಹಾಗೇನಾದರೂ ತಂಟೆ, ತಕರಾರುಗಳಿದ್ದರೆ ಉಪಾನ್ಯಾಸಕರಲ್ಲೇ ಹೇಳಿಬಿಡುವುದು, ಇದು ನನ್ನಿಂದಾಗದ ಕೆಲಸ’ ಎಂದು ನಿಶ್ಚೈಸಿದ.

ಸಣ್ಣ ಪ್ರಸಂಗವಾದ್ದರಿಂದ ಅದರಲ್ಲಿ ಬರುವ ತಾಳಗಳನ್ನು ಮಾತ್ರ ಕಲಿಸಿದರೆ ಸಾಕು ಎಂದುಕೊಂಡ.  ಸಮಯದ ಅಭಾವವಿರುವುದರಿಂದ ನಾಟ್ಯ ವೈವಿಧ್ಯತೆಗಳು ಮತ್ತು ಚಾಲೂ ಕುಣಿತಗಳನ್ನು ಉಪಯೋಗಿಸದೆ ಬರಿಯ ಹಾಡಿನ ಭಾವಸಹಿತ ನಡೆ, ಬಿಡಿತ, ಮುಕ್ತಾಯಗಳನ್ನು ಕಲಿಸಿದರೆ ಸಾಕಲ್ಲವೆ ಎಂದು ಉಪಾನ್ಯಾಸಕರಲ್ಲಿ ಕೇಳಿದ. ಅವರು “ಧಾರಾಳ ಸಾಕು, ಎಲ್ಲಾ ತಾಳಗಳನ್ನು ಅಗತ್ಯ ಇಲ್ಲದಿದ್ದರೆ ಕಲಿಸುವುದು ಬೇಡ, ಅದು ಸಾಧ್ಯವೂ ಇಲ್ಲ ಈ ಕೆಲವು ದಿನಗಳಲ್ಲಿ. ಕೆಲವು ಸುಲಭದ ತಾಳಗಳಲ್ಲಿ ಮಾತ್ರ ಪದ್ಯ ಹೇಳಲು ಭಾಗವತರನ್ನು ಒಪ್ಪಿಸುವ” ಎಂದರು. ಚರಣ್‍ಗೆ ನಗು ಬಂತು. ಉಪಾನ್ಯಾಸಕರೂ ನಕ್ಕು “ಮತ್ತೇನು ಮಾಡುವುದು ಮಾರಾಯ” ಎಂದರು.
ಅಂದು ಮೊದಲ ದಿನ ಚರಣ್ ಪ್ರಾರಂಭದ ನಿರ್ದೇಶನಗಳನ್ನು ಹಾಗೂ ಕೆಲ ಮಾಹಿತಿಗಳನ್ನು ನೀಡಿ ಏಕತಾಳದ ನಡೆಯನ್ನು ಕಲಿಸತೊಡಗಿದ. ಸುಧನ್ವಾರ್ಜುನ  ಪ್ರಸಂಗವನ್ನು ಆಯ್ದು ಕೊಂಡಿದ್ದರಿಂದ ಅದರಲ್ಲಿ ಬರುವ ಪಾತ್ರಗಳನ್ನು ಹಾಗೂ ಪದ್ಯಗಳನ್ನು ಆ ಮೊದಲೇ ಭಾಗವತರೊಂದಿಗೆ ಕುಳಿತು ಚರ್ಚಿಸಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಒಡ್ಡೋಲಗದ ಪ್ರವೇಶವನ್ನೂ ಅದಕ್ಕೆ ಮೊದಲು ಹೇಳಿಕೊಡಬೇಕಾಗಿತ್ತು. ಅದಕ್ಕೂ ಮೊದಲು  ಏಕತಾಳದ ನಡೆ ಮತ್ತು ಬಿಡಿತದ ಬಗ್ಗೆ ವಿವರಿಸಿದ. ಹಾಗೂ ಬಾಯಿ ತಾಳದೊಂದಿಗೆ ಹೆಜ್ಜೆ ಹಾಕಿ ಅನುಸರಿಸಲು ಹೇಳಿದ. ಸುಧನ್ವ ಮತ್ತು ಪ್ರಭಾವತಿ ಪಾತ್ರ ಮಾಡುವವರು ಇಬ್ಬರೂ ಹುಡುಗಿಯರೇ ಆದ್ದರಿಂದ ಪಾತ್ರೋಚಿತ ಪ್ರಣಯ ದೃಶ್ಯಗಳಲ್ಲಿ ಅಭಿನಯಿಸಲು ಮುಜುಗರ ಪಡಬೇಕಿಲ್ಲ ಎಂದು ಚರಣ್ ಯೋಚಿಸಿದ.

ಎಲ್ಲರೂ ಏಕತಾಳದ ಬಾಯಿತಾಳವನ್ನು ಹೇಳುತ್ತಾ ಹೆಜ್ಜೆ ಹಾಕುತ್ತಿದ್ದರು. ಪ್ರಭಾವತಿಯ ಪಾತ್ರ
ಮಾಡಬೇಕಾದ ಹುಡುಗಿ ಕಿರಣ ಮಾತ್ರ ಮೊಬೈಲ್  ನೋಡುತ್ತಾ  ಅದರಲ್ಲೇ ತಲ್ಲೀನಳಾಗಿದ್ದಳು. ಚರಣ್‍ಗೆ  ಇದು ಸರಿಯೆನಿಸಲಿಲ್ಲ.  “ಕಿರಣ, ಇಲ್ಲಿ ಬನ್ನಿ” ಎಂದು ಕೂಗಿ ಕರೆದ. ಕೂಡಲೇ ಏನು ಎನ್ನುವಂತೆ ಹತ್ತಿರ ಬಂದಳು.
“ನೀವು ಕೂಡಾ ಕಲಿಯಿರಿ. ಇಲ್ಲದಿದ್ದರೆ  ಸಮಯಕ್ಕಾಗುವಾಗ ಗೊತ್ತಾಗುವುದಿಲ್ಲ” ಎಂದ.
“ಆದರೆ ನನಗೆ ಪ್ರಭಾವತಿಯ ಪಾತ್ರದ ಪದ್ಯಕ್ಕೆ ಮಾತ್ರ ಕಲಿಸಿ, ಇದೆಲ್ಲಾ ಯಾಕೆ?” ಎಂದಳು ಕಿರಣ
“ಇಲ್ಲ ಇದು ಏಕತಾಳದ ನಡೆ, ಎಲ್ಲಾ ಪಾತ್ರಕ್ಕೂ ಬೇಕಾಗುತ್ತದೆ. ಪ್ರಭಾವತಿಯ ಒಂದೆರಡು ಪದ್ಯಗಳು ಕೂಡಾ ಏಕತಾಳದಲ್ಲಿದೆ. ಅಲ್ಲದೆ ಎಲ್ಲವನ್ನೂ ನೋಡಿ ಕೊಂಡರೆ  ಒಳ್ಳೆಯದು, ಸಮಯ, ಸಂದರ್ಭ ಬಂದರೆ ಯಾವ ಪಾತ್ರವನ್ನು ಮಾಡಲು ಕೂಡಾ ತಯಾರಾಗಿರಬೇಕು. ಅಕಸ್ಮಾತ್ ಯಾರಾದರೂ ಅನಿವಾರ್ಯ
ಕಾರಣಗಳಿಂದಾಗಿ ಬರಲಾಗದಿದ್ದರೆ ಆಗ ಇನ್ನೊಬ್ಬರು ಮಾಡಲೇ ಬೇಕಾಗುತ್ತದೆ ಎಂದ”
“ಸರಿ” ಎಂದು ಅವರನ್ನು ಕೂಡಿಕೊಂಡಳು ಕಿರಣ. ಯಾಕೋ ಅವನ ಮಾತು ಇಷ್ಟವಾಯಿತು ಅವಳಿಗೆ.

ಏನೋ ಆಕರ್ಷಣೆಯಿದೆ ಅವನ ಮಾತುಗಳಲ್ಲಿ. ಮತ್ತೆ ತಿರುಗಿ ನೋಡಿದಳು ಅವನನ್ನು. ಅವನು ಮಾತ್ರ ಹೆಜ್ಜೆ ಹಾಕಿ ತೋರಿಸುವುದರಲ್ಲಿ ಮಗ್ನನಾಗಿದ್ದ.
ಚರಣ್ ಆ ದಿನ ಕೆಲವು ತಾಳಗಳ ಒಂದೊಂದು ನಡೆ, ಬಿಡಿತ, ಮುಕ್ತಾಯಗಳ ಹೆಜ್ಜೆಗಾರಿಕೆಯನ್ನು ಹೇಳಿ ಕೊಟ್ಟು, ಅವುಗಳ ಬಾಯಿತಾಳವನ್ನು ಬರೆಸಿ ಮರುದಿನ ಸರಿಯಾಗಿ ಅಭ್ಯಾಸ ಮಾಡಿ ಬರುವಂತೆ ತಿಳಿಸಿದ. ಹಾಗೂ ಮರುದಿನ ತಾನು ಅವರವರ ಪದ್ಯಗಳಿಗೆ ನಾಟ್ಯವನ್ನು ಕಲಿಸಲು ಆರಂಭಿಸುವುದಾಗಿ ಹೇಳಿ ತನ್ನ ಆ ದಿನದ ಆಟದ ಕ್ಯಾಂಪ್‍ಗೆ ತೆರಳಿದ.
ಅವನು ಹೋದ ನಂತರವೂ ವಿದ್ಯಾರ್ಥಿಗಳು ಅಭ್ಯಾಸ ಮಾಡುವುದರಲ್ಲಿ ತಲ್ಲೀನರಾಗಿದ್ದರು. ಸ್ವಲ್ಪ ಮಟ್ಟಿಗೆ ಕನ್ನಡ ಉಪಾನ್ಯಾಸಕರೂ ಯಕ್ಷಗಾನದ ನಾಟ್ಯಾದಿ ಅಂಗಗಳನ್ನು ಬಲ್ಲವರಾಗಿದ್ದರಿಂದ ಅವರ ಮೇಲುಸ್ತುವಾರಿಯಲ್ಲಿ ಅಭ್ಯಾಸ ನಡೆಸಿದರು. ಕಿರಣಳಿಗೂ ನಾಟ್ಯದ ಸಣ್ಣ ಪಾಠ ಆಗಿತ್ತು. ಶಾಲೆಯಲ್ಲಿ ಕಲಿಯುತ್ತಿರುವಾಗ ಇದೇ ರೀತಿಯ ಸಂದರ್ಭದಲ್ಲಿ ಒಂದೆರಡು ತಾಳಗಳ ಪರಿಚಯ ಆಗಿತ್ತು. ಅದ್ದರಿಂದ ಒಮ್ಮೆ ಹೇಳಿದ್ದನ್ನು ಬಹಳ ಬೇಗ ಕಲಿತಿದ್ದಳು. ಅಲ್ಲದೆ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದುದರಿಂದ ನಾಟ್ಯದ ಲಯ ಕಂಡುಕೊಂಡಿದ್ದಳು.

ಕಿರಣ ಯಾಕೋ ಅವನ ಬಗ್ಗೆಯೇ ಅಲೋಚಿಸುತ್ತಿದ್ದಳು, ರಂಗದಲ್ಲಿ  ಅವನ  ವೇಷವನ್ನು ನೋಡಿದ್ದಳು.  ಉತ್ತಮ  ಪುಂಡುವೇಷಧಾರಿಯಾಗಿದ್ದ ಅವನಿಗೆ ಅಭಿಮಾನಿಗಳ ಸಂಖ್ಯೆ ಸ್ವಲ್ಪ ಹೆಚ್ಚೇ ಇದ್ದಿತು. ಅವಳಿಗೂ ಅವನ ವೇಷ ಇಷ್ಟವಾಗಿತ್ತು. ಆದರೆ ವೇಷ ಕಳಚಿದ ಮೇಲೆ ಇದೇ ಮೊದಲ ಸಾರಿ  ಮಾತನಾಡಿದ್ದಳು. ವೇಷದಲ್ಲಿ ಮಾತ್ರವಲ್ಲ, ಮಾಮೂಲಿ ಉಡುಪಿನಲ್ಲಿಯೂ ರೂಪವಂತ ಎಂದು ಕೊಂಡಳಾಕೆ. ಅಂತೂ ಅನ್ಯಮನಸ್ಕಳಾಗಿಯೇ ಆಕೆ ಆ ದಿನ ಮನೆಗೆ ತೆರಳಿದಳು.

ಮರುದಿನ ಹಿಂದಿನ ದಿನದ ಪಾಠದ ಅಭ್ಯಾಸವನ್ನು ಪರೀಕ್ಷಿಸಿ ತೃಪ್ತಿಪಟ್ಟು ಚರಣ್  ಮುಂದಿನ  ಅಭ್ಯಾಸಗಳನ್ನು ಮಾಡಿಸುತ್ತಾ  ಹೋದ. ಅರ್ಜುನನ ಒಡ್ಡೋಲಗದ ಸನ್ನಿವೇಶಗಳನ್ನು ಮೊಟಕುಗೊಳಿಸಿ  ಹಂಸದ್ವಜನ  “ಮಂತ್ರಿಗಳಿರ ಕೇಳಿರೀಗ…”  ಪದ್ಯವನ್ನು ಪಾತ್ರಧಾರಿಗೆ ಹೇಗೆ ಅಭಿನಯಿಸುವುದೆಂದು ತೋರಿಸಿದ. ಕಿರಣ ಮಾತ್ರ ಅವನ ನಾಟ್ಯದ ವೈಖರಿ, ಬೋಧನಾ ಸಾಮರ್ಥ್ಯಕ್ಕೆ ಬೆರಗಾಗಿದ್ದಳು. ಮುಂದೆ ಸುಧನ್ವನ ಪ್ರವೇಶ ಪದ್ಯಗಳಿಗೆ ಒಂದಷ್ಟು ಅಭ್ಯಾಸ ನಡೆಯಿತು. ಅಮೇಲೆ ಕಿರಣಳ ಸರದಿ. “ಸತಿಶಿರೋಮಣಿ ಪ್ರಭಾವತಿ ಸೊಬಗಿನಲಿ, ರತಿಯ ಸೋಲಿಪ ರೂಪಿನ..” ಕಿರಣ  ತನ್ನ  ಅವಕಾಶಕ್ಕಾಗಿ ಕಾಯುತ್ತಿದ್ದಳು. 

ಲಗುಬಗನೆ ಬಂದವಳನ್ನು ಚರಣ್ ನೋಡಿ ‘ಇವಳು ಥೇಟ್ ರತಿಯೆ’ ಎಂದುಕೊಂಡ. ಸುಧನ್ವ ಮತ್ತು ಪ್ರಭಾವತಿಯ ಸ್ವಲ್ಪ ಪದ್ಯಗಳಿಗೆ ಕತ್ತರಿ ಹಾಕಿದ ಚರಣ್ “ಕಳವಳಿಸಬೇಡ ಮನದಿ ಕುಂತಿಸುತಗಳುಕುವವನಲ್ಲ ರಣದಿ” ಪದ್ಯಕ್ಕೆ ತಾನೆ ನರ್ತಿಸಿ ತೋರಿಸಿದ. ರಂಗದಲ್ಲಿ ಆತನಿಗೆ ಎಷ್ಟೋ ಬಾರಿ ಸುದನ್ವನ ಪಾತ್ರ ಮಾಡಿದ ಅನುಭವ ಇತ್ತು. ಅವನ ಈ ಪರಿಯ ನೃತ್ಯದ ಸೊಬಗನ್ನು ನೋಡಿ ಕಿರಣ ತಾನು ಪ್ರಭಾವತಿಯಾದದ್ದಕ್ಕೆ ಬಹಳಷ್ಟು ಹಿಗ್ಗಿದಳು. ನಿಧಾನವಾಗಿ ತಾನು ಆತನಿಗೆ ಮನಸೋಲುತ್ತಿರುವೆನೆಂದಾಕೆ ಭಾವಿಸಿದಳು. ಆದರೆ ಇದ್ಯಾವುದರ ಅರಿವಿಲ್ಲದ ಚರಣ್ ಅವಳನ್ನು ಎಚ್ಚರಿಸಿ ಸುದನ್ವನ ಅಭಿನಯಕ್ಕೆ ಪ್ರಭಾವತಿಯ ಭಾವಪೂರ್ಣ ಪ್ರತಿಕ್ರಿಯೆ ಹೇಗಿರಬೇಕೆಂದು ಹೇಳಿಕೊಟ್ಟ. ಆದರೆ ಕಿರಣ ಮಾತ್ರ ಆತನೇ ಸುದನ್ವ ತಾನೇ ಪ್ರಭಾವತಿ ಎಂಬಂತೆ ಭಾವಿಸಿದಳು.


ಅಂತೂ ಇಂತೂ ಆ ಪ್ರಸಂಗ ಅಭ್ಯಾಸ ಪೂರ್ತಿ ಮುಗಿಯಿತು. ಆ ಅಭ್ಯಾಸದ ದಿನಗಳಲ್ಲಿ ಕಿರಣ ಮಾತ್ರ ಎಲ್ಲರಿಗಿಂತ ಮೊದಲೇ ಹಾಜರಾಗುತ್ತಿದ್ದಳು. ಅಲ್ಲದೆ ಅವನು ಹೇಳಿಕೊಟ್ಟ ನಡೆಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸಿ ಅವನ ಮೆಚ್ಚುಗೆಗೆ ಪಾತ್ರಳಾದಳು. ಕೆಲವೊಮ್ಮೆ ಬೇಕೆಂದೇ ಸಂಶಯಗಳನ್ನು  ವ್ಯಕ್ತಪಡಿಸಿ ಅವನ ಸಲಹೆಗಳನ್ನು ಕೇಳುತ್ತಿದ್ದಳು. ತನಗೆ ಅದರ ಬಗ್ಗೆ ಸಂಶಯವಿಲ್ಲದಿದ್ದರೂ ಅವನ ಸಾನ್ನಿಧ್ಯ  ಅವಳಿಗೆ ತೃಪ್ತಿ ತರುತ್ತಿದ್ದುದರಿಂದ ಹಾಗೆ ಮಾಡುತ್ತಿದ್ದಳು. ಆದರೆ ಇದರ ಬಗ್ಗೆ ಆತನೇನೂ ತಲೆ ಕೆಡಿಸಿಕೊಂಡಿರಲಿಲ್ಲ.


ವಾರ್ಷಿಕೋತ್ಸವದ ದಿನ ಬಂತು. ಕಾಲೇಜಿನಲ್ಲಿ ಸಂಭ್ರಮದ ವಾತಾವರಣ. ಕಿರಣ ಆ ದಿನ ಸಂಭ್ರಮದ ಸಡಗರದ ಶೃಂಗಾರದೊಂದಿಗೆ ಕಾಲೇಜಿಗೆ ಬಂದಳು. ಕಾರಣ ಆ ದಿನದ ಅವರ ಪ್ರದರ್ಶನಕ್ಕೆ ಚರಣ್ ಕೂಡಾ ಬರುತ್ತೇನೆಂದು ಹೇಳಿದ್ದ. ಕಾಲೇಜಿಗೆ ಬಂದವಳಿಗೆ ಮೊದಲು ಎದುರಾದದ್ದು ಹಂಸಧ್ವಜ ಪಾತ್ರಧಾರಿ ವಿನಯ್. ಇವಳನ್ನು ಕಂಡ ಕೂಡಲೇ
ವಿನಯ್ ಕರೆದ. “ಏನು?” ಎನ್ನುತ್ತ ಸಮೀಪಕ್ಕೆ ಬಂದಳು.
“ಇವತ್ತು ಸ್ವಾತಿ ಬರುವುದಿಲ್ಲ, ಅವಳಿಗೆ ಟೈಫಾಯಿಡ್ ಅಂತೆ, ಅಶೋಕ್ ಸರ್‍ಗೆ ಸುಧನ್ವ ಪಾತ್ರ ಯಾರು ಮಾಡುವುದು ಅಂತ ಚಿಂತೆ ಆಗಿತ್ತು. ಆದರೆ ಸಮಸ್ಯೆಗೆ ಪರಿಹಾರ ಸಿಕ್ಕಿತು” ಅಂದ.
“ಹೋ, ಹೌದಾ.. ಛೇ.. ಹಾಗಾದರೆ ಸುದನ್ವ ಯಾರು ಮಾಡ್ತಾರೆ? ಅಶೋಕ್ ಸರ್ ಮಾಡ್ತಾರ?”


“ ಅವರು ಸುದನ್ವ ಮಾಡಿದ್ರೆ ಪ್ರಭಾವತಿಗೆ ಕನ್ನಡ ಪಾಠ ಮಾಡ್ತಾರೆ ರಂಗಸ್ಥಳದಲ್ಲಿ.. ಅವರಲ್ಲ. ಅವರು ಚರಣ್ ಸರ್ ಗೆ  ಫೋನ್ ಮಾಡಿ ಅವರನ್ನು ಒಪ್ಪಿಸಿದ್ರು, ಚರಣ್ ಸರ್ ಒಪ್ಪಿದಾರಂತೆ. ಸುದನ್ವ ಮಾಡಿ ಅಮೇಲೆ ಮೇಳದ ಆಟಕ್ಕೆ ಹೋಗ್ತಾರಂತೆ”
ಕಿರಣಳ ಎದೆ ಢವ ಢವ ಹೊಡೆಯಲು ಆರಂಭಿಸಿತು. ಚರಣ್ ಮತ್ತು ತಾನು ಜೋಡಿಯಾಗಿ ರಂಗದಲ್ಲಿ ಆಡುವುದು… ನಿಜವಾಗಿಯೂ ತಾವಿಬ್ಬರೂ ಜೋಡಿಹಕ್ಕಿಗಳಾಗಿ ಜೀವನವೆಂಬ ರಂಗದಲ್ಲಿ ಹಾರಾಡುವುದು.. ಈ ಕಲ್ಪನೆಯೇ ಅವಳಿಗೆ ಅತೀವ ಸುಖವನ್ನು ಕೊಟ್ಟಿತು.
‘‘ಏನಾಯ್ತು?” ಅಂದ ವಿನಯ್.
“ಏನಿಲ್ಲ.. ಪಾಪ ಸ್ವಾತಿ ಹೇಗಿದ್ದಾಳೋ” ಎಂದು ಭಾವ ಮರೆಮಾಚಿದಳು
“ಹಾಗೇನೂ ತೊಂದರೆಯಿಲ್ಲವಂತೆ, ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದಾರಂತೆ”
“ಆಯ್ತು, ಹೋಗೋಣ, ತಯಾರಿ ಆಗ್ಬೇಕಲ್ವ”

ಅಂದು ಕಿರಣ ತಾನು ತಾನಾಗಿರಲಿಲ್ಲ. ಬಣ್ಣ ಹಚ್ಚುತ್ತಿರುವಾಗಲೂ ಏನೇನೋ ಮಧುರ ಪುಳಕಗಳು ಮೈ ತುಂಬಾ.. ನಡುವೆ ಚರಣ್ ಆಗಾಗ ಬಂದು ಕೆಲವು ಸೂಚನೆಗಳನ್ನು ಕೊಡುತ್ತಿದ್ದ. ವೇಷ ತಯಾರಾಗಿ ಪ್ರವೇಶದ ಮೊದಲು ರಂಗದಲ್ಲಿ ಯಾವ ರೀತಿ ಹೋಗಬೇಕು, ಹೇಗೆ ಹೆಜ್ಜೆ ಹಾಕಬೇಕು ಎಂಬುದರ ಬಗ್ಗೆ ವಿವರಿಸಿದ.
“ಜೀವನದಲ್ಲಿ ಕೂಡಾ ನಾವಿಬ್ಬರು ಜೊತೆಯಾಗಿ ಹೇಗೆ ಹೆಜ್ಜೆ ಹಾಕಬೇಕು ಎಂಬುದನ್ನು ಹೇಳು ರಮಣಾ” ಎಂದಳು ಆಕೆ ಮನಸ್ಸಿನಲ್ಲಿಯೇ.


   ಅಂದು ರಂಗದಲ್ಲಿ ಕಿರಣ ತಾನು ತಾನಾಗಿರಲಿಲ್ಲ. ಯಾವುದೋ ಭ್ರಮಾಧೀನ ಮಾದಕತೆಯ ಪ್ರಪಂಚದಲ್ಲಿ ತಾನಿರುವಂತೆ ಆಕೆಗೆ ಭಾಸವಾಗುತ್ತಿತ್ತು. ಚರಣ್ ಕೂಡಾ ಅವಳ ಸ್ಥಿತಿಯಲ್ಲಿನ ಬದಲಾವಣೆಯನ್ನು ಗಮನಿಸಿದ. ಅವನಿಗೂ ಅವಳ ಈ ನಡೆ ಅರ್ಥವಾಗಿತ್ತು. ಅವನ ಮನದಲ್ಲಿಯೂ ಸಂತಸ ಮಿಶ್ರಿತ ಅಚ್ಚರಿ. ಸುಧನ್ವನ ಜೊತೆಗಿನ ಸಂಭಾಷಣೆಯನ್ನು ಮುಗಿಸಿ ಜೊತೆಯಾಗಿ ರಂಗದಿಂದ ಜೊತೆಯಾಗಿ ನಿರ್ಗಮಿಸುವಾಗ
“ಅಹುದು.. ನೀನೇ ಎನ್ನಯ ರಮಣ” ಎಂದು ಅವನ ಕಿವಿಯಲ್ಲಿ ಉಸುರಿದಳು.


         ಬಬ್ರುವಾಹನ ಪ್ರಸಂಗದ ‘ಅಹುದೇ ಎನ್ನಯ ರಮಣ’ ಪದ್ಯವನ್ನು ಕಿವಿಯಲ್ಲಿ ಗುಟ್ಟಾಗಿ ಯಾಕೆ ಹೇಳಿದಳು ಎಂದು ಅವನಿಗೆ ಅರ್ಥವಾಗಿತ್ತು! ದಿಗ್ಭ್ರಮೆಯಿಂದ ಚೇತರಿಸಿಕೊಂಡ ಚರಣ್ ಸುದನ್ವನ ಮುಂದಿನ ಭಾಗದ ಅಭಿನಯಕ್ಕೆ ಪುನಃ ರಂಗಕ್ಕೆ ಪ್ರವೇಶಿಸಿದ. ಯುದ್ದದ ನಂತರ ಪ್ರಸಂಗ ಮುಕ್ತಾಯವಾಗಿ ಚೌಕಿಗೆ ಬಂದು ಸುತ್ತಲೂ ಕಣ್ಣು ಹಾಯಿಸಿದಾಗ ಕಿರಣ ಕಾಣಸಿಗಲಿಲ್ಲ. ತನ್ನ ಮುಖಾಮುಖಿ ಯಾಗುವುದನ್ನು ತಪ್ಪಿಸಿಕೊಂಡಿದ್ದಾಳೆ ಅಂದುಕೊಂಡ. ವಿನಯ್ ನನ್ನು ಕರೆದು ಅವಳ ಬಗ್ಗೆ ವಿಚಾರಿಸಿದ. “ಅವಳು ಮೈಗೆ ಹುಶಾರಿಲ್ಲ ಎಂದು ತಂದೆಯ ಜೊತೆಗೆ ಮನೆಗೆ ತೆರಳಿದ್ದಾಳೆ” ಎಂದವನು ಹೇಳಿದ.
ಚರಣ್‍ಗೆ ಏನೋ ಕಳೆದುಕೊಂಡ ಅನುಭವ. ಆದರೂ ಕರ್ತವ್ಯ ಎಚ್ಚರಿಸಿತು. ಮೇಳದ ಆಟಕ್ಕೆ ತಡವಾಗುತ್ತದೆ ಎಂದು ಕನ್ನಡ ಉಪಾನ್ಯಾಸಕರಾದ ಅಶೋಕ್‍ರ ಅನುಮತಿಯನ್ನು ಪಡೆದು ಮೇಳದ ಆಟಕ್ಕೆ ತೆರಳಿದ.
ಇದಾದ ನಂತರ ಹಲವು ಬಾರಿ ಚರಣ್ ಕಿರಣಳನ್ನು ಕಾಣಲೋಸುಗ ಏನಾದರೂ ನೆಪ ಮಾಡಿ ಕಾಲೇಜಿಗೆ ಬರುತ್ತಿದ್ದ.
ಒಂದೆರಡು ಬಾರಿ “ಅವಳಿಲ್ಲ, ರಜೆ” ಎಂಬ ಉತ್ತರ ಕೇಳಿ  ಕಂಗಾಲಾದ. ‘ಎಲ್ಲಿಗೆ ಹೋದಳು ಇವಳು. ನನ್ನಲ್ಲಿ ಬರಡಾಗಿ ಬತ್ತಿ ಹೋಗಿದ್ದ ಪ್ರೀತಿಯ ಸೆಲೆಯನ್ನು ಉಕ್ಕಿಸಿ ಅದು ಭೋರ್ಗೆರೆಯಲು ಪ್ರಾರಂಭವಾದಾಗ ತಾನು ಕಾಣದಾದಳಲ್ಲ, ಛೇ’ ಎಂದುಕೊಂಡ. ಮತ್ತೊಮ್ಮೆ ಪ್ರಯತ್ನಿಸೋಣ ಎಂದು ಅವಳಿದ್ದ ಕಾಲೇಜಿಗೆ ಬಂದಾಗ ಸಿಕ್ಕಿದ ಉತ್ತರ ಕೇಳಿ ಅವನಿಗೆ ದಿಕ್ಕೇ ತೋಚ ದಂತಾಗಿತ್ತು.
                   “ಅವಳ ಅಪ್ಪನಿಗೆ ಎಲ್ಲಿಗೋ ದೂರದೂರಿಗೆ ವರ್ಗವಾದ ಕಾರಣ ಅವಳು ಕಾಲೇಜಿನಿಂದ ವರ್ಗಾವಣಾ ಪತ್ರ ತೆಗೆದುಕೊಂಡು ಹೋಗಿದ್ದಾಳೆ” ಹುಚ್ಚನಂತಾದ ಅವನು ಈ ಯಕ್ಷಗಾನದಿಂದ ಅವಳು ಹತ್ತಿರವಾದಳು. ಇದರಲ್ಲಿದ್ದರೆ ನನಗೆ ಸದಾ ಅವಳು ನೆನಪಾಗುತ್ತಾಳೆ ಎಂದು ಮೇಳಕ್ಕೆ  ರಾಜೀನಾಮೆ ನೀಡಿ ಬೇರೊಂದು ಊರಿಗೆ ಉದ್ಯೋಗ ನಿಮಿತ್ತ ತೆರಳಿದ.

*   *   *******

ಇಷ್ಟು ಹೇಳಿ ಅವನು ನಿಲ್ಲಿಸಿದ.  ಇವನಿಗೆ  ರಸಭಂಗವಾದಂತೆನಿಸಿತು.
“ಇದೇನು ಅಪೂರ್ಣ ಕಥೆ?” ಎಂದ ಇವನು
“ಪೂರ್ಣವಾಯ್ತಲ್ಲ, ಇನ್ನೇನು ಬೇಕು?” ಎಂದ ಅವನು
“ಅಲ್ಲ ಕಿರಣ ಏನಾದಳು? ಚರಣ್ ಎಲ್ಲಿ ಹೋದ?” ಇವನು ಕೇಳಿದ.
“ಹೋ ಅದಾ.. ಅವಳು ಒಮ್ಮೆ ಚರಣ್ ಗೆ ಕಾಣಸಿಕ್ಕಿದ್ದಳು, ಪರಿಸ್ಥಿತಿಯ ಒತ್ತಡದಿಂದ ಅವಳು ಹಾಗೆ ಮಾಡಿದ್ದಂತೆ, ಚರಣ್ ಅವಳನ್ನು ಕ್ಷಮಿಸಿದ್ದಾನೆ. ಅವಳು ಈಗ ಅಜ್ಜಿಯಾಗಿದ್ದಾಳೆ, ಮೊಮ್ಮಕ್ಕಳೂ ಇದ್ದಾರೆ ಅವಳಿಗೆ” ಎಂದ ಅವನು.
“ಅದು ಸರಿ, ಅಂದು ಮೇಳ ಬಿಟ್ಟ ಚರಣ್ ಈಗೆಲ್ಲಿ?” ಎಂದ ಇವನು
“ ಇಲ್ಲಿಯೇ ಇದ್ದಾನೆ ನಿನ್ನೆದುರು… ಚರಣ್ ನಾನೇ ಕಣೋ” ಅವನೆಂದ ನಗುತ್ತಾ…
 ಇವನು ಬೆಚ್ಚಿಬಿದ್ದ.. ಮೌನ.. ಅಲ್ಲಿ ನೀರವ ಮೌನ ಅವರಿಸಿತ್ತು.

ಬಣ್ಣದ ಬದುಕಿನಿಂದ ಸ್ವಯಂ ನಿವೃತ್ತರಾದ ಬಣ್ಣದ ವೇಷಧಾರಿ ಕಲ್ಮಡ್ಕ ಸುಬ್ಬಣ್ಣ ಭಟ್ (ಅಮೈ)

ಯಕ್ಷಗಾನ ಕಲಾವಿದರಾಗಬೇಕೆಂದು ಬಯಸಿದವರೆಲ್ಲರಿಗೂ ಕಲಾವಿದರಾಗುವ ಭಾಗ್ಯವು ಸಿದ್ಧಿಸುವುದಿಲ್ಲ. ಕಲಾವಿದರಾಗುವ ಅವಕಾಶ ಸಿಕ್ಕಿದರೂ ಅವರೆಲ್ಲರೂ ರಂಗದಲ್ಲಿ ಹೊಳೆದು ಕಾಣಿಸಿಕೊಳ್ಳರಾರರು. ಪ್ರತಿಭೆಯ ಜತೆ ಅವಕಾಶಗಳು, ಯೋಗ ಭಾಗ್ಯಗಳು ಕೂಡಿಕೊಂಡಾಗ ಮಾತ್ರ ಆತ ಕಲಾವಿದನಾಗಿ ಪ್ರಸಿದ್ಧಿಯನ್ನು ಹೊಂದುತ್ತಾನೆ. ಎಲ್ಲವೂ ತನಗನುಕೂಲವಾಗಿ ಒದಗಿ, ಉತ್ತಮ ಕಲಾವಿದನಾಗಿ ರಂದಲ್ಲಿ ಮೆರೆದು, ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾದ ಅನೇಕ ಕಲಾವಿದರು ಅನಿವಾರ್ಯ ಕಾರಣಗಳಿಂದ ಕಲಾ ಬದುಕಿಗೆ ವಿದಾಯ ಹೇಳಿ ಮನೆಯ ಹೊಣೆಗಾರಿಕೆಯನ್ನು ಹೊತ್ತದ್ದೂ ಇದೆ.

ಅಂತಹಾ ಕಲಾವಿದರ ವೇಷಗಳನ್ನು ನೋಡಿದ ಪ್ರೇಕ್ಷಕರು “ಛೇ , ಅವರು ಮೇಳ ಬಿಡಬಾರದಿತ್ತು. ಯಕ್ಷಗಾನ ಕಲಾವಿದನಾಗಿಯೇ ಮುಂದುವರಿಯಬೇಕಿತ್ತು. ಕಲಾಬದುಕಿಗೆ ವಿದಾಯ ಹೇಳಿ ಮನೆಯಲ್ಲಿ ಉಳಿಯಬಾರದಿತ್ತು. ಇದು ಯಕ್ಷಗಾನಕ್ಕೂ, ಪ್ರೇಕ್ಷಕರಾದ ನಮಗೂ ಬಲು ದೊಡ್ಡ ನಷ್ಟ” ಹೀಗೆ ಹೇಳಿರುವುದನ್ನೂ ನಾವು ಕೇಳಿರುತ್ತೇವೆ.

ಆದರೆ ಇದು ಅನಿವಾರ್ಯ. ಒಂದನ್ನು ಪಡೆಯಬೇಕಾದರೆ ಇನ್ನೊಂದನ್ನು ಬಿಡಬೇಕಾದ ಅನಿವಾರ್ಯತೆಗೆ ಕಲಾವಿದನು ಸಿಲುಕಿರುತ್ತಾನೆ. ಕಲಾವಿದನಾಗಿಯೇ ಮುಂದುವರಿದರೆ ಮನೆಯ ಸುವ್ಯವಸ್ಥೆಗೆ ಕೊರತೆಯಾದರೆ? ಮನೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡರೆ ಯಕ್ಷಗಾನವು ಒಬ್ಬ ಉತ್ತಮ ಕಲಾವಿದನನ್ನು ಕಳೆದುಕೊಂಡಾಗುತ್ತದೆ. ಇಂತಹ ಗೊಂದಲದ ಸಂದಿಗ್ಧ ಸ್ಥಿತಿಯಲ್ಲಿ ಚೆನ್ನಾಗಿ ಯೋಚಿಸಿಯೇ ಕಲಾವಿದರು ನಿರ್ಣಯಕ್ಕೆ ಬರುತ್ತಾರೆ. ಕಲಾವಿದರಿಗೆಂದಲ್ಲ, ಎಲ್ಲರಿಗೂ ಮನೆ ಮತ್ತು ಮನೆಯವರು ಮುಖ್ಯ ತಾನೇ? ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲೇ ಬೇಕು. ಹೀಗೆ ಕಲಾ ಬದುಕಿಗೆ ಅನಿವಾರ್ಯವಾಗಿ ವಿದಾಯ ಹೇಳಿ ಉತ್ತಮ ಕಲಾವಿದರನೇಕರು ಮೇಳ ಬಿಟ್ಟು ಮನೆ ವಾರ್ತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡದ್ದಿದೆ. ಅಂತಹ ಕಲಾವಿದರಲ್ಲೊಬ್ಬರು ಶ್ರೀ ಕಲ್ಮಡ್ಕ ಸುಬ್ಬಣ್ಣ ಭಟ್. 

ಶ್ರೀ ಸುಬ್ಬಣ್ಣ ಭಟ್ಟರ ಹುಟ್ಟೂರು ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಅಮೈ. ಶ್ರೀ ಕೆ. ನಾರಾಯಣ ಭಟ್ ಮತ್ತು ಶ್ರೀಮತಿ ಶಂಕರಿ ಅಮ್ಮ ದಂಪತಿಗಳ ಪುತ್ರನಾಗಿ ಜನನ. (1955 ನವೆಂಬರ್ 5ರಂದು ಜನನ) ಇವರ ಮೂಲ ಮನೆ ಕಾಸರಗೋಡು ತಾಲೂಕಿನ ಪೆರಡಾಲ ಸಮೀಪದ ಕೊಡ್ವಕೆರೆ ಎಂಬಲ್ಲಿ. ದಾಖಲೆಗಳಲ್ಲಿ ಇವರ ಹೆಸರು ಸುಬ್ರಾಯ ಭಟ್ ಎಂದು. ಆದರೆ ಕಲಾವಿದರೆಲ್ಲರೂ ಸುಬ್ಬಣ್ಣ ಭಟ್ ಎಂದೇ ಕರೆಯುತ್ತಿದ್ದರು. ಓದಿದ್ದು ಹತ್ತನೇ ತರಗತಿಯ ವರೆಗೆ. ಕಲ್ಮಡ್ಕ ಶಾಲೆ ಮತ್ತು ಬಾಳಿಲ ವಿದ್ಯಾ ಬೋಧಿನೀ ಪ್ರೌಢ ಶಾಲೆಯಲ್ಲಿ. ಆಗ ಕಲ್ಮಡ್ಕದ ಸಂಗಮ ಕಲಾ ಸಂಘವು ಕಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿತ್ತು. ಶಾಲಾ ವಿದ್ಯಾರ್ಥಿಯಾಗಿದ್ದಾಗ ಅಮೈ ಸುಬ್ಬಣ್ಣ ಭಟ್ಟರು ಸಂಗಮ ಕಲಾ ಸಂಘದ ರೂವಾರಿ ಕೆರೆಕೋಡಿ ಪಂಡಿತ ಗಣಪತಿ ಭಟ್ಟರಿಂದ ಯಕ್ಷಗಾನ ಅಭ್ಯಸಿಸಿದ್ದರು. ಕಲ್ಮಡ್ಕ ಸಂಗಮ ಕಲಾ ಸಂಘದ ಪ್ರದರ್ಶನದಲ್ಲಿ ರಂಗ ಪ್ರವೇಶ. ಹೆಚ್ಚಿನ ನಾಟ್ಯ ಕಲಿಯಲು ಕೆರೆಕೋಡಿ ಗಣಪತಿ ಭಟ್ಟರ ಸಲಹೆ.

ಅದೇ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಲಿತ ಕಲಾ ಕೇಂದ್ರ ಆರಂಭವಾಗಿತ್ತು. ಸದ್ರಿ ಕೇಂದ್ರದ ಮೊದಲ ತಂಡದ ವಿದ್ಯಾರ್ಥಿಯಾಗಿ ಸೇರ್ಪಡೆ. ಶ್ರೀ ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸ. ಆಗ ಹಿಮ್ಮೇಳ ಗುರುಗಳಾಗಿದ್ದವರು ಮಾಂಬಾಡಿ ನಾರಾಯಣ ಭಾಗವತರು. ತರಬೇತಿ ಕೇಂದ್ರದಲ್ಲಿ ಪದ್ಯಾಣ ಗಣಪತಿ ಭಟ್, ಚೆನ್ನಪ್ಪ ಶೆಟ್ಟಿ, ಡಿ.ಮನೋಹರ ಕುಮಾರ್, ಉಬರಡ್ಕ ಉಮೇಶ ಶೆಟ್ಟಿ, ಮುಂಡಾಜೆ ಸದಾಶಿವ, ಮುಂಡಾಜೆ ಬಾಲಕೃಷ್ಣ ಶೆಟ್ಟಿ, ತೊಡಿಕಾನ ವಿಶ್ವನಾಥ ಗೌಡ, ಮಾಡಾವು ಕೊರಗಪ್ಪ ರೈ ಮೊದಲಾದವರು ಸುಬ್ಬಣ್ಣ ಭಟ್ಟರ ಸಹಪಾಠಿಗಳಾಗಿದ್ದರು. ಲಲಿತ ಕಲಾ ಕೇಂದ್ರದಲ್ಲಿ ತರಬೇತಿಯನ್ನು ಹೊಂದಿ ಸಂಗಮ ಕಲಾ ಕೇಂದ್ರದ ಪ್ರದರ್ಶನಗಳಲ್ಲಿ ಸಕ್ರಿಯರಾಗಿದ್ದರು. ವೇಷಗಾರಿಕೆ, ಮೇಕಪ್, ವೇಷಭೂಷಣಗಳ ನಿರ್ವಹಣೆ, ಕಲಿಕಾಸಕ್ತರಿಗೆ ತರಬೇತಿ ಈ ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಎಲ್ಲಾ ವಿಚಾರಗಳಿಗೆ ಪಟ್ಟಾಜೆ ವೈದ್ಯ ಗಣೇಶ ಭಟ್ಟರ ನಿರ್ದೇಶನ, ಪ್ರೋತ್ಸಾಹವು ದೊರಕಿತ್ತು. ಸುಮಾರು ಎಂಟು ವರ್ಷಗಳ ಕಾಲ ಊರ, ಪರವೂರ ಮತ್ತು ಕಲ್ಮಡ್ಕ ಸಂಘದ ಪ್ರದರ್ಶನಗಳಲ್ಲಿ ಕಲಾಸೇವೆಯನ್ನು ಮಾಡಿದ್ದರು.

1981ರಲ್ಲಿ ಕಟೀಲು ಎರಡನೇ ಮೇಳಕ್ಕೆ ಪುಂಡುವೇಷಧಾರಿಯಾಗಿ ಸೇರ್ಪಡೆ. ನಾಲ್ಕು ವರ್ಷಗಳ ಬಳಿಕ ಬಣ್ಣದ ವೇಷಧಾರಿಯಾಗಿ ಭಡ್ತಿ. ಆಗ ಒಂದನೇ ಬಣ್ಣದ ವೇಷಧಾರಿಯಾಗಿದ್ದ ಬಣ್ಣದ ಮಹಾಲಿಂಗ ಅವರ ನಿರ್ದೇಶನ, ಸಹಕಾರವು ದೊರಕಿತ್ತು. ಬಳಿಕ ಕಟೀಲು 3ನೇ ಮೇಳಕ್ಕೆ 2ನೇ ಬಣ್ಣದ ವೇಷಧಾರಿಯಾಗಿ ಸೇರ್ಪಡೆ. ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆ. ಮೂರನೇ ಮೇಳದಲ್ಲಿ ಐದು ತಿರುಗಾಟ. ಎಲ್ಲಾ ತರದ ವೇಷಗಳನ್ನೂ ಮಾಡಬೇಕಾಗಿ ಬಂದಿತ್ತು. ಬಳಿಕ ಕಟೀಲು ಒಂದನೇ ಮೇಳಕ್ಕೆ. ಕುಬಣೂರು ಶ್ರೀಧರ ರಾಯರ ಭಾಗವತಿಕೆಯಡಿ ಎರಡು ತಿರುಗಾಟ. ಬಳಿಕ ವೈಯುಕ್ತಿಕ ಸಮಸ್ಯೆಗಳಿಂದಾಗಿ ಕಲಾ ಬದುಕಿಗೆ ನಿವೃತ್ತಿಯನ್ನು ಘೋಷಿಸಿ ಮನೆಗೆ ಮರಳಿದ್ದರು. ಆದರೂ ಹಲವು ವರ್ಷಗಳ ಕಾಲ ವೇಷ ಮಾಡಿದ್ದರು. 

ಪ್ರಸ್ತುತ ಇವರು ಕೃಷಿಕರು. ಅತ್ಯುತ್ತಮ ಕೃಷಿಕರೆಂದು ಹೆಸರು ಗಳಿಸಿದ್ದಾರೆ. ಕಟೀಲು ಮೇಳದ ತಮ್ಮ ಹದಿಮೂರು ತಿರುಗಾಟಗಳಲ್ಲಿ ಪುಂಡು, ಕಿರೀಟ, ಬಣ್ಣದ ವೇಷಗಳಲ್ಲಿ ಕಲ್ಮಡ್ಕ ಸುಬ್ಬಣ್ಣ ಭಟ್ಟರು ಕಾಣಿಸಿಕೊಂಡಿದ್ದರು. ಕಿರೀಟ ವೇಷಗಳಲ್ಲಿ ದೇವೇಂದ್ರ, ಅರ್ಜುನ, ಹಿರಣ್ಯಾಕ್ಷ, ಇಂದ್ರಜಿತು ಹೆಸರು ನೀಡಿದ ಪಾತ್ರಗಳು. ಹೆಚ್ಚಿನ ಎಲ್ಲಾ ಬಣ್ಣದ ವೇಷಗಳನ್ನೂ ನಿರ್ವಹಿಸಿರುತ್ತಾರೆ. ಕಲ್ಮಡ್ಕ ಸುಬ್ಬಣ್ಣ ಭಟ್ಟರು ಹೆಣ್ಣು ಬಣ್ಣದ ವೇಷಗಳನ್ನು ಅತ್ಯುತ್ತಮವಾಗಿ ಚಿತ್ರಿಸುತ್ತಿದ್ದರೆಂದು ಪ್ರೇಕ್ಷಕರು ಹೇಳುತ್ತಾರೆ. ಕೇಶಾವರೀ ಕಿರೀಟದ ವೇಷಗಳೂ ಇವರಿಗೆ ಒಳ್ಳೆಯ ಹೆಸರನ್ನು ಗಳಿಸಿ ಕೊಟ್ಟಿತ್ತು.

1994ರಲ್ಲಿ ಗಂಗಮ್ಮ ಅವರನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಕಲ್ಮಡ್ಕ ಸುಬ್ಬಣ್ಣ ಭಟ್, ಗಂಗಮ್ಮ ದಂಪತಿಗಳಿಗೆ ಏಕಮಾತ್ರ ಪುತ್ರಿ ಕು| ಅಪರ್ಣಾ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿನಿ. ಸರಳ, ಸಜ್ಜನ, ವಿನಯವಂತರಾದ ಶ್ರೀಯುತರು ತೆರೆದುಕೊಳ್ಳುವ ಸ್ವಭಾವದವರಲ್ಲ. ಸಹೃದಯೀ ಹಿರಿಯ ಕಲಾವಿದರಾದ ಕಲ್ಮಡ್ಕ ಶ್ರೀ ಸುಬ್ಬಣ್ಣ ಭಟ್ ಮತ್ತು ಮನೆಯವರಿಗೆ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಶುಭ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ 

ರಾಜರ್ಷಿ ಡಾ. ಶ್ರೀ ವೀರೇಂದ್ರ ಹೆಗಡೆಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು

ಕಲಾಪೋಷಕರೂ ಅಸಂಖ್ಯಾತ ಜನರಿಗೆ ಅನ್ನದಾತರೂ, ಆಶ್ರಯದಾತರೂ, ಜನರನ್ನು ಸ್ವ ಉದ್ಯೋಗಿಗಳನ್ನಾಗಿ ಮಾಡುವಲ್ಲಿ ಪ್ರೇರೇಪಿಸಿ ಸಹಾಯಹಸ್ತ ನೀಡುವ ಮಹನೀಯರೂ, ವಿದ್ಯಾ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವುದೇ ಮೊದಲಾದ ಹಲವಾರು ಸಮಾಜಮುಖಿ ಸೇವೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ  ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ. ಶ್ರೀ ವೀರೇಂದ್ರ ಹೆಗಡೆಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಕರ್ನಾಟಕದ ಕಲೆಯಾದ ಯಕ್ಷಗಾನವನ್ನು ಬೆಳೆಸುವಲ್ಲಿ ತಮ್ಮ ಕೊಡುಗೆ ಅಪಾರ.  

ಇದನ್ನೂ ಓದಿ: ಯಕ್ಷಗಾನ ಶಿಕ್ಷಣ ಶಾಲೆಗಳು ಮತ್ತು ಗುರುಗಳು (ಭಾಗ – 3) ಧರ್ಮಸ್ಥಳ ಲಲಿತ ಕಲಾ ಕೇಂದ್ರ Dharmasthala Lalitha kala kendra

ಯಕ್ಷಾಂಗಣದಿಂದ 8ನೇ ವರ್ಷದ ನುಡಿಹಬ್ಬ – ಹರಿಕೃಷ್ಣ ಪುನರೂರು ಅವರಿಗೆ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ

ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ನವೆಂಬರ್ ತಿಂಗಳಲ್ಲಿ 8ನೇ ಕನ್ನಡ ನುಡಿ ಹಬ್ಬದ ಪ್ರಯುಕ್ತ ಏರ್ಪಡಿಸಿರುವ ‘ಯಕ್ಷಗಾನ ತಾಳಮದ್ದಳೆ ಪರ್ವ’ ಸಂದರ್ಭ ಶ್ರೇಷ್ಠ ಸಾಧಕರಿಗೆ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ನೀಡಲು ನಿರ್ಧರಿಸಿದೆ. 2019-2020ರ ಸಾಲಿಗೆ ಅವಿಭಜಿತ ದ.ಕ. ಜಿಲ್ಲೆಯ ಧಾರ್ಮಿಕ, ಸಾಮಾಜಿಕ ನೇತಾರ, ಉದ್ಯಮಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಈ ಪುರಸ್ಕಾರ ಸ್ವೀಕರಿಸಲಿದ್ದಾರೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.

ಪುನರೂರು ವ್ಯಕ್ತಿ-ವಿಶೇಷ: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪ ಪುನರೂರಿನಲ್ಲಿ ಪಟೇಲ್ ವಾಸುದೇವ ರಾವ್ ಮತ್ತು ಲಕ್ಷ್ಮೀ ಅಮ್ಮ ದಂಪತಿಗೆ 1943 ಜೂನ್ 5 ರಂದು ಜನಿಸಿದ ಹರಿಕೃಷ್ಣ ಪುನರೂರು ಅವರು ಮೆಟ್ರಿಕ್ಯುಲೇಶನ್ ಮುಗಿಸಿ ಹೊಟೇಲ್ ಉದ್ಯಮದಲ್ಲಿ ಭದ್ರ ನೆಲೆ ಕಂಡವರು. ಬಳಿಕ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡ ಅವರು ಮೂಲ್ಕಿ ಎಜ್ಯುಕೇಶನ್ ಸೊಸೈಟಿ, ಶಾರದಾ ವಿದ್ಯಾ ಸಂಸ್ಥೆ, ಪಟೇಲ್ ವಾಸುದೇವ ಸ್ಮಾರಕ ಟ್ರಸ್ಟ್ – ಇವುಗಳನ್ನು ಹುಟ್ಟು ಹಾಕಿ ಶಿಕ್ಷಣ ರಂಗದಲ್ಲಿ ಸೇವೆಗೈದರು. ಮೂಲ್ಕಿ, ಕಿನ್ನಿಗೋಳಿ, ಮಂಗಳೂರಿನ ಸಹಕಾರಿ ಸಂಘಗಳಲ್ಲಿ ನಿರ್ದೇಶಕರಾದರು. ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯಲ್ಲಿ ಜಿಲ್ಲಾ ಗವರ್ನರ್ ಹುದ್ದೆಗೇರಿ ಅಂಧತ್ವ ನಿವಾರಣೆಗಾಗಿ ತನು-ಮನ-ಧನ ವ್ಯಯಿಸಿ ಪ್ರತಿಷ್ಠಿತ ‘ನೈಟ್ ಆಫ್ ದಿ ಬ್ಲೈಂಡ್’ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರೆಸಿದರು. ಮೂಲ್ಕಿಯ ಸ್ವಂತ ಜಾಗದಲ್ಲಿ 101 ಕಾಂಕ್ರೀಟ್ ಮನೆಗಳನ್ನು ನಿರ್ಮಿಸಿ ಬಡವರಿಗೆ ಉಚಿತವಾಗಿ ವಿತರಿಸಿದರು.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂಗಳೂರಿನ ಕಾರಣೀಕ ಹನುಮಂತ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿತ್ವ. ಮಂಗಳೂರು ಮಂಗಳಾದೇವಿ ದೇವಸ್ಥಾನ, ಪುನರೂರು ವಿಶ್ವನಾಥ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಹಾಗೂ ಮಹಾತ್ಮಾಗಾಂಧಿ ಶಾಂತಿ ಪ್ರತಿಷ್ಠಾನಗಳಲ್ಲಿ ಸಕ್ರಿಯ ದುಡಿಮೆ, ವಿಶ್ವ ಹಿಂದೂ ಪರಿಷತ್, ಹೊಟೇಲ್ ಮಾಲಕರ ಸಂಘ, ಭಾರತ ಸೇವಾದಳ ಮುಂತಾದ ಸಂಘಟನೆಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಹರಿಕೃಷ್ಣರ ಸೇವೆ ಗಣನೀಯ.

ಕರ್ನಾಟಕ ಬ್ಯಾಂಕಿನ ನಿರ್ದೇಶಕರಾಗಿ, ವರ್ಧಮಾನ ಪ್ರಶಸ್ತಿ ಪೀಠದ ಉಪಾಧ್ಯಕ್ಷರಾಗಿ, ಪಾಜಕ ಪ್ರತಿಷ್ಠಾನ, ಮಕ್ಕಳ ಸಾಹಿತ್ಯ ಸಂಗಮ, ರಾಗ-ತರಂಗ ಮೊದಲಾದ ಸಂಸ್ಥೆಗಳನ್ನು ಮುನ್ನಡೆಸಿದ ಕೀರ್ತಿ ಅವರದು. ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಜಿಲ್ಲೆ, ತಾಲೂಕು, ಹೋಬಳಿಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ್ದಲ್ಲದೆ, ಸ್ವತಃ ಸಾಹಿತಿಯಲ್ಲದಿದ್ದರೂ ಸಾಹಿತ್ಯ ಪರಿಚಾರಕರಾಗಿ ಪ್ರತಿಷ್ಠಿತ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಹುದ್ದೆಗೇರಿ ಹೊಸ ಇತಿಹಾಸ ನಿರ್ಮಿಸಿದವರು ಪುನರೂರು.


ಲಯನ್ಸ್ ಸಂಸ್ಥೆಯ ಉತ್ತಮ ಸೇವೆಗೆ 10 ಬಾರಿ ಅಂತಾರಾಷ್ಟ್ರೀಯ ಮನ್ನಣೆ, 63 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಡಾ. ಶಿವರಾಮ ಕಾರಂತರಿಂದ `ಪರಿಸರ ಪ್ರೇಮಿ’ ಪುರಸ್ಕಾರ, ಡಾ. ರಾಜಕುಮಾರ್ ಅವರಿಂದ ‘ಕನ್ನಡ ಕಣ್ಮಣಿ’ ಬಿರುದು, ಪೇಜಾವರ ಶ್ರೀ ವಿಶ್ವೇಶ ತೀರ್ಥರಿಂದ ‘ಧರ್ಮದರ್ಶಿ’ ಉಪಾಧಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅಲ್ಲದೆ ಈಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶತಮಾನೋತ್ಸವ ಪ್ರಶಸ್ತಿ – ಇತ್ಯಾದಿ ಗೌರವಗಳಿಗೆ ಪಾತ್ರರಾದ ಹರಿಕೃಷ್ಣ ಪುನರೂರು ಅವರದು ಅಗಾಧ ಸಾಧನೆಯ ಮೇರು ವ್ಯಕ್ತಿತ್ವ.

ಇದೇ 2020 ನವೆಂಬರ 29ರಂದು ಮಂಗಳೂರಿನ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ‘ಪಾರಿಜಾತ’ ಸಭಾಂಗಣದಲ್ಲಿ ಜರಗುವ ಯಕ್ಷಾಂಗಣದ ಎಂಟನೆಯ ನುಡಿಹಬ್ಬದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ಶಾಸಕ ವೇದವ್ಯಾಸ ಕಾಮತ್ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಪ್ರದಾನ ಮಾಡುವರು. ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಕೆ.ಸಿ. ನಾಯ್ಕ್ ಸಮಾರಂಭವನ್ನು ಉದ್ಘಾಟಿಸುವರು. ಯಕ್ಷಾಂಗಣದ ಗೌರವಾಧ್ಯಕ್ಷ ಹಾಗೂ ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸುವರು. ಮೇಯರ್ ದಿವಾಕರ ಪಾಂಡೇಶ್ವರ, ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯದ ಮಹಾಪ್ರಬಂಧಕರಾದ ಸುಜಯ ಯು. ಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮತ್ತಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಿಸಿದ್ದಾರೆ.

ರವಿಚಂದ್ರ ಕನ್ನಡಿಕಟ್ಟೆ – ವೇಷಧಾರಿ ಭಾಗವತನಾದ ವಿಸ್ಮಯ

 ತೆಂಕುತಿಟ್ಟಿನ ಯುವ ಭಾಗವತ, ಹನುಮಗಿರಿ ಮೇಳದ ಕಲಾವಿದ- ಶ್ರೀ ರವಿಚಂದ್ರ ಕನ್ನಡಿಕಟ್ಟೆಯವರು  ವೇಷಧಾರಿಯಾಗಿ ಯಕ್ಷಗಾನ ರಂಗವನ್ನು ಪ್ರವೇಶಿಸಿದರೂ ಖ್ಯಾತ ಭಾಗವತನಾದುದು ಒಂದು ಅಚ್ಚರಿ! ಎರಡು ಘಟನೆಗಳೇ ಬದುಕಿನಲ್ಲಿ ಅನಿರೀಕ್ಷಿತ ತಿರುವುಗಳನ್ನು ನೀಡಿ ವೇಷಧಾರಿಯಾಗಿದ್ದ ರವಿಚಂದ್ರರು ಭಾಗವತರಾದರು.  

ಶ್ರೀ ರವಿಚಂದ್ರ ಕನ್ನಡಿಕಟ್ಟೆ ಇವರು 1980ನೇ ಇಸವಿ ಒಕ್ಟೋಬರ್ 4ರಂದು ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ಕನ್ನಡಿಕಟ್ಟೆ ಸಮೀಪದ ಪಜೆಮಾರು ಎಂಬಲ್ಲಿ ಧರ್ಮಣ ಪೂಜಾರಿ ಮತ್ತು ಸುಶೀಲ ದಂಪತಿಗಳಿಗೆ ಮಗನಾಗಿ ಜನಿಸಿದರು. ಕೃಷಿ ಕುಟುಂಬ. ಪಡಂಗಡಿ ಸರಕಾರಿ ಶಾಲೆಯಲ್ಲಿ ಓದು. ಎಸ್.ಎಸ್.ಎಲ್.ಸಿ.ವರೇಗೆ. ಇವರಿಗೆ ಬಾಲ್ಯದಲ್ಲಿಯೇ ಯಕ್ಷಗಾನಾಸಕ್ತಿ ಹುಟ್ಟಿಕೊಂಡಿತ್ತು.

ಕನ್ನಡಿಕಟ್ಟೆ ಆಸುಪಾಸಿನಲ್ಲಿ ಸುರತ್ಕಲ್ಲು ಮತ್ತು ಕರ್ನಾಟಕ ಮೇಳಗಳ ಪ್ರದರ್ಶನಗಳು ನಡೆಯುತ್ತಿತ್ತು. ಯಾವ ಪ್ರದರ್ಶನಗಳನ್ನೂ ಬಿಟ್ಟವರಲ್ಲ. ಬೆಳಗಿನವರೇಗೂ ನೋಡುತ್ತಿದ್ದರು. ಖ್ಯಾತ ಭಾಗವತ ಶ್ರೀ ದಿನೇಶ ಅಮ್ಮಣ್ಣಾಯರ ಹಾಡುಗಾರಿಕೆಗೆ ರವಿಚಂದ್ರರು ಮನಸೋತಿದ್ದರು. ಅವರ ಹಾಡಿನ ಮೋಡಿಗೆ ಒಳಗಾಗಿದ್ದರು. ಆಗ ಆಡಿಯೋ ಕ್ಯಾಸೆಟ್‍ಗಳ ಯುಗ. ಅಮ್ಮಣ್ಣಾಯರ ಹಾಡುಗಳಿದ್ದ ಕ್ಯಾಸೆಟ್‍ಗಳನ್ನು ಕೇಳುವುದು. ಮನೆಯ ಉಳಿದ ಕ್ಯಾಸೆಟ್‍ಗಳ ಹಾಡುಗಳನ್ನು ಡಿಲೀಟ್ ಮಾಡಿಸಿ ಅಮ್ಮಣ್ಣಾಯರ ಹಾಡುಗಳನ್ನು ತುಂಬಿಸಿ ತಂದು ಕೇಳುವುದು, ಬಿಡುವಿನಲ್ಲಿ ರವಿಚಂದ್ರರು ಮಾಡುತ್ತಿದ್ದ ಕೆಲಸ ಇದು. ಹೀಗೆ ಶ್ರೀ ದಿನೇಶ ಅಮ್ಮಣ್ಣಾಯರು ತನ್ನ ಗಾನಾಮೃತ ಸಿಂಚನದಿಂದ ರವಿಚಂದ್ರ ಎಂಬ ಬಾಲಕನ ಮನಸೂರೆಗೊಂಡಿದ್ದರು.

ಹಿಮ್ಮೇಳವಾಗಲೀ, ಮುಮ್ಮೇಳವಾಗಲೀ ಕಲಾವಿದರು ಅರ್ಪಣಾ ಭಾವದಿಂದ ತೊಡಗಿಸಿಕೊಂಡಾಗ, ಎಳೆಯರಿಗೆ ನಾನೂ ಅವರಂತಾಗಬೇಕೆಂಬ ಆಸೆ ಹುಟ್ಟುವುದು ಸಹಜ. 6ನೆಯ ತರಗತಿಯಲ್ಲಿರುವಾಗ ಗೆಜ್ಜೆಪೂಜೆ ಮತ್ತು ಸಿರಿಕೃಷ್ಣಚಂದಪಾಲಿ ತುಳು ಪ್ರಸಂಗಗಳ ಹಾಡುಗಳುಳ್ಳ ಧ್ವನಿಸುರುಳಿಯನ್ನು ತಂದಿದ್ದರು. ಪುತ್ತಿಗೆ ರಘುರಾಮ ಹೊಳ್ಳರ ಹಾಡುಗಳಿಗೆ ಮನಸೋತು ಅವರ ಅಭಿಮಾನಿಯೂ ಆದರು. ಹೀಗೆ ಅಮ್ಮಣ್ಣಾಯರ ಮತ್ತು ಹೊಳ್ಳರ ಅಭಿಮಾನಿಯಾಗಿ ಅವರಿಬ್ಬರ ಹಾಡುಗಳನ್ನು ದಿನಾ ಕೇಳುತ್ತಿದ್ದರು. ಕೇಳಿ ಕೇಳಿ ಪದ್ಯಗಳೆಲ್ಲಾ ಬಾಯಿಪಾಠ!

ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯೂ ಆಯಿತು. 6ನೇ ತರಗತಿಯಲ್ಲಿರುವಾಗ ಶಾಲಾ ಅಧ್ಯಾಪಕರಾದ ಶ್ರೀ ಅನಂತ ಪದ್ಮನಾಭ ಹೊಳ್ಳರಿಂದ ನಾಟ್ಯ ಕಲಿಕೆ. ಅವರು ಹವ್ಯಾಸೀ ಅತ್ಯುತ್ತಮ ವೇಷಧಾರಿ ಮತ್ತು ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಅವರು ಕಟ್ಟಿ ಬೆಳೆಸಿದ ಪಡಂಗಡಿ ಶಾಲಾ ತಂಡವು ಅತ್ಯುತ್ತಮ ತಂಡವಾಗಿತ್ತು. ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಎಲ್ಲಾ ಶಾಲೆಗಳವರೂ ಈ ತಂಡವನ್ನು ಕರೆಸಿ ಪ್ರದರ್ಶನವನ್ನು ಏರ್ಪಡಿಸಿದ್ದರು. ಶ್ರೀ ರವಿಚಂದ್ರರು ಮೊದಲು ಗೆಜ್ಜೆ ಕಟ್ಟಿದ್ದು ಪಡಂಗಡಿ ಶಾಲೆಯಲ್ಲಿ. ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ. ಕೃಷ್ಣಾರ್ಜುನ ಕಾಳಗ ಪ್ರಸಂಗದ ‘ಗಯ’ನ ಪಾತ್ರದಲ್ಲಿ. ಪ್ರವೇಶ ಮಾಡುವಾಗಲೇ ಕಟ್ಟಿದ ತುರಾಯಿ ಕೆಳಗೆ ಜಾರಿತ್ತು. ಹೇಗೋ ಸರಿಪಡಿಸಿಕೊಂಡು ಪಾತ್ರವನ್ನು ನಿರ್ವಹಿಸಿದ್ದರು.

ಸುರತ್ಕಲ್ಲು ಮೇಳದಲ್ಲಿ ಆಗ ಕಲಾವಿದನಾಗಿದ್ದ ಖ್ಯಾತ ಪುಂಡುವೇಷಧಾರ ಶ್ರೀ ವೇಣೂರು ಸದಾಶಿವ ಕುಲಾಲರು ನಾಟ್ಯ ಕಲಿಸಲು ಪಡಂಗಡಿ ಶಾಲೆಗೆ ಬರುತ್ತಿದ್ದರು. ಅವರಿಂದಲೂ ರವಿಚಂದ್ರ ಅವರು ನಾಟ್ಯ ಕಲಿತರು. ಅಧ್ಯಾಪಕ ಶ್ರೀ ಅನಂತಪದ್ಮನಾಭ ಹೊಳ್ಳರ ಸಲಹೆಯಂತೆ ಸುರತ್ಕಲ್ ಮೇಳದ ಪ್ರದರ್ಶನಗಳಿಗೂ ಹೋಗುತ್ತಿದ್ದರು. ಧರ್ಮಸ್ಥಳ ಮೇಳದ ಕಲಾವಿದ ಶ್ರೀ ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ ಶಾಲೆಯಲ್ಲಿ ರವಿಚಂದ್ರರಿಗಿಂತ ಒಂದು ವರ್ಷ ಸೀನಿಯರ್ ವಿದ್ಯಾರ್ಥಿ. ಅವರು ಎಸ್.ಎಸ್.ಎಲ್.ಸಿ. ಆಗಿ ಧರ್ಮಸ್ಥಳದ ಶ್ರೀ ಲಲಿತ ಕಲಾಕೇಂದ್ರಕ್ಕೆ ಸೇರಿದ್ದರು. ರವಿಚಂದ್ರರನ್ನು ಎಸ್.ಎಸ್.ಎಲ್.ಸಿ. ಆದ ನಂತರ ಅವರೇ ಲಲಿತ ಕಲಾಕೇಂದ್ರಕ್ಕೆ ಕರೆದೊಯ್ದಿದ್ದರು. ಮೊದಲೇ ರವಿಚಂದ್ರರು ನಾಟ್ಯ ಕಲಿತ ಕಾರಣ ಉಳಿದವರಿಗೆ ಹೇಳಿಕೊಡುವ ಹೊಣೆಯೂ ಸಿಕ್ಕಿತ್ತು.

ಕೇಂದ್ರದಲ್ಲಿ ಇವರ ಸಹಪಾಠಿಗಳಾಗಿದ್ದವರು ಈಗ ವೃತ್ತಿ ಕಲಾವಿದರಾಗಿರುವ ಕೊಂಕಣಾಜೆ ಚಂದ್ರಶೇಖರ ಭಟ್ (ಮದ್ದಳೆಗಾರರು) ಬಾಲಕೃಷ್ಣ ಮಿಜಾರು, ಶ್ರೀನಿವಾಸ ಕುರಿಯಾಳ, ಬೆಳಾಲು ರಮೇಶ ಗೌಡ, ದಿನೇಶ್ ಕೋಡಪದವು ಮೊದಲಾದವರು. ಲಲಿತ ಕಲಾಕೇಂದ್ರದ ಪ್ರದರ್ಶನಗಳಲ್ಲಿ ಪಂಚವಟಿಯ ಶ್ರೀರಾಮ, ಗಿರಿಜಾ ಕಲ್ಯಾಣದ ಮನ್ಮಥ, ವೀರಮಣಿ ಕಾಳಗದ ಹನೂಮಂತ, ಭಾರ್ಗವ ವಿಜಯದ ಭಾರ್ಗವ ಮೊದಲಾದ ವೇಷಗಳನ್ನು ಮಾಡಿದ್ದರು. 

ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿರುವಾಗ ನಡೆದ ಒಂದು ಘಟನೆ- ತರಬೇತಿ ಆರಂಭವಾಗಿ 15 ದಿನಗಳಾಗಿತ್ತು. ರಾತ್ರೆ ಕೊಂಕಣಾಜೆ ಚಂದ್ರಶೇಖರ ಭಟ್ಟರು ಚೆಂಡೆಮದ್ದಳೆ ಅಭ್ಯಾಸ ಮಾಡುತ್ತಿದ್ದರು. ಅವರ ಚೆಂಡೆಗೆ ರವಿಚಂದ್ರರ ಹಾಡು. ‘ಗೆಜ್ಜೆಯ ಪೂಜೆ’ ಮೊದಲಾದ ಪ್ರಸಂಗಗಳ ಹಾಡುಗಳು. ಹೊಳ್ಳರು, ಅಮ್ಮಣ್ಣಾಯರು ಹಾಡಿದ ಪದ್ಯಗಳನ್ನು ಕೇಳಿ ಕಂಠಪಾಠವಾಗಿತ್ತು. ಗುರುಗಳಿಲ್ಲದ ವೇಳೆ ಇದು ನಿರಂತರವಾಗಿ ನಡೆಯುತ್ತಿತ್ತು. ಇದನ್ನು ಮರೆಯಲ್ಲಿ ಬೈಪಾಡಿತ್ತಾಯ ದಂಪತಿಗಳು ಗಮನಿಸಿದ್ದರು. (ಕೇಂದ್ರದ ಹಿಮ್ಮೇಳ ಗುರುಗಳು). ಮರುದಿನ ನಾಟ್ಯ ಬೇಡ. ನೀನು ಪದ್ಯ ಕಲಿ ಎಂದರಂತೆ. ಅಲ್ಲದೆ ರವಿಚಂದ್ರರಲ್ಲಿ ಪದ್ಯಗಳನ್ನೂ ಹೇಳಿಸಿದರಂತೆ.’’ ಕಟ್ಟಿದ ಗೆಜ್ಜೆಯ ನಾದಕೆ ಮರುಗುತ ಇಟ್ಟಳು ಹೆಜ್ಜೆಯ ಬಾರದಲಿ… ಎಂಬ ಹಾಡನ್ನು ಹೇಳಿದರು. ಅಲ್ಲದೆ ಇನ್ನೂ ಕೆಲವು ಪದ್ಯಗಳನ್ನು ಬೈಪಾಡಿತ್ತಾಯ ದಂಪತಿಗಳು ರವಿಚಂದ್ರರಿಂದ ಹೇಳಿಸಿದರು. ಕೊಂಕಣಾಜೆಯವರು ಇವರಿಗೆ ಸಾಥ್ ನೀಡಿದ್ದರು.

ಬೈಪಾಡಿತ್ತಾಯ ದಂಪತಿಗಳಿಂದ ಹಾಡುಗಾರಿಕೆ ಕಲಿಯೆಂಬ ಸೂಚನೆ ಸಿಕ್ಕಿತ್ತು. ಮರುದಿನ ಸಬ್ಬಣಕೋಡಿ ಕೃಷ್ಣ ಭಟ್ಟರು ಬಂದಿದ್ದರು. ವಿಮರ್ಶೆ ನಡೆದು ರವಿಚಂದ್ರರು ಮತ್ತೆ ನಾಟ್ಯ ಕಲಿಯುವ ಮನಮಾಡಿದರು. ‘‘ಅವನು ನಾಟ್ಯ ಕಲಿಯಲಿ. ಆದರೆ ರವಿಚಂದ್ರನು ಮುಂದಕ್ಕೆ ಭಾಗವತನೇ ಆಗುತ್ತಾನೆ’’ ಎಂದಿದ್ದರಂತೆ ಬೈಪಾಡಿತ್ತಾಯ ದಂಪತಿಗಳು. ಅವರು ಪ್ರತಿಭೆಯನ್ನು ಗುರುತಿಸಿದ್ದರು. ಅವರ ಭವಿಷ್ಯವಾಣಿಯು ಇಂದಿಗೆ ನಿಜವಾಗಿದೆ. ರವಿಚಂದ್ರರು ಕೇಂದ್ರದ ವಿದ್ಯಾರ್ಥಿಗಳಲ್ಲಿ ಮೊದಲಿಗನೆಂಬ ಖಾವಂದರ ಪ್ರಶಂಸೆಗೂ ಪಾತ್ರರಾದರು. ಧರ್ಮಸ್ಥಳದ ಲಲಿತ ಕಲಾಕೇಂದ್ರದಲ್ಲಿ ತರಬೇತಿ ಪಡೆದು ಬಂದ ಬಳಿಕ ವೇಣೂರು ಸದಾಶಿವ ಕುಲಾಲರ ಜತೆ ಸುರತ್ಕಲ್ಲು ಮೇಳಕ್ಕೆ ಸೇರಿದ್ದರು. ಮೊದಲು ಬಾಲಗೋಪಾಲರ ವೇಷ. ಎರಡನೆಯ ವರ್ಷ ಮುಖ್ಯ ಸ್ತ್ರೀವೇಷ, ಇನ್ನುಳಿದ ಸಣ್ಣ ಸಣ್ಣ ಪಾತ್ರಗಳನ್ನು ಮಾಡುತ್ತಿರು.

ಹಗಲು ಬಿಡಾರದಲ್ಲಿ ಸಂಗೀತಗಾರ ರಾಧಾಕೃಷ್ಣ ಕಲ್ಲುಗುಂಡಿ ಅವರಿಗೆ ಪಾಠ ಮಾಡುತ್ತಿದ್ದರು. ಆಗ ಮಲಗಿರುತ್ತಿದ್ದ ರವಿಚಂದ್ರರು ಎದೆಗೆ ಕೈಯಿಂದ ಬಡಿಯುತ್ತಾ ತಾಳ ಹಾಕುತ್ತಿದ್ದರಂತೆ. ಇದನ್ನು ಗಮನಿಸಿದ ಪದ್ಯಾಣ ಗಣಪತಿ ಭಟ್ಟರು ಪದ್ಯ ಕಲಿಯುತ್ತಿಯಾ? ಎಂದು ಕೇಳಿದರಂತೆ. ರವಿಚಂದ್ರರಿಗೆ ಸಂತೋಷವಾಗಿತ್ತು. ಒಪ್ಪಿಗೆ ಸೂಚಿಸಿದ್ದು ಮಾತ್ರವಲ್ಲ ಅಂದೇ ಪಾಠ ಆರಂಭವಾಗಿತ್ತು. ಪದ್ಯಾಣರು ಇವರನ್ನು ಶಿಷ್ಯನಾಗಿ ಸ್ವೀಕರಿಸಿದ್ದರು. ಸಂಗೀತಗಾರನು ರಜೆಯಲ್ಲಿರುವಾಗ ಆ ಕರ್ತವ್ಯವನ್ನು ಮಾಡಿ, ಬೆಳಗಿನವರೆಗೂ ಚಕ್ರತಾಳ ಬಾರಿಸುತ್ತಿದ್ದರು. ಸಂಗೀತ ಮಾಡಿದ ದಿನ ವೇಷ ಇರುತ್ತಿರಲಿಲ್ಲ.

1999-2000ನೇ ಸಾಲಿನ ತಿರುಗಾಟ ಮಂಗಳಾದೇವಿ ಮೇಳದಲ್ಲಿ. ಸಂಗೀತಗಾರನಾಗಿ ಸೇರ್ಪಡೆ. ಮುಂದಿನ ವರ್ಷ ಕಿಶನ್ ಹೆಗ್ಡೆಯವರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ ತಿರುಗಾಟ. ಮರುವರ್ಷ ಮತ್ತೆ ಮಂಗಳಾದೇವಿ ಮೇಳಕ್ಕೆ. ಪದ್ಯಾಣ ಗಣಪತಿ ಭಟ್ಟರ ಜತೆ ಭಾಗವತಿಕೆ. 3ನೇ ವರ್ಷದಲ್ಲೇ ರವಿಚಂದ್ರರು 2ನೇ ಭಾಗವತರಾಗಿ ಬೆಳೆದಿದ್ದರು. ಪದ್ಯಾಣರು ಜತೆಯಲ್ಲಿದ್ದು ಹೇಳಿಕೊಡುತ್ತಿದ್ದರು. ಒಂಬತ್ತು ವರ್ಷಗಳ ಕಾಲ ಮಂಗಳಾದೇವಿ ಮೇಳದಲ್ಲಿ 2ನೇ ಭಾಗವತನಾಗಿ ತಿರುಗಾಟ. ಪದ್ಯಾಣರ ಜತೆಗೆ ಬೆಳಗಿನ ವರೆಗೂ ಪ್ರಸಂಗವನ್ನು ಮುನ್ನಡೆಸುವ ಅವಕಾಶಗಳೂ ಸಿಕ್ಕಿತ್ತು.

ಸುರತ್ಕಲ್ ಮೇಳ ನಿಂತ ಬಳಿಕ ಪದ್ಯಾಣರ ಪುತ್ತೂರಿನ ಮನೆಗೆ ಮಳೆಗಾಲ ತೆರಳಿ ಅವರಿಂದ ಕಲಿತಿದ್ದರು. ಸಂಗೀತ ಮತ್ತು ಭಾಗವತಿಕೆಯನ್ನು ತಿಳಿದಿದ್ದ ಪದ್ಯಾಣರ ಪತ್ನಿ ಶ್ರೀಮತಿ ಶೀಲಾ ಗಣಪತಿ ಭಟ್ ಪದ್ಯಾಣ ಅವರೂ ಹೇಳಿಕೊಟ್ಟಿದ್ದರು. ‘‘ನಾನು ಅಲ್ಲಿ ಮನೆಯ ಸದಸ್ಯನಂತೆಯೇ ಇದ್ದೆ. ಅವರು ಊಟ ಮಾಡುವ ಮೊದಲೇ ಶೀಲಕ್ಕ ನನಗೆ ಬಡಿಸುತ್ತಿದ್ದರು. ನನ್ನನ್ನು ಮಗನಂತೆಯೇ ನೋಡಿಕೊಂಡರು’’. ಇದು ರವಿಚಂದ್ರ ಅವರು ಗುರುಪತ್ನಿಯ ಬಗೆಗೆ ಆಡುವ ಗೌರವದ ನುಡಿಗಳು. ಹತ್ತು ತಿರುಗಾಟಗಳಾದ ಮೇಲೆ ಪದ್ಯಾಣ ಗಣಪತಿ ಭಟ್ಟರು ಮಂಗಳಾದೇವಿ ಮೇಳದಿಂದ ಎಡನೀರು ಮೇಳಕ್ಕೆ ಸೇರಿದ್ದರು. ಮತ್ತೆ  5 ವರ್ಷಗಳ ಕಾಲ ಪ್ರಧಾನ ಭಾಗವತನಾಗಿ ಮಂಗಳಾದೇವಿಯಲ್ಲಿ ತಿರುಗಾಟ. ಸಂಗೀತದಿಂದ ತೊಡಗಿ ಬೆಳಗಿನ ವರೇಗೂ ಹಾಡಿದ ದಿನಗಳಿವೆ!

ಈ ಸಂದರ್ಭದಲ್ಲಿಯೂ ಗುರು ಪದ್ಯಾಣರ ಕಲ್ಮಡ್ಕದಲ್ಲಿರುವ ಮನೆಗೆ ಹೋಗಿ ಕಲಿಯುತ್ತಿದ್ದರು. ಸಲಹೆಗಳನ್ನು ಪಡೆಯುತ್ತಿದ್ದರು. ಮಂಗಳಾದೇವಿ ಮೇಳದಲ್ಲಿ ತುಳು ಮತ್ತು ಪುರಾಣ ಪ್ರಸಂಗಗಳ ಹಾಡುಗಾರಿಕೆಯಲ್ಲಿ ಕನ್ನಡಿಕಟ್ಟೆ ಅವರು ಅನುಭವವನ್ನು ಗಳಿಸಿದ್ದರು. ಬಳಿಕ ಶ್ಯಾಂ ಭಟ್ಟರ ಕೇಳಿಕೆಯಂತೆ ಹೊಸನಗರ ಮೇಳಕ್ಕೆ.‘‘ಹೊಸನಗರ ಮೇಳ ಮತ್ತು ಪ್ರಸ್ತುತ ಹನುಮಗಿರಿ ಮೇಳದಲ್ಲಿ ಕಳೆದ ಹತ್ತು ವರುಷಗಳಿಂದಲೂ ಗುರುಗಳಾದ ಪದ್ಯಾಣ ಶ್ರೀ ಗಣಪತಿ ಭಟ್ಟರ ಜತೆ ವ್ಯವಸಾಯ (ತನ್ಮಧ್ಯೆ ಒಂದು ವರ್ಷ ಎಡನೀರು ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಂಬ ಹೆಸರಿನಿಂದಲೂ ಕಾರ್ಯಾಚರಿಸಿತ್ತು). 

2009ರಲ್ಲಿ ವಿವಾಹ. ಪತ್ನಿ ಶುಭ (ಸೋದರಮಾವ ಶ್ರೀ ಅಮ್ಮು ಪೂಜಾರಿ ಮತ್ತು ಶ್ರೀಮತಿ ರಜನಿ ದಂಪತಿಗಳ ಪುತ್ರಿ). ಶ್ರೀ ರವಿಚಂದ್ರ ಶ್ರೀಮತಿ ಶುಭ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ಭವಿಷ್ 4ನೇ ತರಗತಿ ವಿದ್ಯಾರ್ಥಿ. ಪುತ್ರಿ ಕು| ಖುಷಿ 1ನೇ ತರಗತಿ ವಿದ್ಯಾರ್ಥಿನಿ. ಪ್ರಸ್ತುತ ಬೆಳ್ತಂಗಡಿಯಲ್ಲಿ ವಾಸವಾಗಿದ್ದಾರೆ.

ಲೇಖಕ: ರವಿಶಂಕರ್ ವಳಕ್ಕುಂಜ

ಲಾಸ್ ಏಂಜೆಲೀಸ್ ನಲ್ಲಿ ಮೂರು ವಾರಗಳ ಕಾಲ ರೆಸ್ಟೋರೆಂಟ್ ಗಳು ಬಂದ್ 

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಲ್ಲಿ  ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಮಾಣವು  ಬುಧವಾರ ರಾತ್ರಿಯಿಂದ ಮೂರು ವಾರಗಳವರೆಗೆ ರೆಸ್ಟೋರೆಂಟ್ ಗಳನ್ನು ಸ್ಥಗಿತಗೊಳಿಸುವ ಆದೇಶವನ್ನು ಹೊರಡಿಸುವಂತೆ ಮಾಡಿದೆ. 

ಇದು ವೈರಸ್‌ನಿಂದ ತತ್ತರಿಸುತ್ತಿರುವ ಅಮೆರಿಕಾದ ಹೋಟೆಲ್ ಉದ್ಯಮವನ್ನು ಮತ್ತಷ್ಟು ಕುಂಠಿತಗೊಳಿಸಿದೆ. ಬದಲಾಗುತ್ತಿರುವ ನಿಯಮಗಳಿಗೆ ಹೊಂದಿಕೊಳ್ಳಬೇಕಾದ ಲಾಸ್ ಏಂಜಲೀಸ್‌ನ ರೆಸ್ಟೋರೆಂಟ್ ಮಾಲೀಕರು ತಮ್ಮ ವ್ಯವಹಾರಗಳನ್ನು ಮತ್ತೊಮ್ಮೆ ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದರು ಎಂದು ‘ಕೆಫೆ ಒಫ್ ಲೆಮೆನ್’ ರೆಸ್ಟೋರೆಂಟಿನ ಮಾಲೀಕರು ಹೇಳಿದ್ದಾರೆ.

“ಹೊರಾಂಗಣ, ಒಳಾಂಗಣವನ್ನು ನಿರ್ಮಿಸಲು $ 5,000 ಡಾಲರ್ ಖರ್ಚು ಮಾಡಿದ್ದೇವೆ, ಆದ್ದರಿಂದ ಈಗ ಅಲ್ಲಿ  ಜನರಿಗೆ ತಿನ್ನಲು ಸ್ಥಳವಿದೆ, ಮತ್ತು ಈ ಇತ್ತೀಚಿನ ವ್ಯವಹಾರಗಳ ಸ್ಥಗಿತದಿಂದ ನಮ್ಮ ಉದ್ಯೋಗಿಗಳು ಹೇಗೆ ಜೀವಿಸುತ್ತಾರೆ ಎಂದೇ ತಿಳಿಯುತ್ತಿಲ್ಲ. 

ಈಗ ನಾವು ಹೊರಭಾಗವನ್ನು ಮುಚ್ಚಲು ಹೊರಟಿದ್ದೇವೆ, ನಮ್ಮ 11 ಉದ್ಯೋಗಿಗಳು ಮನೆಗೆ ಹೋಗಬೇಕೆಂದು ನಾವು ಹೇಳಬೇಕಾಗಿದೆ”  ಎಂದು ಹೋಟೆಲ್ ಮಾಲೀಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.